ದಳಪತಿ ವಿಜಯ್ (Thalapathy Vijay) ಇತಿಹಾಸ ಬರೆದಿದ್ದಾರೆ. ತಮ್ಮ ಅಭೂತಪೂರ್ವ ಸ್ಟಾರ್ಡಮ್, ಅಭಿಮಾನಿ ಬಳಗವನ್ನು ಬಳಸಿಕೊಂಡು ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆ ಗೆದ್ದಿದ್ದು, ಸಿಎಂ ಆಗಲಿದ್ದಾರೆ. ಆದರೆ ಇಂಥಹಾ ಖುಷಿಯ ಸಮಯದಲ್ಲಿಯೇ ವಿಜಯ್ ಅವರ ಚಿತ್ರರಂಗದ ಗುರುಗಳಲ್ಲಿ ಒಬ್ಬರಾದ ಆರ್ಬಿ ಚೌಧರಿ ಅವರು ನಿಧನ ಹೊಂದಿದ್ದಾರೆ. ಖ್ಯಾತ ನಿರ್ಮಾಪಕ ಆರ್ಬಿ ಚೌಧರಿ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದು, ವಿಜಯ್, ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಅವರ ಅಂತಿಮ ದರ್ಶನ ಪಡೆದಿರುವುದಲ್ಲದೆ, ಗೆಳೆಯನಿಗೆ ಸಾಂತ್ವನ ಸಹ ಹೇಳಿದ್ದಾರೆ.
ಆರ್ಬಿ ಚೌಧರಿ ಅವರು ವಿಜಯ್ಗೆ ಹಲವು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅವರ ಸ್ಟಾರ್ಡಮ್ಗೆ ಕಾರಣವಾದ ನಿರ್ಮಾಪಕ. ಅದು ಮಾತ್ರವೇ ಅಲ್ಲದೆ, ವಿಜಯ್ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾದ ನಟ ಜೀವ ಅವರ ತಂದೆಯೂ ಹೌದು. ಆರ್ಬಿ ಚೌಧರಿ ಅವರು ರಾಜಸ್ಥಾನದ ಹಳ್ಳಿಯೊಂದರ ಬಳಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರ ಅಂತಿಮ ದರ್ಶನವನ್ನು ವಿಜಯ್ ಅವರು ಇಂದು (ಮೇ 6) ಸಂಜೆ ಪಡೆದಿದ್ದಾರೆ.
ವಿಜಯ್ ಅವರು ಆರ್ಬಿ ಚೌಧರಿ ಅವರ ಅಂತಿಮ ದರ್ಶನ ಪಡೆದು, ಗೆಳೆಯ ಜೀವ ಅವರನ್ನು ಆಲಂಗಿಸಿಕೊಂಡು ಅವರಿಗೆ ಸಾಂತ್ವನ ಹೇಳಿದ್ದಾರೆ. ಜೀವ ಮತ್ತು ವಿಜಯ್ ಒಟ್ಟಿಗೆ ‘ನನ್ಬ’ ಸಿನಿಮಾನಲ್ಲಿ ನಟಿಸಿದ್ದರು. ‘ನನ್ಬ’ ಎಂದರೆ ತಮಿಳಿನಲ್ಲಿ ಗೆಳೆಯ ಎಂದರ್ಥ. ಇಬ್ಬರೂ ಬಹಳ ಆತ್ಮೀಯ ಗೆಳೆಯರಾಗಿದ್ದರು. ಅದಕ್ಕಿಂತಲೂ ಮುಖ್ಯವಾಗಿ, ವಿಜಯ್ ಅವರು ಸ್ಟಾರ್ ಆಗಿ ಚಿತ್ರರಂಗದಲ್ಲಿ ಬೆಳೆಯಲು ಆರ್ಬಿ ಚೌಧರಿ ಅವರು ಬಹು ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರು.
ಇದನ್ನೂ ಓದಿ:ದಳಪತಿ ವಿಜಯ್ ಗೆದ್ದಿದ್ದಕ್ಕೆ ದುನಿಯಾ ವಿಜಿ ಹೇಳಿದ್ದೇನು?
ತೀರ ಸಾಧಾರಣ ಯಶಸ್ಸನ್ನಷ್ಟೆ ಕಂಡು, ದೊಡ್ಡ ಹಿಟ್ ಗಾಗಿ ವಿಜಯ್ ಕಾತರರಾಗಿದ್ದಾಗ 1996 ರಲ್ಲಿ ಚೌಧರಿ ಅವರು ವಿಜಯ್ ಅವರಿಗಾಗಿ ‘ಪೂವೇ ಉನಕ್ಕಾಗ’ ಸಿನಿಮಾ ನಿರ್ಮಿಸಿದರು. ಅದು ಬ್ಲಾಕ್ ಬಸ್ಟರ್ ಆಯ್ತು. ಅದಾದ ಬಳಿಕ 1999ರಲ್ಲಿ ಮತ್ತೊಂದು ಸಿನಿಮಾ ನಿರ್ಮಿಸಿದರು. ಅದೂ ಸಹ ಬ್ಲಾಕ್ ಬಸ್ಟರ್. ಫ್ಯಾಮಿಲಿ ಆಡಿಯೆನ್ಸ್ ನಟ ಎನಿಸಿಕೊಂಡಿದ್ದ ವಿಜಯ್ ಅವರಿಗೆ ಮಾಸ್ ಹೀರೋ ಇಮೇಜು ಕೊಟ್ಟ ‘ತಿರುಪಾಚ್ಚಿ’ ಸಿನಿಮಾವನ್ನು ಸಹ ಚೌಧರಿ ಅವರೇ ನಿರ್ಮಿಸಿದ್ದು. ಬಳಿಕ 2014 ರಲ್ಲಿ ಬಂದ ಮತ್ತೊಂದು ಬ್ಲಾಕ್ ಬಸ್ಟರ್ ‘ಜಿಲ್ಲಾ’ ಸಿನಿಮಾವನ್ನೂ ಸಹ ಸೂಪರ್ ಗುಡ್ ಫಿಲಮ್ಸ್ನ ಚೌಧರಿ ಅವರೇ ನಿರ್ಮಿಸಿದ್ದು.
BREAKING: Thalapathy Vijay personally visits to pay his last respects to producer R. B. Choudary and offers condolences to the grieving family. pic.twitter.com/p0ixfh8qgD
— Actor Vijay Team (@ActorVijayTeam) May 6, 2026
ಚೌಧರಿ ಅವರು ಈ ವರೆಗೆ 99 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 100ನೇ ಸಿನಿಮಾವನ್ನು ವಿಜಯ್ ಜೊತೆಗೇ ನಿರ್ಮಾಣ ಮಾಡಬೇಕು ಎಂಬುದು ಅವರ ಆಸೆ ಆಗಿತ್ತು. ಆದರೆ ವಿಜಯ್ ಹಠಾತ್ತನೆ ಸಿನಿಮಾದಿಂದ ನಿವೃತ್ತಿ ಘೋಷಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಆದರೆ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮುಂಚೆಯೇ ಚೌಧರಿ ನಿಧನ ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
