ಬೆಂಗಳೂರು, ಜೂ.8: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಈ ಸೌಜನ್ಯದ ಭೇಟಿಯು ರಾಜ್ಯ ರಾಜಕಾರಣದಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಭೇಟಿಯ ಸಂದರ್ಭದಲ್ಲಿ, ಡಿಕೆ ಶಿವಕುಮಾರ್ ಮತ್ತು ಜಗದೀಶ್ ಶೆಟ್ಟರ್ ನಡುವೆ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ಲಿದ್ದ ಹಲವರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಿಂದೆ ಪ್ರಮುಖ ನಾಯಕರಾಗಿ ಹಲವು ಬಾರಿ ಶೆಟ್ಟರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳಲಾಯಿತು. ಮುಂದಿನ ರಾಜ್ಯಸಭೆ ಚುನಾವಣೆಗಳು, ವಿಧಾನ ಪರಿಷತ್ ಟಿಕೆಟ್ ಹಂಚಿಕೆ, ಹಾಗೂ ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಈ ಭೇಟಿಯಲ್ಲಿ ಪ್ರಮುಖ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪಕ್ಷದೊಳಗಿನ ಕಾರ್ಯತಂತ್ರಗಳು ಮತ್ತು ಮುಂಬರುವ ಚುನಾವಣಾ ಸಿದ್ಧತೆಗಳ ಕುರಿತು ಚರ್ಚಿಸಲು ಈ ಭೇಟಿ ಸಹಕಾರಿಯಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಇದೇ ಜೂನ್ 12 ರಿಂದ ಅದ್ಧೂರಿಯಾಗಿ ಆರಂಭವಾಗಲಿದೆ. 24 ದಿನಗಳ ಈ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಭಾರತ ಜೂನ್ 14 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇನ್ನು ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಈ ಪ್ರತಿಷ್ಠಿತ ಮೆಗಾ ಈವೆಂಟ್ನಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಂತಹ ಬಲಿಷ್ಠ ತಂಡಗಳು ಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿಯುತ್ತಿವೆ. ಆದರೆ ಅದಕ್ಕೂ ಮುನ್ನ ಈ ಟೂರ್ನಮೆಂಟ್ನ ಇತಿಹಾಸದಲ್ಲಿ ಅತಿ ಹೆಚ್ಚು ಫೈನಲ್ಗಳನ್ನು ಆಡಿದ ತಂಡಗಳು ಯಾವುವು ಎಂಬುದನ್ನು ನೋಡೋಣ.
ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ
ಮಹಿಳಾ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡ ಅತಿ ಹೆಚ್ಚು ಫೈನಲ್ಗಳನ್ನು ಆಡಿದ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೆ ನಡೆದ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ 7 ಬಾರಿ ಫೈನಲ್ ತಲುಪಿ ದಾಖಲೆ ನಿರ್ಮಿಸಿದೆ. ಈ ಪೈಕಿ ಆರು ಬಾರಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿದಿದೆ. 2016 ರಲ್ಲಿ ಮಾತ್ರ ವೆಸ್ಟ್ ಇಂಡೀಸ್ ತಂಡವು ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈ ಬಾರಿಯೂ ಕಾಂಗರೂ ತಂಡವು ಪ್ರಶಸ್ತಿ ಫೇವರಿಟ್ ಆಗಿ ಕಣಕ್ಕೆ ಇಳಿಯುತ್ತಿದೆ.
ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್
ಆಸ್ಟ್ರೇಲಿಯಾ ನಂತರ ಅತಿ ಹೆಚ್ಚು ಬಾರಿ ಫೈನಲ್ ತಲುಪಿದ ತಂಡ ಇಂಗ್ಲೆಂಡ್. ಇಂಗ್ಲೆಂಡ್ ತಂಡ ಒಟ್ಟು ನಾಲ್ಕು ಬಾರಿ ಫೈನಲ್ನಲ್ಲಿ ಆಡಿದೆ. ಆದರೆ ಮೂರು ಬಾರಿ ಫೈನಲ್ನಲ್ಲಿ ಸೋತಿರುವ ಇಂಗ್ಲೆಂಡ್ 2009 ರಲ್ಲಿ ಮಾತ್ರ ಚಾಂಪಿಯನ್ ಆಗಿದೆ. ಉಳಿದಂತೆ 2012, 2014 ಮತ್ತು 2018 ರ ಫೈನಲ್ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಹೀನಾಯವಾಗಿ ಸೋತಿದೆ.
3ನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್
ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಇದುವರೆಗೆ ಮೂರು ಬಾರಿ ಫೈನಲ್ ತಲುಪಿದೆ. ಕಿವೀಸ್ ಪಡೆ 2009 ಮತ್ತು 2010 ರಲ್ಲಿ ಫೈನಲ್ ತಲುಪಿದೆಯಾದರೂ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೆ 2024 ರ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು ಕಳೆದ ಎರಡು ಆವೃತ್ತಿಗಳಲ್ಲಿ (2023 ಮತ್ತು 2024) ಫೈನಲ್ನಲ್ಲಿ ಆಡಿದೆಯಾದರೂ ದುರದೃಷ್ಟವಶಾತ್ ಎರಡೂ ಬಾರಿಯೂ ರನ್ನರ್ ಅಪ್ ಆಗಿಯೇ ಉಳಿದಿದೆ.
ಟೀಮ್ ಇಂಡಿಯಾ ವಿಷಯಕ್ಕೆ ಬಂದರೆ, 2020 ರಲ್ಲಿ ಭಾರತೀಯ ಮಹಿಳಾ ತಂಡ ಇಲ್ಲಿಯವರೆಗೆ ಒಮ್ಮೆ ಮಾತ್ರ ಫೈನಲ್ ತಲುಪಿದೆ. ಆದರೆ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನು ಎದುರಿಸಬೇಕಾಯಿತು. ಆದಾಗ್ಯೂ, ಈ ಬಾರಿ, ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ, ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕಿಳಿದಿದೆ. ಇನ್ನು ವೆಸ್ಟ್ ಇಂಡೀಸ್ ತಂಡವು 2016 ರಲ್ಲಿ ಒಮ್ಮೆ ಮಾತ್ರ ಫೈನಲ್ ತಲುಪಿದ್ದು, ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜೂ.8: ಸಿಲಿಕಾನ್ ಸಿಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಪಾರ್ಟ್ಮೆಂಟ್ ಪರಿಶೀಲನೆ ವರದಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಬೆಂಗಳೂರು ದಕ್ಷಿಣ ವಿಭಾಗದ ಉಪ ಮುಖ್ಯ ವಿದ್ಯುತ್ ನಿರೀಕ್ಷಕರನ್ನು (Deputy Chief Electrical Inspector) ಹಣ ಸಹಿತ ವಶಕ್ಕೆ ಪಡೆದಿದ್ದಾರೆ. ಲೋಕಾ ಬಲೆಗೆ ಬಿದ್ದ ಈ ಭ್ರಷ್ಟ ಅಧಿಕಾರಿಯನ್ನು ಸಿದ್ದಪ್ಪ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ಅಪಾರ್ಟ್ಮೆಂಟ್ ಕಟ್ಟಡದ ಆವರ್ತಕ ಪರಿಶೀಲನೆ ನಡೆಸಲು ಮತ್ತು ಅದಕ್ಕೆ ಸಂಬಂಧಿಸಿದ ಬಾಕಿ ಇರುವ ವಿದ್ಯುತ್ ಸುರಕ್ಷತಾ ವರದಿಗಳನ್ನು ನೀಡಲು ಅಧಿಕಾರಿ ಸಿದ್ದಪ್ಪ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯುತ್ ಗುತ್ತಿಗೆದಾರರಾದ ರಘುರಾಜ್ ಮತ್ತು ನಾಗರಾಜ್ ಅವರು ಭ್ರಷ್ಟ ಅಧಿಕಾರಿಗೆ ಪಾಠ ಕಲಿಸಲು ನಿರ್ಧರಿಸಿ, ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದರು.
ಲೋಕಾಯುಕ್ತ ಅಧಿಕಾರಿಗಳ ಮಾರ್ಗದರ್ಶನದಂತೆಯೇ ಇಂದು ದೂರುದಾರರಾದ ರಘುರಾಜ್ ಮತ್ತು ನಾಗರಾಜ್ ಅವರು ಅಧಿಕಾರಿ ಸಿದ್ದಪ್ಪ ಅವರನ್ನು ಭೇಟಿಯಾಗಿ, ಅವರು ಕೇಳಿದ್ದ 20,000 ರೂಪಾಯಿ ಲಂಚದ ಹಣವನ್ನು ಹಸ್ತಾಂತರಿಸುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ಗಳ ತಂಡ ದಾಳಿ ನಡೆಸಿ, ಲಂಚದ ಹಣದೊಂದಿಗೆ ಸಿದ್ದಪ್ಪನನ್ನು ಸ್ಥಳದಲ್ಲೇ ಟ್ರ್ಯಾಪ್ ಮಾಡಿದೆ. ಸದ್ಯ ಆರೋಪಿ ಸಿದ್ದಪ್ಪನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ಲಂಚದ ಹಣವನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.
ಮೊಬೈಲ್ ಲೈಸೆನ್ಸ್ಗೆ ಲಂಚ ಪಡೆದು ಸಿಕ್ಕಿಬಿದ್ದ ಲೇಡಿ ಆಫೀಸರ್ ವಾಣಿಶ್ರೀ:
ಲಂಚ ಸ್ವೀಕರಿಸುತ್ತಿದ್ದ ಕಾನೂನು ಮಾಪನಶಾಸ್ತ್ರ ಇಲಾಖೆಯ ಮಹಿಳಾ ಅಧಿಕಾರಿಯನ್ನು ಸಾಕ್ಷಿ ಸಮೇತ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ನಾಗರಭಾವಿಯಲ್ಲಿರುವ ಕಚೇರಿಯ ಸಹಾಯಕ ನಿಯಂತ್ರಕಿ ಎಂ.ಎಸ್. ವಾಣಿಶ್ರೀ ಲೋಕಾಯುಕ್ತರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ. ದೂರುದಾರರು ಮೊಬೈಲ್ ಆಕ್ಸೆಸರೀಸ್ ಪ್ಯಾಕೇಜಿಂಗ್ ಪರವಾನಗಿ ಪಡೆಯಲು ಕಾನೂನು ಮಾಪನಶಾಸ್ತ್ರ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪರವಾನಗಿ ನೀಡಲು ಸಹಾಯಕ ನಿಯಂತ್ರಕಿ ವಾಣಿಶ್ರೀ ಅವರು ಒಟ್ಟು 10,000 ರೂಪಾಯಿ ಲಂಚ ನೀಡುವಂತೆ ದೂರುದಾರರಿಗೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದರು. ಅಧಿಕಾರಿಯ ಕಿರುಕುಳದಿಂದ ಬೇಸತ್ತ ಅರ್ಜಿದಾರರು ತಕ್ಷಣವೇ ಈ ಬಗ್ಗೆ ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಅಧಿಕಾರಿಗಳ ಮಾಸ್ಟರ್ ಪ್ಲಾನ್ನಂತೆ, ಇಂದು ದೂರುದಾರರು ಲಂಚದ ಒಟ್ಟು ಮೊತ್ತದ ಪೈಕಿ ಮೊದಲ ಕಂತಾಗಿ 5,000 ರೂಪಾಯಿ ನಗದು ಹಣವನ್ನು ನಾಗರಭಾವಿ ಕಚೇರಿಯಲ್ಲಿ ಅಧಿಕಾರಿ ವಾಣಿಶ್ರೀ ಅವರಿಗೆ ಹಸ್ತಾಂತರಿಸುತ್ತಿದ್ದರು. ಈ ವೇಳೆ ಹೊಂಚು ಹಾಕಿದ್ದ ಲೋಕಾಯುಕ್ತ ಎಸ್ಪಿ (SP) ಶಿವಪ್ರಕಾಶ್ ದೇವರಾಜ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಕಚೇರಿಯ ಮೇಲೆ ಧಿಡೀರ್ ದಾಳಿ ನಡೆಸಿ, ಲಂಚದ ಹಣದೊಂದಿಗೆ ವಾಣಿಶ್ರೀ ಅವರನ್ನು ಹಿಡಿದಿದ್ದಾರೆ. ಸದ್ಯ ಮಹಿಳಾ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ಬೆಂಗಳೂರು, (ಜೂನ್ 08): 2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು (Poll strategist Sunil Kanugolu) ಅವರನ್ನು ಸಿಎಂ ಡಿಕೆ ಶಿವಕುಮಾರ್(DK Shivakumar) ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಬಳ್ಳಾರಿ ಮೂಲದ ಈ ಸುನೀಲ್ ಕನುಗೋಳು ಹಿಂದೆ ಸಿದ್ದರಾಮಯ್ಯನವರ ಸಲಹೆಗಾರರಾಗಿದ್ದರು. ಇದೀಗ ಅವರನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಡಿಕೆ ಶಿವಕುಮಾರ್ ಅವರ ಸಲಹೆಗಾರರನ್ನಾಗಿ ನೇಮಕ ಮಾಡಿ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕ ಮಾಡಲಾಗಿದ್ದು, ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಹಾಗೂ ಎಲ್ಲ ಸೌಕರ್ಯಗಳನ್ನು ಒದಗಿಸುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಗೆಲ್ಲಲು ಸುನೀಲ್ ಕನುಗೋಳು ಅವರ ಚುನಾವಣಾ ತಂತ್ರಗಾರಿಕೆ ಬಹಳಷ್ಟು ಕೆಲಸ ಮಾಡಿದೆ. ಈಗಾಗಿ ಸರ್ಕಾರದ ಮಟ್ಟದಲ್ಲೂ ಅವರ ತಂತ್ರಗಾರಿಕೆಯನ್ನು ಬಳಸಿಕೊಳ್ಳಲು ಸಿದ್ದರಾಮಯ್ಯ ನಿರ್ಧರಿಸಿದ್ದು, ಸುನೀಲ್ ಕನುಗೋಳು ಅವರನ್ನು ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ಇದೀಗ ಡಿಕೆ ಶಿವಕುಮಾರ್ ಸಹ ಅದೇ ಮಾದರಿಯನ್ನು ಅನುಸರಿಸಿದ್ದಾರೆ.
ಯಾರು ಈ ಸುನೀಲ್ ಕನುಗೋಳು!
ಕರ್ನಾಟಕದ ಬಳ್ಳಾರಿ ಮೂಲದವರಾದ ಸುನೀಲ್ ಕನುಗೋಳು ಬೆಳೆದಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಬಳಿಕ ಚುನಾವಣಾ ತಂತ್ರಗಾರರಾಗಿ ಕೆಲಸ ಆರಂಭಿಸಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪರ ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡಿದ್ದರು. ಅದಲ್ಲದೇ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ತಂಡದಲ್ಲಿ ಪ್ರಮುಖ ಪಾತ್ರವನ್ನು ಸುನೀಲ್ ಕನುಗೋಳು ನಿರ್ವಹಿಸಿದ್ದರು.
ಇನ್ನು, 2014ರ ಲೋಕಸಭಾ ಚುನಾವಣೆ, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಸುನೀಲ್ ಕನುಗೋಳು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪರ ಕೆಲಸ ಮಾಡಿದ್ದರು. ಬಳಿಕ 2021ರಲ್ಲಿ ಡಿಎಂಕೆ ಪರ ತಂತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿಯ ಬಿಲಿಯನ್ ಮೈಂಡ್ಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.
ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ಗೆ ಹತ್ತಿರವಾದ ಸುನೀಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯೋಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಭಾರತ್ ಜೋಡೋ ಯಾತ್ರೆಯ ರೂಪುರೇಷೆಯನ್ನು ಸುನೀಲ್ ಕನುಗೋಳು ಸಿದ್ಧಪಡಿಸಿದ್ದು, ಅದು ಕರ್ನಾಟಕದಲ್ಲಿ ಈ ಯಾತ್ರೆ ಕಾಂಗ್ರೆಸ್ಗೆ ಭಾರೀ ಫಲ ಕೊಟ್ಟಿತ್ತು. ಅದಲ್ಲದೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಸುನೀಲ್ ಕನುಗೋಳು ಅವರ ತಂಡ ನಿರಂತರವಾಗಿ ಕೆಲಸ ಮಾಡಿತ್ತು. ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲೂ ಕನುಗೋಳು ಕೊಟ್ಟ ಸಲಹೆಗಳಂತೆ ಮತದಾರರಿಗೆ ಭರವಸೆಗಳನ್ನ ನೀಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ಅಭೂತಪೂರ್ವಾಗಿ ಗೆಲ್ಲುವಲ್ಲಿ ಯಶಸ್ವಿ ಆಯ್ತು.
ಸ್ಯಾಂಡಲ್ವುಡ್ನ ಸ್ಟಾರ್ ನಟ ದುನಿಯಾ ವಿಜಯ್ (Duniya Vijay) ಈಗ ಮತ್ತೊಂದು ಭರ್ಜರಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸ್ಟಾರ್ ಡೈರೆಕ್ಟರ್ ಪುರಿ ಜಗನ್ನಾಥ್ (Puri Jagannadh) ಮತ್ತು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ (Slum Dog) ಚಿತ್ರದಲ್ಲಿ ದುನಿಯಾ ವಿಜಯ್ ಭೀಕರ ವಿಲನ್ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ನ ಅಂತಿಮ ಹಂತದಲ್ಲಿರುವ ಈ ಆ್ಯಕ್ಷನ್ ಡ್ರಾಮಾ ಸಿನಿಮಾದ ಟೀಸರ್, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ಸಿನಿಮಾದ ಕಥೆಯ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗ ಆಗಿಲ್ಲ. ಆದರೆ ಸಿಕ್ಕಾಪಟ್ಟೆ ಕೌತುಕ ನಿರ್ಮಾಣ ಆಗಿದೆ. ವಿಜಯ್ ಸೇತುಪತಿ ರೀತಿಯೇ ದುನಿಯಾ ವಿಜಯ್ ಪಾತ್ರ ಕೂಡ ಸಖತ್ ಹೈಲೈಟ್ ಆಗಿದೆ.
‘33 ಟೆಂಪಲ್ ರೋಡ್’ ಎಂಬ ಕುತೂಹಲಕಾರಿ ಟ್ಯಾಗ್ಲೈನ್ ಹೊಂದಿರುವ ಈ ಸಿನಿಮಾದ ಟೀಸರ್ ಆರಂಭವಾಗುವುದೇ ವಿಜಯ್ ಸೇತುಪತಿ ಅವರ ಖಡಕ್ ಡೈಲಾಗ್ನೊಂದಿಗೆ. ಭಿಕ್ಷುಕರ ಬದುಕು ಮತ್ತು ಅವರನ್ನು ಶೋಷಿಸುವ ದುಷ್ಟರ ವಿರುದ್ಧದ ಎಚ್ಚರಿಕೆಯ ಮಾತುಗಳೊಂದಿಗೆ ಟೀಸರ್ ತೆರೆದುಕೊಳ್ಳುತ್ತದೆ. ಆ್ಯಕ್ಷನ್ ಸೀಕ್ವೆನ್ಸ್ಗಳು, ಎಮೋಷನಲ್ ಸನ್ನಿವೇಶಗಳು ಮತ್ತು ಪಾತ್ರಗಳ ಪರಿಚಯದೊಂದಿಗೆ ಒಂದು ಅಪಾಯಕಾರಿ ಜಗತ್ತನ್ನು ಈ ಟೀಸರ್ ತೋರಿಸುತ್ತದೆ.
‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಸಿನಿಮಾದ ಟೀಸರ್:
ಆದರೆ, ಇಡೀ ಟೀಸರ್ನಲ್ಲಿ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿರುವುದು ವಿಜಯ್ ಸೇತುಪತಿ ಅವರ ಪಾತ್ರದ ರಹಸ್ಯ. ಚಿತ್ರದಲ್ಲಿ ಅವರು ಅಂಧ ಭಿಕ್ಷುಕನಾಗಿ ಕಾಣಿಸಿಕೊಂಡಿದ್ದಾರಾದರೂ, ಅವರ ಪಾತ್ರದ ಹಿಂದೆ ದೊಡ್ಡದೊಂದು ನಿಗೂಢ ಸತ್ಯ ಅಡಗಿದೆ ಎಂಬುದನ್ನು ಟೀಸರ್ ಸೂಚಿಸುತ್ತದೆ. ಅವರು ನಿಜವಾಗಿಯೂ ದೃಷ್ಟಿಹೀನರೇ ಅಥವಾ ಯಾವುದೋ ದೊಡ್ಡ ಉದ್ದೇಶಕ್ಕಾಗಿ ಈ ರೂಪ ಧರಿಸಿದ್ದಾರಾ ಎಂಬ ಕುತೂಹಲವು ಪ್ರೇಕ್ಷಕರಲ್ಲಿ ಮೂಡಿದೆ.
ಯಾವಾಗಲೂ ತಮ್ಮ ಸಿನಿಮಾಗಳಲ್ಲಿ ನಾಯಕನನ್ನು ವಿಭಿನ್ನವಾಗಿ ಪ್ರೆಸೆಂಟ್ ಮಾಡುವ ನಿರ್ದೇಶಕ ಪುರಿ ಜಗನ್ನಾಥ್, ಈ ಬಾರಿಯೂ ವಿಜಯ್ ಸೇತುಪತಿ ಅವರಿಗೆ ರಗಡ್ ಮೇಕ್ ಓವರ್ ನೀಡಿದ್ದಾರೆ. ಈ ಮಾಸ್ ಕಥೆಗೆ ಅಷ್ಟೇ ಬಲಿಷ್ಠವಾಗಿ ಟಕ್ಕರ್ ನೀಡಲು ದುನಿಯಾ ವಿಜಯ್ ಎದುರಾಗಿದ್ದಾರೆ. ಟೀಸರ್ನಲ್ಲಿ ಅವರ ಲುಕ್ ಭೀತಿ ಹುಟ್ಟಿಸುವಂತಿದ್ದು, ಚಿತ್ರದಲ್ಲಿ ಅವರು ಅತ್ಯಂತ ಅಪಾಯಕಾರಿ ವಿಲನ್ ಪಾತ್ರದಲ್ಲಿ ಮಿಂಚಿರುವುದು ಸ್ಪಷ್ಟವಾಗಿದೆ.
ಅಹಮದಾಬಾದ್ನ ಇಕೆಎ ಅರೆನಾದಲ್ಲಿ ನಡೆದ ಉದ್ಘಾಟನಾ ವಿಶ್ವ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಆತಿಥೇಯ ಭಾರತ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಸೋಮವಾರ ಮುಕ್ತಾಯಗೊಂಡ ಈ ಕೂಟದಲ್ಲಿ ಭಾರತವು 102 ಚಿನ್ನದ ಪದಕಗಳೊಂದಿಗೆ ಒಟ್ಟು 114 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಭರ್ಜರಿ ಪ್ರದರ್ಶನ ನೀಡಿದೆ. ಉಳಿದಂತೆ ಜಪಾನ್ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಅರ್ಜೆಂಟೀನಾದ ಕ್ರೀಡಾಪಟು ನಬೀಲಾ ಬರ್ರಾಜಾ ಅವರು ಎರಡು ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ದೇಶವನ್ನು ಮೂರನೇ ಸ್ಥಾನದಲ್ಲಿ ನಿಲ್ಲಿಸಿದರು.
522 ಕ್ರೀಡಾಪಟುಗಳು ಭಾಗವಹಿಸಿದ್ದರು
ಪಕ್ಕದ ರಾಷ್ಟ್ರ ನೇಪಾಳವು ಒಂದು ಚಿನ್ನ, 36 ಬೆಳ್ಳಿ ಮತ್ತು 15 ಕಂಚಿನ ಪದಕಗಳೊಂದಿಗೆ ಒಟ್ಟು 52 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿತು. ಉಜ್ಬೇಕಿಸ್ತಾನ್ ಒಂದು ಚಿನ್ನ, 13 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ ಒಟ್ಟು 25 ಪದಕಗಳನ್ನು ಗಳಿಸಿತು. ಈ ಚಾಂಪಿಯನ್ಶಿಪ್ನಲ್ಲಿ 79 ದೇಶಗಳ ಒಟ್ಟು 522 ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ 31 ದೇಶಗಳ ಕ್ರೀಡಾಪಟುಗಳು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು ಮತ್ತು ಹತ್ತು ದೇಶಗಳು ಕನಿಷ್ಠ ಒಂದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡವು.
2030ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯ ವಹಿಸಲಿರುವ ಅಹಮದಾಬಾದ್ನಲ್ಲಿ ನಡೆದ ಈ ಚಾಂಪಿಯನ್ಶಿಪ್, ಪ್ರಾಚೀನ ಭಾರತೀಯ ಕಲೆಯಾದ ಯೋಗಾಸನವನ್ನು ಜಾಗತಿಕ ಸ್ಪರ್ಧಾತ್ಮಕ ಕ್ರೀಡೆಯಾಗಿ ಪರಿವರ್ತಿಸುವಲ್ಲಿ ಮತ್ತು ಅದನ್ನು ಒಲಿಂಪಿಕ್ ಕ್ರೀಡಾಕೂಟದತ್ತ ಕೊಂಡೊಯ್ಯುವಲ್ಲಿ ಒಂದು ಐತಿಹಾಸಿಕ ಘಟ್ಟವಾಗಿದೆ. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಆಯುಷ್ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ (SAI), ಗುಜರಾತ್ ಕ್ರೀಡಾ ಪ್ರಾಧಿಕಾರ, ಗುಜರಾತ್ ಪ್ರವಾಸೋದ್ಯಮ ಮತ್ತು ಗುಜರಾತ್ ಯೋಗಾಸನ ಕ್ರೀಡಾ ಸಂಘಗಳು ಈ ಚಾಂಪಿಯನ್ಶಿಪ್ಗೆ ಬೆಂಬಲ ನೀಡಿದ್ದವು.
Yoga
ಆತಿಥೇಯ ಭಾರತವು 122 ಸದಸ್ಯರ ತಂಡವನ್ನು ಕಣಕ್ಕಿಳಿಸಿತ್ತು. ಕ್ರೀಡಾಪಟುಗಳು ಆರು ವಯೋಮಿತಿ ವಿಭಾಗಗಳಲ್ಲಿ ಸ್ಪರ್ಧಿಸಿದರು: ಸಬ್-ಜೂನಿಯರ್ (10-14 ವರ್ಷ), ಜೂನಿಯರ್ (14-18 ವರ್ಷ), ಸೀನಿಯರ್ (18-28 ವರ್ಷ), ಸೀನಿಯರ್ ಎ (28-35 ವರ್ಷ), ಸೀನಿಯರ್ ಬಿ (35-45 ವರ್ಷ) ಮತ್ತು ಸೀನಿಯರ್ ಸಿ (45-55 ವರ್ಷ).
ಜಾಗತಿಕ ಚಳುವಳಿಯ ಆರಂಭ
ವೀಡಿಯೊ ಸಂದೇಶವೊಂದರಲ್ಲಿ ಮಾತನಾಡಿದ ವಿಶ್ವ ಯೋಗಾಸನದ ಅಧ್ಯಕ್ಷ ಯೋಗಋಷಿ ಸ್ವಾಮಿ ರಾಮದೇವ್ ಜಿ ಮಹಾರಾಜ್, “ವಿಶ್ವ ಯೋಗಾಸನ ಚಾಂಪಿಯನ್ಶಿಪ್ ಕೇವಲ ಒಂದು ಗಮ್ಯಸ್ಥಾನವಲ್ಲ; ಇದು ಜಾಗತಿಕ ಚಳುವಳಿಯ ಆರಂಭವಾಗಿದೆ. ಯೋಗವು ಕೇವಲ ಕ್ರೀಡೆಯಲ್ಲ—ಅದು ಜೀವನಶೈಲಿ, ಆರೋಗ್ಯ, ಸಾಮರಸ್ಯ, ಶಾಂತಿ ಮತ್ತು ಮಾನವ ಐಕ್ಯತೆಯ ಮಾರ್ಗವಾಗಿದೆ” ಎಂದು ತಿಳಿಸಿದರು.
ಫಲಿತಾಂಶಗಳ ಪ್ರಕಾರ, ಆರ್ಟಿಸ್ಟಿಕ್ ಪೇರ್ (Artistic Pair) ಸಬ್-ಜೂನಿಯರ್ ಮಹಿಳೆಯರ ವಿಭಾಗದಲ್ಲಿ ಭಾರತದ ಇಶಿಕಾ ಗುಚೈತ್ ಮತ್ತು ಇಶಾನ್ವಿ (90.89) ಚಿನ್ನದ ಪದಕ ಗೆದ್ದರೆ, ಜಾಂಬಿಯಾದ ನಿಯಾ ವಿಜಯ್ವರ್ಗೀಯ ಮತ್ತು ಆರೋಹಿ ಲೋಖಂಡೆ (82.38) ಬೆಳ್ಳಿ ಹಾಗೂ ಜಪಾನ್ನ ರೆಂಕಾ ಅಯೋಕಿ ಮತ್ತು ಇಚಿಕಾ ಶಿಮಿಜು (60.34) ಕಂಚಿನ ಪದಕ ಪಡೆದರು. ಜೂನಿಯರ್ ಮಹಿಳೆಯರ ವಿಭಾಗದಲ್ಲಿ ಭಾರತದ ದೀಪಾ ಲೋಧಿ ಮತ್ತು ಸಿಮಾ ನಿಯೋಪಾನೆ (90.42) ಚಿನ್ನ, ನೇಪಾಳದ ಸ್ವೀಕ್ಷ್ಯ ಥಾಪಾ ಮತ್ತು ಪ್ರಜ್ಞಾ ಗೌತಮ್ (56.39) ಬೆಳ್ಳಿ ಹಾಗೂ ಜಾಂಬಿಯಾದ ಟಸಿಲಾ ಬ್ಲೆಸ್ಸಿಂಗ್ಸ್ ಫಿರಿ ಮತ್ತು ಡೆಬೊರಾ (41.30) ಕಂಚಿನ ಪದಕಗಳನ್ನು ಗೆದ್ದುಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸರಣಿಯ ಬಳಿಕ ಭಾರತ ಟಿ20 ತಂಡ, ಟಿ20 ಸರಣಿಗಾಗಿ ಐರ್ಲೆಂಡ್ ಹಾಗೂ ಇಂಗ್ಲೆಂಡ್ (India vs England) ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಹೊಸ ನಾಯಕನೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಶ್ರೇಯಸ್ ಅಯ್ಯರ್ (Shreyas Iyer) ಭಾರತ ಟಿ20 ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದು, ಅವರ ನೇತೃತ್ವದಲ್ಲಿ ಭಾರತದ ಯುವ ಪಡೆ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿ ಕೂಡ ಈಗಾಗಲೇ ಪ್ರಕಟವಾಗಿತ್ತು. ಆದರೀಗ ಈ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಅಂದರೆ ಈ ಸರಣಿಯ ಪಂದ್ಯಗಳ ಆರಂಭದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಪಂದ್ಯಗಳ ಸಮಯದಲ್ಲಿ ಬದಲಾವಣೆ
ಈ ಮೊದಲು ಐದು ಪಂದ್ಯಗಳ ಟಿ20 ಸರಣಿ ಭಾರತೀಯ ಕಾಲಮಾನ ರಾತ್ರಿ 11 ಗಂಟೆಗೆ ಆರಂಭವಾಗಬೇಕಿತ್ತು. ಆದರೀಗ ಪಂದ್ಯಗಳನ್ನು ಒಂದು ಗಂಟೆ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಅಂದರೆ ಪಂದ್ಯಗಳು ಈಗ ರಾತ್ರಿ 11 ಗಂಟೆಗೆ ಬದಲು ರಾತ್ರಿ 10 ಗಂಟೆಗೆ ಆರಂಭವಾಗಲಿವೆ. ಸರಣಿಯ ಮೂರು ಪಂದ್ಯಗಳು ರಾತ್ರಿ 10 ಗಂಟೆಗೆ ಆರಂಭವಾದರೆ ಉಳಿದ ಎರಡು ಪಂದ್ಯಗಳು ರಾತ್ರಿ 7 ಗಂಟೆಗೆ ಪ್ರಾರಂಭವಾಗಲಿವೆ. ಈ ಸರಣಿಯ ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಪ್ರಸಾರವಾಗಲಿವೆ.
ಟಿ20 ಸರಣಿಯ ಸಂಪೂರ್ಣ ವೇಳಾಪಟ್ಟಿ
ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಜುಲೈ 1 ರಂದು ಆರಂಭವಾಗಲಿದ್ದು, ಎರಡೂ ತಂಡಗಳು ಐದು ಟಿ20 ಪಂದ್ಯಗಳನ್ನು ಆಡಲಿವೆ. ಮೊದಲ ಪಂದ್ಯ ಚೆಸ್ಟರ್-ಲೆ-ಸ್ಟ್ರೀಟ್ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಜುಲೈ 4 ರಂದು ಮ್ಯಾಂಚೆಸ್ಟರ್ನಲ್ಲಿ ನಡೆಯಲಿದೆ. ಐದು ಪಂದ್ಯಗಳ ಟಿ20 ಸರಣಿಯು ಜುಲೈ 11 ರವರೆಗೆ ನಡೆಯಲಿದೆ.
ಮೊದಲ ಟಿ20- ಜುಲೈ 1
ಎರಡನೇ ಟಿ20- ಜುಲೈ 4
ಮೂರನೇ ಟಿ20- ಜುಲೈ 7
4ನೇ ಟಿ20- ಜುಲೈ 9
5ನೇ ಟಿ20- ಜುಲೈ 11
ಟಿ20 ಸರಣಿಯ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಏಕದಿನ ಸರಣಿಯೂ ನಡೆಯಲಿದೆ. ಈ ಏಕದಿನ ಸರಣಿಯು ಜುಲೈ 14 ರಿಂದ ಜುಲೈ 19 ರವರೆಗೆ ನಡೆಯಲಿದೆ. ಬಿಸಿಸಿಐ ಇನ್ನೂ ಏಕದಿನ ಸರಣಿಗೆ ತಂಡವನ್ನು ಘೋಷಿಸಿಲ್ಲ.
ಮಂಗಳೂರು, ಜೂ.8: ಮಳೆಗಾಲದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ವಿಪತ್ತುಗಳನ್ನು ಎದುರಿಸಲು ಅಧಿಕಾರಿಗಳು ಅತ್ಯಂತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ತುರ್ತು ಸಂದರ್ಭ ಎದುರಾದಾಗ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಮೀರಿಯೂ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆದೇಶಿಸಿದರು.
ಸಭೆಯಲ್ಲಿ ರಸ್ತೆಗಳ ದುರಸ್ತಿ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಮಳೆಗಾಲದಲ್ಲಿ ರಸ್ತೆ ಹೊಂಡಗಳಿಂದಾಗಿ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಉಂಟಾದರೆ, ಅದಕ್ಕೆ ಸಂಬಂಧಿಸಿದ ಇಲಾಖೆಯ ಇಂಜಿನಿಯರ್ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು. ಕೇವಲ ತಾತ್ಕಾಲಿಕವಾಗಿ ಪದೇ ಪದೇ ಗುಂಡಿ ಮುಚ್ಚುವ ನಾಟಕವಾಡುವುದನ್ನು ಬಿಟ್ಟು, ರಸ್ತೆಗಳ ಶಾಶ್ವತ ಕಾಮಗಾರಿಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸೂಚಿಸಿದರು.
ಮಳೆಗಾಲದಲ್ಲಿ ಸುರಿಯುವ ಭಾರೀ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಮುರಿದು ಬಿದ್ದು ಉಂಟಾಗುವ ಅನಾಹುತಗಳನ್ನು ಮತ್ತು ಮಾನವ ನಿರ್ಮಿತ ಸಮಸ್ಯೆಗಳನ್ನು ತಗ್ಗಿಸಲು ಇಲಾಖೆ ಗಮನಹರಿಸಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡರೆ ತ್ವರಿತವಾಗಿ ಮರುಸ್ಥಾಪಿಸಲು ಹೆಚ್ಚುವರಿ ಲೈನ್ಮ್ಯಾನ್ಗಳು ಹಾಗೂ ತುರ್ತು ವಾಹನಗಳನ್ನು ಬಳಸಿಕೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ನೆರೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡರೆ ಅಥವಾ ಮರಗಳು ಬಿದ್ದರೆ ಆಯಾ ಸ್ಥಳೀಯ ಸಂಸ್ಥೆಗಳು ಯಾವುದೇ ವಿಳಂಬ ಮಾಡದೇ ತಕ್ಷಣವೇ ತೆರವುಗೊಳಿಸಬೇಕು ಎಂದರು.
ವಿಪತ್ತು ನಿರ್ವಹಣೆಯನ್ನು ತಳಮಟ್ಟದಿಂದಲೇ ಬಲಪಡಿಸಲು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸಚಿವರು ಆದೇಶಿಸಿದರು. ಯಾವುದೇ ಭಾಗದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಾಗ ಸ್ಥಳೀಯ ಸಂಘ-ಸಂಸ್ಥೆಗಳನ್ನು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ ಸಚಿವರು, ಮಳೆಗಾಲದ ಸವಾಲುಗಳನ್ನು ಎದುರಿಸಲು ಇಡೀ ಜಿಲ್ಲಾಡಳಿತ ಸನ್ನದ್ಧವಾಗಿರಬೇಕು ಎಂದು ಸೂಚನೆ ನೀಡಿದರು.
ನವದೆಹಲಿ, ಜೂನ್ 8: ಇರಾನ್ (Iran War) ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷ ಹಾಗೂ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ನಾಗರಿಕರಿಗಾಗಿ ಹೊಸ ಎಚ್ಚರಿಕೆಗಳನ್ನು ನೀಡಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಭಾರತೀಯ ನಾಗರಿಕರಿಗೆ ಇರಾನ್ಗೆ ಪ್ರಯಾಣಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎರಡೂ ದೇಶಗಳ ನಡುವೆ ಮಿಲಿಟರಿ ದಾಳಿ ನಿಲ್ಲುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮದ ಮಾತುಕತೆಗಳು ನಡೆಯುತ್ತಿದ್ದರೂ ಪರಸ್ಪರ ಇಂಧನ ಹಾಗೂ ಮಿಲಿಟರಿ ನೆಲೆಗಳ ಮೇಲೆ ದಾಳಿಗಳು ಮುಂದುವರಿದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಇರಾನ್ನಲ್ಲಿ ವಾಸಿಸುತ್ತಿರುವ ಅಥವಾ ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸಕ್ಕಾಗಿ ಅಲ್ಲಿಗೆ ಹೋಗಿರುವ ಎಲ್ಲಾ ಭಾರತೀಯ ನಾಗರಿಕರು ತಕ್ಷಣವೇ ಇರಾನ್ ತೊರೆದು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದೆ. ಇರಾನ್ ತನ್ನ ವಾಯುಪ್ರದೇಶವನ್ನು ಯಾವುದೇ ಕ್ಷಣದಲ್ಲಾದರೂ ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆ ಇರುವುದರಿಂದ, ವಿಮಾನ ಯಾನ ಸೇವೆಗಳು ಸ್ಥಗಿತಗೊಳ್ಳುವ ಮುನ್ನವೇ ದೇಶ ತೊರೆಯಲು ಸೂಚಿಸಲಾಗಿದೆ.
ಇರಾನ್ನಿಂದ ತಕ್ಷಣವೇ ಹೊರಬರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಭಾರತೀಯರಿಗೆ ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲು ತಿಳಿಸಿದೆ. ಇರಾನ್ನಲ್ಲಿರುವ ಎಲ್ಲಾ ಭಾರತೀಯರು ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ತಕ್ಷಣವೇ ಸಂಪರ್ಕ ಸಾಧಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿದೆ. ಇರಾನ್ ದೇಶದ ಒಳಗಡೆಯೂ ಅನಗತ್ಯವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿದೆ. ವಸತಿ ಪ್ರದೇಶಗಳಿಂದ ದೂರವಿರದೆ, ಸುರಕ್ಷಿತ ಕಟ್ಟಡಗಳು ಅಥವಾ ಆಶ್ರಯ ತಾಣಗಳಲ್ಲಿ ಇರಬೇಕಾಗಿ ವಿನಂತಿಸಲಾಗಿದೆ.
ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 24/7 ತುರ್ತು ಸಹಾಯವಾಣಿಯನ್ನು ತೆರೆದಿದ್ದು, ಯಾವುದೇ ಆಪತ್ತಿನ ಸಮಯದಲ್ಲಿ ಭಾರತೀಯ ನಾಗರಿಕರು ರಾಯಭಾರ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ಭಾರತ ಸರ್ಕಾರವು ಅಲ್ಲಿರುವ ತನ್ನ ನಾಗರಿಕರ ಸುರಕ್ಷತೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಪ್ರಸ್ತುತ ಇರಾನ್ನಲ್ಲಿ ಸುಮಾರು 7,500 ಭಾರತೀಯರು ಸಿಲುಕಿಕೊಂಡಿದ್ದಾರೆ, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ಸಂಬಂಧಿಸಿದ ಕಾರಣಗಳಿಗಾಗಿ ಅಲ್ಲಿದ್ದಾರೆ. ಅರ್ಮೇನಿಯಾ ಮತ್ತು ಅಜೆರ್ಬೈಜಾನ್ನ ಭೂ ಗಡಿಗಳ ಮೂಲಕ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತೀಯ ರಾಯಭಾರ ಕಚೇರಿ ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಗಲಕೋಟೆ, (ಜೂನ್ 08): ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯನ್ನು ನಾಲ್ಕು ಗಂಟೆಗಳವರೆಗೆ ಉಪ್ಪಿನಲ್ಲಿ ಮುಚ್ಚಿದರೆ ಮತ್ತೆ ಬದುಕಿಸಬಹುದು ಎನ್ನುವ ಮೂಢನಂಬಿಕೆ ಸಂದೇಶ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇರುತ್ತೆ. ಆದ್ರೆ, ಇದರ ಸತ್ಯಾಸತ್ಯೆ ಬಾಗಲಕೋಟೆಯ ಮಗುವಿನ ಮೇಲೆ ಪ್ರಯೋಗ ಮಾಡಿದಾಗ ಅನಾವರಣಗೊಂಡಿದೆ. ಹೌದು…ಬಾಗಲಕೋಟೆಯ (Bagalkot) ನವನಗರದಲ್ಲಿ 18 ತಿಂಗಳ ಹೆಣ್ಣು ಮಗುವೊಂದು ನೀರಿನ ಟ್ಯಾಂಕ್ಗೆ ಬಿದ್ದು ಮೃತಪಟ್ಟಿದೆ. ಮಗು ಅಮೀನಾ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಎದುರಿನ ಮನೆಯವರ ಸಂಪ್ಗೆ ಬಿದ್ದಿದೆ. ಆದರೆ, ಮಗುವನ್ನು ಬದುಕಿಸಬಹುದು ಎಂಬ ಮೂಢನಂಬಿಕೆಯಿಂದ, ಪೋಷಕರು ಆಕೆಯ ದೇಹವನ್ನು ಗಂಟೆಗಟ್ಟಲೆ ಉಪ್ಪಿನಲ್ಲಿ ಮುಳುಗಿಸಿಟ್ಟಿದ್ದಾರೆ. ಆದರೂ ಮಗು ಮಾತ್ರ ಬದುಕಲಿಲ್ಲ. ಕೊನೆಗೆ ವೈದ್ಯರ ಸೂಚನೆ ಮೇರೆಗೆ ಮಗುವಿನ ಮೃತ ದೇಹವನ್ನು ಹೊರತೆಗೆಲಾಯ್ತು.
ಮುಖ್ಯಾಂಶಗಳು
ನೀರಿನ ಟ್ಯಾಂಕ್ನಲ್ಲಿ ಮುಳುಗಿ 18 ತಿಂಗಳ ಹೆಣ್ಣು ಮಗು ಸಾವು
ಬಾಗಲಕೋಟೆ ಸೆಕ್ಟರ್ ನಂಬರ್ 38ರಲ್ಲಿ ಅಮೀನಾ ಪಠಾಣ್ ಸಾವು
ಉಪ್ಪಿನಲ್ಲಿ ಮುಳುಗಿಸಿಟ್ಟರೆ ಮಗು ಬದುಕುತ್ತೆ ಎಂಬ ನಂಬಿಕೆ ಹಿನ್ನೆಲೆ
2 ತಾಸಿಗೂ ಹೆಚ್ಚು ಕಾಲ ಉಪ್ಪಿನಲ್ಲಿ ಮುಳುಗಿಸಿಟ್ಟರೂ ಬದುಕದ ಮಗು
ಮಗು ಅಮೀನಾ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಎದುರಿನ ಮನೆಯವರ ಸಂಪ್ಗೆ ಬಿದ್ದಿದೆ. ಮಗು ನೀರಿನಲ್ಲಿ ಮುಳುಗಿದ್ದನ್ನು ತಡವಾಗಿ ಗಮನಿಸಲಾಗಿದ್ದು, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಗು ಮೃತಪಟ್ಟಿದ್ದರೂ ಅದನ್ನು ಒಪ್ಪಿಕೊಳ್ಳದ ಕುಟುಂಬಸ್ಥರು, ಮಗುವನ್ನು ಹೇಗಾದರೂ ಮಾಡಿ ಬದುಕಿಸಲೇಬೇಕು ಎಂದು ಮುಂದಾಗಿದ್ದಾರೆ. ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟರೆ ಮತ್ತೆ ಜೀವ ಬರುತ್ತದೆ ಎಂಬ ಬಲವಾದ ನಂಬಿಕೆ ಅವರದ್ದಾಗಿತ್ತು. ಹೀಗಾಗಿ, ಮಗುವಿನ ಮುಖವನ್ನು ಮಾತ್ರ ಹೊರಗಿಟ್ಟು, ಇಡೀ ದೇಹವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದಾರೆ. ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಬಳಿಯೇ ಮಗುವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದ ಪೋಷಕರು, ಮಗುವಿನ ಕಿವಿಯ ಬಳಿ ಮೊಬೈಲ್ನಲ್ಲಿ ಕುರಾನ್ ಪ್ರಾರ್ಥನೆಯನ್ನು ಹಾಕಿ ಬದುಕಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಸರಿಸುಮಾರು ಎರಡು ತಾಸಿಗೂ ಅಧಿಕ ಕಾಲ ಮಗುವಿನ ದೇಹವನ್ನು ಉಪ್ಪಿನಲ್ಲೇ ಇಟ್ಟಿದ್ದರು. ಆದರೆ ಯಾವುದೇ ಪವಾಡಗಳು ನಡೆಯದಿದ್ದಾಗ ಮತ್ತು ಮಗುವಿನಲ್ಲಿ ಯಾವುದೇ ಚಲನೆ ಕಾಣಿಸದಿದ್ದಾಗ ಪೋಷಕರು ನಿರಾಶೆಗೊಂಡಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಶವ ಹೊರಕ್ಕೆ
ಎರಡು ಗಂಟೆಗಳ ನಂತರ ಸ್ಥಳದಲ್ಲಿದ್ದ ವೈದ್ಯರು ಪೋಷಕರಿಗೆ ತಿಳಿಹೇಳಿ, ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ. ವೈದ್ಯರ ಮಾತನ್ನು ಕೇಳಿದ ಕುಟುಂಬಸ್ಥರು ಕೊನೆಗೂ ಮಗುವಿನ ದೇಹವನ್ನು ಉಪ್ಪಿನಿಂದ ಹೊರಗೆ ತೆಗೆದಿದ್ದಾರೆ. ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ಮಾಡಿ ಪೋಷಕರಿಗೆ ಹಸ್ತಾಂತರಿಸಲಾಯ್ತು. ನಂತರ ಪೋಷಕರು ಮೃತದೇಹವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.
ಇದರೊಂದಿಗೆ ಸಾರ್ವಜನಿಕರಲ್ಲಿ ಮನವಿ ಏನೆಂದರೆ ಅರೇಬರೇ ಜೀವ ಇದ್ದಾಗಲು ಇಂತಹ ಮೂಢನಂಬಿಕೆಗಳನ್ನು ನಂಬಿಕೊಂಡು ಇಂತಹ ದುಸ್ಸಾಹಸಕ್ಕೆ ಮುಂದಾಗಬಾರದು. ಜೀವ ಉಳಿಸಲು ವೈದ್ಯಕೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಬೇಕು.