ನವದೆಹಲಿ, ಜುಲೈ 23: ನೀಟ್(NEET) ಪರೀಕ್ಷೆಯಲ್ಲಿನ ಅಕ್ರಮದ ವಿರುದ್ಧ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ನವದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಜಂತರ್ ಮಂತರ್, ಕನ್ನಾಟ್ ಪ್ಲೇಸ್ (CP) ಮತ್ತು ಟಾಲ್ಸ್ಟಾಯ್ ಮಾರ್ಗದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರಿ ಘರ್ಷಣೆ ನಡೆದಿದ್ದು, ಮೂವರು ಸಹಾಯಕ ಪೊಲೀಸ್ ಕಮಿಷನರ್ಗಳು (ACP) ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾತ್ರಿ 8:30 ರ ಸುಮಾರಿಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಹಾಗೂ ದೆಹಲಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು. ಪ್ರತಿಭಟನಾಕಾರರ ನಡುವೆ ನುಸುಳಿದ ಕೆಲವು ದುಷ್ಕರ್ಮಿಗಳು ಪೊಲೀಸರ ಮೇಲೆ ಏಕಾಏಕಿ ಕಲ್ಲುಗಳು ಹಾಗೂ ಗಾಜಿನ ಬಾಟಲಿಗಳಿಂದ ದಾಳಿ ನಡೆಸಲು ಪ್ರಾರಂಭಿಸಿದರು. ಈ ದಾಳಿಯಲ್ಲಿ ಕನ್ನಾಟ್ ಪ್ಲೇಸ್ ಎಸಿಪಿ ವಿವೇಕ್ ಭಗತ್ ಸೇರಿದಂತೆ ಇತರ ಅಧಿಕಾರಿಗಳು ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಆರ್ಎಂಎಲ್ (RML) ಆಸ್ಪತ್ರೆಗೆ ದಾಖಲಿಸಲಾಗಿದೆ.
ಕತ್ತಿ-ಖುಕ್ರಿ ಬಳಕೆಯ ಆರೋಪ: ಕೆಲವು ದುಷ್ಕರ್ಮಿಗಳು ಮಾರಕಾಸ್ತ್ರಗಳಾದ ಕತ್ತಿ ಮತ್ತು ಖುಕ್ರಿಗಳನ್ನು ಝಳಪಿಸುತ್ತಾ ಭದ್ರತಾ ಪಡೆಗಳ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ವರದಿಗಳು ತಿಳಿಸಿವೆ. ಪೊಲೀಸರು ಹಾಗೂ ಆರ್ಎಎಫ್ ಸಿಬ್ಬಂದಿ ರಕ್ಷಣೆಗಾಗಿ ಮತ್ತು ಗುಂಪನ್ನು ಚದುರಿಸಲು ಭಾರಿ ಲಾಠಿಚಾರ್ಜ್ ನಡೆಸಿದರು. ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಪ್ರತಿಭಟನಾಕಾರರನ್ನು ಕನ್ನಾಟ್ ಪ್ಲೇಸ್ ಮತ್ತು ಟಾಲ್ಸ್ಟಾಯ್ ಮಾರ್ಗದಿಂದ ಹಿಂದೆ ಸರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಪ್ರಯೋಗಿಸಿದರು.
ಮತ್ತಷ್ಟು ಓದಿ: ನೀಟ್ ಪರೀಕ್ಷಾ ಅಕ್ರಮದ ತೀವ್ರ ಪ್ರತಿಭಟನೆ ನಡುವೆ ವೈರಲ್ ಆಯ್ತು ಅರವಿಂದ್ ಅವರ ಎರಡು ವರ್ಷಗಳ ಹಳೆಯ ಭವಿಷ್ಯವಾಣಿ
ಇಂಟರ್ನೆಟ್ ಬಂದ್ ಮಧ್ಯೆಯೂ ಕೋಲಾಹಲ
ಹಿಂಸಾಚಾರ ನಿಯಂತ್ರಿಸಲು ನವದೆಹಲಿ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದಾಗ್ಯೂ, ಜಂತರ್ ಮಂತರ್, ಜನಪಥ್ ಹಾಗೂ ಟಾಲ್ಸ್ಟಾಯ್ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯ ಎಸ್ಎಂಎಸ್ ಮತ್ತು ಬಲ್ಕ್ ಮೆಸೇಜಿಂಗ್ ವಿನಿಮಯ ನಡೆದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇಂಟರ್ನೆಟ್ ಇಲ್ಲದಿದ್ದರೂ ನೆಟ್ವರ್ಕ್ನಲ್ಲಿ ಎಸ್ಎಂಎಸ್ ವಿನಿಮಯ ಸಾರ್ವಕಾಲಿಕ ಹೆಚ್ಚಳ ಕಂಡಿರುವುದು ಸಂಘಟಕರು ಸಂದೇಶ ರವಾನಿಸಲು ಪರ್ಯಾಯ ಮಾರ್ಗ ಬಳಸಿದ್ದನ್ನು ಎತ್ತಿ ತೋರಿಸಿದೆ.
ಪ್ರಸ್ತುತ ಪರಿಸ್ಥಿತಿ ಮತ್ತು ಹೆಚ್ಚುವರಿ ಮಾಹಿತಿ
ಪ್ರಸ್ತುತ ಜಂತರ್ ಮಂತರ್ನಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ, ಕನ್ನಾಟ್ ಪ್ಲೇಸ್ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ಪ್ರಮಾಣದ ಮಿಲಿಟರಿ ಹಾಗೂ ಪೋಲಿಸ್ ಪಡೆಗಳನ್ನು ನಿಯೋಜಿಸಲಾಗಿದೆ. ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಸಿಜೆಪಿ ಯುವಜನರು ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಧರಣಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದು, ಸೋಮವಾರದ ‘ಸಂಸತ್ ಚಲೋ’ ಘರ್ಷಣೆ ಹಾಗೂ ಬುಧವಾರ ಸುಪ್ರೀಂ ಕೋರ್ಟ್ ವಿಚಾರಣೆ ನಿರಾಕರಿಸಿದ ಬೆನ್ನಲ್ಲೇ ಈ ಹೊಸ ಹಿಂಸಾಚಾರ ಭಡಕಾಯಿಸಿದೆ.
ಪ್ರತಿಭಟನೆಯ ಹೆಸರಿನಲ್ಲಿ ಕಿಡಿಗೇಡಿಗಳು ನುಸುಳಿ ಸಾರ್ವಜನಿಕ ಆಸ್ತಿಗೆ ಧಕ್ಕೆ ತರಲು ಹಾಗೂ ಪೋಲಿಸರ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದು, ಕಲ್ಲು ತೂರಾಟ ನಡೆಸಿದವರನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
