ನಟ ದರ್ಶನ್ (Darshan) ಪಾಲಿಗೆ ಸಂಕ್ರಾಂತಿ ಹಬ್ಬ ಅತ್ಯಂತ ಮಹತ್ವದ್ದಾಗಿತ್ತು. ಈ ಹಬ್ಬವನ್ನು ಅವರೇ ತಪ್ಪದೇ ಆಚರಿಸುತ್ತಿದ್ದರು. ಪ್ರಾಣಿ ಪ್ರಿಯರಾಗಿರುವ ನಟ ದರ್ಶನ್ ತಮ್ಮ ಫಾರಂಹೌಸ್ನಲ್ಲಿರುವ ಎಲ್ಲ ಪ್ರಾಣಿಗಳಿಗೂ ಸ್ನಾನ ಮಾಡಿಸಿ, ಹೂವುಗಳಿಂದ ಸಿಂಗರಿಸಿ ಕಿಚ್ಚು ಹಾಯಿಸುತ್ತಿದ್ದರು. ಪ್ರತಿ ವರ್ಷವೂ ಇದನ್ನು ತಪ್ಪದೇ ಆಚರಿಸಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ದರ್ಶನ್ ಜೈಲಿನಲ್ಲಿದ್ದಾರೆ ಆದರೆ ಅವರ ಫಾರಂ ಹೌಸ್ನಲ್ಲಿ ಸಂಕ್ರಾಂತಿ ನಿಂತಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಮುಂದಾಳತ್ವದಲ್ಲಿ ಫಾರಂ ಹೌಸ್ನಲ್ಲಿ ಸಂಕ್ರಾಂತಿ ಆಚರಣೆ ನಡೆದಿದೆ. ವಿಡಿಯೋ ನೋಡಿ….
ಬೆಂಗಳೂರು, ಜನವರಿ 15: ಈ ಹಿಂದೆ ಪೈಪ್ಲೈನ್ ಸೇರಿದಂತೆ ವಿವಿಧ ಕಡೆ ನೀರು ಸೋರಿಕೆಯಾಗಿ ವ್ಯರ್ಥವಾಗುವುದನ್ನು ತಡೆಯಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸುದ್ದಿಯಾಗಿದ್ದ ಬೆಂಗಳೂರು ಜಲಮಂಡಳಿ (BWSSB) ಇದೀಗ ಇಂಧನ ಕ್ಷಮತೆ ಹೆಚ್ಚಿಸಲು ಮತ್ತು ವಿದ್ಯುತ್ ಪೋಲಾಗುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ ಆಧಾರಿತ ಪಂಪ್ ಮಾನಿಟರಿಂಗ್ ಆರಂಭಿಸಿದೆ. ಬೆಂಗಳೂರಿನ (Bangalore)78 ಸ್ಟೇಷನ್ಗಳಲ್ಲಿ ಎಐ ಆಧಾರಿತ ಪಂಪು ಮಾನಿಟರಿಂಗ್ ಸಾಧನೆಗಳನ್ನು ಅಳವಡಿಸಲಾಗಿದೆ. ಇದರಿಂದ ವಾರ್ಷಿಕ 40 ಕೋಟಿ ರೂಪಾಯಿ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
78 ಕಡೆಗಳಲ್ಲಿ ಎಐ ಪಂಪ್ ಮಾನಿಟರಿಂಗ್ IPUMPNET ಅಳವಡಿಸಿಕೊಳ್ಳುವ ಮೂಲಕ, ಈ ಮಟ್ಟದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡ ವಿಶ್ವದ ಮೊದಲ ನೀರು ಸರಬರಾಜು ಮಂಡಳಿ ಎಂಬ ಹೆಗ್ಗಳಿಕೆಗೆ ಬೆಂಗಳೂರು ಜಲ ಮಂಡಳಿ ಪಾತ್ರವಾಗಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಉಲ್ಲೇಖಿಸಿದೆ.
ಹೇಗೆ ಕಾರ್ಯನಿರ್ವಹಿಸುತ್ತೆ IPUMPNET?
IPUMPNET ಹೆಸರಿನ ಈ ಎಐ ಆಧಾರಿತ ವ್ಯವಸ್ಥೆಯು ರಿಯಲ್ ಟೈಮ್ ಸೆನ್ಸರ್ಗಳನ್ನು ಒಳಗೊಂಡಿದೆ. ಸಾಂಪ್ರದಾಯಿಕ ಸಾಧನಗಳಂತಲ್ಲದೆ ಇದು ಪ್ರತಿಕ್ಷಣವೂ ಪಂಪ್ಗಳ ಕ್ಷಮತೆಯನ್ನು ಗಮನಿಸುತ್ತಿರುತ್ತದೆ. ಅತಿಯಾದ ಇಂಧನ ಬಳಕೆ, ವಿದ್ಯುತ್ ಪೋಲಾಗುವುದನ್ನು ಗಮನಿಸಿ ಅಲರ್ಟ್ ಮಾಡುತ್ತದೆ. ಈ IPUMPNET ವ್ಯವಸ್ಥೆಯು ಈಗಾಗಲೇ ಹಲವಾರು ಪಂಪ್ಗಳು ಮಿತಿಗಳಿಗಿಂತ ಹೆಚ್ಚಿನ ವಿದ್ಯುತ್ ಬಳಸುತ್ತಿರುವುದನ್ನು ಗುರುತಿಸಿದೆ. ಈ ಡೇಟಾವನ್ನು ಆಧರಿಸಿ, ಜಲ ಮಂಡಳಿಯು ಕಡಿಮೆ-ದಕ್ಷತೆಯ ಪಂಪ್ಗಳನ್ನು ಬದಲಾಯಿಸಿ ಹೆಚ್ಚಿನ-ದಕ್ಷತೆಯ ಪಂಪ್ಗಳನ್ನು ಅಳವಡಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಎಐ ವ್ಯವಸ್ಥೆಯಿಂದಾಗಿ, ಇಂಧನ ಪೋಲಾಗುವುದನ್ನು ತಡೆಗಟ್ಟುವುದರ ಜತೆಗೆ ಜಲಮಂಡಳಿಗೆ ಆರ್ಥಿಕವಾಗಿಯೂ ಉಳಿತಾಯವಾಗಲಿದೆ. ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವುದೂ ಸಾಧ್ಯವಾಗಲಿದೆ. ಇದರಿಂದಾಗಿ ಬೆಂಗಳೂರಿನ ಪರಿಸರ ಸುಸ್ಥಿರತೆಗೆ ಗಮನಾರ್ಹವಾಗಿ ಕೊಡುಗೆ ನೀಡಿದಂತಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಚಿಕ್ಕಬಳ್ಳಾಪುರ, ಜನವರಿ 15:ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಇಂತಹುದ್ದೇ ಮತ್ತೊಂದು ಆರೋಪ ಕೇಳಿಬಂದಿದೆ. ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ನಿಂದಿಸಿದ್ದ ಎನ್ನಲಾಗಿದ್ದು, ಆದರೆ ತಾನು ಆಡಿಯೋ ರೆಕಾರ್ಡ್ ಮಾಡಿಕೊಂಡಿಲ್ಲ ಎಂದವರು ತಿಳಿಸಿದ್ದಾರೆ. ಈ ಬಗ್ಗೆ ನಗರಸಭೆ ಆಯುಕ್ತೆ ಅಮೃತಾ, ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಬಳಿ ಅವರು ಅಳಲು ತೋಡಿಕೊಂಡಿದ್ದಾರೆ.
ಆರೋಪಿಗಾಗಿ 3 ತಂಡಗಳಿಂದ ಹುಡುಕಾಟ
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ವಿಚಾರವಾಗಿ ತಲೆಮರೆಸಿಕೊಂಡಿರುವ ರಾಜೀವ್ಗೌಡಗೆ 3 ತಂಡಗಳಿಂದ ಹುಡುಕಾಟ ನಡೆಸಲಾಗುತ್ತಿದೆ. ಶಿಡ್ಲಘಟ್ಟ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆನಂದಕುಮಾರ್, ಚಿಂತಾಮಣಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವರಾಜ್ ಮತ್ತು ಸೈಬರ್ ಪೊಲೀಸ್ ಠಾಣೆ ಪಿಐ ಸೂರ್ಯಪ್ರಕಾಶ್ ನೇತೃತ್ವದಲ್ಲಿ ಶೋಧ ನಡೆಯುತ್ತಿದೆ. ಬಂಧನ ಭೀತಿಯಿಂದ ನಿನ್ನೆ ರಾತ್ರಿ ರಾಜೀವ್ ಗೌಡ ಪರಾರಿಯಾಗಿದ್ದು, ಆತನ 2 ಮೊಬೈಲ್ಗಳು ಕೂಡ ಸ್ವಿಚ್ಆಫ್ ಆಗಿವೆ. ಹೀಗಾಗಿ ಬೆಂಗಳೂರಿನ ಇಂದಿರಾನಗರದಲ್ಲಿ 1 ತಂಡ, ಸಂಜಯ್ ನಗರದಲ್ಲಿ 1 ತಂಡ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒಂದು ತಂಡದಿಂದ ಆರೋಪಿಗೆ ಹುಡುಕಾಟ ನಡೆಯುತ್ತಿದೆ. ಮತ್ತೊಂದೆಡೆ ರಾಜೀವ್ ಗೌಡನನ್ನು ಬಂಧಿಸದಿದ್ರೆ ಶಿಡ್ಲಘಟ್ಟ ಬಂದ್ ಮಾಡುವುದಾಗಿ ಎನ್ಡಿಎ ಮುಖಂಡರು ಪೊಲೀಸರಿಗೆ ಎಚ್ಚರಿಕೆ ಕೂಡ ನೀಡಿರುವ ಕಾರಣ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಮತ್ತೊಂದೆಡೆ ಪ್ರಾಣ ಬೆದರಿಕೆ ಆಡಿಯೋ ವೈರಲ್ ಆಗುತ್ತಿದ್ದಂತೆ, ಸಂಬಂಧಿಕರು ಹಾಗೂ ಪ್ರಭಾವಿ ಗುತ್ತಿಗೆದಾರನ ಮೂಲಕ ಪೌರಾಯುಕ್ತೆ ಅಮೃತಾರನ್ನು ರಾಜೀವ್ ಗೌಡ ಪರೋಕ್ಷವಾಗಿ ಸಂಪರ್ಕಿಸಿದ್ದ. ರಾಜಕಾರಣಿಗಳ ವಿರೋಧ ಕಟ್ಟಿಕೊಂಡರೆ ಮುಂದೆ ಪೋಸ್ಟಿಂಗ್ ಸಿಗಲ್ಲ. ಇದೆಲ್ಲ ಯಾಕೆ ಬೇಕು ಬಿಟ್ಟು ಬಿಡು ಎಂದು ರಾಜೀವ್ ಗೌಡ ಅಣಿತಿಯಂತೆ ಗುತ್ತಿಗೆದಾರರೊಬ್ಬರು ನಗರಸಭೆ ಪೌರಾಯುಕ್ತೆಗೆ ತಿಳಿಸಿದ್ದರು. ಆದರೆ ಹುದ್ದೆಗಿಂತ ಆತ್ಮಗೌರವ ಮುಖ್ಯ, ಬೇಕಾದರೆ ಮತ್ತೆ ಸ್ವಾಫ್ಟ್ವೇರ್ ಕೆಲಸಕ್ಕೆ ಸೇರುತ್ತೇನೆ ಎಂದು ಅಮೃತಾ ಅವರು ಈ ವೇಳೆ ಹೇಳಿದ್ದಾರೆ. ಸರ್ಕಾರಿ ಕೆಲಸಕ್ಕೆ ಸೇರುವ ಮುನ್ನ ಮಾಸಿಕ 3 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದೆ. ರಾಜೀವ್ ಗೌಡ ಮಾತಿನಿಂದ ಮನೆಯವರು ಬೇಸರಗೊಂಡಿದ್ದಾರೆ ಎಂದು ಅಮೃತಾ ತಿಳಿಸಿದ್ದಾರೆ.
ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮನೆ ನಿರ್ಮಾಣದಿಂದ ವಸ್ತುಗಳ ಜೋಡಣೆಯ ವರೆಗೂ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳಿವೆ. ಇದಲ್ಲದೆ, ಮನೆಯಲ್ಲಿರುವ ಪೂಜಾ ಕೊಠಡಿಗೆ ಸಂಬಂಧಿಸಿದ ವಿಷಯಗಳನ್ನು ವಾಸ್ತು ಸ್ಪಷ್ಟಪಡಿಸಿದೆ. ಈ ವಾಸ್ತು ನಿಯಮಗಳನ್ನು ನಿರ್ಲಕ್ಷಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಮುರಿದ ವಿಗ್ರಹ:
ಪೂಜಾ ಕೊಠಡಿಯಲ್ಲಿ ಎಂದಿಗೂ ಮುರಿದ ದೇವರ ವಿಗ್ರಹಗಳನ್ನು ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪೂಜಾ ಕೋಣೆಯಲ್ಲಿ ಮುರಿದ ವಿಗ್ರಹಗಳನ್ನು ಪೂಜಿಸುವುದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ, ಇದು ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಪೂಜೆಯು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ.
ಒಣಗಿದ ಹೂವು:
ಪೂಜೆಯ ಸಮಯದಲ್ಲಿ ಪ್ರತಿದಿನ ದೇವರಿಗೆ ಹೂವುಗಳನ್ನು ಅರ್ಪಿಸಲಾಗುತ್ತದೆ. ಮರುದಿನ ಬೆಳಿಗ್ಗೆ, ದೇವರ ಅಲಂಕಾರದ ಸಮಯದಲ್ಲಿ, ಒಣಗಿದ ಹೂವುಗಳನ್ನು ತೆಗೆದುಹಾಕಿ. ಒಣಗಿದ ಹೂವುಗಳನ್ನು ಇಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಪೂರ್ವಜರ ಫೋಟೋ:
ಪೂಜಾ ಮಂದಿರದಲ್ಲಿ ಪೂರ್ವಜರ ಚಿತ್ರಗಳನ್ನು ಇಡದಂತೆ ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ. ಪೂರ್ವಜರು ಮತ್ತು ದೇವತೆಗಳ ಸ್ಥಾನವನ್ನು ಧರ್ಮಗ್ರಂಥಗಳು ಪ್ರತ್ಯೇಕವಾಗಿ ವ್ಯಾಖ್ಯಾನಿಸುತ್ತವೆ. ಆದ್ದರಿಂದ ಪೂರ್ವಜರ ಫೋಟೋಗಳನ್ನು ಇಡುವುದರಿಂದ ಅಶಾಂತಿ ಉಂಟಾಗುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ, ಮನೆಯಲ್ಲಿ ಪೂರ್ವಜರ ಚಿತ್ರಗಳನ್ನು ಇಡಲು ದಕ್ಷಿಣ ದಿಕ್ಕು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಪೂಜಾ ಕೋಣೆಯಲ್ಲಿ ಹರಿದ ಧಾರ್ಮಿಕ ಪುಸ್ತಕಗಳನ್ನು ಇಡಬೇಡಿ. ಪೂಜಾ ಕೋಣೆಯಲ್ಲಿ ಹರಿದ ಧಾರ್ಮಿಕ ಪುಸ್ತಕಗಳನ್ನು ಇಡುವುದರಿಂದ ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಚೂಪಾದ ವಸ್ತು:
ವಾಸ್ತು ಶಾಸ್ತ್ರದ ಪ್ರಕಾರ, ಕತ್ತರಿ ಮತ್ತು ಚಾಕುಗಳಂತಹ ಹರಿತವಾದ ವಸ್ತುಗಳನ್ನು ಪೂಜಾ ಮಂದಿರದಲ್ಲಿ ಇಡಬಾರದು. ಹರಿತವಾದ ವಸ್ತುಗಳು ನಕಾರಾತ್ಮಕತೆಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ, ಆದ್ದರಿಂದ ವಾಸ್ತು ಶಾಸ್ತ್ರದಲ್ಲಿ ವಿವರಿಸಿದ ಈ ನಿಯಮಗಳನ್ನು ಪಾಲಿಸಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಜನವರಿ 15: ಕಳೆದ ವರ್ಷ ಚೀನಾ ದೇಶಕ್ಕೆ (China) ಭಾರತದ ರಫ್ತು ಸಖತ್ ಏರಿದೆ. 2024ರ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ಚೀನಾಗೆ ಭಾರತದ ರಫ್ತು 5.5 ಬಿಲಿಯನ್ ಡಾಲರ್ನಷ್ಟು ಹೆಚ್ಚಿದೆ. 2024ರಲ್ಲಿ ಭಾರತವು ಚೀನಾಗೆ 14.25 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡಿತ್ತು. 2025ರಲ್ಲಿ ಭಾರತದ ರಫ್ತು 19.75 ಬಿಲಿಯನ್ ಡಾಲರ್ ಮಟ್ಟ ಮುಟ್ಟಿದೆ. ಅಂದರೆ, ರಫ್ತಿನಲ್ಲಿ ಶೇ. 8.7ರಷ್ಟು ಏರಿಕೆ ಆಗಿದೆ.
ಚೀನಾದಿಂದ ಇನ್ನೂ ಹೆಚ್ಚು ಆಮದು…
ಚೀನಾಗೆ ಭಾರತದ ರಫ್ತು ಹೆಚ್ಚಿದೆಯಾದರೂ, ಅದಕ್ಕಿಂತ ಹೆಚ್ಚಳ ಆಗಿರುವುದು ಚೀನಾ ಭಾರತಕ್ಕೆ ಮಾಡಿದ ರಫ್ತಿನಲ್ಲಿ. 2025ರಲ್ಲಿ ಭಾರತಕ್ಕೆ ಚೀನಾದ ರಫ್ತಿನಲ್ಲಿ ಬರೋಬ್ಬರಿ ಶೇ. 12.8 ರಷ್ಟು ಹೆಚ್ಚಳ ಆಗಿದೆ. 2024ರಲ್ಲಿ ಭಾರತಕ್ಕೆ ಚೀನಾ 113.45 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡಿತ್ತು. 2025ರಲ್ಲಿ ಅದು 135.87 ಬಿಲಿಯನ್ ಡಾಲರ್ಗೆ ಏರಿದೆ.
ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ 2025ರಲ್ಲಿ ಒಟ್ಟು 155.62 ಬಿಲಿಯನ್ ಡಾಲರ್ನಷ್ಟು ಇದೆ. ಇದು ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ಭಾರತದ ರಫ್ತು ಹೆಚ್ಚಳಕ್ಕಿಂತಲೂ ಚೀನಾದ ರಫ್ತು ಹೆಚ್ಚಳ ಅಧಿಕ ಇರುವುದರಿಂದ ಚೀನಾದೊಂದಿಗಿನ ಭಾರತದ ಟ್ರೇಡ್ ಡೆಫಿಸಿಟ್ ಕೂಡ ಅಧಿಕಗೊಂಡಿದೆ. ಇದರೊಂದಿಗೆ ಈ ಟ್ರೇಡ್ ಡೆಫಿಸಿಟ್ 116.12 ಬಿಲಿಯನ್ ಡಾಲರ್ಗೆ ಹೆಚ್ಚಿದೆ. ಇದು ಭಾರತಕ್ಕೆ ಎದುರಾಗಿರುವ ಅತಿದೊಡ್ಡ ಟ್ರೇಡ್ ಡೆಫಿಸಿಟ್ ಆಗಿದೆ.
ಸಕಾರಾತ್ಮಕ ಅಂಶವೆಂದರೆ ಚೀನಾದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಭಾರತದ ಸರಕುಗಳು ಪ್ರವೇಶ ಮಾಡಿ ಸ್ಪರ್ಧೆಯೊಡ್ಡುವುದು ಹೆಚ್ಚಾಗುತ್ತಿದೆ. ಟೆಲಿಕಾಂ ಉಪಕರಣ, ಮಸಾಲೆ ಪದಾರ್ಥ, ಮೀನು ಇತ್ಯಾದಿ ವಸ್ತುಗಳು ಚೀನಾಗೆ ರಫ್ತಾಗುವುದು ಹೆಚ್ಚಿದೆ. ಇದೇ ವೇಳೆ, ಚೀನಾದ ಐಟಿ, ಫಾರ್ಮಾ ಮತ್ತು ಕೃಷಿ ಕ್ಷೇತ್ರದ ಮಾರುಕಟ್ಟೆಯ ಮೇಲೂ ಭಾರತ ಕಣ್ಣಿಟ್ಟಿದೆ.
ಇದೇ ವೇಳೆ ಚೀನಾದ ಒಟ್ಟಾರೆ ರಫ್ತು 2025ರಲ್ಲಿ ಗಣನೀಯವಾಗಿ ಹೆಚ್ಚಿದೆ. 2025ರಲ್ಲಿ ಅದರ ರಫ್ತು 3.77 ಟ್ರಿಲಿಯನ್ ಡಾಲರ್ ಇದ್ದರೆ, ಆಮದು 2.58 ಟ್ರಿಲಿಯನ್ ಡಾಲರ್ ಇದೆ. ಅಂದರೆ, ಚೀನಾಗೆ ದಾಖಲೆಯ 1.2 ಟ್ರಿಲಿಯನ್ ಡಾಲರ್ನಷ್ಟು ಟ್ರೇಡ್ ಸರ್ಪ್ಲಸ್ ಆದಂತಾಯಿತು. ಅಂದರೆ, ಆಮದಿಗಿಂತ ರಫ್ತು ಬಹಳ ಅಧಿಕ ಇದೆ. ಅಮೆರಿಕದ ಟ್ಯಾರಿಫ್ ನಡುವೆಯೂ ಚೀನಾದ ವ್ಯಾಪಾರ ಹೆಚ್ಚಿರುವುದು ಅದು ಹಲವಾರು ಕ್ಷೇತ್ರಗಳಲ್ಲಿ ರಫ್ತು ಉದ್ಯಮಗಳನ್ನು ನೆಲಗೊಳಿಸಿರುವುದು ಕಾರಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಸಂಚಾರ ಮತ್ತು ಇತರೆ ಗ್ರಹಗಳೊಂದಿಗಿನ ಸಂಯೋಗವು ಮನುಷ್ಯನ ಜೀವನದಲ್ಲಿ ಆರೋಗ್ಯ, ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿ ಸೇರಿದಂತೆ ಹಲವು ಅಂಶಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಶನಿಗ್ರಹವು ಒಂದು ರಾಶಿಯಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಸ್ಥಿತವಾಗಿರುತ್ತದೆ. ಈ ಅವಧಿಯಲ್ಲಿ ಇತರ ಗ್ರಹಗಳು ಶನಿಯೊಂದಿಗೆ ಸಂಯೋಗಗೊಂಡಾಗ ಉಂಟಾಗುವ ಫಲಗಳು ಮತ್ತು ಅನಾರೋಗ್ಯ ಸಮಸ್ಯೆಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಶನಿಗ್ರಹವು ಏಕಾಂಗಿಯಾಗಿ ಪ್ರಭಾವ ಬೀರಿದಾಗ ವಾತ ಸಂಬಂಧಿ ಕಾಯಿಲೆಗಳು, ನರಗಳ ದೌರ್ಬಲ್ಯ, ಬಲಹೀನತೆ, ಪ್ಯಾರಾಲಿಸಿಸ್, ಕಿಡ್ನಿ ಮತ್ತು ಲಿವರ್ ವೈಫಲ್ಯ, ಆಸ್ತಮಾ, ಉಸಿರಾಟದ ತೊಂದರೆಗಳು, ನ್ಯುಮೋನಿಯಾ, ಅಧಿಕ ಜ್ವರ, ಪ್ರಜ್ಞೆ ತಪ್ಪುವುದು, ಕೂದಲು ಉದುರುವುದು, ಅಜೀರ್ಣ ಮತ್ತು ದುಶ್ಚಟಗಳ ಕಡೆಗೆ ಗಮನ ಹೋಗುವುದು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
ಇತರೆ ಗ್ರಹಗಳು ಶನಿಯೊಂದಿಗೆ ಸಂಯೋಗಗೊಂಡಾಗ ಉಂಟಾಗುವ ನಿರ್ದಿಷ್ಟ ಪರಿಣಾಮಗಳು:
ಶನಿ ಮತ್ತು ರವಿ ಸಂಯೋಗ:
ರವಿ ಗ್ರಹವು ಶನಿಯೊಂದಿಗೆ ಸೇರಿದಾಗ ಬಲಹೀನತೆ, ದೃಷ್ಟಿದೋಷ, ನೀರಸತೆ ಮತ್ತು ಶರೀರದಲ್ಲಿ ಉತ್ಸಾಹದ ಕೊರತೆ ಕಂಡುಬರುತ್ತದೆ. ಮೇಲಾಧಿಕಾರಿಗಳಿಂದ ತೊಂದರೆ, ತಂದೆ ಅಥವಾ ತಂದೆಗೆ ಸಮಾನರ ಅಗಲಿಕೆ ಅಥವಾ ಅವರ ಅನಾರೋಗ್ಯದ ಚಿಂತೆ, ಅಧಿಕ ಖರ್ಚುಗಳು ಮತ್ತು ಮಾನಸಿಕ ಶಾಂತಿಯ ನಷ್ಟವಾಗುತ್ತದೆ.
ಶನಿ ಮತ್ತು ಚಂದ್ರ ಸಂಯೋಗ:
ಚಂದ್ರನು ಶನಿಯೊಂದಿಗೆ ಸೇರಿದಾಗ ಮತಿಭ್ರಮಣ, ಎದೆನೋವು, ರಕ್ತಹೀನತೆ, ಮುಖದ ಕಾಂತಿ ಹೊರಟು ಹೋಗುವುದು, ಮುಖದ ಮೇಲೆ ಗುಳ್ಳೆಗಳು, ಆಲಸ್ಯ ಮತ್ತು ಆಸಕ್ತಿಯ ಕೊರತೆ ಉಂಟಾಗಬಹುದು.
ಶನಿ ಮತ್ತು ಬುಧ ಸಂಯೋಗ:
ಬುಧ ಗ್ರಹವು ಶನಿಯೊಂದಿಗೆ ಸೇರಿದಾಗ ಮಾತಿನ ತೊದಲಿಕೆ, ಚರ್ಮ ವ್ಯಾಧಿಗಳು, ಕಿವಿ ನೋವು ಮತ್ತು ಕಿವಿಯಲ್ಲಿ ಸೋರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚಿಕ್ಕ ಮಕ್ಕಳಲ್ಲಿ ಈ ಸಂಯೋಗವಿದ್ದರೆ ಬುಧಶಾಂತಿ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ.
ಶನಿ ಮತ್ತು ಗುರು ಸಂಯೋಗ:
ಗುರು ಗ್ರಹವು ಶನಿಯೊಂದಿಗೆ ಸಂಯೋಗಗೊಂಡಾಗ ಜೀರ್ಣಕ್ರಿಯೆ ಸಮಸ್ಯೆಗಳು, ಅತಿಯಾದ ಬುದ್ಧಿವಂತಿಕೆ, ವಿಚಿತ್ರ ವರ್ತನೆ, ನೆನಪಿನ ಶಕ್ತಿ ನಷ್ಟ (ಮೆಮೊರಿ ಲಾಸ್) ಮತ್ತು ಆಹಾರದ ಬಗ್ಗೆ ನಿರಾಸಕ್ತಿ ಉಂಟಾಗಬಹುದು.
ಫಿರೋಜಾಬಾದ್, ಜನವರಿ 15: ಆಸ್ತಿ ವಿವಾದ ಪತ್ನಿಯನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿದೆ. ಪತಿಯೊಬ್ಬ ತನ್ನ ಸಹೋದರರ ಸಹಾಯದಿಂದ ಪತ್ನಿಯನ್ನು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದೆ. ಮೂವರು ಸಹೋದರರ ಸಹಾಯದಿಂದ ತನ್ನ ಹೆಂಡತಿಯನ್ನು ಕೊಂದು, ಆಕೆಯ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ, ಬಳಿಕ ರುಂಡವನ್ನು ಡ್ರಮ್ನಲ್ಲಿರಿಸಿದ್ದ.
ಆರೋಪಿಗಳು ಹರಿತವಾದ ಆಯುಧವನ್ನು ಬಳಸಿ ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುತ್ತಿಗೆಯ ಮೇಲಿನ ಭಾಗವನ್ನು ಡ್ರಮ್ನೊಳಗೆ ಬಚ್ಚಿಟ್ಟು, ಮುಂಡವನ್ನು ಮನೆಯೊಳಗೆ ಹಾಸಿಗೆಯ ಮೇಲೆ ಎಸೆಯಲಾಗಿತ್ತು ಎಂದು ಆರೋಪಿಸಲಾಗಿದೆ.
ಪೊಲೀಸರು ಕತ್ತರಿಸಿದ ತಲೆಯನ್ನು ಡ್ರಮ್ನಿಂದ ಮತ್ತು ಮುಂಡವನ್ನು ಮನೆಯೊಳಗಿನ ಹಾಸಿಗೆಯಲ್ಲಿ ವಶಪಡಿಸಿಕೊಂಡರು. ಮಾಹಿತಿಯ ಪ್ರಕಾರ, ಮೃತ ಲತಾ ದೇವಿ ಸುಮಾರು 25–26 ವರ್ಷಗಳ ಹಿಂದೆ ಅಶುತೋಷ್ ಅವರನ್ನು ವಿವಾಹವಾಗಿದ್ದರು. ದಂಪತಿ ನಡುವೆ ದೀರ್ಘಕಾಲದಿಂದ ಆಸ್ತಿ ವಿವಾದವಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅಶುತೋಷ್ ಅವರ ಸಹೋದರರು ಈ ಪಿತೂರಿ ನಡೆಸಿ ಜನವರಿ 12 ರ ಮಧ್ಯರಾತ್ರಿ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿಸಲಾಗಿದೆ.
ಅಶುತೋಷ್ ಒಬ್ಬ ಸರಳ ವ್ಯಕ್ತಿ ಆತ ಈ ಕೊಲೆ ಮಾಡಿದ್ದಾನೆಂದರೆ ನಂಬಲು ಸಾಧ್ಯವಾಗುತ್ತಿಲ್ಲ, ಆತನ ಸಹೋದರರ ಕೈವಾಡ ಇದರಲ್ಲಿದೆ, ಅವರ ಜತೆ ಸೇರಿಕೊಂಡು ಈತ ಕೂಡ ಈ ಘೋರ ಅಪರಾಧವೆಸಗಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ತಿಳಿಸಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿತು.
ಮಹಿಳೆಯ ಕತ್ತು ಹಿಸುಕಿ, ಅವರ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿದ್ದಾರೆ. ಒಂದು ಭಾಗವು ಹಾಸಿಗೆಯ ಮೇಲೆ ಎಸೆದಿದ್ದಾರೆ, ಮತ್ತು ಇನ್ನೊಂದು ಭಾಗವನ್ನು ಕೋಣೆಯೊಳಗಿನ ಡ್ರಮ್ನಲ್ಲಿ ಇರಿಸಲಾಗಿತ್ತು.ಆದರೆ ಕೊಲೆ ಮಾಡುವ ನಿರ್ಧಾರವನ್ನು ಏಕೆ ತೆಗೆದುಕೊಂಡರು ಗೊತ್ತಿಲ್ಲವೆಂದು ಮಹಿಳೆಯ ಸಹೋದರ ಸಂಜೀವ್ ದೀಕ್ಷಿತ್ ಹೇಳಿದ್ದಾರೆ.
ಮಹಿಳೆಯ ಗಂಟಲು ಸೀಳಲಾಗಿದೆ, ಆ ಸಮಯದಲ್ಲಿ ಅಶುತೋಷ್ ಮತ್ತು ಅವನ ಮೂವರು ಸಹೋದರರು ಇದ್ದರು. ಅವರಲ್ಲಿ ಒಬ್ಬರು ಆಕೆಯ ಕೈಗಳನ್ನು ಹಿಡಿದು ಕುತ್ತಿಗೆ ಕತ್ತರಿಸಿ ಡ್ರಮ್ನಲ್ಲಿ ಹಾಕಿದ್ದಾರೆ. ಮುಂಡವನ್ನು ಹಾಸಿಗೆಯ ಮೇಲೆ ಮಲಗಿಸಲಾಗಿತ್ತು. ಅಶುತೋಷ್ ನಗರದಲ್ಲಿ ವಾಸಿಸುವ ತನ್ನ ಸಹೋದರರಿಗೆ ಅಶುತೋಷ್ ಹಣ ಕೊಡುತ್ತಿದ್ದ ಎಂದು ಮತ್ತೊಬ್ಬ ಸಂಬಂಧಿ ಉಪೇಂದ್ರ ಪ್ರತಾಪ್ ಹೇಳಿದ್ದಾರೆ. ನಾವು ಅಶುತೋಷ್ ಅವರನ್ನು ಬಂಧಿಸಿದ್ದೇವೆ. ಇದು ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದ ಘಟನೆಯಾಗಿದೆ ಎಂದು ಸಿರ್ಸಗಂಜ್ನ ವೃತ್ತ ಅಧಿಕಾರಿ ಅನಿಮೇಶ್ ಸಿಂಗ್ ಹೇಳಿದ್ದಾರೆ.
ಬೆಂಗಳೂರು, ಜನವರಿ 15: ಬೆಂಗಳೂರಿನ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿವೆ. ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಈ ದಿನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು, ಸೂರ್ಯದೇವನ ರಶ್ಮಿಯು ದೇಗುಲದ ಒಳಗಿರುವ ಶಿವಲಿಂಗವನ್ನು ಸಂಜೆ 5 ಗಂಟೆ 2 ನಿಮಿಷಕ್ಕೆ ಸ್ಪರ್ಶಿಸಲಿದೆ ಎಂದು ಅರ್ಚಕ ಸೋಮಸುಂದರ ದೀಕ್ಷಿತ್ ತಿಳಿಸಿದ್ದಾರೆ. ಜತೆಗೆ, ಈ ಅಪರೂಪದ ವಿದ್ಯಮಾನದ ಧಾರ್ಮಿಕ ಮಹತ್ವದ ಬಗ್ಗೆ ವಿವರಿಸಿದ್ದಾರೆ. ಇದು ಅತ್ಯಂತ ವಿಶಿಷ್ಟವಾದ ದಿನವಾಗಿದ್ದು, ಶಿವನ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ಧನುರ್ಮಾಸ ಪೂಜೆಯ ಕೊನೆಯ ದಿನವೂ ಇದಾಗಿದೆ ಎಂದು ಅವರು ತಿಳಿಸಿದ್ದಾರೆ. ಅವರ ವಿವರಣೆಗಳಿಗೆ ವಿಡಿಯೋ ನೋಡಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬಿಗ್ಬಾಸ್ (Bigg Boss) ಫಿನಾಲೆ ಹತ್ತಿರದಲ್ಲಿದೆ. ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು, ಗಿಲ್ಲಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದ್ದಾರೆ. ಹೊರಗೆ ಗಿಲ್ಲಿಗೆ ದೊಡ್ಡ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ. ಗಿಲ್ಲಿ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಗಳು, ಹಾಡುಗಳು ಸಹ ಹರಿದಾಡುತ್ತಿವೆ. ಗಿಲ್ಲಿ ಹೆಸರಲ್ಲಿ ಆಟೋ ಸೇವೆಯನ್ನು ಉಚಿತವಾಗಿ ಕೊಡುವುದಾಗಿ ಕೆಲ ಆಟೋ ಡ್ರೈವರ್ಗಳು ಘೋಷಣೆ ಮಾಡಿದ್ದಾರೆ. ಒಟ್ಟಾರೆ ಗಿಲ್ಲಿ ಕ್ರೇಜ್ ಜೋರಾಗಿದೆ. ಅಂದಹಾಗೆ ಗಿಲ್ಲಿ ಹೆಸರಲ್ಲಿ ಬಿರಿಯಾನಿ ಸಹ ಇದೆಯೆಂಬುದು ನಿಮಗೆ ಗೊತ್ತೆ? ಆದರೆ ಈ ‘ಗಿಲ್ಲಿ ಬಿರಿಯಾನಿ’ ಸಿಗುವುದು ಬೆಂಗಳೂರಲ್ಲಿ ಅಲ್ಲ ಬದಲಿಗೆ ಚೆನ್ನೈನಲ್ಲಿ. ಆದರೆ ಬಿಗ್ಬಾಸ್ ಗಿಲ್ಲಿಗೂ, ಚೆನ್ನೈನ ಗಿಲ್ಲಿ ಬಿರಿಯಾನಿಗೂ ಸಂಬಂಧವಿಲ್ಲ, ಆದರೆ ಆ ಬಿರಿಯಾನಿ ಜೊತೆಗೆ ಸೂಪರ್ ಸ್ಟಾರ್ ರಜನೀಕಾಂತ್ಗೆ ನೇರ ಸಂಬಂಧ ಇದೆ. ಏನಿದು ಗಿಲ್ಲಿ ಬಿರಿಯಾನಿ, ಆ ಬಿರಿಯಾನಿಗೆ ಗಿಲ್ಲಿ ಎಂದೇಕೆ ಹೆಸರು ಕೊಟ್ಟರು? ಮಾಹಿತಿ ಇಲ್ಲಿದೆ ಓದಿ…
ಗಿಲ್ಲಿ ಬಿರಿಯಾನಿ ಎಂಬುದು ಚೆನ್ನೈನಲ್ಲಿ ಮಾತ್ರವೇ ಸಿಗುವ ವಿಭಿನ್ನ ಬಗೆಯ ಬಿರಿಯಾನಿ. ಚೆನ್ನೈನ ತಾಜ್ ಕೋರಮಂಡಲ್ನಲ್ಲಿ ಈ ಗಿಲ್ಲಿ ಬಿರಿಯಾನಿ ಸರ್ವ್ ಮಾಡಲಾಗುತ್ತದೆ. ಇತರೆ ಬಿರಿಯಾನಿ ರೀತಿ ಈ ಬಿರಿಯಾನಿ ಉದುರುರಾಗಿ ಅಥವಾ ಡ್ರೈ ಆಗಿ ಇರುವುದಿಲ್ಲ ಬದಲಿಗೆ ಬಿಸಿ ಬೇಳೆ ಬಾತ್ ರೀತಿ ಇರುತ್ತದೆ ಆದರೆ ಬಿರಿಯಾನಿ ರೀತಿಯ ರುಚಿಯೇ ಇದರಲ್ಲಿ ಇರುತ್ತದೆ. ತಾಜ್ ಕೋರಮಂಡಲ್ನಲ್ಲಿ ಈ ಬಿರಿಯಾನಿಯನ್ನು 1990ರ ದಶಕದಲ್ಲಿ ಮೊದಲ ಬಾರಿಗೆ ಅನ್ವೇಷಿಸಲಾಯ್ತು. ಈ ಅನ್ವೇಷಣೆಗೆ ಕಾರಣವಾಗಿದ್ದು ಸೂಪರ್ ಸ್ಟಾರ್ ರಜನೀಕಾಂತ್.
ತಾಜ್ನಲ್ಲಿ ಆಗ ಶೆಫ್ ಆಗಿದ್ದ ರಾಮ್ ಮೋಹನ್ ಎಂಬುವರು ರಜನೀಕಾಂತ್ ಅವರಿಗಾಗಿ ಈ ಗಿಲ್ಲಿ ಬಿರಿಯಾನಿಯನ್ನು ಮಾಡಿದ್ದರು. ಅವರೇ ಹೇಳಿಕೊಂಡಿರುವಂತೆ ರಜನೀಕಾಂತ್ ಅವರು ಆಗ ತಾಜ್ ಕೋರಮಂಡಲ್ಗೆ ಬಹಳ ಬರುತ್ತಿದ್ದರಂತೆ. ವಿಶೇಷವಾಗಿ ಅವರ ರಾತ್ರಿ ಊಟ ಅಲ್ಲೇ ಆಗುತ್ತಿತ್ತಂತೆ. ರಜನೀಕಾಂತ್ ಅಲ್ಲಿಗೆ ಹೋದಾಗೆಲ್ಲ ಸಾಮಾನ್ಯವಾಗಿ ಪೂರಿ ಮತ್ತು ಅದರ ಜೊತೆಗೆ ಚಿಕನ್ ಅಥವಾ ಮಟನ್ ಗ್ರೇವಿ ತಿನ್ನುತ್ತಿದ್ದರಂತೆ. ಆದರೆ ಒಂದು ದಿನ ರಾತ್ರಿ ಸುಮಾರು ಒಂದು ಗಂಟೆ ವೇಳೆಗೆ ಬಂದ ರಜನೀಕಾಂತ್, ‘ನನಗೆ ಬಿರಿಯಾನಿ ತಿನ್ನುವ ಮನಸ್ಸಾಗಿದೆ’ ಎಂದು ಶೆಫ್ ರಾಮ್ ಮೋಹನ್ ಬಳಿ ಹೇಳಿದ್ದಾರೆ. ಆದರೆ ಬಿರಿಯಾನಿ ಹೆವಿ ಆಗಿರುವುದು ಬೇಡ, ತಡರಾತ್ರಿ ತಿನ್ನುತ್ತಿರುವ ಕಾರಣ ಸುಲಭವಾಗಿ ಜೀರ್ಣವಾಗುವಂಥಹ ಬಿರಿಯಾನಿ ಮಾಡಿಕೊಂಡು ಬಾ’ ಎಂದರಂತೆ.
ಶೆಫ್ ರಾಮ್ ಮೋಹನ್ಗೆ ಇದು ಸವಾಲಾಗಿ ಪರಿಣಮಿಸಿದೆ. ಬಿರಿಯಾನಿ ಉದುರಾಗಿ ಇರುವುದರಿಂದ ಅದು ಸುಲಭವಾಗಿ ಜೀರ್ಣವಾಗುವುದಿಲ್ಲ ಎಂದು ಅರಿತಿದ್ದ ಶೆಫ್, ಬಿರಿಯಾನಿಗೆ ತೆಳುವಾದ, ಹೆಚ್ಚು ಖಾರವಿಲ್ಲದ ಮಟನ್ ಗ್ರೇವಿಯನ್ನು ಬೆರೆಸಿ ಅದನ್ನು ಸ್ಟೀಂ ಮಾಡಿದರಂತೆ. ಅದನ್ನು ರಜನೀಕಾಂತ್ ಅವರಿಗೆ ಸರ್ವ್ ಮಾಡಿದ್ದಾರೆ. ರಜನೀಕಾಂತ್ಗೆ ಅದು ಬಹಳ ಹಿಡಿಸಿದೆ. ಬಳಿಕ ರಜನೀಕಾಂತ್ ಅವರು ಬಂದಾಗೆಲ್ಲ ಅದೇ ಬಿರಿಯಾನಿ ಕೇಳುತ್ತಿದ್ದರಂತೆ. ಆ ಬಳಿಕ ಅವರ ಗೆಳೆಯರೂ ಕೆಲವರಿಗೆ ಅದು ಹಿಡಿಸಿ ಬಳಿಕ ಅದನ್ನು ತಾಜ್ನವರು ಮೆನ್ಯುಗೆ ಸೇರಿಸಿದ್ದಾರೆ.
ಅಂದಹಾಗೆ ಆ ಬಿರಿಯಾನಿಗೆ ಗಿಲ್ಲಿ ಹೆಸರು ಬಂದಿದ್ದು ತುಸು ವಿಚಿತ್ರ. ಬಿರಿಯಾನಿಗೆ ಗ್ರೇವಿ ಬೆರೆಸುವ ಕಾರಣ ಅದನ್ನು ‘ಗೀಲಾ ಬಿರಿಯಾನಿ’ ಎಂದು ಕೆಲವರು ಕರೆದರಂತೆ. ಗೀಲಾ ಎಂದರೆ ಹಿಂದಿಯಲ್ಲಿ ಒದ್ದೆ ಎಂದರ್ಥ. ಆದರೆ ಬಳಿಕ ಗೀಲಾ ಎಂಬುದು ಗಿಲ್ಲಿ ಆಗಿ, ‘ಗಿಲ್ಲಿ ಬಿರಿಯಾನಿ’ ಆಗಿದೆ. 30 ವರ್ಷಗಳ ಈಗಲೂ ತಾಜ್ ಕೋರಮಂಡಲ್ನಲ್ಲಿ ಗಿಲ್ಲಿ ಬಿರಿಯಾನಿ ಸರ್ವ್ ಆಗುತ್ತದೆ. ಈಗ ಒಂದು ಪ್ಲೇಟ್ ಗಿಲ್ಲಿ ಬಿರಿಯಾನಿಯ ಬೆಲೆ 1300 ರೂಪಾಯಿಗಳು.
ಬೆಂಗಳೂರು, ಜನವರಿ 15: ಚಿನ್ನದ ಬೆಲೆ ಗುರುವಾರ ತುಸು ಇಳಿಕೆಗೊಂಡಿದೆ. ಆದರೆ, ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರಿದಿದೆ. ಇದರ ಬೆಲೆ ಇಂದು ಗ್ರಾಮ್ಗೆ 3ರಿಂದ 5 ರೂವರೆಗೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ 29,500 ರೂ ಮುಟ್ಟಿದೆ. ಕೆಲ ನಗರಗಳಲ್ಲಿ ಇದರ ಬೆಲೆ 31,000 ರೂಗೆ ಏರಿ ಹೋಗಿದೆ. ಚಿನ್ನದ ಬೆಲೆ (Gold Rates) ಭಾರತದಲ್ಲಿ ಗ್ರಾಮ್ಗೆ ಸುಮಾರು 40 ರೂನಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಮಿಶ್ರ ಫಲ ನೀಡಿದ್ದ ಏರಿಳಿತಗಳು ದಾಖಲಾಗಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,31,250 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,43,180 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,31,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 29,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 31,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 15ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,318 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,125 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,739 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,318 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,125 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)