ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಐಪಿಎಲ್ 2026 (IPL 2026) ರ ಪ್ಲೇಆಫ್ ಹಾಗೂ ಫೈನಲ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಬಿಸಿಸಿಐ (BCCI) ಕೂಡ ಐಪಿಎಲ್ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಐಪಿಎಲ್ ಫೈನಲ್ ನಡೆಸಲು ನಿರ್ಧರಿಸಿತ್ತು. ಇತ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಐಪಿಎಲ್ ಫೈನಲ್ಗೆ ಸಕಲ ತಯಾರಿ ಮಾಡಿಕೊಂಡಿತ್ತು. ಆದರೆ ಲೀಗ್ ಪಂದ್ಯಗಳು ಮುಗಿಯುವುದಕ್ಕೂ ಮುನ್ನ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿರುವ ಬಿಸಿಸಿಐ, ಪ್ಲೇಆಫ್ ಹಾಗೂ ಫೈನಲ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಈ ಬಗ್ಗೆ ಬಿಸಿಸಿಐ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. ಇದೀಗ ಫೈನಲ್ ಕೈತಪ್ಪಿದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೆಎಸ್ಸಿಎ ಈ ಬಗ್ಗೆ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ನಿರಾಶೆಯಾಗಿದೆ; ಕೆಎಸ್ಸಿಎ
ಬೆಂಗಳೂರುದಲ್ಲಿ ಐಪಿಎಲ್ ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಸ್ಪಷ್ಟೀಕರಣ ನೀಡುತ್ತಿದ್ದು, ಮೊದಲಿಗೆ, ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಿರುವುದಕ್ಕೆ ಕೆಎಸ್ಸಿಎ ನಿರಾಶೆ ವ್ಯಕ್ತಪಡಿಸುತ್ತದೆ. ಕೆಎಸ್ಸಿಎ ಅಧ್ಯಕ್ಷರು ಹಾಗೂ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಈ ವಿಷಯವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದು, ಬೆಂಗಳೂರಿನಲ್ಲಿ ಐಪಿಎಲ್ ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು KSCAಯ ಸಿದ್ಧತೆ, ಆಸಕ್ತಿ ಹಾಗೂ ಇಚ್ಛೆಯನ್ನು ಅಧಿಕೃತವಾಗಿ ತಿಳಿಸಿದ್ದರು.
ಪ್ರಸ್ತುತ ಸೀಸನ್ನಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯಗಳು ಸುಗಮ ನಿರ್ವಹಣೆ, ಜನಸ್ತೋಮ ನಿಯಂತ್ರಣ, ಕಾರ್ಯಾಚರಣಾ ದಕ್ಷತೆ ಹಾಗೂ ಪ್ರೇಕ್ಷಕರ ಅನುಭವದ ದೃಷ್ಟಿಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಇಂತಹ ಮಹತ್ವದ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸುವ ಸಾಮರ್ಥ್ಯವನ್ನು KSCA ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಸಂಬಂಧ KSCA, ಬೆಂಗಳೂರಿನಲ್ಲಿ ಪ್ರಸ್ತುತ ಐಪಿಎಲ್ ಸೀಸನ್ ಅನ್ನು ಯಾವ ರೀತಿಯ ಕಾರ್ಯಾಚರಣಾ ವ್ಯವಸ್ಥೆಯಡಿ ನಡೆಸಲಾಯಿತು ಎಂಬುದನ್ನು ವಿವರಿಸುವ ಸಮಗ್ರ ಪತ್ರವನ್ನು BCCIಗೆ ಕಳುಹಿಸಿತ್ತು. ಈ ವ್ಯವಸ್ಥೆಗಳು ಮತ್ತು ಪ್ರೋಟೋಕಾಲ್ಗಳು 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೇ ಅನುಸರಿಸಲಾಗುತ್ತಿದ್ದು, ಈ ಸೀಸನ್ನಲ್ಲಿಯೂ ಹಾಗೂ ಹಿಂದಿನ ಪ್ಲೇಆಫ್ ಪಂದ್ಯಗಳ ಆಯೋಜನೆಯಲ್ಲಿಯೂ ಸಮಾನವಾಗಿ ಜಾರಿಗೊಳಿಸಲಾಗಿತ್ತು.
ಬಿಸಿಸಿಐ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ
KSCA ಕಳುಹಿಸಿದ್ದ ಪತ್ರ ಸಂಪೂರ್ಣವಾಗಿ ವಾಸ್ತವಾಧಾರಿತ, ಕಾರ್ಯಾಚರಣಾತ್ಮಕ ಹಾಗೂ ಸ್ಪಷ್ಟೀಕರಣಾತ್ಮಕ ಸ್ವರೂಪದ್ದಾಗಿದ್ದು, ಇಂತಹ ಮಹತ್ವದ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದ ಲಾಜಿಸ್ಟಿಕ್ಸ್ ಮತ್ತು ಹಿತಾಸಕ್ತಿದಾರರ ಅಗತ್ಯಗಳ ಕುರಿತು ಪಾರದರ್ಶಕತೆ ಒದಗಿಸುವ ಉದ್ದೇಶವನ್ನಷ್ಟೇ ಹೊಂದಿತ್ತು. ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು KSCA ಸಂಪೂರ್ಣ ಸಿದ್ಧತೆಯಲ್ಲಿದ್ದರೂ, BCCI ಈ ಪಂದ್ಯಗಳನ್ನು ಬೇರೆಡೆ ನಡೆಸಲು ನಿರ್ಧಾರ ಕೈಗೊಂಡಿರುವುದನ್ನು ನಾವು ಅರಿತುಕೊಂಡಿದ್ದೇವೆ. ಈ ನಿರ್ಧಾರದ ನಿರ್ದಿಷ್ಟ ಕಾರಣಗಳನ್ನು KSCAಗೆ ಅಧಿಕೃತವಾಗಿ ತಿಳಿಸದಿದ್ದರೂ, BCCIಯ ನಿರ್ಧಾರಾಧಿಕಾರ ಮತ್ತು ಪ್ರಾಧಿಕಾರವನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ.
IPL 2026: ಆರ್ಸಿಬಿ ಫ್ಯಾನ್ಸ್ಗೆ ಬಿಗ್ ಶಾಕ್; ಐಪಿಎಲ್ ಫೈನಲ್ ಬೆಂಗಳೂರಿನಿಂದ ಅಹಮದಾಬಾದಿಗೆ ಶಿಫ್ಟ್
KSCA ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ವದ ಪಂದ್ಯಗಳನ್ನು ಆಯೋಜಿಸಲು ಸದಾ ಸಿದ್ಧವಾಗಿದ್ದು, ಭಾರತದಲ್ಲಿ ಕ್ರಿಕೆಟ್ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಗೆ BCCI, ಫ್ರಾಂಚೈಸಿಗಳು, ಸರ್ಕಾರದ ಅಧಿಕಾರಿಗಳು ಹಾಗೂ ಎಲ್ಲಾ ಹಿತಾಸಕ್ತಿದಾರರಿಗೆ ತನ್ನ ಸಂಪೂರ್ಣ ಸಹಕಾರವನ್ನು ಮುಂದುವರಿಸಲಿದೆ. ಮಾಧ್ಯಮ ವಲಯ ಹಾಗೂ ಕ್ರಿಕೆಟ್ ಅಭಿಮಾನಿಗಳ ನಿರಂತರ ಬೆಂಬಲ, ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
