ಥಿಯೇಟರ್ ಶೌಚಾಲಯದಲ್ಲಿ ಕ್ಯಾಮರಾ: ಮೊಬೈಲ್​​​ನಲ್ಲಿ ಯುವತಿಯರ ಖಾಸಗಿ ವಿಡಿಯೋಗಳು ಪತ್ತೆ; ಕೇಸ್ ಬುಕ್ – Kannada News | Hidden Camera Found in Sandhya Theatre Women’s Toilet: FIR Filed Against Theatre Management and Staff

ಬೆಂಗಳೂರು, ಜನವರಿ 05: ಸಂಧ್ಯಾ ಥಿಯೇಟರ್‌ನ (Sandhya Theatre) ಬಾತ್‌ ರೂಮ್‌ನಲ್ಲಿ ಕ್ಯಾಮರಾ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಮಹಿಳಾ ಟೆಕ್ಕಿ ದೂರಿನ ಮೇರೆಗೆ ಥಿಯೇಟರ್ ಹಾಗೂ ಸಿಬ್ಬಂದಿ ರಾಜೇಶ್, ಕಮಲ್​​ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ಮಡಿವಾಳ ಪೊಲೀಸರಿಂದ ವಿಚಾರಣೆ ನಡೆದಿದೆ.

ನಡೆದದ್ದೇನು?

ರವಿವಾರದಂದು ಮಹಿಳಾ ಟೆಕ್ಕಿಯೊಬ್ಬರು ಸ್ನೇಹಿತರ ಜೊತೆ ಸಿನಿಮಾ ನೋಡಲು ಸಂಧ್ಯಾ ಥಿಯೇಟರ್​​ಗೆ ಹೋಗಿದ್ದರು. ಇಂಟರ್ವೆಲ್ ವೇಳೆ ವಾಶ್ ರೂಂಗೆ ಹೋದಾಗ ಮಹಿಳಾ ಟೆಕ್ಕಿ ಹಾಗೂ ಸ್ನೇಹಿತೆಯರ ಖಾಸಗಿ ವಿಡಿಯೋವನ್ನು ರಾಜೇಶ್ ಎಂಬಾತ ಚಿತ್ರೀಕರಣ ಮಾಡಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಮಡಿವಾಳ ಸಂಧ್ಯಾ ಥಿಯೇಟರ್ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಇಟ್ಟ ಯುವಕ, ಯುವತಿಯರು ಶಾಕ್

ಮಹಿಳಾ ಟೆಕ್ಕಿ ಆರೋಪಿಯನ್ನ ಹಿಡಿದು ಮಾಲೀಕರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಕಮಲ್ ಎಂಬಾತ ವಿಡಿಯೋ ಮಾಡಲು ಹೇಳಿದ್ದಾಗಿ ಹೇಳಿಕೆ ನೀಡಿದ್ದಾನೆ. ಸದ್ಯ ರಾಜೇಶ್, ಕಮಲ್ ಮತ್ತು ಸಂಧ್ಯಾ ಥಿಯೇಟರ್ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ಆತನ ಮೊಬೈಲ್‌ನಲ್ಲಿ ಹಲವು ಯುವತಿಯರ ಖಾಸಗಿ ವಿಡಿಯೋಗಳು ಪತ್ತೆಯಾಗಿದ್ದು, ಹಲವು ದಿನಗಳಿಂದ ಖಾಸಗಿ ವಿಡಿಯೋಗಳ ಚಿತ್ರೀಕರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಎಫ್​ಐಆರ್​​​ನಲ್ಲಿ ಏನಿದೆ? 

ದೂರುದಾರೆ ಮತ್ತು ಅವರ ಸ್ನೇಹಿತೆಯರು ಬೆಂಗಳೂರಿನ ಮಡಿವಾಳಾದ ವಿ.ಪಿ. ರಸ್ತೆಯಲಿರುವ ಸಂಧ್ಯಾ ಥಿಯೇಟರ್‌ಗೆ “ನೂವು ನಾಕು ನಚ್ಚಾವು” ಸಿನಿಮಾವನ್ನು ರಾತ್ರಿ 7 ರಿಂದ 10 ಗಂಟೆಯ ಸಮಯದಲ್ಲಿ ವೀಕ್ಷಿಸಲು ಹೋಗಿದ್ದು, ವಿರಾಮದ ಸಮಯದಲ್ಲಿ ಸುಮಾರು ರಾತ್ರಿ 8:30 ಗಂಟೆಗೆ, ದೂರುದಾರೆ ಮತ್ತು ಅವರ ಸ್ನೇಹಿತೆಯರು ಥಿಯೇಟರ್ ಆವರಣದಲ್ಲಿರುವ ಶೌಚಾಲಯಕ್ಕೆ ಹೋದಾಗ, ಅಲ್ಲಿ ಮಹಿಳಾ ಶೌಚಾಲಯದ ಮಧ್ಯದಲ್ಲಿ, ಒಬ್ಬ ವ್ಯಕ್ತಿ ಮೊಬೈಲ್ ಫೋನ್ ಬಳಸಿ ವಿಡಿಯೋ ತೆಗೆಯುತ್ತಿರುವುದನ್ನು ನೋಡಿ, ತಕ್ಷಣ ತಮ್ಮ ಗಂಡನಿಗೆ ಕರೆ ಮಾಡಿ, ಆ ವ್ಯಕ್ತಿಯನ್ನು ಹಿಡಿದುಕೊಂಡು, ಅವರ ಫೋನ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ದೂರುದಾರೆ ಮತ್ತು ಅವರ ಸ್ನೇಹಿತೆಯರ ಖಾಸಗಿ ವಿಡಿಯೋಗಳು ಇರುವುದು ಕಂಡುಬಂದಿದೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಯುವಕರು ಜೈಲುಪಾಲು

ಸಂಧ್ಯಾ ಥಿಯೇಟರ್‌ನ ಮ್ಯಾನೆಜ್​ಮೆಂಟ್​ನವರನ್ನು  ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತ ಸುಮಾರು ಒಂದು ತಿಂಗಳಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದು, ಆತನ ಹೆಸರು ರಾಜೇಶ್ ಎಂದು ತಿಳಿಸಿದ್ದಾರೆ. ನಂತರ  ವಿಡಿಯೋಗಳನ್ನು ತೆಗೆಯಲು ಯಾರು ಸೂಚನೆ ನೀಡಿದರು ಎಂದು ದೂರುದಾರೆ ರಾಜೇಶ್​ನನ್ನು ಕೇಳಿದಾಗ, ಕಮಲ್ ಎಂಬ ವ್ಯಕ್ತಿ ಹೆಸರನ್ನು ಉಲ್ಲೇಖಿಸಿದ್ದಾನೆ. ನಂತರ ದೂರುದಾರೆ 112 ಪೊಲೀಸ್ ಹೆಲ್‌ಪ್‌ಲೈನ್‌ಗೆ ಕರೆ ಮಾಡಿದ್ದು, ನಂತರ ಪೊಲೀಸರು ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ದೂರುದಾರೆಯ ಸುರಕ್ಷತೆಯ ಕಾರಣಕ್ಕಾಗಿ ರಾಜೇಶ್ ಬಳಸಿದ ರೆಡ್ಡಿ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದು, ಜೊತೆಗೆ ರಾಜೇಶ್, ಕಮಲ್ ಮತ್ತು ಸಂಧ್ಯಾ ಥಿಯೇಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:16 pm, Mon, 5 January 26

Source link

ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್ – Kannada News | Clash between Mutant Raghu and Dhruvanth in Bigg Boss Kannada Season 12 Latest Episode

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಆಟದಲ್ಲಿ ಈಗ 8 ಜನರ ನಡುವೆ ಪೈಪೋಟಿ ಮುಂದುವರಿದಿದೆ. ಧ್ರುವಂತ್ ಮತ್ತು ಮ್ಯೂಟೆಂಟ್ ರಘು (Mutant Raghu) ಜಗಳ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅವರಿಬ್ಬರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಇಬ್ಬರೂ ಕೂಡ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಕಿತ್ತಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಈ ಜಗಳ ನಡೆದಿದೆ. ಕಳೆದ ವಾರ ಸ್ಪಂದನಾ ಸೋಮಣ್ಣ ಅವರು ಎಲಿಮಿನೇಟ್ ಆದರು. ಮುಂದಿನ ವಾರ ಬಿಗ್ ಬಾಸ್ ಮನೆಯಿಂದ ಯಾರಿಗೆ ಗೇಟ್ ಪಾಸ್ ನೀಡಲಾಗುತ್ತದೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿದೆ. ಜನವರಿ 5ರ ಬಿಗ್ ಬಾಸ್ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Udupi: ಕಾರ್ಕಳದ ವಿವಾದಿತ ಪರಶುರಾಮ ಥೀಮ್ ಪಾರ್ಕ್​​ನ ತಾಮ್ರದ ತಗಡಿಗೆ ಕನ್ನ – Kannada News | Copper sheets were stolen from the Parashurama Theme Park in Karkala

ತಾಮ್ರದ ತಗಡನ್ನು ಕತ್ತರಿಸಿರುವುದು.

ಉಡುಪಿ, ಜನವರಿ 05: ಭಾರಿ ವಿವಾದಕ್ಕೆ ಕಾರಣವಾಗಿ ಪಾಳುಬಿದ್ದಿರುವ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿನ ಪರಶುರಾಮ ಥೀಂ ಪಾರ್ಕ್ನನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಕಟ್ಟಡದ ಬಾಗಿಲನ್ನು ಮುರಿದು ಒಳ ನುಗ್ಗಿರುವ ಚಾಲಾಕಿಗಳು, ಮೇಲ್ಚಾವಣಿಗೆ ಹಾಕಿದ್ದ ತಾಮ್ರದ ಹೊದಿಕೆಗಳನ್ನು ಕಿತ್ತು ಹೊತ್ತೊಯ್ದಿದ್ದಾರೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಥೀಮ್​​ ಪಾರ್ಕ್​​ ನಿರ್ಮಾಣ ಮಾಡಲಾಗಿತ್ತು. ಪರಶುರಾಮ ಪ್ರತಿಮೆ ವಿಚಾರವಾಗಿ ಅವ್ಯವಹಾರ ಆರೋಪ ಕೇಳಿಬಂದಿದ್ದ ಹಿನ್ನೆಲೆ ತನಿಖೆಯೂ ನಡೆದಿತ್ತು. ಅನುದಾನವಿಲ್ಲದೆ ಸದ್ಯ ಥೀಂಪಾರ್ಕ್​​ ಪಾಳು ಬಿದ್ದಿದ್ದು, ಇಲ್ಲಿನ ವಸ್ತುಗಳು ಕಳ್ಳಕಾಕರ ಪಾಲಾಗತೊಡಗಿವೆ.

ಘಟನೆ ಬೆನ್ನಲ್ಲೇ ಕಾರ್ಕಳದ ಬೈಲೂರು ಉಮಿಕಲ್ ಬೆಟ್ಟದಲ್ಲಿರುವ ಥೀಂ ಪಾರ್ಕ್​​ಗೆ ಶಾಸಕ ಸುನಿಲ್ ಕುಮಾರ್ ಭೇಟಿ ನೀಡಿದ್ದಾರೆ. ಈ ಸ್ಥಳಕ್ಕೆ ಎರಡೂವರೆ ವರ್ಷಗಳ ಬಳಿಕ ಶಾಸಕರು ಭೇಟಿ ನೀಡಿದ್ದು, ಅಲ್ಲಿನ ಸ್ಥಿತಿ ನೋಡಿ ಬೇಸರ ಹೊರಹಾಕಿದ್ದಾರೆ. ಬಳಿಕ ಮಾತನಾಡಿದ ಅವರು, ಕಾರ್ಕಳದ ಇತಿಹಾಸಕ್ಕೆ ಇದು ದುರ್ದೈವ. ಕಳ್ಳತನವಾಗಲು ಕಾಂಗ್ರೆಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣ. ಪರಶುರಾಮ ಥೀಂ ಪಾರ್ಕ್​​ ಈಗ ಅನೈತಿಕ ಚಟುವಟಿಕೆಯ ತಾಣವಾಗುತ್ತಿದ್ದು, ಬಿಜೆಪಿ ಸರಕಾರ ಮಂಜೂರು ಮಾಡಿದ ನಾಲ್ಕೂವರೆ ಕೋಟಿ ಹಣ ಇನ್ನೂ ಬರಬೇಕಿದೆ. ತಕ್ಷಣ ಈ ಹಣ ಬಿಡುಗಡೆ ಮಾಡಿ, ಥೀಂ ಪಾರ್ಕ್​​ಗೆ ಸಾರ್ವಜನಿಕರ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಪ್ರಕರಣ; ಶಿಲ್ಪಿ ಬಂಧನ

ಧರ್ಮಸ್ಥಳದಲ್ಲಿ ಬುರುಡೆ ಗ್ಯಾಂಗ್ ರೀತಿ ಇಲ್ಲೊಂದು ಫೈಬರ್ ಗ್ಯಾಂಗ್ ಇದೆ. ಎಲ್ಲ ಕಾಮಗಾರಿಗಳು ದಾಖಲೆ ಪ್ರಕಾರವೇ ನಡೆದಿದೆ. ಇದು ಫೈಬರ್ ಪ್ರತಿಮೆ ಅಲ್ಲ ಅನ್ನೋದು ಚಾರ್ಜ್​​ಶೀಟ್​​ನಲ್ಲಿ ಸ್ಪಷ್ಟವಾಗಿದ್ದು, ವಿವಾದಗಳು ಅಲ್ಲಿಗೆ ಮುಗಿದಿವೆ. ಹೀಗಾಗಿ ಇನ್ನೂ ರಾಜಕೀಯ ಮಾಡುವುದು ಬೇಡ.  ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡೋಣ. ರಾಜಕೀಯ ಕಾರಣಕ್ಕೆ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆಯುವ ಮುಂಚೆ ಎಚ್ಚೆತ್ತುಕೊಳ್ಳಿ . ಜೊತೆಗೆ ಮುಂದಿನ ಮಸ್ತಕಾಭಿಷೇಕದ ವೇಳೆ ಪ್ರವಾಸಿಗರು ಇಲ್ಲಿಗೆ ಬರುವಂತಾಗಬೇಕು ಎಂದು ಸುನಿಲ್​​ ಕುಮಾರ್​ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ಶಿವರಾಜ್ ತಂಗಡಗಿ

ಕೊಪ್ಪಳ, (ಜನವರಿ 05): ಹಿಟ್ನಾಳ ಗ್ರಾಮದ ಬಳಿ ಹಮ್ಮಿಕೊಂಡಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮವು ರಣರಂಗವಾಗಿ ಮಾರ್ಪಟ್ಟಿದೆ. ಹೌದು…ಇಂದು (ಜನವರಿ 05) ಕೊಪ್ಪಳದ (Koppal) ಹಿಟ್ನಾಳ ಗ್ರಾಮದಲ್ಲಿ 27 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೇಂದ್ರ ಸಚಿವ ವಿ ಸೋಮಣ್ಣ ನಡುವೆ ಸಂಘರ್ಷ ಏರ್ಪಟ್ಟಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ಹೆಸರು ಹಾಕಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ತೂರಾಟ ನಡೆಸಿ, ಸಚಿವರ ಕಾರಿಗೆ ಅಡ್ಡಿಪಡಿಸಿದರು. ಇನ್ನು ಇದೇ ವೇಳೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರು ಟಿವಿ9 ಜತೆ ಮಾತನಾಡುವುದನ್ನು ಅರ್ಧಕ್ಕೆ ಬಿಟ್ಟು ಆಕ್ರೋಶದಿಂದ ಸೋಮಣ್ಣ ಇದ್ದ ವೇದಿಕೆಗೆ ನುಗ್ಗಿರುವ ಪ್ರಸಂಗ ಜರುಗಿದೆ.

ಇದನ್ನೂ ನೋಡಿ: ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ

Source link

ಗುರುಗ್ರಾಮದಲ್ಲಿ ಎನ್​ಕೌಂಟರ್; ಮೋಸ್ಟ್ ವಾಂಟೆಡ್ ಅಂತರ್​ರಾಜ್ಯ ಅಪರಾಧಿಯ ಬಂಧನ – Kannada News | Interstate criminal with Rs 1 lakh bounty arrested in Gurugram after encounter

ಗುರುಗ್ರಾಮ, ಜನವರಿ 5: ಹಲವು ರಾಜ್ಯಗಳಿಗೆ ಬೇಕಾಗಿದ್ದ, ಆತನನ್ನು ಹಿಡಿದುಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ ಅಂತರ್​ರಾಜ್ಯ ಅಪರಾಧಿಯನ್ನು ಗುರುಗ್ರಾಮ ಮತ್ತು ನುಹ್ ಪೊಲೀಸರ ಜಂಟಿ ತಂಡವು ಸಣ್ಣ ಎನ್‌ಕೌಂಟರ್ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 50 ವರ್ಷದ ಅಪರಾಧಿ ಯಾದ್ ರಾಮ್ ಎಂಬುವವರು ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಕೊಲೆ (Murder) ಯತ್ನ ಮತ್ತು ದರೋಡೆ ಸೇರಿದಂತೆ ಸುಮಾರು 2 ಡಜನ್ ಅಪರಾಧಗಳನ್ನು ಮಾಡಿದ್ದಾನೆ.

ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಕೆಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಮೂಲದ ರಾಮ್ ರಾಜಸ್ಥಾನದ ಜೈಪುರದಲ್ಲಿ ವಾಸಿಸುತ್ತಿದ್ದ. ಭಾನುವಾರ ರಾತ್ರಿ ಸೋಹ್ನಾ ಕಡೆಗೆ ನಂಬರ್ ಪ್ಲೇಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿರುವುದನ್ನು ಪೊಲೀಸರು ನೋಡಿದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಗುರುಗ್ರಾಮದ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಮರ್ಡರ್​​ ರಹಸ್ಯ ಬಿಚ್ಚಿಟ್ಟಿದ್ದು ಹೆತ್ತಮ್ಮ!

ಬೈಕ್ ಚಲಾಯಿಸುವಾಗ ಆತ ಶಸ್ತ್ರಾಸ್ತ್ರಗಳನ್ನು ಸಹ ಹೊಂದಿದ್ದ. ಆತನ ಸುಳಿವಿನ ಮಾಹಿತಿಯ ಮೇರೆಗೆ ಗುರುಗ್ರಾಮ ಪೊಲೀಸ್ ಮತ್ತು ಅಪರಾಧ ತನಿಖಾ ಸಂಸ್ಥೆ ನುಹ್ ತಂಡವು ಸೋಹ್ನಾ-ಗುರುಗ್ರಾಮ ರಸ್ತೆಯ ಮಹೇಂದ್ರವಾಡ ಕಚ್ಛಾ ರಾಸ್ತಾ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿತ್ತು. ನಿನ್ನೆ ರಾತ್ರಿ 10.15ರ ಸುಮಾರಿಗೆ ಆತನನ್ನು ತಡೆಯಲು ಪ್ರಯತ್ನಿಸಲಾಯಿತು.

ಇದನ್ನೂ ಓದಿ: ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ: ರಾಡ್​​ನಿಂದ ಹೊಡೆದು ಕೊಲೆ

ಆದರೆ, ತಕ್ಷಣ ಎಚ್ಚೆತ್ತುಕೊಂಡ ಆತ ಪೊಲೀಸ್ ತಂಡದ ಮೇಲೆ ಮನಬಂದಂತೆ ಗುಂಡು ಹಾರಿಸಿದ. ಪೊಲೀಸರು ಪ್ರತಿದಾಳಿ ನಡೆಸಿ ಆತನ ಎರಡೂ ಕಾಲುಗಳಿಗೆ ಗುಂಡು ಹಾರಿಸಿದರು. ಗುಂಡು ತಗುಲಿ ಆತ ಕೆಳಗೆ ಬಿದ್ದ ನಂತರ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿದರು. ಆ ಸ್ಥಳದಿಂದ ಒಂದು ಬೈಕ್, ಎರಡು ಅಕ್ರಮ ಪಿಸ್ತೂಲ್‌ಗಳು, 9 ಖಾಲಿ ಕಾರ್ಟ್ರಿಡ್ಜ್‌ಗಳು ಮತ್ತು 2 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಶಿಷ್ಟಾಚಾರ ಉಲ್ಲಂಘನೆ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ – Kannada News | Koppala Protocol Row: Minister Shivaraj Tangadagi Confronts Union Minister V Somanna.

ಕೊಪ್ಪಳ, ಜನವರಿ 05: ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ನಡೆದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸದ ವೇಳೆ ರಾಜಕೀಯ ಹೈಡ್ರಾಮಾ ನಡೆದಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಚಿವ ಶಿವರಾಜ್ ತಂಗಡಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹೆಸರುಗಳನ್ನು ನಮೂದಿಸಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರೆ, ಶಿವರಾಜ್ ತಂಗಡಗಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತದೆ ಎಂದು ಹೇಳಿದ ತಂಗಡಗಿ, ರಾಜ್ಯಕ್ಕೆ ಅವಮಾನ ಮಾಡಬೇಡಿ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಿರೀಕ್ಷೆ ಮೂಡಿಸಿದ ‘ವಿಕಲ್ಪ’ ಟೀಸರ್; ಇದು ವಾಸ್ತವ ಮತ್ತು ಭ್ರಮೆಯ ನಡುವಿನ ಕಥೆ – Kannada News | Pruthviraj Patil Nagashree Hebbar starrer Vikalpa Kannada Movie Teaser

ಸೈಕಲಾಜಿಕಲ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ ‘ವಿಕಲ್ಪ’ ಸಿನಿಮಾ (Vikalpa Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಈಗ ಈ ಸಿನಿಮಾವನ್ನು ಸೆನ್ಸಾರ್‌ ಮಂಡಳಿಗೆ ಕಳಿಸಲಾಗಿದೆ. ಜೊತೆಗೆ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಇತ್ತೀಚೆಗೆ ‘ವಿಕಲ್ಪ’ ಸಿನಿಮಾ ಟೀಸರ್‌ (Vikalpa Teaser) ಬಿಡುಗಡೆ ಮಾಡಲಾಯಿತು. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರು ವರ್ಚ್ಯುವಲ್‌ ಆಗಿ ಟೀಸರ್‌ ಅನಾವರಣ ಮಾಡಿದರು. ಲೇಖಕ ಜೋಗಿ ಅವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಜೋಗಿ ಮಾತನಾಡಿ ‘ಈ ಸಿನಿಮಾದ ಕೆಲವು ತುಣುಕುಗಳನ್ನು ನೋಡಿದ್ದೇನೆ. ತುಡಿತ ಇರುವಂಥವರು ಸೇರಿಕೊಂಡು ಮಾಡಿದ ಸಿನಿಮಾ ಇದು. ಕನ್ನಡದಲ್ಲಿ ಇಂಥ ಹೊಸ ಪ್ರಯತ್ನದ ಸಿನಿಮಾಗಳು ಬರುವಂತಾಗಬೇಕು. ಈ ಸಿನಿಮಾದ ಕಥೆ, ಟೀಸರ್‌, ಹಾಡು ಭರವಸೆ ಮೂಡಿಸುವಂತಿದೆ. ಸಿನಿಮಾ ಬಿಡುಗಡೆ ಆದ ಮೇಲೆ ಮೂಡಿಸಿರುವ ನಿರೀಕ್ಷೆಯನ್ನು ನಿಜ ಮಾಡಲಿ. ಹೊಸಬರ ಈ ಸಿನಿಮಾಕ್ಕೆ ಶುಭವಾಗಲಿ’ ಎಂದರು.

ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು ಹಾಗೂ ತಲ್ಲಣಗಳನ್ನು ಈ ಸಿನಿಮಾ ಮೂಲಕ ತೆರೆಮೇಲೆ ತರಲಾಗುತ್ತಿದೆ. ಹಲವು ವರ್ಷಗಳಿಂದ ಹವ್ಯಾಸಿ ರಂಗಭೂಮಿಯ ಅನುಭವ ಹೊಂದಿರುವ ಪೃಥ್ವಿರಾಜ್‌ ಪಾಟೀಲ್‌ ಅವರ ಪರಿಕಲ್ಪನೆಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ‘ಸುರೂಸ್‌ ಟಾಕೀಸ್‌’ ಮೂಲಕ ಇಂದಿರಾ ಶಿವಸ್ವಾಮಿ ಅವರು ನಿರ್ಮಾಣ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ.

ಪೃಥ್ವಿರಾಜ್‌ ಪಾಟೀಲ್‌ ಅವರು ನಿರ್ದೇಶನ ಮಾಡುವುದರ ಜೊತೆಗೆ ತೆರೆಮೇಲೆ ಮುಖ್ಯಪಾತ್ರವನ್ನೂ ಮಾಡಿದ್ದಾರೆ. ನಾಗಶ್ರೀ ಹೆಬ್ಬಾರ್‌, ಹರಿಣಿ ಶ್ರೀಕಾಂತ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಸಂಧ್ಯಾ ವಿನಾಯಕ್‌, ಪೂಜಾ ಬಚ್ಚ್‌, ಜಯಂತ್‌ ಡೇವಿಡ್‌, ಡಾ. ಪ್ರಕೃತಿ, ಗಿರೀಶ್‌ ಹೆಗಡೆ, ಮಾಸ್ಟರ್‌ ಆಯುಷ್ ಸಂತೋಷ್‌, ಪ್ರಜ್ಞಾ ಗಣಪತಿ, ಗಣಪತಿ ಹಿತ್ತಲಕೈ, ಮಾಧವ ಶರ್ಮಾ, ಗೋಡೆ ನಾರಾಯಣ ಹೆಗಡೆ, ಗಣಪತಿ ಎ.ಆರ್. ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ವಿಕಲ್ಪ’ ಸಿನಿಮಾ ಟೀಸರ್:

‘ವಿಕಲ್ಪ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ. ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ. ಆದರೂ ಸಂಪೂರ್ಣ ಥ್ರಿಲ್ಲರ್‌ ಸಿನಿಮಾ ಎಂಬುದು ವಿಶೇಷ. ಜೊತೆಗೆ ಹಾಸ್ಯ ಮತ್ತು ಮನರಂಜನೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಕಥೆಯೇ ಈ ಸಿನಿಮಾದ ಹೀರೋ’ ಎಂದು ನಿರ್ದೇಶಕ, ನಟ ಪೃಥ್ವಿರಾಜ್‌ ಪಾಟೀಲ್‌ ಅವರು ಮಾಹಿತಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಹರಿಣಿ ಶ್ರೀಕಾಂತ್‌ ಅವರು ಸೈಕಿಯಾಟ್ರಿಸ್ಟ್‌ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ಕುದುರೆಯಾ? ಹೆಗ್ಗಣವಾ? ಹೊಸ ಸಿನಿಮಾ ಘೋಷಿಸಿದ ಡಾಲಿ ಧನಂಜಯ್

ಮನೋವೈದ್ಯರ ಸಲಹೆಯ ಮೇರೆಗೆ ಹಲವು ದೃಶ್ಯಗಳ ಚಿತ್ರೀಕರಣ ನಡೆದಿದೆ ಎಂದು ಚಿತ್ರತಂಡ ಹೇಳಿದೆ. ಬೆಂಗಳೂರು, ಸಾಗರ, ತೀರ್ಥಹಳ್ಳಿ, ಶಿರಸಿ, ಯಲ್ಲಾಪುರ, ಕುಂದಾಪುರ, ಸಿಂಗಾಪುರ, ನೆದರ್ಲ್ಯಾಂಡ್‌ ಮುಂತಾದೆಡೆ ಶೂಟಿಂಗ್ ಮಾಡಲಾಗಿದೆ. ಅಭಿರಾಮ್‌ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್‌ ಆರುಮುಗಮ್‌ ಅವರ ಸಂಕಲನ ಈ ಚಿತ್ರಕ್ಕಿದೆ. ಸಂವತ್ಸರ ಅವರು ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಸ್ತಿ ಮಾರಾಟ; ತೆರಿಗೆ ಉಳಿಸಲು ಸೆಕ್ಷನ್ 54 ಮತ್ತು 54ಎಫ್ ಅವಕಾಶ ಬಳಸಿ – Kannada News | Selling gold and other assets, get tax deductions using section 54f, know more details here

ಕಳೆದ ಕೆಲ ವರ್ಷಗಳಲ್ಲಿ ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇದರ ಮೇಲಿನ ಹೂಡಿಕೆ ಬಹಳ ಆಕರ್ಷಕ ಎನಿಸಿದೆ. ಚಿನ್ನದಂತಹ ಆಸ್ತಿಯನ್ನು ಮಾರಿದಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ (Capital Gain tax) ಅನ್ವಯ ಆಗುತ್ತದೆ. ಶೇ. 20ರವರೆಗೂ ತೆರಿಗೆ ಇದೆ. ದೀರ್ಘಾವಧಿ ಲಾಭ ಗಳಿಕೆ ತೆರಿಗೆ (Long term capital gain tax) ಶೇ. 12.5 ಇದೆ. ಅಲ್ಪಾವಧಿ ಲಾಭ ಗಳಿಕೆ ತೆರಿಗೆ ಶೇ. 20 ಇದೆ. ಇಷ್ಟು ದೊಡ್ಡ ಮೊತ್ತದ ಟ್ಯಾಕ್ಸ್ ಅನ್ನು ಕಟ್ಟುವುದನ್ನು ತಪ್ಪಿಸಲು ಇನ್ಕಮ್ ಟ್ಯಾಕ್ಸ್ (Income Tax) ಕಾನೂನಿನಲ್ಲಿ ಒಂದು ಅವಕಾಶ ಕೊಡಲಾಗಿದೆ. ಅದು ಸೆಕ್ಷನ್ 54ಎಫ್ ಮಾರ್ಗ.

ಏನಿದು ಸೆಕ್ಷನ್ 54ಎಫ್?

ಈ ಸೆಕ್ಷನ್​ನಲ್ಲಿ ಜನರು ಮನೆ ಖರೀದಿಸಲಾಗುವಂತೆ ಪ್ರೋತ್ಸಾಹಿಸಲಾಗುತ್ತದೆ. ನೀವು ಒಂದು ಆಸ್ತಿಯನ್ನು ಮಾರಿ ಅದರಿಂದ ಬಂದ ಹಣವನ್ನು ವಾಸದ ಮನೆ ಖರೀದಿಸಲು ಅಥವಾ ಕಟ್ಟಲು ಬಳಸಿದರೆ ಆಗ ಆ ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಅಂದರೆ, ಆಸ್ತಿ ಮಾರಿ ಸಿಕ್ಕ ಲಾಭಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುವುದಿಲ್ಲ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ

ಚಿನ್ನ, ಷೇರುಗಳು, ಮ್ಯೂಚುವಲ್ ಫಂಡ್​ಗಳು ಇತ್ಯಾದಿ ಆಸ್ತಿಗಳಿಗೆ ಸೆಕ್ಷನ್ 54ಎಫ್ ಅನ್ವಯ ಆಗುತ್ತದೆ. ಕಮರ್ಷಿಯಲ್ ಆಸ್ತಿಯ ಮಾರಾಟದಿಂದ ಬಂದ ಹಣಕ್ಕೂ ಈ ವಿನಾಯಿತಿ ಸಿಗುತ್ತದೆ.

ಸೆಕ್ಷನ್ 54ಎಫ್​ನಂತೆ ಸೆಕ್ಷನ್ 54 ಕೂಡ ಇದೆ. ನೀವು ಮನೆಯನ್ನು ಮಾರಿ ಆ ಹಣವನ್ನು ಬೇರೊಂದು ಮನೆ ಖರೀದಿಸಲು ಅಥವಾ ನಿರ್ಮಿಸಲು ಬಳಸಿದರೆ ಆಗ ಸೆಕ್ಷನ್ 54 ನೆರವಿಗೆ ಬರುತ್ತದೆ. ಆದರೆ, ನೀವು ಮನೆ ಖರೀದಿಸಿ ಕನಿಷ್ಠ ಎರಡು ವರ್ಷ ಆದ ಬಳಿಕವಷ್ಟೇ ಮಾರಿ, ಅದನ್ನು ಎರಡು ವರ್ಷದೊಳಗೆ ಬೇರೆ ಮನೆ ಖರೀದಿಗೆ ಬಳಸಬೇಕು. ಅಥವಾ ಮೂರು ವರ್ಷದೊಳಗೆ ಹೊಸ ಮನೆ ಕಟ್ಟಬೇಕು. ಆಗ ಹಿಂದಿನ ಮನೆ ಮಾರಾಟದಿಂದ ಬಂದ ಲಾಭಕ್ಕೆ ನೀವು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟುವ ಅಗತ್ಯ ಇರುವುದಿಲ್ಲ.

ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?

ಒಂದು ವೇಳೆ ನೀವಿರುವ ವಾಸದ ಮನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು, ಅದಕ್ಕೆ ಪರಿಹಾರ ಹಣ ಕೊಟ್ಟರೆ ಅದಕ್ಕೂ ಟ್ಯಾಕ್ಸ್ ಬೆನಿಫಿಟ್ ಇರುತ್ತದೆ. ಆ ಕಾಂಪೆನ್ಸೇಶನ್ ಹಣವನ್ನು ಬೇರೆ ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ ಬಳಸಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ – Kannada News | Congress Workers Attempts to Attack On Minister V Somanna With chair at Koppal

ಕೊಪ್ಪಳ, (ಜನವರಿ 05): ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದ ವೇಳೆ ಕೇಂದ್ರ ಸಚಿವ ಸೋಮಣ್ಣ (Minister V Somanna )ಮೇಲೆಯೇ ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ತೂರಿರುವ ಘಟನೆ ನಡೆದಿದೆ. ಇಂದು (ಜನವರಿ 05) ಕೊಪ್ಪಳ (Koppal) ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಗಲಾಟೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಕೈ ಕಾರ್ಯಕರ್ತರು, ಸಚಿವ ಸೋಮಣ್ಣ ಅವರತ್ತ ಕುರ್ಚಿ ತೂರಿದ್ದಾರೆ. ಈ ವೇಳೆ ಅಂಗರಕ್ಷಕರು ಕುರ್ಚಿಗಳನ್ನ ತಡೆದಿದ್ದಾರೆ. ಇದರಿಂದ ಅನಾಹುತ ತಪ್ಪಿದಂತಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಹೈಡ್ರಾಮಾ: ಕೇಂದ್ರ ಸಚಿವರತ್ತಲೇ ಕುರ್ಚಿ ತೂರಿದ ‘ಕೈ’ ಕಾರ್ಯಕರ್ತರು!

Source link

ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ!

ಬೀದರ್, ಜನವರಿ 05: ಬೀದರ್ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆ ಗಲಾಟೆಗೆ ಕಾರಣವಾಯಿತು. ಸಭೆಯಲ್ಲಿ ಹುಮನಾಬಾದ್ ಕ್ಷೇತ್ರದ ಶಾಸಕ ಸಿದ್ದು ಪಾಟೀಲ್ ಹಾಗೂ ಎಂಎಲ್‌ಸಿ ಭೀಮರಾವ್ ಪಾಟೀಲ್ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಭೀಮರಾವ್ ಪಾಟೀಲ್ ಅವರು ಅರಣ್ಯ ಇಲಾಖೆಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಶಾಸಕ ಸಿದ್ದು ಪಾಟೀಲ್ ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಗೆ ತಿಳಿಸಿದರು. ಇದಕ್ಕೆ ಕೋಪಗೊಂಡ ಭೀಮರಾವ್ ಪಾಟೀಲ್, “ಅದನ್ನು ಕೇಳಲು ನೀನ್ಯಾರು?” ಎಂದು ಪ್ರತಿಕ್ರಿಯಿಸಿ ಏಕವಚನದಲ್ಲಿ ನಿಂದಿಸಿದಾಗ ವಾಗ್ವಾದವು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತಿದ್ದಂತೆ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದರು. ನಂತರ ಸಚಿವ ಈಶ್ವರ ಖಂಡ್ರೆ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version