Yearly Horoscope 2026: 2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ – Kannada News | Leo Horoscope 2026: Dr. Basavaraj Gurujis Yearly Predictions

2026ರ ವರ್ಷವು ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ. ಈ ವರ್ಷದಲ್ಲಿ ಗ್ರಹಗಳ ಸಂಚಾರವು ಜೀವನದ ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದೆ. ಗುರು ಗ್ರಹವು ಜೂನ್ ಎರಡನೇ ತಾರೀಖಿನ ತನಕ ಲಾಭ ಸ್ಥಾನದಲ್ಲಿ ಇದ್ದು, ನಂತರ 12ನೇ ಮನೆಗೆ (ದ್ವಾದಶ ಸ್ಥಾನ) ಪ್ರವೇಶಿಸಲಿದ್ದಾನೆ. ಅಷ್ಟಮ ಶನಿ ವರ್ಷವಿಡೀ ಮುಂದುವರಿದರೆ, ರಾಹು 7ನೇ ಮನೆಯಿಂದ 6ನೇ ಮನೆಗೆ, ಕೇತು 1ನೇ ಮನೆಯಿಂದ 12ನೇ ಮನೆಗೆ ಸಂಚರಿಸಲಿದ್ದಾರೆ.

ಒಟ್ಟಾರೆಯಾಗಿ, ಸಿಂಹ ರಾಶಿಯವರು ಕೆಟ್ಟ ದಾರಿಯಿಂದ ಒಳ್ಳೆಯ ದಾರಿಗೆ ಪ್ರವೇಶಿಸುವ ಶುಭ ಕಾಲವಿದು. ಜವಾಬ್ದಾರಿಗಳು ಹೆಚ್ಚಾಗುತ್ತವೆಯಾದರೂ, ಮಾನಸಿಕ ಶಾಂತಿ ಮತ್ತು ಒತ್ತಡಗಳಲ್ಲಿ ಇಳಿಕೆ ಕಂಡುಬರುತ್ತದೆ. ಆರ್ಥಿಕ ಪ್ರಗತಿ ಮತ್ತು ಬಹು ದಿನಗಳ ಆಸೆಗಳು ಈಡೇರುವ ಸಾಧ್ಯತೆಗಳಿವೆ. ದುಸ್ಥಾನದಲ್ಲಿ ಪಾಪಗ್ರಹಗಳಿದ್ದಾಗ, ದುರಾಸೆಗೆ ಕಡಿವಾಣ ಹಾಕಿ, ಪ್ರಯತ್ನಗಳಿಗೆ ಒತ್ತು ನೀಡಿದರೆ ದ್ವಿಗುಣ ಅದೃಷ್ಟ ಪ್ರಾಪ್ತಿಯಾಗಲಿದೆ. ಇದು ಸಿಂಹ ರಾಶಿಯವರಿಗೆ ಒಂದು ಪುನರ್ಜನ್ಮದ ಕಾಲ ಎಂದೂ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನೋರಾ ಫತೇಹಿ ಕಾರು ಅಪಘಾತ: ಈಗ ಹೇಗಿದೆ ನಟಿಯ ಪರಿಸ್ಥಿತಿ? – Kannada News | Actress Nora Fatehi gives her health update after car accident in Mumbai

ಖ್ಯಾತ ನಟಿ ನೋರಾ ಫತೇಹಿ (Nora Fatehi) ಅವರ ಅಭಿಮಾನಿಗಳಿಗೆ ಇದು ಕಹಿ ಸುದ್ದಿ. ಮುಂಬೈನಲ್ಲಿ ನೋರಾ ಚಲಿಸುತ್ತಿದ್ದ ಕಾರು ಅಪಘಾತಕ್ಕೆ (Car Accident) ಒಳಗಾಗಿದೆ. ಕುಡಿದು ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನು ನೋರಾ ಅವರ ಕಾರಿಗೆ ಬಂದು ಡಿಕ್ಕಿ ಹೊಡೆದಿದ್ದಾನೆ. ಹಾಡುಹಗಲು 3 ಗಂಟೆಗೆ ಈ ಘಟನೆ ನಡೆದಿದೆ. ಇದರಿಂದಾಗಿ ನೋರಾ ಫತೇಹಿ ಅವರಿಗೆ ಚಿಕ್ಕ-ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಅವರು ಸುರಕ್ಷಿತವಾಗಿದ್ದಾರೆ. ಆದರೆ ಅವರು ಈ ಘಟನೆಯಿಂದ ಆತಂತಕ್ಕೆ ಒಳಗಾಗಿದ್ದಾರೆ. ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ನೋರಾ ಫತೇಹಿ ಬುದ್ಧಿಮಾತು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನೋರಾ ಫತೇಹಿ ಅವರು ಪ್ರಯಾಣ ಮಾಡುತ್ತಿದ್ದರು. ಆಗ ಇನ್ನೊಂದು ಕಾರು ಬಂದು ಡಿಕ್ಕಿ ಹೊಡಿದಿದೆ. ಕೂಡಲೇ ನೋರಾ ಫತೇಹಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರು ಕೂಡಲೇ ಸಿ.ಟಿ. ಸ್ಕ್ಯಾನ್ ಮಾಡಿದರು. ಇಂಟರನಲ್​ ಬ್ಲೀಡಿಂಗ್ ಆಗಿರಬಹುದೇ ಎಂಬುದನ್ನು ಪರೀಕ್ಷಿಸಿದರು.

ನೋರಾ ಫತೇಹಿ ಅವರಿಗೆ ಯಾವುದೇ ರೀತಿಯಲ್ಲಿ ಗಂಭೀರ ಗಾಯಗಳು ಆಗಿಲ್ಲ ಎಂಬುದು ವೈದ್ಯರ ತಪಾಸಣೆಯಿಂದ ತಿಳಿದುಬಂತು. ಪ್ರಥಮ ಚಿಕಿತ್ಸೆ ಪಡೆದು ಸುಧಾರಿಸಿಕೊಂಡ ಬಳಿಕ ಅವರು ಈ ಮೊದಲೇ ಒಪ್ಪಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನೋರಾ ಫತೇಹಿ ಅವರಿಗೆ ಅಪಘಾತ ಆಗಿದೆ ಎಂಬ ಸುದ್ದಿ ತಿಳಿದು ಅವರ ಅಭಿಮಾನಿಗಳಿಗೆ ಆತಂಕ ಆಗಿತ್ತು. ಈಗ ಸ್ವತಃ ನೋರಾ ಫತೇಹಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಈಗ ಚೆನ್ನಾಗಿದ್ದೇನೆ, ಬದುಕಿದ್ದೇನೆ’ ಎಂದು ಹೇಳುವ ಮೂಲಕ ಅಭಿಮಾನಿಗಳ ಆತಂಕವನ್ನು ನೋರಾ ಫತೇಹಿ ಅವರು ದೂರು ಮಾಡಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರೂ ಕೂಡ ನೇರಾ ಫತೇಹಿ ಅವರು ಕೆಲಸಕ್ಕೆ ಮರಳಿದ್ದಾರೆ.

ಇದನ್ನೂ ಓದಿ: ನೋರಾ ಫತೇಹಿ ಇಂಗ್ಲೀಷ್ ಹಾಡಿನ ಚಿತ್ರೀಕರಣ: ವಿಡಿಯೋ ನೋಡಿ

ಹಲವು ಪ್ರಾಜೆಕ್ಟ್​​ಗಳಲ್ಲಿ ನೋರಾ ಫತೇಹಿ ಅವರು ಬ್ಯುಸಿ ಆಗಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ಡ್ಯಾನ್ಸರ್ ಆಗಿ ಅವರು ಹೆಚ್ಚು ಫೇಮಸ್ ಆಗಿದ್ದಾರೆ. ವಿದೇಶಿ ಮ್ಯೂಸಿಕ್ ಸೆಲೆಬ್ರಿಟಿಗಳ ಜೊತೆ ಕೂಡ ಅವರು ಕೈಜೋಡಿಸಿದ್ದಾರೆ. ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆನಡಾ ಮೂಲದ ಅವರಿಗೆ ಈಗ 33 ವರ್ಷ ವಯಸ್ಸು. 80 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೋಗಿ ದೃಷ್ಟಿ ತೆಗಿಯಿರಿ… ಶುಭ್​ಮನ್ ಗಿಲ್​ಗೆ ಸುನಿಲ್ ಗವಾಸ್ಕರ್ ಸಲಹೆ – Kannada News | Sunil Gavaskar’s heartfelt advice to Shubman Gill

ಟಿ20 ವಿಶ್ವಕಪ್​ಗಾಗಿ ಭಾರತ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಶುಭ್​ಮನ್ ಗಿಲ್​ಗೆ ಸ್ಥಾನ ಲಭಿಸಿಲ್ಲ. ಅಚ್ಚರಿ ಎಂದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಗಿಲ್ ಭಾರತ ಟಿ20 ತಂಡದ ಉಪನಾಯಕರಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಟಿ20 ವಿಶ್ವಕಪ್​ನಲ್ಲೂ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೀಗ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಹಾಗೂ ಟಿ20 ವಿಶ್ವಕಪ್​ಗೆ ಪ್ರಕಟಿಸಲಾದ ತಂಡದಲ್ಲಿ ಗಿಲ್​ಗೆ ಸ್ಥಾನ ನೀಡಲಾಗಿಲ್ಲ.

ಇತ್ತ ಶುಭ್​ಮನ್ ಗಿಲ್​ಗೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್. ಅಷ್ಟೇ ಅಲ್ಲದೆ ಗವಾಸ್ಕರ್ ಹೆಸರಿಸಿದ ಟಿ20 ವಿಶ್ವಕಪ್ ತಂಡದಲ್ಲಿ ಗಿಲ್ ಅವರನ್ನು ಆರಂಭಿಕರಾಗಿ ಕೂಡ ಆಯ್ಕೆ ಮಾಡಿದ್ದರು. ಆದರೆ ಭಾರತ ತಂಡ ಪ್ರಕಟವಾದಾಗ ಗವಾಸ್ಕರ್ ಅಚ್ಚರಿ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಚಾನೆಲ್​ ಚರ್ಚೆಯಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಇದು ಆಶ್ಚರ್ಯಕರ ಸಂಗತಿ. ಅವರು (ಗಿಲ್) ಒಬ್ಬ ಶ್ರೇಷ್ಠ, ಗುಣಮಟ್ಟದ ಬ್ಯಾಟ್ಸ್‌ಮನ್.  2024 ರ ಟಿ 20 ವಿಶ್ವಕಪ್ ನಂತರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ ಅವರು ಸೌತ್ ಆಫ್ರಿಕಾ ವಿರುದ್ಧದ ಕೆಲವು ಪಂದ್ಯಗಳಲ್ಲಿ ರನ್​ಗಳಿಸಲು ಹೆಣಗಾಡಿದ್ದಾರೆ ನಿಜ. ಆದರೆ ಕ್ಲಾಸ್ ಶಾಶ್ವತ, ಫಾರ್ಮ್ ತಾತ್ಕಾಲಿಕ,” ಎಂದು ನೆನಪಿಟ್ಟುಕೊಳ್ಳಬೇಕು.

ಇತ್ತೀಚೆಗೆ ನಾನು ಅಹಮದಾಬಾದ್‌ನಿಂದ ಹಿಂತಿರುಗುವಾಗ ಗಿಲ್ ಕೂಡ ವಿಮಾನದಲ್ಲಿದ್ದರು. ಈ ವೇಳೆಯೇ ನಾನು ಗಿಲ್‌ಗೆ ತಮ್ಮ ಮನೆಯಲ್ಲಿ ಹಿರಿಯ ವ್ಯಕ್ತಿಯಿಂದ ಕಣ್ಣು ದೃಷ್ಟಿ ತೆಗೆಯುವಂತೆ ಸೂಚಿಸಿದ್ದೆ. ನಾನು ಈ ಕೆಟ್ಟ ದೃಷ್ಟಿಯನ್ನೆಲ್ಲಾ ನಂಬುತ್ತೇನೆ. ಹೀಗಾಗಿ ಈಗಲೂ ಶುಭ್​ಮನ್ ಗಿಲ್​ ಮನೆಗೆ ಹೋಗಿ ಅಜ್ಜಿ ಅಥವಾ ಹಿರಿಯ ವ್ಯಕ್ತಿಯಿಂದ ಕೆಟ್ಟ ದೃಷ್ಟಿ ತೆಗೆಯಬೇಕೆಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: WTC ಅಂಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗೆ ಟೀಮ್ ಇಂಡಿಯಾ

ಇನ್ನು ಶುಭ್​ಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈ ಬಿಡಲು ಮುಖ್ಯ ಕಾರಣ ಕಳಪೆ ಪ್ರದರ್ಶನ. ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದ ಗಿಲ್ ಕಲೆಹಾಕಿದ್ದು ಕೇವಲ 32 ರನ್​ಗಳು ಮಾತ್ರ. ಹೀಗಾಗಿಯೇ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

Source link

Video: ಕರುವಿನೊಂದಿಗೆ ವಾಕಿಂಗ್ ಹೊರಟ ಯುವಕ, ವೈರಲ್ ಆಯ್ತು ದೃಶ್ಯ – Kannada News | Young man goes for a walk with a calf, video goes viral

ವಾಕಿಂಗ್‌ ವೇಳೆ ಮನೆಯ ಮುದ್ದಿನ ಶ್ವಾನಗಳನ್ನು (Dog) ತಮ್ಮೊಂದಿಗೆ ಕರೆದುಕೊಂಡು ಬರುವವರನ್ನು ನೀವು ನೋಡಿರುತ್ತೀರಿ. ವಾಕಿಂಗ್‌ಗೆಂದು ಬಂದ ಸಂದರ್ಭದಲ್ಲಿ ಮಾಲೀಕ ಹಾಗೂ ಶ್ವಾನಗಳ ನಡುವಿನ ಪ್ರೀತಿ ಹಾಗೂ ಬಾಂಧವ್ಯಕ್ಕೆ ಈ ಕೆಲ ದೃಶ್ಯಗಳು ಸಾಕ್ಷಿಯಾಗುತ್ತವೆ. ಆದರೆ ಇಲ್ಲೊಬ್ಬ ಯುವಕನು ವಾಕಿಂಗ್‌ಗೆ ಶ್ವಾನವನ್ನು ಕರೆದುಕೊಂಡು ಹೋಗಿಲ್ಲ. ಬದಲಾಗಿ ಪುಟಾಣಿ ಕರುವಿನೊಂದಿಗೆ (calf) ಸಂಜೆಯ ವೇಳೆ ವಾಕಿಂಗ್‌ಗೆ ತೆರಳಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಸೌರಭ್ ಜೈನ್ (Sourabh Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯುವಕನೊಬ್ಬ ಸಂಜೆಯ ವಾಕಿಂಗ್‌ಗೆ ಸಮಯದಲ್ಲಿ ಪುಟಾಣಿ ಕರುವನ್ನು ತನ್ನೊಂದಿಗೆ ಕರೆದುಕೊಂಡು ಬಂದಿರುವುದನ್ನು ಕಾಣಬಹುದು. ಅಲ್ಲಿದ್ದ ಜನರು ಕರುವನ್ನು ನೋಡುತ್ತಾ ನಿಂತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ

ಈ ವಿಡಿಯೋ 1.2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂಟರ್ನೆಟ್‌ನಲ್ಲಿ ಇವತ್ತಿನ ಬೆಸ್ಟ್ ವಿಡಿಯೋ ಎಂದಿದ್ದಾರೆ. ಮತ್ತೊಬ್ಬರು, ಮುದ್ದಾಗಿದೆ ಈ ದೃಶ್ಯ ಎಂದರೆ ಇನ್ನೊಬ್ಬರು, ಶ್ವಾನ ಪ್ರೇಮಿಗಳು ಇದನ್ನು ನೋಡಿ ಅಳ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:57 pm, Sun, 21 December 25

Source link

‘ಟಾಕ್ಸಿಕ್’ ಚಿತ್ರದಿಂದ ನಟಿ ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ಬಿಡುಗಡೆ – Kannada News | Yash starrer Toxic movie team released Kiara Advani first look as Nadia

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಹತ್ತಿರ ಆಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಯಶ್ ನಟಿಸಿದ ಸಿನಿಮಾ ಆದ್ದರಿಂದ ‘ಟಾಕ್ಸಿಕ್’ (Toxic) ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈಗ ‘ಟಾಕ್ಸಿಕ್’ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರಿಂದ ಕುತೂಹಲ ಹೆಚ್ಚಿಸಲಾಗಿದೆ. ಗ್ಲಾಮರಸ್ ಆದ ಗೆಟಪ್​​ನಲ್ಲಿ ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡಿದ್ದಾರೆ.

ನಟಿ ಕಿಯಾರಾ ಅಡ್ವಾಣಿ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಬಾಲಿವುಡ್ ಮಾತ್ರವಲ್ಲದೇ ಸೌತ್ ಸಿನಿಮಾರಂಗದಲ್ಲೂ ಅವರು ಹೆಸರು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಯಶ್ ಜೊತೆ ಅಭಿನಯಿಸಿದ್ದು, ಆ ಕಾರಣದಿಂದ ‘ಟಾಕ್ಸಿಕ್’ ಸಿನಿಮಾ ಇನ್ನಷ್ಟು ವಿಶೇಷ ಎನಿಸಿಕೊಂಡಿದೆ. ಫಸ್ಟ್ ಲುಕ್ ನೋಡಿ ಕಿಯಾರಾ ಅಡ್ವಾಣಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಅವರು ನಾಡಿಯಾ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಸರ್ಕಸ್ ಹಿನ್ನೆಲೆಯಲ್ಲಿ ಅವರ ಫಸ್ಟ್ ಲುಕ್ ಪೋಸ್ಟರ್ ಮೂಡಿಬಂದಿದೆ. ಕಿಯಾರಾ ಮುಖದಲ್ಲಿ ಏನೋ ಆತಂಕ ಕಾಣಿಸುವಂತಿದೆ. ಆ ಮೂಲಕ ಇದು ಕೇವಲ ಗ್ಲಾಮರ್ ಪಾತ್ರವಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಈ ಚಿತ್ರದಲ್ಲಿ ಕಿಯಾರಾ ಅವರ ನಟನೆಗೆ ಹೆಚ್ಚು ಮಹತ್ವ ಸಿಗಲಿದೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಪಾತ್ರ ಆಗಲಿದೆ ಎಂಬ ನಿರೀಕ್ಷೆ ಇದೆ.

ಈ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಾಡಿಯಾ ಎಂಬ ಪಾತ್ರದ ಬಗ್ಗೆ ಅವರು ಮಾತನಾಡಿದ್ದಾರೆ. ‘ಕೆಲವು ಪಾತ್ರಗಳು ಸಿನಿಮಾಗೆ ಮಾತ್ರ ಸೀಮಿತ ಅಲ್ಲ. ಅವು ಕಲಾವಿದರಿಗೂ ಹೊಸ ಆಯಾಮ ನೀಡುತ್ತವೆ. ಈ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಅವರು ನ್ಯಾಯ ಒದಗಿಸಿದ್ದಾರೆ. ಅದಕ್ಕಾಗಿ ನನಗೆ ಅವರ ಬಗ್ಗೆ ಹೆಮ್ಮೆ ಇದೆ’ ಎಂದು ಗೀತು ಹೇಳಿದ್ದಾರೆ.

ಇದನ್ನೂ ಓದಿ: ಮಗಳಿಗೆ ಸರಾಯಾಹ್ ಎಂದು ಹೆಸರಿಟ್ಟ ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ‘ಟಾಕ್ಸಿಕ್’ ಸಿನಿಮಾ ಸಿದ್ಧವಾಗುತ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮುಂತಾದ ಭಾಷೆಗಳಿಗೆ ಡಬ್ ಆಗುತ್ತಿದೆ. ಈ ಸಿನಿಮಾದ ಬರವಣಿಗೆಯಲ್ಲಿ ನಿರ್ದೇಶಕಿ ಗೀತೂ ಮೋಹನ್​ದಾಸ್ ಜೊತೆ ಯಶ್ ಕೂಡ ಕೈ ಜೋಡಿಸಿದ್ದಾರೆ. ಆ ಕಾರಣದಿಂದಲೂ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Weekly Horoscope: ನಿಮ್ಮ ರಾಶಿಗನುಗುಣವಾಗಿ ಡಿ. 21 ರಿಂದ 27ರ ವರೆಗಿನ ವಾರಭವಿಷ್ಯ ತಿಳಿಯಿರಿ – Kannada News | December Weekly Horoscope: Zodiac Predictions and Planetary Influences

ಡಿಸೆಂಬರ್ ತಿಂಗಳ ಈ ವಾರ ಸೂರ್ಯ, ಶುಕ್ರ, ಕುಜರ ಯೋಗ ಧನುರಾಶಿಯಲ್ಲಿ ಆಗಲಿದ್ದು ಗುರುವಿನ ರಾಶಿಯಲ್ಲಿ ಇರುವ ಇವರು ಶುಭ ಫಲವನ್ನೇ ಕೊಡುವರು. ಉತ್ಸಾಹ ಹಾಗು ಸರ್ಕಾರದ ಕಾರ್ಯಗಳು ಬೇಗ ಆಗಲಿವೆ. ಶಸ್ತ್ರಕ್ಕೆ ಸಂಬಂಧಿಸಿದ ಉದ್ಯೋಗಳು ಫಲಿತವಾಗುವುದು. ಎಲ್ಲ ಗ್ರಹಗಳೂ ಏಕಾದಶ ಸ್ಥಾನದ ಫಲವನ್ನು ಕೊಡಲಿ.

ಮೇಷ ರಾಶಿ:

ಈ ವಾರ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ಇಂದ್ರಜಾಲದಂತೆ ಮಾಯವಾಗಲಿದೆ. ಕ್ಷಣಾರ್ಧದಲ್ಲಿ ಪರಿಹಾರವನ್ನು ಕಂಡುಕೊಳ್ಳಬಲ್ಲಿರಿ. ನಿಮ್ಮ ವ್ಯವಹಾರದ ಬಗ್ಗೆ ಸಲ್ಲದ ಮಾತುಗಳು ಕೇಳಿಬರಬಹುದು. ಕಿವಿಗೆ ಹಾಕಿಕೊಳ್ಳಿ, ಚಿಂತಿಸುವ ಅವಶ್ಯಕತೆ ಇಲ್ಲ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡಬೇಕಾಗುವುದು. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ದ್ವಂದ್ವಹಳೂ ನಿಮ್ಮನ್ನು ಏನೂ ಮಾಡಲಾಗದು. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ. ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳುವ ಆಕಾಂಕ್ಷೆಯು ಇರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಒತ್ತಡವನ್ನು ಕಡಿಮೆ ಆಗುವುದು. ಕಾರ್ತಿಕೇಯನ ಸ್ಮರಣೆ ಸದಾ ಮನದಲ್ಲಿ ನಡೆಯಲಿ.

ವೃಷಭ ರಾಶಿ:

ಡಿಸೆಂಬರ್ ನ ಈ ವಾರ ಉನ್ನತ ಅಧಿಕಾರಿಗಳು ನಿಮ್ಮಿಂದ ಅಧಿಕ ನಿರೀಕ್ಷೆಯನ್ನು ಮಾಡುವರು. ಉದ್ಯಮಿಗಳ ಕೆಲಸದಲ್ಲಿ ಅಡೆತಡೆಗಳು ಬಂದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುವಿರಿ. ಕಳೆದುಕೊಂಡಿದ್ದನ್ನು ನೀವು ಪುನಃ ಪಡೆದುಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಂಡಿದ್ದು ಅನಂತರ ಗೊತ್ತಾಗಲಿದೆ. ಒಮ್ಮೆಲೆ ಹುಡುಗಾಟಿಕೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ. ವ್ಯವಹಾರದಲ್ಲಿ ಗೊಂದಲ ಇಟ್ಟುಕೊಳ್ಳುವುದು ಬೇಡ. ಅಲ್ಲೇ ಪರಿಹಾರ ಮಾಡಿಕೊಳ್ಳಿ. ನಿಮ್ಮ ಸೋಲನ್ನು ಒಪ್ಪಿಕೊಳ್ಳದೇ ವಾದಿಸುವಿರಿ. ಮಹಾಲಕ್ಷ್ಮೀ ಸ್ತೋತ್ರವನ್ನು ಪಠಿಸಿ.

ಮಿಥುನ ರಾಶಿ:

ಮೂರನೇ ರಾಶಿಯವರು ಈ ವಾರ ವಿದೇಶದ ತಮ್ಮ ಬದುಕನ್ನು ಸ್ವಾವಲಂಬಿಯಾಗಿಸಿಕೊಳ್ಳಲು ಬಯಸುವರು. ಯಾವುದೋ ಅಸತ್ಯವಾದ ಉದ್ಯೋಗಕ್ಕೆ ಮನಸೋತು ಹಣವನ್ನು ಕಳೆದುಕೊಳ್ಳಬೇಕಾದೀತು. ವ್ಯಾಪಾರದ ನಷ್ಟವನ್ನು ಇನ್ನಾವುದರಿಂದಲೇ ತುಂಬಿಕೊಳ್ಳುವಿರಿ. ಈ ವಾರ ಮನೆಯ ಯಾವ ವಸ್ತುಗಳನ್ನೂ ಇನ್ನೊಬ್ಬರಿಗೆ ಕೊಡಲು ಇಚ್ಛಿಸುವುದಿಲ್ಲ. ಹೂಡಿಕೆಯನ್ನು ನಿಲ್ಲಿಸುವ ಮನಸ್ಸಾಗುವುದು. ವಾರ ಪೂರ್ತಿ ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಈ ವಾರ ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಎಲ್ಲ ಸನ್ನಿವೇಶಕ್ಕೂ ಒಂದೇ ಪರಿಹಾರವು ಇರದು. ಒಂದೇ ವಿಚಾರವನ್ನು ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗಲಿದೆ. ಉಪವಾಸ ವ್ರತದಿಂದ ಮಹಾವಿಷ್ಣುವನ್ನು ಮೆಚ್ಚಿಸುವಿರಿ.

ಕರ್ಕಾಟಕ ರಾಶಿ:

ಈ ವಾರ ವರ್ತನೆಯನ್ನು ನೀವು ನಿಯಂತ್ರಿಸಿಕೊಳ್ಳದಿದ್ದರೆ ತಮಾಷೆಯ ವಸ್ತುವಾಗಬೇಕಾಗುವುದು. ಚಟುವಟಿಕೆಯಿಂದ ಇದ್ದರೂ ನಿಮ್ಮ ಕೆಲಸ ಮಾತ್ರ ಆಗದೇ ಇರುವುದು. ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ಈ ವಾರ ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ. ನಿಮಗೆ ಈ ವಾರ ನಿಯಮಿತ ಚೌಕಟ್ಟನ್ನು ಬಿಟ್ಟು ಆಚೆ ಬರಲು ಆಗದು. ನಿಮ್ಮ ಮಾತಿನಿಂದ ಕುಲಕ್ಕೆ ಅವಮಾನವಾಗಬಹುದು. ಜವಾಬ್ದಾರಿಯನ್ನು ಪಡೆದ ಬೆನ್ನಲ್ಲೇ ಹಿತಶತ್ರುಗಳನ್ನೂ ಹೆಚ್ಚಿಸಿಕೊಳ್ಳುವಿರಿ. ಚಂಚಲವಾದ ಮನಸ್ಸು ನಿಮ್ಮ ಸಂಗಾತಿಗೆ ಇಷ್ಟವಾಗದು. ಧ್ಯಾನ ಯೋಗಗಳ ರೂಢಿಯನ್ನು ಬೆಳೆಸಿಕೊಳ್ಳುವಿರಿ.

ಸಿಂಹ ರಾಶಿ:

ಐದನೇ ರಾಶಿಯವರಿಗೆ ಈ ವಾರ ಕಛೇರಿಯಲ್ಲಿ ಎಲ್ಲರ ಜೊತೆ ಉತ್ತಮ ಸಮಯ ಕಳೆಯುವ ಅವಕಾಶವು ಸಿಗುವುದು. ತಪ್ಪನ್ನು ಮಾಡಿ ಅನಂತರ ಅದನ್ನು ಸರಿ ಮಾಡಿಕೊಳ್ಳಲು ವಿವಿಧ ಪ್ರಯತ್ನವನ್ನೂ ಮಾಡುವಿರಿ. ಈ ವಾರ ಪೂರ್ತಿ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದ್ದು ನೀವೂ ಬಹಳ ದಿನಗಳ ಅನಂತರ ಇಂತಹ ಸಂತೋಷವನ್ನು ಪಡೆಯುವಿರಿ. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡುವ ಮನವಿಯನ್ನು ಸಲ್ಲಿಸುವಿರಿ. ಯಾವುದೇ ಹೊಸ ಯೋಜನೆಯ ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗುವುದು. ನಿಮಗೆ ಬೇಕಾದ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳುವಿರಿ. ಸಾಮಾಜಿಕ ತಾಣದಲ್ಲಿ ಹೆಚ್ಚು ಸಮಯ ಕಳೆದು ಮಾಡಬೇಕಾದ ಕಾರ್ಯಕ್ಕೆ ಪೂರ್ಣವಿರಾಮ ಕೊಡುವಿರಿ. ಸ್ನೇಹಿತರ ತಮಾಷೆಯು ನಿಮಗೆ ಇಷ್ಟವಾಗದು. ದ್ವಿಚಕ್ರ ವಾಹನವನ್ನು ಓಡಿಸುವಾಗ ಎಚ್ಚರ ಇರಲಿ. ಮೃತ್ಯುಂಜಯನ ಸ್ಮರಣೆ ಅಗಾಗ ಬರಲಿ.

ಕನ್ಯಾ ರಾಶಿ:

ಈ ವಾರ ಒತ್ತಡದ ನಡುವೆಯೂ ತಾಳ್ಮೆಯನ್ನು ನೀವು ಉಳಿಸಿಕೊಳ್ಳುವ ಪ್ರಯತ್ನ ಸಾಗಲಿದೆ. ಈ ವಾರ ಕಾರಣಾಂತರಗಳಿಂದ ನಿಲ್ಲಿಸಿದ್ದ ಕಾರ್ಯವನ್ನು ಅನ್ಯರ ಸಹಕಾರದಿಂದ ಪುನಃ ಪ್ರಾರಂಭಿಸುವಿರಿ. ಹಳೆಯ ವಾಹನವನ್ನು ಪಡೆದುಕೊಳ್ಳುವಿರಿ. ಹಿರಿಯರಿಗೆ ಎದುರು ಮಾತನಾಡಿ ಅನಂತರ ಪಶ್ಚಾತ್ತಾಪಪಡಬೇಕಾದೀತು. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳುವುದು ಸೂಕ್ತ. ಕೆಲವು ಶುಭ ಸೂಚನೆಗಳು ನಿಮಗೆ ಗೊತ್ತಾಗಲಿದ್ದು ನಿರೀಕ್ಷೆಯೂ ಎಂದಿಗಿಂತ ಹೆಚ್ಚಿರಲಿದೆ. ಮಾತುಗಾರರು ತಾನಾಗಿಯೇ ವಾಚಾಳಿತನವನ್ನು ಕಡಿಮೆಮಾಡುವರು. ಈ ವಾರ ನಿಮಗೆ ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು. ನಿಮಗೆ ಗೊತ್ತೇ ಇರದ ಕೆಲಸವನ್ನೂ ನೀವು ಈ ವಾರ ಮಾಡಬೇಕಾದೀತು. ಎಲ್ಲದಕ್ಕೂ ವಿಧಿಯನ್ನು ಹೀಗಳೆಯುವುದಕ್ಕಿಂತ ನಿಮ್ಮ ಪ್ರಯತ್ನವನ್ನು ಮುಂದುವರೆಸಿರಿ. ತಪೋರಾಮನನ್ನು ಮನಸ್ಸಿನಲ್ಲಿ ಚಿಂತಿಸಿ.

ತುಲಾ ರಾಶಿ:

ಏಳನೇ ರಾಶಿಯವರಿಗೆ ಈ ವಾರ ಉನ್ನತ ಅಧಿಕಾರಿಗಳ ಜೊತೆ ಹೆಚ್ಚು ವ್ಯವಹಾರವನ್ನು ಮಾಡಬೇಕಾಗಿರುವ ಕಾರಣ ಅವರ ಜೊತೆ ಓಡಾಡುವಿರಿ. ಹಣಕಾಸಿನ ವೆಚ್ಚಗಳ ಬಗ್ಗೆ ವಿಶೇಷವಾಗಿ ಕಾಳಜಿ ಬೇಕು. ಈ ವಾರ ಜಾಹೀರಾತು ವಿಭಾಗದಲ್ಲಿ ಇರುವವರಿಗೆ ಅವಕಾಶವು ಹೆಚ್ಚು ಸಿಗಬಹುದು. ವಾಗ್ಮಿಗಳೂ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವರು. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಈ ವಾರ ನೀವು ಮಾಡುವ ಉಪಕಾರಕ್ಕೆ ಪ್ರತ್ಯುಪಕಾರವು ಸಿಗದೇ ಇರಬಹುದು. ನಿಮ್ಮ ಕರ್ತವ್ಯವನ್ನು ಮಾಡಲು ಹಿರಿಯರಿಂದ ಒತ್ತಾಯ ಬರಲಿದೆ. ಲೆಕ್ಕಪತ್ರದ ವಿಚಾರದಲ್ಲಿ ನಿಷ್ಠುರವಾದ ಮನೋಭಾವವನ್ನು ಇಟ್ಟುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ಹಿಡಿಸದೇ ಇರುವವರಿಂದ ದೂರ ಉಳಿಯುವಿರಿ. ಪ್ರಯತ್ನಪೂರ್ವಕ ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ವೃಶ್ಚಿಕ ರಾಶಿ:

ಡಸೆಂಬರ್ ನ‌ ಈ ವಾರ ನೀವು ಏಕಾಗ್ರತೆಯಿಂದ ಕೆಲಸ ಮಾಡಿದರೆ ಅನಾಯಾಸವಾಗಿ ಗುರಿಯನ್ನು ತಲುಪಬಹುದು. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಮಕ್ಕಳ ಜೊತೆ ಚಿಂತೆಯನ್ನೆಲ್ಲ ಬಿಟ್ಟು ಸಂತೋಷದಿಂದ ಕಾಲವನ್ನು ಕಳೆಯುವಿರಿ. ಔದಾಸೀನ್ಯದಿಂದ ವ್ಯಾಪಾರದಲ್ಲಿ ನಷ್ಟವಾಗಲಿದೆ. ಪ್ರಯಾಣದಿಂದ ವಾಡವಿಡೀ ಹಿಂಸೆಯನ್ನು ಅನುಭವಿಸಬೇಕಾದೀತು. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವುದು. ನಿರೀಕ್ಷಿತ ಫಲವು ಲಭಿಸದು. ಈ ವಾರ ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ. ಸಹೋದ್ಯೋಗಿಗಳ ಮೇಲೆ ನಿಮಗೆ ಅಸೂಯೆ. ಈ ವಾರದ ನಿಮ್ಮ ಇಚ್ಛಾಶಕ್ತಿಯು ವಹಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಕಾರಿ. ಮಹಾಕಾಳಿಯನ್ನು ಉಪಾಸನೆ ಮಾಡಿ.

ಧನು ರಾಶಿ:

ಗುರುವಿನ ಆಧಿಪತ್ಯದ ಈ ರಾಶಿಗೆ ಗುರು ದೃಷ್ಟಿಯೂ ಇದ್ದು ಈ ವಾರ ಉದ್ಯೋಗವನ್ನು ಅರಸುತ್ತಿರುವ ನೀವು ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉತ್ತಮ ಕೆಲಸವನ್ನು ನಷ್ಟ ಮಾಡಿಕೊಂಡೆ ಎಂಬ ಭಾವ ಬರಬಹುದು. ಯಂತ್ರದ ವ್ಯಾಪಾರದಿಂದ ನಿಮಗೆ ಲಾಭವು ಅಧಿಕವಾಗುವುದು. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು. ಈ ವಾರ ಉದ್ಯಮದ ಕಾರಣ ಇರುವ ಸ್ಥಳದಿಂದ ದೂರ ಹೋಗಬೇಕಾಗುವದು. ಸುಳ್ಳನ್ನಾಡಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದನೆ ಸಿಗಬಹುದು. ಈ ವಾರ ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ಒಂದು ಕಾರ್ಯಕ್ಕೆ ವಿಘ್ನಗಳು ಬರುತ್ತಿದ್ದು ದೈವಜ್ಞರನ್ನು ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ. ನಿಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲ ಮಾಹಿತಿಯು ಗೊತ್ತಾಗುವುದು. ಗುರುಚರಿತ್ರೆಯ ಪಠಣ ಮಾಡಿ.

ಮಕರ ರಾಶಿ:

ಹತ್ತನೇ ರಾಶಿಯವರು ಈ ವಾರ ಹಠಮಾರಿತನದಿಂದ ಮನೆಯವರ ಹೃದಯವನ್ನೂ ನೋಯಿಸುವಿರಿ. ಮೇಲಧಿಕಾರಿಗಳಿಗೆ ನೇರ ನುಡಿಯ ಪ್ರತಿಕ್ರಿಯೆಯನ್ನು ನೀಡುವುದು ಬೇಡ. ಈ ವಾರ ದೈನಂದಿನ ಬಳಕೆಯ ವಸ್ತುಗಳ ವ್ಯಾಪಾರ ಮಾಡುವವರ ಮಾರಾಟ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ. ವಿವಾದದಲ್ಲಿರುವ ಆಸ್ತಿಯಿಂದ ಮಾರಾಟವು ನಿಧಾನವಾಗುವುದು. ಸರ್ಕಾರದ ಕಾರ್ಯವು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಈ ವಾರ ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬರಬಹುದು. ಮನೆಯ ಸಮೀಪದಲ್ಲಿಯೇ ನಿಮ್ಮ ಉದ್ಯೋಗವು ಸಿಗಲಿದೆ. ನಿಮ್ಮ ವಾಹನಕ್ಕಾಗಿ ಬಹಳ ಖರ್ಚನ್ನು ಮಾಡುವಿರಿ. ಈ ವಾರ ಸಿಕ್ಕ ಅವಕಾಶದಲ್ಲಿ ಪ್ರೀತಿಯಿರಲಿ. ಪ್ರೀತಿಯ ವಿಷಯದಲ್ಲಿ ದುಃಖ ಬರಲಿದೆ. ದೋಷ ನಿವಾರಣೆಯ ಸಂಕಲ್ಪ ಮಾಡಿ ಗೋವಿಗೆ ದೀಪ ಬೆಳಗಿ.

ಕುಂಭ ರಾಶಿ:

ಡಿಸೆಂಬರ್ ತಿಂಗಳ ನಾಲ್ಕನೇ ವಾರ ನಿಮ್ಮ ಕಾರ್ಯದ ಅನುಭವವು ಪ್ರಯೋಜನಕ್ಕೆ ಬರಲಿದ್ದು, ಎಲ್ಲರೂ ನಿಮ್ಮ ಸಲಹೆಯನ್ನು ಪಡೆಯುವರು. ಕಲಾವಿದರು ಅವಕಾಶದಿಂದ ವಂಚಿತರಾಗಬೇಕಾಗುವುದು. ನಿಮಗೆ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ ಸಿಗಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಓಡಾಟವು ಅಧಿಕವಾಗಿ ಇರುವುದು. ಈ ವಾರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡಬೇಕಾಗುವುದು. ಮನೆಯ ಕೆಲಸಗಳೇ ಬಹಳ ಆಗಲಿದ್ದು ಇನ್ನೊಂದು ಕಾರ್ಯಕ್ಕೆ ತಾಳ್ಮೆ ಇರಲಾರದು. ನಿಮ್ಮ ಉತ್ಸಾಹವನ್ನು ಕಸಿಯಲು ಯಾರಿಂದಲೂ ಸಾಧ್ಯವಾಗದು. ಆದಾಯದ ವಿಚಾರದಲ್ಲಿ ಹಿನ್ನಡೆಯಾಗಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು. ಶನೈಶ್ಚರನಿಗೆ ನಿಮ್ಮಿಂದ ಸೇವೆ ಸಲ್ಲಲಿ.

ಮೀನ ರಾಶಿ:

ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಸಂಪೂರ್ಣ ಜಾಗರೂಕರಾದಾಗ ಮಾತ್ರ ಅವಕಾಶಗಳು ಸಿಗುತ್ತವೆ. ಕಛೇರಿ ಕೆಲಸವು ನಿಮ್ಮ ಸ್ವಂತ ಕೆಲಸಕ್ಕೆ ತೊಂದರೆಯನ್ನು ಕೊಡಬಹುದು. ಈ ವಾರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡುವರು. ಈ ವಾರ ಒಂದಿಷ್ಟು ಆಯಾಸ ಬಿಟ್ಟರೆ, ಮತ್ತೇನೂ ಆಗದು. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು. ವಾರಾಂತ್ಯದಲ್ಲಿ ಸಂಗಾತಿಯ ಜೊತೆ ಭಿನ್ನಮತವನ್ನು ತಂದುಕೊಳ್ಳುವಿರಿ. ಕುಟುಂಬದ ಹಿರಿಯರ ಅನಾರೋಗ್ಯದ ಕಾರಣ ನಿಮ್ಮ ಸ್ವಂತ ಕಾರ್ಯವನ್ನು ಮಾಡಿಕೊಳ್ಳಲಾಗದು. ವೃದ್ಧರ ಸೇವೆಯಲ್ಲಿ ತೊಡಗಿಕೊಳ್ಳುವಿರಿ. ಉದ್ಯೋಗವನ್ನು ನಂಬಿ ಜೀವನ ಸಾಗಿಸುವವರಿಗೆ ಬೇಸರ ಎದುರಾಗಬಹುದು. ಗುರುದರ್ಶನವನ್ನು ಮಾಡಿ ತೃಪ್ತಿಯ ಭಾವ ಬರಲಿದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

Vastu for Electronics: ಮನೆಯಲ್ಲಿ ಪದೇ ಪದೇ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗುತ್ತಿದೆಯೇ? ವಾಸ್ತು ಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Vastu for Electronics: Solve Malfunctions and Rahu Dosha in Your Home

ಮನೆಯಲ್ಲಿನ ಶಕ್ತಿಯ ಅಸಮತೋಲನವು ಮನೆಯಲ್ಲಿರುವ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಎಲೆಕ್ಟ್ರಾನಿಕ್ ಸಾಧನಗಳು ಅಗ್ನಿ ಅಂಶಕ್ಕೆ ಸಂಬಂಧಿಸಿವೆ, ಆದ್ದರಿಂದ ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ಮನೆಯ ಶಕ್ತಿಯ ಸಮತೋಲನವು ತೊಂದರೆಗೊಳಗಾಗುತ್ತದೆ. ಮನೆಯಲ್ಲಿ ಅಸ್ತವ್ಯಸ್ತವಾಗಿರುವ ರೀತಿಯಲ್ಲಿ ಇರಿಸಲಾಗಿರುವ ಎಲೆಕ್ಟ್ರಾನಿಕ್ ವಸ್ತುಗಳು, ಫ್ರಿಡ್ಜ್, ಟಿವಿ, ಆರ್‌ಒ, ಮಿಕ್ಸರ್, ದೀಪಗಳು, ಫ್ಯಾನ್‌ಗಳು ದೋಷಗಳಿಗೆ ಕಾರಣ ಮತ್ತು ರಾಹು ದುರ್ಬಲ ಸ್ಥಾನದಲ್ಲಿರುವುದೇ ಕಾರಣ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ, ಅಗ್ನಿ ಅಂಶವು ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ಸಂಬಂಧ ಹೊಂದಿದೆ. ಮನೆಯಲ್ಲಿ ಅಗ್ನಿ ಅಂಶವು ಅಸಮತೋಲಿತವಾಗಿದ್ದರೆ, ಶಾರ್ಟ್ ಸರ್ಕ್ಯೂಟ್, ಅಧಿಕ ಬಿಸಿಯಾಗುವಿಕೆ ಮತ್ತು ಸಾಧನಗಳು ಅಕಾಲಿಕವಾಗಿ ವಿಫಲಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಛಾವಣಿಯ ಮೇಲೆ ಮುರಿದ ಅಥವಾ ಹಾನಿಗೊಳಗಾದ ವಸ್ತುಗಳಂತಹ ಕಸವನ್ನು ಇಡುವುದರಿಂದ ಮನೆಯ ಸದಸ್ಯರ ಜಾತಕದಲ್ಲಿ ರಾಹು ಗ್ರಹವು ದುರ್ಬಲಗೊಳ್ಳುತ್ತದೆ. ಇದಲ್ಲದೆ, ಛಾವಣಿಯ ಮೇಲೆ ಸ್ವಚ್ಛವಾಗಿರಿಸಿ. ಇದು ರಾಹು ಗ್ರಹದ ದುರ್ಬಲತೆಗೆ ಕಾರಣವಾಗುತ್ತದೆ. ರಾಹುವನ್ನು ಸಮಾಧಾನಪಡಿಸಲು, ಶನಿವಾರ ಯಾವುದಾದರೂ ದೇವಸ್ಥಾನಕ್ಕೆ ವಿದ್ಯುತ್ ಉಪಕರಣವನ್ನು ದಾನ ಮಾಡಿ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ವಾರಕ್ಕೊಮ್ಮೆ ಉಪ್ಪು ನೀರಿನಿಂದ ಮನೆಯನ್ನು ಒರೆಸಿ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಫ್ರಿಡ್ಜ್, ಮೈಕ್ರೋವೇವ್, ಮಿಕ್ಸರ್, ಗೀಸರ್, ಟಿವಿ ಮುಂತಾದ ಭಾರವಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಈಶಾನ್ಯ ದಿಕ್ಕಿನಲ್ಲಿ ಹೆಚ್ಚಿನ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಡುವುದರಿಂದ ನಿಮಗೆ ಸಮಸ್ಯೆಗಳು ಉಂಟಾಗಬಹುದು.

ಪ್ರತಿದಿನ ಶಿವನಿಗೆ ನೀರಿನಿಂದ ಅಭಿಷೇಕ ಮಾಡಿ. ಶಿವನನ್ನು ಪೂಜಿಸುವುದರಿಂದ ರಾಹು ಮತ್ತು ಕೇತು ಸೇರಿದಂತೆ ಎಲ್ಲಾ ಗ್ರಹಗಳ ದುಷ್ಟ ಪರಿಣಾಮಗಳು ದೂರವಾಗುತ್ತವೆ. ಎಲೆಕ್ಟ್ರಾನಿಕ್ ಸಾಧನಗಳಲ್ಲಿನ ಅಸಮರ್ಪಕ ಕಾರ್ಯಗಳ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:39 am, Sun, 21 December 25

Source link

WTC ಅಂಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗೆ ಟೀಮ್ ಇಂಡಿಯಾ – Kannada News | WTC Points Table 2025: Team India slip to 6th position in WTC Standings

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿದೆ. ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲೂ ಆಸೀಸ್ ಪಡೆ ಜಯಭೇರಿ ಬಾರಿಸಿದ್ದು, ಈ ಮೂಲಕ WTC ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಆದರೆ ಮತ್ತೊಂದೆಡೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಹೀನಾಯ ಸೋಲನುಭವಿಸಿದ್ದ ಟೀಮ್ ಇಂಡಿಯಾ ಇದೀಗ ಅಂಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಈ ಬಾರಿ ಭಾರತ ತಂಡವು ಪಾಕಿಸ್ತಾನಕ್ಕಿಂತಲೂ ಕೆಳಗಿನ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅದರಂತೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ನೂತನ ಅಂಕ ಪಟ್ಟಿ ಈ ಕೆಳಗಿನಂತಿದೆ…

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ನೂತನ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಆಸೀಸ್ ಪಡೆ ಈವರೆಗೆ 6 ಪಂದ್ಯಗಳನ್ನು ಆಡಿದ್ದರು, ಆರರಲ್ಲೂ ಜಯ ಸಾಧಿಸಿದೆ. ಈ ಮೂಲಕ 100 ಶೇಕಡಾವಾರಿನೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದೆ.

ಟೀಮ್ ಇಂಡಿಯಾವನ್ನು 2-0 ಅಂತರದಿಂದ ಸೋಲಿಸಿರುವ  ಸೌತ್ ಆಫ್ರಿಕಾ ತಂಡ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಆಫ್ರಿಕಾ ಪಡೆ ಈವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ನಾಲ್ಕು ಮ್ಯಾಚ್​ಗಳಲ್ಲಿ 3 ಜಯ ಸಾಧಿಸಿದೆ. ಈ ಮೂಲಕ 75 ಶೇಕಡಾವಾರಿನೊಂದಿಗೆ ಸೌತ್ ಆಫ್ರಿಕಾ ತಂಡ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ.

ಇನ್ನು ತೃತೀಯ ಸ್ಥಾನದಲ್ಲಿ ನ್ಯೂಝಿಲೆಂಡ್ ತಂಡವಿದ್ದು, ಕಿವೀಸ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯಲ್ಲಿ ಆಡಿದ 2 ಮ್ಯಾಚ್​ಗಳಲ್ಲಿ ಒಂದು ಗೆಲುವು ಹಾಗೂ ಒಂದು ಡ್ರಾನೊಂದಿಗೆ 66.67 ಶೇಕಡಾವಾರು ಹೊಂದಿದೆ. ಈ ಮೂಲಕ WTC ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಹಾಗೆಯೇ ಶ್ರೀಲಂಕಾ ತಂಡ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಲಂಕಾ ಪಡೆ ಕೂಡ ಈವರೆಗೆ 2 ಪಂದ್ಯಗಳನ್ನು ಮಾತ್ರ ಆಡಿದ್ದು, ಈ ಮ್ಯಾಚ್​ಗಳಲ್ಲಿ ಒಂದು ಜಯ ಹಾಗೂ ಒಂದು ಡ್ರಾನೊಂದಿಗೆ 66.67 ಶೇಕಡಾವಾರು ಅಂಕಗಳನ್ನು ಪಡೆದುಕೊಂಡಿದೆ.

ಐದನೇ ಸ್ಥಾನದಲ್ಲಿ ಈ ಬಾರಿ ಪಾಕಿಸ್ತಾನ್ ತಂಡ ಕಾಣಿಸಿಕೊಂಡಿದೆ. ಪಾಕ್ ಪಡೆ ಆಡಿರುವ 2 ಮ್ಯಾಚ್​ಗಳಲ್ಲಿ ಒಂದು ಜಯ ಹಾಗೂ ಒಂದು ಸೋಲಿನೊಂದಿಗೆ 50 ಶೇಕಡಾವಾರು ಪಡೆದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಇನ್ನು ಟೀಮ್ ಇಂಡಿಯಾ ಈವರೆಗೆ 9 ಪಂದ್ಯಗಳಲ್ಲಿ 4 ಗೆಲುವು ಮತ್ತು ಒಂದು ಡ್ರಾ ಸಾಧಿಸಿದೆ. ಇನ್ನುಳಿದ 4 ಮ್ಯಾಚ್​ಗಳಲ್ಲೂ ಹೀನಾಯ ಸೋಲನುಭವಿಸಿದೆ. ಈ ಸೋಲು-ಗೆಲುವುಗಳೊಂದಿಗೆ  48.150 ಶೇಕಡಾವಾರು ಅಂಕ ಪಡೆದಿರುವ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

ಆ್ಯಶಸ್ ಸರಣಿ ಸೋತಿರುವ ಇಂಗ್ಲೆಂಡ್ ತಂಡವು 27.080 ಶೇಕಡಾವಾರು ಅಂಕಗಳೊಂದಿಗೆ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಬಾಂಗ್ಲಾದೇಶ್ ತಂಡವು 16.67 ಶೇಕಡಾವಾರು ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದರೆ, 7 ಪಂದ್ಯಗಳನ್ನಾಡಿದ 6 ಸೋಲನುಭವಿಸಿರುವ ವೆಸ್ಟ್ ಇಂಡೀಸ್ ತಂಡ 4.760 ಶೇಕಡಾವಾರು ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

Published On – 11:54 am, Sun, 21 December 25

Source link

Viral: ಕೆನಡಾದಿಂದ ಭಾರತಕ್ಕೆ ಮರಳಿದ ಬಳಿಕ ಜೀವನವೇ ಬದಲಾಯ್ತು ಎಂದ ಅನಿವಾಸಿ ಭಾರತೀಯ ಮಹಿಳೆ – Kannada News | NRI woman says Indian lifestyle is a lesson in life

ಜೀವನದಲ್ಲಿ ಬದಲಾವಣೆ ಸಹಜ. ಆದರೆ ಎಲ್ಲವನ್ನೂ ಸಲೀಸಾಗಿ ಸ್ವೀಕರಿಸುವ ಮನಸ್ಸು ಇರಬೇಕು. ಜೀವನದ ಅನುಭವಗಳು ಬದುಕಿಗೆ ಪಾಠವಾಗುತ್ತದೆ. ಕೆನಡಾದಿಂದ (Canada) ಭಾರತಕ್ಕೆ ಮರಳಿದ ಅನಿವಾಸಿ ಭಾರತೀಯ ಮಹಿಳೆ (NRI Women) ತಮ್ಮ ಜೀವನ ಅನುಭವವನ್ನು ತೆರೆದಿಟ್ಟಿದ್ದಾರೆ. ಪ್ರಸ್ತುತ ಗುಜರಾತ್‌ನ ಸೂರತ್‌ನಲ್ಲಿ ವಾಸಿಸುತ್ತಿದ್ದು  ತನ್ನ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಯಿತು ಎಂದು ಬಹಿರಂಗ ಪಡಿಸಿದ್ದಾರೆ. ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದೆ.

reellifeofzeel ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಅನಿವಾಸಿ ಭಾರತೀಯ ಮಹಿಳೆಯೊಬ್ಬರು ದಿನನಿತ್ಯ ಜೀವನದ ಫೋಟೋಗಳನ್ನು ಹಂಚಿಕೊಂಡಿದ್ದು ತಮ್ಮ ಅನುಭವವನ್ನು ತೆರೆದಿಟ್ಟಿದ್ದಾರೆ. ಈ ಪೋಸ್ಟ್‌ಗೆ ಭಾರತಕ್ಕೆ ಹಿಂತಿರುಗಿದ ಬಳಿಕ ಬದುಕು ಸದ್ದಿಲ್ಲದೆ ಬದಲಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದು ನನ್ನ ಬದುಕಿನ ರೀತಿಯನ್ನೇ ನಿಧಾನವಾಗಿ ಬದಲಿಸಿಬಿಡುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಇಲ್ಲಿ ದಿನಗಳು ನನ್ನನ್ನು ಗಾಳಿಯಂತೆ ವೇಗವಾಗಿ ಓಡಿಸುವುದಿಲ್ಲ. ಅವು ಶಬ್ದ, ಮಾತುಕತೆಗಳುಹಾಗೂ ಚಹಾ ವಿರಾಮಗಳೊಂದಿಗೆ, ವಿಶ್ರಾಂತಿ ಪಡೆಯುತ್ತಾ ಮನಸ್ಸನ್ನು ಉಲ್ಲಾಸದಾಯಕವಾಗಿರುತ್ತದೆ. ಇಲ್ಲಿ ಜೀವನವನ್ನು ಅನುಭವಿಸಬಹುದು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಬದಲಾವಣೆ ಕೇವಲ ಸ್ಥಳಾಂತರದ್ದಲ್ಲ; ಮಾನಸಿಕ ಬದಲಾವಣೆ. ಭಾರತದಲ್ಲಿ ಜೀವನವು ಅಷ್ಟೇನು ಉತ್ತಮವಾಗಿಲ್ಲ. ಆದರೆ ಇಲ್ಲಿ ಜೀವಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ. ದಿನನಿತ್ಯದ ಜೀವನವು ಅನೇಕ ಅಡಚಣೆಗಳು, ಮಾತುಕತೆಗಳು ಹಾಗೂ ಮಾನವೀಯ ಸಂಪರ್ಕಗಳಿಂದ ಕೂಡಿರುತ್ತದೆ. ಹೀಗಾಗಿ ನಂಬಿಕೆಯೇ ಹಿಂದಿನ ಸವಾಲು ಎದುರಾಗುತ್ತದೆ. ಈ ಸಣ್ಣ ಬದಲಾವಣೆಯು ಬದುಕಿಗೆ ಬೇಕಾದ ಮೌಲ್ಯ ಹಾಗೂ ಜೀವನವನ್ನು ಸ್ವೀಕರಿಸುವುದನ್ನು ಕಲಿಸುತ್ತದೆ. ಶಿಸ್ತು, ಬದ್ಧತೆಯೂ ಜೀವನವನ್ನು ಇನ್ನಷ್ಟು ಪೂರ್ಣವಾಗಿಸುತ್ತದೆ. ಪರಿಪೂರ್ಣ ಜೀವನಶೈಲಿಯನ್ನು ರೂಪಿಸಲುಕಾರಣವಾದದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಭಾರತದಲ್ಲಿ ಬೆಳಗಾಗುವುದನ್ನು ಅಲಾರಾಂನ ಧ್ವನಿಯಿಂದ ತಿಳಿಯುವುದಲ್ಲ. ಸುತ್ತಮುತ್ತಲಿನ ಬದುಕಿನ ಸಹಜ ಶಬ್ದಗಳಿಂದ ತಿಳಿಯುತ್ತದೆ. ಊಟ ಮಾಡುವಾಗ ಯಾವುದೇ ಆತುರವಿಲ್ಲದೆ ನಿಧಾನವಾಗಿ ಕುಳಿತು ಮಾಡುತ್ತೇನೆ. ಆಹಾರವನ್ನು ಜಾಗರೂಕತೆ ಹಾಗೂ ಅಚ್ಚುಕಟ್ಟಾಗಿ ತಯಾರಿಸುವುದು ಅಭ್ಯಾಸವಾಗಿಬಿಟ್ಟಿದೆ. ವಿಷ್ಯಗಳನ್ನು ಗೌಪ್ಯವಾಗಿ ಇಟ್ಟು ಕೊಳ್ಳುವುದು ಕಡಿಮೆಯಾದ್ರೂ, ಇತರರೊಂದಿಗೆ ಇರುವ ಸಂಪರ್ಕದ ಭಾವನೆ ಇನ್ನಷ್ಟು ಗಟ್ಟಿಯಾಗಿದೆ. ಎಲ್ಲದಕ್ಕೂ ಹೊಂದಿಕೊಂಡು ಹೋಗುವುದು ಅಭ್ಯಾಸವಾಗಿದೆ ಎಂದು ಕಲಿತ ಬದುಕಿನ ಪಾಠಗಳನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ರೆಸ್ಟೋರೆಂಟ್ ಬಿಲ್ ನೋಡಿ ಶಾಕ್ ಆದ ಅನಿವಾಸಿ ಭಾರತೀಯ ಬಾಲಕ, ಕಾರಣ ಇದೇ ನೋಡಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜೀವನ ಅನುಭವ ಪಡೆದುಕೊಳ್ಳುತ್ತಾ ಎಲ್ಲದ್ದಕ್ಕೂ ಹೊಂದಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮಗೆ ಒಳ್ಳೆಯದಾಗಲಿ, ನೀವು ನಮಗೆ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಮ್ಮ ದೇಶದಲ್ಲಿ ಜೀವನ ನಡೆಸೋ ಖುಷಿಯೇ ಬೇರೆ, ಒಳ್ಳೆಯದಾಗಲಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಗೆದಷ್ಟೂ ಬಯಲಾಗ್ತಿದೆ ಬೇಲೂರು ಸರ್ಕಾರಿ ಆಸ್ಪತ್ರೆ ಕರ್ಮಕಾಂಡ; ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಭ್ರೂಣ ಲಿಂಗ ಪತ್ತೆ ಮಾಡಿದ್ದರಾ ಸಿಬ್ಬಂದಿ? – Kannada News | Hassan Hospital Scam: Scanning Machine Stolen in Beluru, Sex Determination Suspected

ಬಗೆದಷ್ಟೂ ಬಯಲಾಗ್ತಿದೆ ಬೇಲೂರು ಸರ್ಕಾರಿ ಆಸ್ಪತ್ರೆ ಕರ್ಮಕಾಂಡ

ಹಾಸನ, ಡಿಸೆಂಬರ್ 21:  ಹಾಸನದ (Hassan) ಬೇಲೂರಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಗಂಭೀರ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿದ್ದು, ಆರೋಗ್ಯ ಇಲಾಖೆಗೆ ಭಾರೀ ಮುಜುಗರ ಉಂಟಾಗಿದೆ. ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಸ್ಕ್ಯಾನಿಂಗ್ ಯಂತ್ರ, ಆಕ್ಸಿಜನ್ ಸಿಲಿಂಡರ್‌ಗಳು, ಐಸಿಯು ಮಾನಿಟರ್‌ಗಳು ಸೇರಿದಂತೆ ಹಲವು ಮಹತ್ವದ ವೈದ್ಯಕೀಯ ಉಪಕರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಕದ್ದೊಯ್ದ ಯಂತ್ರದಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿತ್ತಾ ಎಂಬ ಶಂಕೆ ವ್ಯಕ್ತವಾಗಿದೆ.

ಯಂತ್ರ ಕಳವಿನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ವರ್ಷಗಳ ಹಿಂದೆ ಆಸ್ಪತ್ರೆಗೆ ಒದಗಿಸಲಾಗಿದ್ದ ಸ್ಕ್ಯಾನಿಂಗ್ ಯಂತ್ರವು ತಜ್ಞರ ಕೊರತೆಯಿಂದ ಬಳಕೆಯಿಲ್ಲದೇ ಇದ್ದು, ಇತ್ತೀಚೆಗೆ ಹೊರಗುತ್ತಿಗೆ ಆಧಾರದಲ್ಲಿ ರೇಡಿಯಾಲಜಿಸ್ಟ್ ನೇಮಕವಾದ ನಂತರ ಯಂತ್ರ ಪರಿಶೀಲನೆಗೆ ಮುಂದಾದಾಗ ಯಂತ್ರವೇ ಆಸ್ಪತ್ರೆಯಲ್ಲಿ ಇಲ್ಲದಿರುವುದು ತಿಳಿದುಬಂದಿದೆ. ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಭ್ರೂಣ ಲಿಂಗ ಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಡಿ ಗ್ರೂಪ್ ನೌಕರ ಪ್ರದೀಪ್ ಹಾಗೂ ಖಾಸಗಿ ಆಂಬುಲೆನ್ಸ್ ಚಾಲಕ ಸೂಫಿಯಾನ್ ಸೇರಿ ಯಂತ್ರವನ್ನು ತೆಗೆದುಕೊಂಡಿರುವ ದೃಶ್ಯಗಳು ಕಂಡುಬಂದಿದೆ.ಇಬ್ಬರ ವಿರುದ್ದ ಕೇಸ್ ದಾಖಲಿಸಲಾಗಿದೆ. ವಿಚಾರಣೆಯಲ್ಲಿ ಯಂತ್ರವನ್ನು ಕದ್ದು ಮನೆಯಲ್ಲಿಟ್ಟಿದ್ದಾಗಿ ಸಿಬ್ಬಂದಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಇನ್ನೊಂದೆಡೆ ಭ್ರೂಣ ಲಿಂಗ ಪತ್ತೆಗೆ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಪಿಸಿ ಪಿಎನ್ ಡಿಟಿ ಕಾಯಿದೆಯ ಅಡಿಯಲ್ಲಿ ರಚನೆಯಾಗಿರುವ ತಜ್ಞರ ಟೀಂ ಕೂಡ ಯಂತ್ರವನ್ನ ಪರಿಶೀಲನೆಗೆ ಒಳಪಡಿಸಿದೆ. ಈ ಬಗ್ಗೆ ಪ್ರತಿಕ್ರಿಸಿದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಅನಿಲ್, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ

ಪ್ರಕರಣದ ಗಂಭೀರತೆ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್ ಸೂಚನೆಯ ಮೇರೆಗೆ ಪೊಲೀಸ್ ದೂರು ದಾಖಲಾಗಿದ್ದು, ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ಅಧಿಕಾರಿಗಳ ಶಾಮೀಲಾತಿ ಶಂಕಿಸಿ ವಿವಿಧ ಸಂಘಟನೆಗಳು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಸಮಗ್ರ ತನಿಖೆಗೆ ಆಗ್ರಹಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 11:33 am, Sun, 21 December 25

Source link

Exit mobile version