Category Archives: Blog

Your blog category

Karnataka Weather Forecast: ಕರಾವಳಿಯಲ್ಲಿಂದು ವರುಣಾರ್ಭಟ! ಆರೆಂಜ್ ಅಲರ್ಟ್​ ಘೋಷಣೆ – Kannada News

ಬೆಂಗಳೂರು, ಜೂನ್ 06: ಕಾಲಿಡುತ್ತಿರುವ ಮುಂಗಾರು ಮಳೆಯ (Weather) ಅಬ್ಬರ ಕರ್ನಾಟಕದಲ್ಲಿ ಜೋರಾಗಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಿಗೆ ಜಾಗರೂಕತೆಯ ಮುನ್ನೆಚ್ಚರಿಕೆಗಳನ್ನು ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್​ ಘೋಷಿಸಿದ್ದು, ಕರಾವಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ.

ಮುಖ್ಯಾಂಶಗಳು

  • ಕರಾವಳಿಯ ಮೂರು ಜಿಲ್ಲೆಗಳಿಗೆ ಭಾರಿ ಮಳೆಯ ‘ಆರೆಂಜ್ ಅಲರ್ಟ್’ ಘೋಷಣೆ.
  • ಮಲೆನಾಡು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಮುನ್ನೆಚ್ಚರಿಕೆ.
  • ರಾಜ್ಯದಾದ್ಯಂತ ಬಿರುಗಾಳಿ, ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ.

ಕರಾವಳಿಗೆ ಆರೆಂಜ್ ಅಲರ್ಟ್

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ.

ಎಲ್ಲೆಲ್ಲಿ ಮಳೆ, ಯೆಲ್ಲೋ ಅಲರ್ಟ್​?

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ. ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಈ ಭಾಗಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗಲಿದ್ದು, ಇಲ್ಲಿಯೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ.

ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೋಲಾರ, ಕೊಡಗು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಳೆ ಮತ್ತು ಸಿಡಿಲಿನ ಸಮಯದಲ್ಲಿ ಸಾರ್ವಜನಿಕರು ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ಆಶ್ರಯ ಪಡೆಯಬಾರದು. ರೈತರು ಮತ್ತು ಸಾರ್ವಜನಿಕರು ಹವಾಮಾನ ಇಲಾಖೆಯ ಸೂಚನೆಗಳನ್ನು ಗಮನಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ಒಟಿಟಿ ಬಿಡುಗಡೆ: ಜಿಯೋ ಹಾಟ್‌ಸ್ಟಾರ್ ಹೊಸ ಪ್ರಯೋಗಕ್ಕೆ ಪ್ರೇಕ್ಷಕರು ಗರಂ – Kannada News

ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಸಂಚಲನ ಮೂಡಿಸಿದ್ದ ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ (Dhurandhar 2) ಚಿತ್ರವು ಕೊನೆಗೂ ಒಟಿಟಿ ಅಂಗಳಕ್ಕೆ ಪ್ರವೇಶಿಸಿದೆ. ಜೂನ್ 4 ರಂದು ಬಹುನಿರೀಕ್ಷಿತ ಈ ಸಿನಿಮಾ ‘ಜಿಯೋ ಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಕಂಡಿದೆ. 2025ರ ಕೊನೆಯಲ್ಲಿ ಬಂದ ಮೊದಲ ಭಾಗ ಸೂಪರ್ ಹಿಟ್ ಆಗಿದ್ದರಿಂದ, ಈ ಎರಡನೇ ಭಾಗದ ಒಟಿಟಿ ಬಿಡುಗಡೆಗಾಗಿ ವಿಶ್ವಾದ್ಯಂತ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ, ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾದ ಶೈಲಿ ಈಗ ಪ್ರೇಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಇದಕ್ಕೆ ಮುಖ್ಯ ಕಾರಣ, ಜಿಯೋ ಹಾಟ್‌ಸ್ಟಾರ್ ಸಂಸ್ಥೆಯು ಸಿನಿಮಾವನ್ನು ಎಂದಿನಂತೆ ನೇರವಾಗಿ ವೀಕ್ಷಿಸಲು ಒಟಿಟಿಯಲ್ಲಿ ಅಪ್‌ಲೋಡ್ ಮಾಡುವ ಬದಲು, ಜೂನ್ 4 ರಂದು ಸಂಜೆ 7 ಗಂಟೆಗೆ ‘ಲೈವ್ ಪ್ರಸಾರ’ (ನೇರ ಪ್ರಸಾರ) ಮಾಡುವ ಹೊಸ ಮಾರ್ಕೆಟಿಂಗ್ ತಂತ್ರಕ್ಕೆ ಕೈ ಹಾಕಿತ್ತು. ಪ್ರೇಕ್ಷಕರಿಗೆ ಪ್ರೀಮಿಯಂ ಅನುಭವ ನೀಡಲು ಸಂಸ್ಥೆಯು 50ಕ್ಕೂ ಹೆಚ್ಚು ಬ್ರ್ಯಾಂಡ್ ಪಾಲುದಾರರೊಂದಿಗೆ ಸೇರಿ 30 ನಿಮಿಷಗಳ ಪೂರ್ವ ಪ್ರದರ್ಶನ ಕಾರ್ಯಕ್ರಮ (ಪ್ರೀ-ಶೋ) ಹಾಗೂ ಸಿನಿಮಾದ ಮಧ್ಯೆ ಮಧ್ಯೆ ಕಾಮೆಂಟರಿ ವಿರಾಮವನ್ನು ಒಳಗೊಂಡ ಲೈವ್ ಸ್ಟ್ರೀಮಿಂಗ್ ಆಯೋಜಿಸಿತ್ತು.

ಆದರೆ, ಜಿಯೋ ಹಾಟ್‌ಸ್ಟಾರ್‌ನ ಈ ವಿಭಿನ್ನ ಪ್ರಯೋಗ ಪ್ರೇಕ್ಷಕರಿಗೆ ಅತಿಯಾದ ಕಿರಿಕಿರಿಯನ್ನು ಉಂಟುಮಾಡಿದೆ. ಲೈವ್ ಪ್ರಸಾರದ ಕಾರಣದಿಂದಾಗಿ ಪ್ರೇಕ್ಷಕರಿಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಸಿನಿಮಾ ನೋಡುವ ಆನಂದ ಸಿಗಲಿಲ್ಲ. ಅಷ್ಟೇ ಅಲ್ಲದೆ, ಸಂಜೆ 7 ಗಂಟೆಯ ಲೈವ್ ಪ್ರಸಾರವನ್ನು ಸರಿಯಾದ ಸಮಯಕ್ಕೆ ವೀಕ್ಷಿಸಲು ಸಾಧ್ಯವಾಗದ ಸಿನಿಮಾ ಪ್ರೇಮಿಗಳಿಗೆ ಸಂಪೂರ್ಣ ಚಿತ್ರವನ್ನು ಮೊದಲಿನಿಂದ ನೋಡಲು ಸಾಧ್ಯವಾಗದೆ ನಿರಾಶೆಯಾಯಿತು. ಮಧ್ಯೆ ಮಧ್ಯೆ ಬಂದ ಕಾಮೆಂಟರಿಗಳು ಸಿನಿಮಾ ನೋಡುವ ಮೂಡ್ ಕೆಡಿಸಿದವು ಎಂದು ವೀಕ್ಷಕರು ದೂರಿದ್ದಾರೆ.

ಇದನ್ನೂ ಓದಿ: ಧುರಂಧರ್ ಸೋತಿದ್ದರೆ ‘ಡಾನ್ 3’ ಸಿನಿಮಾ ಬಿಡುತ್ತಿರಲಿಲ್ಲ: ಕಡೆಗೂ ಒಪ್ಪಿಕೊಂಡ ರಣವೀರ್ ಸಿಂಗ್

ಸದ್ಯ ಜಿಯೋ ಹಾಟ್‌ಸ್ಟಾರ್‌ನ ಈ ಅನಗತ್ಯ ನಾಟಕೀಯ ಪ್ರಯೋಗದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ‘ಬ್ರ್ಯಾಂಡಿಂಗ್ ಹೆಸರಿನಲ್ಲಿ ಸಿನಿಮಾ ನೋಡುವ ಮಜಾವನ್ನೇ ಹಾಳು ಮಾಡಿದ್ದಾರೆ, ಇದರ ಬದಲು ನೇರವಾಗಿ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಬೇಕಿತ್ತು’ ಎಂದು ನೆಟ್ಟಿಗರು ಚಿತ್ರತಂಡ ಹಾಗೂ ಒಟಿಟಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಣ್ಣಗಾಯ್ತು ಮುನಿಯಪ್ಪ ಮುನಿಸು, ನಿಲ್ಲದ ಜಮೀರ್‌ ಬೆಂಬಲಿಗರ ಆಕ್ರೋಶ: ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ – Kannada News

ತುಮಕೂರಿನಲ್ಲಿ ಜಮೀರ್ ಬೆಂಬಲಿಗರಿಂದ ಪ್ರತಿಭಟನೆImage Credit source: tv9

ಬೆಂಗಳೂರು, ಜೂನ್ 6: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರದಲ್ಲಿ ಸೃಷ್ಟಿಯಾಗಿದ್ದ ಖಾತೆ ಹಂಚಿಕೆ ಬಿಕ್ಕಟ್ಟು ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆಯಿಂದ ಆರಂಭವಾದ ಭಿನ್ನಮತದ ಜ್ವಾಲೆಯನ್ನು ತಣಿಸಲು ತೀವ್ರ ಕಸರತ್ತು ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ, ಆಹಾರ ಖಾತೆ ಸಿಕ್ಕಿದ್ದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಹಿರಿಯ ಸಚಿವ ಕೆಎಚ್ ಮುನಿಯಪ್ಪ ಅವರ ಮುನಿಸು ಸದ್ಯ ಶಮನಗೊಂಡಿದೆ. ಆದರೆ, ಮತ್ತೊಂದೆಡೆ ಮೊದಲ ಪಟ್ಟಿಯಲ್ಲಿ ಮಂತ್ರಿಗಿರಿ ಸಿಗದಿದ್ದಕ್ಕೆ ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ರಾಜ್ಯಾದ್ಯಂತ ಭಾರಿ ಪ್ರತಿಭಟನೆ ನಡೆಸುವ ಮೂಲಕ ಹೈಕಮಾಂಡ್‌ಗೆ ಹೊಸ ತಲೆನೋವು ತಂದಿಟ್ಟಿದ್ದಾರೆ.

ಮುಖ್ಯಾಂಶಗಳು

  • ಮುನಿಯಪ್ಪ ಜತೆ ರಾಹುಲ್ ಗಾಂಧಿ ಸಂಧಾನ ಯಶಸ್ವಿ
  • ಜಮೀರ್ ಬೆಂಬಲಿಗರಿಂದ ಆಕ್ರೋಶ, ಪ್ರತಿಭಟನೆ.
  • ಸಚಿವ ಸ್ಥಾನಕ್ಕೆ ಕಾಯುತ್ತಿರುವ ಶಾಸಕರು.

ರಾಹುಲ್ ಸಂಧಾನ ಯಶಸ್ವಿ: ವರಸೆ ಬದಲಿಸಿದ ಮುನಿಯಪ್ಪ

ತಾವು 8 ಬಾರಿ ಗೆದ್ದಿದ್ದರೂ ತಮಗೆ ಜನರ ನೇರ ಸೇವೆಗೆ ಅವಕಾಶವಿಲ್ಲದ ಆಹಾರ ಖಾತೆ ನೀಡಲಾಗಿದೆ ಎಂದು ಕೆಂಡಕಾರಿದ್ದ ಸಚಿವ ಕೆಎಚ್ ಮುನಿಯಪ್ಪ ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಬೆಂಗಳೂರಿಗೆ ಆಗಮಿಸಿದ್ದ ಎಐಸಿಸಿ ನಾಯಕ ರಾಹುಲ್ ಗಾಂಧಿ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಮುನಿಯಪ್ಪ ಅವರೊಂದಿಗೆ ನೇರವಾಗಿ ಮಾತನಾಡಿ ಸಮಾಧಾನಪಡಿಸಿದ್ದಾರೆ. ಇದಕ್ಕೂ ಮುನ್ನ ಮುನಿಯಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸತತ 40 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು. ರಾಹುಲ್ ಗಾಂಧಿ ಅವರ ಭರವಸೆಯ ಬಳಿಕ ‘ನಾನು ಸಂತೋಷವಾಗಿದ್ದೇನೆ’ ಎಂದು ಮುನಿಯಪ್ಪ ವರಸೆ ಬದಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಮುನಿಯಪ್ಪಗೆ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ಜಮೀರ್ ಬೆಂಬಲಿಗರ ಜ್ವಾಲಾಗ್ನಿ

ಇತ್ತ ಮುನಿಯಪ್ಪ ಅವರ ಮುನಿಸು ತಣ್ಣಗಾಗಿದ್ದರೆ, ಅತ್ತ ಮೊದಲ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಅವರ ಬೆಂಬಲಿಗರು ಸಿಡಿದೆದ್ದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಮಾತ್ರವಲ್ಲದೆ ಚಿಕ್ಕಮಗಳೂರು, ಹುಬ್ಬಳ್ಳಿ, ವಿಜಯನಗರ, ಮಂಡ್ಯ, ಹಾವೇರಿ, ದಾವಣಗೆರೆ, ತುಮಕೂರು ಹಾಗೂ ಕೊಪ್ಪಳ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಮೀರ್ ಪರ ಭಾರಿ ಪ್ರತಿಭಟನೆಗಳು ನಡೆದಿವೆ. ಜಮೀರ್ ವಿರುದ್ಧ ವೈರಲ್ ಆಗಿರುವ ಆಡಿಯೋ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಘೋಷಣೆ ಕೂಗಿರುವ ಬೆಂಬಲಿಗರು, 2028ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.

ಮತ್ತೊಂದೆಡೆ, ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದ ಸಚಿವ ಕೆಜೆ ಜಾರ್ಜ್ ಅವರ ಬೇಡಿಕೆಯಂತೆ ಕೆಪಿಸಿಎಲ್ (KPCL) ಎಂಡಿ ಹುದ್ದೆಗೆ ರಾಜೇಂದ್ರ ಚೋಳನ್ ಅವರ ನೇಮಕಾತಿ ಆದೇಶವನ್ನು ಹಿಂಪಡೆದು, ಗೌರವ್ ಗುಪ್ತಾ ಅವರನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿರುವುದರಿಂದ ಜಾರ್ಜ್ ಸದ್ಯ ನಿರಾಳರಾಗಿದ್ದಾರೆ ಎನ್ನಲಾಗಿದೆ.

ಮಂತ್ರಿ ಸ್ಥಾನಕ್ಕಾಗಿ ಶಾಸಕರ ಚಾತಕ ಪಕ್ಷಿ ವರಸೆ: ಮೋದಿ ಲೇವಡಿ

ಮೊದಲ ಪಟ್ಟಿಯಲ್ಲಿ ಸಚಿವರಾದವರಿಗೆ ಖಾತೆಯ ಚಿಂತೆಯಾದರೆ, ಉಳಿದ ಶಾಸಕರಿಗೆ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಆತುರ ಶುರುವಾಗಿದೆ. ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಎಚ್.ಕೆ.ಪಾಟೀಲ್, ಮಧು ಬಂಗಾರಪ್ಪ ಸೇರಿದಂತೆ ಪ್ರಮುಖರು ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪಟ್ಟಿಯಲ್ಲಿ ಮಹಿಳೆಯರಿಗೆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ವಿಶ್ವಾಸ ವ್ಯಕ್ತಪಡಿಸಿದ್ದರೆ, ಮಾಜಿ ಸಚಿವೆ ಉಮಾಶ್ರೀ ಕೂಡ ರೇಸ್‌ನಲ್ಲಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಡಿಕೆಶಿ-ರಾಮಲಿಂಗಾ ರೆಡ್ಡಿ 2.5 ಗಂಟೆ ರಹಸ್ಯ ಸಂಧಾನ ಸಭೆ: ರಾಜೀನಾಮೆ ಹಿಂಪಡೆಯೋ ವಿಚಾರ ಮಾತ್ರ ಸಸ್ಪೆನ್ಸ್!

ಕಾಂಗ್ರೆಸ್‌ನ ಈ ಆಂತರಿಕ ಕಸರತ್ತನ್ನು ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಲೇವಡಿ ಮಾಡಿದ್ದು, ಕಾಂಗ್ರೆಸ್‌ನ ಕಿತ್ತಾಟ ಆ ಪಕ್ಷದ ಮೂಲ ಸಂಸ್ಕೃತಿ ಎಂದು ಹಳಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರ್ತಿದೆ ‘ಧೂತ 2’; ಥ್ರಿಲ್ಲರ್ ಸರಣಿಗೆ ನಿರ್ಮಾಪಕನಾದ ನಾಗ ಚೈತನ್ಯ

Source link

ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ ಹವಾ; ಎರಡನೇ ದಿನವೂ ಭರ್ಜರಿ ಗಳಿಕೆ

ಅಬ್ಬರದ ಪ್ರಚಾರದೊಂದಿಗೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ‘ಪೆದ್ದಿ’ ಸಿನಿಮಾ (Peddi Movie), ಈಗ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಮೊದಲ ದಿನದ ಬಂಪರ್ ಓಪನಿಂಗ್ ಬಳಿಕ, ಎರಡನೇ ದಿನವಾದ ಶುಕ್ರವಾರವೂ ಚಿತ್ರವು ಅತ್ಯುತ್ತಮ ಕಲೆಕ್ಷನ್ ಮಾಡುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಪೆದ್ದಿಯ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಬುಧವಾರ (ಜೂನ್ 3) ನಡೆದ ವಿಶೇಷ ಪ್ರೀಮಿಯರ್ ಶೋಗಳಿಂದಲೇ ‘ಪೆದ್ದಿ’ ಭರವಸೆಯ ಆರಂಭ ಪಡೆದುಕೊಂಡಿತ್ತು. ಕೇವಲ 847 ಪ್ರೀಮಿಯರ್ ಶೋಗಳಿಂದ ಶೇಕಡಾ 72 ರಷ್ಟು ಭರ್ತಿ ಪ್ರದರ್ಶನ ಕಂಡು 18.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿತ್ತು. ಇದಾದ ಬಳಿಕ ಮೊದಲ ದಿನವಾದ ಗುರುವಾರ ವಿಶ್ವಾದ್ಯಂತ ಅಬ್ಬರಿಸಿದ್ದ ಚಿತ್ರ, ಭಾರತದಲ್ಲೇ ಬರೋಬ್ಬರಿ 12,412 ಶೋಗಳಿಂದ 51.00 ಕೋಟಿ ಬಾಚಿತ್ತು.

ಸಾಮಾನ್ಯವಾಗಿ ವೀಕ್‌ಡೇಸ್‌ನಲ್ಲಿ ಕಲೆಕ್ಷನ್ ಕೊಂಚ ಕುಸಿಯುವುದು ಸಹಜ. ಆದರೆ, ‘ಪೆದ್ದಿ’ ಚಿತ್ರಕ್ಕೆ ಎರಡನೇ ದಿನವೂ ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮೊದಲ ಶುಕ್ರವಾರದಂದು ದೇಶಾದ್ಯಂತ 10,113 ಶೋಗಳನ್ನು ಪ್ರದರ್ಶನ ಕಂಡಿರುವ ಈ ಸಿನಿಮಾ, ಶೇಕಡಾ 32.8 ರಷ್ಟು ಆಕ್ಯುಪೆನ್ಸಿಯೊಂದಿಗೆ 26.90 ಕೋಟಿ ರೂಪಾಯಿನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ಭಾರತದಲ್ಲಿ ಒಟ್ಟು 96.40 ಕೋಟಿ ರೂಪಾಯಿ ನೆಟ್ ಗಳಿಕೆ ಹಾಗೂ 114.49 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಪೆದ್ದಿ ಹವಾ ಜೋರಾಗಿದೆ. ಎರಡನೇ ದಿನ ವಿದೇಶಿ ಮಾರುಕಟ್ಟೆಯಿಂದ 8.00 ಕೋಟಿ ರೂಪಾಯಿ ಗಳಿಸಿರುವ ಚಿತ್ರ, ತನ್ನ ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ ಅನ್ನು 36.00 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದೆ. ಈ ಎಲ್ಲಾ ಕಲೆಕ್ಷನ್ ಸೇರಿದರೆ ‘ಪೆದ್ದಿ’ ಸಿನಿಮಾ ವಿಶ್ವಾದ್ಯಂತ ಒಟ್ಟು 150.49 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದಂತಾಗುತ್ತದೆ.

ಇದನ್ನೂ ಓದಿ: ನಾಯಕಿಯ ‘ಅಂಗಾಂಗ’ಗಳ ಮೇಲೆ ‘ಕಣ್ಣು’, ‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ

ಈ ಸಿನಿಮಾ ಶನಿವಾರ ಮತ್ತು ಭಾನುವಾರ ಮತ್ತಷ್ಟು ದೊಡ್ಡ ಮಟ್ಟದ ಗಳಿಕೆ ಮಾಡುವ ಮುನ್ಸೂಚನೆ ನೀಡಿದೆ. ಬುಚ್ಚಿ ಬಾಬು ನಿರ್ದೇಶನದ ಈ ಚಿತ್ರಕ್ಕೆ ರಾಮ್ ಚರಣ್ ಹೀರೋ, ಜಾನ್ವಿ ಕಪೂರ್ ನಾಯಕಿ. ಈ ಚಿತ್ರದಲ್ಲಿ ಕನ್ನಡದ ಶಿವರಾಜ್​​ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಧ್ಯರಾತ್ರಿ ಡಿಕೆಶಿ-ರಾಮಲಿಂಗಾ ರೆಡ್ಡಿ 2.5 ಗಂಟೆ ರಹಸ್ಯ ಸಂಧಾನ ಸಭೆ: ರಾಜೀನಾಮೆ ಹಿಂಪಡೆಯೋ ವಿಚಾರ ಮಾತ್ರ ಸಸ್ಪೆನ್ಸ್! – Kannada News

ಮಧ್ಯರಾತ್ರಿ ಡಿಕೆಶಿ-ರಾಮಲಿಂಗಾ ರೆಡ್ಡಿ 2.5 ಗಂಟೆ ರಹಸ್ಯ ಸಂಧಾನ ಸಭೆImage Credit source: tv9

ಬೆಂಗಳೂರು, ಜೂನ್ 6: ಖಾತೆ ಹಂಚಿಕೆ ಅಸಮಾಧಾನದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ನೀಡಿದ್ದ ದಿಢೀರ್ ರಾಜೀನಾಮೆ ಪರ್ವ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ, ಶುಕ್ರವಾರ ತಡರಾತ್ರಿ ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹಾಗೂ ರಾಮಲಿಂಗಾ ರೆಡ್ಡಿ ಸತತ ಎರಡೂವರೆ ಗಂಟೆಗಳ ಕಾಲ ಸುದೀರ್ಘ ಸಂಧಾನ ಮಾತುಕತೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಮಧ್ಯರಾತ್ರಿ ಮಾತುಕತೆ.
  • 11 ರಿಂದ 1:30ರ ವರೆಗೆ ಮುಖ್ಯಮಂತ್ರಿ ಸುದೀರ್ಘ ಸಂಧಾನ ಸಭೆ.
  • ಇದು ನಮ್ಮ ಫ್ಯಾಮಿಲಿ ಮ್ಯಾಟರ್, ಎಲ್ಲಾ ಸಮಸ್ಯೆ ನಿವಾರಣೆಯಾಗಿದೆ ಎಂದ ನಾಯಕರು.

ಕೊಟ್ಟ ಮಾತು ಮತ್ತು ಮಧ್ಯರಾತ್ರಿಯ ಹೈಡ್ರಾಮಾ

‘ಕೊಟ್ಟರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಿ, ಇಲ್ಲದಿದ್ದರೆ ಸಚಿವ ಸ್ಥಾನವೇ ಬೇಡ’ ಎಂದು ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ, ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. 2023ರಲ್ಲೇ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ (ಡಿಕೆ ಬ್ರದರ್ಸ್) ಮನೆಗೆ ಬಂದು ಬೆಂಗಳೂರು ಅಭಿವೃದ್ಧಿ ಖಾತೆಯ ಭರವಸೆ ನೀಡಿದ್ದರು ಎಂದು ರೆಡ್ಡಿ ಬಹಿರಂಗಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ ಡಿಕೆಶಿ, ‘ಮಾತು ಕೊಟ್ಟಿದ್ದು ನಿಜ, ಆದರೆ ಖಾತೆ ಬದಲಾವಣೆ ವಿಚಾರವನ್ನು ಹೈಕಮಾಂಡ್ ನಿರ್ಧರಿಸಬೇಕು’ ಎನ್ನುತ್ತಲೇ ರಾಮಲಿಂಗಾ ರೆಡ್ಡಿ ಅವರ ಮನವೊಲಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಬಿಟಿಎಂ ಲೇಔಟ್ ಹಾಗೂ ಜಯನಗರದ ಹಿರಿಯ ಆಪ್ತ ಮುಖಂಡರ ಮೂಲಕವೂ ಮನವೊಲಿಕೆಗೆ ಯತ್ನಿಸಲಾಗಿತ್ತು.

‘ಎಲ್ಲವೂ ನಿವಾರಣೆಯಾಗಿದೆ’: ರಹಸ್ಯ ಕಾಯ್ದುಕೊಂಡ ನಾಯಕರು

ಮಧ್ಯರಾತ್ರಿ 1:30ರ ಸುಮಾರಿಗೆ ಮಾತುಕತೆ ಮುಗಿಸಿ ಹೊರಬಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯಾವುದೇ ಆತಂಕ ಬೇಡ, ನಾವೆಲ್ಲಾ ಹಳೆಯ ಸ್ನೇಹಿತರು. ಕೂತು ಮಾತನಾಡಿ ಎಲ್ಲವನ್ನೂ ಬಗೆಹರಿಸಿಕೊಂಡಿದ್ದೇವೆ ಎಂದರು. ರಾಜೀನಾಮೆ ವಾಪಸ್ ಪಡೆದಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಿಮಗೆ ಎಲ್ಲವನ್ನೂ ಹೇಳಬೇಕಾಗಿಲ್ಲ’ ಎಂದರು. ಇತ್ತ ಸಚಿವ ರಾಮಲಿಂಗಾ ರೆಡ್ಡಿ ಕೂಡ ಸಿಎಂ ಧಾಟಿಯಲ್ಲೇ ಉತ್ತರಿಸಿ, ‘ಮುಖ್ಯಮಂತ್ರಿಗಳು ಏನು ಹೇಳಿದ್ದಾರೋ ಅದನ್ನೇ ನಾನು ಹೇಳುವುದು. ಎಲ್ಲ ಗೊಂದಲಗಳು ನಿವಾರಣೆಯಾಗಿವೆ’ ಎಂದು ಹೇಳಿ ಕಾರು ಹತ್ತಿ ನಿರ್ಗಮಿಸಿದರು.

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೊಸ ಬಾಂಬ್: ‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ

ಮತ್ತೊಂದೆಡೆ, ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದಲ್ಲಿ ಇನ್ನೂ ಮೂವರಿಗೆ ಅಸಮಾಧಾನವಿದೆ ಎಂದು ಭವಿಷ್ಯ ನುಡಿದಿದ್ದರೆ, ಮತ್ತೊಂದೆಡೆ ಎಚ್.ಕೆ. ಪಾಟೀಲ್ ಈ ಬೆಳವಣಿಗೆಯನ್ನು ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದಿದ್ದಾರೆ. ಈ ಎಲ್ಲಾ ಹೈಡ್ರಾಮಾಗಳ ನಡುವೆ, ಮಧ್ಯರಾತ್ರಿಯ ಸಂಧಾನವು ಸಫಲವಾಗಿದೆಯೇ ಮತ್ತು ರಾಮಲಿಂಗಾ ರೆಡ್ಡಿ ಅಧಿಕೃತವಾಗಿ ರಾಜೀನಾಮೆ ವಾಪಸ್ ಪಡೆಯಲಿದ್ದಾರೆಯೇ ಎಂಬ ಕುರಿತ ಸಸ್ಪೆನ್ಸ್ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಜೂನ್ ತಿಂಗಳ ಈ ದಿನದಂದು ವಾಹನ ಖರೀದಿ ಮಾಡಿದರೆ ಶುಭ! – Kannada News

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಈ ದಿನದಂದು ವಾಹನ ಖರೀದಿ ಮಾಡಿದರೆ ಶುಭ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ.ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಯೋಗ್ಯತೆಗೆ ತಕ್ಕಂತೆ ಒಂದು ವಾಹನ ಹೊಂದುವ ಆಸೆ ಇರುತ್ತದೆ. ಆದರೆ, ವಾಹನ ಖರೀದಿಸುವಾಗ ಶುಭ ಮುಹೂರ್ತದ ಬಗ್ಗೆ ಸಾಮಾನ್ಯವಾಗಿ ಜನರಲ್ಲಿ ಅನೇಕ ಅನುಮಾನಗಳು ಇರುತ್ತವೆ. ವಿಶೇಷವಾಗಿ ಜೂನ್ ಮಾಸದಲ್ಲಿ ಅಧಿಕ ಜೇಷ್ಠ ಮಾಸ ಇರುವ ಕಾರಣ, ಈ ಸಮಯದಲ್ಲಿ ವಾಹನ ಖರೀದಿಸಬಹುದೇ ಎಂಬ ಪ್ರಶ್ನೆ ಮೂಡುತ್ತದೆ. ಜೂನ್ 17, ಜೂನ್ 24 ಮತ್ತು ಜೂನ್ 27ನೇ ತಾರೀಕಿನಂದು ನೀವು ವಾಹನ ಖರೀದಿಸಬಹುದೆಂದು ಗುರೂಜಿ ತಿಳಿಸಿದ್ದಾರೆ.

 

 

 

 

Source link

Horoscope Today: ಇಂದು ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಶುಭಸುದ್ದಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 06, ಶನಿವಾರದ ದೈನಂದಿನ ರಾಶಿ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಷಷ್ಠಿ ತಿಥಿ, ಐಂದ್ರ ಯೋಗ, ಗರಜ ಕರಣ ಮತ್ತು ಧನಿಷ್ಠಾ ನಕ್ಷತ್ರದಿಂದ ಕೂಡಿದೆ.

ರಾಹುಕಾಲವು ಬೆಳಿಗ್ಗೆ 9:05 ರಿಂದ 10:41 ರವರೆಗೆ ಇರಲಿದ್ದು, ಸರ್ವ ಸಿದ್ಧಿ, ಸಂಕಲ್ಪ ಹಾಗೂ ಶುಭಕಾಲವು ಮಧ್ಯಾಹ್ನ 1:54 ರಿಂದ 3:31 ರವರೆಗೆ ಇದೆ. ಇಂದು ಶನಿ ಭಗವಾನ್, ವೆಂಕಟೇಶ್ವರ ಮತ್ತು ಹನುಮಾನ್ ದೇವರ ಆಶೀರ್ವಾದದ ವಿಶೇಷ ದಿನವಾಗಿದೆ. ಜೊತೆಗೆ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿಯಿದ್ದು, ಅನಾರೋಗ್ಯ ಪೀಡಿತರು, ವಿವಾಹ ವಿಷಯಗಳಲ್ಲಿನ ತಡಗಳು, ಗರ್ಭಿಣಿ ಸ್ತ್ರೀಯರು ಸುಬ್ರಹ್ಮಣ್ಯನ ಆರಾಧನೆಯಿಂದ ಶುಭಫಲ ಪಡೆಯುವರು.ಎಂದು ಅವರು ತಿಳಿಸಿದ್ದಾರೆ.

Source link

ದಿನ ಭವಿಷ್ಯ: ಈ ರಾಶಿಯವರು ಇಂದು ಅನ್ಯರ ವಶದಿಂದ ಹೊರಬರುವರು – Kannada News

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಬ್ರಹ್ಮ, ಕರಣ : ವಣಿಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:10 – 10:46, ಯಮಗಂಡ ಕಾಲ 13:59 – 15:37, ಗುಳಿಕ ಕಾಲ 06:56 – 07:33.

ಮೇಷ ರಾಶಿ: ಮನೆಯವರ ಜವಾಬ್ದಾರಿಯು ಹೆಚ್ಚಿನ ಒತ್ತಡ ತರುವ ಸಾಧ್ಯತೆ ಇದೆ. ಪ್ರೀತಿಯ ಅಭಿವ್ಯಕ್ತಿಯು ಸಂಬಂಧಗಳಲ್ಲಿ ಸ್ಪಷ್ಟತೆಯನ್ನು ತಂದೀತು. ಮನಸ್ಸಿನಲ್ಲಿ ದೈವಭಕ್ತಿ ಮೂಡಬಹುದು. ವಿಶೇಷ ಭೋಜನವು ನಿಮ್ಮ ಆರೋಗ್ಯಕ್ಕೆ ತೊಂದರೆಕೊಡುವುದು. ಮನೆಗೆ ಬರುವ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಮಾನಸಿಕವಾಗಿ ಉತ್ಸಾಹವು ಕಡಿಮೆ ಇರುವುದು.

ವೃಷಭ ರಾಶಿ: ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು‌. ಮನಸ್ಸಿನಿಂದ ಬಂದ ಮಾತುಗಳು ಸಂಬಂಧವನ್ನು ಬಲಪಡಿಸುತ್ತವೆ. ಹೊಸದಾಗಿ ಉಂಟಾದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ವೈಯಕ್ತಿಕ ಚಿಂತನೆಗಳಿಗೆ ಅವಕಾಶ ಕೊಡಿ. ಮನಸ್ಸಿನಲ್ಲಿ ನೆಲೆಸಿರುವ ಗೊಂದಲಗಳು ಸಮಾಧಾನವಾಗಬಹುದು. ಕಾನೂನಿನ ಹೋರಾಟದಲ್ಲಿ ಜಯ ಗಳಿಸುವಿರಿ. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ಭೂಮಿಯ ವ್ಯವಹಾರವನ್ನು ಒಬ್ಬೊಂಟಿಯಾಗಿ ನಿರ್ವಹಿಸುವಿರಿ.

ಮಿಥುನ ರಾಶಿ: ಶೈಕ್ಷಣಿಕವಾದ ಪ್ರಗತಿಯನ್ನು ಸಾಧಿಸಬೇಕಾಗಬಹಿದು. ಪ್ರೀತಿಯಲ್ಲಿ ನಂಬಿಕೆ ಕಡಿಮೆಯಾಗಲಿದೆ. ಕೆಲಸದಲ್ಲಿ ನಿರ್ಧಾರ ತೆಗೆದುಕೊಳ್ಳುವ ವೇಳೆ ದಿಟ್ಟತನ ಇರಲಿ. ನಿಮ್ಮ ಆದರ್ಶಗಳು ಇತರರಿಗೆ ಪ್ರೇರಣೆಯಾಗಲಿದೆ. ಧೈರ್ಯವು ಯಶಸ್ಸಿಗೆ ದಾರಿ ತೋರುತ್ತದೆ. ಕೆಲವರು ನಿಮ್ಮ ಸಹಾಯವನ್ನು ಅಪೇಕ್ಷಿಸುತ್ತಿದ್ದಾರೆ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಶಾಶ್ವತ ಪರಿಹಾರದಿಂದ ಮರೆಯರಾಗುತ್ತದೆ. ಸಕಾರಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ.‌

ಕರ್ಕಾಟಕ ರಾಶಿ: ಮಕ್ಕಳಿಂದ ಮಾನಸಿಕ ಹಿಂಸೆ ಆರಂಭವಾಗಲಿದೆ. ನಿಮ್ಮ ಹಳೆಯ ಹಣವು ಕೈಸೇರಬಹುದು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ಗೊಂದಲದಿಂದ ದೂರವಿರುವ ಪ್ರಯತ್ನ ಮಾಡಿ. ಮನಸ್ಸಿಗೆ ಶಾಂತಿ ತರಲು ಸಂಗೀತ ಅಥವಾ ಸಾಹಿತ್ಯ ಸಹಕಾರಿ. ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಿ. ವಿವಾಹದ ಮಾತುಕತೆಗಳನ್ನು ನಡೆಸಲು ದೂರದ ಊರಿಗೆ ಪ್ರಯಾಣ ಮಾಡುವಿರಿ.

ಸಿಂಹ ರಾಶಿ: ಸಣ್ಣ ಪುಟ್ಟ ವಿಷಯಗಳಿಗೂ ಕೋಪಗೊಳ್ಳುವಿರಿ. ಪರರ ಬಿಕ್ಕಟ್ಟಿಗೆ ನೀವು ಪರಿಹಾರವಾಗಬಹುದು. ನಿಮಗೆ ಕಷ್ಟವಾದರೆ ಯಾರಿಲ್ಲ. ನಿಮ್ಮ ಪರಿಶ್ರಮ ಇಂದು ಗಮನ ಸೆಳೆಯಲಿದೆ. ಆತ್ಮಪರಿಶೀಲನೆಗೆ ಈ ದಿನ ಅನುಕೂಲ. ಸಂಬಂಧಗಳನ್ನು ಹೂಡಿಕೆ ಎಂದು ಪರಿಗಣಿಸಿ, ನೆನೆಪಾದ ಹಳೆಯ ಸ್ನೇಹಿತರಿಂದ ಸಹಾಯ ಬರಬಹುದು. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು. ಮುಜುಗರವೂ ನಿಮಗೆ ಆದೀತು. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು.

ಕನ್ಯಾ ರಾಶಿ: ನಿಮ್ಮ ಜೀವನವನ್ನು ನೀವೇ ಲಘುವಾಗಿ ಕಾಣುವುದು ಬೇಡ. ಬಲಾಢ್ಯರ ಜೊತೆ ವೈರ ಕಾಣಿಸಿಕೊಳ್ಳುವುದು. ನಿಮ್ಮ ಮಾನಸಿಕ ಸ್ಥಿತಿ ಬಲಾಢ್ಯವಾಗಿರಲಿ. ಸ್ನೇಹಿತರ ಸಲಹೆಗಳಿಂದ ಹೊಸ ಆಯ್ಕೆಗಳನ್ನು ಪರಿಶೀಲಿಸಬಹುದು. ಪ್ರೀತಿಯ ಸಂಬಂಧದಲ್ಲಿ ನಂಬಿಕೆ ತುಂಬಬೇಕು. ನಿರ್ಧಾರಗಳ ಕುರಿತು ಧೈರ್ಯವಿಟ್ಟು ನಿಲ್ಲಿ. ನಿಮ್ಮ ಆಂತರಿಕ ಶಕ್ತಿಯ ಮೇಲೆ ನಂಬಿಕೆ ಇಡಿ. ವ್ಯವಹಾರದಲ್ಲಿ ಲಾಭದ ಸೂಚನೆಗಳಿವೆ. ನಿಮ್ಮ ಆದಾಯವು ಮೊದಲಿಗಿಂತ ಉತ್ತಮವಾಗಿದ್ದು ಅದನ್ನು ಒಂದು ಕಡೆ ಸ್ಥಿರವಾಗಿಸಿಕೊಳ್ಳಿ.

ತುಲಾ ರಾಶಿ: ಒತ್ತಡದಲ್ಲಿದ್ದಾಗ ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ಮನಸ್ಸಿನ ಶಕ್ತಿ ದ್ವಿಗಣವಾಗುವುದು. ನಕಾರಾತ್ಮಕತೆ ಆಲೋಚನೆಗಳೂ ದೂರವಾಗುವುದು. ಕೆಲವರು ನಿಮ್ಮ ಉಪದೇಶವನ್ನು ಎಲ್ಲರೂ ಮೆಚ್ಚಬಹುದು. ಕುಟುಂಬದ ಸಹಕಾರದಿಂದ ಸಾಧನೆ ಸುಲಭವಾಗುತ್ತದೆ. ಹೊಸ ತಂತ್ರಗಳನ್ನು ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು.

ವೃಶ್ಚಿಕ ರಾಶಿ: ದೂರಪ್ರಯಾಣ ಸುಖಕರವಾಗಿ ಇರುವಿದಾದರೂ ಅನಂತರ ಕಷ್ಟಪಡಬೇಕಾದೀತು. ಯಾರನ್ನೋ ಅವಮಾನಿಸಲು ಹೋಗಿ ಹಳ್ಳಕ್ಕೆ ಬೀಳಬೇಡಿ. ಪ್ರೀತಿಯಿಂದ ಮಾಡಿದ ಕೆಲಸ ಫಲ ನೀಡುತ್ತದೆ. ನಿನ್ನೆ ವಿಫಲವಾದದ್ದನ್ನು ಪುನಃ ಪ್ರಯತ್ನಿಸಿ ಯಶಸ್ಸು ಇಂದು ನಿಮ್ಮದಾಗಬಹುದು. ಮನಸ್ಸು ಉದ್ವಿಗ್ನವಾಗಿದ್ದರೂ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಕಾದಾಟದಿಂದ ಸಮಯವು ವ್ಯರ್ಥವಾಗಲಿದೆ.

ಧನು ರಾಶಿ: ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ನಿಜವಾದ ಸ್ನೇಹಿತರು ನಿಮ್ಮೊಂದಿಗೆ ತಾಳ್ಮೆಯಿಂದ ಇರುತ್ತಾರೆ. ಮನೆಯ ವಿಷಯಗಳಲ್ಲಿ ಜಾಗರೂಕತೆಯ ಅಗತ್ಯವಿದೆ. ನಿಮ್ಮ ಉತ್ಕೃಷ್ಟತೆ ಮಿಂಚಲು ಅವಕಾಶ ದೊರೆಯುತ್ತದೆ. ಸಂಗಾತಿಯ ಜೊತೆ ಸಾಂತ್ವನದ ಮಾತುಗಳು ಸಂಬಂಧ ಬಲಪಡಿಸುತ್ತವೆ. ಸ್ಪರ್ಧೆಯ ವಿಷಯದಲ್ಲಿ ಮುನ್ನುಗ್ಗುವ ಸ್ವಭಾವವು ಇರಲಿದೆ. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ.

ಮಕರ ರಾಶಿ: ನಿಮ್ಮನ್ನು ಗಮನಿಸುವವರು ಹತ್ತಾರು ಮಂದಿಯಿರುತ್ತಾರೆ. ಅವರೇನೇ ಹೇಳಿದರೂ ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಮೌನದಿಂದ ನೀವು ಕೆಲಸವನ್ನು ಸಾಧಿಸಿಕೊಳ್ಳುವಿರಿ ಧೈರ್ಯದಿಂದ ನಿಂತು, ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಬುದ್ಧಿವಂತಿಕೆಯೊಂದಿಗೆ ಸಮಸ್ಯೆಗಳಿಗೆ ಪರಿಹಾರ ಹುಡುಕಿ. ಕೆಲವು ಸಮಸ್ಯೆಗಳು ಮರುಕಳಿಸುತ್ತವೆ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ.

ಕುಂಭ ರಾಶಿ: ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಸ್ನೇಹಿತರ ಮಾತುಗಳ ಹಿಂದಿನ ವ್ಯಂಗ್ಯಾರ್ಥವನ್ನು ಹುಡುಕಲು ಯತ್ನಿಸುವಿರಿ. ಮನೆಯ ತೊಡಕುಗಳನ್ನು ಧೈರ್ಯದಿಂದ ಎದುರಿಸಬೇಕು. ವೈಯಕ್ತಿಕ ಬದ್ಧತೆಗಳು ಬಲವಾದ ನಂಬಿಕೆಯನ್ನು ಹುಟ್ಟುಹಾಕುತ್ತವೆ. ಕೆಲಸದಲ್ಲಿ ಜವಾಬ್ದಾರಿ ಬದಲಾಗಬಹುದು. ಆತ್ಮೀಯ ಸ್ನೇಹಿತರ ಒಡನಾಟ ಮನದ ಸಂತೋಷವನ್ನು ಹೆಚ್ಚಿಸುತ್ತದೆ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ.

ಮೀನ ರಾಶಿ: ಪಾಲುಗಾರಿಕೆಯ ವ್ಯವಹಾರದಲ್ಲಿ ತೊಡಗಿಸಿದ್ದ ಹಣವನ್ನು ಮರಳಿ ಪಡೆಯುವಿರಿ. ಹೊಸ ಪ್ರಸ್ತಾವನೆಗಳನ್ನು ಪಾಲುದಾರರ ಮುಂದೆ ಇಡಬೇಡಿ. ನಿಮ್ಮೊಳಗಿನ ಶಾಂತಿಯೇ ನಿಮ್ಮ ಉತ್ತಮ ಸ್ನೇಹಿತನಾಗಲಿದೆ. ತಾತ್ವಿಕ ಚಿಂತನೆಗಳು ಇಂದು ನಿಮಗೆ ದಾರಿದೀಪವಾಗುತ್ತದೆ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಾಟದಿಂದ ನೀವು ಸಿಟ್ಟಾಗುವಿರಿ.

ಲೋಹಿತ್ ಹೆಬ್ಬಾರ್-8762924271 (what’s app only)

Source link

ಫುಟ್​​ಬಾಲ್ ವಿಶ್ವಕಪ್​​ನಲ್ಲೂ ‘ರಾಮಾಯಣ’, ಇದು ಸಾಮಾನ್ಯ ಸಾಹಸ ಅಲ್ಲ

ಪುಟ್ಬಾಲ್ (Footbal world cup) ವಿಶ್ವಕಪ್, ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜನ ಒಂದೇ ಬಾರಿಗೆ ನೋಡುವ ಕ್ರೀಡಾಕೂಟ. ಇತ್ತೀಚೆಗೆ ಮುಕ್ತಾಯವಾಗಿ ಐಪಿಎಲ್ ಅನ್ನು ಒಂದು ಬಾರಿ ಹಾಟ್​​ಸ್ಟಾರ್​​ನಲ್ಲಿ ಸುಮಾರು 55 ಕೋಟಿ ಜನ ವೀಕ್ಷಿಸಿದ್ದು, ಅದು ಈ ವರೆಗಿನ ದಾಖಲೆ ಎಂದಾಗಿತ್ತು. ಆದರೆ ಫುಟ್​​ಬಾಲ್​​ನ ಒಂದು ಮ್ಯಾಚನ್ನು ಒಂದೇ ಬಾರಿಗೆ ಸುಮಾರು 100 ಕೋಟಿಗೂ ಹೆಚ್ಚು ಜನ ವೀಕ್ಷಿಸುತ್ತಾರೆ. ಐಪಿಎಲ್​​ ಕ್ರೀಡಾಕೂಟದ ಒಟ್ಟು ಖರ್ಚು, ಆಟಗಾರರ ಸಂಬಳವನ್ನೂ ಸೇರಿಸಿ ಗರಿಷ್ಠ ಎಂದರೆ 5000 ಕೋಟಿ ಆಗಿರಬಹದು. ಫಿಫಾ 2026ರ ಒಟ್ಟು ಖರ್ಚು 35 ಸಾವಿರ ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. ಇಂಥಹಾ ವಿಶ್ವ ಜನಪ್ರಿಯ ಕ್ರೀಡಾಕೂಟದ ನಡುವಲ್ಲಿ ಭಾರತದ ಸಿನಿಮಾ ‘ರಾಮಾಯಣ’ದ ಗ್ಲಿಂಪ್ಸ್ ಪ್ರದರ್ಶನ ಆಗಲಿದೆ.

ಹೌದು, ಈ ಬಾರಿಯ ಫೀಫಾ 2026 ಪಂದ್ಯಾವಳಿಯ ಪಂದ್ಯಗಳ ನಡುವೆ ಭಾರತದ ಸಿನಿಮಾ ‘ರಾಮಾಯಣ’ದ ಗ್ಲಿಂಪ್ಸ್ ಪ್ರಸಾರ ಆಗಲಿದೆ. ಆ ಮೂಲಕ ‘ರಾಮಾಯಣ’ ಚಿತ್ರತಂಡ ಹಿಂದೆಂದೂ ಯಾವ ಭಾರತೀಯ ಸಿನಿಮಾ ಮಾಡಿರದ ಪ್ರಚಾರ ಸಾಹಸವನ್ನು ಮಾಡಲು ಮುಂದಾಗಿದೆ. ಕೆಲ ವಾರಗಳ ಹಿಂದಷ್ಟೆ ಅಮೆರಿಕದ ಪ್ರತಿಷ್ಟಿತ ಕಾಮಿಕಾನ್​​ನಲ್ಲಿ ‘ರಾಮಾಯಣ’ದ ಅದ್ಧೂರಿ ಪ್ರಚಾರ ಮಾಡಲಾಗಿತ್ತು. ಈಗ ನೇರವಾಗಿ ವಿಶ್ವದ ಅತ್ಯಂತ ದುಬಾರಿ, ಅತಿ ಹೆಚ್ಚು ಜನರು ನೋಡುವ ಇವೆಂಟ್​​ ನಲ್ಲಿ ಪ್ರಚಾರ ಮಾಡಲು ಮುಂದಾಗಿದೆ.

ಫುಟ್​​ಬಾಲ್ ವಿಶ್ವಕಪ್ ಅತ್ಯಂತ ದುಬಾರಿ ಕ್ರೀಡಾಕೂಟ ಆಗಿರುವ ಕಾರಣ ಇಲ್ಲಿ ಜಾಹೀರಾತಿಗೆ ಅವಕಾಶ ಪಡೆಯಲು ಸಹ ಭಾರಿ ಮೊತ್ತದ ಹಣವನ್ನೇ ಖರ್ಚು ಮಾಡಬೇಕಾಗುತ್ತದೆ. ಹಾಗಿದ್ದಲ್ಲಿಯೂ ‘ರಾಮಾಯಣ’ ಚಿತ್ರತಂಡ ಫುಟ್​​ಬಾಲ್ ಪಂದ್ಯದ ನಡುವೆ ಸಿನಿಮಾದ 20 ರಿಂದ 30 ಸೆಕೆಂಡುಗಳ ದೃಶ್ಯವನ್ನು ಪ್ರದರ್ಶಿಸಲು ಮುಂದಾಗಿದೆ. ಇದು ದೊಡ್ಡ ಖರ್ಚಿನ ಬಾಬತ್ತಾಗಲಿದೆ.

ಇದನ್ನೂ ಓದಿ:ಮ್ಯಾಂಗೋ ಪಚ್ಚ ಸಿನಿಮಾದಲ್ಲಿ ಮಿಂಚಿದ ಕಾಜಲ್ ಕುಂದರ್

‘ರಾಮಾಯಣ’ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅವರು ನಟಿಸಿದ್ದಾರೆ. ಸಿನಿಮಾವನ್ನು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link