ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ ಸಿದ್ಧತೆ: ಇಂದೇ ನಿಲುವಳಿ ನೋಟಿಸ್​​? – Kannada News | Karnataka Council Politics: Congress Prepares No Confidence Motion Against Chairman Basavaraj Horatti

ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್​​ ಸಿದ್ಧತೆImage Credit source: IamMGoudar X Account

ಬೆಂಗಳೂರು, ಆಗಸ್ಟ್​​ 07: ಕರ್ನಾಟಕ ವಿಧಾನ ಪರಿಷತ್​​ ಸಭಾಪತಿ ವಿಚಾರದಲ್ಲಿ ರಾಜಕೀಯ ಹೈಡ್ರಾಮಾಗಳು ಮುಂದುವರಿದಿವೆ. ಇಂದು ಕಾಂಗ್ರೆಸ್​​ ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್ ನೀಡುವ ಸಾಧ್ಯತೆ ಹಿನ್ನೆಲೆ ಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದಾರೆ. ತಮ್ಮ ಸ್ಥಾನಕ್ಕೆ ಆಗಸ್ಟ್​​ 14ರಂದು ರಾಜೀನಾಮೆ ನೀಡೋದಾಗಿ ಹೇಳಿದ್ದ ಹೊರಟ್ಟಿ, ಇದೀಗ ರಾಜೀನಾಮೆಗೆ ಸಮಯಾವಕಾಶ ಬೇಕು ಎಂದಿದ್ದಾರೆ ಎನ್ನಲಾಗಿದೆ. ಇನ್ನು ಡಿಕೆಶಿ ಭೇಟಿ ಬಳಿಕ ಅಸಮಾಧಾನದಿಂದಲೇ ಸಿಎಂ ನಿವಾಸದಿಂದ ಹೊರಟ್ಟಿ ಹೊರ ಬಂದ ದೃಶ್ಯಗಳು ಕೂಡ ಕಂಡುಬಂದಿವೆ.

‘ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ’

ಇನ್ನು ಸಿಎಂ ಡಿಕೆಶಿ ಭೇಟಿ ವಿಚಾರ ಸಂಬಂಧ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಮೊನ್ನೆ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ. ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ರೆ ಮಂಡಿಸಲಿ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ಬೆಂಗಳೂರಿನ ಸದಾಶಿವನಗರದ ಸಿಎಂ ಡಿಕೆಶಿ ನಿವಾಸದ ಬಳಿ ಹೇಳಿದ್ದಾರೆ.

ಇದನ್ನೂ ಓದಿ: ಸಭಾಪತಿ ಹುದ್ದೆ ತೊರೆಯಲು ಮುಂದಾದ ಬಸವರಾಜ ಹೊರಟ್ಟಿ: ಆಗಸ್ಟ್ 14ರಂದು ರಾಜೀನಾಮೆಗೆ ನಿರ್ಧಾರ

ಕಾಂಗ್ರೆಸ್​​ ಮುಂದಿನ ನಡೆ ಏನು?

ರಾಜೀನಾಮೆ ಬಗ್ಗೆ ಹೊರಟ್ಟಿ ಅಡ್ಡಗೋಡೆ ಮೇಲೆ ದೀಪವಿಟ್ಟಿರುವ ಕಾರಣ, ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಬಸವರಾಜ ಹೊರಟ್ಟಿ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದು, ಬಿಜೆಪಿ ನಾಯಕರ ಜೊತೆಗೆ ಚರ್ಚಿಸಿ ಎಲ್ಲವನ್ನೂ ನಿರ್ಣಯಿಸುತ್ತಿದ್ದಾರೆ. ಅಲ್ಲದೆ ಸಭಾಪತಿ ಹೊರಟ್ಟಿ ಅವಧಿಯಲ್ಲಿ ಅಕ್ರಮ ನೇಮಕಾತಿ ಆಗಿದ್ದು, ಪರಿಷತ್​ನ 8 ಸಿಬ್ಬಂದಿ ನೇಮಕದ ಅಕ್ರಮದಲ್ಲಿ ಹೊರಟ್ಟಿ ಪಾತ್ರವಿದೆ ಎಂಬ 2 ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಅವಿಶ್ವಾಸ ನಿರ್ಣಯ ಮಂಡನೆಗೆ ಆಡಳಿತ ಪಕ್ಷ ಸಿದ್ಧತೆ ನಡೆಸಿದೆ. ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್​ಗೆ ಅದಾಯಲೇ ಐವನ್ ಡಿಸೋಜಾ ತಯಾರಿ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Hindu Symbol: ಸ್ವಸ್ತಿಕದ ಎರಡೂ ಬದಿಗಳಲ್ಲಿ ಎರಡು ನೇರ ರೇಖೆ ಏಕೆ ಎಳೆಯಲಾಗುತ್ತದೆ? ಆಧ್ಯಾತ್ಮಿಕ ರಹಸ್ಯ ಇಲ್ಲಿದೆ – Kannada News | Swastika’s Hidden Meaning: Why Two Lines Are Drawn Beside This Sacred Hindu Symbol

ಸ್ವಸ್ತಿಕದ ಎರಡೂ ಬದಿಗಳಲ್ಲಿ ಎರಡು ನೇರ ರೇಖೆImage Credit source: shutterstock.com

ಸನಾತನ ಧರ್ಮದಲ್ಲಿ, ಯಾವುದೇ ಶುಭ ಕಾರ್ಯ, ಹೊಸ ವ್ಯವಹಾರ ಅಥವಾ ಪೂಜಾ ಕೈಂಕರ್ಯಗಳನ್ನು ಪ್ರಾರಂಭಿಸುವ ಮೊದಲು ಸ್ವಸ್ತಿಕವನ್ನು ಚಿತ್ರಿಸುವ ಸಂಪ್ರದಾಯವು ಶತಮಾನಗಳಿಂದಲೂ ನಡೆದು ಬಂದಿದೆ. ಸ್ವಸ್ತಿಕವನ್ನು ವಿಘ್ನನಿವಾರಕ ಶ್ರೀ ಗಣೇಶನ ಗೋಚರ ಸಂಕೇತ ಹಾಗೂ ಸಕಾರಾತ್ಮಕ ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಮನೆಯ ಮುಖ್ಯ ದ್ವಾರ, ತಿಜೋರಿ, ವಾಹನಗಳು ಅಥವಾ ಪೂಜಾ ತಟ್ಟೆಯ ಮೇಲೆ ಸ್ವಸ್ತಿಕವನ್ನು ಬರೆಯುವಾಗ, ಅದರ ಎರಡು ಬದಿಗಳಲ್ಲಿ ಎರಡು ನೇರ ಲಂಬ ರೇಖೆಗಳನ್ನು ಎಳೆಯುವುದನ್ನು ನೀವು ಗಮನಿಸಿರಬಹುದು. ಬರಿ ಸ್ವಸ್ತಿಕವನ್ನು ಬರೆಯುವುದಕ್ಕಿಂತ ಈ ರೇಖೆಗಳನ್ನು ಎಳೆಯುವುದರ ಹಿಂದೆ ಆಳವಾದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವಾಸ್ತು ಆಧಾರಿತ ರಹಸ್ಯಗಳಿವೆ.

ಋದ್ಧಿ-ಸಿದ್ಧಿ ಮತ್ತು ಶುಭ-ಲಾಭ ದೈವಿಕ ಶಕ್ತಿಗಳ ಸಂಕೇತ:

ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಸ್ವಸ್ತಿಕವನ್ನು ಗಣಪತಿಯ ಸಾಕ್ಷಾತ್ ಸ್ವರೂಪವೆಂದು ಭಾವಿಸಲಾಗುತ್ತದೆ. ಸ್ವಸ್ತಿಕದ ಪಕ್ಕದಲ್ಲಿ ಎಳೆಯುವ ಎರಡು ಲಂಬ ರೇಖೆಗಳು ಗಣೇಶನ ಧರ್ಮಪತ್ನಿಯರಾದ ಋದ್ಧಿ (ಸಮೃದ್ಧಿ) ಮತ್ತು ಸಿದ್ಧಿ (ಜ್ಞಾನ/ಸಫಲತೆ) ಯ ಸಂಕೇತಗಳಾಗಿವೆ. ಹಾಗೆಯೇ, ಮತ್ತೊಂದು ಬದಿಯ ರೇಖೆಗಳು ಗಣೇಶನ ಪುತ್ರರಾದ ಶುಭ ಮತ್ತು ಲಾಭಗಳನ್ನು ಪ್ರತಿನಿಧಿಸುತ್ತವೆ. ಸ್ವಸ್ತಿಕದ ಎರಡೂ ಬದಿಗಳಲ್ಲಿ ಈ ರೇಖೆಗಳನ್ನು ಎಳೆಯುವುದರಿಂದ ಮನೆಯಲ್ಲಿ ಸಮೃದ್ಧಿ, ಸಫಲತೆ ಮತ್ತು ಲಾಭಗಳು ಶಾಶ್ವತವಾಗಿ ನೆಲೆಸುತ್ತವೆ ಎಂಬ ಆಳವಾದ ನಂಬಿಕೆಯಿದೆ.

ಧನಾತ್ಮಕ ಶಕ್ತಿಯನ್ನು ಬಂಧಿಸಿಡುವ ರಕ್ಷಾ ಕವಚ:

ವಾಸ್ತು ಮತ್ತು ಶಕ್ತಿ ವಿಜ್ಞಾನದ ಪ್ರಕಾರ, ಸ್ವಸ್ತಿಕವು ಅಪಾರ ಪ್ರಮಾಣದ ಸಕಾರಾತ್ಮಕ ಶಕ್ತಿಯನ್ನು (Positive Energy) ತನ್ನತ್ತ ಆಕರ್ಷಿಸುತ್ತದೆ. ಬರಿ ಸ್ವಸ್ತಿಕವನ್ನು ಬರೆದಾಗ ಆ ದೈವಿಕ ಶಕ್ತಿಯು ಸುತ್ತಲೂ ಹರಡಿ ಚದುರಿಹೋಗುವ ಸಾಧ್ಯತೆಯಿರುತ್ತದೆ. ಆದರೆ, ಎರಡೂ ಬದಿಗಳಲ್ಲಿ ನೇರ ರೇಖೆಗಳನ್ನು ಎಳೆದಾಗ, ಅದು ಆ ಸಕಾರಾತ್ಮಕ ಶಕ್ತಿಯನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಬಂಧಿಸಿಡುತ್ತದೆ (Energy Boundary). ಇದರಿಂದ ಆ ಸ್ಥಳದಲ್ಲಿ ಸುದೀರ್ಘ ಕಾಲ ಧನಾತ್ಮಕ ಸ್ಪಂದನಗಳು ನೆಲೆಸಿ, ನಕಾರಾತ್ಮಕ ಶಕ್ತಿಗಳು (Negative Energy) ಪ್ರವೇಶಿಸದಂತೆ ತಡೆಯುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಪೂರ್ಣತೆಯ ಸಂಕೇತ ಮತ್ತು ಮಂಗಳಕರ ವಾತಾವರಣ:

ಶಾಸ್ತ್ರಗಳ ಪ್ರಕಾರ, ಬರಿ ಸ್ವಸ್ತಿಕವನ್ನು ಎಳೆಯುವುದು ಆಧ್ಯಾತ್ಮಿಕವಾಗಿ ಅಸಂಪೂರ್ಣ ಅಥವಾ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಎರಡೂ ಬದಿಗಳಲ್ಲಿ ಎರಡು ರೇಖೆಗಳನ್ನು ಎಳೆದಾಗ ಮಾತ್ರ ಸ್ವಸ್ತಿಕ ರಚನೆಯ ಪ್ರಕ್ರಿಯೆಯು ‘ಪೂರ್ಣ’ಗೊಳ್ಳುತ್ತದೆ. ಹೀಗೆ ಪೂರ್ಣಗೊಂಡ ಸ್ವಸ್ತಿಕವು ಮಂಗಳಕರ ವಾತಾವರಣವನ್ನು ಸೃಷ್ಟಿಸಿ, ಮನೆಯಲ್ಲಿ ಕೈಗೊಂಡ ಪ್ರತಿಯೊಂದು ಶುಭ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಪೂರ್ಣಗೊಳ್ಳಲು ಅನುವು ಮಾಡಿಕೊಡುತ್ತದೆ.

ನಾಲ್ಕು ಪುರುಷಾರ್ಥಗಳ ಸಮತೋಲನ ಮತ್ತು ರಕ್ಷಣೆ:

ಮಾನವ ಜೀವನದ ನಾಲ್ಕು ಮುಖ್ಯ ಗುರಿಗಳಾದ ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳನ್ನು ಸ್ವಸ್ತಿಕದ ನಾಲ್ಕು ಭುಜಗಳು ಸೂಚಿಸುತ್ತವೆ. ಇವುಗಳನ್ನು ಜೀವನದಲ್ಲಿ ಸಮತೋಲನದಲ್ಲಿಟ್ಟು ಕಾಪಾಡುವ ದೈವಿಕ ರಕ್ಷಾ ಕವಚವಾಗಿ ಸ್ವಸ್ತಿಕದ ಪಕ್ಕದಲ್ಲಿರುವ ಈ ಲಂಬ ರೇಖೆಗಳು ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮನೆ ಅಥವಾ ಪೂಜಾ ಸ್ಥಳಗಳಲ್ಲಿ ಸ್ವಸ್ತಿಕವನ್ನು ಬರೆಯುವಾಗ ಎಂದಿಗೂ ಬರಿ ಸ್ವಸ್ತಿಕವನ್ನು ಬಿಡದೆ, ಅದರ ಎರಡೂ ಬದಿಗಳಲ್ಲಿ ಜೋಡಿ ನೇರ ರೇಖೆಗಳನ್ನು ಎಳೆಯುವುದರಿಂದ ಮಾತ್ರ ಧರ್ಮಗ್ರಂಥಗಳಲ್ಲಿ ಹೇಳಲಾದ ಸಂಪೂರ್ಣ ಶುಭ ಫಲಗಳು ಲಭಿಸುತ್ತವೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಹಿಳೆಯರ ಶೂ ವಾಸನೆ ನೋಡುವುದೇ ಈತನ ಚಟ, ಸಿಸಿಟಿವಿಯಲ್ಲಿ ಸೆರೆಯಾಯ್ತು ಯುವಕನ ಕೃತ್ಯ – Kannada News | CCTV Catch: Shah Alam Man’s Shoe Sniffing Fetish and Stalking Spree Exposed

ಶಾ ಆಲಂ, ಆಗಸ್ಟ್​ 07: ಕಾಲೇಜು ವಿದ್ಯಾರ್ಥಿನಿ(Student)ಯೊಬ್ಬಳು ಕಳೆದ ಕೆಲವು ತಿಂಗಳುಗಳಿಂದ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ, ತನ್ನ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂಬ ಭೀತಿಯಲ್ಲಿದ್ದಳು. ಆದರೆ, ತನ್ನ ಮನೆಯ ಹೊರಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಕೆಗೆ ಎದುರಾದ ಸತ್ಯ ಆಘಾತಕಾರಿ ಮಾತ್ರವಲ್ಲ, ಅತ್ಯಂತ ವಿಚಿತ್ರವಾಗಿತ್ತು.

ಯುವಕನೊಬ್ಬ ಅಪಾರ್ಟ್‌ಮೆಂಟ್ ಗ್ರಿಲ್ ಮೂಲಕ ಕೈಹಾಕಿ, ಆಕೆಯ ಶೂಗಳನ್ನು (Shoes) ಹೊರತೆಗೆದು ವಾಸನೆ ನೋಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಮಲೇಷ್ಯಾದ ಶಾ ಅಲಂನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾನಸಿಕ ವೈಪರೀತ್ಯ ಮತ್ತು ಸೈಬರ್ ಅಪರಾಧದ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ವಿಶ್ವವಿದ್ಯಾನಿಲಯದ 22 ವರ್ಷದ ವಿದ್ಯಾರ್ಥಿನಿಯೊಬ್ಬಳು ಏಪ್ರಿಲ್ ತಿಂಗಳಿನಿಂದ ತನಗೆ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ನಂಬಿದ್ದಳು.

ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಕಪ್ಪು ಟಿ-ಶರ್ಟ್ ಧರಿಸಿದ್ದ ಯುವಕನೊಬ್ಬ ಬಂದು, ಶೂಗಳನ್ನು ಹಿಡಿದು ವಾಸನೆ ನೋಡುವ ದೃಶ್ಯ ವೈರಲ್ ಆಗಿದೆ. ಆತ ಅದೇ ವಿಶ್ವವಿದ್ಯಾನಿಲಯದ 20 ರಿಂದ 25 ವರ್ಷ ವಯಸ್ಸಿನ ಸಹ-ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಆರೋಪಿ ಕೇವಲ ಶೂ ಮೂಸಿನೋಡುವುದಷ್ಟೇ ಅಲ್ಲದೆ, ಆ ದೃಶ್ಯಗಳನ್ನು ಸ್ವತಃ ವೀಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದದ್ದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿತು.

ಮತ್ತಷ್ಟು ಓದಿ: ಅಪ್ಪನ ಚಿತೆ ಉರಿಯುತ್ತಿದ್ದಾಗ ಇನ್ನೂ ಎಷ್ಟು ಟೈಮ್ ಬೇಕೆಂದು ವಿಡಿಯೋ ಕಾಲ್​ನಲ್ಲಿ ಕೇಳಿದ ಮಗಳು

ಶಾ ಅಲಂ ಪೊಲೀಸ್ ಅಧಿಕಾರಿ ಸರುದಿನ್ ಸಮಾಹ್ ಪ್ರಕಾರ, ಬಂಧಿತ ಯುವಕನಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಹಾಗೂ ಕೃತ್ಯ ಎಸಗುವಾಗ ಆತ ಮದ್ಯ ಸೇವಿಸಿರಲಿಲ್ಲ. ಈ ರೀತಿಯ ವಿಚಿತ್ರ ನಡವಳಿಕೆಗಳು ಮಾನಸಿಕವಾಗಿ ‘ಫೆಟಿಷಿಸಂ’ ಆಗಿರಬಹುದು ಎಂದು ತಜ್ಞರು ಹೇಳಿದ್ದಾಗಿ ತಿಳಿಸಿದ್ದಾರೆ.

ಮಲೇಷ್ಯಾದಲ್ಲಿ ಮೇ 2023 ರಿಂದ ಅನುಷ್ಠಾನಕ್ಕೆ ಬಂದಿರುವ ‘ಸೆಕ್ಷನ್507 ಎ’ ಅಡಿಯಲ್ಲಿ, ಅನುಮತಿಯಿಲ್ಲದೆ ಯಾರನ್ನಾದರೂ ಹಿಂಬಾಲಿಸುವುದು , ಕಿರುಕುಳ ನೀಡುವುದು ಅಥವಾ ವೈಯಕ್ತಿಕ ಗೌಪ್ಯತೆಗೆ ಧಕ್ಕೆ ತರುವುದು ಗಂಭೀರ ಅಪರಾಧ. ಈ ಕಾಯ್ದೆಯಡಿ ತಪ್ಪಿತಸ್ಥರೆಂದು ಸಾಬೀತಾದರೆ ಆರೋಪಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.

ವಿದ್ಯಾರ್ಥಿಗಳ ಸುರಕ್ಷತೆ: ಈ ಘಟನೆಯ ನಂತರ ವಿಶ್ವವಿದ್ಯಾನಿಲಯದ ಆವರಣ ಮತ್ತು ಹಾಸ್ಟೆಲ್‌ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಕಾವಲು ಹೆಚ್ಚಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಇಂಟರ್ನೆಟ್‌ನಲ್ಲಿ ಈ ವೀಡಿಯೊ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ವೈಯಕ್ತಿಕ ವಸ್ತುಗಳನ್ನು ಮುಟ್ಟುವುದು ಮತ್ತು ಖಾಸಗಿತನವನ್ನು ಹಾಳು ಮಾಡುವುದು ಮಾನಸಿಕ ಕಿರುಕುಳದ ಭಾಗವಾಗಿದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ – Kannada News | Last Ashada Friday: Huge Devotee Crowd at Chamundeshwari Temple in Mysuru

ಮೈಸೂರು, ಆಗಸ್ಟ್ 7: ಮೈಸೂರಿನ ನಾಡದೇವಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಭಕ್ತಸಾಗರವೇ ಹರಿದುಬಂದಿದೆ. ಆಷಾಢ ಶುಕ್ರವಾರಕ್ಕೆ ವಿಶೇಷ ಮಹತ್ವವಿರುವುದರಿಂದ, ಈ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಚಾಮುಂಡೇಶ್ವರಿಗೆ ಮಹಾಲಕ್ಷ್ಮಿ ಅಲಂಕಾರವನ್ನು ಮಾಡಲಾಗಿದೆ. ದೇವಿಗೆ ಆಕಾಶ ನೀಲಿ ಬಣ್ಣದ ಸೀರೆಯನ್ನು ಹೊದಿಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ರಾಜಕೀಯ ಗಣ್ಯರು, ಚಲನಚಿತ್ರ ನಟ-ನಟಿಯರು, ಮತ್ತು ಉದ್ಯಮಿಗಳು ಬೆಳ್ಳಂಬೆಳಗ್ಗೆಯೇ ಆಗಮಿಸಿ ದೇವಿಯ ದರ್ಶನ ಪಡೆದರು. ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲು ಪ್ರಾಧಿಕಾರವು ಕ್ರಮ ಕೈಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾಫಿ ಸಾಕ್ಷಿ’ ಭೀತಿ; ಜೈಲಿನಲ್ಲಿ ಊಟ, ನಿದ್ರೆಯಿಲ್ಲದೆ ಕಳೆದ ನಟ ದರ್ಶನ್‌ – Kannada News | Actor Darshan Panics Over Close Aide Pradoosh Approver Plea in Renukaswamy Case

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಈಗ ಹೊಸದೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ, ದರ್ಶನ್ ಆಪ್ತ ಪ್ರದೋಷ್ ಮಾಫಿ ಸಾಕ್ಷಿ ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ತೀರ್ಪು ಇನ್ನಷ್ಟೇ ಬರಬೇಕಿದೆ. ಈ ವಿಚಾರ ಸದ್ಯ ಜೈಲಿನಲ್ಲಿರುವ ದರ್ಶನ್ ನಿದ್ದೆಗೆಡಿಸಿದೆ.

ಆಪ್ತನ ಅರ್ಜಿಯಿಂದ ಜೈಲಿನಲ್ಲಿ ಶುರುವಾಯ್ತು ನಡುಕ

ಪ್ರಕರಣದಲ್ಲಿ ದರ್ಶನ್ ಜೊತೆ ಜೈಲು ಪಾಲಾಗಿರುವ ಅವರ ಆಪ್ತ ಪ್ರದೋಷ್, ಮಾಫಿ ಸಾಕ್ಷಿಯಾಗಲು ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಂತೆಯೇ ದರ್ಶನ್ ಸೇರಿದಂತೆ ಪ್ರಕರಣದ ಇತರ ಆರೋಪಿಗಳ ಎದೆಯಲ್ಲಿ ಆತಂಕ ಶುರುವಾಗಿದೆ. ಸ್ವತಃ ಆಪ್ತನೇ ಸಾಕ್ಷಿಯಾಗಿ ಬದಲಾದರೆ, ಕೇಸ್‌ನ ಭವಿಷ್ಯ ಏನಾಗಬಹುದು? ತಮ್ಮ ವಿರುದ್ಧವೇ ಸಾಕ್ಷ್ಯಗಳು ಗಟ್ಟಿಯಾಗುತ್ತವೆಯೇ ಎಂಬ ಭಯ ದರ್ಶನ್ ಅವರನ್ನು ತೀವ್ರವಾಗಿ ಕಾಡಲಾರಂಭಿಸಿದೆ.

ಊಟ ತೊರೆದು, ಮೌನಕ್ಕೆ ಶರಣಾದ ನಟ

ಈ ಸುದ್ದಿ ತಿಳಿಯುತ್ತಿದ್ದಂತೆಯೇ ನಟ ದರ್ಶನ್ ಜೈಲಿನಲ್ಲಿ ವಿಲವಿಲ ಒದ್ದಾಡುವಂತಾಗಿದೆ. ಗುರುವಾರ ರಾತ್ರಿ ಜೈಲು ಸಿಬ್ಬಂದಿ ನೀಡಿದ ಊಟವನ್ನೂ ಮಾಡದ ದರ್ಶನ್, ತೀವ್ರ ಚಿಂತಾಕ್ರಾಂತರಾಗಿ ಏಕಾಂಗಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಸಹ ಬಂಧಿಗಳ ಜೊತೆಗೂ ಯಾವುದೇ ಮಾತುಕತೆ ನಡೆಸದೆ, ರಾತ್ರಿಯಿಡೀ ನಿದ್ರೆ ಮಾಡದೆ ಜಾಗರಣೆ ಮಾಡಿದ್ದಾರೆ. ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿರುವ ದರ್ಶನ್‌ಗೆ, ಪ್ರದೋಷ್ ಮಾಫಿ ಸಾಕ್ಷಿಯಾಗುವ ನಿರ್ಧಾರ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಇದನ್ನೂ ಓದಿ: ದರ್ಶನ್​​ಗೆ ಶಾಕ್: ರೇಣುಕಾಸ್ವಾಮಿ ಕೇಸ್​​ನಲ್ಲಿ ಮಾಫಿ ಸಾಕ್ಷಿ ಮಾಡಿ; ಕೋರ್ಟ್​​ಗೆ ಎ14 ಪ್ರದೋಶ್ ಮನವಿ

ಬೆಳಗಿನ ಜಾವ ಪತ್ರಿಕೆ ನೋಡಿ ಮತ್ತೆ ಚಿಂತೆ

ಶುಕ್ರವಾರ ಬೆಳಿಗ್ಗೆ ಕೆಲ ಹೊತ್ತು ತಮ್ಮ ಬ್ಯಾರಕ್‌ನಲ್ಲೇ ವಾಕ್ ಮಾಡಿದ ದರ್ಶನ್, ನಂತರ ದೇವರ ಫೋಟೋಗೆ ಕೈಮುಗಿದು ಕಾಫಿ ಕುಡಿದು ಕುಳಿತಿದ್ದರು. ಬಳಿಕ ದಿನಪತ್ರಿಕೆಯನ್ನು ತರಿಸಿ, ಅದರಲ್ಲಿ ಬಂದಿದ್ದ ಮಾಫಿ ಸಾಕ್ಷಿ ಕುರಿತ ಸುದ್ದಿಯನ್ನು ಓದಿದ ಡಿ-ಬಾಸ್, ಮತ್ತೆ ತೀವ್ರ ಆತಂಕಕ್ಕೆ ಒಳಗಾಗಿ ಮೌನಕ್ಕೆ ಜಾರಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಆಪ್ತನ ಈ ನಡೆ ದರ್ಶನ್‌ಗೆ ಒಂದರ ಮೇಲೊಂದರಂತೆ ಸಂಕಷ್ಟ ತಂದೊಡ್ಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಲಕ್ಷಾಂತರ ವಂಚನೆ: ಕನ್ನಡಿಗರನ್ನು ನಿಂದಿಸಿ ಠಾಣೆ ಮುಂಭಾಗವೇ ಕ್ಷಮೆ ಕೇಳಿದ ಮಹಿಳೆ! – Kannada News | Bengaluru Stock Market Fraud: Woman Apologizes for Abusing Kannadigas at Peenya Police Station

ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಲಕ್ಷಾಂತರ ವಂಚನೆ

ಬೆಂಗಳೂರು, ಆಗಸ್ಟ್ 07: ಸ್ಟಾಕ್ ಮಾರ್ಕೆಟ್‌ನಲ್ಲಿ(Stock market) ಹೂಡಿಕೆ ಮಾಡುವ ನೆಪದಲ್ಲಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಇದರ ಬೆನ್ನಲ್ಲೇ, ವಂಚನೆ ಬಗ್ಗೆ ಪ್ರಶ್ನಿಸಲು ಹೋದ ಹೂಡಿಕೆದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕನ್ನಡ ಭಾಷೆಯ ಕುರಿತು ಉದ್ಧಟತನ ಪ್ರದರ್ಶಿಸಿದ್ದ ಮಹಿಳೆಯೊಬ್ಬಳು ಕೊನೆಗೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಕನ್ನಡಿಗರ ಕ್ಷಮೆ ಕೋರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡದಲ್ಲಿ ಮಾತನಾಡಿದ್ದಕ್ಕೆ ನಿಂದನೆ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು. ಕಂಪನಿಯಿಂದ ವಂಚನೆಗೊಳಗಾದ ಹಲವಾರು ಹೂಡಿಕೆದಾರರು ಒಟ್ಟಾಗಿ ಸಂಸ್ಥೆಯ ಪ್ರತಿನಿಧಿಗಳನ್ನು ಪ್ರಶ್ನಿಸಲು ತೆರಳಿದ್ದರು. ಈ ವೇಳೆ ಅಲ್ಲಿಯೇ ಇದ್ದ ಪ್ರಿಯಾಂಕ ಎಂಬ ಮಹಿಳೆ ಹೂಡಿಕೆದಾರರೊಂದಿಗೆ ತೀವ್ರ ಗಲಾಟೆ ಆರಂಭಿಸಿದ್ದಾಳೆ. ಸಂತ್ರಸ್ತರು ಆಕೆಗೆ “ಕನ್ನಡದಲ್ಲಿ ಮಾತನಾಡು” ಎಂದು ಹೇಳಿದ್ದಕ್ಕೆ ಆಕೆ ತೀವ್ರವಾಗಿ ಆಕ್ರೋಶಗೊಂಡಿದ್ದಾಳೆ. ಅಲ್ಲದೆ, “ನನಗೆ ಕನ್ನಡ ಗೊತ್ತಿಲ್ಲ,ಏನ್ ಮಾಡ್ತಿರಾ ಮಾಡ್ಕೊಳಿ” ಎಂದು ಅತ್ಯಂತ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿ ಕನ್ನಡಿಗರನ್ನು ನಿಂದಿಸಿದ್ದಾಳೆ.

ಠಾಣೆ ಮುಂಭಾಗದಲ್ಲೇ ಕ್ಷಮೆಯಾಚನೆ

ಮಹಿಳೆಯ ಈ ಉದ್ಧಟತನ ಮತ್ತು ಸ್ಥಳದಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೀಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕಾನೂನು ಕ್ರಮ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ ಆರೋಪಿ ಮಹಿಳೆ ಪ್ರಿಯಾಂಕ, ಕೊನೆಗೆ ಪೀಣ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಬಹಿರಂಗವಾಗಿ ಕನ್ನಡಿಗರ ಕ್ಷಮೆಯಾಚಿಸಿದ್ದಾಳೆ. “ಮುಂದೆ ಎಂದಿಗೂ ಕನ್ನಡ ಭಾಷೆ ಹಾಗೂ ಕನ್ನಡಿಗರ ವಿಚಾರದಲ್ಲಿ ಇಂತಹ ಅವಾಚ್ಯ ಶಬ್ದಗಳನ್ನು ಬಳಸುವುದಿಲ್ಲ” ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಮತ್ತೊಂದೆಡೆ, ಸ್ಟಾಕ್ ಮಾರ್ಕೆಟ್ ಹೆಸರಿನಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ವಂಚನೆ ಹಗರಣದ ಕುರಿತು ಪೀಣ್ಯ ಠಾಣಾ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Boss Movie Review: ಶಿವಸ್ವಾಮಿ ಕೊಲೆ ರಹಸ್ಯದ ಕಥೆ ‘ಬಾಸ್’ ಹೇಗಿದೆ? ಇಲ್ಲಿದೆ ವಿಮರ್ಶೆ – Kannada News | Boss Movie Review: Controversial Thriller Inspired by High Profile Crime Case Movie Rating

ಒಂದು ಕೊಲೆ ನಡೆದು, ಅದರಲ್ಲಿ ಸೆಲೆಬ್ರಿಟಿಯ ಪಾತ್ರವಿದೆ ಎಂದಾಗ ಅದರಲ್ಲೂ ಆ ಪ್ರಕರಣದ ವಿಚಾರಣೆ ಇನ್ನೂ ಚಾಲ್ತಿಯಲ್ಲಿರುವಾಗ ಆ ಬಗ್ಗೆ ಒಂದಷ್ಟು ಕುತೂಹಲ ಇದ್ದೇ ಇರುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೂ ಹಾಗೆಯೇ ಆಯಿತು. ಏಕೆಂದರೆ ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು ನಟ ದರ್ಶನ್. ಇದೇ ಕಥೆಯನ್ನು ಆಧರಿಸಿ ‘ಬಾಸ್’ ಸಿದ್ಧವಾಗಿದೆ ಎನ್ನಲಾಗಿತ್ತು. ನಿಜಕ್ಕೂ ಸಿನಿಮಾ ಹಾಗೆಯೇ ಇದೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಾಸ್ ಸಿನಿಮಾ ಕಥೆ ಏನು?

ಬೆಂಗಳೂರಿನ ಮೋರಿ ಪಕ್ಕದಲ್ಲಿ ಒಂದು ಹೆಣ ಸಿಗುತ್ತದೆ. ನಾಯಿಗಳು ಅದನ್ನು ಕಚ್ಚಿ ತಿನ್ನುತ್ತಾ ಇರುತ್ತವೆ. ಆ ಬಗ್ಗೆ ಅಪಾರ್ಟ್​​ಮೆಂಟ್ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಪೊಲೀಸರು ಬಂದು ಶವವನ್ನು ತೆಗೆದುಕೊಂಡು ಹೋಗುತ್ತಾರೆ. ಹೆಣವಾಗಿದ್ದು ಯಾರು ಎಂದು ಪೊಲೀಸರು ಚಿಂತಿಸುವಾಗಲೇ ನಾಲ್ಕು ಜನ ಬಂದು ಸರೆಂಡರ್ ಆಗುತ್ತಾರೆ. ನಾವೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾರೆ.

ಇದೇ ಸಮಯಕ್ಕೆ ಪೊಲೀಸರಿಗೆ ಮಂತ್ರಿಯೊಬ್ಬರಿಂದ ಕರೆ ಬರುತ್ತದೆ. ಅಸಲಿ ವಿಷಯ ಬೇರೆಯೇ ಇದೆ ಎಂದು ಹೇಳುತ್ತಾರೆ. ಸರೆಂಡರ್ ಆದವರಿಗೆ ಸರಿಯಾಗಿ ಬೆಂಡೆತ್ತಿದಾಗ ಖ್ಯಾತ ಕ್ರಿಕೆಟರ್ ಬಾಸ್ (ತನುಷ್ ಶಿವಣ್ಣ) ಹೆಸರು ಹೊರಬರುತ್ತದೆ. ಆ ಕೊಲೆ ಹೇಗೆ ನಡೆಯಿತು? ಅದನ್ನು ಅಸಲಿಗೆ ಮಾಡಿದ್ದು ಯಾರು ಎಂಬಿತ್ಯಾದಿ ವಿಷಯಗಳನ್ನು ‘ಬಾಸ್’ ಸಿನಿಮಾದಲ್ಲಿ ಹೇಳಲಾಗಿದೆ.

ವಿವಾದಾತ್ಮಕ ವಿಷಯವೇ ಸಿನಿಮಾ ಆದಾಗ

‘ಬಾಸ್’ ಒಂದು ವಿವಾದಾತ್ಮಕ ವಿಷಯ. ಇದನ್ನು ಹೇಳುವ ರಿಸ್ಕ್​ ಅನ್ನು ಲವ ಅವರು ತೆಗೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಸಾಕಷ್ಟು ಅಡೆತಡೆ ಎದುರಿಸಿದ್ದಾರೆ. ಆದರೆ, ಸಿನಿಮಾ ನೋಡಿದ ಬಳಿಕ ಈ ಸಾಹಸ ಮಾಡುವ ಅಗತ್ಯವಿತ್ತೇ ಎನ್ನುವ ಪ್ರಶ್ನೆ ಮೂಡುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಂಚಿಂಚು ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಅದೇ ಕಥೆಯನ್ನು ಶಿವಸ್ವಾಮಿ ಕೊಲೆ ಪ್ರಕರಣವಾಗಿ ಮಾಡುತ್ತೇನೆ ಎಂಬ ಸಾಹಸವೇಕೆ ಎಂದು ಸಿನಿಮಾ ನೋಡಿದ ಬಳಿಕ ಕೆಲವರಿಗೆ ಅನಿಸಬಹುದು.

‘ಬಾಸ್’ ಸಿನಿಮಾದ ಮೊದಲಾರ್ಧ ರೋಚಕವಾಗಿದೆ. ಕೊಲೆಗೂ ಮೊದಲು ಏನೆಲ್ಲ ಆಯಿತು, ಕೊಲೆಯ ಹಿಂದೆ ಏನೆಲ್ಲ ನಡೆದವು ಎಂಬುದನ್ನು ಇಂಚಿಂಚು ಬಿಚ್ಚಿಟ್ಟಿದ್ದಾರೆ. ಈ ತಂಡ ಕಥೆಯನ್ನು ಕೇವಲ ಕಾಲ್ಪನಿಕ ಎಂದು ಹೇಳಿದೆ. ಆದರೆ, ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಇದು ಕಾಲ್ಪನಿಕ ಕಥೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರಲ್ಲಿ ಅಸಲಿ ವಿಷಯ ಯಾವುದು? ಕಾಲ್ಪನಿಕ ಯಾವುದು ಎಂದು ಜಡ್ಜ್ ಮಾಡೋದು ಕಷ್ಟ. ಅದರಲ್ಲೂ ಪ್ರಕರಣ ಕೋರ್ಟ್​​ನಲ್ಲಿ ವಿಚಾರಣೆಯಲ್ಲಿರುವಾಗ ಬಾಸ್ ಪಾತ್ರ ಇದರಲ್ಲಿ ಏನೂ ಇಲ್ಲ ಎಂಬ ಜಡ್ಜ್​​ಮೆಂಟ್ ಕೊಡುವ ಪ್ರಯತ್ನದ ಬಗ್ಗೆಯೂ ಕೆಲವರಿಗೆ ಅಸಮಾಧಾನ ಮೂಡಬಹುದು.

ಸಂಗೀತ ಇನ್ನಷ್ಟು ಉತ್ತಮವಾಗಿ ಮೂಡಿ ಬಂದಿದ್ದರೆ ‘ಬಾಸ್’ ಸಿನಿಮಾದ ಮತ್ತಷ್ಟು ಪರಿಣಾಮಕಾರಿಯಾಗಿ ಕಾಣಿಸುತ್ತಿತ್ತು. ಈ ಚಿತ್ರದಲ್ಲಿ ಬರೋ ಎಲ್ಲ ಪಾತ್ರಗಳು ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಭಾಗಿ ಆದ ಪಾತ್ರಗಳನ್ನೇ ಹೋಲುತ್ತವೆ. ಹೀಗಾಗಿ, ಹೆಜ್ಜೆ ಹೆಜ್ಜೆಗೂ ರೇಣುಕಾಸ್ವಾಮಿ ಕೊಲೆ ಕೇಸ್​ ಅನ್ನು ಇದು ನೆನಪಿಸುತ್ತದೆ.

ಇದನ್ನೂ ಓದಿ: ‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ‘ಬಾಸ್’ ಬಗ್ಗೆ ತನುಷ್ ಶಿವಣ್ಣ ಮಾತು

ಈ ಸಿನಿಮಾದಲ್ಲಿ ತನುಷ್ ಶಿವಣ್ಣ ಬಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೈಂ ಕಥೆಯೇ ಹೆಚ್ಚು ಸಾಗೋದರಿಂದ ಅವರು ತೆರೆಮೇಲೆ ಕಾಣಿಸಿಕೊಳ್ಳೋದು ಕಡಿಮೆ. ವಂದಿತಾ ಗೌಡ ಅವರು ಶೀಲಾ ಗೌಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸ್ವಲ್ಪ ಹೊತ್ತು ತೆರೆಮೇಲೆ ಬರುತ್ತಾರೆ. ಪಾಯಲ್ ಚೆಂಗಪ್ಪ ಬಾಸ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕೆಲವೇ ದೃಶ್ಯಗಳಿಗೆ ಸೀಮಿತವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:14 am, Fri, 7 August 26

Source link

ಗದಗ: ಹುಳು ಬಿದ್ದ ಆಹಾರ ಸರಬರಾಜು; ರಕ್ತ ಹೀರುವ ತಿಗಣೆ ಕಾಟಕ್ಕೆ ವಿದ್ಯಾರ್ಥಿಗಳು ವಿಲವಿಲ – Kannada News | Gadag Hostel Mismanagement: Students Suffer from Unhygienic Conditions, Demand Action

ಸರ್ಕಾರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ತೀವ್ರ ಅವ್ಯವಸ್ಥೆ

ಗದಗ ಆ. 7: ಓದಿ ಮುಂದೆ ಬರಬೇಕು, ಸಾಧನೆ ಮಾಡಬೇಕು ಎಂಬ ನೂರಾರು ಕನಸು ಹೊತ್ತು ಸರ್ಕಾರಿ ಹಾಸ್ಟೆಲ್‌ಗೆ ಬಂದ ವಿದ್ಯಾರ್ಥಿಗಳಿಗೆ ಅವ್ಯವಸ್ಥೆಯ ಬಿಸಿ ತಟ್ಟಿದೆ. ಗದಗ ನಗರದ ಸೂರ್ಯ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವು ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದ್ದು, ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಹಾಸ್ಟೆಲ್‌ನಲ್ಲಿ ತಿಗಣೆಗಳ ಕಾಟ, ಕಳಪೆ ಆಹಾರ ಸರಬರಾಜು ಹಾಗೂ ಶುದ್ಧ ಕುಡಿಯುವ ನೀರಿನ ಅಭಾವದಿಂದ ಬೇಸತ್ತ ವಿದ್ಯಾರ್ಥಿಗಳು, ವಸತಿ ನಿಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾಸ್ಟೆಲ್‌ನಲ್ಲಿ ತಿಗಣೆಗಳ ಕಾಟ ವಿಪರೀತವಾಗಿದ್ದು, ರಾತ್ರಿಯಿಡೀ ವಿದ್ಯಾರ್ಥಿಗಳು ನಿದ್ರೆಯಿಲ್ಲದೆ ಕಳೆಯುವಂತಾಗಿದೆ. ಕ್ರಿಮಿನಾಶಕ ಸಿಂಪಡಿಸಿ ತಿಗಣೆಗಳನ್ನು ನಿಯಂತ್ರಿಸಿ ಎಂದು ಮನವಿ ಮಾಡಿದರೂ ವಾರ್ಡನ್ ಕನಿಷ್ಠ ಗಮನ ಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.

ಹಾಸ್ಟೆಲ್‌ನಲ್ಲಿದ್ದುಕೊಂಡು ಹೊಟ್ಟೆತುಂಬ ಊಟ ಮಾಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹುಳು ಬಿದ್ದಿರುವ ಜೋಳ ಹಾಗೂ ಗೋಧಿಯನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ!

ಹಾಸ್ಟೆಲ್‌ನಲ್ಲಿ ಸುಮಾರು 100 ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಈ ಹಾಸ್ಟೆಲ್ ‘ತಿಪ್ಪೆಗುಂಡಿ’ಯಂತೆ ಇರುತ್ತದೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ತಪಾಸಣೆಗೆ ಬರುತ್ತಾರೆ ಎಂಬ ಮಾಹಿತಿ ಸಿಕ್ಕ ತಕ್ಷಣ ಮೇಲ್ನೋಟಕ್ಕೆ ಸುಣ್ಣ-ಬಣ್ಣ ಬಳಿದು ಸ್ವಚ್ಛಗೊಳಿಸುವ ನಾಟಕವಾಡುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುದ್ಧ ಕುಡಿಯುವ ನೀರು ಹಾಗೂ ಉತ್ತಮ ಆಹಾರ ಒದಗಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಹಾಸ್ಟೆಲ್‌ನಲ್ಲಿರುವ ಮೂಲಭೂತ ಅವ್ಯವಸ್ಥೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ವಿದ್ಯಾರ್ಥಿಗಳು ಒಮ್ಮತದಿಂದ ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥನೆ – Kannada News | Chamundi Hills Last Ashada Friday: Devotee Rush for Mahalakshmi Darshan, Prayers for Prosperity

ಮೈಸೂರು: ಆಷಾಢ ಮಾಸದ ಕೊನೆಯ ಶುಕ್ರವಾರ ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಈ ವಿಶೇಷ ದಿನದಂದು ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಮಹಾಲಕ್ಷ್ಮಿ ಅಲಂಕಾರದಲ್ಲಿ ಸುಂದರವಾಗಿ ಅಲಂಕರಿಸಲಾಗಿದೆ. ವಿವಿಧ ಪುಷ್ಪಗಳಿಂದ ಮಂಟಪವನ್ನು ಶೃಂಗರಿಸಲಾಗಿದ್ದು, ವಿಶೇಷವಾಗಿ ಶೇಷನಾಗದ ಆಕಾರದ ಮೊಗ್ಗಿನ ಜೊಡೆ ಅಲಂಕಾರ ಭಕ್ತರ ಗಮನ ಸೆಳೆದಿದೆ.

ಬೆಳಗಿನ ಜಾವ 3:30ರಿಂದಲೇ ವಿಶೇಷ ಅಭಿಷೇಕ, ಪೂಜೆ, ಮಂಗಳಾರತಿ ನೆರವೇರಿಸಲಾಯಿತು. ನಾಡಿಗೆ ಸುಭಿಕ್ಷೆ, ಶಾಂತಿ ನೆಲೆಸಲಿ ಹಾಗೂ ಉತ್ತಮ ಮಳೆ-ಬೆಳೆಯಾಗಲಿ ಎಂದು ಅರ್ಚಕರು ಪ್ರಾರ್ಥಿಸಿದರು. ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳ ಆರಾಧನೆಗೆ ವಿಶೇಷ ಮಹತ್ವವಿದ್ದು, ಕುಟುಂಬ ಸಮೇತರಾಗಿ ಪೂಜಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಕೊನೆಯ ಶುಕ್ರವಾರ ಭಕ್ತರ ಸಂಖ್ಯೆ ದುಪ್ಪಟ್ಟಾದ ಕಾರಣ, ಜಿಲ್ಲಾಡಳಿತ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿ, ಉಚಿತ ಸರ್ಕಾರಿ ಬಸ್ ವ್ಯವಸ್ಥೆ ಮಾಡಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಭಕ್ತಿಪೂರ್ವಕವಾಗಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Source link

‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ! – Kannada News | Bengaluru Fraud Case: Techie Couple Arrested for Multi Crore Work From Home Packing Scam

‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ದೇವನಹಳ್ಳಿ ಪೊಲೀಸರ ವಶ!

ದೇವನಹಳ್ಳಿ, ಆಗಸ್ಟ್ 07: ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ‘ವರ್ಕ್ ಫ್ರಂ ಹೋಂ’ (Work From Home) ಕೆಲಸದ ಆಸೆ ತೋರಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಿರಣ್ ಮತ್ತು ಆತನ ಪತ್ನಿ ಆರತಿ ಎಂದು ಗುರುತಿಸಲಾಗಿದೆ. ಈ ದಂಪತಿ ‘ಕಾಳಿಕಾ ದೇವಿ ಎಂಟರ್ ಪ್ರೈಸಸ್’ ಎಂಬ ಹೆಸರಿನಲ್ಲಿ ನಕಲಿ ಸಂಸ್ಥೆ ತೆರೆದು ಸಾವಿರಾರು ಜನರಿಗೆ ಮೋಸ ಮಾಡಿದ್ದಾರೆ.

ರೀಲ್ಸ್ ಮೂಲಕ ಬಲೆ

ಆರೋಪಿ ಕಿರಣ್ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಮೂಲಕ ಮನೆಬಾಗಿಲಿಗೇ ಕೆಲಸ ನೀಡುವುದಾಗಿ ಜಾಹೀರಾತು ನೀಡುತ್ತಿದ್ದ. ಮೇಣದ ಬತ್ತಿ, ಡ್ರೈ ಫ್ರೂಟ್ಸ್ ಹಾಗೂ ಅಗರಬತ್ತಿ ಪ್ಯಾಕಿಂಗ್ ಮಾಡುವ ಸುಲಭದ ಕೆಲಸ ನೀಡುವುದಾಗಿ ಜನರನ್ನು ನಂಬಿಸುತ್ತಿದ್ದ. ಕಚ್ಚಾ ಪದಾರ್ಥಗಳ ಪ್ಯಾಕಿಂಗ್ ಕೆಲಸಕ್ಕಾಗಿ ಒಮ್ಮೆ 1 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ, ಪ್ರತಿ ತಿಂಗಳು 23 ಸಾವಿರ ರೂಪಾಯಿ ಸಂಬಳ ಕೊಡುವುದಾಗಿ ಆಮಿಷ ಒಡ್ಡಿದ್ದ.

ಲಕ್ಷ ಲಕ್ಷ ಹಣ ಪಡೆದು ವಂಚನೆ

ದಂಪತಿಯ ಮಾತುಗಳನ್ನು ಸತ್ಯವೆಂದು ನಂಬಿದ ಸಾರ್ವಜನಿಕರು, ಸಾಲ ಸೂಲ ಮಾಡಿ ಒಬ್ಬೊಬ್ಬರಿಂದ 2 ಲಕ್ಷದಿಂದ ಹಿಡಿದು ಬರೋಬ್ಬರಿ 20 ಲಕ್ಷ ರೂಪಾಯಿವರೆಗೂ ಹಣವನ್ನು ಡೆಪಾಸಿಟ್ ಮಾಡಿದ್ದರು. ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ ಹಾಗೂ ಕೋಲಾರ ಸೇರಿದಂತೆ ಹಲವು ಭಾಗಗಳ ನೂರಾರು ಜನರು ಈ ದಂಪತಿಯ ಮಾಯದ ಬಲೆಗೆ ಬಿದ್ದಿದ್ದಾರೆ. ಹಣ ಪಡೆದ ಬಳಿಕ ದಂಪತಿ ಕೆಲಸವನ್ನೂ ನೀಡದೆ, ಠೇವಣಿ ಹಣವನ್ನೂ ಮರುಪಾವತಿಸದೆ ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿದ್ದರು.

ಕಳೆದ ಕೆಲವು ತಿಂಗಳಿಂದ ಕೆಲಸವೂ ಇಲ್ಲದೆ, ಕಟ್ಟಿದ ಹಣವೂ ಸಿಗದೆ ಕಂಗಾಲಾಗಿದ್ದ ಸಂತ್ರಸ್ತರು ದೇವನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಂದ ದೋಚಲಾದ ಕೋಟಿ ಕೋಟಿ ಹಣದ ಲೇವಾದೇವಿ ಕುರಿತು ಪೊಲೀಸರು ಸದ್ಯ ತೀವ್ರ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version