Category Archives: Blog

Your blog category

ಲಕ್ಕುಂಡಿ: ಸಿಕ್ಕ ಚಿನ್ನದ ನಿಧಿ ಸರ್ಕಾರಕ್ಕೆ ಒಪ್ಪಿಸಿದ್ದ ಕುಟುಂಬಕ್ಕೆ ಬಂಪರ್ ಗಿಫ್ಟ್​,! – Kannada News | Lakkundi Gram panchayat Announces site to Ritti family who handed over the Gold treasure

ಗದಗ, (ಜನವರಿ 22): ಲಕ್ಕುಂಡಿ (Lakkundi) ಗ್ರಾಮದಲ್ಲಿ ಮನೆ ಪಾಯಾ ಅಗೆಯುವ ವೇಳೆ ಸಿಕ್ಕ ಚಿನ್ನದ ನಿಧಿಯನ್ನು (Gold Treasure) ಹಸ್ತಾಂತರಿಸಿದ್ದ ರಿತ್ತಿ ಕುಟುಂಬಕ್ಕೆ (Ritti family) ಕೊನೆಗೂ ಜಿಲ್ಲಾಡಳಿತ ಸಹಾಯಹಸ್ತ ಚಾಚಿದೆ. ಹೌದು..ರಿತ್ತಿ ಕುಟುಂಬ 30*40 ಸೈಟ್‌ ನೀಡುವುದಾಗಿ ಲಕ್ಕುಂಡಿ ಗ್ರಾಮ ಪಂಚಾಯತ್‌ ಘೋಷಣೆ ಮಾಡಿದೆ. ಇಂದು (ಜನವರಿ 22) ಲಕ್ಕುಂಡಿ ಗ್ರಾಮ‌ ಪಂಚಾಯತಿಯ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು,   ಇದೇ ವೇಳೆ ನಿಧಿಯನ್ನು ಹಸ್ತಾಂತರ ಮಾಡಿದ ರಿತ್ತಿ ಕುಟುಂಬದ ಸದಸ್ಯರನ್ನು ಸನ್ಮಾನ ಮಾಡಲಾಯಿತು. ಇನ್ನು ಜನವರಿ 26ರಂದು ಗಣರಾಜ್ಯೋತ್ಸವದಂದು ಜಾಗದ ಪ್ರಮಾಣ ಪತ್ರವನ್ನು ಕುಟುಂಬಕ್ಕೆ ಹಸ್ತಾಂತರವಾಗಲಿದೆ.  ಇನ್ನು ನಿವೇಶನ ಜೊತೆ ಎಲ್ಲ ಶಾಲೆಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ.

ಸೈಟ್ ನೀಡುವ ನಿರ್ಣಯ ಪಾಸ್

ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಅಧಿಕಾರಿಗಳು, ಸರ್ವ ಸದಸ್ಯರ ಸಮ್ಮುಖದಲ್ಲಿ ಲಕ್ಕುಂಡಿ ಮಾರುತಿ ನಗರದಲ್ಲಿ ರಿತ್ತಿ ‌ಕುಟುಂಬಕ್ಕೆ 30*40 ಸೈಟ್ ನೀಡುವ ನಿರ್ಣಯವನ್ನು ಪಾಸ್ ಮಾಡಲಾಯಿತು. ಮಾನವೀಯ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಗ್ರಾಮ ಪಂಚಾಯತ್‌ ಸೈಟ್‌ ನೀಡುವ ನಿರ್ಧಾರ ತೆಗೆದಕೊಂಡಿದೆ. ಮುಂದೆ ಸಚಿವರು, ಶಾಸಕರ ಅನುದಾನದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಲಾಗಿದೆ. ಅಲ್ಲದೇ ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ, ಪ್ರಜ್ವಲ್ ತಾಯಿ ಗಂಗಮ್ಮಗೆ ಕೆಲಸ ಕೊಡುವುದಾಗಿ ಪಂಚಾಯತ್‌ ಭರವಸೆ ನೀಡಿದೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಕುಟುಂಬಕ್ಕೆ ಸರ್ಪದ ಭಯದ ನಡುವೆಯೂ ಶುಕ್ರದೆಸೆ

ಶಾಲೆಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ

ಕುಟುಂಬಕ್ಕೆ ನಿವೇಶನ ಮಾತ್ರವಲ್ಲದೇ  ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆಂಚಪ್ಪ ಪೂಜಾರ್ ಪ್ರತಿಕ್ರಿಯಿಸಿದ್ದು, ಜನವರಿ 10 ರಂದು ಪ್ರಜ್ವಲ್ ರಿತ್ತಿ‌ ಮನೆ ಪಾಯ ಅಗೆಯುವಾಗ 466 ಗ್ರಾಮ ಚಿನ್ನ ಪತ್ತೆಯಾಗಿತ್ತು. ಬಳಿಕ ಪ್ರಜ್ವಲ್ ರಿತ್ತಿ, ತಾಯಿ ಕಸ್ತೂರೆವ್ವ ರಿತ್ತಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಕುಟುಂಬದ ಪ್ರಾಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯತಿಯಿಂದ 30×40 ವಿಸ್ತೀರ್ಣ ನಿವೇಶನ ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಲಕ್ಕುಂಡಿ ಗ್ರಾಮದ ಎಲ್ಲ ಶಾಲೆ, ಕಾಲೇಜುಗಳಲ್ಲಿ ಪ್ರಜ್ವಲ್ ರಿತ್ತಿ ಫೋಟೋ ಹಾಕಲು ತೀರ್ಮಾನಿಸಲಾಗಿದೆ. ಯಾಕಂದರೆ ಚಿಕ್ಕ ವಯಸ್ಸಿನಲ್ಲೇ ಪ್ರಜ್ವಲ್ ಪ್ರಯಾಣಿಕ ಮೆರೆದಿರುವುದು ಎಲ್ಲಾ ಮಕ್ಕಳಿಗೆ ಮಾದರಿಯಾಗಿದ್ದಾನೆ. ಹೀಗಾಗಿ ಪ್ರಜ್ವಲ್ ನೋಡಿ ಮಕ್ಕಳಲ್ಲೂ ಪ್ರಮಾಣಿಕತೆ ಹೆಚ್ಚಲಿ ಅನ್ನೋ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇನ್ನು ಸಿಕ್ಕ ನಿಧಿಯನ್ನ ಪ್ರಮಾಣಿಕವಾಗಿ ಸರ್ಕಾರಕ್ಕೆ ನೀದಿ ಔದರ್ಯ ಮೆರೆದಿದ್ದ ಬಡ ಕುಟುಂಬ ನಿವೇಶನ, ಮನೆ ನೀಡಬೇಕೆಂದು ಟಿವಿ9 ನಿರಂತರ ವರದಿ ಮಾಡಿತ್ತು. ಇದರ ಫಲವಾಗಿ ಕುಟುಂಬಕ್ಕೊಂದು ಸೂರು ಸಿಕ್ಕಿದೆ. ಇದರಿಂದ ಪ್ರಜ್ವಲ್ ಹಾಗೂ ತಾಯಿ ಕಸ್ತೂರೆವ್ವ ರಿತ್ತಿ ಸಂತಸಗೊಂಡಿದ್ದು, ಟಿವಿ9ಗೆ ಧನ್ಯವಾದ ತಿಳಿಸಿದರು.

ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ

ನಿಧಿ ಸಿಕ್ಕಿದ್ದೇ ಸಿಕ್ಕಿದ್ದು ಗ್ರಾಮದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸಕ್ರಿಯ ಸಹಯೋಗದೊಂದಿಗೆ ಉತ್ಖನನ ನಡೆಯುತ್ತಿದೆ. ನುರಿತ ತಜ್ಞರು ಮತ್ತು ಸಿಬ್ಬಂದಿ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಸಮ್ಮುಖದಲ್ಲಿ ಕಳೆದ ಆರು ದಿನಗಳಿಂದ ಉತ್ಖನನ ಕಾರ್ಯ ಮುಂದುವರೆದಿದ್ದು, ಪ್ರತಿ ದಿನ ಒಂದಲ್ಲ ಒಂದು ವಸ್ತುಗಳು ಪತ್ತೆಯಾಗುತ್ತಲೇ ಇವೆ. ಭೂಮಿ ಅಗೆದಾಗೆಲ್ಲ ಹಳೇ ಕಾಲದ ವಸ್ತುಗಳು ಸಿಗುತ್ತಿವೆ. ಇದರಿಂದ ಇನ್ನಷ್ಟು ಅಗೆದರೆ ಏನೇನು ಸಿಗಬಹುದು ಎನ್ನುವ ಕೌತುಕ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡ ಝಕಿಯಾ ಮುಲ್ಲಾ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್: ಮದ್ವೆ ಆಗಬೇಕಿದ್ದವನೇ ಹಂತಕ! – Kannada News | Big Twist To Dharwad Zakia Mulla Murder Case: Boyfriend Kills her

ಧಾರವಾಡ, (ಜನವರಿ 22): ಕೆಲಸ ಹುಡುಕಲೆಂದು ಮನೆಯಿಂದ ಹೊರಹೋಗಿದ್ದ 19 ವರ್ಷದ ಯುವತಿ ಝಕಿಯಾ ಮುಲ್ಲಾ (Zakia Mulla Murder Case) ಶವ ಧಾರವಾಡ (Dharwad) ನಗರದ ಹೊರಹೊಲಯದ ಮನಸೂರು ರಸ್ತೆಯ ಡೈರಿ ಬಳಿ ಪತ್ತೆಯಾಗಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ಪ್ರೀತಿಸುತ್ತಿದ್ದ ಪ್ರಿಯಕರ ಸಾಬೀರ್ ಮುಲ್ಲಾನೇ ಝಕಿಯಾಳನ್ನು ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದರಿಂದ ಮನೆಯವರು ಸಹ ಮದುವೆಗೆ ಒಪ್ಪಿದ್ದು, ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಲು ತೀರ್ಮಾನಿಸಿದ್ದರು. ಆದ್ರೆ, ಇದೀಗ ಯುವತಿಯನ್ನು ಮದುವೆಯಾಗಬೇಕಿದ್ದ ಸಾಬೀರ್ ಮುಲ್ಲಾ ಎನ್ನುವವನೇ ವೇಲ್‌ನಿಂದ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ಹತ್ಯೆಗೆ ಕಾರಣವೇನು?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಝಕಿಯಾ ಮತ್ತು ಸಾಬೀರ್ ಮುಲ್ಲಾ ಸಂಬಂಧಿಕರಾಗಿದ್ದು, ಇವರಿಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ಮಾತುಕತೆ ನಡೆಸಿದ್ದರು. ಜನವರಿ 20ರ ಸಂಜೆ ಇಬ್ಬರೂ ಹೊರಗಡೆ ಸುತ್ತಾಡಲು ಹೋಗಿದ್ದರು. ಈ ವೇಳೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜೋರು ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಸಾಬೀರ್, ವೇಲ್‌ನಿಂದಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ, ಇಷ್ಟಪಟ್ಟವನೊಂದಿಗೆ ಬಾಳುವ ಮೊದಲೇ ದುರಂತ ಅಂತ್ಯ

ಹತ್ಯೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದ ಹಂತಕ

ಆಘಾತಕಾರಿ ವಿಚಾರವೆಂದರೆ, ಹತ್ಯೆ ನಡೆದ ಸ್ಥಳದಲ್ಲಿದ್ದ ಆರೋಪಿ ಸಾಬೀರ್ ಮುಲ್ಲಾ ತಾನೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದ. ಆ ನಂತರ ಸ್ಥಳಕ್ಕೆ ಪೊಲೀಸರು ಬಂದಾಗಲೂ ಅಲ್ಲೇ ಇದ್ದು ಏನೂ ಅರಿಯದವನಂತೆ ನಟಿಸಿದ್ದ. ಆದರೆ, ಆತನ ನಡವಳಿಕೆಯ ಮೇಲೆ ಅನುಮಾನಗೊಂಡ ಪೊಲೀಸರು ,ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ.

ಸದ್ಯ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು, ಸಾಬೀರ್ ಮುಲ್ಲಾನನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:03 pm, Thu, 22 January 26

Source link

ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳುವ ಮೊದಲು ಈ ಸಂಕೇತಗಳು ಕಾಣಿಸಿಕೊಳ್ಳುತ್ತವೆ; ಈ ಬಗ್ಗೆ ಇರಲಿ ಎಚ್ಚರ – Kannada News | If these signs appear, the pressure cooker may explode, be aware of this

ಅನ್ನ ಬೇಯಿಸುವುದರಿಂದ ಹಿಡಿದು ಸಾಂಬಾರ್‌ ಮಾಡುವವರೆಗೆ ಹೆಚ್ಚಿನ ಅಡುಗೆಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿಯೇ (pressure cooker) ಮಾಡಲಾಗುತ್ತದೆ. ಹೀಗೆ ಅಡುಗೆಗೆ ಕುಕ್ಕರ್‌ ಬಳಸುವುದರಿಂದ ಅಡುಗೆ ಬೇಗ ತಯಾರಾಗುವುದು ಮಾತ್ರವಲ್ಲದೆ ನಮ್ಮ ಸಮಯ ಮತ್ತು ಗ್ಯಾಸ್‌ ಕೂಡ ಉಳಿತಾಯವಾಗುತ್ತದೆ. ಈ ಕುಕ್ಕರ್‌ನಿಂದ ಎಷ್ಟು ಉಪಯೋಗವಿದೆಯೋ ಅದೇ ರೀತಿ ಅದನ್ನು ಸರಿಯಾದ ರೀತಿ ಬಳಸದಿದ್ದರೇ, ಅಪಾಯವೂ ಕೂಡ ಎದುರಾಗುತ್ತದೆ. ಹೌದು ಕೆಲವೊಂದು ಬಾರಿ ಅಡುಗೆ ಮಾಡುವ ವೇಳೆ ಇದ್ದಕ್ಕಿದ್ದಂತೆ ಕುಕ್ಕರ್‌ ಸ್ಫೋಟಗೊಳ್ಳುತ್ತದೆ. ಜೊತೆಗೆ ಕುಕ್ಕರ್‌ ಸ್ಫೋಟಗೊಳ್ಳುವ ಮೊದಲು ಕೆಲವು ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಗಳನ್ನು ಅರಿತು ಸಮಯಕ್ಕೆ ಸರಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಾಗ ಪ್ರೆಶರ್‌ ಕುಕ್ಕರ್‌ ಸ್ಫೋಟಗೊಳ್ಳುವುದನ್ನು ತಡೆಯಬಹುದು. ಹಾಗಾದ್ರೆ ಆ ಸೂಚನೆಗಳು ಯಾವುವು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳುವ ಮೊದಲು ಕಾಣಿಸಿಕೊಳ್ಳುವ ಸಂಕೇತಗಳಿವು:

ವಿಚಿತ್ರ ಶಬ್ದ ಅಥವಾ ಸುಡುವ ವಾಸನೆ: ಕುಕ್ಕರ್ ಸ್ಫೋಟಗೊಳ್ಳುವ ಮೊದಲು ವಿಚಿತ್ರ ಶಬ್ದ ಅಥವಾ ಸುಡುವ, ತಳ ಹಿಡಿದ ವಾಸನೆ ಬರಬಹುದು. ಇದು ಎಚ್ಚರಿಕೆಯ ಸಂಕೇತವಾಗಿದೆ. ಈ ಲಕ್ಷಣಗಳು ಕಾಣಿಸಿದರೆ ತಕ್ಷಣ ಗ್ಯಾಸ್‌ ಆಫ್‌ ಮಾಡಿ.

ಅತಿಯಾದ ಶಿಳ್ಳೆ : ನೀವು ಕುಕ್ಕರ್‌ನಲ್ಲಿ ಅಡುಗೆ ಮಾಡಲು ಪ್ರಾರಂಭಿಸಿದಾಗ ಅದು ತುಂಬಾ ಜೋರಾಗಿ ಮತ್ತು ನಿರಂತರವಾಗಿ ವಿಶಿಲ್ ಹೊಡೆಯುವಾಗಲೆಲ್ಲಾ, ಗ್ಯಾಸ್ ಅನ್ನು ಆಫ್ ಮಾಡಿ. ಕುಕ್ಕರ್‌ನೊಳಗಿನ ಒತ್ತಡವು ತುಂಬಾ ಹೆಚ್ಚಾದಾಗ ಈ ರೀತಿ ವಿಶಿಲ್‌ ಕೇಳಿಸುತ್ತದೆ ಮತ್ತು ಈ ಒತ್ತಡದ ಕಾರಣದಿಂದ ಗ್ಯಾಸ್‌ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.

ಕುಕ್ಕರ್ ಮುಚ್ಚಳ ಅಲುಗಾಡುವುದು: ಪ್ರೆಶರ್ ಕುಕ್ಕರ್‌ನ ಮುಚ್ಚಳವು ಪದೇ ಪದೇ ಅಥವಾ ನಿರಂತರವಾಗಿ ಅಲುಗಾಡುತ್ತಿದ್ದರೆ, ಅದು ಅಪಾಯದ ಸೂಚನೆಯೂ ಆಗಿರಬಹುದು. ಈ ರೀತಿಯ ಸೂಚನೆ ಕಾಣಿಸಿಕೊಂಡರೆ ತಕ್ಷಣ ಗ್ಯಾಸ್  ಆಫ್ ಮಾಡಿ, ಒತ್ತಡವನ್ನು ಬಿಡುಗಡೆ ಮಾಡಿ, ತದನಂತರ ಕುಕ್ಕರ್ ತೆರೆದು ಪರಿಶೀಲಿಸಿ.

ರಬ್ಬರ್ ಗ್ಯಾಸ್ಕೆಟ್ ಹೊರಬರುವುದು: ಪ್ರೆಶರ್ ಕುಕ್ಕರ್ ಮೇಲಿನ ರಬ್ಬರ್‌ ರಿಂಗ್ ಮೇಲೇರಲು ಪ್ರಾರಂಭಿಸಿದರೆ ಅಥವಾ ಕರಗಿದಂತೆ ಕಂಡುಬಂದರೆ, ತಕ್ಷಣ ಗ್ಯಾಸ್ ಆಫ್ ಮಾಡಿ. ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ಕುಕ್ಕರ್ ಸ್ಫೋಟಗೊಳ್ಳುವುದರಿಂದ ಅಡುಗೆಮನೆಯಲ್ಲಿ ಸಂಭವಿಸುವ ಅಪಘಾತಗಳನ್ನು ನೀವು ತಡೆಯಬಹುದು.

ಪ್ರೆಶರ್ ಕುಕ್ಕರ್ ಸ್ಫೋಟಗೊಳ್ಳದಂತೆ ತಡೆಯುವುದು ಹೇಗೆ?

ವೆಂಟ್ ಪೈಪ್ ಮುಚ್ಚಿಹೋಗಲು ಬಿಡಬೇಡಿ: ಕೆಲವೊಮ್ಮೆ, ಕುಕ್ಕರ್‌ನಲ್ಲಿ ಅಡುಗೆ ಮಾಡಿದ ನಂತರ ಸರಿಯಾಗಿ ಸ್ವಚ್ಛಗೊಳಿಸದ ಕಾರಣ, ವೆಂಟ್ ಪೈಪ್ ಮುಚ್ಚಿಹೋಗುತ್ತದೆ. ಇದರಿಂದಾಗಿ, ಕುಕ್ಕರ್ ಒಳಗಿನ ಉಗಿ ಹೊರಬರಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಕುಕ್ಕರ್ ಮೇಲಿನ ಒತ್ತಡ ಹೆಚ್ಚಾಗುತ್ತದೆ ಮತ್ತು ಅದು ಸ್ಫೋಟಗೊಳ್ಳಬಹುದು. ಆದ್ದರಿಂದ ಯಾವಾಗಲೂ ಇದರ ಬಗ್ಗೆ ಗಮನ ಕೊಡಿ.

ರಬ್ಬರ್ ಬದಲಾಯಿಸುತ್ತಿರಿ: ಕುಕ್ಕರ್‌ನ ಮುಚ್ಚಳವು ರಬ್ಬರ್ ಸೀಲ್ ಅನ್ನು ಹೊಂದಿದ್ದು, ಇದು ಉಗಿ ಮತ್ತು ನೀರು ಹೊರಹೋಗುವುದನ್ನು ತಡೆಯುತ್ತದೆ. ಜೊತೆಗೆ ಇದು ಶಿಳ್ಳೆ ಸಂಪೂರ್ಣ ಮತ್ತು ಸಮಯಕ್ಕೆ ಸರಿಯಾಗಿ ಬರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಅಡುಗೆ ಮಾಡುವಾಗ ರಬ್ಬರ್ ಸವೆದು ಹೋಗುವ, ಹರಿದು ಹೋಗುವ ಕಾರಣ ಇದನ್ನು ನೀವು ಮೂರು ತಿಂಗಳಿಗೊಮ್ಮೆ ಬದಲಾಯಿಸುತ್ತಿರಬೇಕು.

ಇದನ್ನೂ ಓದಿ: ಆಹಾರ ಪದಾರ್ಥಗಳನ್ನು ಪ್ರೆಶರ್‌ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಕುಕ್ಕರ್ ಹೆಚ್ಚಿನ ಪ್ರಯಾಣದ ಆಹಾರ ತುಂಬಿಸಿ ಬೇಯಿಸಬೇಡಿ:  ಕುಕ್ಕರ್‌ ಸಂಪೂರ್ಣ ತುಂಬುವವರೆಗೆ ಅದರಲ್ಲಿ ತರಕಾರಿ, ಆಹಾರ ಹಾಕಿ ಬೇಯಿಸಬಾರದು. ಹೀಗೆ ಸಂಪೂರ್ಣವಾಗಿ ತುಂಬಿಸುವುದರಿಂದ ಒಳಗೆ ಉತ್ಪತ್ತಿಯಾಗುವ ಉಗಿ ಹೋಗಲು ಯಾವುದೇ ಮಾರ್ಗವಿರುವುದಿಲ್ಲ. ಇದು ಒತ್ತಡದ ಮಟ್ಟವು ವೇಗವಾಗಿ ಏರಲು ಕಾರಣವಾಗುತ್ತದೆ ಮತ್ತು ಇದರಿಂದ ಕುಕ್ಕರ್‌ ಸ್ಫೋಟಗೊಳ್ಳಬಹುದು. ಆದ್ದರಿಂದ, ಯಾವಾಗಲೂ ಕುಕ್ಕರನ್ನು ಅದರ ಸಾಮರ್ಥ್ಯದ 2/3 ರಷ್ಟು ಮಾತ್ರ ತುಂಬಿಸಿ. ಜೊತೆಗೆ ಸರಿಯಾದ ಪ್ರಮಾಣದಲ್ಲಿ ನೀರು ಸೇರಿಸುವುದು ಸಹ ಮುಖ್ಯವಾಗಿರುತ್ತದೆ.

ಉತ್ತಮ ಗುಣಮಟ್ಟದ ಕುಕ್ಕರ್‌ಗಳ ಬಳಕೆ: ಯಾವಾಗಲೂ ಐಎಸ್‌ಐ ಗುರುತು ಹೊಂದಿರುವ ಉತ್ತಮ ಗುಣಮಟ್ಟದ ಕುಕ್ಕರ್‌ಗಳನ್ನೇ ಬಳಸಿ. ಏಕೆಂದರೆ ಇವುಗಳಲ್ಲಿ ಬಳಸಲಾಗುವ ವಸ್ತುಗಳು ಮತ್ತು ಸುರಕ್ಷತಾ ಕವಾಟಗಳು ಬಲಿಷ್ಟವಾಗಿರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲೂ ರಸ್ತೆಗಿಳಿದ ಡಬಲ್​​ ಡೆಕ್ಕರ್​​ ಬಸ್​​ಗಳು: ಟಿಕೆಟ್​​ ದರ, ಬುಕ್ಕಿಂಗ್​​ ಕುರಿತ ಮಾಹಿತಿ ಇಲ್ಲಿದೆ – Kannada News | KSTDC Launches Double Decker Bus Tours in Bengaluru, Booking and Price Details

ಡಬಲ್​​ ಡೆಕ್ಕರ್​​ ಬಸ್​​ ಸಂಚಾರಕ್ಕೆ ಚಾಲನೆ

ಬೆಂಗಳೂರು, ಜನವರಿ 22: ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಬಳಿಕ ಬೆಂಗಳೂರಲ್ಲೂ ಪ್ರವಾಸಿಗರಿಗೆ ಲಂಡನ್‌ ಮಾದರಿಯ ಬಸ್‌ ಸೇವೆ ನೀಡಲು ಕೆಎಸ್‌ಟಿಡಿಸಿ ಮುಂದಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಗರದ ಪ್ರಮುಖ ಸ್ಥಳಗಳನ್ನು ವೀಕ್ಷಿಸಲು 3 ಬಸ್‌ಗಳನ್ನು ಪರಿಚಯಿಸಿದ್ದು, ಅದಾಗಲೇ ಅವುಗಳಿಗೆ ಚಾಲನೆಯೂ ಸಿಕ್ಕಿದೆ. ಬೆಂಗಳೂರಿನ ಪ್ರವಾಸೋದ್ಯಮವನ್ನು ಹೆಚ್ಚಿಸುವ ಉದ್ದೇಶದಿಂದ ಈ ಬಸ್​​ಗಳ ಓಡಾಟ ಆರಂಭಿಸಲಾಗಿದ್ದು, ಐಷಾರಾಮಿ ಬಸ್​​ನಲ್ಲಿ ಕೂತು ನಗರದ ಅಂದ ಆಸ್ವಾಧಿಸುವ ಅವಕಾಶವನ್ನು ಪ್ರಯಾಣಿಕರಿಗೆ ಒದಗಿಸಲಾಗಿದೆ.

ಬಸ್​​ನ ವಿಶೇಷತೆ ಏನು?

ಡಬಲ್​​ ಡೆಕ್ಕರ್​​ ಹೊಂದಿರುವ ಈ ಬಸ್​​ನಲ್ಲಿ ಐಷಾರಾಮಿ ಆಸನಗಳು, ಮೈಕ್ ಸಿಸ್ಟಂ ವ್ಯವಸ್ಥೆಗಳಿವೆ. ಹವಾನಿಯಂತ್ರಣ ಸೌಲಭ್ಯ ಹೊಂದಿರುವ ಬಸ್‌ನ ಲೋವರ್‌ ಡೆಕ್‌ನಲ್ಲಿ 24 ಐಷಾರಾಮಿ ಆಸನಗಳಿದ್ದು, ಓಪನ್‌ ಅಪ್ಪರ್‌ ಡೆಕ್‌ನಲ್ಲಿ20 ಆಸನಗಳಿವೆ. ಜೊತೆಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕುರಿತು ಪ್ರವಾಸಿಗರಿಗೆ ಪರಿಚಯಿಸಲು ಮೈಕ್‌ ಸಿಸ್ಟಂ ಕೂಡ ಅಳವಡಿಸಲಾಗಿದೆ.

ಇದನ್ನೂ ಓದಿ:  ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​; KSTDC ವಿಶೇಷ ಪ್ಯಾಕೇಜ್

ಬಸ್​​ ಸಂಚರಿಸುವ ಮಾರ್ಗ

ರವೀಂದ್ರ ಕಲಾಕ್ಷೇತ್ರದಿಂದ ಬಸ್​​ ಸಂಚಾರ ಆರಂಭವಾಗಲಿದ್ದು ಕಾರ್ಪೊರೆಷನ್‌ ಸರ್ಕಲ್‌, ಹಡ್ಸನ್‌ ಸರ್ಕಲ್‌, ಕಸ್ತೂರಬಾ ರಸ್ತೆ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆ, ಅಂಚೆ ಕಚೇರಿ, ಹೈಕೋರ್ಟ್‌ / ವಿಧಾನಸೌಧ, ಕೆ.ಆರ್‌. ಸರ್ಕಲ್‌, ಹಡ್ಸನ್‌ ಸರ್ಕಲ್‌, ಕಾರ್ಪೊರೇಷನ್‌ ಸರ್ಕಲ್‌ ಮಾರ್ಗವಾಗಿ ಮರಳಿ ರವೀಂದ್ರ ಕಲಾಕ್ಷೇತ್ರಕ್ಕೆ ಬರಲಿದೆ.

ಟಿಕೆಟ್​​ ದರ ಎಷ್ಟು?

ಡಬ್ಬಲ್​​ ಡೆಕ್ಕರ್​​ ಬಸ್​​ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತಲಾ 180 ರೂ. ಟಿಕೆಟ್​​ ದರ ಇರಲಿದೆ. ಒಮ್ಮೆ ಹಣ ಪಾವತಿಸಿ ಬ್ಯಾಂಡ್‌ ಪಡೆದರೆ ದಿನವಿಡೀ ಎಷ್ಟು ಬಾರಿಯಾದರೂ ಯಾವುದೇ ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಸಂಚರಿಸಬಹುದು. ಆದರೆ ಬ್ಯಾಂಡ್​​ನ ಇತರರಿಗೆ ವರ್ಗಾಯಿಸುವಂತಿಲ್ಲ. ಒಂದು ವೇಳೆ ಬ್ಯಾಂಡ್‌ ಹರಿದು ಹೋದರೆ ಮತ್ತೆ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಬಸ್‌ಗಳು ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಸಂಚಾರ ನಡೆಸಲಿವೆ.

ಟಿಕೆಟ್​ ಬಯಕ್ಕಿಂಗ್​​ ಹೇಗೆ?

ಕೆಎಸ್‌ಟಿಡಿಸಿ ವೆಬ್‌ಸೈಟ್‌ ವಿಳಾಸ: www.kstdc.co ಅಥವಾ ದೂರವಾಣಿ ಸಂಖ್ಯೆ 080 4334 4334/35 ಅಥವಾ ಮೊಬೈಲ್​​ ಸಂಖ್ಯೆ 8970650070/8970650075 ಮೂಲಕ ಡಬಲ್‌ ಡೆಕ್ಕರ್‌ ಬಸ್‌ ಬುಕ್ಕಿಂಗ್‌ ಮಾಡಬಹುದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ತಂಡ ಸೇರಲಿರುವ ಮತ್ತೊಬ್ಬ ಸ್ಟಾರ್ ಹೀರೋ – Kannada News | Dhurandhar 2 movie will have Vicky Kaushal in guest role

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬಂದಿದೆ, ಆದರೆ ಈಗಲೂ ಸಹ ಹಲವು ಕಡೆಗಳಲ್ಲಿ ತುಂಬಿದ ಗೃಹಗಳ ಪ್ರದರ್ಶನವನ್ನು ಕಾಣುತ್ತಿದೆ ‘ಧುರಂಧರ್’ ಸಿನಿಮಾ. ಸಿನಿಮಾದ ಹವಾ ಎಷ್ಟಿದೆಯಂತೆ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಲಿರುವ ಸಿನಿಮಾದ ಎರಡನೇ ಭಾಗವಾದ ‘ಧುರಂಧರ್ 2’ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ‘ಧುರಂಧರ್’ ದೊಡ್ಡ ಹಿಟ್ ಆಗಿರುವ ಕಾರಣ, ‘ಧುರಂಧರ್ 2’ ಸಿನಿಮಾವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಿರ್ಮಿಸಿಲು ಚಿತ್ರತಂಡ ಸಜ್ಜಾಗಿದ್ದು, ಇದೀಗ ‘ಧುರಂಧರ್ 2’ ಸಿನಿಮಾಕ್ಕೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟನ ಎಂಟ್ರಿ ಸಹ ಆಗಲಿದೆ ಎನ್ನಲಾಗುತ್ತಿದೆ.

‘ಧುರಂಧರ್’ ಸಿನಿಮಾ ನಿರ್ದೇಶಿಸಿರುವ ಆದಿತ್ಯ ಧರ್ ಅವರ ಮೊದಲ ಸಿನಿಮಾ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’. ‘ಧುರಂಧರ್’ ರೀತಿ ಆ ಸಿನಿಮಾ ಸಹ ಸೈನ್ಯ ಮತ್ತು ದೇಶಪ್ರೇಮದ ಜಾನರ್ ಅನ್ನು ಒಳಗೊಂಡಿತ್ತು. ಸಿನಿಮಾನಲ್ಲಿ ವಿಕ್ಕಿ ಕೌಶಲ್ ನಾಯಕನಾಗಿ ನಟಿಸಿದ್ದರು. ‘ಉರಿ’ಗೆ ಮೊದಲು ಒಳ್ಳೆಯ ನಟ ಎಂದಷ್ಟೆ ಎನಿಸಿಕೊಂಡಿದ್ದ ವಿಕ್ಕಿ ಕೌಶಲ್, ‘ಉರಿ’ಯ ಬಳಿಕ ಸ್ಟಾರ್ ನಟ ಆದರು. ರೊಮ್ಯಾಂಟಿಕ್, ರಿಯಲ್ ಲೈಫ್ ಕತೆಗಳಲ್ಲಿ ಮಾತ್ರವಲ್ಲ ಪಕ್ಕಾ ಆಕ್ಷನ್ ಸಿನಿಮಾಗಳಿಗೂ ಸರಿಹೊಂದುವ ನಟ ತಾವು ಎಂಬುದನ್ನು ವಿಕ್ಕಿ ಕೌಶಲ್ ‘ಉರಿ’ ಮೂಲಕ ಸಾಬೀತುಪಡಿಸಿದರು. ಇದೀಗ ಆದಿತ್ಯ ಧರ್ ಅವರು, ತಮ್ಮ ಮೊದಲ ಸಿನಿಮಾದ ನಾಯಕನನ್ನು ‘ಧುರಂಧರ್ 2’ ಸಿನಿಮಾಕ್ಕೆ ಕರೆ ತರಲು ಮುಂದಾಗಿದ್ದಾರೆ.

ಇದೀಗ ಹರಿದಾಡುತ್ತಿರುವ ಸುದ್ದಿಗಳಂತೆ ವಿಕ್ಕಿ ಕೌಶಲ್ ಅವರು ‘ಧುರಂಧರ್ 2’ ಸಿನಿಮಾನಲ್ಲಿ ಇರಲಿದ್ದಾರಂತೆ. ಅಸಲಿಗೆ ‘ಉರಿ’ ಸಿನಿಮಾನಲ್ಲಿ ‘ಧುರಂಧರ್’ ಸಿನಿಮಾದ ನಾಯಕ ಜಸ್ಕೀರತ್ ಸಿಂಗ್ ರಂಗಿ (ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಿಜ ಹೆಸರು) ಉಲ್ಲೇಖ ಇದೆ. ‘ಉರಿ’ ಸಿನಿಮಾನಲ್ಲಿ ನಾಯಕ, ಮಹಿಳಾ ಸೈನ್ಯಾಧಿಕಾರಿಯೊಟ್ಟಿಗೆ ಮಾತನಾಡುವಾಗ ಆಕೆ ‘ಜಸ್ಕೀರತ್ ಸಿಂಗ್ ರಂಗಿ ನನ್ನ ಪತಿ, ಅವರು ನೌಶೇರಾನಲ್ಲಿ ನಡೆದ ಆಪರೇಷನ್​​ನಲ್ಲಿ ಹುತಾತ್ಮರಾಗಿದ್ದಾರೆ’ ಎಂದು ಹೇಳುತ್ತಾರೆ. ಅಂತೆಯೇ ಇದೀಗ ‘ಧುರಂಧರ್ 2’ ಸಿನಿಮಾನಲ್ಲಿ ‘ಉರಿ’ ಸಿನಿಮಾದ ನಾಯಕ ವಿಹಾನ್ ಶೇರ್ಗಿಲ್ (ವಿಕ್ಕಿ ಕೌಶಲ್ ಪಾತ್ರದ ಹೆಸರು) ಸಹ ಎಂಟ್ರಿ ಕೊಡಲಿದ್ದಾರೆ. ಆದರೆ ಇದು ಅತಿಥಿ ಪಾತ್ರ ಮಾತ್ರವೇ ಆಗಿರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಸಿನಿಪ್ರಿಯರಿಗೆ ಖುಷಿ ಸುದ್ದಿ; ಒಟಿಟಿಗೆ ಬರೋಕೆ ರೆಡಿ ಆಯ್ತು ‘ಧುರಂಧರ್’

‘ಧುರಂಧರ್’ ಸಿನಿಮಾನಲ್ಲಿ ಅಕ್ಷಯ್ ಕುಮಾರ್ ಪಾತ್ರ ಸಖತ್ ಹಿಟ್ ಆಗಿದ್ದು, ‘ಧುರಂಧರ್ 2’ ಸಿನಿಮಾನಲ್ಲಿಯೂ ಅವರ ಪಾತ್ರವನ್ನು ಮುಂದುವರೆಸಲಿದ್ದಾರೆ ಎನ್ನಲಾಗುತ್ತಿದೆ. ‘ಧುರಂಧರ್’ ಸಿನಿಮಾನಲ್ಲಿ ಆ ಪಾತ್ರ ಮರಣ ಹೊಂದಿದೆಯಾದರೂ ಫ್ಲ್ಯಾಷ್​​ ಬ್ಯಾಕ್​​ಗಳಲ್ಲಿ ಅಕ್ಷಯ್ ಪಾತ್ರವನ್ನು ಮತ್ತೆ ತರಲಾಗುತ್ತದೆಯಂತೆ. ಇದೀಗ ಅದರ ಜೊತೆಗೆ ವಿಕ್ಕಿ ಕೌಶಲ್ ಪಾತ್ರವೂ ಬಂದಲ್ಲಿ ಪ್ರೇಕ್ಷಕರಿಗೆ ಡಬಲ್ ಧಮಾಕ ಆಗಲಿದೆ. ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಯ್ಯೋ ವಿಧಿಯೇ! ಬುದ್ಧಿ ಮಾತು ಹೇಳಿದ್ದಕ್ಕೆ ಅನಾಯಾಸವಾಗಿ ಕೊಲೆಯಾದ ವ್ಯಕ್ತಿ – Kannada News | Hubballi Murder: Man Killed for Advising Relative in Family Feud

ಹುಬ್ಬಳ್ಳಿ, ಜನವರಿ 22: ಆತ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ಹೋಟೆಲ್​​​ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಾ ಸಂಸಾರ ನಡೆಸುತ್ತಿದ್ದ. ಬುದ್ಧ ಮಾತು ಹೇಳಿದ್ದಕ್ಕೆ ಇದೀಗ ಆತನೆ ಬಲಿ (death) ಆಗಿದ್ದಾನೆ. ಮನೆ ಮುಂದೆ ನಿಂತು ಗಲಾಟೆ ಮಾಡುತ್ತಿದ್ದ ಸಂಬಂಧಿಗೆ ಜಗಳ ಮಾಡಬೇಡ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಕೊಳ್ಳೋಣ ಅಂತ ಹೇಳಿದ್ದಕ್ಕೆ ಸಂಬಂಧಿಯೇ ಕಲ್ಲಿನಿಂದ ಹೊಡೆದು ಕೊಲೆ (murder) ಮಾಡಿದ್ದಾನೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಕಳೆದುಕೊಂಡ ಕುಟುಂಬ ಕಂಗಾಲಾಗಿದೆ.

ನಡೆದದ್ದೇನು?

ಹುಬ್ಬಳ್ಳಿ ನಗರದ ಗೌಶಿಯಾ ಟೌನ್​​ನಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ಅಹ್ಮದ್ ರಜಾಕ್​​ (48) ಕೊಲೆಯಾದ ವ್ಯಕ್ತಿ. ಹೋಟೆಲ್​​ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅಹ್ಮದ್ ರಜಾಕ್​ ಕಳೆದ ರಾತ್ರಿ 9 ಗಂಟೆ ಸಮಯದಲ್ಲಿ ಹಳೆ ಹುಬ್ಬಳ್ಳಿ ನಿವಾಸಿ ಸದ್ದಾಂ ಎಂಬಾತ ಕಲ್ಲಿನಿಂದ ಎದೆ ಸೇರಿದಂತೆ ತಲೆಗೆ ಹೊಡೆದಿದ್ದ. ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದ ಅಹ್ಮದ್ ರಜಾಕ್​ನನ್ನ ಕೂಡಲೇ ಹುಬ್ಬಳ್ಳಿ ಕಿಮ್ಸ್​ಗೆ ಕೆರೆದುಕೊಂಡು ಬರಲಾಗಿತ್ತು. ಆದರೆ ಆಸ್ಪತ್ರೆ ಸೇರುವ ಮುನ್ನವೇ ಅಹ್ಮದ್ ರಜಾಕ್ ಕೊನೆಯುಸಿರೆಳೆದಿದ್ದ. ಇನ್ನು ಅಹ್ಮದ್ ರಜಾಕ್​ನನ್ನು ಕೊಲೆ ಮಾಡಿರುವ ಸದ್ದಾಂ ಬೇರಾರು ಅಲ್ಲಾ, ಸಹೋದರನ ಮಗಳ ಗಂಡ. ಬುದ್ಧಿ ಮಾತು ಹೇಳಿದ್ದಕ್ಕೆ ಸದ್ದಾಂ, ಅಹ್ಮದ್ ರಜಾಕ್​​ನನ್ನ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ, ಇಷ್ಟಪಟ್ಟವನೊಂದಿಗೆ ಬಾಳುವ ಮೊದಲೇ ದುರಂತ ಅಂತ್ಯ

ಕೊಲೆಯಾದ ಅಹ್ಮದ್ ರಜಾಕ್, ಗೌಸಿಯಾ ಟೌನ್​ನಲ್ಲಿರುವ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಕಳೆಗಿನ ಮನೆಯಲ್ಲಿ ತಾನಿದ್ದರೆ, ಮೇಲಿನ ಮಹಡಿಯಲ್ಲಿ ಆತನ ಸಹೋದರ ಇಮ್ರಾನ್ ವಾಸವಾಗಿದ್ದ. ಇಮ್ರಾನ್​ನ ಪುತ್ರಿ ನೇಹಾ ಮದುವೆ ಆರು ವರ್ಷದ ಹಿಂದೆ ಸದ್ದಾಂ ಜೊತೆ ಆಗಿತ್ತು. ಆದರೆ ಮದುವೆಯಾದ ನಂತರ ಸದ್ದಾಂ ಮತ್ತು ನೇಹಾ ನಡುವೆ ಪ್ರತಿನಿತ್ಯ ಜಗಳ ವಾಗುತ್ತಿತ್ತಂತೆ. ಹೀಗಾಗಿ ನೇಹಾ ಎರಡು ತಿಂಗಳ ಹಿಂದಷ್ಟೇ ತವರು ಮನೆಗೆ ಬಂದಿದ್ದಳು. ಕಳೆದ ರಾತ್ರಿ ಸದ್ದಾಂ ಮತ್ತು ಆತನ ಕುಟುಂಬದವರು ಇಮ್ರಾನ್ ಮನೆಗೆ ಆಗಮಿಸಿದ್ದರು. ಮನೆಯೊಳಗೆ ಬಾರದೇ ಸದ್ದಾಂ ಹೊರಗಡೆ ನಿಂತು ಗಲಾಟೆ ಮಾಡುತ್ತಿದ್ದ. ಇದನ್ನು ನೋಡಿದ ಅಹ್ಮದ್ ರಜಾಕ್, ಮನೆಯೊಳಗ ಬಂದು ಕೂತು ಮಾತನಾಡಿ. ಸಮಸ್ಯೆಯನ್ನು ಜಮಾತ್​​ಗೆ ಹೋಗಿ ಅಲ್ಲಿ ಹಿರಿಯರ ಮುಂದಿಟ್ಟು ಬಗೆಹರಿಸಿಕೊಳ್ಳೋಣ ಅಂತ ಬುದ್ದಿ ಹೇಳಿದ್ದನಂತೆ.

ಇದರಿಂದ ಕೆರಳಿದ ಸದ್ದಾಂ, ಅಹ್ಮದ್ ರಜಾಕ್ ನನ್ನು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದು, ಹಲ್ಲೆ ಮಾಡಿದ್ದನಂತೆ. ಜೊತೆಗೆ ಜೋರು ಗಲಾಟೆಯಲ್ಲಿ ತಳ್ಳಾಟ ನೂಕಾಟ ಕೂಡ ನಡೆದಿಯಂತೆ. ಈ ವೇಳೆ ಕೈನಿಂದ ಎದೆಗೆ ಹೊಡೆದಿದ್ದು, ಅಷ್ಟೇ ಅಲ್ಲದೆ ತನ್ನ ಬಳಿಯಿದ್ದ ಕೀಯಿಂದ ಸದ್ದಾಂ, ಅಹ್ಮದ್ ರಜಾಕ್ ಮೇಲೆ ಹಲ್ಲೆ ಮಾಡಿದ್ದನಂತೆ. ಈ ಗಲಾಟೆಯಲ್ಲಿ ಅಹ್ಮದ್ ರಜಾಕ್ ಮೃತಪಟ್ಟಿದ್ದಾನೆ.

ಇನ್ನು ಅಹ್ಮದ್ ರಜಾಕ್​ಗೆ ಮೂವರು ಪುತ್ರಿಯರಿದ್ದು, ಓರ್ವ ಪುತ್ರಿಯ ಮದುವೆ ಮಾತ್ರವಾಗಿದೆ. ಇನ್ನಿಬ್ಬರು ಮಕ್ಕಳ ಮದುವೆ ಸೇರಿದಂತೆ ಮನೆಯ ಖರ್ಚು, ವೆಚ್ಚಕ್ಕಾಗಿ ಅಹ್ಮದ್ ರಜಾಕ್ ಪ್ರತಿನಿತ್ಯ ಕೆಲಸ ಮಾಡುತ್ತಿದ್ದ. ಆದರೆ ಸಹೋದರನ ಮಗಳ ವಿಷಯದಲ್ಲಿ ಬುದ್ದಿ ಹೇಳಲು ಹೋಗಿ ಕೊಲೆಯಾಗಿದ್ದಾನೆ.

ಇದನ್ನೂ ಓದಿ: ನನ್ನ ಮಗನಿಗೆ ಹೃದಯಾಘಾತ ಆಗಿಲ್ಲ, ಇದು ಕೊಲೆ?: ಬಾಬಾಜಾನ್ ಸಾವಿಗೆ ಬಿಗ್​ ಟ್ವಿಸ್ಟ್​, ಹೂತಿದ್ದ ಶವವನ್ನು ಹೊರತೆಗೆದ ಅಧಿಕಾರಿಗಳು

ಸದ್ಯ ಘಟನೆಗೆ ಸಂಬಂಧಿಸಿದಂತೆ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ದಾಂ ಸೇರಿದಂತೆ ಆತನ ಕುಟುಂಬದ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮತ್ತೊಂದಡೆ ಅಹ್ಮದ್ ರಜಾಕ್​​ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಅಹ್ಮದ್ ರಜಾಕ್ ಹಲ್ಲೆ ಮಾಡಿದ್ದರಿಂದಲೇ ಮೃತಪಟ್ಟರಾ ಅಥವಾ ಹೃದಯಾಘಾತದಿಂದ ಮೃತಪಟ್ಟಿರೋದಾ ಅನ್ನೋದು ಗೊತ್ತಾಗಲಿದೆ. ಸಮಸ್ಯೆಯನ್ನು ಕೂತು ಮಾತನಾಡಿ ಬಗೆಹರಿಸಿಕೊಂಡಿದ್ದರೆ ಸಂಸಾರ ಸರಿಹೋಗುತ್ತಿತ್ತು. ಆದರೆ ಸದ್ದಾಂ ಸಿಟ್ಟಿನಲ್ಲಿ ಅಹ್ಮದ್ ರಜಾಕ್ ಮೇಲೆ ಹಲ್ಲೆ ಮಾಡಿ ಸಂಕಷ್ಟವನ್ನು ತಂದುಕೊಂಡಿದ್ದು ಮಾತ್ರ ದುರ್ದೈವದ ವಿಚಾರ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದೊಂದಿಗೆ ಟ್ರೇಡ್ ಡೀಲ್; ಯೂರೋಪ್ ಸಂತಸ ಪಡುತ್ತಿರುವುದ್ಯಾಕೆ? – Kannada News | India EU trade deal will create market of 2 billion people, says Ursula

ನವದೆಹಲಿ, ಜನವರಿ 22: ಭಾರತ ಮತ್ತು ಐರೋಪ್ಯ ಒಕ್ಕೂಟದ (European Union) ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡುತ್ತಿದೆ. ಸದ್ಯದಲ್ಲೇ ಟ್ರೇಡ್ ಡೀಲ್​ಗೆ ಸಹಿ ಹಾಕಲಾಗಬಹುದು. 27 ದೇಶಗಳ ಒಕ್ಕೂಟವಾಗಿರುವ ಯೂರೋಪಿಯನ್ ಯೂನಿಯನ್ ಮತ್ತು ಭಾರತದ ನಡುವಿನ ಈ ಒಪ್ಪಂದವನ್ನು ಅತಿದೊಡ್ಡ ಡೀಲ್ ಎಂದು ಬಣ್ಣಿಸಲಾಗುತ್ತಿದೆ. ಅಮೆರಿಕದ ಇತ್ತೀಚಿನ ನಡವಳಿಕೆಯು ಯೂರೋಪ್ ಮತ್ತು ಭಾರತವನ್ನು ಮತ್ತಷ್ಟು ನಿಕಟಗೊಳಿಸಿದೆ. ಒಪ್ಪಂದ ಬೇಗ ಸಾಕಾರಗೊಳ್ಳುವಂತೆ ಮಾಡಿದೆ.

‘ನಾವು ಐತಿಹಾಸಿಕ ವ್ಯಾಪಾರ ಒಪ್ಪಂದದ ಅಂಚಿನಲ್ಲಿ ಇದ್ದೇವೆ. ಕೆಲವರು ಇದನ್ನು ಮದರ್ ಆಫ್ ಆಲ್ ಡೀಲ್ಸ್ ಎಂದು ಕರೆಯುತ್ತಿದ್ದಾರೆ. ಈ ಒಪ್ಪಂದದಿಂದ 200 ಕೋಟಿ ಜನರ ಮಾರುಕಟ್ಟೆ ಸೃಷ್ಟಿಯಾಗುತ್ತದೆ’ ಎಂದು ಯೂರೋಪಿಯನ್ ಯೂನಿಯನ್ ಕಮಿಷನ್​ನ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ (Ursula Von Der Leyen) ಅವರು ಹೇಳಿದ್ದಾರೆ.

ಇದನ್ನೂ ಓದಿ: ಎಟರ್ನಲ್ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯಲ್ ರಾಜೀನಾಮೆ ಕೊಟ್ಟಿದ್ದು ಯಾಕೆ? ಮುಂದೇನು ಅವರ ದಾರಿ?

ಉರ್ಸುಲಾ ಅವರು ಜನವರಿ 25-27ಕ್ಕೆ ಭಾರತಕ್ಕೆ ಬರಲಿದ್ದಾರೆ. ಈ ವೇಳೆ, ಒಪ್ಪಂದಕ್ಕೆ ಅಂತಿಮ ಸ್ಪರ್ಶ ಸಿಗುವ ನಿರೀಕ್ಷೆ ಇದೆ.

‘ಡಾವೋಸ್ ಸಮಿಟ್ ಬಳಿಕ ಮುಂದಿನ ವಾರಾಂತ್ಯದಲ್ಲಿ ನಾನು ಭಾರತಕ್ಕೆ ಭೇಟಿ ನೀಡುತ್ತೇನೆ. ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ. ಆದರೆ, ಐತಿಹಾಸಿಕ ವ್ಯಾಪಾರ ಒಪ್ಪಂದದ ಅಂಚಿನಲ್ಲಿ ಇದ್ದೇವೆ. ಈ ಡೀಲ್​ನಿಂದ 200 ಕೋಟಿ ಜನರ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಜಾಗತಿಕ ಆರ್ಥಿಕತೆಯ ಕಾಲುಭಾಗಕ್ಕಿಂತ ಹೆಚ್ಚು. ಬಹಳ ಮುಖ್ಯ ಸಂಗತಿ ಎಂದರೆ, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರದೇಶದೊಂದಿಗೆ ಮೊದಲ ಹೆಜ್ಜೆ ಇಡುವ ಅನುಕೂಲ ಯೂರೋಪ್​ಗೆ ಸಿಗುತ್ತದೆ’ ಎಂದು ಡಾವೊಸ್ ಸಮಿಟ್​ನಲ್ಲಿ ಉರ್ಸುಲಾ ಹೇಳಿದ್ದಾರೆ.

ಇಯು ಎಕ್ಸ್ ಪೋಸ್ಟ್

‘ಲ್ಯಾಟಿನ್ ಅಮೆರಿಕದಿಂದ ಹಿಡಿದು ಹಿಂದೂ ಮಹಾಸಾಗರದವರೆಗೆ ಈ ಶತಮಾನದ ಆರ್ಥಿಕ ಶಕ್ತಿಕೇಂದ್ರಗಳು ಮತ್ತು ಅಭಿವೃದ್ಧಿ ಕೇಂದ್ರಗಳೊಂದಿಗೆ ಯೂರೋಪ್ ಬ್ಯುಸಿನೆಸ್ ಮಾಡಬಯಸುತ್ತದೆ. ಯೂರೋಪ್ ಯಾವತ್ತೂ ವಿಶ್ವವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ವಿಶ್ವವು ಯೂರೋಪ್ ಅನ್ನು ಆಯ್ಕೆ ಮಾಡಲು ಅಣಿಯಾಗಿದೆ’ ಎಂದು ಯೂರೋಪಿಯನ್ ಯೂನಿಯನ್ ಕಮಿಷನ್ ಅಧ್ಯಕ್ಷೆಯಾದ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ: ಜಾಗತಿಕ ಶಕ್ತಿಯ ಲೆಕ್ಕಾಚಾರವನ್ನೇ ಬದಲಿಸಿದ ಭಾರತ

ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ ಹಾಗೂ ಉರ್ಸುಲಾ ವೋನ್ ಡರ್ ಲೆಯೆನ್ ಅವರು ಭಾರತದ ಗಣರಾಜ್ಯೋತ್ಸವ ಪೆರೇಡ್​ನಲ್ಲಿ ಮುಖ್ಯ ಅತಿಥಿಗಳಾಗಿದ್ದಾರೆ. ಜನವರಿ 27ರಂದು ನಡೆಯುವ 16ನೇ ಭಾರತ ಯೂರೋಪಿಯನ್ ಯೂನಿಯನ್ ಶೃಂಗಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಧಿವೇಶನದಲ್ಲಿ ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು? – Kannada News | Karnataka Government vs Governor: Gehlot reads just two lines of his address in Legislature session, What Next

ಬೆಂಗಳೂರು, (ಜನವರಿ 22): ನನ್ನ ಸರ್ಕಾರ ರಾಜ್ಯದ ಆರ್ಥಿಕ, ಸಾಮಾಜಿಕ, ಬೌದ್ಧಿಕ ಅಭಿವೃದ್ಧಿಗೆ ಬದ್ಧವಾಗಿದೆ. ಅಭಿವೃದ್ಧಿಯನ್ನು ಸರ್ಕಾರ ಎರಡು ಪಟ್ಟು ಹೆಚ್ಚಿಸಲು ಕಟಿಬದ್ಧವಾಗಿದೆ ಎಂದು ಎರಡು ಸಾಲಿನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು ಜೈಹಿಂದ್, ಜೈ ಕರ್ನಾಟಕ ಎಂದು ಹೇಳಿ ವಿಧಾನಸಭೆಯ ಸದನದಿಂದ ಹೊರನಡೆದರು. ಇದು ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯಪಾಲರ ಈ ನಡೆ ಹಾಗೂ ವಿಧಾನಸಭೆಯ ಈ ಸನ್ನಿವೇಶ ಸದನದಲ್ಲಾದ ಈ ಬೆಳವಣಿಗೆ ಹಿಂದೆಂದೂ ಆಗಿರಲಿಲ್ಲ. ಹಿಂದೆಂದೂ ಕರ್ನಾಟಕ ವಿಧಾನಸಭೆ ಕಂಡು ಕೇಳರಿಯದ ಸಂದಿಗ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೊಟ್ಟ ಭಾಷಣವನ್ನ ಮಾಡದೇ ಕೇವಲ ಎರಡು ಸಾಲಿನಲ್ಲಿ ಭಾಷಣ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ಸದಸ್ಯರು ವಿರುದ್ಧ ಧಿಕ್ಕಾರ ಕೂಗಿದರು. ಹಾಗಾದ್ರೆ, ಸರ್ಕಾರದ ಮುಂದಿನ ನಡೆ ಏನು ಎನ್ನುವ ಸಂಪೂರ್ಣ ವಿವರ ವಿಡಿಯೋನಲ್ಲಿದೆ.

Source link

Video: ಜಮ್ಮು-ಕಾಶ್ಮೀರದ ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ, 10 ಸೈನಿಕರು ಸಾವು – Kannada News | Tragedy in the Hills: Army Vehicle Plunges into Gorge in Doda, 10 Soldiers Lost

ಶ್ರೀನಗರ, ಜನವರಿ 22: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರತೀಯ ಸೇನಾ ವಾಹನವೊಂದು ಕಂದಕಕ್ಕೆ ಉರುಳಿದ್ದು, 10 ಮಂದಿ ಸೈನಿಕರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. 9 ಮಂದಿ ಗಾಯಗೊಂಡಿದ್ದಾರೆ. ವಾಹನವು ರಸ್ತೆಯಿಂದ ಜಾರಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಭದೇರ್ವಾ-ಚಂಬಾ ಅಂತಾರಾಜ್ಯ ರಸ್ತೆಯ ಖನ್ನಿ ಟಾಪ್‌ನಲ್ಲಿ ಈ ಅಪಘಾತ ಸಂಭವಿಸಿದೆ.

ಒಟ್ಟು 17 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ ವಾಹನವು ಎತ್ತರದ ಪೋಸ್ಟ್ ಕಡೆಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ 200 ಅಡಿ ಆಳದ ಕಂದಕಕ್ಕೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆ ಮತ್ತು ಪೊಲೀಸರು ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಆರಂಭಿಸಿದಾಗ ನಾಲ್ವರು ಸೈನಿಕರು ಮೃತಪಟ್ಟಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡಿದ್ದ ಇತರ ಒಂಬತ್ತು ಸೈನಿಕರನ್ನು ರಕ್ಷಿಸಲಾಗಿದೆ ಮತ್ತು ಅವರಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ವಿಶೇಷ ಚಿಕಿತ್ಸೆಗಾಗಿ ಉಧಮ್‌ಪುರ ಮಿಲಿಟರಿ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

Video: 70 ನೇ ವಯಸ್ಸಿನಲ್ಲಿ ಮೊದಲ ವ್ಲಾಗ್, ಈ ವೃದ್ಧನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ – Kannada News | Uttar Pradesh: The first vlog of a 70 year old man from Uttar Pradesh has received over 22 million views

ವಿನೋದ್ ಕುಮಾರ್ ಶರ್ಮಾImage Credit source: Instagram

ಸೋಶಿಯಲ್ ಮೀಡಿಯಾವೇ (social media) ಹಾಗೆ, ಜನಸಾಮಾನ್ಯರನ್ನು ಫೇಮಸ್ ಮಾಡಿ ಬಿಡುತ್ತದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಆದವರ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಉತ್ತರ ಪ್ರದೇಶದ (Uttar Pradesh) 70 ವರ್ಷದ ವೃದ್ಧರೊಬ್ಬರು ಮೊದಲ ಬಾರಿಗೆ ವ್ಲಾಗ್ ಮಾಡಿದ್ದು, ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ನೆಟ್ಟಿಗರ ಹೃದಯ ಗೆದ್ದು ಕೊಂಡಿದ್ದಾರೆ. ಇವರು ಅಪ್ಲೋಡ್ ಮಾಡಿದ ಮೊದಲ ವಿಡಿಯೋ 30 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ವಿನೋದ್ ಕುಮಾರ್ ಶರ್ಮಾ (Vinod Kumar Sharma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮೊದಲ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಹಳ ವಿನ್ರಮವಾಗಿ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ನನ್ನ ಹೆಸರು ವಿನೋದ್ ಕುಮಾರ್ ಶರ್ಮಾ. ನಾನು ಉತ್ತರ ಪ್ರದೇಶದವನು. ನನಗೆ ವ್ಲಾಗ್ ಮಾಡುವುದು ಹೇಗೆಂದು ಗೊತ್ತಿಲ್ಲ, ಆದರೆ ನಾನು ವೀಡಿಯೊಗಳನ್ನು ಮಾಡುವ ಮೂಲಕ ನನ್ನ ಸಮಯವನ್ನು ಅರ್ಥ ಪೂರ್ಣವಾಗಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಈ ವ್ಲಾಗ್ ಅನ್ನು ಇಷ್ಟಪಡುತ್ತೇನೆ ಆದ್ದರಿಂದ ನಾನು ಈ ಕೆಲಸವನ್ನು ಮುಂದುವರಿಸಲು ನೀವು ಪ್ರೋತ್ಸಾಹಿಸುತ್ತೀರಿ ನಾನು ಭಾವಿಸುತ್ತೇನೆ ಎಂದು ಹೇಳುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ

ಜನವರಿ 19 ರಂದು ಹಂಚಿ ಕೊಂಡ ಈ ವಿಡಿಯೋ 30 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದೇ ರೀತಿ ಮುಂದುವರಿಸಿ, ದಾದಾ ಜಿ.ಕಲಿಯಲು ಯಾವುದೇ ವಯಸ್ಸಿಲ್ಲ. ಈ ಮಾತನ್ನು ನೀವು ಚೆನ್ನಾಗಿ ಸಾಬೀತುಪಡಿಸಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ನಮ್ಮ ಹೃದಯವನ್ನು ಗೆದ್ದಿದ್ದೀರಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಸರಳತೆ ನಿಮ್ಮ ವಿಶಿಷ್ಟ ಲಕ್ಷಣ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:19 pm, Thu, 22 January 26

Source link