Category Archives: Blog

Your blog category

ಕಾಂಗೋ ಮುಂದೆ ಕಂಗೆಟ್ಟ ಕ್ರಿಸ್ಟಿಯಾನೊ ರೊನಾಲ್ಡೊ! – Kannada News | Fifa world cup 2026: Messi Shines, Cristiano Ronaldo Stumbles Against DR Congo

FIFA World Cup 2026: ಫಿಫಾ ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿರುವ ಪೋರ್ಚುಗಲ್, ದುರ್ಬಲ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DR Congo) ವಿರುದ್ಧ 1-1 ಗೋಲುಗಳ ಆಘಾತಕಾರಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಜಗತ್ತಿನ ಶ್ರೇಷ್ಠ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ದಾಖಲೆಯ 6ನೇ ವಿಶ್ವಕಪ್ ಅಭಿಯಾನಕ್ಕೆ ಕಾಂಗೋ ಪಡೆ ಆರಂಭದಲ್ಲೇ ತಣ್ಣೀರೆರಚಿದ್ದಾರೆ. ಅಷ್ಟೇ ಈ ಪಂದ್ಯದಲ್ಲಿ ರೊನಾಲ್ಡೊ ಅನುಭವಿಸಿದ ಹತಾಶೆ ಮತ್ತು ಮಂಕಾದ ಪ್ರದರ್ಶನ ಈಗ ಜಾಗತಿಕ ಫುಟ್‌ಬಾಲ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಾಂಗೋ ಹೊಸ ಇತಿಹಾಸ:

ಪಂದ್ಯ ಆರಂಭವಾದ ಕೇವಲ 6ನೇ ನಿಮಿಷದಲ್ಲೇ ಝುವಾವೊ ನೆವೆಸ್ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಪೋರ್ಚುಗಲ್ 1-0 ಮುನ್ನಡೆ ಸಾಧಿಸಿ ಸುಲಭ ಜಯದ ಮುನ್ಸೂಚನೆ ನೀಡಿತ್ತು. ಆದರೆ, ದ್ವಿತೀಯಾರ್ಧಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಾಗ (45+5ನೇ ನಿಮಿಷ) ಕಾಂಗೋದ ಯೋವಾನೆ ವಿಸ್ಸಾ ಹೆಡರ್ ಮೂಲಕ ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಇದು ವಿಶ್ವಕಪ್ ಇತಿಹಾಸದಲ್ಲೇ ಕಾಂಗೋ ತಂಡ ದಾಖಲಿಸಿದ ಮೊದಲ ಗೋಲು ಮತ್ತು ಮೊದಲ ಪಾಯಿಂಟ್ ಆಗಿ ಇತಿಹಾಸ ಪುಟ ಸೇರಿತು.

ಕಂಗೆಟ್ಟ ಕ್ರಿಸ್ಟಿಯಾನೊ:

ಕಾಂಗೋ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರದರ್ಶನವನ್ನು ಅಂಕಿ-ಅಂಶಗಳ ಆಧಾರದ ಮೇಲೆ ವಿಶ್ಲೇಷಿಸಿದರೆ, ಅವರು ಮೈದಾನದಲ್ಲಿ ಎಷ್ಟು ಮಂಕಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಪೂರ್ಣ 90 ನಿಮಿಷಗಳ ಕಾಲ ಮೈದಾನದಲ್ಲಿದ್ದ ರೊನಾಲ್ಡೊ ಅವರ ಅಧಿಕೃತ ಪಂದ್ಯದ ಅಂಕಿ-ಅಂಶಗಳು ಇಲ್ಲಿವೆ…

  • ಒಟ್ಟು ಟಚ್: ಇಡೀ ಪಂದ್ಯದಲ್ಲಿ ರೊನಾಲ್ಡೊ ಕೇವಲ 25 ಬಾರಿ ಮಾತ್ರ ಚೆಂಡನ್ನು ಟಚ್ ಮಾಡಿದ್ದಾರೆ. ಇದು ಅವರ ವಿಶ್ವಕಪ್ ವೃತ್ತಿಜೀವನದಲ್ಲೇ ಆರಂಭಿಕ ಆಟಗಾರನಾಗಿ ಅತ್ಯಂತ ಕಡಿಮೆ ಎಂಬುದು ವಿಶೇಷ.
  • 5 ಟಚ್​​ಗಳು: ಕಾಂಗೋ ತಂಡದ ಪೆನಾಲ್ಟಿ ಬಾಕ್ಸ್‌ನೊಳಗೆ  ರೊನಾಲ್ಡೊಗೆ ಸಿಕ್ಕಿದ್ದು ಕೇವಲ 5 ಟಚ್​ಗಳು ಮಾತ್ರ.
  • ಒಟ್ಟು ಪಾಸ್‌ಗಳು: ರೊನಾಲ್ಡೊ ಒಟ್ಟು 21 ಪಾಸ್‌ಗಳನ್ನು ನೀಡಲು ಪ್ರಯತ್ನಿಸಿದರು. ಅದರಲ್ಲಿ 19 ಪಾಸ್‌ಗಳು ನಿಖರವಾಗಿ ಸಹ ಆಟಗಾರರನ್ನು ತಲುಪಿದ್ದವು.
  • ಅಸಿಸ್ಟ್: ಸಹ ಆಟಗಾರರಿಗೆ ಗೋಲು ಗಳಿಸಲು ನೆರವಾಗುವ ಯಾವುದೇ ಅಸಿಸ್ಟ್ ನೀಡಲು ಅವರಿಗೆ ಸಾಧ್ಯವಾಗಲಿಲ್ಲ
  • ಫೈನಲ್ ಥರ್ಡ್ ಪಾಸ್: ಪಂದ್ಯದುದ್ದಕ್ಕೂ ಅವರು ಎದುರಾಳಿ ಕೋಟೆಯೊಳಗೆ ನೀಡಿದ್ದು ಕೇವಲ 1 ಪಾಸ್ ಮಾತ್ರ
  • ಗೋಲು ಶಾಟ್‌ಗಳು: ರೊನಾಲ್ಡೊ ಕಾಂಗೋ ಗೋಲು ಪೆಟ್ಟಿಗೆಯತ್ತ ಒಟ್ಟು 2 ರಿಂದ 3 ಬಾರಿ ಶಾಟ್ ಬಾರಿಸಲು ಪ್ರಯತ್ನಿಸಿದ್ದಾರೆ.
  • ಶಾಟ್ಸ್ ಆನ್ ಟಾರ್ಗೆಟ್: ಅತ್ಯಂತ ನಿರಾಶಾದಾಯಕ ಸಂಗತಿಯೆಂದರೆ, ಅವರ ಯಾವುದೇ ಶಾಟ್‌ಗಳು ಕಾಂಗೋ ಗೋಲ್‌ಕೀಪರ್‌ನತ್ತ ನೇರ ಗುರಿಯನ್ನು ಹೊಂದಿರಲಿಲ್ಲ.

ರೊನಾಲ್ಡೊ ವೈಫಲ್ಯಕ್ಕೆ ಕಾರಣವೇನು?

  •  ಮಿಡ್‌ಫೀಲ್ಡ್ ಸಂಪರ್ಕದ ವೈಫಲ್ಯ: ಪೋರ್ಚುಗಲ್‌ನ ಮಧ್ಯಮ ಕ್ರಮಾಂಕದ ಆಟಗಾರರು ರೊನಾಲ್ಡೊ ಅವರಿಗೆ ನಿಖರವಾದ ಪಾಸ್‌ಗಳನ್ನು ತಲುಪಿಸುವಲ್ಲಿ ಸಂಪೂರ್ಣ ವಿಫಲರಾದರು. ಹೀಗಾಗಿ ಕಾಂಗೋದ ಆಕ್ರಮಣಕಾರಿ ರಕ್ಷಣಾ ತಂತ್ರದಿಂದಾಗಿ ರೊನಾಲ್ಡೊ ಮೈದಾನದಲ್ಲಿ ಒಂಟಿಯಾದರು.
  •  ‘ಮ್ಯಾನ್-ಮಾರ್ಕಿಂಗ್’ ತಂತ್ರ: ಕಾಂಗೋ ತಂಡವು ರೊನಾಲ್ಡೊ ಅವರನ್ನು ಕಟ್ಟಿಹಾಕಲು ವಿಶೇಷ ರಕ್ಷಣಾ ತಂತ್ರ ರೂಪಿಸಿತ್ತು. ಅವರು ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೊದಲೇ ಇಬ್ಬರು ಅಥವಾ ಮೂವರು ಡಿಫೆಂಡರ್‌ಗಳು ಅವರನ್ನು ಸುತ್ತುವರಿಯುವ ಮೂಲಕ ಮುಕ್ತವಾಗಿ ಚಲಿಸಲು ಅವಕಾಶ ನೀಡಲಿಲ್ಲ.
  •   ಕ್ಷೀಣಿಸಿದ ದೈಹಿಕ ವೇಗ: 41ರ ಹರೆಯದಲ್ಲೂ ರೊನಾಲ್ಡೊ ಅದ್ಭುತ ಫಿಟ್ನೆಸ್ ಹೊಂದಿದ್ದರೂ, ಅವರ ಕೌಂಟರ್-ಅಟ್ಯಾಕಿಂಗ್ ವೇಗ ಮತ್ತು ಚುರುಕುತನ ಮೊದಲಿನಷ್ಟಿರಲಿಲ್ಲ. ಕಾಂಗೋದ ಯುವ ಮತ್ತು ದೈಹಿಕವಾಗಿ ಬಲಿಷ್ಠ ಆಟಗಾರರ ವೇಗಕ್ಕೆ ಸರಿಸಾಟಿಯಾಗಲು ಅವರು ಪರದಾಡಿದರು.
  •  ಕಳಪೆ ‘ಫಿನಿಶಿಂಗ್’: ಪಂದ್ಯದ ದ್ವಿತೀಯಾರ್ಧದಲ್ಲಿ ರೊನಾಲ್ಡೊ ಅವರಿಗೆ ಎರಡು ಸ್ಪಷ್ಟ ಗೋಲಿನ ಅವಕಾಶಗಳು ಸಿಕ್ಕಿದ್ದವು. ಆದರೆ, ತಮ್ಮ ಎಂದಿನ ಕ್ಲಿನಿಕಲ್ ಶೈಲಿಯಲ್ಲಿ ಚೆಂಡನ್ನು ಗೋಲ್ ಬಾಕ್ಸ್‌ನೊಳಗೆ ನುಗ್ಗಿಸುವಲ್ಲಿ ವಿಫಲರಾಗಿದ್ದು ಅವರ ಹತಾಶೆಯನ್ನು ಹೆಚ್ಚಿಸಿತು.

ಇದನ್ನೂ ಓದಿ: ಟೀಮ್ ಇಂಡಿಯಾ ದಾಂಡಿಗರ ಆರ್ಭಟ… 11 ದಾಖಲೆಗಳು ನಿರ್ಮಾಣ

ಒಟ್ಟಾರೆಯಾಗಿ ಹೇಳುವುದಾದರೆ, ಫುಟ್‌ಬಾಲ್ ಮೈದಾನದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಈ ಆರಂಭಿಕ ಹಿನ್ನಡೆ ಹೊಸದೇನಲ್ಲ. ಕಾಂಗೋ ವಿರುದ್ಧದ ಪಂದ್ಯವು ಪೋರ್ಚುಗಲ್ ತಂಡದ ತಂತ್ರಗಾರಿಕೆಗೆ ಒಡ್ಡಿದ ಸವಾಲಾಗಿದ್ದರೆ, ರೊನಾಲ್ಡೊ ಪಾಲಿಗೆ ತಮ್ಮ ವೃತ್ತಿಜೀವನದ ಮತ್ತೊಂದು ಕಠಿಣ ಪರೀಕ್ಷೆಯಾಗಿದೆ.

ಟೀಕೆಗಳು ಮತ್ತು ಒತ್ತಡಗಳ ನಡುವೆಯೇ ಪುಟಿದೆೇಳುವುದು ರೊನಾಲ್ಡೊ ಅವರ ಜನ್ಮಜಾತ ಗುಣ. ಈ ಆಘಾತಕಾರಿ ಡ್ರಾದಿಂದ ಪಾಠ ಕಲಿಯಲಿರುವ ಪೋರ್ಚುಗಲ್ ಪಡೆ, ಉಜ್ಬೇಕಿಸ್ತಾನ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ. ಅಂತಹದೊಂದು ರಣತಂತ್ರದೊಂದಿಗೆ ರೊನಾಲ್ಡೊ ಮತ್ತೆ ವಿಶ್ವರೂಪ ಪ್ರದರ್ಶಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Source link

Garuda Purana: ಸತ್ತವರು ಕನಸಿನಲ್ಲಿ ಕಂಡರೆ ಏನರ್ಥ? ಗರುಡ ಪುರಾಣ ಹೇಳುವುದೇನು? – Kannada News | Decoding Dreams: What Deceased Loved Ones in Your Sleep Mean According to Garuda Purana

ಜಾತಸ್ಯ ಮರಣಂ ಧ್ರುವಂ – ಮನುಷ್ಯನಿಗೆ ಹುಟ್ಟು ಎಷ್ಟು ಸತ್ಯವೋ ಸಾವು ಅಷ್ಟೇ ಸತ್ಯ. ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ಒಂದು ದಿನ ದೇಹವನ್ನು ತ್ಯಜಿಸಬೇಕಾಗುತ್ತದೆ. ಜನನ ಅನಿಶ್ಚಿತವಾದರೆ, ಮರಣ ಶಾಶ್ವತ ಎಂದು ಹೇಳಲಾಗುತ್ತದೆ. ಅಂತಹ ಮರಣಿಸಿದ ವ್ಯಕ್ತಿಗಳು ಕನಸಿನಲ್ಲಿ ಬಂದಾಗ, ಅದರ ಹಿಂದಿನ ಶುಭ ಅಥವಾ ಅಶುಭ ಫಲಗಳು ಏನು ಎಂದು ಗರುಡ ಪುರಾಣ ವಿವರಿಸುತ್ತದೆ. ಸಾಕ್ಷಾತ್ ಶ್ರೀಮನ್ನಾರಾಯಣರು ಗರುಡರಿಗೆ ಅನೇಕ ವಿಷಯಗಳನ್ನು ತಿಳಿಸಿದ್ದು, ಅದರಲ್ಲಿ ಇದೂ ಸಹ ಒಂದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ರಾತ್ರಿಯ ನಿದ್ರಾವಸ್ಥೆಯಲ್ಲಿ ಬೀಳುವ ಕನಸುಗಳಿಗೆ ಜ್ಯೋತಿಷ್ಯ, ಪುರಾಣ, ವಿಶೇಷವಾಗಿ ಗರುಡ ಪುರಾಣಗಳಲ್ಲಿ ಮಹತ್ವದ ಸ್ಥಾನವಿದೆ. ಕನಸಿನಲ್ಲಿ ಕಾಣಿಸುವ ಮರಣಿಸಿದವರ ರೀತಿಯ ಆಧಾರದ ಮೇಲೆ, ಅವುಗಳ ಅರ್ಥ ಮತ್ತು ಫಲಿತಾಂಶಗಳು ಭಿನ್ನವಾಗಿರುತ್ತವೆ.

ಪೂರ್ವಜರು ಪದೇ ಪದೇ ಕಾಣಿಸಿಕೊಂಡಾಗ:

ನಮ್ಮದೇ ಆದ ಪಿತೃಗಳು, ಕುಟುಂಬದಲ್ಲಿ ಮರಣಿಸಿದ ತಂದೆ ಅಥವಾ ತಾಯಿ ಕಡೆಯ ಸಂಬಂಧಿಕರು ಕನಸುಗಳಲ್ಲಿ ಪದೇ ಪದೇ ಕಾಣಿಸಿಕೊಂಡರೆ, ಅವರ ಕಾರ್ಯಗಳನ್ನು ಮಾಡಬೇಕು ಎಂದರ್ಥ. “ನೀನು ನನ್ನನ್ನು ಮರೆಯುತ್ತಿದ್ದೀಯಾ” ಎಂದು ಅವರು ಸೂಚಿಸುತ್ತಿರಬಹುದು. ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ ಸಂದರ್ಭಗಳಲ್ಲಿ ಅವರ ಹೆಸರಿನಲ್ಲಿ ಕಾರ್ಯಗಳನ್ನು ನೆರವೇರಿಸುವುದು ಸೂಕ್ತ.

ಕೋಪಗೊಂಡ ಮರಣಿಸಿದ ವ್ಯಕ್ತಿಗಳು ಕನಸಿನಲ್ಲಿ:

ಯಾವುದೇ ಪರಿಚಯಸ್ಥ ಅಥವಾ ಮರಣಿಸಿದ ವ್ಯಕ್ತಿ ಕೋಪಿಷ್ಠರಾಗಿ, ಕಿರುಚಾಡುತ್ತಾ, ಕೂಗಾಡುತ್ತಾ ಕನಸಿನಲ್ಲಿ ಕಾಣಿಸಿಕೊಂಡರೆ ಅದು ಅಶುಭದ ಸಂಕೇತ. ಇಂತಹ ಕನಸುಗಳ ಪರಿಣಾಮ ಮೂರು ದಿನಗಳವರೆಗೆ ಮಾತ್ರ ಇರುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಕನಸು ಬಿದ್ದಾಗ, ಇಷ್ಟದೇವರು ಅಥವಾ ಕುಲದೇವರ ದರ್ಶನ ಪಡೆದು ಪ್ರಾರ್ಥಿಸಬೇಕು. ಉದಾಹರಣೆಗೆ, ಕುಲದೇವರು ವೆಂಕಟೇಶ್ವರನಾಗಿದ್ದರೆ, ತಿರುಪತಿ ಅಥವಾ ಹತ್ತಿರದ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿಸುವುದರಿಂದ ಶುಭವಾಗುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಶಾಂತವಾಗಿ ಕಾಣಿಸಿಕೊಂಡಾಗ:

ಮರಣಿಸಿದ ವ್ಯಕ್ತಿಗಳು ಕನಸಿನಲ್ಲಿ ಸೈಲೆಂಟ್ ಆಗಿ ಅಥವಾ ಶಾಂತವಾಗಿ ಬಂದರೆ, ಅದು ನಮಗೆ ಒಂದು ಎಚ್ಚರಿಕೆ ಅಥವಾ ಸೂಚನೆಯಾಗಿರುತ್ತದೆ. “ನಿನ್ನ ಜವಾಬ್ದಾರಿಗಳನ್ನು ನಿನಗೆ ಗುರುತಿಸುತ್ತಿದ್ದೇನೆ, ಎಚ್ಚೆತ್ಕೋ, ಅಲರ್ಟ್ ಆಗು” ಎಂದು ಅವರು ತಿಳಿಸುತ್ತಿರಬಹುದು. ಇದು ಜೀವನದ ವಿವಿಧ ವಿಚಾರಗಳ ಬಗ್ಗೆ ಗಮನ ಹರಿಸಲು ಪ್ರೇರೇಪಿಸುತ್ತದೆ.

ಅಳು ಅಥವಾ ರೋದನೆ ಕಂಡಾಗ:

ಕನಸಿನಲ್ಲಿ ಯಾರಾದರೂ ಅಳುತ್ತಿರುವುದು, ರೋದನೆ ಮಾಡುವುದು ಅಥವಾ ಸಂಕಟ ಪಡುತ್ತಿರುವುದು ಕಂಡರೆ, ಅದು ಮನೆಯಲ್ಲಿ ಯಾರಿಗೋ ತೊಂದರೆ ಎದುರಾಗಲಿದೆ ಎಂಬುದರ ಸೂಚನೆ. ಅಂತಹ ಕನಸು ಬಿದ್ದಾಗ, ಯಾವುದೇ ಪ್ರಮುಖ ಪ್ರಯಾಣಗಳು ಅಥವಾ ಕಾರ್ಯಕ್ರಮಗಳನ್ನು ಆದಷ್ಟು ಮುಂದೂಡುವುದು ಒಳ್ಳೆಯದು.

ಒಟ್ಟಾರೆಯಾಗಿ, ಯಾವುದೇ ವ್ಯಕ್ತಿಗಳು ಮರಣಿಸಿದ ನಂತರ ಕನಸಿನಲ್ಲಿ ಕಾಣಿಸಿಕೊಂಡಾಗ ಅದಕ್ಕೊಂದು ನಿರ್ದಿಷ್ಟ ಅರ್ಥವಿರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕತ್ರಿನಾಗೆ ಬಾಡಿ ಲ್ಯಾಂಗ್ವೇಜ್ ಅನ್ನೋದೆ ಇರಲಿಲ್ಲ’; ಖ್ಯಾತ ನಿರ್ದೇಶಕನ ಅಚ್ಚರಿಯ ಹೇಳಿಕೆ – Kannada News | Katrina Kaif’s Challenging Debut, Director Vijayabhaskar Recalls

ವಿಕ್ಟರಿ ವೆಂಕಟೇಶ್ ನಟನೆಯ ಸೂಪರ್ ಹಿಟ್ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಮಲ್ಲೀಶ್ವರಿ’ ಬಿಡುಗಡೆಯಾಗಿ ಎರಡು ದಶಕಗಳೇ ಕಳೆದಿವೆ. ಈ ಚಿತ್ರದ ಮೂಲಕ ಕತ್ರಿನಾ ಕೈಫ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ರಾಜಕುಮಾರಿಯ ಪಾತ್ರದಲ್ಲಿ ಕತ್ರಿನಾ ಪ್ರೇಕ್ಷಕರ ಮನ ಗೆದ್ದಿದ್ದರೂ, ಆಕೆಯಿಂದ ನಟನೆ ತೆಗೆಸುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಚಿತ್ರದ ನಿರ್ದೇಶಕ ಕೆ. ವಿಜಯಭಾಸ್ಕರ್ ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಬಾಡಿ ಲಾಂಗ್ವೇಜ್ ಇರಲಿಲ್ಲ, ಆದರೆ ಹಠ ಇತ್ತು

‘ಕತ್ರಿನಾ ಕೈಫ್ ಅವರನ್ನು ನಿರ್ದೇಶಿಸುವುದು ಆರಂಭದಲ್ಲಿ ನನಗೆ ತುಂಬಾ ಕಷ್ಟವಾಗಿತ್ತು. ಅವರಿಗೆ ಯಾವುದೇ ರೀತಿಯ ಬಾಡಿ ಲಾಂಗ್ವೇಜ್ ಇರಲಿಲ್ಲ. ಅವರು ಬೆಳೆದ ವಾತಾವರಣವೇ ಬೇರೆ, ನಮ್ಮ ತೆಲುಗು ಸಂಸ್ಕೃತಿಯೇ ಬೇರೆ. ಹೀಗಾಗಿ ನಮ್ಮ ಭಾಗದ ಹುಡುಗಿ ಹೇಗೆ ಕೂರಬೇಕು, ಹೇಗೆ ನಟಿಸಬೇಕು ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ಕೆಲವೊಮ್ಮೆ ಅವರು ಕೂರುವ ಶೈಲಿಯನ್ನು ನಾನೇ ತಿದ್ದಬೇಕಾಗುತ್ತಿತ್ತು. ರಾಜಕುಮಾರಿಗೆ ಇರಬೇಕಾದ ಗಾಂಭೀರ್ಯ, ಗೌರವ ಮತ್ತು ಪ್ರೀತಿಯನ್ನು ಅವರಲ್ಲಿ ತರುವುದು ಸವಾಲಾಗಿತ್ತು. ಆದರೆ, ಕತ್ರಿನಾ ತುಂಬಾ ಶ್ರಮಜೀವಿ. ಕಷ್ಟವಾದರೂ ಕಷ್ಟಪಟ್ಟು ಕೆಲಸ ಕಲಿತರು’ ಎಂದು ವಿಜಯಭಾಸ್ಕರ್ ನೆನಪಿಸಿಕೊಂಡಿದ್ದಾರೆ.

ಮೊದಲೇ ರಿಜೆಕ್ಟ್ ಮಾಡಿದ್ದ ಕತ್ರಿನಾ

ಜಾಹೀರಾತೊಂದರಲ್ಲಿ ಕತ್ರಿನಾ ಅವರನ್ನು ನೋಡಿ ವಿಜಯಭಾಸ್ಕರ್ ಅವರೇ ಈ ಪಾತ್ರಕ್ಕೆ ಆಯ್ಕೆ ಮಾಡಿದ್ದರಂತೆ. ಮುಂಬೈಗೆ ಹೋಗಿ ಕಥೆ ಹೇಳಿದಾಗ ಕತ್ರಿನಾ ಒಪ್ಪಿದ್ದರು. ಆದರೆ, ತದನಂತರ ನಿರ್ಮಾಣ ಸಂಸ್ಥೆಯ ಜೊತೆ ಸಣ್ಣ ಭಿನ್ನಾಭಿಪ್ರಾಯ ಉಂಟಾಗಿ, ಅಡ್ವಾನ್ಸ್ ಹಣ ನೀಡಿದರೂ ಕತ್ರಿನಾ ಅದನ್ನು ನಿರಾಕರಿಸಿ ಸಿನಿಮಾದಿಂದ ಹಿಂದೆ ಸರಿದಿದ್ದರು.

ಇದನ್ನೂ ಓದಿ: ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್

ಸೋನಾಲಿ ಬೇಂದ್ರೆ ಮಲ್ಲೀಶ್ವರಿ ಆಗಬೇಕಿತ್ತು

ಕತ್ರಿನಾ ನಿರಾಕರಿಸಿದ ಬಳಿಕ ನಿರ್ಮಾಪಕ ಸುರೇಶ್ ಬಾಬು ಅವರು ಆ ಕಾಲದ ಬಹುತೇಕ ಎಲ್ಲಾ ಸುಂದರಿಯರನ್ನು ಆಡಿಷನ್‌ಗೆ ಕರೆಸಿದ್ದರು. ಆಗ ಎಲ್ಲರ ಮೊದಲ ಆಯ್ಕೆ ನಟಿ ಸೋನಾಲಿ ಬೇಂದ್ರೆ ಆಗಿದ್ದರು. ಆದರೆ, ವಿಜಯಭಾಸ್ಕರ್ ಅದಕ್ಕೆ ಒಪ್ಪಲಿಲ್ಲ. ‘ಸೋನಾಲಿ ಅದ್ಭುತ ನಟಿ, ಶಿಸ್ತಿನ ಸಿಪಾಯಿ. ಆದರೆ ನಾನು ಈಗಾಗಲೇ ನಾಗಾರ್ಜುನ ಜೊತೆ ‘ಮನ್ಮಥುಡು’ ಚಿತ್ರದಲ್ಲಿ ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದೆ. ಮಲ್ಲೀಶ್ವರಿ ಪಾತ್ರಕ್ಕೆ ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಮುಖ ಬೇಕಿತ್ತು. ಆಗಲೇ ಜನರಿಗೆ ಆಕೆ ನಿಜವಾದ ರಾಜಕುಮಾರಿ ಎನಿಸಲು ಸಾಧ್ಯವಿತ್ತು. ಹೀಗಾಗಿ ಸಾಕಷ್ಟು ಹುಡುಕಾಟದ ನಂತರ ಮತ್ತೆ ಕತ್ರಿನಾ ಅವರನ್ನೇ ಮನವೊಲಿಸಿ ಸಿನಿಮಾಗೆ ಕರೆತರಲಾಯಿತು’ ಎಂದು ವಿಜಯಭಾಸ್ಕರ್ ತಿಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:45 am, Thu, 18 June 26

Source link

ಮಧ್ಯಪ್ರಾಚ್ಯದಲ್ಲಿ ಶಾಂತಿ ಮುನ್ನುಡಿ: ಐತಿಹಾಸಿಕ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ,ಈಗ ಅನುಷ್ಠಾನ ಪರೀಕ್ಷಿಸುವ ಸಮಯ ಎಂದ ಇರಾನ್ – Kannada News | US Iran Historic Peace Deal Signed: Middle East Stability and Global Oil Price Impact

ಡೊನಾಲ್ಡ್​ ಟ್ರಂಪ್ Image Credit source: X Account: Emmanuel Macron

ಟೆಹ್ರಾನ್, ಜೂನ್ 18: ಮಧ್ಯಪ್ರಾಚ್ಯದಲ್ಲಿ ಕಳೆದ ಮೂರೂವರೆ ತಿಂಗಳುಗಳಿಂದ ನಡೆಯುತ್ತಿದ್ದ ಭೀಕರ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಜಗತ್ತಿನ ಗಮನ ಸೆಳೆದಿದ್ದ ಅತ್ಯಂತ ಮಹತ್ವದ ಶಾಂತಿ ಒಪ್ಪಂದಕ್ಕೆ ಅಮೆರಿಕ ಮತ್ತು ಇರಾನ್(Iran) ದೇಶಗಳು ಅಧಿಕೃತವಾಗಿ ಸಹಿ ಹಾಕಿವೆ. ಜಿ-7 (G7) ಶೃಂಗಸಭೆಯ ನಂತರ ಫ್ರಾನ್ಸ್‌ನ ವರ್ಸೈಲ್ಸ್ ಅರಮನೆಯಲ್ಲಿ ಆಯೋಜಿಸಲಾಗಿದ್ದ ಪ್ರಮುಖ ಭೋಜನಕೂಟದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇದನ್ನು ಜಾಗತಿಕ ರಾಜತಾಂತ್ರಿಕತೆಯ ದೊಡ್ಡ ಯಶಸ್ಸು ಎಂದು ಬಣ್ಣಿಸಿದ್ದಾರೆ. ಅಮೆರಿಕ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ ಪ್ರಕಾರ, ಈ ಒಪ್ಪಂದಕ್ಕೆ ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದಎಂದು ಹೆಸರಿಡಲಾಗಿದೆ.

ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳು ತಕ್ಷಣವೇ ಮತ್ತು ಶಾಶ್ವತವಾಗಿ ನಿಲ್ಲಬೇಕು. ಅಮೆರಿಕವು ಇರಾನ್ ಮೇಲಿನ ತನ್ನ ನೌಕಾ ದಿಗ್ಬಂಧನವನ್ನು ಮುಂದಿನ 30 ದಿನಗಳಲ್ಲಿ ಸಂಪೂರ್ಣವಾಗಿ ಹಿಂಪಡೆಯಲಿದೆ. ಇದರಿಂದ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಮತ್ತೆ ಮುಕ್ತವಾಗಿ ತೆರೆದುಕೊಳ್ಳಲಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಇಳಿಕೆಯಾಗಲಿವೆ.

ಮತ್ತಷ್ಟು ಓದಿ: ಭಾರತದ ಮೇಲೆ ದಾಳಿಯಾದರೆ ಅಮೆರಿಕ ರಕ್ಷಣೆಗೆ ಧಾವಿಸುತ್ತದೆ; ಮೋದಿಗೆ ಟ್ರಂಪ್ ಭರವಸೆ

ಅಂತಿಮ ಒಪ್ಪಂದ ಪೂರ್ಣಗೊಂಡ 30 ದಿನಗಳ ಒಳಗಾಗಿ ಅಮೆರಿಕ ತನ್ನ ಸೇನಾ ಪಡೆಗಳನ್ನು ಇರಾನ್ ಸುತ್ತಮುತ್ತಲಿನ ಪ್ರದೇಶದಿಂದ ಹಿಂತೆಗೆದುಕೊಳ್ಳಲಿದೆ. ಇರಾನ್ ಮುಂದಿನ 60 ದಿನಗಳ ಕಾಲ ಯಾವುದೇ ಶುಲ್ಕವಿಲ್ಲದೆ ಅಂತಾರಾಷ್ಟ್ರೀಯ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರದ ಸಂಪೂರ್ಣ ಜವಾಬ್ದಾರಿ ಹೊರಲಿದೆ.

ಈಗ ಅನುಷ್ಠಾನವನ್ನು ಪರೀಕ್ಷಿಸುವ ಸಮಯ: ಇರಾನ್ ಖಡಕ್ ಮಾತು
ಇರಾನ್ ಸರ್ಕಾರವೂ ಸಹ ಈ ಒಪ್ಪಂದವನ್ನು ದೃಢಪಡಿಸಿದೆ. ಇಸ್ಲಾಮಾಬಾದ್ ಒಪ್ಪಂದದ ಪಠ್ಯಕ್ಕೆ ನಮ್ಮ ಅಧ್ಯಕ್ಷರ ಸಹಿಯೊಂದಿಗೆ ಅಂತಿಮ ರೂಪ ನೀಡಲಾಗಿದೆ. ಈಗ ಒಪ್ಪಂದದ ನಿಯಮಗಳನ್ನು ಅಮೆರಿಕ ಹೇಗೆ ಜಾರಿಗೆ ತರುತ್ತದೆ ಎಂಬುದನ್ನು ಪರೀಕ್ಷಿಸುವ ಸಮಯ ಬಂದಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ತಿಳಿಸಿದ್ದಾರೆ. ಈ ಹಿಂದೆ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಿಗದಿಯಾಗಿದ್ದ ಔಪಚಾರಿಕ ಸಭೆಯು ಎಂದಿನಂತೆ ನಡೆಯಲಿದ್ದು, ಮುಂದಿನ 60 ದಿನಗಳಲ್ಲಿ ಒಪ್ಪಂದದ ಅಂತಿಮ ನಿಯಮಗಳ ಬಗ್ಗೆ ಉಭಯ ದೇಶಗಳು ಮತ್ತಷ್ಟು ಚರ್ಚಿಸಲಿವೆ.

110 ದಿನಗಳ ಭೀಕರ ಸಂಘರ್ಷಕ್ಕೆ ಮುಕ್ತಿ
ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮೊದಲ ಬಾರಿಗೆ ದಾಳಿ ಮಾಡಿದ್ದವು. ಅಂದಿನಿಂದ ಸರಿಸುಮಾರು 110 ದಿನಗಳ ಕಾಲ ನಡೆದ ಭೀಕರ ಯುದ್ಧ ಹಾಗೂ ರಕ್ತಪಾತಕ್ಕೆ ಈ ಸಹಿಯ ಮೂಲಕ ಅಧಿಕೃತವಾಗಿ ಅಂತ್ಯ ಹಾಡಲಾಗಿದೆ.

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಯುದ್ಧ ನಿಲ್ಲಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಇದರಿಂದಾಗಿ ಜಾಗತಿಕ ತೈಲ ಸಾಗಣೆಯ ಹಾದಿ ಸುಗಮವಾಗಲಿದ್ದು, ತೈಲ ಬೆಲೆಗಳು ಇಳಿಕೆಯಾಗುವ ಮೂಲಕ ಇಡೀ ವಿಶ್ವಕ್ಕೆ ದೊಡ್ಡ ಸಮಾಧಾನ ತರಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Weather Forecast: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗಾಳಿ, ಮಳೆಯಬ್ಬರ! – Kannada News | Karnataka Weather Forecast: Thunderstorm and Gusty wind all over Karnataka

ಸಾಂದರ್ಭಿಕ ಚಿತ್ರImage Credit source: theconversation.com

ಬೆಂಗಳೂರು, ಜೂನ್ 18: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂಬರುವ ದಿನಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Weather) ಸಾಧ್ಯತೆಯಿದೆ. ಇದರೊಂದಿಗೆ ಕೆಲವು ಪ್ರದೇಶಗಳಲ್ಲಿ ಬಲವಾದ ಬಿರುಗಾಳಿ ಬೀಸುವ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

ಮುಖ್ಯಾಂಶಗಳು

  • ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
  • ಉತ್ತರ ಒಳನಾಡಿನ ಎಂಟು ಜಿಲ್ಲೆಗಳಲ್ಲಿ ಬಲವಾದ ಬಿರುಗಾಳಿ ಬೀಸಲಿದೆ.
  • ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಗಾಳಿ- ಮಳೆ

ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜೊತೆಗೆ, ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಂಭವವಿರುವುದರಿಂದ ಸಾರ್ವಜನಿಕರು ಹಾಗೂ ಮೀನುಗಾರರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಎಲ್ಲೆಲ್ಲಿ ಮಳೆ?

ಉತ್ತರ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇನ್ನುಳಿದಂತೆ, ಬಿರುಗಾಳಿಯ ತೀವ್ರತೆ ಇಲ್ಲಿ ಹೆಚ್ಚಾಗಿರಲಿದ್ದು, ರಾಯಚೂರು, ವಿಜಯಪುರ, ಧಾರವಾಡ, ಬೆಳಗಾವಿ, ಗದಗ, ಕಲಬುರಗಿ, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ವಿಸ್ತರಣೆ ಹೆಚ್ಚಾಗಿರಲಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಇದಲ್ಲದೆ, ಮೈಸೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಒಂದು ಅಥವಾ ಎರಡು ಕಡೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾ ದಾಂಡಿಗರ ಆರ್ಭಟ… 11 ದಾಖಲೆಗಳು ನಿರ್ಮಾಣ – Kannada News | India vs Afghanistan 2nd ODI All Records list

ಲಕ್ನೋನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಫ್ಘಾನಿಸ್ತಾನ್ ತಂಡವನ್ನು ಟೀಮ್ ಇಂಡಿಯಾ 170 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ 402 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 232 ರನ್​ಗಳಿಗೆ ಆಲೌಟ್ ಆಗಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಹಾಗೂ ಭಾರತೀಯ ಆಟಗಾರರು ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

  • ಅತ್ಯಧಿಕ ಮೊತ್ತ: ಭಾರತ ಗಳಿಸಿದ 402 ರನ್, ಆಫ್ಘಾನಿಸ್ತಾನ್ ವಿರುದ್ಧ ಯಾವುದೇ ತಂಡ ಗಳಿಸಿದ ಅತ್ಯಧಿಕ ಏಕದಿನ ಮೊತ್ತವಾಗಿದೆ.
  • 400+ ರನ್ ವಿಶ್ವ ದಾಖಲೆ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬಾರಿ 400ಕ್ಕೂ ಅಧಿಕ ರನ್ ಗಳಿಸಿದ ಜಾಗತಿಕ ದಾಖಲೆಯಲ್ಲಿ ಭಾರತ ಈಗ ಸೌತ್ ತಂಡವನ್ನು ಸರಿಗಟ್ಟಿದೆ. ಉಭಯ ತಂಡಗಳು 8 ಬಾರಿ 400+ ರನ್​ ಕಲೆಹಾಕಿದೆ.
  • ಹೀನಾಯ ಸೋಲು: 170 ರನ್‌ಗಳ ಈ ಸೋಲು ಏಕದಿನ ಇತಿಹಾಸದಲ್ಲೇ ಅಫ್ಘಾನಿಸ್ತಾನ್ ತಂಡ ಎರಡನೇ ಅತಿ ದೊಡ್ಡ ರನ್ ಅಂತರದ ಸೋಲಾಗಿದೆ. ಇದಕ್ಕೂ ಮುನ್ನ 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ 275 ರನ್‌ಗಳಿಗೆ ಸೋತು ಭಾರೀ ಮುಖಭಂಗ ಅನುಭವಿಸಿತ್ತು.

ಆಟಗಾರರ ದಾಖಲೆಗಳು:

  • ಶುಭ್​ಮನ್ ಗಿಲ್ (154) ದಾಖಲೆಗಳು:
  • 7,000 ರನ್‌: ಶುಭ್​​ಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ (ಎಲ್ಲಾ ಮಾದರಿ ಸೇರಿ) 7,000 ರನ್‌ಗಳನ್ನು ಪೂರೈಸಿದ್ದಾರೆ.
  • ನಾಯಕನಾಗಿ ಮೊದಲ ಶತಕ: ಏಕದಿನ ಕ್ರಿಕೆಟ್‌ನಲ್ಲಿ ನಾಯಕನ ಜವಾಬ್ದಾರಿ ವಹಿಸಿಕೊಂಡ ನಂತರ ಗಿಲ್ ಬಾರಿಸಿದ ಮೊದಲ ಶತಕ ಇದಾಗಿದೆ (154 ರನ್).
  •  ವೇಗದ 150 ರನ್: ಕೇವಲ 108 ಎಸೆತಗಳಲ್ಲಿ 150 ರನ್ ಪೂರೈಸುವ ಮೂಲಕ, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

  • ಇಶಾನ್ ಕಿಶನ್ (125) ದಾಖಲೆಗಳು:
  •  1,000 ಏಕದಿನ ರನ್: ಇಶಾನ್ ಕಿಶನ್ ಏಕದಿನ ಕ್ರಿಕೆಟ್​ನಲ್ಲಿ 1000 ರನ್​ಗಳನ್ನು ಪೂರೈಸಿದ್ದಾರೆ.
  • ನಾಲ್ಕನೇ ಭಾರತೀಯ: ಭಾರತದ ಪರ ಅತ್ಯಂತ ವೇಗವಾಗಿ 1,000 ಏಕದಿನ ರನ್ ಪೂರೈಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಇಶಾನ್ ಕಿಶನ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.
  • ಶ್ರೇಯಸ್ ಅಯ್ಯರ್ (26) ದಾಖಲೆಗಳು:
  • 3,000 ರನ್‌: ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 3,000 ರನ್ ಪೂರೈಸಿದ ಎರಡನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಶ್ರೇಯಸ್ ಅಯ್ಯರ್ ಈ ಪಂದ್ಯದ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ.
  • ರೋಹಿತ್ ಶರ್ಮಾ (48) ದಾಖಲೆಗಳು:
  • 14,000 ರನ್: ಲಿಸ್ಟ್-ಎ ಕ್ರಿಕೆಟ್‌ನಲ್ಲಿ 14,000 ರನ್ ಪೂರೈಸಿದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ರೋಹಿತ್ ಶರ್ಮಾ ಈ ಪಂದ್ಯದ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ.
  • ಇತರ ದಾಖಲೆಗಳು:
  • ದಾಖಲೆಯ ಜೊತೆಯಾಟ: 3ನೇ ವಿಕೆಟ್‌ಗೆ ಶುಭ್‌ಮನ್ ಗಿಲ್ ಮತ್ತು ಇಶಾನ್ ಕಿಶನ್ ಜೋಡಿ 224 ರನ್​ಗಳಿಸಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ 3ನೇ ವಿಕೆಟ್‌ಗೆ ದಾಖಲಾದ ಮೂರನೇ ಅತ್ಯಧಿಕ ಮೊತ್ತದ ಜೊತೆಯಾಟವಾಗಿದೆ.

ಇದನ್ನೂ ಓದಿ: ಬರೋಬ್ಬರಿ 27 ಪಂದ್ಯಗಳು… ಟೀಮ್ ಇಂಡಿಯಾದ ವಿಶ್ವಕಪ್​ ಸಿದ್ಧತೆ ಶುರು!

ಒಟ್ಟಾರೆಯಾಗಿ ಹೇಳುವುದಾದರೆ, ಲಕ್ನೋದ ಏಕನಾ ಮೈದಾನದಲ್ಲಿ ನಡೆದ ಈ ಪಂದ್ಯವು ಕೇವಲ ಭಾರತ ತಂಡದ ಗೆಲುವಷ್ಟೇ ಅಲ್ಲದೆ, ದಾಖಲೆಗಳ ಮಹಾಪೂರಕ್ಕೇ ಸಾಕ್ಷಿಯಾಗಿದೆ.

Source link

ಭಾರಿ ಸಂಭಾವನೆ ಕಾರಣಕ್ಕೆ ಅಜಿತ್‌ಗೆ ಸಿಗುತ್ತಿಲ್ಲ ನಿರ್ಮಾಪಕರು; ಅಸಲಿ ವಿಷಯ ರಿವೀಲ್ – Kannada News | Ajith Kumar’s Salary Standoff: Why His Next Film Announcement is Delayed in Kollywood

ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಮುಂದಿನ ಸಿನಿಮಾ ಘೋಷಣೆ ತಡವಾಗುತ್ತಿರುವುದಕ್ಕೆ ಅವರ ಭಾರಿ ಸಂಭಾವನೆಯ ಬೇಡಿಕೆಯೇ ಕಾರಣ ಎಂಬ ವದಂತಿ ಇತ್ತೀಚೆಗೆ ಹರಿದಾಡಿತ್ತು. ಅಜಿತ್ ತಮ್ಮ ಸಂಭಾವನೆಯನ್ನು 150 ಕೋಟಿ ರೂಪಾಯಿ ಇಂದ 125 ಕೋಟಿ ರೂಪಾಯಿಗೆ ಇಳಿಕೆ ಮಾಡಿಕೊಂಡಿದ್ದರು. ಆದರೆ, ನಿರ್ಮಾಪಕರು ಇಷ್ಟು ಹಣ ನೀಡಲು ರೆಡಿ ಇಲ್ಲ ಎಂದು ವರದಿ ಆಗಿದೆ. ಈ ಬಗ್ಗೆ ತಮಿಳು ಸಿನಿಮಾಗಳ ಪ್ರಮುಖ ವಿತರಕ ಹಾಗೂ ಫೈನಾನ್ಶಿಯರ್ ತಿರುಪ್ಪೂರ್ ಸುಬ್ರಮಣಿಯನ್ ಮಾತನಾಡಿದ್ದಾರೆ.

‘ಅಜಿತ್ ಕುಮಾರ್ ತಮಗೆ ಸರಿ ಹೊಂದುವ ಸಂಭಾವನೆಯನ್ನೇ ಕೇಳುತ್ತಿದ್ದಾರೆ. ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಇಂದು ಚಿತ್ರರಂಗದಲ್ಲಿ ಯಾರೂ ಸಿದ್ಧರಿಲ್ಲ’ ಎಂದು ಸುಬ್ರಮಣಿಯನ್ ತಿಳಿಸಿದ್ದಾರೆ. ಸದ್ಯ ತಮಿಳು ಚಿತ್ರರಂಗದಲ್ಲಿ ದೊಡ್ಡ ಬಂಡವಾಳ ಹೂಡುವ ನಿರ್ಮಾಣ ಸಂಸ್ಥೆಗಳ ಕೊರತೆಯಿದೆ. ಸನ್ ಪಿಕ್ಚರ್ಸ್, ಎಜಿಎಸ್ ಎಂಟರ್‌ಟೈನ್‌ಮೆಂಟ್ಸ್, ರೆಡ್ ಜೈಂಟ್ ಸ್ಟುಡಿಯೋಸ್‌ನಂತಹ ಕೆಲವು ದೊಡ್ಡ ಸಂಸ್ಥೆಗಳು ಮಾತ್ರ ಸಕ್ರಿಯವಾಗಿವೆ. ಆದರೆ, ಈ ಸಂಸ್ಥೆಗಳು ಅಷ್ಟೊಂದು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಅವರು ಲಾಭದಲ್ಲಿ ಪಾಲು ಕೊಡುವ ಮಾದರಿಗೆ ಆದ್ಯತೆ ನೀಡುತ್ತಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

90 ಕೋಟಿ ಆಫರ್?

ಚಿತ್ರರಂಗದ ವರದಿಗಳ ಪ್ರಕಾರ, ಪ್ರಮುಖ ನಿರ್ಮಾಣ ಸಂಸ್ಥೆಗಳು ಅಜಿತ್ ಅವರಿಗೆ 80-90 ಕೋಟಿ ರೂಪಾಯಿ ಸಂಭಾವನೆ ನೀಡಲು ಮುಂದೆ ಬಂದಿವೆ. ಆದರೆ, ಅಜಿತ್ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕಡ್ಡಾಯವಾಗಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಣಕಾಸಿನ ಭಿನ್ನಾಭಿಪ್ರಾಯದಿಂದಾಗಿಯೇ ಅವರ ಹೊಸ ಸಿನಿಮಾ ಒಪ್ಪಂದಗಳು ಅಂತಿಮಗೊಳ್ಳುತ್ತಿಲ್ಲ ಎನ್ನಲಾಗಿದೆ.

ರೇಸಿಂಗ್‌ನಲ್ಲಿ ಬ್ಯುಸಿ, ಸಿನಿಮಾಗೆ ಸಲಹೆ

ಅಜಿತ್ ಅವರ ಕೊನೆಯ ಚಿತ್ರ ‘ಗುಡ್ ಬ್ಯಾಡ್ ಅಗ್ಲಿ’ ಸಾಧಾರಣ ಎನಿಸಿಕೊಂಡಿತು. ಈ ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದೂ ಅವರ 64ನೇ ಸಿನಿಮಾ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ಬಗ್ಗೆ ಸಲಹೆ ನೀಡಿರುವ ಸುಬ್ರಮಣಿಯನ್, ‘ಅಜಿತ್ ಈಗಾಗಲೇ ಚಿತ್ರರಂಗದಲ್ಲಿ ನೆಲೆಸಿದ್ದಾರೆ. ಅವರಿಗೆ ರೇಸಿಂಗ್ ಹಾಗೂ ಜಾಹೀರಾತುಗಳಿಂದಲೂ ಉತ್ತಮ ಆದಾಯವಿದೆ. ಹೀಗಾಗಿ ಅವರು ಚಿತ್ರರಂಗದ ಹಿತದೃಷ್ಟಿಯಿಂದ ಲಾಭದಲ್ಲಿ ಪಾಲು ಪಡೆಯುವ ಆಧಾರದ ಮೇಲೆ ಸಿನಿಮಾ ಮಾಡಬೇಕು. ಇದರಿಂದ ತಮಿಳು ಚಿತ್ರರಂಗಕ್ಕೆ ವರ್ಷಕ್ಕೆ ಕನಿಷ್ಠ 2 ರಿಂದ 3 ದೊಡ್ಡ ಸಿನಿಮಾಗಳು ಸಿಗುತ್ತವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೇಗಿದೆ ನೋಡಿ ನಟ ಅಜಿತ್ ಕುಟುಂಬ; ಇಲ್ಲಿವೆ ಸುಂದರ ಫೋಟೋಸ್

ಮತ್ತೊಂದೆಡೆ, ನಟ ವಿಜಯ್ ರಾಜಕೀಯಕ್ಕೆ ಪ್ರವೇಶಿಸಿ ಚಿತ್ರರಂಗದಿಂದ ದೂರ ಸರಿಯುತ್ತಿರುವುದರಿಂದ, ಅಜಿತ್ ಆ ಜಾಗವನ್ನು ತುಂಬಲಿದ್ದಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ ಸಂಭಾವನೆ ವಿವಾದ ಬಗೆಹರಿಯದ ಹೊರತು ಅಜಿತ್ ಅವರ ಮುಂದಿನ ಚಿತ್ರದ ಶೂಟಿಂಗ್ ಆರಂಭವಾಗುವುದು ಅನುಮಾನ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾನು ಅಸಹಾಯಕ ಸ್ವಾಮಿ, ಪಡಿತರ ಚೀಟಿಗಾಗಿ ದಿವ್ಯಾಂಗ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ಬಂದ ಪತಿ – Kannada News | Panna Man Carries Disabled Wife for Ration Card: 10 Year Welfare Denial

ಪತ್ನಿಯ ಹೊತ್ತುಬಂದ ಪತಿImage Credit source: India Today

ಪನ್ನಾ, ಜೂನ್ 18: ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳು ತಳಮಟ್ಟದ ಬಡವರಿಗೆ ತಲುಪಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ಪಡಿತರ ಚೀಟಿ(Ration Card) ಸಿಗದೆ ವಂಚಿತರಾಗಿರುವ ಕುಟುಂಬವೊಂದರ ವ್ಯಕ್ತಿ ದಿವ್ಯಾಂಗ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.
ಪನ್ನಾ ಜಿಲ್ಲೆಯ ಕಲೆಕ್ಟರೇಟ್‌ಗೆ ಆಗಮಿಸಿದ ಪುಷ್ಪೇಂದ್ರ ಸಿಂಗ್ ಎಂಬ ವ್ಯಕ್ತಿ ತನ್ನ ಮಕ್ಕಳು ಹಾಗೂ ಪತ್ನಿ ನೀಲು ರಾಜಾ ಅವರೊಂದಿಗೆ ಅಧಿಕಾರಿಗಳ ಮುಂದೆ ತಮ್ಮ ಕಳವಳ ತೋಡಿಕೊಂಡಿದ್ದಾರೆ.

ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ನೀಲು ರಾಜಾ, ನಾವು ಅತ್ಯಂತ ಬಡವರಾಗಿದ್ದರೂ ನಮ್ಮ ಗ್ರಾಮ ಪಂಚಾಯತ್ ಅಧಿಕಾರಿಗಳು ನಮಗೆ ತಿಳಿಯದಂತೆ 10 ವರ್ಷಗಳ ಹಿಂದೆ ನಮ್ಮಲ್ಲಿದ್ದ ‘ಅಂತ್ಯೋದಯ ಅನ್ನ ಯೋಜನೆ’ ಕಾರ್ಡನ್ನು ಸಾಮಾನ್ಯ ಬಿಪಿಎಲ್ ಕಾರ್ಡ್ ಆಗಿ ಬದಲಾಯಿಸಿದ್ದರು. ಅದಾದ ನಂತರ ನಮಗೆ ಹೊಸ ಪಡಿತರ ಚೀಟಿಯನ್ನೇ ನೀಡಿಲ್ಲ. ಇದರಿಂದಾಗಿ ಕಳೆದ ಒಂದು ದಶಕದಿಂದ ನಮ್ಮ ಕುಟುಂಬಕ್ಕೆ ಸಿಗಬೇಕಿದ್ದ ರಿಯಾಯಿತಿ ದರದ ಆಹಾರ ಧಾನ್ಯಗಳು ಸಿಗದೆ ನಾವು ವಂಚಿತರಾಗಿದ್ದೇವೆ ಎಂದು ದೂರಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY-G) ಅಡಿಯಲ್ಲಿ ಸಿಗಬೇಕಿದ್ದ ಮನೆ ಮತ್ತು ಶೌಚಾಲಯ ನಿರ್ಮಾಣದ ಸಹಾಯ ಧನವನ್ನೂ ಈ ಕುಟುಂಬಕ್ಕೆ ನಿರಾಕರಿಸಲಾಗಿದೆ. ನೀಲು ರಾಜಾ ಅವರು ಪ್ರಸ್ತುತ ಭೋಪಾಲ್‌ನ ಏಮ್ಸ್ಆ ಸ್ಪತ್ರೆಯಲ್ಲಿ ತೀವ್ರ ಕಿಡ್ನಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಉದ್ಯೋಗವಿಲ್ಲದೆ, ಇತ್ತ ರೇಷನ್ ಕಾರ್ಡ್ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಇವರ ಪರಿಸ್ಥಿತಿ ಮಕ್ಕಳ ಶಿಕ್ಷಣದ ಮೇಲೂ ಭಾರಿ ಪರಿಣಾಮ ಬೀರಿದೆ.

ಮತ್ತಷ್ಟು ಓದಿ: BPL ಕಾರ್ಡ್​​ದಾರರಿಗೆ ಶೀಘ್ರವೇ ಗುಡ್​​ನ್ಯೂಸ್​?: ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ

ಸ್ಥಳೀಯ ಪಂಚಾಯತ್ ಕಾರ್ಯದರ್ಶಿ, ಸರಪಂಚ್‌ನಿಂದ ಹಿಡಿದು ಮುಖ್ಯಮಂತ್ರಿ ಕಚೇರಿ  ವರೆಗೂ ಹತ್ತಾರು ಬಾರಿ ದೂರು ನೀಡಿದರೂ ಯಾರೂ ತಮ್ಮ ಸಮಸ್ಯೆಯನ್ನು ಆಲಿಸಿಲ್ಲ ಎಂದು ದಂಪತಿಗಳು ಅಳಲು ತೋಡಿಕೊಂಡಿದ್ದಾರೆ. ಸಾರ್ವಜನಿಕ ವಿಚಾರಣೆಯ ವೇಳೆ ಮಹಿಳೆ ಭಾವುಕರಾಗಿ ತಕ್ಷಣದ ನೆರವಿಗಾಗಿ ಕೈಮುಗಿದು ಬೇಡಿಕೊಂಡಿದ್ದಾರೆ.

ದಂಪತಿ ಕಷ್ಟದ ಕಥೆಯನ್ನು ಆಲಿಸಿದ ಪನ್ನಾ ಜಿಲ್ಲಾಧಿಕಾರಿ ಉಷಾ ಪರ್ಮಾರ್ ಅವರು, ಈ ಪ್ರಕರಣವನ್ನು ತಕ್ಷಣವೇ ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕುಟುಂಬಕ್ಕೆ ಅಗತ್ಯವಿರುವ ಪಡಿತರ ದಾಖಲೆಗಳನ್ನು ಒದಗಿಸಲು ಮತ್ತು ಅವರು ಅರ್ಹರಾಗಿರುವ ಎಲ್ಲಾ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ತಕ್ಷಣವೇ ತಲುಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 18, ಗುರುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷದ ಚೌತಿ ಮತ್ತು ಪುಷ್ಯಾ ನಕ್ಷತ್ರ ಹೊಂದಿರುವ ಈ ದಿನವು ಜ್ಯೋತಿಷ್ಯದ ಪ್ರಕಾರ ಅತ್ಯಂತ ವಿಶೇಷವಾಗಿದೆ.

ಈ ದಿನ ರಾಹುಕಾಲವು ಮಧ್ಯಾಹ್ನ 1:55 ರಿಂದ 3:22 ರವರೆಗೆ ಇರಲಿದ್ದು, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭ ಕಾಲಗಳು ಮಧ್ಯಾಹ್ನ 12:20 ರಿಂದ 1:57 ರವರೆಗೆ ವ್ಯಾಪಿಸಿವೆ. ಇದೊಂದು ಪರ್ವ ದಿನವಾಗಿದ್ದು, ಗುರು ಪುಷ್ಯ ಯೋಗದ ಪ್ರಾರಂಭವು 61 ದಿನಗಳ ಕಾಲ ಇರಲಿದೆ. ಇದು ಅದ್ಭುತವಾದ ಮತ್ತು ವಿಶೇಷವಾದ ದಿನವಾಗಿದೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಬ್ಲೂ ಲೈನ್’ ಕಾಮಗಾರಿ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಎಂಜಿನಿಯರ್‌ – Kannada News | ORR Airport Metro Project: Bengaluru Blue Line Faces Major Construction Challenges

ಬೆಂಗಳೂರು, ಜೂ.18: ಬೆಂಗಳೂರಿನ ಬಹುನಿರೀಕ್ಷಿತ ಯೋಜನೆ ನಮ್ಮ ಮೆಟ್ರೋದ ‘ಬ್ಲೂ ಲೈನ್’ (ఔಟರ್ ರಿಂಗ್ ರೋಡ್ – ಏರ್‌ಪೋರ್ಟ್ ಸಂಪರ್ಕ) ಕಾಮಗಾರಿ ಭಾರೀ ಸಂಕಷ್ಟದಲ್ಲಿ ಸಾಗುತ್ತಿದೆ. ಇದೀಗ ನಿಗದಿತ ಕಾಲಮಿತಿಯೊಳಗೆ ಈ ಪ್ರಾಜೆಕ್ಟ್ ಪೂರ್ಣಗೊಳ್ಳಲಿದೆಯೇ? ಎಂಬ ದೊಡ್ಡ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈ ಬಗ್ಗೆ ಬೆಂಗಳೂರು ಪೋಸ್ಟ್​​ (Bengaluru Post) ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ​​​ವಿಶೇಷವಾಗಿ, ನಾಗವಾರ-ಹೆಬ್ಬಾಳ ನಡುವಿನ ರಸ್ತೆ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯು ನಿಧಾನಗತಿಯಲ್ಲಿ ಸಾಗುತ್ತಿದೆ.

ಇನ್ನು ಈ ಕಾಮಗಾರಿಯ ಬಗ್ಗೆ ಎಂಜಿನಿಯರ್​​​​​​ರೊಬ್ಬರು ಹಲವು ಸವಾಲುಗಳನ್ನು ಚಿಚ್ಚಿಟ್ಟಿದ್ದಾರೆ.
ಸ್ಥಳೀಯವಾಗಿ ನಡೆಸಿದ ರಿಯಾಲಿಟಿ ಚೆಕ್ ಹಾಗೂ ಗ್ರೌಂಡ್ ವಿಸಿಟ್ ವೇಳೆ, ಹೆಸರು ಹೇಳಲು ಇಚ್ಛಿಸದ ಸೈಟ್ ಎಂಜಿನಿಯರ್‌ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ ಪ್ರಮುಖ ತಾಂತ್ರಿಕ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಬಿಚ್ಚಿಟ್ಟಿದ್ದಾರೆ.

ಯುಟಿಲಿಟಿ ಶಿಫ್ಟಿಂಗ್ ಸಮಸ್ಯೆ: ಭೂಗತ ನೀರಿನ ಪೈಪ್‌ಲೈನ್, ವಿದ್ಯುತ್ ಕೇಬಲ್ ಹಾಗೂ ಗ್ಯಾಸ್ ಲೈನ್‌ಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ.

ಟ್ರಾಫಿಕ್ ಮ್ಯಾನೇಜ್‌ಮೆಂಟ್: ಕರಾವಳಿ ಹಾಗೂ ಉತ್ತರ ಬೆಂಗಳೂರನ್ನು ಸಂಪರ್ಕಿಸುವ ಹೆಬ್ಬಾಳ ಭಾಗದಲ್ಲಿ ಭಾರಿ ವಾಹನ ದಟ್ಟಣೆ ಇರುವುದರಿಂದ, ಸಂಚಾರ ನಿಯಂತ್ರಣದೊಂದಿಗೆ ಕಾಮಗಾರಿ ನಡೆಸುವುದು ದೊಡ್ಡ ಸವಾಲಾಗಿದೆ.

ವಿನ್ಯಾಸ ಪರಿಷ್ಕರಣೆ ಮತ್ತು ಕಾರ್ಮಿಕರ ಕೊರತೆ: ಮೆಟ್ರೋ ನಿಲ್ದಾಣಗಳ ವಿನ್ಯಾಸದಲ್ಲಿನ ಪದೇ ಪದೇ ಬದಲಾವಣೆಗಳು ಮತ್ತು ಕುಶಲ ಕಾರ್ಮಿಕರ ತೀವ್ರ ಕೊರತೆಯು ಯೋಜನೆಗೆ ಮುಳ್ಳಾಗಿದೆ.

ವಿಶೇಷವಾಗಿ ಕೆಂಪುಪುರ ಭಾಗದಲ್ಲಿ ಮೆಟ್ರೋ ಪ್ರಗತಿ ಸಂಪೂರ್ಣ ಕುಂಠಿತಗೊಂಡಿರುವುದು ಕಣ್ಣಿಗೆ ಕಟ್ಟಿದಂತೆ ಕಾಣಿಸುತ್ತಿದೆ. ಇದರೊಂದಿಗೆ ವೀರಣ್ಣಪಾಳ್ಯ ಮತ್ತು ನಾಗವಾರ ನಡುವಿನ ಕೆಲವು ಆಯ್ದ ಸ್ಥಳಗಳಲ್ಲಿ ಕಾಮಗಾರಿ ಚಟುವಟಿಕೆಗಳು ಭಾರೀ ನಿಧಾನವಾಗಿ ಸಾಗುತ್ತಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್:

ಇನ್ನು ಈ ಕಾರಿಡಾರ್​​​ನಿಂದ ನಗರದ ಬಹುದೊಡ್ಡ ಬದಲಾವಣೆಗಳು ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ. ಹೀಗಿರುವಾಗ, ಬಿಎಂಆರ್‌ಸಿಎಲ್ ಈ ಸಮಸ್ಯೆಗಳಿಗೆ ಹಾಗೂ ಕಾಮಗಾರಿ ವೇಗಕ್ಕೆ ಹೆಚ್ಚಿನ ಗಮನ ನೀಡುವುದು ಅಗತ್ಯವಾಗಿದೆ. ಅದಕ್ಕಾಗಿ ‘ಪ್ಯಾಕೇಜ್ 1’ ಕಾಮಗಾರಿಯನ್ನು ಸ್ಥಗಿತವಾಗಿರುವುದಕ್ಕೆ ಹಾಗೂ ನಿಧಾನವಾಗುತ್ತಿರುವುದಕ್ಕೆ ಅಸಲಿ ಕಾರಣಗಳೇನು ಎಂಬುದನ್ನು ನೋಡಬೇಕಿದೆ. ಅಲ್ಲದೆ ದಿನಂಪ್ರತಿ ಸಂಚರಿಸುವ ಪ್ರಯಾಣಿಕರಿಗೆ ಕಾಮಗಾರಿ ಮುಕ್ತಾಯದ ಸಮಯದ ಬಗ್ಗೆ ತಿಳಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಐಎಂ ಕ್ಯಾಂಪಸ್​ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್​ಗಳು ಆಫರ್; ಟಾಟಾ ಟ್ರಸ್ಟ್ಸ್​ನಿಂದ ಅನುದಾನ

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಬ್ಲೂ ಲೈನ್‌ನ ಎಲ್ಲಾ ಸೆಕ್ಷನ್‌ಗಳ ಪೈಕಿ ಪ್ಯಾಕೇಜ್ 1 ಅತ್ಯಂತ ಹೆಚ್ಚು ವಿಳಂಬವಾಗಿರುವ ಭಾಗವಾಗಿ ಗೋಚರಿಸುತ್ತಿದೆ. ಆರಂಭದಲ್ಲೇ ಈ ಬೃಹತ್ ಪ್ಯಾಕೇಜ್ ಅನ್ನು ಸಣ್ಣ ಸಣ್ಣ ಗುತ್ತಿಗೆ ಒಪ್ಪಂದಗಳಾಗಿ ವಿಭಜಿಸಿದ್ದರೆ, ಇಂತಹ ದೊಡ್ಡ ತೊಂದರೆಗಳನ್ನು ತಪ್ಪಿಸಬಹುದಿತ್ತಲ್ಲವೇ? ಎಂಬ ಚರ್ಚೆ ಈಗ ತಜ್ಞರ ವಲಯದಲ್ಲಿ ನಡೆಯುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link