ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಟಾಲಿವುಡ್ನ ಯಶಸ್ವಿ ಜೋಡಿ. ಇಬ್ಬರೂ ಒಟ್ಟಿಗೆ ನಟಿಸಿರುವ ‘ಗೀತಾ ಗೋವಿಂದಂ’ ಸೂಪರ್ ಹಿಟ್ ಆದರೆ ‘ಡಿಯರ್ ಕಾಮ್ರೆಡ್’ ಸಹ ಯಶಸ್ವಿ ಆಗಿತ್ತು. ನಟಿಸಿದ ಮೊದಲ ಸಿನಿಮಾದಿಂದಲೂ ಈ ಜೋಡಿ ಆತ್ಮೀಯವಾಗಿತ್ತು. ಆರಂಭದಲ್ಲಿ ತಾವು ಒಳ್ಳೆಯ ಗೆಳೆಯರು ಎಂದು ಹೇಳಿಕೊಂಡಿದ್ದ ರಶ್ಮಿಕಾ ಮತ್ತು ವಿಜಯ್, ವರ್ಷಗಳು ಕಳೆದಂತೆ ಗೆಳೆತನವನ್ನು ಪ್ರೀತಿಯಾಗಿ ಬದಲಾಯಿಸಿಕೊಂಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದಾರೆ ರಶ್ಮಿಕಾ ಮತ್ತು ವಿಜಯ್. ರಶ್ಮಿಕಾ ಅಂತೂ ಕಳೆದ ಕೆಲ ವರ್ಷಗಳಿಂದ ಎಲ್ಲ ಹಬ್ಬಗಳನ್ನೂ ವಿಜಯ್ ಅವರ ಮನೆಯಲ್ಲೇ ಆಚರಿಸುತ್ತಿದ್ದಾರೆ. ಈ ಇಬ್ಬರೂ ಅಕ್ಟೋಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಇದೀಗ ಈ ಜೋಡಿಯ ಮದುವೆ ಸುದ್ದಿ ಹರಿದಾಡುತ್ತಿದೆ. ಇಬ್ಬರ ಮದುವೆ ಮುಂದಿನ ವರ್ಷ ನಡೆಯಲಿದ್ದು, ಮದುವೆ ಎಲ್ಲಿ ನಡೆಯಲಿದೆ, ಯಾವಾಗ ನಡೆಯಲಿದೆ ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರುಗಳು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಜೋಡಿಯ ವಿವಾಹ ಫೆಬ್ರವರಿ ತಿಂಗಳಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ. ರಾಜಸ್ಥಾನದ ಜೈಪುರದಲ್ಲಿ ಐಶಾರಾಮಿ ಅರಮನೆಯಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾರೆ ರಶ್ಮಿಕಾ ಮತ್ತು ವಿಜಯ್. ಚಿತ್ರರಂಗದ ಹಲವು ಗಣ್ಯರು, ಎರಡೂ ಕಡೆಯ ಕುಟುಂಬದವರು ಮದುವೆಗೆ ಹಾಜರಾಗಲಿದ್ದಾರೆ. ಜೈಪುರದಲ್ಲಿ ಅದ್ಧೂರಿ ವಿವಾಹದ ಬಳಿಕ ಹೈದರಾಬಾದ್ನಲ್ಲಿ ನಿಶ್ಚಿತಾರ್ಥವನ್ನೂ ಸಹ ಮಾಡಿಕೊಳ್ಳಲಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಸಹ ಮದುವೆಗೆ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಇಬ್ಬರೂ ಸಹ ಮದುವೆ ಶಾಪಿಂಗ್ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ, ತಮ್ಮ ಕೆಲವು ಆಪ್ತ ಗೆಳತಿಯರೊಟ್ಟಿಗೆ ಶ್ರೀಲಂಕಾಕ್ಕೆ ತೆರಳಿ ಬ್ಯಾಚುಲರ್ ಪಾರ್ಟಿ ಸಹ ಮಾಡಿದ್ದಾರೆ. ತಮ್ಮ ಬ್ಯಾಚುಲರ್ ಪಾರ್ಟಿಯ ಚಿತ್ರಗಳನ್ನು ಸಹ ರಶ್ಮಿಕಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಇನ್ನು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಮತ್ತೆ ತೆರೆ ಮೇಲೆ ಸಹ ಕಾಣಿಸಿಕೊಳ್ಳಲಿದ್ದಾರೆ. 2019 ರಲ್ಲಿ ‘ಡಿಯರ್ ಕಾಮ್ರೆಡ್’ ಸಿನಿಮಾನಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು, ಅದಾದ ಬಳಿಕ ಒಟ್ಟಿಗೆ ನಟಿಸಿರಲಿಲ್ಲ. ಇದೀಗ ‘ಗೀತ ಗೋವಿಂದಂ 2’ ಸಿನಿಮಾನಲ್ಲಿ ಮತ್ತೊಮ್ಮೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ನಟಿಸಲಿದ್ದಾರೆ.
ಸಂಜೆಯ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಖಾರವಾದ ಸ್ನಾಕ್ಸ್ (Snacks) ತಿನ್ನಬೇಕೆಂದು ಅನಿಸುವುದು ಸಹಜ. ಅದರಲ್ಲಿಯೂ ವಿಶೇಷವಾಗಿ ಚಳಿಗಾಲ ಮತ್ತು ಮಳೆಗಾಲದಲ್ಲಿ, ಮನಸ್ಸು ಸಮೋಸಾ, ಪಕೋಡಾ, ಬಜ್ಜಿ ಹೀಗೆ ಕರಿದ ತಿನಿಸುಗಳತ್ತ ಹೋಗುತ್ತದೆ. ಆದರೆ ನಿಮಗೆ ಗೊತ್ತಾ, ಈ ಆಹಾರಗಳ ತಿನ್ನುವ ಸಮಯ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು, ಸಂಜೆ 6 ಗಂಟೆಯ ನಂತರ ನೀವು ಸೇವಿಸುವಂತಹ ಆಹಾರ ನಿಮ್ಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಸಂಜೆ ಮೇಲೆ ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು ಮತ್ತು ಯಾಕೆ? ಇವುಗಳ ಬದಲು ಸಂಜೆ ತಿನ್ನಬಹುದಾದ ಆರೋಗ್ಯಕರ ತಿಂಡಿಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಂಜೆ 6 ಗಂಟೆಯ ನಂತರ ಈ ಆಹಾರಗಳಿಂದ ದೂರವಿರಿ
ಬಾಯಿಯ ರುಚಿಗಾಗಿ ನಾವು ಸೇವಿಸುವ ಕೆಲವು ಆಹಾರಗಳು ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಬಹುದು. ಹಾಗಾಗಿ ಈ ಆಹಾರಗಳಿಂದ ದೂರವಿರುವುದು ಒಳ್ಳೆಯದು.
ಹುರಿದ ಆಹಾರಗಳು: ಸಮೋಸಾ, ಪಕೋಡಾಗಳು.
ಜಂಕ್ ಫುಡ್: ಹೆಚ್ಚಿನ ಬೆಣ್ಣೆ ಅಂಶವಿರುವ ಬರ್ಗರ್ಗಳು ಮತ್ತು ಪಿಜ್ಜಾಗಳು.
ಸಿಹಿತಿಂಡಿ: ಜಲೇಬಿ ಮತ್ತು ಹೆಚ್ಚಿನ ಸಕ್ಕರೆ ಅಂಶವಿರುವ ಇತರ ಸಿಹಿತಿಂಡಿಗಳು.
ಹುರಿದ ಆಹಾರಗಳು ನೇರವಾಗಿ ಟೈಪ್-2 ಮಧುಮೇಹಕ್ಕೆ ಸಂಬಂಧಿಸಿವೆ. ಅವು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಡ್ಡಿಪಡಿಸುತ್ತವೆ. ರಾತ್ರಿಯಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಅಷ್ಟೇ ಅಲ್ಲ, ಗ್ಯಾಸ್, ಆಮ್ಲೀಯತೆ ಮತ್ತು ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ ಕರಿದ ಆಹಾರಗಳು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯೂತವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಅವುಗಳಲ್ಲಿರುವ ಹೆಚ್ಚಿನ ಕ್ಯಾಲೋರಿ ದೇಹದಲ್ಲಿ ತ್ವರಿತ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತವೆ.
ಸಂಜೆ ತಿನ್ನಬಹುದಾದ ಆರೋಗ್ಯಕರ ತಿಂಡಿಗಳು:
ಬೆಣ್ಣೆ ಇಲ್ಲದೆ ಹುರಿದ ಮಖಾನ ಆರೋಗ್ಯಕ್ಕೆ ಒಳ್ಳೆಯದು.
ಬೇಯಿಸಿದ ಸಿಹಿ ಕಾರ್ನ್.
ಬಿಸಿ ತರಕಾರಿ ಸೂಪ್.
ಕಡಿಮೆ ಎಣ್ಣೆ ಬಳಸಿ ಮಾಡಿದ ಪನೀರ್ ಫ್ರೈ ಅಥವಾ ಮಸಾಲೆಯುಕ್ತ ಕಡಲೆ.
ಇತರರಿಗೆ ನಿಮ್ಮ ಸಹಾಯದ ಅಗತ್ಯ ತೀವ್ರವಾಗಿರುತ್ತದೆ. ನಿಮ್ಮ ಜೊತೆ ವ್ಯಾಜ್ಯ- ಜಗಳ ಇರುವವರು ರಾಜೀ- ಸಂಧಾನಕ್ಕೆ ಪ್ರಯತ್ನ ಮಾಡಲಿದ್ದಾರೆ. ಅವರ ಪ್ರಸ್ತಾವಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುವುದು ಮುಖ್ಯವಾಗುತ್ತದೆ. ನಿಮಗಿಂತ ಕಿರಿಯ ವಯಸ್ಸಿನವರಿಗೆ ಹೊಸ ಬಟ್ಟೆಗಳನ್ನು ಕೊಡಿಸಲಿದ್ದೀರಿ. ನಿರ್ದಿಷ್ಟ ಸಮಯದೊಳಗೆ ಕೆಲವು ಕಾರ್ಯಗಳನ್ನು ಮುಗಿಸಿಕೊಡುವ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯ ಆಗುವುದಿಲ್ಲ ಎಂದು ಹೇಳುವ ಸಾಧ್ಯತೆ ಇದೆ. ಒಂದೇ ಕೆಲಸಕ್ಕೆ ನಾಲ್ಕಾರು ಸಲ ಓಡಾಡುವಂತೆ ಆಗಲಿದ್ದು, ನೀವು ಯಾವ ಕಾರ್ಯಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅದರ ಎಲ್ಲ ದಾಖಲೆ- ಪತ್ರಗಳು ಇವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ತೀವ್ರ ಬಗೆಯಲ್ಲಿ ಹಲ್ಲು ನೋವು ಕಾಡಬಹುದು. ಈ ಸಮಸ್ಯೆಗೆ ಮನೆ ಮದ್ದು ಮಾಡುವುದಕ್ಕಿಂತ ವೈದ್ಯರ ಭೇಟಿ ಮಾಡಿ, ಔಷಧೋಪಚಾರ ಮಾಡಿಕೊಳ್ಳುವುದು ಕ್ಷೇಮ.
ನಿಮ್ಮಲ್ಲಿ ಕೆಲವರು ಮನೆಯಲ್ಲಿ ಸಮಾರಂಭ- ಕಾರ್ಯಕ್ರಮ ಆಯೋಜಿಸುವಂಥ ಯೋಗ ಇದೆ. ನಿಮ್ಮ ಸಂಬಂಧಿಗಳ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಂದೆ ನಿಂತು ಕೆಲಸ- ಕಾರ್ಯ ಮಾಡಬೇಕಾದ ಜವಾಬ್ದಾರಿ ವಹಿಸುವ ಸಾಧ್ಯತೆಯಾದರೂ ಇದೆ. ಹಣಕಾಸು ವಿಚಾರದಲ್ಲಿ ವೇಗವಾಗಿ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳ ಬಾರದು. ಷೇರು- ಮ್ಯೂಚುವಲ್ ಫಂಡ್ ಹೂಡಿಕೆಗೆ ಸಲಹೆ ನೀಡುವಂಥ ಫೈನಾನ್ಷಿಯಲ್ ಅಡ್ವೈಸರ್- ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುವವರಿಗೆ ಸ್ವಲ್ಪ ಮಟ್ಟಿಗೆ ಒತ್ತಡದ ದಿನ ಆಗಿರುತ್ತದೆ. ಕಣ್ತಪ್ಪಿನಿಂದ ಆದ ಸಮಸ್ಯೆಯನ್ನು ಬಗೆಹರಿಸಲು ಕಲಿತ ವಿದ್ಯೆ- ಬುದ್ಧಿಯನ್ನೆಲ್ಲ ಖರ್ಚು ಮಾಡುವಂತೆ ಆಗಲಿದೆ. ನಿಮ್ಮ ಜವಾಬ್ದಾರಿ ಇತರರಿಗೆ ವರ್ಗಾಯಿಸಬೇಡಿ. ಸಂಖ್ಯೆಗಳನ್ನು ಒಂದಕ್ಕೆ ನಾಲ್ಕು ಬಾರಿಗೆ ಪರೀಕ್ಷೆ ಮಾಡಿದ ನಂತರದಲ್ಲಿ ವ್ಯವಹಾರ ಮಾಡಿ. ಮೃದುವಾದ ಆಹಾರ ಪದಾರ್ಥಗಳ ಸೇವನೆಗೆ ಈ ದಿನ ಆದ್ಯತೆಯನ್ನು ನೀಡಿ. ಗಟ್ಟಿಯಾದ ಆಹಾರ ಪದಾರ್ಥಗಳಿಂದ ದೂರವಿರಿ.
ಆದಾಯ ಜಾಸ್ತಿ ಮಾಡಿಕೊಳ್ಳಲು ಹಲವು ರೀತಿ ಪ್ರಯತ್ನಗಳನ್ನು ಮಾಡಲಿದ್ದೀರಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು, ಬರವಣಿಗೆ ಮೂಲಕ ಆದಾಯ ಪಡೆಯುವವರು ಇಂಥವರಿಗೆ ಹೊಸ ಅವಕಾಶಗಳು ಹುಡುಕಿ ಬರಲಿವೆ. ಮಕ್ಕಳ ಅನಾರೋಗ್ಯ ಸಮಸ್ಯೆ ಚಿಂತೆ ತಂದೊಡ್ಡಲಿದೆ. ಶೀತ, ಕಫ, ಕೆಮ್ಮು ಈ ರೀತಿಯ ತೊಂದರೆಗಳು ಜಾಸ್ತಿ ಆಗಲಿದ್ದು, ವೈದ್ಯರಿಗೆ ತೋರಿಸಿದ ನಂತರದಲ್ಲಿಯೂ ಹತೋಟಿಗೆ ಬಾರದೆ ಆತಂಕಕ್ಕೆ ಕಾರಣ ಆಗಲಿದೆ. ಹೆಣ್ಣುಮಕ್ಕಳ ಜೊತೆ ಮಾತನಾಡುವಾಗ, ಅದರಲ್ಲಿಯೂ ನಿಮ್ಮ ಸಹೋದ್ಯೋಗಿಗಳ ಜೊತೆಗೆ ಮಾತನಾಡುವಾಗ ಬಳಕೆ ಮಾಡುವ ಪದಗಳ ಬಗ್ಗೆ ಜಾಗ್ರತೆಯಿಂದ ಇರಿ. ಅತ್ಯುತ್ಸಾಹದಲ್ಲೋ ಅಥವಾ ತಮಾಷೆ ಎಂದುಕೊಂಡು ನೀವಾಡಿದ ಮಾತುಗಳಿಂದ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ತನಕ ಹೋಗಬಹುದು. ಯಾವ ಉದ್ದೇಶಕ್ಕೆ ಹಣವನ್ನು ಉಳಿತಾಯ ಅಥವಾ ಹೂಡಿಕೆ ಮಾಡಿದ್ದೀರೋ ಆ ಮೊತ್ತವನ್ನು ಉದ್ದೇಶಿತ ಕಾರ್ಯಗಳಿಗೇ ಬಳಸಿಕೊಳ್ಳಿ.
ಮರಳು, ಇಟ್ಟಿಗೆ, ಸಿಮೆಂಟ್ ಮಾರಾಟದಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಇನ್ನು ಯಾರು ಮನೆ ನಿರ್ಮಾಣದ ಕಾಂಟ್ರಾಕ್ಟ್ ತೆಗೆದುಕೊಂಡು ಕೆಲಸ ಮಾಡಿಸುತ್ತೀರೋ ಅಂಥವರಿಗೆ ಹೊಸ ಕೆಲಸವೊಂದು ಸ್ನೇಹಿತರ ಮೂಲಕ ಬರಲಿದೆ. ಸಿವಿಲ್ ಎಂಜಿನಿಯರ್ ಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಬರಲಿದೆ. ಅಥವಾ ಈ ಹಿಂದೆ ಇಂಟರ್ ವ್ಯೂ ತೆಗೆದುಕೊಂಡಿದ್ದಲ್ಲಿ ಅದರಲ್ಲಿ ಆಯ್ಕೆ ಆಗಿರುವ ಬಗ್ಗೆ ಮಾಹಿತಿ ಬರಲಿದೆ. ಹಳೇ ಸ್ನೇಹ- ಪರಿಚಯಗಳನ್ನು ಮತ್ತೊಮ್ಮೆ ಮುಂದುವರಿಸಲು ಬೇಕಾದ ವೇದಿಕೆಯೊಂದು ಈ ದಿನ ನಿಮಗೆ ಸಿಗಲಿದೆ. ಹಣದ ವಿಚಾರಕ್ಕೆ ಸೋದರ- ಸೋದರಿಯರ ಜೊತೆಗೆ ಇರುವ ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳಲು ತಂದೆ- ತಾಯಿ ಸಹಾಯ ಮಾಡಲಿದ್ದಾರೆ. ದೂರ ಪ್ರಯಾಣ ಮಾಡುವುದರಿಂದ ನಿಮ್ಮಲ್ಲಿ ಕೆಲವರಿಗೆ ದೈಹಿಕವಾಗಿ ಒತ್ತಡ ಏರ್ಪಡಲಿದೆ. ಇತರರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕಬೇಡಿ.
ನಿಮಗೆ ಗೊತ್ತಿರುವುದು ಮಾತ್ರ ಹೇಳ್ತೀನಿ ಎಂಬ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಆದರೆ ತಮಗೆ ಏನು ಬೇಕೋ ಅದನ್ನು ತಿಳಿದು, ಆ ನಂತರ ಹೇಳಬೇಕು ಎಂದು ನೀವು ಕೆಲಸ ಮಾಡುವಂಥ ಉದ್ಯೋಗದಾತರು, ನಿಮ್ಮಿಂದ ಸೇವೆ ಪಡೆಯುವ ಕ್ಲೈಂಟ್ ಗಳು ಒತ್ತಡ ಹಾಕಲಿದ್ದಾರೆ. ಪೊಂಜಿ ಯೋಜನೆಗಳಿಂದ ದೂರ ಇರುವುದು ಬಹಳ ಮುಖ್ಯ. ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ ಎಂಬ ಆಸೆ ತೋರಿಸಿ, ನಿಮ್ಮ ಸ್ನೇಹಿತರೋ ಸಂಬಂಧಿಗಳೋ ನಿಮಗಿಂತ ಮೇಲಿನ ಹುದ್ದೆಯಲ್ಲಿ ಕೆಲಸ ಮಾಡುವಂಥವರೋ ಒತ್ತಾಯ ಮಾಡಿದಲ್ಲಿ ಅಂಥವುಗಳಿಂದ ದೂರ ಉಳಿಯುವುದು ಸವಾಲಾಗಲಿದೆ. “ಇಲ್ಲ” ಎಂಬುದನ್ನು ಗಟ್ಟಿಯಾಗಿ ಹೇಳಿ. ಬಾಯಿ ರುಚಿಗೆ ಬಿದ್ದು, ನಿಮ್ಮ ದೇಹ ಪ್ರಕೃತಿಗೆ ಒಗ್ಗದ ಖಾದ್ಯ- ತಿನಿಸುಗಳನ್ನು ಸೇವಿಸಿ, ಕೆಲವು ದೈಹಿಕ ತೊಂದರೆ ಅನುಭವಿಸುವಂತೆ ಆಗಲಿದೆ. ಎಚ್ಚರಿಕೆ ವಹಿಸಿ.
ನೀವು ಬಹಳ ಪ್ರೀತಿಸುವ ವ್ಯಕ್ತಿಗಳನ್ನು ಈ ದಿನ ತುಂಬ ನೆನಪು ಮಾಡಿಕೊಳ್ಳಲಿದ್ದೀರಿ. ಬಿಡುವೇ ಸಿಗದಷ್ಟು ಕೆಲಸಗಳಲ್ಲಿ ಮುಳುಗಿ ಹೋಗುವಂತೆ ಆಗಲಿದ್ದು, ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಸಹ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ. ಮಾರ್ಕೆಟಿಂಗ್- ಜಾಹೀರಾತು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹುದ್ದೆಯಲ್ಲಿ ಬಡ್ತಿ ಸಿಗುವ ಬಗ್ಗೆ ಮಾಹಿತಿ ಸಿಗಲಿದೆ. ರಾಜಕಾರಣಿಗಳಿಗೆ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಮಹತ್ವಾಕಾಂಕ್ಷೆಯಿಂದ ನಡೆಸುವಂಥ ಸಮಾವೇಶದ ಮುಂದಾಳತ್ವ ನೀವೇ ವಹಿಸಬೇಕು, ಅದರ ಸಂಘಟನೆ, ಜನ ಸೇರಿಸುವುದು ಸೇರಿದಂತೆ ಇತರ ಕೆಲಸಗಳ ಹೊಣೆ ನೀವೇ ಹೊರಬೇಕು ಎಂದು ಸಹ ಸೂಚನೆ ಬರಲಿದೆ. ಸ್ಥೂಲಕಾಯದಿಂದ ಬಳಲುತ್ತಾ ಇರುವವರು ಸೂಕ್ತ ವೈದ್ಯೋಪಚಾರ ಪಡೆಯುವ ಕಡೆಗೆ ಗಮನ ನೀಡಲಿದ್ದೀರಿ. ಸರ್ಜರಿ ಮೂಲಕ ದೇಹದ ತೂಕ ಇಳಿಸುವುದಕ್ಕೆ ನಿಮ್ಮಲ್ಲಿ ಕೆಲವರು ನಿರ್ಧಾರ ಮಾಡುತ್ತೀರಿ.
ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಾ ನೀವು ಒಪ್ಪಿಸಿದ ಕೆಲಸಗಳನ್ನು ಆಗ- ಈಗ ಎಂದು ಮುಂದಕ್ಕೆ ಹಾಕುತ್ತಾ ಇರುವವರ ಬಳಿ ಗೆರೆ ಕೊಯ್ದಂತೆ ಮಾತನಾಡಲಿದ್ದೀರಿ. ಒಂದು ವೇಳೆ ಈಗಾಗಲೇ ಆ ಕೆಲಸದ ಸಲುವಾಗಿ ಅಡ್ವಾನ್ಸ್ ರೂಪದಲ್ಲಿ ಹಣವನ್ನು ನೀಡಿದ್ದಲ್ಲಿ ಅದನ್ನು ಹಿಂತಿರುಗಿಸುವಂತೆ ಕೇಳಲಿದ್ದೀರಿ. ನಿಮ್ಮ ಸ್ನೇಹಿತರ ಪೈಕಿ ಒಬ್ಬರು ತಮಗೆ ಸಾಲದ ಅಗತ್ಯ ಇದ್ದು, ಜಾಮೀನು ನೀವು ನೀಡಬೇಕು ಎಂದು ಕೇಳಿಕೊಂಡು ಬರಬಹುದು. ಆಟೋ ಚಾಲಕರು ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಹೆಚ್ಚಿನ ಮೊತ್ತದ ದಂಡವನ್ನು ಪಾವತಿಸುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ಗಂಭೀರ ಸ್ವರೂಪದಲ್ಲಿ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು, ವೈದ್ಯರನ್ನು ಭೇಟಿ ಮಾಡಲೇಬೇಕು ಎಂಬ ಪರಿಸ್ಥಿತಿ ಎದುರಾಗಲಿದೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ವಿವಿಧ ಅವಕಾಶಗಳು ದೊರೆಯಲಿವೆ.
ಇತರರಿಗೆ ಹೊಳೆಯದ ಕೆಲವು ಸಂಗತಿಗಳು ನಿಮಗೆ ಸುಲಭವಾಗಿ ಮಾಡಿ ಮುಗಿಸುವುದಕ್ಕೆ ದಾರಿಗಳು ಗೋಚರ ಆಗಲಿವೆ. ನಿಮ್ಮನ್ನು ಯಾವುದಾದರೂ ಹಗರಣದಲ್ಲಿ ಸಿಲುಕಿಸಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರು ತಾವೇ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಲಿದ್ದಾರೆ. ನಿಮ್ಮ ವೃತ್ತಿ ಅಥವಾ ಉದ್ಯೋಗಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸಹಾಯ ಆಗುವಂಥ ಮಾಹಿತಿಗಳು ದೊರೆಯಲಿವೆ. ನಿಮ್ಮಲ್ಲಿ ಯಾರು ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಾ ಇದ್ದೀರಿ, ಅಂಥವರಿಗೆ ಪ್ರಭಾವಶಾಲಿ ಆದ ವ್ಯಕ್ತಿಯೊಬ್ಬರ ಮೂಲಕ ಹಲವು ಸಂಸ್ಥೆಗಳ ಸಂಪರ್ಕ ದೊರೆಯಲಿದ್ದು, ಆದಾಯದ ಪ್ರಮಾಣ ಹೆಚ್ಚು ಮಾಡಿಕೊಳ್ಳಲು ಬಾಗಿಲು ತೆರೆದುಕೊಳ್ಳಲಿದೆ. ಇನ್ನು ನಿಮ್ಮಲ್ಲಿ ಕೆಲವರು ಸಂಗಾತಿಯ ಸಲುವಾಗಿ ಕೆಲವು ದುಬಾರಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಅಚಾನಕ್ಕಾಗಿ ದೂರ ಪ್ರಯಾಣ ಮಾಡಲೇ ಬೇಕಾದ ಸನ್ನಿವೇಶಗಳು ಸೃಷ್ಟಿ ಆಗಲಿದ್ದು, ಇದಕ್ಕಾಗಿ ಹೆಚ್ಚಿನ ಖರ್ಚು ಸಹ ಆಗಲಿದೆ.
ಚಿಕ್ಕ- ಪುಟ್ಟ ಕಟ್ಟಡ ದುರಸ್ತಿ ಕಾರ್ಯಗಳನ್ನು ಮಾಡಿಸುತ್ತಾ ಇರುವವರಿಗೆ ದೊಡ್ಡ ಕೆಲಸವೊಂದು ಈ ದಿನ ದೊರೆಯುವಂಥ ಯೋಗ ಇದೆ. ಈ ಹಿಂದೆ ನೀವು ವ್ಯಕ್ತಿಯೊಬ್ಬರಿಗೆ ಮಾಡಿಕೊಟ್ಟ ಕೆಲಸ ಹಾಗೂ ಆ ಸಮಯದಲ್ಲಿ ನೀವು ಪಟ್ಟ ಶ್ರಮ, ತೋರಿಸಿದ ನಿಷ್ಠೆ- ಪ್ರಾಮಾಣಿಕತೆಗೆ ಫಲ ದೊರೆಯಲಿದೆ. ಯಾವುದೇ ವಿಚಾರದಲ್ಲೂ ಅತುರ ಮಾಡಬೇಡಿ. ನಿಮ್ಮ ಎದುರಿಗೆ ಇರುವಂಥವರು ಪೂರ್ಣವಾಗಿ ಮಾತು ಮುಗಿಸುವ ತನಕ ಕೇಳಿಸಿಕೊಳ್ಳಿ. ಹೇಳಿದ್ದನ್ನೇ ಹೇಳುತ್ತಾ ಇದ್ದಾರೆ ಎಂದೆನಿಸಿದರೂ ಮಧ್ಯೆ ಮಾತಾಡುವುದಕ್ಕೋ ಅಥವಾ ನಿಮಗೆ ಇವೆಲ್ಲ ಗೊತ್ತಿದೆ ಅಂತಲೋ ಹೇಳುವುದಕ್ಕೆ ಹೋಗಬೇಡಿ. ನರಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಾ ಇರುವವರಿಗೆ ಸಮಸ್ಯೆ ತೀವ್ರವಾಗಲಿದೆ. ಈಗ ಔಷಧ ತೆಗೆದುಕೊಳ್ಳುತ್ತಾ ಇದ್ದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಇಲ್ಲ ಎಂಬ ಕಾರಣಕ್ಕೆ ಅದರಲ್ಲಿ ಬದಲಾವಣೆ ಮಾಡಬೇಕು ಎಂಬ ಸಲಹೆಯನ್ನು ವೈದ್ಯರು ನೀಡುವ ಸಾಧ್ಯತೆ ಇದೆ.
ಭಾರತ ಟಿ20 ತಂಡದ ನಾಯಕತ್ವವಹಿಸಿಕೊಂಡು ಮುಂಬರುವ ಟಿ20 ವಿಶ್ವಕಪ್ನಲ್ಲಿ (T20 World Cup) ಟೀಂ ಇಂಡಿಯಾವನ್ನು ಮುನ್ನಡೆಸಲಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಬಗ್ಗೆ ನಟಿ ಮತ್ತು ರೂಪದರ್ಶಿ ಖುಷಿ ಮುಖರ್ಜಿ (Khushi Mukherjee) ಶಾಕಿಂಗ್ ಹೇಳಿಕೆಯನ್ನು ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಖುಷಿ ಮುಖರ್ಜಿ, ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕ ಕ್ರಿಕೆಟಿಗರು ನನಗೆ ಆಗಾಗ್ಗೆ ಸಂದೇಶಗಳನ್ನು ಕಳುಹಿಸುತ್ತಿದ್ದರು. ಹಾಗೆಯೇ ಈಗಲೂ ಅನೇಕ ಕ್ರಿಕೆಟಿಗರು ತನ್ನನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ನಾನು ಯಾವುದೇ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಲು ಬಯಸುವುದಿಲ್ಲ ಎಂದಿದ್ದಾರೆ.
ನನಗೆ ಮೆಸೇಜ್ಗಳನ್ನು ಕಳುಹಿಸುತ್ತಿದ್ದರು
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಖುಷಿ ಮುಖರ್ಜಿ, ‘ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವಾರು ಕ್ರಿಕೆಟಿಗರು ತಮ್ಮನ್ನು ಫಾಲೋ ಮಾಡುತ್ತಿದ್ದಾರೆ. ಟಿ20 ತಂಡದ ನಾಯಕ ಸೂರ್ಯಕುಮಾರ್ ನನಗೆ ಬಹಳಷ್ಟು ಮೆಸೇಜ್ಗಳನ್ನು ಕಳುಹಿಸುತ್ತಿದ್ದರು. ಆದರೆ ಈಗ ಅವರು ಹೆಚ್ಚು ಸಂವಹನ ನಡೆಸುತ್ತಿಲ್ಲ. ಹಾಗೆಯೇ ನಾನು ಯಾರೊಂದಿಗೂ ರಿಲೇಷನ್ಶಿಪ್ನಲ್ಲಿ ಇರಲು ಬಯಸುವುದಿಲ್ಲ ಮತ್ತು ಯಾವುದೇ ಲಿಂಕ್-ಅಪ್ ವದಂತಿಗಳನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ನಟಿ ಖುಷಿ ಮುಖರ್ಜಿ ಸೂರ್ಯಕುಮಾರ್ ಯಾದವ್ ಬಗ್ಗೆ ಹೀಗೆ ಹೇಳಿದ್ದಾರೆ, ‘ಅನೇಕ ಕ್ರಿಕೆಟಿಗರು ನನ್ನ ಫಾಲೋ ಮಾಡುತ್ತಿದ್ದಾರೆ. ಸೂರ್ಯಕುಮಾರ್ ನನಗೆ ತುಂಬಾ ಸಂದೇಶ ಕಳುಹಿಸುತ್ತಿದ್ದರು. ಈಗ ನಾವು ಹೆಚ್ಚು ಮಾತನಾಡುವುದಿಲ್ಲ. ನಾನು ಯಾರೊಂದಿಗೂ ರಿಲೇಷನ್ಶಿಪ್ನಲ್ಲಿ ಇರಲು ಬಯಸುವುದಿಲ್ಲ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಖುಷಿ ಮುಖರ್ಜಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 1.5 ಮಿಲಿಯನ್ ಫಾಲೋವರ್ಗಳನ್ನು ಹೊಂದಿದ್ದಾರೆ. ಆದರೆ ಅವರು ಮಾತ್ರ ಯಾರನ್ನೂ ಫಾಲೋ ಮಾಡುತ್ತಿಲ್ಲ.
ಟಿ20 ವಿಶ್ವಕಪ್ ತಯಾರಿಯಲ್ಲಿ ಸೂರ್ಯ
ಖುಷಿ ಮುಖರ್ಜಿ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆಯಾದರೂ ಈ ಬಗ್ಗೆ ಸೂರ್ಯಕುಮಾರ್ ಯಾದವ್ ಯಾವುದೇ ಸ್ಪಷ್ಟನೇ ನೀಡಿಲ್ಲ. ಪ್ರಸ್ತುತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಸೂರ್ಯಕುಮಾರ್ ಯಾದವ್, ತಮ್ಮ ಹಳೆಯ ಲಯವನ್ನು ಕಂಡುಕೊಳ್ಳುವುದರ ಜೊತೆಗೆ ಟೀಂ ಇಂಡಿಯಾವನ್ನು ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟದತ್ತ ಕೊಂಡೊಯ್ಯಬೇಕಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಟಿ20 ವಿಶ್ವಕಪ್ಗೆ ಮುನ್ನ ತಯಾರಿ ನಡೆಸಲು ಇದು ಟೀಂ ಇಂಡಿಯಾಕ್ಕೆ ಕೊನೆಯ ಅವಕಾಶವಾಗಿದೆ. ಇದರ ನಂತರ, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಫೆಬ್ರವರಿಯಲ್ಲಿ ಟಿ20 ವಿಶ್ವಕಪ್ ಆಡಲಿದೆ. ಐಸಿಸಿ ಟೂರ್ನಮೆಂಟ್ನಲ್ಲಿ ಸೂರ್ಯ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. 2025ಕ್ಕೆ ಗುಡ್ ಬೈ ಹೇಳಿ 2026ವೆಲ್ಕಂ ಮಾಡಲು ಜನ ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಪಾರ್ಟಿಗಾಗಿ ಭರ್ಜರಿ ಪ್ಲ್ಯಾನಿಂಗ್ನಲ್ಲಿ ತೊಡಗಿದ್ದಾರೆ. ನಗರದಲ್ಲಿ ವರ್ಷಾಚರಣೆ ನಡೆಯೋ ರಸ್ತೆಗಳಂತೂ ಜಗಮಗ ಅಂತಿವೆ. ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆಗಾಗಿ ಭದ್ರತಾ ಸಿದ್ಧತೆಗಳು ಆರಂಭಗೊಂಡಿವೆ. ಬ್ಯಾರಿಕೇಡ್ ಅಳವಡಿಕೆ, ಸಿಸಿ ಕ್ಯಾಮೆರಾ, ವಾಚ್ ಟವರ್ಗಳನ್ನು ಅಳವಡಿಕೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಣ್ಗಾವಲುವಹಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 30: ವಿಬಿ-ಜಿ ರಾಮ್ ಜಿ ಕಾಯ್ದೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಹೊಸ ಕಾಯ್ದೆಯು ಉದ್ಯೋಗ ಖಾತರಿ ತತ್ವಕ್ಕೆ ಮಾರಕವಾಗಿದೆ. ಈ ಹಿಂದಿನ ಮನರೇಗಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ್ದು ಶೇ. 90 ಮತ್ತು ಶೇ.10 ರಾಜ್ಯದ ಹಂಚಿಕೆಯಿತ್ತು. ಆದರೆ ಈಗಿನ ಕಾಯ್ದೆಯು ರಾಜ್ಯ ಸರ್ಕಾರದ ಆರ್ಥಿಕತೆಗೆ ಹೊರೆಯಾಗಲಿದ್ದು, 258, 250ನೇ ವಿಧಿಯ ಉಲ್ಲಂಘನೆ ಆಗಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ?
I have written to Prime Minister Shri @narendramodi detailing serious constitutional, financial and governance concerns with the new VB-G RAM G law.
The repeal of MGNREGA weakens the right to work, centralises discretion, and shifts an unfair burden onto states.
ಪ್ರಸ್ತುತ MGNREGA ಚೌಕಟ್ಟಿನಡಿ, ಪ್ರಮುಖ ರಾಜ್ಯಗಳಲ್ಲಿ ಕೇಂದ್ರ–ರಾಜ್ಯಗಳ ನಡುವೆ 90:10ರ ಅನುದಾನ ಹಂಚಿಕೆಯ ವ್ಯವಸ್ಥೆ ಇದೆ. ಹೊಸ ಕಾಯ್ದೆಯು ಇದನ್ನು ಬಹುತೇಕ ರಾಜ್ಯಗಳಿಗೆ 60:40ಕ್ಕೆ ಬದಲಾಯಿಸಿದೆ. ಇದು ಈಗಾಗಲೇ ಜಿಎಸ್ಟಿ ಪರಿಹಾರದ ಕೊರತೆ ಹಾಗೂ ಅನ್ಯಾಯಕರ ಹಣಕಾಸು ವಿಂಗಡಣೆ ಕಾರಣದಿಂದ ಆರ್ಥಿಕ ಒತ್ತಡದಲ್ಲಿರುವ ರಾಜ್ಯಗಳ ಮೇಲೆ ಹೆಚ್ಚಿನ ಭಾರ ಹೇರುತ್ತಿದೆ. ಈ ಬದಲಾವಣೆಯನ್ನು ರಾಜ್ಯ ಸರ್ಕಾರಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ಇಲ್ಲದೆ ಜಾರಿಗೊಳಿಸಲಾಗಿದೆ.
ಬಿತ್ತನೆ ಹಾಗೂ ಕೊಯ್ಲಿನ ಗರಿಷ್ಠ ಕಾಲಘಟ್ಟದಲ್ಲಿ ಒಟ್ಟು 60 ದಿನಗಳ ಅವಧಿಯಲ್ಲಿ ಈ ಕಾಯ್ದೆಯಡಿ ಯಾವುದೇ ಕೆಲಸಗಳನ್ನು ಕೈಗೊಳ್ಳಬಾರದೆಂದು ರಾಜ್ಯಗಳು ಮುಂಚಿತವಾಗಿ ಅಧಿಸೂಚನೆ ಹೊರಡಿಸಬೇಕೆಂದು ಹೊಸ ಕಾಯ್ದೆಯು ಸೂಚಿಸುತ್ತದೆ. ಆ ಅವಧಿಯಲ್ಲಿ ಕೃಷಿ ಚಟುವಟಿಕೆ ಹೆಚ್ಚಾಗಬಹುದಾದರೂ ಇಂತಹ ಸಾಮಾನ್ಯ ನಿಷೇಧವು ಕೂಲಿ ಉದ್ಯೋಗಕ್ಕೆ ಅವಲಂಬಿತರಾಗಿರುವವರ, ವಿಶೇಷವಾಗಿ ಅತೀ ದುರ್ಬಲ ವರ್ಗಗಳಾದ ಆದಿವಾಸಿ ಮತ್ತು ಹಿಂದುಳಿದ ಸಮುದಾಯಗಳ ಹಕ್ಕನ್ನು ಕುಗ್ಗಿಸುತ್ತದೆ.
ಮುಖ್ಯವಾಗಿ, ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಆತುರವಾಗಿ ಜಾರಿಗೊಳಿಸಿರುವುದು ಸಂವಿಧಾನದ 258 ಮತ್ತು 280ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಈ ವಿಧಿಗಳು, ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಹಣಕಾಸು ಚೌಕಟ್ಟುಗಳನ್ನು ಜಾರಿಗೊಳಿಸುವ ಮೊದಲು, ಹಣಕಾಸು ಫೆಡರಲಿಸಂ, ಸಮಾನ ಅಭಿವೃದ್ಧಿ ಮತ್ತು ಸ್ಥಳೀಯ ಆಡಳಿತದ ಬಲವರ್ಧನೆಗೆ ಒತ್ತು ನೀಡುತ್ತಾ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳುತ್ತವೆ. ಇಂತಹ ನಡೆ ಸಹಕಾರಿ ಫೆಡರಲಿಸಂನ ಮೂಲಾಧಾರವನ್ನೇ ದುರ್ಬಲಗೊಳಿಸುತ್ತದೆ.
ಉದ್ಯೋಗ ಭರವಸೆ ಕಾಯ್ದೆ ಕೇವಲ ಕಲ್ಯಾಣ ಯೋಜನೆಯಲ್ಲ; ಅದು ಮಹಾತ್ಮ ಗಾಂಧಿಯವರ ಹೆಸರನ್ನು ಹೊತ್ತಿರುವ, ಗ್ರಾಮ ಸ್ವರಾಜ್ಯ ಮತ್ತು ಅಂತ್ಯೋದಯದ ಮೌಲ್ಯಗಳನ್ನು ಪ್ರತಿಬಿಂಬಿಸುವ, ಐತಿಹಾಸಿಕ ಹಾಗೂ ಜಾಗತಿಕವಾಗಿ ಪ್ರಶಂಸಿತ ಹಕ್ಕು ಆಧಾರಿತ ಕಾನೂನು. ಈ ಕಾಯ್ದೆಯಿಂದ ಅವರ ಹೆಸರನ್ನು ತೆಗೆದುಹಾಕುವುದು ದುರ್ಭಾಗ್ಯಕರ ಸಂದೇಶವನ್ನು ನೀಡುತ್ತದೆ ಮತ್ತು ಅದರ ನೈತಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಈ ವಿಧಾನವು ಸಹಕಾರಿ ಒಕ್ಕೂಟದ ನಾಶಕ್ಕೆ ದಾರಿಯಾಗಿರುವ ಕಾರಣ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಸ್ಥಗಿತಗೊಳಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾ (India vs Sri Lanka) ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಇಂದು ತಿರುವನಂತಪುರದಲ್ಲಿ (Thiruvananthapuram) ನಡೆಯುತ್ತಿದೆ. ಭಾರತ ಇದುವರೆಗೆ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಆಡಿರುವ ನಾಲ್ಕು ಪಂದ್ಯಗಳಲ್ಲಿ ಶ್ರೀಲಂಕಾವನ್ನು ಸೋಲಿಸಿದೆ. ಹೀಗಾಗಿ ಈ ಪಂದ್ಯ ಟೀಂ ಇಂಡಿಯಾಕ್ಕೆ ಕೇವಲ ಔಪಚಾರಿಕ ಪಂದ್ಯವಾಗಿದೆ. ಇತ್ತ ಶ್ರೀಲಂಕಾ ಕೊನೆಯ ಪಂದ್ಯವನ್ನಾದರೂ ಗೆದ್ದು ಸರಣಿಯನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಲು ನೋಡುತ್ತಿದೆ. ಹಾಗೆಯೇ ಟೀಂ ಇಂಡಿಯಾಗೆ ಇದು ವರ್ಷದ ಕೊನೆಯ ಪಂದ್ಯವಾಗಿದ್ದು, ಗೆಲುವಿನೊಂದಿಗೆ ವರ್ಷವನ್ನು ಅಂತ್ಯಗೊಳಿಸಲು ಪ್ರಯತ್ನಿಸಲಿದೆ.
ಟಾಸ್ ಗೆದ್ದ ಶ್ರೀಲಂಕಾ
ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಟೀಂ ಇಂಡಿಯಾ ಪರ ಜಿ ಕಮಲಿನಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಸ್ಮೃತಿ ಮಂಧಾನ ಮತ್ತು ರೇಣುಕಾ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕಮಲಿನಿ ಜೊತೆಗೆ, ಸ್ನೇಹ್ ರಾಣಾ ಅವರಿಗೆ ಕೂಡ ಆಡುವ ಅವಕಾಶ ನೀಡಲಾಗಿದೆ. ಏತನ್ಮಧ್ಯೆ, ಶ್ರೀಲಂಕಾ ತಂಡವು ಆಡುವ ಹನ್ನೊಂದರಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ.
ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ (India vs Sri Lanka), ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಅಂದರೆ ಹರ್ಮನ್ಪ್ರೀತ್ ಕೌರ್ (Harmanpreet Kaur) ಪಡೆ ಐದು ಪಂದ್ಯಗಳ ಟಿ20ಐ ಸರಣಿಯನ್ನು 5-0 ಅಂತರದಿಂದ ಗೆದ್ದುಕೊಂಡಿದೆ. ತಿರುವನಂತಪುರದಲ್ಲಿ ನಡೆದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ ಏಳು ವಿಕೆಟ್ಗೆ 175 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಶ್ರೀಲಂಕಾ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ಗೆ 160 ರನ್ ಗಳಿಸಲಷ್ಟೇ ಶಕ್ತವಾಗಿ 15 ರನ್ಗಳಿಂದ ಸೋಲೊಪ್ಪಿಕೊಂಡಿತು.
ನಾಯಕಿಯ ಇನ್ನಿಂಗ್ಸ್ ಆಡಿದ ಹರ್ಮನ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಭಾರತವು ಕೇವಲ 41 ರನ್ಗಳಿಗೆ ತನ್ನ ಮೊದಲ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ನಂತರ ತಂಡದ ಬ್ಯಾಟಿಂಗ್ ವಿಭಾಗ 77 ರನ್ ಕಲೆಹಾಕುವ ಮೊದಲೇ ಪೆವಿಲಿಯನ್ ಸೇರಿಕೊಂಡಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಹರ್ಮನ್ಪ್ರೀತ್ ಕೌರ್ ಅದ್ಭುತ ಇನ್ನಿಂಗ್ಸ್ ಆಡಿ 43 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 68 ರನ್ ಗಳಿಸಿದರು. ಹಾಗೆಯೇ ಅರುಂಧತಿ ರೆಡ್ಡಿ 11 ಎಸೆತಗಳಲ್ಲಿ 27 ರನ್ ಗಳಿಸಿದರೆ, ಅಮನ್ಜೋತ್ ಕೌರ್ 21 ರನ್ಗಳ ಕೊಡುಗೆ ನೀಡಿದರು. ಪರಿಣಾಮವಾಗಿ, ಭಾರತ ತಂಡವು 20 ಓವರ್ಗಳಲ್ಲಿ ಏಳು ವಿಕೆಟ್ಗಳ ನಷ್ಟಕ್ಕೆ 175 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
5⃣ matches5⃣ victories 👏#TeamIndia complete an emphatic series sweep with a 15-run win in Trivandrum 🥳
176 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕಳಪೆ ಆರಂಭವನ್ನೇ ಪಡೆಯಿತು. ನಾಯಕಿ ಚಮರಿ ಅಟಪಟ್ಟು ಕೇವಲ 2 ರನ್ ಬಾರಿಸಿ ಔಟಾದರು. ಆದಾಗ್ಯೂ, ಹಸಿನಿ ಪೆರೆರಾ ಮತ್ತು ಇಮೇಶಾ ದುಲಾನಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಇಮೇಶಾ ದುಲಾನಿ 39 ಎಸೆತಗಳಲ್ಲಿ 8 ಬೌಂಡರಿ ಸೇರಿದಂತೆ 50 ರನ್ ಬಾರಿಸಿದರೆ, ಹಸಿನಿ ಪೆರೆರಾ ಕೂಡ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 65 ರನ್ ಬಾರಿಸಿ ಶ್ರೀಲಂಕಾ ಗೆಲುವಿನ ಭರವಸೆಯನ್ನು ಮೂಡಿಸಿದರು. ಆದಾಗ್ಯೂ, ಭಾರತೀಯ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾವನ್ನು 160 ರನ್ಗಳಿಗೆ ಕಟ್ಟಿಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಆಟದಲ್ಲಿ ಸ್ಪಂದನಾ ಸೋಮಣ್ಣ ಅವರು 14ನೇ ವಾರದ ತನಕ ಪೈಪೋಟಿ ನೀಡುತ್ತಾ ಬಂದಿದ್ದಾರೆ. ಆದರೆ ಅವರು ಈ ಮೊದಲೇ ಎಲಿಮಿನೇಟ್ ಆಗಬೇಕಿತ್ತು ಎಂಬ ಅಭಿಪ್ರಾಯ ಅನೇಕರಿಗೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನೆಟ್ಟಿಗರು ಚರ್ಚೆ ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಮನೆ ಒಳಗಿನ ಸ್ಪರ್ಧಿಗಳು ಕೂಡ ಈ ಕುರಿತು ಮಾತನಾಡಿದ್ದಾರೆ. ಈ ವಾರ ಸ್ಪಂದನಾ ಸೋಮಣ್ಣ (Spandana Somanna) ನಾಮಿನೇಟ್ ಆಗಿದ್ದಾರೆ. ಈ ಬಾರಿಯಾದರೂ ಅವರು ಎಲಿಮಿನೇಟ್ ಆಗುತ್ತಾರಾ ಅಥವಾ ಫಿನಾಲೆಗೆ ಎಂಟ್ರಿ ನೀಡುತ್ತಾರಾ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಸ್ಪಂದನಾ ಸೋಮಣ್ಣ ಅವರು ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಮೊದಲ ವಾರದಿಂದ 14ನೇ ವಾರದ ತನಕ ಅವರ ಆಟದಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಿಲ್ಲ. ಆ ಕಾರಣದಿಂದ ಬಹುತೇಕ ಸಂದರ್ಭಗಳಲ್ಲಿ ಅವರನ್ನು ನಾಮಿನೇಟ್ ಮಾಡಲಾಗಿದೆ. ಆದರೂ ಕೂಡ ಅವರು ಪ್ರತಿ ವಾರ ಸೇಫ್ ಆಗಿದ್ದು ಕಂಡು ಬಹುತೇಕರಿಗೆ ಅಚ್ಚರಿ ಆಗಿದ್ದುಂಟು.
ಈ ವಾರ 5 ಜನರು ನಾಮಿನೇಟ್ ಆಗಿದ್ದಾರೆ. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಧನುಶ್ ಅವರನ್ನು ನಾಮಿನೇಟ್ ಮಾಡಲಾಗಿದೆ. ಇಷ್ಟು ಜನರ ಪೈಕಿ ಸ್ಪಂದನಾ ಅವರೇ ವೀಕ್ ಸ್ಪರ್ಧಿ ಎಂಬುದು ಹಲವರ ಅನಿಸಿಕೆ. ಹಾಗಾಗಿ ಅವರು ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆ ಇದೆ. ಏನಾಗುತ್ತದೆ ಎಂಬುದನ್ನು ತಿಳಿಯಲು ವೀಕೆಂಡ್ ಸಂಚಿಕೆಗಾಗಿ ಕಾಯಬೇಕು.
ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ಅವರು ಈ ವಾರ ಸೇಫ್ ಆಗಿದ್ದು ಮಾತ್ರವಲ್ಲದೇ ಮುಂದಿನ ವಾರದ ಕ್ಯಾಪ್ಟೆನ್ಸಿ ಓಟಕ್ಕೆ ಅರ್ಹತೆ ಕೂಡ ಪಡೆದಿದ್ದಾರೆ. ಅವರ ಜೊತೆ ಅಶ್ವಿನಿ ಗೌಡ ಅವರಿಗೂ ಅರ್ಹತೆ ಸಿಕ್ಕಿತು. ಇನ್ನುಳಿದವರು ಅರ್ಹತೆ ಪಡೆಯಲು ಸೆಣೆಸಾಡುತ್ತಿದ್ದಾರೆ. ಮುಂದಿನ ವಾರ ಕ್ಯಾಪ್ಟನ್ ಆಗುವವರು ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆಯಲಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ಯಾರು ಫಿನಾಲೆಗೆ ಹೋಗುತ್ತಾರೆ? ಯಾರಿಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಗಿಲ್ಲಿ ನಟ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿದ್ದಾರೆ. ಅವರೇ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ವೀಕ್ಷಕರಿಂದ ಕೇಳಿಬರುತ್ತಿದೆ. ಬಹುತೇಕರಿಗೆ ಗಿಲ್ಲಿ ಫೇವರಿಟ್ ಸ್ಪರ್ಧಿ ಆಗಿದ್ದಾರೆ.
ಬೆಂಗಳೂರು, ಡಿ.30: ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ಬರುವ ಜನರನ್ನು ಶಾಸಕ ಎನ್.ಎ. ಹ್ಯಾರೀಸ್ ಸ್ವಾಗತಿಸಿದ್ದಾರೆ. ಎಷ್ಟು ಬೇಕಾದರೂ ಜನರು ಬರಲಿ, ಆದರೆ ಶಿಸ್ತುಬದ್ಧವಾಗಿ ಸಂಭ್ರಮಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹ್ಯಾರೀಸ್ ಒತ್ತಿ ಹೇಳಿದರು. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳು, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಮತ್ತು ಉತ್ತಮ ಬೆಳಕಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಯಾವುದೇ ರೀತಿಯ ತೊಂದರೆ ಆಗದಂತೆ ಜನರು ಸಂತೋಷದಿಂದ ಹೊಸ ವರ್ಷವನ್ನು ಸ್ವಾಗತಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪೊಲೀಸ್ ಇಲಾಖೆ, ಬಿಬಿಎಂಪಿ ಮತ್ತು ಸರ್ಕಾರ ಒಟ್ಟಾಗಿ ಸಮನ್ವಯದಿಂದ ಕೆಲಸ ಮಾಡುತ್ತಿದ್ದು, ಬೆಂಗಳೂರು ನಗರವು ಸುರಕ್ಷಿತ ಮತ್ತು ಸುಂದರ ಆಚರಣೆಗೆ ಸಿದ್ಧವಾಗಿದೆ. ಸಾರ್ವಜನಿಕರು ಆನಂದದಿಂದ ಭಾಗವಹಿಸಿ, ತಮ್ಮ ಮತ್ತು ಇತರರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಅವರು ಕೇಳಿಕೊಂಡರು.