Category Archives: Blog

Your blog category

ಹಾಡಹಗಲೇ ಸಿನಿಮೀಯ ಮಾದರಿ ದರೋಡೆ: ಬಂಗಾರದ ಅಂಗಡಿಗೆ ನುಗ್ಗಿ ಆಭರಣ ದೋಚಿ ಎಸ್ಕೇಪ್​​ ಆದ ಮೂವರು – Kannada News

ದರೋಡೆಯಾದ ಬಂಗಾರದ ಅಂಗಡಿImage Credit source: Tv9 Kannada

ನೆಲಮಂಗಲ, ಜೂನ್​ 02: ಹಾಡಹಗಲೇ ಸಿನಿಮೀಯ ಮಾದರಿ ದರೋಡೆ ಪ್ರಕರಣವೊಂದು ಬೆಂಗಳೂರು (Bengaluru) ಗ್ರಾಮಾಂತರದ ನೆಲಮಂಗಲದಲ್ಲಿ ನಡೆದಿದೆ. ಬೈಕ್​​ನಲ್ಲಿ ಬಂದಿದ್ದ ಆರೋಪಿಗಳು ಬಂಗಾರ ಅಂಗಡಿಯಲ್ಲಿದ್ದವರನ್ನು ಬೆದರಿಸಿ ಆಭರಣಗಳನ್ನು ದೋಚಿ ಎಸ್ಕೇಪ್​​ ಆಗಿದ್ದು, ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ನೆಲಮಂಗಲ ಭಾಗದಲ್ಲಿ ಮೇಲಿಂದ ಮೇಲೆ ದರೋಡೆ ಪ್ರಕರಣಗಳು ನಡೆಯುತ್ತಿರೋದು ಸಾರ್ವಜನಿಕರ ತೀವ್ರ ಆತಂಕಕ್ಕೂ ಕಾರಣವಾಗಿದೆ.

ಮುಖ್ಯಾಂಶಗಳು

  • ಹಾಡಹಗಲೇ ಬಂಗಾರದ ಅಂಗಡಿಗೆ ನುಗ್ಗಿ ದರೋಡೆ
  • ಬೈಕ್​​ನಲ್ಲಿ ಬಂದಿದ್ದ ಮೂವರು ಆರೋಪಿಗಳಿಂದ ಕೃತ್ಯ
  • ನೆಲಮಂಗಲದ ಟಿ.ಬೇಗೂರಿನಲ್ಲಿ ನಡೆದಿರುವ ಘಟನೆ

ಬೈಕ್​ನಲ್ಲಿ ಬಂದಿದ್ದ ಮೂವರು ದರೋಡೆಕೋರರು ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಮಹಾಲಕ್ಷ್ಮೀ ಜ್ಯುವೆಲರ್ಸ್​​ಗೆ ನುಗ್ಗಿದ್ದಾರೆ. ಬಂಗಾರದ ಅಂಗಡಿಯಲ್ಲಿದ್ದವರಿಗೆ ಡ್ಯಾಗರ್​​ ತೋರಿಸಿ ಬೆದರಿಸಿರುವ ಆರೋಪಿಗಳು, ಶೋ ಗ್ಲಾಸ್​​​ನಲ್ಲಿದ್ದ 20 ಉಂಗುರಗಳು ಇದ್ದ ಟ್ರೇ ದೋಚಿ ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಕೆಲ ಉಂಗುರಗಳು ರಸ್ತೆಗೆ ಬಿದ್ದಿವೆ ಎನ್ನಲಾಗಿದೆ. ಒಟ್ಟು 5 ಉಂಗುರಗಳು ಕಳವಾಗಿರುವ ಬಗ್ಗೆ ಶಾಪ್​​ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಕಳುವಾಗಿರುವ ಬಂಗಾರದ ಒಟ್ಟು ತೀಕ ಸುಮಾರು 35 ಗ್ರಾಂ ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆನ್‌ಲೈನ್ ಹೂಡಿಕೆ ಹೆಸರಲ್ಲಿ ಭಾರಿ ವಂಚನೆ, ಮಹಿಳೆಯ ಮಾತಿಗೆ ಮರುಳಾಗಿ 5.95 ಕೋಟಿ ರೂ. ಕಳಕೊಂಡ ವ್ಯಕ್ತಿ

ಇನ್ನು ಘಟನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದು, ಬಂಗಾರದ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ಅವು ಕಾರ್ಯನಿರ್ವಹಿಸುತ್ತಿಲ್ಲ ಎಂಬ ವಿಚಾರ ಗೊತ್ತಾದ ಕಾರಣ, ಶಾಪ್​​ ಮಾಲೀಕನ ಬಳಿಯಿಂದಲೇ ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿಯ ಕೈಗೆ ಸುತ್ತಿಕೊಂಡ ಹಾವು, 4 ತಾಸು ನರಕಯಾತನೆ – Kannada News

ಬೌಧ್, ಜೂನ್ 02: ವ್ಯಕ್ತಿಯೊಬ್ಬರ ತಾಳ್ಮೆ ಹಾಗೂ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿಯ ಕೈಗೆ ವಿಷಕಾರಿ ಹಾವೊಂದು ಸುತ್ತಿಕೊಂಡ ಪರಿಣಾಮ ಸುಮಾರು ನಾಲ್ಕು ಗಂಟೆಗಳ ಕಾಲ ನರಕಯಾತನೆ ಅನುಭವಿಸಬೇಕಾಯಿತು. ಆದರೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಒಡಿಶಾದ ಬೌಧ್ ಜಿಲ್ಲೆಯ ಹರಭಂಗ ಬ್ಲಾಕ್‌ನ ಅದೇನಿಗಢ ಗ್ರಾಮದಲ್ಲಿ ಪಾರ್ಶ್ವವಾಯು (Paralysis) ಪೀಡಿತರಾಗಿ ಚಲನಶೀಲತೆ ಕಳೆದುಕೊಂಡಿದ್ದ ಕೃಷ್ಣ ಚಂದ್ರ ಸಾಹು ಎಂಬ ವ್ಯಕ್ತಿಗೆ ಮಲಗಿದ್ದ ಹಾಸಿಗೆಗೆ ವಿಷಕಾರಿ ಹಾವು ನುಗ್ಗಿತ್ತು.

ಕಿಟಕಿಯಿಂದ ನುಗ್ಗಿದ ಯಮಸ್ವರೂಪಿ ಹಾವು!
ರಾತ್ರಿ ಮನೆಯ ಕೋಣೆಯ ಕಿಟಕಿ ತೆರೆದಿದ್ದರಿಂದ, ತಡರಾತ್ರಿಯಲ್ಲಿ ಭೀಕರ ವಿಷಪೂರಿತ ಹಾವೊಂದು ಸಾಹು ಅವರ ಹಾಸಿಗೆಯ ಬಳಿ ಬಂದಿದೆ. ಅದು ಅವರ ದೇಹದ ಮೇಲೆ ಚಲಿಸಲು ಪ್ರಾರಂಭಿಸಿದಾಗ ಸಾಹು ಅವರಿಗೆ ಎಚ್ಚರವಾಗಿದೆ. ಆದರೆ, ಪಾರ್ಶ್ವವಾಯು ಸಮಸ್ಯೆಯಿಂದಾಗಿ ಅವರಿಗೆ ತಕ್ಷಣವೇ ಎದ್ದು ಓಡಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ಇನ್ನಷ್ಟು ಗಂಭೀರವಾದದ್ದು ಎಂದರೆ, ಆ ಹಾವು ವೃದ್ಧರ ಒಂದು ಕೈಯನ್ನು ಗಟ್ಟಿಯಾಗಿ ಸುತ್ತಿಕೊಂಡು, ತನ್ನ ದೇಹದ ಇನ್ನೊಂದು ಭಾಗವನ್ನು ಪಕ್ಕದಲ್ಲಿದ್ದ ಕುರ್ಚಿಗೆ ಸುತ್ತಿಕೊಂಡಿತ್ತು.

ಯಾವುದೇ ಸಣ್ಣ ಅಲುಗಾಟವೂ ಹಾವನ್ನು ಕೆರಳಿಸಿ ಕಚ್ಚುವಂತೆ ಮಾಡಬಹುದು ಎಂದು ಅರಿತ ಸಾಹು, ತೀವ್ರ ಆತಂಕದ ನಡುವೆಯೂ ರಕ್ತ ಹೆಪ್ಪುಗಟ್ಟುವಂತಹ ನಿಶ್ಚಲತೆಯನ್ನು ಕಾಯ್ದುಕೊಂಡು ಜಾಣ್ಮೆ ಪ್ರದರ್ಶಿಸಿದರು.

ಮತ್ತಷ್ಟು ಓದಿ: ಬ್ರೈನ್ ಸ್ಟ್ರೋಕ್​​ಗೂ ಮೊದಲು ದೇಹದಲ್ಲಿ ಈ 5 ಲಕ್ಷಣಗಳು ಕಂಡುಬರುತ್ತವೆ

ಧೈರ್ಯ ಮತ್ತು ತಾಳ್ಮೆಯ ಯಶಸ್ವಿ ರಕ್ಷಣೆ
ಬೆಳಗ್ಗೆ ಕುಟುಂಬದ ಸದಸ್ಯರು ಕೋಣೆಗೆ ಬಂದಾಗ ಈ ಭೀಕರ ದೃಶ್ಯವನ್ನು ಕಂಡು ದಿಗ್ಭ್ರಮೆಗೊಂಡರು. ಆದರೆ, ಅವರು ಗಾಬರಿಯಾಗಿ ಕಿರುಚಾಡದೆ ಅತ್ಯಂತ ಜಾಣ್ಮೆಯ ನಿರ್ಧಾರ ಕೈಗೊಂಡರು.

ಸಮಯಪ್ರಜ್ಞೆ: ಹಾವನ್ನು ಹಿಡಿಯಲು ಹೋಗಿ ಕೆರಳಿಸಿದರೆ ವೃದ್ಧರಿಗೆ ಕಚ್ಚಬಹುದು ಎಂದು ತಿಳಿದ ಕುಟುಂಬಸ್ಥರು, ಅತ್ಯಂತ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಾ ಸರಿಯಾದ ಸಮಯಕ್ಕಾಗಿ ಕಾಯ್ದರು.

ಸುರಕ್ಷಿತ ಬಿಡುಗಡೆ: ಸತತ ನಾಲ್ಕು ಗಂಟೆಗಳ ಈ ಸುದೀರ್ಘ ಅಗ್ನಿಪರೀಕ್ಷೆಯ ನಂತರ, ಕುಟುಂಬದವರು ಯಾವುದೇ ಹರಸಾಹಸವಿಲ್ಲದೆ, ಹಾವಿಗೆ ತೊಂದರೆಯಾಗದಂತೆ ಅದನ್ನು ವ್ಯಕ್ತಿಯ ದೇಹದಿಂದ ಯಶಸ್ವಿಯಾಗಿ ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಪೆದ್ದಿ’ ಅಡ್ವಾನ್ಸ್ ಬುಕಿಂಗ್ ಶುರು, ಬೆಂಗಳೂರಿನಲ್ಲಿ ಎಷ್ಟು ಶೋ? ಟಿಕೆಟ್ ಬೆಲೆ ಎಷ್ಟು?

ರಾಮ್ ಚರಣ್ (Ram Charan), ಶಿವರಾಜ್ ಕುಮಾರ್ ಮತ್ತು ಜಾನ್ಹವಿ ಕಪೂರ್ ನಟಿಸಿರುವ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೆ ಇದೆ. ಜೂನ್ 4 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಓಪನ್ ಆಗಿದ್ದು, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಸಿನಿಮಾ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಬೆಂಗಳೂರಿನಲ್ಲಿ ‘ಪೆದ್ದಿ’ ಸಿನಿಮಾಕ್ಕೆ ಸಾಕಷ್ಟು ಶೋಗಳು ಲಭಿಸಿದ್ದು, ಟಿಕೆಟ್ ಬೆಲೆ ಎಷ್ಟಿದೆ? ಮಾಹಿತಿ ಇಲ್ಲಿದೆ…

ಈ ಹಿಂದೆ ಜನವರಿ ತಿಂಗಳಲ್ಲಿ ‘ಜನ ನಾಯಗನ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆದಾಗ ಬೆಂಗಳೂರಿನಲ್ಲಿ ಪ್ರತಿ ಟಿಕೆಟ್ ಬೆಲೆ 900 ರಿಂದ 1000 ವರೆಗೆ ನಿಗದಿ ಪಡಿಸಲಾಗಿತ್ತು. ಸಿಂಗಲ್ ಸ್ಕ್ರೀನ್​​ಗಳಲ್ಲಿ ಸಹ 500 ರಿಂದ 600 ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು. ಆದರೆ ‘ಪೆದ್ದಿ’ ಚಿತ್ರತಂಡ ಈ ಬಾರಿ ಅಂಥಹಾ ‘ಲೂಟಿ’ಗೆ ಮುಂದಾಗಿಲ್ಲ. ಸಹ್ಯ ಟಿಕೆಟ್ ಬೆಲೆಯನ್ನೇ ನಿಗದಿಪಡಿಸಲಾಗಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಸಹಜವಾಗಿಯೇ ಟಿಕೆಟ್ ಬೆಲೆ ತುಸು ಹೆಚ್ಚಿವೆ ಆದರೆ ಸಿಂಗಲ್ ಸ್ಕ್ರೀನ್​​ಗಳಲ್ಲಿ 200 ರಿಂದ 250ಕ್ಕೆ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಬೆಂಗಳೂರಿನಲ್ಲಿ ‘ಪೆದ್ದಿ’ ಸಿನಿಮಾದ ನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ತೆಲುಗು, ಕನ್ನಡ, ಹಿಂದಿ ಮತ್ತು ತಮಿಳು. ಜೂನ್ 2ರ ಬೆಳಿಗ್ಗೆ ವೇಳೆಗೆ ಕನ್ನಡಕ್ಕೆ ಈ ವರೆಗೆ 12 ಶೋಗಳನ್ನು ನೀಡಲಾಗಿದ್ದು, ನಾಳೆ ವೇಳೆಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ತಮಿಳಿನ ಎರಡು ಶೋಗಳು, ಹಿಂದಿಯ ಒಂದು ಶೋ ಪ್ರದರ್ಶನವಾಗುತ್ತಿದೆ. ತೆಲುಗಿಗೆ ಹೆಚ್ಚು ಶೋಗಳು ಸಹಜವಾಗಿಯೇ ದೊರೆತಿವೆ.

ಇದನ್ನೂ ಓದಿ:ಕಣ್ಣು ಕುಕ್ಕಿದ ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟ

ಜೂನ್ 2 ರ ಬೆಳಿಗ್ಗೆ ವೇಳೆಗೆ ಪಿವಿಆರ್, ಐನಾಕ್ಸ್ ಇನ್ನೂ ಕೆಲವು ಮಲ್ಟಿಪ್ಲೆಕ್ಸ್​​ಗಳಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿಲ್ಲ ಆದರೆ ನಗರದ ಬಹುತೇಕ ಸಿಂಗಲ್ ಸ್ಕ್ರೀನ್​​ಗಳು ಹಾಗೂ ಮಹೇಶ್ ಬಾಬು ಒಡೆತನದ ಎಎಂಬಿಯಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಟಿಕೆಟ್ ಬೆಲೆ ಸಾಧಾರಣವಾಗಿಯೇ ಇದೆ. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಬೆಳಿಗ್ಗೆ 6:30 ಇಂದಲೇ ಹಲವು ಚಿತ್ರಮಂದಿರಗಳಲ್ಲಿ ಶೋಗಳು ಆರಂಭವಾಗುತ್ತಿವೆ.

ಮಲ್ಟಿಪ್ಲೆಕ್ಸ್​ ಆಗಿರುವ ಎಎಂಬಿ ಸಿನಿಮಾಸ್ ನಲ್ಲಿ 600 ರಿಂದ 400 ವರೆಗೆ ಟಿಕೆಟ್​​ ಬೆಲೆ ನಿಗದಿ ಪಡಿಸಿದ್ದರೆ. ಬಹುತೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 250 ಹಾಗೂ 200 ಟಿಕೆಟ್ ಬೆಲೆ ಇದೆ. ಕೆಲ ಎಸಿ ಚಿತ್ರಮಂದಿರದಲ್ಲಿ 300-250-200 ಟಿಕೆಟ್ ಬೆಲೆ ಇದೆ. ಇದು ಉತ್ತಮ ಮೊತ್ತವೇ ಆಗಿದೆ. ಈ ಹಿಂದೆ ಬಿಡುಗಡೆ ಆದ ಕೆಲ ಪರಭಾಷೆ ಸಿನಿಮಾಗಳಿಗೆ ಇದರ ದುಪ್ಪಟ್ಟು ಟಿಕೆಟ್ ಬೆಲೆಯನ್ನು ನಿಗದಿ ಮಾಡಲಾಗಿತ್ತು.

‘ಪೆದ್ದಿ’ ಸಿನಿಮಾವು ಹಳ್ಳಿಯ ಕ್ರೀಡಾಪಟು ಒಬ್ಬನ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್ ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ನಾಯಕಿ. ದಿವ್ಯೇಂದು ವಿಲನ್. ಜೊತೆಗೆ ಬೊಮನ್ ಇರಾನಿ, ಜಗಪತಿ ಬಾಬು ಇನ್ನೂ ಕೆಲವರಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾ ನಿರ್ದೇಶಿಸಿರುವುದು ಬುಚ್ಚಿಬಾಬು ಸನಾ. ನಿರ್ಮಾಣ ಮೈತ್ರಿ ಮೂವಿ ಮೇಕರ್ಸ್​​ನವರದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ

ಕಿಚ್ಚ ಸುದೀಪ್ ಅವರ ಅಳಿಯ ಸಂಜಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ನಟನೆಯ ‘ಮ್ಯಾಂಗೋ ಪಚ್ಚ’ ಜೂನ್ 5ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಪ್ರಿಯಾ ಸುದೀಪ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಮಾತನಾಡುವಾಗ ಸಂಜಿತ್ ಗುಣದ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅವರ ಧ್ವನಿ, ಮ್ಯಾನರಿಸಂ ಸೇರಿದಂತೆ ಅನೇಕ ವಿಷಯಗಳು ಸಂಜಿತ್​​ಗೆ ಬಂದಿವೆ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CBSE 12ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ: ಅಂಕಗಳ ಮರುಪರಿಶೀಲನೆ, ಮರುಮೌಲ್ಯಮಾಪನ ಪ್ರಕ್ರಿಯೆ ಆರಂಭ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

CBSE 12ನೇ ತರಗತಿ ಮರುಮೌಲ್ಯಮಾಪನ ಪೋರ್ಟಲ್Image Credit source: Pinterest

ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿಯೊಂದನ್ನು ನೀಡಿದೆ. 2026ರ ಬೋರ್ಡ್ ಪರೀಕ್ಷೆಯ ಅಂಕಗಳ ಮರುಪರಿಶೀಲನೆ (Verification of Marks) ಮತ್ತು ಪ್ರಶ್ನೆವಾರು ಮರುಮೌಲ್ಯಮಾಪನ (Re-evaluation) ಪ್ರಕ್ರಿಯೆಯ ಪೋರ್ಟಲ್ ಇಂದು ಅಧಿಕೃತವಾಗಿ ಆರಂಭವಾಗಿದೆ. ತಾಂತ್ರಿಕ ನವೀಕರಣಗಳ ನಂತರ ಸದ್ಯ ಪೋರ್ಟಲ್ ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಜೂನ್ 6 ರವರೆಗೆ ಕಾಲಾವಕಾಶ:

ಸಿಬಿಎಸ್‌ಇ ಪ್ರಕಟಣೆಯ ಪ್ರಕಾರ, ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂನ್ 6 ಮಧ್ಯರಾತ್ರಿಯವರೆಗೆ ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನದಂದು ಸರ್ವರ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ, ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ನೆರವಾಗಲು ಸಿಬಿಎಸ್‌ಇ ಹಂತ-ಹಂತವಾಗಿ ಅರ್ಜಿ ಸಲ್ಲಿಸುವ ವೀಡಿಯೊ ಮಾರ್ಗದರ್ಶನವನ್ನೂ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ಪರಿಷ್ಕೃತ ಶುಲ್ಕ ಪಟ್ಟಿ ಮತ್ತು ಹಣ ವಾಪಸಾತಿ ನಿಯಮ:

ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಈ ಬಾರಿ ಸಿಬಿಎಸ್‌ಇ ತನ್ನ ಶುಲ್ಕದಲ್ಲಿ ಭಾರಿ ಕಡಿತ ಮಾಡಿದೆ. ಅಂಕಗಳ ಮರುಪರಿಶೀಲನೆಗೆ (Verification) ಪ್ರತಿ ಉತ್ತರ ಪತ್ರಿಕೆಗೆ 100 ರೂಪಾಯಿ ಹಾಗೂ ಮರುಮೌಲ್ಯಮಾಪನಕ್ಕೆ (Re-evaluation) ಪ್ರತಿ ಪ್ರಶ್ನೆಗೆ 25 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ, ಒಂದು ವೇಳೆ ಮರುಮೌಲ್ಯಮಾಪನದಲ್ಲಿ ಅಂಕಗಳು ಹೆಚ್ಚಾದರೆ ವಿದ್ಯಾರ್ಥಿಗಳು ಪಾವತಿಸಿದ ಈ ಶುಲ್ಕವನ್ನು ಪೂರ್ತಿಯಾಗಿ ರೀಫಂಡ್ (ಹಣ ವಾಪಸ್) ಮಾಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು?

ಈ ಹಂತದಲ್ಲಿ ಅರ್ಜಿ ಸಲ್ಲಿಸಲು ಒಂದು ಪ್ರಮುಖ ನಿಯಮವನ್ನು ಅನ್ವಯಿಸಲಾಗಿದೆ. ಈಗಾಗಲೇ ತಮ್ಮ ಉತ್ತರ ಪತ್ರಿಕೆಯ ಡಿಜಿಟಲ್ ಸ್ಕ್ಯಾನ್ಡ್ ಪ್ರತಿಯನ್ನು (Stage 1) ಪಡೆದುಕೊಂಡ ವಿದ್ಯಾರ್ಥಿಗಳು ಮಾತ್ರ ಈಗ ಈ ಹಂತದಲ್ಲಿ (Stage 2) ನಿರ್ದಿಷ್ಟ ಪ್ರಶ್ನೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೇರವಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಪೋರ್ಟಲ್‌ನಲ್ಲಿ ಅವಕಾಶವಿರುವುದಿಲ್ಲ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನ:

ವಿದ್ಯಾರ್ಥಿಗಳು ಮೊದಲಿಗೆ ಸಿಬಿಎಸ್‌ಇಯ ಅಧಿಕೃತ ಪೋರ್ಟಲ್ postresult.cbseit.in/pvr/ ಗೆ ಭೇಟಿ ನೀಡಬೇಕು. ಅಲ್ಲಿ ನಿಮ್ಮ ಅಡ್ಮಿಟ್ ಕಾರ್ಡ್‌ನಲ್ಲಿರುವ 12ನೇ ತರಗತಿಯ ರೋಲ್ ನಂಬರ್ (Roll Number), ಸ್ಕೂಲ್ ನಂಬರ್ (School No.) ಮತ್ತು ಸೆಂಟರ್ ನಂಬರ್ (Center No.) ವಿವರಗಳನ್ನು ದಾಖಲಿಸಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ, ನೀವು ಮರುಮೌಲ್ಯಮಾಪನ ಬಯಸುವ ಪ್ರಶ್ನೆ ಸಂಖ್ಯೆಗಳನ್ನು ನಿಖರವಾಗಿ ಆಯ್ಕೆ ಮಾಡಿ, ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ (UPI) ಮೂಲಕ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ಅಪ್ಲಿಕೇಶನ್ ಸಬ್ಮಿಟ್ ಮಾಡಬಹುದು.

ವಿದ್ಯಾರ್ಥಿಗಳ ಸಹಾಯಕ್ಕಾಗಿ ಹೆಲ್ಪ್‌ಲೈನ್ ವಿವರಗಳು:

ಅರ್ಜಿ ಸಲ್ಲಿಸುವಾಗ ಲಾಗಿನ್ ಸಮಸ್ಯೆ ಅಥವಾ ಆನ್‌ಲೈನ್ ಹಣ ಪಾವತಿ ವಿಫಲವಾದರೆ ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ. ವಿದ್ಯಾರ್ಥಿಗಳ ನೆರವಿಗಾಗಿ ಮಂಡಳಿಯು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1800 11 8004 ಅನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ resultcbse2026@cbseshiksha.in ಇಮೇಲ್ ಐಡಿ ಮೂಲಕವೂ ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭುವನೇಶ್ವರ್ ಕುಮಾರ್​ ಯಶಸ್ಸಿನ ಗುಟ್ಟು ರಟ್ಟು ಮಾಡಿದ ಸಚಿನ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ದಾಳಿ ಸಂಘಟಿಸಿದ್ದ ಭುವಿ ರನ್​ ನಿಯಂತ್ರಿಸುವುದರೊಂದಿಗೆ 28 ವಿಕೆಟ್​ಗಳನ್ನೂ ಸಹ ಪಡೆದಿದ್ದರು. ಭುವನೇಶ್ವರ್ ಕುಮಾರ್ ಅವರ ಈ ಭರ್ಜರಿ ಯಶಸ್ಸಿಗೆ ಕಾರಣ ವೋಬ್ಲಿ ಸೀಮ್ ಕೌಶಲ್ಯವೇ ಎಂದಿದ್ದಾರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶ್ಲೇಷಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್, “ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಬೌಲಿಂಗ್​ನೊಂದಿಗೆ ಅತ್ಯುತ್ತಮ ದಾಳಿ ನಡೆಸಿದ್ದಾರೆ. ಸಾಮಾನ್ಯವಾಗಿ ಸ್ವಿಂಗ್ ಮಾಡಲು ಬೌಲರ್​ಗಳು ಚೆಂಡಿನ ಸೀಮ್​ (ಚೆಂಡಿನ ಸ್ಟಿಚ್) ಮೇಲೆ ಹಿಡಿತ ಹೊಂದಿರುತ್ತಾರೆ. ಇದನ್ನು ಬ್ಯಾಟರ್​ಗಳು ಸುಲಭವಾಗಿ ಗ್ರಹಿಸಿ ರನ್​ಗಳಿಸುತ್ತಾರೆ”.

“ಆದರೆ ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಕೌಶಲ್ಯದ ಮೂಲಕ ದಾಳಿ ಸಂಘಟಿಸಿದ್ದಾರೆ. ಅಂದರೆ ಭುವಿ ಚೆಂಡಿನ ಸೀಮ್​ ಮೇಲೆ ತುಸು ವಕ್ರವಾಗಿ ಬೆರಳನ್ನಿಟ್ಟು ಬೌಲಿಂಗ್ ಮಾಡಿದ್ದಾರೆ. ಇದರಿಂದ ಚೆಂಡು ಬಿದ್ದ ಮೇಲೆ ಎತ್ತ ಸಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಅದು ಇನ್​ ಸ್ವಿಂಗ್ ಆಗಬಹುದು, ಇಲ್ಲಾ ಔಟ್ ಸ್ವಿಂಗ್ ಆಗಬಹುದು. ಹೀಗೆ ಬರುವ ಚೆಂಡನ್ನು ಗುರುತಿಸಿ ಬ್ಯಾಟಿಂಗ್ ಮಾಡುವುದು ತುಸು ಕಷ್ಟ”.

“ಏಕೆಂದರೆ ಬಾಲ್​ ಪಿಚ್ ಆದ ನಂತರ ಬ್ಯಾಟರ್‌ಗಳಿಗೆ ತಿಳಿಯದಂತೆ ದಿಕ್ಕು ಬದಲಾಯಿಸುತ್ತದೆ. ಇಂತಹದೊಂದು ಕೌಶಲ್ಯದೊಂದಿಗೆ ಈ ಬಾರಿ ಭುವನೇಶ್ವರ್​ ಕುಮಾರ್​ಗೆ ದಾಳಿ ಸಂಘಟಿಸಿದ್ದಾರೆ. ಅಲ್ಲದೆ ಆಫ್-ಸ್ಟಂಪ್ ಲೈನ್‌ಗೆ ಸತತವಾಗಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದಾರೆ. ಇದುವೇ ಭುವನೇಶ್ವರ್ ಕುಮಾರ್ ಅವರ ಯಶಸ್ಸಿನ ಸಿಕ್ರೇಟ್” ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

ವೋಬ್ಲಿ ಸೀಮ್ ದಾಳಿಯೊಂದಿಗೆ ಈ ಬಾರಿ ಭುವನೇಶ್ವರ್ ಕುಮಾರ್ ಪಡೆದಿರುವುದು ಬರೋಬ್ಬರಿ 28 ವಿಕೆಟ್​ಗಳು. ಹಾಗೆಯೇ 16 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 378 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಕೇವಲ 501 ರನ್​ಗಳು ಮಾತ್ರ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

ಅಂದರೆ ಪ್ರತಿ ಓವರ್​ನಲ್ಲಿ 7.95 ಸರಾಸರಿಯಲ್ಲಿ ಮಾತ್ರ ರನ್ ನೀಡಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಕನಿಷ್ಠ 100 ಎಸೆತಗಳನ್ನು ಎಸೆದು ಅತೀ ಕಡಿಮೆ ಸರಾಸರಿಯಲ್ಲಿ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ 28 ವಿಕೆಟ್​ಗಳೊಂದಿಗೆ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

Source link

ಸಿಬಿಎಸ್​ಇ ಮರುಮೌಲ್ಯಮಾಪನ ಪೋರ್ಟಲ್ ತಾಂತ್ರಿಕ ದೋಷ ನಿವಾರಣೆ: ಅಂಕ ಪರಿಶೀಲನೆಗೆ ಜೂನ್ 6 ಕೊನೆಯ ದಿನಾಂಕ

ನವದೆಹಲಿ, ಜೂನ್ 02: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅತ್ಯಂತ ವೇಗದ ಕ್ರಮ ಕೈಗೊಂಡಿದೆ. ಮರುಮೌಲ್ಯಮಾಪನ ಪೋರ್ಟಲ್ ಆರಂಭವಾದ ಮೊದಲ ದಿನ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಲಾಗಿನ್ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಮಂಡಳಿಯು ತಕ್ಷಣವೇ ಪರಿಹರಿಸಿದ್ದು, ಪ್ರಸ್ತುತ ಪೋರ್ಟಲ್ ಅತ್ಯಂತ ಸರಾಗವಾಗಿ ಹಾಗೂ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ.

ಜೂನ್ 6 ರವರೆಗೆ ಅರ್ಜಿ ಸಲ್ಲಿಸಲು ಸುವರ್ಣಾವಕಾಶ
ಸಿಬಿಎಸ್‌ಇ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳ ಮರುಪರಿಶೀಲನೆ ಹಾಗೂ ಮರುಮೌಲ್ಯಮಾಪನಕ್ಕಾಗಿ (Revaluation) ಪೋರ್ಟಲ್ ಜೂನ್ 2 ರಿಂದ ಜೂನ್ 6 ರವರೆಗೆ ಸಾರ್ವಜನಿಕವಾಗಿ ತೆರೆದಿರುತ್ತದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡಿ ಸುಲಭವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ: ಈಗಾಗಲೇ ತಮ್ಮ ಉತ್ತರ ಪತ್ರಿಕೆಗಳ ಛಾಯಾಪ್ರತಿಗಾಗಿ (Photocopy) ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮಾತ್ರ ಈ ಮರುಮೌಲ್ಯಮಾಪನಕ್ಕೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆಯಾ ವಿಷಯದ ಅಂಕಪಟ್ಟಿ ಯೋಜನೆಯನ್ನು (Marking Scheme) ಉಲ್ಲೇಖಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಮತ್ತಷ್ಟು ಓದಿ: ಇನ್ಮುಂದೆ SSLC, PUCಯಲ್ಲಿ ಶೇ.33 ಅಂಕ ಬಂದ್ರೂ ಪಾಸ್: ಆಕ್ಷೇಪಣೆ ಸಲ್ಲಿಸಲು ಅವಕಾಶ

ಪಾರದರ್ಶಕತೆಗೆ ಶಿಕ್ಷಣ ಸಚಿವಾಲಯದ ಒತ್ತು
ಇದೇ ವೇಳೆ, ಮಂಡಳಿಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯಲ್ಲಿ ಉಂಟಾಗಿದ್ದ ಕೆಲವು ವ್ಯತ್ಯಾಸಗಳ ಕುರಿತು ವಿದ್ಯಾರ್ಥಿಗಳು ತಂದಿದ್ದ ಗಮನವನ್ನು ಶಿಕ್ಷಣ ಸಚಿವಾಲಯವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಈ ಸೇವೆ ಒದಗಿಸುತ್ತಿರುವ ‘COEMPT’ ಸಂಸ್ಥೆಯ ಟೆಂಡರ್ ಪ್ರಕ್ರಿಯೆಯ ಸಂಪೂರ್ಣ ವಿವರ ಹಾಗೂ ದಾಖಲೆಗಳನ್ನು ಒದಗಿಸುವಂತೆ ಸಚಿವಾಲಯವು ಸಿಬಿಎಸ್‌ಇಗೆ ಸೂಚಿಸಿದೆ.

ಸೇವಾ ಪೂರೈಕೆದಾರರ ಆಯ್ಕೆಯಲ್ಲಿ ಎಲ್ಲಾ ನಿಗದಿತ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಪರಿಶೀಲನೆ ನಡೆಸಲಾಗುತ್ತಿದ್ದು, ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಇನ್ನಷ್ಟು ದೋಷಮುಕ್ತ ಮತ್ತು ನಂಬಿಕಸ್ಥ ಮೌಲ್ಯಮಾಪನ ವ್ಯವಸ್ಥೆಯನ್ನು ಖಾತರಿಪಡಿಸಲಿದೆ. ಸದ್ಯ ಪೋರ್ಟಲ್ ಸುಸ್ಥಿತಿಗೆ ಬಂದಿರುವುದರಿಂದ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ತಮ್ಮ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಅಂದೇ ಹೇಳಿದ್ವಿ ಡಿ. ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾ’: ಪಂಚಮುಖಿ ಆಂಜನೇಯ ದೇವಸ್ಥಾನದ ಅರ್ಚಕರ ಸಂತಸ

ರಾಯಚೂರು, ಜೂನ್ 02: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ನಿಯೋಜನೆಗೊಂಡಿರುವ ಬೆನ್ನಲ್ಲೇ, ರಾಯಚೂರು ತಾಲೂಕಿನ ಪ್ರಸಿದ್ಧ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಸಡಗರ ಮನೆಮಾಡಿದೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದ ದೇವಸ್ಥಾನದ ಮೂಲ ಅರ್ಚಕ ಶಾಮಾಚಾರ್ಯರು ಟಿವಿ9 ಎದುರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಡಿ.ಕೆ. ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದಿದ್ದ ರಾಯಚೂರು ಅರ್ಚಕರ ಭವಿಷ್ಯ ನಿಜವಾಗಿದೆ.
  • ಪಂಚಮುಖಿ ಸನ್ನಿಧಿಯಲ್ಲಿ ಈ ಹಿಂದೆ ಪೂಜೆ ಸಲ್ಲಿಸಿದ್ದ ನಾಲ್ವರು ಮುಖ್ಯಮಂತ್ರಿಯಾಗಿದ್ದರು.
  • ಡಿಸಿಎಂ ಆಗಿದ್ದಾಗ ಡಿಕೆಶಿ ದಂಪತಿ ಇಷ್ಟಾರ್ಥ ಸಿದ್ಧಿಗೆ ಮಧು ಅಭಿಷೇಕ ಮಾಡಿಸಿದ್ದರು.

ಇಲ್ಲಿ ಪೂಜೆ ಮಾಡಿಸಿದ ಐದನೇ ಸಿಎಂ ಆದ್ರು ಡಿ.ಕೆ. ಶಿವಕುಮಾರ್!

ಈ ದೇವಸ್ಥಾನಕ್ಕೆ ಒಂದು ವಿಶಿಷ್ಟ ಇತಿಹಾಸವಿದೆ. ಹಿಂದೆ ಇಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಇದೀಗ ಪಂಚಮುಖಿ ಪ್ರಾಣದೇವರ ಮಹಿಮೆಯಿಂದ ಸಿಎಂ ಆಗಿ ಆಯ್ಕೆಯಾಗಿರುವ ಐದನೇ ನಾಯಕ ಡಿ.ಕೆ. ಶಿವಕುಮಾರ್ ಆಗಿದ್ದಾರೆ.

2025ರ ಅಕ್ಟೋಬರ್‌ನಲ್ಲಿ ಡಿಸಿಎಂ ಆಗಿದ್ದ ವೇಳೆ ಡಿ.ಕೆ. ಶಿವಕುಮಾರ್ ಅವರು ಪತ್ನಿ ಸಮೇತ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪಂಚಮುಖಿ ದೇವರಿಗೆ ವಿಶೇಷವಾದ ‘ಮಧು ಅಭಿಷೇಕ’ ಹಾಗೂ 42 ಶ್ಲೋಕಗಳ ಪೂಜೆ ಮಾಡಿಸಿದ್ದರು.

ಅರ್ಚಕರು ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಅರ್ಚಕ ಶಾಮಾಚಾರ್ಯರು, ಪಂಚಮುಖಿ ಪ್ರಾಣದೇವರಲ್ಲಿ ಕಷ್ಟ ನಿವಾರಣೆಗಾಗಿ ಹಾಗೂ ಇಷ್ಟಾರ್ಥಗಳ ಈಡೇರಿಕೆಗಾಗಿ ಮಧು ಅಭಿಷೇಕ ಮಾಡಿಸಿದರೆ ಆ ಕೆಲಸ ಖಂಡಿತ ಆಗುತ್ತದೆ. ಅಂದು ಪೂಜೆ ಮುಗಿದ ಬಳಿಕ ಡಿಕೆಶಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದೆವು. ಇಂದು ರಾಯರ ಹಾಗೂ ಪಂಚಮುಖಿ ಆಂಜನೇಯನ ಆಶೀರ್ವಾದದಿಂದ ಅದು ನಿಜವಾಗಿದೆ ಎಂದು ಭಕ್ತಿಪೂರ್ವಕವಾಗಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:02 am, Tue, 2 June 26

Source link

ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಭಾರಿ ಸಮಸ್ಯೆ

ಮೈಸೂರು, ಜೂನ್ 2: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ವ್ಯಾಪ್ತಿಯ ಕಬಿನಿ ಜಲಾಶಯದ ಹಿನ್ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ತೀವ್ರ ಆಹಾರದ ಕೊರತೆ ಎದುರಾಗಿದೆ. ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಹಸಿರು ಸಂಪೂರ್ಣವಾಗಿ ಮಾಯವಾಗಿದ್ದು, ತಿನ್ನಲು ಹಸಿರು ಹುಲ್ಲು ಸಿಗದೆ ಕಾಡಾನೆಗಳು ಪರದಾಡುತ್ತಿವೆ. ಅಲ್ಪ ಪ್ರಮಾಣದ ಮಳೆಯಿಂದಾಗಿ ಅಲ್ಲಲ್ಲಿ ಮಾತ್ರ ಗರಿಕೆ ಬೆಳೆದಿದ್ದು, ಆನೆಗಳು ಕಾಲಿನಿಂದ ಒಣಗಿದ ಮಣ್ಣನ್ನು ಒದ್ದು, ಹುಲ್ಲಿನ ಬೇರುಗಳನ್ನು ಬೇರ್ಪಡಿಸಿ ತಿನ್ನುತ್ತಿರುವ ದೃಶ್ಯ ಕಾಣಿಸಿದೆ. ನೀರಿಲ್ಲದ ಬಣಗುಡುತ್ತಿರುವ ನೆಲದಲ್ಲಿ ಆಹಾರಕ್ಕಾಗಿ ಕಾಡಾನೆಗಳು ಪರದಾಡುತ್ತಿರುವ ಅಪರೂಪದ ದೃಶ್ಯ ಜಿ.ಎಸ್. ರವಿಶಂಕರ್ ಎಂಬುವವರ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅವರೇ ನನ್ನ ಮೇಲೆ ಹಣ ಖರ್ಚು ಮಾಡುತ್ತಿದ್ದರು’; ಸುಷ್ಮಿತಾ ಸೇನ್ ಬಗ್ಗೆ ಲಲಿತ್ ಮೋದಿ ಮಾತು

ನಾಲ್ಕು ವರ್ಷಗಳ ಹಿಂದೆ (2022ರಲ್ಲಿ), ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಅವರ ರೋಮ್ಯಾಂಟಿಕ್ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆದಾಗ ಇಡೀ ದೇಶವೇ ಆಘಾತಕ್ಕೊಳಗಾಗಿತ್ತು. ಉದ್ಯಮಿ ಹಾಗೂ ಐಪಿಎಲ್‌ನ ಮಾಜಿ ಮುಖ್ಯಸ್ಥರಾದ ಲಲಿತ್ ಮೋದಿ ಮತ್ತು ಬಾಲಿವುಡ್‌ನ ಯಶಸ್ವಿ ನಟಿ ಸುಶ್ಮಿತಾ ಸೇನ್ ಅವರ ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು. ದೇಶದಿಂದ ದೂರ ಉಳಿದಿದ್ದ ಲಲಿತ್ ಮೋದಿ ಮತ್ತು ಸುಶ್ಮಿತಾ ಒಟ್ಟಿಗೆ ಬಂದಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈ ನಡುವೆ ಸುಶ್ಮಿತಾ ಸೇನ್ ಅವರನ್ನು ಹಣದ ಆಸೆಗಾಗಿ ಪ್ರೀತಿಸುವ ‘ಗೋಲ್ಡ್ ಡಿಗ್ಗರ್’ ಎಂದು ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದರು. ಆದರೆ, ಈಗ ಲಲಿತ್ ಮೋದಿ ಅವರು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ಸುಶ್ಮಿತಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಇತ್ತೀಚೆಗೆ ‘ಹ್ಯೂಮನ್ಸ್ ಆಫ್ ಬಾಂಬೆ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಲಲಿತ್ ಮೋದಿ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ನಾನು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪ್ರೀತಿಯ ವಿಷಯವನ್ನು ಪ್ರಕಟಿಸಿದ ನಂತರ ಇಂಟರ್ನೆಟ್‌ನಲ್ಲಿ ಹರಿದಾಡಿದ ನೆಗೆಟಿವ್ ಕಮೆಂಟ್‌ಗಳು ನನಗೆ ತೀವ್ರ ನಿರಾಶೆ ಉಂಟುಮಾಡಿದ್ದವು’ ಎಂದು ಲಲಿತ್ ಮೋದಿ ಹೇಳಿದ್ದಾರೆ. ಸುಶ್ಮಿತಾ ಸೇನ್ ಮೇಲಿನ ಹಣದ ಆಸೆಯ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, ‘ಸುಶ್ಮಿತಾ ಸೇನ್ ಆರ್ಥಿಕವಾಗಿ ಸಂಪೂರ್ಣ ಸ್ವತಂತ್ರ ಮಹಿಳೆ. ಅವರು ತಮ್ಮ ಸ್ವಂತ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಹಣಕ್ಕಾಗಿ ಅವರು ಯಾರನ್ನೂ ಅವಲಂಬಿಸಿಲ್ಲ. ಅವರು ಅತ್ಯಂತ ಸುಂದರ, ಯಶಸ್ವಿ ಮತ್ತು ಬಲಿಷ್ಠ ಮಹಿಳೆಯಾಗಿದ್ದಾರೆ’ ಎಂದು ಗುಣಗಾನ ಮಾಡಿದ್ದಾರೆ.

ಮುಂದುವರಿದು ಮಾತನಾಡಿದ ಲಲಿತ್ ಮೋದಿ, ‘ನನಗೆ ತಿಳಿದಿರುವ ಎಲ್ಲಾ ಜನರಿಗಿಂತ ಸುಶ್ಮಿತಾ ಅವರ ಬಳಿಯೇ ಅತಿ ಹೆಚ್ಚು ವಜ್ರದ ಆಭರಣಗಳಿವೆ. ಅವೆಲ್ಲವನ್ನೂ ಅವರು ಸ್ವತಃ ತಮ್ಮ ಸ್ವಂತ ಹಣದಿಂದಲೇ ಸಂಪಾದಿಸಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ತಮ್ಮದೇ ಆದ ಸ್ವಂತ ವಜ್ರದ ಉದ್ಯಮವೂ ಇದೆ’ ಎಂದು ತಿಳಿಸಿದ್ದಾರೆ.
ಇಬ್ಬರೂ ಒಟ್ಟಿಗೆ ಕಳೆದ ಪ್ರವಾಸದ ದಿನಗಳನ್ನು ನೆನಪಿಸಿಕೊಂಡ ಅವರು, ‘ನಾವು ಒಟ್ಟಿಗೆ ಸುತ್ತಾಡಲು ಹೋದಾಗ ನಾನು ಯಾವುದಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ಎಂದಿಗೂ ಬರಲಿಲ್ಲ. ಅವರ ಖರ್ಚನ್ನು ಅವರೇ ನೋಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ನನ್ನದೇ ಖರ್ಚನ್ನು ಅವರೇ ಭರಿಸುತ್ತಿದ್ದರು. ನಾನು ಕೇವಲ ಅವರ ಜೊತೆಗಾರನಂತೆ ಇದ್ದೆ ಅಷ್ಟೇ’ ಎಂದು ಹೇಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ: 49ನೇ ವಯಸ್ಸಿಗೆ ಸುಶ್ಮಿತಾ ಸೇನ್​ಗೆ ಬಂತು ಮದುವೆ ಆಗೋ ಆಸೆ

ಮಾಜಿ ವಿಶ್ವ ಸುಂದರಿಯಾಗಿರುವ ಸುಶ್ಮಿತಾ ಸೇನ್ ಅವರು ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾಗ ಅವರ ಹೆಸರು ಹಲವರ ಜೊತೆ ಕೇಳಿಬಂದಿತ್ತು. ಆದರೆ ಲಲಿತ್ ಮೋದಿ ಜೊತೆಗಿನ ಅವರ ಸಂಬಂಧ ಇಂದಿಗೂ ವಿಭಿನ್ನ ಹಾಗೂ ವಿಶೇಷವಾಗಿ ಉಳಿದಿದೆ. ಸುಶ್ಮಿತಾ ಅವರ ವ್ಯಕ್ತಿತ್ವವನ್ನು ಮನಸಾರೆ ಹೊಗಳಿರುವ ಲಲಿತ್ ಮೋದಿ, ‘ಅವರು ಯಾರಿಂದಲೂ ಉಚಿತವಾಗಿ ಏನನ್ನೂ ಸ್ವೀಕರಿಸುವ ಮಹಿಳೆಯಲ್ಲ. ಜನರು ಅವರನ್ನು ಗೋಲ್ಡ್ ಡಿಗ್ಗರ್ ಎಂದು ಕರೆಯುವುದು ಸಂಪೂರ್ಣ ತಪ್ಪು. ಒಂದು ವೇಳೆ ಹಣದ ಆಸೆಯ ವಿಷಯವೇ ಬರುವುದಾದರೆ, ಇಲ್ಲಿ ಲಲಿತ್ ಮೋದಿ ಅವರೇ ವಜ್ರವನ್ನು ಹುಡುಕಿಕೊಂಡು ಹೋದಂತೆ. ಏಕೆಂದರೆ ಸುಶ್ಮಿತಾ ಸೇನ್ ಅವರೇ ಒಂದು ನಿಜವಾದ ಅಮೂಲ್ಯ ವಜ್ರ’ ಎಂದು ಹೇಳಿದ್ದಾರೆ. ಅಲ್ಲದೆ ಸುಶ್ಮಿತಾ ತಮ್ಮ ಜೀವನದ ಅತ್ಯಂತ ಪ್ರಮುಖ ವ್ಯಕ್ತಿ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link