International Tiger Conservation Day 2026: ಕರ್ನಾಟಕದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ತಾಣಗಳಿವು – Kannada News | International Tiger Conservation Day 2026: Know the purpose of International Tiger Conservation Day

ಕರ್ನಾಟಕದ ಹುಲಿ ಸಂರಕ್ಷಿತ ತಾಣಗಳುImage Credit source: Getty Images

ಆನೆ, ಸಿಂಹಗಳಂತೆ ಹುಲಿಗಳು ಸಹ (tiger) ಅತ್ಯಂತ ಪ್ರಮುಖ ವನ್ಯಜೀವಿಯಾಗಿದ್ದು, ಇವು ಕಾಡಿನ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಆದರೆ ಇಂದು ನೈಸರ್ಗಿಕ ಆವಸಸ್ಥಾನಗಳ ನಾಶ, ಅಕ್ರಮ ಬೇಟೆ, ಹವಾಮಾನ ಬದಲಾವಣೆ, ಅರಣ್ಯನಾಶ ಇವೆಲ್ಲದರ ಕಾರಣದಿಂದಾಗಿ ಹುಲಿಗಳ ಸಂತತಿ ಅಳಿವಿನಂಚಿಗೆ ತಲುಪಿದೆ. ಅಳಿವಿನಂಚಿಗೆ ತಲುಪಿರುವ ಹುಲಿಯನ್ನು ನಮ್ಮ ಹಾಗೂ ಮುಂದಿನ ಪೀಳಿಗೆಗಾಗಿ ಉಳಿಸಬೇಕಾದ ಅಗತ್ಯವಿದೆ. ಈ ಹುಲಿಗಳ ರಕ್ಷಣೆಗಾಗಿಯೇ ಕೆಲವೊಂದು ಅಭಯಾರಣ್ಯಗಳನ್ನು ಹುಲಿ ಸಂರಕ್ಷಿತ ಪ್ರದೇಶಗಳನ್ನಾಗಿ ಮಾಡಲಾಗಿದೆ. ನಮ್ಮ ಕರ್ನಾಟಕದಲ್ಲಿಯೂ ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಅವುಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸವೇನು?

ಅಳಿವಿನಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ ಪ್ರತಿವರ್ಷ ಜುಲೈ 28 ರಂದು ಅಂತಾರಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.  ದಿನದ ಆಚರಣೆ 2010 ರಲ್ಲಿ ಪ್ರಾರಂಭವಾಯಿತು. ರಷ್ಯಾದ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ, ಜುಲೈ 29 ರಂದು ವಿಶ್ವ ಹುಲಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಪ್ರಪಂಚದಾದ್ಯಂತದ ಸುಮಾರು 13 ದೇಶಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವು.  ನಂತರ ಈ ದಿನವನ್ನು ಪ್ರತಿ ವರ್ಷವೂ ಆಚರಿಸುತ್ತಾ ಬರಲಾಗುತ್ತಿದೆ.

ಹುಲಿ ಸಂರಕ್ಷಿತ ಪ್ರದೇಶ ಎಂದರೇನು?

ಹುಲಿ ಸಂರಕ್ಷಿತ ಪ್ರದೇಶವು ಹುಲಿಗಳು ಮತ್ತು ನೈಸರ್ಗಿಕ ಅವುಗಳ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಮೀಸಲಾಗಿರುವ ಸಂರಕ್ಷಿತ ಪ್ರದೇಶವಾಗಿದೆ. ಈ ಮೀಸಲು ಪ್ರದೇಶಗಳನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ಮಾರ್ಗಸೂಚಿಗಳ ಪ್ರಕಾರ ನಿರ್ವಹಿಸಲಾಗುತ್ತದೆ.  ಹುಲಿ ಮೀಸಲು ಪ್ರದೇಶಗಳು ಹುಲಿಗಳನ್ನು ಮಾತ್ರವಲ್ಲದೆ ಚಿರತೆಗಳು, ಆನೆಗಳು, ಜಿಂಕೆಗಳು, ಪಕ್ಷಿಗಳು, ಸರೀಸೃಪಗಳು ಮತ್ತು ಲೆಕ್ಕವಿಲ್ಲದಷ್ಟು ಸಸ್ಯ ಪ್ರಭೇದಗಳನ್ನು ಸಹ ರಕ್ಷಿಸುತ್ತವೆ.

ಇದನ್ನೂ ಓದಿ: ದೈನಂದಿನ ಜೀವನದಲ್ಲಿ ಸಣ್ಣ ಕಾರ್ಯಗಳನ್ನು ಮಾಡುವ ಮೂಲಕ ಪ್ರಕೃತಿಯ ರಕ್ಷಣೆಗೆ ದೊಡ್ಡ ಕೊಡುಗೆ ನೀಡಬಹುದು

ಕರ್ನಾಟಕದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ತಾಣಗಳು ಯಾವುವು?

ಬಂಡೀಪುರ ರಾಷ್ಟ್ರೀಯ ಉದ್ಯಾನವನ:

870 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು  ದೇಶದ ಪ್ರಮುಖ ಹುಲಿ ರಕ್ಷಣಾ ಅಭಯಾರಣ್ಯಗಳಲ್ಲಿ ಒಂದಾಗಿದೆ.  ಬಂಡೀಪುರ ರಾಷ್ಟ್ರೀಯ ಉದ್ಯಾನವನವನ್ನು 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಗಿ ಸ್ಥಾಪಿಸಲಾಯಿತು. ಈ ಪ್ರದೇಶವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು, ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ಮತ್ತು ನಂಜನಗೂಡು ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಇಲ್ಲಿ ವನ್ಯಜೀವಿಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಅರಣ್ಯ ಸಫಾರಿಯನ್ನು ಸಹ ಮಾಡಬಹುದು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ:

ಮಳೆಗಾಲದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಹುಲಿ ಸಂರಕ್ಷಿತ ಅಭಯಾರಣ್ಯಗಳಲ್ಲಿ ನಾಗರಹೊಳೆ ಕೂಡ ಒಂದು. ಇದು ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಸ್ಥಾಪಿಸಲಾದ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಇದನ್ನು 1999 ರಲ್ಲಿ ಘೋಷಿಸಲಾಯಿತು. ರಾಜೀವ್‌ ಗಾಂದಿ ರಾಷ್ಟ್ರೀಯ ಉದ್ಯಾನವನ ಎಂದೂ  ಜನಪ್ರಿಯವಾಗಿರುವ  ಈ ಪ್ರದೇಶವು ಹಲವು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಇದನ್ನು 1988 ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿ ಮಾಡಲಾಯಿತು. ಬೆಂಗಾಲ್‌ ಟೈಗರ್‌ ಮತ್ತು ಚಿರತೆಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎರಡು ಪ್ರಮುಖ ಆಕರ್ಷಣೆಗಳಾಗಿವೆ. ಇಲ್ಲಿಯೂ ಕೂಡ ಸಫಾರಿ ಮಾಡುವ ಮೂಲಕ ವನ್ಯ ಜೀವಿಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಕಾಳಿ ಹುಲಿ ಸಂರಕ್ಷಿತ ಪ್ರದೇಶ:

ಕಾಳಿ ಅಭಯಾರಣ್ಯವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಈ ಅಭಯಾರಣ್ಯ ಬೆಂಗಾಲ್‌ ಟೈಗರ್‌, ಕಪ್ಪು ಚಿರತೆ ಮತ್ತು ಆನೆಗಳ ತಾಣವಾಗಿದೆ. ಈ ಅಭಯಾರಣ್ಯವು 1300 ಚದರ ಕಿ.ಮೀ ಅರಣ್ಯ ಪ್ರದೇಶದಲ್ಲಿ ಹರಡಿದ್ದು, ಇದು ಹುಲಿಗಳ ಸಂರಕ್ಷಣೆಗಾಗಿ ಮೀಸಲಾಗಿರುವ ತಾಣವಾಗಿದೆ. ಈ ಉದ್ಯಾನವನವು ಬೆಳಿಗ್ಗೆ 6.00 ರಿಂದ ಸಂಜೆ 6.00 ರವರೆಗೆ ಪ್ರವಾಸಿಗರಿಗಾಗಿ ತೆರೆದಿರುತ್ತದೆ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶ:

ಭದ್ರಾ ವನ್ಯಜೀವಿ ಅಭಯಾರಣ್ಯವು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹರಡಿರುವ ಪ್ರಮುಖ ಹುಲಿ ಸಂರಕ್ಷಿತ ತಾಣವಾಗಿದ್ದು, ಇದು 492 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ.  ಇದನ್ನು 1998 ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ಭದ್ರಾ ಅಭಯಾರಣ್ಯ  ಜೀವವೈವಿಧ್ಯದ ತಾಣವಾಗಿದ್ದು,  ಗಣತಿಯೊಂದರ ಪ್ರಕಾರ  33 ಹುಲಿಗಳು ಮತ್ತು 22 ಚಿರತೆಗಳು ಈ ಅಭಯಾರಣ್ಯದಲ್ಲಿ ವಾಸಿಸುತ್ತಿವೆ. ಈ ಅಭಯಾರಣ್ಯ ಜೀಪ್‌ ಸಫಾರಿ, ಚಾರಣಕ್ಕೆ ಹೆಸರುವಾಸಿಯಾಗಿದೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ: 

ಬಿಆರ್‌ಟಿ ಅಂದರೆ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಕೂಡ ಹುಲಿಗಳು ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನದ ರಕ್ಷಣೆಗಾಗಿ ಮೀಸಲಾಗಿರುವ ತಾಣವಾಗಿದೆ. ಈ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿದೆ. ಈ ವನ್ಯಜೀವಿ ಅಭಯಾರಣ್ಯವು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸಂರಕ್ಷಿತ ಮೀಸಲು ಪ್ರದೇಶವಾಯಿತು ಮತ್ತು 2011 ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ನೀವು ಹುಲಿಗಳು, ಚಿರತೆಗಳು ಮತ್ತು ಅಪರೂಪದ ಬ್ಲ್ಯಾಕ್‌  ಪ್ಯಾಂಥರ್‌ಗಳನ್ನು ಇಲ್ಲಿ ಕಾಣಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *