Category Archives: Blog

Your blog category

ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!

ದೇವನಹಳ್ಳಿ, ಜೂನ್ 2: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಕಣ್ಣೂರಹಳ್ಳಿ ರಸ್ತೆಯಲ್ಲಿ ಅಚ್ಚರಿಯ ಹಾಗೂ ಆತಂಕದ ಘಟನೆಯೊಂದು ನಡೆದಿದೆ. ಇಲ್ಲಿ ಒಂದೇ ಸ್ಥಳದಲ್ಲಿ ಬರೋಬ್ಬರಿ 23 ನಾಗರಹಾವಿನ ಮರಿಗಳು ಒಟ್ಟಿಗೆ ಪತ್ತೆಯಾಗಿವೆ. ಒಂದೇ ಕಡೆ ಇಷ್ಟೊಂದು ಸಂಖ್ಯೆಯ ಹಾವಿನ ಮರಿಗಳನ್ನು ಕಂಡ ಸ್ಥಳೀಯರು ಕೆಲ ಕಾಲ ತೀವ್ರ ಆತಂಕಕ್ಕೆ ಒಳಗಾಗಿ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಜಾಗೃತರಾದ ಸಾರ್ವಜನಿಕರು ಸ್ಥಳೀಯ ಉರಗ ತಜ್ಞರಾದ ಸಿ.ಎಸ್. ನಾಗಭೂಷಣ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರು ಹಾವಿನ ಮರಿಗಳನ್ನು ಅತ್ಯಂತ ರಕ್ಷಣೆ ಮಾಡಿದ್ದು, ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರುಕ್ಮಿಣಿ ವಸಂತ್ ಡೀಪ್‌ಫೇಕ್ ವಿಡಿಯೋ ಹಂಚಿಕೊಂಡವರಿಗೆ ನಡುಕ; 29 ಅಕೌಂಟ್‌ಗಳ ವಿರುದ್ಧ ಎಫ್‌ಐಆರ್

ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟಿ ರುಕ್ಮಿಣಿ ವಸಂತ್ ಅವರ (Rukmini Vasanth) ನಕಲಿ ಬಿಕಿನಿ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಕಿಡಿಗೇಡಿಗಳಿಗೆ ನಡುಕು ಶುರುವಾಗಿದೆ. ಈ ಖಾತೆಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿ, ಬೇರೆಯೊಬ್ಬರ ದೇಹಕ್ಕೆ ತಮ್ಮ ಮುಖವನ್ನು ಜೋಡಿಸಿ ನಕಲಿ ದೃಶ್ಯಗಳನ್ನು ಸೃಷ್ಟಿಸಲಾಗಿದೆ ಎಂದು ನಟಿ ದೂರು ನೀಡಿದ್ದರು. ಈ ಕೃತ್ಯದಿಂದ ತಮಗೆ ತೀವ್ರ ಮುಜುಗರವಾಗಿದ್ದು, ತಮ್ಮ ಚಾರಿತ್ರ್ಯ ಹರಣ ಮಾಡಲು ಯತ್ನಿಸಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ದೂರು ಆಧರಿಸಿ ಎಫ್​​ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ರುಕ್ಮಿಣಿ ವಸಂತ್ ನೀಡಿದ ದೂರಿನನ್ವಯ ಪೊಲೀಸರು ಒಟ್ಟು 29 ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದರಲ್ಲಿ 9 ಇನ್‌ಸ್ಟಾಗ್ರಾಮ್ ಅಕೌಂಟ್‌ಗಳು, 14 ಟ್ವಿಟರ್ ಅಕೌಂಟ್‌ಗಳು ಹಾಗೂ 6 ಫೇಸ್‌ಬುಕ್ ಪೇಜ್‌ಗಳು ಸೇರಿವೆ. ಸೈಬರ್ ಪೊಲೀಸರು ಐಟಿ ಆ್ಯಕ್ಟ್ 66C, 66D ಹಾಗೂ ಬಿಎನ್‌ಎಸ್ (BNS) ಸೆಕ್ಷನ್ 75(3), 79, 336, 356, 351, 352 ಮತ್ತು 294ರ ಅಡಿಯಲ್ಲಿ ಮೊಕದ್ದಮೆ ಹೂಡಿ ತನಿಖೆ ಆರಂಭಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ದುರ್ಬಳಕೆ ತೀವ್ರವಾಗುತ್ತಿದ್ದು, ಸೆಲೆಬ್ರಿಟಿಗಳ ನಕಲಿ ಚಿತ್ರಗಳನ್ನು ಸೃಷ್ಟಿಸುವ ‘ಡೀಪ್‌ಫೇಕ್’ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಆ ಸಂದರ್ಭದಲ್ಲೂ ಬಂಧನಗಳು ನಡೆದಿದ್ದವು.

ಇದನ್ನೂ ಓದಿ: ‘ಇದು ರುಕ್ಮಿಣಿ ವಸಂತ್ ಸಮಸ್ಯೆ ಮಾತ್ರವಲ್ಲ’; ಎಐ ಅಪಾಯದ ಬಗ್ಗೆ ನಿರ್ಮಾಪಕಿ ಎಚ್ಚರಿಕೆ

ಇನ್ನು, ಸ್ಯಾಂಡಲ್‌ವುಡ್ ಹಿರಿಯ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್​​​ಗಳು ಬಂದಿದ್ದವು. ಇದರ ವಿರುದ್ಧ ದೂರು ದಾಖಲು ಮಾಡಲಾಗಿತ್ತು. ಆಗ ಅನೇಕರ ಬಂಧನ ಆಗಿತ್ತು. ಈಗ ನಟಿ ರುಕ್ಮಿಣಿ ವಸಂತ್ ಪ್ರಕಿರಣದಲ್ಲೂ ಹಲವರನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ. ತಂತ್ರಜ್ಞಾನದ ಇಂತಹ ದುರ್ಬಳಕೆ ಚಿತ್ರರಂಗದ ತಾರೆಯರಲ್ಲಿ ಆತಂಕ ಮೂಡಿಸಿದೆ.

(ವರದಿ: ವಿಕಾಸ್)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Zojila Tunnel : ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಪರ್ಕ, ಜೂನ್ 9ರೊಳಗೆ ಝೋಜಿಲಾ ಸುರಂಗದ ಉತ್ಖನನ ಕಾರ್ಯ ಪೂರ್ಣ

ಶ್ರೀನಗರ, ಜೂನ್ 02: ಕಾಶ್ಮೀರ(Kashmir) ಮತ್ತು ಲಡಾಖ್ ನಡುವೆ 365 ದಿನವೂ ಸುಗಮ ಸಂಚಾರ ಕಲ್ಪಿಸುವ, ದೇಶದ ಅತ್ಯಂತ ಹೆಮ್ಮೆಯ ಮತ್ತು ಅತಿ ಎತ್ತರದ ಮೂಲಸೌಕರ್ಯ ಯೋಜನೆಯಾದ ಝೋಜಿಲಾ ಸುರಂಗ (Zojila Tunnel) ಕಾಮಗಾರಿಯಲ್ಲಿ ಐತಿಹಾಸಿಕ ಮೈಲಿಗಲ್ಲು ತಲುಪುವ ಸಮಯ ಹತ್ತಿರ ಬಂದಿದೆ. ಹಿಮಾಲಯದ ಕಠಿಣ ಪರಿಸ್ಥಿತಿಯ ನಡುವೆಯೂ ಸುರಂಗದ ಉತ್ಖನನ ಕಾರ್ಯವು ಈಗ ಅಮತಿಮ ಹಂತಕ್ಕೆ ತಲುಪಿದ್ದು, ಜೂನ್ 9ರ ವೇಳೆಗೆ ಇದು ಸಂಪೂರ್ಣಗೊಳ್ಳಲಿದೆ.

ಹಿಮಾಲಯದಲ್ಲಿ 11,578 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಈ 13.15 ಕಿಲೋಮೀಟರ್ ಉದ್ದದ ಬೃಹತ್ ಸುರಂಗವನ್ನು ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ ನಿರ್ಮಿಸುತ್ತಿದೆ.

ಬಾಲ್ಟಾಲ್ ಮತ್ತು ಮಿನಮಾರ್ಗ್ ಎರಡೂ ಕಡೆಯಿಂದ ಕೊರೆಯಲಾದ ಸುರಂಗದ ಅಂಚುಗಳು ಮೇ ಅಂತ್ಯಕ್ಕೆ ಒಂದಾಗಲಿದ್ದು, ಇದನ್ನು ಎಂಜಿನಿಯರ್‌ಗಳು ಐತಿಹಾಸಿಕ “ಹ್ಯಾಂಡ್‌ಶೇಕ್” ಕ್ಷಣ ಎಂದು ಕರೆದಿದ್ದಾರೆ. ಮೈನಸ್ ತಾಪಮಾನ, ಭೀಕರ ಹಿಮಪಾತ ಹಾಗೂ ಕಠಿಣ ಭೂವಿಜ್ಞಾನದ ಸವಾಲುಗಳನ್ನು ಮೆಟ್ಟಿ ನಿಂತು MEIL ತಂಡವು ಹಗಲಿರುಳು ಶ್ರಮಿಸುತ್ತಿದೆ.

ದೇಶಕ್ಕೆ ಮತ್ತು ಗಡಿ ಸುರಕ್ಷತೆಗೆ ಇದರ ಪ್ರಾಮುಖ್ಯತೆ ಏನು?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಒಟ್ಟು 6,809.69 ಕೋಟಿ ರೂ. ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆ ಸೆಪ್ಟೆಂಬರ್ 2026 ರ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ.

ಮತ್ತಷ್ಟು ಓದಿ: Video: ನಾನೇನು ಪಾಕಿಸ್ತಾನಿನಾ ನಾನೂ ಭಾರತೀಯನೆ ಪ್ರವಾಸಿಗರಿಗೆ ಕಾಶ್ಮೀರಿ ವ್ಯಕ್ತಿ ಕೊಟ್ಟ ಉತ್ತರ ಕೇಳಿ

ಸುರಕ್ಷಿತ ಪ್ರಯಾಣ: ಪ್ರತಿ ಚಳಿಗಾಲದಲ್ಲಿ ಭೀಕರ ಹಿಮಪಾತ ಮತ್ತು ಇತ್ತೀಚೆಗೆ ಸಂಭವಿಸಿದಂತೆ ಭೀಕರ ಪ್ರಾಣಹಾನಿ ಉಂಟುಮಾಡುವ ಹಿಮಕುಸಿತದ ಅಪಾಯಗಳಿರುವ ಝೋಜಿಲಾ ಪಾಸ್ ಅನ್ನು ಇದು ಬೈಪಾಸ್ ಮಾಡಲಿದ್ದು, ಶ್ರೀನಗರ-ಕಾರ್ಗಿಲ್-ಲೇಹ್ ಪ್ರಯಾಣ ಅತ್ಯಂತ ಸುರಕ್ಷಿತವಾಗಲಿದೆ.

ಗಡಿ ಭದ್ರತೆಗೆ ಬಲ: ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸೂಕ್ಷ್ಮ ಗಡಿ ಹಂಚಿಕೊಂಡಿರುವ ಲಡಾಖ್‌ಗೆ ಚಳಿಗಾಲದಲ್ಲಿ ಸಂಪರ್ಕ ಕಡಿತಗೊಳ್ಳುತ್ತಿತ್ತು. ಈ ಸುರಂಗದಿಂದಾಗಿ ಇನ್ಮುಂದೆ ಸೇನಾ ಸಿಬ್ಬಂದಿ, ಭಾರೀ ರಕ್ಷಣಾ ಉಪಕರಣಗಳು ಹಾಗೂ ತುರ್ತು ಸೇವೆಗಳ ಅಡೆತಡೆಯಿಲ್ಲದ ಚಲನೆ ಸಾಧ್ಯವಾಗಲಿದೆ.

ಸ್ಥಳೀಯರಿಗೆ ಉದ್ಯೋಗ ಮತ್ತು ಆರ್ಥಿಕ ಚೇತರಿಕೆ: ಈ ಯೋಜನೆಯಲ್ಲಿ ಈಗಾಗಲೇ 1000 ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳು ಉದ್ಯೋಗ ಪಡೆದಿದ್ದಾರೆ. ಸೋನಾಮಾರ್ಗ್, ಡ್ರಾಸ್, ಕಾರ್ಗಿಲ್ ಮತ್ತು ಲೇಹ್‌ನ ವ್ಯಾಪಾರಿಗಳು ಹಾಗೂ ಪ್ರವಾಸೋದ್ಯಮ ವೃತ್ತಿಪರರಿಗೆ ವರ್ಷಪೂರ್ತಿ ವ್ಯಾಪಾರ ನಡೆಸಲು ಈ ಸುರಂಗವು ಹೊಸ ಆರ್ಥಿಕ ಜೀವನಾಡಿಯಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Jupiter Transit In Cancer 2026: ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?

2026ರ ಜೂನ್ 2ರಂದು ಬೆಳಿಗ್ಗೆ 6:29ಕ್ಕೆ ಗುರು ಗ್ರಹವು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಸಂಚರಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯಲ್ಲಿ ಗುರು ಉಚ್ಚ ಸ್ಥಾನವನ್ನು ಪಡೆಯುವುದರಿಂದ ಈ ಸಂಚಾರವು ಮಹತ್ವಪೂರ್ಣವಾಗಿದೆ. ಗುರುಬಲದ ಆಧಾರದ ಮೇಲೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಅಭಿವೃದ್ಧಿ ಮತ್ತು ಯಶಸ್ಸು ಅವಲಂಬಿತವಾಗಿದೆ ಎಂದು ಖ್ಯಾತ ಜ್ಯೋತಿಷ್ಯ ಹರಿಶಾಸ್ತ್ರಿ ಗುರೂಜಿ ಅವರು ವಿವರಿಸಿದ್ದಾರೆ.

ಈ ಗುರು ಸಂಚಾರದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಸುಮಾರು ಶೇ.60-70 ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ, ನವೆಂಬರ್, ಡಿಸೆಂಬರ್ ಮತ್ತು ಜನವರಿ 24, 2027ರವರೆಗಿನ 85 ದಿನಗಳ ಕಾಲ ಗುರು ಸಿಂಹ ರಾಶಿಗೆ ಬಂದು ಮತ್ತೆ ಯುದ್ಧಗಳು ತೀವ್ರಗೊಳ್ಳಬಹುದು. ಭಾರತದಲ್ಲಿ ಈ ಅವಧಿಯಲ್ಲಿ ಪ್ರಕೃತಿ ವಿಕೋಪಗಳು, ವಿಶೇಷವಾಗಿ ನೀರಿನಿಂದ ಉಂಟಾಗುವ ಸಮಸ್ಯೆಗಳು (ಹಿಮಾಲಯ, ಕೇರಳ, ತಮಿಳುನಾಡು) ಮತ್ತು ಭೂಕಂಪನಗಳು ಹೆಚ್ಚಾಗಬಹುದು. ಆರ್ಥಿಕವಾಗಿ ದೇಶವು ಹಣದುಬ್ಬರ ಮತ್ತು ವೆಚ್ಚಗಳ ಹೆಚ್ಚಳದಿಂದ ಸವಾಲುಗಳನ್ನು ಎದುರಿಸಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸನಾತನ ಧರ್ಮ ಕಿತ್ತೊಗೀಬೇಕೆಂದಿದ್ದ ಉದಯನಿಧಿ ಸ್ಟಾಲಿನ್ ಹೆಸರಲ್ಲೇ ಚಾಮುಂಡೇಶ್ವರಿ, ನಿಮಿಷಾಂಬಾಗೆ ದುರ್ಗಾ ಸ್ಟಾಲಿನ್ ಪೂಜೆ!

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ದುರ್ಗಾ ಸ್ಟಾಲಿನ್Image Credit source: tv9

ಮೈಸೂರು, ಜೂನ್ 2: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಪತ್ನಿ ದುರ್ಗಾ ಸ್ಟಾಲಿನ್ (Durga Stalin) ಅವರು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udayanidhi Stalin) ಅವರ ತಾಯಿಯೇ ಈಗ ಮಗ ಹಾಗೂ ಪತಿಯ ಹೆಸರಿನಲ್ಲಿ ಶಕ್ತಿ ದೇವತೆಗಳಿಗೆ ಅರ್ಚನೆ ಮಾಡಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಮಂಡ್ಯದ ಗಂಜಾಂನ ನಿಮಿಷಾಂಬಾ ದೇವಸ್ಥಾನಕ್ಕೆ ತಮಿಳುನಾಡು ಮಾಜಿ ಸಿಎಂ ಎಂಕೆ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಭೇಟಿ.
  • ಸನಾತನ ಧರ್ಮ ವಿರೋಧಿಸಿದ್ದ ಪುತ್ರ ಉದಯನಿಧಿ ಸ್ಟಾಲಿನ್ ಹೆಸರಿನಲ್ಲಿ ತಾಯಿಯಿಂದ ದೇವಿಗೆ ವಿಶೇಷ ಅರ್ಚನೆ ಮತ್ತು ಮಡಿಲು ತುಂಬಿಸುವ ಉಡಿಸೇವೆ ಸಲ್ಲಿಕೆ.
  • ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ದಂಪತಿಯ ಆಶೀರ್ವಾದ ಪಡೆದ ದುರ್ಗಾ.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ‘ಸನಾತನ ಧರ್ಮ ಎಂಬುದು ಸೊಳ್ಳೆ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ಕೇವಲ ವಿರೋಧಿಸಿದರೆ ಸಾಲದು, ಸಮಾಜದಿಂದ ಸಂಪೂರ್ಣವಾಗಿ ಕಿತ್ತೊಗೆಯಬೇಕು’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿತ್ತು ಮತ್ತು ಹಿಂದೂ ಧರ್ಮೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಚಾಮುಂಡೇಶ್ವರಿ ದೇಗುಲದಲ್ಲಿ ದುರ್ಗಾ ಸ್ಟಾಲಿನ್

ಮಗ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸನಾತನ ಧರ್ಮವನ್ನು ವಿರೋಧಿಸಿದ್ದರೂ, ತಾಯಿ ದುರ್ಗಾ ಸ್ಟಾಲಿನ್ ಮಾತ್ರ ತಮ್ಮ ಧಾರ್ಮಿಕ ನಂಬಿಕೆಯನ್ನು ಮುಂದುವರಿಸಿದ್ದಾರೆ. ಮಗನ ಒಳಿತಿಗಾಗಿ ಹಾಗೂ ಕುಟುಂಬದ ಸುಖ-ಶಾಂತಿಗಾಗಿ ಅವರು ಹಿಂದೂ ಸಂಪ್ರದಾಯದಂತೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಮಗನ ಹೇಳಿಕೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ದೇವಸ್ಥಾನಗಳಲ್ಲಿ ಉಡಿಸೇವೆ ಮತ್ತು ವಿಶೇಷ ಪೂಜೆ


ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಪ್ರಸಿದ್ಧ ನಿಮಿಷಾಂಬಾ ದೇವಸ್ಥಾನಕ್ಕೆ ಶಾಸಕ ಜಿ.ಟಿ. ದೇವೇಗೌಡ ಅವರ ಪುತ್ರಿ ಮತ್ತು ಅಳಿಯನೊಂದಿಗೆ ಭೇಟಿ ನೀಡಿದ ದುರ್ಗಾ ಸ್ಟಾಲಿನ್, ಸುಮಾರು 30 ನಿಮಿಷಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ದೇವಿಗೆ ರೇಷ್ಮೆ ಸೀರೆ, ಗಾಜಿನ ಬಳೆಗಳು ಹಾಗೂ ಹೂ-ಹಣ್ಣುಗಳನ್ನು ಅರ್ಪಿಸುವ ಮೂಲಕ ಸಾಂಪ್ರದಾಯಿಕ ‘ಮಡಿಲು ತುಂಬಿಸುವ’ ಉಡಿಸೇವೆಯನ್ನು ನೆರವೇರಿಸಿದರು. ಈ ವೇಳೆ ಪತಿ ಎಂ.ಕೆ. ಸ್ಟಾಲಿನ್ ಹಾಗೂ ಪುತ್ರ ಉದಯನಿಧಿ ಸ್ಟಾಲಿನ್ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದರು.

ಇದನ್ನೂ ಓದಿ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದ ಸ್ಟಾಲಿನ್ ಪುತ್ರ ಉದಯನಿಧಿ

ಇದಕ್ಕೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ದುರ್ಗಾ ಸ್ಟಾಲಿನ್, ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿದರು. ಧಾರ್ಮಿಕ ದರ್ಶನದ ಬಳಿಕ ಮೈಸೂರಿನಲ್ಲಿರುವ ಶಾಸಕ ಜಿ.ಟಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಜಿ.ಟಿ.ಡಿ ಪತ್ನಿ ಲಲಿತಾ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಿ.ಟಿ. ದೇವೇಗೌಡ ದಂಪತಿಯ ಕಾಲು ಮುಟ್ಟಿ ಆಶೀರ್ವಾದ ಪಡೆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂದು ನಾನು ಇಲ್ಲದೇ ಹೋಗಿದ್ದರೆ ನೀವು ಜೈಲಿನಲ್ಲಿ ಇರುತ್ತಿದ್ದಿರಿ, ಈಗ ಎಲ್ಲರೂ ನಿಮ್ಮನ್ನು ದ್ವೇಷಿಸುತ್ತಿದ್ದಾರೆ, ನೆತನ್ಯಾಹು ಕೆಣಕಿದ ಟ್ರಂಪ್

ವಾಷಿಂಗ್ಟನ್, ಜೂನ್ 02: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ನೇರ ಹಸ್ತಕ್ಷೇಪ ಮತ್ತು ಕಟ್ಟುನಿಟ್ಟಿನ ನಿಲುವಿನಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಭಾರಿ ರಾಜತಾಂತ್ರಿಕ ಯಶಸ್ಸು ಸಿಕ್ಕಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘಟನೆಗಳು ಪರಸ್ಪರ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಒಪ್ಪಿಕೊಂಡಿವೆ. ಅದಕ್ಕೂ ಮುನ್ನ  ನಾನು ಇಲ್ಲದೇ ಇದ್ದಿದ್ದರೆ ನೀವು ಜೈಲಿನಲ್ಲಿ ಇರುತ್ತಿದ್ದಿರಿ, ನಾನು ನಿಮ್ಮನ್ನು ಉಳಿಸಿದ್ದೆ ಎಂದು ಇಸ್ರೇಲಿ ನಾಯಕನ ಭ್ರಷ್ಟಾಚಾರ ವಿಚಾರಣೆಯ ಸಮಯದಲ್ಲಿ ಅವರು ಕೊಟ್ಟ ಬೆಂಬಲದ ಬಗ್ಗೆ ಟ್ರಂಪ್ ಮಾತನಾಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ, ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿದ್ದ ನಿರಂತರ ಮಿಲಿಟರಿ ದಾಳಿಗಳು ಮತ್ತು ನಾಗರಿಕ ಸಾವುನೋವುಗಳ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆಯಲ್ಲಿ, ಇಸ್ರೇಲ್‌ನ ಈ ಕ್ರಮಗಳು ದೇಶವನ್ನು ಜಾಗತಿಕವಾಗಿ ಒಂಟಿಯಾಗಿಸುತ್ತವೆ ಮತ್ತು ಇರಾನ್ ಜೊತೆಗಿನ ಅಮೆರಿಕದ ಮಾತುಕತೆಗಳಿಗೆ ಅಡ್ಡಿಪಡಿಸುತ್ತವೆ ಎಂದು ಟ್ರಂಪ್ ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿತ್ತು. ಆದರೆ, ಈ ಎಲ್ಲಾ ಬಿರುಸಿನ ಮಾತುಕತೆಗಳ ಬಳಿಕ ಪರಿಸ್ಥಿತಿ ತಿಳಿಯಾಗಿದ್ದು, ಶಾಂತಿ ಸ್ಥಾಪನೆಯಾಗಿದೆ.

ಟ್ರಂಪ್ ಸಂಧಾನದ ಪ್ರಮುಖ ಮುಖ್ಯಾಂಶಗಳು
ಇಸ್ರೇಲ್ ಪಡೆಗಳ ವಾಪಸಾತಿ: ಪ್ರಧಾನಿ ನೆತನ್ಯಾಹು ಅವರೊಂದಿಗೆ ಅತ್ಯಂತ ಯಶಸ್ವಿ ಮಾತುಕತೆ ನಡೆದಿದ್ದು, ಇಸ್ರೇಲ್ ಇನ್ನು ಮುಂದೆ ಬೈರುತ್‌ಗೆ ಯಾವುದೇ ಸೈನಿಕರನ್ನು ಕಳುಹಿಸುವುದಿಲ್ಲ ಮತ್ತು ಈಗಾಗಲೇ ಗಡಿಯಲ್ಲಿದ್ದ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ.

ಮತ್ತಷ್ಟು ಓದಿ: ‘ನಮಗೆ ಬೇಕಾದ್ದು ದಕ್ಕದೇ ಹೋದರೆ ಬೇರೆ ಮಾರ್ಗದಲ್ಲಿ ಕೊನೆಗಾಣಿಸಬೇಕಾಗುತ್ತದೆ’- ಇರಾನ್​ಗೆ ಟ್ರಂಪ್ ವಾರ್ನಿಂಗ್

ಹಿಜ್ಬುಲ್ಲಾ ಕದನ ವಿರಾಮ: ಉನ್ನತ ಪ್ರತಿನಿಧಿಗಳ ಮೂಲಕ ಟ್ರಂಪ್ ಅವರು ಹಿಜ್ಬುಲ್ಲಾ ಸಂಘಟನೆಯೊಂದಿಗೂ ನೇರ ಸಂಪರ್ಕ ಸಾಧಿಸಿದ್ದು, ಅವರು ಕೂಡ ಇಸ್ರೇಲ್ ಮೇಲಿನ ಎಲ್ಲಾ ರೀತಿಯ ಶೂಟಿಂಗ್ ಮತ್ತು ದಾಳಿಗಳನ್ನು ತಕ್ಷಣದಿಂದಲೇ ನಿಲ್ಲಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಪೋಸ್ಟ್
ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, ಇಸ್ರೇಲ್ ಪ್ರಧಾನಿ ಬೀಬಿ ನೆತನ್ಯಾಹು ಅವರೊಂದಿಗೆ ನಾನು ಬಹಳ ಫಲಪ್ರದವಾದ ಮಾತುಕತೆ ನಡೆಸಿದ್ದೇನೆ. ಬೈರುತ್‌ಗೆ ಇನ್ನು ಯಾವುದೇ ಸೈನಿಕರು ಹೋಗುವುದಿಲ್ಲ. ಅದೇ ರೀತಿ ಹಿಜ್ಬುಲ್ಲಾ ಕೂಡ ಎಲ್ಲಾ ದಾಳಿಗಳನ್ನು ನಿಲ್ಲಿಸಲು ಒಪ್ಪಿಕೊಂಡಿದೆ. ಇಸ್ರೇಲ್ ಅವರ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಅವರು ಇಸ್ರೇಲ್ ಮೇಲೆ ದಾಳಿ ಮಾಡುವುದಿಲ್ಲ, ಎಂದು ತಿಳಿಸಿದ್ದಾರೆ.

ಈ ಮಹತ್ವದ ಒಪ್ಪಂದದಿಂದಾಗಿ ಲೆಬನಾನ್ ಮತ್ತು ಇಸ್ರೇಲ್ ಗಡಿಯಲ್ಲಿ ದೀರ್ಘಕಾಲದಿಂದ ಉಂಟಾಗಿದ್ದ ಯುದ್ಧದ ಭೀತಿ ದೂರವಾಗಿದ್ದು, ಪ್ರಾದೇಶಿಕ ಶಾಂತಿ ಪುನಃಸ್ಥಾಪನೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಪಾನ್​​​ಗೆ ಪತಿ ಜೊತೆ ತೆರಳಿ ಎಂಜಾಯ್ ಮಾಡಿದ ರಶ್ಮಿಕಾ ಮಂದಣ್ಣ

ಟಾಲಿವುಡ್‌ನ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಅವರ ಪತಿ ವಿಜಯ್ ದೇವರಕೊಂಡ ಇತ್ತೀಚೆಗೆ ಜಪಾನ್​ಗೆ ತೆರಳಿದ್ದರು. ಅನಿಮೆ ಕಾರ್ಯಕ್ರಮಕ್ಕೆ ರಶ್ಮಿಕಾ ಹೋಸ್ಟ್ ಆಗಿದ್ದರಿಂದ ಅವರಿಗೆ ಜಪಾನ್​​ಗೆ ಬರುವಂತೆ ಆಮಂತ್ರಣ ಬಂದಿತ್ತು. ಈ ವೇಳೆ ವಿಜಯ್ ಕೂಡ ಭಾಗಿ ಆಗಿದ್ದರು. ಅಲ್ಲಿನ ಸುಂದರ ಕ್ಷಣಗಳ ಫೋಟೋಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

ಈ ಮೊದಲು ರಶ್ಮಿಕಾ ಹಾಗೂ ವಿಜಯ್ ಸುತ್ತಾಡಲು ತೆರಳಿದ್ದರೂ ವಿಷಯ ಗುಟ್ಟಾಗಿ ಇಟ್ಟಿದ್ದರಿಂದ ಫೋಟೋ ಹಂಚಿಕೊಳ್ಳುತ್ತಾ ಇರಲಿಲ್ಲ. ಈ ಬಾರಿ ರಶ್ಮಿಕಾ ಮಂದಣ್ಣ ಅವರು ತಮ್ಮ ಪತಿ ವಿಜಯ್ ಜೊತೆಗಿನ ಫೋಟೋಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಜಪಾನ್‌ನ ಸಾಂಪ್ರದಾಯಿಕ ಉಡುಗೆಯಾದ ಯುಕಾಟಾ ಧರಿಸಿ ಗ್ಲಾಮರಸ್ ಆಗಿ ಪೋಸ್ ನೀಡಿದ್ದ ರಶ್ಮಿಕಾ, ‘ಈ ವರ್ಷ ಜಪಾನ್ ಪ್ರವಾಸ ಇನ್ನು ಹೆಚ್ಚಿನ ಮಜಾ ನೀಡಿತು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಜಪಾನ್‌ನ ಸ್ಥಳೀಯ ಆಹಾರ ಸವಿಯುತ್ತಿರುವ, ಅಲ್ಲಿನ ಸುಂದರ ಕಲೆ ಮತ್ತು ಸಂಸ್ಕೃತಿಯನ್ನು ಆಸ್ವಾದಿಸುತ್ತಿರುವ ಹಾಗೂ ಹಿನ್ನೆಲೆಯಲ್ಲಿ ಮೌಂಟ್ ಫ್ಯೂಜಿ ಜ್ವಾಲಾಮುಖಿ ಕಾಣುವಂತೆ ವಿಜಯ್ ಅವರನ್ನು ತಬ್ಬಿಕೊಂಡಿರುವ ಬ್ಲರ್ ಆಗಿರುವ ರೋಮ್ಯಾಂಟಿಕ್ ಫೋಟೋಗಳು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿವೆ.

ರಶ್ಮಿಕಾ ಅವರ ಈ ಫೋಟೋಗಳಿಗೆ ಅಭಿಮಾನಿಗಳು ಹಾರ್ಟ್ ಎಮೋಜಿಗಳ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ‘ಫೋಟೋಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಮಿಸಸ್ ದೇವರಕೊಂಡ’ ಎಂದು ಬರೆದರೆ, ಮತ್ತೊಬ್ಬರು ‘ನಿಮ್ಮ ಪ್ರೀತಿಯ ಪತಿಯೊಂದಿಗೆ ನೀವು ಜೀವನವನ್ನು ಎಂಜಾಯ್ ಮಾಡುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ’ ಎಂದಿದ್ದಾರೆ. ಇನ್ನು ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕಿ ಫರಾ ಖಾನ್ ಕುಂದರ್ ಕೂಡ ಕಾಮೆಂಟ್ ಮಾಡಿದ್ದು,‘ನಾನು ನಾಳೆಯೇ ಜಪಾನ್‌ಗೆ ಹೋಗುತ್ತಿದ್ದೇನೆ, ಅಲ್ಲಿ ಭೇಟಿ ನೀಡಬೇಕಾದ ಜಾಗಗಳ ಬಗ್ಗೆ ಮಾಹಿತಿ ತಿಳಿಯಲು ನಿಮಗೆ ಕರೆ ಮಾಡುತ್ತೇನೆ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸಿನಿಮಾ ಜರ್ನಿಯಲ್ಲೇ ಅತ್ಯಂತ ಗರಿಷ್ಠ ಸಂಭಾವನೆ ಪಡೆದ ರಶ್ಮಿಕಾ ಮಂದಣ್ಣ

ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಇದೇ ವರ್ಷ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಕೊಡವ ಹಾಗೂ ತೆಲುಗು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ಪರ ಈ ಬಾರಿ ಒಂದೇ ಒಂದು ಪಂದ್ಯವಾಡದ 9 ಆಟಗಾರರು ಇವರೇ!

Source link

Monsoon Rain 2026: ಈ ಬಾರಿ ಭಾರತದಲ್ಲಿ ಮುಂಗಾರು ವಿಳಂಬ, ಎಲ್​ನಿನೋ ದೊಡ್ಡ ಸವಾಲು, ಆಧುನಿಕ ಕೃಷಿ ತಂತ್ರಜ್ಞಾನದೊಂದಿಗೆ ರೈತರು ಸಜ್ಜು

ನವದೆಹಲಿ, ಜೂನ್ 02: ಭಾರತದ ಕೃಷಿ ಮತ್ತು ಆರ್ಥಿಕತೆಯ ಜೀವಾಳವಾಗಿರುವ ನೈಋತ್ಯ  ಮುಂಗಾರು(Monsoon)  ಈ ವರ್ಷ ಪ್ರಕೃತಿಯ ವಿಭಿನ್ನ ಸವಾಲುಗಳ ನಡುವೆಯೂ ಆಧುನಿಕ ತಂತ್ರಜ್ಞಾನ ಹಾಗೂ ರೈತರ ಮುನ್ನೆಚ್ಚರಿಕೆಯೊಂದಿಗೆ ಮುನ್ನಡೆಯಲು ಸಜ್ಜಾಗಿದೆ. 1997 ರಲ್ಲಿ ಜಗತ್ತಿನಾದ್ಯಂತ ತಲ್ಲಣ ಮೂಡಿಸಿದ್ದ ಭೀಕರ ‘ಎಲ್ ನಿನೊ’ (El Nino) ಪರಿಣಾಮವನ್ನು ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾದ ‘ಹಿಂದೂ ಮಹಾಸಾಗರದ ದ್ವಿಧ್ರುವಿ’ (IOD) ಎಂಬ ರಕ್ಷಣಾ ಗುರಾಣಿ ಯಶಸ್ವಿಯಾಗಿ ತಡೆದು, ದೇಶದಲ್ಲಿ ಶೇಕಡಾ 2 ರಷ್ಟು ಅಧಿಕ ಮಳೆ ತಂದಿತ್ತು. ಆದರೆ, ಪ್ರಸ್ತುತ 2026 ರ ಸಾಲಿನಲ್ಲಿ ಹಿಂದೂ ಮಹಾಸಾಗರವು ತಟಸ್ಥವಾಗಿರಲಿದ್ದು , ಹವಾಮಾನ ಇಲಾಖೆ ಮತ್ತು ಕೃಷಿ ವಲಯವು ಮುಂಜಾಗ್ರತಾ ಕ್ರಮಗಳೊಂದಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಭೌಗೋಳಿಕವಾಗಿ ನೋಡಿದರೆ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಾತ್ರ ಸಾಮಾನ್ಯ ಪ್ರಮಾಣದ ಮಳೆಯ ನಿರೀಕ್ಷೆ ಇದ್ದು, ಅದು ಎಲ್​ಪಿಎಯ 94ರಿಂದ 106 ಶೇಕಡಾ ವ್ಯಾಪ್ತಿಯಲ್ಲಿರುತ್ತದೆ. ಉಳಿದ ಭಾಗಗಳಲ್ಲಿ ದಕ್ಷಿಣ ಹಾಗೂ ಮಧ್ಯ ಭಾರತದಲ್ಲಿ ಎಲ್​ಪಿಎಯ 94 ಶೇಕಡಕ್ಕಿಂತ ಮಳೆ ಕಡಿಮೆಯಾಗುವ ನಿರೀಕ್ಷೆ ಇದೆ. ವಾಯುವ್ಯ ಭಾರತದಲ್ಲಿ ಇದು 92 ಶೇಕಡಕ್ಕಿಂತಲೂ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಇದಲ್ಲದೆ, ಮುಂಗಾರು ಆಗಮನವೂ ಒಂದು ವಾರ ತಡವಾಗಿದೆ. ಕೇರಳ ಕರಾವಳಿಗೆ ಮೇ 26ರಂದು ಮುಂಗಾರು ಪ್ರವೇಶಿಸಲಿದೆ ಎಂದು IMD ಮೊದಲು ಅಂದಾಜಿಸಿತ್ತು. ಆದರೆ ಸಾಮಾನ್ಯವಾಗಿ ಮುಂಗಾರು ಜೂನ್ 3ರ ಬಳಿಕ ಕೇರಳ ಪ್ರವೇಶಿಸುತ್ತದೆ ಎನ್ನಲಾಗಿದೆ.

ಪ್ರಕೃತಿಯ ಆಟ: ಎಲ್ ನಿನೊ ಮತ್ತು ಐಒಡಿ
ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ನೀರು ಅತಿಯಾಗಿ ಬಿಸಿಯಾಗುವುದನ್ನು ‘ಎಲ್ ನಿನೊ’ ಎನ್ನಲಾಗುತ್ತದೆ. ಇದು ಭಾರತದ ಮಾನ್ಸೂನ್ ಮಳೆಯನ್ನು ತಗ್ಗಿಸುವ ಸಾಮರ್ಥ್ಯ ಹೊಂದಿದೆ. ಇತಿಹಾಸವನ್ನು ಗಮನಿಸಿದರೆ, 1951 ರಿಂದ 2022 ರವರೆಗಿನ ಎಲ್ ನಿನೊ ವರ್ಷಗಳಲ್ಲಿ ಶೇ. 60 ರಷ್ಟು ಬಾರಿ ಸರಾಸರಿಗಿಂತ ಕಡಿಮೆ ಮಳೆಯಾಗಿದೆ.

ಮತ್ತಷ್ಟು ಓದಿ: ಬಿಸಿಲ ಬೇಗೆಯ ನಡುವೆ ತಂಪು ಸುದ್ದಿ: ಮೇ ಮಧ್ಯಭಾಗದಲ್ಲೇ ಮುಂಗಾರು ಎಂಟ್ರಿ!

ಆದರೆ, ಭಾರತದ ಮನೆಬಾಗಿಲಲ್ಲಿರುವ ಹಿಂದೂ ಮಹಾಸಾಗರದ ಪಶ್ಚಿಮ ಭಾಗ ಬೆಚ್ಚಗಾಗಿ, ಪೂರ್ವ ಭಾಗ ತಂಪಾಗುವ ಪ್ರಕ್ರಿಯೆಯನ್ನು ‘ ಪಾಸಿಟಿವ್ ಐಒಡಿ’ (Positive IOD) ಎನ್ನಲಾಗುತ್ತದೆ. ಇದು ಮಾನ್ಸೂನ್ ಮಳೆಗೆ ಹೆಚ್ಚುವರಿ ಬಲ ತುಂಬುತ್ತದೆ. 1997 ರಲ್ಲಿ ಈ ಐಒಡಿ ಅತ್ಯಂತ ಬಲವಾಗಿದ್ದರಿಂದ ಎಲ್ ನಿನೊ ಸೋತು ಮಳೆ ಗೆದ್ದಿತ್ತು. ಆದರೆ, ಈ ವರ್ಷ (ಮೇ 24 ರ ಮಾಹಿತಿ ಪ್ರಕಾರ) ಐಒಡಿ ಸೂಚ್ಯಂಕವು ಮೈನಸ್ 0.34 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದು, ಮಾನ್ಸೂನ್ ಅವಧಿಯಲ್ಲಿ ತಟಸ್ಥವಾಗಿರಲಿದೆ. ಚಳಿಗಾಲದ ಆರಂಭದಲ್ಲಿ ಮಾತ್ರ ಇದು ಧನಾತ್ಮಕ ರೂಪ ಪಡೆಯುವ ಸಾಧ್ಯತೆ ಇದೆ.

ಜೂನ್ ತಿಂಗಳಲ್ಲಿ ಉಷ್ಣ ಅಲೆ ದಿನಗಳ ಸಂಖ್ಯೆಯೂ ಹೆಚ್ಚಾಗಬಹುದು ಎಂದು IMD ತಿಳಿಸಿದೆ. ದೇಶದ ಹಲವೆಡೆ 2ರಿಂದ 3 ದಿನಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆಯಿದ್ದು, ಇದರಿಂದ ಹೀಟ್‌ವೇವ್ ಪರಿಸ್ಥಿತಿ ನಿರ್ಮಾಣವಾಗಬಹುದು.

ಮುಂಗಾರು ಮುನ್ಸೂಚನೆ ಮತ್ತು ರೈತರ ಜಾಗೃತಿ
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ

ಮಳೆ ಪ್ರಮಾಣ: 2026 ರ ನೈಋತ್ಯ ಮಾನ್ಸೂನ್ ಮಳೆಯು ದೀರ್ಘಾವಧಿಯ ಸರಾಸರಿಯ (87 ಸೆಂಟಿಮೀಟರ್) ಶೇಕಡಾ 90 ರಷ್ಟಿರಲಿದ್ದು, ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಇರಲಿದೆ.

ಎಲ್ ನಿನೊ ಕಾಲಾವಧಿ: ಜೂನ್‌ನಲ್ಲಿ ದುರ್ಬಲವಾಗಿರುವ ಎಲ್ ನಿನೊ, ಜುಲೈ-ಆಗಸ್ಟ್‌ನಲ್ಲಿ ಸಾಧಾರಣ ಹಾಗೂ ಸೆಪ್ಟೆಂಬರ್ ವೇಳೆಗೆ ಸ್ವಲ್ಪ ಬಲಗೊಳ್ಳುವ ಸಾಧ್ಯತೆ ಇದೆ.

ಕೃಷಿ ತಜ್ಞರ ಸಲಹೆ: ಸೆಪ್ಟೆಂಬರ್ ತಿಂಗಳು ಅಕ್ಕಿ, ದ್ವಿದಳ ಧಾನ್ಯಗಳು, ಹತ್ತಿ ಮತ್ತು ಎಣ್ಣೆಬೀಜಗಳಂತಹ ಖಾರಿಫ್ ಬೆಳೆಗಳಿಗೆ ‘ಧಾನ್ಯ ತುಂಬುವ’ (Grain Filling) ಅತ್ಯಂತ ಸೂಕ್ಷ್ಮ ಹಂತವಾಗಿದೆ. ಈ ಸಮಯದಲ್ಲಿ ನೀರಿನ ಕೊರತೆಯಾಗದಂತೆ ತಡೆಯಲು ಆಧುನಿಕ ಹನಿ ನೀರಾವರಿ ಪದ್ಧತಿ, ಮಳೆ ನೀರು ಕೊಯ್ಲು ಮತ್ತು ಬರ ನಿರೋಧಕ ತಳಿಗಳ ಬಿತ್ತನೆಗೆ ಸರ್ಕಾರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಮುಂಚಿತವಾಗಿಯೇ ಯಶಸ್ವಿ ಮಾರ್ಗದರ್ಶನ ನೀಡುತ್ತಿವೆ.

ಪ್ರಕೃತಿಯ ಬದಲಾವಣೆಗಳನ್ನು ಮೊದಲೇ ಅರಿತಿರುವುದರಿಂದ, ಕರಾರುವಕ್ಕಾದ ಮುನ್ಸೂಚನೆಗಳ ನೆರವಿನಿಂದ ಭಾರತೀಯ ಕೃಷಿ ವಲಯವು ಈ ವರ್ಷದ ಜಲಸಂಪನ್ಮೂಲವನ್ನು ಸೂಕ್ತವಾಗಿ ನಿರ್ವಹಿಸಲು ಮತ್ತು ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಲು ಸಂಪೂರ್ಣ ಸಿದ್ಧವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:05 am, Tue, 2 June 26

Source link

‘ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು?’ ಸಿಎಂ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಜಿ ಪರಮೇಶ್ವರ್ ಮಾರ್ಮಿಕ ವಿಡಿಯೋ ವೈರಲ್

ಡಾ ಜಿ ಪರಮೇಶ್ವರ್ ಹಳೆಯ ವಿಡಿಯೋ ವೈರಲ್Image Credit source: tv9

ತುಮಕೂರು, ಜೂನ್ 2: ರಾಜ್ಯ ರಾಜಕಾರಣದಲ್ಲಿ ತೀವ್ರ ಬದಲಾವಣೆಗಳಾಗುತ್ತಿದ್ದು, ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆ ಬಳಿಕ ಡಿ.ಕೆ. ಶಿವಕುಮಾರ್ (DK Shivakumar) ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ್ (G Parameshwara) ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿರುವುದಕ್ಕೆ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿದೆ. ಇತ್ತೀಚೆಗಷ್ಟೇ ಪರಮೇಶ್ವರ್ ಅವರನ್ನು ಮಹಾಭಾರತದ ‘ಕರ್ಣ’ನಿಗೆ ಹೋಲಿಸಿ ವಿಡಿಯೋ ಮಾಡಿದ್ದ ಅಭಿಮಾನಿಗಳು, ಈಗ ಅವರ ಹಳೆಯ ಮಾರ್ಮಿಕ ಭಾಷಣದ ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಡಾ. ಜಿ. ಪರಮೇಶ್ವರ್ ಫ್ಯಾನ್ಸ್ ಎಂಬ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಿರಿಯ ನಾಯಕನ ಅಳಲಿನ ವಿಡಿಯೋ ಅಪ್‌ಲೋಡ್.
  • ‘ಮಲ್ಲಿಕಾರ್ಜುನ ಖರ್ಗೆ ಒಂದು ಕಾಲು ಎತ್ತಿ ಇಟ್ಟಿದ್ದರೆ ಸಿಎಂ ಆಗುತ್ತಿದ್ದರು’ ಎಂದಿದ್ದ ಪರಮೇಶ್ವರ್
  • ಡಿಕೆಶಿ ನೂತನ ಸಂಪುಟ ರಚನೆಯ ಕಸರತ್ತಿನ ನಡುವೆಯೇ ದಲಿತ ನಾಯಕನ ಹಳೇ ವಿಡಿಯೋ ವೈರಲ್.

ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಡಾ. ಜಿ. ಪರಮೇಶ್ವರ್ ಅವರು ಸಮುದಾಯದ ಹೋರಾಟ ಹಾಗೂ ರಾಜಕೀಯ ಅನ್ಯಾಯದ ಕುರಿತು ಅತ್ಯಂತ ಬೇಸರದಿಂದ ಮಾತನಾಡಿದ್ದಾರೆ. ‘ತುಳಿತಾರೆ, ತುಳಿಸಿಕೊಳ್ಳಬೇಕು. ಆದರೆ ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ನಮ್ಮ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಕಾಲು ಎತ್ತಿ ಇಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು ರೀ. ಆದರೆ ಅವರು ತಪ್ಪಿಸಿಕೊಂಡರು. ಇನ್ನು ನನಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿ ಹೋಯಿತು. ಅಪ್ಪಾ! ಹಂಗೂ ಹಿಂಗೂ ಹೆಂಗೋ ಮಾಡಿಕೊಂಡು, ಕೊನೆಗೆ ಬೇಡ ಬೇಡ ಅಂದರೂ ನನ್ನನ್ನು ಉಪಮುಖ್ಯಮಂತ್ರಿ ಮಾಡಿದರು. ಆದರೆ ಇಂತಹ ಸ್ಥಿತಿಯನ್ನು ಎದುರಿಸಲು ಹೋರಾಟ ಎನ್ನುವುದು ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಬರಬೇಕು’ ಎಂದು ಪರಮೇಶ್ವರ್ ಭಾಷಣ ಮಾಡುತ್ತಿರುವುದು ವಿಡಿಯೋದಲ್ಲಿವೆ.

ವೈರಲ್ ವಿಡಿಯೋ ಇಲ್ಲಿ ನೋಡಿ

ರಾಜಕೀಯ ವಲಯದಲ್ಲಿ ಭಾರಿ ಸಂಚಲನ

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಿರುವ ಈ ನಿರ್ಣಾಯಕ ಸಂದರ್ಭದಲ್ಲೇ, ಪರಮೇಶ್ವರ್ ಅವರ ಅಭಿಮಾನಿಗಳ ಅಧಿಕೃತ ಖಾತೆಯಿಂದ ಈ ವಿಡಿಯೋ ಹೊರಬಿದ್ದಿರುವುದು ತೀವ್ರ ಕುತೂಹಲ ಮೂಡಿಸಿದೆ. ಸದ್ಯ ದೆಹಲಿಯಲ್ಲಿ ಸಚಿವ ಸಂಪುಟದ ಬಿರುಸಿನ ಚರ್ಚೆಗಳು ನಡೆಯುತ್ತಿದ್ದು, ಸಿದ್ದರಾಮಯ್ಯ ಅವರು ತಮ್ಮ ಬಣದ ಪರಮೇಶ್ವರ್ ಅವರಿಗೆ ಮತ್ತೊಮ್ಮೆ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಪದೇ ಪದೇ ಹಿರಿಯ ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪುತ್ತಿರುವುದರ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link