Category Archives: Blog

Your blog category

ನನಗೆ ಉದ್ಯಮಿ ಜೊತೆ ಮದುವೆ, ಮಕ್ಕಳು ಆಗಿದೆ: ಗರಂ ಆಗಿ ಹೇಳಿದ ನಟಿ ತ್ರಿಶಾ ಕೃಷ್ಣನ್

ನನಗೆ ಉದ್ಯಮಿ ಜೊತೆ ಮದುವೆ, ಮಕ್ಕಳು ಆಗಿದೆ: ಗರಂ ಆಗಿ ಹೇಳಿದ ನಟಿ ತ್ರಿಶಾ ಕೃಷ್ಣನ್

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಜೊತೆಗಿನ ರಿಲೇಷನ್​ಶಿಪ್ ಕಾರಣದಿಂದ ಅವರು ಚರ್ಚೆಗೆ ಆಹಾರ ಆಗಿದ್ದಾರೆ. ಈ ನಡುವೆ ಚಿತ್ರರಂಗದಿಂದ ಅವರು ಹೊರಬರುತ್ತಾರೆ ಎನ್ನುವ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಇದೀಗ ಈ ಎಲ್ಲಾ ಗಾಸಿಪ್​ಗಳಿಗೆ ತ್ರಿಶಾ ಅವರು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಖ್ಯಾತ ಪತ್ರಕರ್ತ ಮತ್ತು ನಟ ಚಿತ್ರಾ ಲಕ್ಷ್ಮಣನ್ ಅವರು ತಮ್ಮ ‘ಟೂರಿಂಗ್ ಟಾಕೀಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, ‘ತ್ರಿಶಾ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸದಿರಲು ತೀರ್ಮಾನಿಸಿದ್ದಾರೆ ಎಂದು ಹಲವು ನಿರ್ಮಾಪಕರು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದರು. ತ್ರಿಶಾ ಇತ್ತೀಚೆಗೆ ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಮಾಡದಿರುವುದು ಈ ಅನುಮಾನಕ್ಕೆ ತುಪ್ಪ ಸುರಿದಂತಾಗಿತ್ತು.

ತಮ್ಮ ನಿವೃತ್ತಿ ಹಾಗೂ ಮದುವೆಯ ಬಗ್ಗೆ ಹಬ್ಬಿರುವ ಸುದ್ದಿಯನ್ನು ಕಂಡು ಕೆಂಡಾಮಂಡಲವಾದ ತ್ರಿಶಾ, ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ‘ನಾನು ಸಿನಿಮಾಗಳನ್ನು ಬಿಟ್ಟಿದ್ದೇನಂತೆ. ಒಬ್ಬ ಶ್ರೀಮಂತ ಉದ್ಯಮಿಯನ್ನು ಮದುವೆಯಾಗಿದ್ದೇನಂತೆ. ಅಷ್ಟೇ ಅಲ್ಲದೇ, ನನಗೆ ನಾಲ್ಕು ಜನ ಮಕ್ಕಳಿದ್ದು ಅವರಿಗೆ ನಿನ್ನೆ ಎರಡನೇ ವರ್ಷದ ಹುಟ್ಟುಹಬ್ಬವೂ ಮುಗಿದಿದೆಯಂತೆ. ಇಂದಿನ ಕಲ್ಪಿತ ಕಥೆಯ ಕೋಟಾ ಮುಗಿಯಿತೇ ಅಥವಾ ನಾನು ಇನ್ನೂ ಏನಾದರೂ ಸೇರಿಸಬೇಕೇ’ ಎಂದು ಬರೆದುಕೊಳ್ಳುವ ಮೂಲಕ ವದಂತಿಗಳನ್ನು ತಳ್ಳಿಹಾಕಿದ್ದಾರೆ.

Trisha Krishnan Instagram Story

ಕಳೆದ ಅಕ್ಟೋಬರ್‌ನಲ್ಲಿ ತ್ರಿಶಾ ಅವರು ಚಂಡೀಗಢ ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ‘ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ’ ಎಂಬ ಅರ್ಥದ ಪೋಸ್ಟ್ ಹಂಚಿಕೊಂಡಿದ್ದು ಕೂಡ ಚರ್ಚೆಗೆ ಕಾರಣವಾಗಿತ್ತು. ಇನ್ನು, ನಟ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ವಿಜಯ್ ಮತ್ತು ತ್ರಿಶಾ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಮದುವೆಯೊಂದಕ್ಕೆ ಒಂದೇ ರೀತಿಯ ಉಡುಪು ಧರಿಸಿ ಬಂದಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.

ಇದನ್ನೂ ಓದಿ: ವಿಜಯ್ ಜೊತೆಗಿನ ಅಫೇರ್ ಬಗ್ಗೆ ನೇರ ಪ್ರಶ್ನೆ: ತ್ರಿಶಾ ಪ್ರತಿಕ್ರಿಯೆ ಹೇಗಿತ್ತು ನೋಡಿ

ತ್ರಿಶಾ ಚಿತ್ರರಂಗ ಬಿಡುತ್ತಾರೆ ಎಂಬುದು ಕೇವಲ ವದಂತಿ ಎಂಬುದು ಅವರ ಮುಂಬರುವ ಚಿತ್ರಗಳ ಪಟ್ಟಿಯನ್ನು ನೋಡಿದರೆ ತಿಳಿಯುತ್ತದೆ. 2025ರಲ್ಲಿ ‘ವಿದಾಮುಯರ್ಚಿ’, ‘ಗುಡ್ ಬ್ಯಾಡ್ ಅಗ್ಲಿ’, ‘ಥಗ್ ಲೈಫ್’ ಚಿತ್ರಗಳಲ್ಲಿ ತ್ರಿಶಾ ಅವರು ಕಾಣಿಸಿಕೊಂಡಿದ್ದರು. ‘ಕರುಪ್ಪು’, ‘ವಿಶ್ವಂಭರ’ ಮುಂತಾದ ಸಿನಿಮಾಗಳು ಈಗ ಅವರ ಕೈಯಲ್ಲಿವೆ. ಆ ಸಿನಿಮಾಗಳ ಬಿಡುಗಡೆಗೆ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

16 ವರ್ಷಗಳಿಂದ ಭಾರತದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಪಾಕಿಸ್ತಾನದ ಎಲ್​ಇಟಿ ಉಗ್ರ ಸೆರೆ

ಶ್ರೀನಗರ, ಏಪ್ರಿಲ್ 7: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೊಲೀಸರು ಇಂದು ಅಂತರರಾಜ್ಯ ಲಷ್ಕರ್-ಎ-ತೈಬಾ ಭಯೋತ್ಪಾದಕ ಘಟಕವನ್ನು ಭೇದಿಸಿದ್ದಾರೆ. ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಸೇರಿದಂತೆ 5 ಜನರನ್ನು ಬಂಧಿಸಿದ್ದಾರೆ. ಈತ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕೇಂದ್ರಾಡಳಿತ ಪ್ರದೇಶದ ಹೊರಗೆ ನೆಲೆಗಳನ್ನು ಸ್ಥಾಪಿಸಲು ಕಾರಣನಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳಲ್ಲಿ ಕಳೆದ 16 ವರ್ಷಗಳಿಂದ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ ಎಲ್‌ಇಟಿಯ ಪ್ರಮುಖ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಕೂಡ ಸೇರಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈತ ಭಯೋತ್ಪಾದಕ ಅಡಗುತಾಣಗಳು ಮತ್ತು ಹಣಕಾಸು ಮಾರ್ಗಗಳ ಜಾಲದ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ.

ಅಬ್ದುಲ್ಲಾ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಒಳಗೊಂಡ ಪ್ರಮುಖ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಪಾಕಿಸ್ತಾನಿ ಭಯೋತ್ಪಾದಕ ಉಸ್ಮಾನ್ ಅಲಿಯಾಸ್ ಖುಬೈಬ್ ಎಂಬಾತನನ್ನು ಸಹ ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಹರಿಯಾಣ ಸೇರಿದಂತೆ 19 ಸ್ಥಳಗಳಲ್ಲಿ ಶೋಧ ನಡೆಸಿದ್ದ ಪೊಲೀಸರು ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವಲ್ಲಿ ಭಾಗಿಯಾಗಿರುವ ಎಲ್‌ಇಟಿ ಜಾಲವನ್ನು ಪತ್ತೆಹಚ್ಚಿದ್ದರು.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 17 ಬಾರಿ ತಪ್ಪಿಸಿಕೊಂಡಿದ್ದ ಉಗ್ರ ಸೇರಿ 7 ಭಯೋತ್ಪಾದಕರ ಎನ್​ಕೌಂಟರ್

ಪೊಲೀಸರ ಕೈಗೆ ಸಿಕ್ಕಿಬಿದ್ದ ಐವರಲ್ಲಿ ಮೂವರು ಶ್ರೀನಗರ ನಿವಾಸಿಗಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರಿಗೆ ಆಶ್ರಯ ಮತ್ತು ಆಹಾರ ಸೇರಿದಂತೆ ಹಲವು ರೀತಿಯ ಬೆಂಬಲವನ್ನು ಒದಗಿಸಿದ ಆರೋಪದ ಮೇಲೆ ಮೊಹಮ್ಮದ್ ನಕೀಬ್ ಭಟ್, ಆದಿಲ್ ರಶೀದ್ ಭಟ್ ಮತ್ತು ಗುಲಾಮ್ ಮೊಹಮ್ಮದ್ ಮಿರ್ ಅಲಿಯಾಸ್ ಮಾಮಾ ಅವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಲಷ್ಕರ್-ಎ-ತೈಬಾ ಜಾಲದ ಸಹಾಯದಿಂದ ಇತರ ರಾಜ್ಯಗಳಲ್ಲಿ ನಕಲಿ ದಾಖಲೆಗಳು ಮತ್ತು ಗುರುತಿನ ಆಧಾರದ ಮೇಲೆ ವಿದೇಶಿ ಭಯೋತ್ಪಾದಕನೊಬ್ಬ ದೇಶದ ಹೊರಗೆ ಪ್ರಯಾಣಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭಯೋತ್ಪಾದಕರು ಸುಮಾರು 16 ವರ್ಷಗಳ ಹಿಂದೆ ಭಾರತಕ್ಕೆ ನುಸುಳಿದ್ದರು. ಅವರು ಕಾಶ್ಮೀರ ಕಣಿವೆಯ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದರು. ಇಲ್ಲಿಯವರೆಗೂ ಅವರು ಸುಮಾರು 40 ವಿದೇಶಿ ಭಯೋತ್ಪಾದಕರಿಗೆ ಸಹಾಯ ಮಾಡಿದ್ದರು. ಅವರಲ್ಲಿ ಹೆಚ್ಚಿನವರನ್ನು ಭಾರತೀಯ ಭದ್ರತಾ ಪಡೆಗಳು ಕೊಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ರಜನೀಕಾಂತ್​​ಗೆ ಕೈಕೊಟ್ಟ ಶಾರುಖ್ ಖಾನ್, ‘ಜೈಲರ್ 2’ಗೆ ನೋ?

ರಜನೀಕಾಂತ್ (Rajinikanth) ನಟನೆಯ ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಇನ್ನೂ ಕೆಲವು ಸ್ಟಾರ್ ನಟರುಗಳು ನಟಿಸಲಿದ್ದಾರೆ. ‘ಜೈಲರ್’ ಸಿನಿಮಾನಲ್ಲಿ ತಮ್ಮ ಅತಿಥಿ ಪಾತ್ರದಿಂದ ಮ್ಯಾಜಿಕ್ ಮಾಡಿದ್ದ ಶಿವಣ್ಣ ಸೇರಿದಂತೆ ಮೋಹನ್​​ಲಾಲ್, ಜಾಕಿ ಶ್ರಾಫ್ ಇನ್ನೂ ಕೆಲವರಿದ್ದಾರೆ. ಈ ಸಿನಿಮಾನಲ್ಲಿ ಬಾಲಿವುಡ್​​ನ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಕೇಳಿ ಬಂದಿತ್ತು. ಆದರೆ ಅದು ಸುಳ್ಳು ಎನ್ನಲಾಗುತ್ತಿದೆ.

ರಜನಿಕಾಂತ್ ಅವರ ‘ಜೈಲರ್ 2’ ಸಿನಿಮಾನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ‘ಜೈಲರ್ 2’ ನಲ್ಲಿ ಶಿವಣ್ಣ, ಮೋಹನ್​​ಲಾಲ್ ಜೊತೆಗೆ ಶಾರುಖ್ ಖಾನ್ ಸಹ ಇರಲಿದ್ದಾರೆ ಎನ್ನಲಾಗಿತ್ತು. ಮೋಹನ್ ಲಾಲ್ ಅವರ ಕಾರ್ ಡ್ರೈವರ್ ಹಂಚಿಕೊಂಡಿದ್ದ ಒಂದು ಎಐ ಚಿತ್ರ, ಈ ಸುದ್ದಿಗೆ ಬಹಳಷ್ಟು ಪುಷ್ಠಿ ನೀಡಿತ್ತು. ಆದರೆ ಈಗ ಬಂದಿರುವ ಸುದ್ದಿಯ ಪ್ರಕಾರ, ‘ಜೈಲರ್ 2’ನ ಅತಿಥಿ ಪಾತ್ರವನ್ನು ಶಾರುಖ್ ಖಾನ್ ನಿರಾಕರಿಸಿದ್ದಾರಂತೆ. ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಕಿಂಗ್’ ಸಿನಿಮಾದ ಮೇಲೆ ಹೆಚ್ಚು ಗಮನ ಹರಿಸಬೇಕಾಗಿರುವ ಕಾರಣದಿಂದಾಗಿ ಅವರು ‘ಜೈಲರ್ 2’ ಸಿನಿಮಾದ ಅತಿಥಿ ಪಾತ್ರವನ್ನು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ರಜನೀಕಾಂತ್ ಋಣ ತೀರಿಸಿದ ಶಾರುಖ್ ಖಾನ್, ಎಸ್​​ಆರ್​​ಕೆ ಜೊತೆ ಎಸ್​​ಆರ್​​ಕೆ

“ಜೈಲರ್ 2 ಚಿತ್ರತಂಡವು ಶಾರುಖ್ ಖಾನ್ ಅವರಿಂದ 5 ದಿನಗಳ ಶೂಟಿಂಗ್ ಬಯಸಿತ್ತು. ಶಾರುಖ್ ಕೂಡ ಈ ವಿಚಾರಕ್ಕೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದರು. ಆದರೆ ‘ಕಿಂಗ್’ ಸಿನಿಮಾಕ್ಕಾಗಿ ಶಾರುಖ್ ಖಾನ್ ಅವರು ತಮ್ಮ ಲುಕ್ ಬದಲಿಸಿದ್ದು, ಈಗ ‘ಜೈಲರ್’ಗಾಗಿ ತಮ್ಮ ಲುಕ್ ಬದಲಾಯಿಸುವ, ಅಥವಾ ಅದೇ ಲುಕ್​​ನಲ್ಲಿ ‘ಜೈಲರ್ 2’ ನಲ್ಲಿ ನಟಿಸುವುದು ಬೇಡ ಎಂದುಕೊಂಡಿದ್ದಾರಂತೆ. ‘ಕಿಂಗ್’ ಸಿನಿಮಾ ಬಿಡುಗಡೆಯಾಗುವ ಮೊದಲು ಬೇರೆ ಯಾವುದೇ ಚಿತ್ರಗಳಲ್ಲಿ ಅತಿಥಿ ನಟನಾಗಿ ಕಾಣಿಸಿಕೊಳ್ಳಬಾರದು ಎಂಬುದು ಶಾರುಖ್ ಖಾನ್ ಅವರ ಉದ್ದೇಶವಾಗಿದ್ದು, ಇದೇ ಕಾರಣಕ್ಕೆ ಅವರು ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿಲ್ಲ ಎನ್ನಲಾಗುತ್ತಿದೆ.

ಈ ಹಿಂದೆ ಶಾರುಖ್ ಖಾನ್ ನಟಿಸಿ, ನಿರ್ಮಾಣ ಮಾಡಿದ್ದ ‘ರಾ 1’ ಸಿನಿಮಾನಲ್ಲಿ ರಜನೀಕಾಂತ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ದೊಡ್ಡ ಹಿಟ್ ಆಗಿತ್ತು. ಇದೀಗ ‘ಜೈಲರ್ 2’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಆ ಋಣವನ್ನು ಶಾರುಖ್ ಖಾನ್ ತೀರಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಶಾರುಖ್ ಖಾನ್ ಅವರು ‘ಜೈಲರ್ 2’ ಆಫರ್ ತಿರಸ್ಕರಿಸಿದ್ದಾರೆ. ಇದು ಸಹಜವಾಗಿಯೇ ರಜನೀಕಾಂತ್ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಲಿದೆ.

‘ಜೈಲರ್ 2’ ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು, ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಇನ್ನು ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಹ ಸಿನಿಮಾನಲ್ಲಿದ್ದಾರೆ. ‘ಕಿಂಗ್’ ಸಿನಿಮಾ ಇದೇ ವರ್ಷ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ‘ಕಿಂಗ್’ ಸಿನಿಮಾದ ಬಳಿಕ ಶಾರುಖ್ ಖಾನ್, ‘ಬ್ರಹ್ಮಾಸ್ತ್ರ’ ಸಿನಿಮಾದ ಪ್ರೀಕ್ವೆಲ್​​ನಲ್ಲಿ ನಟಿಸಲಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೈಕಲ್ ಓಡಿಸುತ್ತಿದ್ದ ಬಾಲಕನಿಗೆ ಸಾಕು ನಾಯಿ ಕಡಿತ; ನಾಯಿ ಮಾಲೀಕರ ಮೇಲೆ ಎಫ್ಐಆರ್!

ಬೆಂಗಳೂರು, ಏಪ್ರಿಲ್ 07: ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೀದಿ ನಾಯಿಗಳ (Stray Dogs) ಜೊತೆಗೆ ಸಾಕು ನಾಯಿಗಳ ದಾಳಿಯೂ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರಾಜಾಜಿನಗರದ 1ನೇ ಬ್ಲಾಕ್‌ನಲ್ಲಿ 11 ವರ್ಷದ ಬಾಲಕನ ಮೇಲೆ ಸಾಕು ನಾಯಿ ದಾಳಿ ನಡೆಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಾಲಕ ಒದ್ದಾಡುತ್ತಿದ್ದರೂ ಕ್ಯಾರೇ ಎನ್ನದ ಮಾಲೀಕರು

ಮಾರ್ಚ್ 21ರಂದು ಬೆಳಗ್ಗೆ ಬ್ರೆಡ್ ತರಲು ಸೈಕಲ್‌ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆ ವಾಕ್‌ಗೆ ಕರೆತಂದ ನಾಯಿಯು ಏಕಾಏಕಿ ದಾಳಿ ಮಾಡಿ ತೊಡೆಗೆ ಕಚ್ಚಿ ಗಾಯಗೊಳಿಸಿದೆ. ಘಟನೆಯಿಂದ ಬೆಚ್ಚಿಬಿದ್ದ ಬಾಲಕ ನೋವಿನಿಂದ ಬಳಲುತ್ತಿದ್ದರೂ, ನಾಯಿ ಮಾಲೀಕರು ಯಾವುದೇ ರೀತಿಯ ಸಹಾಯ ಮಾಡದೇ ಉದಾಸೀನತೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಚಿಕಿತ್ಸೆ ವೆಚ್ಚವನ್ನು ಕುಟುಂಬಸ್ಥರೇ ಭರಿಸಿದ್ದು, ಇದರಿಂದ ಆಕ್ರೋಶಗೊಂಡ ಪೋಷಕರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ನಾಯಿ ಮಾಲೀಕನಿಗೆ ನೋಟಿಸ್

ಘಟನೆಯಾಗಿ 15 ದಿನಗಳು ಕಳೆದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ನಾಯಿ ಮಾಲೀಕನಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲು ಮುಂದಾಗಿದ್ದಾರೆ. ಬಾಲಕನ ತಾತ ವೇಣು ಮಾಧವ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳು ಜನರಲ್ಲಿ ಭೀತಿ ಹುಟ್ಟಿಸುತ್ತಿವೆ. ಸಾಕು ಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಮಾಲೀಕರು ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಬೇಕು, ಇಲ್ಲವಾದರೆ ಇಂತಹ ಅಪಾಯಗಳು ಮರುಕಳಿಸುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bank Job 2026: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​​ನಲ್ಲಿ ನೇಮಕಾತಿ; 82 ಹುದ್ದೆಗೆ ಅರ್ಜಿ ಆಹ್ವಾನ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಹೊಸಪೇಟೆ ಖಾಲಿ ಇರುವ ವಿವಿಧ 82 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ನೇಮಕಾತಿಯು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ನಿಯಮಾವಳಿಗಳ ಅನ್ವಯ ನಡೆಯಲಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು ನಾಲ್ಕು ವರ್ಗದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವ್ಯವಸ್ಥಾಪಕರು ಅಥವಾ ಪ್ರಥಮ ದರ್ಜೆ ಸಹಾಯಕರ 22 ಹುದ್ದೆಗಳಿಗೆ 44,425 ರಿಂದ 83,700 ರೂ. ರವರೆಗೆ ವೇತನ ನಿಗದಿಯಾಗಿದೆ. ದ್ವಿತೀಯ ದರ್ಜೆ ಸಹಾಯಕರ 28 ಹುದ್ದೆಗಳಿಗೆ 34,100 ರಿಂದ 67,400 ರೂ. ವೇತನ ಶ್ರೇಣಿ ಇದ್ದರೆ, ಒಬ್ಬ ವಾಹನ ಚಾಲಕನ ಹುದ್ದೆಗೆ ರೂ. 31,775 ರಿಂದ 61,300 ಹಾಗೂ 31 ಕಿರಿಯ ಸೇವಕ ಹುದ್ದೆಗಳಿಗೆ ರೂ. 29,600 ರಿಂದ 52,800 ರವರೆಗೆ ಮಾಸಿಕ ವೇತನ ಲಭ್ಯವಿರುತ್ತದೆ.

ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಅರ್ಜಿಗಳನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ. ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸುವ ಯಾವುದೇ ಭೌತಿಕ ಅರ್ಜಿಗಳನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆಸಕ್ತರು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಆದ www.bellarydcc.bank.in ಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸಲು ಏಪ್ರಿಲ್ 6, 2026 ರಿಂದ ಚಾಲನೆ ನೀಡಲಾಗಿದ್ದು, ಮೇ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಯೋಮಿತಿ, ಕನಿಷ್ಠ ವಿದ್ಯಾರ್ಹತೆ, ಮೀಸಲಾತಿ ವರ್ಗೀಕರಣ, ಅರ್ಜಿ ಶುಲ್ಕ ಮತ್ತು ಲಿಖಿತ ಪರೀಕ್ಷೆಯ ವಿವರಗಳನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸವಿಸ್ತಾರವಾದ ಅಧಿಸೂಚನೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾವಿಗೆ ಶಾರ್ಟ್​ ಕಟ್, ಮೈನ್ ರೋಡ್ ಅವಾಯ್ಡ್​ ಮಾಡಲು ಶಾರ್ಟ್​ಕಟ್​ನಲ್ಲಿ ಹೋಗಿ ಕಾರು ಬಾವಿಗೆ ಬಿದ್ದು 9 ಮಂದಿ ಸಾವು

ಮುಂಬೈ, ಏಪ್ರಿಲ್ 07: ಮುಖ್ಯರಸ್ತೆಯಿಂದ ಹೋದರೆ ತುಂಬಾ ಸಮಯವಾಗುತ್ತದೆ ಎಂದು ಶಾರ್ಟ್​​ಕಟ್​​ನಲ್ಲಿ ಹೋಗಿ ಕಾರು(Car) ಬಾವಿಗೆ ಬಿದ್ದ ಪರಿಣಾಮ 9 ಮಂದಿ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ತೆಗೆದುಕೊಂಡ ಒಂದೇ ಒಂದು ನಿರ್ಧಾರದಿಂದ 6 ಮಂದಿ ಮಕ್ಕಳು ಸೇರಿ ಕುಟುಂಬದ 9 ಮಂದಿ ಸಾವಿನ ಮನೆ ಕದ ತಟ್ಟಿದ್ದಾರೆ. ದರ್ಗುಡೆ ಕುಟುಂಬದ 9 ಮಂದಿ ದಿಂಡೋರಿಯಲ್ಲಿರುವ ತರಬೇತಿ ಕೇಂದ್ರವು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಿದ್ದರು.ಅವರಲ್ಲಿ ಸುನಿಲ್ ದರ್ಗುಡೆ (32), ಅವರ ಪತ್ನಿ ರೇಷ್ಮಾ (27), ಮಗಳು ಗುಣವಂತಿ (11), ಸುನಿಲ್ ಅವರ ಅತ್ತಿಗೆ ಆಶಾ (32), ಅವರ ಮಕ್ಕಳಾದ ಶ್ರೇಯಶ್ (11), ಶ್ರಾವಣಿ (11), ಶ್ರದ್ಧಾ (13) ಮತ್ತು ಸೃಷ್ಟಿ (14), ಮತ್ತು ಸಂಬಂಧಿಕರ ಮಗು ಸಮೃದ್ಧಿ (7) ಸೇರಿದ್ದಾರೆ.

ಕಾರ್ಯಕ್ರಮಕ್ಕೆ ಹಾಜರಾದ ನಂತರ, ಒಂಬತ್ತು ಮಂದಿ ಸುಮಾರು 10 ಕಿ.ಮೀ ದೂರದಲ್ಲಿರುವ ತಮ್ಮ ಹಳ್ಳಿಗೆ ತೆರಳಿದರು. ಸಂಜೆ ಸಮಯವಾಗಿತ್ತು, ಹಾಗಾಗಿ ಶಾರ್ಟ್​ ಕಟ್ ರಸ್ತೆ ಮೂಲಕ ಹೋಗೋಣವೆಂದು ಕಾರು ಓಡಿಸುತ್ತಿದ್ದ ಸುನಿಲ್ ನಿರ್ಧರಿಸಿದ್ದರು. ಆದರೆ ಅದು ಎಲ್ಲರ ಜೀವಕ್ಕೂ ಕುತ್ತು ತಂದಿತ್ತು.

ಕಾರು ರಸ್ತೆ ಬದಿಯ ಬಾವಿಯ ಗೋಡೆಗೆ ಡಿಕ್ಕಿ ಹೊಡೆದು ಅದರೊಳಗೆ ಉರುಳಿತು. ಆಳವಾದ ಬಾವಿಯಲ್ಲಿ 40 ಅಡಿ ಎತ್ತರದವರೆಗೆ ನೀರು ಇತ್ತು.ಶಬ್ದ ಕೇಳಿದ ಸ್ಥಳೀಯ ನಿವಾಸಿಗಳು ಬಾವಿಗೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ನಿವಾಸಿಗಳು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಲು ಪ್ರಯತ್ನಿಸಿದರು, ಆದರೆ ಕತ್ತಲೆ ಮತ್ತು ಬಾವಿಯ ಆಳವು ಪ್ರಮುಖ ಸವಾಲಾಗಿತ್ತು.

ಮತ್ತಷ್ಟು ಓದಿ: Video: ಮೊಮ್ಮಗನಿಗೆ ಕಾರು ನಿಲ್ಲಿಸಲು ಸಹಾಯ ಮಾಡಲು ಹೋಗಿ ಸಾವಿನ ಮನೆ ಕದ ತಟ್ಟಿದ ಮಹಿಳೆ

ಅಗ್ನಿಶಾಮಕ ದಳದವರು ವಾಹನವನ್ನು ಪತ್ತೆಹಚ್ಚಲು ದೀಪಗಳನ್ನು ಬಳಸಿದರು. ಈಜುಗಾರರು ಒಳಗೆ ಬಂದರು, ಮತ್ತು ಹಗ್ಗಗಳನ್ನು ಬಳಸಿ ಕಾರನ್ನು ಬಾವಿಯಿಂದ ಹೊರತೆಗೆಯಲಾಯಿತು. ಆದರೆ ಆಗಲೇ ತುಂಬಾ ತಡವಾಗಿತ್ತು. ಕಾರಿನಲ್ಲಿದ್ದವರೆಲ್ಲರೂ ಸತ್ತಿದ್ದರು. ವಾಹನದ ಹೊರಗೆ ಮಕ್ಕಳಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿತ್ತು. ಬಾವಿಯ ಪಕ್ಕದ ರಸ್ತೆಯನ್ನು ಕೆಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು, ಆದರೆ ಬಾವಿಯನ್ನು ಮುಚ್ಚಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಈ ಬಗ್ಗೆ ನಾಗರಿಕ ಅಧಿಕಾರಿಗಳು ಮತ್ತು ಬಾವಿಯ ಮಾಲೀಕರು ವಿವಾದದಲ್ಲಿ ಸಿಲುಕಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Harvard Free Online Courses: ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಉಚಿತ ಎಐ ಮತ್ತು ಡೇಟಾ ಸೈನ್ಸ್ ಕೋರ್ಸ್‌ಗಳು!

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನದ ಜ್ಞಾನವಿಲ್ಲದೆ ವೃತ್ತಿಜೀವನದಲ್ಲಿ ಮುನ್ನಡೆಯುವುದು ಅಸಾಧ್ಯ ಎಂಬಂತಾಗಿದೆ. ಇದನ್ನು ಮನಗಂಡ ವಿಶ್ವದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯವು (Harvard University), ಕೃತಕ ಬುದ್ಧಿಮತ್ತೆ (AI), ಡೇಟಾ ಸೈನ್ಸ್ ಮತ್ತು ಪ್ರೋಗ್ರಾಮಿಂಗ್‌ನಂತಹ ಅತ್ಯಾಧುನಿಕ ವಿಷಯಗಳಲ್ಲಿ ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಿದೆ.

ನೀವು ಈಗಷ್ಟೇ ಪದವಿ ಮುಗಿಸಿದ್ದರೆ ಅಥವಾ ಅನುಭವಿ ವೃತ್ತಿಪರರಾಗಿರಲಿ, ಈ ಕೋರ್ಸ್‌ಗಳು ನಿಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯಾಗಿವೆ. ಈ ಕೋರ್ಸ್‌ಗಳ ಪ್ರಮುಖ ವಿವರಗಳು ಇಲ್ಲಿವೆ:

ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್ (Data Science & Machine Learning):

ಡೇಟಾ ಸೈನ್ಸ್ ಲೋಕಕ್ಕೆ ಕಾಲಿಡಲು ಬಯಸುವವರಿಗೆ ಇದು ಅಡಿಪಾಯದಂತಿದೆ. ಇದರಲ್ಲಿ ಮೆಷಿನ್ ಲರ್ನಿಂಗ್‌ನ ಮೂಲಭೂತ ಅಂಶಗಳು, ವಿವಿಧ ಅಲ್ಗಾರಿದಮ್‌ಗಳು ಮತ್ತು ಶಿಫಾರಸು ವ್ಯವಸ್ಥೆಗಳನ್ನು (Recommendation Systems) ನಿರ್ಮಿಸುವುದನ್ನು ಕಲಿಸಲಾಗುತ್ತದೆ.

  • ಅವಧಿ: 8 ವಾರಗಳು (ಸ್ವಯಂ-ವೇಗದ ಕಲಿಕೆ).

ಬಿಸಿನೆಸ್‌ಗಾಗಿ ಕಂಪ್ಯೂಟರ್ ಸೈನ್ಸ್ (Computer Science for Business):

ವ್ಯವಹಾರ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬಯಸುವವರಿಗಾಗಿ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕ್ಲೌಡ್ ಕಂಪ್ಯೂಟಿಂಗ್, ವೆಬ್ ಡೆವಲಪ್‌ಮೆಂಟ್ ಮತ್ತು ಪ್ರೋಗ್ರಾಮಿಂಗ್ ಭಾಷೆಗಳ ಪರಿಚಯವಿರುತ್ತದೆ.

  • ಲಭ್ಯತೆ: ಏಪ್ರಿಲ್ 1 ರಿಂದ ಡಿಸೆಂಬರ್ 30, 2026 ರವರೆಗೆ.

ತಂತ್ರಜ್ಞಾನದ ಮೂಲಭೂತ ಜ್ಞಾನ (Understanding Technology):

ತಾಂತ್ರಿಕೇತರ ಹಿನ್ನೆಲೆಯುಳ್ಳವರಿಗೆ (Non-technical background) ಇದು ಅತ್ಯುತ್ತಮ ಆಯ್ಕೆ. ಇಂಟರ್ನೆಟ್, ಸೈಬರ್ ಭದ್ರತೆ ಮತ್ತು ಮಲ್ಟಿಮೀಡಿಯಾಗಳ ಕಾರ್ಯವೈಖರಿಯನ್ನು ಇಲ್ಲಿ ಸರಳವಾಗಿ ವಿವರಿಸಲಾಗುತ್ತದೆ.

  • ಅವಧಿ: 6 ವಾರಗಳು.

ಪೈಥಾನ್ ಮೂಲಕ ಡೇಟಾ ಸೈನ್ಸ್ (Data Science with Python):

ಪೈಥಾನ್ ಪ್ರೋಗ್ರಾಮಿಂಗ್ ಬಳಸಿಕೊಂಡು ಡೇಟಾ ವಿಶ್ಲೇಷಣೆ ಮಾಡುವುದು ಹೇಗೆ ಎಂಬ ಪ್ರಾಯೋಗಿಕ ಜ್ಞಾನವನ್ನು ಈ ಕೋರ್ಸ್ ನೀಡುತ್ತದೆ. ಪ್ರಮುಖ ಲೈಬ್ರರಿಗಳಾದ Pandas, Numpy ಮತ್ತು Matplotlib ಬಳಕೆಯ ಬಗ್ಗೆ ಇಲ್ಲಿ ತರಬೇತಿ ಇರುತ್ತದೆ.

  • ಅವಧಿ: 8 ವಾರಗಳು.

ವೆಬ್ ಡೆವಲಪ್‌ಮೆಂಟ್ (Web Development):

ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ನಿರ್ಮಾಣದಲ್ಲಿ ಆಸಕ್ತಿ ಇರುವವರಿಗೆ ಇದು ಸೂಕ್ತ. HTML, CSS, JavaScript ಮತ್ತು Django ನಂತಹ ಪ್ರಮುಖ ಪರಿಕರಗಳನ್ನು ಇಲ್ಲಿ ಕಲಿಸಲಾಗುತ್ತದೆ.

  • ಅವಧಿ: 12 ವಾರಗಳು (ವಾರಕ್ಕೆ 6-9 ಗಂಟೆಗಳ ಕಲಿಕೆ).

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಆರಂಭಿಕರಿಗಾಗಿ ಪ್ರೋಗ್ರಾಮಿಂಗ್ (Programming for Beginners):

ಪ್ರೋಗ್ರಾಮಿಂಗ್‌ನ ಶೂನ್ಯ ಜ್ಞಾನ ಇರುವವರಿಗಾಗಿ ಈ ಕೋರ್ಸ್ ರೂಪಿಸಲಾಗಿದೆ. ವೇರಿಯೇಬಲ್‌ಗಳು, ಲೂಪ್‌ಗಳು ಮತ್ತು ಫಂಕ್ಷನ್‌ಗಳಂತಹ ಮೂಲಭೂತ ವಿಷಯಗಳನ್ನು ಇಲ್ಲಿ ಮೊದಲಿನಿಂದ ಕಲಿಸಲಾಗುತ್ತದೆ.

  • ಅವಧಿ: 3 ವಾರಗಳು.

ವಿಶೇಷತೆ ಏನು?

ಈ ಎಲ್ಲಾ ಕೋರ್ಸ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಕಲಿಯುವವರು ತಮ್ಮ ಅನುಕೂಲಕ್ಕೆ ತಕ್ಕಂತೆ (Self-paced) ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಜಾಗತಿಕ ಮಟ್ಟದ ಶಿಕ್ಷಣವನ್ನು ಉಚಿತವಾಗಿ ಪಡೆಯಲು ಇದು ಒಂದು ಸುವರ್ಣ ಅವಕಾಶವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡ್ರಗ್ಸ್​​ ದಂಧೆಕೋರರಿಗೆ ಭರ್ಜರಿ ಶಾಕ್​​ ಕೊಟ್ಟ ಬೆಂಗಳೂರು ಪೊಲೀಸರು: ವಿವಿಧ ಪ್ರಕರಣಗಳಲ್ಲಿ ಐವರು ಅಂದರ್​

ಬೆಂಗಳೂರು, ಏಪ್ರಿಲ್​​ 07: ಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ರಾಜ್ಯದಲ್ಲಿ ಡ್ರಗ್ಸ್​​ ಹಾವಳಿ ಮುಂದುವರಿದಿದೆ. ಖಾಕಿ ಚಾಪೆ ಕೆಳಗೆ ತೂರಿದರೆ ದಂಧೆಕೋರರು ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಡ್ರಗ್ಸ್​​ ಪೆಡ್ಲರ್​​ಗಳಿಗೆ ಬೆಂಗಳೂರು ಪೊಲೀಸರು ಭರ್ಜರಿ ಶಾಕ್​​ ಕೊಟ್ಟಿದ್ದಾರೆ. 12 ವರ್ಷಗಳಿಂದ ಡ್ರಗ್ಸ್​ ಪೆಡ್ಲಿಂಗ್ ನಡೆಸುತ್ತಿದ್ದ ಆರೋಪಿ ಸೇರಿ ವಿವಿಧ ಪ್ರಕರಣಗಲ್ಲಿ ಒಟ್ಟು ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ನೈಜೀರಿಯಾ ಪ್ರಜೆಯ ಬಂಧನ

ಭಾರತೀಯ ಮಹಿಳೆ ಮದುವೆಯಾಗಿ 12 ವರ್ಷಗಳಿಂದ ಡ್ರಗ್ಸ್​ ಪೆಡ್ಲಿಂಗ್ ನಡೆಸುತ್ತಿದ್ದ ನೈಜೀರಿಯಾ ಪ್ರಜೆ ಇಮ್ಯಾನ್ಯುಯಲ್​​ ಎಂಬಾತನನ್ನು ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. 2014ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಇಮ್ಯಾನ್ಯುಯಲ್, ಬೆಂಗಳೂರಿಗೆ ಬಂದು ಇಲ್ಲಿಯ ಮಹಿಳೆಯನ್ನೇ ಮದುವೆ ಕೂಡ ಆಗಿದ್ದ. 4-5 ಮನೆಗಳನ್ನು ಬಾಡಿಗೆ ಪಡೆದು ಡ್ರಗ್ ಪೆಡ್ಲಿಂಗ್ ನಡೆಸ್ತಿದ್ದ ಈತ, ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಸಬ್ ಪೆಡ್ಲರ್ಸ್​ಗಳಿಗೆ ಡ್ರಗ್ ಮಾರಾಟ ಮಾಡ್ತಿದ್ದ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಹೆಬ್ಬಗೋಡಿ ಪೊಲೀಸರು, ಆರೋಪಿಯನ್ನು ಬಂಧಿಸಿ MDMA, ಎಲ್​ಎಸ್​ಡಿ, ವಿವಿಧ ಮಾದರಿಯ ಸಿಂಥೆಟಿಕ್ ಡ್ರಗ್ಸ್ ಸೇರಿ 14 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸೀಜ್​ ಮಾಡಿದ್ದಾರೆ. ಡ್ರಗ್ಸ್​ ಸೀಜ್ ಪ್ರಕರಣದಲ್ಲಿ ಇನ್ನುಳಿದವರಿಗಾಗಿ ಶೋಧ ಮುಂದುವರಿದಿದೆ.

ಇದನ್ನೂ ಓದಿ: “ನೀವು ವೇಶ್ಯಾವಾಟಿಕೆ ನಡೆಸುತ್ತೀರಾ?”; ಮನೆಯಿಂದ ಹೊರಗೆ ಎಳೆದು ತಂದು ಮಹಿಳೆ ಮೇಲೆ ಅಮಾನವೀಯ ಹಲ್ಲೆ!

ಇಬ್ಬರು ಗಾಂಜಾ ಪೆಡ್ಲರ್​ಗಳ ಬಂಧನ

ಯಲಹಂಕ ಉಪನಗರ ಪೊಲೀಸರು ಗಾಂಜಾ ಪೆಡ್ಲರ್​ಗಳಾದ ಕೇರಳದ ಆದೇಶ್(19), ಮೊಹಮ್ಮದ್​​​ ನಿಶಾದ್(24) ಎಂಬವರನ್ನು ಬಂಧಿಸಿದ್ದಾರೆ. ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಒಡಿಶಾದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ 10 ಲಕ್ಷ 50 ಸಾವಿರ ಮೌಲ್ಯದ 21 ಕೆಜಿ ತೂಕದ ಗಾಂಜಾ ಜಪ್ತಿ ಮಾಡಲಾಗಿದ್ದು, ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಆಟೋ ಡ್ರೈವಿಂಗ್​ ನೆಪದಲ್ಲಿ ಗಾಂಜಾ ಪೆಡ್ಲಿಂಗ್​

ಡೆಲಿವರಿ ಬಾಯ್, ಆಟೋ ಡ್ರೈವಿಂಗ್ ನೆಪದಲ್ಲಿ ಗಾಂಜಾ ಪೆಡ್ಲಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ರಾಹುಲ್​​ ಮತ್ತು ಪ್ರೇಮ್​​ ಬಂಧಿತರಾಗಿದ್ದು, ಇವರು ತಮಿಳುನಾಡಿನಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದರು. ರಾಹುಲ್ ಡೆಲಿವರಿ ಬಾಯ್ ಆಗಿದ್ರೆ, ಪ್ರೇಮ್ ಆಟೋ ಡ್ರೈವರ್ ಆಗಿದ್ದ. ಬಂಧಿತರಿಂದ 3 ಲಕ್ಷ ಮೌಲ್ಯದ 7 ಕೆಜಿ 500 ಗ್ರಾಂ ಗಾಂಜಾ ಸೀಜ್‌ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊರಬಿತ್ತು ಅಲ್ಲು ಅರ್ಜುನ್-ಅಟ್ಲಿ ಸಿನಿಮಾದ ಅಪ್​​ಡೇಟ್

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ (Allu Arjun) ಎದುರು ಹಲವಾರು ಅವಕಾಶಗಳು, ಆಯ್ಕೆಗಳು ಇದ್ದವು ಆದರೆ ಅಲ್ಲು ಅರ್ಜುನ್ ಅವರು ತಮಿಳಿನ ಅಟ್ಲಿ ಜೊತೆಗೆ ಸಿನಿಮಾ ಮಾಡಲು ಮುಂದಾದರು. ಆರಂಭದಲ್ಲಿ ಸ್ವತಃ ಅಲ್ಲು ಅರ್ಜುನ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ನಿರ್ಣಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಅಟ್ಲಿ, ಅಲ್ಲು ಅರ್ಜುನ್​​ಗಾಗಿ ಹಾಲಿವುಡ್ ಮಾದರಿ ಕತೆ ಹೆಣೆದಿದ್ದು, ಸಿನಿಮಾಕ್ಕಾಗಿ ಹಾಲಿವುಡ್​ನ ಹಲವು ಖ್ಯಾತನಾಮ ವಿಎಫ್​​ಎಕ್ಸ್ ಸಂಸ್ಥೆಗಳೊಟ್ಟಿಗೆ ಕೈಜೋಡಿಸಿದ್ದು, ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ-ನಟಿಯರನ್ನು ಸಿನಿಮಾ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸಿನಿಮಾದ ಅಪ್​​ಡೇಟ್ ಒಂದು ಹೊರಬಿದ್ದಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಸಿನಿಮಾದ ಟೈಟಲ್ ಪೋಸ್ಟರ್ ನಾಳೆ ಅಂದರೆ ಏಪ್ರಿಲ್ 08ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಸುದ್ದಿ ನೀಡುವ ಸಲುವಾಗಿ ಅಲ್ಲು ಅರ್ಜುನ್ ಸೇರಿದಂತೆ ಚಿತ್ರತಂಡ ಇಂದು (ಏಪ್ರಿಲ್ 07) ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಪೋಸ್ಟರ್​ನಲ್ಲಿ ರಾಕ್ಷಸನ ಬೃಹತ್ ಕೈ ಒಂದು ಕಾಣುತ್ತಿದೆ. ದೈಥ್ಯ ರಾಕ್ಷಸನ ಮುಂಗೈನ ಚಿತ್ರ ಇದಾಗಿದ್ದು, ಬೆರಳ ತುದಿಗಿರುವ ಚೂಪಾದ ದೊಡ್ಡ ಉಗುರುಗಳು ಭೀತಿ ಮೂಡಿಸುವಂತಿವೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸಿಗಲಿದೆ ಸರ್ಪ್ರೈಸ್? ಹೊಸ ಸಿನಿಮಾ ಟೈಟಲ್ ಮೇಲೆ ಕಣ್ಣು

ಅಟ್ಲಿ ಮತ್ತು ಅಲ್ಲು ಅರ್ಜುನ್ ಅವರ ಈ ಸಿನಿಮಾ ಹಾಲಿವುಡ್​ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಕತೆಯನ್ನು ಹೊಂದಿರಲಿದೆ. ಸಿನಿಮಾದ ಕತೆ ನಡೆಯುವುದು ಭೂಮಿಯಲ್ಲಿ ಅಲ್ಲವಂತೆ ಬೇರೆ ಯಾವುದೋ ಲೋಕದಲ್ಲಂತೆ. ಅಲ್ಲಿ ಅತ್ಯಾಧುನಿಕ ವಾಹನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಚಿತ್ರ, ವಿಚಿತ್ರ ಆಕಾರದ ದೈತ್ಯರು, ಪ್ರಾಣಿಗಳು ಇರಲಿವೆ. ಇವುಗಳ ನಡುವೆ ಮನುಷ್ಯರು ಅಸ್ಥಿತ್ವಕ್ಕಾಗಿ ಹೋರಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆಯಂತೆ.

ಸಿನಿಮಾಕ್ಕಾಗಿ ಅಟ್ಲಿ, ಹಾಲಿವುಡ್​ನ ಹಲವು ಪ್ರಸಿದ್ಧ ವಿಎಫ್​​ಎಕ್ಸ್ ಸಂಸ್ಥೆಗಳು, ಜನಪ್ರಿಯ ಸ್ಟುಡಿಯೋಗಳ ಜೊತೆಗೆ ಕೈಜೋಡಿಸಿದ್ದಾರೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಹ ಇದ್ದು, ಈ ಸಿನಿಮಾನಲ್ಲಿ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಸನ್ ನೆಟ್​​ವರ್ಕ್ಸ್​​ನ ಕಲಾನಿಧಿ ಮಾರನ್ ಅವರು ಬಂಡವಾಳ ಹೂಡಿದ್ದಾರೆ. ಇದು ಅವರ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐದು ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ

ನವದೆಹಲಿ, ಏಪ್ರಿಲ್ 7: ಎಲ್​ಪಿಜಿ ಬಿಕ್ಕಟ್ಟಿನಿಂದ ಬಹಳ ಕಷ್ಟ ಎದುರಿಸುತ್ತಿರುವ ವರ್ಗಗಳಲ್ಲಿ ವಲಸಿಗ ಕಾರ್ಮಿಕರಿದ್ದಾರೆ (Migrant workers). ಇವರಿಗೆ ನಿರಾಳ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಣ್ಣ ಎಲ್​ಪಿಜಿ ಸಿಲಿಂಡರ್​ಗಳ ಪೂರೈಕೆಯನ್ನು ಹೆಚ್ಚಿಸಿದೆ. ವರದಿಗಳ ಪ್ರಕಾರ ಸರ್ಕಾರವು ಎಲ್ಲಾ ರಾಜ್ಯಗಳಿಗೂ 5 ಕಿಲೋ ತೂಕದ ಫ್ರೀ ಟ್ರೇಡ್ ಎಲ್​ಪಿಜಿ ಸಿಲಿಂಡರ್​ಗಳ (5 kg free trade LPG cylinder) ಹಂಚಿಕೆಯನ್ನು ಎರಡು ಪಟ್ಟು ಹೆಚ್ಚಿಸಿದೆ. ಇದರಿಂದ ಈ ಸಣ್ಣ ಗ್ಯಾಸ್ ಸಿಲಿಂಡರ್ ಲಭ್ಯತೆ ದ್ವಿಗುಣಗೊಂಡಿದೆ.

ವಲಸಿಗ ಕಾರ್ಮಿಕರಿಗೆ ವಿತರಿಸಲು ಲಭ್ಯ ಇರುವ ನಿತ್ಯದ ಐದು ಕಿಲೋ ಮುಕ್ತ ವ್ಯಾಪಾರ ಎಲ್​ಪಿಜಿ ಸಿಲಿಂಡರ್​ಗಳನ್ನು ಎರಡು ಪಟ್ಟು ಹೆಚ್ಚಿಸಲಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸೋಮವಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್​ಗೆ ಯಾವುದು ಉತ್ತಮ?

ಮಾರ್ಚ್ 2 ಮತ್ತು 3ರಂದು ನಿತ್ಯ ಸರಾಸರಿ ವಿತರಿಸಲಾಗುತ್ತಿದ್ದ ಸಿಲಿಂಡರ್​ಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಹಿಂದಿನ ಆದೇಶದಲ್ಲಿ 5 ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆಯನ್ನು ಶೇ. 20ಕ್ಕೆ ಮಿತಿಗೊಳಿಸಲಾಗಿತ್ತು. ಈಗ ಹೊಸ ಆದೇಶದಲ್ಲಿ ಇದನ್ನು ಹೆಚ್ಚಿಸಲಾಗಿದೆ.

ಏನಿದು ಫ್ರೀ ಟ್ರೇಡ್ ಎಲ್​ಪಿಜಿ ಸಿಲಿಂಡರ್?

ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ವಲಸೆ ಹೋಗಿರುವ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳು ಇಲ್ಲದ, ಹಾಗೂ ಕಡಿಮೆ ಗ್ಯಾಸ್ ಅವಶ್ಯಕತೆ ಇರುವ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಮೊದಲಾದವರಿಗೆ ಗ್ಯಾಸ್ ಪಡೆಯಲು ಅನುಕೂಲವಾಗಲೆಂದು ಸರ್ಕಾರ ಇತ್ತೀಚೆಗೆ ಸಣ್ಣ ಸಣ್ಣ ಎಲ್​ಪಿಜಿ ಸಿಲಿಂಡರ್​ಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ

ಆಧಾರ್ ಇತ್ಯಾದಿ ದಾಖಲೆ ನೀಡಿ ಈ ಸಿಲಿಂಡರ್​ಗಳನ್ನು ಪಡೆಯಬಹುದು. ಸೆಕ್ಯೂರಿಟಿ ಡೆಪಾಸಿಟ್ ಇಡುವುದಾಗಲೀ, ಡಿಸ್ಟ್ರಿಬ್ಯೂಟರ್ ಏಜೆನ್ಸಿಯಲ್ಲಿ ನೊಂದಾಯಿಸುವುದಾಗಲೀ ಅವಶ್ಯಕತೆ ಇರುವುದಿಲ್ಲ. 2 ಕಿಲೋ, 5 ಕಿಲೋ ಮತ್ತು 10 ಕಿಲೋ ತೂಕದ ಫೈಬರ್ ಕಾಂಪೊಸಿಟ್ ಸಿಲಿಂಡರ್​ಗಳನ್ನು ವಿತರಿಸುತ್ತಿದೆ.

ಸದ್ಯ ಐದು ಕಿಲೋ ಎಲ್​ಪಿಜಿ ಸಿಲಿಂಡರ್​ಗಳ ಹಂಚಿಕೆಯನ್ನು ಎರಡು ಪಟ್ಟು ಹೆಚ್ಚಿಸುತ್ತಿರುವುದು ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ಮಾತ್ರವೇ. ಎಲ್​ಪಿಜಿ ಸಿಗದ ಹಿನ್ನೆಲೆಯಲ್ಲಿ ದೇಶಾದ್ಯಂತ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿರುವ ಟ್ರೆಂಡ್ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿರಬಹುದು. ಈ ಹೆಚ್ಚುವರಿ ಸಿಲಿಂಡರ್ ಹಂಚಿಕೆಯು ವಲಸೆ ಕಾರ್ಮಿಕರಿಗೆ ಮಾತ್ರವೇ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link