ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳಿಗೇ ಮಾನವೀಯತೆ ಇರುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಸಾಮಾನ್ಯವಾಗಿ ಮನುಷ್ಯರಿಗೆ ಏನಾದರೂ ಕೊಟ್ಟರೆ ಸ್ವಾಭವಿಕವಾಗಿ ತಾವೇ ತಿನ್ನುತ್ತಾರೆ. ಆದರೆ ಈ ನಾಯಿಗೆ ರೊಟ್ಟಿ ಕೊಟ್ಟರೆ ಅದನ್ನು ತೆಗೆದುಕೊಂಡು ಹೋಗಿ ಹಸುವಿಗೆ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಮನುಷ್ಯರು ಪರಸ್ಪರ ಸಹಾಯ ಮಾಡಲು ಹಿಂಜರಿಯುತ್ತಿರುವಾಗ, ಮೂಕ ಪ್ರಾಣಿಯೊಂದು ತೋರಿದ ನಿಸ್ವಾರ್ಥ ಪ್ರೇಮದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರಿಂದ ಶಹಬ್ಬಾಸ್ ಎನಿಸಿಕೊಂಡಿದೆ.
ವೈರಲ್ ಆಗಿರುವ ಈ ವೀಡಿಯೊದಲ್ಲಿ, ಒಂದು ಸಣ್ಣ ಕಪ್ಪು ನಾಯಿ ತನ್ನ ಬಾಯಿಯಲ್ಲಿ ಒಂದು ರೊಟ್ಟಿಯ ತುಂಡನ್ನು ಕಚ್ಚಿಕೊಂಡು ರಸ್ತೆಯಲ್ಲಿ ಹೋಗುತ್ತಿರುತ್ತದೆ. ವೀಡಿಯೊ ಚಿತ್ರೀಕರಿಸುತ್ತಿದ್ದ ವ್ಯಕ್ತಿಗೆ ಮೊದ ಮೊದಲು ಆ ನಾಯಿ ತನ್ನ ಆಹಾರವನ್ನು ತಿನ್ನಲು ಎಲ್ಲೋ ಸುರಕ್ಷಿತ ಜಾಗ ಹುಡುಕುತ್ತಿದೆ ಎಂದು ಅನ್ನಿಸಿತ್ತು. ಆದರೆ ಆ ನಾಯಿಯ ಗುರಿಯೇ ಬೇರೆಯಾಗಿತ್ತು.ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ನೇರವಾಗಿ ಹಸುವಿನ ಬಳಿಗೆ ಹೋದ ಆ ನಾಯಿ, ಅತ್ಯಂತ ಗೌರವದಿಂದ ತನ್ನ ಬಾಯಲ್ಲಿದ್ದ ರೊಟ್ಟಿಯನ್ನು ಅದರ ಮುಂದೆ ಇಟ್ಟಿತ್ತು.
ಭಾರತೀಯ ಸಿನಿಮಾ ಸಂಗೀತ ಕ್ಷೇತ್ರದ ದಿಗ್ಗಜ ಗಾಯಕಿ ಆಶಾ ಭೋಸ್ಲೆ (Asha Bhosle) ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. 92 ವರ್ಷದ ತುಂಬು ಜೀವನವನ್ನು ಅವರು ಕಳೆದಿದ್ದಾರೆ. ಸಂಗೀತ ಲೋಕದ ಸರಸ್ವತಿ ಎಂದೇ ಕರೆಯಲಾಗುವ ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಸ್ಲೆ. ಐದು ಮಂದಿ ಮಕ್ಕಳಲ್ಲಿ ಮೂರನೇಯವರು ಆಶಾ. ಇಡೀ ಮನೆಯೇ ಸಂಗೀತ ಲೋಕಕ್ಕೆ ಅಗತ್ಯವಾದ ಸಂಸ್ಕಾರ, ಶಿಸ್ತಿನ ಗುಣಗಳನ್ನು ಮೈಗೂಡಿಸಿಕೊಂಡಿತ್ತು. ಆದರೆ ಆಶಾ ಮಾತ್ರ ತುಸು ಭಿನ್ನ. ಆದರೆ ಅವರ ಇದೇ ಗುಣದಿಂದ ಜೀವನದ ಕೆಲ ವರ್ಷಗಳನ್ನು ಬಹುತೇಕ ನರಕವಾಸದಂತೆ ಕಳೆದಿದ್ದರು ಆಶಾ ಭೋಸ್ಲೆ. ಆದರೆ ಕಡೆಗೆ ಅವರ ಕೈಹಿಡಿದಿದ್ದು ಸಂಗೀತ.
ಆಶಾ ಭೊಸ್ಲೆ ಅವರ ತಂದೆ ದೀನಾನಾಥ್ ಮಂಗೇಶ್ಕರ್, ಮರಾಠಿ ನಾಟಕದ ಖ್ಯಾತ ಗಾಯಕ, ನಟ, ನೃತ್ಯಗಾರರಾಗಿದ್ದರು. ಆದರೆ ಮದ್ಯದ ಅಮಲಿಗೆ ಬಿದ್ದು ಬಹುಬೇಗನೆ ಇಹಲೋಕ ತ್ಯಜಿಸಿದರು. ಮನೆಗೆ ಆಸರೆಯಾಗಿದ್ದ ತಂದೆ ನಿಧನವಾದಾಗ ಆಶಾಗೆ ಇನ್ನೂ 9 ವರ್ಷ ವಯಸ್ಸು. ಅಕ್ಕ ಲತಾ ಮಂಗೇಶ್ಕರ್ ಅವರು ಇಡೀ ಕುಟುಂಬದ ಜವಾಬ್ದಾರಿ ಹೆಗಲಿಗೆ ಏರಿಸಿಕೊಂಡರು.
ಇಡೀ ಕುಟುಂಬಕ್ಕೆ ಬಳುವಳಿಯಾಗಿ ಬಂದಿದ್ದ ಗಾಯನದಿಂದಲೇ ಮನೆ ನಡೆಯುತ್ತಿತ್ತು. ಆಶಾ ಭೋಸ್ಲೆ ಸಹ ಮರಾಠಿ ರಂಗಭೂಮಿ ಬಳಿಕ ಸಿನಿಮಾಗಳಿಗೂ ಹಾಡಲು ಪ್ರಾರಂಭಿಸಿದರು. ತಮ್ಮ 15ನೇ ವಯಸ್ಸಿಗೆ ಆಶಾ ಭೊಸ್ಲೆ ಸಿನಿಮಾಗಳಲ್ಲಿ ಹಾಡಲು ಪ್ರಾರಂಭಿಸಿದ್ದು ಮಾತ್ರವೇ ಅಲ್ಲದೆ, ಬಹು ಬೇಗನೆ ಬೇಡಿಕೆಯನ್ನೂ ಪಡೆದುಕೊಂಡರು. ಆ ಸಮಯದಲ್ಲಿ ಆಶಾ ಅವರಿಗೆ ಸಹಾಯ ಮಾಡುತ್ತಿದ್ದಿದ್ದು 31 ವರ್ಷದ ಗಣಪತ್ ರಾವ್ ಭೋಸ್ಲೆ. 16 ವರ್ಷದ ಆಶಾ, ತನ್ನ ಸಹಾಯಕ ಆಗಿದ್ದ ಗಣಪತ್ ರಾವ್ ಭೋಸ್ಲೆ ಜೊತೆ ಓಡಿ ಹೋಗಿ ಮದುವೆ ಆಗಿಬಿಟ್ಟರು, ಮನೆಯಲ್ಲಿ ಯಾರಿಗೂ ತಿಳಿಸದೆ. ಅಲ್ಲಿಂದ ಅವರ ನರಕ ದರ್ಶನ ಆರಂಭವಾಯ್ತು.
ಪತಿ ಮತ್ತು ಪತಿಯ ಮನೆಯರಿಂದ ಸತತ ಹಿಂಸೆ ಅನುಭವಿಸಿದರು ಆಶಾ ಭೋಸ್ಲೆ. ಕೊನೆಗೆ ಪತಿ ಗಣ್ಪತ್ ರಾವ್ ಆಶಾ ಭೋಸ್ಲೆಯನ್ನು ಮಕ್ಕಳ ಸಮೇತ ಮನೆಯಿಂದ ಹೊರಗಟ್ಟಿದರು. ಕಂಕುಳಲ್ಲಿ ಇಬ್ಬರು ಪುಟ್ಟ ಮಕ್ಕಳು ಮತ್ತು ಹೊಟ್ಟೆಯಲ್ಲಿ ಒಂದು ಮಗುವನ್ನು ಇರಿಸಿಕೊಂಡು ಮತ್ತೆ ತಮ್ಮ ಮನೆಗೆ ಮರಳಿದರು ಆಶಾ. ದಯಾಮಯಿ ಅಕ್ಕ, ಲತಾ ಮಂಗೇಶ್ಕರ್ ತಂಗಿಯನ್ನು ಮತ್ತೆ ಮನೆಗೆ ಸೇರಿಸಿಕೊಂಡರು. ತಮ್ಮ ಜೀವನ ಕತೆಯನ್ನು ಈ ವಿಷಯ ಬರೆದುಕೊಂಡಿರುವ ಆಶಾ, ‘ನನ್ನ ಪತಿ ಒಬ್ಬ ಸ್ಯಾಡಿಸ್ಟ್ ಆಗಿದ್ದ, ವಿನಾಕಾರಣ ನೋವು ನೀಡುತ್ತಿದ್ದ, ಒಂದು ಸಮಯದಲ್ಲಿ ನಾನು ಆತ್ಮಹತ್ಯೆಗೆ ನಿರ್ಧರಿಸಿ ನಿದ್ದೆ ಮಾತ್ರೆಗಳನ್ನು ಸೇವಿಸಿದ್ದೆ, ಆಗ ನಾನು ನಾಲ್ಕು ತಿಂಗಳ ಗರ್ಭಿಣಿ ಆದರೆ ನಾನು ಸಾಯಲಿಲ್ಲ. ನನ್ನ ಮಕ್ಕಳ ಮೇಲಿನ ಪ್ರೀತಿ ನನ್ನನ್ನು ಬದುಕಿಸಿತು’ ಎಂದಿದ್ದಾರೆ.
ನರಕ ನೋಡಿ ಬಂದಿದ್ದ ಆಶಾ ಭೋಸ್ಲೆಗೆ ಸಂಗೀತವೊಂದೇ ಆಸರೆಯಾಗಿತ್ತು. ಸತತವಾಗಿ ಸಿನಿಮಾಗಳಿಗೆ ಹಾಡಿದರು. ಯಾವ ಮಟ್ಟಿಗೆಂದರೆ 1950ರ ದಶಕದಲ್ಲಿ ಒಂದು ವರ್ಷ ಅಕ್ಕ ಲತಾ ಮಂಗೇಶ್ಕರ್ ಅವರಿಗಿಂತಲೂ ಹೆಚ್ಚು ಹಾಡುಗಳನ್ನು ಹಾಡಿದರು. ಅವರೇ ಹೇಳಿಕೊಂಡಿರುವಂತೆ, ಅಕ್ಕ ಲತಾ ಹಾಗೂ ಆಶಾ ಅವರ ಧ್ವನಿ ಶೈಲಿ ಒಂದೇ ರೀತಿ ಇತ್ತಂತೆ. ಇದೇ ಕಾರಣಕ್ಕೆ ಆಶಾ ಅವರಿಗೆ ಯಾರೂ ಅವಕಾಶಗಳನ್ನು ನೀಡುತ್ತಿರಲಿಲ್ಲವಂತೆ. ಬಳಿಕ ಅವರು ಶೈಲಿ ಬದಲಿಸಿದ ಮೇಲೆ ಅವರಿಗೆ ಅವಕಾಶಗಳು ಬರಲು ಆರಂಭವಾದವಂತೆ. ‘ನನ್ನ ಅಕ್ಕ ನನಗಿಂತಲೂ ಬಹಳ ಪ್ರತಿಭಾವಂತೆ’ ಎಂದಿದ್ದರು ಆಶಾ.
ಆಶಾ ಭೋಸ್ಲೆ ಅವರಿಗೆ ಮೂವರು ಮಕ್ಕಳು. ಮೊದಲೇ ಮಗ ಹೇಮಂತ್ ಭೋಸ್ಲೆ ಪೈಲೆಟ್ ಆಗಿದ್ದರು ಬಳಿಕ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿ, 2015 ರಲ್ಲಿ ಕ್ಯಾನ್ಸರ್ನಿಂದ ನಿಧನ ಹೊಂದಿದರು. ಮಗಳು ವರ್ಷಾ 2012 ರಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದರು. ಅವರು ಪತ್ರಕರ್ತೆಯಾಗಿ, ಸಂಗೀತಗಾರ್ತಿಯಾಗಿದ್ದರು. ಆಶಾ ಅವರ ಕೊನೆಯ ಪುತ್ರ ಆನಂದ್ ಭೋಸ್ಲೆ. ಇವರು ಕೊನೆಯ ವರೆಗೂ ಅಮ್ಮನ ಜೊತೆಗಿದ್ದರು, ಅಮ್ಮನ ಪರ್ಸಲನ್ ಅಸಿಸ್ಟೆಂಟ್, ಕೇರ್ ಟೇಕರ್ ಎಲ್ಲವೂ ಆಗಿದ್ದರು.
1980 ರಲ್ಲಿ ಆಶಾ ಭೋಸ್ಲೆ ಅವರು ಖ್ಯಾತ ಸಂಗೀತ ನಿರ್ದೇಶಕ ಆರ್ಡಿ ಬರ್ಮನ್ ಅವರನ್ನು ವಿವಾಹವಾದರು. ಬರ್ಮನ್ ಅವರು ಆಶಾ ಅವರಿಗಿಂತಲೂ ಆರು ವರ್ಷ ಕಿರಿಯರಾಗಿದ್ದರು. ಇವರ ವಿವಾಹಕ್ಕೆ ಬರ್ಮನ್ ಅವರ ತಾಯಿ ತೀವ್ರ ವಿರೋಧ ಮಾಡಿದ್ದರು. ಆದರೂ ಇಬ್ಬರು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು. ಬರ್ಮನ್ ಅವರು 1994 ರಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರ ಅಂತ್ಯ ಕೆಟ್ಟದಾಗಿತ್ತು, ಕೊನೆಯ ಸಮಯದಲ್ಲಿ ಆರ್ಥಿಕ ಸಂಕಷ್ಟಗಳಿಗೆ ಬರ್ಮನ್ ಸಿಕ್ಕಿದ್ದರು, ಅದು ಆಶಾ ಅವರ ಮೇಲೂ ಸಾಕಷ್ಟು ಪರಿಣಾಮ ಬೀರಿತ್ತು.
ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರೂ ಸಹ ಆಶಾ ಭೋಸ್ಲೆ ಹಾಡು ನಿಲ್ಲಿಸಲಿಲ್ಲ ಅವರ ಅದ್ಭುತ ಕಂಠಕ್ಕೆ ಅವಕಾಶಗಳು ಕಡಿಮೆ ಆಗಲೇ ಇಲ್ಲ. ತಮ್ಮ 90ರ ವಯಸ್ಸಿನಲ್ಲೂ ಸಹ ಆಶಾ ಭೋಸ್ಲೆ ಅವರು ಲೈವ್ ಸಿಂಗಿಂಗ್ ಶೋ ನೀಡುತ್ತಿದ್ದರು. ಗಂಟೆಗಳ ಕಾಲ ವೇದಿಕೆ ಮೇಲೆ ನಿಂತು ಹಾಡುತ್ತಿದ್ದರು. ಆಶಾ ಭೋಸ್ಲೆ ಬಹಳ ಚೆನ್ನಾಗಿ ಅಡುಗೆ ಸಹ ಮಾಡುತ್ತಿದ್ದರು. ಅದರಲ್ಲೂ ಕಪೂರ್ ಕುಟುಂಬಕ್ಕೆ ಆಶಾ ಮಾಡಿದ ಅಡುಗೆಗಳೆಂದರೆ ಬಹಳ ಪ್ರೀತಿ ಇತ್ತಂತೆ. ಮುಂದೆ ‘ಆಶಾ‘ಸ್’ ಹೆಸರಿನ ರೆಸ್ಟೊರೆಂಟ್ ಚೇನ್ ಅನ್ನು ಸಹ ಆಶಾ ಅವರು ತೆರೆದರು, ದುಬೈ, ಕುವೈಟ್ ಇನ್ನೂ ಹಲವು ಕಡೆ ಸುಮಾರು 15ಕ್ಕೂ ಹೆಚ್ಚು ಬ್ರ್ಯಾಂಚ್ಗಳು ಇವೆ.
ಆಶಾ ಅವರ ಗಾಯನಕ್ಕೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಎರಡು ರಾಷ್ಟ್ರಪ್ರಶಸ್ತಿ, ಜೀವಮಾನ ಸಾಧನೆ ಸೇರಿ ಸುಮಾರು 10 ಫಿಲಂಫೇರ್ ಪ್ರಶಸ್ತಿ, 17 ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ, ಹಲವಾರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಹಲವಾರು ಪ್ರಶಸ್ತಿ, ಗೌರವಗಳು ಅವರಿಗೆ ಸಂದಿವೆ. ಪದ್ಮ ವಿಭೂಷಣ, ಮಹಾರಾಷ್ಟ್ರ ಭೂಷಣ್, ಗ್ರಾಮಿ ಜೀವಮಾನ ಸಾಧನೆ ಪ್ರಶಸ್ತಿ ಇನ್ನೂ ಹಲವಾರು ಗೌರವಗಳು ಅವರಿಗೆ ಲಭಿಸಿವೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯವು ಒಂದು ಅನಿರೀಕ್ಷಿತ ವಿವಾದಕ್ಕೆ ಸಾಕ್ಷಿಯಾಗಿದೆ. ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಡಗೌಟ್ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಘಟನೆಯ ವಿವರ:
ಏಪ್ರಿಲ್ 10, ಶುಕ್ರವಾರದಂದು ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡ ಗುರಿ ಬೆನ್ನಟ್ಟುತ್ತಿದ್ದಾಗ 11ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪಕ್ಕದಲ್ಲಿ ಕುಳಿತು ಮೊಬೈಲ್ನಲ್ಲಿ ಏನನ್ನೋ ಟೈಪ್ ಮಾಡುತ್ತಿರುವುದು ಲೈವ್ ಟಿವಿಯಲ್ಲಿ ಪ್ರಸಾರವಾಯಿತು.
ಬಿಸಿಸಿಐನ (BCCI) ಭ್ರಷ್ಟಾಚಾರ ವಿರೋಧಿ ಘಟಕದ (ACSU) ನಿಯಮಗಳ ಪ್ರಕಾರ, ಪಂದ್ಯ ನಡೆಯುವಾಗ ‘ಪ್ಲೇಯರ್ಸ್ ಅ್ಯಂಡ್ ಮ್ಯಾಚ್ ಅಫಿಶಿಯಲ್ಸ್ ಏರಿಯಾ’ (PMOA) ಅಂದರೆ ಡಗೌಟ್ ಮತ್ತು ಮೈದಾನದ ಆಸುಪಾಸಿನಲ್ಲಿ ಮೊಬೈಲ್ ಫೋನ್ ಸೇರಿದಂತೆ ಯಾವುದೇ ಸಂವಹನ ಸಾಧನಗಳನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮ್ಯಾನೇಜರ್ಗಳಿಗೆ ಲಾಜಿಸ್ಟಿಕ್ಸ್ ಉದ್ದೇಶಗಳಿಗಾಗಿ ಫೋನ್ ಇಟ್ಟುಕೊಳ್ಳಲು ಅನುಮತಿ ಇದೆಯಾದರೂ, ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್ನಲ್ಲಿ ಮಾತ್ರ ಬಳಸಬೇಕು.
ಲಲಿತ್ ಮೋದಿ ಆಕ್ರೋಶ:
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದು ಅಕ್ಷಮ್ಯ ಅಪರಾಧ. ಆ್ಯಂಟಿ-ಕರಪ್ಷನ್ ಅಧಿಕಾರಿಗಳು ಅಲ್ಲಿ ಏನು ಮಾಡುತ್ತಿದ್ದರು?” ಎಂದು ಅವರು ಪ್ರಶ್ನಿಸಿದ್ದಾರೆ.
ಸಂಭವನೀಯ ಕ್ರಮಗಳು:
ಈ ಗಂಭೀರ ನಿಯಮ ಉಲ್ಲಂಘನೆಯ ಬಗ್ಗೆ ಬಿಸಿಸಿಐ ತನಿಖೆ ಆರಂಭಿಸಿದೆ ಎನ್ನಲಾಗುತ್ತಿದೆ. ಒಂದು ವೇಳೆ ತಪ್ಪಿತಸ್ಥರೆಂದು ಸಾಬೀತಾದರೆ…
ರೋಮಿ ಭಿಂದರ್ ಅವರಿಗೆ ಭಾರೀ ದಂಡ ವಿಧಿಸಬಹುದು.
ಮುಂದಿನ ಕೆಲವು ಪಂದ್ಯಗಳಿಗೆ ಅವರಿಗೆ ನಿಷೇಧ ಹೇರಬಹುದು.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಎಚ್ಚರಿಕೆ ಅಥವಾ ದಂಡ ನೀಡುವ ಸಾಧ್ಯತೆಯಿದೆ.
ಈ ವಿವಾದದ ನಡುವೆಯೂ ರಾಜಸ್ಥಾನ್ ರಾಯಲ್ಸ್ ತಂಡವು ಆರ್ಸಿಬಿ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. 15 ವರ್ಷದ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 78 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಪ್ರಕರಣವು ಮುಂಬರುವ ದಿನಗಳಲ್ಲಿ ಐಪಿಎಲ್ನ ಶಿಸ್ತು ಕ್ರಮಗಳ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು, ಏಪ್ರಿಲ್ 12: ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ರಸ್ತೆ ಅಪಘಾತಗಳು (Accidents) ನಡೆದಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಬೆಂಗಳೂರು, ಬಳ್ಳಾರಿ ಮತ್ತು ನೆಲಮಂಗಲದಲ್ಲಿ ಈ ಅಪಘಾತಗಳು ನಡೆದಿದ್ದು, ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಪತ್ನಿಯ ಎದುರೆ ಪ್ರಾಣಬಿಟ್ಟ ಪತಿ!
ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್ಲೈಟ್ ಬಸ್ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ದುರಂತದಲ್ಲಿ 45 ವರ್ಷದ ಶ್ಯಾಮ್ ದೊರೆ ಮೃತಪಟ್ಟಿದ್ದಾರೆ. ತಮಿಳುನಾಡಿಗೆ ತೆರಳಿ ಹಿಂದಿರುಗಿದ್ದ ಅವರು ಪತ್ನಿ ಜಯಶ್ರೀ ಎದುರೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದ ಅಪರಿಚಿತ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದ್ದು, ಅಲ್ಲೇ ನಿಂತಿದ್ದ ಬ್ಲಡ್ ಬ್ಯಾಂಕ್ ಬಸ್ ಹಾಗೂ ಕಾರಿನ ನಡುವೆ ಸಿಲುಕಿದ ಶ್ಯಾಮ್ ದೊರೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾಟರಾಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ
ಇನ್ನೊಂದೆಡೆ, ಬಳ್ಳಾರಿ ತಾಲೂಕಿನ ಕಾರೇಕಲ್ಲು ಗ್ರಾಮದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸುರೇಶ್ ಮತ್ತು ಶರಣಮ್ಮ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ, ಗಾಯಾಳುಗಳನ್ನು ಟ್ರಾಮಾ ಕೇರ್ ಸೆಂಟರ್ಗೆ ಕಳುಹಿಸಿದ್ದಾರೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೆಲಮಂಗಲ ತಾಲೂಕು ಕಚೇರಿ ಎದುರು ಐಶಾರಾಮಿ ಕಾರು ಚಾಲಕ ಪಾರ್ಕಿಂಗ್ ನೆಪದಲ್ಲಿ ಬೈಕ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ ಸಂಪೂರ್ಣ ಹಾನಿಗೊಳಗಾಗಿದ್ದು, ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ (PSL) 2026ರ ಸೀಸನ್ ಕೇವಲ ಸಿಕ್ಸರ್-ಬೌಂಡರಿಗಳಿಗಷ್ಟೇ ಅಲ್ಲದೆ, ವಿಚಿತ್ರ ಕಾರಣಗಳಿಗೂ ಸುದ್ದಿಯಾಗುತ್ತಿದೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ರಾವಲ್ಪಿಂಡಿಸ್ ನಡುವಿನ ಪಂದ್ಯದಲ್ಲಿ ನ್ಯೂಝಿಲೆಂಡ್ನ ಅನುಭವಿ ಆಟಗಾರ ಡೇರಿಲ್ ಮಿಚೆಲ್ ಮತ್ತು ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಖ್ ನಡುವೆ ನಡೆದ ಹಗ್ಗಜಗ್ಗಾಟ ಈಗ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 20 ಓವರ್ಗಳಲ್ಲಿ 182 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ರಾವಲ್ಪಿಂಡಿಸ್ ತಂಡವನ್ನು ಕಾಡಿದ್ದು ವಿಚಿತ್ರ ಶೈಲಿಯ ಸ್ಪಿನ್ನರ್ ಉಸ್ಮಾನ್ ತಾರಿಖ್.
ಪಂದ್ಯದ 9ನೇ ಓವರ್ನಲ್ಲಿ ಉಸ್ಮಾನ್ ತಾರಿಖ್ ಚೆಂಡೆಸೆಯುವ ಮೂಲಕ ಪಾಝ್ ತೆಗೆದುಕೊಂಡರು. ಇತ್ತ ವಿಳಂಬ ಮಾಡಿ ಚೆಂಡೆಸೆಯುತ್ತಿರುವುದರಿಂದ ಡೇರಿಲ್ ಮಿಚೆಲ್ ಅವರ ಏಕಾಗ್ರತೆ ಕದಡಿತು.
ಇದರಿಂದಾಗಿ ಮಿಚೆಲ್ ಸತತ ಎರಡು ಬಾರಿ ಕ್ರೀಸ್ನಿಂದ ಪಕ್ಕಕ್ಕೆ ಸರಿಯುವ ಮೂಲಕ ಬೌಲರ್ನ ಲಯವನ್ನು ತಪ್ಪಿಸಿದರು. ಇದರಿಂದ ಕೆರಳಿದ ತಾರಿಖ್ ಮತ್ತು ಮಿಚೆಲ್ ನಡುವೆ ಮಾತಿನ ಚಕಮಕಿ ನಡೆಯಿತು.
ಮಿಚೆಲ್ ಅವರ ಈ ವರ್ತನೆಯಿಂದ ಪಂದ್ಯ ಕೆಲಕಾಲ ಸ್ಥಗಿತಗೊಂಡಿತು. ಅಂಪೈರ್ಗಳಾದ ಅಹ್ಸಾನ್ ರಾಝ ಮತ್ತು ಕ್ರಿಸ್ ಬ್ರೌನ್ ಅವರು ಮಿಚೆಲ್ ಜೊತೆ ಚರ್ಚೆ ನಡೆಸಿದರು. ಮಿಚೆಲ್ ವಾದವೇನೆಂದರೆ, “ಬೌಲರ್ ಉದ್ದೇಶಪೂರ್ವಕವಾಗಿ ತಡಮಾಡಿ ಬ್ಯಾಟರ್ನ ಟೈಮಿಂಗ್ ಹಾಳು ಮಾಡುತ್ತಿದ್ದಾರೆ” ಎಂಬುದು.
ಕುತೂಹಲಕಾರಿ ವಿಷಯವೆಂದರೆ, ಇತ್ತೀಚೆಗಷ್ಟೇ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಅವರು ಇಂತಹ ಬೌಲರ್ಗಳ ವಿರುದ್ಧ ‘ಬ್ಯಾಟರ್ಗಳು ಕ್ರೀಸ್ ಬಿಟ್ಟು ಪಕ್ಕಕ್ಕೆ ಸರಿಯುವ ಮೂಲಕ ಪ್ರತಿಭಟಿಸಬೇಕು’ ಎಂದು ಸಲಹೆ ನೀಡಿದ್ದರು. ಮಿಚೆಲ್ ಅದೇ ತಂತ್ರವನ್ನು ಇಲ್ಲಿ ಅನುಸರಿಸಿದಂತೆ ಕಂಡಿತು.
ಆದರೆ ಅಂತಿಮವಾಗಿ ಗೆಲುವು ಉಸ್ಮಾನ್ ತಾರಿಖ್ ಅವರದ್ದಾಯಿತು. ಮಿಚೆಲ್ ಅವರ ವಿರೋಧದ ನಡುವೆಯೂ ಬೌಲಿಂಗ್ ಮುಂದುವರಿಸಿದ ತಾರಿಖ್, ಅಂತಿಮವಾಗಿ ಮಿಚೆಲ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ಉಸ್ಮಾನ್ ತಾರಿಖ್ ಕೇವಲ 23 ರನ್ ನೀಡಿ 2 ವಿಕೆಟ್ ಕಬಳಿಸಿದರು. ಪರಿಣಾಮ ರಾವಲ್ಪಿಂಡಿಸ್ ತಂಡವು 17.3 ಓವರ್ಗಳಲ್ಲಿ 121 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಕ್ವೆಟ್ಟಾ ಗ್ಲಾಡಿಯೇಟರ್ಸ್ ಈ ಪಂದ್ಯವನ್ನು 61 ರನ್ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿದೆ.
ದಾವಣಗೆರೆ, ಏಪ್ರಿಲ್ 12: ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಮುಖಂಡ ಅಬ್ದುಲ್ ಜಬ್ಬಾರ್ ರಾಜೀನಾಮೆ ವಿಚಾರಕ್ಕೆ ಟ್ವಿಸ್ಟ್ ಸಿಕ್ಕಿದೆ. ದಾವಣಗೆರೆ ಉಪ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ವಿರುದ್ಧ ಷಡ್ಯಂತ್ರ ಆರೋಪ ಸಂಬಂಧ ಹೈಕಮಾಂಡ್ ಕೆಲ ನಾಯಕರ ರಾಜೀನಾಮೆ ಕೇಳಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಸ್ವ ಇಚ್ಛೆಯಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ನನಗೆ ಯಾರೂ ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ
ಸಾಮಾಜಿಕ ಜಾಲತಾಣದಲ್ಲಿ ಅಬ್ದುಲ್ ಜಬ್ಬಾರ್ ಈ ಬಗ್ಗೆ ಸಂದೇಶ ಪೋಸ್ಟ್ ಮಾಡಿದ್ದು, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಹಾಗೂ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. 45 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿದ್ದೇನೆ. ವಿಧಾನ ಪರಿಷತ್ ಸದಸ್ಯನಾಗಿ ಸಹ ಸೇವೆ ಮಾಡುತ್ತಿದ್ದೇನೆ. ಹೀಗಿರುವಾಗ ನಮ್ಮ ಪಕ್ಷದ ಮುಖಂಡರೇ ನಮ್ಮ ವಿರುದ್ಧ ಮಾತಾಡಿದ್ದು ಬೇಸರವಾಗಿದೆ. ಆ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಸ್ಲಿಂ ಸಮಾಜದ ಮುಖಂಡ ಸಚಿವ ಜಮೀರ್ ಅಹ್ಮದ್ಗೂ ಅವಮಾನ ಮಾಡಲಾಗಿದ್ದು, ಏಕವಚನದಲ್ಲಿ ವಾಗ್ದಾಳಿ ನಡೆಸಿರೋದು ಬೇಸರ ತಂದಿದೆ ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ರಾಜ್ಯ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಅವರ ಆಪ್ತರಾದ ಅಹಮ್ಮದ್ ಸಿರಾಜ್, ಅಬ್ದುಲ್ ಗನಿ ತಾಹೀರ್, ನೂರ್ ಅಹ್ಮದ್, ಹುಸೇನ್ ಉಕ್ಕಡಗಾತ್ರಿ ಸೇರಿದಂತೆ ಪ್ರಮುಖರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಮಹಮ್ಮದ್ ಸಿರಾಜ್ ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಹಾಗೂ ವಕ್ಫ ಮಂಡಳಿ ಮಾಜಿ ಅಧ್ಯಕ್ಷರಾಗಿದ್ದರೆ, ಉಳಿದ ಮೂವರುನ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿಗಳಾಗಿದ್ದರು. ಒಟ್ಟಿಗೆ ಮಾತುಕತೆ ಬಳಿಕ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ವಿವಿಧ ಹುದ್ದೆಗಳಿಗೆ ಇವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್ಕುಮಾರ್ ಅವರು ನಿಧನರಾಗಿ ಇಂದಿಗೆ (ಏಪ್ರಿಲ್ 12) ಇಪ್ಪತ್ತು ವರ್ಷಗಳು ಕಳೆದಿವೆ. ಅವರ ಪುಣ್ಯಸ್ಮರಣೆ (Death Anniversary) ಅಂಗವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಸಮಾಧಿಗೆ ನಮಿಸಿದ್ದಾರೆ. ಆಗಮಿಸಿದ ಎಲ್ಲರಿಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಅಣ್ಣಾವ್ರು ಇಲ್ಲವಾಗಿ 20 ವರ್ಷಗಳು ಕಳೆದರೂ ಕೂಡ ಜನರಿಗೆ ಅವರ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಮಕ್ಕಳು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆ ಅಭಿಮಾನಿಗಳು ಇಂದು ಅಣ್ಣಾವ್ರ ಸಮಾಧಿಗೆ ನಮಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಡಾ. ರಾಜ್ಕುಮಾರ್ (Dr Rajkumar) ಕುಟುಂಬದ ಸದಸ್ಯರು ಬಂದು ಸಮಾಧಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿದ್ದಾರೆ.
IPL 2026: ಐಪಿಎಲ್ 2026ರ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 23 ರನ್ಗಳ ಸೋಲು ಕಂಡ ನಂತರ ಡೆಲ್ಲಿ ಕ್ಯಾಪಿಟಲ್ಸ್ (DC) ನಾಯಕ ಅಕ್ಷರ್ ಪಟೇಲ್ ತಮ್ಮ ತಂಡದ ಪ್ರದರ್ಶನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚೆನ್ನೈನಲ್ಲಿ ನಡೆದ ಈ ಪಂದ್ಯದ ನಂತರದ ಮಾತನಾಡಿದ ಅವರು, ಸೋಲಿಗೆ ಮುಖ್ಯ ಕಾರಣಗಳನ್ನು ವಿಶ್ಲೇಷಿಸಿದ್ದಾರೆ.
ಫೀಲ್ಡಿಂಗ್ ವೈಫಲ್ಯವೇ ಪಂದ್ಯದ ತಿರುವು:
ಅಕ್ಷರ್ ಪಟೇಲ್ ಅವರ ಪ್ರಕಾರ, ಈ ಪಂದ್ಯದ ಫಲಿತಾಂಶವನ್ನು ಬದಲಿಸಿದ್ದು ತಂಡದ ಕಳಪೆ ಫೀಲ್ಡಿಂಗ್. “ನನ್ನ ಪ್ರಕಾರ ಫೀಲ್ಡಿಂಗ್ನಲ್ಲಿನ ವ್ಯತ್ಯಾಸವೇ ಪಂದ್ಯದ ಹಣೆಬರಹ ನಿರ್ಧರಿಸಿತು. ನಾವು ಒಂದು ಅಥವಾ ಎರಡು ಪ್ರಮುಖ ಕ್ಯಾಚ್ಗಳನ್ನು ಕೈಬಿಟ್ಟೆವು. ಆ ತಪ್ಪುಗಳನ್ನು ಮಾಡದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಿಢೀರ್ ಕುಸಿತವೇ ಹಿನ್ನಡೆ:
ಚೇಸಿಂಗ್ ಬಗ್ಗೆ ಮಾತನಾಡಿದ ಅಕ್ಷರ್ ಪಟೇಲ್, ತಂಡಕ್ಕೆ ಉತ್ತಮ ಆರಂಭ ಸಿಕ್ಕರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. “ಪವರ್ಪ್ಲೇ ನಂತರ ನಾವು ಸತತವಾಗಿ ಎರಡು-ಮೂರು ವಿಕೆಟ್ ಕಳೆದುಕೊಂಡೆವು. ಇದು ನಮ್ಮ ಬ್ಯಾಟಿಂಗ್ ಲಯವನ್ನು ಪೂರ್ತಿ ಹಾಳುಮಾಡಿತು. ಬ್ಯಾಟರ್ಗಳು ಶ್ರಮವಹಿಸಿದರೂ, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದ್ದು ನಮಗೆ ಹಿನ್ನಡೆಯಾಯಿತು,” ಎಂದಿದ್ದಾರೆ.
ಬೌಲರ್ಗಳಿಗೆ ಪ್ರಶಂಸೆ:
ಸೋಲಿನ ನಡುವೆಯೂ ಅಕ್ಷರ್ ತಮ್ಮ ಬೌಲರ್ಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. “ಸಿಎಸ್ಕೆ ಬ್ಯಾಟರ್ಗಳು ಕ್ರೀಸ್ಗೆ ಭದ್ರವಾಗಿ ಅಂಟಿಕೊಂಡಿದ್ದರೂ, ಅವರನ್ನು 212 ರನ್ಗಳಿಗೆ ನಿಯಂತ್ರಿಸಿದ್ದು ದೊಡ್ಡ ವಿಷಯ. ಬೌಲರ್ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದೊಂದು ಅತ್ಯುತ್ತಮ ಬ್ಯಾಟಿಂಗ್ ಪಿಚ್ ಆಗಿತ್ತು. ಇದಾಗ್ಯೂ ನಮ್ಮ ಬೌಲರ್ಗಳನ್ನು ಎದುರಾಳಿಗಳನ್ನು 212 ರನ್ಗಳಿಗೆ ನಿಯಂತ್ರಿಸಿರುವುದು ಶ್ಲಾಘನೀಯ ” ಎಂದು ತಿಳಿಸಿದ್ದಾರೆ.
ಇನ್ನು ಪಿಚ್ ಬಗ್ಗೆ ಮಾತನಾಡುತ್ತಾ, “ಪಿಚ್ ನಿಧಾನಗತಿಯಾಯಿತು ಎಂದು ನನಗನ್ನಿಸುವುದಿಲ್ಲ. ಇಬ್ಬನಿ ಇದ್ದ ಕಾರಣ ಬೌಲಿಂಗ್ ಮಾಡುವುದು ಸಿಎಸ್ಕೆ ತಂಡಕ್ಕೆ ಸವಾಲಾಗಿತ್ತು. ಆದರೆ ಅವರು ಆ ಪರಿಸ್ಥಿತಿಯಲ್ಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು,” ಎಂದು ಎದುರಾಳಿ ತಂಡದ ಬೌಲಿಂಗ್ ಅನ್ನು ಕೂಡ ಅಕ್ಷರ್ ಪಟೇಲ್ ಹೊಗಳಿದ್ದಾರೆ.
ಒಟ್ಟಾರೆಯಾಗಿ, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ ಫೀಲ್ಡಿಂಗ್ನಲ್ಲಿನ ತಪ್ಪುಗಳೇ ಸೋಲಿಗೆ ಮೂಲ ಕಾರಣ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF- Public Provident Fund) ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದು. ದೀರ್ಘಾವಧಿ ಹೂಡಿಕೆಗೆ ಅವಕಾಶ ಕೊಡುವ ಸ್ಕೀಮ್. ಪಿಪಿಎಫ್ನನಲ್ಲಿ ವಾರ್ಷಿಕ ಬಡ್ಡಿದರ ಶೇ. 7.1 ಇದೆ. ಬ್ಯಾಂಕ್ ಡೆಪಾಸಿಟ್ಗಳಿಗಿಂತ ತುಸು ಹೆಚ್ಚು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಕೊಡುತ್ತದೆ. ತಿಂಗಳಿಗೆ 12,500 ರೂವರೆಗೂ ಹೂಡಿಕೆ ಮಾಡಬಹುದು. ಕೋಟಿ ರೂ ಕಾರ್ಪಸ್ ನಿರ್ಮಿಸಬಯಸುವವರು ಪಿಪಿಎಫ್ ಮೂಲಕ ಅದನ್ನು ಸಾಕಾರಗೊಳಿಸಬಹುದು.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ನ ವಿವರ
ಯಾರು ಮಾಡಿಸಬಹುದು?: ಯಾರು ಬೇಕಾದರೂ ಪಿಪಿಎಫ್ ಅಕೌಂಟ್ ತೆರೆಯಬಹುದು.
ಎಷ್ಟು ಹೂಡಿಕೆ: ವರ್ಷಕ್ಕೆ 1.5 ಲಕ್ಷ ರೂವರೆಗೆ ಹೂಡಿಕೆ
ಎಷ್ಟು ಅವಧಿ: ಪಿಪಿಎಫ್ ಸ್ಕೀಮ್ನ ಮೆಚ್ಯೂರಿಟಿ ಅವಧಿ 15 ವರ್ಷ. ಆ ಬಳಿಕ ಐದೈದು ವರ್ಷ ಅವಧಿ ಹೆಚ್ಚಿಸಲು ಅವಕಾಶ.
ಪಿಪಿಎಫ್ ಮೂಲಕ 1 ಕೋಟಿ ರೂ ಕಾರ್ಪಸ್ ಹೊಂದಲು ಎಷ್ಟು ವರ್ಷ ಬೇಕು?
ನೀವು ಪಿಪಿಎಫ್ನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂನಂತೆ 15 ವರ್ಷ ಹೂಡಿಕೆ ಮಾಡಿದರೆ, ಒಟ್ಟು ಕಾರ್ಪಸ್ 40.68 ಲಕ್ಷ ರೂ ಆಗುತ್ತದೆ. ಐದು ವರ್ಷ ಹೂಡಿಕೆ ವಿಸ್ತರಣೆ ಮಾಡಿದರೆ ಕಾರ್ಪಸ್ 66.58 ಲಕ್ಷ ರೂಗೆ ಏರುತ್ತದೆ. ಇನ್ನೂ ಐದು ವರ್ಷ ಮುಂದುವರಿಸಿದರೆ ಒಟ್ಟು ಕಾರ್ಪಸ್ 1.03 ಕೋಟಿ ರೂ ಆಗುತ್ತದೆ. ಅಂದರೆ, 25 ವರ್ಷ ಕಾಲ ನೀವು ಒಂದೂವರೆ ಲಕ್ಷ ವಾರ್ಷಿಕ ಹೂಡಿಕೆ ಮಾಡುತ್ತಾ ಹೋದಾಗ ಒಂದು ಕೋಟಿ ರೂ ಹೊಂದಲು ಸಾಧ್ಯವಾಗುತ್ತದೆ.
25 ವರ್ಷದ ನಂತರವೂ ನೀವು ಹೂಡಿಕೆ ಮುಂದುವರಿಸಬಹುದು. 30 ವರ್ಷಕ್ಕೆ ನಿಮ್ಮ ಹೂಡಿಕೆಯ ಫಲವು 1.54 ಲಕ್ಷ ರೂ ಆಗಿರುತ್ತದೆ. ಹೀಗೆ ಹೂಡಿಕೆ ಅವಧಿ ಹೆಚ್ಚಿಸುತ್ತಾ ಹೋದಂತೆ ಹೆಚ್ಚೆಚ್ಚು ಫಲ ದೊರಕುತ್ತಾ ಹೋಗುತ್ತದೆ.
ಪಿಪಿಎಫ್ನಲ್ಲಿ ನೀವು 25 ವರ್ಷ ಹೂಡಿಕೆ ಮಾಡಿದಾಗ ಒಟ್ಟು ಕಾರ್ಪಸ್ 1.03 ಕೋಟಿ ರೂ ಆಗುತ್ತದೆ. ಈ ಸಂದರ್ಭದಲ್ಲಿ ನೀವು ಬಡ್ಡಿಯನ್ನು ಮಾತ್ರವೇ ಹಿಂಪಡೆಯುವ ಅವಕಾಶ ನೀಡಲಾಗುತ್ತದೆ. 1.03 ಕೋಟಿ ರೂಗೆ ಒಂದು ವರ್ಷದಲ್ಲಿ ಸಿಗುವ ಬಡ್ಡಿ 7.32 ಲಕ್ಷ ರೂ ಆಗುತ್ತದೆ. ವರ್ಷಕ್ಕೆ ಒಮ್ಮೆ ಬಡ್ಡಿ ಹಿಂಪಡೆಯಬಹುದು. ಅದನ್ನು 12 ತಿಂಗಳಿಗೆ ಭಾಗಿಸಿದರೆ ಒಂದು ತಿಂಗಳಿಗೆ ಸುಮಾರು 61,000 ರೂ ಹಣವಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವಿಘ್ನೇಶ್ ಶಿವನ್ ನಿರ್ದೇಶನದ, ಪ್ರದೀಪ್ ರಂಗನಾಥನ್ ನಟನೆಯ ‘ಲವ್ ಇನ್ಶೂರೆನ್ಸ್ ಕಂಪನಿ’ (Love Insurance Kompany) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಕಲೆಕ್ಷನ್ ಮಾಡುತ್ತಿದೆ. ವಾರಾಂತ್ಯದ ರಜಾ ದಿನಗಳಿದ್ದರೂ ಸಹ ಚಿತ್ರದ ಕಲೆಕ್ಷನ್ನಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿಲ್ಲ. ಸೈನ್ಸ್ ಫಿಕ್ಷನ್ ರೊಮ್ಯಾಂಟಿಕ್ ಕಾಮಿಡಿ ಈ ಸಿನಿಮಾದಲ್ಲಿದೆ. ಈ ಸಿನಿಮಾ ಮೇಲೆ ಪ್ರದೀಪ್ ರಂಗನಾಥನ್ (Pradeep Ranganathan) ಫ್ಯಾನ್ಸ್ ಬಹಳ ನಿರೀಕ್ಷೆ ಹೊಂದಿದ್ದರು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಈ ಸಿನಿಮಾಗೆ ಸಾಧ್ಯವಾಗಿಲ್ಲ.
Sacnilk ವರದಿಯ ಪ್ರಕಾರ ಮೊದಲ ದಿನ ಈ ಸಿನಿಮಾಗೆ 7.05 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಎರಡನೇ ದಿನ 7.70 ಕೋಟಿ ರೂಪಾಯಿ ಗಳಿಸಿದೆ. 2 ದಿನಗಳಲ್ಲಿ ಒಟ್ಟು ಗಳಿಕೆ 14.75 ಕೋಟಿ ರೂಪಾಯಿ ಆಗಿದೆ. ಪ್ರದೀಪ್ ರಂಗನಾಥನ್ ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇದು ಉತ್ತಮ ಕಲೆಕ್ಷನ್ ಆಲ್ಲ ಎಂಬುದು ತಿಳಿಯುತ್ತದೆ.
ಪ್ರದೀಪ್ ರಂಗನಾಥನ್ ಅವರ ಮೊದಲ ಸಿನಿಮಾ ‘ಲವ್ ಟುಡೇ’ಗೆ ಹೋಲಿಸಿದರೆ ‘ಲವ್ ಇನ್ಶೂರೆನ್ಸ್ ಕಂಪನಿ’ ಉತ್ತಮ ಆರಂಭ ಪಡೆದಿದೆ. ‘ಲವ್ ಟುಡೇ’ ಮೊದಲ ಎರಡು ದಿನಗಳಲ್ಲಿ ಕೇವಲ ₹7 ಕೋಟಿ ಗಳಿಸಿತ್ತು. ಆದರೆ, ಪ್ರದೀಪ್ ಅವರ ಇತ್ತೀಚಿನ ಹಿಟ್ ಚಿತ್ರಗಳಾದ ‘ಡ್ಯೂಡ್’ (20 ಕೋಟಿ) ಮತ್ತು ‘ಡ್ರ್ಯಾಗನ್’ (17 ಕೋಟಿ) ಸಿನಿಮಾಗಳಿಗೆ ಹೋಲಿಸಿದರೆ ಈ ಸಲ ಕಲೆಕ್ಷನ್ ಕೊಂಚ ಕುಸಿದಿದೆ.
ಸಾಮಾನ್ಯವಾಗಿ ಶನಿವಾರದಂದು ಸಿನಿಮಾಗಳ ಗಳಿಕೆಯಲ್ಲಿ ಭಾರೀ ಏರಿಕೆ ಇರುತ್ತಿತ್ತು. ಆದರೆ ‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರದಲ್ಲಿ ಅಂತಹ ಮ್ಯಾಜಿಕ್ ನಡೆದಿಲ್ಲ. ಈ ಚಿತ್ರದ ಜೊತೆ ರಿಲೀಸ್ ಆದ ಅಡಿವಿ ಶೇಷ್ ಅವರ ‘ಡಕಾಯ್ತ್’ ಚಿತ್ರಕ್ಕೆ ಹೋಲಿಸಿದರೆ ಪ್ರದೀಪ್ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದ್ದರೂ, ನಿರೀಕ್ಷಿತ ವೇಗ ಕಾಣುತ್ತಿಲ್ಲ. ಈ ಚಿತ್ರಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.
ವಿಘ್ನೇಶ್ ಶಿವನ್ ನಿರ್ದೇಶನದ ಈ ಸಿನಿಮಾಗೆ ‘ರೌಡಿ ಪಿಕ್ಚರ್ಸ್’ ಮತ್ತು ‘ಸೆವೆನ್ ಸ್ಕ್ರೀನ್ ಸ್ಟುಡಿಯೋ’ ಜಂಟಿಯಾಗಿ ಬಂಡವಾಳ ಹೂಡಿವೆ. 2040ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರದೀಪ್ ರಂಗನಾಥನ್ ಅವರಿಗೆ ಜೋಡಿಯಾಗಿ ಕೃತಿ ಶೆಟ್ಟಿ ನಟಿಸಿದ್ದಾರೆ. ಯೋಗಿ ಬಾಬು, ಸೀಮನ್, ಗೌರಿ ಜಿ ಕಿಶನ್, ಸುನೀಲ್ ರೆಡ್ಡಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.