Category Archives: Blog

Your blog category

ವಿಶ್ವ ದಾಖಲೆ… ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ಬ್ಯಾಟರ್​ಗಳ ಪಟ್ಟಿಗೆ ನೇಪಾಳ ತಂಡದ ಸ್ಪೋಟಕ ಆರಂಭಿಕ ಆಟಗಾರ ಕುಶಾಲ್ ಭುರ್ಟೆಲ್ ಸೇರ್ಪಡೆಯಾಗಿದ್ದಾರೆ. ಸಿಂಗಾಪುರ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯನ್ ಗೇಮ್ಸ್​ ಟಿ20 ಅರ್ಹತಾ ಪಂದ್ಯದಲ್ಲಿ ಚೀನಾ ವಿರುದ್ಧ ಕುಶಾಲ್ ಒಂದೇ ಒವರ್​ನಲ್ಲಿ ಸತತ 6 ಸಿಕ್ಸ್​ ಬಾರಿಸಿದ್ದಾರೆ.

ಈ ಪಂದ್ಯದ 9ನೇ ಓವರ್​ನ ಎಸೆದ ಚೀನಾದ ಎಡಗೈ ಸ್ಪಿನ್ ಬೌಲರ್ ಚೆನ್ ಝುವೋ ಯುಯೆ ಅವರ ಎಲ್ಲಾ ಎಸೆತಗಳನ್ನು ಭುರ್ಟೆಲ್ ಸಿಕ್ಸರ್​ ಅಟ್ಟಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ವಿಶ್ವದ 6ನೇ ಬ್ಯಾಟರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಯುವರಾಜ್ ಸಿಂಗ್ (ಭಾರತ), ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್), ದೀಪೇಂದ್ರ ಸಿಂಗ್ ಐರಿ (ನೇಪಾಳ), ಡೇರಿಯಸ್ ವಿಸರ್ (ಸಮೋವಾ), ಮನನ್ ಬಶೀರ್ (ಬಲ್ಗೇರಿಯಾ) ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಈ ಸಾಧಕರ ಪಟ್ಟಿಗೆ ಕುಶಾಲ್ ಭುರ್ಟೆಲ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಈ ಆರು ಸಿಕ್ಸರ್​ಗಳೊಂದಿಗೆ ಕುಶಾಲ್ ಭುರ್ಟೆಲ್ ಈ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ  ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ  7ನೇ ವೇಗದ ಶತಕ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಕುಶಾಲ್ ಭುರ್ಟೆಲ್ ಬಾರಿಸಿದ (129) ಈ ಭರ್ಜರಿ ಸೆಂಚುರಿ ನೆರವಿನೊಂದಿಗೆ ಈ ಪಂದ್ಯದಲ್ಲಿ ನೇಪಾಳ ತಂಡವು 20 ಓವರ್​ಗಳಲ್ಲಿ 313 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೀನಾ ತಂಡವು  ಕೇವಲ 92 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನೇಪಾಳ ತಂಡ 221 ರನ್​ಗಳ ಭರ್ಜರಿ ಜಯ ಸಾಧಿಸಿದೆ.

 

 

Source link

Karnataka Weather Forecast: ಇಡೀ ರಾಜ್ಯದಲ್ಲಿಂದು ಭಾರೀ ಮಳೆ! 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಜೂನ್ 02: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವರುಣನ ಅಬ್ಬರ ಜೋರಾಗಲಿದ್ದು, ಪ್ರಮುಖ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (IMD) ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಗದಗ, ಮೈಸೂರು ಸೇರಿ ಒಟ್ಟು ಎಂಟು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಣೆ.
  • ಬೆಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
  • ಬಿರುಗಾಳಿ ವೇಳೆ ಸಾರ್ವಜನಿಕರು ಮತ್ತು ರೈತರು ಎಚ್ಚರಿಕೆಯಿಂದಿರಲು ಇಲಾಖೆ ಸೂಚನೆ.

ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಉತ್ತರ ಒಳನಾಡಿನ ಗದಗ, ಧಾರವಾಡ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಒಂದು ಅಥವಾ ಎರಡು ಕಡೆಗಳಲ್ಲಿ 40-50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಹಳದಿ ಅಲರ್ಟ್ ನೀಡಿದೆ.

ಎಲ್ಲೆಲ್ಲಿ ಮಳೆ?

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ವೇಳೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಕರಾವಳಿ ಭಾಗದಲ್ಲಿ ತಂಪಾದ ವಾತಾವರಣ ಇರಲಿದೆ. ಭಾರಿ ಮಳೆಯ ಮುನ್ಸೂಚನೆ ಇರುವ ಜಿಲ್ಲೆಗಳ ಹೊರತಾಗಿ, ಬಾಗಲಕೋಟೆ, ಬೆಳಗಾವಿ, ಬಿದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಇಲ್ಲಿ ಬಿರುಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇರಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಮಳೆ ಮತ್ತು ಬಿರುಗಾಳಿ ಬೀಸುವ ಸಮಯದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಹಾಗೂ ಹಳೆಯ ಕಟ್ಟಡ ಮತ್ತು ಮರಗಳ ಕೆಳಗೆ ನಿಲ್ಲದಂತೆ ಹವಾಮಾನ ಇಲಾಖೆ ಸೂಚಿಸಿದೆ. ರೈತರು ಕೂಡ ತಮ್ಮ ಬೆಳೆ ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಮುಂಜಾಗ್ರತೆ ವಹಿಸುವುದು ಸೂಕ್ತ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟ್ರಂಪ್ ಸಂಧಾನ ಯಶಸ್ವಿ: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಶಾಂತಿ ಒಪ್ಪಂದ, ಮಿಲಿಟರಿ ಕಾರ್ಯಾಚರಣೆ ಸ್ಥಗಿತ

ವಾಷಿಂಗ್ಟನ್, ಜೂನ್ 02: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ರಾಜತಾಂತ್ರಿಕ ಯಶಸ್ಸು ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತೀವ್ರ ಪ್ರಯತ್ನಗಳ ಫಲವಾಗಿ, ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘಟನೆಗಳು ಪರಸ್ಪರ ದಾಳಿಗಳನ್ನು ನಿಲ್ಲಿಸಲು ಒಪ್ಪಿಕೊಂಡಿವೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸರಣಿ ಮಿಲಿಟರಿ ದಾಳಿಗಳು ಮತ್ತು ನಾಗರಿಕ ಸಾವುನೋವುಗಳ ಕುರಿತು ಅಮೆರಿಕದ ಅಧಿಕಾರಿಗಳು ಆರಂಭದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇಸ್ರೇಲ್ ಕ್ರಮಗಳು ಇರಾನ್ ಜೊತೆಗಿನ ಅಮೆರಿಕದ ಮಾತುಕತೆಗಳಿಗೆ ಅಡ್ಡಿಪಡಿಸುತ್ತವೆ ಎಂದು ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಆರಂಭದಲ್ಲಿ ಅತ್ಯಂತ ಕಠಿಣ ಮಾತುಕತೆ ನಡೆಸಿದ್ದರು ಎನ್ನಲಾಗಿತ್ತು. ಆದರೆ, ಈ ಎಲ್ಲಾ ಉದ್ವಿಗ್ನತೆಗಳಿಗೆ ಟ್ರಂಪ್ ಈಗ ಸೌಹಾರ್ದಯುತ ತೆರೆ ಎಳೆದಿದ್ದಾರೆ.

ಟ್ರಂಪ್ ಸಂಧಾನದ ಪ್ರಮುಖ ಅಂಶಗಳು
ಇಸ್ರೇಲ್ ಸೇನೆ ವಾಪಸ್: ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅತ್ಯಂತ ಯಶಸ್ವಿ ಮಾತುಕತೆ ನಡೆಸಲಾಗಿದ್ದು, ಇಸ್ರೇಲ್ ಇನ್ನು ಮುಂದೆ ಬೈರುತ್‌ಗೆ ಯಾವುದೇ ಸೈನಿಕರನ್ನು ಕಳುಹಿಸುವುದಿಲ್ಲ ಮತ್ತು ಈಗಾಗಲೇ ಹೊರಟಿದ್ದ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಟ್ರಂಪ್ ದೃಢಪಡಿಸಿದ್ದಾರೆ.

ಹಿಜ್ಬುಲ್ಲಾ ಒಪ್ಪಿಗೆ: ಉನ್ನತ ಪ್ರತಿನಿಧಿಗಳ ಮೂಲಕ ಹಿಜ್ಬುಲ್ಲಾ ಸಂಘಟನೆಯೊಂದಿಗೂ ಉತ್ತಮ ಸಂಪರ್ಕ ಸಾಧಿಸಲಾಗಿದ್ದು, ಅವರು ಇನ್ಮುಂದೆ ಇಸ್ರೇಲ್ ಮೇಲೆ ಯಾವುದೇ ರೀತಿಯ ಶೂಟಿಂಗ್ ಮಾಡದೆ ಸಂಪೂರ್ಣ ಕದನ ವಿರಾಮ ಪಾಲಿಸಲು ಒಪ್ಪಿಕೊಂಡಿದ್ದಾರೆ.

ಮತ್ತಷ್ಟು ಓದಿ: ಇರಾನ್ ಮೇಲೆ ಮತ್ತೆ ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ

ಡೊನಾಲ್ಡ್ ಟ್ರಂಪ್ ಹೇಳಿಕೆ: ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ನಾನು ಬಹಳ ಫಲಪ್ರದವಾದ ಮಾತುಕತೆ ನಡೆಸಿದ್ದೇನೆ. ಇಸ್ರೇಲ್ ಇನ್ನು ಹಿಜ್ಬುಲ್ಲಾ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಹಿಜ್ಬುಲ್ಲಾ ಕೂಡ ಇಸ್ರೇಲ್ ಮೇಲೆ ದಾಳಿ ನಡೆಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಮಹತ್ವದ ಬೆಳವಣಿಗೆಯಿಂದಾಗಿ ಲೆಬನಾನ್ ಮತ್ತು ಇಸ್ರೇಲ್ ಗಡಿಯಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಬಿಕ್ಕಟ್ಟು ಶಮನಗೊಂಡಿದ್ದು, ಪ್ರಾದೇಶಿಕ ಶಾಂತಿ ಪುನಃಸ್ಥಾಪನೆಯಾಗುವ ನಿರೀಕ್ಷೆ ಮೂಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಮಿತಾಭ್ ಬಚ್ಚನ್-ಮಾಧುರಿ ಒಟ್ಟಿಗೆ ಕೆಲಸ ಮಾಡದಿರಲು ಕಾರಣವಾದ ಆ ಹೀರೋ ಯಾರು?

ಬಾಲಿವುಡ್‌ನ ಇಬ್ಬರು ಮಹಾನ್ ತಾರೆಯರಾದ ಅಮಿತಾಭ್ ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಅವರು ತಮ್ಮ ನಟನೆಯ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಆದರೆ, ಇಷ್ಟು ದೀರ್ಘಾವಧಿಯ ವೃತ್ತಿಜೀವನವನ್ನು ಹೊಂದಿದ್ದರೂ ಇವರಿಬ್ಬರೂ ಪ್ರಮುಖ ಪಾತ್ರಗಳಲ್ಲಿ ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅಮಿತಾಭ್ ಮತ್ತು ಗೋವಿಂದ ಅಭಿನಯದ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರದ ಸಣ್ಣದೊಂದು ಹಾಡಿನಲ್ಲಿ ಮಾಧುರಿ ದೀಕ್ಷಿತ್ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಈ ಸೂಪರ್ ಸ್ಟಾರ್ ಜೋಡಿ ಬೆಳ್ಳಿತೆರೆಯ ಮೇಲೆ ಪೂರ್ಣ ಪ್ರಮಾಣದಲ್ಲಿ ಒಟ್ಟಿಗೆ ನಟಿಸಲೇ ಇಲ್ಲ. ಈ ಪ್ರಶ್ನೆ ಇಂದಿಗೂ ಕೂಡ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಮತ್ತು ಚರ್ಚೆಯ ವಿಷಯವಾಗಿ ಉಳಿದಿದೆ.

ಮಾಧುರಿ ದೀಕ್ಷಿತ್ ಅವರು 1980ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಾಗ ಆರಂಭದ ದಿನಗಳಲ್ಲಿ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ. ಆ ಸಮಯದಲ್ಲಿ ಚಿತ್ರರಂಗದ ಪ್ರಮುಖ ನಟರು ಅವರೊಂದಿಗೆ ಅಭಿನಯಿಸಲು ಅಷ್ಟಾಗಿ ಆಸಕ್ತಿ ತೋರಿಸುತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಇಂತಹ ಕಠಿಣ ಸಂದರ್ಭದಲ್ಲಿ ನಟ ಅನಿಲ್ ಕಪೂರ್ ಅವರು ಮಾಧುರಿ ಅವರಿಗೆ ಸಾಕಷ್ಟು ಬೆಂಬಲ ನೀಡಿದರು ಮತ್ತು ಅವರ ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿದರು. ಇವರಿಬ್ಬರ ಕಾಂಬಿನೇಷನ್ ಬಾಲಿವುಡ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು.

ಬೆಳ್ಳಿತೆರೆಯ ಮೇಲೆ ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಜೋಡಿಯನ್ನು ಪ್ರೇಕ್ಷಕರು ಅಪಾರವಾಗಿ ಇಷ್ಟಪಟ್ಟರು. ಇವರಿಬ್ಬರ ನಟನೆಯ ‘ತೇಜಾಬ್’, ‘ಬೇಟಾ’, ‘ಪರಿಂದಾ’ ಮತ್ತು ‘ಹಿಫಾಜತ್’ ನಂತಹ ಚಲನಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದವು. ಇದರ ಬೆನ್ನಲ್ಲೇ ಈ ಜೋಡಿಯು ಆ ಕಾಲದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಜೋಡಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು. ಸತತ ಹಿಟ್‌ ಸಿನಿಮಾಗಳನ್ನು ನೀಡಿದ ನಂತರ ಮಾಧುರಿ ದೀಕ್ಷಿತ್ ಅವರ ಜನಪ್ರಿಯತೆ ಚಿತ್ರರಂಗದಲ್ಲಿ ರಾಕೆಟ್ ವೇಗದಲ್ಲಿ ಮುನ್ನುಗ್ಗಿತು.

ಇದನ್ನೂ ಓದಿ: ‘ಆ ವಯಸ್ಸಲ್ಲಿ ಗೋಲಿ ಆಡೋಕೂ ಬರ್ತಾ ಇರಲಿಲ್ಲ’; ಸೂರ್ಯವಂಶಿ ಬಗ್ಗೆ ಅಮಿತಾಭ್ ಮೆಚ್ಚುಗೆ

ಮಾಧುರಿ ದೀಕ್ಷಿತ್ ಅವರ ವೃತ್ತಿಜೀವನವು ಯಶಸ್ಸಿನ ಉತ್ತುಂಗದಲ್ಲಿದ್ದಾಗ, ಅವರಿಗೆ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಆದರೆ, ಕೆಲವು ಮಾಧ್ಯಮ ವರದಿಗಳ ಪ್ರಕಾರ, ಅನಿಲ್ ಕಪೂರ್ ಅವರು ಮಾಧುರಿ ಅವರ ವೃತ್ತಿಬದುಕಿನ ವಿಷಯದಲ್ಲಿ ತುಂಬಾ ಕಾಳಜಿ ಹಾಗೂ ಪೊಸೆಸಿವ್ ಆಗಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಮಾಧುರಿ ಅವರಿಗೆ ಅಮಿತಾಬ್ ಬಚ್ಚನ್ ಜೊತೆ ಚಿತ್ರಗಳಲ್ಲಿ ನಟಿಸದಂತೆ ಸಲಹೆ ನೀಡಿದ್ದರು ಎಂದು ಹೇಳಲಾಗುತ್ತದೆ. ಇದೇ ಕಾರಣದಿಂದ ಈ ಇಬ್ಬರು ದೈತ್ಯ ಪ್ರತಿಭೆಗಳು ಒಟ್ಟಿಗೆ ನಟಿಸಲು ಸಾಧ್ಯವಾಗಲಿಲ್ಲ ಎಂಬ ದೊಡ್ಡ ರಹಸ್ಯ ಈಗ ಬೆಳಕಿಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇದು ಅನ್ಯಾಯ… ಫೈನಲ್ ಮ್ಯಾಚ್ ಮುಂದೂಡಬೇಕಿತ್ತು: ಸುನಿಲ್ ಗವಾಸ್ಕರ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ನಡೆದ ಕೆಳ ಬೆಳವಣಿಗಳು ಇದೀಗ ಚರ್ಚೆಗೆ ಕಾರಣವಾಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ತಂಡ ಎದುರಿಸಿದ ಸಂಕಷ್ಟಗಳನ್ನು ಪರಿಗಣಿಸಿ “ಫೈನಲ್​ ಮ್ಯಾಚ್​ ಅನ್ನು ಒಂದು ದಿನಮುಂದೂಡಬೇಕಿತ್ತು” ಎಂದು ಭಾರತದ ದಿಗ್ಗಜ ಸುನಿಲ್ ಗವಾಸ್ಕರ್ ಬಿಸಿಸಿಐ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಗವಾಸ್ಕರ್ ಅಸಮಾಧಾನಕ್ಕೆ ಕಾರಣವೇನು?

ನ್ಯೂ ಚಂಡೀಗಢ್​​ನಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ದ್ವಿತೀಯ ಕ್ವಾಲಿಫೈಯರ್​ ಪಂದ್ಯವಾಡಿದ್ದ ಗುಜರಾತ್ ಟೈಟಾನ್ಸ್ ತಂಡವು ಅಹಮದಾಬಾದ್​ ತಲುಪಿದ್ದು ಶನಿವಾರ ಮಧ್ಯರಾತ್ರಿ. ಅಂದರೆ ಫೈನಲ್ ಪಂದ್ಯಕ್ಕೂ ಮುನ್ನ ಜಿಟಿ ಪಡೆಗೆ ಅಭ್ಯಾಸ ನಡೆಸಲು ಯಾವುದೇ ಅವಕಾಶ ಇರಲಿಲ್ಲ.

ಹೀಗೆ ಗುಜರಾತ್ ಟೈಟಾನ್ಸ್ ತಡವಾಗಿ ಅಹಮದಾಬಾದ್​ಗೆ ಬರಲು ಮುಖ್ಯ ಕಾರಣ ವಿಮಾನ ವಿಳಂಬ. ಶನಿವಾರ ರಾಜಸ್ಥಾನ್ ಸುತ್ತ ಮುತ್ತ ಸುರಿದ ಭಾರೀ ಮಳೆಯಿಂದಾಗಿ ಹಾಗೂ ಚಂಡಮಾರುತದ ಕಾರಣ ಗುಜರಾತ್ ಟೈಟಾನ್ಸ್ ತಂಡದ ಚಾರ್ಟರ್ಡ್​ ವಿಮಾನ ಟೇಕ್ ಆಫ್​ ಆಗಲು ವಿಳಂಬವಾಗಿತ್ತು. ಇದರಿಂದ ಆಟಗಾರರು ಮಧ್ಯಾಹ್ನದಿಂದ ವಿಮಾನ ನಿಲ್ದಾಣದಲ್ಲೇ ಕಾಯಬೇಕಾಗಿ ಬಂತು.

ಅಲ್ಲದೆ ಆಟಗಾರರು ಅಹಮದಾಬಾದ್​ನ ಬಂದು ತಲುಪಿದ್ದು ತಡರಾತ್ರಿ 10.45 ಕ್ಕೆ.  ಅಲ್ಲಿದೆ ಟೀಮ್ ಹೊಟೇಲ್​ಗೆ ತಲುವಷ್ಟರಲ್ಲಿ ಮಧ್ಯರಾತ್ರಿ 12 ಗಂಟೆಯಾಗಿತ್ತು. ಅಂದರೆ ಫೈನಲ್ ಪಂದ್ಯಕ್ಕೂ ಕೇವಲ 20 ಗಂಟೆಗಳ ಮುಂಚಿತವಾಗಿ ಗುಜರಾತ್ ಟೈಟಾನ್ಸ್ ಆಟಗಾರರು ಆಗಮಿಸಿದ್ದರು.

ಇಷ್ಟೊಂದು ಕಡಿಮೆ ಅವಧಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ವಿಶ್ರಾಂತಿ ಪಡೆದು, ಫೈನಲ್ ಪಂದ್ಯಕ್ಕೆ ಸಜ್ಜಾಗಬೇಕಿತ್ತು.

ಅದೇ ವೇಳೆ ಆರ್​ಸಿಬಿ ತಂಡವು ಮೇ 26 ರಿಂದಲೇ ಅಹಮದಾಬಾದ್​ನಲ್ಲಿದ್ದರು.  ಅಂದರೆ ನಾಲ್ಕು ದಿನಗಳ ಕಾಲ ಬಿಡುವು ಸಿಕ್ಕಿತ್ತು. ಇತ್ತ ಗುಜರಾತ್ ಟೈಟಾನ್ಸ್ ತಂಡಕ್ಕೆ ವಿಶ್ರಾಂತಿಗಾಗಿ ಒಂದು ದಿನದ ಅವಧಿ ಕೂಡ ಸಿಕ್ಕಿರಲಿಲ್ಲ.

ಅತ್ತ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇದ್ದರೂ ಅದನ್ನು ಬಳಸಿಯಾದರೂ ಗುಜರಾತ್ ಟೈಟಾನ್ಸ್ ತಂಡಕ್ಕೆ ವಿಶ್ರಾಂತಿಗೆ ಅನುವು ಮಾಡಿಕೊಡಬಹುದಿತ್ತು.

ಅಂದರೆ ಸೋಮವಾರಕ್ಕೆ ಫೈನಲ್ ಪಂದ್ಯವನ್ನು ಮುಂದೂಡಿದ್ದರೆ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ಸಂಪೂರ್ಣ ವಿಶ್ರಾಂತಿ ಪಡೆದು ಅಂತಿಮ ಮ್ಯಾಚ್​ಗೆ ಸಜ್ಜಾಗುತ್ತಿದ್ದರು.

ಇದರಿಂದ ಅಭಿಮಾನಿಗಳಿಗೆ ಮತ್ತಷ್ಟು ರೋಚಕ ಹಾಗೂ ಸಮಬಲದ ಹೋರಾಟದ ಫೈನಲ್ ಪಂದ್ಯವನ್ನು ನೋಡುವ ಅವಕಾಶ ದೊರೆಯುತ್ತಿತ್ತು.

ಆದರೆ ಬಿಸಿಸಿಐ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಪ್ರಯಾಣದ ದಣಿವು ಹಾಗೂ ಮಾನಸಿಕ ಸ್ಥಿತಿಯನ್ನೇ ಪರಿಗಣಿಸಿಲ್ಲ. ಅಹಮದಾಬಾದ್​ಗೆ ಬಂದ 20 ಗಂಟೆಯೊಳಗೆ ಫೈನಲ್ ಮ್ಯಾಚ್ ಆಡಿಸಿದ್ದಾರೆ. ಇದು ನಿಜಕ್ಕೂ ಅನ್ಯಾಯ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಕನಿಷ್ಠ ಪಕ್ಷ ಮೀಸಲು ದಿನಕ್ಕೆ ಫೈನಲ್​ ಮ್ಯಾಚ್​ ಅನ್ನು ಮುಂದೂಡಬೇಕಿತ್ತು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡಕ್ಕೂ ಅಂತಿಮ ಪಂದ್ಯಕ್ಕೆ ಸಜ್ಜಾಗಲು ಅವಕಾಶ ಕಲ್ಪಿಸಬೇಕಿತ್ತು. ಆದರೆ ಇಲ್ಲಿ ಒಂದು ತಂಡಕ್ಕೆ 4 ದಿನಗಳ ವಿಶ್ರಾಂತಿ ಹಾಗೂ ಸಮಯ ಸಿಕ್ಕರೆ, ಒಂದು ತಂಡಕ್ಕೆ ಕೇವಲ 20 ಗಂಟೆಗಳ ಅವಧಿ ಮಾತ್ರ ಸಿಕ್ಕಿದೆ. ಇದು ಎರಡು ತಂಡಗಳ ನಡುವೆ ಅಸಮತೋಲನವನ್ನು ಉಂಟು ಮಾಡಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ: IPL 2026 Awards: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

ಒಟ್ಟಾರೆಯಾಗಿ ಹೇಳುವುದಾದರೆ, ಸುನಿಲ್ ಗವಾಸ್ಕರ್ ಅವರ ವಾದದಲ್ಲಿ ತಾರ್ಕಿಕ ಸತ್ಯಾಂಶವಿದ್ದರೂ, ಕ್ರೀಡಾ ಜಗತ್ತಿನಲ್ಲಿ ಇಂತಹ ಅನಿರೀಕ್ಷಿತ ಸವಾಲುಗಳು ಸಾಮಾನ್ಯ. ಇದನ್ನು ಗಂಭೀರವಾಗಿ ಪರಿಗಣಿಸಿ ಬಿಸಿಸಿಐ ಮುಂಬರುವ ಐಪಿಎಲ್ ಸೀಸನ್‌ಗಳಲ್ಲಿ ಫೈನಲ್ ಆಡುವ ಎರಡು ತಂಡಗಳಿಗೆ ಕನಿಷ್ಠ ಎರಡು ದಿನಗಳ ವಿಶ್ರಾಂತಿಗೆ ವ್ಯವಸ್ಥೆ ಮಾಡಲಿದ್ದಾರಾ ಕಾದು ನೋಡಬೇಕಿದೆ.

 

Source link

ಬೆಂಗಳೂರು: ಆನ್‌ಲೈನ್ ಹೂಡಿಕೆ ಹೆಸರಲ್ಲಿ ಭಾರಿ ವಂಚನೆ, ಮಹಿಳೆಯ ಮಾತಿಗೆ ಮರುಳಾಗಿ 5.95 ಕೋಟಿ ರೂ. ಕಳಕೊಂಡ ವ್ಯಕ್ತಿ

ಬೆಂಗಳೂರು, ಜೂನ್ 2: ಆನ್‌ಲೈನ್ ಮೂಲಕ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ನಂಬಿಸುವ ಸೈಬರ್ (Cyber Fraud) ವಂಚಕರ  ಜಾಲದಿಂದ ಮೋಸಹೋದ ಬೆಂಗಳೂರಿನ ವ್ಯಕ್ತಿಯೊಬ್ಬರು ಬರೋಬ್ಬರಿ 5.95 ಕೋಟಿ ರೂ. ಕಳೆದುಕೊಂಡಿದ್ದಾರೆ. ವಾಯುವ್ಯ ಬೆಂಗಳೂರಿನ (Bengaluru) ನಿವಾಸಿಯೊಬ್ಬರಿಗೆ ಸೈಬರ್ ವಂಚಕರು ನಕಲಿ ಹೂಡಿಕೆ ತಾಣದ (Trading Platform) ಮೂಲಕ ವಂಚಿಸಿ, ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವುದಾಗಿ ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ, ಹೂಡಿಕೆ ಮಾಡಿದ ಹಣಕ್ಕೆ ಭಾರಿ ಲಾಭ ಬಂದಂತೆ ನಕಲಿ ಡ್ಯಾಶ್‌ಬೋರ್ಡ್ ಸೃಷ್ಟಿಸಿ ತೋರಿಸಲಾಗಿತ್ತು. ಇದನ್ನು ನಂಬಿದ ವ್ಯಕ್ತಿ ಹಣ ಹೂಡುತ್ತಾ ಹೋಗಿದ್ದರು.

ಮುಖ್ಯಾಂಶಗಳು

  • ನಕಲಿ ಟ್ರೇಡಿಂಗ್ ಆಪ್‌ಗಳ ಮೂಲಕ ಬೆಂಗಳೂರಿನ ವ್ಯಕ್ತಿಗೆ 5.95 ಕೋಟಿ ರೂ. ವಂಚಿಸಿದ ಸೈಬರ್ ಖದೀಮರು.
  • ಗೂಗಲ್ ಮತ್ತು ಫೇಸ್‌ಬುಕ್‌ನಲ್ಲಿ ಸಿಕ್ಕ ಮಹಿಳೆಯ ಮಾರ್ಗದರ್ಶನ ನಂಬಿ ಹಣ ಹೂಡಿಕೆ ಮಾಡಿದ್ದ ಸಂತ್ರಸ್ತ.
  • ಹೂಡಿಕೆ ಖಾತೆಯಲ್ಲಿ 50 ಕೋಟಿ ರೂ. ಲಾಭ ತೋರಿಸಿ ನಂಬಿಸಿದ್ದ ವಂಚಕರು.

ಫೇಸ್‌ಬುಕ್ ಗೈಡ್ ನಂಬಿ ಇಟ್ಟರು ಹೆಜ್ಜೆ!

ಸಂತ್ರಸ್ತ ವ್ಯಕ್ತಿಗೆ ಅವರ ಸ್ನೇಹಿತರು ಮೊದಲು ‘PU Prime’ ಎಂಬ ಆನ್‌ಲೈನ್ ಟ್ರೇಡಿಂಗ್ ವೇದಿಕೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಅವರಿಗೆ ಆನ್‌ಲೈನ್ ಹೂಡಿಕೆಯ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದ ಕಾರಣ, ಅವರು ಗೂಗಲ್ ಮತ್ತು ಫೇಸ್‌ಬುಕ್‌ನಲ್ಲಿ ವೃತ್ತಿಪರ ಮಾರ್ಗದರ್ಶನಕ್ಕಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಅವರಿಗೆ ‘ಶಿಲ್ಪಾ ಶಿವಕುಮಾರ್’ ಎಂಬಾಕೆಯ ಪರಿಚಯವಾಗಿತ್ತು. ಇಬ್ಬರ ನಡುವೆ ಲಾಭ ಹಂಚಿಕೆಯ (Profit-Sharing) ಒಪ್ಪಂದ ಏರ್ಪಟ್ಟ ಬಳಿಕ, ಆಕೆ ಇದು ಭಾರತೀಯ ಟ್ರೇಡರ್ಸ್‌ಗಳಿಗಾಗಿಯೇ ಇರುವ ಅಧಿಕೃತ ವೇದಿಕೆ ಎಂದು ನಂಬಿಸಿ ವಂಚನೆಯ ಜಾಲತಾಣದಲ್ಲಿ ನೋಂದಣಿ ಮಾಡಿಸಿದ್ದಳು.

ಲಾಭದ ನಕಲಿ ದರ್ಶನ, ಸಂಪೂರ್ಣ ಹಣ ಸ್ವಾಹಾ

ಸಂತ್ರಸ್ತ ವ್ಯಕ್ತಿ ಆ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೇಡಿಂಗ್ ಆರಂಭಿಸಿದಾಗ, ಅದರ ಡ್ಯಾಶ್‌ಬೋರ್ಡ್‌ನಲ್ಲಿ ಭಾರಿ ಪ್ರಮಾಣದ ಲಾಭ ಕಾಣತೊಡಗಿತ್ತು. ಆರಂಭದಲ್ಲಿ ಸ್ವಲ್ಪ ಹಣವನ್ನು ಹಿಂಪಡೆಯಲು (Withdraw) ಅವಕಾಶ ಸಿಕ್ಕಿದ್ದರಿಂದ ಅವರಿಗೆ ನಂಬಿಕೆ ಹೆಚ್ಚಾಗಿತ್ತು. ಪ್ಲಾಟ್‌ಫಾರ್ಮ್‌ನ ಅಸಲಿಯತ್ತನ್ನು ಪರೀಕ್ಷಿಸಲು ಅವರು ಬೇರೊಂದು ಖಾತೆಯನ್ನು ತೆರೆದಾಗಲೂ ಅದರಲ್ಲಿ ಲಾಭ ತೋರಿಸಲಾಗಿತ್ತು. ಆದರೆ, ಆ ನಕಲಿ ಆ್ಯಪ್ ಅನ್ನು ಕೇವಲ ಸುಳ್ಳು ಲಾಭ ತೋರಿಸಲೆಂದೇ ವಿನ್ಯಾಸಗೊಳಿಸಲಾಗಿತ್ತು ಎಂಬುದು ಅವರಿಗೆ ತಿಳಿದಿರಲಿಲ್ಲ!

ಇದನ್ನೂ ಓದಿ: ಬೆಂಗಳೂರು: ಅರ್ಧಕ್ಕೆ ಕಾಲೇಜು ಬಿಟ್ಟು ತಾಯಿ ಜತೆ ಆನ್‌ಲೈನ್ ವಂಚನೆಗಿಳಿದ ಮೊಹಮ್ಮದ್ ಉಜೈಫ್

ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು, ಹೂಡಿಕೆಯನ್ನು ಹೆಚ್ಚಿಸುವಂತೆ ನಿರಂತರವಾಗಿ ಪ್ರಚೋದಿಸಿದರು. ಕೊನೆಗೆ ಸಂತ್ರಸ್ತರು ತಮ್ಮ ಮತ್ತು ಪತ್ನಿಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 5.95 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದರು. ಒಂದು ಹಂತದಲ್ಲಿ ಅವರ ಟ್ರೇಡಿಂಗ್ ಖಾತೆಯಲ್ಲಿ ಬರೋಬ್ಬರಿ 50 ಕೋಟಿ ರೂ. ಲಾಭ ಇರುವುದು ಕಾಣಿಸುತ್ತಿತ್ತು. ಆದರೆ, ಆ ಹಣವನ್ನು ಹಿಂಪಡೆಯಲು ಹೋದಾಗ ತಾವೇ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಮೇ 28ರಂದು ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾವು ಹೊಸ ಪಕ್ಷ ಕಟ್ಟುವ ವದಂತಿ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?

ಚೆನ್ನೈ, ಜೂನ್ 02: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ(K Annamalai) ಅವರು ಬಿಜೆಪಿಗೆ ರಾಜೀನಾಮೆ ನೀಡಿ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎನ್ನುವ ವದಂತಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಊಹಾಪೋಹಗಳ ನಡುವೆಯೇ ಸೋಮವಾರ ನವದೆಹಲಿಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಮತ್ತು ಮಾಧ್ಯಮಗಳು ಸ್ವಲ್ಪ ಸಮಯ ಕಾಯಬೇಕು ಎಂದು ವಿನಂತಿಸಿದ್ದಾರೆ. ದಯವಿಟ್ಟು ಸ್ವಲ್ಪ ದಿನ ಕಾಯಿರಿ, ಒಂದೆರಡು ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಕುಳಿತು ಮಾತನಾಡೋಣ, ಆಗ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಅಣ್ಣಾಮಲೈ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ.

ನವದೆಹಲಿಯಲ್ಲಿ ಹೈಕಮಾಂಡ್ ಭೇಟಿ ಸಾಧ್ಯತೆ
ಅಣ್ಣಾಮಲೈ ಅವರ ಈ ದೆಹಲಿ ಪ್ರವಾಸ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿದೆ. ಮೂಲಗಳ ಪ್ರಕಾರ, ಅವರು ಬಿಜೆಪಿ ರಾಷ್ಟ್ರೀಯ ನಾಯಕರಾದ ನಿತಿನ್ ನಬಿನ್ ಅವರನ್ನು ಭೇಟಿ ಮಾಡಲಿದ್ದು, ಪಕ್ಷದಲ್ಲಿ ತಮ್ಮ ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ ಎಂದು ಕೆಲವು ವರದಿಗಳು ಸೂಚಿಸಿವೆ.

ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ಪ್ರಕಾರ, ಜೂನ್ 4 ರಂದು ಬರಲಿರುವ ತಮ್ಮ ಹುಟ್ಟುಹಬ್ಬದಂದು ಅಣ್ಣಾಮಲೈ ಹೊಸ ರಾಜಕೀಯ ಪಕ್ಷವನ್ನು ಘೋಷಿಸಬಹುದು ಎನ್ನಲಾಗಿದೆ. ಈಗಾಗಲೇ ತಮಿಳುನಾಡಿನ ಮಧುರೈ ಮತ್ತು ಕೊಯಮತ್ತೂರು ನಗರಗಳಲ್ಲಿ ಅಣ್ಣಾಮಲೈ ಅವರನ್ನು ‘2.0 ಅವತಾರ’ದಲ್ಲಿ ಬಿಂಬಿಸುವ ಬೃಹತ್ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

ಮತ್ತಷ್ಟು ಓದಿ: ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರಾ ಬಿಜೆಪಿ ನಾಯಕ ಅಣ್ಣಾಮಲೈ?

ಮಾಜಿ ಐಪಿಎಸ್ ಅಧಿಕಾರಿಯಾದ ಅಣ್ಣಾಮಲೈ ಅವರು ಇತ್ತೀಚೆಗೆ 9ನೇ ತರಗತಿಯ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಕೇಂದ್ರ ತಂದಿದ್ದ ತ್ರಿಭಾಷಾ ನೀತಿಯನ್ನು ಹಿಂಪಡೆಯುವಂತೆ ಬಹಿರಂಗವಾಗಿ ಒತ್ತಾಯಿಸಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರು ತಳೆದ ಈ ದಿಟ್ಟ ನಿಲುವು ಅವರು ಬಿಜೆಪಿಯಿಂದ ದೂರವಾಗುತ್ತಿದ್ದಾರೆ ಎಂಬ ಚರ್ಚೆಗೆ ನಾಂದಿ ಹಾಡಿತ್ತು.

2024 ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದ ಇವರ ಆಕ್ರಮಣಕಾರಿ ಶೈಲಿಯಿಂದಾಗಿ ಮಿತ್ರಪಕ್ಷ ಎಐಎಡಿಎಂಕೆ (AIADMK) ಮೈತ್ರಿಯಿಂದ ಹೊರನಡೆದಿತ್ತು. ಆದರೆ, ಮುಂಬರುವ 2026ರ ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆ ಮರಳಿ ಎನ್‌ಡಿಎ ಕೂಟಕ್ಕೆ ಸೇರ್ಪಡೆಯಾಗುವ ವೇಳೆ ರಾಜ್ಯ ನಾಯಕತ್ವ ಬದಲಾವಣೆಯ ಷರತ್ತು ವಿಧಿಸಿದ್ದರಿಂದ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಲಾಗಿತ್ತು.

ಅಣ್ಣಾಮಲೈ ಅವರು ತಮ್ಮದೇ ಆದ ಹೊಸ ರಾಜಕೀಯ ಹಾದಿ ಹಿಡಿಯಲಿದ್ದಾರೆಯೇ ಅಥವಾ ಬಿಜೆಪಿ ಹೈಕಮಾಂಡ್ ಅವರನ್ನು ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲಿದೆಯೇ ಎಂಬುದು ಮುಂದಿನ 48 ಗಂಟೆಗಳಲ್ಲಿ ಸಾಬೀತಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:25 am, Tue, 2 June 26

Source link

Horoscope Today: ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಜೂನ್ 2, ಮಂಗಳವಾರದ ದ್ವಾದಶ ರಾಶಿಗಳ ಸಮಗ್ರ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಬಿದಿಗೆ ತಿಥಿ, ಸಾಧ್ಯ ಯೋಗ, ಗರಜ ಕರಣ, ಮತ್ತು ಮೂಲಾ ನಕ್ಷತ್ರದ ವೈಶಿಷ್ಟ್ಯಗಳೊಂದಿಗೆ ಈ ದಿನದ ಫಲವನ್ನು ವಿವರಿಸಲಾಗಿದೆ. ಈ ದಿನ ರಾಹುಕಾಲವು ಮಧ್ಯಾಹ್ನ 3:29 ರಿಂದ ಸಂಜೆ 5:05 ರವರೆಗೆ ಇರಲಿದ್ದು, ಶುಭಕಾಲವು ಬೆಳಿಗ್ಗೆ 10:41 ರಿಂದ ಮಧ್ಯಾಹ್ನ 12:17 ರವರೆಗೆ ಇರಲಿದೆ ಎಂದು ಗುರೂಜಿ ತಿಳಿಸಿದ್ದಾರೆ.

 

 

 

Source link

ಡಿಕೆ ಶಿವಕುಮಾರ್ ಸಂಪುಟ ಸೇರಲು ಆಕಾಂಕ್ಷಿಗಳ ಭರ್ಜರಿ ಲಾಬಿ, ದೆಹಲಿ ದಂಡಯಾತ್ರೆ: ಸ್ಪೀಕರ್ ಆಗಲು ನಾಯಕರ ಹಿಂದೇಟು

ಬೆಂಗಳೂರು, ಜೂನ್ 2: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗುತ್ತಿದ್ದಂತೆಯೇ, ಇತ್ತ ಸಚಿವ ಸಂಪುಟ ಸೇರಲು ಆಕಾಂಕ್ಷಿ ಶಾಸಕರ ಭರ್ಜರಿ ಲಾಬಿ ಮತ್ತು ಕಸರತ್ತು ಶುರುವಾಗಿದೆ. ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ (Congress) ಶಾಸಕರು ಹಾಗೂ ಎಂಎಲ್‌ಸಿಗಳು ದೆಹಲಿಗೆ ದಂಡಯಾತ್ರೆ ನಡೆಸುತ್ತಿದ್ದು, ಹೈಕಮಾಂಡ್ ನಾಯಕರ ಕದ ತಟ್ಟುತ್ತಿದ್ದಾರೆ. ಪ್ರಾದೇಶಿಕ ಮತ್ತು ಸಮುದಾಯವಾರು ಲೆಕ್ಕಾಚಾರಗಳ ನಡುವೆ ಸಚಿವ ಸಂಪುಟ ರಚನೆ ಹೈಕಮಾಂಡ್‌ಗೆ ಕಬ್ಬಿಣದ ಕಡಲೆಯಾಗಿ ಮಾರ್ಣಪಟ್ಟಿದೆ. ಮತ್ತೊಂದೆಡೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಂತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ದೆಹಲಿ ಮಟ್ಟದಲ್ಲಿ ತೀವ್ರ ತಂತ್ರಗಾರಿಕೆ ನಡೆಸುತ್ತಿದ್ದಾರೆ.

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿಯಲ್ಲಿ ಬೀಡುಬಿಟ್ಟ ಹಿರಿಯ ಮತ್ತು ಹೊಸ ಶಾಸಕರ ದಂಡು.
  • ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್ ಮತ್ತು ಜಮೀರ್ ಅಹ್ಮದ್​ಗೆ ಡಿಸಿಎಂ ಹುದ್ದೆ ನೀಡುವಂತೆ ಸಿದ್ದರಾಮಯ್ಯ ಪಟ್ಟು.
  • ಸ್ಪೀಕರ್ ಸ್ಥಾನ ಅಲಂಕರಿಸಲು ಹಿರಿಯ ನಾಯಕರ ನಿರಾಕರಣೆ.

ಸಚಿವ ಸ್ಥಾನಕ್ಕಾಗಿ ಹಿರಿಯ-ಕಿರಿಯ ಶಾಸಕರ ಟವೆಲ್

ಹಿಂದಿನ ಸಂಪುಟದಲ್ಲಿದ್ದ ಕೆ.ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಹೆಚ್.ಕೆ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಚಲುವರಾಯಸ್ವಾಮಿ ಮತ್ತೊಮ್ಮೆ ಸಚಿವರಾಗಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ ಎಂದು ಇವರು ಹೈಕಮಾಂಡ್ ಮುಂದೆ ವಾದ ಮಂಡಿಸುತ್ತಿದ್ದಾರೆ. ಇವರೊಂದಿಗೆ ಎನ್.ಎ. ಹ್ಯಾರಿಸ್, ಬಿ.ಆರ್. ಪಾಟೀಲ್, ಪ್ರದೀಪ್ ಈಶ್ವರ್, ರಿಜ್ವಾನ್ ಅರ್ಷದ್, ಡಿ. ರವಿಶಂಕರ್, ಹಂಪನಗೌಡ ಬಾದರ್ಲಿ, ಬಸವರಾಜ ರಾಯರೆಡ್ಡಿ, ಮಾಗಡಿ ಶಾಸಕ ಬಾಲಕೃಷ್ಣ ಹಾಗೂ ಎಸ್‌.ಆರ್. ಶ್ರೀನಿವಾಸ್ ಸೇರಿದಂತೆ ದೊಡ್ಡ ಶಾಸಕರ ಪಡೆಯೇ ಮಂತ್ರಿಗಿರಿಗೆ ಪಟ್ಟು ಹಿಡಿದಿದೆ. ಇನ್ನು ಎಂಎಲ್‌ಸಿಗಳ ಕೋಟಾದಡಿ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ಬಿರುಸಾಗಿವೆ.

ಮೂವರು ಡಿಸಿಎಂ ಹುದ್ದೆಗೆ ಸಿದ್ದರಾಮಯ್ಯ ಒತ್ತಡ ತಂತ್ರ

ಸಚಿವ ಸ್ಥಾನದ ಆಯ್ಕೆ ಒಂದೆಡೆಯಾದರೆ, ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ತಮ್ಮ ಬಣದ ಪ್ರಮುಖ ನಾಯಕರಾದ ದಲಿತ ಸಮುದಾಯದ ಡಾ. ಜಿ. ಪರಮೇಶ್ವರ್, ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಕೋಟಾದಡಿ ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಪಟ್ಟ ನೀಡಲೇಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆಯೂ ಕಣ್ಣಿಟ್ಟಿರುವ ಸತೀಶ್ ಜಾರಕಿಹೊಳಿ ಮತ್ತು ಶಿವರಾಜ್ ತಂಗಡಗಿ ಅವರು ಹೈಕಮಾಂಡ್ ಜವಾಬ್ದಾರಿ ನೀಡಿದರೆ ನಿಭಾಯಿಸಲು ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಸ್ಪೀಕರ್ ಪಟ್ಟಕ್ಕೆ ನಾಯಕರ ಹಿಂದೇಟು

ಸಂಪುಟ ಕಸರತ್ತಿನ ನಡುವೆ ವಿಧಾನಸಭೆ ಸ್ಪೀಕರ್ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ. ಹಿರಿಯ ಶಾಸಕರು ಯಾರೂ ಸ್ಪೀಕರ್ ಸ್ಥಾನ ಅಲಂಕರಿಸಲು ಒಪ್ಪುತ್ತಿಲ್ಲ ಎನ್ನಲಾಗಿದ್ದು, ಪ್ರಸ್ತುತ ಸ್ಪೀಕರ್ ಆಗಿರುವ ಯು.ಟಿ. ಖಾದರ್ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ.

ನಾಳೆಯೇ (ಜೂನ್ 3) ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದು, ಹೈಕಮಾಂಡ್ ಯಾರಿಗೆ ಮಂತ್ರಿಭಾಗ್ಯ ಕರುಣಿಸಲಿದೆ ಮತ್ತು ಕೆಪಿಸಿಸಿ ಸಾರಥ್ಯ ಯಾರ ಹೆಗಲೇರಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀದೇವಿ ಹಾದಿಯಲ್ಲಿ ಸಾಗಿದ ಜಾನ್ವಿ ಕಪೂರ್; ಆ ಒಂದು ಕೆಲಸಕ್ಕೆ ಭಾರೀ ಮೆಚ್ಚುಗೆ

ಬಾಲಿವುಡ್‌ನ ಯುವ ನಟಿ ಜಾನ್ವಿ ಕಪೂರ್ (Janhvi Kapoor) ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಪ್ರಯತ್ನದಲ್ಲಿ ಇದ್ದಾರೆ. ಸ್ಟಾರ್ ಹಿನ್ನೆಲೆಯಿಂದ ಬಂದರೂ ಸಹ ವೃತ್ತಿಜೀವನದ ಆರಂಭದಲ್ಲೇ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಅವರು, ಸದ್ಯ ತಮ್ಮ ಸಿನಿಮಾಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದಾರೆ. ಸದ್ಯಕ್ಕೆ ಜಾನ್ವಿ ಅವರ ಸಂಪೂರ್ಣ ಗಮನ ಪ್ಯಾನ್-ಇಂಡಿಯಾ ಸಿನಿಮಾಗಳ ಮೇಲಿದ್ದು, ದಕ್ಷಿಣ ಭಾರತದತ್ತ ಹೆಜ್ಜೆ ಇಟ್ಟಿದ್ದಾರೆ. ಅವರು ಶ್ರೀದೇವಿ ಹಾದಿಯಲ್ಲೇ ಸಾಗುತ್ತಿದ್ದಾರೆ.

ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ ಬಹುನಿರೀಕ್ಷಿತ ತೆಲುಗು ಸಿನಿಮಾ ‘ಪೆದ್ದಿ’ ಜೂನ್ 4 ರಂದು ಅದ್ಧೂರಿಯಾಗಿ ತೆರೆಕಾಣಲು ಸಿದ್ಧವಾಗಿದೆ. ಈ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಎದುರು ಬರಲು ಜಾನ್ವಿ ಮತ್ತೊಮ್ಮೆ ರೆಡಿ ಆಗಿದ್ದಾರೆ. ಅವರು ತಮಗೆ ಸಿಕ್ಕ ಯಾವುದೇ ಅವಕಾಶವನ್ನು ಕೈಬಿಡುತ್ತಿಲ್ಲ.

ಇತ್ತೀಚೆಗೆ ನಡೆದ ‘ಪೆದ್ದಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್ ಎಲ್ಲರಿಗೂ ಅಚ್ಚರಿ ಮೂಡಿಸಿದರು. ವೇದಿಕೆಯ ಮೇಲೆ ತಡಬಡಾಯಿಸದೇ ಅತ್ಯಂತ ಸ್ಪಷ್ಟವಾಗಿ ಮತ್ತು ನಿರರ್ಗಳವಾಗಿ ತೆಲುಗಿನಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದರು. ಪ್ರೇಕ್ಷಕರನ್ನು ರಂಜಿಸುವುದೇ ನನ್ನ ಜೀವನದ ನಿಜವಾದ ಉದ್ದೇಶ ಎಂದರು. ‘ಪ್ರತಿಯೊಬ್ಬರೂ ತಮ್ಮ ಜೀವನದ ಉದ್ದೇಶವನ್ನು ಕಂಡುಕೊಳ್ಳಬೇಕು’ ಎಂಬ ಈ ಸಿನಿಮಾದ ಸಂದೇಶವನ್ನೇ ತಮ್ಮ ಜೀವನಕ್ಕೂ ಹೋಲಿಸಿ ಅವರು ಮಾತನಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಒಂದು ಕಾಲದಲ್ಲಿ ನಟಿ ಶ್ರೀದೇವಿ ಅವರು ಟಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದರು. ತೆಲುಗು ಚಿತ್ರರಂಗವನ್ನು ಆಳಿದ್ದ ಶ್ರೀದೇವಿ ಅವರಿಗೆ ಅಲ್ಲಿ ಅಪಾರ ಅಭಿಮಾನಿ ಬಳಗವಿತ್ತು. ಈಗ ಜಾನ್ವಿ ಕಪೂರ್ ಕೂಡ ತಾಯಿಯ ಹಾದಿಯಲ್ಲೇ ಸಾಗಲು ಸಿದ್ಧರಾಗುತ್ತಿದ್ದಾರೆ ಎಂಬುದಕ್ಕೆ ಅವರು ಈ ಕಾರ್ಯಕ್ರಮದಲ್ಲಿ ಅರಳು ಹುರಿದಂತೆ ತೆಲುಗಿನಲ್ಲಿ ಮಾತನಾಡಿದ್ದೇ ಸಾಕ್ಷಿ. ತೆಲುಗು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಗೌರವ ಈ ಭಾಷಣದಲ್ಲಿ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: ಕನ್ನಡ ಕಲಿತು ವೇದಿಕೆ ಮೇಲೆ ಮಾತನಾಡಿದ ಜಾನ್ವಿ ಕಪೂರ್ 

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆಯಾಗುತ್ತಿದೆ. ಒಂದು ವೇಳೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆದರೆ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜಾನ್ವಿ ಕಪೂರ್ ಅವರ ಬೇಡಿಕೆ ದುಪ್ಪಟ್ಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ರೀತಿ ಅವರು ಮುಂದುವರಿದರೆ, ತಾಯಿಯಂತೆ ಟಾಲಿವುಡ್‌ನ ಮುಂದಿನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link