GT vs RCB: ಏಷ್ಯಾದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ – Kannada News | Virat Kohli Creates History: First Player with 12,000 T20 Runs in Asia

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವೆ ನಡೆದ ಐಪಿಎಲ್ 2026 ರ 42ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರು, ಆದರೆ ಕೇವಲ 13 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಆದಾಗ್ಯೂ, ಈ ಪಂದ್ಯದಲ್ಲಿ ಕೊಹ್ಲಿ ಯಾವುದೇ ಬ್ಯಾಟ್ಸ್‌ಮನ್ ಮುರಿಯಲು ಅತ್ಯಂತ ಕಷ್ಟಕರವಾದ ಮಹತ್ವದ ದಾಖಲೆಯೊಂದನ್ನು ನಿರ್ಮಿಸಿದರು.

Source link

ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ, ಕಳಪೆ ಕಾಮಗಾರಿ ಬಯಲು – Kannada News | Police vehicle fell down into footpath at Bengaluru Over Heavy rain

ಬೆಂಗಳೂರು, (ಏಪ್ರಿಲ್​ 30): ಬುಧವಾರ (ಏಪ್ರಿಲ್ 29) ಸುರಿದ ಮಳೆಯು 25 ವರ್ಷದ ಬಳಿಕ ಹೊಸ ದಾಖಲೆ ಬರೆದಿದೆ. ಈ ವರ್ಷಧಾರೆಗೆ ರಾಜಧಾನಿ ತತ್ತರಿಸಿದ್ದಾರೆ. ಒಂದೇ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿವೆ. ಇನ್ನು ಎಲ್ಲೊಂದರಲ್ಲಿ ಗಿಡ ಮರಗಳು ಮುರಿದು ಬಿದ್ದಿವೆ. ಇನ್ನು  ವಿಧಾನಸೌದ ಬಳಿಯ ರಸ್ತೆ ಫುಟ್​​ಪಾತ್ ಕುಸಿದು ಬಿದ್ದಿದ್ದು, ಈ ಗುಂಡಿಗೆ ಪೊಲೀಸ್ ವಾಹನ ಸಹ ಬಿದ್ದಿದೆ.

Source link

GT vs RCB: ಅಂಪೈರ್​ಯಿಂದ ಆರ್​​ಸಿಬಿಗೆ ಮಹಾಮೋಸ; ಸಿಡಿದೆದ್ದ ಕೊಹ್ಲಿ – Kannada News | IPL 2026: Rajat Patidar’s Controversial Out vs GT Shakes RCB; Kohli Furious with Umpire

ಪ್ರತಿ ಐಪಿಎಲ್​ನಂತೆ 2026 ರ ಐಪಿಎಲ್ (IPL 2026) ಕೂಡ ವಿವಾದಗಳಿಂದ ಹೊರತಾಗಿಲ್ಲ. ಆದರೆ ಈ ಆವೃತ್ತಿಯಲ್ಲಿ ಅಂಪೈರ್​ಗಳು ನೀಡಿರುವ ತೀರ್ಪುಗಳೇ ಸಾಕಷ್ಟು ವಿವಾದ ಹುಟ್ಟಿಸಿವೆ. ಇದೀಗ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 42ನೇ ಪಂದ್ಯದಲ್ಲೂ ಕೂಡ ಮತ್ತೊಂದು ವಿವಾದ ಭುಗಿಲೆದ್ದಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಅವರ ವಿಕೆಟ್ ದೊಡ್ಡ ವಿವಾದಕ್ಕೆ ಕಾರಣವಾಗಿಸಡ. ಈ ವಿವಾದ ಎಷ್ಟು ತೀವ್ರವಾಗಿತ್ತು ಎಂದರೆ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಮುಖ್ಯ ತರಬೇತುದಾರ ಆಂಡಿ ಫ್ಲವರ್ ಅಂಪೈರ್ ಜೊತೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆರ್​​ಸಿಬಿ ಅಭಿಮಾನಿಗಳು ಅಂಪೈರ್​​ಗೆ ಹಿಡಿಶಾಪ ಹಾಕುತ್ತಿದ್ದಾರೆ.

ವಿವಾದ ಹುಟ್ಟಿಸಿದ ಹೋಲ್ಡರ್ ಹಿಡಿದ ಕ್ಯಾಚ್

ನಾಯಕ ರಜತ್ ಪಾಟಿದಾರ್, ಎಂಟನೇ ಓವರ್‌ನಲ್ಲಿ ಅರ್ಷದ್ ಖಾನ್ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ಅದೇ ಓವರ್​ನ ನಾಲ್ಕನೇ ಎಸೆತದಲ್ಲಿ ರಜತ್ ಮತ್ತೊಂದು ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು. ಚೆಂಡು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ ಕಡೆ ಮೇಲಕ್ಕೆ ಹೋಯಿತು. ಬೌಂಡರಿ ಲೈನ್ ಬಳಿ ಫಿಲ್ಡಿಂಗ್ ಮಾಡುತ್ತಿದ್ದ ಜೇಸನ್ ಹೋಲ್ಡರ್ ಓಡಿಬಂದು ಅದ್ಭುತ ಕ್ಯಾಚ್ ಪಡೆದರು. ಆದಾಗ್ಯೂ, ಕ್ಯಾಚ್ ತೆಗೆದುಕೊಂಡ ನಂತರ ಅವರು ಚೆಂಡನ್ನು ಹಿಡಿದಿದ್ದ ಎಡಗೈ ನೆಲಕ್ಕೆ ತಾಗಿತು. ವಿಡಿಯೋದಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ಪಾಟಿದಾರ್ ಔಟಾಗಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದಾಗ್ಯೂ, ಮೂರನೇ ಅಂಪೈರ್ ರಜತ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ನಂತರ ವಿರಾಟ್ ಕೊಹ್ಲಿ ಮತ್ತು ಆಂಡಿ ಫ್ಲವರ್ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ಆರಂಭಿಸಿದರು. ಇದರಿಂದ ಆಟವನ್ನು 2-3 ನಿಮಿಷಗಳ ಕಾಲ ನಿಲ್ಲಿಸಲಾಯಿತು.

ಪಾಟೀದಾರ್ ಅವರನ್ನು ಔಟ್ ನೀಡಿದ್ದು ಏಕೆ?

ರಜತ್ ಪಾಟಿದಾರ್ ಅವರನ್ನು ಔಟ್ ನೀಡಲು ನೀಡಲಾದ ಕಾರಣವೆಂದರೆ, ಹೋಲ್ಡರ್ ಕ್ಯಾಚ್ ಹಿಡಿಯುವಾಗ ಸಂಪೂರ್ಣ ನಿಯಂತ್ರಣದಲ್ಲಿದ್ದರು. ಅವರ ಕೈ ನೆಲಕ್ಕೆ ತಾಗಿತ್ತಾದರೂ ಅವರು ಕೈಬೆರಳುಗಳು ಚೆಂಡಿನ ಅಡಿಯಲಿದ್ದವು ಎಂಬುದು ಅಂಪೈರ್ ಅವರ ವಾದವಾಗಿದೆ. ಆದಾಗ್ಯೂ, ಅಂಪೈರ್ ಅವರ ಈ ನಿರ್ಧಾರವು ವಿವಾದಕ್ಕೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:21 pm, Thu, 30 April 26

Source link

ಬೆಳಿಗ್ಗೆ ಮಾತ್ರವಲ್ಲ ರಾತ್ರಿ ಸಮಯದಲ್ಲೂ ಹೀಟ್ ಸ್ಟ್ರೋಕ್ ಅಪಾಯ ತಪ್ಪಿದ್ದಲ್ಲ: ತಜ್ಞರಿಂದ ಎಚ್ಚರಿಕೆ – Kannada News | Can Heat Stroke Happen at Night? Warning Signs to Know

ಬೇಸಿಗೆಯ ತೀವ್ರತೆ ದಿನದ ಬಿಸಿಲಿಗಷ್ಟೇ ಸೀಮಿತವಲ್ಲ. ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲೂ ಉಷ್ಣತೆ ಮತ್ತು ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಆರೋಗ್ಯದ ಮೇಲೆ ಅದರ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ರಾತ್ರಿ ಸುರಕ್ಷಿತ ಎಂದು ಭಾವಿಸುವವರು, ಈ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ತಜ್ಞರು ಸೂಚಿಸುತ್ತಿದ್ದಾರೆ. ಹೌದು, ತಜ್ಞರ ಪ್ರಕಾರ, ದಿನದ ಬಿಸಿಲಿನ ನಂತರವೂ ರಾತ್ರಿ ತಾಪಮಾನ ಕಡಿಮೆಯಾಗದಿದ್ದರೆ ದೇಹಕ್ಕೆ ತಣ್ಣಗಾಗಲು ಅವಕಾಶ ಸಿಗುವುದಿಲ್ಲ. ಇದರಿಂದ ದೇಹದ ಉಷ್ಣಾಂಶ ನಿಯಂತ್ರಣ ಕಷ್ಟವಾಗುತ್ತದೆ. ಹೆಚ್ಚಿದ ಶಾಖದ ವಾತಾವರಣದಿಂದ ಬೆವರು ಸರಿಯಾಗಿ ಒಣಗದೆ ದೇಹ ತಂಪಾಗುವುದಿಲ್ಲ. ಇದರಿಂದ ಹೀಟ್ ಸ್ಟ್ರೋಕ್ (Heat Stroke) ಅಪಾಯ ಹೆಚ್ಚಾಗಬಹುದು. ಹಾಗಾದರೆ ಯಾರು ಹೆಚ್ಚು ಅಪಾಯದಲ್ಲಿದ್ದಾರೆ, ಈ ರೀತಿ ಆಗುವುದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾರು ಹೆಚ್ಚು ಅಪಾಯದಲ್ಲಿದ್ದಾರೆ?

ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ಹೆಚ್ಚು ಸಂವೇದನಾಶೀಲರಾಗಿದ್ದು, ಅವರ ದೇಹ ತಾಪಮಾನವನ್ನು ಸಮರ್ಪಕವಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರು ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಈ ರೀತಿಯ ಅಪಾಯ ಹೆಚ್ಚಾಗಿ ಕಾಡುತ್ತದೆ. ಮುಚ್ಚಿದ ಅಥವಾ ಗಾಳಿ ಬರದಂತ ಕೊಠಡಿಗಳಲ್ಲಿ ಇರುವವರು ಕೂಡ ಹೆಚ್ಚು ಅಪಾಯಕ್ಕೆ ಒಳಗಾಗಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ಅಪಾಯ: ಈ ರೀತಿಯಾಗುವ ಮುನ್ನ ಕಾಣಿಸಿಕೊಳ್ಳುತ್ತೆ 3 ಲಕ್ಷಣಗಳು

ತಡೆಯುವ ವಿಧಾನಗಳು ಯಾವುವು?

ರಾತ್ರಿ ಸಮಯದಲ್ಲಿ ಕೊಠಡಿಯನ್ನು ಹವಾನಿಯಂತ್ರಿತ ಮತ್ತು ಗಾಳಿಯಾಡುವಂತೆ ಇಡುವುದು ಮುಖ್ಯ. ಮಲಗುವ ಮುನ್ನ ಮತ್ತು ಮಧ್ಯಂತರದಲ್ಲಿ ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. ಹಗುರ ಮತ್ತು ಸಡಿಲ ಬಟ್ಟೆಗಳನ್ನು ಧರಿಸುವುದು ದೇಹಕ್ಕೆ ತಂಪನ್ನು ನೀಡುತ್ತದೆ. ಅಗತ್ಯವಿದ್ದರೆ ಫ್ಯಾನ್ ಅಥವಾ ಕೂಲರ್ ಬಳಸುವುದು ಸಹಾಯಕ. ಹೀಟ್ ಸ್ಟ್ರೋಕ್ ಅಪಾಯ ದಿನದಲ್ಲೇ ಅಲ್ಲ, ರಾತ್ರಿ ಸಮಯದಲ್ಲೂ ಇರುತ್ತದೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ ಈ ಅಪಾಯದಿಂದ ದೂರವಿರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು – Kannada News | 4 people dead after cruise boat with 30 onboard capsizes in Madhya Pradesh Bargi dam

ಜಬಲ್ಪುರ, ಏಪ್ರಿಲ್ 30: ಮಧ್ಯಪ್ರದೇಶದ (Madhya Pradesh) ಜಬಲ್ಪುರದ ಖಮರಿಯಾ ದ್ವೀಪದ ಬಳಿಯ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಇಂದು ಸಂಜೆ ಕ್ರೂಸ್ ಹಡಗು ಮುಳುಗಿದ್ದು, 4 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಇದುವರೆಗೆ 18 ಜನರನ್ನು ರಕ್ಷಿಸಿದೆ. ತೀವ್ರ ಬಿರುಗಾಳಿಯ ನಡುವೆ ಹಡಗು ಸಮತೋಲನ ಕಳೆದುಕೊಂಡು ಮಗುಚಿ ಬಿದ್ದು ಮುಳುಗಿತು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ ಕಾರಣದಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾನ್ ಚಿತ್ರೋತ್ಸವದಲ್ಲಿ ಭಾಷಣ ಮಾಡಲಿರುವ ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ – Kannada News | September 21 movie director Karen Kshiti Suvarna to talk in world woman Cannes agenda

2026ನೇ ಸಾಲಿನ ಕಾನ್ ಚಿತ್ರೋತ್ಸವಕ್ಕೆ (Cannes Film Festival) ಸಿದ್ಧತೆ ನಡೆಯುತ್ತಿದೆ. ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಭಾಗವಹಿಸುವುದು ಎಂದರೆ ಹೆಮ್ಮೆಯೇ ಸರಿ. ಈ ಬಾರಿ ನಡೆಯಲಿರುವುದು 79ನೇ ಕಾನ್ ಚಿತ್ರೋತ್ಸವ. ಅದರ ಅಂಗವಾಗಿ ಆಯೋಜನೆಗೊಳ್ಳಲಿರುವ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಕಾರ್ಯಕ್ರಮದಲ್ಲಿ ಕನ್ನಡದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ (Karen Kshiti Suvarna) ಅವರು ಭಾಷಣ ಮಾಡಲಿದ್ದಾರೆ. 22ರ ಪ್ರಾಯದ ಈ ಯುವ ನಿರ್ದೇಶಕಿಗೆ ಪ್ರತಿಷ್ಠಿತ ಚಿತ್ರೋತ್ಸವದಿಂದ ಆಹ್ವಾನ ಬಂದಿದೆ. ‘ಸೆಪ್ಟೆಂಬರ್ 21’ (September 21) ಸಿನಿಮಾಗೆ ಅವರು ನಿರ್ದೇಶನ ಮಾಡಿದ್ದಾರೆ.

‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಕರೆನ್ ಕ್ಷಿತಿ ಸುವರ್ಣ ಅವರು ಭಾಗವಹಿಸಲಿದ್ದಾರೆ. ಅವರ ಜೊತೆ ಫೋರ್ಬ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮೋಯಿರಾ ಫೋರ್ಬ್ಸ್ ಹಾಗೂ ಇನ್ನಿತರ ಮಹಿಳೆಯರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ವೇದಿಕೆಯಲ್ಲಿ ಕರೆನ್ ಕ್ಷಿತಿ ಸುವರ್ಣ ಏನು ಮಾತನಾಡಲಿದ್ದಾರೆ ಎಂಬ ಕೌತುಕ ಮೂಡಿದೆ.

ಮೇ 12 ಮತ್ತು 13ರಂದು ಕಾನ್ ನಗರದ ಖಾಸಗಿ ಹೋಟೆಲ್​​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಕರೆನ್ ಕ್ಷಿತಿ ಸುವರ್ಣ ಅವರು ಸಿನಿಮಾ, AI ಹಾಗೂ ಸಾಮಾಜಿಕ ಕ್ರಿಯಾಶೀಲತೆ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಮರು-ಪ್ರಸಾರದ ಮೂಲಕ 10 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ತಲುಪಲಿದೆ. ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ‘ಸೆಪ್ಟೆಂಬರ್ 21’ ಸಿನಿಮಾ ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನ ಆಗಲಿದೆ.

‘ಸೆಪ್ಟೆಂಬರ್ 21’ ಚಿತ್ರವು ಹಿಂದಿ ಮತ್ತು ಕನ್ನಡದಲ್ಲಿ ಸಿದ್ಧವಾಗಿದೆ. ಮೇ 16ರಂದ ಸಂಜೆ 5.45ಕ್ಕೆ ಕಾನ್ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಲಿದೆ. ಆಲ್ಜೈಮರ್ ಕಾಯಿಲೆ ಮತ್ತು ಆರೈಕೆದಾರರ ಹೋರಾಟದ ಕುರಿತಾದ ಕಥೆ ಈ ಸಿನಿಮಾದಲ್ಲಿದೆ. ಪ್ರಿಯಾಂಕಾ ಉಪೇಂದ್ರ, ಪ್ರವೀಣ್ ಸಿಂಗ್ ಸಿಸೋಡಿಯಾ, ಝರೀನಾ ವಹಾಬ್, ಅಜಿತ್ ಶಿಧಾಯೆ, ಅಮಿತ್ ಬೆಹ್ಲ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ದಕ್ಷಿಣದ ನಟನ ಬಗ್ಗೆ ಆಲಿಯಾ ಭಟ್ ಮಾತು

ಈ ಮೊದಲು 56ನೇ ಗೋವಾ ಚಿತ್ರೋತ್ಸವದ ‘ವರ್ಕ್-ಇನ್-ಪ್ರೋಗ್ರೆಸ್’ ವಿಭಾಗದಲ್ಲಿ ‘ಸೆಪ್ಟೆಂಬರ್ 21’ ಸಿನಿಮಾ ಪ್ರದರ್ಶನ ಆಗಿತ್ತು. ಮೇ 22ರಂದು ಭಾರತದಲ್ಲಿ ಈ ಸಿನಿಮಾ ತೆರೆಕಾಣಲಿದೆ. ವಿಸಿಕಾ ಫಿಲ್ಮ್ಸ್, ಎಫ್​ಎಂಡಿ ಪ್ರೊಡಕ್ಷನ್ಸ್, ಹಮಾರಾ ಮೂವೀ ಸಂಸ್ಥೆಗಳ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ವಿನಯ್ ಚಂದ್ರ ಅವರು ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಳೆ ಅಬ್ಬರಕ್ಕೆ ಬೆಸ್ಕಾಂಗೆ ಲಕ್ಷಾಂತರ ರೂ. ಹಾನಿ: ವಿದ್ಯುತ್ ಕಂಬಗಳು, ಮರ ಬಿದ್ದಿದ್ದೆಷ್ಟು? – Kannada News | Bescom losses RS 87.32 Lakh for pre monsoon rain In Bengaluru On April 29

ಬೆಂಗಳೂರು, (ಏಪ್ರಿಲ್ 30): ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru)  ನಿನ್ನೆ (ಏಪ್ರಿಲ್ 29) ಒಂದೆರಡು ಗಂಟೆಗಳ ಕಾಲ ಸುರಿದ ಬಿರುಗಾಳಿ ಮಳೆಗೆ 25 ವರ್ಷಗಳ ದಾಖಲೆ ಮುರಿದಿದೆ. ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 2001ರ ಏಪ್ರಿಲ್ 19ರಂದು ನಗರದಲ್ಲಿ 108.6 ಮಿಲಿ ಮೀಟರ್ ಮಳೆಯಾಗಿತ್ತು. ಆದ್ರೆ, 2026ರ ಏಪ್ರಿಲ್ 29ರಂದು ಬುಧವಾರ ಸುರಿದ ಮಳೆಯು 111.5 ಮಿಲಿ ಮೀಟರ್ ಆಗಿದೆ. ಈ ಮೂಲಕ 25 ವರ್ಷಗಳ ಬಳಿಕ ಏಪ್ರಿಲ್​ನಲ್ಲಿ ಸುರಿದ ದಾಖಲೆಯ ವರ್ಷಧಾರೆಯಾಗಿದೆ.  ಇದರಿಂದ ನಗರದಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿದ್ದು, ಒಂದೇ ಮಳೆಗೆ ಬೆಸ್ಕಾಂಗೆ (Bescom) 87.32 ಲಕ್ಷ ರೂ. ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಬೆಸ್ಕಾಂಗೆ 87.32 ಲಕ್ಷ ರೂ. ಹಾನಿ

ಏಪ್ರಿಲ್ 29ರ ಸಂಜೆ ಸುರಿದ ಗಾಳಿಸಹಿತ ಭಾರೀ ಮಳೆಗೆ ಬೆಸ್ಕಾಂಗೆ ಭಾರೀ ನಷ್ಟವಾಗಿದೆ. ಮರ, ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಉರುಳಿ ಬರೋಬ್ಬರಿ 87.32 ಲಕ್ಷ ರೂಪಾಯಿನಷ್ಟು ಹಾನಿಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 186 ವಿದ್ಯುತ್ ಕಂಬಗಳು, 38 ಟ್ರಾನ್ಸ್ ಫಾರ್ಮರ್ಸ್, 0.9 ಕಿಮೀ ಉದ್ದದ ವಿದ್ಯುತ್ ತಂತಿಗಳು ಹಾನಿಯಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲೇ 50.52 ಲಕ್ಷ ರೂಪಾಯಿ ನಷ್ಟವಾಗಿದೆ. ಇದೀಗ ಸಮರ್ಪಕ ವಿದ್ಯುತ್ ವ್ಯವಸ್ಥೆ ಮರುಸ್ಥಾಪಿಸಲು ಬೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಳೆ ಅಬ್ಬರ: ಅವಾಂತರಗಳ ಬೆನ್ನಲ್ಲೇ ಅಗತ್ಯ ಕ್ರಮಕ್ಕೆ ಮುಂದಾದ ಜಿಬಿಎ

ಮಳೆಗೆ ಬೆಂಗಳೂರಿನಲ್ಲಿ ಅಸ್ತವ್ಯಸ್ತ

ಬುಧವಾರ ಸಂಜೆ ಸುರಿದ ಬಿರುಗಾಳಿ ಸಮೇತ ಆಲಿಕಲ್ಲು ಮಳೆಗೆ ರಾಜಧಾನಿ ತತ್ತರಿಸಿದೆ. ಸುಮಾರು ಒಂದೂವರೆ ಗಂಟೆಯ ಮಳೆಯಿಂದಾಗಿ 10 ಮಂದಿ ಸಾವನ್ನಪ್ಪಿದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೋರು ಗಾಳಿ-ಮಳೆ ಪರಿಣಾಮ ನಿನ್ನೆಯಿಂದ ಇಂದು ಬೆಳಗ್ಗೆ 9.15ರೊಳಗೆ ಜಿಬಿಎ ವ್ಯಾಪ್ತಿಯಲ್ಲಿ 226 ಮರಗಳು ಧರಾಶಾಹಿಯಾಗಿವೆ. 623 ಮರದ ಕೊಂಬೆಗಳು ಉರುಳಿ ಬಿದ್ದಿವೆ. ಬೃಹದಾಕಾರದ ಮರ ಹಾಗೂ ಅದರ ಕೊಂಬೆಗಳು ಏಕಾಏಕಿ ಬಿದ್ದಿದ್ದರಿಂದ ಅವುಗಳ ಕೆಳಗೆ ನಿಲ್ಲಿಸಿದ್ದ ಹಾಗೂ ಚಲಿಸುತ್ತಿದ್ದ ವಾಹನಗಳು ಹಾನಿಗೊಳಗಾಗಿದ್ದು, ಮಳೆ ನೀರಿನ ರಭಸಕ್ಕೆ ರಸ್ತೆ ಇಕ್ಕೆಲ್ಲಗಳಲ್ಲಿ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತವಾಗಿದೆ.

ಯಾವ ಪಾಲಿಕೆಯಲ್ಲಿ ಎಷ್ಟೆಷ್ಟು ಮರಗಳು ಬಿದ್ದಿವೆ?

ಐದು ಪಾಲಿಕೆಗಳ ಪೈಕಿ ಬೆಂಗಳೂರು ಪಶ್ಚಿಮ ವಿಭಾಗ ಪಾಲಿಕೆಯಲ್ಲಿ 101 ಮರಗಳು ಉರುಳಿಬಿದ್ದರೆ, 313 ಕಡೆಗಳಲ್ಲಿ ಮರದ ಕೊಂಬೆಗಳು ನೆಲಕ್ಕೆ ಮುಖಮಾಡಿವೆ. ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ 70 ಕಡೆ ಮರಗಳು ಬಿದ್ದರೆ, 131 ಕಡೆಗಳಲ್ಲಿ ಕೊಂಬೆಗಳು ಉರುಳಿವೆ. ಬೆಂಗಳೂರು ದಕ್ಷಿಣದಲ್ಲಿ 26 ಮರಗಳು ಹಾಗೂ 95 ಕಡೆಗಳಲ್ಲಿ ಕೊಂಬೆಗಳು ಉರುಳಿಬಿದ್ದಿವೆ. ಒಟ್ಟಾರೆ 226 ಕಡೆಗಳಲ್ಲಿ ಮರಗಳು ಬಿದ್ದ ಪೈಕಿ, 138 ಕಡೆಗಳಲ್ಲಿ ಅವುಗಳನ್ನು ತೆರವುಗೊಳಿಸಿದರೆ, 623 ಮರದ ಕೊಂಬೆ ಬಿದ್ದ ಪೈಕಿ 308 ಕಡೆಗಳಲ್ಲಿ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಟ್ರೋಲ್ ರೂಮ್​​ಗಳಿಗೆ ದೂರು

ಪಂಚ ಪಾಲಿಕೆಗಳ ಕಂಟ್ರೋಲ್ ರೂಮ್​​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಂದ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವ ಬಗ್ಗೆ ದೂರುಗಳು ಬಂದರೆ, 68 ಕರೆಗಳು ಜಲಾವೃತವಾಗಿರುವ ಸಂಬಂಧ ದೂರುಗಳು ಬಂದಿವೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿ: ಲಕ್ಷ್ಮೀನರಸಿಂಹ ಟಿವಿ9,ಬೆಂಗಳೂರು

Published On – 8:27 pm, Thu, 30 April 26

Source link

ಅತಿಥಿಗಳ ನಡುವೆ ಕೂಲರ್​​ಗಾಗಿ ಜಗಳ; ಸಾವಿನ ಮನೆಯಾದ ಮದುವೆಮನೆ – Kannada News | Uttar Pradesh Wedding guests fight over air cooler 1 dead 4 injured in Azamgarh

ನವದೆಹಲಿ, ಏಪ್ರಿಲ್ 30: ಉತ್ತರ ಪ್ರದೇಶದ (Uttar Pradesh) ಅಜಮ್‌ಗಢದಲ್ಲಿ ಮದುವೆಯೊಂದು ದುರಂತವಾಗಿ ಬದಲಾಗಿದೆ. ಮದುವೆಯ ಪಾರ್ಟಿಯಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ ಜಿಯಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ನಗರದ ಪ್ರದೇಶದಲ್ಲಿ ಮದುವೆ (Wedding) ನಡೆಯುತ್ತಿತ್ತು. ವಧು-ವರರ ಕುಟುಂಬದ ನಡುವೆ ಕ್ಷುಲ್ಲಕ ವಿಷಯಕ್ಕೆ ವಿವಾದ ಪ್ರಾರಂಭವಾಯಿತು.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವರನ ಕಡೆಯ ಕೆಲವರು ಮತ್ತು ವಧುವಿನ ಕಡೆಯ ಕೆಲವರು ಡೆಸರ್ಟ್ ಕೂಲರ್ ತಮ್ಮ ಕಡೆಗೆ ತಿರುಗಬೇಕು ಎಂದು ವಾದ ಮಾಡತೊಡಗಿದರು. ಸೆಖೆ ಜಾಸ್ತಿ ಇದ್ದುದರಿಂದ ತಮ್ಮ ಕಡೆ ಕೂಲರ್ ಇಡಬೇಕೆಂದು ಜಗಳವಾಡಿದರು. ಈ ಜಗಳ ಕ್ರಮೇಣ ತಾರಕಕ್ಕೇರಿತು. 26 ವರ್ಷದ ಅಮೀರ್ ಚಂದ್ರ ಸಹಾನಿ ಎಂಬ ವ್ಯಕ್ತಿ ಘರ್ಷಣೆಯ ಸಮಯದಲ್ಲಿ ಸಾವನ್ನಪ್ಪಿದರು. ಗಂಭೀರವಾಗಿ ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ 4 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಅಜಮ್‌ಗಢ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಘರ್ಷಣೆಯಲ್ಲಿ ಭಾಗಿಯಾಗಿದ್ದ ಕೆಲವು ಜನರನ್ನು ಅವರು ಬಂಧಿಸಿದ್ದಾರೆ. ಮೃತರ ತಂದೆ ಕೂಡ ಎಫ್‌ಐಆರ್ ದಾಖಲಿಸಿದ್ದಾರೆ. ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ಆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ಘರ್ಷಣೆ ನಡೆದ ಪ್ರದೇಶದಲ್ಲಿ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಮದುವೆಯ ಡಿಜೆ ಸೌಂಡ್​​ನಿಂದ 140 ಕೋಳಿಗಳಿಗೆ ಹೃದಯಾಘಾತ!

ಅಮೀರ್ ಚಂದ್ರ ಸಹಾನಿ ಸ್ಥಳದಲ್ಲೇ ಸಾವನ್ನಪ್ಪಿದರೆ, ವರನ ಕಡೆಯವರಾದ ರಾಜ್‌ಕುಮಾರ್ ಸಹಾನಿ, ಅಭಿಲಾಷ್ ಸಹಾನಿ ಮತ್ತು ಸಾಹಿಲ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs RCB: 4,4,4,4,4.. ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಕೊಹ್ಲಿ – Kannada News | IPL 2026: Virat Kohli’s Explosive Start vs GT; 5 Fours in Rabada Over for RCB

ಐಪಿಎಲ್ 2026 ರ 42ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಲೀಗ್​ನಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿಗೆ ಮೊದಲ ಎರಡು ಓವರ್​​ಗಳಲ್ಲಿ ಸ್ಫೋಟಕ ಆರಂಭ ಸಿಕ್ಕಿತು. ಅದರಲ್ಲೂ ರಬಾಡ ಬೌಲ್ ಮಾಡಿದ 2ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಬೌಂಡರಿಗಳ ಮಳೆಗರೆದರು.

ಈ ಪಂದ್ಯದಲ್ಲಿ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಬೆಥೆಲ್ ಇನ್ನಿಂಗ್ಸ್ ಆರಂಭಿಸಿದರು. ಗುಜರಾತ್ ಪರ ಸಿರಾಜ್ ಎಸೆದ ಮೊದಲ ಓವರ್​ನಲ್ಲಿ 1 ಬೌಂಡರಿ ಸಹಿತ 6 ರನ್​ಗಳು ಬಂದವು. ಎರಡನೇ ಓವರ್​ನಲ್ಲಿ ಸ್ಟ್ರೇಕ್​ಗೆ ಬಂದ ವಿರಾಟ್ ಕೊಹ್ಲಿ, ರಬಾಡ ಬೌಲ್ ಮಾಡಿದ ಎರಡನೇ ಓವರ್​ನ ಮೊದಲ ಐದು ಎಸೆತಗಳಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ಸತತ 5 ಎಸೆತಗಳಲ್ಲಿ ಐದು ಬೌಂಡರಿಗಳನ್ನು ಬಾರಿಸಿದ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಕೊಹ್ಲಿಯೂ ಸೇರಿಕೊಂಡರು.

ಆದಾಗ್ಯೂ ಈ ಪಂದ್ಯದಲ್ಲಿ ಕೊಹ್ಲಿಗೆ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ. ರಬಾಡ ಬೌಲ್ ಮಾಡಿದ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಕೊಹ್ಲಿ 13 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 28 ರನ್ ಬಾರಿಸಿ ಔಟಾದರು.

Source link

ಬೆಂಗಳೂರು ಮಳೆ ಅಬ್ಬರ: ಅವಾಂತರಗಳ ಬೆನ್ನಲ್ಲೇ ಅಗತ್ಯ ಕ್ರಮಕ್ಕೆ ಮುಂದಾದ ಜಿಬಿಎ – Kannada News | Bengaluru Monsoon Preparedness: GBA’s Proactive Steps for Rain Management and Flood Prevention

ಬೆಂಗಳೂರು, ಏಪ್ರಿಲ್​ 30: ನಗರದಲ್ಲಿ ನಿನ್ನೆ ಸಂಜೆ ಸುರಿದ ಆಲಿಕಲ್ಲು ಸಹಿತ ಧಾರಾಕಾರ ಮಳೆ (Rain) ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಳೆಯ ಆರ್ಭಟಕ್ಕೆ ಹಲವು ಜನರು ಬಲಿಯಾಗಿದ್ದು, ಎಲ್ಲೆಡೆ  ಅವಾಂತರಗಳು ಸಂಭವಿಸಿವೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಮುಂಬರುವ ದಿನಗಳಲ್ಲಿ ಮಳೆಯ ಅನಾಹುತಗಳನ್ನು ತಡೆಗಟ್ಟಲು ಯುದ್ಧೋಪಾದಿಯಲ್ಲಿ ಸಿದ್ಧತೆಯನ್ನು ನಡೆಸಿದೆ.

ಮುನ್ನೆಚ್ಚರಿಕೆ ಕ್ರಮಗಳಿಗೆ ಜಿಬಿಎ ಸಜ್ಜು

  • ಪ್ರಾಥಮಿಕ ಮತ್ತು ದ್ವಿತೀಯ ಹಂತದ ಮಳೆ ನೀರುಗಾಲುವೆಗಳ ಡೀಸಿಲ್ಡಿಂಗ್ ಹಾಗೂ ಪುನಚೇತನ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವುದು.
  • ವಿಶ್ವ ಬ್ಯಾಂಕ್ ನೆರವಿನ 173 ಕಿ.ಮೀ ಹೊಸ ಮಳೆ ನೀರುಗಾಲುವೆ ತಡೆಗೋಡೆ ಕೆಲಸಗಳು ಮತ್ತು 83 ಕಿ.ಮೀ ಮೇಲ್ದರ್ಜೇಗೇರಿಸುವ ಕಾಮಗಾರಿಗಳು ಪ್ರಗತಿಯಲ್ಲಿದೆ.
  • ಎನ್.ಡಿ.ಎಂ.ಎಫ್ ಅನುದಾನದಲ್ಲಿ 31 ಅವಶ್ಯಕ ಸ್ಥಳಗಳಲ್ಲಿ ಕಲ್ವರ್ಟ್‌ಳ ನಿರ್ಮಾಣ.
  • ಕೆರೆಗಳಲ್ಲಿ ನೀರು ನಿಯಂತ್ರಿಸಲು 127 ಕಡೆ ಸ್ಫೂಯೀಸ್ ಗೇಟ್‌ಗಳ ಅಳವಡಿಕೆ.
  • ಹೆಚ್ಚುವರಿ ಪಕ್ಕದ ಚರಂಡಿಗಳು ಹಾಗೂ ಕ್ರಾಸ್-ಡ್ರೈನೇಜ್ ಕಾಮಗಾರಿಗಳನ್ನು ನಿರ್ಮಿಸುವುದು.
  • ಪ್ರಮುಖ ಪ್ರದೇಶಗಳಲ್ಲಿ ಗ್ರೇಟೆಡ್ ಇನ್‌ಲೆಟ್‌ಗಳು ಮತ್ತು ಸಿಲ್ಟ್ ಟ್ರ್ಯಾಪ್‌ಗಳನ್ನು ಅಳವಡಿಸುವುದು.
  • ಮುಂಗಾರು ಪೂರ್ವ ಡೀಸಿಲ್ಟಂಗ್ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದು.
  • ಅತಿಸೂಕ್ಷ್ಮ ಪ್ರದೇಶಗಳಲ್ಲಿ ತಂಡಗಳ ನಿಯೋಜಿಸುವುದು.

ಮಳೆಯಿಂದ ಹಾನಿಯಾದ ವಿವರ 

ಇನ್ನು ಜಿಬಿಎ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸುರಿದ ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆಯ ಮತ್ತು ಹಾನಿಯ ಮಾಹಿತಿಯನ್ನು ಜಿಬಿಎ ನೀಡಿದೆ.

  • ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾಟನ್‌ಪೇಟೆ, ಬಿನ್ನಿಪೇಟೆ, ಸಂಪಂಗಿರಾಮನಗರ, ಶಿವಾಜಿನಗರ ಹಾಗೂ ಸುಭಾಷ್ ನಗರ ವಾರ್ಡ್‌ಗಳಲ್ಲಿ 92.00 ಮಿ.ಮೀ ಮಳೆ ದಾಖಲಾಗಿದೆ.
  • ಬೆಂಗಳೂರು ಉತ್ತರ ನಗರ ಪಾಲಿಕೆಯ ಕೆಲವು ಪ್ರದೇಶಗಳಲ್ಲಿ ಕನಿಷ್ಠ 15.00 ಮಿ.ಮೀ ಮಳೆ, ಒಟ್ಟಾರೆ ಸರಾಸರಿ 55.00 ಮಿ.ಮೀ ಮಳೆ ಸುರಿದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯಿಂದ ಅವಾಂತರ ಬೆನ್ನಲ್ಲೇ ಸರ್ಕಾರ ಅಲರ್ಟ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

  • ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 226 ಮರಗಳು ಧರೆಗುರುಳಿವೆ. 623 ಕೊಂಬೆಗಳು ಮುರಿದು ಬಿದ್ದಿವೆ.
  • ನಗರ ಪಾಲಿಕೆಗಳ ವತಿಯಿಂದ 30 ತಂಡಗಳು ಹಾಗೂ ನಾಲ್ಕು ಕ್ರೇನ್‌ಗಳನ್ನು ತೆರವು ಕಾರ್ಯಕ್ಕಾಗಿ ನಿಯೋಜಿಸಲಾಗಿದ್ದು, ಅಗ್ನಿಶಾಮಕ ಇಲಾಖೆಯಿಂದ 15 ತಂಡಗಳು, ಎಸ್‌.ಡಿ.ಆರ್‌.ಎಫ್​ನಿಂದ 4 ತಂಡಗಳು ಹಾಗೂ ಹೆಚ್ಚುವರಿಯಾಗಿ 10 ಖಾಸಗಿ ತಂಡಗಳನ್ನು ಬಾಡಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ.
  • ಧರೆಗುರುಳಿದ ಮರಗಳು ಹಾಗೂ ರೆಂಬೆಗಳ ಪೈಕಿ ಮಧ್ಯಾಹ್ನ 12:30ರ ವೇಳೆಗೆ 150 ಮರಗಳು ಹಾಗೂ 384 ರೆಂಬೆಗಳನ್ನು ತೆರವುಗೊಳಿಸಲಾಗಿದ್ದು, ಉಳಿದ ತೆರವು ಕಾರ್ಯ ಸಕ್ರಿಯವಾಗಿ ಮುಂದುವರಿದಿದೆ.
  • ನಗರದಾದ್ಯಂತ 62ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವ ಕುರಿತು ಸಾರ್ವಜನಿಕರಿಂದ ಮಾಹಿತಿ ಬಂದಿದೆ.
  • 3 ಕಡೆ ಗೋಡೆ ಕುಸಿತ, 105 ಕಡೆ ಮನೆಗಳಿಗೆ ನೀರು ನುಗ್ಗಿರುವುದು ಹಾಗೂ 1 ಕಡೆ ಮೂಲಸೌಕರ್ಯ ಹಾನಿ ಆಗಿದೆ.
  • ಕೆ.ಆರ್ ವೃತ್ತ, ಮಡಿವಾಳ, ಸ್ಯಾಂಕಿ ರಸ್ತೆ, ಜಯದೇವ, ಯಮಲೂರು, ಶಂಕರನಾಗ್, ಟ್ಯಾನರಿ ರಸ್ತೆ ಹಾಗೂ ನಾಯಂಡಹಳ್ಳಿ ಕೆಳಸೇತುವೆ ಪ್ರದೇಶಗಳಲ್ಲಿ ನೀರು ತುಂಬಿದ್ದು, ಅಗತ್ಯವಿರುವ ಸ್ಥಳಗಳಲ್ಲಿ ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯಕೈಗೊಳ್ಳಲಾಗಿದೆ.
  • ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತದಿಂದ 7 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ಸಮೀಪ ಮಳೆಯ ವೇಳೆ ವಿದ್ಯುತ್ ತಂತಿ ತಗುಲಿ ಜೆ.ಡಿ. ಮರ ಕೊಳಗೇರಿ ನಿವಾಸಿ 35 ವರ್ಷದ ರಘು ಮೃತಪಟ್ಟಿದ್ದು, ಅವರ ಕುಟುಂಬಕ್ಕೂ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ.

ಇದನ್ನೂ ಓದಿ: ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು

  • ಮಳೆಯ ಪರಿಣಾಮ 186 ಕಡೆ ವಿದ್ಯುತ್ ಕಂಬಗಳು ಹಾಗೂ 36 ಕಡೆ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದೆ. ಬೆಸ್ಕಾಂ ಇಲಾಖೆಯಿಂದ ಈಗಾಗಲೇ 112 ವಿದ್ಯುತ್ ಕಂಬಗಳು ಹಾಗೂ 18 ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version