Chikkaballapur: ಕುಡಿದ ಅಮಲಿನಲ್ಲಿ ಕದಿಯಲು ಹೋದ ಮನೆಯಲ್ಲೇ ಬೆಚ್ಚಗೆ ಮಲಗಿದ ಕಳ್ಳ! – Kannada News | Drunk Thief Naps in Stolen House: Chikkaballapur’s Bizarre Burglary

ಚಿಕ್ಕಬಳ್ಳಾಪುರ, ಫೆಬ್ರವರಿ 09: ಕಳ್ಳತನಕ್ಕೆ ಹೋಗೋ ಖದೀಮರು ಪಕ್ಕಾ ಪ್ಲ್ಯಾನ್​​ ಮಾಡಿಕೊಂಡೇ ಅಖಾಡಕ್ಕಿಳಿಯುತ್ತಾರೆ. ಮನೆಯಲ್ಲಿ ಯಾರಿದ್ದಾರಾ? ಇಲ್ಲವಾ? ಎನ್ನುವ ಮಾಹಿತಿಗಳ ಸಂಗ್ರಹದ ಜೊತೆ ಯಾವ ಸಮಯ ಕಳ್ಳತನಕ್ಕೆ ಸೂಕ್ತ ಎಂಬಿತ್ಯಾದಿ ತಮ್ಮದೇ ಲೆಕ್ಕಾಚಾರಗಳನ್ನು ಹಾಕಿಕೊಂಡು ರಾಬರಿ ನಡೆಸುವ ಅದೆಷ್ಟೋ ಪ್ರಕರಣಗಳ ಬಗ್ಗೆ ನಾವು ಕೇಳಿದ್ದೇವೆ. ಒಂದೇ ಒಂದು ಸಾಕ್ಷಿಯೂ ಪೊಲೀಸರಿಗೆ ಸಿಗದಂತೆ ಎಸ್ಕೇಪ್​​ ಆಗುವ ಘಟನೆಗಳ ಬಗ್ಗೆಯೂ ತಿಳಿದಿದ್ದೇವೆ. ಆದ್ರೆ ಇಲ್ಲೊಬ್ಬ ಖದೀಮ ಎಣ್ಣೆ ನಶೆಯಲ್ಲಿ ಕಳ್ಳತನಕ್ಕೆಂದು ಮನೆಗೆ ನುಗ್ಗಿದ್ದ ವೇಳೆ ನಿದ್ದೆ ಬಂದ ಕಾರಣ ಅಲ್ಲೇ ಬೆಚ್ಚಗೆ ಮಲಗಿ ತಗಲಾಕಿಕೊಂಡಿದ್ದಾನೆ.

ಹೌದು, ಇಂತಹದ್ದೊಂದು ಘಟನೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಸಾಕ್ಷಿಯಾಗಿದೆ. ಇಲ್ಲಿನ ಹಳೇ RTO ಕಚೇರಿ ಬಳಿಯ ಪ್ರೇಮನಾಥ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಲೆಂದು ಇಬ್ಬರು ಖದೀಮರು ತೆರಳಿದ್ದರು. ಮನೆಯ ಮೇಲಿನ ರೇಕ್ ಕತ್ತರಿಸಿ ಒಳಗೆ ಕೂಡ ನುಗ್ಗಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ನಗದು ದೋಚಿ ಓರ್ವ ಕಳ್ಳ ಪರಾರಿಯಾಗಿದ್ದರೆ, ಮತ್ತೊಬ್ಬ ಅದೇ ಮನೆಯಲ್ಲಿ ನಿದ್ದೆಗೆ ಜಾರಿದ್ದಾನೆ. ಇತ್ತ ಮನೆಗೆ ಕಳ್ಳರು ನುಗ್ಗಿರುವ ಅನುಮಾನದಿಂದ ಮಾಲೀಕ ಪ್ರೇಮನಾಥನಿಗೆ ಕರೆ ಮಾಡಿ ನೆರೆ ಮನೆಯವರು ವಿಷಯ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಹೈದರಾಬಾದ್ ಗೆ ತೆರಳಿದ್ದ ಅವರು, ರಾತ್ರೋ ರಾತ್ರಿ ಮನೆಗೆ ಹಿಂದಿರುಗಿದ್ದಾರೆ. ಇನ್ನು ಮನೆಗೆ ಪ್ರೇಮನಾಥ ಎಂಟ್ರಿಯಾಗ್ತಿದ್ದಂತೆ ಅವರಿಗೆ ಆಶ್ಚರ್ಯವಾಗಿದೆ. ಕಳ್ಳತನಕ್ಕೆಂದು ಬಂದಾತ ಮನೆಯಲ್ಲೇ ಮಲಗಿದ್ದನ್ನು ನೋಡಿದ ಅವರು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ವ್ಯಕ್ತಿ ಗೌರಿಬಿದನೂರಿನ ನದಿದಡ ವಾರ್ಡ್​ನ ದೇವರಾಜು ಎಂಬುದು ಗೊತ್ತಾಗಿದ್ದು, ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ದರೋಡೆ; ಫ್ಲಿಪ್‌ಕಾರ್ಟ್​​ನ ಲಕ್ಷಾಂತರ ರೂ ಮೌಲ್ಯದ ವಸ್ತುಗಳ ಕಳ್ಳತನ

ಜ್ಯುವೆಲ್ಲರಿ ದರೋಡೆ ನಡೆಸಿದ್ದ ಆರೋಪಿಗಳ ಬಂಧನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಮ್​ದೇವ್ ಜ್ಯುವೆಲ್ಲರಿಗೆ ನುಗ್ಗಿ ಗನ್​​ ತೋರಿಸಿ ದರೋಡೆ ನಡೆಸಿದ್ದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅನೂಪ್, ರವಿ, ಅಂಕಿತ್, ಅರುಣ್ ಸೇರಿದಂತೆ ಐವರು ಖಾಕಿ ಬಲೆಗೆ ಬಿದ್ದಿದ್ದು, ಬಂಧಿತರು ರಾಜಸ್ಥಾನ ಮೂಲದವರು ಎಂಬುದು ಗೊತ್ತಾಗಿದೆ. ಈ ಪೈಕಿ ಆರೋಪಿ ಅಂಕಿತ್​​ ಮಾದನಾಯಕನಹಳ್ಳಿ ವಾಸವಿದ್ದು, ಕಚೋರಿ ಮಾರಿ ಜೀವನ ಸಾಗಿಸುತ್ತಿದ್ದ. ಈ ರೀತಿ ಎಷ್ಟು ದಿನ ಜೀವನ ಸಾಗಿಸೋದು ಎಂದು ನಿರ್ಧರಿಸಿ ದರೋಡೆ ಪ್ಲಾನ್ ಮಾಡಿದ್ದ. ಈ ವೇಳೆ ರಾಜಸ್ಥಾನದಲ್ಲಿ ರವಿ ಎಂಬಾತನ ಪರಿಚಯವಾಗಿದ್ದು, ಆತನ ಬಳಿ ಇದ್ದ ಪಿಸ್ತೂಲೇ ಇವರ ಬಂಡವಾಳವಾಗಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:14 pm, Mon, 9 February 26

Source link

Leave a Reply

Your email address will not be published. Required fields are marked *