ಕಾಕ್ರೋಚ್ ಜನತಾ ಪಾರ್ಟಿಯಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ ದೇಶವ್ಯಾಪಿ ಅಭಿಯಾನ ಘೋಷಣೆ – Kannada News | Kya Bolti Public CJP announces nationwide campaign to highlight unemployment and education reforms

ನವದೆಹಲಿ, ಆಗಸ್ಟ್ 6: ಕಾಕ್ರೋಚ್ ಜನತಾ ಪಾರ್ಟಿ (CJP) ದೇಶಾದ್ಯಂತ ಕ್ಯಾ ಬೋಲ್ತಿ ಪಬ್ಲಿಕ್ (ಜನರು ಏನು ಹೇಳುತ್ತಾರೆ?) ಎಂಬ ಅಭಿಯಾನ ಆರಂಭಿಸಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ಕೋರ್ ಟೀಮ್‌ನ ಎರಡು ದಿನಗಳ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ, ಸಂಘಟನೆಯ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.

ಅಭಿಜೀತ್ ದಿಪ್ಕೆ ಅವರು “ಕ್ಯಾ ಬೋಲ್ತಿ ಪಬ್ಲಿಕ್” ಎಂಬ ಅಭಿಯಾನವನ್ನು ಘೋಷಿಸಿದ್ದು, ಇದು ಭಾರತದಾದ್ಯಂತ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಿದೆ. ಸಿಜೆಪಿ ಪ್ರತಿನಿಧಿಗಳು ನಾಗರಿಕರೊಂದಿಗೆ ಮಾತನಾಡಿ ಅವರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ದೇಶದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಕುರಿತು ಅವರ ಅಭಿಪ್ರಾಯಗಳನ್ನು ತಿಳಿಯಲಿದ್ದಾರೆ. “ಈ ‘ಕ್ಯಾ ಬೋಲ್ತಿ ಪಬ್ಲಿಕ್’ ಅಭಿಯಾನದ ಸಮಯದಲ್ಲಿ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಜನರು ಏನು ಯೋಚಿಸುತ್ತಾರೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳಲಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಒಪ್ಪಂದದಂತೆ ಕೇಸ್ ಹಿಂಪಡೆಯದಿದ್ದರೆ ಮತ್ತೆ ಪ್ರತಿಭಟನೆ; ಸರ್ಕಾರಕ್ಕೆ ಸಿಜೆಪಿ ಕೊನೆಯ ಎಚ್ಚರಿಕೆ

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮಾತನಾಡಿ, “ನಮ್ಮ ದೇಶದಲ್ಲಿ ಇಂದು ಸಂಸ್ಥೆಗಳ ಹೊಣೆಗಾರಿಕೆಯು ಅಪಾಯಕಾರಿ ಸ್ಥಿತಿಯಲ್ಲಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯದ ಮುನ್ಸೂಚನೆ. ಈ ಹಿಂದೆ ಮತದಾರರು ಸರ್ಕಾರವನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಇಂದು ಯಾರು ಮತ ಹಾಕಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸುತ್ತಿದೆ. ಪ್ರಜಾಪ್ರಭುತ್ವ ಹೀಗೆ ಕೆಲಸ ಮಾಡುವುದು ಸರಿಯಲ್ಲ. ನಾವು ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾಗಿದೆ. ನಾವು ಈ ಕೆಲಸ ಮಾಡುವವರೆಗೆ ದೇಶದಲ್ಲಿ ಚುನಾವಣಾ ಅಕ್ರಮಗಳು ಮುಂದುವರಿಯುತ್ತಲೇ ಇರುತ್ತವೆ” ಎಂದಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೇ ಅತಿದೊಡ್ಡ ಸಾಧನೆ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಜೀತ್ ದಿಪ್ಕೆ, ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ವಿದ್ಯಾರ್ಥಿಗಳ ಹೋರಾಟದ ಅತಿದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು. ಜಂತರ್ ಮಂತರ್ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೆ ಉದ್ಯೋಗವಿಲ್ಲದ ಯುವಕರೂ ಭಾಗವಹಿಸಿದ್ದರು ಎಂದು ಅವರು ತಿಳಿಸಿದರು. ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ ಅವರು, ತಮ್ಮ ಸಂಘಟನೆಯು ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡುತ್ತದೆ ಮತ್ತು ಶಾಲಾ ಮಟ್ಟದಿಂದಲೇ ಶಿಕ್ಷಣವು ಕೈಗೆಟುಕದಂತಾಗಿರುವುದರಿಂದ ಶಿಕ್ಷಣ ಸುಧಾರಣೆಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಶಿಕ್ಷಣವನ್ನು ಲಾಭ ಗಳಿಸಲು ಬಳಸಿಕೊಳ್ಳಲಾಗುತ್ತಿದೆ. ಆದರೆ ನಮಗೆ ಅದನ್ನು ಬದಲಾಯಿಸುವ ಆಸೆಯಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಮದುವೆ ಬಗ್ಗೆ ಭಾರೀ ಚರ್ಚೆ; ಭಾವೀ ಸೊಸೆ ಕುರಿತು ತಾಯಿ ಹೇಳಿದ್ದೇನು?

ಸಿಜೆಪಿ ರಾಜಕೀಯ ಪಕ್ಷವಲ್ಲ;

“ಸಿಜೆಪಿ ರಾಜಕೀಯ ಪಕ್ಷವಲ್ಲ. ಸದ್ಯಕ್ಕೆ ಸಿಜೆಪಿ ಒಂದು ಒತ್ತಡದ ಗುಂಪಾಗಿ ಕೆಲಸ ಮಾಡುತ್ತದೆ. ಏಕೆಂದರೆ ಭಾರತಕ್ಕೆ ಈಗ ಅತ್ಯಂತ ತುರ್ತಾಗಿ ಬೇಕಿರುವುದು ಒಂದು ಒತ್ತಡದ ಗುಂಪು. ಸಿಜೆಪಿಯು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಆಡಳಿತ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಸಂಬಂಧಿಸಿದ ವ್ಯಾಪಕ ವಿಷಯಗಳನ್ನು ಕೈಗೆತ್ತಿಕೊಳ್ಳಲಿದೆ” ಎಂದು ದಿಪ್ಕೆ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SLC XI ಪಂದ್ಯ ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ – Kannada News | India vs SL XI: Match Timing and Squads

ಭಾರತ ಮತ್ತು ಶ್ರೀಲಂಕಾ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿಗೂ ಮುನ್ನ, ಟೀಮ್ ಇಂಡಿಯಾ ಶ್ರೀಲಂಕಾ ಇಲೆವೆನ್ ವಿರುದ್ಧ ಮೂರು ದಿನಗಳ ಪ್ರಮುಖ ಅಭ್ಯಾಸ ಪಂದ್ಯವನ್ನು ಆಡಲು ಸಜ್ಜಾಗಿದೆ. ಆಗಸ್ಟ್ 7 ರಿಂದ 9 ರವರೆಗೆ ಕೊಲಂಬೊದ ನೊಂಡೆಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ (NCC) ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಲಿದೆ.

ಈ ಪಂದ್ಯಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈಗಾಗಲೇ ತನ್ನ 15 ಸದಸ್ಯರ ಬಲಿಷ್ಠ ‘ಶ್ರೀಲಂಕಾ XI’ ತಂಡವನ್ನು ಪ್ರಕಟಿಸಿದೆ. ಮತ್ತೊಂದೆಡೆ, ಇದು ಅಧಿಕೃತ ಪ್ರಥಮ ದರ್ಜೆ ಪಂದ್ಯವಲ್ಲದ ಕಾರಣ ಭಾರತ ತಂಡವು ತನ್ನ ಸ್ಕ್ವಾಡ್‌ನಲ್ಲಿರುವ ಎಲ್ಲಾ ಆಟಗಾರರನ್ನು ಸರದಿಯ ಆಧಾರದ ಮೇಲೆ ಕಣಕ್ಕಿಳಿಸಿ ಬ್ಯಾಟಿಂಗ್ ಹಾಗೂ ಬೌಲಿಂಗ್ ತಾಲೀಮು ನಡೆಸಲಿದೆ.

ಜಸ್​ಪ್ರೀತ್ ಬುಮ್ರಾ ಔಟ್:

ಭಾರತ ತಂಡಕ್ಕೆ ಪಂದ್ಯ ಆರಂಭಕ್ಕೂ ಮುನ್ನವೇ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಜಸ್​ಪ್ರೀತ್ ಬುಮ್ರಾ ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಈ ಪ್ರವಾಸದಿಂದ ಹೊರಬಿದ್ದಿದ್ದಾರೆ. ಅವರ ಜಾಗಕ್ಕೆ ಕಾಶ್ಮೀರದ ಭರವಸೆಯ ವೇಗಿ ಆಖಿಬ್ ನಬಿ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ ಪಾದದ ಗಾಯದಿಂದ ಬಳಲುತ್ತಿರುವ ಸಾಯಿ ಸುದರ್ಶನ್ ಅವರ ಫಿಟ್‌ನೆಸ್ ಪರೀಕ್ಷೆಯ ಬಳಿಕವಷ್ಟೇ ಅವರು ಆಡುವ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ.

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಮತ್ತು ಶ್ರೀಲಂಕಾ ಇಲೆವೆನ್​ ನಡುವಿನ ಈ ಅಭ್ಯಾಸ ಪಂದ್ಯವು ಭಾರತೀಯ ಕಾಲಮಾನ (IST) ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಆರಂಭವಾಗಲಿದೆ.

ಯಾವ ಚಾನೆಲ್​ನಲ್ಲಿ ಪಂದ್ಯ?

ಈ ಅಭ್ಯಾಸ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ ಹಾಗೂ ಸೋನಿ ಲಿವ್ ಚಾನೆಲ್​ಗಳಲ್ಲಿ ಲೈವ್ ವೀಕ್ಷಿಸಬಹುದು.

ಉಭಯ ತಂಡಗಳು:

ಶ್ರೀಲಂಕಾ  XI ತಂಡ (SLC XI): ಸೋನಾಲ್ ದಿನುಷಾ (ನಾಯಕ), ನಿಶಾನ್ ಮದುಷ್ಕ, ಅಂಜಲಾ ಬಂಡಾರ (ವಿಕೆಟ್ ಕೀಪರ್), ರವಿಂದು ರಶಾಂಥ, ಪಸಿಂದು ಸೂರಿಯಬಂಡಾರ, ಪವನ್ ರತ್ನಾಯಕೆ, ಅಹಾನ್ ವಿಕ್ರಮಸಿಂಘೆ, ನಿಪುನ್ ಧನಂಜಯ, ಲಹೀರು ಕುಮಾರ, ವಿಶ್ವ ಫೆರ್ನಾಂಡೋ, ಅಸಂಕ ಮನೋಜ್, ಇಸಿತ ವಿಜೇಸುಂದರ, ರಮೇಶ್ ಮೆಂಡಿಸ್, ಕೇಸರ ನುವಂತ ಮತ್ತು ದಿಲುಮ್ ಸುದೀರ.

ಇದನ್ನೂ ಓದಿ: ಈ ಭಾರತೀಯ ಬ್ಯಾಟರ್ ನನ್ನ ವಿಶ್ವ ದಾಖಲೆ ಮುರೀತಾನೆ: ಬಟ್ಲರ್ ಭವಿಷ್ಯ

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ.

Source link

ಹಾಲಿವುಡ್​​ಗೆ ಹೊರಟ ಬಾಲಿವುಡ್ ನಿರ್ದೇಶಕ, ಆಸ್ಕರ್ ಗೆದ್ದ ಹೀರೋ ಜೊತೆ ಸಿನಿಮಾ – Kannada News | Kill movie director moved to Hollywood, working with Jamie Foxx

ಭಾರತದ ಕೆಲವಾರು ನಟ-ನಟಿಯರು ಹಾಲಿವುಡ್ (Hollywood)​​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಭಾರತದ ತಂತ್ರಜ್ಞರುಗಳಿಗೆ ಹಾಲಿವುಡ್​​ನಲ್ಲಿ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಎಆರ್ ರೆಹಮಾನ್ ಹೊರತಾಗಿ ಇನ್ಯಾವ ಭಾರತದ ತಂತ್ರಜ್ಞರು ಸಹ ಹಾಲಿವುಡ್​​ನಲ್ಲಿ ಕೆಲಸ ಮಾಡಿಲ್ಲವೆಂದೇ ಹೇಳಬಹುದು. ಅದರಲ್ಲೂ ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡಿದ ನಿರ್ದೇಶಕರುಗಳು ಹಾಲಿವುಡ್​​ಗೆ ಹೋಗಿದ್ದೇ ಇಲ್ಲ. ಆದರೆ ಇದೀಗ ಬಾಲಿವುಡ್ ಸಿನಿಮಾ ನಿರ್ದೇಶಕರೊಬ್ಬರು ಒಂದು ಸಿನಿಮಾ ಹಿಟ್ ನೀಡಿದ್ದೇ ತಡ ಹಾಲಿವುಡ್​​ಗೆ ಹೊರಟಿದ್ದು, ಆಸ್ಕರ್ ವಿಜೇತ ಸ್ಟಾರ್ ನಟನೊಡನೆ ಸಿನಿಮಾ ಮಾಡಲಿದ್ದಾರೆ.

2023 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದ ಹಿಂದಿ ಸಿನಿಮಾ ‘ಕಿಲ್’ನ ನಿರ್ದೇಶಕ ನಿಖಿಲ್ ನಾಗೇಶ್ ಭಟ್ ಇದೀಗ ಹಾಲಿವುಡ್​​ಗೆ ಹೊರಟಿದ್ದಾರೆ. ಅತಿಯಾದ ಹಿಂಸೆ, ಡೈಲಾಗ್​​ಗಳ ಕಾರಣಕ್ಕೆ ಹಿಟ್ ಆಗಿತ್ತು ಕಿಲ್ ಸಿನಿಮಾ. ನಿಖಿಲ್ ಅವರು ಇದೀಗ ಹಾಲಿವುಡ್​ನ ಆಸ್ಕರ್ ವಿಜೇತ ಸ್ಟಾರ್ ನಟ ಜೇಮಿ ಫಾಕ್ಸ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. ‘ಡೆಡ್​​ಲಾಕ್ಡ್’ ಹೆಸರಿನ ಸಿನಿಮಾವನ್ನು ನಿಖಿಲ್ ನಿರ್ದೇಶನ ಮಾಡಲಿದ್ದು, ಆ ಸಿನಿಮಾ ಅಮೆಜಾನ್​​ನ್ಲಿ ಪ್ರದರ್ಶನವಾಗಲಿದೆ.

ನಿರ್ದೇಶಕ ನಿಖಿಲ್ ಭಟ್ ಅವರು ‘ಕಿಲ್’ ಚಿತ್ರದ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಆಗಿದ್ದಾರೆ. ಈ ಚಿತ್ರವು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತ್ತು ಮತ್ತು 2024 ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಮೊದಲು ದೊಡ್ಡ ಮೊತ್ತಕ್ಕೆ ಲಯನ್ಸ್‌ಗೇಟ್‌ ಸಂಸ್ಥೆಗೆ ಮಾರಾಟವಾಯಿತು. ಲಕ್ಷ್ಯ ಮತ್ತು ರಾಘವ್ ಜುರೆಲ್ ನಟಿಸಿರುವ ಈ ಚಿತ್ರವು ಭಾರತದ ಅತ್ಯಂತ ಹಿಂಸಾತ್ಮಕ ಚಲನಚಿತ್ರ ಎನ್ನಲಾಗಿತ್ತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 47 ಕೋಟಿಗೂ ಹೆಚ್ಚು ಹಣ ಗಳಿಸಿತು ಮತ್ತು ಲಕ್ಷ್ಯ ಅವರ ಅತ್ಯುತ್ತಮ ನಟನೆ ಸೇರಿದಂತೆ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಇದನ್ನೂ ಓದಿ:ಹಾಲಿವುಡ್‌ ಸಿನಿಮಾಗಳಿಗೆ ಶಾರುಖ್‌ ಖಾನ್‌ ಪೈಪೋಟಿ: ಬದಲಾಗಲ್ಲ ‘ಕಿಂಗ್‌’ ರಿಲೀಸ್‌ ದಿನಾಂಕ

‘ಡೆಡ್‌ಲಾಕ್ಡ್’ ಚಿತ್ರವು ಹಾಲಿವುಡ್​​ನಲ್ಲಿ ನಿಖಿಲ್ ಅವರ ಮೊದಲ ಹೆಜ್ಜೆಯಾಗಿದೆ. ‘ಕಿಲ್’ ಹೊರತುಪಡಿಸಿ, ಅವರು ‘ಅಪೂರ್ವ’ ಮತ್ತು ‘ಹರ್ದಾಂಗ್’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಹಾಗೂ ‘ರಸ್‌ಭರಿ’ ಮತ್ತು ‘ದಿ ಗೋನ್ ಗೇಮ್’ ಹೆಸರಿನ ವೆಬ್ ಸರಣಿಗಳನ್ನು ಸಹ ನಿರ್ದೇಶಿಸಿದ್ದಾರೆ.

ಜೇಮಿ ಫಾಕ್ಸ್ ಹಾಲಿವುಡ್​​ನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿದ್ದಾರೆ. ‘ರೇ’ ಸಿನಿಮಾದ ಅತ್ಯುತ್ತಮ ನಟನೆಗೆ ಆಸ್ಕರ್ ಸಹ ಗೆದ್ದಿದ್ದಾರೆ. ಕ್ವಿಂಟೆನ್ ಟ್ಯಾರೆಂಟಿನೊ ನಿರ್ದೇಶನದ ‘ಜಾಂಗೊ ಅನ್​​ಚೇನ್ಡ್’, ಟಾಮ್ ಕ್ರೂಸ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಕೊಲ್ಯಾಟರಲ್’ ಅಲ್ಲಿಯೂ ನಟಿಸಿದ್ದಾರೆ. ‘ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್’, ‘ಬೇಬಿ ಡ್ರೈವರ್’, ‘ಸ್ಪೈಡರ್ ಮ್ಯಾನ್: ಅವೇ ಫ್ರಂ ಹೋಮ್’, ‘ಸೋಲ್’, ‘ರಿಯೋ’ ಇನ್ನೂ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

WTC Final: ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್‌ಗೇರಲು ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು? – Kannada News | India’s WTC Final Dream: Qualification Chances for 2026 27 Revealed

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲೆರಡು ಆವೃತ್ತಿಗಳಲ್ಲಿ ಫೈನಲ್​ಗೇರಿದ್ದ ಭಾರತ ತಂಡ ಆ ಎರಡೂ ಆವೃತ್ತಿಗಳ ಫೈನಲ್‌ನಲ್ಲಿ ಎಡವಿತ್ತು. ಇನ್ನು ಮೂರನೇ ಆವೃತ್ತಿಯಲ್ಲಿ ಟೀಂ ಇಂಡಿಯಾಕ್ಕೆ ಫೈನಲ್​ಗೇರಲು ಸಾಧ್ಯವಾಗಿರಲಿಲ್ಲ. ಇದೀಗ ನಾಲ್ಕನೇ ಆವೃತ್ತಿಯಲ್ಲಾದರೂ ಫೈನಲ್​ಗೇರಿ ಚಾಂಪಿಯನ್‌ ಆಗಬೇಕೆಂಬ ಟೀಂ ಇಂಡಿಯಾದ ಕನಸು ನನಸಾಗುವ ಸಾಧ್ಯತೆಗಳು ಕ್ಷಿಣಿಸುತ್ತಿವೆ. ಆದಾಗ್ಯೂ ಗಿಲ್ ಪಡೆಗೆ ಈಗಲೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಫೈನಲ್​ಗೇರುವ ಅವಕಾಶವಿದೆ. ಹಾಗಿದ್ದರೆ ಭಾರತ ತಂಡ ಡಬ್ಲ್ಯೂಟಿಸಿ ನಾಲ್ಕನೇ ಆವೃತ್ತಿಯ ಫೈನಲ್​ಗೇರಲು ಏನು ಮಾಡಬೇಕು? ಉಳಿದಿರುವ ಪಂದ್ಯಗಳಲ್ಲಿ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಪೂರ್ಣ ಲೆಕ್ಕಾಚಾರ ಇಲ್ಲಿದೆ.

ಈ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವು ಇನ್ನೂ ಒಂಬತ್ತು ಪಂದ್ಯಗಳನ್ನು ಆಡಬೇಕಾಗಿದೆ. ಶ್ರೀಲಂಕಾ ನಂತರ, ತಂಡವು ನ್ಯೂಜಿಲೆಂಡ್ ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿಯನ್ನು ಆಡಲಿದೆ. ಮುಖ್ಯವಾದ ವಿಷಯವೆಂದರೆ ಈ ಎಲ್ಲಾ ಮೂರು ಸರಣಿಗಳ ಪ್ರತಿಯೊಂದು ಪಂದ್ಯವೂ ಟೀಂ ಇಂಡಿಯಾಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ. ಪ್ರಸ್ತುತ, ಟೀಂ ಇಂಡಿಯಾ 48.15% ಗೆಲುವಿನ ಶೇಕಡಾವಾರುವಿನೊಂದಿಗೆ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ತಂಡವು ಈಗ ಪ್ರತಿ ಪಂದ್ಯವನ್ನು ಗೆದ್ದರೆ ಅದರ ಗೆಲುವಿನ ಶೇಕಡಾವಾರು 74.07 ಕ್ಕೆ ಏರುತ್ತದೆ.

ಭಾರತ ಫೈನಲ್​ಗೇರಬೇಕೆಂದರೆ ಏನು ಮಾಡಬೇಕು?

ಭಾರತ ತಂಡವು ಉಳಿದಿರುವ 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಆದಾಗ್ಯೂ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.

ಭಾರತ 7 ಕ್ಕಿಂತ ಕಡಿಮೆ ಪಂದ್ಯಗಳನ್ನು ಗೆದ್ದರೂ ಸಹ ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಆದಾಗ್ಯೂ, ಭಾರತ 8 ಅಥವಾ 9 ಪಂದ್ಯಗಳನ್ನು ಗೆದ್ದರೆ, ತಂಡವು ಫೈನಲ್‌ಗೆ ಸುರಕ್ಷಿತವಾಗಿ ಮತ್ತು ಆರಾಮವಾಗಿ ತಲುಪುತ್ತದೆ. ಆದಾಗ್ಯೂ ಟೀಂ ಇಂಡಿಯಾದ ಮುಂದಿನ ಹಾದಿ ಅಷ್ಟು ಸುಲಭವಲ್ಲ. ಏಕೆಂದರೆ ತಂಡದ ಮುಂದಿನ 4 ಪಂದ್ಯಗಳು ವಿದೇಶಿ ನೆಲದಲ್ಲಿ ನಡೆಯುತ್ತವೆ ಮತ್ತು ಕೊನೆಯ 5 ಪಂದ್ಯಗಳು ನಂಬರ್ 1 ಶ್ರೇಯಾಂಕಿತ ತಂಡವಾದ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತವೆ.

ಇದೆಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಟೀಂ ಇಂಡಿಯಾ 7 ಪಂದ್ಯಗಳನ್ನು ಗೆದ್ದರೆ ಅದರ ಗೆಲುವಿನ ಶೇಕಡಾವಾರು 62.96 ಕ್ಕೆ ಏರಲಿದೆ. ಇತ್ತ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ನ ಶೇಕಡಾವಾರು ಕೂಡ ಕಡಿಮೆಯಾಗಬೇಕಾಗುತ್ತದೆ.

ಭಾರತ 8 ಪಂದ್ಯಗಳನ್ನು ಗೆದ್ದರೆ, ಅದರ ಗೆಲುವಿನ ಶೇಕಡಾವಾರು 68.52 ಕ್ಕೆ ಏರಲಿದೆ. ಒಂದು ವೇಳೆ ಒಂಬತ್ತಕ್ಕೆ 9 ಪಂದ್ಯಗಳನ್ನು ಗೆದ್ದರೆ ಅದರ ಗೆಲುವಿನ ಶೇಕಡಾವಾರು 70 ಕ್ಕೆ ಏರಲಿದೆ. ಇದು ಸಾಧ್ಯವಾದರೆ ಟೀಂ ಇಂಡಿಯಾ ಸುಲಭವಾಗಿ ಫೈನಲ್‌ಗೇರುತ್ತದೆ.

Source link

‘ರಾಮಾಯಣ’ ಸಿನಿಮಾದ ಇಂಗ್ಲಿಷ್ ಟ್ರೇಲರ್ ನೋಡಿ ವಿದೇಶಿ ಪ್ರೇಕ್ಷಕರು ಹೇಳಿದ್ದೇನು? – Kannada News | Yash starrer Ramayana movie English trailer Brahma AI Technology fans reaction

ನಿತೇಶ್ ತಿವಾರಿ ನಿರ್ದೇಶನದ, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ (Ramayana) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಇಂಗ್ಲಿಷ್ ಟ್ರೇಲರ್ ಬಿಡುಗಡೆಯಾಗಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಟ್ರೇಲರ್ ಬಗ್ಗೆ ಚರ್ಚೆ ಆಗುತ್ತಿದೆ. ಈ ಇಂಗ್ಲಿಷ್ ಡಬ್ಬಿಂಗ್ ಟ್ರೇಲರ್ (Ramayana English Trailer) ನೋಡಿದ ಪ್ರೇಕ್ಷಕರು, ಇದು ಮೂಲ ಹಿಂದಿ ಆವೃತ್ತಿಗಿಂತಲೂ ಉತ್ತಮವಾಗಿ ಮೂಡಿಬಂದಿದೆ ಎಂದು ಪ್ರಶಂಸಿಸುತ್ತಿದ್ದಾರೆ.

ಪ್ರಸಿದ್ಧ ವಿಎಫ್‌ಎಕ್ಸ್‌ ಸಂಸ್ಥೆ DNEG ಅಭಿವೃದ್ಧಿಪಡಿಸಿರುವ ‘ಬ್ರಹ್ಮ ಎಐ’ ತಂತ್ರಜ್ಞಾನವನ್ನು ಬಳಸಿ ‘ರಾಮಾಯಣ’ ಟ್ರೇಲರ್‌ನ ಲಿಪ್-ಸಿಂಕ್ ಮಾಡಲಾಗಿದೆ. ಕಲಾವಿದರು ಇಂಗ್ಲಿಷ್ ಸಂಭಾಷಣೆಗಳನ್ನು ಹೇಳುವಾಗ ಅವರ ಮುಖ ಹಾಗೂ ತುಟಿಗಳ ಚಲನೆ ಸಂಭಾಷಣೆಗೆ ತಕ್ಕಂತೆ ತಂತಾನೇ ಕರಾರುವಾಕ್ಕಾಗಿ ಹೊಂದಿಕೊಳ್ಳುವುದು ಈ ತಂತ್ರಜ್ಞಾನದ ವೈಶಿಷ್ಟ್ಯ. ನಟರೇ ಸ್ವತಃ ಇಂಗ್ಲಿಷ್‌ನಲ್ಲಿ ಡಬ್ ಮಾಡಿದಂತೆ ಭಾಸವಾಗುತ್ತಿದೆ.

ವಿದೇಶಿ ಪ್ರೇಕ್ಷಕರ ಪ್ರತಿಕ್ರಿಯೆ:

ಪಾಶ್ಚಿಮಾತ್ಯ ಮೈಥಾಲಜಿ ವೀಕ್ಷಿಸುತ್ತಿದ್ದ ಅನೇಕ ವಿದೇಶಿ ಪ್ರೇಕ್ಷಕರು ಈಗ ಇಂಗ್ಲಿಷ್ ಭಾಷೆಯಲ್ಲಿ ಭಾರತೀಯ ಪೌರಾಣಿಕ ಕಥೆಯ ವೈಭವವನ್ನು ನೋಡಿ ಬೆರಗಾಗಿದ್ದಾರೆ. ಅದರಲ್ಲೂ ಇಂದ್ರನ ವಾಹನವಾದ ‘ಐರಾವತ’ (ಹಾರುವ ಬಿಳಿ ಆನೆ) ಮೇಲೆ ರಾವಣ ದಾಳಿ ಮಾಡುವ ದೃಶ್ಯಗಳು ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸಿವೆ. ಈ ಕುರಿತು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ರಿಲೀಸ್ ದಿನಾಂಕದ ಕುತೂಹಲಕ್ಕೆ ತೆರೆ? ಚಿತ್ರತಂಡದ ಪ್ಲ್ಯಾನ್ ಬಹಿರಂಗ

ಆದರೂ ಕೂಡ ಕಲೆವು ಮೂಲ ಇಂಗ್ಲಿಷ್ ಭಾಷಿಕರಿಂದ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಭಾರತೀಯ ಶೈಲಿಯ ಇಂಗ್ಲಿಷ್ ಉಚ್ಚಾರಣೆಯು ಜಾಗತಿಕ ಪ್ರೇಕ್ಷಕರಿಗೆ ಕನೆಕ್ಟ್ ಆಗಲು ಕಷ್ಟವಾಗಬಹುದು. ಆದ್ದರಿಂದ ಅಮೆರಿಕನ್ ಅಥವಾ ಬ್ರಿಟಿಷ್ ಧ್ವನಿ ಕಲಾವಿದರಿಂದ ಡಬ್ ಮಾಡಿಸಿದರೆ ಭಾವನೆಗಳು ಇನ್ನು ಉತ್ತಮವಾಗಿ ತಲುಪುತ್ತವೆ ಎಂದು ಕೆಲವರು ಸಲಹೆ ನೀಡಿದ್ದಾರೆ.

ರಾಮಾಯಣ ಚಿತ್ರದ ಪಾತ್ರವರ್ಗ:

‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಕನ್ನಡಿಗರ ಹೆಮ್ಮೆಯ ನಟ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯಿಸಿದ್ದಾರೆ. ಜೊತೆಗೆ ರವಿ ದುಬೆ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಅರುಣ್ ಗೋವಿಲ್, ಲಾರಾ ದತ್ತಾ, ಕುನಾಲ್ ಕಪೂರ್ ಮುಂತಾದ ಕಲಾವುದರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ – Kannada News | Bheema River Swells to Dangerous Levels in Yadgir After Heavy Rains in Maharashtra

ಯಾದಗಿರಿ, ಆಗಸ್ಟ್​ 06: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಜನಿ ಹಾಗೂ ವೀರ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗಿದ್ದು, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಗಿ ಬಳಿಯ ಭೀಮಾ ನದಿಯು ಮೈದುಂಬಿ ಭೋರ್ಗರೆಯುತ್ತಿದೆ. ಗುರುಸುಣಗಿ ಬ್ಯಾರೇಜ್‌ನ 24 ಕ್ರಸ್ಟ್ ಗೇಟ್‌ಗಳ ಪೈಕಿ 23 ಗೇಟ್‌ಗಳನ್ನು ತೆರೆದು ನದಿಗೆ ಸುಮಾರು 1.20 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದ್ದು, ನದಿ ತೀರದಲ್ಲಿರುವ ಕಂಗಳೇಶ್ವರ ಹಾಗೂ ವೀರಾಂಜನ ದೇವಸ್ಥಾನಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮುಂಬರುವ ದಿನಗಳಲ್ಲಿ ನದಿಗೆ ನೀರು ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರೈತರ ಜಮೀನುಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದ್ದು, ನದಿ ತೀರಕ್ಕೆ ಸಾರ್ವಜನಿಕರು ಹಾಗೂ ಜಾನುವಾರುಗಳು ತೆರಳದಂತೆ ಮತ್ತು ನೀರೆತ್ತುವ ಪಂಪ್‌ಸೆಟ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Charm Pricing Strategy: ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್‌? – Kannada News | Most of the items are prices end in 99; Know the psychology behind this pricing strategy

ನಾವು ಮಾಲ್, ಮಾರುಕಟ್ಟೆ ಅಥವಾ ಆನ್‌ಲೈನ್ ಶಾಪಿಂಗ್ ಸೈಟ್‌ಗೆ ಭೇಟಿ ನೀಡಿದಾಗಲೆಲ್ಲಾ, ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಅದರ ಬೆಲೆ (prices) ಎಷ್ಟಿದೆ ಎಂದು ಪರಿಶೀಲಿಸುತ್ತೇವೆ. ಹೀಗೆ ಬೆಲೆ ನೋಡುವಾಗ ಬಹುತೇಕ ಹೆಚ್ಚಿನ ಉತ್ಪನ್ನಗಳ ಬೆಲೆ 99 ಸಂಖ್ಯೆಯಲ್ಲಿ ಕೊನೆಗೊಳ್ಳುವುದನ್ನು ನೋಡಿರುತ್ತೀರಿ ಅಲ್ವಾ.  ಕಂಪನಿಗಳು ಸಾಮಾನ್ಯವಾಗಿ ಉತ್ಪನ್ನಗಳ ಬೆಲೆಯನ್ನು ₹100 ಅಥವಾ ₹1,000 ಬದಲಿಗೆ ₹99 ಅಥವಾ ₹999 ಕ್ಕೆ ನಿಗದಿಪಡಿಸುತ್ತವೆ. ಉದಾಹರಣೆಗೆ ₹99, ₹199, ₹499, ₹10,999 ಈ ರೀತಿ ಬೆಲೆ ಇರುತ್ತವೆ. ಕಂಪನಿಗಳು ಈ ರೀತಿ ವಸ್ತುಗಳ ಬೆಲೆಯನ್ನು ನಿಗದಿಪಡಿಸುತ್ತವೆ, ಇದರ ಹಿಂದಿರುವ ಮಾರ್ಕೆಟಿಂಗ್‌ ತಂತ್ರವೇನು ಎಂಬುದನ್ನು ತಿಳಿಯಿರಿ.

ಹೆಚ್ಚಿನ ಉತ್ಪನ್ನಗಳ ಬೆಲೆ ʼ99ʼ ಸಂಖ್ಯೆಯೊಂದಿಗೆ ಏಕೆ ಕೊನೆಗೊಳ್ಳುತ್ತವೆ?

ಮೆದುಳಿನ ಆಟ: ನಮ್ಮ ಮೆದುಳು ಯಾವಾಗಲೂ ಯಾವುದೇ ಬೆಲೆಯನ್ನು ಎಡದಿಂದ ಬಲಕ್ಕೆ ಓದುತ್ತದೆ. ನಾವು ಯಾವುದೇ ವಸ್ತುವಿನ ಬೆಲೆಯನ್ನು ನೋಡಿದಾಗ ಆ ವಸ್ತುವಿನ ಬೆಲೆ ₹499 ಇದ್ದಾಗ, ನಮ್ಮ ಮನಸ್ಸು ಮೊದಲ ಸಂಖ್ಯೆಯಾದ 4 ರ ಮೇಲೆ ಕೇಂದ್ರೀಕರಿಸುತ್ತದೆ, ಇದು 500 ರೂ. ಗಿಂತ  ಕೇವಲ ಒಂದು ರೂಪಾಯಿ ಕಡಿಮೆ ಇದ್ದರೂ ಸಹ, ಆ ವಸ್ತುವು 400 ರೂ. ಮೌಲ್ಯದ್ದಾಗಿದೆ ಎಂದು ಭಾವಿಸುವಂತೆ ಮಾಡುತ್ತದೆ. ಆ ವಸ್ತು 500 ರೂ. ಗಿಂತ ತುಂಬಾ ಅಗ್ಗವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮತ್ತು ಆ ವಸ್ತುವನ್ನು ಖರೀದಿ ಮಾಡುವಂತೆ ಪ್ರಚೋದಿಸುತ್ತದೆ.

ಸಂಖ್ಯೆ 9 ಮ್ಯಾಜಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ:

ಮಾರ್ಕೆಟಿಂಗ್‌ ಜಗತ್ತಿನಲ್ಲಿ,  ಸಂಖ್ಯೆ 9 ರಲ್ಲಿ ಕೊನೆಗೊಳ್ಳುವ ದರಗಳನ್ನು ‘ಚಾರ್ಮ್ ಪ್ರೈಸಿಂಗ್’ ಎಂದು ಕರೆಯಲಾಗುತ್ತದೆ. ಅನೇಕ ಅಧ್ಯಯನಗಳು ಎರಡು ಒಂದೇ ರೀತಿಯ ವಸ್ತುಗಳನ್ನು ಇಟ್ಟುಕೊಂಡು, ಅವುಗಳಲ್ಲಿ ಒಂಕ್ಕೆ 200 ರೂ. ಮತ್ತು ಇನ್ನೊಂದಕ್ಕೆ 199 ರೂ. ಬೆಲೆ ನಿಗದಿಪಡಿಸಿದರೆ, ಜನರು 199 ರೂ. ಬೆಲೆಯ ವಸ್ತುವನ್ನೇ  ಖರೀದಿಸಲು ಇಷ್ಟಪಡುತ್ತಾರೆ ಎಂದು ಬಹಿರಂಗಪಡಿಸಿವೆ. ಮಾಲ್‌ನಲ್ಲಿ 999 ರೂ.ಗಳ ಯಾವುದೇ ಉಡುಪನ್ನು  ನೋಡಿದಾಗ, ನಮ್ಮ ಮೆದುಳಿನ ಒಂದು ಭಾಗವು ತಕ್ಷಣವೇ ಅದರ ಬೆಲೆ 1000 ರೂ.ಗಳಿಗಿಂತ ಕಡಿಮೆ ಎಂದು ಸಂಕೇತಿಸುತ್ತದೆ. ಈ ಸಣ್ಣ ಮಾನಸಿಕ ಸಂಕೇತವು ಹೆಚ್ಚು ಯೋಚಿಸದೆ ಬೆಲೆ ತುಂಬಾನೇ ಕಡಿಮೆಯಿದೆ ಎಂದು ಆ ಬಟ್ಟೆಯನ್ನು ಖರೀದಿಸುವಂತೆ ಒತ್ತಾಯಿಸುತ್ತದೆ.

ಇದನ್ನೂ ಓದಿ: ನಾಯಿಗಳು ಚಪ್ಪಲಿ, ಶೂಗಳನ್ನು ಅಗಿಯೋದೇಕೆ? ಇದರ ಹಿಂದಿನ ಕಾರಣವೇನು?

ಇದು ಮಾನಸಿಕ ಬೆಲೆ ನಿಗದಿ ತಂತ್ರ; ಕಂಪನಿಗಳು ಉತ್ಪನ್ನಗಳ ಇಂತಹ ಬೆಲೆಗಳನ್ನು ಮಾನಸಿಕ ಬೆಲೆ ನಿಗದಿ ತಂತ್ರದಡಿಯಲ್ಲಿ ಇಡುತ್ತವೆ. ₹500 ಅಥವಾ ₹1,000 ರೂ. ನಂತಹ ಅಂಕಿಗಳು ಗ್ರಾಹಕರಿಗೆ ಮಾನಸಿಕವಾಗಿ ದುಬಾರಿ ಎನಿಸುತ್ತವೆ, ಅದೇ ಬೆಲೆಯನ್ನು ರೂ.99 ಅಥವಾ ರೂ.999 ನಲ್ಲಿ ಇರಿಸಿದರೆ, ಸರಕುಗಳ ಮಾರಾಟ ಹೆಚ್ಚಾಗುತ್ತದೆ ಎಂದು ಕಂಪನಿಗಳಿಗೆ ತಿಳಿದಿದೆ.  ವಾಸ್ತವವಾಗಿ, ನೀವು ಯಾವುದೇ ಉತ್ಪನ್ನದ ಬೆಲೆಯನ್ನು 9 ರ ಅಂಕಿ ಅಂಶದಲ್ಲಿ ನೋಡಿದಾಗಲೆಲ್ಲಾ ಅದು ನಿಮಗೆ ಕಡಿಮೆ ಎಂದು ತೋರುತ್ತದೆ. ಯಾವುದೇ ಉತ್ಪನ್ನದ ಬೆಲೆ ರೂ.599 ಆಗಿದ್ದರೆ, ಅದು ರೂ.600  ಕ್ಕೆ ಹತ್ತಿರದಲ್ಲಿದೆ ಎಂದು ಭಾಸವಾಗುವುದಿಲ್ಲ ಅದು ರೂ.500 ಕ್ಕೆ ಹತ್ತಿರದಲ್ಲಿದೆ ಎಂದು ತೋರುತ್ತದೆ. ಕಂಪನಿಗಳು ಗ್ರಾಹಕರ ಗಮನವನ್ನು ತಮ್ಮ ಉತ್ಪನ್ನದ ಕಡೆಗೆ ಸೆಳೆಯಲು ಈ ಮಾನಸಿಕ ಬೆಲೆ ನಿಗದಿ ತಂತ್ರವನ್ನು ಅಳವಡಿಸಿಕೊಳ್ಳುತ್ತವೆ.

ಹಣ ಉಳಿಸುವ ಭಾವನೆ: ₹199 ಬೆಲೆಯ ವಸ್ತುವನ್ನು ನಾವು ಕಂಡುಕೊಂಡಾಗ, ನಮ್ಮ ಮನಸ್ಸು ಅದು ರಿಯಾಯಿತಿ ಡೀಲ್ ಅಥವಾ ವಿಶೇಷ ಕೊಡುಗೆ ಎಂದು ಭಾವಿಸುತ್ತದೆ. ಕಂಪನಿಯು ಕಡಿಮೆ ಬೆಲೆಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದೆ ಎಂದು ನಮಗೆ ಅನಿಸುತ್ತದೆ. ಅದೇ ಸಮಯದಲ್ಲಿ, ಅದೇ ವಸ್ತುವಿನ ಬೆಲೆ 200 ರೂ. ಇದ್ದರೆ, ನಮ್ಮ ಮನಸ್ಸು ತಕ್ಷಣವೇ ಅದನ್ನು ದುಬಾರಿ ಎಂದು ಪರಿಗಣಿಸುತ್ತದೆ. ಈ 1 ರೂ. ಕಡಿತವು ಗ್ರಾಹಕರಿಗೆ ಉಳಿತಾಯದ ತಪ್ಪು ಅರ್ಥವನ್ನು ನೀಡುತ್ತದೆ. ಈ ಸಣ್ಣ ಆನಂದವು ಅನೇಕ ಜನರು ತಕ್ಷಣ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಲು ಕಾರಣವಾಗುತ್ತದೆ. ಇದೆಲ್ಲವೂ ಸ್ಮಾರ್ಟ್ ಮಾರ್ಕೆಟಿಂಗ್‌ ತಂತ್ರವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್‌ಸ್ಟಾಗ್ರಾಮ್ ಗೆಳೆಯನಿಂದ ಪಿಯುಸಿ ಬಾಲಕಿ ಮೇಲೆ ಅತ್ಯಾಚಾರ; ಆನ್‌ಲೈನ್ ಫುಡ್ ಆರ್ಡರ್​ನಿಂದ ಸಿಕ್ಕಿಬಿದ್ದ ಆರೋಪಿ – Kannada News | Nagpur class 12 student Kidnapped, harassed By Instagram Frien Food Order Helped police to Save Her

ನಾಗ್ಪುರ, ಆಗಸ್ಟ್ 6: ಸಾಮಾಜಿಕ ಜಾಲತಾಣದಲ್ಲಿ ಕಾಣುವುದಿಲ್ಲವೂ ನಿಜ ಎನ್ನಲಾಗದು. ಇನ್​ಸ್ಟಾಗ್ರಾಂನಲ್ಲಿ 20 ವರ್ಷದ ಯುವಕನೊಂದಿಗೆ ಫ್ರೆಂಡ್​ ಆಗಿದ್ದ 12ನೇ ತರಗತಿಯ ಬಾಲಕಿ ಫ್ರೆಂಡ್‌ಶಿಪ್ ದಿನ (Friendship Day) ಆತನಿಗೆ ಸಿಗುವುದಾಗಿ ತಿಳಿಸಿದ್ದಳು. ಆದರೆ, ಅದೇ ದಿನ ಆತ ಆಕೆಯನ್ನು ಕಿಡ್ನಾಪ್ ಮಾಡಿ, ಅತ್ಯಾಚಾರವೆಸಗಿ, 2 ದಿನ ರಹಸ್ಯವಾದ ಸ್ಥಳದಲ್ಲಿ ಬಚ್ಚಿಟ್ಟು ಚಿತ್ರಹಿಂಸೆ ನೀಡಿದ್ದ. ಹಿರಿಯ ಅಧಿಕಾರಿಯ ಮಗಳಾದ ಆಕೆ ಮನೆಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಮಾಲ್‌ಗೆ ಹೋಗುತ್ತಿರುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ತೆರಳಿದ್ದಳು. ಆದರೆ, ಆಕೆ ರಾತ್ರಿಯಾದರೂ ಮನೆಗೆ ಹಿಂತಿರುಗದಿದ್ದಾಗ ಕುಟುಂಬಸ್ಥರು ಫೋನ್ ಮಾಡಿದರೂ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆ ಬಾಲಕಿ ಯಾವುದೇ ಸ್ನೇಹಿತರನ್ನು ಭೇಟಿಯಾಗಿಲ್ಲ ಎಂಬುದು ತಿಳಿದುಬಂದ ನಂತರ, ಗಾಬರಿಯಿಂದ ಕುಟುಂಬಸ್ಥರು ಪೊಲೀಸ್ ದೂರು ದಾಖಲಿಸಿದ್ದರು.

ಪೊಲೀಸರು ಬಾಲಕಿಯ ಕಾಲ್ ಡಿಟೇಲ್ಸ್ ಮತ್ತು ಸೋಶಿಯಲ್ ಮೀಡಿಯಾ ಖಾತೆಗಳನ್ನು ಪರಿಶೀಲಿಸಿದಾಗ ಆರೋಪಿಯ ಮೇಲೆ ಶಂಕೆ ವ್ಯಕ್ತವಾಯಿತು.

ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದು ಹೇಗೆ?:

ತನಿಖೆಯ ವೇಳೆ ಆರೋಪಿಯನ್ನು ಮಹಾರಾಷ್ಟ್ರದ ಠಾಣೆ ನಿವಾಸಿ ನಿರ್ಭಯ್ ಅಲಿಯಾಸ್ ಆಕಾಶ್ ಮಾಧವ್ ಪಖರೆ ಎಂದು ಗುರುತಿಸಲಾಗಿದೆ. ಈತ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ನಾಗಪುರದಲ್ಲಿ ಬಾಡಿಗೆ ಫ್ಲಾಟ್‌ ಒಂದರಲ್ಲಿ ವಾಸಿಸುತ್ತಿದ್ದ. ಈತನ ತಾಯಿ ಪ್ರಸಿದ್ಧ ವೈದ್ಯೆಯಾಗಿದ್ದಾರೆ. ಈತನ ಸಂಬಂಧಿಯೊಬ್ಬರು ಹಿರಿಯ ಐಪಿಎಸ್ ಅಧಿಕಾರಿ ಎನ್ನಲಾಗಿದೆ. ಪೊಲೀಸರು ಆತನ ಮೊಬೈಲ್ ಸಂಖ್ಯೆಯನ್ನು ಪಡೆದು ಆತನ ಕುಟುಂಬವನ್ನು ಸಂಪರ್ಕಿಸಿದರು. ಪೊಲೀಸ್ ತಂಡವೊಂದು ಆರೋಪಿಯ ಮನೆಗೆ ತೆರಳಿ, ಆತನ ತಾಯಿಗೆ ಮಗನಿಗೆ ಕರೆ ಮಾಡುವಂತೆ ಸೂಚಿಸಿತು.

ಇದನ್ನೂ ಓದಿ: 2013ರ ಅತ್ಯಾಚಾರ ಪ್ರಕರಣ; ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆ

ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಾಯಿಯೊಂದಿಗೆ ಮಾತನಾಡುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಆತ ಗಾಬರಿಗೊಂಡು, ತಾನು ಸೇಫ್ ಆಗಿದ್ದೇನೆ ಎಂದು ಪೋಷಕರಿಗೆ ತಿಳಿಸುವಂತೆ ಬಾಲಕಿಯ ಮೇಲೆ ಒತ್ತಡ ಹೇರಿದನು. ಆಕೆ ಕಾಲ್ ಮಾಡಿದಾಗ ಅದರ ಲೊಕೇಷನ್ ಎಲ್ಲಿದೆ ಎಂಬುದು ಪೊಲೀಸರಿಗೆ ಗೊತ್ತಾಯಿತು. ಇದಾದ ಸ್ವಲ್ಪ ಸಮಯದ ನಂತರ ಆರೋಪಿಯು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿರುವುದು ಪೊಲೀಸರಿಗೆ ಗೊತ್ತಾಯಿತು. ತಕ್ಷಣ ಪೊಲೀಸರು ಆ ಡೆಲಿವರಿ ಬಾಯ್ ಜೊತೆ ತೆರಳಿ ಆರೋಪಿ ಹಾಗೂ ಕಿಡ್ನಾಪ್ ಆದ ಬಾಲಕಿ ಇದ್ದ ಸ್ಥಳವನ್ನು ಪತ್ತೆಹಚ್ಚಿದರು.

ಮಂಚಕ್ಕೆ ಕಟ್ಟಿಹಾಕಿ ಚಾಕುವಿನಿಂದ ಇರಿತ:

ಆ ಬಾಲಕಿಯನ್ನು ಬಚ್ಚಿಟ್ಟಿದ್ದ ರೂಂನ ಬಾಗಿಲನ್ನು ಪೊಲೀಸರು ಮುರಿದು ಒಳನುಗ್ಗಿದಾಗ, ಆಕೆಯನ್ನು ಬೆತ್ತಲೆಯಾಗಿ ಮಂಚಕ್ಕೆ ಕಟ್ಟಿಹಾಕಲಾಗಿತ್ತು. ಆಕೆಯ ಮೈತುಂಬ ಗಾಯಗಳಾಗಿತ್ತು. ಆರೋಪಿ ಯುವಕ ಕೈಯಲ್ಲಿ ಚಾಕು ಹಿಡಿದುಕೊಂಡಿದ್ದ. ಬಾಲಕಿಯ ದೇಹದಾದ್ಯಂತ ಹಲವು ಚಾಕು ಇರಿತದ ಗಾಯಗಳಾಗಿದ್ದವು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದರು. ಪೊಲೀಸರು ತಲುಪುವುದು ಸ್ವಲ್ಪ ತಡವಾಗಿದ್ದರೂ ಆರೋಪಿಯು ಬಾಲಕಿಯನ್ನು ಕೊಲ್ಲುವ ಸಾಧ್ಯತೆಯಿತ್ತು.

ಇದನ್ನೂ ಓದಿ: ‘ಡಾಕ್ಟರ್ ಆಗಲು ನಾಲಾಯಕ್’; 4 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆಸ್ಪತ್ರೆಗೆ ಸುಪ್ರೀಂ ಕೋರ್ಟ್ ಛೀಮಾರಿ

ಆ ಬಾಲಕಿಯ ಮೇಲೆ 2 ದಿನಗಳ ಕಾಲ ಆತ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯ ಎಸಗಿದ್ದ. ಆಕೆಯ ಕೈ ತುಂಡಾಗಿತ್ತು. ಘಟನಾ ಸ್ಥಳದಲ್ಲಿ ತೀಕ್ಷ್ಣವಾದ ಚಾಕು ಪತ್ತೆಯಾಗಿದ್ದು, ಆರೋಪಿಯು ಆಕೆಯನ್ನು ಕೊಲ್ಲಲು ಸಿದ್ಧತೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಆ ಬಾಲಕಿಯ ಅಶ್ಲೀಲ ಚಿತ್ರಗಳನ್ನು ತೆಗೆದುಕೊಂಡು, ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ ಆಕೆಯ ಇಡೀ ಕುಟುಂಬವನ್ನು ಕೊಲ್ಲುವುದಾಗಿಯೂ ಹೆದರಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ, ಪೊಲೀಸರು ತನ್ನ ಮೇಲೆ ಅನುಮಾನಗೊಂಡು ಮನೆಗೆ ಹೋಗಿ ವಿಚಾರಿಸಿದ್ದು ತಿಳಿಯುತ್ತಿದ್ದಂತೆ ಆತ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ ಎನ್ನಲಾಗಿದೆ.

ಆದರೆ, ಆರೋಪಿಯ ಪರ ವಕೀಲರು, ‘ಇಬ್ಬರ ನಡುವೆ ಪ್ರೇಮಸಂಬಂಧವಿತ್ತು. ಆ ಬಾಲಕಿಯೇ ತನ್ನ ಕೈಯನ್ನು ಕತ್ತರಿಸಿಕೊಂಡಿದ್ದಾಳೆ. ಆಕೆ ತನ್ನ ಸ್ವಂತ ಇಷ್ಟದಿಂದ ಆತನ ಜೊತೆ ಬಂದಿದ್ದಳು’ ಎಂದು ವಾದಿಸಿದ್ದು, ಅಪಹರಣದ ಆರೋಪವನ್ನು ನಿರಾಕರಿಸಿದ್ದಾರೆ. ಆರೋಪಿಯು ಪ್ರಸ್ತುತ ಪೊಲೀಸ್ ವಶದಲ್ಲಿದ್ದು, ತನಗೆ ಮಲಗಲು ಆರಾಮದಾಯಕ ಹಾಸಿಗೆ ಮತ್ತು ಸೊಳ್ಳೆ ನಿವಾರಕ ಬೇಕು ಎಂದು ಬೇಡಿಕೆಯಿಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಪಡೆಯುತ್ತಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಓಪಿ ಗಣೇಶ ಮೂರ್ತಿ ನಿಷೇಧ, ಶಬ್ಧ ಮಾಲೀನ್ಯಕ್ಕೂ ಅವಕಾಶವಿಲ್ಲ: ಈಶ್ವರ್​​​​ ಖಂಡ್ರೆ ಸೂಚನೆ – Kannada News | Minister Eshwar Khandre directs gram panchayats to permit only eco friendly clay Ganesh idols

ಬೆಂಗಳೂರು, (ಆಗಸ್ಟ್ 06): ಸೆಪ್ಟೆಂಬರ್ 14ರಂದು ನಾಡಿನಾದ್ಯಂತ ಆಚರಿಸಲಾಗುವ ಗಣೇಶ ಹಬ್ಬದ (Ganesh Festival) (Ganesh Festival) ವೇಳೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ನಿರ್ಮಿತ, ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ(Ganesh Idol) ವಿಸರ್ಜನೆಗೆ ಅವಕಾಶ ನೀಡದೆ, ಪರಿಸರ ಸ್ನೇಹಿ ಬಣ್ಣ ರಹಿತ ಮಣ್ಣಿನ ಗಣಪತಿ ಪೂಜಿಸಲು ಪ್ರೇರೇಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ. ಅಲ್ಲದೇ ಗಣೇಶ ಉತ್ಸವ ವೇಳೆ ಶಬ್ಧ ಮಾಲೀನ್ಯಕ್ಕೆ ಅವಕಾಶವಿಲ್ಲ ಎಂದು ಖಡಕ್ ಆಗಿ ಹೇಳಿದ್ದು, ಕಾನೂನು ಪ್ರಕಾರ ಕಡಿಮೆ ಡೆಸಿಬಲ್ ಸ್ಪೀಕರ್ ಬಳಸಬೇಕು ಎಂದಿದ್ದಾರೆ.

ಇಲಾಖೆಯ ಕಾರ್ಯದರ್ಶಿಯವರಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ಗಣೇಶ ಪರಿಸರದಿಂದ (ಮಣ್ಣಿನಿಂದ) ಹುಟ್ಟಿದ ದೇವರಾಗಿದ್ದು, ಜಲ ಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣೇಶ ಮೂರ್ತಿಗಳ ಪೂಜೆ ಹಾಗೂ ವಿಸರ್ಜನೆಗೆ ಮಾತ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅವಕಾಶ ನೀಡುವಂತೆ ಕ್ರಮ ವಹಿಸಲು ತಿಳಿಸಿದ್ದಾರೆ.

ಇದನ್ನೂ ಓದಿ: ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್​​​​ಗೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ಬಾಡಿಗೆ ಎಷ್ಟು?

ಪರಿಸರಕ್ಕೆ ಮಾರಕವಾದ ಪಿಓಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ನಿಷೇಧಿಸಿ 2023ರ ಸೆ.15ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ. ರಾಜ್ಯ ಘನ ಹೈಕೋರ್ಟ್ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಿರ್ದೇಶನ ನೀಡಿರುತ್ತದೆ ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಲ ಮೂಲಗಳ ಹಾಗೂ ಪರಿಸರ ರಕ್ಷಣೆಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಹಬ್ಬದ ಸಂಭ್ರಮದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವಾಗದ ರೀತಿಯಲ್ಲಿ ಈಗಿನಿಂದಲೇ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೆರವು ಪಡೆಯುವಂತೆ ಸೂಚಿಸಿರುವ ಅವರು, ಸಾರ್ವಜನಿಕರಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪಂಚಾಯತಿಗಳ ಮಟ್ಟದಲ್ಲಿ ಮಾಡಲು ಆದೇಶ ನೀಡಿದ್ದಾರೆ.

ಕ್ಯಾಲ್ಷಿಯಂ, ಸಲ್ಫೇಟ್, ಹೆಮಿಹೈಡ್ರೇಟ್ ಯುಕ್ತ ಪುಡಿಯಿಂದ ತಯಾರಿಸುವ ಮೂರ್ತಿಗಳಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನೀಷಿಯಂ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿರುವುದರ ಜೊತೆಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸುವುದರಿಂದ ಪರಿಸರಕ್ಕೆ ಹಾನಿಕಾರಕವಾಗಿರುತ್ತದೆ ಎಂದೂ ಲಿಖಿತ ಸೂಚನೆಯಲ್ಲಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಪಿಓಪಿ ಮೂರ್ತಿಗಳನ್ನು ಕೆರೆ, ಬಾವಿ, ನದಿ ಸೇರಿದಂತೆ ಜಲ ಮೂಲಗಳಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯಿದೆ 1974ರ ಕಲಂ 33(ಎ) ಅಡಿಯಲ್ಲಿ ರಾಜ್ಯದ ನದಿ, ಸರೋವರ, ಕೆರೆ, ಕಟ್ಟೆ, ಬಾವಿ ಸೇರಿದಂತೆ ಯಾವುದೇ ಜಲ ಮೂಲದಲ್ಲಿ ಪಿಓಪಿ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ ಎಂಬ ಅಂಶವನ್ನು ಅವರು ಉಲ್ಲೇಖಿಸಿದ್ದಾರೆ.

Source link

ಸಚಿವ ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ – Kannada News | Siddaramaiah Fan Arrested for Derogatory Comments Against Minister Byrati Suresh on Social Media

ಬೆಂಗಳೂರು, ಆಗಸ್ಟ್​ 06: ಸಚಿವ ಭೈರತಿ ಸುರೇಶ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿ ಜಯಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಭೈರತಿ ಸುರೇಶ್ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲಾಗಿದೆ ಎಂಬ ದೂರಿನ ಅನ್ವಯ ಆರ್.ಟಿ.ನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್.ಐ.ಆರ್. ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಿವಾಸಿಯಾದ ಜಯಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ, ಜಯಕುಮಾರ್ ಪೊಲೀಸರ ವಿಚಾರಣೆಗೆ ಒಳಪಡಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version