ಕೊಪ್ಪಳ ಉಸ್ತುವಾರಿ ಸ್ಥಾನಕ್ಕೆ ರಾಯರೆಡ್ಡಿ, ತಂಗಡಗಿ ಪೈಪೋಟಿ: ಬರ ಪರಿಶೀಲನೆ ನೆಪದಲ್ಲಿ ಸಕ್ರಿಯ – Kannada News | Koppal District In Charge Post Race: Ministers Basavaraj Rayareddy and Shivraj Tangadagi in Focus

ಕೊಪ್ಪಳ, ಆಗಸ್ಟ್ 7: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನ (Congress) ಇಬ್ಬರು ಸಚಿವರ ನಡುವೆ ಪೈಪೋಟಿ ಶುರುವಾಯಿತೇ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಸಚಿವರಾದ ಬಸವರಾಜ ರಾಯರೆಡ್ಡಿ ಹಾಗೂ ಶಿವರಾಜ ತಂಗಡಗಿ ಕೊಪ್ಪಳ (Koppal) ಜಿಲ್ಲಾ ಉಸ್ತುವಾರಿ ಸ್ಥಾನದ ಮೇಲೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಇಬ್ಬರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.

ಗದಗ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆಗೆ ತೆರಳಿದ್ದ ಸಚಿವ ಬಸವರಾಜ ರಾಯರೆಡ್ಡಿ, ಗುರುವಾರ ಯಲಬುರ್ಗಾ ಹಾಗೂ ಕುಕನೂರು ಭಾಗಗಳಲ್ಲಿ ಬರ ಪರಿಶೀಲನೆ ನಡೆಸಿದರು. ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ರಾಯರೆಡ್ಡಿ ಈ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನವೇ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡಿದ್ದರು ಎನ್ನಲಾಗಿದೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ಕುರಿತು ಮಾತನಾಡಿದ್ದ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಎಂದರೆ ವಿಶೇಷವಾದದ್ದೇನಿಲ್ಲ, ಕೆಡಿಪಿ ಸಭೆ ನಡೆಸುವುದು ಮತ್ತು ಧ್ವಜಾರೋಹಣ ಮಾಡುವುದು ಅಷ್ಟೇ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಕೊಪ್ಪಳದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅವರು ನಡೆಸಿದ ಭೇಟಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಇತ್ತ ಸಚಿವ ಶಿವರಾಜ ತಂಗಡಗಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಎಂದರೆ ಜಿಲ್ಲೆಗೆ ಮುಖ್ಯಮಂತ್ರಿ ಇದ್ದಂತೆ ಎಂದು ಅವರು ಹೇಳಿದ್ದಾರೆ. ರಾಯರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಕುರಿತು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದೂ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ರಾಯರೆಡ್ಡಿ ಅವರು ತಮ್ಮಗಿಂತ ಹಿರಿಯ ನಾಯಕರು. ಆದರೆ ತಮ್ಮ ಮುಂದೆ ಅವರು ಆ ರೀತಿಯ ಯಾವುದೇ ನಡೆ ತೋರಿಸಿಲ್ಲ ಎಂದು ತಂಗಡಗಿ ಹೇಳಿದ್ದಾರೆ. ಅಲ್ಲದೆ, ರಾಯರೆಡ್ಡಿ ಅವರಿಗೆ ಎರಡು ಜಿಲ್ಲೆಗಳ ಬರ ಪರಿಶೀಲನೆ ಜವಾಬ್ದಾರಿ ನೀಡಲಾಗಿದ್ದರೆ ಮತ್ತೊಂದು ಜಿಲ್ಲೆಯನ್ನು ನೀಡಲಿ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ, ರಾಯರೆಡ್ಡಿ ‘ನನಗೆ ಕೊಪ್ಪಳ ಎಂದು ಹೇಳಿದ್ದರು, ಹಾಗಾಗಿ ಕೊಪ್ಪಳಕ್ಕೆ ಬಂದಿದ್ದೇನೆ. ನನ್ನ ಜಿಲ್ಲೆಯಲ್ಲಿ ನಾನು ಇರಬೇಕು ಎಂಬ ಆಸೆ ನನಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ, ಅಷ್ಟಕ್ಕೂ ಆಗಿದ್ದೇನು?

ಹೀಗಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ಇಬ್ಬರು ಸಚಿವರ ಹೇಳಿಕೆಗಳು ಹಾಗೂ ಕೊಪ್ಪಳದಲ್ಲಿ ಅವರ ಚಟುವಟಿಕೆಗಳು ಉಸ್ತುವಾರಿ ಸ್ಥಾನದ ಪೈಪೋಟಿಯ ಚರ್ಚೆಗೆ ಮತ್ತಷ್ಟು ಬಲ ನೀಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಕೊಲೆ ಪ್ರಕರಣ: ಸದಾ ‘ರೀಲ್ಸ್’ ಮಾಡುತ್ತಿದ್ದ ಪತ್ನಿ, ಊಟ ಹಾಕದಿದ್ದಕ್ಕೆ ಕುತ್ತಿಗೆ ಹಿಸುಕಿ ಕೊಂದ ಪತಿ ಧೀರಜ್ ಬಂಧನ – Kannada News | Shocking Gerupalya Murder: Husband Arrested for Killing Wife Amidst Reels and Dispute

ಬೆಂಗಳೂರು, ಆ.7: ನಗರದ ಕುಂಬಳಗೋಡು ಸಮೀಪದ ಗೇರುಪಾಳ್ಯದಲ್ಲಿ ಕಳೆದ ತಿಂಗಳು ಜುಲೈ 25ರಂದು ನಡೆದಿದ್ದ ಬಿಹಾರ ಮೂಲದ ರೀಮಾಕುಮಾರಿ (24) ಭೀಕರ ಕೊಲೆ ಪ್ರಕರಣದ ಅಸಲಿ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಆರೋಪಿ, ಆಕೆಯ ಪತಿ ಧೀರಜ್ ಕುಮಾರ್ (24) ಎಂಬಾತನನ್ನು ಬಿಹಾರದಲ್ಲಿ ಬಂಧಿಸಿ ಕರೆತಂದ ಕುಂಬಳಗೋಡು ಠಾಣೆ ಪೊಲೀಸರು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಕೊಲೆಗೆ ಕಾರಣ ಬಹಿರಂಗವಾಗಿದೆ.

ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ಬಿರುಕು:

ಬಿಹಾರ ಮೂಲದ ಧೀರಜ್ ಮತ್ತು ರೀಮಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಜೀವನೋಪಾಯಕ್ಕಾಗಿ ಸುಮಾರು 10 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಕುಂಬಳಗೋಡಿನ ಗೇರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬೆಂಗಳೂರಿಗೆ ಬಂದ ಕೆಲವೇ ತಿಂಗಳುಗಳಲ್ಲಿ ರೀಮಾ ಪತಿ ಧೀರಜ್ ಮೇಲೆ ಆಸಕ್ತಿ ಕಳೆದುಕೊಂಡಿದ್ದಳು. ಮನೆಯಲ್ಲಿದ್ದಾಗ ಸದಾ ಮೊಬೈಲ್‌ನಲ್ಲಿ ‘ರೀಲ್ಸ್’ (Reels) ಮಾಡುತ್ತಾ ಕಾಲ ಕಳೆಯುತ್ತಿದ್ದಳು.

ದಾಂಪತ್ಯ ಜೀವನದಲ್ಲೂ ಪತಿಯೊಂದಿಗೆ ಸಹಕರಿಸದೆ ಲೈಂಗಿಕ ಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಳು. ರೀಮಾ ದಿನನಿತ್ಯ ತನಗೆ ಬೇಕಾಗುವಷ್ಟು ಮಾತ್ರ ಅಡುಗೆ ಮಾಡಿ ತಿಂದು ಮಲಗುತ್ತಿದ್ದಳು. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಪತಿ ಧೀರಜ್‌ಗೆ ಊಟ ನೀಡುತ್ತಿರಲಿಲ್ಲ. ಅಲ್ಲದೆ, ತನಗೆ ಬೆಂಗಳೂರು ಬೇಡ, ವಾಪಸ್ ಬಿಹಾರಕ್ಕೆ ಹೋಗಬೇಕೆಂದು ಪಟ್ಟು ಹಿಡಿದಿದ್ದಳು. ಇದರಿಂದ ದಂಪತಿ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು.

ಜುಲೈ 25ರಂದು ನಡೆದಿದ್ದೇನು?:

ಕೊಲೆಯಾದ ದಿನ ಧೀರಜ್ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಊಟ ಇರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಸಣ್ಣದಾಗಿ ಗಲಾಟೆ ಆರಂಭವಾಗಿದೆ. ಬಳಿಕ ಧೀರಜ್ ‘ಮಲಗೋಣ ಬಾ’ ಎಂದು ಪತ್ನಿಯನ್ನು ಕರೆದಾಗ ಆಕೆ ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಇಬ್ಬರ ನಡುವೆ ಜಗಳ ತೀವ್ರಗೊಂಡಿದೆ. ಜಗಳದ ಭರದಲ್ಲಿ ರೀಮಾ ಮೊದಲು ದೊಣ್ಣೆಯಿಂದ ಪತಿ ಧೀರಜ್‌ಗೆ ಹೊಡೆದಿದ್ದಾಳೆ. ಇದರಿಂದ ತೀವ್ರ ಕುಪಿತಗೊಂಡ ಧೀರಜ್, ಪತ್ನಿಯ ವೇಲ್‌ನಿಂದ (ದುಪಟ್ಟಾ) ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮುಖಕ್ಕೆ ಪ್ಲಾಸ್ಟಿಕ್ ಪೇಪರ್ ಸುತ್ತಿ, ಶವವನ್ನು ಮನೆಯಲ್ಲೇ ಬಿಟ್ಟು ಬಿಹಾರಕ್ಕೆ ಪರಾರಿಯಾಗಿದ್ದ.

ಇದನ್ನೂ ಓದಿ: ಕಲಾಸಿಪಾಳ್ಯ ಗ್ಯಾಂಗ್‌ವಾರ್ ಪ್ರಕರಣಕ್ಕೆ ಟ್ವಿಸ್ಟ್: ತನಿಖೆ ವೇಳೆ ಅಸಲಿ ಕಾರಣ ಬಯಲು

ಬಿಹಾರದಲ್ಲಿ ಆರೋಪಿ ಬಂಧನ:

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕುಂಬಳಗೋಡು ಪೊಲೀಸರು, ತಾಂತ್ರಿಕ ಕಾರ್ಯಾಚರಣೆ ನಡೆಸಿ ಬಿಹಾರದಲ್ಲಿದ್ದ ಆರೋಪಿ ಧೀರಜ್‌ನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಆರೋಪಿ ಧೀರಜ್ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್ – Kannada News | Monisha Vijay Reveals Majestic Bengalurus Dark Side During City Lights Shoot

ದುನಿಯಾ ವಿಜಯ್ ಪುತ್ರಿ ಮೋನಿಷಾ ವಿಜಯ್, ‘ಸಿಟಿ ಲೈಟ್ಸ್’ ಚಿತ್ರೀಕರಣದ ವೇಳೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಸವಾಲಿನ ಹಾಗೂ ಅಚ್ಚರಿಯ ಅನುಭವಗಳನ್ನು ಎದುರಿಸಿದ್ದಾರೆ. ಹೆಚ್ಚಿನ ಚಿತ್ರೀಕರಣ ಮೆಜೆಸ್ಟಿಕ್‌ನ ಲೈವ್ ಲೊಕೇಶನ್‌ಗಳಲ್ಲಿ ನಡೆದಿದ್ದು, ಇದು ಸೆಟ್‌ನಲ್ಲಿ ಚಿತ್ರೀಕರಣ ಮಾಡುವುದಕ್ಕಿಂತ ವಿಭಿನ್ನವಾಗಿತ್ತು. ಸಾರ್ವಜನಿಕರ ನಡುವೆ ಶೂಟಿಂಗ್ ಮಾಡುವುದು ಅವರಿಗೆ ಹೊಸ ಸವಾಲಾಗಿತ್ತು.

ಚಿತ್ರೀಕರಣದ ಸಂದರ್ಭದಲ್ಲಿ, ಮೋನಿಷಾ ಅವರಿಗೆ ಅನಿರೀಕ್ಷಿತವಾಗಿ ಕಹಿ ಘಟನೆಯೊಂದು ಎದುರಾಯಿತು. ಯಾರೋ ಒಬ್ಬರು ಕೆಟ್ಟ ಉದ್ದೇಶದಿಂದ ಅವರನ್ನು ಸಮೀಪಿಸಿದ್ದರು. ಇದು ಮೆಜೆಸ್ಟಿಕ್‌ನ ಮತ್ತೊಂದು ಮುಖವನ್ನು ಅವರಿಗೆ ಪರಿಚಯಿಸಿತು. ಬೆಂಗಳೂರಿನಲ್ಲಿ ಇಂತಹ ಕರಾಳ ಅಂಶವೂ ಇದೆ ಎಂದು ಅರಿತಾಗ ಅವರಿಗೆ ಆಶ್ಚರ್ಯವಾಯಿತು. ಆದಾಗ್ಯೂ, ಚಿತ್ರತಂಡದ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಅನುಭವವನ್ನು ಒಬ್ಬ ಕಲಾವಿದೆಯಾಗಿ ಕಲಿಕೆಯ ಭಾಗವೆಂದು ಪರಿಗಣಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕತ್ತಲೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಯನ್ನು ಭೇಟಿಯಾದ್ರಾ ಇರಾನ್ ಅಧ್ಯಕ್ಷ? – Kannada News | Iran Supreme Leader Mystery: Pezeshkian’s Secret Dark Encounter with Mojtaba Khamenei

ಟೆಹ್ರಾನ್, ಆಗಸ್ಟ್​ 07: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ(Mojtaba Khamenei) ಅವರ ಆರೋಗ್ಯ ಮತ್ತು ಅವರಿರುವ ರಹಸ್ಯ ಸ್ಥಳದ ಕುರಿತು ಜಾಗತಿಕ ಮಟ್ಟದಲ್ಲಿ ಅನುಮಾನಗಳು ಹೆಚ್ಚುತ್ತಿರುವ ನಡುವೆಯೇ ಮತ್ತೊಂದು ರಹಸ್ಯ ವರದಿ ಹೊರಬಿದ್ದಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Masoud Pezeshkian) ಅವರು ಟೆಹ್ರಾನ್‌ನ ಅಜ್ಞಾತ ಸ್ಥಳದಲ್ಲಿ ಕಾರಿನ ಹಿಂಭಾಗದ ಸೀಟಿನಲ್ಲಿ ಮೊಜ್ತಬಾ ಖಮೇನಿ ಅವರನ್ನು ಭೇಟಿಯಾಗಿದ್ದಾರೆ. ಆದರೆ ಸಂಪೂರ್ಣ ಕತ್ತಲೆಯಿಂದಾಗಿ ಮುಖ ಕಾಣಿಸದಿದ್ದಾಗ, ನೀವು ನಿಜವಾಗಿಯೂ ಖಮೇನಿಯೇ ಎಂದು ಪೆಜೆಶ್ಕಿಯಾನ್ ಆ ವ್ಯಕ್ತಿಯನ್ನೇ ಕೇಳಿದ್ದಾರೆ ಎಂದು ‘ಇರಾನ್ ಇಂಟರ್ನ್ಯಾಷನಲ್’ ವರದಿ ಮಾಡಿದೆ.

ಇರಾನ್ ರಾಜಕೀಯ ಬಿಕ್ಕಟ್ಟಿನ ನಡುವೆ ಅಧ್ಯಕ್ಷ ಪೆಜೆಶ್ಕಿಯಾನ್ ರಾಜೀನಾಮೆ ಬೆದರಿಕೆ ಹಾಕಿದ ನಂತರ ಈ ಭೇಟಿಯನ್ನು ಏರ್ಪಡಿಸಲಾಗಿತ್ತು. ಟೆಹ್ರಾನ್‌ನ ರಹಸ್ಯ ಸ್ಥಳವೊಂದರಲ್ಲಿ ಗಾಢ ಕಪ್ಪು ಕಿಟಕಿಗಳಿದ್ದ ಕಾರಿನ ಹಿಂಭಾಗದಲ್ಲಿ ಖಮೇನಿ ಎಂದ ಹೇಳಲಾದ ವ್ಯಕ್ತಿ ಕುಳಿತಿದ್ದರು.

ಕೈಕುಲುಕಲೂ ಸಿಗದ ಅವಕಾಶ: ಸಂಪೂರ್ಣ ಕತ್ತಲೆಯಲ್ಲಿ ನಡೆದ ಈ ಭೇಟಿಯಲ್ಲಿ ಯಾವುದೇ ಹಸ್ತಲಾಘವಕ್ಕೆ ಅವಕಾಶವಿರಲಿಲ್ಲ. ಅಧ್ಯಕ್ಷರನ್ನು ನಡೆಸಿಕೊಂಡ ರೀತಿಯಿಂದ ಅವರು ತೀವ್ರ “ಅವಮಾನಿತರಾಗಿದ್ದಾರೆ” ಎಂದು ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ. ಎರಡನೇ ಸಭೆಗೆ ಪೆಜೆಶ್ಕಿಯಾನ್ ವಿನಂತಿಸಿದರೂ ಅದನ್ನು ತಕ್ಷಣವೇ ನಿರಾಕರಿಸಲಾಗಿದೆ.

ಮತ್ತಷ್ಟು ಓದಿ: ‘ಭಾರತವನ್ನು ಇರಾನ್ ಎಂದೂ ಮರೆಯುವುದಿಲ್ಲ’; ಅಯತೊಲ್ಲಾ ಖಮೇನಿ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕೆ ಟೆಹ್ರಾನ್ ಕೃತಜ್ಞತೆ

ಖಮೇನಿ ಬದುಕಿದ್ದಾರೆಯೇ? ಟ್ರಂಪ್ ಹೇಳಿಕೆ ಮತ್ತು ಊಹಾಪೋಹ
ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಲೀಡರ್: ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮಾಜಿ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದರು. ಆ ದಾಳಿಯಲ್ಲಿ ಮೊಜ್ತಬಾ ಕೂಡ ತೀವ್ರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಅವರು ತಮ್ಮ ತಂದೆಯ ಅಂತ್ಯಕ್ರಿಯೆಗೂ ಹಾಜರಾಗಿರಲಿಲ್ಲ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಪ್ರತಿಕ್ರಿಯಿಸಿ, “ಇರಾನ್‌ನ ಉನ್ನತ ನಾಯಕರೆಲ್ಲರೂ ಕೊಲ್ಲಲ್ಪಟ್ಟಿದ್ದಾರೆ. ಮೊಜ್ತಬಾ ಖಮೇನಿ ಇದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಪ್ರತಿಪಾದಿಸಿದ್ದರು. ಇರಾನ್‌ನಲ್ಲಿ ನಾಗರಿಕ ಸರ್ಕಾರಕ್ಕಿಂತ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಮಿಲಿಟರಿ ಶಕ್ತಿಗಳೇ ಸಂಪೂರ್ಣ ಆಡಳಿತ ನಿಯಂತ್ರಣ ತೆಗೆದುಕೊಂಡಿವೆ. ಅಧ್ಯಕ್ಷ ಪೆಜೆಶ್ಕಿಯಾನ್ ಇತ್ತೀಚೆಗೆ ಈ ಪರಿಸ್ಥಿತಿಯಲ್ಲಿ ಸುಪ್ರೀಂ ಲೀಡರ್ ಅವರನ್ನು ಸಂಪರ್ಕಿಸುವುದು ತೀರಾ ಕಷ್ಟಕರವಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು.

ಬೋಗಸ್ ಭೇಟಿಯ ಅನುಮಾನ: ಈ ಇತ್ತೀಚಿನ ವರದಿಯು ಇರಾನ್ ಸೇನೆಯು ಅಧ್ಯಕ್ಷರನ್ನು ಸಮಾಧಾನಪಡಿಸಲು ಖಮೇನಿ ರೀತಿಯೇ ಇರುವವರನ್ನು ಕಾರಿನಲ್ಲಿ ಕೂರಿಸಿ ಭೇಟಿ ಮಾಡಿಸಿದೆಯೇ ಎಂಬ ಬಲವಾದ ಅನುಮಾನಗಳನ್ನು ಹುಟ್ಟುಹಾಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಮುದ್ರದ ನೀರಿನಿಂದ ಅಡುಗೆ ಮನೆವರೆಗೆ: ಭಾರತದಲ್ಲಿ ಸ್ಪಟಿಕದಂತಹ ಉಪ್ಪು ತಯಾರಾಗುವುದು ಹೇಗೆ? – Kannada News | How Salt is Made in India: From Sea to Kitchen – A Complete Guide

ಪ್ರತಿಯೊಬ್ಬರ ನಿತ್ಯದ ಅಡುಗೆಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿರುವ, ಪ್ರಾಣಿ-ಪಕ್ಷಿ ಹಾಗೂ ಮಾನವಕುಲಕ್ಕೆ ಅತ್ಯಗತ್ಯವಾಗಿರುವ ಪದಾರ್ಥವೆಂದರೆ ಅದು ‘ಉಪ್ಪು’. ಭಾರತವು ಪ್ರಪಂಚದಲ್ಲೇ ಚೀನಾ ಮತ್ತು ಅಮೆರಿಕದ ನಂತರ ಮೂರನೇ ಅತಿ ದೊಡ್ಡ ಉಪ್ಪು ಉತ್ಪಾದನಾ ದೇಶವಾಗಿದೆ.

ಭಾರತದಲ್ಲಿ ಪ್ರತಿ ವರ್ಷ ಕೋಟ್ಯಾಂತರ ಟನ್ ಉಪ್ಪು ಉತ್ಪಾದನೆಯಾಗುತ್ತದೆ. ದೇಶದ ಶೇಕಡಾ 75ಕ್ಕೂ ಹೆಚ್ಚು ಉಪ್ಪನ್ನು ಗುಜರಾತ್ ಒಂದೇ ರಾಜ್ಯ ಉತ್ಪಾದಿಸಿದರೆ, ತಮಿಳುನಾಡು, ರಾಜಸ್ಥಾನ (ಸಾಂಭಾರ್ ಸರೋವರ) ಮತ್ತು ಆಂಧ್ರಪ್ರದೇಶಗಳು ನಂತರದ ಸ್ಥಾನದಲ್ಲಿವೆ. ಇನ್ನು ಈ ಉಪ್ಪು ಹೇಗೆ ಉತ್ಪಾದನೆ ಆಗುವ ಹಂತಗಳು ಇಲ್ಲಿದೆ ನೋಡಿ.

ಉಪ್ಪು ತಯಾರಿಕೆಯ ಹಂತಗಳು :

ಭಾರತದಲ್ಲಿ ಶೇಕಡಾ 70ಕ್ಕೂ ಹೆಚ್ಚು ಉಪ್ಪನ್ನು ಸೂರ್ಯನ ಶಾಖದಿಂದ ಆವಿ ಮಾಡುವ ತಂತ್ರಜ್ಞಾನ ಮೂಲಕವೇ ತಯಾರಿಸಲಾಗುತ್ತದೆ. ಈ ಇಡೀ ಪ್ರಕ್ರಿಯೆಯು ಪ್ರಕೃತಿಯ ಬೆಳಕು ಮತ್ತು ಗಾಳಿಯ ಮೇಲೆ ಅವಲಂಬಿತವಾಗಿರುತ್ತದೆ.

ಉಪ್ಪಿನ ಗದ್ದೆಗಳ ನಿರ್ಮಾಣ :

ಸಮುದ್ರ ತೀರದ ತಗ್ಗು ಪ್ರದೇಶಗಳಲ್ಲಿ ಅಥವಾ ಬೃಹತ್ ಬಯಲು ಜಾಗಗಳಲ್ಲಿ ಸಣ್ಣ ಸಣ್ಣ ಪಾತಿಗಳಂತಿರುವ ಗದ್ದೆಗಳನ್ನು ನಿರ್ಮಿಸಲಾಗುತ್ತದೆ. ಈ ಗದ್ದೆಗಳ ತಳಭಾಗದ ಮಣ್ಣನ್ನು ಗಟ್ಟಿಯಾಗಿ ಮೆತ್ತಿ, ನೀರು ಭೂಮಿಯೊಳಗೆ ಇಂಗಿ ಹೋಗದಂತೆ ತಡೆಯಲಾಗುತ್ತದೆ.

ಸಮುದ್ರದ ನೀರನ್ನು ಹಾಯಿಸುವುದು

ಹೈ-ಟೈಡ್ (ಅಲೆಗಳ ಉಬ್ಬರ) ಸಮಯದಲ್ಲಿ ಅಥವಾ ದೊಡ್ಡ ಮೋಟಾರ್ ಪಂಪ್‌ಗಳ ಸಹಾಯದಿಂದ ಸಮುದ್ರದ ಉಪ್ಪು ನೀರನ್ನು ಈ ಬೃಹತ್ ಗದ್ದೆಗಳಿಗೆ ತುಂಬಿಸಲಾಗುತ್ತದೆ.

ಸೂರ್ಯನ ತಾಪಕ್ಕೆ ಆವಿಯಾಗುವಿಕೆ

ಗದ್ದೆಗಳಲ್ಲಿ ಸಂಗ್ರಹವಾದ ನೀರು ಸುಮಾರು 2 ರಿಂದ 3 ವಾರಗಳ ಕಾಲ ಬಿಸಿಲಿನಲ್ಲಿ ಒಣಗಲು ಬಿಡಲಾಗುತ್ತದೆ. ಸೂರ್ಯನ ತೀವ್ರ ಶಾಖ ಮತ್ತು ಬೀಸುವ ಗಾಳಿಗೆ ನೀರಿನಲ್ಲಿದ್ದ ದ್ರವಾಂಶವು ಆವಿಯಾಗಿ ಗಾಳಿಯಲ್ಲಿ ವಿಲೀನವಾಗುತ್ತದೆ. ನೀರು ಕಡಿಮೆಯಾದಂತೆಲ್ಲಾ ನೀರಿನಲ್ಲಿದ್ದ ಉಪ್ಪಿನ ಸಾಂದ್ರತೆ ಹೆಚ್ಚಾಗುತ್ತಾ ಹೋಗುತ್ತದೆ.

ಸ್ಪಟಿಕ ರೂಪ ತಾಳುವುದು :

ನೀರು ಸಂಪೂರ್ಣವಾಗಿ ಆವಿಯಾದ ನಂತರ ಗದ್ದೆಯ ತಳದಲ್ಲಿ ದಪ್ಪನೆಯ ಬಿಳಿ ಬಣ್ಣದ ಉಪ್ಪಿನ ಪದರ ಅಥವಾ ಸ್ಪಟಿಕಗಳು ಉಳುಕಿಕೊಳ್ಳುತ್ತವೆ. ಇದನ್ನು ಸ್ಥಳೀಯ ಭಾಷೆಯಲ್ಲಿ “ಕಚ್ಚಾ ಉಪ್ಪು” ಎನ್ನಲಾಗುತ್ತದೆ.

ಉಪ್ಪು ಸಂಗ್ರಹಣೆ ಹಾಗೂ ಒಣಗಿಸುವಿಕೆ

ಉಪ್ಪಿನ ಗದ್ದೆ ಕಾರ್ಮಿಕರು (ಅಗರಿಯಾಗಳು) ಮರದ ಸಲಿಕೆಗಳು ಮತ್ತು ಕುಂಟೆಗಳನ್ನು ಬಳಸಿ ಗದ್ದೆಯ ತಳದಲ್ಲಿದ್ದ ಉಪ್ಪನ್ನು ರಾಶಿ ಹಾಕುತ್ತಾರೆ. ಈ ಕಚ್ಚಾ ಉಪ್ಪನ್ನು ಸಂಪೂರ್ಣವಾಗಿ ಒಣಗಿಸಲು ದೊಡ್ಡ ದೊಡ್ಡ ದಿಬ್ಬಗಳಾಗಿ ಸಂಗ್ರಹಿಸಿಡಲಾಗುತ್ತದೆ.

ಶುದ್ಧೀಕರಣ ಮತ್ತು ಅಯೋಡಿಕರಣ

ಗದ್ದೆಗಳಿಂದ ಸಂಗ್ರಹಿಸಿದ ಕಚ್ಚಾ ಉಪ್ಪು ನೇರವಾಗಿ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಅದನ್ನು ಉಪ್ಪು ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗುತ್ತದೆ.

ತೊಳೆಯುವುದು ಮತ್ತು ಶುದ್ಧೀಕರಣ: ಉಪ್ಪಿನಲ್ಲಿದ್ದ ಮಣ್ಣು, ಹುಳ ಹಾಗೂ ಕಸವನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ತೊಳೆದು ತೆಗೆಯಲಾಗುತ್ತದೆ.

ಅಯೋಡಿನ್ ಬೆರೆಸುವುದು: ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ, ಥೈರಾಯ್ಡ್ ಮತ್ತು ಗಾಯಿಟರ್‌ನಂತಹ ಕಾಯಿಲೆಗಳನ್ನು ತಡೆಯಲು ಪ್ರತಿಯೊಂದು ಖಾದ್ಯ ಉಪ್ಪಿಗೂ ಕಡ್ಡಾಯವಾಗಿ ಪೊಟ್ಯಾಸಿಯಮ್ ಅಯೋಡೇಟ್ (ಅಯೋಡಿನ್) ಬೆರೆಸಲಾಗುತ್ತದೆ.

ಪುಡಿ ಮಾಡುವುದು ಮತ್ತು ಪ್ಯಾಕಿಂಗ್: ಕಲ್ಲು ಉಪ್ಪನ್ನು ಬೇಕಾದ ಗಾತ್ರಕ್ಕೆ ಪುಡಿ ಮಾಡಿ, ತೇವಾಂಶ ತಗಲದಂತೆ ಪ್ಯಾಕ್ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ.

ಇದನ್ನೂ ಓದಿ: Charm Pricing Strategy: ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್‌?

ವಿಶ್ವದಲ್ಲೇ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ಟಾಪ್ 7 ದೇಶಗಳು

ಚೀನಾ – ಪ್ರಥಮ ಸ್ಥಾನ:

ವಿಶ್ವದಲ್ಲೇ ಅತಿ ದೊಡ್ಡ ಉಪ್ಪು ಉತ್ಪಾದಕ ದೇಶವಾಗಿರುವ ಚೀನಾ, ವರ್ಷಕ್ಕೆ ಸುಮಾರು 64 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಚೀನಾದ ವಿಶಾಲವಾದ ಭೂಪ್ರದೇಶ ಹಾಗೂ ಬೃಹತ್ ಉಪ್ಪಿನ ಅಗಳಿಗಳು ಇದರ ಪ್ರಮುಖ ಆಧಾರವಾಗಿವೆ. ಆವಿಯಾಗಿಸುವಿಕೆ ಹಾಗೂ ಬ್ರೈನ್ ಎಕ್ಸ್‌ಟ್ರಾಕ್ಷನ್ ತಂತ್ರಜ್ಞಾನಗಳ ಮೂಲಕ ಇಲ್ಲಿ ಉಪ್ಪು ತಯಾರಿಸಲಾಗುತ್ತದೆ.

ಅಮೆರಿಕ – ದ್ವಿತೀಯ ಸ್ಥಾನ

ಅಮೆರಿಕವು ವಾರ್ಷಿಕವಾಗಿ ಸುಮಾರು 42 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಆಹಾರ ದರ್ಜೆಯ ಉಪ್ಪು ಹಾಗೂ ಕೈಗಾರಿಕಾ ಉಪ್ಪನ್ನು ಇಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಓಹಿಯೋ, ಟೆಕ್ಸಾಸ್ ಮತ್ತು ಮಿಚಿಗನ್ ರಾಜ್ಯಗಳು ಅಮೆರಿಕದ ಪ್ರಮುಖ ಉಪ್ಪು ಉತ್ಪಾದನಾ ಕೇಂದ್ರಗಳಾಗಿವೆ.

ಭಾರತ – ತೃತೀಯ ಸ್ಥಾನ

ಭಾರತವು ವರ್ಷಕ್ಕೆ 30 ಮಿಲಿಯನ್ ಮೆಟ್ರಿಕ್ ಟನ್‌ಗೂ ಹೆಚ್ಚು ಉಪ್ಪು ಉತ್ಪಾದಿಸುವ ಮೂಲಕ ಜಾಗತಿಕವಾಗಿ 3ನೇ ಅತಿ ದೊಡ್ಡ ದೇಶವಾಗಿದೆ. ಗುಜರಾತ್ ಹಾಗೂ ತಮಿಳುನಾಡು ಕರಾವಳಿ ರಾಜ್ಯಗಳು ದೇಶದ ಪ್ರಮುಖ ಉಪ್ಪು ಉತ್ಪಾದನಾ ಹಬ್‌ಗಳಾಗಿವೆ. ಭಾರತವು ಏಷ್ಯಾ ಮತ್ತು ಆಫ್ರಿಕಾ ಖಂಡದ ಹಲವು ದೇಶಗಳಿಗೆ ಬೃಹತ್ ಪ್ರಮಾಣದಲ್ಲಿ ಉಪ್ಪನ್ನು ರಫ್ತು ಮಾಡುತ್ತದೆ.

ಚಿಲಿ – 4ನೇ ಸ್ಥಾನ

ದಕ್ಷಿಣ ಅಮೆರಿಕದ ಚಿಲಿ ದೇಶವು ವರ್ಷಕ್ಕೆ ಸುಮಾರು 15 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ತನ್ನ ಒಣ ಪ್ರದೇಶಗಳಲ್ಲಿರುವ ನೈಸರ್ಗಿಕ ಉಪ್ಪಿನ ನಿಕ್ಷೇಪಗಳನ್ನು ಬಳಸಿಕೊಂಡು ಆಹಾರ ಹಾಗೂ ಕೈಗಾರಿಕಾ ಅಗತ್ಯಗಳಿಗಾಗಿ ಉಪ್ಪು ತಯಾರಿಸಿ ವಿವಿಧ ಖಂಡಗಳಿಗೆ ರಫ್ತು ಮಾಡುತ್ತದೆ.

ಕೆನಡಾ – 5ನೇ ಸ್ಥಾನ

ಕೆನಡಾವು ವಾರ್ಷಿಕವಾಗಿ ಸುಮಾರು 14 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಅತ್ಯಾಧುನಿಕ ಉಪ್ಪಿನ ಗಣಿಗಾರಿಕೆ ಹಾಗೂ ಸುಸ್ಥಿರ ಪದ್ಧತಿಗಳ ಮೂಲಕ ಜಾಗತಿಕ ಉಪ್ಪು ಮಾರುಕಟ್ಟೆಯಲ್ಲಿ ಕೆನಡಾ ಪ್ರಮುಖ ಪಾತ್ರ ವಹಿಸಿದೆ.

ಜರ್ಮನಿ – 6ನೇ ಸ್ಥಾನ

ಯುರೋಪ್‌ನ ಪ್ರಮುಖ ಉತ್ಪಾದಕ ರಾಷ್ಟ್ರವಾಗಿರುವ ಜರ್ಮನಿ ವರ್ಷಕ್ಕೆ ಸುಮಾರು 12 ಮಿಲಿಯನ್ ಮೆಟ್ರಿಕ್ ಟನ್ ಉಪ್ಪು ಉತ್ಪಾದಿಸುತ್ತದೆ. ಹಿಮಾವೃತ ರಸ್ತೆಗಳ ಹಿಮ ಕರಗಿಸಲು (De-icing) ಹಾಗೂ ರಾಸಾಯನಿಕ ಕೈಗಾರಿಕೆಗಳಿಗೆ ಇಲ್ಲಿನ ಉಪ್ಪನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಆಸ್ಟ್ರೇಲಿಯಾ– 7ನೇ ಸ್ಥಾನ

ಆಸ್ಟ್ರೇಲಿಯಾವು ನೈಸರ್ಗಿಕ ಉಪ್ಪಿನ ಸರೋವರಗಳು ಹಾಗೂ ಸುಧಾರಿತ ಹೊರತೆಗೆಯುವ ತಂತ್ರಜ್ಞಾನದ ನೆರವಿನಿಂದ ವಾರ್ಷಿಕ ಸುಮಾರು 11 ಮಿಲಿಯನ್ ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಇದನ್ನು ದೇಶೀಯ ಬಳಕೆಯ ಜೊತೆಗೆ ಇತರ ದೇಶಗಳಿಗೂ ರಫ್ತು ಮಾಡಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಆಷಾಢದ ಕೊನೆಯ ಶುಕ್ರವಾರ; ಮಹಾಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ – Kannada News | Devotion at Chamundi Hills: Last Ashada Friday Sees Special Mahalakshmi Alankara

ಮೈಸೂರಿನ ಐತಿಹಾಸಿಕ ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು ಅಲಂಕಾರಗಳು ನಡೆಯುತ್ತಿವೆ. ಈ ಶುಭ ಸಂದರ್ಭದಲ್ಲಿ, ಜಗನ್ಮಾತೆ ಚಾಮುಂಡೇಶ್ವರಿ ದೇವಿಯನ್ನು ಮಹಾಲಕ್ಷ್ಮೀ ಅಲಂಕಾರದಲ್ಲಿ ಸಿಂಗಾರಗೊಳಿಸಿದ್ದು, ದೇವಿಯ ಸೌಂದರ್ಯವು ಭಕ್ತರ ಮನಸೆಳೆಯುತ್ತಿದೆ.

ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ಎಲ್ಲೆಡೆ ಭಕ್ತಿಯ ವಾತಾವರಣ ನೆಲೆಸಿತ್ತು. ಅಧಿಕಾರಿಗಳು ಮತ್ತು ಸ್ವಯಂಸೇವಕರು ಭಕ್ತರಿಗೆ ಸುಗಮ ದರ್ಶನಕ್ಕೆ ಸಹಕರಿಸುತ್ತಿದ್ದಾರೆ. ಆಷಾಢದ ಕೊನೆಯ ಶುಕ್ರವಾರದ ಈ ವಿಶೇಷ ದಿನವು ಭಕ್ತರಿಗೆ ಸ್ಮರಣೀಯ ಅನುಭವವನ್ನು ನೀಡುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

 

Source link

‘ಶಾಂತಿ ಕ್ರಾಂತಿ’ ಮರುಬಿಡುಗಡೆಗೆ ಹಲವು ಸವಾಲು; ಅಂದುಕೊಂಡಷ್ಟು ಸುಲಭವಿಲ್ಲ ರೀ-ರಿಲೀಸ್ – Kannada News | Re Release Challenges: Why Ravichandran Shanti Kranti Is not Easy to Bring Back to Theatres

‘ಶಾಂತಿ ಕ್ರಾಂತಿ’ ಇದು 1991ರಲ್ಲಿ ರಿಲೀಸ್ ಆದ ಅಸಲಿ ಪ್ಯಾನ್ ಇಂಡಿಯಾ ಸಿನಿಮಾ. ಕೇವಲ ಡಬ್ ಮಾಡದೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಕಲಾವಿದರನ್ನೇ ಇಟ್ಟುಕೊಂಡು ಶೂಟ್ ಮಾಡಲಾಗಿತ್ತು. ಆ ಸಮಯದಲ್ಲೇ ಇದರ ಬಜೆಟ್ 10 ಕೋಟಿ ರೂಪಾಯಿ ಮೀರಿತ್ತು. ಈಗ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಬೇಕೆಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಜೋರಾ್ಉದೆ. ಆದರೆ, ಸೋಶಿಯಲ್ ಮೀಡಿಯಾ ಟ್ರೆಂಡ್‌ಗೂ ಮತ್ತು ವಾಸ್ತವದ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.

ಸೋಶಿಯಲ್ ಮೀಡಿಯಾ ಕ್ರೇಜ್ vs ವಾಸ್ತವ

ಸಾಮಾಜಿಕ ಜಾಲತಾಣಗಳಲ್ಲಿ ‘ಶಾಂತಿ ಕ್ರಾಂತಿ’ ರೀ-ರಿಲೀಸ್‌ಗೆ ಭಾರಿ ಬೆಂಬಲ ಸಿಗುತ್ತಿದೆ. ರೀ-ರಿಲೀಸ್ ಮಾಡಿ ಎಂಬ ರೀಲ್ಸ್‌ಗೆ ಲಕ್ಷಾಂತರ ವೀಕ್ಷಣೆ ಹಾಗೂ ಲೈಕ್ಸ್ ಬರುತ್ತಿದೆ. ಆದರೆ, ಈ ಪೈಕಿ ಎಷ್ಟು ಜನರು ಥಿಯೇಟರ್​​ಗೆ ಬರುತ್ತಾರೆ ಎಂಬುದು ಪ್ರಶ್ನೆ.

ಉಚಿತ ವೀಕ್ಷಣೆ

‘ಶಾಂತಿ ಕ್ರಾಂತಿ’ ಸಿನಿಮಾ ಈಗಾಗಲೇ ಯುಟ್ಯೂಬ್‌ನಲ್ಲಿ ಉಚಿತವಾಗಿ ಲಭ್ಯವಿದೆ ಹಾಗೂ ಉದಯ ಟಿವಿಯಲ್ಲಿ ವಾರಕ್ಕೆ ಎರಡೆರಡು ಬಾರಿ ಪ್ರಸಾರವಾಗುತ್ತಿದೆ. ಹೀಗಿರುವಾಗ ಜನರು ಥಿಯೇಟರ್​​ಗೆ ಹೋಗಿ ವೀಕ್ಷಿಸುತ್ತಾರೆ ಎಂಬುದನ್ನು ಹೇಗೆ ನಿರೀಕ್ಷಿಸಬಹುದು? ಇಂದಿನ ಕಾಲದಲ್ಲಿ ಪ್ರೇಕ್ಷಕರು ಅರ್ಧ ದಿನದ ಸಮಯ ಮೀಸಲಿಟ್ಟು, ಸಾವಿರಾರು ರೂಪಾಯಿಗಳನ್ನು ಟಿಕೆಟ್, ಪಾಪ್‌ಕಾರ್ನ್ ಹಾಗೂ ಪಾರ್ಕಿಂಗ್‌ಗೆ ಖರ್ಚು ಮಾಡಿ ಚಿತ್ರಮಂದಿರಕ್ಕೆ ಬರುವುದು ವಿರಳ.

ಹಳೆಯ ಸಿನಿಮಾವನ್ನು ಈಗಿನ ಕಾಲಕ್ಕೆ ತಕ್ಕಂತೆ 4K ನೆಗೆಟಿವ್ ಕ್ಲೀನಿಂಗ್, ಸೌಂಡ್ ಮಿಕ್ಸಿಂಗ್ ಸೇರಿದಂತೆ ತಾಂತ್ರಿಕವಾಗಿ ಸಿದ್ಧಪಡಿಸಿ ರೀ-ರಿಲೀಸ್ ಮಾಡಲು ಲಕ್ಷಾಂತರ ರೂಪಾಯಿ ಹೂಡಿಕೆ ಬೇಕಾಗುತ್ತದೆ. ಹೂಡಿಕೆ ಮಾಡಿದ ಹಣ ವಾಪಸ್ ಬರುವುದು ಅನುಮಾನ.

ಶೇ. 95 ರೀ-ರಿಲೀಸ್ ಸಿನಿಮಾಗಳು ವಿಫಲ

ಕನ್ನಡ ಚಿತ್ರರಂಗದಲ್ಲಿ ರೀ-ರಿಲೀಸ್ ಆದ ಶೇ. 95ರಷ್ಟು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿವೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಥಿಯೇಟರ್ ಮುಂದೆ ಸಂಭ್ರಮಿಸಿ ಹಾಕುವ ವಿಡಿಯೋಗಳು ಕೇವಲ ಶೇ. 2ರಷ್ಟು ಮಾತ್ರ ವಾಸ್ತವ. ಉಳಿದ ಶೇ. 98ರಷ್ಟು ಶೋಗಳು ಹಾಗೂ ಥಿಯೇಟರ್‌ಗಳು ಖಾಲಿ ಉಳಿಯುತ್ತವೆ ಮತ್ತು ಥಿಯೇಟರ್ ಬಾಡಿಗೆಯೂ ವಾಪಸ್ ಬರುವುದಿಲ್ಲ.

ಇದನ್ನೂ ಓದಿ: ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಮಗನಿಂದ ಸಿಕ್ತು ಅಪ್​​ಡೇಟ್

ರವಿಚಂದ್ರನ್​ಗೆ ಇತ್ತು ಅನುಮಾನ

ರವಿಚಂದ್ರನ್ ಅವರಿಗೆ ಈ ಸಿನಿಮಾ ಮಾಡುವಾಗಲೇ ಇದರ ಫಲಿತಾಂಶದ ಅರಿವಿತ್ತು. ಆದರೆ ತಂದೆಯ ಸೂಚನೆಯಂತೆ ರಜನಿಕಾಂತ್, ನಾಗಾರ್ಜುನ ಅವರಂತಹ ಸೂಪರ್ ಸ್ಟಾರ್‌ಗಳ ಕಾಲ್‌ಶೀಟ್ ವೃಥಾ ಹೋಗಬಾರದೆಂದು ಕಷ್ಟಪಟ್ಟು ಸಿನಿಮಾವನ್ನು ಪೂರ್ಣಗೊಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:02 am, Fri, 7 August 26

Source link

TV9 Kannada News Live: ಕರಾವಳಿ, ಮಲೆನಾಡಿಗೆ ಭಾರಿ ಮಳೆ ಅಲರ್ಟ್! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 07 August 2026 Monsoon, Cabinet expansion, winter session, Politics Cinema Latest Updates Online

Breaking News Today Live Updates in Kannada: ದೇಶ ಮತ್ತು ವಿದೇಶಗಳ ಇಂದಿನ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್‌ಗೆ ಸುಸ್ವಾಗತ. ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು (ಆಗಸ್ಟ್ 7) ಕರಾವಳಿ ಹಾಗೂ ಮಲೆನಾಡಿನ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ, ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷ ‘ಸುಗಮ ದರ್ಶನ’ ನೀತಿಯನ್ನು ಜಾರಿಗೆ ತರಲಾಗಿದೆ. ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಯುದ್ಧ ಶೀಘ್ರ ಅಂತ್ಯಗೊಳ್ಳುವ ಸುಳಿವು ನೀಡಿದ್ದು, ಯುಎಸ್ ಮಿಲಿಟರಿ ಶಸ್ತ್ರಾಸ್ತ್ರ ಕೊರತೆ ವರದಿ ಮಾಡಿದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಕೆಂಡಾಮಂಡಲರಾಗಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

Sugama Darshan: ಅಯೋಧ್ಯೆಯಲ್ಲಿ ವೃದ್ಧರಿಗೆ ‘ಸುಗಮ ದರ್ಶನ’ ಪಾಸ್; 3 ವರ್ಷದೊಳಗಿನ ಮಕ್ಕಳ ತಾಯಂದಿರಿಗೂ ನೇರ ದರ್ಶನ! – Kannada News | Ayodhya Ram Temple: Sugama Darshana for Elders and Kids, Easy Darshan Policy

ದೇಶಾದ್ಯಂತ ಶ್ರೀರಾಮ ಮಂದಿರಕ್ಕೆ ಪ್ರತಿದಿನ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಶ್ರೀರಾಮ ಜನ್ಮಭೂಮಿ ದೇವಾಲಯ ಟ್ರಸ್ಟ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ವೃದ್ಧರು, ಸಣ್ಣ ಮಕ್ಕಳಿರುವ ತಾಯಂದಿರು ಹಾಗೂ ಕುಟುಂಬಗಳಿಗೆ ಯಾವುದೇ ಅಡೆತಡೆಯಿಲ್ಲದೆ ಶ್ರೀರಾಮನ ದರ್ಶನ ಕಲ್ಪಿಸಲು ವಿಶೇಷ ‘ಸುಗಮ ದರ್ಶನ’ ನೀತಿಯನ್ನು ಜಾರಿಗೆ ತರಲಾಗಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಸುದೀರ್ಘ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಭಕ್ತರ ಶ್ರಮ ತಪ್ಪಲಿದ್ದು, ಎಲ್ಲರಿಗೂ ಶಾಂತಿಯುತ ಹಾಗೂ ಆರಾಮದಾಯಕವಾಗಿ ಶ್ರೀರಾಮನ ದರ್ಶನ ಪಡೆಯಲು ಹಾದಿ ಸುಗಮವಾಗಿದೆ.

ಹಿರಿಯ ನಾಗರಿಕರಿಗೆ ಕೇವಲ 10 ನಿಮಿಷಗಳಲ್ಲಿ ಸಿಗಲಿದೆ ‘ಸುಗಮ ದರ್ಶನ’ ಪಾಸ್:

70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಇನ್ಮುಂದೆ ಆನ್‌ಲೈನ್‌ನಲ್ಲಿ ಅಥವಾ ಸಾಮಾನ್ಯ ಸಾಲಿನಲ್ಲಿ ನಿಂತು ಮುಂಗಡ ಅನುಮತಿ ಪಡೆಯುವ ಅಗತ್ಯವಿಲ್ಲ. ದೇವಾಲಯದ ಆವರಣದಲ್ಲಿರುವ ‘ಸುಗಮ ದರ್ಶನ ಕೌಂಟರ್’ಗೆ ಭೇಟಿ ನೀಡಿ ತಮ್ಮ ವಯಸ್ಸಿನ ಪರಿಶೀಲನೆಗಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಯಾವುದೇ ಸರ್ಕಾರಿ ಗುರುತಿನ ಚೀಟಿಯನ್ನು ತೋರಿಸಿದರೆ ಸಾಕು, ಕೇವಲ 10 ನಿಮಿಷಗಳಲ್ಲಿ ಅವರಿಗೆ ಪಾಸ್ ನೀಡಲಾಗುತ್ತದೆ. ಈ ಮೂಲಕ ಅವರು ದೀರ್ಘ ಸಮಯ ಕಾಯದೆ ಸುಲಭವಾಗಿ ದರ್ಶನ ಪಡೆಯಬಹುದು.

ವೃದ್ಧ ಭಕ್ತರ ನೆರವಿಗೆ ಬರುವ ಸಹಾಯಕರಿಗೂ ದೇವಾಲಯ ಪ್ರವೇಶಿಸಲು ಅವಕಾಶ:

ಹಿರಿಯ ನಾಗರಿಕರು ಒಂಟಿಯಾಗಿ ಪ್ರಯಾಣಿಸಲು ಅಥವಾ ನಡೆಯಲು ಕಷ್ಟಪಡಬೇಕಾಗಬಹುದು ಎಂಬುದನ್ನು ದೇವಾಲಯ ಟ್ರಸ್ಟ್ ವಿಶೇಷವಾಗಿ ಪರಿಗಣಿಸಿದೆ. ಆದ್ದರಿಂದ ಸುಗಮ ದರ್ಶನ ಸೌಲಭ್ಯದ ಅಡಿಯಲ್ಲಿ ವೃದ್ಧರ ಜೊತೆಯಲ್ಲಿರುವ ಒಬ್ಬ ವ್ಯಕ್ತಿಗೆ ಅಥವಾ ಸಹಾಯಕರಿಗೆ (Helper) ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಈ ವ್ಯವಸ್ಥೆಯು ಹಿರಿಯ ಭಕ್ತರು ಸಂಪೂರ್ಣ ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ವಾತಾವರಣದಲ್ಲಿ ದೇವರ ದರ್ಶನ ಪಡೆಯಲು ಸಹಾಯ ಮಾಡುತ್ತದೆ.

ಸಣ್ಣ ಮಕ್ಕಳಿರುವ ತಾಯಂದಿರಿಗೆ ವಿಶೇಷ ಆದ್ಯತೆ ಮತ್ತು ನೇರ ದರ್ಶನ:

ಮೂರು ವರ್ಷದೊಳಗಿನ ಕಂದಮ್ಮಗಳೊಂದಿಗೆ ಬರುವ ತಾಯಂದಿರಿಗೆ ದೇವಾಲಯ ಟ್ರಸ್ಟ್ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದೆ. ಅವರು ಸಾಮಾನ್ಯ ಕ್ಯೂನಲ್ಲಿ ಗಂಟೆಗಟ್ಟಲೆ ನಿಲ್ಲುವ ಅಗತ್ಯವಿಲ್ಲದೆ, ನೇರವಾಗಿ ‘ಸುಗಮ ದರ್ಶನಂ ಕೌಂಟರ್’‌ನಲ್ಲಿ ಪಾಸ್ ಪಡೆದುಕೊಂಡು ದೇವರ ದರ್ಶನಕ್ಕೆ ತೆರಳಬಹುದು. ಇದು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರುವ ಮಹಿಳೆಯರಿಗೆ ಅನಗತ್ಯ ಶ್ರಮ ಹಾಗೂ ತೊಂದರೆಯಾಗುವುದನ್ನು ತಪ್ಪಿಸಲಿದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

10 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ ಹಾಗೂ ಪಾಸ್ ಇಲ್ಲದೆ ಉಚಿತ ಪ್ರವೇಶ:

ಹತ್ತು ವರ್ಷದೊಳಗಿನ ಮಕ್ಕಳಿಗೆ ದೇವಾಲಯ ಪ್ರವೇಶಿಸಲು ಯಾವುದೇ ವಿಶೇಷ ಪಾಸ್ ಅಥವಾ ಶುಲ್ಕದ ಅಗತ್ಯವಿರುವುದಿಲ್ಲ. ಅವರು ಸಂಪೂರ್ಣವಾಗಿ ಉಚಿತವಾಗಿ ನೇರವಾಗಿ ದೇವಾಲಯವನ್ನು ಪ್ರವೇಶಿಸಬಹುದು ಮತ್ತು ತಮ್ಮ ಪೋಷಕರೊಂದಿಗೆ ಶ್ರೀರಾಮನ ದರ್ಶನ ಪಡೆಯಬಹುದು. ಮಕ್ಕಳೊಂದಿಗೆ ಆಗಮಿಸುವ ಕುಟುಂಬಗಳಿಗೆ ದರ್ಶನ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಕ್ತರ ಸೇವೆಗೆ ಆದ್ಯತೆ ನೀಡಿರುವ ಟ್ರಸ್ಟ್ ನಿರ್ಧಾರಕ್ಕೆ ದೇಶಾದ್ಯಂತ ಮೆಚ್ಚುಗೆ:

ಅಯೋಧ್ಯೆಗೆ ಹರಿದುಬರುತ್ತಿರುವ ಭಕ್ತರ ಬೃಹತ್ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಗೌರವ ನೀಡುವ ಉದ್ದೇಶದಿಂದ ಈ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಕ್ತರಿಗೆ ಸೇವೆ ಸಲ್ಲಿಸುವುದನ್ನೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ದೇವಾಲಯ ಟ್ರಸ್ಟ್‌ನ ಈ ಮಾನವೀಯ ಕ್ರಮಕ್ಕೆ ದೇಶಾದ್ಯಂತ ಇರುವ ಕೋಟ್ಯಂತರ ಶ್ರೀರಾಮ ಭಕ್ತರಿಂದ ವ್ಯಾಪಕ ಮೆಚ್ಚುಗೆ ಮತ್ತು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲೈಂಗಿಕ ದೌರ್ಜನ್ಯಕ್ಕೂ ಮುನ್ನ ಆಕೆ ಬಳಿ ನಾನು ನಿನ್ನ ಬಾಸ್, ನಾನು ಏನು ಬೇಕಿದ್ರೂ ಮಾಡಬಹುದು ಎಂದಿದ್ದ ತರುಣ್ ತೇಜ್​ಪಾಲ್ – Kannada News | ‘I’m Your Boss’: Tarun Tejpal’s Conversation Referenced in Court Verdict Draws Attention

ಪಣಜಿ, ಆಗಸ್ಟ್​ 07: ಗೋವಾದ ಪಂಚತಾರಾ ಹೋಟೆಲ್​ ಒಂದರ ಲಿಫ್ಟ್​ನಲ್ಲಿ ತಮ್ಮ ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆ ಸಂಸ್ಥಾಪಕ ಹಾಗೂ ಮಾಜಿ ಸಂಪಾದಕ ತರುಣ್ ತೇಜ್​ಪಾಲ್(Tarun Tejpal)​ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ನಡೆದಿದ್ದು, 2013ರಲ್ಲಿ, ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್ ಸಲ್ಲಿಸಿದ ಸಾಕ್ಷ್ಯಾಧಾರಗಳ ಪೈಕಿ, ಘಟನೆಯ ನಂತರ ತೇಜ್‌ಪಾಲ್ ಸಂತ್ರಸ್ತೆಗೆ ಬರೆದಿದ್ದ ಕ್ಷಮೆಯಾಚನೆಯ ಇ-ಮೇಲ್ ಈ ಐತಿಹಾಸಿಕ ತೀರ್ಪಿಗೆ ಅತ್ಯಂತ ಪ್ರಮುಖ ತಿರುವಾಯಿತು.

ಲಿಫ್ಟ್‌ನಲ್ಲಿ ನಡೆದ ಘಟನೆ: 2013 ರ ನವೆಂಬರ್ 7 ಮತ್ತು 8 ರಂದು ಗೋವಾದಲ್ಲಿ ನಡೆದ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ, ತಮ್ಮ ಸಂಪಾದಕ ಹುದ್ದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಿರಿಯ ಮಹಿಳಾ ಪತ್ರಕರ್ತೆಯ ಮೇಲೆ ತೇಜ್‌ಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಸಂತ್ರಸ್ತೆ ತೇಜ್‌ಪಾಲ್ ಅವರನ್ನು ತಡೆಯಲು ಯತ್ನಿಸಿದಾಗ, ತೇಜ್‌ಪಾಲ್ ನಾನು ನಿನ್ನ ಬಾಸ್, ನಾನು ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದಾಗಿ ಬರೆದಿದ್ದ ಇ-ಮೇಲ್ ಸಂಭಾಷಣೆಯನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತು.

ಬೇಷರತ್ ಕ್ಷಮೆಯಾಚನೆ: ಘಟನೆ ನಡೆದ ಕೆಲವೇ ದಿನಗಳಲ್ಲಿ ತೇಜ್‌ಪಾಲ್ ಸಂತ್ರಸ್ತೆಗೆ ಕಳುಹಿಸಿದ ಇಮೇಲ್‌ನಲ್ಲಿ,ನನ್ನ ನಿರ್ಧಾರದ ವೈಫಲ್ಯ ಮತ್ತು ನಾಚಿಕೆಗೇಡಿನ ವರ್ತನೆಗಾಗಿ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ. ಕಚೇರಿಯ ನಂಬಿಕೆ ಮತ್ತು ಗೌರವದ ಸಂಬಂಧವನ್ನು ನಾನು ಉಲ್ಲಂಘಿಸಿದ್ದೇನೆ ಎಂದು ಬರೆದುಕೊಂಡಿದ್ದರು.

ಮತ್ತಷ್ಟು ಓದಿ: Tarun Tejpal: ತರುಣ್ ತೇಜ್‌ಪಾಲ್‌ಗೆ ಭಾರಿ ಆಘಾತ: 2013ರ ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ದೋಷಿ, ಹೈಕೋರ್ಟ್ ತೀರ್ಪು

ಸಾಲಿಸಿಟರಲ್ ಜನರಲ್ ತುಷಾರ್ ಮೆಹ್ತಾ ಅವರು ಈ ಇಮೇಲ್ ಅನ್ನು ನ್ಯಾಯಾಲಯದ ಮುಂದೆ ಪ್ರಬಲ ಸಾಕ್ಷಿಯಾಗಿ ಮಂಡಿಸಿ, ಆರೋಪಿಯು ತನ್ನ ಕೃತ್ಯವನ್ನು ಇ-ಮೇಲ್ ಮೂಲಕ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ ಎಂದು ವಾದಿಸಿದರು. 10 ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ62 ವರ್ಷದ ತೇಜ್‌ಪಾಲ್, ಕಳೆದ 13 ವರ್ಷಗಳಿಂದ ನನ್ನನ್ನು  ಗುರಿ ಮಾಡಲಾಗುತ್ತಿದೆ. ತೆಹಲ್ಕಾ ಮಾಡಿದ ಪತ್ರಿಕೋದ್ಯಮದ ತನಿಖೆಗಳಿಂದಾಗಿ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ವಿಚಾರಣಾ ನ್ಯಾಯಾಲಯದ ಖುಲಾಸೆಯನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತೇಜ್‌ಪಾಲ್ ವಕೀಲರು ತಿಳಿಸಿದ್ದಾರೆ. ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಯುವ ಕಾನೂನಿನ (POSH Act) ಇತಿಹಾಸದಲ್ಲಿ ಈ ಪ್ರಕರಣ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಸಂಸ್ಥೆಯ ವರಿಷ್ಠರು ಅಥವಾ ‘ಬಾಸ್’ ಸ್ಥಾನದಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಿರಿಯ ನೌಕರರ ಮೇಲೆ ಶೋಷಣೆ ನಡೆಸುವುದಕ್ಕೆ ಈ ತೀರ್ಪು ಬಲವಾದ ಎಚ್ಚರಿಕೆಯಾಗಿದೆ.

ಸಂತ್ರಸ್ತೆಯ ಸುದೀರ್ಘ ಹೋರಾಟ: ಕಳೆದ 13 ವರ್ಷಗಳಿಂದ ಅತ್ಯಂತ ಪ್ರಭಾವಿ ಮಾಧ್ಯಮ ವ್ಯಕ್ತಿಯೊಬ್ಬರ ವಿರುದ್ಧ ಸತತ ಕಾನೂನು ಹೋರಾಟ ನಡೆಸಿದ ಸಂತ್ರಸ್ತೆಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರರು ಶ್ಲಾಘಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version