World Voice Day: ಏಪ್ರಿಲ್ 16 ವಿಶ್ವ ಧ್ವನಿ ದಿನ; ಈ ದಿನದ ಇತಿಹಾಸ ಮತ್ತು ಮಹತ್ವ ಇಲ್ಲಿ ತಿಳಿಯಿರಿ – Kannada News | World Voice Day: Ayurvedic Secrets for a Healthy Voice and Vocal Care Tips

ಪ್ರತಿ ವರ್ಷ ಏಪ್ರಿಲ್ 16ರಂದು ವಿಶ್ವ ಧ್ವನಿ ದಿನವನ್ನು ಆಚರಿಸಲಾಗುತ್ತದೆ. ಮಾತು ಮನದ ಕನ್ನಡಿಯಾದರೆ, ಧ್ವನಿ ಜೀವದ ಪ್ರತಿಬಿಂಬವಾಗಿದೆ. ನಾವು ಮಾತನಾಡುವ ಪ್ರತಿಯೊಂದು ಪದ, ಹಾಡುವ ಪ್ರತಿಯೊಂದು ರಾಗ ಮತ್ತು ನಗುವ ಪ್ರತಿಯೊಂದು ಕ್ಷಣದಲ್ಲೂ ನಮ್ಮ ಧ್ವನಿ ನಮ್ಮ ಅಂತರಂಗದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಮಾನವನಿಗೆ ಪ್ರಕೃತಿ ನೀಡಿರುವ ಅತ್ಯಮೂಲ್ಯ ಕೊಡುಗೆಗಳಲ್ಲಿ ಧ್ವನಿಯೂ ಒಂದು. ಯಾವುದೇ ಯಂತ್ರಕ್ಕೂ ಸಂಪೂರ್ಣವಾಗಿ ನಕಲು ಮಾಡಲು ಸಾಧ್ಯವಿಲ್ಲದ ವಿಶಿಷ್ಟ ಗುರುತು ನಮ್ಮದಾಗಿದ್ದು, ಈ ಅಮೂಲ್ಯವಾದ ವರವನ್ನು ಗೌರವಿಸಲು ಮತ್ತು ಕಾಪಾಡಲು ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ.

ಈ ಆಚರಣೆಯ ಇತಿಹಾಸವನ್ನು ಗಮನಿಸಿದರೆ, 1999ರಲ್ಲಿ ಬ್ರೆಜಿಲ್‌ನಲ್ಲಿ ಮೊದಲ ಬಾರಿಗೆ “ವಾಯ್ಸ್ ಡೇ” ಆರಂಭವಾಯಿತು. ಕಿವಿ-ಮೂಗು-ಗಂಟಲು ತಜ್ಞರು ಹಾಗೂ ಭಾಷಣ ತಜ್ಞರು ಧ್ವನಿಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಿದರು. ನಂತರ 2002ರಲ್ಲಿ ಅಮೆರಿಕದ ಅಕಾಡೆಮಿ ಆಫ್ ಒಟೊಲಾರಿಂಗಾಲಜಿ ಇದನ್ನು ಜಾಗತಿಕವಾಗಿ ಅಂಗೀಕರಿಸಿತು. ಇಂದು ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ಧ್ವನಿಯ ಆರೋಗ್ಯ, ಗಂಟಲಿನ ಸಮಸ್ಯೆಗಳ ತಡೆಗಟ್ಟುವಿಕೆ ಮತ್ತು ಕಲೆ ಹಾಗೂ ವೃತ್ತಿಜೀವನದಲ್ಲಿ ಧ್ವನಿಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಬಳಸಿಕೊಳ್ಳಲಾಗುತ್ತಿದೆ.

ಆಯುರ್ವೇದದ ದೃಷ್ಟಿಕೋನದಲ್ಲಿ ಧ್ವನಿ ಎಂಬುದು ಕೇವಲ ಶಬ್ದವಲ್ಲ; ಅದು ಪ್ರಾಣಶಕ್ತಿ, ವಾಯು, ಮನಸ್ಸು ಮತ್ತು ದೇಹದ ಸಮತೋಲನದ ಫಲವಾಗಿದೆ. ಆಯುರ್ವೇದದ ಪ್ರಕಾರ ‘ಪ್ರಾಣ ವಾಯು’ ಧ್ವನಿಯ ಮೂಲವಾದರೆ, ‘ಉದಾನ ವಾಯು’ ಧ್ವನಿಯನ್ನು ಹೊರಹಾಕುವ ಶಕ್ತಿಯಾಗಿದೆ. ಇವುಗಳ ಸಮತೋಲನವಿದ್ದಾಗ ಮಾತ್ರ ಧ್ವನಿ ಮಧುರ ಮತ್ತು ಸ್ಪಷ್ಟವಾಗಿರುತ್ತದೆ. ಆದರೆ ಅತಿಯಾಗಿ ಕೂಗುವುದು, ತಣ್ಣೀರು ಅಥವಾ ಐಸ್ ಪದಾರ್ಥಗಳ ಸೇವನೆ, ಧೂಳು, ಮಾಲಿನ್ಯ, ಧೂಮಪಾನ ಮತ್ತು ಮಾನಸಿಕ ಒತ್ತಡದಿಂದ ಧ್ವನಿ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಬೆಚ್ಚಗಿನ ನೀರು ಕುಡಿಯುವುದು, ಪ್ರಾಣಾಯಾಮ ಮಾಡುವುದು ಮತ್ತು ಧ್ವನಿಗೆ ಅಗತ್ಯ ವಿಶ್ರಾಂತಿ ನೀಡುವುದು ಅತ್ಯಗತ್ಯ.

ಇದನ್ನೂ ಓದಿ: ಪ್ರತಿ ಇಬ್ಬರು ಉದ್ಯೋಗಿಗಳಲ್ಲಿ ಒಬ್ಬರಿಗೆ ಮಧುಮೇಹದ ಅಪಾಯ! ಸಮೀಕ್ಷೆಯಲ್ಲಿ ಆತಂಕಕಾರಿ ಅಂಶ ಬಹಿರಂ

ಭಾರತೀಯ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ಧ್ವನಿ ವಿಜ್ಞಾನದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಮಹರ್ಷಿ ಚರಕರು ಧ್ವನಿಯನ್ನು ‘ಶಬ್ದ ತನ್ಮಾತ್ರ’ ಎಂದು ವಿವರಿಸಿ ಕಂಠರೋಗಗಳಿಗೆ ಚಿಕಿತ್ಸೆ ನೀಡಿದರೆ, ಸುಶ್ರುತರು ಧ್ವನಿ ತಂತಿಗಳ ರಚನೆಯನ್ನು ವಿವರಿಸಿದ್ದರು. ಪತಂಜಲಿ ಮಹರ್ಷಿಗಳು ಪ್ರಾಣಾಯಾಮದ ಮೂಲಕ ಧ್ವನಿ ಶಕ್ತಿಯನ್ನು ವೃದ್ಧಿಸುವ ಹಾದಿ ತೋರಿಸಿಕೊಟ್ಟರೆ, ಭರತ ಮುನಿಗಳು ನಾಟ್ಯಶಾಸ್ತ್ರದ ಮೂಲಕ ಧ್ವನಿಯನ್ನು ಕಲೆಯಾಗಿ ರೂಪಿಸಿದರು. ಈ ಮಹನೀಯರ ಕೊಡುಗೆಯಿಂದಾಗಿಯೇ ಇಂದು ನಮಗೆ ಧ್ವನಿಯನ್ನು ಶಕ್ತಿ, ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಸಾಧನೆಯಾಗಿ ಕಾಣಲು ಸಾಧ್ಯವಾಗಿದೆ.

ವಿಶೇಷವಾಗಿ ಗಾಯಕರು, ಶಿಕ್ಷಕರು ಮತ್ತು ವಾಗ್ಮಿಗಳಿಗೆ ಧ್ವನಿಯೇ ಜೀವನಾಧಾರ. ಇವರಿಗೆ ಧ್ವನಿ ಕುಂದುವುದು ಅಥವಾ ಗಂಟಲು ಭಾರವಾಗುವುದು ಸಾಮಾನ್ಯ ಸಮಸ್ಯೆಗಳಾಗಿವೆ. ಇಂತಹ ಸಂದರ್ಭಗಳಲ್ಲಿ ಆಯುರ್ವೇದದಲ್ಲಿ ‘ಸಪ್ತಪರ್ಣಿ’ ಅಥವಾ ‘ಮದ್ದಾಲೆ’ ಎಂಬ ವನಸ್ಪತಿಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಇದು ಗಂಟಲು ಉರಿಯನ್ನು ಕಡಿಮೆ ಮಾಡಿ, ಕಫ ನಿವಾರಿಸುವ ಮೂಲಕ ಧ್ವನಿ ತಂತಿಗಳನ್ನು ಬಲಪಡಿಸುತ್ತದೆ. ಒಟ್ಟಾರೆಯಾಗಿ, ಧ್ವನಿ ಎಂಬುದು ಕೇವಲ ಮಾತಲ್ಲ; ಅದು ನಮ್ಮ ಅಸ್ತಿತ್ವದ ಗುರುತು. ಅದನ್ನು ಪ್ರೀತಿಸುವುದು, ಗೌರವಿಸುವುದು ಮತ್ತು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದಿಕ್ ಕ್ಲಿನಿಕ್, ಶಿರಸಿ (9242122874)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಕ್ಷಗಾನ ಕಲಾವಿದರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಬೆದರಿಕೆ: ಮಹೇಶ್​​ ಶೆಟ್ಟಿ ತಿಮರೋಡಿ ವಿರುದ್ಧ FIR – Kannada News | FIR Against Mahesh Shetty Thimarodi for Threatening Yakshagana Artists

ಮಂಗಳೂರು, ಏಪ್ರಿಲ್​​ 16: ಧರ್ಮಸ್ಥಳದಲ್ಲಿ ನೂರಾರು ಅಪರಿಚಿತ ಹೆಣ ಹೂಳಲಾಗಿದೆ ಎಂಬ ಆರೋಪ ಪ್ರಕರಣದ ಪ್ರಮುಖ ರೂವಾರಿಗಳಲ್ಲೊಬ್ಬರಾಗಿದ್ದ ಮಹೇಶ್​​ ಶೆಟ್ಟಿ ತಿಮರೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ‘ಬುರುಡೆ ಗ್ಯಾಂಗ್’ ಹೆಸರಿನ ಯಕ್ಷಗಾನ ಪ್ರಸಂಗ ಸಂಬಂಧ ಯಕ್ಷಗಾನ ಕಲಾವಿದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬೆದರಿಕೆ ಹಾಕಿರುವ ಆರೋಪ ತಿಮರೋಡಿ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಪುತ್ತೂರು ಮಹಿಳಾ ಠಾಣೆ ಮತ್ತು ಗ್ರಾಮಾಂತ್ರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಧರ್ಮಸ್ಥಳ ಪ್ರಕರಣವನ್ನೇ ಹೋಲುವು ಕಥೆ ಹೊಂದಿರುವ ‘ಬುರುಡೆ ಗ್ಯಾಂಗ್’ ಹೆಸರಿನ ಯಕ್ಷಗಾನ ಪ್ರಸಂಗ ನಿರ್ಮಾಣ ಮಾಡಲಾಗಿತ್ತು.ಇದರಿಂದ ರೊಚ್ಚಿಗೆದ್ದ ಮಹೇಶ್​​ ಶೆಟ್ಟಿ ತಿಮರೋಡಿ ಏಪ್ರಿಲ್​​ 11ರಂದು ಯಕ್ಷಗಾನ ಹಾಸ್ಯ ಕಲಾವಿಧ ಪ್ರಜ್ವಲ್ ಗುರುನಾಯನಕೆರೆಗೆ ಕರೆ ಮಾಡಿದ್ದರು. ಈ ವೇಳೆ ಕಲಾವಿದ ದಿನೇಶ್ ಶೆಟ್ಟಿಗಾರ್ ಮತ್ತು ಚಿತ್ರನಟ ಮಂದಾರ ಸುಂದರ ರೈ ಅವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಲ್ಲದೆ, ಅವರ ತಾಯಂದಿರ ಚಾರಿತ್ರ್ಯದ ಬಗ್ಗೆಯೂ ತೀರಾ ಕೆಟ್ಟದಾಗಿ ಮಾತನಾಡಿದ್ದರು. ಆ ಆಡಿಯೋವನ್ನು ದಿನೇಶ್ ಶೆಟ್ಟಿ ಮತ್ತು ಸುಂದರ ರೈಗೆ ಪ್ರಜ್ವಲ್ ಕಳುಹಿಸಿದ್ದು, ಅದನ್ನು ಕೇಳಿ ಕಲಾವಿದರು ತೀವ್ರ ನೊಂದಿದ್ದಾರೆ. ಈ ಹಿನ್ನೆಲೆ ಸುಂದರ ರೈ ನೀಡಿದ ದೂರಿನಡಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ತಿಮರೋಡಿ ವಿರುದ್ಧ FIR ದಾಖಲಾಗಿದ್ದರೆ, ದಿನೇಶ್ ಶೆಟ್ಟಿಗಾರ್ ತಾಯಿ ಲೀಲಾವತಿ ಶೆಟ್ಟಿಗಾರ್ ದೂರಿನಡಿ ಮಹಿಳಾ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​ ಚಾರ್ಜ್​ಶೀಟ್ ಸಲ್ಲಿಕೆ, ಕೋರ್ಟ್​ಗೆ ಎಸ್ಐಟಿ ಮಹತ್ವದ ಮನವಿ

ಆಡಿಯೋದಲ್ಲಿ ಏನಿದೆ?

ತೀರಾ ಅಂದರೆ ಅತಿ ಕೆಟ್ಟದಾದ ಪದಗಳನ್ನು ಯಕ್ಷಗಾನ ಕಲಾವಿದರ ಬಗ್ಗೆ ಮಹೇಶ್​​ ಶೆಟ್ಟಿ ತಿಮರೋಡಿ ಬಳಸಿರೋದು ಆಡಿಯೋದಲ್ಲಿವೆ. ಒಂದು ಮಗುವಿಗೆ ಅನ್ಯಾಯ ಆಗಿರುವ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇವರು ಅದನ್ನು ಹಾಸ್ಯ ಮಾಡುತ್ತಾರೆ. ಆ ಬಗ್ಗೆ ಕಥೆ ಬರೆಯುತ್ತಾರೆ. ಯಕ್ಷಗಾನ ಮಾಡಲಿ, ಹೊಟ್ಟೆಪಾಡಿಗೆ ಅದನ್ನು ಮಾಡುವುದು. ಆದರೆ ಈ ಕತೆ ಯಾಕೆ? ಅವರ ಕುಟುಂಬಸ್ಥರ ಕತೆಯನ್ನು ಮಾಡಬಹುದಿತ್ತು ಅಲ್ವಾ?. ಈ ರೀತಿಯದ್ದನ್ನು ಮಾಡುವ ಮೊದಲು ಜಾಗೃತೆ ಇರಬೇಕಿತ್ತು. ಯಕ್ಷಗಾನಕ್ಕೆ ಒಂದು ಮರ್ಯಾದೆ ಇದೆ ಅಲ್ಲವಾ? ಎಂದು ಮಹೆಶ್​​ ಶೆಟ್ಟಿ ತಿಮರೋಡಿ ಪ್ರಶ್ನಿಸಿರೋದನ್ನು ಆಡಿಯೋದಲ್ಲಿ ಕೇಳಬಹುದಾಗಿದೆ. ಜೊತೆಗೆ ಈ ವಿಷಯವನ್ನು ಅವರಿಗೆ ಮುಟ್ಟಿಸು ಎಂದೂ ತಿಮರೋಡಿ ಹೇಳಿರುವ ಮಾತುಗಳನ್ನು ಗಮನಿಸಬಹುದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಶ್ವದ ಪ್ರಭಾವಶಾಲಿ 100 ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ – Kannada News | Ranbir Kapoor is only Indian actor to named in TIMES 100 list

ಪ್ರತಿಷ್ಠಿತ ಅಂತರಾಷ್ಟ್ರೀಯ ಮ್ಯಾಗಜೀನ್ ‘ಟೈಮ್ಸ್’ ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವದ ಅತ್ಯಂತ ಪ್ರಭಾವಶಾಲಿ 100 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಟೈಮ್ಸ್ 100 ಪಟ್ಟಿಯಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಸಹ ಕೆಲವು ಭಾರತೀಯರು ಸ್ಥಾನ ಪಡೆದಿದ್ದಾರೆ. ಆದರೆ ಈ ಬಾರಿ ಈ ಪಟ್ಟಿಯಲ್ಲಿ ಕೇವಲ ಒಬ್ಬ ಭಾರತೀಯ ನಟ ಮಾತ್ರವೇ ಸ್ಥಾನ ಪಡೆದಿರುವುದು ವಿಶೇಷ. ಅದುವೇ ರಣ್​​ಬೀರ್ ಕಪೂರ್.

ಬಾಲಿವುಡ್​​ನ ಸ್ಟಾರ್ ನಟ, ಇದೀಗ ‘ರಾಮಾಯಣ’ ಸಿನಿಮಾ ಮೂಲಕ ಹಾಲಿವುಡ್​​ಗೂ ಹಾರುತ್ತಿರುವ ರಣ್​​ಬೀರ್ ಕಪೂರ್ ಅವರು ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇವರೊಟ್ಟಿಗೆ ಪ್ರಖ್ಯಾತ ಭಾರತೀಯ ಶೆಫ್ ವಿಕಾಸ್ ಖನ್ನಾ ಅವರು ಸಹ 100 ಪ್ರಭಾವಶಾಲಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ವಿಕಾಸ್ ಖನ್ನಾ ಅವರು ಅಂತರಾಷ್ಟ್ರೀಯ ಜನಪ್ರಿಯತೆ ಇರುವ ಬಾಣಸಿಗ ಆಗಿದ್ದು, ಹಲವು ದೇಶಗಳಲ್ಲಿ ತಮ್ಮ ರೆಸ್ಟೊರೆಂಟ್​​ಗಳನ್ನು ಹೊಂದಿದ್ದಾರೆ. ಹಲವು ವಿಶ್ವ ನಾಯಕರುಗಳಿಗೆ ವಿಶೇಷ ಖಾದ್ಯಗಳನ್ನು ಸಹ ಅವರು ಮಾಡಿದ್ದಾರೆ.

Ranbir Kapoor

ಟೈಮ್ಸ್ 100 ಪಟ್ಟಿಯಲ್ಲಿ ಈ ಬಾರಿ ಮೂವರು ಭಾರತೀಯರು ಮಾತ್ರವೇ ಸ್ಥಾನ ಪಡೆದಿದ್ದು, ರಣ್​​ಬೀರ್ ಕಪೂರ್, ವಿಕಾಸ್ ಖನ್ನಾ ಬಳಿಕ ಗೂಗಲ್​​ನ ಸಿಇಓ ಸುಂದರ್ ಪಿಚಾಯ್ ಅವರು ಸಹ ಈ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಸುಂದರ್ ಪಿಚಾಯ್ ಅಮೆರಿಕ ನಿವಾಸಿ ಆಗಿದ್ದರೂ ಸಹ ಅವರ ಮೂಲ ಭಾರತವೇ ಆಗಿದೆ. ವಿಶ್ವದ ಅತ್ಯಂತ ದೊಡ್ಡ ಮತ್ತು ಜನಪ್ರಿಯ ಸಂಸ್ಥೆಗಳಲ್ಲಿ ಒಂದಾಗಿರುವ ಗೂಗಲ್​​ನ ಸಿಇಓ ಆಗಿದ್ದಾರೆ ಸುಂದರ್ ಪಿಚಾಯ್.

ಇದನ್ನೂ ಓದಿ:‘ಆಪರೇಷನ್ ಸಿಂಧೂರ್’ ಚಿತ್ರಕ್ಕೆ ಸಿಕ್ಕರು ಹೀರೋ; ಬಾಲಿವುಡ್ ನಟನಿಗೆ ಆಫರ್

ಟೈಮ್ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಒಬ್ಬ ಕಲಾವಿದನಿಗೆ ಜಾಗತಿಕ ಮಟ್ಟದಲ್ಲಿ ಸಿಗುವ ಅತ್ಯುನ್ನತ ಮನ್ನಣೆಗಳಲ್ಲಿ ಒಂದಾಗಿದೆ. ಈ ಹಿಂದೆ ಬಾಲಿವುಡ್‌ನ ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಅಂತಹ ನಟರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ರಣ್​​ಬೀರ್ ಕಪೂರ್ ಅವರು ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ರಣ್​​ಬೀರ್ ಕಪೂರ್ ಹೆಸರು ಸೇರಿಕೊಳ್ಳುತ್ತಿರುವುದು ಇದು ಮೊದಲೇ ಬಾರಿ ಆಗಿದೆ.

ರಣ್​​ಬೀರ್ ಕಪೂರ್ ನಟಿಸಿರುವ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಬ್ರಹ್ಮಾಸ್ತ್ರ 2’ ಮತ್ತು ‘ಅನಿಮಲ್ ಪಾರ್ಕ್’ ಸಿನಿಮಾಗಳಲ್ಲಿ ರಣ್​​ಬೀರ್ ಕಪೂರ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೆಂಪೇಗೌಡ ಲೇಔಟ್ ಅರ್ಹ ಸೈಟ್ ಮಾಲೀಕರಿಗೆ ಶುಭ ಸುದ್ದಿ: ಮೂಲಸೌಕರ್ಯ ವಿಳಂಬಕ್ಕೆ ಬಡ್ಡಿ ಸಮೇತ ಪರಿಹಾರಕ್ಕೆ ರೇರಾ ಆದೇಶ – Kannada News | BDA Ordered to Pay Interest: NPKL Site Owners Get Relief for Infrastructure Delay

ಬೆಂಗಳೂರು, ಏ.16: ನಾಡಪ್ರಭು ಕೆಂಪೇಗೌಡ ಲೇಔಟ್ (NPKL) ಸೈಟ್ ಮಾಲೀಕರ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಲೇಔಟ್‌ನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ, ಸೈಟ್ ಮಾಲೀಕರಿಗೆ ಬಡ್ಡಿ ಸಹಿತ ಪರಿಹಾರ ನೀಡುವಂತೆ ಕೆ-ರೇರಾ ಬಿಡಿಎಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ ಸೈಟ್ ಮಾಲೀಕರಿಗೆ, ವಿಳಂಬವಾದ ಅವಧಿಗೆ SBI MCLR + 2% ದರದಲ್ಲಿ ಬಡ್ಡಿ ಪರಿಹಾರ ನೀಡಬೇಕು. (ಉದಾಹರಣೆಗೆ: 56,03,736 ರೂ. ಮೊತ್ತಕ್ಕೆ 10-06-2020 ರಿಂದ 02-02-2026ರವರೆಗಿನ ಬಡ್ಡಿಯನ್ನು 60 ದಿನಗಳೊಳಗೆ ಪಾವತಿಸಬೇಕು).

ಕೇವಲ ಹಳೆಯ ಬಾಕಿ ಮಾತ್ರವಲ್ಲದೆ, 03-02-2026 ರಿಂದ ಲೇಔಟ್‌ನಲ್ಲಿ ಮೂಲಭೂತ ಸೌಕರ್ಯಗಳು ಸಂಪೂರ್ಣಗೊಳ್ಳುವವರೆಗೆ ಬಿಡಿಎ ನಿರಂತರವಾಗಿ ಬಡ್ಡಿ ನೀಡುತ್ತಿರಬೇಕು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಈವರೆಗೆ ದಾಖಲೆ ಸಲ್ಲಿಸದ ಮಾಲೀಕರು ರೇರಾ ಕಾಯ್ದೆಯಡಿ ದೂರು ದಾಖಲಿಸಿ, ಸಮಾನ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ವಿಳಂಬಕ್ಕೆ ಡೆವಲಪರ್ (ಬಿಡಿಎ) ನೇರ ಹೊಣೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಮಹಿಳಾ ನೌಕರರಿಗೆ ಗುಡ್ ನ್ಯೂಸ್: ತಿಂಗಳಿಗೆ ಒಂದು ದಿನ ‘ಋತುಸ್ರಾವ ರಜೆ’ ಕಡ್ಡಾಯ; ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ

ವರ್ಷಗಳಿಂದ ಸೈಟ್ ಸಿಕ್ಕರೂ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದ ಮಾಲೀಕರಿಗೆ ಈ ಆದೇಶವು ಆರ್ಥಿಕ ಭರವಸೆ ನೀಡಿದೆ. ಸರ್ಕಾರಿ ಸಂಸ್ಥೆಯಾದರೂ ಸಹ ರೇರಾ ನಿಯಮಗಳ ಅಡಿಯಲ್ಲಿ ಪರಿಹಾರ ನೀಡಲೇಬೇಕು ಎಂಬುದು ಈ ಆದೇಶದ ಪ್ರಮುಖ ವಿಚಾರವಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಪೊಲೀಸರ ಭರ್ಜರಿ ಬೇಟೆ: 11.86 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 10 ಮಂದಿಯ ಬಂಧನ – Kannada News | Mega Drug Bust in Bengaluru: 11.86 Crore Worth Narcotics Seized, 10 Arrested Including Foreign Nationals

ಬೆಂಗಳೂರು, ಏಪ್ರಿಲ್ 16: ಮಾದಕ ವಸ್ತು ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಬೆಂಗಳೂರು (Bangalore) ಪೊಲೀಸರು, ನಗರದ ವಿವಿಧೆಡೆ ದಾಳಿ ನಡೆಸಿ ಬರೋಬ್ಬರಿ 11.86 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಜಾಲದಲ್ಲಿ ಶಾಮೀಲಾಗಿದ್ದ ಇಬ್ಬರು ವಿದೇಶಿ ಮಹಿಳೆಯರು ಹಾಗೂ ಹೊರರಾಜ್ಯದ ಐವರು ಸೇರಿದಂತೆ ಒಟ್ಟು 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಯಲಹಂಕ, ಡಿ.ಜೆ.ಹಳ್ಳಿ, ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ ಹಾಗೂ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಬಂಧಿತರಿಂದ ಭಾರಿ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 5.9 ಕೆಜಿ ಎಂಡಿಎಂಎ (MDMA), 1.15 ಕೆಜಿ ಕೊಕೇನ್, 21 ಕೆಜಿ ಗಾಂಜಾ ಮತ್ತು 19 ಗ್ರಾಂ ಎಕ್ಸ್‌ಟೆಸಿ ಮಾತ್ರೆಗಳು ಸೇರಿವೆ. ಜೊತೆಗೆ ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ಸೀಜ್ ಮಾಡಲಾಗಿದೆ. ಈ ಪೈಕಿ ವಿದೇಶಿ ಮಹಿಳೆಯರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿ ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.

ಬೆಂಗಳೂರಿನಲ್ಲಿ ಇತ್ತೀಚಿನ ಪ್ರಮುಖ ಡ್ರಗ್ಸ್ ಜಪ್ತಿ ಪ್ರಕರಣಗಳು

  • ಮಾರ್ಚ್ 12, 2026: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4 ಕೋಟಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ವಿದೇಶಿ ಪ್ರಜೆಯ ಬಂಧನ.
  • ಮಾರ್ಚ್ 28, 2026: ಎಲೆಕ್ಟ್ರಾನಿಕ್ ಸಿಟಿಯ ನೈಜೀರಿಯನ್ ಪ್ರಜೆಯಿಂದ 2.5 ಕೋಟಿ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶ.
  • ಏಪ್ರಿಲ್ 05, 2026: ಸಿಸಿಬಿ ಪೊಲೀಸರಿಂದ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಅಂತರಾಷ್ಟ್ರೀಯ ಡ್ರಗ್ಸ್ ಜಾಲ ಭೇದಿಸಿ 5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ.
  • ಏಪ್ರಿಲ್ 16, 2026: ನಗರದ 6 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 11.86 ಕೋಟಿ ರೂ. ಮೌಲ್ಯದ ಡ್ರಗ್ಸ್ ಮತ್ತು 10 ಆರೋಪಿಗಳ ಬಂಧನ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್​ಲೈನ್​ನಲ್ಲಿ ತಕರಾರು – Kannada News | Lenskart’s alleged policy document bars employees from wearing bindi, while allowing Hijab, controversy erupts

ಲೆನ್ಸ್​ಕಾರ್ಟ್ ಶೋರೂಮ್Image Credit source: Saishna96, Wikipedia

ನವದೆಹಲಿ, ಏಪ್ರಿಲ್ 16: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯಲ್ಲಿ ಲೈಂಗಿಕ ದೌರ್ಜನ್ಯ, ಮತಾಂತರ ಕುಮ್ಮಕ್ಕು ಇತ್ಯಾದಿ ಕರ್ಮಕಾಂಡಗಳು ಬೆಳಕಿಗೆ ಬಂದು ವಿವಾದ ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ ಲೆನ್ಸ್​ಕಾರ್ಟ್ (Lenskart) ಸಂಸ್ಥೆಯ ಉದ್ಯೋಗಿಗಳಿಗೆ ನೀಡಲಾಗಿರುವ ಸ್ಟೈಲ್​ಗೈಡ್​ನ ಕೆಲ ಅಂಶಗಳು ಹೊಸ ವಿವಾದ ಹುಟ್ಟುಹಾಕಿವೆ. ಸ್ಟೈಲ್​ಗೈಡ್​ನಲ್ಲಿ ಧರ್ಮತಾರತಮ್ಯ ಮಾಡಲಾಗಿರುವ ನಿಯಮಗಳನ್ನು ಹಲವರು ಎತ್ತಿ ತೋರಿಸಿದ್ದಾರೆ.

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್​ಗೆ ಆನ್​ಲೈನ್​ನಲ್ಲಿ ತಕರಾರು

ಲೆನ್ಸ್​ಕಾರ್ಟ್​ನ ಉದ್ಯೋಗಿಗಳ ಸ್ಟೈಲ್​ಗೈಡ್​ನಲ್ಲಿರುವ ಕೆಲ ನಿಯಮಗಳು, ಅದರಲ್ಲೂ ಧಾರ್ಮಿಕ ಸೂಕ್ಷ್ಮತೆ ಇರುವ ನಿಯಮಗಳ ಬಗ್ಗೆ ಆನ್​ಲೈನ್​ನಲ್ಲಿ ಸಾಕಷ್ಟು ತಕರಾರುಗಳು ಎದ್ದಿವೆ. ‘ಹಿಜಾಬ್​ಗೆ ಅನುಮತಿ ಕೊಡಲಾಗಿದೆ. ಆದರೆ, ಹಿಂದೂ ಉದ್ಯೋಗಿಗಳಿಗೆ ಕುಂಕುಮ, ಹಣೆಬೊಟ್ಟು ಇಡುವ ಅವಕಾಶ ನೀಡಲಾಗಿಲ್ಲ ಯಾಕೆ?’ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

‘ಇದು ಮೂರ್ಖತನ. ಲೆನ್ಸ್​ಕಾರ್ಟ್ ಮಾನಗೆಟ್ಟ ಕಂಪನಿ. ಬಿಂದಿಯಲ್ಲಿ ಏನು ತಪ್ಪು ಕಂಡಿದ್ದಾರೆ. ಅವರಿಗೆ ಭಾರತದಲ್ಲಿ ಬ್ಯುಸಿನೆಸ್ ಮಾಡಬೇಕು, ಆದರೆ ಜನರ ಭಾವನೆಗಳಿಗೆ ಬೆಲೆ ಕೊಡುವುದು ಬೇಡ’ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೆಫಾಲಿ ವೈದ್ಯ ಟ್ವೀಟ್

‘ನಾನು ಯಾವತ್ತೂ ಲೆನ್ಸ್​ಕಾರ್ಟ್​ನಿಂದ ಕನ್ನಡಕ ಖರೀದಿಸುವುದಿಲ್ಲ. ಇತ್ತೀಚೆಗೆ ನನ್ನ ಕುಟುಂಬದ ಸದಸ್ಯರು ಭಾರತಕ್ಕೆ ಹೋಗಿ ಇಲ್ಲಿ ತಮ್ಮ ಗ್ಲಾಸ್​ಗಳನ್ನು ಪಡೆದಿದ್ದರು. ಈ ಹಿಂದೂ ವಿರೋಧಿ ಸಂಸ್ಥೆಗೆ ಹಣ ವೆಚ್ಚ ಮಾಡಬೇಡಿ ಎಂದು ಅವರಿಗೆ ಈಗ ಹೇಳುತ್ತೇನೆ’ ಎಂದು ಮಗದೊಬ್ಬರು ಕಾಮೆಂಟಿಸಿದ್ದಾರೆ.

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್​ನಲ್ಲಿ ವಿವಾದವಾಗಿರುವ ಅಂಶಗಳಿವು…

  • ಕಪ್ಪು ಬಣ್ಣದ ಪೇಟ (sikh turban) ಧರಿಸಬಹುದು.
  • ಕಪ್ಪು ಬಣ್ಣದ ಹಿಜಾಬ್ ಧರಿಸಬಹುದು
  • ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಟ್ಯಾಟೂಗಳನ್ನು ಹಾಕಿಕೊಂಡಿದ್ದರೆ ಅದು ಕಣ್ಣಿಗೆ ಗೋಚರಿಸದಂತಿರಬೇಕು.
  • ಹೆನ್ನಾ (ಗೋರಂಟಿ) ಹಾಕುವಂತಿಲ್ಲ. ವಿಶೇಷ ಸಂದರ್ಭವಿದ್ದರೆ ಮುಂಚಿತವಾಗಿ ಅನುಮತಿ ಪಡೆಯಬೇಕು.
  • ಧಾರ್ಮಿಕ ತಿಲಕ, ಹಣಬೊಟ್ಟು ಹಾಕುವಂತಿಲ್ಲ.

ಇದನ್ನೂ ಓದಿ: ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ?

ಲೆನ್ಸ್​ಕಾರ್ಟ್ ಸಂಸ್ಥಾಪಕರ ಸ್ಪಷ್ಟನೆ

ಲೆನ್ಸ್​ಕಾರ್ಟ್ ಸ್ಟೈಲ್​ಗೈಡ್ ವಿಚಾರ ಆನ್​ಲೈನ್​ನಲ್ಲಿ ಟ್ರೋಲ್ ಆಗುತ್ತಿರುವಂತೆಯೇ ಸಂಸ್ಥೆಯ ಸಂಸ್ಥಾಪಕ ಪಿಯುಸ್ ಬನ್ಸಾಲ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ವೈರಲ್ ಆಗುತ್ತಿರುವ ದಾಖಲೆಯು ಸರಿಯಿಲ್ಲ. ನಮ್ಮ ಈಗಿನ ಮಾರ್ಗಸೂಚಿಗಳನ್ನು ಇದು ಪ್ರತಿಬಿಂಬಿಸುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅವರ ಈ ಟ್ವೀಟ್​ಗೂ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿವೆ. ಲೆನ್ಸ್​ಕಾರ್ಟ್​ನ ಈ ಪಾಲಿಸಿ ಡಾಕ್ಯುಮೆಂಟ್ 2026ರ ಫೆಬ್ರುವರಿಯದ್ದು. ಈಗ ಬದಲಾಗಿರುವ ಪಾಲಿಸಿ ಡಾಕ್ಯುಮೆಂಟ್ ಇದ್ದರೆ ತೋರಿಸಿ ಎಂದು ಅನೇಕರು ಸವಾಲು ಹಾಕಿದ್ದಾರೆ.

ವೈರಲ್ ಆಗುತ್ತಿರುವ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್​ಗೆ ಲಿಂಕ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹದ ಬಳಿಕವೂ ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾರ್? – Kannada News | Akshay Kumar and Priyanka Chopra Affair: Post Marriage Controversy That Rocked Bollywood

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಖಾಸಗಿ ಜೀವನದ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಈಗಲೂ ಸಹ, ನಟ ಅಕ್ಷಯ್ ಕುಮಾರ್ ಅವರ ಖಾಸಗಿ ಜೀವನ ಚರ್ಚೆ ಆಗುತ್ತದೆ. ಒಂದು ಕಾಲದಲ್ಲಿ ಅಕ್ಷಯ್ ಕುಮಾರ್ ಒಬ್ಬ ಪ್ರಸಿದ್ಧ ಮತ್ತು ಜನಪ್ರಿಯ ನಟಿಯನ್ನು ಪ್ರೀತಿಸುತ್ತಿದ್ದರು. ಆದರೆ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಅಕ್ಷಯ್ ಅವರ ಸಂಬಂಧದ ಬಗ್ಗೆ ತಿಳಿದಾಗ, ನಟನ ಜೀವನದಲ್ಲಿ ದೊಡ್ಡ ಬಿರುಗಾಳಿ ಎದ್ದಿತು. ಅಕ್ಷಯ್ ಅವರ ಸಂಬಂಧದದಲ್ಲಿ ಇದ್ದ ನಟಿ ಬೇರೆ ಯಾರೂ ಅಲ್ಲ, ನಟಿ ಪ್ರಿಯಾಂಕಾ ಚೋಪ್ರಾ.

ಪ್ರಿಯಾಂಕಾ ಮತ್ತು ಅಕ್ಷಯ್ ‘ಅಂದಾಜ್’, ‘ಐತ್ರಾಜ್’ ಮತ್ತು ‘ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್’ ನಂತಹ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಜೋಡಿಯ ಜೋಡಿಯನ್ನು ಅಭಿಮಾನಿಗಳು ಕೂಡ ಇಷ್ಟಪಟ್ಟರು. ಏತನ್ಮಧ್ಯೆ, ಅವರ ಪ್ರೇಮ ಸಂಬಂಧದ ವದಂತಿಗಳು ಹಬ್ಬಿದವು. ಇದು ನಟನ ವೈಯಕ್ತಿಕ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿತು.

ನಿರ್ದೇಶಕ ಸುನಿಲ್ ದರ್ಶನ್ ಅವರು ಸಂದರ್ಶನವೊಂದರಲ್ಲಿ ಅಕ್ಷಯ್ ಮತ್ತು ಪ್ರಿಯಾಂಕಾ ಅವರ ಪ್ರೇಮದ ವಿಷಯವನ್ನು ಹೇಳಿದರು. ಇದು ಮತ್ತೆ ಚರ್ಚೆಗೆ ಕಾರಣವಾಗಿಯಿತು. 1995 ರಲ್ಲಿ ಬಿಡುಗಡೆಯಾದ ‘ಬರ್ಸಾತ್’ ಚಿತ್ರದಲ್ಲಿ ನಟಿ ಟ್ವಿಂಕಲ್, ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದರು. ಸುನಿಲ್ ದರ್ಶನ್, ಪ್ರಿಯಾಂಕಾ ಮತ್ತು ಬಾಬಿ ಅವರೊಂದಿಗೆ ‘ಬರ್ಸಾತ್’ ಎಂಬ ಶೀರ್ಷಿಕೆಯಡಿಯಲ್ಲಿ ಸಿನಿಮಾ ಮಾಡಿದರು. ಮೊದಲು ಈ ಚಿತ್ರಕ್ಕೆ ಅಕ್ಷಯ್ ಆಯ್ಕೆ ಆಗಿದ್ದರು, ಆದರೆ, ಕುಟುಂಬದಲ್ಲಿ ವಿವಾದ ಎದ್ದಿದ್ದರಿಂದ ಅವರು ಈ ಸಿನಿಮಾ ಬಿಡಬೇಕಾಯಿತು.

ಸುನಿಲ್ ದರ್ಶನ್ ಈ ಬಗ್ಗೆ ಮಾತನಾಡಿದ್ದಾರೆ. ‘ವಿವಾಹಿತ ವ್ಯಕ್ತಿಯ ಜವಾಬ್ದಾರಿ ಹೆಚ್ಚಾಗಿರುತ್ತದೆ. ಉದ್ಯಮದಲ್ಲಿ ಕೆಲಸ ಮಾಡುವ ಜನರಿಗೆ ಪರಿಸ್ಥಿತಿಯ ಅರಿವಿರುತ್ತದೆ. ಆದರೂ, ಅವರು ತಮ್ಮದೇ ಆದ ಮಿತಿಗಳನ್ನು ಮೀರುತ್ತಾರೆ ಮತ್ತು ಅದು ಅವರ ಖಾಸಗಿ ಜೀವನದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.

ಇದನ್ನೂ ಓದಿ: ‘ಭೂತ್ ಬಂಗ್ಲ’ ಅಡ್ವಾನ್ಸ್ ಬುಕ್ಕಿಂಗ್‌: ಅಕ್ಷಯ್ ಕುಮಾರ್ ಸಿನಿಮಾಗೆ 15 ಕೋಟಿ ರೂ. ಓಪನಿಂಗ್ ನಿರೀಕ್ಷೆ

‘ಪ್ರತಿಯೊಬ್ಬ ನಟನೂ ತನ್ನ ವೃತ್ತಿ ಮತ್ತು ಅವಕಾಶಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ’, ನಿಜ ಹೇಳಬೇಕೆಂದರೆ, ‘ಬರ್ಸಾತ್’ ಚಿತ್ರದ ಸಂಪೂರ್ಣ ಹಾಡನ್ನು ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಚಿತ್ರೀಕರಿಸಲಾಗಿದೆ. ಆದರೆ ಅಕ್ಷಯ್ ಚಿತ್ರವನ್ನು ನಿರಾಕರಿಸಿದ ನಂತರ, ಹಾಡನ್ನು ಮತ್ತೆ ಬಾಬಿ ಮತ್ತು ಪ್ರಿಯಾಂಕಾ ಅವರೊಂದಿಗೆ ಚಿತ್ರೀಕರಿಸಲಾಗಿತ್ತು’ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ‘ತೆಂಗಿನಕಾಯಿ ಕಳ್ಳಿ’ಯ ಹಾವಳಿ! ಮಾಲೀಕ ಕಾದು ಕುಳಿತಿದ್ದರೂ ಬುಟ್ಟಿಗೆ 15 ಕಾಯಿ ಹಾಕ್ಕೊಂಡು ಹೋದ ಮಹಿಳೆ – Kannada News | Mahalakshmi Layout: Habitual coconut thief targeting rice shop caught on CCTV

ಬೆಂಗಳೂರು, ಏ.16: ರಾಜಧಾನಿಯ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಪುರದಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ‘ಶ್ರೀ ಲಕ್ಷ್ಮೀದೇವಿ ರೈಸ್ ಕಾರ್ನರ್’ ಎಂಬ ಅಂಗಡಿಯಲ್ಲಿ ಮಹಿಳೆಯೊಬ್ಬರು ಸತತವಾಗಿ ತೆಂಗಿನಕಾಯಿಗಳನ್ನು ಕದಿಯುತ್ತಿದ್ದು, ಅಂಗಡಿ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ನಿನ್ನೆ (ಏಪ್ರಿಲ್ 15, 2026) ಬೆಳಗಿನ ಜಾವ ಸುಮಾರು 3 ಗಂಟೆಗೆ ಮಹಿಳೆಯೊಬ್ಬರು ಅಂಗಡಿಯ ಆವರಣಕ್ಕೆ ನುಗ್ಗಿ ಸುಮಾರು 15 ತೆಂಗಿನಕಾಯಿಗಳನ್ನು ಕದ್ದಿದ್ದಾರೆ. ಈ ದೃಶ್ಯವು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಇದು ಮೊದಲ ಬಾರಿಯಲ್ಲ; ಇದೇ ಮಹಿಳೆ ಈ ಹಿಂದೆಯೂ ಇದೇ ಅಂಗಡಿಯಿಂದ ತೆಂಗಿನಕಾಯಿಗಳನ್ನು ಕದ್ದಿದ್ದರು ಎಂದು ತಿಳಿದುಬಂದಿದೆ. ಇದು ಒಂದು ಸಲದ ಆಕಸ್ಮಿಕವಲ್ಲ, ಬದಲಿಗೆ ಆಕೆಯ ಹಳೆಯ ಅಭ್ಯಾಸ ಎಂಬುದು ಮಾಲೀಕರ ವಾದ. ಕಳೆದ ಒಂದು ವಾರದಿಂದ ಅಂಗಡಿ ಮಾಲೀಕರು ಈ ಕಳ್ಳಿಯನ್ನು ಹಿಡಿಯಲು ಹದ್ದಿನ ಕಣ್ಣಿಟ್ಟು ಕಾದು ಕುಳಿತಿದ್ದರು. ಆದರೂ, ಮಾಲೀಕರ ಕಣ್ತಪ್ಪಿಸಿ ಮಹಿಳೆಯು ಪುನಃ ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪದೇ ಪದೇ ಇಂತಹ ಸಣ್ಣಪುಟ್ಟ ಕಳ್ಳತನಗಳು ನಡೆಯುತ್ತಿರುವುದು ಸಣ್ಣ ವ್ಯಾಪಾರಿಗಳ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದು, ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಹತ್ತನೇ ತರಗತಿ ಪರೀಕ್ಷೆಯಲ್ಲಿ ಮಹಾತ್ಮ ಗಾಂಧೀಜಿ ಪಡೆದ ಅಂಕ ಎಷ್ಟು ಗೊತ್ತಾ? – Kannada News | Do you know what score Mahatma Gandhi got in the 10th class exam?

ಮಹಾತ್ಮ ಗಾಂಧೀಜಿ ಅಂಕ ಪಟ್ಟಿImage Credit source: Twitter/ Pinterest

ಓದೋದ್ರಲ್ಲಿ ಎಲ್ಲಾ ಮಕ್ಕಳು (children) ಬುದ್ಧಿವಂತರಾಗಿರುವುದಿಲ್ಲ. ಕೆಲ ಮಕ್ಕಳು ನೂರಕ್ಕೆ ನೂರು ಮಾರ್ಕ್ ತೆಗೆದುಕೊಂಡರೆ, ಇನ್ನು ಕೆಲವರು ಜಸ್ಟ್ ಪಾಸ್ ಆಗೋದು ಕಷ್ಟಕ್ಕೆ. ರಿಸಲ್ಟ್ ಬರುವ ದಿನವಂತೂ ಕೆಲ ಮಕ್ಕಳಿಗೆ ಪಾಸ್ ಆಗುತ್ತೇವೋ ಇಲ್ವೋ ಅನ್ನೋ ಭಯ ಇರುತ್ತದೆ. ಇದೀಗ ಗಾಂಧೀಜಿಯವರ ಹತ್ತನೇ ತರಗತಿಯ ಅಂಕ ಪಟ್ಟಿ ವೈರಲ್ ಆಗುತ್ತಿದೆ. ಎಷ್ಟೋ ಜನರಿಗೆ  ಮಹಾತ್ಮ ಗಾಂಧೀಜಿಯವರು (Mahatma Gandhiji) ಎಷ್ಟು ಅಂಕ ಪಡೆದಿದ್ದರು ಎನ್ನುವ ಕುತೂಹಲವಿರುವುದು ಸಹಜ. ಹೌದು, ಮಹಾತ್ಮ ಗಾಂಧೀಜಿಯವರು ಹತ್ತನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 247 ಗಳಿಸಿದ್ದರು ಅಂದ್ರೆ ನಿಮಗೆ ಶಾಕ್ ಆಗ್ಬಹುದು. ಅಂದಹಾಗೆ, ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

Common Man ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಅಂಕ ಪಟ್ಟಿಯನ್ನು ಕಾಣಬಹುದು. 1887 ರಲ್ಲಿ ರಾಜ್ ಕೋಟಟ್‌ನ ಆಲ್ಫ್ರೆಡ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ವೇಳೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ನೀವಿಲ್ಲಿ ಗಮನಿಸಬಹುದು. ಈ ಅಂಕಪಟ್ಟಿಯ ಪ್ರಕಾರ, ಮಹಾತ್ಮ ಗಾಂಧಿ ಅವರು ಇಂಗ್ಲಿಷ್ ವಿಷಯದಲ್ಲಿ 89 ಅಂಕಗಳನ್ನು ಗಳಿಸಿದರೆ, ದ್ವಿತೀಯ ಭಾಷಾ ವಿಷಯದಲ್ಲಿ 45 ಅಂಕಗಳು ಮತ್ತು ಗಣಿತದಲ್ಲಿ 59 ಅಂಕಗಳು, ವಿಜ್ಞಾನದಲ್ಲಿ 34 ಹಾಗೂ ಇತಿಹಾಸದಲ್ಲಿ 20 ಅಂಕಗಳನ್ನು ಪಡೆದಿರುವುದನ್ನು ನೀವಿಲ್ಲಿ ನೋಡಬಹುದು. ಅಂದರೆ 625 ರಲ್ಲಿ ಕೇವಲ 247.5 ಅಂಕಗಳನ್ನು ಪಡೆದುಕೊಂಡಿರುವುದನ್ನು ಕಾಣಬಹುದು. ಸರಾಸರಿ ವಿದ್ಯಾರ್ಥಿಯಾಗಿದ್ದ ಅವರು ಶಾಲಾ ಅಂತಿಮ ಪರೀಕ್ಷೆಯಲ್ಲಿ 800 ವಿದ್ಯಾರ್ಥಿಗಳಲ್ಲಿ 404ನೇ ರ್ಯಾಂಕ್‌ ಪಡೆದಿದ್ದರು ಎನ್ನುವುದಕ್ಕೆ ಈ ಪೋಸ್ಟ್ ಸಾಕ್ಷಿಯಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಪುಟಾಣಿ ತೊದಲು ನುಡಿಯಲ್ಲಿ ಬೈಯುತ್ತಿದ್ದರೆ ಮುಗುಳುನಗೆ ಬೀರಿದ ತಂದೆ

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜ್ಞಾನ ಕಡಿಮೆ .ಆ ಸಮಯದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಶಿಕ್ಷಣ ಪಡೆದಿದ್ದರು ಮತ್ತು ಶಾಲೆಗಳ ಬಗ್ಗೆ ತಿಳಿದಿರಲಿಲ್ಲ .ಇತ್ತೀಚಿನ ದಿನಗಳಲ್ಲಿ ಶಾಲಾ ಶಿಕ್ಷಣವು ತುಂಬಾ ಸಾಮಾನ್ಯವಾದಾಗ ಅವಿದ್ಯಾವಂತರು ಸಹ ಮುಖ್ಯಮಂತ್ರಿ ಮತ್ತು ಪ್ರಧಾನಿ ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ಸಾವರ್ಕರ್ ಅವರ ಮಾರ್ಕ್‌ಶೀಟ್ ಅನ್ನು ದಯವಿಟ್ಟು ಹಂಚಿಕೊಳ್ಳಬಹುದೇ? ಎಂದು ಕೇಳಿದ್ದಾರೆ. ಮತ್ತೊಬ್ಬರು, ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Swapna Shastra: ಕನಸಿನಲ್ಲಿ ಬಟ್ಟೆ ಒಗೆಯುವುದು ಕಂಡರೆ ಏನರ್ಥ? ಅದೃಷ್ಟದ ಸಂಕೇತವೇ, ಎಚ್ಚರಿಕೆಯೇ? – Kannada News | Dream of Washing Clothes: Swapanashastra Meanings and Future Signs

ಸ್ವಪ್ನಶಾಸ್ತ್ರದ ಪ್ರಕಾರ, ನಿದ್ರೆಯ ಸಮಯದಲ್ಲಿ ಬೀಳುವ ಪ್ರತಿಯೊಂದು ಕನಸು ಕೂಡ ಅರ್ಥಹೀನವಲ್ಲ. ಪ್ರತಿಯೊಂದು ದೃಶ್ಯದ ಹಿಂದೆ ಒಂದು ವಿಶೇಷ ಸಂದೇಶ ಹಾಗೂ ಭವಿಷ್ಯದ ಸುಳಿವು ಅಡಗಿರುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಕಾಣುವ ಕನಸುಗಳು ನಮ್ಮ ಜೀವನದಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಒಳ್ಳೆಯ ಅಥವಾ ಕೆಟ್ಟ ಸನ್ನಿವೇಶಗಳನ್ನು ಮುನ್ಸೂಚನೆಯಾಗಿ ನೀಡುತ್ತವೆ. ಈ ಹಿನ್ನೆಲೆಯಲ್ಲಿ, ಕನಸಿನಲ್ಲಿ ಬಟ್ಟೆ ಒಗೆಯುವ ಕ್ರಿಯೆಯು ವಿಭಿನ್ನ ಅರ್ಥಗಳನ್ನು ಹೊಂದಿದೆ.

ಸ್ವಚ್ಛವಾದ ಬಟ್ಟೆ ಒಗೆಯುತ್ತಿರುವುದು:

ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಅತ್ಯಂತ ಸ್ವಚ್ಛವಾದ ಬಟ್ಟೆಗಳನ್ನು ಒಗೆಯುತ್ತಿರುವುದನ್ನು ಕಂಡರೆ, ಅದು ಅತ್ಯಂತ ಶುಭ ಸಂಕೇತವಾಗಿದೆ. ಇದರರ್ಥ ನಿಮ್ಮ ಜೀವನದ ಹಾದಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ನೀವು ಮಾನಸಿಕವಾಗಿ ಶಾಂತ ಹಾಗೂ ಸ್ಥಿರವಾಗಿದ್ದೀರಿ. ಇಂತಹ ಕನಸು ಭವಿಷ್ಯದಲ್ಲಿ ಬರಲಿರುವ ಶುಭ ಸುದ್ದಿಯ ಸಂಕೇತವಾಗಿದ್ದು, ದೀರ್ಘಕಾಲದಿಂದ ನೀವು ಪೂರ್ಣಗೊಳಿಸಲು ಪ್ರಯತ್ನಿಸುತ್ತಿರುವ ಅಪೂರ್ಣ ಕೆಲಸಗಳು ಶೀಘ್ರದಲ್ಲೇ ಯಶಸ್ವಿಯಾಗಿ ಮುಕ್ತಾಯಗೊಳ್ಳಲಿವೆ ಎಂದು ಇದು ಸೂಚಿಸುತ್ತದೆ.

ಕೊಳಕು ಬಟ್ಟೆ ಒಗೆಯುತ್ತಿರುವುದು:

ಮತ್ತೊಂದೆಡೆ, ಕನಸಿನಲ್ಲಿ ಕೊಳಕು ಬಟ್ಟೆಗಳನ್ನು ನೋಡುವುದು ನೀವು ಪ್ರಸ್ತುತ ಎದುರಿಸುತ್ತಿರುವ ನಕಾರಾತ್ಮಕತೆ ಅಥವಾ ಸಮಸ್ಯೆಗಳಿಂದ ಹೊರಬರಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ನಿಮ್ಮ ಜೀವನದಲ್ಲಿ ಸಣ್ಣಪುಟ್ಟ ಗೊಂದಲಗಳು ಇದ್ದರೂ ಸಹ, ಈ ಕನಸು ಒಂದು ಆಶಾವಾದಿ ಮುನ್ಸೂಚನೆಯಾಗಿದೆ. ಅಂದರೆ, ಶೀಘ್ರದಲ್ಲೇ ನಿಮ್ಮ ಜೀವನದ ತೊಂದರೆಗಳು ಕ್ರಮೇಣ ಕಡಿಮೆಯಾಗಿ, ಹೊಸ ಮತ್ತು ಉತ್ತಮ ಬದಲಾವಣೆಗಳು ಕಂಡುಬರಲಿವೆ ಎಂಬ ಭರವಸೆಯನ್ನು ಈ ಕನಸು ನೀಡುತ್ತದೆ.

ಬೇರೆಯವರ ಬಟ್ಟೆ ಒಗೆಯುತ್ತಿರುವುದು:

ಒಂದು ವೇಳೆ ನೀವು ಬೇರೆಯವರ ಬಟ್ಟೆಗಳನ್ನು ಒಗೆಯುತ್ತಿರುವಂತೆ ಕನಸು ಕಂಡರೆ, ಅದು ನಿಮ್ಮ ಜೀವನದ ಆದ್ಯತೆಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಅಂದರೆ, ನೀವು ನಿಮ್ಮ ಸ್ವಂತ ಹಿತಾಸಕ್ತಿಗಿಂತ ಇತರರ ಕಾಳಜಿ ಮತ್ತು ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೀರಿ ಎಂದರ್ಥ. ಇತರರಿಗೆ ಸಹಾಯ ಮಾಡುವ ಭರದಲ್ಲಿ ನಿಮ್ಮನ್ನು ನೀವು ನಿರ್ಲಕ್ಷಿಸುತ್ತಿದ್ದೀರಿ ಎಂದು ಈ ಕನಸು ಎಚ್ಚರಿಸುತ್ತದೆ. ಆದ್ದರಿಂದ ಈಗ ನಿಮ್ಮ ಸ್ವಂತ ಅಗತ್ಯಗಳು ಮತ್ತು ಅಭಿವೃದ್ಧಿಯ ಬಗ್ಗೆಯೂ ಗಮನ ಹರಿಸುವ ಸಮಯ ಬಂದಿದೆ ಎಂದು ಇದು ನೆನಪಿಸುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ನದಿಯಲ್ಲಿ ಬಟ್ಟೆ ಒಗೆಯುತ್ತಿರುವುದು:

ನದಿ ಅಥವಾ ಸರೋವರದಂತಹ ಪವಿತ್ರ ಜಲಮೂಲಗಳಲ್ಲಿ ಬಟ್ಟೆ ಒಗೆಯುವ ಕನಸು ಬಿದ್ದರೆ ಅದು ಆಧ್ಯಾತ್ಮಿಕ ಶುದ್ಧೀಕರಣದ ಸಂಕೇತವಾಗಿದೆ. ನೀವು ನಿಮ್ಮ ಮನಸ್ಸು ಮತ್ತು ಆತ್ಮವನ್ನು ಉತ್ತಮಗೊಳಿಸುವ ಹಾದಿಯಲ್ಲಿ ಸಾಗುತ್ತಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ. ಇಂತಹ ಕನಸು ಬಿದ್ದರೆ ದೀರ್ಘಕಾಲದಿಂದ ನಿಂತುಹೋದ ಕೆಲಸಗಳು ಇತರರ ಸಹಕಾರದೊಂದಿಗೆ ಪೂರ್ಣಗೊಳ್ಳುತ್ತವೆ. ಅಷ್ಟೇ ಅಲ್ಲದೆ, ಉದ್ಯೋಗದಲ್ಲಿ ಬಡ್ತಿ ಅಥವಾ ವ್ಯವಹಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version