ನವದೆಹಲಿ, ಆಗಸ್ಟ್ 11: ಈ ಬಾರಿಯ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು (Independence Day) ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ (Vande Mataram) ಅನ್ನು ಪ್ರಸ್ತುತಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ 2047ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡುವಲ್ಲಿ ಯುವಶಕ್ತಿಯ ಕೊಡುಗೆಯನ್ನು ಮುಖ್ಯ ಥೀಮ್ ಆಗಿ ಆಯ್ಕೆ ಮಾಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ. ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರ ಪ್ರಕಾರ, ಪ್ರಧಾನಮಂತ್ರಿಯವರು ಆಗಮಿಸಿದ ತಕ್ಷಣವೇ ‘ವಂದೇ ಮಾತರಂ’ ಗಾಯನ ನಡೆಯಲಿದೆ. ತದನಂತರ ಧ್ವಜಾರೋಹಣ ನೆರವೇರಲಿದ್ದು, ರಾಷ್ಟ್ರಗೀತೆ ‘ಜನ ಗಣ ಮನ’ ಪ್ರಸ್ತುತಗೊಳ್ಳಲಿದೆ.
150 ವರ್ಷಗಳ ಐತಿಹಾಸಿಕ ಪಯಣ:
2026ಕ್ಕೆ ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಲಕ್ಷಾಂತರ ದೇಶಪ್ರೇಮಿಗಳಲ್ಲಿ ಸ್ಪೂರ್ತಿ ತುಂಬಿದ್ದ ಈ ಗೀತೆಯ ಪರಂಪರೆಗೆ ಗೌರವ ಸಲ್ಲಿಸಲು ಕೆಂಪುಕೋಟೆಯ ಮೇಲೆ ಈ ಗೀತೆಯನ್ನು ಮೊಳಗಿಸಲಾಗುತ್ತಿದೆ ಎಂದು ರಕ್ಷಣಾ ಕಾರ್ಯದರ್ಶಿ ಆರ್. ಕೆ. ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಂದೇ ಮಾತರಂ ಗೀತೆಗೆ ಅವಮಾನ ಮಾಡುವುದು ಕ್ರಿಮಿನಲ್ ಅಪರಾಧ; ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಯುವಜನರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಯುವಜನರ ಸಾಧನೆ ಮತ್ತು ಕೊಡುಗೆಯನ್ನು ಆಚರಿಸುವ ಯೋಜನೆಗಳನ್ನು ಮೊದಲೇ ಸಿದ್ಧಪಡಿಸಲಾಗಿತ್ತು. ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಕೆಂಪುಕೋಟೆಯಲ್ಲಿ ‘ವಂದೇ ಮಾತರಂ’ ಗಾಯನದ ಮಹತ್ವ:
1875ರಲ್ಲಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಗೀತೆಗೆ 150 ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೊದಲು ‘ಬಂಗದರ್ಶನ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಗೊಂಡ ಈ ಗೀತೆ, ನಂತರ ಅವರ ‘ಆನಂದಮಠ’ ಕಾದಂಬರಿಯ ಭಾಗವಾಯಿತು. ಮುಂದೆ ಇದು ಭಾರತದ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಪ್ರಭಾವಶಾಲಿ ಸಾಂಸ್ಕೃತಿಕ ಸಂಕೇತವಾಗಿ ಹೊರಹೊಮ್ಮಿತು.
ಇದನ್ನೂ ಓದಿ: Vande Mataram New Guidelines: ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡುವುದು ಕಡ್ಡಾಯ
ಸರ್ಕಾರವು ನವೆಂಬರ್ 2025ರಿಂದ ಇದರ 150ನೇ ವರ್ಷಾಚರಣೆಯ ವರ್ಷಪೂರ್ತಿ ರಾಷ್ಟ್ರೀಯ ಸಂಭ್ರಮಾಚರಣೆಯನ್ನು ಪ್ರಾರಂಭಿಸಿತ್ತು. ದೇಶಾದ್ಯಂತ ಸಮೂಹ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಿಲಿಟರಿ ಬ್ಯಾಂಡ್ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. 2026ರ ಗಣರಾಜ್ಯೋತ್ಸವದ ಆಚರಣೆಯಲ್ಲೂ ‘ವಂದೇ ಮಾತರಂ’ ಪ್ರಮುಖ ವಿಷಯವಾಗಿತ್ತು. ಆದ್ದರಿಂದ, ಕೆಂಪುಕೋಟೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಇದರ ಸೇರ್ಪಡೆಯು ಸ್ವಾತಂತ್ರ್ಯ ಸಂಗ್ರಾಮದ ಪರಂಪರೆಯನ್ನು ದೇಶದ ಪ್ರಮುಖ ಸ್ವಾತಂತ್ರ್ಯ ದಿನದ ಕಾರ್ಯಕ್ರಮದೊಂದಿಗೆ ಬೆಸೆಯುತ್ತದೆ.
ಆಗಸ್ಟ್ 15ರಂದು ರಕ್ಷಣಾ ಸಚಿವಾಲಯವು ರಾಷ್ಟ್ರೀಯ ಗೀತೆಯ 150 ವರ್ಷಗಳ ಪಯಣ ಮತ್ತು ಭಾರತೀಯ ಯುವಕರ ಕೊಡುಗೆಯನ್ನು ಬಿಂಬಿಸುವ ಕಾರ್ಯಕ್ರಮವನ್ನು ಯೋಜಿಸಿದೆ. 27,000ಕ್ಕೂ ಹೆಚ್ಚು ಗಣ್ಯರು, ವೀಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 2,500 ಎನ್ಸಿಸಿ (NCC) ಕೆಡೆಟ್ಗಳು ಮತ್ತು ‘ಮೈ ಭಾರತ್’ (My Bharat) ಸ್ವಯಂಸೇವಕರು ಕೆಂಪುಕೋಟೆಯ ಮುಂಭಾಗದ ಜ್ಞಾನಪಥದಲ್ಲಿ ‘ವಂದೇ ಮಾತರಂ’ ಎಂಬ ಅಕ್ಷರ ವಿನ್ಯಾಸವನ್ನು ರೂಪಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
