ಅರುಣಾಚಲಪ್ರದೇಶ, ಫೆಬ್ರವರಿ 06: ಬೈಕ್ನಲ್ಲಿ ಹೋಗುತ್ತಿದ್ದ ಪೊಲೀಸ್ ಅಧಿಕಾರಿಯ ಮೇಲೆ ಹುಲಿಯೊಂದು ದಾಳಿ ನಡೆಸಿ, ಎಳೆದುಕೊಂಡು ಹೋಗಿರುವ ಘಟನೆ ಅರುಣಾಚಲಪ್ರದೇಶದ ದಿಬಾಂಗ್ ಕಣಿವೆಯಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ನಡೆದ ಈ ಘಟನೆಯು ರಾಜ್ಯಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿದೆ, ದುರ್ಬಲವಾದ ಪರ್ವತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಮತ್ತೆ ಭಯ ಹುಟ್ಟಿದೆ. ಚಿಕ್ಸೆನ್ ಮಂಗ್ಪಾಂಗ್, ಹೆಡ್ ಕಾನ್ಸ್ಟೆಬಲ್, ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ದಟ್ಟವಾದ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದರು. ಕೆಲವೇ ಸೆಕೆಂಡುಗಳಲ್ಲಿ ಅವರನ್ನು ಎಳೆದುಕೊಂಡು ಹೋಗಿದೆ. ಅರಣ್ಯ ಪ್ರದೇಶದಿಂದ ಅವರ ಶವವನ್ನು ವಶಪಡಿಸಿಕೊಳ್ಳಲಾಗಿದೆ.
ಭಾರತೀಯ ರೈಲ್ವೆಯಲ್ಲಿನ ತುರ್ತು ಕೋಟಾ (EQ) ಸೇರಿದಂತೆ ಹಲವಾರು ಬುಕಿಂಗ್ ಕೋಟಾಗಳನ್ನು ಪರಿಚಯಿಸಿದೆ. ಇದರಿಂದ ಯಾರಿಗೆಲ್ಲ ಲಾಭವಾಗಲಿದೆ. ಇದನ್ನು ಪಡೆಯುವುದು ಹೇಗೆ ಎಂಬಲ್ಲ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ರೈಲುಗಳಲ್ಲಿ ಸೀಟುಗಳು ಭರ್ತಿಯಾದಾಗ ‘ವೈಟಿಂಗ್ ಲಿಸ್ಟ್’ (Waiting List) ಇರುತ್ತದೆ. ಆದರೆ, ಅತೀ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸಬೇಕಾದವರಿಗಾಗಿ ರೈಲ್ವೆ ಇಲಾಖೆಯು ಕೆಲವು ಸೀಟುಗಳನ್ನು ಮೀಸಲಿಟ್ಟಿರುತ್ತದೆ. ಇದು ಎಲ್ಲರಿಗೂ ಮುಕ್ತವಾಗಿಲ್ಲ ಮತ್ತು ಕೆಲವು ವರ್ಗದ ಪ್ರಯಾಣಿಕರಿಗೆ ಮಾತ್ರ ಮೀಸಲಾಗಿರುತ್ತದೆ. ಈ ಕೋಟಾವನ್ನು ಬೆಂಗಳೂರು ಮತ್ತು ಮಂಗಳೂರು ಪ್ರಯಾಣಿಕರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಯಾರಿಗೆ ಈ ಕೋಟಾ ಅನ್ವಯವಾಗುತ್ತದೆ?
ಗಣ್ಯ ವ್ಯಕ್ತಿಗಳು: ಕೇಂದ್ರ ಮತ್ತು ರಾಜ್ಯ ಸಚಿವರು, ಸಂಸದರು (MP), ಶಾಸಕರು (MLA), ಸಾಂವಿಧಾನಿಕ ಹುದ್ದೆಯಲ್ಲಿರುವವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಈ ಕೋಟಾವನ್ನು ಬಳಸಿಕೊಳ್ಳಬಹುದು.
ತುರ್ತು ಅಗತ್ಯವಿರುವ ಸಾಮಾನ್ಯ ಪ್ರಯಾಣಿಕರು: ಕುಟುಂಬದಲ್ಲಿ ಸಾವು ಸಂಭವಿಸಿದಾಗ, ವೈದ್ಯಕೀಯ ತುರ್ತು ಪರಿಸ್ಥಿತಿ (Serious Medical Cases), ಅಥವಾ ಉದ್ಯೋಗದ ಸಂದರ್ಶನಕ್ಕೆ ಹೋಗುವವರು ಈ ಕೋಟಾದಡಿ ಅರ್ಜಿ ಸಲ್ಲಿಸಬಹುದು.
ಇದು ಹೇಗೆ ಕೆಲಸ ಮಾಡುತ್ತದೆ?:
ರೈಲ್ವೆಯ ಪ್ರತಿಯೊಂದು ವಿಭಾಗದಲ್ಲೂ ಈ ಸೀಟುಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳಿರುತ್ತಾರೆ. ಪ್ರಯಾಣಿಕರು ಮೊದಲು ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿರಬೇಕು. ನಂತರ ಸಂಬಂಧಪಟ್ಟ ವಲಯದ ಹಿರಿಯ ಅಧಿಕಾರಿಗಳಿಗೆ ಅಥವಾ ‘ವಿಭಾಗೀಯ ರೈಲ್ವೆ ಮ್ಯಾನೇಜರ್’ (DRM) ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯ ಜೊತೆಗೆ ತುರ್ತು ಪರಿಸ್ಥಿತಿಯ ದಾಖಲೆಗಳನ್ನು (ವೈದ್ಯಕೀಯ ವರದಿ ಅಥವಾ ಇನ್ಯಾವುದೇ ಪುರಾವೆ) ಲಗತ್ತಿಸುವುದು ಕಡ್ಡಾಯ.
ಚಾರ್ಟ್ ತಯಾರಾಗುವ ಮುನ್ನ (ಸಾಮಾನ್ಯವಾಗಿ ರೈಲು ಹೊರಡುವ 4 ಗಂಟೆಗಳ ಮೊದಲು) ಈ ಕೋಟಾವನ್ನು ಪರಿಶೀಲಿಸಲಾಗುತ್ತದೆ. ಆದ್ಯತೆಯ ಮೇರೆಗೆ ಯಾರಿಗೆ ಸೀಟು ನೀಡಬೇಕು ಎಂದು ಅಧಿಕಾರಿಗಳು ನಿರ್ಧರಿಸುತ್ತಾರೆ. ಒಂದು ವೇಳೆ ಯಾವುದೇ ಗಣ್ಯ ವ್ಯಕ್ತಿಗಳ ಬೇಡಿಕೆ ಇಲ್ಲದಿದ್ದರೆ, ಆ ಸೀಟುಗಳನ್ನು ತುರ್ತು ಪರಿಸ್ಥಿತಿಯಲ್ಲಿರುವ ಸಾಮಾನ್ಯ ಜನರಿಗೆ ನೀಡಲಾಗುತ್ತದೆ. ಈ ಕೋಟಾದಡಿ ಸೀಟು ಸಿಗುವುದು ಗ್ಯಾರಂಟಿ ಇರುವುದಿಲ್ಲ. ಇದರ ಲಭ್ಯತೆ ಮತ್ತು ಅಧಿಕಾರಿಯ ವಿವೇಚನೆಗೆ ಬಿಟ್ಟಿರುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಈ ಕೋಟಾಗೆ ಅತೀ ಹೆಚ್ಚು ಬೇಡಿಕೆ ಇರುತ್ತದೆ.
ಬೆಂಗಳೂರು, ಫೆಬ್ರವರಿ 06: ಕೈಯಲ್ಲಿ ಒಂದು ಉದ್ಯೋಗವಿದ್ರೆ (Job) ಮರ್ಯಾದೆ. ಆದರೆ ಕೆಲಸ ಮಾಡುವ ಸ್ಥಳದಲ್ಲಿಯೇ ನೆಮ್ಮದಿ ಅನ್ನೋದೇ ಇಲ್ಲವಾದರೆ ಏನು ಮಾಡೋದು. ಹೀಗಾಗಿ ಎಷ್ಟೇ ಜನರು ಒತ್ತಡಭರಿತ ವಾತಾವರಣಕ್ಕೆ ಬೇಸೆತ್ತು ಜಾಬ್ ರಿಸೈನ್ ಮಾಡುವ ನಿರ್ಧಾರ ಕೂಡ ಮಾಡ್ತಾರೆ. ಆದರೆ ಬೆಂಗಳೂರಿನ (Bengaluru) ಮಹಿಳೆಯೊಬ್ಬರು ದಿನದ 14 ಗಂಟೆ ಕೆಲಸ ಮಾಡಿದ್ದಕ್ಕೆ ಆರೋಗ್ಯವೂ ಹದಗೆಟ್ಟಿತು. ತನ್ನ ಈ ಒಂದು ನಿರ್ಧಾರದಿಂದ ಚೇತರಿಸಿಕೊಂಡೆ ಎಂದು ಹೇಳಿದ್ದಾರೆ. ಲಿಂಕ್ಡ್ ಇನ್ನಲ್ಲಿ ಮಾಡಿದ ಪೋಸ್ಟ್ಗೆ ನೆಟ್ಟಿಗರು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ.
ಮೀನಲ್ ಗೋಯೆಲ್ (Meenal Goel) ಹೆಸರಿನ ಲಿಂಕ್ಡ್ ಇನ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ನಲ್ಲಿ ಜಾಗತಿಕ ಸಲಹಾ ಸಂಸ್ಥೆಗಳಾದ ಕೆಪಿಎಂಜಿ ಮತ್ತು ಡೆಲಾಯ್ಟ್ನೊಂದಿಗೆ ಕೆಲಸ ಮಾಡಿದ್ದ ಮೀನಲ್ ಗೋಯೆಲ್, ಸತತ 6 ತಿಂಗಳ ಕಠಿಣ ಕೆಲಸದ ನಂತರ ಬಳಿಕ ತನ್ನ ನಿರ್ಧಾರದಿಂದ ಹೇಗೆ ದೈಹಿಕ ಆರೋಗ್ಯವು ಸುಧಾರಿಸುವಂತೆ ಮಾಡಿತು ಎಂದು ವಿವರಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
ನಾನು ಆರು ತಿಂಗಳು ಸತತವಾಗಿ 14 ಗಂಟೆಗಳ ಕಾಲ ದಿನ ಕೆಲಸ ಮಾಡಿದೆ. ಕಳೆದ ವಾರ ನನಗೆ ಏನು ಮಾಡಲು ಸಾಧ್ಯವಿಲ್ಲ ಎನ್ನುವಂತಾಯಿತು. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಅಲಾರಾಂ ಬಾರಿಸಿತು. ನನಗೆ ಹಾಸಿಗೆಯಿಂದ ಏಳಲು ಸಾಧ್ಯವಾಗಲಿಲ್ಲ. ನಾನು ಸೋಮಾರಿಯಾಗಿದ್ದ ಕಾರಣವಲ್ಲ. ಆ ವೇಳೆ ನನ್ನ ದೇಹವು ಯಾವುದಕ್ಕೂ ತಯಾರಾಗಿರಲಿಲ್ಲ ಎಂದು ವಾಸ್ತವ ಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಅರ್ಧ ವರ್ಷ ಕಾಲ ತಾನು ಶಿಕ್ಷಾರ್ಹ ವೇಳಾಪಟ್ಟಿಯನ್ನು ಅನುಸರಿಸಿದೆ ಬೆಳಿಗ್ಗೆ 6 ಗಂಟೆಗೆ ಎಚ್ಚರಗೊಳ್ಳುವುದು, ರಾತ್ರಿ 11 ಗಂಟೆಯವರೆಗೆ ಕೆಲಸ ಮಾಡುವುದು, ವಾರಾಂತ್ಯಗಳನ್ನು ಸಾಮಾನ್ಯ ಕೆಲಸದ ದಿನಗಳಂತೆ ಪರಿಗಣಿಸುವುದು. ರಜಾದಿನಗಳಲ್ಲಿಯೂ ತನ್ನ ಲ್ಯಾಪ್ಟಾಪ್ ಅನ್ನು ಆನ್ನಲ್ಲಿ ಇಡುವುದು. ಆದರೆ ನನಗೆ ಮನವರಿಕೆ ಆಯಿತು. ಕ್ಲೈಂಟ್ ಕರೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ನಾನು ಅಸ್ವಸ್ಥಳಾದೆ. ಹೃದಯ ಬಡಿತ ಜೋರಾಗಿತ್ತು. ಉಸಿರಾಡಲು ಸಾಧ್ಯವಾಗಲಿಲ್ಲ. ಫೋನ್ ಕಟ್ ಮಾಡಬೇಕಾಯಿತು. ಈ ರೀತಿ ಕೆಲಸ ಮಾಡಿ ನನ್ನ ಆರೋಗ್ಯವೇ ಹಾಳಾಗುತ್ತಿದೆ. ನಾನು ಎಲ್ಲಾ ಕ್ಷಣವನ್ನು ಆನಂದಿಸಲು ಬಯಸಿದರೂ ದೇಹವು ದಣಿದಿರುತ್ತದೆ. ಹಾಗಿದ್ದಾಗ ಈ ಯಶಸ್ಸಿನ ಅರ್ಥವೇನು ಎಂದು ಮನವರಿಕೆ ಆಯಿತು ಎಂದು ಹೇಳಿದ್ದಾರೆ.
ಆದ್ದರಿಂದ ನಾನು ಒಂದು ನಿರ್ಧಾರ ತೆಗೆದುಕೊಂಡೆ. ರಾತ್ರಿ 8 ಗಂಟೆಯ ನಂತರ ಕೆಲಸ ಮಾಡಲ್ಲ. ತ್ವರಿತ ಇಮೇಲ್ ಕಳುಹಿಸುವುದು. ಭಾನುವಾರಗಳು ಸಂಪೂರ್ಣವಾಗಿ ಆಫ್ ಆಗಿರುತ್ತವೆ. ಫೋನ್ ಆಫ್ ಆಗಿರುತ್ತದೆ. ಇದಾದ ಒಂದು ವಾರದಲ್ಲೇ ನನ್ನ ಉತ್ಪಾದಕತೆ? ನಿಜವಾಗಿಯೂ ಹೆಚ್ಚಾಗಿದೆ. ನನ್ನ ಮಾನಸಿಕ ಆರೋಗ್ಯ ಉತ್ತಮವಾಯಿತು. ಒತ್ತಡವು ನಮ್ಮಳೊಗಿನ ಉತ್ಸಾಹವನ್ನು ಚಿವುಟಿ ಹಾಕುತ್ತದೆ ಎಂದು ಬರೆದಿರುವುದನ್ನು ಕಾಣಬಹುದು.
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ದಯವಿಟ್ಟು ವಿಶ್ರಾಂತಿ ಪಡೆಯಿರಿ. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದ್ದಾರೆ. ನಾವು ಅತಿಯಾದ ಕೆಲಸವನ್ನು ಎಷ್ಟು ವೈಭವೀಕರಿಸುತ್ತೇವೆ ಎಂದರೆ ಆರೋಗ್ಯವೇ ಸರ್ವಸ್ವ ಎಂಬುದನ್ನು ನಾವು ಮರೆತುಬಿಡುತ್ತೇವೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಆರೋಗ್ಯಕ್ಕಿಂತ ಕೆಲಸ ಮುಖ್ಯವಲ್ಲ. ನೀವು ಆರೋಗ್ಯಯುತವಾಗಿದ್ದರೆ ಉತ್ತಮವಾಗಿ ಕೆಲಸ ಮಾಡ್ಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಫೆಬ್ರವರಿ 06: ಜಲಮಂಡಳಿ ಅಗೆದಿದ್ದ ಹೊಂಡಕ್ಕೆ ಬಿದ್ದು, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ದೆಹಲಿಯ ಜನಕಪುರಿಯಲ್ಲಿ ನಡೆದಿದೆ. ಗುರುವಾರ ರಾತ್ರಿ ಕಮಲ್ ತನ್ನ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ(Accident) ಸಂಭವಿಸಿದೆ. ವರದಿಗಳ ಪ್ರಕಾರ, ರೋಹಿಣಿಯಲ್ಲಿರುವ ತಮ್ಮ ಕಚೇರಿಯಿಂದ ಮನೆಗೆ ಹಿಂದಿರುಗುತ್ತಿದ್ದರು.ಕೈಲಾಸಪುರಿಯಲ್ಲಿ ವಾಸವಾಗಿದ್ದರು. ತಡರಾತ್ರಿಯಾದರೂ ಮಗ ಮನೆಗೆ ಬಾರದ್ದನ್ನು ಕಂಡು ಕುಟುಂಬದವರು ಆತಂಕಕ್ಕೊಳಗಾದರು.
ಕುಟುಂಬದವರ ಪ್ರಕಾರ, ಅವರು ಇಡೀ ರಾತ್ರಿ ಜನಕಪುರಿ, ಸಾಗರ್ಪುರ, ವಿಕಾಸಪುರಿ ಮತ್ತು ರೋಹಿಣಿ ಸೇರಿದಂತೆ ಅರ್ಧ ಡಜನ್ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬೆಳಗ್ಗೆ 7.30 ರ ಸುಮಾರಿಗೆ ಪೊಲೀಸರಿಂದ ಕರೆ ಬಂದಿತ್ತು ನಂತರ ಈ ಘಟನೆ ತಿಳಿದುಬಂದಿದೆ.
ಅಲ್ಲಿಗೆ ತಲುಪಿದಾಗ ಕಮಲ್ ತನ್ನ ಬೈಕ್ನೊಂದಿಗೆ ಹಳ್ಳಕ್ಕೆ ಬಿದ್ದಿರುವುದು ಕಂಡುಬಂದಿದೆ. ಕುಟುಂಬವು ಪ್ರಸ್ತುತ ಅಪಘಾತಕ್ಕೆ ಜಲಮಂಡಳಿಯ ನಿರ್ಲಕ್ಷ್ಯವನ್ನು ದೂಷಿಸುತ್ತಿದೆ. ಕಮಲ್ನನ್ನು ಯಾರೋ ಕೊಲೆ ಮಾಡಿ ಹಳ್ಳಕ್ಕೆ ಎಸೆದಿರಬಹುದು ಎಂದು ಹೇಳುತ್ತಿದ್ದು, ಪೊಲೀಸರು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಘಟನೆಯ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯ ಬಿಜೆಪಿ ಸರ್ಕಾರವನ್ನು ಟೀಕಿಸಿದೆ. ಇದಕ್ಕೂ ಮೊದಲು, ಜನವರಿ 16 ರಂದು, ನೋಯ್ಡಾದ ಸೆಕ್ಟರ್ 150 ರಲ್ಲಿ, ಎಂಜಿನಿಯರ್ ಯುವರಾಜ್ ಅವರ ಕಾರು ನೆಲಮಾಳಿಗೆಗಾಗಿ ಅಗೆಯಲಾಗಿದ್ದ ಹೊಂಡಕ್ಕೆ ಬಿದ್ದಿತ್ತು. ಭಾರೀ ಮಂಜಿನಿಂದಾಗಿ, ಚಾಲಕನಿಗೆ ರಸ್ತೆ ಕಂಡಿರಲಿಲ್ಲ. ಯುವರಾಜ್ ಸುಮಾರು ಎರಡು ಗಂಟೆಗಳ ಕಾಲ ಸಹಾಯಕ್ಕಾಗಿ ಬೇಡಿಕೊಂಡರು, ಆದರೆ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಸಾವು ಆಕಸ್ಮಿಕವೇ ಅಥವಾ ದುಷ್ಕೃತ್ಯದ ಪರಿಣಾಮವೇ ಎಂಬುದನ್ನು ನಿರ್ಧರಿಸಲು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ 6: ನಮ್ಮ ಮೆಟ್ರೋ ಪ್ರಯಾಣ ದರವನ್ನು ಬಿಎಂಆರ್ಸಿಎಲ್ ಶೇ 5ರಷ್ಟು ಹೆಚ್ಚಿಸಿದ್ದು, ಇದರಿಂದಾಗಿ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಅಪಖ್ಯಾತಿಗೆ ಬೆಂಗಳೂರು ಮೆಟ್ರೋ ಒಳಗಾಗಿದೆ. ಈ ಪರಿಷ್ಕೃತ ದರಗಳು ಸೋಮವಾರದಿಂದ ಜಾರಿಗೆ ಬರಲಿವೆ. ದೆಹಲಿ, ಚೆನ್ನೈ, ಮುಂಬೈ ಸೇರಿದಂತೆ ಇತರ ಪ್ರಮುಖ ನಗರಗಳ ಮೆಟ್ರೋ ವ್ಯವಸ್ಥೆಗಳಿಗೆ ಹೋಲಿಸಿದರೆ ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಈಗ ಗಣನೀಯವಾಗಿ ಹೆಚ್ಚಾಗಿದೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಬಳಿ ‘ಟಿವಿ9’ ಜತೆ ಮಾತನಾಡಿದ ಪ್ರಯಾಣಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಮ ವರ್ಗದ ಜನರ ಮೇಲೆ ಈ ದರ ಏರಿಕೆ ದೊಡ್ಡ ಹೊರೆಯಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ಹರಿಸಿ ದರ ಏರಿಕೆಯನ್ನು ತಡೆಹಿಡಿಯಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಪದೇ ಪದೇ ದರ ಏರಿಸುವುದರಿಂದ ಜನಸಾಮಾನ್ಯರ ಬದುಕಿಗೆ ಕಷ್ಟವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನೆನ್ನೆ ನಡೆದ (ಫೆ.5) ಮಹಿಳಾ ಪ್ರೀಮಿಯರ್ ಲೀಗ್ (WPL) ಪಂದ್ಯಾವಳಿಯಲ್ಲಿ ಆರ್ಸಿಬಿ ಮಹಿಳಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಇದು ತಂಡದ ಎರಡನೇ WPL ಪ್ರಶಸ್ತಿಯಾಗಿದೆ. ಗುಜರಾತ್ನ ವಡೋದರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಹುಡುಗಿಯರು ರೋಚಕ ವಿಜಯ ಸಾಧಿಸಿ ಕಪ್ ಎತ್ತಿ ಹಿಡಿದರು. ಡೆಲ್ಲಿ ಕ್ಯಾಪಿಟಲ್ಸ್ ಸತತ ನಾಲ್ಕನೇ ಬಾರಿಗೆ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪಂದ್ಯದ ಆರಂಭಿಕ ಹಂತದಲ್ಲಿ ಆರ್ಸಿಬಿ ತಂಡದ ಗೆಲುವಿನ ಬಗ್ಗೆ ಕೆಲವು ಅಭಿಮಾನಿಗಳಲ್ಲಿ ಸಂದೇಹಗಳಿದ್ದವು. ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಸ್ಕೋರ್ ಗಳಿಸಿದ್ದರಿಂದ ಚೇಸ್ ಮಾಡುವುದು ಸುಲಭವಲ್ಲ ಎಂದು ಅನೇಕರು ಭಾವಿಸಿದ್ದರು. ಆದರೆ, ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವಾಲ್ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವು ಪಂದ್ಯದ ಗತಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಸ್ಮೃತಿ ಮಂದಾನ 87 ರನ್ ಸಿಡಿಸಿ ತಂಡವನ್ನು ಮುನ್ನಡೆಸಿದರು. ಅವರ ನಾಯಕತ್ವದ ಇನ್ನಿಂಗ್ಸ್ ಮತ್ತು ವಾಲ್ ಅವರ ಜೊತೆಯಾಟವು ಆರ್ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು. ಅಭಿಮಾನಿಗಳು ಈ ಗೆಲುವಿನಿಂದ ಅತಿ ಹೆಚ್ಚು ಸಂತೋಷಗೊಂಡಿದ್ದಾರೆ. ಒಬ್ಬ ಅಭಿಮಾನಿಯಾದ ತೇಜಸ್ ಅವರ ಪ್ರಕಾರ, “ಇದು ನಮ್ಮ ಹುಡುಗರು ಗೆದ್ದಾಗ ಸಿಗುವ ಮಜಾವನ್ನೇ ನೀಡಿದೆ. ಪಂದ್ಯದ ಪ್ರತಿಯೊಂದು ಎಸೆತವೂ ರೋಮಾಂಚನಕಾರಿಯಾಗಿತ್ತು ಎಂದು ಅವರು ಹೇಳಿದ್ದಾರೆ. ಮತ್ತೊಬ್ಬ ಅಭಿಮಾನಿಯಾದ ಶ್ರುತಿ ಮಾತನಾಡಿ, “ಅಂತಿಮ ಕ್ಷಣದವರೆಗೂ ಗೆಲ್ಲುವುದಿಲ್ಲವೇನೋ ಎಂಬ ಆತಂಕವಿತ್ತು. ಆದರೆ ಕೊನೆಗೆ ಗೆಲುವು ಕಂಡಿದ್ದು ನಂಬಲಾಗದ ಸಂಗತಿಯಾಗಿತ್ತು” ಎಂದು ಹೇಳಿದ್ದಾರೆ. ಈ ವಿಜಯವು ಮಹಿಳಾ ಕ್ರಿಕೆಟ್ಗೆ ಒಂದು ದೊಡ್ಡ ಉತ್ತೇಜನ ನೀಡಿದೆ ಎಂದು ಹೇಳಿದ್ದಾರೆ. ಸರ್ವಮಂಗಳ ಎಂಬ ಅಭಿಮಾನಿ, “ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು. ನಮ್ಮ ಹುಡುಗರು ಇಷ್ಟು ವರ್ಷ ಕಪ್ ಗೆಲ್ಲಲು ಕಾಯಿಸಿದರೂ, ನಮ್ಮ ಹುಡುಗಿಯರು ಎರಡನೇ ಸಾರಿ ಪ್ರೂವ್ ಮಾಡಿದ್ದಾರೆ” ಎಂದು ಹೇಳುವ ಮೂಲಕ ಮಹಿಳಾ ತಂಡದ ಸಾಧನೆಯನ್ನು ಶ್ಲಾಘಿಸಿದರು.
ಮಂಗಳೂರು, ಫೆಬ್ರವರಿ 6: ಬೈಕೊಂದರಲ್ಲಿ ತ್ರಿಬಲ್ ರೈಡ್ ಹೋಗುತ್ತಿದ್ದ ಯುವಕರು ಏಕಾಏಕಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಪರಿಣಾಮ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ ಕಾರು ಡಿಕ್ಕಿಯಾಗಿ ಭಾರೀ ಅವಘಡ ಸಂಭವಿಸಿದೆ. ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಸೂರಜ್ ಹೊಟೇಲ್ ಬಳಿ ಘಟನೆ ನಡೆದಿದ್ದು, ಯುವಕರು ಹೆಲ್ಮೆಟ್ ಕೂಡ ಧರಿಸದೇ ನಿರ್ಲಕ್ಷ್ಯದಿಂದ ಬೈಕ್ನಲ್ಲಿ ತ್ರಿಬಲ್ ರೈಡ್ ಮಾಡುತ್ತಿದ್ದರು. ಈ ವೇಳೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರು ಫುಟ್ಬಾಲ್ನಂತೆ ಹಾರಿ ಬಿದ್ದಿದ್ದಾರೆ. ಕಾರು ಡಿಕ್ಕಿಯ ರಭಸಕ್ಕೆ ಓರ್ವ ಅಪಾಯದಿಂದ ಪಾರಾಗಿದ್ದು, ಉಳಿದ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ರೀಲ್ಸ್ ರಾಣಿ ಸುಚಿತ್ರಾ ಜೊತೆ ಸಂಕರ್ಪಕದಲ್ಲಿದ್ದ ಯುವಕರ ಇನ್ಟ್ಸಾ ಡಿಲೀಟ್, ಮೊಬೈಲ್ ಸ್ವಿಚ್ ಆಫ್!
ಕಾರವಾರ, ಫೆಬ್ರುವರಿ 06: ರೀಲ್ಸ್ ರಾಣಿ ಸುಚಿತ್ರಾ ಮತ್ತು ಜ್ಯೋತಿಷಿ ಪ್ರೇಮ (Kamalakar Bhat and Suchitra Case) ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರ ತನಿಖೆಯ ವೇಳೆ ಸುಚಿತ್ರಾಳ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ, ಕಲಬುರಗಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲ ಯುವಕರೊಂದಿಗೆ ಅವಳು ನಿರಂತರ ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಆತಂಕಕ್ಕೊಳಗಾದ ಯುವಕರು ತಮ್ಮ ಇನ್ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್ ಮಾಡಿದ್ದು, ಇನ್ನೂ ಕೆಲವರು ತಮ್ಮ ಮೊಬೈಲ್ಗಳನ್ನೇ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಸುಚಿತ್ರಾ ಪತಿ ಹೇಳಿಕೆಗೆ ಹುಡುಗರು ಕಂಗಾಲು
ಇತ್ತ ಶಿವಮೊಗ್ಗದಲ್ಲಿ ಸುಚಿತ್ರಾಳ ಪತಿ ಹಾಗೂ ಮಗಳು ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಗಳು ಯುವಕರನ್ನು ಇನ್ನಷ್ಟು ದಂಗು ಮಾಡಿವೆ. ಸುಚಿತ್ರಾಳ ಮೊಬೈಲ್ ಚೆಕ್ ಮಾಡಿದ್ರೆ ಇವಳ ಬಗ್ಗೆ ಅಸಹ್ಯ ಆಗುತ್ತೆ. ಬೇರೆ ಬೇರೆ ಹುಡುಗರ ಜೊತೆ ಇವಳು ನಿತ್ಯ ಸಂಪರ್ಕದಲ್ಲಿ ಇದ್ದಳು ಎಂದು ಆಕೆಯ ಪತಿ ಹೇಳಿಕೆ ನೋಡಿದ ಬೆನ್ನಲ್ಲೇ ಕೆಲವರು ತಮ್ಮ ಇನ್ಸ್ಟಾಗ್ರಾಂ ಖಾತೆಗಳನ್ನು ಡಿಲಿಟ್ ಮಾಡಿಕೊಂಡರೆ, ಇನ್ನೂ ಕೆಲವರು ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಹೆಸರು ತನಿಖೆಯಲ್ಲಿ ಹೊರಬೀಳಬಹುದೆಂಬ ಆತಂಕದಲ್ಲಿ ಯುವಕರು ಸಿಲುಕಿದ್ದಾರೆ.
ಸುಚಿತ್ರಾ ಹಲವು ಯುವಕರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದಳು, ತನ್ನ ಮೇಲೆ ಹಲ್ಲೆ ನಡೆಸಲು ಯುವಕರ ಸಹಾಯ ಕೇಳಿದ್ದಳು ಎಂದು ಆಕೆಯ ಪತಿ ಆರೋಪ ಹೊರೆಸಿದ್ದಾನೆ . ಈ ಕುರಿತು ಪೊಲೀಸರು ಒಂದೊಂದಾಗಿ ತನಿಖೆ ಮುಂದುವರಿಸುತ್ತಿದ್ದು, ಸುಚಿತ್ರಾ ಪ್ರಕರಣ ಹಲವಾರು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ.
ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ವಸಂತ್ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರ ವೈಫಲ್ಯವಿದೆ ಎಂಬ ಸ್ಥಳೀಯರ ಆರೋಪಗಳ ಹಿನ್ನೆಲೆಯಲ್ಲಿ, ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಎಎಸ್ಐ ಗಣಪತಿ ಭಟ್ ಹಾಗೂ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಅವರನ್ನು ಹಳಿಯಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಸಿದ್ದಾಪುರ ಪೊಲೀಸ್ ಠಾಣೆಯ ಕಾರ್ಯವೈಖರಿಯ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ. ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಯಾವುದೇ ಲೋಪ ಕಂಡುಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ದೀಪನ್ ತಿಳಿಸಿದ್ದಾರೆ.
ಭಾರತದ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆ ತರುವ ಸಾಧನೆಯನ್ನು ಮಾಡಿರುವ ರೂಬಲ್ ನಾಗಿ ಅವರು ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಶಿಕ್ಷಣದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ನೀಡಲಾಗುವ ವಿಶ್ವದ ಪ್ರತಿಷ್ಠಿತ GEMS Education Global Teacher Prize ಪ್ರಶಸ್ತಿಯನ್ನು ಅವರು ಇತ್ತೀಚೆಗೆ ಪಡೆದಿದ್ದು, ಸುಮಾರು 1 ಮಿಲಿಯನ್ ಡಾಲರ್ (8 ಕೋಟಿ ರೂ.) ಬಹುಮಾನವನ್ನು ಗೆದ್ದಿದ್ದಾರೆ. ದುಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ನಾಮನಿರ್ದೇಶಿತರ ನಡುವೆ ಅತ್ಯುತ್ತಮ ಶಿಕ್ಷಕಿಯಾಗಿ ಆಯ್ಕೆಯಾಗಿರುವುದು ಅವರ ಸಮಾಜಮುಖಿ ಸೇವೆಗೆ ದೊರೆತ ದೊಡ್ಡ ಗೌರವವಾಗಿದೆ.
ರೂಬಲ್ ನಾಗಿ (Rouble Nagi) ಯಾರು?
ರೂಬಲ್ ನಾಗಿ ಕೇವಲ ಶಿಕ್ಷಕಿಯಲ್ಲ, ಒಬ್ಬ ಶಿಲ್ಪಕಲಾವಿದೆ ಮತ್ತು ಸಮಾಜ ಸೇವಕಿ. ಅವರು ಸ್ಥಾಪಿಸಿದ Rouble Nagi Art Foundation ಮೂಲಕ ಭಾರತದ ಕೊಳೆಗೇರಿ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ತಲುಪಿಸುವ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಶಿಕ್ಷಣದಿಂದ ದೂರ ಉಳಿದ ಬಡ ಮಕ್ಕಳಿಗೆ ಕಲಿಕೆಯ ಆಸಕ್ತಿ ಮೂಡಿಸಲು ಅವರು ಗೋಡೆಗಳನ್ನೇ ತರಗತಿ ಕೊಠಡಿಗಳಾಗಿ ಪರಿವರ್ತಿಸಿದ್ದಾರೆ. ಸ್ಮಮ್ ಪ್ರದೇಶಗಳ ಗೋಡೆಗಳ ಮೇಲೆ ಅಕ್ಷರಮಾಲೆ, ಗಣಿತ, ವಿಜ್ಞಾನ ಮತ್ತು ಇತಿಹಾಸದ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳು ಆಟವಾಡುತ್ತಲೇ ಕಲಿಯುವ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಬೀದಿಬದಿಯ ಗೋಡೆಗಳನ್ನು ಬೋಧನಾ ಮಾಧ್ಯಮವಾಗಿ ಪರಿವರ್ತಿಸಿದ್ದು, ಈ ಹೊಸ ಪ್ರಯೋಗವು ಸಾವಿರಾರು ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತಂದಿದೆ.
‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ಖಷಿಯಲ್ಲಿ ರೂಬಲ್ ನಾಗಿ ಹಂಚಿಕೊಂಡ ಪೋಸ್ಟ್:
ಇದುವರೆಗೆ ದೇಶಾದ್ಯಂತ 800ಕ್ಕೂ ಹೆಚ್ಚು ಕಲಿಕೆ ಕೇಂದ್ರಗಳನ್ನು ಸ್ಥಾಪಿಸಿರುವ ರೂಬಲ್ ನಾಗಿ, ಶಿಕ್ಷಣವನ್ನು ಹಕ್ಕು ಎಂದು ಪರಿಗಣಿಸಿ ಬಡ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಜ್ಞಾನ ನೀಡುತ್ತಿದ್ದಾರೆ. ಅವರ ಪ್ರಯತ್ನದಿಂದ ಅನೇಕ ಮಕ್ಕಳ ಬದುಕು ಬದಲಾಗಿದ್ದು, ಆತ್ಮವಿಶ್ವಾಸ ಮತ್ತು ಹೊಸ ಭವಿಷ್ಯ ದೊರಕಿದೆ. ಕಲೆಯ ಮೂಲಕ ಶಿಕ್ಷಣವನ್ನು ತಲುಪಿಸುವ ಈ ವಿಭಿನ್ನ ಕಾರ್ಯಶೈಲಿಯೇ ಅವರಿಗೆ ಜಾಗತಿಕ ಶಿಕ್ಷಕ ಪ್ರಶಸ್ತಿಯನ್ನು ತಂದುಕೊಟ್ಟಿದೆ. ರೂಬಲ್ ನಾಗಿಯ ಸಾಧನೆ ಪ್ರತಿಯೊಬ್ಬ ಶಿಕ್ಷಕರಿಗೂ ಪ್ರೇರಣೆಯಾಗಿದ್ದು, ಒಬ್ಬ ವ್ಯಕ್ತಿಯ ಸೇವಾಭಾವ ಸಮಾಜವನ್ನೇ ಬದಲಾಯಿಸಬಹುದು ಎಂಬುದಕ್ಕೆ ಅವರು ಜೀವಂತ ಉದಾಹರಣೆಯಾಗಿದ್ದಾರೆ.
ವಾಷಿಂಗ್ಟನ್, ಫೆಬ್ರುವರಿ 6: ಅಮೆರಿಕದಲ್ಲಿ ನಿರುದ್ಯೋಗ ಪರಿಸ್ಥಿತಿ (US unemployment) ಆತಂಕಕಾರಿ ಮಟ್ಟ ತಲುಪಿರುವಂತಿದೆ. ಆರ್ಥಿಕ ತಜ್ಞರು ನಿರೀಕ್ಷಿಸಿಸುದಕ್ಕಿಂತಲೂ ಹೆಚ್ಚು ಕಳವಳಕಾರಿಯಾಗಿದೆ ಅಲ್ಲಿಯ ಉದ್ಯೋಗನಷ್ಟದ ತೀವ್ರತೆ ಎಂದು ಹೇಳಲಾಗುತ್ತಿದೆ. ಚಾಲೆಂಜರ್, ಗ್ರೇ ಅಂಡ್ ಕ್ರಿಸ್ಮಸ್ (ಸಿಜಿಸಿ) ಎನ್ನುವ ಎಂಪ್ಲಾಯ್ಮೆಂಟ್ ಸರ್ವಿಸ್ ಕಂಪನಿ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜನವರಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಕಡಿತ ಮಾಡಲಾಗಿದೆಯಂತೆ. ಇದು 2009ರ ನಂತರ ಯಾವುದೇ ಜನವರಿ ತಿಂಗಳಲ್ಲಿ ಅಮೆರಿಕದಲ್ಲಿ ಕಂಡ ಅತಿಹೆಚ್ಚು ಉದ್ಯೋಗ ಕಡಿತದ ಸಂಖ್ಯೆ ಎನ್ನಲಾಗಿದೆ.
ಚಾಲೆಂಜರ್ ರಿಪೋರ್ಟ್ ಪ್ರಕಾರ 2026ರ ಜನವರಿಯಲ್ಲಿ 1,08,435 ಉದ್ಯೋಗಕಡಿತ ಆಗಿದೆ. ಅಮೆರಿಕದ ಕಾರ್ಮಿಕ ಕ್ಷೇತ್ರ ಈ ಹಿಂದೆ ಮಾಡಿದ್ದ ಅಂದಾಜಿಗಿಂತಲೂ ಹೆಚ್ಚು ದುರ್ಬಲ ಸ್ಥಿತಿಯಲ್ಲಿರುವುದರ ಸೂಚಕ ಇದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಎಂಪ್ಲಾಯ್ಮೆಂಟ್ ಸರ್ವಿಸಸ್ ಕಂಪನಿಯ ಈ ವರದಿ ಮಾತ್ರವಲ್ಲ, ಸರ್ಕಾರದ ಲೇಬರ್ ಸ್ಟಾಟಿಸ್ಟಿಕ್ಸ್ ಬ್ಯೂರೋ ಬಿಡುಗಡೆ ಮಾಡಿದ ದತ್ತಾಂಶವೂ ಕೂಡ ಇಂಥದ್ದೇ ಸ್ಥಿತಿಯತ್ತ ಬೊಟ್ಟು ಮಾಡಿದೆ.
ಅಮೆರಿಕದ ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಮತ್ತೊಂದು ದತ್ತಾಂಶದ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಜಾಬ್ ಓಪನಿಂಗ್ಸ್ 65 ಲಕ್ಷಕ್ಕೆ ಇಳಿಕೆ ಆಗಿದೆ. ನವೆಂಬರ್ನಲ್ಲಿ ಇದು 69 ಲಕ್ಷ ಇತ್ತು. ಡಿಸೆಂಬರ್ನಲ್ಲಿ ಜಾಬ್ ಓಪನಿಂಗ್ಸ್ ಅಥವಾ ಹೊಸ ಉದ್ಯೋಗಾವಕಾಶ ಪ್ರಮಾಣದಲ್ಲಿ 4 ಲಕ್ಷ ಕಡಿಮೆ ಆಗಿದೆ. 2020ರ ನಂತರ ಇದು ಅತ್ಯಂತ ಕಡಿಮೆ ಮಟ್ಟದ ಜಾಬ್ ಓಪನಿಂಗ್ಸ್ ಎಂದು ಹೇಳಲಾಗುತ್ತಿದೆ.
ಎಡಿಪಿ ಎನ್ನುವ ಖಾಸಗಿ ಎಚ್ಆರ್ ಸರ್ವಿಸ್ ಕಂಪನಿ ಬಿಡುಗಡೆ ಮಾಡಿದ ಮತ್ತೊಂದು ದತ್ತಾಂಶ ಕೂಡ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿನ ಮಟ್ಟದಲ್ಲಿರುವುದನ್ನು ಸೂಚಿಸಿದೆ. ಎಡಿಪಿ ಬಿಡುಗಡೆ ಮಾಡಿದ ಡಾಟಾ ಪ್ರಕಾರ, ಖಾಸಗಿ ವಲಯದ ಕಂಪನಿಗಳು ಜನವರಿಯಲ್ಲಿ 22,000 ನೇಮಕಾತಿ ಮಾತ್ರ ಮಾಡಿಕೊಂಡಿದ್ದಾರೆ.
ಹಾಗೆಯೇ, ಮತ್ತೊಂದು ದತ್ತಾಂಶದ ಪ್ರಕಾರ ಜನವರಿಯಲ್ಲಿ ನಿರುದ್ಯೋಗ ವಿಮೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇವೆಲ್ಲವೂ ಕೂಡ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು ಗಂಭೀರ ಸ್ಥಿತಿಗೆ ಜಾರುವ ಲಕ್ಷಣಗಳನ್ನು ಸೂಚಿಸುತ್ತಿವೆ. ಆದರೆ, ಈ ದತ್ತಾಂಶಗಳು ನಿರುದ್ಯೋಗ ಹೆಚ್ಚುತ್ತಿರುವುದನ್ನು ಸಂಕೇತಿಸಿದರೆ, ಡಿಸೆಂಬರ್ ತಿಂಗಳ ನಿರುದ್ಯೋಗ ದರ ಶೇ. 4.4ರಷ್ಟು ಮಾತ್ರವೇ ಇದೆ. ಇದು ಕಳವಳಕಾರಿ ಎಂದು ಹೇಳುವಷ್ಟು ದೊಡ್ಡ ಮಟ್ಟದ ನಿರುದ್ಯೋಗ ಸಮಸ್ಯೆಯಲ್ಲ. ಆದರೆ, ಜನವರಿಯಿಂದ ಅಮೆರಿಕದಲ್ಲಿ ನಿರುದ್ಯೋಗ ದರ ಏರಿಕೆಯ ಟ್ರೆಂಡ್ಗೆ ಹೋಗುತ್ತಾ ಕಾದು ನೋಡಬಹುದು.