ಆಂತ್ರೋಪಿಕ್​ನ ಬಲಿಷ್ಠ ಎಐ ಮಾಡಲ್​ಗಳು ಅಮೆರಿಕನ್ನೇತರರಿಗೆ ಅಲಭ್ಯ; ಭಾರತಕ್ಕೆ ಇದು ಎಚ್ಚರಿಕೆಯ ಕರೆಗಂಟೆಯಾ? – Kannada News | Sovereign AI for India: Sridhar Vembu on US Anthropic Restrictions & Tech Nationalism Warning

ನವದೆಹಲಿ, ಜೂನ್ 14: ಅಮೆರಿಕದ ಪ್ರಮುಖ AI ಸಂಸ್ಥೆಯಾದ ‘ಆಂತ್ರೊಪಿಕ್’, ಭದ್ರತಾ ಕಾರಣಗಳನ್ನು ನೀಡಿ ತನ್ನ ಅತ್ಯಾಧುನಿಕ ‘ಫೇಬಲ್ 5’ (Fable 5) ಮತ್ತು ‘ಮೈಥೋಸ್ 5’ (Mythos 5) ಮಾಡೆಲ್‌ಗಳನ್ನು ಅಮೆರಿಕದ ಹೊರಗಿನವರು ಹಾಗೂ ಅಮೆರಿಕದಲ್ಲಿರುವ ವಿದೇಶಿ ಪ್ರಜೆಗಳು ಬಳಸದಂತೆ ನಿರ್ಬಂಧ ಹೇರಿದೆ. ಅಮೆರಿಕ ಸರ್ಕಾರದ ಆದೇಶದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಂತ್ರೊಪಿಕ್ ಹೇಳಿಕೊಂಡಿದೆ. ಈ ಬೆಳವಣಿಗೆ ಬಗ್ಗೆ ಕೆಲ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ವಿಚಾರದಲ್ಲಿ ಜಾಗತೀಕರಣ ಸತ್ತಿದೆ ಎಂಬರ್ಥದಲ್ಲಿ ಭಾರತೀಯ ಉದ್ಯಮಿ ಶ್ರೀಧರ್ ವೆಂಬು (Sridhar Vembu) ಪ್ರತಿಕ್ರಿಯಿಸಿದ್ದಾರೆ. ಆಂತ್ರೊಪಿಕ್ ಕ್ರಮವು ಭಾರತದಂತಹ ದೇಶಗಳಿಗೆ ಒಂದು ದೊಡ್ಡ ಎಚ್ಚರಿಕೆ ಗಂಟೆಯಾಗಿದೆ ಎಂದಿದ್ದಾರೆ.

ಅಮೆರಿಕದ ವಾಣಿಜ್ಯ ಇಲಾಖೆಯ ಆದೇಶದ ಮೇರೆಗೆ, ಆಂತ್ರೊಪಿಕ್ ಕಂಪನಿಯು ತನ್ನ ಅತ್ಯಂತ ಶಕ್ತಿಶಾಲಿ AI ಮಾದರಿಗಳನ್ನು ವಿದೇಶಿಯರಿಗೆ ನಿಷೇಧಿಸಿದೆ. ಸಾರ್ವಜನಿಕರಿಗೆ ಲಭ್ಯವಾಗಿದ್ದ ಕ್ಲಾಡ್ ಫೇಬಲ್ 5 ಮತ್ತು ವಿಶೇಷ ಮಂದಿಗೆ ಸೀಮಿತವಾಗಿದ್ದ ಕ್ಲಾಡ್ ಮೈಥೋಸ್ 5 ಎಐ ಮಾಡಲ್​ಗಳೆರಡನ್ನೂ ಈಗ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು (ಆಂತ್ರೊಪಿಕ್‌ನಲ್ಲಿ ಕೆಲಸ ಮಾಡುವವರು ಸೇರಿದಂತೆ) ಕೂಡ ಈ ತಂತ್ರಜ್ಞಾನವನ್ನು ಬಳಸುವಂತಿಲ್ಲ.

ಶ್ರೀಧರ್ ವೇಂಬು ಅವರ ಎಚ್ಚರಿಕೆ

ಈ ಬೆಳವಣಿಗೆಯ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಶ್ರೀಧರ್ ವೇಂಬು, ಕೆಲ ಪ್ರಮುಖ ಅಂಶಗಳನ್ನು ಒತ್ತಿ ಹೇಳಿದ್ದಾರೆ. “ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನವು ಅತಿ ದೊಡ್ಡ ಶಕ್ತಿಯಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವು ಈಗ ತಂತ್ರಜ್ಞಾನದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಜಾಗತೀಕರಣ ಸತ್ತಿದೆ, ಭಾರತವು ತನ್ನದೇ ಆದ ಸ್ವತಂತ್ರ ಹಾದಿಯನ್ನು ಕಂಡುಕೊಳ್ಳಬೇಕು,” ಎಂದು ಅವರು ಕರೆ ನೀಡಿದ್ದಾರೆ.

ಭಾರತವು ವಿದೇಶಿ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗುವ ಬದಲು, ಸ್ವಂತದ AI ಸಾಮರ್ಥ್ಯವನ್ನು (Sovereign AI) ಬೆಳೆಸಿಕೊಳ್ಳುವುದು ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲೇ ಅತಿದೊಡ್ಡ ರಸ್ತೆ ಜಾಲ ಹೊಂದಿದ ದೇಶವೆಂಬ ದಾಖಲೆ ಭಾರತಕ್ಕೆ

ಭಾರತಕ್ಕೆ ಪರಿಹಾರವೇನು?

ಭಾರತವು ದೊಡ್ಡ ಪ್ರಮಾಣದ ಬಂಡವಾಳ ಬೇಕಾಗುವ ಮತ್ತು ಜಿಪಿಯು (GPU) ಕೊರತೆ ಎದುರಿಸುತ್ತಿರುವ ಬೃಹತ್ AI ಮಾಡೆಲ್‌ಗಳ ಹಿಂದೆಯೇ ಬಿದ್ದಿರಬಾರದು ಎಂದು ವೇಂಬು ಸಲಹೆ ನೀಡಿದ್ದಾರೆ. ಬದಲಾಗಿ ಭಾರತೀಯ ಸಂಸ್ಥೆಗಳು ಸಣ್ಣ ಗಾತ್ರದ, ದಕ್ಷತೆಯುಳ್ಳ ‘ಓಪನ್ ಸೋರ್ಸ್’ (Open Source) ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಚೀನಾದಲ್ಲಿ ಲಭ್ಯವಿರುವ ಓಪನ್ ಸೋರ್ಸ್ ಮಾದರಿಗಳನ್ನು ಬಳಸಿಕೊಂಡು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಬೇಕು. ನಮಗೆ ಮಾರಾಟ ಮಾಡಲು ಇಷ್ಟಪಡದವರಿಗೆ ಏಕೆ ಹಣ ನೀಡಬೇಕು? ಎಂದು ಪ್ರಶ್ನಿಸಿರುವ ಅವರು, ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುವಂತೆ ಸರ್ಕಾರಕ್ಕೆ ಪರೋಕ್ಷವಾಗಿ ಸೂಚಿಸಿದ್ದಾರೆ.

ಏನಿವು ಕ್ಲಾಡ್ ಫೇಬಲ್, ಮೈಥೋಸ್ ಎಐ ಮಾಡಲ್​ಗಳು?

ಕ್ಲಾಡ್​ನ ಜನರಲ್ ಎಐ ಮಾಡಲ್​ಗಳಲ್ಲಿ ಮೈಥೋಸ್ ಕ್ಲಾಸ್ ಮಾಡಲ್​ಗಳು ಪ್ರಮುಖವಾದುವು. ಸಾಫ್ಟ್​ವೇರ್ ಎಂಜಿನಿಯರಿಂಗ್, ವೈಜ್ಞಾನಿಕ ಸಂಶೋಧನೆ, ಸಂಕೀರ್ಣ ಸಮಸ್ಯೆ ಪರಿಹರಿಸುವುದು, ಜ್ಞಾನದ ಅಗತ್ಯ ಇರುವ ವರ್ಕ್​ಫ್ಲೋ ಇತ್ಯಾದಿ ಕಠಿಣ ಕಾರ್ಯಗಳಿಗೆ ಮೈಥೋಸ್ ಮಾಡಲ್​ಗಳು ಸೂಕ್ತವಾಗಿವೆ. ಆಂತ್ರೋಪಿಕ್​ನ ಕ್ಲಾಡ್ ಎಐ ಮಾಡಲ್​ಗಳಲ್ಲೇ ಅತ್ಯಂತ ಸಾಮರ್ಥ್ಯ ಇರುವ ಮಾಡಲ್​ಗಳು ಇವು. ಸಾಫ್ಟ್​ವೇರ್ ಡೆವಲಪರ್ಸ್, ಸಂಶೋಧಕರು ಮೊದಲಾದ ನುರಿತರಿಗೆ ಇವು ಸಹಾಯವಾಗುತ್ತವೆ.

ಇದನ್ನೂ ಓದಿ: ಎಚ್​ಎಎಲ್​ಗೆಯೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ ಹೈದರಾಬಾದ್ ಕಂಪನಿ; ತೇಜಸ್ ಯುದ್ಧವಿಮಾನದ ಬಿಡಿಭಾಗ ಪೂರೈಕೆಯಲ್ಲಿ ವಂಚನೆ; ದೂರು ದಾಖಲು

ಮೈಥೋಸ್ ದರ್ಜೆಯ ಎಐ ಮಾಡಲ್​ಗಳ ಪೈಕಿ ಫೇಬಲ್ 5 ಮಾತ್ರವೇ ಸಾರ್ವಜನಿಕರಿಗೆ ಲಭ್ಯವಾಗಿಸಿರುವುದು. ಇದು ಅತ್ಯಂತ ಶಕ್ತಿಶಾಲಿ ಮೈಥೋಸ್ ಕ್ಲಾಸ್ ಮಾಡಲ್. ಆದರೆ, ಕೆಲ ಸುರಕ್ಷತಾ ಫೀಚರ್​ಗಳಿವೆ. ಆದರೆ, ಮೈಥೋಸ್ 5 ಮಾಡಲ್​ನಲ್ಲಿ ಈ ನಿರ್ಬಂಧಗಳಿಲ್ಲ. ಆಯ್ದ ಗ್ರಾಹಕರಿಗೆ ಮಾತ್ರವೇ ಇದನ್ನು ನೀಡಲಾಗುತ್ತದೆ. ಈಗ ಅಮೆರಿಕ ಸರ್ಕಾರವು ಈ ಮೈಥೋಸ್ ಮಾಡಲ್​ಗಳನ್ನು ಹೊರ ದೇಶದವರು ದುರ್ಬಳಕೆ ಮಾಡಿಕೊಳ್ಳಬಹುದು ಎನ್ನುವ ಕಾರಣವೊಡ್ಡಿ ನಿರ್ಬಂಧ ಹಾಕಿದೆ.

ತಂತ್ರಜ್ಞಾನದ ಮೇಲಿನ ಹಿಡಿತ

ಈ ನಿರ್ಬಂಧಗಳು ಕೇವಲ ಸಾಫ್ಟ್‌ವೇರ್‌ಗೆ ಸೀಮಿತವಾಗಿಲ್ಲ; AI ತರಬೇತಿಗೆ ಅಗತ್ಯವಾದ ಉನ್ನತ ಮಟ್ಟದ ಜಿಪಿಯು (GPUs) ಚಿಪ್‌ಗಳ ರಫ್ತಿನ ಮೇಲೂ ಅಮೆರಿಕ ನಿಯಂತ್ರಣ ಹೊಂದಿದೆ. ಈ ಹಿನ್ನೆಲೆಯಲ್ಲಿ, ತಂತ್ರಜ್ಞಾನದ ವಿಷಯದಲ್ಲಿ ಸ್ವಾವಲಂಬನೆಯೇ ಮುಂದಿನ ದಿನಗಳಲ್ಲಿ ದೇಶದ ಭದ್ರತೆಗೆ ಕೀಲಿಕೈ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರರಂಗದಲ್ಲಿ ರಂಗಾಯಣ ರಘು ‘ಹೊಸ ಜೀವನ’; 400ನೇ ಸಿನಿಮಾ ಒಪ್ಪಿಕೊಂಡ ನಟ – Kannada News | Rangayana Raghu 400th Movie Hosa Jeevana title launched by Daali Dhananjay

ಕನ್ನಡ ಚಿತ್ರರಂಗದಲ್ಲಿ ನಟ ರಂಗಾಯಣ ರಘು (Rangayana Raghu) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಟನೆ, ಡೈಲಾಗ್ ಡೆಲಿವರಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡುತ್ತಾರೆ. ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟ ಅವರು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಸಲೀಸಾಗಿ ನಿಭಾಯಿಸುವಂತಹ ಪ್ರತಿಭಾವಂತ ಕಲಾವಿದ ರಂಗಾಯಣ ರಘು. ಈಗ ಅವರು ತಮ್ಮ ವೃತ್ತಿಬದುಕಿನಲ್ಲಿ ‘ಹೊಸ ಜೀವನ’ (Hosa Jeevana) ಆರಂಭಿಸುತ್ತಿದ್ದಾರೆ. ಏನಿದು ಹೊಸ ಜೀವನ? ಮುಂದೆ ಓದಿ..

ಈವರೆಗೂ ರಂಗಾಯಣ ರಘು ಅವರು ನೂರಾರು ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಅವರು ಬರೋಬ್ಬರಿ 399 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು 400ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಮೈಲಿಗಲ್ಲಿನ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾದ ಹೆಸರೇ ‘ಹೊಸ ಜೀವನ’ ಎಂಬುದು ವಿಶೇಷ.

ರಂಗಾಯಣ ರಘು ಅವರ 400ನೇ ಸಿನಿಮಾ ಎಂಬ ಕಾರಣದಿಂದಲೇ ‘ಹೊಸ ಜೀವನ’ ಕೌತುಕ ಮೂಡಿಸಿದೆ. ಈ ಆಕರ್ಷಕ ಶೀರ್ಷಿಕೆಯ ಸಿನಿಮಾಗೆ ಡಾಲಿ ಧನಂಜಯ ಅವರು ಸಾಥ್ ನೀಡಿದ್ದಾರೆ. ಡಾಲಿ ಧನಂಜಯ ಅವರು ‘ಹೊಸ ಜೀವನ’ ಸಿನಿಮಾದ ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿತ್ರತಂಡದ ಬಗ್ಗೆ ವಿವರ ಸಿಕ್ಕಿದೆ. ಇದು ಸ್ನೇಹ, ಪ್ರೀತಿ, ಜೀವನದ ಹೋರಾಟ ಮತ್ತು ಮೌಲ್ಯಗಳ ಕಥೆ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ.

ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವ ಪಡೆದಿರುವ ಮೋಹನ್ ಕುಮಾರ್ ಹನುಮಯ್ಯ ಅವರು ‘ಹೊಸ ಜೀವನ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ‌ರಂಗಾಯಣ ರಘು ಮಾತ್ರವಲ್ಲದೇ ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಾಲ, ಶಿವರಾಜ್ ಕೆ.ಆರ್. ಪೇಟೆ, ಅಚ್ಯುತ್ ಕುಮಾರ್, ಸುಹಾಸ್ ಅತ್ರೆಯಸ್, ಉದಯ್ ಆಚಾರ್, ಅಭಿ ಸಾಮ್ರಾಟ್ ಮುಂತಾದವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ

ಈ ಸಿನಿಮಾಗೆ ಜಿ.ಎಸ್. ಸಂಜೀವ್ ಪ್ರಸಾದ್ ಅವರು ಬಂಡವಾಳ ಹೂಡಿದ್ದಾರೆ. ಮೋಹನ್ ಕುಮಾರ್ ಹನುಮಯ್ಯ ಅವರು ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ. ‘ಅರ್ಜುನ್ ಪ್ರೊಡಕ್ಷನ್’ ಮತ್ತು ‘ಚಿರು ಪ್ರೊಡಕ್ಷನ್’ ಜಂಟಿಯಾಗಿ ‘ಹೊಸ ಜೀವನ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಸುಮುಖ ರಾವ್ ಅವರ ಸಂಗೀತ ನಿರ್ದೇಶನ, ಸುನಾದ್ ಗೌತಮ್ ಅವರ ಹಿನ್ನೆಲೆ ಸಂಗೀತ, ಶಶಿಧರ್ ಗೌಡ ಅವರ ಸಂಕಲನ, ರಾಜ್ ಕಾಂತ್ ಎಸ್. ಅವರ ಛಾಯಾಗ್ರಹಣ, ಪ್ರತಾಪ್ ಎಂ.ಆರ್. ಅವರ ಸಂಭಾಷಣೆ ಈ ಸಿನಿಮಾಗೆ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ? – Kannada News | Congress MLA HC Balakrishna Releases HD Kumaraswamy video about Bidadi Township

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More

Source link

IND vs AFG: ಟೀಮ್ ಇಂಡಿಯಾದ 2ನೇ ಏಕದಿನ ಪಂದ್ಯ ಯಾವಾಗ? ಇಲ್ಲಿದೆ ಮಾಹಿತಿ – Kannada News | India vs Afghanistan 2nd ODI Match Date and Details

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ ಮುಗಿದಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಮಳೆಯಿಂದಾಗಿ 25 ಓವರ್​ಗಳಿಗೆ ಸೀಮಿತವಾಗಿದ್ದ ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್​​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ಆರಂಭಿಕ ದಾಂಡಿಗ ರಹಮಾನುಲ್ಲಾ ಗುರ್ಬಾಝ್ (102) ಭರ್ಜರಿ ಶತಕ ಸಿಡಿಸಿದರು. ಗುರ್ಬಾಝ್ ಔಟಾಗುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ಅಫ್ಘಾನಿಸ್ತಾನ್ ತಂಡವು 24.5 ಓವರ್​ಗಳಲ್ಲಿ 194 ರನ್​ಗಳಿಸಿ ಸರ್ವಪತನ ಕಂಡಿತು.

195 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್ ಅಜೇಯ 84 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ ಕೇವಲ 19 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಸ್ಫೋಟಕ 39 ರನ್ ಚಚ್ಚಿದರು. ಈ ಮೂಲಕ ಟೀಮ್ ಇಂಡಿಯಾ 22.5 ಓವರ್​ಗಳಲ್ಲಿ 195 ರನ್​ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದೀಗ ಉಭಯ ತಂಡಗಳ ದ್ವಿತೀಯ ಪಂದ್ಯಕ್ಕಾಗಿ ಲಕ್ನೋಗೆ ತೆರಳಲು ಸಜ್ಜಾಗಿದ್ದಾರೆ.

ದ್ವಿತೀಯ ಪಂದ್ಯ ಯಾವಾಗ?

ಈ ಸರಣಿಯ ದ್ವಿತೀಯ ಪಂದ್ಯವು ಜೂನ್ 17 ರಂದು ನಡೆಯಲಿದೆ. ಬುಧವಾರ ನಡೆಯಲಿರುವ ಈ ಪಂದ್ಯಕ್ಕೆ ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಸರಣಿಯ ಎಲ್ಲಾ ಪಂದ್ಯಗಳನ್ನು  ಟಿವಿಯಲ್ಲಿ ‘ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್’ ಮೂಲಕ ವೀಕ್ಷಿಸಬಹುದು. ಹಾಗೆಯೇ ಮೊಬೈಲ್ ಹಾಗೂ ಡಿಜಿಟಲ್ ಪರದೆಯಲ್ಲಿ ‘ಜಿಯೋಸ್ಟಾರ್’  ಆ್ಯಪ್ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್.

ಇದನ್ನೂ ಓದಿ: 24 ಫೋರ್, 2 ಭರ್ಜರಿ ಸಿಕ್ಸ್​: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಜೋರ್ಡನ್ ಕಾಕ್ಸ್​

ಅಫ್ಘಾನಿಸ್ತಾನ್ ಏಕದಿನ ತಂಡ: ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಅಝ್ಮತ್​ ಒಮರ್​ಝಾಹಿ, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗೆಯಾಲಿಯಾ ಖರೋಟಿ, ಅಲ್ಲಾ ಗಝನ್​ಫರ್, ಬಿಲಾಲ್ ಸಮಿ, ದರ್ವೀಶ್ ರಸೂಲಿ, ಫರೀದ್ ಮಲಿಕ್, ಝಿಯಾ ಉರ್ ರೆಹಮಾನ್ ಶರೀಫಿ.

Source link

ಕಿರುಕುಳ ತಾಳಲಾರದೇ ಮೇಲಧಿಕಾರಿಯ ಮುಖಕ್ಕೆ ರಾಜೀನಾಮೆ ಪತ್ರ ಬಿಸಾಕಿದ ಮಹಿಳಾ ಸಿಬ್ಬಂದಿ – Kannada News | Belthangady Taluk Hospital Lady Staff resigns for Officer Harassment, FIR Booked

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More

Source link

ಗೌತಮ್ ಗಂಭೀರ್ ಸಲಹೆಯಿಂದ ಭಾರತದ ವಿರುದ್ಧ ಅಬ್ಬರಿಸಿದ ಗುರ್ಬಾಝ್! – Kannada News | Gurbaz Smashes Historic ODI Ton Against India After Gambhir’s Tips

ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡದ ಆರಂಭಿಕ ದಾಂಡಿಗ ರಹಮಾನುಲ್ಲಾ ಗುರ್ಬಾಝ್ ಸ್ಫೋಟಕ ಶತಕ ಸಿಡಿಸಿದ್ದರು. ಈ ಶತಕದ ಬೆನ್ನಲ್ಲೇ, ಈ ಸಾಧನೆಯ ಹಿಂದೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಮೂಲ್ಯ ಸಲಹೆಗಳಿರುವ ವಿಚಾರ ಬಹಿರಂಗವಾಗಿದೆ. ಈ ವಿಚಾರವನ್ನು ಬಹಿರಂಗಪಡಿಸಿದ್ದು ಮತ್ಯಾರೂ ಅಲ್ಲ, ರಹಮಾನುಲ್ಲಾ ಗುರ್ಬಾಝ್.

ಇದಕ್ಕೂ ಮುನ್ನ ನಡೆದ ಏಕೈಕ ಟೆಸ್ಟ್ ಪಂದ್ಯದ ಮುಕ್ತಾಯದ ನಂತರ, ತಮ್ಮ ಬ್ಯಾಟಿಂಗ್ ಶೈಲಿ ಹಾಗೂ ಶಾಟ್ ಆಯ್ಕೆಯನ್ನು ಸುಧಾರಿಸಿಕೊಳ್ಳಲು ಗುರ್ಬಾಝ್ ಅವರು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.

ಈ ಬಗ್ಗೆ ಮಾತನಾಡಿದ ಗುರ್ಬಾಝ್, “ಟೆಸ್ಟ್ ಪಂದ್ಯ ಮುಗಿದ ಬಳಿಕ ನಾನು ಗೌತಮ್ ಗಂಭೀರ್ ಸರ್ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೆ. ನನ್ನ ಶಾಟ್ ಸೆಲೆಕ್ಷನ್ ಉತ್ತಮಪಡಿಸಿಕೊಳ್ಳುವ ಬಗ್ಗೆ ನಾನು ಕೇಳಿದಾಗ ಅವರು ನೀಡಿದ ಸಲಹೆಗಳು ತುಂಬಾ ನೆರವಾದವು. ಆ ಪಾಯಿಂಟ್‌ಗಳನ್ನು ನಾನು ನೆಟ್ಸ್ ಅಭ್ಯಾಸದ ವೇಳೆ ಅಳವಡಿಸಿಕೊಂಡೆ. ಜಿಜಿ (ಗೌತಮ್ ಗಂಭೀರ್) ಸರ್ ಮಾರ್ಗದರ್ಶನಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ” ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

ಗಂಭೀರ್ – ಗುರ್ಬಾಝ್ ಬಾಂಧವ್ಯ:

ಗೌತಮ್ ಗಂಭೀರ್ ಮತ್ತು ರಹಮಾನುಲ್ಲಾ ಗುರ್ಬಾಝ್ ನಡುವೆ ಐಪಿಎಲ್‌ನಿಂದಲೇ ಉತ್ತಮ ಬಾಂಧವ್ಯವಿದೆ. ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ಮೆಂಟರ್ ಆಗಿ ಗಂಭೀರ್ ಕಾರ್ಯನಿರ್ವಹಿಸುತ್ತಿದ್ದಾಗ, ಗುರ್ಬಾಝ್ ಕೆಕೆಆರ್ ತಂಡದ ಪ್ರಮುಖ ಆಟಗಾರನಾಗಿದ್ದರು.

ಗಂಭೀರ್ ಅವರ ಗರಡಿಯಲ್ಲಿ ಪಳಗಿದ್ದ ಗುರ್ಬಾಝ್, ಅಂತರರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಹಳೆಯ ಮೆಂಟರ್ ಬಳಿ ಯಾವುದೇ ಹಿಂಜರಿಕೆಯಿಲ್ಲದೆ ಸಲಹೆ ಪಡೆದಿದ್ದಾರೆ. ಈ ಸಲಹೆಯೊಂದಿಗೆ ಅವರು ದಾಖಲೆಯ ಶತಕ ಸಿಡಿಸಿದ್ದು ವಿಶೇಷ.

ಇದನ್ನೂ ಓದಿ: 1921ರ ದಂಗೆ, ಬಿಟಿಷರ ಬಾಲ್ ಬಾಯ್ಸ್, ಕೇರಳಂ ಫುಟ್​​ಬಾಲ್ ಕ್ರೇಝ್!

ಗುರ್ಬಾಝ್ ದಾಖಲೆಗಳು:

ಮಳೆಯಿಂದಾಗಿ 25 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಝ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಶತಕದೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…

  • ಅತಿ ವೇಗದ ಶತಕ: ಕೇವಲ 48 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಅಫ್ಘಾನಿಸ್ತಾನದ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಏಕದಿನ ಶತಕದ ದಾಖಲೆ ನಿರ್ಮಿಸಿದ್ದಾರೆ.
  • 2ನೇ ಅತಿ ವೇಗದ ಶತಕ: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತಿ ವೇಗವಾಗಿ ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ಕೀರ್ತಿಗೆ ಪಾತ್ರರಾದರು. 45 ಎಸೆತಗಳಲ್ಲಿ ಶತಕ ಬಾರಿಸಿದ ಶಾಹಿದ್ ಅಫ್ರಿದಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
  • ಮೊದಲ ಬ್ಯಾಟರ್: ಟೀಮ್ ಇಂಡಿಯಾ ವಿರುದ್ಧ ಭಾರತದಲ್ಲಿ ಏಕದಿನ ಶತಕ ಸಿಡಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟರ್​ ಎಂಬ ಐತಿಹಾಸಿಕ ದಾಖಲೆ ಕೂಡ ರಹಮಾನುಲ್ಲಾ ಗುರ್ಬಾಝ್ ಪಾಲಾಗಿದೆ. ಇದಕ್ಕೂ ಮುನ್ನ ಅಫ್ಘಾನ್ ತಂಡ ಯಾವುದೇ ಬ್ಯಾಟರ್ ಭಾರತದಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ ಇತಿಹಾಸ ಇರಲಿಲ್ಲ.

Source link

AIIMS Recruitment 2026: ಏಮ್ಸ್​​​ನಲ್ಲಿ ಭರ್ಜರಿ ನೇಮಕಾತಿ; 1,484 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | AIIMS CRE 5 Recruitment 2025: 1484 Non Faculty Group B and C Vacancies Out! Apply Now

ಏಮ್ಸ್​​​ನಲ್ಲಿ ಭರ್ಜರಿ ನೇಮಕಾತಿImage Credit source: Pinterest

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು (AIIMS) ತನ್ನ ಸಾಮಾನ್ಯ ನೇಮಕಾತಿ ಪರೀಕ್ಷೆ (CRE-5)ಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಇರುವ ವಿವಿಧ ಎಮ್ಸ್ ಆಸ್ಪತ್ರೆಗಳು ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 1,484 ಬೋಧಕೇತರ (Non-Faculty) ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅರ್ಹ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಸುವರ್ಣ ಅವಕಾಶವಾಗಿದೆ.

ಅರ್ಜಿ ಸಲ್ಲಿಕೆಯ ದಿನಾಂಕಗಳು ಮತ್ತು ಅಧಿಕೃತ ವೆಬ್‌ಸೈಟ್:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಜೂನ್ 13 ರಿಂದ ಜುಲೈ 3 ರವರೆಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಎಮ್ಸ್‌ನ ಅಧಿಕೃತ ಪರೀಕ್ಷಾ ವೆಬ್‌ಸೈಟ್ ಆದ aiimsexams.ac.in ಗೆ ಭೇಟಿ ನೀಡುವ ಮೂಲಕ ನಿಗದಿತ ಅವಧಿಯೊಳಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆಗಳನ್ನು ಅಭ್ಯರ್ಥಿಗಳು ಸಂಪೂರ್ಣವಾಗಿ ಓದಿಕೊಳ್ಳುವುದು ಸೂಕ್ತ.

ಪರೀಕ್ಷಾ ದಿನಾಂಕ ಮತ್ತು ಆಯ್ಕೆ ವಿಧಾನ:

ನೇಮಕಾತಿಯ ಪ್ರಮುಖ ಹಂತವಾದ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯನ್ನು (CBT) ಜುಲೈ 25 ರಿಂದ ಜುಲೈ 27, 2026 ರ ನಡುವೆ ನಡೆಸಲು ತಾತ್ಕಾಲಿಕ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರವನ್ನು (Admit Card) ಜುಲೈ ಎರಡನೇ ವಾರದಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳು ಮತ್ತು ಅದರ ನಂತರ ಆಯಾ ಹುದ್ದೆಗಳಿಗೆ ಅನುಗುಣವಾಗಿ ನಡೆಯುವ ಕೌಶಲ್ಯ ಪರೀಕ್ಷೆಗಳ (Skill Test) ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಕೌಶಲ್ಯ ಪರೀಕ್ಷೆಯ ನಿಖರ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

ಲಿಖಿತ ಪರೀಕ್ಷೆಯ ಸ್ವರೂಪ ಮತ್ತು ನೆಗೆಟಿವ್ ಮಾರ್ಕಿಂಗ್:

ಈ ನೇಮಕಾತಿಯ ಲಿಖಿತ ಪರೀಕ್ಷೆಯು ಒಟ್ಟು 400 ಅಂಕಗಳಿಗೆ ನಡೆಯಲಿದ್ದು, ಪರೀಕ್ಷಾ ಅವಧಿಯು 90 ನಿಮಿಷಗಳಾಗಿರುತ್ತದೆ. ಸಂಪೂರ್ಣ ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಗಳ (MCQ) ಸ್ವರೂಪದಲ್ಲಿದ್ದು, ಒಟ್ಟು 100 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಲ್ಲಿ ಪ್ರತಿ ಸರಿಯಾದ ಉತ್ತರಕ್ಕೆ 4 ಅಂಕಗಳನ್ನು ನೀಡಲಾಗುವುದು ಮತ್ತು ಪ್ರತಿ ತಪ್ಪು ಉತ್ತರಕ್ಕೆ 1 ಅಂಕವನ್ನು ಋಣಾತ್ಮಕ ಅಂಕವಾಗಿ (Negative Marking) ಕಡಿತಗೊಳಿಸಲಾಗುತ್ತದೆ. ಪಠ್ಯಕ್ರಮದ ಪ್ರಕಾರ, ಸಾಮಾನ್ಯ ಜ್ಞಾನ, ಯೋಗ್ಯತೆ (Aptitude) ಮತ್ತು ಕಂಪ್ಯೂಟರ್ ಜ್ಞಾನದ ವಿಷಯಗಳಿಂದ 20 ಪ್ರಶ್ನೆಗಳನ್ನು ಹಾಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರ್ದಿಷ್ಟ ಹುದ್ದೆಗೆ ಸಂಬಂಧಿಸಿದ ವಿಷಯದಿಂದ 80 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ವರ್ಗವಾರು ಅರ್ಜಿ ಶುಲ್ಕದ ವಿವರಗಳು:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಸಾಮಾಜಿಕ ವರ್ಗದ ಆಧಾರದ ಮೇಲೆ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯ (General) ಮತ್ತು ಒಬಿಸಿ (OBC) ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 3,000 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಅಭ್ಯರ್ಥಿಗಳಿಗೆ 2,400 ರೂಪಾಯಿ ಅರ್ಜಿ ಶುಲ್ಕವಿರುತ್ತದೆ. ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಭರ್ತಿ ಮಾಡಲಾಗುವ ಪ್ರಮುಖ ಹುದ್ದೆಗಳು:

ಈ ಬಾರಿಯ ನೇಮಕಾತಿ ಅಡಿಯಲ್ಲಿ ವೈವಿಧ್ಯಮಯ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹಿರಿಯ ಆಡಳಿತಾಧಿಕಾರಿ, ಸಹಾಯಕ ಆಡಳಿತಾಧಿಕಾರಿ, ಕಿರಿಯ ಆಡಳಿತಾಧಿಕಾರಿ, ಕಾರ್ಯನಿರ್ವಾಹಕ ಸಹಾಯಕ, ಕಚೇರಿ ಸೂಪರಿಂಟೆಂಡೆಂಟ್ ಮತ್ತು ಸಹಾಯಕ ಹುದ್ದೆಗಳು ಇದರಲ್ಲಿ ಸೇರಿವೆ. ಇದರೊಂದಿಗೆ ಕೆಳ ವಿಭಾಗದ ಗುಮಾಸ್ತ (LDC), ಉನ್ನತ ವಿಭಾಗದ ಗುಮಾಸ್ತ (UDC), ಜೂನಿಯರ್ ಎಂಜಿನಿಯರ್ (ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್), ಸಹಾಯಕ ಎಂಜಿನಿಯರ್, ಸಹಾಯಕ ಆಹಾರ ತಜ್ಞ, ಆಹಾರ ತಜ್ಞ, ವಾರ್ಡನ್, ಸ್ಟೋರ್ ಕೀಪರ್, ಕ್ಯಾಷಿಯರ್ ಮತ್ತು ಜೂನಿಯರ್ ಅಕೌಂಟ್ಸ್ ಆಫೀಸರ್ ಮುಂತಾದ ಹತ್ತಾರು ವಿಭಾಗದ ಹುದ್ದೆಗಳಿಗೆ ಅಭ್ಯರ್ಥಿಗಳು ತಮ್ಮ ಅರ್ಹತೆಗನುಗುಣವಾಗಿ ಸ್ಪರ್ಧಿಸಬಹುದಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:36 pm, Sun, 14 June 26

Source link

ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು! – Kannada News | Bangalore Rain Update: Heavy Rainfall Triggers Waterlogging and Traffic Jams across Silicon City

ಬೆಂಗಳೂರು, ಜೂನ್ 14: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಬೆಂಗಳೂರಿನಲ್ಲಿಯೂ ವರುಣನ ಅಬ್ಬರ ಮುಂದುವರಿದಿದೆ. ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಕೆಲವೇ ನಿಮಿಷಗಳ ಧಾರಾಕಾರ ಮಳೆಯಿಂದ ರಸ್ತೆಗಳು ಮಿನಿ ಹೊಳೆಗಳಾಗಿ ಮಾರ್ಪಟ್ಟಿದ್ದು, ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಹವಾಮಾನ ಇಲಾಖೆಯು ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು: ಒಂದೇ ವೇದಿಕೆ ಹಂಚಿಕೊಂಡ BJP-JDS ಮುಖಂಡರು – Kannada News | Narayana Gowda and Kumaraswamy Unite in Mandya for Modis 12 Year Administration Commemoration

ಮಂಡ್ಯ, ಜೂನ್​​ 14: ಮಂಡ್ಯದ ಜೆಡಿಎಸ್​​-ಬಿಜೆಪಿ ನಾಯಕರು ಮುನಿಸು ಮರೆತು ಪ್ರಧಾನಿ ನರೇಂದ್ರ ಮೋದಿ 12 ವರ್ಷ ಸುಧೀರ್ಘ ಆಡಳಿತ ಸ್ಮರಣೆ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯದ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಉಭಯ ಪಕ್ಷಗಳ ಮುಖಂಡರು ವೇದಿಕೆ ಹಂಚಿಕೊಂಡಿರೋದು ಕಂಡುಬಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ ಸಂಬಂಧ ಬಿಜೆಪಿ – ಜೆಡಿಎಸ್ ಮುಖಂಡರು ಇತ್ತೀಚೆಗಷ್ಟೇ ಪರಸ್ಪರ ವಾಗ್ದಾಳಿ ನಡೆಸಿದ್ದರು. ಮೈತ್ರಿಯೇ ಬೇಡ ಎಂದು ಬಿಜೆಪಿ ನಾಯಕರಿಗೂ ದೂರು ನೀಡಲಾಗಿತ್ತು. ಹೀಗಿದ್ದರೂ ಅವೆಲ್ಲವನ್ನು ಮರೆತು ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ‌ ಕುಳಿತ ಕುಮಾರಸ್ವಾಮಿ ಮತ್ತು ನಾರಾಯಣಗೌಡ ಖುಷಿಯಿಂದಲೇ ಮಾತುಕತೆ ನಡೆಸಿರೋದು ಕಂಡುಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಟ ಸಲ್ಮಾನ್ ಖಾನ್ ಹೊಸ ಲುಕ್ ವೈರಲ್: ‘ತೇರೆ ನಾಮ್ 2’ ಬರುತ್ತಿದೆ ಎಂದ ಅಭಿಮಾನಿಗಳು – Kannada News | Salman Khan New Look at Lagaan 25 years celebration Fans recall Tere Naam movie

ಭಾರತೀಯ ಚಿತ್ರರಂಗದ ಮಹತ್ವದ ಸಿನಿಮಾಗಳಲ್ಲಿ ಒಂದಾದ, ಆಮಿರ್ ಖಾನ್ ನಟನೆಯ ‘ಲಗಾನ್’ (Lagaan) ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವಿಶೇಷ ಸಂಭ್ರಮಾಚರಣೆಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan), ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಸೇರಿದಂತೆ ಹಲವು ತಾರೆಯರು ಸಾಕ್ಷಿಯಾಗಿದ್ದರು. ವೇದಿಕೆ ಮೇಲೆ ಸಲ್ಮಾನ್ ಮತ್ತು ಆಮಿರ್ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾದರು. ಹಾಗಿದ್ದರೂ ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಸಲ್ಲು ಭಾಯ್ ಅವರ ಹೊಚ್ಚ ಹೊಸ ಲುಕ್ ಮೇಲೆ!

ಹೌದು, ಸಲ್ಮಾನ್ ಖಾನ್ ಸಂಪೂರ್ಣವಾಗಿ ವಿಭಿನ್ನ ಹಾಗೂ ರಗಡ್ ಮೇಕ್ ಓವರ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನೀಟಾಗಿ ಟ್ರಿಮ್ ಮಾಡಿದ ಗಡ್ಡ ಮತ್ತು ಶಾರ್ಟ್ ಬಝ್-ಕಟ್ ಹೇರ್‌ಸ್ಟೈಲ್‌ನಲ್ಲಿ ಸಲ್ಮಾನ್ ಸಖತ್ ಫಿಟ್ ಹಾಗೂ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋ ವೈರಲ್ ಆಗಿದೆ.

ಸಲ್ಮಾನ್ ಖಾನ್ ಅವರ ಈ ಹೊಸ ಅವತಾರ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸಲ್ಮಾನ್ ಅವರ ಬ್ಲಾಕ್‌ಬಸ್ಟರ್ ‘ತೇರೆ ನಾಮ್’ ಸಿನಿಮಾದ ‘ರಾಧೆ’ ಪಾತ್ರವನ್ನು ಅಭಿಮಾನಿಗಳು ಈ ನೆನಪಿಸಿಕೊಳ್ಳುತ್ತಿದ್ದಾರೆ. ‘ಭಾಯ್ ನಿಜವಾದ ತೇರೆ ನಾಮ್ ಕ್ಯಾರೆಕ್ಟರ್ ತರಹ ಕಾಣುತ್ತಿದ್ದಾರೆ’, ‘ರಾಧೆ ಕಮ್‌ಬ್ಯಾಕ್ 2027’, ‘ರಿಯಲ್ ಲೈಫ್‌ನಲ್ಲಿ ತೇರೆ ನಾಮ್ 2 ರಿಲೀಸ್ ಆಗುತ್ತಿದೆ’ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ:

ಇನ್ನೂ ಕೆಲವರು ಸಲ್ಮಾನ್ ಖಾನ್ ಅವರ ರಗಡ್ ಲುಕ್ ನೋಡಿ ‘ಗ್ಯಾಂಗ್‌ಸ್ಟರ್ ಸಲ್ಲು’ ಮತ್ತು ‘ಬಾಪ್ ಆಫ್ ಬಾಲಿವುಡ್’ ಎಂದು ಹೊಗಳುತ್ತಿದ್ದಾರೆ. ಇದರ ಮಧ್ಯೆ ಕೆಲವರು ತಮಾಷೆಯಾಗಿ ‘ಐಶ್ವರ್ಯಾ ರೈ ಅವರು ಭಾಯ್‌ಜಾನ್ ಅವರನ್ನು ಹುಚ್ಚರನ್ನಾಗಿ ಮಾಡಿಬಿಟ್ಟಿದ್ದಾರೆ’ ಎಂದು ಕಮೆಂಟ್ ಮಾಡುವ ಮೂಲಕ ಹಳೆಯ ನೆನಪನ್ನು ಕೆದಕಿದ್ದಾರೆ. ಸದ್ಯಕ್ಕೆ ಈ ಲುಕ್​ಗೆ ಕಾರಣ ಏನು ಎಂಬುದು ಗೌಪ್ಯವಾಗಿದೆ.

ಇದನ್ನೂ ಓದಿ: ‘ಕಾಲಾ ಹಿರಣ್’ ಚಿತ್ರತಂಡಕ್ಕೆ ದೆಹಲಿ ಹೈಕೋರ್ಟ್ ನೋಟಿಸ್: ಬಿಡುಗಡೆಗೆ ತಡೆ ಕೋರಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಈ ಹೊಸ ಲುಕ್ ಅನ್ನು ತಮ್ಮ ಮುಂಬರುವ ಚಿತ್ರಕ್ಕಾಗಿ ಮಾಡಿಕೊಂಡಿದ್ದಾರೆ ಎಂದು ಊಹಿಸಲಾಗುತ್ತಿದೆ. ಕಳೆದ ತಿಂಗಳಷ್ಟೇ ಸಲ್ಮಾನ್ ಖಾನ್ ಅವರು ನಿರ್ದೇಶಕ ವಂಶಿ ಪೈಡಿಪಲ್ಲಿ ಅವರೊಂದಿಗೆ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದರು. ಸದ್ಯಕ್ಕೆ ‘SVC63’ ಎಂದು ಕರೆಯಲಾಗುತ್ತಿರುವ ಈ ಬಿಗ್ ಬಜೆಟ್ ಚಿತ್ರವನ್ನು ಖ್ಯಾತ ನಿರ್ಮಾಣ ಸಂಸ್ಥೆ ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ನಿರ್ಮಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version