ಬೆಂಗಳೂರು, ಮೇ 4: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಜನರಿಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆಯ ಶಾಕ್ ಎದುರಾಗುತ್ತಿದೆ. ಹೋಟೆಲ್ ತಿಂಡಿಗಳ ಬೆಲೆ ಏರಿಕೆಯ ಬೆನ್ನಲ್ಲೇ, ಈಗ ತರಕಾರಿ ದರಗಳು (Vegetable Price Hike) ಕೂಡ ಗಗನಕ್ಕೇರಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ಕೇವಲ 15 ದಿನಗಳ ಅಂತರದಲ್ಲಿ ಬಹುತೇಕ ಎಲ್ಲಾ ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದ್ದು, ಮನೆಯಲ್ಲಿ ಅಡುಗೆ ಮಾಡುವುದು ಕೂಡ ದುಬಾರಿಯಾಗಿದೆ.
ಬೀನ್ಸ್ಗೆ ಬಂಗಾರದ ಬೆಲೆ
ಸದ್ಯ ಮಾರುಕಟ್ಟೆಯಲ್ಲಿ ಬೀನ್ಸ್ ದರ ಕೇಳಿದರೆ ಗ್ರಾಹಕರು ಬೆಚ್ಚಿಬೀಳುತ್ತಿದ್ದಾರೆ. ಎರಡು ವಾರಗಳ ಹಿಂದೆ ಕೆಜಿಗೆ 60 ರೂಪಾಯಿ ಇದ್ದ ಬೀನ್ಸ್ ಬೆಲೆ ಈಗ 160 ರೂಪಾಯಿಗೆ ತಲುಪಿದೆ. ಈ ಹಿಂದೆ ಚೀಲ ತುಂಬಾ ತರಕಾರಿ ತರುತ್ತಿದ್ದ ಜನ, ಈಗ 500 ರೂಪಾಯಿ ನೀಡಿದರೂ ಎರಡು ಬ್ಯಾಗ್ ತರಕಾರಿ ತುಂಬಿಸಲು ಪರದಾಡುವಂತಾಗಿದೆ.
ತರಕಾರಿ ಬೆಲೆ ಏರಿಕೆಗೆ ಕಾರಣಗಳೇನು?
ರಾಜ್ಯದಲ್ಲಿ ತೀವ್ರವಾಗಿ ಸುಡುತ್ತಿರುವ ಬಿಸಿಲಿನ ತಾಪಮಾನ ಮತ್ತು ಅಕಾಲಿಕವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತರಕಾರಿ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದರೊಂದಿಗೆ ಸಾಲು ಸಾಲು ಶುಭ ಸಮಾರಂಭಗಳು ಮತ್ತು ಫಂಕ್ಷನ್ಗಳು ಇರುವುದರಿಂದ ತರಕಾರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾದ ಕಾರಣ ಬೆಲೆಗಳು ಏರಿಕೆಯಾಗುತ್ತಿವೆ.
ರಾಜ್ಯದ ಪ್ರಮುಖ ತರಕಾರಿ ಬೆಳೆಯುವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಲ್ಲಿ ಈ ಬಾರಿ ತೀವ್ರವಾದ ಬಿಸಿಲು ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆಗಳಿಗೆ ಭಾರಿ ಹಾನಿಯಾಗಿದೆ. ಅತಿಯಾದ ಶಾಖದಿಂದಾಗಿ ಹೂವುಗಳು ಉದುರಿ ಇಳುವರಿ ಕಡಿಮೆಯಾಗಿದ್ದರೆ, ಇತ್ತೀಚೆಗೆ ಸುರಿದ ಗುಡುಗು ಸಹಿತ ಮಳೆಯಿಂದ ತರಕಾರಿ ಬೆಳೆ ನಾಶವಾಗಿದೆ. ಇದರಿಂದ ಮಾರುಕಟ್ಟೆಗೆ ಬರುವ ತರಕಾರಿಗಳ ಪ್ರಮಾಣ ಶೇ 30 ರಿಂದ 40ರಷ್ಟು ಕುಸಿದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ.
ಕೇವಲ ಹವಾಮಾನವಷ್ಟೇ ಅಲ್ಲದೆ, ಪ್ರಸ್ತುತ ಮದುವೆ ಮತ್ತು ಸಾಲು ಸಾಲು ಹಬ್ಬಗಳ ಸೀಸನ್ ಇರುವುದರಿಂದ ತರಕಾರಿಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಸ್ಥಿರತೆಯ ನಡುವೆಯೂ, ಹೊರ ರಾಜ್ಯಗಳಿಂದ (ಆಂಧ್ರಪ್ರದೇಶ ಮತ್ತು ತಮಿಳುನಾಡು) ಬರುವ ತರಕಾರಿಗಳ ಸಾರಿಗೆ ವೆಚ್ಚವು ದರ ಏರಿಕೆಗೆ ಮತ್ತೊಂದು ಕಾರಣವಾಗಿದೆ.
ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 993 ರೂ. ಏರಿಕೆ
ಒಂದೆಡೆ ಎಲ್ಪಿಜಿ ದರ ಭಾರಿ ಏರಿಕೆಯಾಗಿದ್ದು, ಹೋಟೆಲ್ ಉದ್ಯಮ ಈಗಾಲೇ ಸಂಕಷ್ಟಕ್ಕೆ ಸಿಲುಕಿದೆ. ಅದರೊಂದಿಗೆ ಇದೀಗ ತರಕಾರಿ ಬೆಲೆಯೂ ಗಗನ್ಕೇರಿದ್ದು ಮತ್ತಷ್ಟು ಹೊಡೆತ ನೀಡಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಈ ಬೆಲೆಗಳಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
