Category Archives: Blog

Your blog category

RSS ನೋಂದಣಿ ಬಗ್ಗೆ ಪ್ರಶ್ನಿಸಿದ್ದ ಪ್ರಿಯಾಂಕ್​​ ಖರ್ಗೆಗೆ ಬಹಿರಂಗ ಪತ್ರ ಬರೆದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ – Kannada News | RSS Registration Row: BJP MP Narayansa Bhandage Pens Open Letter To Priyank Kharge, Slams Appeasement Politics

ಪ್ರಿಯಾಂಕ್ ಖರ್ಗೆಗೆ ನಾರಾಯಣಸಾ ಭಾಂಡಗೆ ಬಹಿರಂಗ ಪತ್ರImage Credit source: PTI and Narayanasa Bhandage X Account

ಬೆಂಗಳೂರು, ಜೂನ್​​ 16: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೋಂದಣಿಯ ಬಗ್ಗೆ ಪ್ರಶ್ನೆ ಮಾಡುತ್ತಲೇ ಬಂದಿರುವ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಈ ಸಂಬಂಧ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿರೋದು ಚರ್ಚೆಗೆ ಗ್ರಾಸವಾಗಿತ್ತು. ಸಂಘಟನೆಯ ಕಾನೂನುಬದ್ಧ ಸ್ಥಾನಮಾನ ಮತ್ತು ಪಾರದರ್ಶಕತೆಯ ಬಗ್ಗೆ ಅವರು ಕೇಳಿದ್ದ ಪ್ರಶ್ನೆಗಳಿಗೆ ತಿರುಗೇಟು ನೀಡಿದ್ದ ಭಾಗವತ್​​, ಹಿಂದೂ ಧರ್ಮ ರಿಜಿಸ್ಟರ್ ಆಗಿದೆಯೇ? ಎಂದು ಪ್ರಶ್ನಿಸಿದ್ದರು. ಸರ್ಕಾರಿ ಅನುದಾನ ಪಡೆಯುವವರಿಗೆ ಮಾತ್ರ ನೋಂದಣಿ ಅಗತ್ಯವಿದೆ ಎಂದಿದ್ದರು. ಆ ಬೆನ್ನಲ್ಲೇ ಈಗ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಕೂಡ ಬಹಿರಂಗ ಪತ್ರ ಬರೆಯುವ ಮೂಲಕ ಪ್ರಿಯಾಂಕ್​​ಗೆ ತಿರುಗೇಟು ನೀಡಿದ್ದಾರೆ.

ನಾರಾಯಣಸಾ ಭಾಂಡಗೆ ಪತ್ರದಲ್ಲೇನಿದೆ?

ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಆಧಾರದ ಮೇಲೆ ಒಂದು ಸಂಸ್ಥೆಯ ಅಸ್ತಿತ್ವವನ್ನೇ ಪ್ರಶ್ನಿಸುವುದು ಸೂಕ್ತವಲ್ಲ. ಕಾಂಗ್ರೆಸ್ ಪಕ್ಷವು ಏಕೆ ನಿರಂತರವಾಗಿ ಹಿಂದೂ ಸಂಘಟನೆಗಳನ್ನೇ ಗುರಿಯಾಗಿಸಿಕೊಂಡು ಪ್ರಶ್ನಿಸುತ್ತದೆ ಎಂಬ ಅನುಮಾನ ಮೂಡಿದೆ. ಕರ್ನಾಟಕದಲ್ಲಿ ನಡೆದ ಹುಬ್ಬಳ್ಳಿ ಪೊಲೀಸ್ ಠಾಣೆ ಹಿಂಸಾಚಾರ, ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆಗಳು, ಹಿಂಸಾತ್ಮಕ ಗುಂಪುಗಳಿಂದ ಸಾರ್ವಜನಿಕ ಆಸ್ತಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ನಡೆದ ದಾಳಿಗಳು ರಾಜ್ಯದ ಜನತೆಯ ನೆನಪಿನಲ್ಲಿ ಇನ್ನೂ ಜೀವಂತವಾಗಿವೆ. ಹಿಂಸೆಗೆ ಒಳಗಾದವರಲ್ಲಿ OBC ಕಾಂಗ್ರೆಸ್ ಶಾಸಕರ ಮನೆಯೂ ಸೇರಿದೆ. ಇಂತಹ ಘಟನೆಗಳ ಕುರಿತು ಇದೇ ರೀತಿಯ ಬಹಿರಂಗ ಪತ್ರಗಳು, ಇದೇ ಮಟ್ಟದ ಆಕ್ರೋಶ ಮತ್ತು ಇದೇ ರೀತಿಯ ನೈತಿಕ ಪ್ರಶ್ನೆಗಳು ಏಕೆ ಉದ್ಭವಿಸಲಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ ಎಂದು ನಾರಾಯಣಸಾ ಭಾಂಡಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: RSS ವಿಚಾರವಾಗಿ ಮೋಹನ್ ಭಾಗವತ್​ಗೆ ಪ್ರಿಯಾಂಕ್ ಖರ್ಗೆ ಪತ್ರ, ಈ 8 ಅಂಶಗಳಿಗೆ ವಿವರ ನೀಡುವಂತೆ ಆಗ್ರಹ

‘ಕಾಂಗ್ರೆಸ್​​ಗೆ ಆತ್ಮಾವಲೋಕನದ ಸಮಯ’

ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಬಗ್ಗೆ ನಿಮ್ಮ ಕಾಳಜಿ ನಿಜವಾಗಿಯೂ ಪ್ರಾಮಾಣಿಕವಾಗಿದ್ದರೆ ಅದೇ ಮಾನದಂಡವನ್ನು ಧಾರ್ಮಿಕ, ಸಾಮಾಜಿಕ, ರಾಜಕೀಯ, ಸೈದ್ಧಾಂತಿಕ ಹಿನ್ನೆಲೆಯ ಎಲ್ಲ ಸಂಘಟನೆಗಳಿಗೂ ಅನ್ವಯಿಸಬೇಕು. ರಾಜಕೀಯ ಪ್ರತೀಕಾರದ ಭಾವನೆಯಿಂದ ಒಂದು ನಿರ್ದಿಷ್ಟ ಸಂಘಟನೆಯನ್ನು ಮಾತ್ರ ಗುರಿಯಾಗಿಸಿ ಸಾರ್ವಜನಿಕವಾಗಿ ಅನುಮಾನ ವ್ಯಕ್ತಪಡಿಸುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ಅನುಗುಣವಾಗುವುದಿಲ್ಲ. ಕಾಂಗ್ರೆಸ್​​ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಹಿಂದೂ ಸಂಘಟನೆಗಳನ್ನು ಗುರಿಯಾಗಿಸುವುದು ಮತ್ತು ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಪದೇಪದೇ ನೋಯಿಸುವ ರಾಜಕೀಯ ತಂತ್ರವು ಸಮಾಜದಲ್ಲಿ ವಿಭಜನೆಗೆ ಕಾರಣವಾಗಬಹುದು. ಭಾರತದ ಸಂವಿಧಾನವು ಓಲೈಕೆ ರಾಜಕಾರಣವನ್ನೂ ಬಯಸುವುದಿಲ್ಲ . ಪೂರ್ವಾಗ್ರಹವನ್ನೂ ಒಪ್ಪುವುದಿಲ್ಲ. ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸಿದ ಸಂಸ್ಥೆಗಳ ಕೊಡುಗೆಯನ್ನು ಗೌರವಿಸುತ್ತಾ, ಯಾವುದೇ ರೀತಿಯ ಅತಿರೇಕ, ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಪಕ್ಷಪಾತವಿಲ್ಲದೆ ಕ್ರಮ ಕೈಗೊಳ್ಳುವುದೇ ನಿಜವಾದ ಸಂವಿಧಾನಾತ್ಮಕ ಕರ್ತವ್ಯ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ರಫ್ತು ಸುಂಕ ಹೆಚ್ಚಳ; ಪೆಟ್ರೋಲ್ ರೀಟೇಲ್ ಬೆಲೆ ಮೇಲೆ ಪರಿಣಾಮ ಬೀರುತ್ತಾ? – Kannada News | India Hikes Diesel, ATF Export Duty: No Impact on Domestic Fuel Prices

ನವದೆಹಲಿ, ಜೂನ್ 16: ಕೇಂದ್ರ ಸರ್ಕಾರವು ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತುಗಳ ಮೇಲಿನ ಸುಂಕವನ್ನು (Export Duty) ಹೆಚ್ಚಿಸಿದೆ. ಆದರೆ ಪೆಟ್ರೋಲ್ ಮೇಲಿನ ರಫ್ತು ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಡೀಸೆಲ್ ರಫ್ತು ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) 50 ಪೈಸೆ ಏರಿಸಲಾಗಿದೆ. ಪ್ರತಿ ಲೀಟರ್‌ಗೆ 13.5 ರೂನಿಂದ 14 ರೂಗೆ ಹೆಚ್ಚಿಸಲಾಗಿದೆ . ವಿಮಾನ ಇಂಧನದ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ 3 ರೂ ಹೆಚ್ಚಿಸಲಾಗಿದೆ. 9.5 ರೂನಿಂ 12.5 ರೂಗೆ ಗಣನೀಯವಾಗಿ ಏರಿಸಲಾಗಿದೆ. ಆದರೆ, ಪೆಟ್ರೋಲ್ ರಫ್ತು ಮೇಲಿನ ಸುಂಕದಲ್ಲಿ ಬದಲಾವಣೆ ಮಾಡಲಾಗಿಲ್ಲ. ಅದರ ಪ್ರತಿ ಲೀಟರ್‌ಗೆ ಅದರ ಸುಂಕ 1.5 ರೂನಲ್ಲೇ ಮುಂದುವರಿಯಲಿದೆ.

ಸಾಮಾನ್ಯ ಗ್ರಾಹಕರ ಮೇಲೆ ಏನು ಪರಿಣಾಮ?

ಈ ತೆರಿಗೆ ಬದಲಾವಣೆಗಳು ಕೇವಲ ವಿದೇಶಗಳಿಗೆ ರಫ್ತು ಮಾಡುವ ಇಂಧನಕ್ಕೆ ಮಾತ್ರ ಅನ್ವಯಿಸುತ್ತವೆ. ದೇಶೀಯ ಮಾರುಕಟ್ಟೆಯಲ್ಲಿ (ಭಾರತದ ಒಳಗಡೆ) ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದರ ಈ ಕಾರಣಕ್ಕೆ ಏರಿಕೆಯಾಗುವುದಿಲ್ಲ, ಇಳಿಕೆಯೂ ಆಗುವುದಿಲ್ಲ.

ಇದನ್ನೂ ಓದಿ: ಇರಾನ್-ಅಮೆರಿಕ ಶಾಂತಿ ಒಪ್ಪಂದವು ಭಾರತಕ್ಕೆ ಖುಷಿ ವಿಚಾರವಲ್ಲ: ಮಾಜಿ ಇಸ್ರೇಲ್ ವಕ್ತಾರರ ಎಚ್ಚರಿಕೆ

ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?

ಪಶ್ಚಿಮ ಏಷ್ಯಾ (West Asia) ಭಾಗದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿವೆ. ಭಾರತದ ತೈಲ ಸಂಸ್ಕರಣಾ ಕಂಪನಿಗಳು (ಉದಾಹರಣೆಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಂತಾದವು) ದೇಶದ ಒಳಗಡೆ ಇಂಧನ ಮಾರಾಟ ಮಾಡುವ ಬದಲು, ವಿದೇಶಗಳಲ್ಲಿ ಹೆಚ್ಚಿನ ಬೆಲೆಗೆ ರಫ್ತು ಮಾಡಿ ಅತಿಯಾದ ಲಾಭ ಗಳಿಸುವುದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ದೇಶದ ಒಳಗಡೆ ಇಂಧನದ ಕೊರತೆಯಾಗದಂತೆ ನೋಡಿಕೊಳ್ಳುವುದು ಮತ್ತು ದೇಶೀಯ ಮಾರುಕಟ್ಟೆಗೆ ಮೊದಲ ಆದ್ಯತೆ ನೀಡುವಂತೆ ಕಂಪನಿಗಳನ್ನು ಪ್ರೇರೇಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಈ ಪರಿಷ್ಕೃತ ದರಗಳು ಇವತ್ತು (ಜೂನ್ 16) ಮಂಗಳವಾರದಿದಲೇ ಜಾರಿಗೆ ಬಂದಿದ್ದು, ಸರ್ಕಾರವು ಪ್ರತಿ 15 ದಿನಗಳಿಗೊಮ್ಮೆ ಜಾಗತಿಕ ತೈಲ ಬೆಲೆಗಳನ್ನು ಪರಿಶೀಲಿಸಿ ಈ ತೆರಿಗೆಯನ್ನು ಬದಲಾಯಿಸುತ್ತಿರುತ್ತದೆ. ಸದ್ಯ ಜಾಗತಿಕ ತೈಲ ಬೆಲೆಗಳು ಒಂದು ಬ್ಯಾರಲ್​ಗೆ 80 ಡಾಲರ್​ಗೆ ಇಳಿದಿವೆ. ಈ ದರ ಇನ್ನೂ ಇಳಿಕೆಯಾದಲ್ಲಿ ಪೆಟ್ರೋಲ್ ಮತ್ತು ಡೀಸಲ್ ದರಗಳೂ ಇಳಿಕೆಯಾಗಬಹುದು. ಅಥವಾ ಸರ್ಕಾರವು ಅಬಕಾರಿ ಸುಂಕ ಏರಿಸಿ, ಪೆಟ್ರೋಲ್, ಡೀಸಲ್ ದರ ಯಥಾಸ್ಥಿತಿಯಲ್ಲಿ ಮುಂದುವರಿಯುವಂತೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಮರು-ಪರೀಕ್ಷೆಗೂ ಮುನ್ನವೇ ಆಘಾತ; ರಾಜಸ್ಥಾನದ ಸೀಕರ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಸಾವು! – Kannada News | NEET Aspirant Suicide in Sikar: Second Student Death in Coaching Hub, Exam Pressure

ನೀಟ್ ಮರು-ಪರೀಕ್ಷೆಗೂ ಮುನ್ನ ಮತ್ತೊಬ್ಬ ವಿದ್ಯಾರ್ಥಿ ಸಾವುImage Credit source: Pinterest

ರಾಜಸ್ಥಾನದ ಪ್ರಮುಖ ಕೋಚಿಂಗ್ ಹಬ್ ಆಗಿರುವ ಸೀಕರ್ (Sikar) ಜಿಲ್ಲೆಯಲ್ಲಿ ಮಂಗಳವಾರದಂದು ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಜೂನ್ 21 ರಂದು ದೇಶಾದ್ಯಂತ ನೀಟ್ ಮರು-ಪರೀಕ್ಷೆ ನಡೆಯಲಿದ್ದು, ಅದಕ್ಕೆ ಸಜ್ಜಾಗುತ್ತಿದ್ದ 22 ವರ್ಷದ ನೀಟ್ ಅಭ್ಯರ್ಥಿ ಉಮೇಶ್ ಮಾಲಿ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಯುವಕನನ್ನು ಜುಂಜುನು ಜಿಲ್ಲೆಯ ನವಲಗಢ ಪ್ರದೇಶದ ಕಾರಿ ಗ್ರಾಮದ ನಿವಾಸಿ ಉಮೇಶ್ ಮಾಲಿ ಎಂದು ಗುರುತಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರವೇಶ ಪಡೆಯುವ ಕನಸಿನಿಂದ ಅವರು ಸಿಕಾರ್‌ನ ಪಿಪ್ರಾಲಿ ರಸ್ತೆಯಲ್ಲಿರುವ ವಸತಿ ನಿಲಯದಲ್ಲಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಉಮೇಶ್ ಅವರಿಗೆ ಇದು ಮೂರನೇ ಪ್ರಯತ್ನವಾಗಿತ್ತು ಎನ್ನಲಾಗಿದೆ. ಘಟನಾ ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನು (Suicide Note) ವಶಪಡಿಸಿಕೊಂಡಿದ್ದು, ಅದರಲ್ಲೇನಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ:

ಪೊಲೀಸ್ ಮಾಹಿತಿಯ ಪ್ರಕಾರ, ಉಮೇಶ್ ತನ್ನ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕುಟುಂಬ ಸದಸ್ಯರು ಮೊದಲು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉದ್ಯೋಗ್ ನಗರ ಪೊಲೀಸ್ ಠಾಣೆಯ ಪ್ರಭಾರಿ ರಾಜೇಶ್ ಬುಡಾನಿಯಾ ಮತ್ತು ತಂಡವು ಪರಿಶೀಲನೆ ನಡೆಸಿದೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀ ಕಲ್ಯಾಣ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕ್ರಿಯೆ ಮುಗಿದ ನಂತರ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ದುರಂತಕ್ಕೂ ಮುನ್ನ ನಡೆದಿದ್ದೇನು?

ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಘಟನೆ ನಡೆದ ದಿನದ ಬೆಳಿಗ್ಗೆ ಉಮೇಶ್ ತನ್ನ ತಾಯಿಯನ್ನು ಊರಿಗೆ ಬಿಡಲು ಹೋಗಿದ್ದನು. ತಾಯಿಯನ್ನು ಬಿಟ್ಟು ವಾಪಸ್ ಸೀಕರ್‌ನ ಫ್ಲಾಟ್‌ಗೆ ಮರಳಿದ್ದನು. ಆನಂತರ ಆತನ ಅಕ್ಕ ಮತ್ತು ತಮ್ಮ ಫ್ಲಾಟ್‌ಗೆ ಬಂದಾಗ ಉಮೇಶ್ ಕೋಣೆಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತಕ್ಷಣವೇ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ‘ಎರಡು ವರ್ಷದ ಶ್ರಮ ವ್ಯರ್ಥವಾಯಿತು’: ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ

ಒಂದೇ ತಿಂಗಳಲ್ಲಿ ಸೀಕರ್‌ನಲ್ಲಿ ನಡೆದ ಎರಡನೇ ದುರಂತ:

ನೀಟ್ ಪರೀಕ್ಷೆಯ ಗೊಂದಲಗಳ ನಡುವೆ ಸೀಕರ್‌ನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ವಿದ್ಯಾರ್ಥಿ ಸಾವು ಇದಾಗಿದೆ. ಇದಕ್ಕೂ ಮುನ್ನ, ಮೇ 3 ರಂದು ನಡೆದಿದ್ದ ನೀಟ್-ಯುಜಿ 2026 ರ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸಿತ್ತು. ಪರೀಕ್ಷೆ ರದ್ದಾದ ದಿನವೇ ಪ್ರದೀಪ್ ಮೇಘವಾಲ್ ಎಂಬ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದನು.

ಪರೀಕ್ಷೆಯ ಅನಿಶ್ಚಿತತೆಯೇ ಕಾರಣವೇ?

ಹಿಂದಿನ ಪ್ರಕರಣದಲ್ಲಿ ಮೃತಪಟ್ಟಿದ್ದ ಪ್ರದೀಪ್ ಮೇಘವಾಲ್ ತಂದೆ ರಾಜೇಶ್ ಕುಮಾರ್ ನೀಡಿದ ಹೇಳಿಕೆಯಂತೆ, ಪ್ರದೀಪ್ ಮೇ 3ರ ಪರೀಕ್ಷೆಯನ್ನು ತುಂಬಾ ಚೆನ್ನಾಗಿ ಬರೆದಿದ್ದನು ಮತ್ತು ಆತನಿಗೆ 720 ಕ್ಕೆ 650 ಅಂಕಗಳು ಬರುವ ನಿರೀಕ್ಷೆಯಿತ್ತು. ಆದರೆ ಪರೀಕ್ಷೆ ರದ್ದಾದ ಸುದ್ದಿ ಕೇಳಿ ಆತ ತೀವ್ರ ಬೇಸರಗೊಂಡಿದ್ದನು ಎನ್ನಲಾಗಿದೆ.

ಸದ್ಯ ಪೊಲೀಸರು ಈ ಎರಡೂ ಪ್ರಕರಣಗಳಿಗೆ ನೇರ ಸಂಬಂಧ ಕಲ್ಪಿಸದಿದ್ದರೂ, ಕೋಚಿಂಗ್ ಹಬ್ ಆಗಿರುವ ಸೀಕರ್‌ನಲ್ಲಿ ಸತತವಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಸಾವು ಪರೀಕ್ಷಾರ್ಥಿಗಳ ಮೇಲಿರುವ ತೀವ್ರ ಮಾನಸಿಕ ಒತ್ತಡವನ್ನು ಎತ್ತಿ ತೋರಿಸುತ್ತಿದೆ. ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Optical Illusion: ನಿಮಗೊಂದು ಚಾಲೆಂಜ್; ಈ ಚಿತ್ರದಲ್ಲಿರುವ ಸಂಖ್ಯೆಯನ್ನು ಹುಡುಕಿ ನೋಡೋಣ – Kannada News | Optical Illusion: Can you find the hidden in number this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: twitter.com

ಕೆಲವರಿಗೆ ಒಗಟುಗಳನ್ನು ಬಿಡಿಸುವುದೆಂದರೆ ಅದೇನೋ ಕ್ರೇಜ್. ಹೀಗಾಗಿ ಬಿಡುವು ಸಿಕ್ಕಾಗಲ್ಲೆಲ್ಲಾ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಹಾಗೂ ಬ್ರೈನ್ ಟೀಸರ್ ನಂತಹ (brain teaser) ಒಗಟಿನ ಆಟಗಳನ್ನು ಬಿಡಿಸುತ್ತಾರೆ. ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಒಗಟುಗಳು ಸಹಕಾರಿಯಾಗಿದ್ದು, ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಉತ್ತರ ಕಂಡುಕೊಳ್ಳೋದು ಅಷ್ಟೇ ಕಷ್ಟಕರ. ಇದೀಗ ಇಂತಹದ್ದೇ ಕಠಿಣ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿರುವ ಸಂಖ್ಯೆಯನ್ನು ಹೇಳಬೇಕು. ಈ ಒಗಟು ಬಿಡಿಸಲು ಇರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ. ನೀವು ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿರುವ ಸಂಖ್ಯೆಯೆಷ್ಟು?

ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಸಂಖ್ಯೆಯೊಂದಿದೆ. ಈ ಸಂಖ್ಯೆಯನ್ನು 10 ಸೆಕೆಂಡುಗಳಲ್ಲಿ ಹುಡುಕಿ ಹೇಳುವುದೇ ನಿಮ್ಮ ಕೆಲಸ. ನೀವು ಈ ಸವಾಲಿಗೆ ರೆಡಿ ಇದ್ದರೆ, ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ. ನೀವು ಈ ಸವಾಲನ್ನು ಸ್ವೀಕರಿಸಲು ರೆಡಿ ಇದ್ದೀರಾ ಎಂದು ನಾವು ಭಾವಿಸುತ್ತೇವೆ.

ಇದನ್ನೂ ಓದಿ: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸಬಲ್ಲಿರಾ

ಈ ಚಿತ್ರದಲ್ಲಿರುವ ಸಂಖ್ಯೆ ನಿಮ್ಮ ಕಣ್ಣಿಗೆ ಬಿದ್ದಿತೇ?

ಎಷ್ಟೇ ಗಮನ ಹರಿಸಿದರೂ ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಹುಡುಕಲು ಆಗಲಿಲ್ಲವೆಂದು ಚಿಂತಿಸುತ್ತಿದ್ದೀರಾ. ಹೆಚ್ಚು ಚಿಂತಿಸಬೇಡಿ. ಒಂದು ವೇಳೆ ಈ ಸಂಖ್ಯೆ ಗುರುತಿಸಲು ಸಾಧ್ಯವಾದರೆ ನಿಮ್ಮ ಕಣ್ಣುಗಳು ಚುರುಕಾಗಿ ಕೆಲಸ ಮಾಡುತ್ತಿವೆ ಎಂದರ್ಥ. ಈ ಕೆಳಗಿನ ಚಿತ್ರದಲ್ಲಿ ಉತ್ತರವನ್ನು ನಾವು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ. ಈ ಚಿತ್ರದಲ್ಲಿರುವ ಸಂಖ್ಯೆ 3246.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:07 am, Tue, 16 June 26

Source link

ಸೌಂದರ್ಯ ಜೊತೆ ನಟಿಸಿದ್ದ ಆ ಸ್ಟಾರ್ ಹೀರೋ ಕೂಡ ಅಪಘಾತದಲ್ಲೇ ಮೃತಪಟ್ಟರು – Kannada News | Soundarya: Mahanati’s ‘Seethayya’ Tragedy, Harikrishna’s Fate

ಕನ್ನಡ ನೆಲದಲ್ಲಿ ಹುಟ್ಟಿ, ತೆಲುಗು, ತಮಿಳು, ಮೊದಲಾದ ಚಿತ್ರರಂಗದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ‘ಮಹಾನಟಿ’ ಎನಿಸಿಕೊಂಡವರು ನಟಿ ಸೌಂದರ್ಯ. ತಮ್ಮ ಸಹಜ ನಟನೆ, ಸೌಂದರ್ಯ ಮತ್ತು ಸಾಂಪ್ರದಾಯಿಕ ಪಾತ್ರಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಈ ಸುಂದರ ತಾರೆ, ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಇಹಲೋಕ ತ್ಯಜಿಸಿದ್ದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತ. ಸೌಂದರ್ಯ ಅವರ ಸಿನಿ ಪಯಣದ ಕೊನೆಯ ದಿನಗಳನ್ನು ತಿರುವಿ ಹಾಕಿದಾಗ, ಅವರು ನಟಿಸಿದ ಒಂದು ಬ್ಲಾಕ್‌ಬಸ್ಟರ್ ಸಿನಿಮಾ ಮತ್ತು ಅದರ ಮುಖ್ಯ ಕಲಾವಿದರ ಸಾವು ಇಂದಿಗೂ ಚಿತ್ರರಂಗವನ್ನು ನಡುಗಿಸುವಂತಿದೆ.

ಕನ್ನಡದ ಕುವರಿಯ ಕೊನೆಯ ಸೂಪರ್ ಹಿಟ್ ‘ಸೀತಯ್ಯ’

ಸೌಂದರ್ಯ ಹಾಗೂ ಮೋಹನ್ ಬಾಬು ನಟನೆಯ‘ಸೀತಯ್ಯ’ 2003ರಲ್ಲಿ ರಿಲೀಸ್ ಆಯಿತು . ವೈ.ವಿ.ಎಸ್. ಚೌಧರಿ ನಿರ್ದೇಶನದ ಈ ಹೈ-ವೋಲ್ಟೇಜ್ ಫ್ಯಾಕ್ಷನ್ ಆ್ಯಕ್ಷನ್ ಸಿನಿಮಾದಲ್ಲಿ ಸೌಂದರ್ಯ ಅವರು ನಂದಮೂರಿ ಹರಿಕೃಷ್ಣ ಅವರಿಗೆ ಜೋಡಿಯಾಗಿ ನಟಿಸಿದ್ದರು. ಸಿಮ್ರಾನ್ ಕೂಡ ಮತ್ತೊಬ್ಬ ನಾಯಕಿಯಾಗಿದ್ದರು. 2003 ರಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.

ಚಿತ್ರರಂಗವನ್ನು ಕಾಡಿದ ಆ ಘೋರ ಕಾಕತಾಳೀಯ!

‘ಸೀತಯ್ಯ’ ಸಿನಿಮಾ ಬಿಡುಗಡೆಯಾಗಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ವಿಧಿಯ ಆಟ ಬೇರೆಯದೇ ಆಗಿತ್ತು. ಸಿನಿಮಾ ಬಂದ ಕೇವಲ ಒಂದು ವರ್ಷದೊಳಗೆ, ಅಂದರೆ 2004 ರಲ್ಲಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಅಂತ್ಯ ಕಂಡರು.

ಸೌಂದರ್ಯ ಜೊತೆ ನಟಿಸಿದ ನಂದಮೂರಿ ಹರಿಕೃಷ್ಣ ಅವರಿಗೂ ವಿಧಿ ರಸ್ತೆ ಅಪಘಾತದ ರೂಪದಲ್ಲಿ ಕಂಟಕ ತಂದಿಟ್ಟಿತು. ಡಿಸೆಂಬರ್ 7, 2018 ರಂದು ಹೈದರಾಬಾದ್‌ನಿಂದ ನೆಲ್ಲೂರು ಜಿಲ್ಲೆಯ ಕವಲಿಯಲ್ಲಿ ನಡೆಯುತ್ತಿದ್ದ ಅಭಿಮಾನಿಯೊಬ್ಬರ ಮದುವೆಗೆ ಹೋಗುತ್ತಿದ್ದಾಗ ನಲ್ಗೊಂಡ ಜಿಲ್ಲೆಯಲ್ಲಿ ಹರಿಕೃಷ್ಣ ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಯಿತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಒಂದೇ ಸೂಪರ್ ಹಿಟ್ ಸಿನಿಮಾದ ನಾಯಕ ಮತ್ತು ನಾಯಕಿ ಇಬ್ಬರೂ ವಿಭಿನ್ನ ಭೀಕರ ಅಪಘಾತಗಳಲ್ಲಿ ಸಾವನ್ನಪ್ಪಿದ್ದು ಇಂದಿಗೂ ಚಿತ್ರರಂಗವನ್ನು ನಡುಗಿಸುವ ಕಾಕತಾಳೀಯವಾಗಿದೆ.

ಸೌಂದರ್ಯ ಸಾವಿನ ಬೆನ್ನಲ್ಲೇ ತೆರೆಕಂಡಿದ್ದ ಕನ್ನಡದ ‘ಆಪ್ತಮಿತ್ರ’

ಕನ್ನಡದ ಹೆಣ್ಣುಮಗಳಾದ ಸೌಂದರ್ಯ ಅವರಿಗೆ ಸ್ಯಾಂಡಲ್‌ವುಡ್‌ನೊಂದಿಗಿನ ನಂಟು ಕೊನೆಯವರೆಗೂ ಹಸಿರಾಗಿತ್ತು. ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗುವ ಮುನ್ನ ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ‘ಆಪ್ತಮಿತ್ರ’ ಚಿತ್ರದಲ್ಲಿ ನಟಿಸಿದ್ದರು. ದುರಂತವೆಂದರೆ, ಸೌಂದರ್ಯ ಅವರು ಬದುಕಿದ್ದಾಗ ‘ಆಪ್ತಮಿತ್ರ’ ಸಿನಿಮಾ ತೆರೆಕಂಡಿರಲಿಲ್ಲ. ಅವರ ಸಾವಿನ ನಂತರ ಬಿಡುಗಡೆಯಾದ ಈ ಸಿನಿಮಾ ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ದಾಖಲೆಯ ಯಶಸ್ಸು ಸಾಧಿಸಿತು. ಚಿತ್ರದಲ್ಲಿನ ಸೌಂದರ್ಯ ಅವರ ‘ನಾಗವಲ್ಲಿ’ ಪಾತ್ರ ಇಂದಿಗೂ ಕನ್ನಡಿಗರ ಮನಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಆ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿಯೂ ಒಲಿದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಕಲ್ಕಿ 2898 ಎಡಿ’ಯಲ್ಲಿ ದೀಪಿಕಾ ಪಡುಕೋಣೆ ಬದಲಿಗೆ ಆಲಿಯಾ? – Kannada News | Alia Bhatt joined Kalki 2898 AD Part 2 movie

ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಕಳೆದ ತಿಂಗಳು ಈ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಇನ್ನೂ ಕೆಲವರು ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಆದರೆ ಚಿತ್ರತಂಡಕ್ಕೆ ಸಮಸ್ಯೆ ಒಂದು ಎದುರಾಗಿದೆ. ಮೊದಲ ಭಾಗದಲ್ಲಿ ಬಹಳ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದೀಪಿಕಾ ಪಡುಕೋಣೆ, ಎರಡನೇ ಭಾಗದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಅವರ ಪಾತ್ರಕ್ಕೆ ಪ್ರತ್ಯೇಕ ನಟಿಯ ಹುಡುಕಾಟದಲ್ಲಿ ಚಿತ್ರತಂಡ ಇದೆ. ಸುದ್ದಿಗಳ ಪ್ರಕಾರ ಈಗಾಗಲೇ ದೀಪಿಕಾರ ಪಾತ್ರಕ್ಕೆ ಬದಲಿ ವ್ಯವಸ್ಥೆಯನ್ನು ಚಿತ್ರತಂಡ ಮಾಡಿಕೊಂಡಿದೆ.

ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅವರು ಇದೀಗ ‘ಕಲ್ಕಿ 2898 ಎಡಿ’ ಸಿನಿಮಾ ತಂಡ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರು ದೀಪಿಕಾ ಪಡುಕೋಣೆ ನಟಿಸಿದ್ದ ಪಾತ್ರದಲ್ಲಿ ನಟಿಸಲಿದ್ದಾರೆಯೇ ಅಥವಾ ಬೇರೆ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ಖಾತ್ರಿ ಇಲ್ಲ. ಆದರೆ ಆಲಿಯಾ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿ ಇರುವುದು ಖಾತ್ರಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೆಲ ದಿನಗಳ ಹಿಂದೆ ಹರಿದಾಡಿದ್ದ ಸುದ್ದಿಯ ಪ್ರಕಾರ, ದೀಪಿಕಾ ಪಡುಕೋಣೆ, ಮೊದಲ ಭಾಗದಲ್ಲಿ ನಿರ್ವಹಿಸಿದ್ದ ಪಾತ್ರವನ್ನು ಎರಡನೇ ಭಾಗದಲ್ಲಿ ಸಾಯಿ ಪಲ್ಲವಿ ನಿರ್ವಹಿಸಲಿದ್ದಾರೆ ಎನ್ನಲಾಗಿತ್ತು. ಚಿತ್ರತಂಡ ಈಗಾಗಲೇ ಸಾಯಿ ಪಲ್ಲವಿ ಜೊತೆಗೆ ಮಾತುಕತೆ ಆಡಿದ್ದು, ಸಾಯಿ ಪಲ್ಲವಿ ಸಹ ಒಪ್ಪಿಗೆ ಸೂಚಿಸಿ ಡೇಟ್ಸ್ ನೀಡಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಆಲಿಯಾ ಭಟ್ ಸಹ ಚಿತ್ರತಂಡ ಸೇರಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಹಾಲಿವುಡ್ ಖ್ಯಾತ ನಟಿಗೆ ಪ್ರಭಾಸ್ ಸಿನಿಮಾ ಬಲು ಇಷ್ಟವಂತೆ

ಅಂದಹಾಗೆ ದೀಪಿಕಾ ಅವರ ಎಂಟು ಗಂಟೆ ಮಾತ್ರ ಕೆಲಸ ಮಾಡುವ ಕಟ್ಟುನಿಟ್ಟಿನ ನಿಯಮದಿಂದಾಗಿ ದೀಪಿಕಾರನ್ನು ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಿಂದ ಕೈಬಿಡಲಾಗಿದೆ. ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಿಂದಲೂ ಇದೇ ಕಾರಣಕ್ಕೆ ಅವರು ಹೊರ ನಡೆದಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದು, ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಹಲವಾರು ತಾರೆಯರಿದ್ದಾರೆ. ಕಮಲ್ ಹಾಸನ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಸಹ ಇದ್ದಾರೆ. ಸಿನಿಮಾನಲ್ಲಿ ದಿಶಾ ಪಟಾನಿ ನಾಯಕಿ. ಈಗ ಆಲಿಯಾ ಮತ್ತು ಸಾಯಿ ಪಲ್ಲವಿ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೀರ್ತಿ ಸುರೇಶ್ ಅವರು ಪಾತ್ರವೊಂದಕ್ಕೆ ಧ್ವನಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Astrological Beliefs: ರಾತ್ರಿ ಕೂದಲನ್ನು ಕೆದರಿಕೊಂಡು ಮಲಗಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು? – Kannada News | Hair Care in Sanatana Dharma: Astrological Beliefs and Scientific Reasons Explored

ರಾತ್ರಿ ಕೂದಲನ್ನು ಬಿಚ್ಚಿ ಮಲಗಬಾರದು ಏಕೆImage Credit source: Pinterest

ಸನಾತನ ಸಂಪ್ರದಾಯ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ, ಕೂದಲು ಕೇವಲ ಬಾಹ್ಯ ಸೌಂದರ್ಯದ ಸಂಕೇತವಲ್ಲ. ಅದು ವ್ಯಕ್ತಿಯ ಆಂತರಿಕ ಶಕ್ತಿ ಮತ್ತು ಶಕ್ತಿಯುತ ವ್ಯಕ್ತಿತ್ವದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಹಿರಿಯರು ಕೂದಲಿನ ಆರೈಕೆ, ಕತ್ತರಿಸುವುದು ಮತ್ತು ತೊಳೆಯುವುದಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ನಿಯಮಗಳನ್ನು ರೂಪಿಸಿದ್ದಾರೆ. ಈ ನಂಬಿಕೆಗಳಿಗೆ ಸಾರ್ವತ್ರಿಕ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಇಂದಿಗೂ ಅನೇಕ ಜನರು ಇವುಗಳನ್ನು ಶ್ರದ್ಧೆ ಮತ್ತು ನಂಬಿಕೆಯಿಂದ ಪಾಲಿಸುತ್ತಿದ್ದಾರೆ. ಇದರ ಹಿಂದಿರುವ ಧಾರ್ಮಿಕ ಕಾರಣಗಳು ಮತ್ತು ಪ್ರಾಯೋಗಿಕ ವೈಜ್ಞಾನಿಕ ದೃಷ್ಟಿಕೋನವನ್ನು ಇಲ್ಲಿ ತಿಳಿಯೋಣ.

ರಾತ್ರಿ ಕೂದಲನ್ನು ಬಿಚ್ಚಿ ಮಲಗಬಾರದು ಏಕೆ?

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಪುರುಷರು ಅಥವಾ ಮಹಿಳೆಯರು ರಾತ್ರಿಯ ಸಮಯದಲ್ಲಿ ಕೂದಲನ್ನು ಸಂಪೂರ್ಣವಾಗಿ ಕೆದರಿಕೊಂಡು ಅಥವಾ ಬಿಚ್ಚಿಟ್ಟುಕೊಂಡು ಮಲಗಬಾರದು. ಬಿಚ್ಚಿದ ಕೂದಲು ನಕಾರಾತ್ಮಕ ಶಕ್ತಿಯನ್ನು ಸುಲಭವಾಗಿ ಆಕರ್ಷಿಸುತ್ತದೆ ಮತ್ತು ಇದರಿಂದ ಮನೆಯಲ್ಲಿ ಚಡಪಡಿಕೆ ಹಾಗೂ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಕೆಲವು ಕೌಟುಂಬಿಕ ಸಂಪ್ರದಾಯಗಳ ಪ್ರಕಾರ, ರಾತ್ರಿ ಕೂದಲು ಅಸ್ತವ್ಯಸ್ತವಾಗಿದ್ದರೆ ಮನೆಯ ವಾತಾವರಣದಲ್ಲಿ ಅಸ್ಥಿರತೆ ಉಂಟಾಗಿ, ಅನಗತ್ಯ ಕಲಹಗಳು ಸೃಷ್ಟಿಯಾಗುತ್ತವೆ ಎನ್ನಲಾಗುತ್ತದೆ. ಅದಕ್ಕಾಗಿಯೇ, ಮಲಗುವ ಮುನ್ನ ಕೂದಲನ್ನು ಹಗುರವಾದ ಗಂಟು ಅಥವಾ ಜಡೆಯಲ್ಲಿ ಕಟ್ಟಿಕೊಳ್ಳಲು ಹಿರಿಯರು ಸಲಹೆ ನೀಡುತ್ತಾರೆ.

ವೈಜ್ಞಾನಿಕ ಆಯಾಮ:

ಇದರ ಪ್ರಾಯೋಗಿಕ ಅಥವಾ ವೈಜ್ಞಾನಿಕ ಆಯಾಮವನ್ನು ನೋಡುವುದಾದರೆ, ರಾತ್ರಿ ಕೂದಲನ್ನು ಬಿಟ್ಟು ಮಲಗುವುದರಿಂದ ಹಾಸಿಗೆಗೆ ಕೂದಲು ಸಿಕ್ಕಿಹಾಕಿಕೊಂಡು ಹೆಚ್ಚು ತುಂಡಾಗುತ್ತದೆ (hair breakage). ಅಲ್ಲದೆ, ಕೂದಲಿಗೆ ಹಚ್ಚಿದ ಎಣ್ಣೆ ಅಥವಾ ನೈಸರ್ಗಿಕ ಜಿಡ್ಡು ಮುಖದ ಚರ್ಮಕ್ಕೆ ತಗುಲಿ ಮೊಡವೆಗಳು (acne) ಉಂಟಾಗುವ ಸಾಧ್ಯತೆಯೂ ಇರುತ್ತದೆ. ಹಗುರವಾಗಿ ಕಟ್ಟಿ ಮಲಗುವುದರಿಂದ ಕೂದಲಿನ ಆರೋಗ್ಯವೂ ವೃದ್ಧಿಸುತ್ತದೆ.

ವಾರದ ಕೆಲವು ದಿನಗಳಲ್ಲಿ ತಲೆ ತೊಳೆಯಬಾರದೇ?

ಜ್ಯೋತಿಷ್ಯ ಸಂಪ್ರದಾಯದ ಪ್ರಕಾರ, ವಾರದ ದಿನಗಳು ನಿರ್ದಿಷ್ಟ ಗ್ರಹಗಳ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಉದಾಹರಣೆಗೆ, ಗುರುವಾರವನ್ನು ದೇವಗುರು ಬೃಹಸ್ಪತಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ತಲೆ ತೊಳೆಯುವುದರಿಂದ ಗುರುವಿನ ಬಲ ದುರ್ಬಲಗೊಂಡು, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತವೆ ಎಂಬ ನಂಬಿಕೆಯಿದೆ. ಅದೇ ರೀತಿ ಮಂಗಳ ಮತ್ತು ಶನಿವಾರಗಳು ಕ್ರಮವಾಗಿ ಮಂಗಳ ಹಾಗೂ ಶನಿ ಗ್ರಹಗಳಿಗೆ ಸಂಬಂಧಿಸಿದ್ದಾಗಿದ್ದು, ಈ ದಿನಗಳಲ್ಲಿ ಕೂದಲು-ಉಗುರು ಕತ್ತರಿಸುವುದು ಅಥವಾ ತಲೆ ತೊಳೆಯುವುದನ್ನು ನಿಷೇಧಿಸಲಾಗಿದೆ. ಶುಕ್ರವಾರದ ವಿಷಯಕ್ಕೆ ಬಂದರೆ, ಕೆಲವು ಭಾಗಗಳಲ್ಲಿ ಲಕ್ಷ್ಮಿ ದೇವಿಯ ದಿನವೆಂದು ತಲೆ ತೊಳೆದರೆ, ಇನ್ನು ಕೆಲವೆಡೆ ತೊಳೆಯಬಾರದು ಎಂಬ ವಿಭಿನ್ನ ನಂಬಿಕೆಗಳಿವೆ.

ಆದರೆ, ಇದರ ಹಿಂದೆ ನೈರ್ಮಲ್ಯದ ಇತಿಹಾಸವೂ ಅಡಗಿದೆ. ಹಳೆಯ ಕಾಲದಲ್ಲಿ ಪ್ರತಿದಿನ ಇಡೀ ತಲೆಯನ್ನು ತೊಳೆಯಲು ಸಾಕಷ್ಟು ನೀರು ಮತ್ತು ಸಮಯ ಲಭ್ಯವಿರುತ್ತಿರಲಿಲ್ಲ. ಹಾಗಾಗಿ, ವಾರದಲ್ಲಿ ಎರಡು ಅಥವಾ ಮೂರು ದಿನಗಳನ್ನಷ್ಟೇ ತಲೆ ತೊಳೆಯಲು ನಿಗದಿಪಡಿಸಿ, ಅದಕ್ಕೆ ಧಾರ್ಮಿಕ ನಿಯಮಗಳ ಚೌಕಟ್ಟು ನೀಡಲಾಯಿತು. ವೈಜ್ಞಾನಿಕವಾಗಿಯೂ ಪ್ರತಿದಿನ ತಲೆ ತೊಳೆಯುವುದರಿಂದ ಕೂದಲಿನಲ್ಲಿರುವ ನೈಸರ್ಗಿಕ ತೈಲಾಂಶ (sebum) ನಾಶವಾಗಿ ಕೂದಲು ಒಣಗುತ್ತದೆ (dry hair). ಆದ್ದರಿಂದ ವಾರಕ್ಕೆ 2-3 ಬಾರಿ ತಲೆ ತೊಳೆಯುವುದು ಕೂದಲಿನ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಉದುರಿದ ಕೂದಲನ್ನು ಎಲ್ಲೆಂದರಲ್ಲಿ ಎಸೆಯುವುದರ ಅಪಾಯ:

ಮನೆ ಸ್ವಚ್ಛಗೊಳಿಸುವಾಗ ಅಥವಾ ತಲೆ ಬಾಚುವಾಗ ಉದುರುವ ಕೂದಲಿನ ವಿಲೇವಾರಿಗೆ ಜ್ಯೋತಿಷ್ಯದಲ್ಲಿ ಕಠಿಣ ನಿಯಮಗಳಿವೆ. ಉದುರಿದ ಕೂದಲನ್ನು ಮನೆಯ ಸುತ್ತಮುತ್ತ ಅಥವಾ ತೆರೆದ ಕಸದ ಬುಟ್ಟಿಯಲ್ಲಿ ಹಾಗೇ ಬಿಡುವುದರಿಂದ ‘ರಾಹು ದೋಷ’ ಉಂಟಾಗುತ್ತದೆ ಎಂಬ ಭಯವಿದೆ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸಿ, ಅನಗತ್ಯ ವಿವಾದಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಉದುರಿದ ಕೂದಲನ್ನು ಒಂದೆಡೆ ಸಂಗ್ರಹಿಸಿ, ಸುರಕ್ಷಿತವಾಗಿ ಹೊರಗೆ ಹಾಕಲು ಸೂಚಿಸಲಾಗುತ್ತದೆ.

ವೈಜ್ಞಾನಿಕ ದೃಷ್ಟಿಕೋನ:

ವೈಜ್ಞಾನಿಕವಾಗಿ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ನೋಡುವುದಾದರೆ, ಕೂದಲು ಹಗುರವಾಗಿರುವುದರಿಂದ ಗಾಳಿಗೆ ಹಾರಿ ಅಡುಗೆ ಮನೆ ಸೇರಿದರೆ ಆಹಾರ ಪದಾರ್ಥಗಳು ಕಲುಷಿತಗೊಳ್ಳುತ್ತವೆ. ಇದು ನೈರ್ಮಲ್ಯಕ್ಕೆ ದೊಡ್ಡ ಧಕ್ಕೆ ತರುತ್ತದೆ. ಅಷ್ಟೇ ಅಲ್ಲದೆ, ಕೂದಲು ಎಲ್ಲೆಂದರಲ್ಲಿ ಬಿದ್ದಾಗ ಸಿಂಕ್ ಅಥವಾ ಬಾತ್‌ರೂಮ್‌ಗಳ ಪೈಪ್‌ಲೈನ್‌ಗಳಲ್ಲಿ ಸಿಲುಕಿಕೊಂಡು ನೀರು ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಪ್ರಾಯೋಗಿಕ ತೊಂದರೆಗಳನ್ನು ತಪ್ಪಿಸಲು ಹಿರಿಯರು ಈ ನಿಯಮವನ್ನು ತಂದಿದ್ದಾರೆ.

ಕೂದಲಿಗೆ ಸಂಬಂಧಿಸಿದ ಈ ಎಲ್ಲಾ ನಿಯಮಗಳು ಸಾಂಪ್ರದಾಯಿಕ ನಂಬಿಕೆಗಳನ್ನು ಆಧರಿಸಿದ್ದರೂ, ಅವುಗಳ ಹಿಂದೆ ಆರೋಗ್ಯ ಮತ್ತು ಶಿಸ್ತಿನ ರಹಸ್ಯಗಳಿವೆ. ನೀವು ಈ ನಿಯಮಗಳನ್ನು ಪಾಲಿಸುವುದಾದರೆ ಸಕಾರಾತ್ಮಕ ಯೋಚನೆಯೊಂದಿಗೆ ಅಳವಡಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಗಲ ಮೇಲೆ ಹೊತ್ತು ಮೆರೆಸಿದ್ದಕ್ಕೆ ಒಳ್ಳೆಯ ಬಹುಮಾನ ಕೊಟ್ರಿ, ರಾಹುಲ್ ಗಾಂಧಿ ವಿರುದ್ಧ ಡಿಎಂಕೆ ಕಟು ಟೀಕೆ – Kannada News | DMK Slams Rahul Gandhi: ‘Big Joke’ After Congress Betrayal in Tamil Nadu Politics

ಚೆನ್ನೈ, ಜೂನ್ 16: ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಗೆದ್ದ ನಂತರ ಕಾಂಗ್ರೆಸ್ ಪಕ್ಷವು ಡಿಎಂಕೆಯನ್ನು ಬಿಟ್ಟು ಟಿವಿಕೆ ಸರ್ಕಾರವನ್ನು ಸೇರಿರುವುದರಿಂದ ಡಿಎಂಕೆ ಪಕ್ಷವು ರಾಹುಲ್ ಗಾಂಧಿ(Rahul Gandhi) ಅವರ ರಾಜಕೀಯ ಅಪ್ರಬದ್ಧತೆಯನ್ನು ಕಟುವಾಗಿ ಟೀಕಿಸಿದೆ. ತಮಿಳುನಾಡಿನ ವಿಪಕ್ಷವಾಗಿರುವ ಡಿಎಂಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ. ಡಿಎಂಕೆಯ ಐಟಿ ವಿಭಾಗವು ರಾಹುಲ್ ಗಾಂಧಿಯವರನ್ನು ಬಿಗ್ ಜೋಕ್ ಎಂದು ಕರೆದಿದೆ.

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಮೈತ್ರಿಕೂಟದ ಭಾಗವಾಗಿ ಐದು ಸ್ಥಾನಗಳನ್ನು ಗೆದ್ದಿತ್ತು. ಆದರೆ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ತನ್ನ ಹಳೆಯ ಮಿತ್ರನ ಕೈಬಿಟ್ಟು, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದೆ. ಕಾಂಗ್ರೆಸ್​ನ ಈ ರಾಜಕೀಯ ಬದಲಾವಣೆಯಿಂದಾಗಿ ಡಿಎಂಕೆ ತೀವ್ರ ಅಸಮಾಧಾನಗೊಂಡಿದೆ.

ನಿಮ್ಮನ್ನು ಹೆಗಲ ಮೇಲೆ ಹೊತ್ತು ಮೆರೆಸಿದ್ದಕ್ಕೆ ಒಳ್ಳೆಯ ಬಹುಮಾನವನ್ನೇ ಕೊಟ್ಟಿದ್ದೀರಿ, ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಉಳುವಿಗಾಗಿ ಹೋರಾಡುತ್ತಿದ್ದಾಗ ನಾವು ಅವರನ್ನು ನಮ್ಮ ಹೆಗಲ ಮೇಲೆ ಹೊತ್ತುಕೊಂಡೆವು, ಆದರೆ ಹೊಸ ಲಾಭ ಕಂಡ ತಕ್ಷಣ ನಮಗೆ ಮೋಸ ಮಾಡಿ ಬೇರೆ ಪಕ್ಷಕ್ಕೆ ಜಿಗಿದಿದ್ದಾರೆ ಎಂದು ಟಿಎಂಕೆ ಕಿಡಿ ಕಾರಿದೆ.

ಮತ್ತಷ್ಟು ಓದಿ: ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

ರಾಹುಲ್ ಗಾಂಧಿ ಅವರು ದೇಶಾದ್ಯಂತ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಭಾಷಣ ಮಾಡುತ್ತಾರೆ, ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಆ ಒಗ್ಗಟ್ಟನ್ನು ಅವರೇ ಮುರಿಯುತ್ತಿದ್ದಾರೆ ಎಂದು ‘ಮುರಸೋಲಿ’ ಪತ್ರಿಕೆಯ ಸಂಪಾದಕೀಯದಲ್ಲಿ ಆರೋಪಿಸಲಾಗಿದೆ. ಕೇರಳದಲ್ಲಿ ಎಡಪಕ್ಷಗಳ ವಿರುದ್ಧ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ ವಿರುದ್ಧ ಕಾಂಗ್ರೆಸ್ ನಡೆದುಕೊಂಡ ರೀತಿಯೇ ಇದಕ್ಕೆ ಸಾಕ್ಷಿ ಎಂದಿದೆ.

ಈ ಎಲ್ಲಾ ಆರೋಪಗಳಿಗೆ ಕಾಂಗ್ರೆಸ್ ಇನ್ನು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಪಕ್ಷದ ಆಂತರಿಕ ಮೂಲಗಳ ಪ್ರಕಾರ, ತಮಿಳುನಾಡಿನ ಜನರ ತೀರ್ಪಿಗೆ ಅನುಗುಣವಾಗಿ ತಾವು ನಿರ್ಧಾರ ಕೈಗೊಂಡಿರುವುದಾಗಿ ಹಾಗೂ ಡಿಎಂಕೆ ಅಥವಾ ಇಂಡಿಯಾ ಮೈತ್ರಿಕೂಟವನ್ನು ದುರ್ಬಲಗೊಳಿಸುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಲ್ಲಿ ಮಿತಿ ಮೀರಿದ ಶ್ವಾನಗಳ ದಾಳಿ ಪ್ರಕರಣ: 5 ತಿಂಗಳಲ್ಲಿ 9.7 ಸಾವಿರ ಕೇಸ್​​ – Kannada News | Stray Dog Menace In Karnataka: Over 2.6 Lakh Dog Bite Cases And 30 Rabies Deaths Reported This Year

ಬೆಂಗಳೂರು, ಜೂನ್​​ 16: ರಾಜಧಾನಿ ಬೆಂಗಳೂರಲ್ಲಿ (Bengaluru) ಶ್ವಾನಗಳ ದಾಳಿ ಪ್ರಕರಣಗಳು ಮಿತಿ ಮೀರಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಆತಂಕ ಮೂಡಿಸಿದೆ. ಕಳೆದ 5 ತಿಂಗಳಲ್ಲಿ ಬೆಂಗಳೂರಲ್ಲಿ ಬರೋಬ್ಬರಿ 9,763 ಪ್ರಕರಣಗಳು ಪತ್ತೆಯಾಗಿದ್ದು, ಕೇವಲ 1 ವಾರದಲ್ಲಿ 13,220 ನಾಯಿ ಕಡಿತಗಳು ರಾಜ್ಯದಲ್ಲಿ ವರದಿಯಾಗಿವೆ. ನಾಯಿಗಳ ದಾಳಿಯಿಂದ ಕಳೆದ ವಾರ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ ಬರೊಬ್ಬರಿ 2,66,367 ಜನರಿಗೆ ರಾಜ್ಯದಲ್ಲಿ ನಾಯಿ ಕಚ್ಚಿದ್ದು ಒಟ್ಟು 30 ಜನರು ಮೃತಪಟ್ಟಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರು ಸೇರಿ ರಾಜ್ಯಾದ್ಯಂತ ನಾಯಿಗಳ ಅಟ್ಟಹಾಸ
  • 5 ತಿಂಗಳಲ್ಲಿ ಬೆಂಗಳೂರಲ್ಲಿ 9,763 ನಾಯಿ ಕಡಿತ ಪ್ರಕರಣ
  • ಕೇವಲ 1 ವಾರದಲ್ಲಿ ರಾಜ್ಯದಲ್ಲಿ 13,220 ನಾಯಿ ಕಡಿತ ಕೇಸ್​

ಇದನ್ನೂ ಓದಿ: ಒಂದೇ ತಿಂಗಳಲ್ಲಿ ಸಾವಿರಾರು ಜನರಿಗೆ ನಾಯಿ ಕಡಿತ; ಕಾಫಿನಾಡಿನಲ್ಲಿ ರಸ್ತೆಗಿಳಿಯಲೂ ಭಯಪಡುತ್ತಿರುವ ಜನರು!

ಕಳೆದ 5 ತಿಂಗಳ ಬೆಂಗಳೂರಿನ ಅಂಕಿ-ಅಂಶ

ವಲಯ ಪ್ರಕರಣಗಳು
ಆನೇಕಲ್ 982
ಪೂರ್ವ ವಲಯ 2909
ಉತ್ತರ ವಲಯ 2569
ದಕ್ಷಿಣ ವಲಯ 3303

ಬೆಂಗಳೂರಿನ ಸೌತ್ ಝೋನ್​​ನಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿದ್ದು, ಕಳೆದ 5 ತಿಂಗಳಿನಲ್ಲಿ 3,303 ಪ್ರಕರಣಗಳು ಪತ್ತೆಯಾಗಿವೆ. ಕೆಸಿ ಜನರಲ್ ಆಸ್ಪತ್ರೆ ಸೇರಿದಂತೆ ಅನೇಕ ಕಡೆಗಳಲ್ಲಿ ಡಾಗ್ ಬೈಟ್ ವ್ಯಾಕ್ಸಿನ್​​ಗೆ ಬೇಡಿಕೆ ಹೆಚ್ಚಿದ್ದು, ದಿನಕ್ಕೆ 60-70 ಜನರಿಗೆ ಡಾಗ್ ಬೈಟ್ ವ್ಯಾಕ್ಸಿನ್ ನೀಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಆ್ಯಂಟಿ ರೇಬಿಸ್ ವ್ಯಾಕ್ಸಿನ್​​ನ ಶೇಖರಣೆಗೆ ಸರ್ಕಾರಿ ಆಸ್ಪತ್ರೆಗಳು ಮುಂದಾಗಿವೆ. ನಾಯಿ ಕಚ್ಚಿದರೆ ನಿರ್ಲಕ್ಷ್ಯ ಮಾಡದೆ ಕೂಡಲೇ ವ್ಯಾಕ್ಸಿನ್ ಪಡೆಯಿರಿ ಎಂದು ವೈದ್ಯರು ಕೂಡ ಸಲಹೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rate: ಚಿನ್ನದ ಬೆಲೆಯಲ್ಲಿ ಇಳಿಕೆ; ಅಪರಂಜಿ ಚಿನ್ನದ ಬೆಲೆ 15,137 ರೂ – Kannada News | Gold Price Today on 16th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 16: ಸತತ ಮೂರ್ನಾಲ್ಕು ದಿನಗಳ ಏರಿಕೆ ಬಳಿಕ ಚಿನ್ನದ ಬೆಲೆಯಲ್ಲಿ (Gold Rates) ಅಲ್ಪ ಇಳಿಕೆ ಆಗಿದೆ. ಮೂರು ದಿನಗಳಲ್ಲಿ 500ಕ್ಕೂ ಹೆಚ್ಚು ರುಪಾಯಿಗಳಷ್ಟು ಹೆಚ್ಚಿದ್ದ ಬಂಗಾರದ ದರ ಇವತ್ತು ಗ್ರಾಮ್​ಗೆ 15 ರೂ ತಗ್ಗಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ ಭರ್ಜರಿ ಏರಿಕೆಯಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆಯಲ್ಲಿ ಇವತ್ತು ವ್ಯತ್ಯಯ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,370 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 16ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,137 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,875 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,353 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,137 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,875 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,875 ರೂ
  • ಚೆನ್ನೈ: 14,060 ರೂ
  • ಮುಂಬೈ: 13,875 ರೂ
  • ದೆಹಲಿ: 13,890 ರೂ
  • ಕೋಲ್ಕತಾ: 13,875 ರೂ
  • ಕೇರಳ: 13,875 ರೂ
  • ಅಹ್ಮದಾಬಾದ್: 13,880 ರೂ
  • ಜೈಪುರ್: 13,890 ರೂ
  • ಲಕ್ನೋ: 13,890 ರೂ
  • ಭುವನೇಶ್ವರ್: 13,875 ರೂ

ಇದನ್ನೂ ಓದಿ: ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಇಂದೇ ಕೊನೆಯ ದಿನ; ಡೆಡ್​ಲೈನ್ ಮಿಸ್ ಆದವರಿಗೆ ಏನು ದಂಡ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 577 ರಿಂಗಿಟ್ (13,433 ರುಪಾಯಿ)
  • ದುಬೈ: 521.25 ಡಿರಾಮ್ (13,423 ರುಪಾಯಿ)
  • ಅಮೆರಿಕ: 143.50 ಡಾಲರ್ (13,577 ರುಪಾಯಿ)
  • ಸಿಂಗಾಪುರ: 189.50 ಸಿಂಗಾಪುರ್ ಡಾಲರ್ (13,972 ರುಪಾಯಿ)
  • ಕತಾರ್: 526 ಕತಾರಿ ರಿಯಾಲ್ (13,648 ರೂ)
  • ಸೌದಿ ಅರೇಬಿಯಾ: 541 ಸೌದಿ ರಿಯಾಲ್ (13,637 ರುಪಾಯಿ)
  • ಓಮನ್: 55.30 ಒಮಾನಿ ರಿಯಾಲ್ (13,587 ರುಪಾಯಿ)
  • ಕುವೇತ್: 44.20 ಕುವೇತಿ ದಿನಾರ್ (13,621 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 275 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 275 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 275 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link