Category Archives: Blog

Your blog category

ODI World Cup 2027: ಈ ದಿನದಿಂದ ಆರಂಭವಾಗಲಿದೆ 2027 ರ ಏಕದಿನ ವಿಶ್ವಕಪ್‌; ವೇಳಾಪಟ್ಟಿ ಬಹಿರಂಗ – Kannada News

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಈಗಾಗಲೇ ಎಲ್ಲಾ ತಂಡಗಳು ತಮ್ಮ ತಯಾರಿಯನ್ನು ಶುರು ಮಾಡಿವೆ. ಅದರ ಭಾಗವಾಗಿ ಕಳೆದ ಬಾರಿಯ ರನ್ನರ್ ಅಪ್ ಟೀಂ ಇಂಡಿಯಾ ಕೂಡ ವಿವಿಧ ತಂಡಗಳ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಮುಂಬರುವ ಏಕದಿನ ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸುತ್ತಿವೆ ಎಂಬ ಸುದ್ದಿ ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೆಗಾ ಟೂರ್ನಿ ಯಾವಾಗ ಆರಂಭವಾಗಿ ಎಲ್ಲಿಯವರೆಗೆ ನಡೆಯಲಿದೆ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿದೆ.

ESPNcricinfo ವರದಿಯ ಪ್ರಕಾರ, ಏಕದಿನ ವಿಶ್ವಕಪ್ ಅಕ್ಟೋಬರ್ 4, 2027 ರಂದು ಪ್ರಾರಂಭವಾಗಲಿದ್ದು, ನವೆಂಬರ್ 21, 2027 ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 54 ಪಂದ್ಯಗಳು ನಡೆಯಲಿದ್ದು, ಈ ವಿಶ್ವ ಸಮರ ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆಯಲಿದೆ. ಈ ಟೂರ್ನಿಯಲ್ಲಿ ವಿಶ್ವದ ಅಗ್ರ 14 ತಂಡಗಳು ಟ್ರೋಫಿ ಗೆಲುವಿಗಾಗಿ ಪರಸ್ಪರ ಸೆಣಸಾಡಲಿವೆ. ಮೇ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ವಿಶ್ವಕಪ್‌ ವೇಳಾಪಟ್ಟಿಯ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ. ಆದರೆ ಜುಲೈನಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆಯುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ.

2027 ರ ಏಕದಿನ ವಿಶ್ವಕಪ್ ವೇಳಾಪಟ್ಟಿ

2027 ರ ವಿಶ್ವಕಪ್ ಹಿಂದಿನ ಆವೃತ್ತಿಯಾದ 2023 ರ ಆವೃತ್ತಿಗಿಂತ ಗಮನಾರ್ಹವಾಗಿ ಭಿನ್ನವಾಗಿರುತ್ತದೆ. ಅಂದರೆ 2003 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಮಾದರಿಯಲ್ಲಿ ಈ ಬಾರಿಯ ವಿಶ್ವಕಪ್ ನಡೆಸಲು ತೀರ್ಮಾನಿಸಲಾಗಿದೆ. ಆ ಪ್ರಕಾರ, ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ 14 ತಂಡಗಳನ್ನು ತಲಾ ಏಳು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ನಂತರ ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಸುತ್ತಿಗೆ ಮುನ್ನಡೆಯುತ್ತವೆ. ನಂತರ ಸೂಪರ್ ಸಿಕ್ಸ್‌ನ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿವೆ. ಈ ಸುತ್ತಿನಲ್ಲಿ ಗೆದ್ದ ಎರಡು ತಂಡಗಳು ನವೆಂಬರ್ 21 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.

ಯಾವ ದೇಶದಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ?

ಮೇಲೆ ಹೇಳಿದಂತೆ ಈ ಪಂದ್ಯಾವಳಿಯು ಮೂರು ದೇಶಗಳಲ್ಲಿ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಪ್ರಮುಖ ಆತಿಥೇಯವಾಗಿದೆ. ವರದಿಗಳ ಪ್ರಕಾರ, ದಕ್ಷಿಣ ಆಫ್ರಿಕಾದ ಎಂಟು ಕ್ರೀಡಾಂಗಣಗಳು ಪಂದ್ಯಾವಳಿಯ ಹೆಚ್ಚಿನ ಪಂದ್ಯಗಳು ಮತ್ತು ನಾಕೌಟ್ ಟೈಗಳನ್ನು ಆಯೋಜಿಸುತ್ತವೆ. ಇವುಗಳಲ್ಲಿ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣ, ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣ ಮತ್ತು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರೀಡಾಂಗಣ ಸೇರಿವೆ. ಜಿಂಬಾಬ್ವೆಯ ಎರಡು ನಗರಗಳಾದ ಹರಾರೆ ಮತ್ತು ಬುಲವಾಯೊದಲ್ಲಿ ಪಂದ್ಯಗಳು ನಡೆಯಲಿವರ. ನಮೀಬಿಯಾದ ಎರಡು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

ಯಾವ 14 ತಂಡಗಳಿಗೆ ಅವಕಾಶ ಸಿಗುತ್ತದೆ?

ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ 2027 ರ ಏಕದಿನ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದಿವೆ. ಇದರ ಜೊತೆಗೆ, ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಎಂಟು ತಂಡಗಳು ಸಹ ನೇರವಾಗಿ ಅರ್ಹತೆ ಪಡೆಯುತ್ತವೆ. ಆತಿಥೇಯ ನಮೀಬಿಯಾ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅರ್ಹತಾ ಸುತ್ತನ್ನು ಆಡಬೇಕಾಗುತ್ತದೆ. ಉಳಿದ ಮೂರರಿಂದ ನಾಲ್ಕು ಸ್ಥಾನಗಳಿಗೆ ಅರ್ಹತಾ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳು ಆಯ್ಕೆಯಾಗಲಿವೆ.

Source link

ಅಡ್ಡ ಬಂದ ನಾಗರ ಹಾವು: ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್ – Kannada News

ಚಿಕ್ಕಮಗಳೂರು, ಜೂ.11: ರಸ್ತೆಗೆ ಏಕಾಏಕಿ ಅಡ್ಡ ಬಂದ ನಾಗರ ಹಾವನ್ನು ತಪ್ಪಿಸಲು ಹೋದ ಬೈಕ್ ಸವಾರನ ಎಡವಟ್ಟಿನಿಂದಾಗಿ, ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದಿರುವ ವಿಲಕ್ಷಣ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಭಾರಿ ಪ್ರಾಣಾಪಾಯವೊಂದು ಕೂದಲೆಳೆತದಲ್ಲಿ ತಪ್ಪಿದೆ. ಬೈಕ್ ಸವಾರರಿಬ್ಬರು ನಾರಾಯಣಪುರ ಗೇಟ್ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಬೃಹತ್ ಗಾತ್ರದ ನಾಗರ ಹಾವೊಂದು ಏಕಾಏಕಿ ರಸ್ತೆಗೆ ಅಡ್ಡ ಬಂದಿದೆ. ಹಾವನ್ನು ಕಂಡು ಆತಂಕಗೊಂಡ ಬೈಕ್ ಚಾಲಕ ತಕ್ಷಣವೇ ರಸ್ತೆ ಮಧ್ಯದಲ್ಲೇ ಜೋರಾಗಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ಅದೇ ಮಾರ್ಗದಲ್ಲಿ ಬೈಕ್‌ನ ಹಿಂಬದಿಯಲ್ಲೇ ಬರುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕನಿಗೆ ತಕ್ಷಣವೇ ಬ್ರೇಕ್ ಹಾಕಲು ಸಾಧ್ಯವಾಗದೆ ಮುಂದಿದ್ದ ಬೈಕ್‌ಗೆ ಜೋರಾಗಿ ಗುದ್ದಿದೆ. ಬೈಕ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್ ಚಾಲಕ ವಾಹನವನ್ನು ನಿಯಂತ್ರಿಸಲು ಒತ್ತಡದಲ್ಲಿ ಬ್ರೇಕ್ ಹಾಕಿದ್ದಾನೆ. ಆದರೆ, ವೇಗವಾಗಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ರಸ್ತೆ ಬದಿಯಲ್ಲಿದ್ದ ತೋಟದ ಬೇಲಿಯನ್ನು ಮುರಿದುಕೊಂಡು ಒಳಗಡೆ ನುಗ್ಗಿದೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಹಲವಾರು ಪ್ರಯಾಣಿಕರಿದ್ದರೂ, ಚಾಲಕನ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ ತೋಟಕ್ಕೆ ನುಗ್ಗುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರು ಆತಂಕದಿಂದ ಕಿರುಚಾಡಿದ್ದಾರೆ. ಈ ಭೀಕರ ಅಪಘಾತದಲ್ಲಿ ಬೈಕಿನಲ್ಲಿದ್ದ ಇಬ್ಬರು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಜ್ಜಂಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ

ಸಿನಿಮಾಗಳಲ್ಲಿ (Cinema) ಆಕ್ಷನ್ ಸಾಮಾನ್ಯ. ಹೀರೋ ನಿಂತು ಸ್ಟೈಲ್ ಆಗಿ ಕೈ ಬೀಸಿದರೆ ವಿಲನ್​​ಗಳು ಮಾರು ದೂರ ಹೋಗಿ ಬೀಳುತ್ತಾರೆ, ಅಭಿಮಾನಿಗಳು ಚಪ್ಪಾಳೆ ಹೊಡೆಯುತ್ತಾರೆ. ಇಲ್ಲಿ ಹೀರೋಗೆ ಹೆಚ್ಚು ಕಷ್ಟವಿಲ್ಲ, ಅವನ ಶ್ರಮವೂ ಏನೂ ಇಲ್ಲ. ಆದರೆ ಹಾಗೆ ಹಾರಿ ಬೀಳುವ ಫೈಟರ್​​ಗಳದ್ದು ಎಷ್ಟು ಕಷ್ಟದ ಮತ್ತು ಎಷ್ಟು ರಿಸ್ಕಿ ಕೆಲಸ ಗೊತ್ತೆ? ಇಲ್ಲೊಂದು ವಿಡಿಯೋ ಇದೆ ನೋಡಿ, ನಟಿಯೊಬ್ಬರು ಹಾರಿ ಬೀಳುವ ದೃಶ್ಯವಿದು, ಸಾಕಷ್ಟು ಸೆಕ್ಯುರಿಟಿ ತೆಗೆದುಕೊಳ್ಳಲಾಗಿದೆ, ಆದರೂ ಹಾಗೆ ಹಾರಿ ಬೀಳುವುದು ಎಷ್ಟು ಅಪಾಯಕಾರಿ ಎಂಬುದು ಈ ವಿಡಿಯೋನಲ್ಲಿ ಕಾಣುತ್ತದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಭಾರತ U19 ತಂಡಕ್ಕೆ ಆಯ್ಕೆಯಾದ ರಾಹುಲ್ ದ್ರಾವಿಡ್ ಪುತ್ರ – Kannada News

ಈ ವರ್ಷದ ಆರಂಭದಲ್ಲಿ ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿ ಭಾರತ ಅಂಡರ್-19 ತಂಡವು (India U19 Squad 2026) ಅಂಡರ್-19 ವಿಶ್ವಕಪ್ ಗೆದ್ದಿತು. ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ ಮತ್ತು ಅಭಿಗ್ಯಾನ್ ಕುಂಡು ಅವರಂತಹ ಯುವ ಪ್ರತಿಭೆಗಳು ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದ್ದವು. ಇದೀಗ ಭಾರತ ಅಂಡರ್ 19 ತಂಡ ಶ್ರೀಲಂಕಾ ಪ್ರವಾಸಕ್ಕೆ ಸಿದ್ಧವಾಗಿದೆ. ಈ ಪ್ರವಾಸದಲ್ಲಿ ಭಾರತ ಯುವ ಪಡೆ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಪ್ರವಾಸಕ್ಕೆ ಭಾರತ ಅಂಡರ್ 19 ತಂಡವನ್ನು ಸಹ ಬಿಸಿಸಿಐ ಪ್ರಕಟಿಸಿದೆ. ಆದರೆ ಈ ಬಾರಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂಡದಲ್ಲಿ ವೈಭವ್ ಆಗಲಿ ಆಯುಷ್ ಆಗಲಿ ಇಲ್ಲ. ಆದಾಗ್ಯೂ ತಂಡದಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ( Anvay Dravid) ಆಯ್ಕೆಯಾಗಿರುವುದು ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಎರಡು ಸರಣಿಗಳಿಗೆ ತಂಡ ಪ್ರಕಟ

ಬಿಸಿಸಿಐ ಜೂನಿಯರ್ ಕ್ರಿಕೆಟ್ ಸಮಿತಿಯು ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ 19 ವರ್ಷದೊಳಗಿನವರ ಭಾರತ ಪುರುಷರ ತಂಡದ ತಂಡವನ್ನು ಆಯ್ಕೆ ಮಾಡಿದೆ. ಮೇಲೆ ಹೇಳಿದಂತೆ ಈ ಪ್ರವಾಸದಲ್ಲಿ ಭಾರತ ತಂಡವು ಮೂರು ಏಕದಿನ ಪಂದ್ಯಗಳು ಮತ್ತು ಎರಡು ರೆಡ್-ಬಾಲ್ ಪಂದ್ಯಗಳನ್ನು ಆಡಲಿದೆ. ಈ ತಂಡದ ನಾಯಕತ್ವವನ್ನು ಯಶವರ್ಧನ್ ಸಿಂಗ್ ಚೌಹಾಣ್ ಅವರಿಗೆ ನೀಡಲಾಗಿದೆ. ಯಶ್ ವೈಟ್-ಬಾಲ್ ಮತ್ತು ರೆಡ್-ಬಾಲ್ ತಂಡಗಳೆರಡಕ್ಕೂ ನಾಯಕರಾಗಿರುತ್ತಾರೆ. ಲಕ್ಷ್ಯ ರಾಯ್‌ಚಂದಾನಿ ಎರಡೂ ತಂಡಗಳಿಗೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಪ್ರವಾಸಕ್ಕಾಗಿ ಅನ್ವಯ್ ದ್ರಾವಿಡ್ ಅವರನ್ನು ಏಕದಿನ ತಂಡದಲ್ಲಿ ಮಾತ್ರ ಆಯ್ಕೆ ಮಾಡಲಾಗಿದ್ದು, ರೆಡ್-ಬಾಲ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ.

ಏಕದಿನ ಸರಣಿಗೆ ಭಾರತ ತಂಡ: ಸಾಗರ್ ವಿರ್ಕ್, ಲಕ್ಷ ರಾಯಚಂದನಿ (ಉಪನಾಯಕ), ಯಶ್ಬರ್ಧನ್ ಸಿಂಗ್ ಚೌಹಾಣ್ (ನಾಯಕ), ವಿನೀತ್ ವಿ ಕೆ, ಅರ್ಜುನ್ ರಜಪೂತ್, ಕುಶಾಗ್ರಾ ಓಜಾ, ರಜತ್ ಬಘೇಲ್ (ವಿಕೆಟ್ ಕೀಪರ್), ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಅನ್ಮೋಲ್ಜೀತ್ ಸಿಂಗ್, ವುಟ್ಕುರಿ ಯಶ್ವೀರ್ ಗೌಡ್, ರೋಹಿತ್ ಅನಿಲ್ ಯಾದವ್, ಶವಿನ್ ವಿ, ಕಾವ್ಯಾ ಪರೇಶ್ ಪಟೇಲ್, ಮೋಹಿತ್ ಉಲ್ವಾ, ಇಶಾನ್ ಸೂದ್

ರೆಡ್ ಬಾಲ್ ಸರಣಿಗೆ ಭಾರತ ತಂಡ: ಸಾಗರ್ ವಿರ್ಕ್, ಲಕ್ಷ ರಾಯಚಂದನಿ (ಉಪನಾಯಕ), ಯಶ್ಬರ್ಧನ್ ಸಿಂಗ್ ಚೌಹಾಣ್ (ನಾಯಕ), ಪಟೇಲ್ ಕುಶ್, ಮನಲ್ ಚೌಹಾಣ್, ಕುಶಾಗ್ರಾ ಓಜಾ, ಮಾನವ್ ಕೃಷ್ಣ (ವಿಕೆಟ್ ಕೀಪರ್), ಆರ್ಯನ್ ಸಂದೇಶ್ ಸಕ್ಪಾಲ್ (ವಿಕೆಟ್ ಕೀಪರ್), ಹೇಮಚುದೇಶನ್ ಜೆ, ಬಿ ಕೆ ಕಿಶೋರ್, ರೋಹಿತ್ ಅನಿಲ್ ಯಾದವ್, ಕಾವ್ಯಾ ಪರೇಶ್ ಪಟೇಲ್, ಪ್ರಿಯಾಂಶು ಸಿಂಗ್, ಪ್ರಣವ್ ರಾಘವೇಂದ್ರ, ಚಿಗುರುಪತಿ ವೆಂಕಟ

ಶ್ರೀಲಂಕಾ ಪ್ರವಾಸದ ಸಂಪೂರ್ಣ ವೇಳಾಪಟ್ಟಿ

  • ಮೊದಲನೇ ಏಕದಿನ ಪಂದ್ಯ: ಜುಲೈ 4, 2026, ಹಂಬಂಟೋಟ, ಬೆಳಿಗ್ಗೆ 10 ಗಂಟೆ
  • ಎರಡನೇ ಏಕದಿನ ಪಂದ್ಯ: ಜುಲೈ 6, 2026, ಹಂಬಂಟೋಟ, ಬೆಳಿಗ್ಗೆ 10 ಗಂಟೆ
  • ಮೂರನೇ ಏಕದಿನ ಪಂದ್ಯ: ಜುಲೈ 9, 2026, ಹಂಬಂಟೋಟ, ಬೆಳಿಗ್ಗೆ 10 ಗಂಟೆ

ರೆಡ್ ಬಾಲ್ ಸರಣಿ

  • ಮೊದಲ ಪಂದ್ಯ: ಜುಲೈ 13 ರಿಂದ 16, ಗಾಲೆ, ಬೆಳಿಗ್ಗೆ 10 ಗಂಟೆ
  • ಎರಡನೇ ಪಂದ್ಯ: ಜುಲೈ 20 ರಿಂದ 23, ಕೊಲಂಬೊ, ಬೆಳಿಗ್ಗೆ 10 ಗಂಟೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಗಾರು ಬಿತ್ತನೆಗೆ ಮುನ್ನ ರೈತರಿಗೆ ಖುಷಿ ಸುದ್ದಿ, ಯೂರಿಯಾ ಬೆಲೆ ಅರ್ಧಕರ್ಧ ಕುಸಿತ – Kannada News

ಯೂರಿಯಾ ಎರಚುತ್ತಿರುವ ರೈತImage Credit source: Getty Images

ನವದೆಹಲಿ, ಜೂನ್ 11: ಭಾರತದ ರೈತರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ದೊಡ್ಡ ನಿರಾಳತೆ ನೀಡುವ ಸುದ್ದಿಯೊಂದರ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರದ (Urea fertilizer) ಆಮದು ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ರಸಗೊಬ್ಬರ ಸಂಸ್ಥೆ (‘NFL’ – ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್) ಇತ್ತೀಚೆಗೆ ಆಯೋಜಿಸಿದ್ದ ಜಾಗತಿಕ ಟೆಂಡರ್‌ನಲ್ಲಿ ಯೂರಿಯಾ ಬೆಲೆ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ. ಎನ್‌ಎಫ್‌ಎಲ್ ನಡೆಸಿದ 1.7 ಮಿಲಿಯನ್ ಟನ್ ಯೂರಿಯಾ ಆಮದು ಟೆಂಡರ್‌ನಲ್ಲಿ, ಪ್ರತಿ ಟನ್‌ಗೆ $444.9 ರಿಂದ $449.3 ರಷ್ಟು ಕಡಿಮೆ ಬೆಲೆಯ ಬಿಡ್‌ಗಳು (Landed Price) ಬಂದಿವೆ. ಇದಕ್ಕೂ ಮುನ್ನ ‘ಇಂಡಿಯನ್ ಪೊಟ್ಯಾಶ್ ಲಿಮಿಟೆಡ್’ (IPL) ನಡೆಸಿದ್ದ ಟೆಂಡರ್‌ನಲ್ಲಿ ಪ್ರತಿ ಟನ್ ಯೂರಿಯಾ ಬೆಲೆ $935 ರಿಂದ $959 ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಈಗ ಯೂರಿಯಾ ಬೆಲೆ ಅರ್ಧಕ್ಕಿಂತಲೂ ಹೆಚ್ಚು ಕುಸಿದಿದೆ.

ಯೂರಿಯಾ ಬೆಲೆ ಇಳಿಕೆಗೆ ಪ್ರಮುಖ ಕಾರಣವೇನು?

ಮಾರ್ಚ್ ತಿಂಗಳಲ್ಲಿ ಚೀನಾ ದೇಶವು ಯೂರಿಯಾ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಆದರೆ ಈಗ ಚೀನಾ ತನ್ನ ರಫ್ತು ನಿರ್ಬಂಧಗಳನ್ನು ಭಾಗಶಃ ಸಡಿಲಗೊಳಿಸಿ, ಹೊಸ ರಫ್ತು ಕೋಟಾಗಳನ್ನು ಬಿಡುಗಡೆ ಮಾಡಿದೆ. ಜಾಗತಿಕ ಮಾರುಕಟ್ಟೆಗೆ ಚೀನಾದ ಯೂರಿಯಾ ಪೂರೈಕೆ ಆರಂಭವಾಗುತ್ತಿದ್ದಂತೆ ಬೆಲೆಗಳು ತಣ್ಣಗಾಗಿವೆ.

ಕಳೆದ ಹಣಕಾಸು ವರ್ಷದಲ್ಲಿ (2025-26) ಭಾರತವು ದಾಖಲೆಯ 11.17 ಮಿಲಿಯನ್ ಟನ್ ಯೂರಿಯಾವನ್ನು ಆಮದು ಮಾಡಿಕೊಂಡಿತ್ತು. ಇದರಲ್ಲಿ ಸಿಂಹಪಾಲು (2.23 ಮಿಲಿಯನ್ ಟನ್) ಚೀನಾದಿಂದಲೇ ಬಂದಿತ್ತು.

ಇದನ್ನೂ ಓದಿ: ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್

ಯೂರಿಯಾ ಬೆಲೆ ಕುಸಿತದಿಂದ ರೈತರಿಗೆ ಮತ್ತು ಸರ್ಕಾರಕ್ಕೆ ಆಗುವ ಲಾಭಗಳೇನು?

ಖಾರಿಫ್ ಹಂಗಾಮಿಗೆ ಸಕಾಲಿಕ ನೆರವು: ಪ್ರಸ್ತುತ ದೇಶದಲ್ಲಿ ಮುಂಗಾರು (ಖಾರಿಫ್) ಬಿತ್ತನೆ ಕಾರ್ಯಗಳು ಆರಂಭವಾಗುತ್ತಿವೆ. ಜುಲೈ ಅಂತ್ಯದ ವೇಳೆಗೆ ಈ ಅಗ್ಗದ ಯೂರಿಯಾ ಭಾರತದ ಬಂದರುಗಳನ್ನು ತಲುಪಲಿದ್ದು, ಆಗಸ್ಟ್‌ನಲ್ಲಿ ರೈತರ ಕೈಸೇರಲಿದೆ.

ಗೊಬ್ಬರ ಸಬ್ಸಿಡಿ ಹೊರೆ ಇಳಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಮತ್ತು ರಸಗೊಬ್ಬರ ಬೆಲೆಗಳು ಏರಿಕೆಯಾಗಿದ್ದರಿಂದ, ಈ ವರ್ಷ ಭಾರತ ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಬರೋಬ್ಬರಿ ₹3.40 ಲಕ್ಷ ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿತ್ತು (ಬಜೆಟ್‌ನಲ್ಲಿ ನಿಗದಿಪಡಿಸಿದ್ದು ₹1.70 ಲಕ್ಷ ಕೋಟಿ ಮಾತ್ರ). ಈಗ ಆಮದು ಬೆಲೆ ಇಳಿಕೆಯಾಗಿರುವುದರಿಂದ ಸರ್ಕಾರದ ಸಬ್ಸಿಡಿ ಹೊರೆ ಕೊಂಚ ತಗ್ಗಲಿದೆ.

ಇದನ್ನೂ ಓದಿ: ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

ಒಟ್ಟಾರೆ, ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದ್ದರಿಂದ ಗೊಬ್ಬರದ ಬೆಲೆ ತೀವ್ರವಾಗಿ ಏರಿತ್ತು. ಆದರೆ ಈಗ ಚೀನಾ ಪೂರೈಕೆಯನ್ನು ಆರಂಭಿಸಿರುವುದರಿಂದ ಜಾಗತಿಕವಾಗಿ ಯೂರಿಯಾ ಬೆಲೆ ಕುಸಿದಿದ್ದು, ಇದು ಮುಂಗಾರು ಹಂಗಾಮಿನಲ್ಲಿ ಭಾರತದ ಕೃಷಿ ಕ್ಷೇತ್ರಕ್ಕೆ ದೊಡ್ಡ ಸಮಾಧಾನ ತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರ್ನಾಟಕದಲ್ಲಿ 5 ದಿನ ವ್ಯಾಪಕ ಮಳೆ, ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ – Kannada News

ಬೆಂಗಳೂರು, (ಜುನ್ 11): ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಅಂದರೆ ಇಂದಿನಿಂದ ಜೂನ್ 15ರವರೆಗೆ ವ್ಯಾಪಕ ಮಳೆಯಾಗುವ (Monsoon Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ (South) ಜಾಗೂ ಉತ್ತರ ಒಳನಾಡ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ  ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಪ್ರಮುಖ ಜಿಲ್ಲೆಗಳ ಹವಾಮಾನ ಮುನ್ಸೂಚನೆ

ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಕರ್ನಾಟಕ: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಡಲ ತೀರದಲ್ಲಿ ಗಂಟೆಗೆ 30-40 ಕಿ.ಮೀ ಗಾಳಿಯ ವೇಗ ಇರಲಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳ ಲ್ಲಿ ಭಾರಿ ಮಳೆ ಹಾಗೂ ನಿರಂತರ ಗಾಳಿ (ಗಂಟೆಗೆ 30-40 ಕಿ.ಮೀ) ಬೀಸುವ ಸಾಧ್ಯತೆಯಿದೆ. ಇನ್ನು ಬಳ್ಳಾರಿ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆ ಹಾಗೂ ನಿರಂತರ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಗಂಟೆಗೆ 30ರಿಂದ40 ಕಿ.ಮೀ. ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ಸ್ಮಾರ್ಟ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಮಳೆಗಾಲದಲ್ಲಿ ಬಟ್ಟೆಗಳನ್ನು ಸುಲಭವಾಗಿ ಒಣಗಿಸಬುದು – Kannada News

ಮಳೆಗಾಲದಲ್ಲಿ (rainy season) ಒಗೆದ ಬಟ್ಟೆಗಳನ್ನು ಒಣಗಿಸುವುದು ತುಂಬಾ ಕಷ್ಟಕರವಾದ ಕೆಲಸ. ಈ ಋತುವಿನಲ್ಲಿ ಸರಿಯಾಗಿ ಸೂರ್ಯನ ಬೆಳಕು ಬೀಳದಿರುವ ಕಾರಣ, ವಾತಾರವರಣದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಒಗೆದ ಬಟ್ಟೆಗಳು ಬೇಗನೆ ಒಣಗುವುದಿಲ್ಲ. ಸರಿಯಾಗಿ ಒಣಗದಿದ್ದರೆ ಬಟ್ಟೆಗಳಿಂದ ಒಂದು ರೀತಿಯ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ. ಹಾಗಾಗಿ ಮಳೆಗಾಲ ಬಂತೆಂದರೆ ಸಾಕು ಹೆಚ್ಚಿನವರಿಗೆ ಬಟ್ಟೆ ಒಣಗಿಸುವುದು, ಬಟ್ಟೆಗಳು ವಾಸನೆ ಬಾರದಂತೆ ನೋಡಿಕೊಳ್ಳುವುದೇ ದೊಡ್ಡ ತಲೆ ಬಿಸಿಯಾಗಿರುತ್ತದೆ. ಹೀಗಿರುವಾಗ ಈ ಕೆಲವೊಂದು ಟ್ರಿಕ್ಸ್‌ಗಳನ್ನು ಪಾಲಿಸುವ ಮೂಲಕ ಒಗೆದ ಬಟ್ಟೆಗಳನ್ನು ಬಲು ಸುಲಭವಾಗಿ ಒಣಗಿಸಬಹುದು.

ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಈ ರೀತಿಯಾಗಿ ಒಣಗಿಸಿ:

ಬಟ್ಟೆಗಳನ್ನು ಚೆನ್ನಾಗಿ ಹಿಂಡಿ:  ಒಗೆದ ಬಟ್ಟೆಗಳಿಂದ ನೀರನ್ನು ಹಿಂಡಿ ತೆಗೆಯುವುದು ತುಂಬಾನೇ ಮುಖ್ಯ. ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆಯುತ್ತಿದ್ದೀರಿ ಎಂದಾದ್ರೆ ಎಕ್ಸ್‌ಟ್ರಾ ಸ್ಪಿನ್ ಅಥವಾ ಡ್ರೈಯರ್ ಮೋಡ್ ಅನ್ನು ಬಳಸಿಕೊಂಡು ಬಟ್ಟೆಗಳನ್ನು ಡ್ರೈ ಮಾಡಿ ನಂತರ ಒಣಗಲು ಹಾಕಿ. ವಾಷಿಂಗ್‌ ಮೆಷಿನ್‌ ಇಲ್ಲ ಎಂದಾದ್ರೆ ಬಟ್ಟೆಗಳನ್ನು ಚೆನ್ನಾಗಿ ಹಿಂಡಿ ಪೈಪ್‌ನಲ್ಲಿ ಪೈಪ್‌ನಲ್ಲಿ ನೇತುಹಾಕಿ. ಬಟ್ಟೆಯಿಂದ ನೀರು ಸಂಪೂರ್ಣವಾಗಿ ಬರಿದಾಗಲು ಬಿಡಿ ಮತ್ತು ನಂತರ ಅವುಗಳನ್ನು ಒಣಗಲು ಹಾಕಿ.

ಬಟ್ಟೆಗಳನ್ನು ದೂರ ದೂರ ಒಣಹಾಕಿ: ಇರಿಸಿ: ಬಟ್ಟೆಗಳನ್ನು ಒಣಗಿಸುವಾಗ, ಅವುಗಳನ್ನು ತುಂಬಾ ಹತ್ತಿರದಲ್ಲಿ ಜೋಡಿಸುವ ಬದಲು, ಅವುಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರುವಂತೆ ಹರಡಿ. ಅವುಗಳನ್ನು ತುಂಬಾ ಹತ್ತಿರದಲ್ಲಿ ಒಣ ಹಾಕಿದರೆ, ಬಟ್ಟೆಗಳು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಫ್ಯಾನ್ ಬಳಸಿ: ಮಳೆಗಾಲದಲ್ಲಿ ಎಲ್ಲರೂ ಸಾಮಾನ್ಯವಾಗಿ ಮನೆಯೊಳಗೆ ಬಟ್ಟೆಗಳನ್ನು ಒಣಗಿಸುತ್ತಾರೆ. ಹೀಗಿರುವಾಗ ಕೋಣೆಯಲ್ಲಿ ಟೇಬಲ್ ಫ್ಯಾನ್ ಅಥವಾ ಸೀಲಿಂಗ್ ಫ್ಯಾನ್ ಅನ್ನು ಆನ್ ಮಾಡಿ. ಫ್ಯಾನ್ ಗಾಳಿಯು ಬಟ್ಟೆಗಳಿಂದ ತೇವಾಂಶವನ್ನು ಸುಲಭವಾಗಿ ಆವಿಯಾಗಿಸಲು ಸಹಾಯ ಮಾಡುತ್ತದೆ.  ಮತ್ತು ಬಟ್ಟೆಗಳು ವೇಗವಾಗಿ ಒಣಗುತ್ತವೆ.

ಇಸ್ತ್ರಿ ಮಾಡಿ:  ನೀವು ಒದ್ದೆಯಾದ ಬಟ್ಟೆಯ ಮೇಲೆ ತೆಳುವಾದ ಟವಲ್ ಅನ್ನು ಇಟ್ಟು ಅದನ್ನು ಇಸ್ತ್ರಿ ಮಾಡಬಹುದು. ಇಸ್ತ್ರಿ ಮಾಡುವಾಗ ಉತ್ಪತ್ತಿಯಾಗುವ ಶಾಖವು ಬಟ್ಟೆಯಲ್ಲಿರುವ ತೇವಾಂಶ ಬೇಗನೆ ಆವಿಯಾಗುತ್ತದೆ. ಜೀನ್ಸ್ ಅಥವಾ ಸ್ವೆಟರ್‌ಗಳಂತಹ ದಪ್ಪ ಬಟ್ಟೆಗಳನ್ನು ಒಣಗಿಸಲು ಈ ವಿಧಾನವು ಉಪಯುಕ್ತವಾಗಿದೆ.

ಇದನ್ನೂ ಓದಿ:  ಒಣಗಿದ ನಿಂಬೆಯನ್ನು ಎಸೆಯುವ ಬದಲು ರೀತಿಯಾಗಿ ಉಪಯೋಗಿಸಿಕೊಳ್ಳಿ

ಹೇರ್‌ ಡ್ರೈಯರ್‌ ಬಳಸಿ: ಹೇರ್ ಡ್ರೈಯರ್ ಕೂದಲನ್ನು ಒಣಗಿಸಲು ಮಾತ್ರವಲ್ಲ, ಬಟ್ಟೆಗಳನ್ನು ಒಣಗಿಸಲು ಸಹ ಬಳಸಬಹುದು. ಅದನ್ನು ಹೀಟ್‌ ಮೋಡ್‌ಗೆ ಹೊಂದಿಸಿ ಮತ್ತು ಬಟ್ಟೆಗಳನ್ನು ಒಣಗಿಸಿ. ಕನಿಷ್ಠ ಐದು ನಿಮಿಷಗಳ ಕಾಲ ಈ ಪ್ರಕ್ರಿಯೆಯನ್ನು ಮುಂದುವರಿಸಿ, ನಂತರ ಆ ಬಟ್ಟೆಗಳನ್ನು ಅರ್ಧ ಘಂಟೆಯವರೆಗೆ ಫ್ಯಾನ್ ಅಡಿಯಲ್ಲಿ ಬಿಡಿ. ಅವು ಎಷ್ಟು ಚೆನ್ನಾಗಿ ಒಣಗುತ್ತವೆ.

ಹೀಟರ್ ಬಳಸಿ: ಸಾಮಾನ್ಯವಾಗಿ ಚಳಿಗಾಲದಲ್ಲಿ ಹೀಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಬಟ್ಟೆಗಳನ್ನು ಒಣಗಿಸಲು ನೀವು ಅವುಗಳನ್ನು ಬಳಸಬಹುದು. ನಿಮ್ಮ ಹೀಟರ್ ಅನ್ನು ಕೋಣೆಯಲ್ಲಿ ಇರಿಸಿ ಮತ್ತು ಬಟ್ಟೆ ಒಣಗಲು ಬಿಡಿ. ಹೀಟರ್‌ನಿಂದ ಬರುವ ಶಾಖವು ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸುತ್ತದೆ ಮತ್ತು ವಾಸನೆಯನ್ನು ನಿವಾರಿಸುತ್ತದೆ.

ವಾಸನೆ ತಡೆಯಲು ವಿನೆಗರ್ ಮತ್ತು ನಿಂಬೆ ಬಳಸಿ: ಮಳೆಗಾಲದಲ್ಲಿ ಬಟ್ಟೆಗಳು ಸಂಪೂರ್ಣವಾಗಿ ಒಣಗದಿದ್ದಾಗ, ಅವುಗಳಿಂದ ಅಹಿತಕರ ವಾಸನೆ ಬರಬಹುದು. ಇದನ್ನು ತಪ್ಪಿಸಲು, ನೀವು ಬಟ್ಟೆಗಳನ್ನು ತೊಳೆಯುವ ನೀರಿಗೆ ಒಂದು ಕಪ್ ವಿನೆಗರ್ ಅಥವಾ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು. ವಿನೆಗರ್ ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ವಾಸನೆಯನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸೀಸನಲ್ ರೋಗಗಳಿಂದ ದೂರವಿರಲು ಈ ರೀತಿ ಮಾಡಿ! – Kannada News

ದೇಶದ ಹಲವೆಡೆ ಹವಾಮಾನದಲ್ಲಿ ಬದಲಾವಣೆಯಾಗುತ್ತಿರುವುದನ್ನು ನೀವು ಕಾಣಬಹುದು. ಕೆಲವು ಕಡೆ ಮಳೆ ಸುರಿಯುತ್ತಿದ್ದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಈ ರೀತಿ ಹವಾಮಾನ ಬದಲಾಗುವ ಸಮಯದಲ್ಲಿ ಜ್ವರ, ಶೀತ, ಗಂಟಲು ಸೋಂಕು, ಫ್ಲೂ ಮುಂತಾದ ಸಮಸ್ಯೆಗಳು ಕಂಡುಬರುವುದು ಸಾಮಾನ್ಯ. ಆದರೆ ಈ ರೀತಿಯಾಗುವುದಕ್ಕೆ ಪ್ರಮುಖ ಕಾರಣ ದೇಹದ ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದು. ವೈದ್ಯರ ಪ್ರಕಾರ, ಏನೇ ಮಾಡಿದರೂ ಒಂದು ರಾತ್ರಿಯಲ್ಲಿ ಇಮ್ಯೂನಿಟಿ (Immunity) ಹೆಚ್ಚಿಸಿಕೊಳ್ಳುವ ಯಾವುದೇ ತ್ವರಿತ ವಿಧಾನಗಳಿಲ್ಲ. ಆದರೆ ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಹಾಗೂ ಒಳ್ಳೆಯ ಅಭ್ಯಾಸಗಳನ್ನು ನಿಯಮಿತವಾಗಿ ಪಾಲಿಸಿದರೆ ದೇಹದ ರೋಗನಿರೋಧಕ ಶಕ್ತಿ ಉತ್ತಮವಾಗಿರಿಸಿಕೊಳ್ಳಬಹುದು. ಇದರಿಂದ ಸೀಸನಲ್ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾದರೆ ನಮ್ಮ ದಿನಚರಿ ಹೇಗಿರಬೇಕು, ಯಾವ ಆಹಾರಗಳಿಂದ ದೂರವಿದ್ದರೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಮತೋಲನ ಆಹಾರ ಸೇವನೆ:

ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಖನಿಜಾಂಶಗಳು ದೊರೆಯಲು ಹಣ್ಣು, ತರಕಾರಿ, ಧಾನ್ಯ, ಡ್ರೈ ಫ್ರೂಟ್ಸ್ ಹಾಗೂ ಪ್ರೋಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ವಿಶೇಷವಾಗಿ ನಿಂಬೆ, ಕಿತ್ತಳೆ, ನೆಲ್ಲಿಕಾಯಿ ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್-ಸಿ ಸಮೃದ್ಧವಾಗಿದ್ದು, ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಲಭ್ಯವಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಸಾಕಷ್ಟು ನೀರು ಮತ್ತು ನಿದ್ರೆ:

ದೇಹ ಸರಿಯಾಗಿ ಕಾರ್ಯನಿರ್ವಹಿಸಲು ದಿನಪೂರ್ತಿ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಜೊತೆಗೆ ಪ್ರತಿದಿನ ಸರಿಯಾಗಿ ನಿದ್ರೆ ಮಾಡದಿದ್ದರೆ ರೋಗನಿರೋಧಕ ಶಕ್ತಿ ಕುಗ್ಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ!

ವ್ಯಾಯಾಮ ಮತ್ತು ಒತ್ತಡ ನಿಯಂತ್ರಣ:

ಪ್ರತಿದಿನ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ. ದೀರ್ಘಕಾಲದ ಒತ್ತಡ ದೇಹದ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಆದ್ದರಿಂದ ಮನಸ್ಸನ್ನು ಶಾಂತವಾಗಿಡುವುದು ಮತ್ತು ಒತ್ತಡ ನಿಯಂತ್ರಿಸುವುದು ಮುಖ್ಯ.

ಭಾರತೀಯ ಮಸಾಲೆಗಳ ಆರೋಗ್ಯ ಲಾಭಗಳು:

ಅರಿಶಿನ, ಶುಂಠಿ, ಬೆಳ್ಳುಳ್ಳಿ, ಮೆಣಸು ಹಾಗೂ ದಾಲ್ಚಿನ್ನಿಯಲ್ಲಿ ನೈಸರ್ಗಿಕ ಆಂಟಿ-ವೈರಲ್ ಮತ್ತು ಆಂಟಿ-ಬ್ಯಾಕ್ಟೀರಿಯಲ್ ಗುಣಗಳಿವೆ. ಪ್ರತಿದಿನ ಅರಿಶಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಲಾಭಕರ. ತುಳಸಿ, ಪುದೀನಾ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯಗಳು ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

ಯಾವ ಆಹಾರಗಳಿಂದ ದೂರ ಇರಬೇಕು?

ಜಂಕ್ ಫುಡ್, ಹೆಚ್ಚು ಎಣ್ಣೆಯ ಆಹಾರ, ಸಾಫ್ಟ್ ಡ್ರಿಂಕ್ಸ್ ಮತ್ತು ಅತಿಯಾದ ಸಕ್ಕರೆ ಇರುವ ಪದಾರ್ಥಗಳನ್ನು ಕಡಿಮೆ ಮಾಡುವುದು ಉತ್ತಮ. ಧೂಮಪಾನ ಮತ್ತು ಮದ್ಯಪಾನವೂ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ಆರೋಗ್ಯಕರ ಆಹಾರ, ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಒಳ್ಳೆಯ ಜೀವನಶೈಲಿಯೇ ದೇಹವನ್ನು ಒಳಗಿನಿಂದ ಬಲಪಡಿಸಿ ಸೀಸನಲ್ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ – Kannada News

ನವದೆಹಲಿ, ಜೂನ್ 11: ಒಮಾನ್ ಕರಾವಳಿಯ ಬಳಿ ವಾಣಿಜ್ಯ ಹಡಗೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ ಮೂವರು ಭಾರತೀಯ ನಾಗರಿಕರು ಸಾವನ್ನಪ್ಪಿರುವುದನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಈ ದಾಳಿಯನ್ನು “ಅತ್ಯಂತ ಆತಂಕಕಾರಿ” ಎಂದು ಹೇಳಿರುವ ಭಾರತ, ಇಂತಹ ದಾಳಿಗಳು ತಕ್ಷಣವೇ ಕೊನೆಗೊಳ್ಳಬೇಕು ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಗ್ರಹಿಸಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಕಡಲ ಸಂಘರ್ಷಗಳ ನಡುವೆ, ಒಮಾನ್ ದೇಶದ ಕರಾವಳಿ ತೀರದ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ನೌಕೆಯೊಂದರ ಮೇಲೆ ಇತ್ತೀಚೆಗೆ ಭೀಕರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಹಡಗಿನಲ್ಲಿದ್ದ ಸಿಬ್ಬಂದಿಗಳ ಪೈಕಿ ಮೂವರು ಭಾರತೀಯರು ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯವು (MEA) ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅಧಿಕೃತ ಪ್ರಕಟಣೆ ಹೊರಡಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ವಾಣಿಜ್ಯ ಮತ್ತು ಸರಕು ಸಾಗಣೆ ಹಡಗುಗಳ ಮೇಲೆ ನಡೆಯುತ್ತಿರುವ ಇಂತಹ ಸರಣಿ ದಾಳಿಗಳು ತೀವ್ರ ಕಳವಳಕಾರಿ ಎಂದು ಭಾರತ ಹೇಳಿದೆ. ಜಾಗತಿಕ ಸಾಗರ ಸುರಕ್ಷತೆ ಮತ್ತು ಮುಕ್ತ ಸಮುದ್ರಯಾನದ ಹಿತದೃಷ್ಟಿಯಿಂದ ವಾಣಿಜ್ಯ ನೌಕೆಗಳ ಮೇಲಿನ ದಾಳಿಗಳು ತಕ್ಷಣವೇ ನಿಲ್ಲಬೇಕು ಎಂದು ಭಾರತ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.

ಇದನ್ನೂ ಓದಿ: ಒಮಾನ್​ನ ಶಿನಾಸ್ ಬಂದರು ಬಳಿ 20 ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಅಮೆರಿಕದ ಮತ್ತೊಂದು ದಾಳಿ

ಒಮಾನ್ ಕರಾವಳಿಯ ಬಳಿ ಹಡಗಿನ ಮೇಲೆ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ. ಇದರಲ್ಲಿ ದುರದೃಷ್ಟವಶಾತ್ ನಾವು ಮೂವರು ಭಾರತೀಯ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ತೀವ್ರ ಪ್ರತಿಭಟನೆ ದಾಖಲಿಸಲು ನಾವು ಅಮೆರಿಕದ ಪ್ರಭಾರ ರಾಯಭಾರಿಯನ್ನು ಕರೆಸಿ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಈ ವಲಯದಲ್ಲಿ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳಕಾರಿಯಾಗಿದ್ದು, ಇದು ಪ್ರಾದೇಶಿಕ ಸಂಘರ್ಷದ ನೇರ ಪರಿಣಾಮವಾಗಿದೆ. ಈ ದಾಳಿಗಳು ತಕ್ಷಣವೇ ನಿಲ್ಲಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.

ಹಾರ್ಮುಜ್ ಜಲಸಂಧಿಯ ಬಳಿ ಪಲಾವ್ ದೇಶದ ಧ್ವಜ ಹೊಂದಿದ್ದ ‘ಎಂಟಿ ಸೆಟ್ಟೆಬೆಲ್ಲೊ’ ಹಡಗಿನ ಮೇಲೆ ದಾಳಿ ನಡೆದ ಬಳಿಕ ಭಾರತವು ಈ ವಿಷಯವನ್ನು ನೇರವಾಗಿ ವಾಷಿಂಗ್ಟನ್ ಆಡಳಿತದೊಂದಿಗೆ ಪ್ರಸ್ತಾಪಿಸಿದೆ ಎಂದು ಹೇಳಿದರು. ಪಲಾವ್ ಧ್ವಜದ ‘ಎಂಟಿ ಸೆಟ್ಟೆಬೆಲ್ಲೊ’ ಹಡಗಿನ ಮೇಲೆ ಈ ನಿರ್ದಿಷ್ಟ ದಾಳಿ ನಡೆದ ಹಿನ್ನೆಲೆಯಲ್ಲಿ ನಾವು ಅಮೆರಿಕದ ಕಡೆಗೆ ತೀವ್ರ ಪ್ರತಿಭಟನೆಯನ್ನು ದಾಖಲಿಸಿದ್ದೇವೆ. ನಾವು ಅಮೆರಿಕದ ಸಿಡಿಎ ಅವರನ್ನು ಕರೆಸಿ, ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ನಮ್ಮ ಆಳವಾದ ಕಳವಳವನ್ನು ತಿಳಿಸಿದ್ದೇವೆ ಎಂದು ಜೈಸ್ವಾಲ್ ಹೇಳಿದರು.

ಇದನ್ನೂ ಓದಿ: ಒಮಾನ್ ಕರಾವಳಿಯಲ್ಲಿ ಭಾರತೀಯರಿದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ, ನಾಪತ್ತೆಯಾಗಿದ್ದ ಮೂವರ ಸಾವು ದೃಢ

ಒಮಾನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಸ್ಥಳೀಯ ಆಡಳಿತ ಮತ್ತು ಹಡಗು ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮೃತಪಟ್ಟ ಮೂವರು ಭಾರತೀಯರ ಪಾರ್ಥಿವ ಶರೀರಗಳನ್ನು ಆದಷ್ಟು ಬೇಗ ಭಾರತಕ್ಕೆ ತರಲು ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ಕಾನೂನು ಹಾಗೂ ಆರ್ಥಿಕ ನೆರವನ್ನು ಒದಗಿಸಲು ರಾಯಭಾರ ಕಚೇರಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.

ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮಿತ್ರಕೂಟದ ನಡುವಿನ ಸಂಘರ್ಷದ ಬೆನ್ನಲ್ಲೇ ಈ ದಾಳಿ ನಡೆದಿರುವುದು ಜಾಗತಿಕವಾಗಿ ಭಾರಿ ಆತಂಕ ಮೂಡಿಸಿದೆ. ಹಾರ್ಮುಜ್ ಜಲಸಂಧಿ ಮೇಲಿನ ದಾಳಿಯು ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕತೆ ಮತ್ತು ನಾವಿಕರ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಭಾರತೀಯ ನೌಕಾಪಡೆಯು ಈಗಾಗಲೇ ಈ ವಲಯದಲ್ಲಿ ತನ್ನ ಯುದ್ಧನೌಕೆಗಳ ಗಸ್ತನ್ನು ಹೆಚ್ಚಿಸಿದ್ದು, ಭಾರತೀಯ ಹಡಗುಗಳ ರಕ್ಷಣೆಗೆ ಸಂಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್‌ ಚುನಾವಣೆ : ಕಾಂಗ್ರೆಸ್‌‍ ಅಭ್ಯರ್ಥಿ ಮಳವಳ್ಳಿ ಶಿವಣ್ಣ ನಾಮಪತ್ರ ತಿರಸ್ಕರಿಸುವಂತೆ ದೂರು – Kannada News

ಬೆಂಗಳೂರು, (ಜೂನ್.11): ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ (Karnataka legislative council Election) ಕಾಂಗ್ರೆಸ್‌‍ (Congress) ಅಭ್ಯರ್ಥಿ ಮಳವಳ್ಳಿ ಶಿವಣ್ಣ (Malavalli Shivanna) ಅವರು ಕ್ರಿಮಿನಲ್‌ ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ ಎಂದು ಜೆಡಿಎಸ್‌‍ ದೂರು ನೀಡಿದೆ. ತಮ ಮೇಲೆ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳನ್ನು ಅಫಿಡವಿಟ್‌ನಲ್ಲಿ ಮಳವಳ್ಳಿ ಶಿವಣ್ಣ ಮುಚ್ಚಿಹಾಕಿದ್ದಾರೆ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಬಿಜೆಪಿ, ಜೆಡಿಎಸ್‌‍ ಬೆಂಬಲಿತ ಅಭ್ಯರ್ಥಿ ಗೋವಿಂದರಾಜು ಚುನಾವಣಾಧಿಕಾರಿ ಹಾಗೂ ವಿಧಾನಸಭಾ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ದೂರು ನೀಡಿದ್ದಾರೆ.

ಮುಖ್ಯಾಂಶಗಳು

  • ಪರಿಷತ್ ಚುನಾವಣೆ ‘ಕೈ’ ಅಭ್ಯರ್ಥಿ ಮಳವಳ್ಳಿ ಶಿವಣ್ಣ ವಿರುದ್ಧ ಮಾಹಿತಿ ಮುಚ್ಚಿಟ್ಟ ಆರೋಪ
  • ಚುನಾವಣಾಧಿಕಾರಿಗೆ ದೂರು ನೀಡಿದ JDS ಅಭ್ಯರ್ಥಿ ಗೋವಿಂದರಾಜು
  • ಮಳವಳ್ಳಿ ಶಿವಣ್ಣ ನಾಮಪತ್ರ ತಿರಸ್ಕೃತ ಮಾಡುವಂತೆ ಚುನಾವಣಾಧಿಕಾರಿಗೆ ದೂರು
  • ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ ಮಳವಳ್ಳಿ ಶಿವಣ್ಣ
  • ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಸ್ಪಷ್ಟನೆ

ಆರೋಪದಲ್ಲೇನಿದೆ?

ಮಳವಳ್ಳಿ ಶಿವಣ್ಣ ವಿರುದ್ಧ ಒಟ್ಟು ನಾಲ್ಕು ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿವೆ. ಇದು ಅಫಿಡವಿಟ್‌ನಲ್ಲಿ ಹಾಕಬೇಕೆಂಬ ನಿಯಮವಿಲ್ಲ ಎಂದು ಮುಚ್ಚಿಹಾಕಿದ್ದಾರೆ. ಅಫಿಡವಿಟ್‌ನಲ್ಲಿ ಯಾವುದೇ ಅಭ್ಯರ್ಥಿಗಳು ತಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಆದ್ರೆ, ಇಲ್ಲಿ ಅಭ್ಯರ್ಥಿಯು ಮುಚ್ಚಿ ಹಾಕಿರುವುದರಿಂದ ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿರುವುದ್ದು, ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ದೂರು ಸ್ವೀಕರಿಸಿರುವ ಚುನಾವಣಾಧಿಕಾರಿ ಈ ಬಗ್ಗೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ನೋಡಿ: ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

ಆರೋಪಕ್ಕೆ ಮಳವಳ್ಳಿ ಶಿವಣ್ಣ ಸ್ಪಷ್ಟನೆ

ಇನ್ನು ಈ ಆರೋಪ ಕೇಳಿಬರುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿ ಮಳವಳ್ಳಿ ಶಿವಣ್ಣ ಪ್ರತಿಕ್ರಿಯಿಸಿದ್ದು, ಸೋಲಿನ ಭೀತಿಯಿಂದ ಗೋವಿಂದರಾಜು ಹುನ್ನಾರ ಮಾಡುತ್ತಿದ್ದಾರೆ. ನನ್ನ ವಿರುದ್ಧ ಯಾವುದೇ ಕೇಸ್​ಗಳು ಇಲ್ಲ. ನಾಲ್ಕು ಕೇಸ್​ಗಳ ಬಗ್ಗೆ ನಾನು ದೂರು ಕೊಟ್ಟಿರುವುದು. ಎಂಎಲ್​ಸಿ ಹೆಚ್.ವಿಶ್ವನಾಥ್ ವಿರುದ್ಧ ನಾನು ದೂರು ನೀಡಿದ್ದೆ. ವೋಟ್ ಚೋರಿ ಹೋಗಿ ಈಗ ಸೀಟ್ ಚೋರಿ ಮಾಡಲು ಹೋಗುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಎಂಎಲ್​ಸಿ ಹೆಚ್​.ವಿಶ್ವನಾಥ್​ ನನ್ನ ವಿರುದ್ಧ ಹುನ್ನಾರ ಮಾಡಿದ್ದು, ಗೋವಿಂದರಾಜುಗೆ ಎಂಎಲ್​ಸಿ ಹೆಚ್​.ವಿಶ್ವನಾಥ್​ ಹೇಳಿ ಕಳುಹಿಸಿದ್ದಾರೆ. ನನ್ನ ವಿರುದ್ಧ ಒಂದು ಎಫ್​ಐಆರ್ ಸಹ ದಾಖಲಾಗಿಲ್ಲ. ಹುನ್ನಾರಕ್ಕೆ ಸೊಪ್ಪು ಹಾಕಲ್ಲ, ಪರಿಷತ್​ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಸ್ಪಷ್ಟಪಡಿಸಿರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link