Category Archives: Blog

Your blog category

ಹುಡುಗಿ ಸಿಕ್ಕರೆ ಮದುವೆ ಆಗ್ತೀನಿ: 67ನೇ ವಯಸ್ಸಿನಲ್ಲಿ ಆಸೆ ತಿಳಿಸಿದ ‘ಶಕ್ತಿಮಾನ್’ ನಟ ಮುಕೇಶ್ ಖನ್ನಾ – Kannada News | Shaktimaan Mukesh Khanna open to marriage at 67 talks about destiny and relationships

ಭಾರತೀಯ ಕಿರುತೆರೆಯ ಐಕಾನಿಕ್ ಸೂಪರ್ ಹೀರೋ ‘ಶಕ್ತಿಮಾನ್’ (Shaktimaan) ಖ್ಯಾತಿಯ ಹಿರಿಯ ನಟ ಮುಖೇಶ್ ಖನ್ನಾ ಅವರಿಗೆ ಈಗ 67 ವರ್ಷ. ಈ ವಯಸ್ಸಿನಲ್ಲೂ ಅವರು ಅವಿವಾಹಿತರಾಗಿಯೇ ಉಳಿದಿದ್ದಾರೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮದುವೆ, ಸಂಬಂಧಗಳು ಮತ್ತು ಜೀವನದ ಬಗ್ಗೆ ಮುಖೇಶ್ ಖನ್ನಾ (Mukesh Khanna) ಅವರು ಅತ್ಯಂತ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಣೆಯಲ್ಲಿ ಬರೆದಿರುವ ಹುಡುಗಿ ಸಿಕ್ಕಿರೆ ಮದುವೆ (Marriage) ಆಗುವುದಾಗಿ ಮುಖೇಶ್ ಖನ್ನಾ ಅವರು ಹೇಳಿದ್ದಾರೆ.

‘ದಿ ಫಿಲ್ಮಿ ಚರ್ಚಾ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮುಖೇಶ್ ಖನ್ನಾ ಅವರು, ತಾವು ಇಂದಿಗೂ ಮದುವೆಗೆ ಸಿದ್ಧರಿರುವುದಾಗಿ ತಿಳಿಸಿದ್ದಾರೆ. ‘ನಾನು ಮದುವೆಯಾಗಿಲ್ಲ ಎಂದ ಮಾತ್ರಕ್ಕೆ ನನಗೆ ವಿವಾಹದ ಮೇಲೆ ನಂಬಿಕೆ ಇಲ್ಲ ಎಂದರ್ಥವಲ್ಲ. ವಾಸ್ತವವಾಗಿ, ನಾನು ಉಳಿದವರಿಗಿಂತ ಹೆಚ್ಚಾಗಿ ಮದುವೆಯನ್ನು ನಂಬುತ್ತೇನೆ. ಪತ್ನಿ ಎಂಬವಳು ಸುಮ್ಮನೆ ಬರುವುದಿಲ್ಲ, ಅವಳು ವಿಧಿಯಲ್ಲಿ ಬರೆಯಲ್ಪಟ್ಟಿರುತ್ತಾಳೆ. ನನಗಾಗಿ ಜನಿಸಿದ ಸಂಗಾತಿ ಎಲ್ಲೋ ಇದ್ದಾಳೆ, ವಿಧಿ ನಮ್ಮನ್ನು ಒಟ್ಟುಗೂಡಿಸಿದಾಗ ಮದುವೆ ಖಂಡಿತ ನಡೆಯುತ್ತದೆ’ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.

ಮದುವೆಯ ಬಗ್ಗೆ ಆಧ್ಯಾತ್ಮಿಕ ದೃಷ್ಟಿಕೋನ ಹೊಂದಿರುವ ಮುಖೇಶ್ ಖನ್ನಾ ಅವರು, ‘ಶಾಸ್ತ್ರಗಳ ಪ್ರಕಾರ, ಪತ್ನಿ ಎನ್ನುವವಳು ಹಿಂದಿನ ಜನ್ಮದ ಪ್ರಾರಬ್ಧ ಕರ್ಮ. ನಿಮ್ಮ ಕರ್ಮಗಳನ್ನು ಸರಿಪಡಿಸಲು ಅವಳು ನಿಮ್ಮ ಜೀವನಕ್ಕೆ ಬರುತ್ತಾಳೆ. ಜೀವನದಲ್ಲಿ ಹಲವು ಅಫೇರ್‌ಗಳಿರಬಹುದು, ಆದರೆ ಪತ್ನಿ ಮಾತ್ರ ಒಬ್ಬಳೇ. ಮದುವೆ ಎನ್ನುವುದು ಎರಡು ಆತ್ಮಗಳ ಪವಿತ್ರ ಮಿಲನ’ ಎಂದು ವಿವರಿಸಿದ್ದಾರೆ.

ಪ್ರೀತಿ ಎನ್ನುವುದು ಜೀವನದಲ್ಲಿ ಒಮ್ಮೆ ಮಾತ್ರ ಎಂಬುದು ಅವರ ನಂಬಿಕೆ. ನಿಜವಾದ ಪ್ರೀತಿ ಮತ್ತು ಆಕರ್ಷಣೆಯ ನಡುವಿನ ವ್ಯತ್ಯಾಸವನ್ನು ತಿಳಿಸಿದ ಅವರು, ‘ನನ್ನ ಪ್ರಕಾರ ಪ್ರೀತಿ ಎನ್ನುವುದು ಜೀವನದಲ್ಲಿ ಒಮ್ಮೆ ಮಾತ್ರ ಆಗುತ್ತದೆ. ಉಳಿದೆಲ್ಲವೂ ಕೇವಲ ಆಕರ್ಷಣೆ ಅಥವಾ ಬಯಕೆ ಅಷ್ಟೆ. ಒಬ್ಬರಿಗೆ ಐ ಲವ್ ಯೂ ಎಂದು ಹೇಳಿ, ನಂತರ ಮತ್ತೊಬ್ಬರ ಬಳಿ ಹೋದರೆ ಅದು ವಂಚನೆ ಆಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಗೆದ್ದರೂ ರಣವೀರ್ ಸಿಂಗ್ ‘ಶಕ್ತಿಮಾನ್’ ಆಗಲು ಸಾಧ್ಯವಿಲ್ಲ: ಕಾರಣ ಏನು?

ಹಲವು ಪ್ರೇಮ ಸಂಬಂಧಗಳನ್ನು ಹೊಂದುವುದೇ ಗಂಡಸ್ತನದ ಲಕ್ಷಣ ಎಂಬ ಮಾತನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ‘ಗಂಡಸ್ತನವನ್ನು ಸಾಬೀತುಪಡಿಸಲು ಹತ್ತಾರು ಸಂಬಂಧಗಳ ಅವಶ್ಯಕತೆಯಿಲ್ಲ. ಅದಕ್ಕೆ ಬೇರೆ ಅರ್ಥಪೂರ್ಣ ದಾರಿಗಳಿವೆ. ಮಹಿಳೆಯರ ಮೇಲೆ ನನಗೆ ಅಪಾರ ಗೌರವವಿದೆ’ ಎಂದು ಖಡಕ್ ಆಗಿ ಹೇಳುವ ಮೂಲಕ ತಮ್ಮ ಜೀವನದ ತತ್ವಗಳನ್ನು ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Assam Assembly Election Results: ಅಸ್ಸಾಂನಲ್ಲಿ ಮತ್ತೆ ಅಧಿಕಾರಕ್ಕೇರಲಿರುವ ಬಿಜೆಪಿ ನೀಡಿದ ಭರವಸೆಗಳೇನು? – Kannada News | BJP Assam election manifesto promises UCC Rs 5 lakh crore infra push law against Love Jihad

ಗುವಾಹಟಿ, ಮೇ 4: ಅಸ್ಸಾಂನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಏರುವುದು ಖಚಿತವಾಗಿದೆ. ಮತ್ತೊಮ್ಮೆ ಹಿಮಂತ ಬಿಸ್ವ ಶರ್ಮಾ ಅವರೇ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ. ವಿಧಾನಸಭಾ ಚುನಾವಣೆಗೂ (Assam Assembly Elections) ಮುನ್ನ ಬಿಜೆಪಿ ನೀಡಿದ್ದ ಭರವಸೆಗಳೇನು? ಮತ್ತೊಮ್ಮೆ ಬಿಜೆಪಿಗೆ ಜನರು ಯಾವ ಕಾರಣಕ್ಕೆ ಮತ ಹಾಕಿರಬಹುದು? ಎಂಬ ಮಾಹಿತಿ ಇಲ್ಲಿದೆ. ಅಸ್ಸಾಂ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡ ಬಿಜೆಪಿ ಅಲ್ಲಿನ ಜನರಿಗೆ 31 ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಪ್ರಮುಖ ಅಂಶಗಳ ಬಗ್ಗೆ ವಿವರ ಇಲ್ಲಿದೆ.

  1. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ 3 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು.
  2. ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ಅನ್ನು ಕೊನೆಗೊಳಿಸಲು ಪರಿಣಾಮಕಾರಿ ಕಾನೂನನ್ನು ಜಾರಿಗೆ ತರಲಾಗುವುದು.
  3. ಅಕ್ರಮ ವಲಸಿಗರ ಪತ್ತೆ ಮತ್ತು ತಳ್ಳುವಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವಲಸಿಗರ (ಅಸ್ಸಾಂನಿಂದ ಹೊರಹಾಕುವಿಕೆ) ಕಾಯ್ದೆ, 1950 ಅನ್ನು ಜಾರಿಗೆ ತರುವ ಮೂಲಕ ಅಸ್ಸಾಂನ ಸ್ಥಳೀಯ ಜನರ ಭೂಮಿ, ಪರಂಪರೆ ಮತ್ತು ಘನತೆಯನ್ನು ರಕ್ಷಿಸಲಾಗುವುದು.
  4. ಛತ್ರಗಳು, ನಾಮ್‌ಘರ್‌ಗಳು, ದೇವಾಲಯಗಳು ಮತ್ತು ಇತರ ಪೂಜಾ ಸ್ಥಳಗಳ ಅತಿಕ್ರಮಣಗೊಂಡ ಭೂ ಭಾಗಗಳನ್ನು ಮುಕ್ತಗೊಳಿಸಲಾಗುವುದು.
  5. ಅಸ್ಸಾಂ ಅನ್ನು ಭಾರತದ ಪೂರ್ವ ದ್ವಾರವಾಗಿ ಇರಿಸಲು 5 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು.
  6. ರಾಜ್ಯವನ್ನು ಪ್ರವಾಹ ಮುಕ್ತಗೊಳಿಸಲು 18,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಹೂಡಿಕೆಯೊಂದಿಗೆ ‘ಬಾದ್ ಮುಕ್ತ್ ಅಸ್ಸಾಂ ಮಿಷನ್’ ಅನ್ನು ಪ್ರಾರಂಭಿಸಲಾಗುವುದು.
  7. 2 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸಲಾಗುವುದು.
  8. ಒಂದು ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು, ಒಂದು ವಿಶ್ವವಿದ್ಯಾಲಯ, ಒಂದು ಎಂಜಿನಿಯರಿಂಗ್ ಕಾಲೇಜು.
  9. ಒರುನೋಡಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ನೇರ ಬ್ಯಾಂಕ್ ವರ್ಗಾವಣೆಯನ್ನು 3,000 ರೂ.ಗಳಿಗೆ ಹೆಚ್ಚಿಸಲಾಗುವುದು.
  10. ಮುಂದಿನ 5 ವರ್ಷಗಳಲ್ಲಿ ಟೀ ತೋಟದ ಕಾರ್ಮಿಕರ ವೇತನವನ್ನು ದಿನಕ್ಕೆ 500 ರೂ.ಗಳಿಗೆ ಹೆಚ್ಚಿಸಲಾಗುವುದು. ಚಹಾ ತೋಟದ ಕಾರ್ಮಿಕರಿಗೆ ಮನೆಯನ್ನೂ ನೀಡಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ತಂಡದಿಂದ ದೂರ; ಈ ಐಪಿಎಲ್‌ನಲ್ಲಿ ಧೋನಿ ಆಡುವುದು ಅನುಮಾನ?

Source link

ವಿಜಯ್​ಗೆ ಇದು ಅನಾಯಾಸವಾಗಿ ಸಿಕ್ಕ ಗೆಲುವಲ್ಲ; 17 ವರ್ಷದ ಹಿಂದೆ ನೆಟ್ಟ ಬೀಜದ ಫಲ – Kannada News | Thalapathy Vijay’s TVK Triumphs in Tamil Nadu Election: From Fan Club to Political Power

ಚೆನ್ನೈ, ಮೇ 4: ಕಾಲಿವುಡ್ ಸೂಪರ್ ಸ್ಟಾರ್ ‘ದಳಪತಿ’ ವಿಜಯ್ ನೇತೃತ್ವದ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಐತಿಹಾಸಿಕ ಗೆಲುವು ಸಾಧಿಸಿದೆ. ಕೇವಲ ಎರಡು ವರ್ಷದ ಹಿಂದೆ (2024ರ ಫೆಬ್ರುವರಿ) ಉದಯಗೊಂಡ ತಮಿಳಗ ವೆಟ್ರಿ ಕಳಗಂ (TVK- Tamilaga Vetri Kazhagam) ಪಕ್ಷ ಅಧಿಕಾರ ಗದ್ದುಗೆ ಹಿಡಿಯುವ ಹಂತಕ್ಕೆ ಜನಬೆಂಬಲ ಪಡೆಯುತ್ತದೆ ಎಂದು ಬಹಳ ಜನರು ನಿರೀಕ್ಷಿಸಿರಲಿಲ್ಲ. ಕಮಲ್ ಹಾಸನ್ ಸಾಕಷ್ಟು ಹರಸಾಹಸ ಮಾಡಿದರೂ ಅವರಿಗೆ ಸಿಕ್ಕ ಯಶಸ್ಸು ಬಹಳ ಅಲ್ಪ. ವಿಜಯ್ ಹೊಸ ಪಕ್ಷ ಕಟ್ಟಿದಾಗಲೂ ಅನೇಕರು ಅದೇ ವೈಫಲ್ಯ ನಿರೀಕ್ಷಿಸಿದ್ದರು. ಆದರೆ ಎಲ್ಲರ ಎಣಿಕೆ ಮೀರಿಸುವಂತೆ ಟಿವಿಕೆ ಪಕ್ಷ ಬಹುಮತದ ಹತ್ತಿರ ಹತ್ತಿರ ಹೋಗಿದೆ. ಆದರೆ, ಟಿವಿಕೆ ಪಕ್ಷ ಆರಂಭವಾಗಿ ಎರಡು ವರ್ಷವಾದರೂ, ವಿಜಯ್ ರಾಜಕೀಯದ ಬೀಜ ನೆಟ್ಟಿದ್ದು ಮಾತ್ರ 17 ವರ್ಷದ ಹಿಂದೆ.

2009ರಲ್ಲೇ ವಿಜಯ್ ನೆಟ್ಟಿದ್ದ ಬೀಜದ ಫಲಶೃತಿ ಇದಾ?

ತಮಿಳುನಾಡು ಚಿತ್ರರಂಗದಲ್ಲಿ ಇರುವ ಮಾಸ್ ಹೀರೋಗಳಲ್ಲಿ ಪ್ರಮುಖವಾದವರು ರಜನೀಕಾಂತ್, ವಿಜಯ್ ಮತ್ತು ಅಜಿತ್. ವಿಜಯ್ ತಮಗಿರುವ ಫ್ಯಾನ್ ಬಳಗವನ್ನು ಸಂಘಟನೆಯ ರೂಪದಲ್ಲಿ ಬಳಸಿಕೊಳ್ಳಲು 2009ರಲ್ಲಿ ವಿಜಯ್ ಮಕ್ಕಳ್ ಇಯಕ್ಕಮ್ ಸ್ಥಾಪಿಸಿದರು. ರಾಜ್ಯಾದ್ಯಂತ ವಿವಿಧೆಡೆ ತಮ್ಮ ಅಭಿಮಾನಿಗಳನ್ನು ಬಳಸಿಕೊಂಡು ವಿಪತ್ತು ಪರಿಹಾರ ಸೇವೆ, ಶಿಕ್ಷಣ ಮತ್ತಿತರ ಸೇವೆಗಳನ್ನು ಈ ಸಂಘಟನೆ ಮೂಲಕ ಮಾಡತೊಡಗಿದರು. ಪ್ರತೀ ಬೂತ್ ಮಟ್ಟದಲ್ಲಿ ವಿಜಯ್ ಕೆಲಸಗಳು ಜನರಿಗೆ ಗುರುತಾಗತೊಡಗಿದವು.

ಇದನ್ನೂ ಓದಿ: ಟಿವಿಕೆ ಭರವಸೆಗಳು: ಗೃಹಿಣಿಯರಿಗೆ 2,500 ರೂ, ವೃದ್ಧರಿಗೆ 3,000 ರೂ, ಉಚಿತ ಗ್ಯಾಸ್, ವಧುವಿಗೆ ಚಿನ್ನ ಇತ್ಯಾದಿ ಕೊಡುಗೆ

ಅವು ಅವರ ರಾಜಕೀಯದ ಬೀಜ ಮೊಳಕೆಯೊಡೆಯಲು ಆರಂಭವಾದ ವರ್ಷಗಳು. ನಂತರ ತಮ್ಮ ಸಿನಿಮಾಗಳಲ್ಲಿ ರಾಜಕೀಯ ವಿಚಾರಗಳನ್ನು ಸೇರಿಸಿ, ತಾನು ರಾಜಕೀಯಕ್ಕೆ ಕಾಲಿಡಬಹುದು ಎನ್ನುವ ಸುಳಿವನ್ನೂ ಕೊಡತೊಡಗಿದರು. ಫ್ಯಾನ್ ಮೀಟಿಂಗ್, ಚಾರಿಟಿ ಇವೆಂಟ್ ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಅವರು ವಿದ್ಯಾರ್ಥಿಗಳು, ನಿರುದ್ಯೋಗಿಗಳ ಸಮಸ್ಯೆ, ಭ್ರಷ್ಟಾಚಾರ, ಆಡಳಿತ ಸಮಸ್ಯೆಗಳ ಬಗ್ಗೆ ಸ್ಪಂದಿಸತೊಡಗಿದರು. ಯುವಸಮುದಾಯಕ್ಕೆ ವಿಜಯ್ ಆಶಾಕಿರಣವಾಗಿ ಕಾಣಲು ಸಾಧ್ಯವಾಗಿದ್ದಿರಬಹುದು.

2024ರಲ್ಲಿ ಟಿವಿಕೆ ಸ್ಥಾಪನೆ

ಎರಡು ವರ್ಷದ ಹಿಂದೆ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ ಪಕ್ಷ ಸ್ಥಾಪನೆ ಮಾಡಿದಾಗ ಅನೇಕರ ಹುಬ್ಬೇರಿತ್ತು. ಕಮಲಹಾಸನ್ ರಾಜಕೀಯ ಪ್ರವೇಶಿಸಿ ಮುನ್ನುಗ್ಗಲು ತಡವರಿಸುತ್ತಿದ್ದ ಸಮಯವದು. ರಜನೀಕಾಂತ್ ರಾಜಕೀಯ ಪಕ್ಷ ಸ್ಥಾಪನೆಯ ಹೊಸ್ತಿಲಿಂದ ಕೊನೆಯ ಕ್ಷಣದಲ್ಲಿ ಹೊರಬಿದ್ದ ಸಮಯ. ವಿಜಯ್ ಏನು ಮಾಡಿಯಾನು ಎಂದು ಭಾವಿಸಿದವರೇ ಅನೇಕರು.

ಇದನ್ನೂ ಓದಿ: ವಿಜಯ್ vs ಎನ್‌ಟಿಆರ್: ಇಬ್ಬರು ಸೂಪರ್‌ಸ್ಟಾರ್‌ಗಳು, ಎರಡು ಭಿನ್ನ ದಾರಿಗಳು; ಹೀಗೊಂದು ಹೋಲಿಕೆ

ವಿಜಯ್ ಅವರು ತಮ್ಮ ಮೂರು ದಶಕದ ಸಿನಿಮಾ ವೃತ್ತಿಯನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದರು. ಇದರೊಂದಿಗೆ, ರಾಜಕೀಯ ಎನ್ನುವುದು ತಮ್ಮ ಸೈಡ್ ಬ್ಯುಸಿನೆಸ್ ಅಲ್ಲ ಎನ್ನುವ ಸಂದೇಶವನ್ನು ಜನತೆಗೆ ರವಾನಿಸಿದರು.

ನಂತರ, ವಿಜಯ್ ಮಕ್ಕಳ ಇಯಕ್ಕಂ ಮೂಲಕ ನಿರ್ಮಿಸಿದ್ದ ಗ್ರೌಂಡ್ ಲೆವೆಲ್ ಬೇಸ ಅನ್ನು ಗಟ್ಟಿಗೊಳಿಸುವ ಕೆಲಸ ಮಾಡತೊಡಗಿದರು. ಉಗ್ರ ಭಾಷಣಗಳ ಬದಲು ಜನತೆಯ ಸಮಸ್ಯೆ ಆಲಿಸುವ ಸಂವೇದನಾಶೀಲ ವ್ಯಕ್ತಿಯಾಗಿ ಗುರುತಾಗತೊಡಗಿದರು.

2025ರಲ್ಲಿ ಕರೂರು ಕಾಲ್ತುಳಿತ ಘಟನೆಯು ಅವರ ಮಾನಸಿಕ ಸ್ಥೈರ್ಯದ ಪರೀಕ್ಷೆಯಾಗಿ ಮಾರ್ಪಟ್ಟಿತು. ಆ ಸಂಕಷ್ಟದಲ್ಲಿ ವಿಜಯ್ ತೋರಿದ ವರ್ತನೆ ಮತ್ತು ಸಂಯಮವು ಬಹಳ ಜನರ ಗಮನ ಸೆಳೆದಿತ್ತು. ಇವೆಲ್ಲಾ ಅಂಶಗಳು ವಿಜಯ್ ಅವರಲ್ಲಿ ವಿಶ್ವಾಸಾರ್ಹ ನಾಯಕನನ್ನು ಕಾಣಲು ಜನರಿಗೆ ಸಾಧ್ಯವಾಯಿತು ಎಂಬುದು ವಿಶ್ಲೇಷಕರ ಅನಿಸಿಕೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅತ್ತ ಗೆದ್ದು ಬಿಎಸ್​​ವೈ ಭೇಟಿಯಾದ ಜೀವರಾಜ್: ಇತ್ತ ಸಿಎಂ ಭೇಟಿ ಮಾಡಿದ ರಾಜೇಗೌಡ – Kannada News | Sringeri Postal Ballots Recount: DN Jeevaraj meets BS Yediyurappa affter win; Rajegowda Meets Siddaramaiah

ಡಿ.ಎನ್. ಜೀವರಾಜ್, ಟಿ.ಡಿ. ರಾಜೇಗೌಡImage Credit source: tv9 kannada

ಚಿಕ್ಕಬಳ್ಳಾಪುರ, ಮೇ 04: ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ (Sringeri Postal Ballots Recount) ಕೊನೆಗೂ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ (MLA DN Jeevaraj)​​ ಗೆಲುವು ಸಾಧಿಸಿದ್ದಾರೆ. ಜಯಗಳಿಸಿದ ಬೆನ್ನಲ್ಲೇ ಡಿ.ಎನ್. ಜೀವರಾಜ್​​ ಇಂದು ಬೆಂಗಳೂರಿನ ಧವಳಗಿರಿಯಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಭೇಟಿ ಮಾಡಿದ್ದಾರೆ. ಇನ್ನು ಇತ್ತ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವ ಮಾಜಿ ಶಾಸಕ ರಾಜೇಗೌಡ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಸಿಎಂ ಜತೆ ಮಾತುಕತೆ ಮಾಡಿದ್ದಾರೆ.

3 ವರ್ಷಗಳ ಹೋರಾಟದ ಬಳಿಕ ಜಯ ಸಿಕ್ಕಿದೆ: ಶಾಸಕ ಜೀವರಾಜ್

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶೃಂಗೇರಿಯ ನೂತನ ಶಾಸಕ ಜೀವರಾಜ್, 3 ವರ್ಷಗಳ ಬಹಳ ಹೋರಾಟದ ನಡುವೆ ನಿನ್ನೆ ಜಯ ಸಿಕ್ಕಿದೆ. ಎಣಿಕೆ ಬಗ್ಗೆ ಎರಡು ಅರ್ಜಿಗಳನ್ನ ಕೊಟ್ಟರು. ಕಡಿಮೆ ಮತದ ಸೋಲು ಆದರೆ ರಿಟರ್ನಿಂಗ್ ಆಫೀಸರ್ ಮರು ಎಣಿಕೆ ಮಾಡಬೇಕು. ನಮ್ಮ ಅರ್ಜಿಗೆ ಪ್ರತಿಕ್ರಿಯೆ ಕೊಡುವ ಮೊದಲೇ ಅವರಿಗೆ ಫಾರಂ ಕೊಟ್ಟರು. ಹೈಕೋರ್ಟ್ ಕೇಸ್​ಗೆ ವಜಾಗೊಳಿಸುವ ಪ್ರಯತ್ನ ಮಾಡಿದರು. ಸುಪ್ರೀಂ ಕೋರ್ಟ್​ಗೂ ಹೋಗಿದ್ದರು ಮತ್ತೆ ಹೈಕೋರ್ಟ್​ಗೆ ಹೋಗಿದ್ದರು. ಅವರಿಗೆ ಅನುಮಾನ ಇದ್ದ ಕಾರಣ ಸ್ಟೇ ಕೊಡಿ, ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ ಅಂತ ಹೇಳಿದ್ದರು ಎಂದರು.

ಇದನ್ನೂ ಓದಿ: ಅಂಚೆ ಮತಗಳ ಮರು ಎಣಿಕೆಯಲ್ಲಿ ಗೆದ್ದ ಜೀವರಾಜ್​​ ಈಗ ಶೃಂಗೇರಿಗೆ ಹೊಸ ಶಾಸಕ: MLA ಪ್ರಮಾಣಪತ್ರ ಪಡೆದ ಬಿಜೆಪಿಗ

ಇನ್ನು ಎಣಿಕೆ ಮುಗಿಯುವ ಮುನ್ನವೇ ವಿಜಯೋತ್ಸವ ಮಾಡಿದ್ದರು. ನಾವು, ಬಿಟ್ಟು ಹೋಗಲಿ ಅಂತ ಪ್ರಯತ್ನಿಸಿದರು. ಅವರಿಗೆ ಬಂದ ಮತ ಡಬಲ್‌ ಆಗಿ ಟ್ಯಾಂಪರಿಂಗ್ ಆಗಿದೆ ಅಂದರು. ಅಂಚೆ ಮತ ಮೊದಲಿಗೆ ಎಣಿಕೆ ಆಗಬೇಕು. ಬೆಳಗ್ಗೆ ಶುರು ಮಾಡಿ‌ ಸಂಜೆಯವರೆಗೂ ಏಕೆ ಎಣಿಕೆ ಇಟ್ಟಿಕೊಂಡಿದ್ದರು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 135 ಸೀಟ್ ಬಂದಾಗ ಹಾಗೇ ಫಲಿತಾಂಶ ನೀಡಿದ್ದಾರೆ. 25ಕ್ಕೆ 25 ಅಮಾನ್ಯ ಮತಗಳು ಬಂದ್ದವು ಎಂದು ಹೇಳಿದರು.

ಎಫ್​ಐಆರ್ ವಿಚಾರವಾಗಿ ಮಾತನಾಡಿದ ಅವರು, ಅದು ಕಾನೂನು ಬಾಹಿರವಾಗಿದೆ. ತನಿಖೆಯನ್ನ ಚುನಾವಣಾ ಆಯೋಗ ಮಾಡಬೇಕು. ಹೆದರಿಸುವ ಕೆಲಸ ಮಾಡಬಾರದು. ಉಪಮುಖ್ಯಮಂತ್ರಿಗಳು ಆ ರೀತಿ ಮಾತನಾಡಬಾರದಿತ್ತು. ಸ್ಟ್ರಾಂಗ್ ರೂಂ ಓಪನ್ ಮಾಡಿದಾಗ ಟ್ರಂಕ್​​ಗಳ ಬಗ್ಗೆ ಕೇಳಿದ್ವಿ. ವಿವಿ ಪ್ಯಾಡ್​ಗಳ ಬೀಗ ಒಡೆದುಕೊಂಡು ಬಿದ್ದಿದ್ದವು. ಅವೆಲ್ಲವೂ ವಿಡಿಯೋ ಇದೆ ಎಂದಿದ್ದಾರೆ.

ಬಿಜೆಪಿಗೆ ಜಯ ಬೆನ್ನಲ್ಲೇ ಸಿಎಂ ಭೇಟಿಯಾದ ಮಾಜಿ ಶಾಸಕ ರಾಜೇಗೌಡ

ಇನ್ನು ಶೃಂಗೇರಿ ಕ್ಷೇತ್ರದ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಗೆ ಜಯ ಬೆನ್ನಲ್ಲೇ ಇತ್ತ ಮಾಜಿ ಶಾಸಕ ರಾಜೇಗೌಡ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಅವರು ಅಂಚೆ ಮತ ಎಣಿಕೆಯಲ್ಲಿ ಸೃಷ್ಟಿಯಾಗಿದ್ದ ಗೊಂದಲ ಬಗ್ಗೆ ಚರ್ಚೆ ಮಾಡಿದ್ದಾರೆ. ಜೊತೆಗೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಕೂಡ ಮಾತುಕತೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆಪ್ತನ ಪುತ್ರನನ್ನ ಗೆಲ್ಲಿಸಿಕೊಂಡ ಸಿಎಂ, ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣಗಳು – Kannada News | Bagalkot assembly by election result 2026 here is some reasons for congress candidate umesh meti won

ಬಾಗಲಕೋಟೆ, (ಮೇ 04): ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (bagalkot assembly by election result), ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಬಿಜೆಪಿಯ ವೀರಣ್ಣ ಚರಂತಿಮಠ ಅವರನ್ನು ಸೋಲಿಸಿ ಭರ್ಜರಿ ಜಯ ಸಾಧಿಸಿದ್ದಾರೆ. ಎಚ್.ವೈ. ಮೇಟಿ (HY Meti) ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಉಮೇಶ್ ಮೇಟಿ (congress candidate-umesh meti )ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 22,332 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಯಾರಿಗೆ ಎಷ್ಟು ಮತ?

ಕಾಂಗ್ರೆಸ್​​​ ಅಭ್ಯರ್ಥಿ ಉಮೇಶ್​ ಮೇಟಿಗೆ 98919 ಮತ ಪಡೆದುಕೊಂಡಿದ್ದರೆ, ಬಿಜೆಪಿಯ ವೀರಣ್ಣ ಚರಂತಿಮಠ 76587 ಮತಗಳನ್ನ ಪಡೆದುಕೊಂಡಿದ್ದಾರೆ. ಇನ್ನು ನೋಟಾಗೆ 1458 ಮತಗಳು ಬಿದ್ದಿವೆ. ಇದರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಸ್ಪಷ್ಟ ಮುನ್ನಡೆ ಕಾಯ್ದು 22,867 ಮತಗಳ ಅಂತರ ಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದು, ಎಚ್​​ ವೈ ಮೇಟಿ ಪುತ್ರನ ವಿರುದ್ಧವೂ ಸಹ ಬಿಜೆಪಿಯ ವೀರಣ್ಣ ಚರಂತಿಮಠಗೆ ಸೋಲಾಗಿದೆ. 2023ರ ಚುನಾವಣೆಯಲ್ಲೂ ಸಹ ಎಚ್​ ವೈ ಮೇಟಿ ವಿರುದ್ಧ ವೀರಣ್ಣ ಚರಂತಿಮಠಗೆ ಸೋಲು ಕಂಡಿದ್ದರು.

ಇದನ್ನೂ ಓದಿ: Assembly Election 2026 LIVE Counting and Results: ಟಿವಿಕೆ ಅಭ್ಯರ್ಥಿ ವಿರುದ್ಧ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ಗೆ ಸೋಲು

ಟಿಕೆಟ್​​​ಗೆ ಪೈಪೋಟಿ ನಡೆಸಿ ಒಂದಾ ಮೇಟಿ ಸಹೋದರರು

ಚುನಾವಣೆಗೆ ಮುನ್ನ ಮೇಟಿ ಕುಟುಂಬದೊಳಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಮಲ್ಲಿಕಾರ್ಜುನ ಮೇಟಿ, ಬಾಯಕ್ಕ ಮತ್ತು ಉಮೇಶ್ ಮೇಟಿ ನಡುವೆ ತೀವ್ರ ಪೈಪೋಟಿ ಉಂಟಾಗಿ ಭಿನ್ನಮತವೂ ವ್ಯಕ್ತವಾಗಿತ್ತು. ಹೌದು.. ಬೈ ಎಲೆಕ್ಷನ್ ಟಿಕೆಟ್​​ಗಾಗಿ ಕುಟುಂಬದೊಳಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಎಚ್.ವೈ. ಮೇಟಿ ಅವರ 4 ಮಕ್ಕಳೆಲ್ಲರೂ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದು ಕುಳಿತ್ತಿದ್ದರು. ಕೊನೆಗೆ ಖುದ್ದು ಸಿಎಂ ಸಿದ್ದರಾಮಯ್ಯ ಆಪ್ತ ಎಚ್​ ವೈ ಮೇಟಿ ಪುತ್ರರನ್ನು ಬೆಂಗಳೂರಿಗೆ ಕರೆಯಿಸಿಕೊಂರು ಸಂಧಾನ ಸಭೆ ಮಾಡಿ ಎಲ್ಲರನ್ನೂ ಸಮಾಧಾನಪಡಿಸಿದ್ದರು. ಅಲ್ಲದೇ ಒಬ್ಬರಿಗೆ ಟಿಕೆಟ್ ನೀಡಿದರೆ ಎಲ್ಲರೂ ಒಟ್ಟಾಗಿ ಚುನಾವಣೆ ಮಾಡಬೇಕೆಂದು ಸೂಚಿಸಿ ಕಳುಹಿಸಿದ್ದರು. ಅಂತಿಮವಾಗಿ ಪಕ್ಷದ ಹೈಕಮಾಂಡ್ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಿತ್ತು. ಬಳಿಕ ಇತರರು ಸಿಟ್ಟಾಗದೇ ಸಿಎಂ ಆದೇಶವನ್ನು ಪಾಲಿಸಿದ್ದು, ಮಕ್ಕಳೆಲ್ಲರೂ ಒಂದಾಗಿ ಪ್ರಚಾರದಲ್ಲಿ ತೊಡಗಿದ್ದರು. ಇದು ಕಾಂಗ್ರೆಸ್ ಗೆಲುವಿಗೆ ಒಂದು ಪ್ರಮುಖ ಕಾರಣ ಎನ್ನಬಹುದು.

ಮುಸ್ಲಿಂ ಮತಗಳು ಬೇಡ ಎಂದಿದ್ದ ಬಿಜೆಪಿ ಅಭ್ಯರ್ಥಿ

ಬಾಗಲಕೋಟೆಯಲ್ಲಿ ಕುರುಬ, ಲಿಂಗಾಯತ ಮತಗಳ ಬಳಿಕ ಮುಸ್ಲಿಂ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಮತಗಳು ಕೂಡ ಗೆಲುವಿನಲ್ಲಿ ನಿರ್ಣಾಯಕವಾಗುತ್ತವೆ. ಆದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನನಗೆ ಮುಸ್ಲಿಂ ವೋಟು ಬೇಡ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೇ ಹಿಂದೂಗಳ ಮತಗಳನ್ನ ಒಗ್ಗೂಡಿಸಲು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಚರಂತಿಮಠ ಪರವಾಗಿ ಪ್ರಚಾರ ಮಾಡಿದ್ದರು. ಆದರೂ ತಂತ್ರ ವರ್ಕೌಟ್ ಆಗಿಲ್ಲ. ಅಹಿಂದ, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಕೈ ಹಿಡಿದಿದ್ದರಿಂದ ಉಮೇಶ್ ಮೇಟಿ ಗೆಲುವಿಗೆ ಕಾರಣವಾಗಿದೆ.

ಕೈ ಹಿಡಿದ ಮಹಿಳಾ ಮತಗಳು ಮತ್ತು ಗ್ಯಾರಂಟಿಗಳು

ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತಿ ದೊಡ್ಡ ಬಲವಾಗಿದ್ದು ಮಹಿಳಾ ಮತದಾರರು. ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದರು. ಜತೆಗೆ ಮಹಿಳೆಯರೇ ಈ ಬಾರಿ ಹೆಚ್ಚಿನ ಮತ ಚಲಾಯಿಸಿದ್ದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಶಕ್ತಿ’ ಯೋಜನೆಗಳು ಮಹಿಳಾ ಮತದಾರರ ಮೇಲೆ ಪ್ರಭಾವ ಬೀರಿವೆ. ಪ್ರತಿ ತಿಂಗಳು ಖಾತೆಗೆ ಬರುತ್ತಿರುವ ಹಣ ಮತ್ತು ಉಚಿತ ಬಸ್‌ ಪ್ರಯಾಣದ ಸೌಲಭ್ಯವು ಗ್ರಾಮೀಣ ಭಾಗದ ಮಹಿಳೆಯರನ್ನು ಕಾಂಗ್ರೆಸ್‌ ಪರವಾಗಿ ನಿಲ್ಲುವಂತೆ ಮಾಡಿದೆ.

ಆಡಳಿತ ಪಕ್ಷದ ಬಲ ಮತ್ತು ಸಂಘಟನೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿರುವುದು ಉಮೇಶ್‌ ಮೇಟಿ ಅವರಿಗೆ ಆನೆಬಲ ತಂದಿದೆ. ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಕಾಂಗ್ರೆಸ್‌, ಸಚಿವರು ಮತ್ತು ಪ್ರಭಾವಿ ನಾಯಕರನ್ನು ಪ್ರಚಾರಕ್ಕೆ ಇಳಿಸಿತ್ತು. ಅಲ್ಲದೇ ಸಚಿವರು, ಶಾಸಕರಿಗೆ ಟಾಸ್ಕ್ ನೀಡಲಾಗಿತ್ತು. ನಮ್ಮ ಸರ್ಕಾರವೇ ಇರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಸಾಧ್ಯ ಎಂಬ ಸಂದೇಶವನ್ನು ಮತದಾರರಿಗೆ ತಲುಪಿಸುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಯಿತು.

ಸಿಎಂ ಸಿದ್ದರಾಮಯ್ಯ ಆನೆಬಲ

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಹುಕಾಲದ ಆಪ್ತ ಎಚ್‌ವೈ ಮೇಟಿಯವರ ಪುತ್ರನನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಲೇಬೇಕು ಎಂದು ಪಣತೊಟ್ಟಿದ್ದರು. ಇದಕ್ಕಾಗಿಯೇ ಒಂದು ವಾರ ಬಾಗಲಕೋಟೆಯಲ್ಲಿಯೇ ಇದ್ದು ಪ್ರಚಾರ ನಡೆಸಿದ್ದರು. ಪಂಚಮಸಾಲಿ ಸೇರಿದಂತೆ ಇತರೆ ಅಹಿಂದ ನಾಯಕರ ಸಭೆ ಮಾಡಿ ಗೆಲುವಿಗೆ ತಂತ್ರ ರೂಪಿಸಿದ್ದರು. ಸಿದ್ದರಾಮಯ್ಯ ಜೊತೆಗೆ ಹೆಗಲಾಗಿ ಸತೀಶ್ ಜಾರಕಿಹೊಳಿ ಹಾಗೂ ತಿಮ್ಮಾಪುರ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರ ನಡೆಸಿದ್ದರು. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವರಾದ ಜಿ. ಪರಮೇಶ್ವರ್ ಸೇರಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹಾಗೂ ಶಾಸಕರು, ಸಚಿವರು, ಸಿಎಂ ಪುತ್ರ ಯತೀಂದ್ರ ಆಗಮಿಸಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು.

ತಂದೆಯ ವರ್ಚಸ್ಸು, ಅನುಕಂಪ

ಉಮೇಶ್‌ ಮೇಟಿ ಅವರ ತಂದೆ, ಮಾಜಿ ಸಚಿವ ಎಚ್‌ವೈ ಮೇಟಿ ಅವರು ಬಾಗಲಕೋಟೆ ರಾಜಕಾರಣದಲ್ಲಿ ದಶಕಗಳ ಕಾಲ ಪ್ರಭಾವ ಹೊಂದಿರುವ ನಾಯಕ. ಅವರ ಸರಳತೆ, ಜನರೊಂದಿಗೆ ಅವರಿಗಿರುವ ನೇರ ಸಂಪರ್ಕ ಮತ್ತು ಸುದೀರ್ಘ ರಾಜಕೀಯ ಅನುಭವವು ಉಮೇಶ್‌ ಮೇಟಿ ಅವರ ಗೆಲುವಿಗೆ ಕಾರಣವಾಗಿದೆ. ಮೇಟಿ ಕುಟುಂಬ ಎಂದರೆ ಕ್ಷೇತ್ರದ ಜನರಲ್ಲಿರುವ ನಂಬಿಕೆ ಮತ್ತು ತಂದೆಯ ಬಗ್ಗೆ ಇರುವ ಸಹಾನುಭೂತಿ ಮತಗಳಾಗಿ ಪರಿವರ್ತನೆಯಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತಂದೆಯ ವರ್ಚಸ್ಸು ಹಾಗೂ ಅನುಕಂಪ ಸಹ ಉಮೇಶ್ ಮೇಟಿ ಗೆಲುವಿಗೆ ಕಾರಣಗಳಾಗಿವೆ.

ಹೀಗೆ ಹಲವು ಕಾರಣಗಳಿಂದ ಉಮೇಶ್ ಮೇಟಿ ಅಂತಿಮವಾಗಿ ಉಪಚುನಾವಣೆಯಲ್ಲಿ 22 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಬಿಜೆಪಿಯ ಚರಂತಿಮಠ ಎಚ್​​ ವೈ ಮೇಟಿ ವಿರುದ್ಧ ಮಾತ್ರವಲ್ಲ ಇದೀಗ ಅವರ ಅವರ ಪುತ್ರನ ವಿರುದ್ಧವೂ ಮುಗ್ಗರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳು ಅತಿಯಾಗಿ ಮೊಬೈಲ್ ನೋಡುವುದರಿಂದ ಆಟಿಸಂ ಅಪಾಯ ಹೆಚ್ಚಾಗಬಹುದೇ? ಇಲ್ಲಿದೆ ಡಾ. ಶೆಫಾಲಿ ನೀಡಿರುವ ಸಲಹೆ – Kannada News | Virtual Autism Warning: AIIMS Flags Infant Screen Time Dangers

ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳಿಗೂ ಮೊಬೈಲ್ ಫೋನ್ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಆರೋಗ್ಯ ತಜ್ಞರು ಇದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಹಿಂದಿನಿಂದಲೂ ಎಚ್ಚರಿಸುತ್ತಿದ್ದಾರೆ. ಎಐಐಎಂಎಸ್ ನಡೆಸಿದ ಸಂಶೋಧನೆಯ ಪ್ರಕಾರ, ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹೆಚ್ಚು ಸ್ಕ್ರೀನ್ ಟೈಮ್ (Screen Time) ನೀಡುವುದರಿಂದ “ವರ್ಚುವಲ್ ಆಟಿಸಂ” ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಹೌದು, ಡಾ. ಶೆಫಾಲಿ ಗುಲಾಟಿ ಹೇಳುವ ಪ್ರಕಾರ, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್ ಬಳಕೆ ಹೆಚ್ಚಾಗಿ ಮಾಡುವುದರಿಂದ ಅವರ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಸಂಶೋಧನೆಯಲ್ಲಿ ಕಂಡುಬಂದಂತೆ, 18 ತಿಂಗಳೊಳಗೆ ಸ್ಕ್ರೀನ್ ಬಳಕೆಗೆ ಒಳಗಾದ ಮಕ್ಕಳಲ್ಲಿ ಆಟಿಸಂ ಲಕ್ಷಣಗಳು ಹೆಚ್ಚಾಗಿ ಕಂಡುಬಂದಿವೆ.

ಆಟಿಸಂ ಎಂದರೇನು?

ಆಟಿಸಂ ಒಂದು ನರಸಂಬಂಧಿತ ವ್ಯಾಧಿಯಾಗಿದ್ದು, ಇದು ಮಕ್ಕಳ ಸಂವಹನ ಮತ್ತು ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಮಾತನಾಡುವಲ್ಲಿ ಅಥವಾ ಸಾಮಾಜಿಕ ಸಂಪರ್ಕದಲ್ಲಿ ತೊಂದರೆ ಅನುಭವಿಸುತ್ತಾರೆ. ಸಂಶೋಧನೆಯ ಪ್ರಕಾರ, ಹೆಚ್ಚು ಸಮಯ ಮೊಬೈಲ್ ಅಥವಾ ಟಿವಿ ನೋಡುವ ಮಕ್ಕಳಲ್ಲಿ ಆಟಿಸಂ ಲಕ್ಷಣಗಳು ಹೆಚ್ಚಾಗಿರುವುದು ಕಂಡುಬಂದಿದೆ. ವಿಶೇಷವಾಗಿ ಬಾಲಕರಲ್ಲಿ ಈ ಲಕ್ಷಣಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ದೀರ್ಘಕಾಲ ಸ್ಕ್ರೀನ್ ಬಳಕೆ ಮಕ್ಕಳಲ್ಲಿ ಸಂವಹನ ಕೌಶಲ್ಯವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಮಕ್ಕಳಲ್ಲಿ ಆಟಿಸಂ ಇರುವುದನ್ನು ಕಂಡುಹಿಡಿಯುವುದು ಹೇಗೆ? ಲಕ್ಷಣಗಳು ಹೇಗಿರುತ್ತವೆ?

ಪೋಷಕರಿಗೆ ತಜ್ಞರ ಸಲಹೆ

ತಜ್ಞರು ಪೋಷಕರಿಗೆ ಮಕ್ಕಳೊಂದಿಗೆ ನೇರವಾಗಿ ಹೆಚ್ಚು ಮಾತನಾಡುವಂತೆ ಸಲಹೆ ನೀಡುತ್ತಾರೆ. ಮಕ್ಕಳನ್ನು ಶಾಂತವಾಗಿಡಲು ಮೊಬೈಲ್ ನೀಡುವುದನ್ನು ಕಡಿಮೆ ಮಾಡಬೇಕು. ಸ್ಕ್ರೀನ್ ಟೈಮ್ ಅನ್ನು ಹಂತ ಹಂತವಾಗಿ ಕಡಿಮೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗಬಹುದು. ಜೊತೆಗೆ ಮಕ್ಕಳಲ್ಲಿ ಆಟಿಸಂ ಲಕ್ಷಣಗಳು ಕಂಡುಬಂದರೆ ತಕ್ಷಣ ತಜ್ಞರನ್ನು ಸಂಪರ್ಕಿಸುವುದು ಮುಖ್ಯ. ಅದಲ್ಲದೆ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸ್ಕ್ರೀನ್ ಬಳಕೆಯನ್ನು ನಿಯಂತ್ರಿಸುವುದು ಅತ್ಯಗತ್ಯ. ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದು ಮತ್ತು ಸಂವಹನ ಹೆಚ್ಚಿಸುವುದು ಉತ್ತಮ ಭವಿಷ್ಯಕ್ಕೆ ಸಹಾಯಕವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಡಾಯ ಮಣಿಸಿ ದಾವಣಗೆರೆ ಬೈ ಎಲೆಕ್ಷನ್​ ಗೆದ್ದ ಸಮರ್ಥ್ ಶಾಮನೂರು – Kannada News | Davanagere South Bypoll: Congress’ Samarth Shamanur Defeats BJP’s Srinivas Das Kariyappa

ದಾವಣಗೆರೆ, ಮೇ 04: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಮೊಮ್ಮಗ, ಕಾಂಗ್ರೆಸ್​​ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದು ಬೀಗಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪಗೆ ಸೋಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ನಡೆದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಪರಾಭಯಗೊಂಡಿದೆ. ತನ್ನದೇ ಹಿಡಿತದಲ್ಲಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರವನ್ನು ಆಡಳಿತಾರೂಢ ಕಾಂಗ್ರೆಸ್​​ ಮರಳಿ ತೆಕ್ಕೆಗೆ ಪಡೆದಿದೆ.

ಯಾರಿಗೆ ಎಷ್ಟು ಮತ?

ಕಾಂಗ್ರೆಸ್​ನ ಸಮರ್ಥ್ ಶಾಮನೂರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪ ವಿರುದ್ಧ  5,708 ಮತಗಳ ಅಂತರಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್​​ನ ಸಮರ್ಥ್ ಶಾಮನೂರುಗೆ 69,578 ಮತಗಳು ಬಿದ್ದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸ ಕರಿಯಪ್ಪಗೆ 63,870 ಮತಗಳನ್ನು ಪಡೆದಿದ್ದಾರೆ. ಇನ್ನು ಎಸ್​ಡಿಪಿಐನ ಅಫ್ಸರ್ ಕೊಡ್ಲಿಪೇಟೆಗೆ 18975 ಮತಗಳು ಮತ್ತು ನೋಟಾಗೆ 511 ಮತಗಳು ಚಲಾವಣೆಯಾಗಿವೆ.

ಕಾರ್ಯಕರ್ತರ ವಿಜಯೋತ್ಸವ

ಸಮರ್ಥ್ ಶಾಮನೂರು ಗೆಲುವಿನ ಹಿನ್ನೆಲೆ ಕಾಂಗ್ರೆಸ್​​ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಕೆಲವರು ಮುಸ್ಲಿಂ ಮತಗಳು ವಿಭಜನೆ ಆಗುವಂತೆ ಮಾಡಿದ್ದು, ಕಾಂಗ್ರೆಸ್​​ನ 22 ಸಾವಿರ ಮತಗಳು ಬೇರೆಯವರ ಪಾಲಾಗಿವೆ. ಹೀಗಾಗಿಯೇ ಇದಕ್ಕೆ ಕಾರಣರಾದ ಮುಖಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಮುಸ್ಲಿಂ‌‌ ಮುಖಂಡ ಅಮಾನತ್ತನ್ನು ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ.)

Published On – 3:05 pm, Mon, 4 May 26

Source link

ಹಸೆಮಣೆ ಏರಲು ಸಜ್ಜಾದ ‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ; ಹುಡುಗ ಯಾರು? – Kannada News | Toxic movie actress Huma Qureshi Rachit Singh to wed in Mumbai this year

ಬಾಲಿವುಡ್‌ನ ಖ್ಯಾತ ನಟಿ ಹುಮಾ ಖುರೇಷಿ (Huma Qureshi) ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಟನಾ ತರಬೇತುದಾರ ರಚಿತ್ ಸಿಂಗ್ (Rachit Singh) ಅವರೊಂದಿಗೆ ಪ್ರೀತಿಯಲ್ಲಿದ್ದ ಹುಮಾ, ಈ ವರ್ಷದ ಅಂತ್ಯಕ್ಕೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಈ ಜೋಡಿಯು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್‌ನಲ್ಲಿ ಮದುವೆಯಾಗಲು ಪ್ಲ್ಯಾನ್ ಮಾಡಿದೆ. ಹುಮಾ ಖುರೇಷಿ ಅವರು ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಮೇಲೆ ಸಖತ್ ಭರವಸೆ ಇದೆ.

ಹುಮಾ ಖುರೇಷಿ ಮತ್ತು ರಚಿತ್ ಸಿಂಗ್ ಅವರ ವಿವಾಹ ಮಹೋತ್ಸವವು ಅತ್ಯಂತ ಆಪ್ತವಾಗಿ ನಡೆಯಲಿದ್ದು, ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಮದುವೆಯ ನಂತರ ಮುಂಬೈನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ರಿಸೆಪ್ಷನ್ ಹಮ್ಮಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಹುಮಾ ಖುರೇಷಿ ಮತ್ತು ರಚಿತ್ ಸಿಂಗ್ ಅವರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಅವರ ವಿವಾಹ ಸೇರಿದಂತೆ ಹಲವು ಸಿನಿಮಾ ಪ್ರದರ್ಶನಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಕಳೆದ ವರ್ಷವೇ ಅಮೆರಿಕದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ ಎಂಬ ವದಂತಿಗಳೂ ಇವೆ.

ಇದಕ್ಕೂ ಮುನ್ನ ಹುಮಾ ಖುರೇಷಿ ಅವರು ನಿರ್ದೇಶಕ ಮುದಸ್ಸರ್ ಅಜೀಜ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಆದರೆ 2022ರಲ್ಲಿ ಇವರು ಪರಸ್ಪರ ದೂರವಾಗಿದ್ದರು. ಆ ಬಳಿಕ ರಚಿತ್ ಸಿಂಗ್ ಜೊತೆ ಅವರಿಗೆ ಪ್ರೀತಿ ಚಿಗುರಿತು. ಈಗ ಅವರು ಮದುವೆ ಆಗಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಇದನ್ನೂ ಓದಿ: ಬಾಲಿವುಡ್ ನಟಿ ಹುಮಾ ಖುರೇಷಿ ಸಂಬಂಧಿ ಆಸಿಫ್ ಹತ್ಯೆ

ಸದ್ಯ ಹುಮಾ ಖುರೇಷಿ ವೃತ್ತಿಜೀವನದಲ್ಲೂ ಬ್ಯುಸಿಯಾಗಿದ್ದಾರೆ. ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ಹುಮಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗೀತು ಮೋಹನ್​ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಎಲಿಜಬೆತ್ ಎಂಬ ಕುತೂಹಲಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

West Bengal Results: ಗೆಲುವಿನ ರಹಸ್ಯ; ಬಂಗಾಳದ ಯುವಕರು, ಮಹಿಳೆಯರಿಗೆ ಬಂಪರ್ ಆಫರ್ ಕೊಟ್ಟು ಗೆದ್ದ ಬಿಜೆಪಿ – Kannada News | UCC in 6 months, free bus and Rs 3000 for women Employment for Youth BJP West Bengal manifesto

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದ (West Bengal Elections) 294 ಕ್ಷೇತ್ರಗಳಲ್ಲಿ 197 ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. ಟಿಎಂಸಿ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತ ಪಡೆದು ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಆದ 148 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಅಧಿಕಾರಕ್ಕೇರುವುದು ಖಚಿತವಾಗಿದೆ. ಈ ಬಾರಿಯ ಚುನಾವಣೆಗೂ ಮುನ್ನ ಬಿಜೆಪಿ ಪಶ್ಚಿಮ ಬಂಗಾಳಕ್ಕೆ ಯಾವೆಲ್ಲ ಭರವಸೆಗಳನ್ನು ನೀಡಿತ್ತು? ಬಿಜೆಪಿ ಸರ್ಕಾರ ರಚನೆಯಾದರೆ ಯಾವ ಸಮುದಾಯಕ್ಕೆ ಹೆಚ್ಚು ಲಾಭವಾಗಲಿದೆ ಎಂಬುದರ ವಿವರ ಇಲ್ಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯಾದ ‘ಸಂಕಲ್ಪ ಪತ್ರ’ವನ್ನು ಬಿಡುಗಡೆ ಮಾಡಿದ್ದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ 7ನೇ ವೇತನ ಆಯೋಗ ಮತ್ತು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವ ಭರವಸೆಯನ್ನು ಬಿಜೆಪಿ ನೀಡಿತ್ತು. ಬಿಜೆಪಿ ನೀಡಿದ ಭರವಸೆಗಳಲ್ಲಿ ಮಹಿಳೆಯರಿಗೆ ಮತ್ತು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಹೀಗಾಗಿ, ಮಹಿಳೆಯರು ಬಿಜೆಪಿಗೆ ಹೆಚ್ಚು ಮತ ಹಾಕಿರುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳಕ್ಕೆ ಬಿಜೆಪಿ ನೀಡಿರುವ ಭರವಸೆಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ! ಕೊನೆಗೂ ಮಮತಾರನ್ನು ಸೋಲಿಸಿದ್ಹೇಗೆ ಬಿಜೆಪಿ? ಇಲ್ಲಿವೆ ಕೆಲವು ಇಂಟರೆಸ್ಟಿಂಗ್ ಮಾಹಿತಿ

  1. ಎಲ್ಲಾ ಸರ್ಕಾರಿ ನೌಕರರು ಮತ್ತು ಸಂಬಳ ಪಡೆಯುವ ಕಾರ್ಮಿಕರಿಗೆ ತುಟ್ಟಿ ಭತ್ಯೆ (ಡಿಎ) ನೀಡಲಾಗುವುದು.
  2. ಹೊಸ ಬಿಜೆಪಿ ಸರ್ಕಾರದ ಅಡಿಯಲ್ಲಿ ಪ್ರತಿಯೊಬ್ಬ ಉದ್ಯೋಗಿಯ ಘನತೆಯನ್ನು ಎತ್ತಿಹಿಡಿಯಲು 7ನೇ ವೇತನ ಆಯೋಗವನ್ನು ಜಾರಿಗೆ ತರಲಾಗುವುದು.
  3. ಪ್ರತಿಯೊಬ್ಬ ಮಹಿಳೆಯ ಬ್ಯಾಂಕ್ ಖಾತೆಗಳಲ್ಲಿ 3,000 ರೂ.ಗಳನ್ನು ಹಾಕಲಾಗುವುದು.
  4. ಪೊಲೀಸ್ ಪಡೆ ಸೇರಿದಂತೆ ಪಶ್ಚಿಮ ಬಂಗಾಳದ ಎಲ್ಲ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲಾಗುವುದು.
  5. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು.
  6. ನಿರುದ್ಯೋಗಿ ಯುವಕರಿಗೆ 3,000 ಆರ್ಥಿಕ ನೆರವು ನೀಡಲಾಗುವುದು.
  7. ಎಲ್ಲಾ ಕೇಂದ್ರ ಸರ್ಕಾರದ ಯೋಜನೆಗಳ ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
  8. ಬಡ ಕುಟುಂಬದ ಗರ್ಭಿಣಿಯರಿಗೆ 6 ಪೌಷ್ಟಿಕಾಂಶಗಳ ಕಿಟ್ ಮತ್ತು 21 ಸಾವಿರ ರೂ. ಹಣ ಸಹಾಯ.
  9. ಮಹಿಳೆಯರ ಉನ್ನತ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಸ್ನಾತಕೋತ್ತರ ಪದವಿಗಳಿಗೆ ಸೇರುವ ಹೆಣ್ಣುಮಕ್ಕಳಿಗೆ 50,000 ರೂ. ಹಣ.
  10. ಮೀನುಗಾರರಿಗೆ ತಿಂಗಳಿಗೆ 9,000 ರೂ. ಧನ ಸಹಾಯ
  11. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವವರನ್ನು ಉತ್ತೇಜಿಸಲು 15,000 ರೂ. ಧನ ಸಹಾಯ.
  12. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.
  13. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದಿಂದಾಗಿ ಅರ್ಹತಾ ವಯಸ್ಸಿನ ಮಿತಿಯನ್ನು ದಾಟಿದ ಯುವಕರಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗುವುದು.
  14. ಬಂಗಾಳದಲ್ಲಿ 5 ವರ್ಷಗಳಲ್ಲಿ 1 ಕೋಟಿ ಹೊಸ ಉದ್ಯೋಗಾವಕಾಶ ಸೃಷ್ಟಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link