Category Archives: Blog

Your blog category

ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು – Kannada News

ನವದೆಹಲಿ, ಜೂನ್ 5: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು (Forex Reserve) ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಯತ್ನ ಮುಂದುವರಿಸಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ವಿದೇಶಿ ಬಂಡವಾಳದ ಒಳಹರಿವನ್ನು ಹೆಚ್ಚಿಸಲು 5 ಪ್ರಮುಖ ಕ್ರಮಗಳನ್ನು ಪ್ರಕಟಿಸಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹಣಕಾಸು ನೀತಿ ಸಮಿತಿ (MPC) ಸಭೆಯ ನಂತರ ಈ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆರ್‌ಬಿಐ ಪ್ರಕಟಿಸಿದ ಆ 5 ಪ್ರಮುಖ ಕ್ರಮಗಳ ವಿವರ ಮುಂದಿದೆ.

ಷೇರು ಮಾರುಕಟ್ಟೆಯಲ್ಲಿ ಎನ್‌ಆರ್‌ಐ/ಒಸಿಐ ಹೂಡಿಕೆ ಮಿತಿ ಹೆಚ್ಚಳ

ಅನಿವಾಸಿ ಭಾರತೀಯರು (NRI) ಮತ್ತು ಸಾಗರೋತ್ತರ ಭಾರತೀಯ ನಾಗರಿಕರು (OCI) ಸೆಬಿ (SEBI) ನೋಂದಣಿ ಇಲ್ಲದೆಯೇ ಭಾರತದ ಲಿಸ್ಟೆಡ್ ಷೇರುಗಳಲ್ಲಿ ಹೂಡಿಕೆ ಮಾಡಲು ಇರುವ ಮಿತಿಯನ್ನು ಆರ್‌ಬಿಐ ಹೆಚ್ಚಿಸಿದೆ. ಈ ಸೌಲಭ್ಯವನ್ನು ವಿದೇಶದಲ್ಲಿರುವ ಎಲ್ಲಾ ಭಾರತೀಯ ನಿವಾಸಿಗಳಿಗೂ ವಿಸ್ತರಿಸಲಾಗಿದೆ.

ಬ್ಯಾಂಕುಗಳಿಗೆ ಹೆಡ್ಜಿಂಗ್ ವೆಚ್ಚದ ಬೆಂಬಲ (Hedging Support)

ವಿದೇಶಿ ಕರೆನ್ಸಿ ಅನಿವಾಸಿ (FCNR-B) ಠೇವಣಿಗಳನ್ನು 3 ರಿಂದ 5 ವರ್ಷಗಳ ಅವಧಿಗೆ ಕ್ರೋಢೀಕರಿಸುವ ಬ್ಯಾಂಕುಗಳಿಗೆ, ಆರ್‌ಬಿಐ ಸೆಪ್ಟೆಂಬರ್ 30 ರವರೆಗೆ ಸಂಪೂರ್ಣ ಹೆಡ್ಜಿಂಗ್-ವೆಚ್ಚದ ಬೆಂಬಲವನ್ನು (ವಿದೇಶಿ ವಿನಿಮಯ ದರ ಏರಿಳಿತದ ನಷ್ಟದಿಂದ ರಕ್ಷಣೆ) ಮುಂದುವರಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ

ರಫ್ತು ಆದಾಯ ತರುವ ಅವಧಿ 9 ತಿಂಗಳಿಗೆ ಕಡಿತ

ಜಾಗತಿಕ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ರಫ್ತುದಾರರಿಗೆ ನೆರವಾಗಲು ಈ ಹಿಂದೆ ರಫ್ತು ಆದಾಯವನ್ನು ಭಾರತಕ್ಕೆ ತರಲು 15 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈಗ ಜಾಗತಿಕ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ, ರಫ್ತುದಾರರು ತಮ್ಮ ಸರಕುಗಳನ್ನು ಕಳುಹಿಸಿದ (Shipment) ದಿನಾಂಕದಿಂದ 9 ತಿಂಗಳ ಒಳಗಾಗಿ ಆ ಹಣವನ್ನು ಭಾರತಕ್ಕೆ ತರುವುದನ್ನು ಆರ್‌ಬಿಐ ಕಡ್ಡಾಯಗೊಳಿಸಿದೆ.

ಸಾರ್ವಜನಿಕ ವಲಯದ ಇಸಿಬಿಗಳಿಗೆ ರಿಯಾಯಿತಿ ದರದ ಸ್ವಾಪ್ ವಿಂಡೋ ವಿಸ್ತರಣೆ

ಸಾರ್ವಜನಿಕ ವಲಯದ ಉದ್ಯಮಗಳು (PSU) ವಿದೇಶದಿಂದ ಪಡೆಯುವ ಬಾಹ್ಯ ವಾಣಿಜ್ಯ ಸಾಲಗಳಿಗಾಗಿ (ECB) ನೀಡಲಾಗುವ ರಿಯಾಯಿತಿ ದರದ ಫಾರೆಕ್ಸ್ ಸ್ವಾಪ್ ವಿಂಡೋ (Concessional Forex Swap Window) ಸೌಲಭ್ಯವನ್ನು ಸೆಪ್ಟೆಂಬರ್ 30, 2026 ರವರೆಗೆ ಆರ್‌ಬಿಐ ವಿಸ್ತರಿಸಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ವಿದೇಶಿ ಸಾಲ ಪಡೆಯಲು ಮತ್ತು ರಿಸ್ಕ್ ನಿರ್ವಹಿಸಲು ಸಾಧ್ಯವಾಗುತ್ತದೆ.

ದೀರ್ಘಾವಧಿ ಸರ್ಕಾರಿ ಬಾಂಡ್‌ಗಳಿಗೂ ‘ಫಾರ್’ (FAR) ಮುಕ್ತ ಅವಕಾಶ

ವಿದೇಶಿ ಹೂಡಿಕೆದಾರರು ಭಾರತದ ಸಾರ್ವಜನಿಕ ಸಾಲ ಮಾರುಕಟ್ಟೆಯಲ್ಲಿ ಸುಲಭವಾಗಿ ಭಾಗವಹಿಸಲು ಅನುವಾಗುವಂತೆ, ಹೊಸದಾಗಿ ಬಿಡುಗಡೆ ಮಾಡಲಾದ 15-ವರ್ಷ, 30-ವರ್ಷ ಮತ್ತು 40-ವರ್ಷಗಳ ಸರ್ಕಾರಿ ಭದ್ರತಾ ಪತ್ರಗಳನ್ನು (G-Secs) ಆರ್‌ಬಿಐ ‘ಫುಲ್ಲಿ ಅಕ್ಸೆಸಿಬಲ್ ರೂಟ್’ (Fully Accessible Route – FAR) ಅಡಿಯಲ್ಲಿ ಸೇರಿಸಿದೆ. ಇದರಿಂದ ವಿದೇಶಿ ಹೂಡಿಕೆದಾರರು ಯಾವುದೇ ನಿರ್ಬಂಧವಿಲ್ಲದೆ ದೀರ್ಘಾವಧಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಬಾಂಡ್ ಮಾರುಕಟ್ಟೆಯಲ್ಲಿ ವಿದೇಶೀ ಹೂಡಿಕೆದಾರರಿಗೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಹೊರೆ ಇಲ್ಲ

ಜಾಗತಿಕವಾಗಿ ಇರಾನ್-ಅಮೆರಿಕ ಯುದ್ಧದ ಆತಂಕದಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯದಂತೆ ತಡೆಯಲು ಮತ್ತು ಭಾರತದ ಫಾರೆಕ್ಸ್ ಮಾರುಕಟ್ಟೆಯಲ್ಲಿ ಲಿಕ್ವಿಡಿಟಿ (ಹಣದ ಹರಿವು) ಕಾಯ್ದುಕೊಳ್ಳಲು ಆರ್‌ಬಿಐ ಈ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಆರ್ಥಿಕ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಪ್ರಸ್ತುತ ರೆಪೊ ದರವನ್ನು (Repo Rate) ಯಾವುದೇ ಬದಲಾವಣೆಯಿಲ್ಲದೆ 5.25% ರಷ್ಟೇ ಮುಂದುವರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವನ್ಯಜೀವಿ ಬೇಟೆಗಾರರನ್ನು ಬಂಧಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ! ನಾಲ್ವರ ಬಂಧನ – Kannada News

ವನ್ಯಜೀವಿ ಬೇಟೆಗಾರರನ್ನು ಬಂಧಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ!

ಯಾದಗಿರಿ, ಜೂನ್ 05: ಕಾಡುಹಂದಿ ಬೇಟೆಯಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಬೇಟೆಗಾರರ ಗ್ಯಾಂಗ್ ಭೀಕರ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ (Yadagiri) ಸುರಪುರ ತಾಲೂಕಿನ ಕಕ್ಕೇರ ಬಳಿಯ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಈ ಕೃತ್ಯ ನಡೆದಿದೆ.

ಮುಖ್ಯಾಂಶಗಳು

  • ಕಾಡುಹಂದಿ ಬೇಟೆಯಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದ ಕಿಡಿಗೇಡಿಗಳ ಬಂಧನಕ್ಕೆ ಹೋದಾಗ ಹಲ್ಲೆ.
  • ಆರ್‌ಎಫ್‌ಒ ಸೇರಿ ಮೂವರು ಅಧಿಕಾರಿಗಳನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಗಳಿಂದ ಭೀಕರ ಹಲ್ಲೆ.
  • ಕೊಡೇಕಲ್ ಠಾಣೆಯಲ್ಲಿ 11 ಜನರ ವಿರುದ್ಧ ಕೇಸ್; ನಾಲ್ವರ ಬಂಧನ, ಆಸ್ಪತ್ರೆಗೆ ಆರ್‌ಎಫ್‌ಒ ದಾಖಲು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವೀಡಿಯೋ

ಆರೋಪಿಗಳು ಕಾಡುಹಂದಿಯನ್ನು ಬೇಟೆಯಾಡಿ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಇದರ ಆಧಾರದ ಮೇಲೆ ದಾಳಿ ನಡೆಸಿದ ಆರ್‌ಎಫ್‌ಒ (RFO) ಭಾಗಪ್ಪಗೌಡ, ಗಸ್ತುಪಾಲಕರಾದ ಲಾಲ್ ಅಹ್ಮದ್ ಹಾಗೂ ಕಾಶಿನಾಥ್ ರಾಠೋಡ್ ಅವರನ್ನೇ ಬೇಟೆಗಾರರ ಜಾಲ ಹಿಡಿದು ಕೂಡಿಹಾಕಿದೆ. ಅಧಿಕಾರಿಗಳನ್ನು ಜಾಲಿ ಗಿಡಕ್ಕೆ ಕಟ್ಟಿಹಾಕಿ, ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಆರ್‌ಎಫ್‌ಒ ಭಾಗಪ್ಪಗೌಡ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಮರುಕಳಿಸದ ಘಟನೆಗೆ ಸಂಬಂಧಿಸಿದಂತೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ನಡೆಸಿರುವ ಪೊಲೀಸರು ಸದ್ಯ ನಾಲ್ಕು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಖದೀಮರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೇನೂ ನಷ್ಟವಿಲ್ಲ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಲೇವಡಿ – Kannada News

ಚೆನ್ನೈ, ಜೂನ್ 5: ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (Annamalai) ಅವರು ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ ಬೆನ್ನಲ್ಲೇ, ರಾಜ್ಯ ಬಿಜೆಪಿ ನಾಯಕತ್ವದಿಂದ ಅಚ್ಚರಿಯ ಮತ್ತು ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. ಅಣ್ಣಾಮಲೈ ಅವರ ರಾಜೀನಾಮೆಯಿಂದ ತಮಿಳುನಾಡಿನಲ್ಲಿ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಪಕ್ಷವು ಎಂದಿನಂತೆ ಸದೃಢವಾಗಿ ಮುನ್ನಡೆಯಲಿದೆ ಎಂದು ತಮಿಳುನಾಡು ಬಿಜೆಪಿಯ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಹೇಳಿಕೆ ನೀಡಿದ್ದಾರೆ.

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ತೊರೆದು ಹೊಸ ಚಳವಳಿ ಶುರು ಮಾಡಿದ ಅಣ್ಣಾಮಲೈ
  • ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದ ಬಿಜೆಪಿ
  • ತಮಿಳುನಾಡಿನ ಬಿಜೆಪಿ ನಾಯಕರ ಭಿನ್ನಾಭಿಪ್ರಾಯ ಸ್ಫೋಟ

ಅಣ್ಣಾಮಲೈ ಅವರ ರಾಜೀನಾಮೆ ವದಂತಿಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿಯ ಮುಖ್ಯಸ್ಥ ನೈನಾರ್ ನಾಗೇಂದ್ರನ್, “ಬಿಜೆಪಿ ಎಂಬುದು ಕೇವಲ ಒಬ್ಬ ವ್ಯಕ್ತಿಯ ಸುತ್ತ ನಿರ್ಮಾಣವಾಗಿರುವ ಪಕ್ಷವಲ್ಲ. ಇದು ಸಿದ್ದಾಂತ ಮತ್ತು ಲಕ್ಷಾಂತರ ಕಾರ್ಯಕರ್ತರ ಬಲದ ಮೇಲೆ ನಿಂತಿರುವ ರಾಷ್ಟ್ರೀಯ ಪಕ್ಷ. ಯಾರೋ ಒಬ್ಬರು ಹೋದ ತಕ್ಷಣ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯದಲ್ಲಿ ನಾಯಕರು ಬರುವುದು ಮತ್ತು ಹೋಗುವುದು ಸಹಜ ಪ್ರಕ್ರಿಯೆ. ಅಣ್ಣಾಮಲೈ ಅವರ ನಿರ್ಧಾರ ಅವರ ವೈಯಕ್ತಿಕ ಆಯ್ಕೆಯಾಗಿದೆ. ಪಕ್ಷವು ತಮಿಳುನಾಡಿನಲ್ಲಿ ಈಗಾಗಲೇ ಪ್ರಬಲ ತಳಹದಿಯನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಮತ್ತೊಬ್ಬ ಸಮರ್ಥ ನಾಯಕನ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೆ ಅಣ್ಣಾಮಲೈ ಹುಟ್ಟುಹಬ್ಬ: ಕರ್ನಾಟಕದಲ್ಲಿ ವೃತ್ತಿಜೀವನ, ರಾಜೀನಾಮೆ ಮತ್ತು ಬಿಜೆಪಿ ಪಯಣದ ಸಮಗ್ರ ನೋಟ

ಅಣ್ಣಾಮಲೈ ಅವರ ನಿರ್ಗಮನವನ್ನು ತಮಿಳುನಾಡು ಬಿಜೆಪಿಯ ಒಂದು ವರ್ಗದ ನಾಯಕರು ಅತ್ಯಂತ ಹಗುರವಾಗಿ ಪರಿಗಣಿಸಿರುವುದು ಪಕ್ಷದೊಳಗಿದ್ದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತದೆ. ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿ ಮತ್ತು ಏಕಪಕ್ಷೀಯ ನಿರ್ಧಾರಗಳ ಬಗ್ಗೆ ರಾಜ್ಯದ ಹಿರಿಯ ನಾಯಕರಲ್ಲಿ ಮೊದಲಿನಿಂದಲೂ ಅಸಮಾಧಾನವಿತ್ತು ಎನ್ನಲಾಗಿದ್ದು, ಅದು ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿತ್ತು.

ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ ‘ಅಣ್ಣಾಮಲೈ ಮಕ್ಕಳ್ ಇಯಕ್ಕಂ’ (AMI) ಎಂಬ ಹೊಸ ರಾಜಕೀಯ ಚಳುವಳಿಯನ್ನು ಆರಂಭಿಸಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 3,000ಕ್ಕೂ ಹೆಚ್ಚು ಜನರು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, “ಜನರ ಬೆಂಬಲವು ನನ್ನ ನಿರೀಕ್ಷೆಯನ್ನು ಮೀರಿದ್ದು, ಈ ಉಪಕ್ರಮದ ಮೇಲಿರುವ ಸಾರ್ವಜನಿಕ ಹಿತಾಸಕ್ತಿಯನ್ನು ಇದು ಪ್ರತಿಬಿಂಬಿಸುತ್ತದೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಹೊಸ ಪಕ್ಷವು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: K Annamalai: ಹೊಸ ರಾಜಕೀಯ ಆಂದೋಲನ ಆರಂಭಿಸುವುದಾಗಿ ಘೋಷಿಸಿದ ಕೆ ಅಣ್ಣಾಮಲೈ, ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ

ತಮ್ಮ ಸಾಮಾಜಿಕ ಮಾಧ್ಯಮದ ಭಾಷಣದಲ್ಲಿ ಅಣ್ಣಾಮಲೈ ಅವರು, “ನಾನು ಪಕ್ಷದಿಂದ ದೂರ ಸರಿಯುವ ನಿರ್ಧಾರವನ್ನು ಮೊದಲ ಬಾರಿಗೆ 2025ರ ಡಿಸೆಂಬರ್ 4ರಂದೇ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದೆ. ಆದರೆ, ಚುನಾವಣೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಪೂರ್ಣಗೊಳಿಸುವಂತೆ ಪಕ್ಷವು ಕೇಳಿಕೊಂಡಿದ್ದರಿಂದ ನಾನು ಅಲ್ಲಿಯವರೆಗೆ ಮುಂದುವರಿದಿದ್ದೆ. ಆ ಎಲ್ಲಾ ಕರ್ತವ್ಯಗಳನ್ನು ಮುಗಿಸಿದ ನಂತರವೇ ಈಗ ಅಧಿಕೃತವಾಗಿ ಹೊರಬಂದಿದ್ದೇನೆ” ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿಯ ಭವಿಷ್ಯದ ದಿಕ್ಕು ಮತ್ತು ರಾಜಕೀಯ ಕಾರ್ಯತಂತ್ರದ ಕುರಿತು ಉಂಟಾದ ಭಿನ್ನಾಭಿಪ್ರಾಯಗಳ ನಡುವೆ ಪಕ್ಷಕ್ಕೆ ಯಾವುದೇ ತೊಂದರೆ ಅಥವಾ ಹೊರೆಯಾಗಬಾರದು ಎಂಬ ಕಾರಣಕ್ಕೆ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅಣ್ಣಾಮಲೈ ವಿವರಿಸಿದ್ದಾರೆ. “ನಾನು ಪಕ್ಷದಿಂದ ಹೊರಬಂದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಅತ್ಯುನ್ನತ ಗೌರವವಿದೆ. ನನ್ನ ರಾಜಕೀಯ ಪಯಣದಲ್ಲಿ ಪಕ್ಷದ ನಾಯಕತ್ವ ನನ್ನ ಮೇಲಿಟ್ಟ ನಂಬಿಕೆ ಮತ್ತು ನೀಡಿದ ಅವಕಾಶಗಳಿಗೆ ನಾನು ಸದಾ ಕೃತಜ್ಞನಾಗಿರುತ್ತೇನೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸೇರಿದ್ದಕ್ಕೆ ಕಾರಣ:

ತಾವು ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯ ಬಗ್ಗೆ ಇದ್ದ ವದಂತಿಗಳಿಗೆ ತೆರೆ ಎಳೆದಿರುವ ಅಣ್ಣಾಮಲೈ, “ಬಿಜೆಪಿಯ ಹಿರಿಯ ನಾಯಕ ಬಿ.ಎಲ್. ಸಂತೋಷ್ ಅವರು ನೀಡಿದ ಭರವಸೆ ಮತ್ತು ಬದ್ಧತೆಯ ಆಧಾರದ ಮೇಲೆಯೇ ನಾನು ಬಿಜೆಪಿಗೆ ಸೇರಿದ್ದೆ. ನನ್ನ ಪಕ್ಷದ ಸೇರ್ಪಡೆ ಕುರಿತಾದ ಎಲ್ಲಾ ಊಹಾಪೋಹಗಳಿಗೆ ಮುಕ್ತಾಯ ಹಾಡಲು ನಾನು ಈಗ ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿಯರಿಗೆ ಐಫೋನ್ ಗಿಫ್ಟ್ ನೀಡಲು 6.5 ಲಕ್ಷ ರೂ. ಮೌಲ್ಯದ ನಲ್ಲಿ ಕದ್ದ ಯುವಕರು! – Kannada News

ನಾಗಪುರ, ಜೂನ್ 5: ಪ್ರೇಮಪಾಶಕ್ಕೆ ಬಿದ್ದ ಯುವಕರು ತಮ್ಮ ಗರ್ಲ್‌ಫ್ರೆಂಡ್‌ಗಳನ್ನು ಮೆಚ್ಚಿಸಲು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ಮಹಾರಾಷ್ಟ್ರದ ನಾಗಪುರದಲ್ಲಿ ಒಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಮ್ಮ ಪ್ರೇಯಸಿಯರಿಗೆ ದುಬಾರಿ ಬೆಲೆಯ ಐಫೋನ್ (iPhone) ಮೊಬೈಲ್‌ಗಳನ್ನು ಉಡುಗೊರೆಯಾಗಿ ನೀಡಲು ಹಣವಿಲ್ಲದೆ, ಮೂವರು ಯುವಕರು ಸೇರಿ ಅಂಗಡಿ ಮತ್ತು ಐಷಾರಾಮಿ ಬಂಗಲೆಗಳಿಂದ ಬರೋಬ್ಬರಿ 6.5 ಲಕ್ಷ ರೂಪಾಯಿ ಮೌಲ್ಯದ ನೀರಿನ ಕದ್ದಿದ್ದಾರೆ. ಈ ಮೂವರನ್ನು ನಾಗಪುರ ಪೊಲೀಸರು ಬಂಧಿಸಿದ್ದಾರೆ.

‘ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್’ ಹೆಸರಿನ ಗೋದಾಮಿನ ಮಾಲೀಕರಾದ ರಾಹುಲ್ ಜಯಚಂದ್ ಬಾತ್ರಾ ಅವರು ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಬಂಧಿತ ಯುವಕರು ನಾಗಪುರದ ಹಜಾರಿಪಹಾಡ್ ಮತ್ತು ಸೆಮಿನರಿ ಹಿಲ್ಸ್‌ನಂತಹ ಗಣ್ಯರು ವಾಸಿಸುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದರು. ಇಲ್ಲಿನ ಗೋಡೌನ್, ದೊಡ್ಡ ದೊಡ್ಡ ಬಂಗಲೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ, ಅಲ್ಲಿ ಅಳವಡಿಸಲಾಗಿದ್ದ ಅತ್ಯಂತ ದುಬಾರಿ ಮೌಲ್ಯದ ಹಿತ್ತಾಳೆ ಮತ್ತು ಕರಕುಶಲ ವಿನ್ಯಾಸದ ನಲ್ಲಿಗಳನ್ನು ಬಿಚ್ಚಿ ಕದಿಯುತ್ತಿದ್ದರು. ಕದ್ದ ಸಾಮಗ್ರಿಗಳ ಒಟ್ಟು ಮೌಲ್ಯ 6.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿತ್ತು.

ಇದನ್ನೂ ಓದಿ: Video: ಗರ್ಲ್​ಫ್ರೆಂಡ್​ ಜತೆ ಸ್ಕೂಟಿಯಲ್ಲಿ ಸುತ್ತುತ್ತಿದ್ದ ಮಗ, ರಸ್ತೆಯಲ್ಲೇ ಇಬ್ಬರಿಗೂ ಬಿತ್ತು ಏಟು

ಈ ಬಗ್ಗೆ ದೂರು ದಾಖಸಿಕೊಂಡ ಗಿಟ್ಟಿಖಾದನ್ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಆರಂಭಿಸಿ, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ಮೂವರು ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪತ್ತೆಯಾಯಿತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕಥೆ ಹೊರಬಿದ್ದಿದೆ. ಯುವಕರು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಕದ್ದ ಹಣದಲ್ಲಿ ಐಫೋನ್ ಖರೀದಿ!

ಪೊಲೀಸರ ವಿಚಾರಣೆಯ ವೇಳೆ ಯುವಕರು ನೀಡಿದ ಕಾರಣ ಕೇಳಿ ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದ್ದಾರೆ. ತಮಗೆ ಯಾವುದೇ ದುರಭ್ಯಾಸಗಳಿರಲಿಲ್ಲ, ಆದರೆ ತಮ್ಮ ಗರ್ಲ್‌ಫ್ರೆಂಡ್‌ಗಳು ಐಫೋನ್ ಬೇಕೆಂದು ಹಠ ಹಿಡಿದಿದ್ದರು. ಅದನ್ನು ಕೊಡಿಸಲು ಹಣವಿಲ್ಲದ ಕಾರಣ ಅತ್ಯಂತ ಸುಲಭವಾಗಿ ಕಳವು ಮಾಡಬಹುದಾದ ಮತ್ತು ಮಾರುಕಟ್ಟೆಯಲ್ಲಿ ಭಾರೀ ಬೆಲೆ ಬಾಳುವ ಐಷಾರಾಮಿ ನಲ್ಲಿಗಳನ್ನು ಕದ್ದಿದ್ದಾಗಿ ಅವರು ತಿಳಿಸಿದ್ದಾರೆ. ಕದ್ದ ನಲ್ಲಿಗಳನ್ನು ಗುಜರಿ ಅಂಗಡಿಗೆ ಮಾರಿ ಬಂದ ಹಣದಲ್ಲಿ ಈಗಾಗಲೇ ಐಫೋನ್‌ಗಳನ್ನು ಖರೀದಿಸಿ ಗೆಳತಿಯರಿಗೆ ಉಡುಗೊರೆ ನೀಡಿದ್ದರು!

ಪೊಲೀಸರು ಯುವಕರಿಂದ ಕದ್ದ ನಲ್ಲಿಗಳು, ಕಳ್ಳತನಕ್ಕೆ ಬಳಸಿದ ಬೈಕ್ ಹಾಗೂ ಗೆಳತಿಯರಿಗೆ ನೀಡಿದ್ದ ಐಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 1:16 pm, Fri, 5 June 26

Source link

ಮಹರಾಜ ಲೀಗ್​​ನಲ್ಲಿ ಅನ್​​ಸೋಲ್ಡ್ ಆದ ಕೆಎಲ್ ರಾಹುಲ್; ಕಾರಣ ಇಲ್ಲಿದೆ – Kannada News

ಮಹಾರಾಜ ಟ್ರೋಫಿ ಕೆಎಸ್​​ಸಿಎ ಟಿ20 ಲೀಗ್ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಕನ್ನಡಿಗ ಕೆಎಲ್ ರಾಹುಲ್ ಅವರು 2 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದಾರೆ. ಆದಾಗ್ಯೂ ಅವರು ಅನ್​​ಸೋಲ್ಡ್ ಆಗಿದ್ದಾರೆ. ಇದಕ್ಕೆ ಕಾರಣವೂ ಇದೆ.

ಪ್ರಸ್ತುತ ರಾಹುಲ್ ಅಫ್ಘಾನಿಸ್ತಾನ ವಿರುದ್ಧದ ಸರಣಿ ಹಾಗೂ ಮುಂಬರುವ ಇಂಗ್ಲೆಂಡ್ ಪ್ರವಾಸದಂತಹ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ, ಅವರಿಗೆ ಮಹರಾಜ ಟ್ರೋಫಿ ಆಡಲು ಸಾಧ್ಯವಿಲ್ಲ. ಆಡಲು ಸಾಧ್ಯವಿಲ್ಲದಿದ್ದರೂ ರಾಹುಲ್ ಹರಾಜಿಗೆ ಹೆಸರು ನೋಂದಾಯಿಸಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ.

ರಾಜ್ಯ ಕ್ರಿಕೆಟ್ ಮಂಡಳಿ (KSCA) ನಿಯಮಾವಳಿಗಳ ಪ್ರಕಾರ, ರಾಜ್ಯದ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರನ್ನು ಹರಾಜಿನ ಮಾರ್ಕ್ಯೂ ಪಟ್ಟಿಯಲ್ಲಿ ಹೆಸರಿಸುವುದು ಕಡ್ಡಾಯ ಪ್ರಕ್ರಿಯೆಯಾಗಿದೆ. ಆಟಗಾರರು ಅಂತಿಮ ಹಂತದಲ್ಲಿ ಲಭ್ಯರಾಗುವ ಸಣ್ಣ ಅವಕಾಶವಿದ್ದರೂ ಅಥವಾ ತಾಂತ್ರಿಕ ಪ್ರಕ್ರಿಯೆಯ ಭಾಗವಾಗಿಯೋ ಈ ಹೆಸರನ್ನು ಸೇರಿಸಲಾಗುತ್ತದೆ.

ಮಹಾರಾಜ ಟ್ರೋಫಿ 2026 ವಿವರಗಳು ಟೂರ್ನಿ ಅವಧಿ ಜೂನ್ 20ರಿಂದ ಜುಲೈ 12ರವರೆಗೆ ನಡೆಯಲಿದೆ. ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.

 

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತಿ ಪತ್ನಿಯೊಂದಿಗೆ ಮಾತನಾಡದೇ ಇರುವುದು ಕ್ರೌರ್ಯವಲ್ಲ: ಸುಪ್ರೀಂಕೋರ್ಟ್​ – Kannada News

ನವದೆಹಲಿ, ಜೂನ್ 05: ಪತಿ ದಿನಗಟ್ಟಲೆ ಪತ್ನಿಯೊಂದಿಗೆ ಮಾತನಾಡದೇ ಇರುವುದು ಕ್ರೌರ್ಯವಲ್ಲ ಎಂದು ಸುಪ್ರೀಂಕೋರ್ಟ್(Supreme Court)​ ಅಭಿಪ್ರಾಯಪಟ್ಟಿದೆ. ಪತ್ನಿಯ  ಆತ್ಮಹತ್ಯೆ ಪ್ರಕರಣವೊಂದರ ಸುದೀರ್ಘ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಹಾಗೂ ಅದರ ಭಾಗವಾಗಿ ಕೆಲವು ದಿನಗಳ ಕಾಲ ದಂಪತಿಗಳ ನಡುವೆ ಮಾತುಕತೆ ನಿಲ್ಲುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನು ಕಾನೂನಾತ್ಮಕ ‘ಕ್ರೌರ್ಯ’ಎಂದು ಪರಿಗಣಿಸಲು ಸಾಧ್ಯವಿಲ್ಲ ದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು, ಮದ್ರಾಸ್ ಹೈಕೋರ್ಟ್ ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ರದ್ದುಗೊಳಿಸಿ, ಪತಿ ಹಾಗೂ ಆತನ ಕುಟುಂಬಸ್ಥರನ್ನು ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಸಂಪೂರ್ಣವಾಗಿ ದೋಷಮುಕ್ತಗೊಳಿಸಿ (ಖುಲಾಸೆ) ಆದೇಶ ಹೊರಡಿಸಿದೆ.

ಮದುವೆಯಾದ ಕೆಲವು ದಿನಗಳ ನಂತರ ಮಹಿಳೆಯು ವೀಸಾ ಪ್ರಕ್ರಿಯೆಯ ತಾಂತ್ರಿಕ ಕಾರಣಗಳಿಂದಾಗಿ ಮಸ್ಕತ್‌ನಲ್ಲಿದ್ದ ಪತಿಯೊಂದಿಗೆ ಹೋಗಲು ಸಾಧ್ಯವಾಗಲಿಲ್ಲ. ಆಕೆ ತನ್ನ ಪೋಷಕರ ಮನೆಯಲ್ಲಿದ್ದಾಗ, ಕೌಟುಂಬಿಕ ಅಸಮಾಧಾನದ ಹಿನ್ನೆಲೆಯಲ್ಲಿ ಪತಿಯು ಸುಮಾರು 13 ದಿನಗಳ ಕಾಲ ದೂರವಾಣಿ ಮೂಲಕ ಮಾತನಾಡಲು ನಿರಾಕರಿಸಿದ್ದರಿಂದ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಆಧಾರದ ಮೇಲೆ ಪತಿ ಮತ್ತು ಅತ್ತೆ-ಮಾವಂದಿರ ವಿರುದ್ಧ ವರದಕ್ಷಿಣೆ ಕಿರುಕುಳದ ಮೊಕದ್ದಮೆ ದಾಖಲಿಸಲಾಗಿತ್ತು.

ಮತ್ತಷ್ಟು ಓದಿ: ಕರ್ನಾಟಕ ಹೈಕೋರ್ಟ್​​ಗೆ ಜಡ್ಜ್​​ಗಳಾಗಿ 6 ವಕೀಲರ ನೇಮಕಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು

ಕೆಳ ನ್ಯಾಯಾಲಯಗಳು ಭಾವನಾತ್ಮಕವಾಗಿ ಶಿಕ್ಷೆ ವಿಧಿಸಿದ್ದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಕೇವಲ 13 ದಿನಗಳ ಕಾಲ ಫೋನ್‌ನಲ್ಲಿ ಮಾತನಾಡದಿರುವುದನ್ನು ಕ್ರೌರ್ಯ ಅನ್ನಲಾಗದು ಎಂದು ಹೇಳಿದೆ. ಪತ್ನಿಯು ತನ್ನ ಪೋಷಕರ ಮನೆಗೆ ಹೋಗಿದ್ದಕ್ಕೆ ಪತಿ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ ದಾಂಪತ್ಯದ ಭಾಗವೇ ಹೊರತು, ಅದು ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತಹ ಗಂಭೀರ ಅಪರಾಧವಲ್ಲ ಎಂದು ನ್ಯಾಯಪೀಠವು ತೀರ್ಪು ನೀಡಿದೆ.

ಇಂತಹ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಕೇವಲ ಆರೋಪಗಳನ್ನು ಮಾಡುವ ಬದಲಾಗಿ, ಪತಿಯು ನಿಜಕ್ಕೂ ಮಹಿಳೆಗೆ ಮಾನಸಿಕವಾಗಿ ತೀವ್ರ ಹಿಂಸೆ ನೀಡಿದ್ದಾನೆಯೇ ಎಂಬುದನ್ನು ಸಾಬೀತುಪಡಿಸಬೇಕು ಎಂದು ನ್ಯಾಯಾಲಯ ಪುನರುಚ್ಚರಿಸಿದೆ.

ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲದಿದ್ದರೆ, ಕೇವಲ ಸಂವಹನದ ಕೊರತೆಯು ಕ್ರೌರ್ಯದ ವ್ಯಾಪ್ತಿಗೆ ಬರುವುದಿಲ್ಲ. ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಸುಳ್ಳು ಅಥವಾ ಸಾಕ್ಷ್ಯರಹಿತ ಆರೋಪಗಳು ಬಂದಾಗ, ತಾವು ನಿರಪರಾಧಿಗಳು ಎಂದು ಸಾಬೀತುಪಡಿಸುವ ಹೊರೆ ಆರೋಪಿಗಳ ಮೇಲಿರುವುದಿಲ್ಲ; ಬದಲಿಗೆ ಆರೋಪ ಹೊರಿಸಿದವರೇ ಅದನ್ನು ಸಾಬೀತುಪಡಿಸಬೇಕು.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಕೌಟುಂಬಿಕ ವ್ಯಾಜ್ಯಗಳಲ್ಲಿ ಕಾನೂನಿನ ಪಾರದರ್ಶಕ ಬಳಕೆಯನ್ನು ಖಚಿತಪಡಿಸಿದೆ. ಸಣ್ಣಪುಟ್ಟ ಕೌಟುಂಬಿಕ ಜಗಳಗಳನ್ನು ಕ್ರಿಮಿನಲ್ ಅಪರಾಧಗಳಾಗಿ ಬಿಂಬಿಸುವುದನ್ನು ತಡೆಯುವ ಮೂಲಕ, ಈ ತೀರ್ಪು ಮುಗ್ಧ ಕುಟುಂಬಗಳಿಗೆ ನ್ಯಾಯ ಒದಗಿಸಿದೆ ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ – Kannada News

ದೇವನಹಳ್ಳಿ, ಜೂ.5: ಖಾತೆ ಹಂಚಿಕೆಯ ಬೆನ್ನಲ್ಲೇ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ ಹಾಗೂ ಕೆ.ಎಚ್. ಮುನಿಯಪ್ಪ ಅವರು ಬಂಡಾಯದ ಬಾವುಟ ಹಾರಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ನೂತನ ಸರ್ಕಾರಕ್ಕೆ ಎದುರಾಗಿರುವ ಈ ದೊಡ್ಡ ಕಂಟಕವನ್ನು ನಿವಾರಿಸಲು ಹಾಗೂ ‘ಡ್ಯಾಮೇಜ್ ಕಂಟ್ರೋಲ್’ ಮಾಡಲು ಮಹತ್ವದ ಮೀಟಿಂಗ್​ನ್ನು ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ವಿಐಪಿ ಲಾಂಜ್ ಹಾಗೂ ಪಕ್ಕದಲ್ಲೇ ಇರುವ ಐಷಾರಾಮಿ ತಾಜ್ ಹೋಟೆಲ್‌ನಲ್ಲಿ ಈ ಹೈವೋಲ್ಟೇಜ್ ಸಭೆ ನಡೆಸುತ್ತಿದ್ದಾರೆ.

ರಾಜ್ಯ ನಾಯಕರ ಅಸಮಾಧಾನ ಶಮನಗೊಳಿಸಲು ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ಸಭೆ ನಡೆಸುತ್ತಿದ್ದಾರೆ. ಈಗಾಗಲೇ ಉಂಟಾಗಿರುವ ಗೊಂದಲದ ತೀವ್ರತೆಯನ್ನು ಅರಿತು ಹೈಕಮಾಂಡ್ ನಾಯಕರು, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ತುರ್ತಾಗಿ ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ನ ವಿಐಪಿ ಲಾಂಜ್‌ನಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರನ್ನು ಭೇಟಿಯಾಗಿ ತಮ್ಮ ಖಾತೆ ಬದಲಾವಣೆ ಕುರಿತು ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ, ತಾಜ್ ಹೋಟೆಲ್‌ನಲ್ಲಿ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಸುಮಾರು 40 ನಿಮಿಷಗಳ ಕಾಲ ಹಿರಿಯ ನಾಯಕರ ಮಹತ್ವದ ಸಭೆ ನಿಗದಿಯಾಗಿದೆ. 8 ಬಾರಿ ಗೆದ್ದಿದ್ದರೂ ಹಿರಿತನಕ್ಕೆ ಗೌರವ ಸಿಕ್ಕಿಲ್ಲ ಹಾಗೂ ತಮಗೆ ಕೃಷಿ ಅಥವಾ ಸಮಾಜ ಕಲ್ಯಾಣ ಇಲಾಖೆ ಬೇಕು ಎಂಬ ತಮ್ಮ ಬೇಡಿಕೆಯನ್ನು ಮುನಿಯಪ್ಪ ಅವರು ವರಿಷ್ಠರ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ನಿರ್ಧಾರ ಹಾಗೂ ಮುನಿಯಪ್ಪ ಅವರ ಅಸಮಾಧಾನ ಎರಡನ್ನೂ ಒಟ್ಟಿಗೆ ಶಮನಗೊಳಿಸಲು ಹೈಕಮಾಂಡ್ ಸೂತ್ರವೊಂದನ್ನು ಸಿದ್ಧಪಡಿಸುತ್ತಿದ್ದು, ಈ ಹೈವೋಲ್ಟೇಜ್ ಸಭೆಯ ನಂತರ ರಾಜ್ಯ ರಾಜಕಾರಣದ ಮುಂದಿನ ಚಿತ್ರಣ ಸ್ಪಷ್ಟವಾಗಲಿದೆ.

‘ನಾನು ಚಾರ್ಜ್ ತೆಗೆದುಕೊಳ್ಳಲ್ಲ’ ಎಂದು ಹಠ ಹಿಡಿದ ಕೆ.ಎಚ್. ಮುನಿಯಪ್ಪ

ರಾಜ್ಯ ರಾಜಕಾರಣದಲ್ಲಿ ಖಾತೆ ಹಂಚಿಕೆಯ ಕಿಚ್ಚು ಈಗ ಮತ್ತಷ್ಟು ಜ್ವಾಲೆಯಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಪ್ರಕಟಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದ್ದು, ಮತ್ತೊಬ್ಬ ಪ್ರಭಾವಿ ನಾಯಕ ಕೆ.ಎಚ್. ಮುನಿಯಪ್ಪ ಅವರು ಸರ್ಕಾರದ ವಿರುದ್ಧ ನೇರ ಬಂಡಾಯ ಸಾರಿದ್ದಾರೆ. ತಮಗೆ ಹಂಚಿಕೆಯಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಅವರು, “ನಾನು ಆಹಾರ ಇಲಾಖೆ ಸಚಿವನಾಗಿ ಚಾರ್ಜ್ ತೆಗೆದುಕೊಳ್ಳಲ್ಲ ಎಂದು ಜಿದ್ದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಆರದ ಖಾತೆ ಕಿಚ್ಚು: ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಕೆಎಚ್ ಮುನಿಯಪ್ಪ ಬಹಿರಂಗ ಅಸಮಾಧಾನ

ಕಾಂಗ್ರೆಸ್ ಹೈಕಮಾಂಡ್‌ಗೆ ಮುನಿಯಪ್ಪ ಕೊಟ್ಟ ‘2028’ರ ವಾರ್ನಿಂಗ್

ರಾಜ್ಯ ಕಾಂಗ್ರೆಸ್ ಸಂಪುಟದಲ್ಲಿ ಖಾತೆ ಹಂಚಿಕೆಯ ಕಿಚ್ಚು ಈಗ ಹೈಕಮಾಂಡ್ ನಾಯಕರ ವಿರುದ್ಧದ ಬಹಿರಂಗ ಆಕ್ರೋಶವಾಗಿ ಮಾರ್ಪಟ್ಟಿದೆ. ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿರುವ ಮತ್ತೊಬ್ಬ ಹಿರಿಯ ನಾಯಕ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು, ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧವೇ ನೇರ ವಾಗ್ದಾಳಿ ನಡೆಸಿದ್ದಾರೆ. ನಾನು ಈಗಾಗಲೇ 8 ಬಾರಿ ಗೆದ್ದಿರುವ ಹಿರಿಯ ರಾಜಕಾರಣಿ. ಆದರೆ ಖಾತೆ ಹಂಚಿಕೆ ಮಾಡುವಾಗ ನಮ್ಮ ಸೀನಿಯಾರಿಟಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದಲ್ಲಿ ಎಲ್ಲ ನಾಯಕರನ್ನೂ ಸಮತೋಲನವಾಗಿ ನೋಡಬೇಕಿತ್ತು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದಲ್ಲಿ ಎಲ್ಲರನ್ನೂ ಒಂದೇ ಕಣ್ಣಿನಿಂದ ನೋಡಬೇಕು” ಎಂದು ಮುನಿಯಪ್ಪ ಅವರು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chandra Gochar: ಚಂದ್ರ ಮಕರ ರಾಶಿಗೆ ಪ್ರವೇಶ; ಇಂದು ಈ 3 ರಾಶಿಗೆ ತೆರೆಯಲಿದೆ ಅದೃಷ್ಟದ ಬಾಗಿಲು, ಅನಿರೀಕ್ಷಿತ ಧನಲಾಭ! – Kannada News

ಚಂದ್ರ ಮಕರ ರಾಶಿ ಪ್ರವೇಶImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿ ಅಥವಾ ನಕ್ಷತ್ರಗಳನ್ನು ಬದಲಾಯಿಸುತ್ತಿರುತ್ತವೆ. ಕೆಲವು ಗ್ರಹಗಳು ಪ್ರತಿ ತಿಂಗಳು ರಾಶಿ ಬದಲಾಯಿಸಿದರೆ, ಇನ್ನು ಕೆಲವು ಗ್ರಹಗಳು ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಸ್ಥಾನ ಪಲ್ಲಟ ಮಾಡುತ್ತವೆ. ಗ್ರಹಗಳ ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಧನಾತ್ಮಕ ಅಥವಾ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದೀಗ ಮನಸ್ಸಿನ ಕಾರಕನಾದ ಚಂದ್ರನ ಸಂಚಾರದಲ್ಲಿ ಮಹತ್ವದ ಬದಲಾವಣೆಯಾಗಿದೆ.

ತುಲಾ ರಾಶಿಯಿಂದ ಮಕರ ರಾಶಿಗೆ ಚಂದ್ರನ ಮಹತ್ವದ ಸಾಗಣೆ:

ಇತ್ತೀಚೆಗೆ ಜೂನ್ 4 ರಂದು, ಚಂದ್ರನು ತನ್ನ ರಾಶಿ ಸ್ಥಾನವನ್ನು ಬದಲಾಯಿಸಿದ್ದಾನೆ. ಅಂದರೆ ಚಂದ್ರನು ತುಲಾ ರಾಶಿಯಿಂದ ಹೊರನಡೆದು ಮಕರ ರಾಶಿಗೆ ಪ್ರವೇಶಿಸಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರನ ಈ ಸಂಚಾರ ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಈ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಇದು ಅನಿರೀಕ್ಷಿತ ಆರ್ಥಿಕ ಪ್ರಯೋಜನಗಳು ಮತ್ತು ವೃತ್ತಿಜೀವನದಲ್ಲಿ ಅಭೂತಪೂರ್ವ ಯಶಸ್ಸನ್ನು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

ಮೇಷ ರಾಶಿ:

ಮಕರ ರಾಶಿಗೆ ಚಂದ್ರನ ಸಂಚಾರವು ಮೇಷ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ಅತ್ಯಂತ ಅದೃಷ್ಟಶಾಲಿಯಾಗಿರಲಿದೆ. ದೀರ್ಘಕಾಲದವರೆಗೆ ಆರ್ಥಿಕ ಸಮಸ್ಯೆಗಳು ಹಾಗೂ ಸಾಲದ ಬಾಧೆಯಿಂದ ಬಳಲುತ್ತಿದ್ದವರಿಗೆ ಈ ಸಮಯದಲ್ಲಿ ಮುಕ್ತಿ ಸಿಗಲಿದೆ ಮತ್ತು ಆದಾಯದ ಮೂಲಗಳು ಹೆಚ್ಚಾಗಲಿವೆ. ವಿಶೇಷವಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವವರಿಗೆ ಈ ಅವಧಿಯಲ್ಲಿ ಭಾರಿ ಲಾಭ ಕಾಯ್ದಿರಿಸಿದೆ. ವ್ಯಾಪಾರ-ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಿಗೆ ಇದು ಸುವರ್ಣ ಅವಕಾಶವಾಗಿದ್ದು, ಹಿಂದೆ ಮಾಡಿದ್ದ ಹೂಡಿಕೆಗಳು ಈಗ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಲಾಭವನ್ನು ತಂದುಕೊಡಲಿವೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ತುಲಾ ರಾಶಿ:

ತುಲಾ ರಾಶಿಯ ಜನರಿಗೆ ಮಕರ ರಾಶಿಯ ಚಂದ್ರನ ಗೋಚಾರವು ಚಿನ್ನದಂತಹ ದಿನಗಳನ್ನು ತರಲಿದೆ. ನಿರುದ್ಯೋಗಿಗಳಿಗೆ ಬಹಳ ದಿನಗಳಿಂದ ಕಾಯುತ್ತಿದ್ದ ಉತ್ತಮ ಉದ್ಯೋಗಾವಕಾಶಗಳು ಕೈಗೆಟುಕಲಿವೆ. ಆರ್ಥಿಕ ಪರಿಸ್ಥಿತಿಯು ಗಣನೀಯವಾಗಿ ಸುಧಾರಿಸಲಿದ್ದು, ಅನಿರೀಕ್ಷಿತ ಮಾರ್ಗಗಳಿಂದ ಧನಲಾಭವಾಗಲಿದೆ ಮತ್ತು ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಸಿಗುವ ಯೋಗವಿದೆ. ಒಟ್ಟಾರೆಯಾಗಿ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಂತೋಷದ ವಾತಾವರಣ ನೆಲೆಸಲಿದೆ.

ಮೀನ ರಾಶಿ:

ಮೀನ ರಾಶಿಯ ಜನರಿಗೆ ಈ ಚಂದ್ರನ ಸಂಚಾರದಿಂದಾಗಿ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಅನಿರೀಕ್ಷಿತ ಲಾಭಗಳು ದೊರೆಯಲಿವೆ. ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಕೋರ್ಟ್ ಕಚೇರಿ ಅಥವಾ ಕೌಟುಂಬಿಕ ಸಮಸ್ಯೆಗಳು ಈ ಅವಧಿಯಲ್ಲಿ ಬಗೆಹರಿಯಲಿವೆ. ಹಿಂದೆ ಮಾಡಿದ ಹೂಡಿಕೆಗಳಿಂದ ನಿಮಗೀಗ ದುಪ್ಪಟ್ಟು ಲಾಭ ಸಿಗಲಿದ್ದು, ಆರ್ಥಿಕ ಸ್ಥಿತಿ ಸದೃಢವಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಮತ್ತು ಕೀರ್ತಿ ಹೆಚ್ಚಾಗಲಿದೆ. ಈ ರಾಶಿಯ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ನೆಮ್ಮದಿಯ ಕ್ಷಣಗಳನ್ನು ಕಳೆಯಲಿದ್ದು, ಪುಣ್ಯ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳುವ ಶುಭ ಯೋಗವೂ ಒದಗಿಬರಲಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:57 pm, Fri, 5 June 26

Source link

Viral: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ – Kannada News

ಬೆಂಗಳೂರು, ಜೂನ್ 05: ದೂರದ ಊರಿನಿಂದ ಉದ್ಯೋಗಕ್ಕೆಂದು ಬೆಂಗಳೂರಿಗೆ (Bengaluru) ಬರುವ ಯುವಕ ಯುವತಿಯರು ಅಗ್ಗದ ಬೆಲೆಯಲ್ಲಿ ಬಾಡಿಗೆ ಮನೆಗಳು ಸಿಗುತ್ತದೆಯೇ ಎಂದು ನೋಡುತ್ತಾರೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳು ಗಗನಕ್ಕೇರಿದೆ. ಇದೀಗ ಬೆಂಗಳೂರು ಮೂಲದ ಉದ್ಯೋಗಿಯೊಬ್ಬರು ಎಚ್ ಎಸ್ ಆರ್ ಲೇಔಟ್ (HSR Layout) ತೊರೆಯಲು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣವಾಗಿರುವುದೇ ಅವರು 1 BHK ಮನೆಗೆ ಪಾವತಿಸುತ್ತಿರುವ 45000 ರೂ ಬಾಡಿಗೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ಬೆಂಗಳೂರು ಮೂಲದ ಪೇಪಾಲ್ ಉದ್ಯೋಗಿಯೊಬ್ಬರು ಗ್ರೇಪ್‌ವೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಗುಡ್‌ಬೈ ಎಚ್‌ಎಸ್‌ಆರ್ ಲೇಔಟ್! 1BHK ಮನೆಗೆ 45 ಸಾವಿರ ಬಾಡಿಗೆ ನೀಡುವುದು ಸಂಪೂರ್ಣ ಹುಚ್ಚುತನ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್ ನಲ್ಲಿ, ನಾನು ಅಂತಿಮವಾಗಿ ಎಚ್‌ಎಸ್‌ಆರ್ ಲೇಔಟ್ ತೊರೆಯುವ ನಿರ್ಧಾರ ಮಾಡುತ್ತಿದ್ದೇನೆ ಎಂದು ಘೋಷಿಸಲು ನನಗೆ ಇಂದು ತುಂಬಾ ನಿರಾಳವಾಗಿದೆ. ಇದು ನನ್ನ ಹೆಗಲ ಮೇಲಿನ ದೊಡ್ಡ ಭಾರವನ್ನು ಇಳಿಸಿದಂತಾಗುತ್ತದೆ. ಈ ನಿರ್ಧಾರದಿಂದ ನನಗೆ ನಿಜಕ್ಕೂ ಸಂತೋಷವಾಗಿದೆ. ಆರಂಭದಲ್ಲಿ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಈ ಪ್ರದೇಶದಲ್ಲಿದ್ದಾರೆ. ಹೀಗಾಗಿ ನಾನು ಸಾಮಾಜಿಕ ಒತ್ತಡಕ್ಕೆ ಮಣಿದು ಈ ಸ್ಥಳದಲ್ಲೇ ಉಳಿಯಲು ನಿರ್ಧಾರ ಮಾಡಿದ್ದೆ ಎಂದು ಬರೆದುಕೊಂಡಿದ್ದಾರೆ.

ಹಲವಾರು ಅಪಾರ್ಟ್‌ ಮೆಂಟ್‌ಗಳಿಗೆ ಭೇಟಿ ನೀಡಿದ ನಂತರ, HSR ಲೇಔಟ್‌ನ ಹೊರಗೆ ಕೂಸ ಉತ್ತಮ ಮತ್ತು ಹೆಚ್ಚು ಕೈಗೆಟುಕುವ ಆಯ್ಕೆಗಳಿವೆ ಎಂದು ಅರಿತು ಕೊಂಡೆ. ನನ್ನ ವಾರ್ಷಿಕ 24 ಲಕ್ಷ ರೂಪಾಯಿ ಆದಾಯಕ್ಕೂ ಈ ಬಾಡಿಗೆಯೂ ಹೆಚ್ಚು ಹೊರೆಯಾಗುತ್ತಿದೆ. ಎಚ್‌ಎಸ್‌ಆರ್ ಲೇಔಟ್‌ಗೆ ನನ್ನ ವಿದಾಯ, ಮತ್ತು ಭಯಾನಕ ಟ್ರಾಫಿಕ್‌ಗೆ ವಿದಾಯ, ನನ್ನ ಈ ನಿರ್ಧಾರ ಇನ್ನಷ್ಟು ಸರಳವಾಗಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರ; ಹೊಸ ಬಾಡಿಗೆ ಮನೆಯ ಬಗ್ಗೆ ಮಹಿಳೆ ಹೇಳಿದ್ದೇನು ಗೊತ್ತಾ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ನಿರ್ಧಾರ ನಿಮಗೆ ಸರಿ ಎನಿಸಿದರೆ ಸಾಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ನನಗೂ ಈ ಬೆಂಗಳೂರಿನಿಂದ ಹೊರಗೆ ಹೋಗಲು ಸಹಾಯ ಮಾಡಿ ಗೆಳೆಯ ಎಂದು ಕೇಳಿದ್ದಾರೆ. ಮತ್ತೊಬ್ಬರು, ಬೆನ್ನು ನೋವು ಅಥವಾ ಕೆಲಸದ ಒತ್ತಡವಿದ್ದರೆ ಯಾವಾಗಲೂ ಆಫೀಸಿಗೆ ಹತ್ತಿರವಿರುವುದು ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:08 pm, Fri, 5 June 26

Source link

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ! 7 ಮಂದಿ ಅಂದರ್ – Kannada News

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ!Image Credit source: cbc

ಬೆಂಗಳೂರು, ಜೂನ್ 05: ನಗರದ ಅಕ್ರಮವಾಗಿ ಮತ್ತು ಯಾವುದೇ ಪರವಾನಗಿ ಇಲ್ಲದೆ ವಿದೇಶಿ ಹಾಗೂ ಅತ್ಯಂತ ಅಪರೂಪದ ವನ್ಯಜೀವಿಗಳನ್ನು ಮನೆಯಲ್ಲಿಯೇ ಸಾಕಿದ್ದ ವೈದ್ಯರೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವೈದ್ಯನನ್ನು ಡಾ ರಾಜ್ ಕಮಲ್ ಎಂದು ಗುರುತಿಸಲಾಗಿದ್ದು, ಆತನ ಮನೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಎಕ್ಸೋಟಿಕ್ (Exotic) ಪ್ರಾಣಿ ಮತ್ತು ಪಕ್ಷಿಗಳನ್ನು ರಕ್ಷಿಸಲಾಗಿದೆ. ರಾಜ್ ಸೇರಿದಂತೆ ಇನ್ನೂ 6 ಮಂದಿಯನ್ನು ಈ ಕೇಸ್​ನಲ್ಲಿ ಬಂಧಿಸಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ಜಯನಗರದ ಖ್ಯಾತ ವೈದ್ಯ ಡಾ. ರಾಜ್ ಕಮಲ್ ಸೇರಿ ಏಳು ಮಂದಿ ಬಂಧನ.
  • ಐಷಾರಾಮಿ ಫ್ಲಾಟ್‌ನಲ್ಲಿ ವಿದೇಶಿ ಹೆಬ್ಬಾವು, ಆಮೆಗಳು ಹಾಗೂ ಗಾಂಜಾ ಪತ್ತೆಯಾಗಿ ತನಿಖೆ ತೀವ್ರ.
  • ಇನ್‌ಸ್ಟಾಗ್ರಾಮ್‌ನ ‘@Zoo2You’ ಖಾತೆಯ ಮೂಲಕ ಮಕ್ಕಳ ಮುಂದೆ ಪ್ರಾಣಿಗಳ ಪ್ರದರ್ಶನ ದಂಧೆ ಬಯಲು.

ಐಷಾರಾಮಿ ಮನೆಯಲ್ಲಿ ವನ್ಯಜೀವಿಗಳ ಸಾಮ್ರಾಜ್ಯ!

ನಗರದ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ವಾಸವಿದ್ದ ಈ ವೈದ್ಯರು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಅಂತರರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರಿ ಈ ಕೃತ್ಯ ಎಸಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಜಾಗೃತ ದಳ ಮತ್ತು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ವೈದ್ಯನ ನಿವಾಸದ ಮೇಲೆ ಜಂಟಿ ದಾಳಿ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮನೆಯ ಒಳಗೆ ಪ್ರತ್ಯೇಕ ಪಂಜರಗಳು ಮತ್ತು ವಿಶೇಷ ಕೃತಕ ವಾತಾವರಣ ನಿರ್ಮಿಸಿ ವಿವಿಧ ದೇಶಗಳ ವಿಲಕ್ಷಣ ಪ್ರಾಣಿಗಳನ್ನು ಸಾಕಿರುವುದು ಪತ್ತೆಯಾಗಿದೆ.

ಬಾಲ್ ಹೆಬ್ಬಾವುಗಳು, ಹಲ್ಲಿಗಳು, ಆಮೆಗಳು ಸೇರಿದಂತೆ ವಿಲಕ್ಷಣ ವನ್ಯಜೀವಿಗಳು, ವಿಮಾನ ನಿಲ್ದಾಣದ ಸಾಮಾನು ಟ್ಯಾಗ್‌ಗಳನ್ನು ಹೊಂದಿರುವ ಸೂಟ್‌ಕೇಸ್‌ಗಳು ಮತ್ತು ವನ್ಯಜೀವಿ ಕಳ್ಳಸಾಗಣೆಗೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಅಕ್ರಮವಾಗಿ ಭಾರತಕ್ಕೆ ತಂದು, ಇಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ಜಾಲದೊಂದಿಗೆ ವೈದ್ಯನಿಗೆ ಸಂಪರ್ಕವಿತ್ತೇ ಎಂಬ ಆಯಾಮದಲ್ಲಿ ತನಿಖೆ ಆರಂಭವಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ತನಿಖಾಧಿಕಾರಿಗಳು ಗಾಂಜಾ ಕುರುಹುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಂತರರಾಷ್ಟ್ರೀಯ ಪ್ರಾಣಿ ಕಳ್ಳಸಾಗಣೆ ಜಾಲದ ಶಂಕೆ

ವನ್ಯಜೀವಿ ನಿಯಮಾವಳಿಗಳ ಪ್ರಕಾರ, ವಿದೇಶಿ ಮೂಲದ ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಅಥವಾ ಇಟ್ಟುಕೊಳ್ಳಲು ಕೇಂದ್ರ ಸರ್ಕಾರದ ‘ಪರಿವೇಶ್‌’ (PARIVESH) ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು ಮತ್ತು ಸೂಕ್ತ ದಾಖಲೆ ಹೊಂದಿರಬೇಕು. ಆದರೆ ಬಂಧಿತ ವೈದ್ಯನ ಬಳಿ ಯಾವುದೇ ಕಾನೂನುಬದ್ಧ ದಾಖಲೆಗಳು ಇರಲಿಲ್ಲ. ಈ ಪ್ರಾಣಿಗಳನ್ನು ಕಸ್ಟಮ್ಸ್ ಕಣ್ತಪ್ಪಿಸಿ ದೇಶದೊಳಗೆ ಹೇಗೆ ತರಲಾಯಿತು ಮತ್ತು ಇದರ ಹಿಂದೆ ಇರುವ ಅಂತರರಾಷ್ಟ್ರೀಯ ಪ್ರಾಣಿ ಕಳ್ಳಸಾಗಣೆ (Animal Smuggling) ಜಾಲ ಯಾವುದು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳು ವಿದೇಶಿ ಸಾಕುಪ್ರಾಣಿ ವ್ಯಾಪಾರದ ಪ್ರಮುಖ ಕೇಂದ್ರಗಳಾದ ಥೈಲ್ಯಾಂಡ್ ಮತ್ತು ಮಲೇಷ್ಯಾ ಸೇರಿದಂತೆ ದೇಶಗಳಿಗೆ ಆಗಾಗ್ಗೆ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಶಾಲೆಗಳು, ಕಾಲೇಜುಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವನ್ಯಜೀವಿ ಶಿಕ್ಷಣ ಕಾರ್ಯಕ್ರಮಗಳನ್ನು ಉತ್ತೇಜಿಸುವ “@Zoo2You” ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ಮೇಲೂ ಅನುಮಾನಗಳು ಹುಟ್ಟಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link