Category Archives: Blog

Your blog category

ತಮಿಳುನಾಡು ರಾಜಕೀಯದಲ್ಲಿ ಹೈ-ಡ್ರಾಮಾ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ವಿಜಯ್, ಸಿಪಿಐ ಅಚ್ಚರಿಯ ಬೆಂಬಲ – Kannada News | TN Politics: Vijay’s CM Bid Gains CPI Support; Governor Seeks Clarity on Majority

ಚೆನ್ನೈ, ಮೇ 07: ತಮಿಳುನಾಡು(Tamil Nadu) ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ದಿನಗಳೇ ಕಳೆದರೂ ಸರ್ಕಾರ ರಚನೆಯ ಕಗ್ಗಂಟು ಮಾತ್ರ ಇನ್ನೂ ಮುಂದುವರಿದಿದೆ. ಈ ನಡುವೆ, ಟಿವಿಕೆ ಅಧ್ಯಕ್ಷ ವಿಜಯ್ ಅವರು ಗುರುವಾರ ಬೆಳಗ್ಗೆ ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಎರಡು ದಿನಗಳಲ್ಲಿ ಇದು ರಾಜ್ಯಪಾಲರೊಂದಿಗೆ ವಿಜಯ್ ನಡೆಸುತ್ತಿರುವ ಎರಡನೇ ಮಹತ್ವದ ಸಭೆಯಾಗಿದೆ.

ಸರ್ಕಾರ ರಚಿಸಲು 118 ಸದಸ್ಯರ ಬಲದ ಅಗತ್ಯವಿದ್ದು, ವಿಜಯ್ ಅವರ ಹಾದಿ ಸವಾಲಿನಿಂದ ಕೂಡಿದೆ.ವಿಜಯ್ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಳಿಕ ಟಿವಿಕೆ ಬಲ 107 ಆಗಲಿದೆ. ಕಾಂಗ್ರೆಸ್​ನ 5 ಶಾಸಕರು ಈಗಾಗಲೇ ಬೆಂಬಲ ಪತ್ರ ನೀಡಿದ್ದಾರೆ.

ಸಿಪಿಐ ಎಂಟ್ರಿ: ಈಗ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಕೂಡ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹೊಸ ಬೆಂಬಲದೊಂದಿಗೆ ವಿಜಯ್ ಪಾಳಯದ ಬಲ ಮತ್ತಷ್ಟು ಹೆಚ್ಚಿದ್ದು, ಬಹುಮತದ ಗಡಿಯನ್ನು ತಲುಪಲು ಕೇವಲ ಕೆಲವೇ ಸ್ಥಾನಗಳ ಅವಶ್ಯಕತೆ ಇದೆ.

ರಾಜ್ಯಪಾಲರ ಕಠಿಣ ನಿಲುವು ಮತ್ತು ಪದಗ್ರಹಣ ವಿಳಂಬ
ಸಂಖ್ಯೆಗಳ ಲೆಕ್ಕಾಚಾರದಲ್ಲಿ ಸಣ್ಣ ವ್ಯತ್ಯಾಸವಿದ್ದರೂ, ವಿಜಯ್ ಅವರು ತಾವೇ ಅತಿದೊಡ್ಡ ಪಕ್ಷದ ನಾಯಕನಾಗಿರುವುದರಿಂದ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರು ಅಧಿಕೃತ ಸಂಖ್ಯೆಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕೋರಿದ್ದಾರೆ. ಶಾಸಕರ ಬೆಂಬಲದ ಬಗ್ಗೆ ಸಂಪೂರ್ಣ ಮನವರಿಕೆಯಾಗದ ಹೊರತು ಪ್ರಮಾಣ ವಚನಕ್ಕೆ ಅವಕಾಶ ನೀಡಲಾಗದು ಎಂದು ರಾಜ್ಯಪಾಲರು ಸೂಚಿಸಿರುವುದರಿಂದ ವಿಜಯ್ ಅವರ ಪದಗ್ರಹಣ ಸಮಾರಂಭ ವಿಳಂಬವಾಗುತ್ತಿದೆ.

ಮತ್ತಷ್ಟು ಓದಿ: ದಳಪತಿ ವಿಜಯ್ ಪಕ್ಷದಿಂದ ಗೆದ್ದು ಶಾಸಕರಾದ ತುಮಕೂರು ಮೂಲದ ಸುನೀಲ್ ಆನಂದ್ ಬಗ್ಗೆ ನಿಮಗೆ ಗೊತ್ತೇ!

ಒಂದೆಡೆ ಎಐಎಡಿಎಂಕೆ ನಾಯಕ ಕೆ.ಪಿ. ಮುನುಸ್ವಾಮಿ ಅವರು ಪರಿಸ್ಥಿತಿ ಏನೇ ಇರಲಿ, ನಾವು ವಿಜಯ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಇನ್ನೊಂದೆಡೆ, ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್ ಹಾಗೂ ಸಿಪಿಐ ಈಗ ವಿಜಯ್ ಅವರ ಬೆನ್ನಿಗೆ ನಿಂತಿರುವುದು ತಮಿಳುನಾಡು ರಾಜಕೀಯದ ಬದಲಾದ ಗಾಳಿಗೆ ಸಾಕ್ಷಿಯಾಗಿದೆ.

ಚಲನಚಿತ್ರೋದ್ಯಮದ ಜನಪ್ರಿಯತೆಯ ಬೆನ್ನಲ್ಲೇ ರಾಜಕೀಯಕ್ಕೆ ಬಂದ ವಿಜಯ್, ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಈಗ ರಾಜಕೀಯದ ‘ಕ್ಲೈಮ್ಯಾಕ್ಸ್’ ಹಂತದಲ್ಲಿರುವ ಅವರು, ವಿರೋಧಿಗಳ ತಂತ್ರವನ್ನು ಮೆಟ್ಟಿ ನಿಂತು ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಾರಾ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ. ರಾಜಭವನದಿಂದ ಸಿಗುವ ಮುಂದಿನ ಸೂಚನೆಯೇ ತಮಿಳುನಾಡಿನ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಂಗಾಳದಲ್ಲಿ ಪ್ರತ್ಯೇಕತೆಯ ಕಿಡಿ: ಪಶ್ಚಿಮ ಬಂಗಾಳವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ, ಮಮತಾಗೆ ವಿದೇಶಿ ವ್ಯಕ್ತಿಯಿಂದ ಬೇಡಿಕೆ – Kannada News | West Bengal Independence Call: Bangladeshi Leader Urges Mamata to Declare Separate Nation

ಕೋಲ್ಕತ್ತಾ, ಮೇ 07: ಪಶ್ಚಿಮ ಬಂಗಾಳ(West Bengal) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ, ಅತ್ಯಂತ ಅಪಾಯಕಾರಿ ಹೇಳಿಕೆಯೊಂದು ಹೊರಬಿದ್ದಿದೆ. ಬಾಂಗ್ಲಾದೇಶದ ನಾಯಕ ಮುಹಮ್ಮದ್ ನೂರುಲ್ ಹುಡಾ ಎಂಬುವವರು ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮ ಬಂಗಾಳವನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರ ದೇಶ ಎಂದು ಘೋಷಿಸಲು ಮತ್ತು ದೆಹಲಿ ಸರ್ಕಾರದ ವಿರುದ್ಧ ಯುದ್ಧ ಸಾರಲು ಪ್ರಚೋದನೆ ನೀಡಿರುವ ವಿಡಿಯೋವೊಂದು ಸಂಚಲನ ಮೂಡಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನೂರುಲ್ ಹುಡಾ ಅವರು ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ಯಾವುದೇ ಕಾರಣಕ್ಕೂ ಸೋಲೊಪ್ಪಬಾರದು. ಪಶ್ಚಿಮ ಬಂಗಾಳವನ್ನು ಸ್ವತಂತ್ರ ಎಂದು ಘೋಷಿಸಿ. ಭಾರತ ಸರ್ಕಾರದ ವಿರುದ್ಧ ಯುದ್ಧ ಆರಂಭಿಸಿ. ನಿಮ್ಮ ಬೆನ್ನಿಗೆ 17 ಕೋಟಿ ಬಾಂಗ್ಲಾದೇಶಿ ಮುಸ್ಲಿಮರು ನಿಲ್ಲುತ್ತಾರೆ,ಎಂಬ ಮಾತುಗಳನ್ನು ಆಡಿದ್ದಾರೆ. ಈ ಹೇಳಿಕೆಯು ಭಾರತದ ಸಾರ್ವಭೌಮತ್ವಕ್ಕೆ ನೇರ ಸವಾಲಾಗಿದ್ದು, ಭದ್ರತಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಡಿಯೋದಲ್ಲಿರುವ ವ್ಯಕ್ತಿ ತನ್ನನ್ನು ಬಾಂಗ್ಲಾದೇಶದ ನಾಯಕನೆಂದು ಬಿಂಬಿಸಿಕೊಂಡಿದ್ದರೂ, ಆತನ ನಿಜವಾದ ಗುರುತಿನ ಬಗ್ಗೆ ಗೊಂದಲಗಳಿವೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಸುದ್ದಿಯಲ್ಲಿದ್ದರು. ಆದರೆ, ಈ ವಿಡಿಯೋದಲ್ಲಿರುವ ವ್ಯಕ್ತಿ ಉಗ್ರಗಾಮಿ ಅಥವಾ ತೀವ್ರಗಾಮಿ ಸಂಘಟನೆಗಳ ಜೊತೆ ಸಂಬಂಧ ಹೊಂದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈತ ಜಮಾತ್-ಇ-ಇಸ್ಲಾಮಿ ಅಥವಾ ಇತರ ಪ್ರತ್ಯೇಕತಾವಾದಿ ಗುಂಪುಗಳ ಬೆಂಬಲಿಗನಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತಷ್ಟು ಓದಿ: ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಲ್ಲ, ಚುನಾವಣಾ ಆಯೋಗದ ಗೆಲುವೆಂದ ಪ್ರಿಯಾಂಕ್ ಖರ್ಗೆ!

ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ ಬಿಜೆಪಿ 207 ಸ್ಥಾನ ಗೆದ್ದು ಸರ್ಕಾರ ರಚಿಸಲು ಸಜ್ಜಾಗಿದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇವಲ 80 ಸ್ಥಾನಕ್ಕೆ ಕುಸಿದಿದೆ. ಮಮತಾ ಬ್ಯಾನರ್ಜಿ ಅವರು ಸ್ವತಃ ಸೋಲನುಭವಿಸಿದರೂ ಅಧಿಕಾರ ಬಿಡಲು ನಿರಾಕರಿಸುತ್ತಿರುವ ಈ ಸಂಕೀರ್ಣ ಸಮಯದಲ್ಲಿ, ಗಡಿಯಾಚೆಯಿಂದ ಇಂತಹ ‘ಸ್ವತಂತ್ರ ಬಂಗಾಳ’ದ ಕೂಗು ಕೇಳಿಬಂದಿರುವುದು ವ್ಯವಸ್ಥಿತ ಸಂಚಿನ ಭಾಗವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಭಾರತದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಮತ್ತು ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಲು ಬಾಂಗ್ಲಾದೇಶದ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಗುಪ್ತಚರ ಇಲಾಖೆ ಈ ವಿಡಿಯೋದ ಮೂಲ ಮತ್ತು ಅದರ ಹಿಂದಿರುವ ಶಕ್ತಿಗಳ ಬಗ್ಗೆ ತನಿಖೆ ಆರಂಭಿಸಿದೆ.

ಚುನಾವಣಾ ಸೋಲನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಸ್ವೀಕರಿಸುವ ಬದಲು, ಇಂತಹ ದೇಶದ್ರೋಹಿ ಕರೆಗಳಿಗೆ ಕಿವಿಗೊಡುವುದು ರಾಜ್ಯ ಮತ್ತು ದೇಶದ ಭದ್ರತೆಗೆ ಮಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಜಯ್ ಹಾಗೂ ಸಂಗೀತಾ ಭೇಟಿಗೆ ಕಾರಣವಾಗಿತ್ತು ಆ ಒಂದು ಸಿನಿಮಾ – Kannada News | Thalapathy Vijay CM: Political Triumph and Personal Storm The Sangeetha Divorce Saga

ದಳಪತಿ ವಿಜಯ್ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಅವರು ಟಿವಿಕೆ ಪಕ್ಷವನ್ನು ಸ್ಥಾಪಿಸಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 108 ಸ್ಥಾನಗಳನ್ನು ಗೆದ್ದಿದ್ದಾರೆ. ಈಗ, ತಮಿಳುನಾಡು ಹೊಸ ಸರ್ಕಾರ ರಚಿಸಲು ಸರ್ಕಸ್ ಮಾಡುತ್ತಿದ್ದಾರೆ. ಪಕ್ಷ ಸ್ಥಾಪನೆಯಾದ ಕೇವಲ ಎರಡು ವರ್ಷಗಳ ನಂತರ ವಿಜಯ್ ಮುಖ್ಯಮಂತ್ರಿಯಾಗಲಿದ್ದಾರೆ. ಇದರೊಂದಿಗೆ, ಇಡೀ ದೇಶವು ವಿಜಯ್ ಬಗ್ಗೆ.. ಅವರ ಚಲನಚಿತ್ರಗಳು ಮತ್ತು ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಿದೆ.

ಕಳೆದ ಎರಡು ದಿನಗಳಿಂದ ನೆಟ್ಟಿಗರು ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಸಾಮಾಜಿಕ ಮಾಧ್ಯಮದಲ್ಲಿ ಹುಡುಕುತ್ತಿದ್ದಾರೆ. ಆದರೆ, ವಿಜಯ್ ಅವರ ವೈಯಕ್ತಿಕ ಜೀವನವು ಸವಾಲುಗಳಿಂದ ತುಂಬಿದೆ. ವಿಜಯ್ ಅವರ ಪತ್ನಿ ಸಂಗೀತಾ ಅವರು ಚುನಾವಣೆಗೆ ಮುನ್ನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ದೊಡ್ಡ ಆಘಾತವನ್ನು ನೀಡಿದರು. ಈ ಸುದ್ದಿ ತಮಿಳು ರಾಜಕೀಯದಲ್ಲಿ ಕೋಲಾಹಲವನ್ನು ಸೃಷ್ಟಿಸಿತು.

ಪ್ರಸ್ತುತ ವಿಜಯ್ ಅವರ ಲವ್​ಸ್ಟೋರಿ ವೈರಲ್ ಆಗುತ್ತಿದೆ. ಲಂಡನ್‌ನಲ್ಲಿ ಬೆಳೆದ ಶ್ರೀಲಂಕಾದ ಉದ್ಯಮಿಯ ಮಗಳು ಸಂಗೀತಾ ಸ್ವರ್ಣಲಿಂಗಂ. ದೊಡ್ಡ ವ್ಯಾಪಾರ ಸಾಮ್ರಾಜ್ಯದ ಮಗಳು. ವಿಜಯ್ ಅವರ ‘ಪೂವೆ ಉನಕ್ಕಾಗ’ ಚಿತ್ರವನ್ನು ನೋಡಿದ ನಂತರ, ಅವರು ವಿಜಯ್ ಅವರ ದೊಡ್ಡ ಅಭಿಮಾನಿಯಾದರು. ಇದರೊಂದಿಗೆ, ಅವರು ಯಾರಿಗೂ ತಿಳಿಯದೆ ಭಾರತಕ್ಕೆ ಬಂದು ವಿಜಯ್ ಅವರನ್ನು ಅಭಿನಂದಿಸಿದರು. ‘ಪೂವೆ ಉನಕ್ಕಾಗ’ ಎಂದರೆ ‘ಈ ಹೂವು ನಿಮಗಾಗಿ’ ಎಂದರ್ಥ. ಇದು ವಿಜಯ್ ನಾಯಕನಾಗಿ ನಟಿಸಿದ 1996 ರ ತಮಿಳು ಚಿತ್ರ. ಇದು ಪ್ರಣಯ ಹಾಸ್ಯ ಚಿತ್ರ. ಇದನ್ನು ಆರ್.ಬಿ. ಚೌಧರಿ ನಿರ್ಮಿಸಿದ್ದರು.

ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಮುಂದುವರೆಯುತ್ತಾರಾ ಶಿವಣ್ಣ? ರಾಜಕೀಯ ನಿಲುವಿನ ಬಗ್ಗೆ ಸಿಕ್ತು ಉತ್ತರ

ವಿಜಯ್ ಅವರ ಸಿನಿಮಾಗಳನ್ನು ನೋಡಿ ಅಭಿಮಾನಿಯಾಗಿದ್ದ ಸಂಗೀತಾ ಸ್ವರ್ಣಲಿಂಗಂ, ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ವಿಜಯ್‌ಗೆ ನಿಯಮಿತವಾಗಿ ಪತ್ರ ಬರೆಯುತ್ತಿದ್ದರು. ಇಬ್ಬರೂ ಭೇಟಿಯಾದರು, ಸ್ನೇಹಿತರಾದರು ಮತ್ತು ಕೊನೆಗೆ ಮದುವೆಯಾದರು. ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ವಿಜಯ್ ಅವರ ಮಗ ಪ್ರಸ್ತುತ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು ಎರಡು ದಶಕಗಳ ವೈವಾಹಿಕ ಸಂಬಂಧದ ನಂತರ, ಇಬ್ಬರೂ ಭಿನ್ನಾಭಿಪ್ರಾಯಗಳಿಂದಾಗಿ ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:09 pm, Thu, 7 May 26

Source link

ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 2.1 ಕೋಟಿ ದೋಖಾ: ವಂಚಕರ ಮಾತು ನಂಬಿ ಹಣ ಕೊಟ್ಟು ಕೆಟ್ಟ 78 ವರ್ಷದ ಮಹಿಳೆ! – Kannada News | Bengaluru Woman Duped of 2.1 Crore in Digital Arrest Scam

ಬೆಂಗಳೂರು, ಮೇ 07: ಡಿಜಿಟಲ್​​ ಅರೆಸ್ಟ್​​ ಹೆಸರಿನಲ್ಲಿ 78 ವರ್ಷದ ಗೃಹಿಣಿ ಮತ್ತು ಆಕೆಯ ಪುತ್ರಿಗೆ ಬರೋಬ್ಬರಿ 2.1 ಕೋಟಿ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಸಂತ್ರಸ್ತರಿಗೆ ಏಪ್ರಿಲ್ 13ರಂದು ವಾಟ್ಸಾಪ್ ಕರೆ ಮಾಡಿದ್ದ ಆರೋಪಿ, ಮಹಿಳೆಯ ಹೆಸರಿನ ಡೆಬಿಟ್ ಕಾರ್ಡ್​​ನ ನಿಷೇಧಿತ ಪಿಎಫ್‌ಐ (PFI) ಸಂಘಟನೆಯ ಸದಸ್ಯನೊಬ್ಬ ಬಳಸುತ್ತಿದ್ದಾನೆ ಎಂದು ಬೆದರಿಸಿದ್ದ. ಅಲ್ಲದೆ ತನ್ನನ್ನು ಎನ್‌ಐಎ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ.

  • ಬೆಂಗಳೂರಲ್ಲಿ ಮತ್ತೊಂದು ಡಿಜಿಟಲ್​​ ಅರೆಸ್ಟ್​​ ಕೇಸ್​​ ಬೆಳಕಿಗೆ
  • ಎನ್‌ಐಎ ಅಧಿಕಾರಿ ಸೋಗಲ್ಲಿ ಹಣ ಪೀಕಿರುವ ಖದೀಮರು
  • ಬರೋಬ್ಬರಿ 2.1 ಕೋಟಿ ಹಣ ಕಳೆದುಕೊಂಡ ತಾಯಿ-ಮಗಳು

ಇದನ್ನೂ ಓದಿ: ಸಿಬಿಐ ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಗಾಳ; 30 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ 15 ಕೋಟಿ ಲೂಟಿ!

ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿ ಈ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಮಹಿಳೆ ಹಾಗೂ ಕುಟುಂಬ ಸದಸ್ಯರ ಗುರುತಿನ ದಾಖಲೆಗಳ ಪ್ರತಿಗಳನ್ನು ಪಡೆದುಕೊಂಡಿದ್ದ. ಬಳಿಕ ಮಹಿಳೆಯ ಪುತ್ರಿಯೂ ಇದೇ ಪ್ರಕರಣದಲ್ಲಿ ಶಂಕಿತಳಾಗಿದ್ದಾಳೆ ಎಂದು ಹೇಳಿದ್ದ. ವಂಚಕರು ಪೊಲೀಸ್ ಠಾಣೆಯಂತೆ ಕಾಣುವ ಪ್ರದೇಶದಿಂದ ವಿಡಿಯೋ ಕಾಲ್‌ಗಳನ್ನು ಮಾಡಿ ಸಂತ್ರಸ್ತರನ್ನು ಮತ್ತಷ್ಟು ನಂಬಿಸಿದ್ದು, ಆರೋಪಿ ಪ್ರದೀಪ್ ಜಸ್ವಾಲ್ ಎಂದು ತನನ್ನು ಪರಿಚಯಿಸಿಕೊಂಡಿದ್ದ. ಸಂತ್ರಸ್ತ ಮಹಿಳೆ ಮತ್ತು ಪುತ್ರಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದ ಆತ, ಸಹಕರಿಸದಿದ್ದರೆ ಸಾರ್ವಜನಿಕವಾಗಿ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದ ಎಂಬ ಮಾಹಿತಿ ಸಿಕ್ಕಿದೆ.

ನಂತರ ಹಣದ ವ್ಯವಹಾರಗಳ ಪರಿಶೀಲನೆ ನಡೆಸಬೇಕಿದ್ದು, ಅದೇ ಬಂಧನ ತಪ್ಪಿಸಿಕೊಳ್ಳುವ ಮಾರ್ಗ ಎಂದು ಹೇಳಿ ಬ್ಯಾಂಕ್ ಖಾತೆ ವಿವರಗಳನ್ನು ಆರೋಪಿ ಪಡೆದಿದ್ದ. ಬಳಿಕ, ಆರ್‌ಬಿಐ ಮಾರ್ಗಸೂಚಿಯಂತೆ ಪರಿಶೀಲನೆ ಬಳಿಕ ಹಣ ಮರಳಿ ನೀಡಲಾಗುವುದು ಎಂದು ನಂಬಿಸಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದ. ವಂಚಕನ ಮಾತು ನಂಬಿದ ಮಹಿಳೆ ತನ್ನ ಜೀವಮಾನ ಉಳಿತಾಯವನ್ನು ನೀಡಿದ್ದಾರೆ. ಸಾಲದ್ದಕ್ಕೆ ಚಿನ್ನವನ್ನು ಗಿರವಿ ಇಟ್ಟು ಗೋಲ್ಡ್ ಲೋನ್ ಪಡೆದು ಅದರ ಹಣವನ್ನೂ ಆರೋಪಿಗಳ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಏಪ್ರಿಲ್ 15ರಿಂದ 23ರವರೆಗೆ ಹಲವು ಆರ್‌ಟಿಜಿಎಸ್ ವ್ಯವಹಾರಗಳ ಮೂಲಕ ಒಟ್ಟು 2.1 ಕೋಟಿ ಹಣವನ್ನು ವಿವಿಧ ಖಾತೆಗಳಿಗೆ ಹಾಕಿರೋದು ಗೊತ್ತಾಗಿದೆ.

ಇಷ್ಟಾದರೂ ಆರೋಪಿಗಳ ಹಣದ ದಾಹ ತೀರದ ಕಾರಣ ಮೇ 2ರಂದು ಮಹಿಳೆ ತಮ್ಮ ಸಹೋದರರ ಬಳಿ ಮತ್ತಷ್ಟು ಹಣ ಕೇಳಿದ್ದರು. ಅನುಮಾನಗೊಂಡ ಅವರು ವಿಚಾರಿಸಿದಾಗ ವಂಚನೆ ಬಯಲಾಗಿದೆ. ಆ ಬಳಿಕ ಮಹಿಳೆ 1930 ಸೈಬರ್ ಸಹಾಯವಾಣಿ ಸಂಪರ್ಕಿಸಿ ದೂರು ನೀಡಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:15 pm, Thu, 7 May 26

Source link

ಸೋದರಸಂಬಂಧಿಯನ್ನೇ ವರಿಸಿದ ಯುವತಿ! ಚಿಕ್ಕಬಳ್ಳಾಪುರದಲ್ಲೊಂದು ವಿಚಿತ್ರ ವಿವಾಹ – Kannada News | Chikkaballapura, A strange marriage: Woman Marries Her Cousin Brother Days Before Her Scheduled Wedding in Devanahalli

ಚಿಕ್ಕಬಳ್ಳಾಪುರ, ಮೇ 7: ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿಯೆಂಬಂತೆ, ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಾದವರೇ ಪ್ರೀತಿಸಿ ಮದುವೆಯಾಗಿ ಪೋಷಕರಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanahalli) ತಾಲ್ಲೂಕಿನ ಸಾವಕನಹಳ್ಳಿಯ ಶಶಿಕಲಾ (29), ಹೊಸಕೋಟೆ ತಾಲ್ಲೂಕಿನ ಹಳೆಊರಿನ ಪ್ರವೀಣ್ (24) ಎಂಬಾತನನ್ನು ಮದುವೆಯಾಗುವ ಮೂಲಕ ಸಮಾಜ ಮತ್ತು ಕುಟುಂಬದ ವಿರೋಧದ ನಡುವೆಯೂ ಒಂದಾಗಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ರಕ್ಷಣೆ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಮತ್ತು ಮಹಿಳಾ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

ಮುಖ್ಯಾಂಶಗಳು

  • ಶಶಿಕಲಾ ಮತ್ತು ಪ್ರವೀಣ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು.
  • ಮೇ 29 ರಂದು ಶಶಿಕಲಾಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು.
  • ಶಶಿಕಲಾ ತಾಯಿಯ ತಂಗಿಯ ಮಗ ಪ್ರವೀಣ್​ನನ್ನೇ ಮದುವೆಯಾಗಿದ್ದಾಳೆ.

ಪೋಷಕರ ವಿರೋಧದ ನಡುವೆ ಮದುವೆ

ಶಶಿಕಲಾ ಮತ್ತು ಪ್ರವೀಣ್ ಸಂಬಂಧಿಕರಾಗಿದ್ದು, ಶಶಿಕಲಾಳ ತಾಯಿಯ ತಂಗಿಯ ಮಗನೇ ಪ್ರವೀಣ್. ಅಂದರೆ, ವರಸೆಯಲ್ಲಿ ಇವರಿಬ್ಬರು ಅಕ್ಕ-ತಮ್ಮನಾಗಬೇಕು. ಇವರ ಪ್ರೀತಿಯ ವಿಷಯ ತಿಳಿದ ಪೋಷಕರು, ಈ ಸಂಬಂಧ ಸಮಾಜದಲ್ಲಿ ಒಪ್ಪಿತವಲ್ಲ ಎಂದು ವಿರೋಧಿಸಿದ್ದರು. ಅಲ್ಲದೆ, ಶಶಿಕಲಾಗೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆಸಿ ಇದೇ ಮೇ 29ಕ್ಕೆ ಮದುವೆ ದಿನಾಂಕವನ್ನೂ ನಿಗದಿಪಡಿಸಿದ್ದರು. ಆದರೆ ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ಶಶಿಕಲಾ ಮನೆಯಿಂದ ಹೊರಬಂದು ಪ್ರವೀಣ್‌ನನ್ನು ಮದುವೆಯಾಗಿದ್ದಾಳೆ.

ಪೊಲೀಸ್ ರಕ್ಷಣೆ ಕೋರಿದ ನವಜೋಡಿ

ಮದುವೆಯಾದ ಬಳಿಕ ಈ ಜೋಡಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಮತ್ತು ಮಹಿಳಾ ಪೊಲೀಸ್ ಠಾಣೆಗೆ ಧಾವಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ‘ನಾವು ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ, ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ’ ಎಂದು ಶಶಿಕಲಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಇತ್ತ ಪೋಷಕರು ‘ವರಸೆಯಲ್ಲಿ ತಮ್ಮನಾಗುವವನನ್ನೇ ಮದುವೆಯಾಗಿ ಇಡೀ ಕುಟುಂಬಕ್ಕೆ ಅವಮಾನ ತಂದಿದ್ದೀಯಾ’ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಿತ್ರ ಮದುವೆ ಪ್ರಕರಣ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಹೊಸಕೋಟೆ ಪೊಲೀಸರ ಭರ್ಜರಿ ಬೇಟೆ: 50 ಬೈಕ್ ಸಮೇತ ಇಬ್ಬರು ಅಂತರರಾಜ್ಯ ಕಳ್ಳರ ಬಂಧನ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀರಿಗಾಗಿ ಮಂಗಗಳ ಪರದಾಟ, ಮನಕಲಕುವ ದೃಶ್ಯ ಇಲ್ಲಿದೆ ನೋಡಿ! – Kannada News | Heartbreaking Video: Thirsty Monkeys Drink Pothole Water in Gadag Amid Intense Heatwave

ಗದಗ, ಮೇ 07: ಜಿಲ್ಲೆಯಲ್ಲಿ ಸುಡುವ ಬಿಸಿಲಿಗೆ ಮನುಷ್ಯರು ಮಾತ್ರ ಅಲ್ಲ, ಪ್ರಾಣಿಗಳೂ ಬಳಲುತ್ತಿವೆ. ಸರಿಯಾದ ಹೊತ್ತಿಗೆ ನೀರು, ಆಹಾರ ಸಿಗದ ಜೀವಿಗಳು ಕಂಗೆಟ್ಟುಹೋಗಿವೆ. ಹೀಗಿರುವಾಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ರಸ್ತೆಯ ಹೊಂಡದಲ್ಲಿ ಸಂಗ್ರಹವಾಗಿದ್ದ ನೀರನ್ನು ಅಲ್ಲಿನ ಮಂಗಗಳು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ಈ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮನಕಲಕುವಂತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ, ಆಪರೇಷನ್ ಸಿಂಧೂರ್​ಗೆ ಒಂದು ವರ್ಷ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: Siddaramaiah Becomes India’s Oldest CM; Suvendu Adhikari’s PA Murdered in Bengal

ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ, ಆಪರೇಷನ್ ಸಿಂಧೂರ್​ಗೆ ಒಂದು ವರ್ಷ!

ಬೆಂಗಳೂರು, ಮೇ 07: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ (Suvendu Adhikar) ಆಪ್ತ ಸಹಾಯಕ ಚಂದ್ರನಾಥ್ ರಥ್ ಗುಂಡೇಟಿಗೆ ಬಲಿಯಾಗಿದ್ದಾರೆ. ಆಪರೇಷನ್ ಸಿಂಧೂರ್​ಗೆ ಒಂದು ವರ್ಷ ಪೂರೈಸಿದ್ದು, ಭಾರತೀಯ ಸೇನೆಯು ವಿಶೇಷ ವೀಡಿಯೋವನ್ನು ಹಂಚಿಕೊಂಡಿದೆ. ಇನ್ನೊಂದೆಡೆ ರೈಲ್ವೆ ಇಲಾಖೆ ನಡೆಸುವ ವಿವಿಧ ಪರೀಕ್ಷೆಗಳಲ್ಲಿ ಕನ್ನಡ ಬಾಷೆಯನ್ನು ನಿರಾಕರಿಸಲಾಗಿದೆ. ಇದೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎನ್ನಿಸಿಕೊಂಡು ದಾಖಲೆ ಸೃಷ್ಟಿಸಿದ್ದಾರೆ.

ಮುಖ್ಯಾಂಶಗಳು

  • ಸುವೇಂದು ಅಧಿಕಾರಿಯ ಆಪ್ತ ಸಲಹೆಗಾರ ಗಂಡೇಟಿಗೆ ಬಲಿ
  • ಆಪರೇಷನ್ ಸಿಂಧೂರ್​ ನೆನಪಿಗೆ ಭಾರತೀಯ ಸೇನೆಯಿಂದ ವೀಡಿಯೋ ರಿಲೀಸ್
  • ರೈಲ್ವೇ ಪರೀಕ್ಷೆಗಳಲ್ಲಿ ಕನ್ನಡಕ್ಕೆ ನಿರಾಕರಣೆ
  • ದೇಶದಲ್ಲೆ ಹಿರಿಯ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯ

ಸುವೇಂದು ಅಧಿಕಾರಿಯ ಪಿಎ ಹತ್ಯೆ!

ಪಶ್ಚಿಮ ಬಂಗಾಳದ ವಿವಿಧೆಡೆ ಭೀಕರ ಹಿಂಸಾಚಾರ ಭುಗಿಲೆದ್ದಿದ್ದು, ಬಿಜೆಪಿ ನಾಯಕ ಮತ್ತು ಭಾವಿ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಲಾದ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ನಡೆದಿರುವ ಈ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಪರೇಷನ್ ಸಿಂಧೂರ್​ಗೆ ಒಂದು ವರ್ಷ

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿದ್ದ ಉಗ್ರರು ಮತ್ತು ಅವರಿಗೆ ಬೆಂಬಲ ನೀಡುತ್ತಿದ್ದ ಶಕ್ತಿಗಳ ವಿರುದ್ಧ ನಡೆದಿದ್ದ ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಅಂದಿನ ಭೀಕರ ಕಾರ್ಯಾಚರಣೆಯ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡಿದೆ. ಭಾರತದ ಮೇಲೆ ಕಣ್ಣು ಹಾಕುವ ಅಥವಾ ಭಯೋತ್ಪಾದನೆಗೆ ನೀರೆರೆಯುವ ಶಕ್ತಿಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಸರಿ, ಭಾರತೀಯ ಸೇನೆ ಅವರನ್ನು ಹುಡುಕಿ ಶಿಕ್ಷಿಸುತ್ತದೆ ಎಂಬ ಸಂದೇಶವನ್ನು ವೀಡಿಯೋದಲ್ಲಿ ನೀಡಲಾಗಿದೆ.

ಇದನ್ನೂ ಓದಿ ಮಾವು, ಹಲಸು ಪ್ರಿಯರಿಗೆ ಈ ಬಾರಿ ಡಬ್ಬಲ್ ಧಮಾಕ! ಬೆಂಗಳೂರಿನ ಎರಡು ಕಡೆ ‘ಮಾವು ಮತ್ತು ಹಲಸಿನ ಮೇಳ’

ರೈಲ್ವೆ ಪರಿಕ್ಷೇಗಳಲ್ಲಿ ಕನ್ನಡಕ್ಕಿಲ್ಲ ಜಾಗ!

ನೈರುತ್ಯ ರೈಲ್ವೆ ಇಲಾಖೆಯು ನಡೆಸುತ್ತಿರುವ ವಿವಿಧ ಹುದ್ದೆಗಳ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ತಿರಸ್ಕರಿಸಲಾಗಿದೆ. ಈ ಹಿಂದೆ ಪ್ರತಿಭಟನೆಗಳ ನಂತರ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲು ರೈಲ್ವೆ ಮಂಡಳಿ ಮುಂದಾಗಿದೆ. ಇಲಾಖೆಯ ಈ ಕ್ರಮದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ರೈಲು ಸಂಚಾರ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.

ಸಿದ್ದರಾಮಯ್ಯ ದೇಶದ ಅತ್ಯಂತ ಹಿರಿಯ ಸಿಎಂ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ಸೋಲುಂಡ ಕಾರಣ 80 ವರ್ಷ ವಯಸ್ಸಿನ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಣರಾಯಿ ವಿಜಯನ್ ನಂತರ ಕರ್ನಾಟಕದ ಮುಖ್ಯಮಂತ್ರಿ, 78 ವರ್ಷ ವಯಸ್ಸಿನ ಸಿದ್ದರಾಮಯ್ಯ ಈಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಳಪತಿ ವಿಜಯ್ ಹಾದಿಯಲ್ಲಿ ಮುಂದುವರೆಯುತ್ತಾರಾ ಶಿವಣ್ಣ? ರಾಜಕೀಯ ನಿಲುವಿನ ಬಗ್ಗೆ ಸಿಕ್ತು ಉತ್ತರ – Kannada News | Shivarajkumar Political Entry? Will He Follow Thalapathy Vijay’s Path? Answer Revealed

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ತಮಿಳುನಾಡಿನಲ್ಲಿ ದಳಪತಿ ವಿಜಯ್ ತಮ್ಮದೇ ಆದ ‘ಟಿವಿಕೆ’ (TVK) ಪಕ್ಷವನ್ನು ಸ್ಥಾಪಿಸಿ, ರಾಜಕೀಯದಲ್ಲಿ ಹೊಸ ಸುನಾಮಿ ಎಬ್ಬಿಸಿದ್ದಾರೆ. ಅವರ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕದಲ್ಲೂ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಚುನಾವಣಾ ರಾಜಕೀಯಕ್ಕೆ ಬರಬೇಕು ಎಂಬ ಒತ್ತಾಯಗಳು ಮತ್ತೆ ಕೇಳಿಬರುತ್ತಿವೆ. ಆದರೆ, ಶಿವಣ್ಣ ಅವರು ಈ ವಿಷಯದಲ್ಲಿ ಈ ಮೊದಲೇ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದ್ದರು.

ಆಂಧ್ರ ಪ್ರದೇಶದಲ್ಲಿ ಪವನ್ ಕಲ್ಯಾಣ್, ತಮಿಳುನಾಡಿನಲ್ಲಿ ದಳಪತಿ ವಿಜಯ್ ಗೆದ್ದಾಗಿದೆ. ಅದೇ ರೀತಿ ಕನ್ನಡದಲ್ಲಿ ಈ ರೀತಿ ರಾಜಕೀಯ ಪ್ರವೇಶ ಮಾಡಿ ಗೆಲ್ಲೋದು ಯಾರು ಎಂಬುದು ಅನೇಕರ ಪ್ರಶ್ನೆ ಅನೇಕರಿಗೆ ಮೂಡಿದೆ. ಅನೇಕರು ಶಿವಣ್ಣ ಹೆಸರನ್ನು ಹೇಳುತ್ತಿದ್ದಾರೆ. ಆದರೆ, ಕೆಲ ವರ್ಷಗಳ ಹಿಂದೆ ರಾಜಕೀಯಕ್ಕೆ ಬರುವುದಿಲ್ಲ ಎಂಬುದನ್ನು ಶಿವರಾಜ್​​ಕುಮಾರ್ ನೇರವಾಗಿ ಹೇಳಿದ್ದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕ ವೇದಿಕೆಯಲ್ಲೇ ಶಿವಣ್ಣನಿಗೆ ರಾಜಕೀಯಕ್ಕೆ ಬರುವಂತೆ ಬಹಿರಂಗವಾಗಿ ಆಹ್ವಾನ ನೀಡಿದ್ದರು. ‘ಶಿವರಾಜ್‌ಕುಮಾರ್ ಅವರೇ, ನೀವು ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲಲು ರೆಡಿಯಾಗಿ, ನಿಮಗೆ ಎಲ್ಲಿ ಬೇಕೋ ಅಲ್ಲಿ ಸೀಟ್ ಕೊಡುತ್ತೇನೆ’ ಎಂದು ಡಿಕೆಶಿ ಹೇಳಿದ್ದರು.

ನೋ ಎಂದಿದ್ದ ನಟ:

ಅದಕ್ಕೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ್ದ ಶಿವಣ್ಣ, ‘ನಮ್ಮ ತಂದೆ (ಡಾ. ರಾಜ್‌ಕುಮಾರ್) ನಮಗೆ ಕೊಟ್ಟಿರುವ ಬಳುವಳಿ ಒಂದೇ, ಅದು ಬಣ್ಣ ಹಚ್ಚುವುದು ಮತ್ತು ನಿಮ್ಮನ್ನು ರಂಜಿಸುವುದು. ನಾನು ಈಗಷ್ಟೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ನನಗೆ ಸಿನಿಮಾ ಮಾಡುವುದೇ ಖುಷಿ’ ಎಂದು ವಿನಮ್ರವಾಗಿ ರಾಜಕೀಯ ಪ್ರವೇಶದ ಆಫರ್ ಅನ್ನು ನಿರಾಕರಿಸಿದ್ದರು.

ತಮಿಳುನಾಡಿನಲ್ಲಿ ವಿಜಯ್ ಅವರು ತಮ್ಮ ಮೊದಲ ರಾಜಕೀಯ ಸಮಾವೇಶದಲ್ಲೇ ಲಕ್ಷಾಂತರ ಜನರನ್ನು ಸೇರಿಸುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಕರ್ನಾಟಕದ ಅಭಿಮಾನಿಗಳಲ್ಲೂ ಹೊಸ ಆಸೆಯನ್ನು ಚಿಗುರಿಸಿದೆ. ಶಿವಣ್ಣನಂತಹ ಜನಪ್ರಿಯ ನಟರು ರಾಜಕೀಯಕ್ಕೆ ಬಂದರೆ ಬದಲಾವಣೆ ತರಬಹುದು ಎಂಬುದು ಅವರ ಅಭಿಪ್ರಾಯ. ಆದರೆ, ಶಿವಣ್ಣ ಸದ್ಯಕ್ಕೆ ತಾವು ಚಿತ್ರರಂಗಕ್ಕೆ ಮಾತ್ರ ಸೀಮಿತ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ನೋಡಿ ‘ಬ್ರಿಲಿಯಂಟ್’ ಎಂದು ಹೊಗಳಿದ ಶಿವರಾಜ್​ಕುಮಾರ್

ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಶಿವಣ್ಣ ಅವರೂ ಕೂಡ ಪತ್ನಿಯ ಪರವಾಗಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ. ಆದರೆ, ವೈಯಕ್ತಿಕವಾಗಿ ತಾವು ಚುನಾವಣಾ ಕಣಕ್ಕೆ ಇಳಿಯುವ ಬಗ್ಗೆ ಶಿವಣ್ಣ ಎಂದಿಗೂ ಆಸಕ್ತಿ ತೋರಿಸಿಲ್ಲ. ‘ನಾನು ನಿಮ್ಮ ಪ್ರೀತಿಯ ಶಿವಣ್ಣನಾಗಿ ಉಳಿಯಲು ಬಯಸುತ್ತೇನೆ, ರಾಜಕೀಯ ನಾಯಕನಾಗಿ ಅಲ್ಲ’ ಎಂಬುದು ಅವರ ಖಡಕ್ ನಿಲುವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral Video: ಮಾನವೀಯತೆ ಅಂದ್ರೆ ಇದು: ಸುಡುವ ಬಿಸಿಲಿನಿಂದ ರಕ್ಷಿಸಲು ತನ್ನ ಅಂಗಡಿಯೊಳಗೆ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ವ್ಯಕ್ತಿ – Kannada News | Viral Video Man shelters stray dogs inside his shop to protect them from the scorching sun

ಪ್ರತಿದಿನ, ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಗೆಯ ವಿಡಿಯೋಗಳು ವೈರಲ್ ಆಗುತ್ತವೆ. ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುವ ಕೆಲವು ವಿಡಿಯೋಗಳು ನಮ್ಮ ಸುತ್ತಲೂ ನಡೆಯುತ್ತಿರುವ ಕೆಲವು ಅದ್ಭುತ ಘಟನೆಗಳ ಮೇಲೆಯೇ ಇರುತ್ತದೆ. ಈ ರೀತಿಯಾಗಿ, ಅಂಗಡಿ ಮಾಲೀಕರೊಬ್ಬರು ಬೀದಿ ನಾಯಿಗಳನ್ನು ಸೂರ್ಯನಿಂದ ರಕ್ಷಿಸಲು ಮತ್ತು ತನ್ನ ಅಂಗಡಿಯೊಳಗೆ ಅವುಗಳನ್ನು ಸುರಕ್ಷಿತವಾಗಿಡಲು ವ್ಯವಸ್ಥೆಗಳನ್ನು ಮಾಡಿದ್ದಾರೆ. ಈ ವಿಡಿಯೋ ಪ್ರಸ್ತುತ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ನಾಯಿಗಳಿಗೆ ತನ್ನ ಶಾಪ್ ಒಳಗೆ ಆಶ್ರಯ ನೀಡಿದ ಅಂಗಡಿಯವನು

ಪ್ರಸ್ತುತ, ಭಾರತದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಯು ತುಂಬಾ ತೀವ್ರವಾಗಿದೆ. ಸುಡುವ ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಬರುತ್ತಿಲ್ಲ. ಹೀಗಿರುವಾಗ ಬೀದಿ ನಾಯಿಗಳ ಬಗ್ಗೆ ಕೇಳುವವರಿಲ್ಲ. ರಸ್ತೆಗಳಲ್ಲಿ ಓಡಾಡುವ ಬೀದಿ ನಾಯಿಗಳ ಸ್ಥಿತಿ ತುಂಬಾ ದಯನೀಯವಾಗಿದೆ. ಇದಲ್ಲದೆ, ನಗರಗಳಲ್ಲಿ ಬೀದಿ ನಾಯಿಗಳು ಸೂರ್ಯನಿಂದ ಆಶ್ರಯ ಪಡೆಯಲು ಸ್ಥಳವಿಲ್ಲದೆ ಬಳಲುತ್ತಿವೆ. ಈ ಪರಿಸ್ಥಿತಿಯಲ್ಲಿ ಅಂಗಡಿಯವರೊಬ್ಬರು ಬೀದಿ ನಾಯಿಗಳಿಗೆ ದಯೆ ತೋರಿದ್ದಾರೆ. ಪ್ರಸ್ತುತ, ಇದು ಇಂಟರ್ನೆಟ್‌ನ ಚರ್ಚೆಯಾಗಿದೆ.

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋ

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬೀದಿ ನಾಯಿಗಳು ಅಂಗಡಿಯ ಒಳಗೆವೇ ಕುಳಿತಿವೆ. ಅಂಗಡಿಯಲ್ಲಿ ಬಿಸಿಲಿನ ಬಿಸಿ ಇಲ್ಲದೆ, ಯಾವುದೇ ಭಯವಿಲ್ಲದೆ ಆರಾಮವಾಗಿ ಕುಳಿತಿರುವುದು ವಿಡಿಯೋದಲ್ಲಿ ಕಾಣಬಹುದು. ಕೆಲವು ನಾಯಿಗಳು ನೆಲದ ಮೇಲೆ ಕುಳಿತಿದ್ದರೆ, ಇನ್ನೂ ಕೆಲವು ನಾಯಿಗಳು ಮೇಜಿನ ಮೇಲೆ ಮಲಗಿವೆ. ಅಂಗಡಿಯಲ್ಲಿ ಕೆಲಸ ಮಾಡುವ ಜನರು ಸಹ ನಾಯಿಗಳು ಅಲ್ಲಿರುವುದರಿಂದ ಯಾವುದೇ ತೊಂದರೆ ಅನುಭವಿಸಿಲ್ಲ. ಆ ನಾಯಿಗಳು ಕೂಡ ತಮ್ಮಷ್ಟಕ್ಕೆ ತಾವು ಆರಾಮವಾಗಿ ಕುಳಿತಿವೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.

Viral Video: ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸುದು ಈಗ ಸುಲಭ: ಚಮಚ-ಟೇಪ್ ಬಳಸಿ ಪೈಪ್ ಅನ್ನು ಮಿನಿ ಸ್ಪ್ರೇ ಆಗಿ ಪರಿವರ್ತಿಸಿದ ಗಾರ್ಡನರ್

ಈ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದಂತೆ, ಅನೇಕರು ಅಂಗಡಿಯವರನ್ನು ಹೊಗಳುತ್ತಿದ್ದಾರೆ ಮತ್ತು ಸಾಕಷ್ಟು ಕಾಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vastu Tips: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ – Kannada News | Vastu Tips for Couple Photos: Boost Marital Harmony and Positive Energy at Home

ಮನೆಯ ಸೌಂದರ್ಯವನ್ನು ಹೆಚ್ಚಿಸಲು ಗೋಡೆಗಳ ಮೇಲೆ ಫೋಟೋಗಳನ್ನು ಹಾಕುತ್ತೇವೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ಫೋಟೋ ಕೂಡ ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತದೆ. ಅದರಲ್ಲೂ ಗಂಡ-ಹೆಂಡತಿಯ ಫೋಟೋವನ್ನು ಸರಿಯಾದ ಸ್ಥಳದಲ್ಲಿ ಇರಿಸುವುದು ವೈವಾಹಿಕ ಜೀವನದ ಸುಖ-ಶಾಂತಿಗೆ ಬಹಳ ಮುಖ್ಯ. ದಂಪತಿಗಳ ಫೋಟೋ ಇರಿಸುವಾಗ ಗಮನಿಸಬೇಕಾದ ಅಂಶಗಳು ಇಲ್ಲಿವೆ.

ಫೋಟೋ ಮತ್ತು ಫ್ರೇಮ್ ಹೇಗಿರಬೇಕು?

ಫೋಟೋದಲ್ಲಿ ಗಂಡ-ಹೆಂಡತಿ ಇಬ್ಬರೂ ಪರಸ್ಪರ ಸಂತೋಷದಿಂದ ಮತ್ತು ನಗುಮುಖದಿಂದ ಕೂಡಿರಬೇಕು. ಇದು ದಂಪತಿಗಳ ನಡುವೆ ಪ್ರೀತಿಯನ್ನು ವೃದ್ಧಿಸುತ್ತದೆ. ಫ್ರೇಮ್ ಹಳೆಯದಾಗಿರಬಾರದು ಅಥವಾ ಅದರ ಬಣ್ಣ ಮಾಸಿರಬಾರದು. ಯಾವಾಗಲೂ ಹೊಸದಾದ ಮತ್ತು ಆಕರ್ಷಕವಾದ ಫ್ರೇಮ್ ಬಳಸಿ. ಮುರಿದ ಫ್ರೇಮ್‌ಗಳು ನಕಾರಾತ್ಮಕತೆಯನ್ನು ತರುತ್ತವೆ. ದಂಪತಿಗಳ ಫೋಟೋದಲ್ಲಿ ಗಂಡ-ಹೆಂಡತಿ ಇಬ್ಬರು ಮಾತ್ರ ಇರಲಿ. ಪೂರ್ವಜರು, ಮಕ್ಕಳು ಅಥವಾ ಇತರ ಕುಟುಂಬ ಸದಸ್ಯರ ಫೋಟೋಗಳನ್ನು ಇದರೊಂದಿಗೆ ಸೇರಿಸಬೇಡಿ. ಫೋಟೋ ಅತಿ ದೊಡ್ಡದೂ ಅಲ್ಲದ, ಅತಿ ಚಿಕ್ಕದೂ ಅಲ್ಲದ ‘ಮಧ್ಯಮ’ ಗಾತ್ರದಲ್ಲಿದ್ದರೆ ನೋಡಲು ಚಂದ ಮತ್ತು ವಾಸ್ತು ದೃಷ್ಟಿಯಿಂದಲೂ ಉತ್ತಮ.

ಯಾವ ಸ್ಥಳಗಳಲ್ಲಿ ಫೋಟೋ ಇಡಬಾರದು?

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಫೋಟೋ ಇಡುವುದು ನಿಷೇಧಿತ. ಮಲಗುವ ಕೋಣೆಯ (Bedroom) ಎದುರಿನ ಗೋಡೆಯ ಮೇಲೆ ಫೋಟೋ ಇಡಬೇಡಿ. ದೇವರ ಮನೆ ಅಥವಾ ಪ್ರಾರ್ಥನಾ ಕೋಣೆಯ ನೇರ ಎದುರು ಭಾಗದಲ್ಲಿ ದಂಪತಿಗಳ ಫೋಟೋ ಬೇಡ. ಅಡುಗೆ ಮನೆ, ಶೌಚಾಲಯ ಅಥವಾ ಸ್ನಾನಗೃಹದ ಗೋಡೆಗಳ ಮೇಲೆ ಫೋಟೋ ಹಾಕುವುದನ್ನು ತಪ್ಪಿಸಿ. ಮನೆಯ ಮುಖ್ಯ ಬಾಗಿಲಿನ ನೇರ ಎದುರು ಭಾಗದಲ್ಲಿ ಫೋಟೋ ಇರಿಸುವುದು ಸೂಕ್ತವಲ್ಲ.

ತಪ್ಪು ಸ್ಥಳದಲ್ಲಿ ಇಟ್ಟರೆ ಏನಾಗಬಹುದು?

ಫೋಟೋಗಳನ್ನು ತಪ್ಪು ದಿಕ್ಕಿನಲ್ಲಿ ಅಥವಾ ಅಶುಭ ಸ್ಥಳದಲ್ಲಿ ಇರಿಸಿದರೆ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ದಂಪತಿಗಳ ನಡುವೆ ಅನಗತ್ಯ ಭಿನ್ನಾಭಿಪ್ರಾಯ ಮತ್ತು ಕಲಹಗಳು ಉಂಟಾಗಬಹುದು. ಆರ್ಥಿಕ ಮುಗ್ಗಟ್ಟು ಮತ್ತು ಅನಾರೋಗ್ಯದ ಸಮಸ್ಯೆಗಳು ಕಾಡಬಹುದು. ಸಂಬಂಧದಲ್ಲಿ ಮಾನಸಿಕ ದೂರ ಮತ್ತು ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ವಾಸ್ತು ಪ್ರಕಾರ ಇಟ್ಟರೆ ಸಿಗುವ ಪ್ರಯೋಜನಗಳು:

ಸರಿಯಾದ ನಿಯಮಗಳನ್ನು ಪಾಲಿಸಿ ಫೋಟೋ ಇರಿಸುವುದರಿಂದ ಮನೆ ಮಂದಿರವಾಗುತ್ತದೆ. ಗಂಡ-ಹೆಂಡತಿಯ ನಡುವೆ ಪರಸ್ಪರ ವಿಶ್ವಾಸ ಮತ್ತು ಮಧುರ ಬಾಂಧವ್ಯ ಬೆಳೆಯುತ್ತದೆ. ವೈವಾಹಿಕ ಜೀವನದಲ್ಲಿ ಸ್ಥಿರತೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿಯುತ್ತದೆ. ಮನೆಯಲ್ಲಿ ಶಾಂತಿ ನೆಲೆಸಿದಾಗ, ಅಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಸದಾ ಇರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ವಾಸ್ತು ದೋಷ ನಿವಾರಣೆಗೆ ಸರಳ ಕ್ರಮಗಳು:

ಫೋಟೋಗಳ ಮೇಲೆ ಧೂಳು ಕುಳಿತುಕೊಳ್ಳದಂತೆ ಯಾವಾಗಲೂ ಸ್ವಚ್ಛವಾಗಿಡಿ. ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಹಳೆಯ ಫ್ರೇಮ್ ಬದಲಿಸಿ ಹೊಸದನ್ನು ಹಾಕುವ ಅಭ್ಯಾಸ ಮಾಡಿಕೊಳ್ಳಿ. ಫೋಟೋ ಹಳೆಯದಾಗಿದ್ದರೆ ಅಥವಾ ಹರಿದಿದ್ದರೆ ಅದನ್ನು ಗೌರವಯುತವಾಗಿ ತೆಗೆದುಹಾಕಿ.

ಸಲಹೆ: ವಾಸ್ತು ಎನ್ನುವುದು ಕೇವಲ ನಂಬಿಕೆಯಲ್ಲ, ಅದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ವ್ಯವಸ್ಥಿತವಾಗಿಟ್ಟುಕೊಳ್ಳುವ ಒಂದು ಕಲೆ. ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ದೈನಂದಿನ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವನ್ನು ಹೆಚ್ಚಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link