Category Archives: Blog

Your blog category

ಪ್ರತ್ಯೇಕ ಘಟನೆ: ಕೊಡಗಿನಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಜಿಪಿ ಪತ್ನಿ ಬಲಿ; ಹಾಸನದಲ್ಲಿ ನಾಲ್ವರ ಮೇಲೆ‌ ಚಿರತೆ ದಾಳಿ – Kannada News

ಕೊಡಗು, ಜೂನ್​​ 05: ಕಾಡಾನೆ (Elephant) ದಾಳಿಗೆ ನಿವೃತ್ತ ಐಜಿಪಿ ಪತ್ನಿ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೋಣನಕಟ್ಟೆಯಲ್ಲಿ ನಡೆದಿದೆ. ಆ ಮೂಲಕ ಕಾಡಾನೆ ದಾಳಿಗೆ ಮತ್ತೊಂದು ಬಲಿ ಆಗಿದೆ. ನಿವೃತ್ತ ಐಜಿಪಿ ಅಣ್ಣಳಮಾಡ ಸುನೀಲ್ ಅಚ್ಚಯ್ಯ ಪತ್ನಿ ಸಂಧ್ಯಾ(60) ಮೃತ ದುರ್ದೈವಿ. ನಿನ್ನೆಯಷ್ಟೇ ಸಂಧ್ಯಾ ಕುಟುಂಬ ದೆಹಲಿಯಿಂದ‌ ಸ್ವಗ್ರಾಮಕ್ಕೆ ಬಂದಿದ್ದರು.

ನಡೆದಿದ್ದೇನು?

ಬೆಳಗ್ಗೆ 9 ಗಂಟೆಗೆ ತಮ್ಮ ಸ್ವಂತ ಎಸ್ಟೇಟ್​ಗೆ ತೆರಳಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಗಾಯಗೊಂಡ ಸಂಧ್ಯಾರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರ್ಮಿಕರಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನದಲ್ಲಿ ನಾಲ್ವರ ಮೇಲೆ‌ ಚಿರತೆ ದಾಳಿ‌

ಇನ್ನು ಹಾಸನ ಹೊಳೆನರಸೀಪುರ ತಾಲೂಕಿನ ಅಂಕವಳ್ಳಿಯಲ್ಲಿ ನಾಲ್ವರ ಮೇಲೆ‌ ಚಿರತೆ ದಾಳಿ‌ ಮಾಡಿದೆ. ಬೆಳಿಗ್ಗೆ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿದೆ. ಗ್ರಾಮದ ರೈತ ನವೀನ್(40), ನಾಗರಾಜ್(55) ಮತ್ತು ಜಯಮ್ಮ(70) ಮೇಲೆ ದಾಳಿ ಮಾಡಿದ್ದು, ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ರೈತರನ್ನು ಹೊಳೆನರಸೀಪುರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮತ್ತು ಆನೆ ಸಾವು ಪ್ರಕರಣ: ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆ!

ಗ್ರಾಮದಲ್ಲಿ ಚಿರತೆ ಇರುವ ಬಗ್ಗೆ ಮಾಹಿತಿ ನೀಡಿದ್ದರು ಅರಣ್ಯ ಇಲಾಖೆ ನಿರ್ಲಕ್ಷಿಸಿರುವ ಆರೋಪ ಕೇಳಿಬಂದಿದೆ. ಸದ್ಯ ರೈತರು ಜಮೀನು ಕೆಲಸಕ್ಕೆ ತೆರಳಲು ರೈತರಿಗೆ ಜೀವಭಯದ ಆತಂಕ ಶುರುವಾಗಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭ

ಅಂಕವಳ್ಳಿಯಿಂದ ಬೂವನಹಳ್ಳಿ ಕಡೆಗೆ ಓಡಿದ ಚಿರತೆ ವಸಂತಮ್ಮ ಎನ್ನುವವರ ಮೇಲೂ ದಾಳಿ ಮಾಡಿದೆ. ಕೂಡಲೇ ಮಹಿಳೆ ಕೂಗಾಡಿದ್ದರಿಂದ ಗಾಬರಿಯಿಂದ ಚಿರತೆ ದನದ ಕೊಟ್ಟಿಗೆ ಸೇರಿಕೊಂಡಿದೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಕೊಟ್ಟಿಗೆ ಬಾಗಿಲು ಮುಚ್ಚಿದ್ದಾರೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೈಸೂರಿನ ವನ್ಯಜೀವಿ ವೈದ್ಯ ಡಾ ಆದರ್ಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸ್ಥಳದಲ್ಲಿ ಸಿಸಿಎಫ್ ಏಡುಕೊಂಡಲು ಮೊಕ್ಕಾಂ ಹೂಡಿದ್ದಾರೆ. ಅರವಳಿಕೆ‌ ಮದ್ದು ನೀಡಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆದಿದೆ.

ಡಿಸಿ ಲತಾ ಕುಮಾರಿ ಹೇಳಿದಿಷ್ಟು

ಇನ್ನು ಈ ಬಗ್ಗೆ ಡಿಸಿ ಲತಾ ಕುಮಾರಿ ಪ್ರತಿಕ್ರಿಯಿಸಿದ್ದು, ಈಗಾಗಲೇ ಚಿರತೆ ಇರುವ ಸ್ಥಳ ಗುರುತು ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಟ್ಯಾಕ್ ಮಾಡಿದ ಚಿರತೆಯನ್ನ ಸೆರೆ ಹಿಡಿಯಲಾಗುತ್ತೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ – Kannada News

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ

ಬೆಂಗಳೂರು, ಜೂನ್ 05: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕುಗೊಂಡಿದೆ. ಜೂನ್ 18 ರಂದು ಕರ್ನಾಟಕದ 4 ಸ್ಥಾನಗಳು ಸೇರಿದಂತೆ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್​ನ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಇಂದು  ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಮುಖ್ಯಾಂಶಗಳು

  • ಜೂನ್ 18ರ ರಾಜ್ಯಸಭೆ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ನಾಮಪತ್ರ ಸಲ್ಲಿಕೆ.
  • ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.
  • ರಾಹುಲ್ ಗಾಂಧಿ, ಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕರ ಒಗ್ಗಟ್ಟು ಪ್ರದರ್ಶನ.

ಕಾಂಗ್ರೆಸ್ ವರಿಷ್ಠರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ

ವಿಧಾನಸಭೆ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ಖರ್ಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರ ದಂಡೇ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಕೆ.ಹೆಚ್. ಮುನಿಯಪ್ಪ, ಭೈರತಿ ಸುರೇಶ್ ಮತ್ತು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಮ್ಮ ಎಲ್ಲಾ ಶಾಸಕರು ಮತ್ತು ನಾಯಕರು ನನ್ನನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಜೂನ್ 18 ರ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:48 pm, Fri, 5 June 26

Source link

ಭಾರತೀಯ ವಾಯುಪಡೆಯ ನೂತನ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ – Kannada News

ನವದೆಹಲಿ, ಜೂನ್ 5: ಭಾರತೀಯ ವಾಯುಪಡೆಯ (IAF) ನೂತನ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕಗೊಂಡಿದ್ದಾರೆ. ಜುಲೈ 1ರಿಂದ ಅವರು ಈ ನೂತನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್‌ನ ಪ್ರಧಾನ ಕಚೇರಿಯಲ್ಲಿ ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (CISC) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಏರ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ತಮ್ಮ ವಿವಿಧ ಅಧಿಕಾರಾವಧಿಯಲ್ಲಿ ವಾಯುಪಡೆಯ ಆಧುನೀಕರಣ ಮತ್ತು ವಾಯುಪಡೆಯಲ್ಲಿ ದೇಶೀಯ ಫೈಟರ್ ಜೆಟ್ ಯೋಜನೆಗಳನ್ನು ಉತ್ತೇಜಿಸುವಲ್ಲಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಪ್ರಮುಖ ಕೊಡುಗೆ ನೀಡಿದ್ದಾರೆ. ಅಲ್ಲದೆ, ಮೀಡಿಯಂ ಮಲ್ಟಿ-ರೋಲ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (MMRCA) ಪ್ರಯೋಗಗಳ ಯೋಜನೆ ಮತ್ತು ನಿರ್ವಹಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಖಡಕ್ವಾಸ್ಲಾ, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ಬಾಂಗ್ಲಾದೇಶ) ಮತ್ತು ನವದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ಇದನ್ನೂ ಓದಿ: Agniveer Vayu Recruitment 2026: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಸಾಕು!

ಇವರು ಅರ್ಹ ಫ್ಲೈಯಿಂಗ್ ಇನ್ಸ್ಟ್ರಕ್ಟರ್ ಮತ್ತು ಎಕ್ಸ್‌ಪೆರಿಮೆಂಟಲ್ ಟೆಸ್ಟ್ ಪೈಲಟ್ ಆಗಿದ್ದು, ಮಿರಾಜ್-2000 (Mirage-2000), ಮಿಗ್-21 (MiG-21) ಮತ್ತು ಜಾಗ್ವಾರ್ (Jaguar) ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಮಾದರಿಯ ವಿಮಾನಗಳಲ್ಲಿ 3,300ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅಪಾರ ಅನುಭವವನ್ನು ಹೊಂದಿದ್ದಾರೆ. ದಕ್ಷಿಣ ವಲಯದ ಪ್ರಮುಖ ಫೈಟರ್ ಟ್ರೈನಿಂಗ್ ಬೇಸ್‌ನ ಕಮಾಂಡರ್ ಆಗಿಯೂ ಕಾರ್ಯನಿರ್ವಹಿಸಿದ್ದ ಇವರ ಅತ್ಯುತ್ತಮ ನಾಯಕತ್ವದ ಪರಿಣಾಮವಾಗಿ ಆ ಬೇಸ್ ಇಡೀ ಕಮಾಂಡ್‌ನಲ್ಲೇ ‘ಅತ್ಯುತ್ತಮ ಬೇಸ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇವರ ಈ ಸುದೀರ್ಘ ಅನುಭವವು ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಪಡಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪ್ರತಿಷ್ಠಿತ ಅರ್ಥ್ ಪ್ರಶಸ್ತಿ ಗೆದ್ದ ಭಾರತೀಯ ಮೂವರು ವಿದ್ಯಾರ್ಥಿಗಳು; ಇವರ ಸಾಧನೆ ಏನು ಗೊತ್ತಾ?

ಮೈಕ್ರೋಪ್ಲಾಸ್ಟಿಕ್ ಸಮಸ್ಯೆಗೆ ಹುಣಸೆ ಬೀಜದಿಂದ ಪರಿಹಾರ ಕಂಡುಕೊಂಡ ಮೂವರು ಭಾರತೀಯ ವಿದ್ಯಾರ್ಥಿಗಳಾದ ವಿವಾನ್, ಅರಿಯಾನ್ ಅಗರ್‌ವಾಲ್ ಮತ್ತು ಅವ್ಯಾನ ಮೆಹ್ತಾ 2026ರ ಪ್ರತಿಷ್ಠಿತ ಅರ್ಥ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಜಸ್ಥಾನದ ಜೈಪುರದ ಜಯಶ್ರೀ ಪೆರಿವಾಲ್ ಇಂಟರ್ನ್ಯಾಷನಲ್ ಸ್ಕೂಲ್‌ನ ಈ 16 ವರ್ಷದ ವಿದ್ಯಾರ್ಥಿಗಳು ತಮ್ಮ ಪ್ಲಾಸ್-ಸ್ಟಿಕ್ ಆವಿಷ್ಕಾರಕ್ಕಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಹುಣಸೆ ಬೀಜದಲ್ಲಿರುವ ನೈಸರ್ಗಿಕ ಅಂಟಿನ ಗುಣವು ನೀರಿನಲ್ಲಿರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳನ್ನು ಆಕರ್ಷಿಸಿ ಹೆಪ್ಪುಗಟ್ಟುವಂತೆ ಮಾಡುತ್ತದೆ. ನಂತರ ಅವುಗಳನ್ನು ಸುಲಭವಾಗಿ ಬೇರ್ಪಡಿಸಬಹುದು. ಈ ರಾಸಾಯನಿಕ ಮುಕ್ತ ಮತ್ತು ಕಡಿಮೆ ವೆಚ್ಚದ ವಿಧಾನವು ಕುಡಿಯುವ ನೀರನ್ನು ಶುದ್ಧೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅವರ ಈ ಪರಿಸರ ಸ್ನೇಹಿ ಆವಿಷ್ಕಾರಕ್ಕೆ 23,000ಕ್ಕೂ ಹೆಚ್ಚು ಜಾಗತಿಕ ತಜ್ಞರು ಮತ್ತು ಸಾರ್ವಜನಿಕರು ಮತ ಚಲಾಯಿಸಿದ್ದಾರೆ. ಭಾರತೀಯರಿಗೆ ಮೊದಲ ಬಾರಿಗೆ ಈ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

ಸತತ 2ನೇ ಪಂದ್ಯದಲ್ಲೂ ಸೂರ್ಯ ಫೇಲ್; ತಂಡಕ್ಕೆ ಗೆಲುವು ತಂದ ಶ್ರೇಯಸ್ ಅಯ್ಯರ್ – Kannada News

ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav)​ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ನಡುವೆ ತಮ್ಮ ಹಳೆಯ ಫಾರ್ಮ್​ಗೆ ಮರಳಲು ಮುಂಬೈನ ಟಿ20 ಲೀಗ್‌ನಲ್ಲಿ ಆಡುತ್ತಿರುವ ಸೂರ್ಯಕುಮಾರ್ ಯಾದವ್​ಗೆ ಈ ಲೀಗ್​ನಲ್ಲೂ ಯಶಸ್ಸು ಸಿಕ್ಕಿಲ್ಲ. ಐಪಿಎಲ್‌ನಲ್ಲಿ ರನ್ ಬರ ಎದುರಿಸಿದ್ದ ಸೂರ್ಯ ಇದೀಗ ಮುಂಬೈ ಟಿ20 ಲೀಗ್​ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಸೂರ್ಯ ರನ್ ಬರ ಎದುರಿಸುವುದರ ಜೊತೆಗೆ ತಮ್ಮ ನಾಯಕತ್ವದಲ್ಲಿ ತಂಡವನ್ನು ಸೋಲಿನ ದವಡೆಗೆ ತಳ್ಳಿದ್ದಾರೆ.

ಶ್ರೇಯಸ್ ತಂಡಕ್ಕೆ ಮೊದಲ ಜಯ

ಮತ್ತೊಂದೆಡೆ, ಭಾರತ ಟಿ20 ತಂಡದ ನೂತನ ನಾಯಕನ ಸ್ಥಾನಕ್ಕೆ ಆಯ್ಕೆಯಾಗುತ್ತಿರುವ ಶ್ರೇಯಸ್ ಅಯ್ಯರ್ ಕೂಡ ಮುಂಬೈ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಅಯ್ಯರ್ ತಂಡಕ್ಕೆ ಗೆಲುವು ಧಕ್ಕಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ತಂಡಕ್ಕೆ ಮೊದಲ ಗೆಲುವು ಸಿಕ್ಕಿದೆ. ಈ ಇಬ್ಬರು ಆಟಗಾರರ ತಂಡಗಳ ಪಂದ್ಯಗಳು ಜೂನ್ 4 ರಂದು ನಡೆದವು. ಈ ಆವೃತ್ತಿಯ 7 ನೇ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ಪ್ರತಿನಿಧಿಸುವ ಸೋಬೊ ಮುಂಬೈ ಫಾಲ್ಕನ್ಸ್ ತಂಡ ಎಂಎಸ್‌ಸಿ ಮರಾಠಾ ರಾಯಲ್ಸ್ ತಂಡವನ್ನು ಎದುರಿಸಿದರೆ, 8 ನೇ ಪಂದ್ಯ ಸೂರ್ಯಕುಮಾರ್ ಯಾದವ್ ನಾಯಕತ್ವದ ಟ್ರಯಂಫ್ ನೈಟ್ ಎಂಎಸ್‌ಸಿ ಮತ್ತು ಬಾಂದ್ರಾ ಬ್ಲಾಸ್ಟರ್ಸ್ ನಡುವೆ ನಡೆಯಿತು.

ಶ್ರೇಯಸ್ ಅಯ್ಯರ್ ಪ್ರತಿನಿಧಿಸುವ ಸೋಬೊ ಮುಂಬೈ ಫಾಲ್ಕನ್ಸ್ ತಂಡ, ಎಂಎಸ್‌ಸಿ ಮರಾಠಾ ರಾಯಲ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಂಎಸ್‌ಸಿ ಮರಾಠಾ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 152 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಸೊಬೊ ಮುಂಬೈ ಫಾಲ್ಕನ್ಸ್ 19.1 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಐದು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.

ಈ ಗೆಲುವಿನ ರನ್ ಚೇಸ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಕೊಡುಗೆ 30 ರನ್‌ಗಳಾಗಿದ್ದು, ಇದರಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ ಸೋಬೊ ಮುಂಬೈ ಫಾಲ್ಕನ್ಸ್, 2026 ರ ಟಿ20 ಮುಂಬೈ ಲೀಗ್‌ನಲ್ಲಿ ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಇದು ಮೊದಲ ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ, ಎಆರ್‌ಸಿಎಸ್ ಅಂಧೇರಿ ತಂಡ, ಸೋಬೊ ಮುಂಬೈ ಫಾಲ್ಕನ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಕೇವಲ ಐದು ರನ್‌ ಕಲೆಹಾಕಲಷ್ಟೇ ಶಕ್ತರಾದರು.

ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್​ಗೆ ಗೇಟ್​ಪಾಸ್

ಸತತ 2ನೇ ಪಂದ್ಯದಲ್ಲೂ ಸೂರ್ಯ ಫೇಲ್

ಜೂನ್ 4 ರಂದು ನಡೆದ ತನ್ನ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟ್ರಯಂಫ್ ನೈಟ್ಸ್ ಎಂಎಸ್‌ಸಿ ತಂಡವು ಬಾಂದ್ರಾ ಬ್ಲಾಸ್ಟರ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ಟ್ರಯಂಫ್ ನೈಟ್ಸ್ ಎಂಎಸ್‌ಸಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 178 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಬಾಂದ್ರಾ ಬ್ಲಾಸ್ಟರ್ಸ್ ತಂಡವು 19.3 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 179 ರನ್ ಗಳಿಸಿ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ಸೂರ್ಯಕುಮಾರ್ ಈ ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ಔಟಾದರು.

2026 ರ ಟಿ20 ಮುಂಬೈ ಲೀಗ್‌ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟ್ರಯಂಫ್ ನೈಟ್ಸ್ ಎಂಎಸ್‌ಸಿಗೆ ಇದು ಸತತ ಎರಡನೇ ಸೋಲು. ಇದಕ್ಕೂ ಮೊದಲು, ಜೂನ್ 2 ರಂದು ನಡೆದಿದ್ದ ಪಂದ್ಯದಲ್ಲಿ ನಾರ್ತ್ ಮುಂಬೈ ಪ್ಯಾಂಥರ್ಸ್ ವಿರುದ್ಧ 21 ರನ್‌ಗಳ ಸೋಲನ್ನು ಅನುಭವಿಸಿತ್ತು. ಸೂರ್ಯಕುಮಾರ್ ಯಾದವ್ ಆ ಪಂದ್ಯದಲ್ಲೂ ಕೇವಲ 19 ರನ್‌ ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬ, 54 ಕೆಜಿ ಲಡ್ಡು ಕೇಕ್ ಕತ್ತರಿಸಿ ಅಭಿಮಾನಿಗಳ ಸಂಭ್ರಮ

ವಾರಾಣಸಿ, ಜೂನ್ 05: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 54ನೇ ಜನ್ಮದಿನದ ಅಂಗವಾಗಿ ಶುಕ್ರವಾರ ವಾರಾಣಸಿಯಲ್ಲಿ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ವಿಭಿನ್ನವಾಗಿ ಸಂಭ್ರಮಿಸಿದ್ದಾರೆ. ಮುಖ್ಯಮಂತ್ರಿಗಳ ವಯಸ್ಸನ್ನು ಸಂಕೇತಿಸುವಂತೆ ಭರ್ಜರಿ 54 ಕೆಜಿಯ ವಿಶೇಷ ಲಡ್ಡು ಕೇಕ್ ಅನ್ನು ಸಿದ್ಧಪಡಿಸಿ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟಕರು ಹಾಗೂ ಬೆಂಬಲಿಗರು ಜಂಟಿಯಾಗಿ 54 ಸಸ್ಯಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ. ಯೋಗಿ ಆದಿತ್ಯನಾಥ್ ಅವರ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ, ಸಿಹಿ ಹಂಚಿ ಸೌಹಾರ್ದತೆಯಿಂದ ದಿನವನ್ನು ಆಚರಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ವೈದ್ಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಖಾದರ್: ಇನ್ಮುಂದೆ ಡೈರೆಕ್ಟ್ ವಾಕ್-ಇನ್ ಇಂಟರ್ವ್ಯೂ – Kannada News

ಬೆಂಗಳೂರು, ಜೂ.5: ಕರ್ನಾಟಕದ ಆರೋಗ್ಯ ಸಚಿವ ಯು.ಟಿ. ಖಾದರ್ (U.T. Khader) ಅವರು ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಮತ್ತು ಜನರಿಗೆ ಇನ್ನಷ್ಟು ಹತ್ತಿರವಾಗಿಸಲು ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಆರೋಗ್ಯ ಇಲಾಖೆಯು ದೊಡ್ಡ ಖಾತೆಯಾಗಿದ್ದು, ಡಾಕ್ಟರ್‌ಗಳ ನೇಮಕಾತಿಯಿಂದ ಹಿಡಿದು ನೀತಿ ರೂಪಿಸುವಿಕೆ ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಆದ್ಯತೆ ನೀಡುವುದಾಗಿ ಅವರು ತಿಳಿಸಿದ್ದಾರೆ. ಹಿಂದಿನ ಸಚಿವರಾದ ದಿನೇಶ್ ಗುಂಡು ರಾವ್ ಅವರು ಮಾಡಿದ ಉತ್ತಮ ಕೆಲಸಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಖಾದರ್ ಹೇಳಿದ್ದಾರೆ.

ಸಚಿವರು ಆಯುಷ್ಮಾನ್ ಕರ್ನಾಟಕ ಯೋಜನೆಯ ಅನುಷ್ಠಾನದ ಬಗ್ಗೆ ವಿಮರ್ಶಾ ಸಭೆ ನಡೆಸಿದ್ದು, ಈ ಯೋಜನೆಯಡಿ ಯಾವುದೇ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯೋಜನೆಯಲ್ಲಿ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚುವರಿಯಾಗಿ ಹಣ ಪಡೆಯುವ ಅವಕಾಶವಿಲ್ಲ. ಒಂದು ವೇಳೆ ಆಸ್ಪತ್ರೆಗಳು ಹೆಚ್ಚುವರಿ ಹಣ ಪಡೆದರೆ, ಅದರ ಮಾಹಿತಿಯನ್ನು ಜಿಲ್ಲಾ ಮಟ್ಟದ ಆರೋಗ್ಯ ಮಿತ್ರರ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನೀಡುವಂತೆ ಖಾದರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅಂತಹ ಆಸ್ಪತ್ರೆಗಳ ವಿರುದ್ಧ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಇನ್ನು ಎಂಬಿಬಿಎಸ್ ಪದವಿ ಮುಗಿಸಿದ ವೈದ್ಯರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಲಭಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಎಂಬಿಬಿಎಸ್ ಪದವೀಧರರು ನೇರವಾಗಿ ವಾಕ್-ಇನ್ ಸಂದರ್ಶನದ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗೆ ಪತ್ರ ನೀಡಬಹುದು. ಪತ್ರ ನೀಡಿದ ಒಂದು ವಾರದೊಳಗೆ ಅವರನ್ನು ನೇಮಕಾತಿ ಮಾಡಿಕೊಂಡು ಕೆಲಸ ನೀಡಬೇಕು ಎಂದು ಸಚಿವರು ಆದೇಶಿಸಿದ್ದಾರೆ. ಈ ವೈದ್ಯರಿಗೆ 60,000 ರೂ. ವೇತನವನ್ನು ನಿಗದಿಪಡಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಿಂದ ಮತ್ತು ವೈದ್ಯರಿಂದ ಸಲಹೆಗಳನ್ನು ಆಹ್ವಾನಿಸುವುದಾಗಿ ಯು.ಟಿ. ಖಾದರ್ ತಿಳಿಸಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

ತಮ್ಮ ಖಾತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಮಗೆ ಖಾತೆ ಕೊಟ್ಟಾಗ ನಾವು ಕೆಲಸ ಮಾಡಬೇಕು, ಅದು ನಮ್ಮ ಜವಾಬ್ದಾರಿ. ಇದರಲ್ಲಿ ಸಮಾಧಾನ ಮತ್ತು ತೃಪ್ತಿ ಸಿಗುತ್ತದೆ. ನಾನು ಸಮಾಧಾನದಿಂದ ಇದ್ದೇನೆ, ಖುಷಿಯಿಂದ ಇದ್ದೇನೆ, ಆ ಕೆಲಸ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:32 pm, Fri, 5 June 26

Source link

ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾ ಟಿಕೆಟ್ ಬರೋಬ್ಬರಿ 1.4 ಲಕ್ಷ ರೂ.ಗೆ ಮಾರಾಟ – Kannada News

ವಿಶ್ವಪ್ರಸಿದ್ಧ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಿನಿಮಾ ಬರ್ತಿದೆ ಎಂದರೆ ಸಾಕು, ಜಗತ್ತಿನಾದ್ಯಂತ ಸಿನಿರಸಿಕರಲ್ಲಿ ಭಾರಿ ಕುತೂಹಲ ಮತ್ತು ಹೈಪ್ ಸೃಷ್ಟಿಯಾಗುವುದು ತೀರಾ ಮಾಮೂಲಿ. ಆದರೆ, ಅವರ ಮುಂಬರುವ ಹೊಸ ಸಿನಿಮಾ ‘ದಿ ಒಡಿಸ್ಸಿ’ (The Odyssey) ವಿಷಯದಲ್ಲಿ ಮಾತ್ರ ಈ ಕ್ರೇಜ್ ಈಗ ಎಲ್ಲ ಎಲ್ಲೆಗಳನ್ನೂ ಮೀರಿ ನಿಂತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ.

ಹಾಲಿವುಡ್ ಮಾಧ್ಯಮಗಳ ಇತ್ತೀಚಿನ ವರದಿಗಳ ಪ್ರಕಾರ, ಇಬೇ ವೆಬ್‌ಸೈಟ್‌ನಲ್ಲಿ ‘ದಿ ಒಡಿಸ್ಸಿ’ ಸಿನಿಮಾದ ಬ್ಲ್ಯಾಕ್ ಟಿಕೆಟ್‌ಗಳು ಬರೋಬ್ಬರಿ 1500 ಡಾಲರ್‌ಗೆ ಮಾರಾಟವಾಗುತ್ತಿವೆ. ಇದನ್ನು ಭಾರತೀಯ ರೂಪಾಯಿಗಳಿಗೆ ಕನ್ವರ್ಟ್ ಮಾಡಿದರೆ ಅಂದಾಜು 1.4 ಲಕ್ಷ ರೂಪಾಯಿ ಆಗುತ್ತದೆ. ಒಂದೇ ಒಂದು ಟಿಕೆಟ್‌ಗೆ ಜನರು ಇಷ್ಟೊಂದು ದೊಡ್ಡ ಮೊತ್ತ ನೀಡುತ್ತಿರುವುದು ನೋಲನ್ ಸಿನಿಮಾಗಳ ಮೇಲಿರುವ ಗರಿಷ್ಠ ಮಟ್ಟದ ನಿರೀಕ್ಷೆಯನ್ನು ಸಾಬೀತುಪಡಿಸಿದೆ.

‘ದಿ ಒಡಿಸ್ಸಿ’ ಸಿನಿಮಾವನ್ನು ಸಂಪೂರ್ಣವಾಗಿ ಅತ್ಯಾಧುನಿಕ ಐಮ್ಯಾಕ್ಸ್ (IMAX) ಕ್ಯಾಮೆರಾಗಳಲ್ಲೇ ಚಿತ್ರೀಕರಿಸಲಾಗಿದೆ. ಇದನ್ನು 1.43:1 ರೇಶಿಯೋದ 70ಎಂಎಂ ಐಮ್ಯಾಕ್ಸ್ ಪರದೆಯ ಮೇಲೆ ನೋಡುವುದೇ ಒಂದು ಅದ್ಭುತ ದೃಶ್ಯ ವೈಭವ. ಇದೇ ಕಾರಣಕ್ಕೆ, ಚಿತ್ರಮಂದಿರದ ಅತ್ಯುತ್ತಮ ಐಮ್ಯಾಕ್ಸ್ ಸ್ಕ್ರೀನ್‌ನಲ್ಲಿ ಈ ಮ್ಯಾಜಿಕ್ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದು, ಒಂದು ಟಿಕೆಟ್‌ಗೆ ಲಕ್ಷ ಲಕ್ಷ ಹಣ ಚೆಲ್ಲಲು ರೆಡಿಯಾಗಿದ್ದಾರೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?

ಬಿಡುಗಡೆಗೂ ಮುನ್ನವೇ ಇಷ್ಟೊಂದು ಸೌಂಡ್ ಮಾಡುತ್ತಿರುವ ಈ ಸಿನಿಮಾ, ತೆರೆಕಂಡ ಮೇಲೆ ಬಾಕ್ಸ್ ಆಫೀಸ್‌ನಲ್ಲಿ ಇನ್ನೆಷ್ಟು ದಾಖಲೆಗಳನ್ನು ಉಡೀಸ್ ಮಾಡಲಿದೆಯೋ ಎಂಬ ಪ್ರಶ್ನೆ ಸಿನಿರಸಿಕರಲ್ಲಿ ಮೂಡಿದೆ.
ಹೋಮರ್ ಬರೆದಿರುವ ಗ್ರೀಕ್ ಮಹಾಕಾವ್ಯದ ಹಿನ್ನೆಲೆಯುಳ್ಳ ‘ದಿ ಒಡಿಸ್ಸಿ’ ಸಿನಿಮಾ ಜುಲೈ 17 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮ್ಯಾಟ್ ಡಾಮನ್, ಟಾಮ್ ಹಾಲೆಂಡ್, ಆನ್ ಹ್ಯಾಥ್‌ವೇ, ರಾಬರ್ಟ್ ಪ್ಯಾಟಿನ್ಸನ್, ಝೆಂಡಾಯಾ ಮತ್ತು ಚಾರ್ಲಿಜ್ ಥೆರಾನ್ ಸೇರಿದಂತೆ ಹಾಲಿವುಡ್‌ನ ದಿಗ್ಗಜ ಕಲಾವಿದರ ದಂಡೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೇರಳೆ ಹಣ್ಣು ಮಧುಮೇಹ, ಜೀರ್ಣಕ್ರಿಯೆಗೆ ರಾಮಬಾಣ; ಸಂಪೂರ್ಣ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ – Kannada News

ನೇರಳೆ ಹಣ್ಣು ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಔಷಧೀಯ ಫಲಗಳಲ್ಲಿ ಒಂದಾಗಿದೆ. ಸಂಸ್ಕೃತದಲ್ಲಿ ಇದನ್ನು “ಜಂಬೂ”, ಕನ್ನಡದಲ್ಲಿ “ನೇರಳೆ” ಮತ್ತು ಹಿಂದಿಯಲ್ಲಿ “ಜಾಮುನ್” ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Syzygium cumini. ಈ ಅದ್ಭುತ ಮರದ ಹಣ್ಣು, ಬೀಜ, ಎಲೆ, ತೊಗಟೆ ಮತ್ತು ಬೇರು—ಹೀಗೆ ಪ್ರತಿಯೊಂದು ಭಾಗವೂ ತನ್ನದೇ ಆದ ವಿಶಿಷ್ಟ ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ ನೇರಳೆ ಹಣ್ಣು ಕಷಾಯ (ಒಗರು) ರಸ ಹಾಗೂ ಶೀತ ಸ್ವಭಾವವನ್ನು ಹೊಂದಿದೆ. ವಿಶೇಷವಾಗಿ ಮಧುಮೇಹ, ಜೀರ್ಣಕ್ರಿಯೆ, ರಕ್ತಶುದ್ಧಿ ಮತ್ತು ಬಾಯಿಯ ಆರೋಗ್ಯದ ವಿಷಯಗಳಲ್ಲಿ ಇದರ ಬಳಕೆ ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಅದ್ಭುತ ಆರೋಗ್ಯ ನೀಡುವ ನೇರಳೆ ಹಣ್ಣಿನ ಉಪಯೋಗಗಳು:

ನೇರಳೆ ಹಣ್ಣು ಮತ್ತು ಅದರ ಬೀಜಗಳು ಮಧುಮೇಹ (ಡಯಾಬಿಟಿಸ್) ನಿಯಂತ್ರಣಕ್ಕೆ ರಾಮಬಾಣ ಎಂದು ಪ್ರಾಚೀನ ವೈದ್ಯಕೀಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಒಣಗಿಸಿದ ಬೀಜದ ಪುಡಿಯನ್ನು ಮಿತ ಪ್ರಮಾಣದಲ್ಲಿ ನೀರಿನೊಂದಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಇದರೊಂದಿಗೆ ಅಜೀರ್ಣ, ಹೊಟ್ಟೆ ನೋವು, ಭೇದಿ ಮತ್ತು ಅತಿಸಾರದಂತಹ ಸಮಸ್ಯೆಗಳಲ್ಲಿ ನೇರಳೆ ಹಣ್ಣು ಉಪಯುಕ್ತವೆಂದು ಪರಿಗಣಿಸಲಾಗಿದೆ. ಊಟದ ನಂತರ ಸ್ವಲ್ಪ ಪ್ರಮಾಣದಲ್ಲಿ ಇದನ್ನು ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಅಲ್ಲದೆ, ನೇರಳೆಯಲ್ಲಿರುವ ಹೇರಳವಾದ ಕಬ್ಬಿಣಾಂಶ ಮತ್ತು ವಿಟಮಿನ್ C ರಕ್ತ ಉತ್ಪಾದನೆಗೆ ನೆರವಾಗುವ ಮೂಲಕ ರಕ್ತಹೀನತೆಯನ್ನು (Anemia) ಕಡಿಮೆ ಮಾಡಿ ರಕ್ತವನ್ನು ಶುದ್ಧಗೊಳಿಸುತ್ತದೆ.

ಬೀಜ ಮತ್ತು ತೊಗಟೆಯ ಔಷಧೀಯ ರಹಸ್ಯಗಳು:

ನೇರಳೆ ಹಣ್ಣಿನ ಬೀಜಗಳನ್ನು ಒಣಗಿಸಿ ಸಿದ್ಧಪಡಿಸುವ ಪುಡಿಯನ್ನು ಮಧುಮೇಹ ಮಾತ್ರವಲ್ಲದೆ ಅತಿಸಾರ ಮತ್ತು ಮೂತ್ರ ಸಂಬಂಧಿತ ತೊಂದರೆಗಳಿಗೂ ಬಳಸಲಾಗುತ್ತದೆ. ಇದರ ಬೀಜದ ಕಷಾಯವು ಮೂತ್ರದ ಸೋಂಕು (UTI), ಮೂತ್ರದ ಉರಿ ಹಾಗೂ ಮೂತ್ರಪಿಂಡದ (ಕಿಡ್ನಿ) ಆರೋಗ್ಯಕ್ಕೆ ಒಳ್ಳೆಯದು. ಇನ್ನು ಗ್ರಾಮೀಣ ಭಾರತದಲ್ಲಿ ನೇರಳೆ ಮರದ ತೊಗಟೆಯನ್ನು ಒಣಗಿಸಿ ಪುಡಿ ಮಾಡಿ ಹಲ್ಲುಜ್ಜಲು ಬಳಸುವ ಪದ್ಧತಿ ಇಂದಿಗೂ ಇದೆ. ಇದು ವಸಡುಗಳನ್ನು ಗಟ್ಟಿಗೊಳಿಸಿ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಈ ತೊಗಟೆಯ ಕಷಾಯದಿಂದ ಮುಖ ತೊಳೆಯುವುದರಿಂದ ಮೊಡವೆಗಳು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

ಎಲೆಗಳಲ್ಲಿದೆ ಬಾಯಿ ದುರ್ಗಂಧ ಹಾಗೂ ಗಾಯ ವಾಸಿ ಮಾಡುವ ಗುಣ:

ತಾಜಾ ನೇರಳೆ ಎಲೆಗಳನ್ನು ಪ್ರತಿದಿನ ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ ಮತ್ತು ಒಸಡುಗಳ ಆರೋಗ್ಯ ಸುಧಾರಿಸುತ್ತದೆ. ಕೆಲವು ಪ್ರಾಚೀನ ಗ್ರಂಥಗಳಲ್ಲಿ ನೇರಳೆ ಎಲೆಯ ರಸವನ್ನು ಮಧುಮೇಹ ನಿರ್ವಹಣೆಗೆ ಸಹಾಯಕವಾಗಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಹಳ್ಳಿಗಳಲ್ಲಿ ಎಲೆಯ ರಸ ಅಥವಾ ಎಲೆಗಳ ಲೇಪನವನ್ನು ಸಣ್ಣಪುಟ್ಟ ಗಾಯಗಳ ಮೇಲೆ ಹಚ್ಚುವ ಸಂಪ್ರದಾಯವಿದೆ. ಇದು ಆಂಟಿಸೆಪ್ಟಿಕ್ ತರಹ ಕೆಲಸ ಮಾಡಿ ಗಾಯಗಳು ಬೇಗ ವಾಸಿಯಾಗಲು ಸಹಕರಿಸುತ್ತದೆ.

ನೇರಳೆ ಹಣ್ಣಿನ ಅಡ್ಡ ಪರಿಣಾಮಗಳು ಮತ್ತು ಅಗತ್ಯ ಎಚ್ಚರಿಕೆಗಳು:

ನೇರಳೆ ಹಣ್ಣು ಆರೋಗ್ಯಕರವಾಗಿದ್ದರೂ, ಇದನ್ನು ಅತಿಯಾಗಿ ಅಥವಾ ತಪ್ಪು ಕ್ರಮದಲ್ಲಿ ಸೇವಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು:

  • ರಕ್ತದ ಸಕ್ಕರೆ ಕುಸಿತ: ಮಧುಮೇಹಕ್ಕೆ ಈಗಾಗಲೇ ಔಷಧಿ ಸೇವಿಸುವವರು ಹೆಚ್ಚಿನ ಪ್ರಮಾಣದಲ್ಲಿ ನೇರಳೆ ಬೀಜದ ಪುಡಿ ಬಳಸಿದರೆ ಸಕ್ಕರೆ ಮಟ್ಟ ಅಪಾಯಕಾರಿಯಾಗಿ ಇಳಿಯುವ (Hypoglycemia) ಸಾಧ್ಯತೆ ಇರುತ್ತದೆ.
  • ಹೊಟ್ಟೆಯ ತೊಂದರೆ: ನೇರಳೆ ಹಣ್ಣನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಹಾಗೆ ಮಾಡುವುದರಿಂದ ವಾಕರಿಕೆ, ಅಸಿಡಿಟಿ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಅತಿಯಾಗಿ ತಿಂದರೆ ಮಲಬದ್ಧತೆಯೂ ಉಂಟಾಗಬಹುದು.
  • ಹಾಲಿನ ಜೊತೆ ಬಳಕೆ ಬೇಡ: ನೇರಳೆ ಹಣ್ಣು ತಿಂದ ತಕ್ಷಣ ಅಥವಾ ಅದರ ಜೊತೆಯಲ್ಲಿ ಹಾಲು ಮತ್ತು ಮೊಸರನ್ನು ಸೇವಿಸಬಾರದು, ಇದು ವಿರುದ್ಧ ಆಹಾರವಾಗುತ್ತದೆ.

ಗರ್ಭಿಣಿಯರು ಮತ್ತು ಅಲರ್ಜಿ:

ಕೆಲವರಲ್ಲಿ ಇದು ಚರ್ಮದ ತುರಿಕೆ ಅಥವಾ ಉಸಿರಾಟದ ತೊಂದರೆಯಂತಹ ಅಲರ್ಜಿ ಉಂಟುಮಾಡಬಹುದು. ಗರ್ಭಿಣಿಯರು ಇದನ್ನು ಸಾಮಾನ್ಯ ಆಹಾರದ ಪ್ರಮಾಣದಲ್ಲಿ ಸೇವಿಸುವುದು ಸುರಕ್ಷಿತವಾದರೂ, ವೈದ್ಯಕೀಯ ಉದ್ದೇಶಕ್ಕೆ ಬಳಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಕಡ್ಡಾಯ. ದಿನಕ್ಕೆ 100 ರಿಂದ 150 ಗ್ರಾಂ ಮಿತಿಯಲ್ಲಿ ಹಣ್ಣನ್ನು ತಿನ್ನುವುದು ಅತ್ಯುತ್ತಮ.

ಇದನ್ನೂ ಓದಿ: ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ?

ನೇರಳೆ ಹಣ್ಣನ್ನು ಉಪ್ಪಿನ ಜೊತೆ ತಿನ್ನುವ ಸಾಂಪ್ರದಾಯಿಕ ಪದ್ಧತಿ:

ನೇರಳೆ ಹಣ್ಣು ಸ್ವಭಾವತಃ ಒಗರು ಮತ್ತು ಹುಳಿ ರುಚಿ ಹೊಂದಿದೆ. ಉಪ್ಪು ಹಾಕಿ ತಿಂದಾಗ ಆ ಒಗರು ಕಡಿಮೆಯಾಗಿ ಹಣ್ಣಿನ ನೈಸರ್ಗಿಕ ಸಿಹಿ ಹೆಚ್ಚುತ್ತದೆ. ಇದು ಭಾರತದಾದ್ಯಂತ ಶತಮಾನಗಳಿಂದ ನಡೆದುಬಂದ ಸಂಪ್ರದಾಯವಾಗಿದೆ. ಸ್ವಲ್ಪ ಉಪ್ಪು (ವಿಶೇಷವಾಗಿ ಸೈಂಧವ ಲವಣ ಅಥವಾ ಕಲ್ಲುಪ್ಪು) ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ ಹಾಗೂ ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಕಡಿಮೆಯಾಗುತ್ತದೆ. ಕಷಾಯ ರಸ ಪ್ರಧಾನವಾದ ನೇರಳೆ ಹಾಗೂ ಲವಣ ರಸವಾದ ಉಪ್ಪು ಸೇರಿದಾಗ ರುಚಿಯ ಸಮತೋಲನ ಉಂಟಾಗುತ್ತದೆ. ಆದರೆ ನೆನಪಿಡಿ, ಕೇವಲ ರುಚಿಗಾಗಿ ಸ್ವಲ್ಪ ಮಾತ್ರ ಉಪ್ಪು ಬಳಸಬೇಕು. ಮಧುಮೇಹಿಗಳು ಮತ್ತು ಅಧಿಕ ರಕ್ತದೊತ್ತಡ (BP) ಇರುವವರು ಉಪ್ಪಿಲ್ಲದೆ ತಿನ್ನುವುದೇ ಆರೋಗ್ಯಕ್ಕೆ ಒಳ್ಳೆಯದು.

ನಮ್ಮ ಸಾಂಸ್ಕೃತಿಕ ಇತಿಹಾಸದ ಹೆಮ್ಮೆ ‘ಜಂಬೂದ್ವೀಪ’:

ನೇರಳೆ ಕೇವಲ ಒಂದು ಹಣ್ಣು ಮಾತ್ರವಲ್ಲ; ಅದು ಭಾರತದ ಸಂಸ್ಕೃತಿ ಮತ್ತು ಭವ್ಯ ಇತಿಹಾಸದ ಅವಿಭಾಜ್ಯ ಅಂಗವಾಗಿದೆ. ಪುರಾಣಗಳ ಪ್ರಕಾರ, “ಜಂಬೂ” (ನೇರಳೆ) ಎಂಬ ವಿಶಿಷ್ಟ ವೃಕ್ಷಗಳು ಯೆಥೇಚ್ಛವಾಗಿ ಬೆಳೆಯುತ್ತಿದ್ದ ಕಾರಣಕ್ಕಾಗಿಯೇ ಭಾರತವನ್ನು ಪ್ರಾಚೀನ ಕಾಲದಲ್ಲಿ “ಜಂಬೂದ್ವೀಪ” ಎಂದು ಕರೆಯಲಾಗುತ್ತಿತ್ತು. ಆದ್ದರಿಂದ ನೇರಳೆ ಹಣ್ಣು ಕೇವಲ ದೈಹಿಕ ಆರೋಗ್ಯ ನೀಡುವುದಲ್ಲದೆ, ನಮ್ಮ ಸಾಂಸ್ಕೃತಿಕ ಪರಂಪರೆಯ ಹೆಮ್ಮೆಯ ಸಂಕೇತವೂ ಆಗಿದೆ. ಹಣ್ಣು ಆರೋಗ್ಯ ನೀಡಿದರೆ, ಬೀಜ ಔಷಧಿಯಾಗುತ್ತದೆ, ಮರ ಪರಿಸರವನ್ನು ಕಾಪಾಡುತ್ತದೆ. ಪ್ರಕೃತಿ ನಮಗೆ ನೀಡಿರುವ ಈ ರುಚಿಕರ ಹಾಗೂ ಪೌಷ್ಟಿಕ ಕೊಡುಗೆಯನ್ನು ಮಿತವಾಗಿ ಬಳಸಿ ಆರೋಗ್ಯ ರಕ್ಷಿಸಿಕೊಳ್ಳೋಣ.

ಲೇಖನ: ಡಾ ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕಸಭೆಯತ್ತ ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಹೆಜ್ಜೆ, ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ – Kannada News

ಕೋಲ್ಕತ್ತಾ, ಜೂನ್ 05: ಭಾರತ ರಾಜಕಾರಣದ ಅತ್ಯಂತ ಪ್ರಭಾವಶಾಲಿ ಹಾಗೂ ಧೀಮಂತ ಮಹಿಳಾ ನಾಯಕಿಯಾಗಿರುವ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ(Mamata Banerjee) ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಸಕ್ರಿಯ ಪಾತ್ರ ವಹಿಸಲು ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ, ದೇಶದ ಕೆಳಮನೆಯಾದ ಲೋಕಸಭೆಯನ್ನು ಪ್ರವೇಶಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳನ್ನು ಮುನ್ನಡೆಸಲು ಅವರು ಗಂಭೀರ ಆಲೋಚನೆ ನಡೆಸಿದ್ದಾರೆ ಎಂದು ದೆಹಲಿ ಮತ್ತು ಕೋಲ್ಕತ್ತಾದ ರಾಜಕೀಯ ಮೂಲಗಳು ವರದಿ ಮಾಡಿವೆ. ಈ ತಂತ್ರವು ಕೇಂದ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಧ್ವನಿಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ವಿಶ್ಲೇಷಕರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರಿಗೆ ಲೋಕಸಭೆಯು ಹೊಸದೇನಲ್ಲ. 2011 ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ರಾಜ್ಯ ರಾಜಕಾರಣಕ್ಕೆ ಬರುವ ಮುನ್ನ, ಅವರು ದೀರ್ಘಕಾಲದವರೆಗೆ ಲೋಕಸಭಾ ಸದಸ್ಯರಾಗಿ ಕೋಲ್ಕತ್ತಾ ದಕ್ಷಿಣ ಕ್ಷೇತ್ರವನ್ನು ಅತ್ಯಂತ ಯಶಸ್ವಿಯಾಗಿ ಪ್ರತಿನಿಧಿಸಿದ್ದರು. ಅಲ್ಲದೆ, ಕೇಂದ್ರ ರೈಲ್ವೆ ಸಚಿವೆಯಾಗಿಯೂ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದ್ದರು. ಈಗ ಮತ್ತೊಮ್ಮೆ ಅವರು ಸಂಸತ್ತನ್ನು ಪ್ರವೇಶಿಸುತ್ತಿರುವುದು ರಾಷ್ಟ್ರ ಮಟ್ಟದಲ್ಲಿ ಟಿಎಂಸಿ ಪಕ್ಷಕ್ಕೆ ಆನೆಬಲ ತಂದಂತಾಗಲಿದೆ.

ವರದಿಗಳ ಪ್ರಕಾರ, ಮಮತಾ ಬ್ಯಾನರ್ಜಿ ಅವರ ಸಂಸತ್ ಪ್ರವೇಶಕ್ಕೆ ದಾರಿ ಸುಗಮಗೊಳಿಸಲು ಟಿಎಂಸಿಯ ಪ್ರಸ್ತುತ ಬಹರಂಪುರ ಲೋಕಸಭಾ ಸದಸ್ಯ ಹಾಗೂ ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಓದಿ: ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ; ಪ್ರತಿಭಟನೆಯಲ್ಲಿ ಕೇವಲ 5 ಶಾಸಕರು, 3 ಸಂಸದರು ಭಾಗಿ!

ಐತಿಹಾಸಿಕ ಜಯದ ಕ್ಷೇತ್ರ: 2011 ರ ವಿಶ್ವಕಪ್ ವಿಜೇತ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹರಂಪುರ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಹಿರಿಯ ಧುರೀಣ ಅಧೀರ್ ರಂಜನ್ ಚೌಧರಿ ಅವರನ್ನು ಸುಮಾರು 85,000 ಮತಗಳ ಭಾರಿ ಅಂತರದಿಂದ ಸೋಲಿಸಿ ಇತಿಹಾಸ ಸೃಷ್ಟಿಸಿದ್ದರು.

ಭವಿಷ್ಯದ ರಾಜಕೀಯಕ್ಕೆ ಹೊಸ ಮೈಲಿಗಲ್ಲು
ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 80 ಸ್ಥಾನಗಳಿಗೆ ಸೀಮಿತವಾಗಿದ್ದರೂ, ಮಮತಾ ಬ್ಯಾನರ್ಜಿ ಅವರು ಧೃತಿಗೆಡದೆ ದೆಹಲಿ ರಾಜಕಾರಣದತ್ತ ಮುಖ ಮಾಡಿರುವುದು ಅವರ ಅದಮ್ಯ ಹೋರಾಟದ ಗುಣಕ್ಕೆ ಸಾಕ್ಷಿಯಾಗಿದೆ. ಯೂಸುಫ್ ಪಠಾಣ್ ಅವರಂತಹ ನಿಷ್ಠಾವಂತ ನಾಯಕರ ಬೆಂಬಲದೊಂದಿಗೆ ಬಹರಂಪುರ ಸುರಕ್ಷಿತ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಲೋಕಸಭೆ ಪ್ರವೇಶಿಸಿದರೆ, ಮುಂಬರುವ ದಿನಗಳಲ್ಲಿ ಸಂಸತ್ತಿನ ಒಳಗಿನ ಚರ್ಚೆಗಳು ಮತ್ತಷ್ಟು ರೋಚಕ ಹಾಗೂ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಹೆಚ್ಚು ಸಶಕ್ತವಾಗಲಿವೆ ಎಂದು ರಾಜಕೀಯ ವಲಯ ನಂಬಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link