ದಾವಣಗೆರೆ, ಏಪ್ರಿಲ್ 16: ಪಂಚಮಸಾಲಿ ಸಮಾಜ ಟ್ರಸ್ಟ್ನ ಸದಸ್ಯ ಎಚ್.ಎಸ್. ನಾಗರಾಜ್ ಅವರು ವಚನಾನಂದ ಶ್ರೀಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಚನಾನಂದ ಶ್ರೀಗಳು ರಾಜ್ಯದ ಹಿರಿಯ ಮತ್ತು ಪ್ರಮುಖ ರಾಜಕೀಯ ನಾಯಕರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ಈ ರೆಕಾರ್ಡಿಂಗ್ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಭ್ಯಾಸ ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಇಂತಹ ನಡೆ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ನಾಯಕರಿಗೆ ತೀವ್ರ ಅಪಾಯಕಾರಿ ಎಂದು ನಾಗರಾಜ್ ಎಚ್ಚರಿಸಿದದ್ದು, ಯಾವುದೇ ನಾಯಕರು ಶ್ರೀಗಳೊಂದಿಗೆ ಫೋನ್ನಲ್ಲಿ ಮಾತನಾಡದಂತೆ ಮನವಿ ಮಾಡಿದ್ದಾರೆ.
ಬೆಂಗಳೂರು, ಏಪ್ರಿಲ್ 16: ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ನಾಯಕರಿಗೆ ಟಿಕೆಟ್ ನಿರಾಕರಣೆ ಮತ್ತು ಪಕ್ಷದೊಳಗಿನ ಅವರ ಸ್ಥಾನಮಾನದ ಕುರಿತು ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರು ಇದೀಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ನ ನಿರ್ಧಾರವನ್ನು ಬೆಂಗಳೂರಿನಲ್ಲಿ ಕಟುವಾಗಿ ಟೀಕಿಸಿರುವ ಮುಖಂಡರು, ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ನಡೆ ಪ್ರಶ್ನಾರ್ಹವಾಗಿದೆ ಎಂದು ಹೇಳಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ಪುತ್ರ ಸಚಿವ, ಅವರ ಪತ್ನಿ ಸಂಸದೆ, ಈಗ ಮಗನಿಗೆ ಉಪಚುನಾವಣೆ ಟಿಕೆಟ್ ನೀಡಿರುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಒಂದು ಉಪಚುನಾವಣೆಗಾಗಿ ಮತ್ತು ಒಂದು ಕುಟುಂಬಕ್ಕಾಗಿ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ದಾವಣಗೆರೆ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಟಿಕೆಟ್ ಕೋರಿದ್ದಾಗ, ಶಿವಶಂಕರಪ್ಪ ಅವರು ಹಾಲಿ ಶಾಸಕರಾಗಿರುವುದರಿಂದ ಅವರಿಗೆ ಟಿಕೆಟ್ ನೀಡುವುದು ಅಗತ್ಯ ಎಂದು ಪಕ್ಷ ಹೇಳಿತ್ತು. ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಈಗ ವಂಚಿಸಲಾಗಿದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಲಾಹೋರ್, ಏಪ್ರಿಲ್ 16: ಲಾಹೋರ್(Lahore)ನಲ್ಲಿ ಲಷ್ಕರ್- ಎ- ತೊಯ್ಬಾದ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಯಾವಾಗಲೂ ಪಾಕಿಸ್ತಾನದ ಭದ್ರತಾ ಸಂಸ್ಥೆಗಳ ಕಣ್ಗಾವಲಿನಲ್ಲಿರುತ್ತಿದ್ದ ಹಮ್ಜಾನನ್ನು ಗುರಿಯಾಗಿಸಿಕೊಂಡು ಬಂದೂಕುಧಾರಿಗಳು ಹೊಂಚು ಹಾಕಿದ್ದರು. ಲಾಹೋರ್ನ ರಸ್ತೆಯಲ್ಲಿ ಆತ ಸಾಗುತ್ತಿದ್ದಾಗ ಹಠಾತ್ ದಾಳಿ ನಡೆಸಿದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಹಮ್ಜಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಆತನ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.
ಯಾರು ಈ ಅಮೀರ್ ಹಮ್ಜಾ?
ಭಯೋತ್ಪಾದಕ ಜಗತ್ತಿನಲ್ಲಿ ಹಮ್ಜಾ ಕೇವಲ ಉಗ್ರನಲ್ಲ, ಬದಲಿಗೆ ಆತ ಲಷ್ಕರ್ ಸಂಘಟನೆಯ ಸೈದ್ಧಾಂತಿಕ ಪ್ರಚಾರಕ. ಹಾಫೀಜ್ ಸಯೀದ್ ನಂತರ ಲಷ್ಕರ್ ಸಂಘಟನೆಯಲ್ಲಿ ಎರಡನೇ ಅತಿದೊಡ್ಡ ನಾಯಕ ಎಂದು ಈತನನ್ನು ಪರಿಗಣಿಸಲಾಗುತ್ತದೆ.
ಈತ ತನ್ನ ಉದ್ರಿಕ್ತ ಭಾಷಣಗಳಿಂದ ಯುವಕರನ್ನು ಉಗ್ರರನ್ನಾಗಿ ಮಾಡುತ್ತಿದ್ದ. ಉಗ್ರಗಾಮಿ ಸಿದ್ಧಾಂತದ ಮೇಲೆ ಹಲವು ಪುಸ್ತಕಗಳನ್ನು ಬರೆದಿದ್ದಾನೆ ಮತ್ತು ಲಷ್ಕರ್ನ ಅಧಿಕೃತ ಪತ್ರಿಕೆಯ ಸಂಪಾದಕನೂ ಆಗಿದ್ದಾನೆ. ಲಷ್ಕರ್ ಸಂಘಟನೆಗೆ ಕೋಟ್ಯಂತರ ರೂಪಾಯಿ ನಿಧಿ ಸಂಗ್ರಹಿಸುತ್ತಿದ್ದ ಕಾರಣಕ್ಕೆ ಅಮೆರಿಕ ಈತನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಪಟ್ಟಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಲು ಈತ ‘ಜೈಶ್-ಎ-ಮನ್ಕಾಫಾ’ ಎಂಬ ಹೊಸ ಸಂಘಟನೆಯನ್ನು ಹುಟ್ಟುಹಾಕಿದ್ದ.
ದಾಳಿಕೋರರ ಭಯ
ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರು ಒಬ್ಬೊಬ್ಬರಾಗಿ ಹತ್ಯೆಯಾಗುತ್ತಿದ್ದಾರೆ ಅಥವಾ ಅವರ ಮೇಲೆ ದಾಳಿ ನಡೆಯುತ್ತಿದೆ. ಈ ಬಾರಿಯೂ ಅಪರಿಚಿತ ವ್ಯಕ್ತಿಗಳು ಅತ್ಯಂತ ಯೋಜಿತವಾಗಿ ಹಮ್ಜಾನನ್ನು ಗುರಿಯಾಗಿಸಿಕೊಂಡಿರುವುದು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್ಐ (ISI)ಗೆ ನಡುಕ ಹುಟ್ಟಿಸಿದೆ.
ದಾಳಿಯ ನಂತರ ಲಾಹೋರ್ನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದರೂ, ದಾಳಿಕೋರರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹಮ್ಜಾ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದ್ದು, ಇದು ಲಷ್ಕರ್ ಸಂಘಟನೆಗೆ ಬಿದ್ದ ದೊಡ್ಡ ಹೊಡೆತವಾಗಿದೆ.
ಬೆಂಗಳೂರು, ಏಪ್ರಿಲ್ 16: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಿರ್ಧಾರಗಳು ಮುಸ್ಲಿಂ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮೌಲಾನಾ ಶಬ್ಬೀರ್ ಅಹ್ಮದ್ ನದ್ವಿ ಹಾಗೂ ಮುಸ್ಲಿಂ ಸಮುದಾಯದ ಇತರ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ, ಮೃತಪಟ್ಟ ನಾಯಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಪಕ್ಷದ ಸಂಪ್ರದಾಯ ಇದೆ. ಆದರೆ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮಗ ಮಲ್ಲಿಕಾರ್ಜುನ ಈಗಾಗಲೇ ಶಾಸಕ ಮತ್ತು ಸಚಿವರಾಗಿದ್ದು, ಸೊಸೆ ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಬಾರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವುದಾಗಿ ಸಾರ್ವಜನಿಕವಾಗಿ ಹೇಳಲಾಗಿತ್ತು. ಸ್ಥಳೀಯ ದಾವಣಗೆರೆ ಜನ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಾಜ್ಯದ ಮುಸ್ಲಿಂ ಧಾರ್ಮಿಕ ನಾಯಕರು ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಸಲ್ಲಿಸಿ ಈ ಬಾರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ ದುರದೃಷ್ಟವಶಾತ್, ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದೆ ಮತ್ತೆ ಅದೇ ಶಾಮನೂರು ಕುಟುಂಬದವರಿಗೆ ಟಿಕೆಟ್ ನೀಡಿದ್ದರಿಂದ ಇಡೀ ದಾವಣಗೆರೆಯ ಮುಸ್ಲಿಂ ಸಮುದಾಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ ಎಂದು ಸಮುದಾಯದ ನಾಯಕರು ಹೇಳಿದ್ದಾರೆ.
ಕರ್ನಾಟಕದ 10 ಮುಸ್ಲಿಂ ಶಾಸಕರು ಮತ್ತು ನಾಲ್ಕು ಎಂಎಲ್ಸಿಗಳು ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಆದಾಗ್ಯೂ, ಚುನಾವಣೆಯ ನಂತರ ಎಂಎಲ್ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ ಪಡೆದಿರುವುದು ಮತ್ತು ಮುಖ್ಯಮಂತ್ರಿ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ವಜಾ ಮಾಡಲಾಗಿದೆ. ಒಂದು ಕುಟುಂಬಕ್ಕಾಗಿ ಕಾಂಗ್ರೆಸ್ ಈ ನಿಲುವು ತೆಗೆದುಕೊಂಡಿದೆ ಎಂದು ಮುಸ್ಲಿಂ ನಾಯಕರು ಪತ್ರಿಕಾಗೋಷ್ಠಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಷ್ಟು ವರ್ಷ ನಾಪತ್ತೆ ಆಗಿದ್ದ ದರ್ಶನ್ (Darshan) ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಅವರು ಈಗ ಮರಳಿ ಪತ್ತೆ ಆಗಿದ್ದಾರೆ. ಅವರು ಸುದ್ದಿಗೋಷ್ಠಿ ನಡೆಸಿ ಅಂದು ನಡೆದ ಘಟನೆ ವಿವರಿಸಿದ್ದಾರೆ. ಈ ವೇಳೆ ಅವರು ಇಷ್ಟು ವರ್ಷಗಳ ಕಾಲ ಎಲ್ಲಿದ್ದರು ಎಂಬ ಸತ್ಯವನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ, ಎಲ್ಲವನ್ನೂ ಬಿಟ್ಟು ಹೋಗುವುದರ ಹಿಂದಿನ ಉದ್ದೇಶ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.
‘ನನ್ನಿಂದ ಎಷ್ಟೋ ಜನಕ್ಕೆ ತೊಂದರೆ ಆಗಿದೆ, ನೋವಾಗಿದೆ. ಅವರೆಲ್ಲರಿಗೂ ಕ್ಷಮೆ ಕೇಳುತ್ತೇನೆ’ ಎಂದು ಮಾತು ಆರಂಭಿಸಿದರು. ‘ಇಂಜಿನಿಯರಿಂಗ್ ಮುಗಿಸಿ, ಅಸಿಸ್ಟಂಟ್ ಡೈರೆಕ್ಟರ್ ಆದ ನಂತರ ದರ್ಶನ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡಿದೆ. ಮೊದಲ ಸಲ ಸಿನಿಮಾ ಮಾಡಿದಾಗ ಅಂದುಕೊಂಡ ರೀತಿಯಲ್ಲಿ ಕೈ ಹಿಡಿಯಲಿಲ್ಲ. ಸಿನಿಮಾ ನಿರ್ಮಾಣ ಮಾಡಿದೆ, ಡಿಸ್ಟ್ರಿಬ್ಯೂಷನ್ ಮಾಡಿದೆ, ಹೋಟೆಲ್ ಬಿಸ್ನೆಸ್ ಮಾಡಿದೆ. ಯಾವುದೂ ಕೈ ಹಿಡಿಯಲಿಲ್ಲ’ ಎಂದು ಮಲ್ಲಿಕಾರ್ಜುನ ಹೇಳಿದರು.
ನಂತರ ಅವರು ಹಲವು ವಿಷಯದಲ್ಲಿ ಮಲ್ಲಿಕಾರ್ಜುನ ಕೈ ಸುಟ್ಟುಕೊಂಡರು. ಅವರು ಮೈತುಂಬ ಸಾಲ ಮಾಡಿಕೊಂಡರು. ನಂತರ ಸಾಯುವ ನಿರ್ಧಾರಕ್ಕೂ ಬಂದರು. ಆದರೆ, ಸಾಯುವ ನಿರ್ಧಾರದಿಂದ ಅವರು ಹಿಂದೆ ಸರಿದರು. ‘ಅಂದು ಕುಂದಾಪರದಿಂದ ಹೊರಟೆ. ಸವದತ್ತಿಗೆ ಬಂದೆ. ನನ್ನ ಗೆಳೆಯನ ಬಳಿ ಹಣ ಪಡೆದೆ. ಕೊಲ್ಲಾಪುರ, ಸೊಲ್ಲಾಪುರ, ಉತ್ತರ ಭಾರತ ಸೇರಿದಂತೆ ಅನೇಕ ಕಡೆ ಸುತ್ತಾಡಿದೆ. ಹಲವು ಜಾಗದಲ್ಲಿ ಕೆಲವು ದಿನ ಇರ್ತಿದ್ದೆ, ಬಿಟ್ಟು ಹೋಗ್ತಿದ್ದೆ. ಹೋಟೆಲ್, ರೆಸಾರ್ಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಕೆಲಸ ಮಾಡಿದೆ’ ಎಂದು ಅವರು ಹೇಳಿದ್ದಾರೆ.
‘ನನಗೆ ನೇಪಾಳದಲ್ಲಿ ಒಬ್ಬ ಗೆಳೆಯನಿದ್ದ. ಅವನ ಹೋಟೆಲ್ ಇತ್ತು. ಅಲ್ಲಿ ಸಾಕಷ್ಟು ಸಮಯ ಕಳೆದೆ. ನಾನು ಬದುಕಿದ್ದೀನಿ ಅಂತ ಮಿಸಸ್ಗೆ ಲೆಟರ್ ಬರೆದೆ. ತಾಯಿಗೂ ಬರೆದೆ. ನನಗೆ ಸಾಡೆಸಾತ್ ಇತ್ತು. ಈ ಕಾರಣಕ್ಕೆ ಅದು ಮುಗಿದ ಮೇಲೆ ಬಂದೆ. ಸತ್ಯ ಒಪ್ಪಿಕೊಳ್ಳಬೇಕು ಅಂತ ಅನಿಸಿತು. ತಂದೆ-ತಾಯಿ ತೀರಿದಾಗ ಬರೋಕೆ ಆಗಿಲ್ಲ. ಒಂದು ಹಿಡಿ ಮಣ್ಣು ಹಾಕೋಕೂ ಆಗಿಲ್ಲ. ಈಗ ನನಗೆ ತಪ್ಪಿತಸ್ಥ ಭಾವನೆ ಕಾಡುತ್ತಾ ಇತ್ತು’ ಎಂದು ಮಲ್ಲಿಕಾರ್ಜುನ ಹೇಳಿದರು.
‘ದಿನಕರ್ ಅವರನ್ನು ಕಳೆದ ವರ್ಷ ಭೇಟಿ ಮಾಡಿದೆ. ದರ್ಶನ್ನ ಭೇಟಿ ಮಾಡಬೇಕಿತ್ತು. ಆಗ ನನಗೆ ಪ್ಯಾರಲಿಸಿಸ್ ಆಯ್ತು. 7 ತಿಂಗಳು ಬೆಡ್ರೆಸ್ಟ್ ಮಾಡಬೇಕಾಯಿತು. ಮತ್ತೆ ರೆಡಿ ಆದೆ. ಒಂದೂವರೆ ತಿಂಗಳ ಹಿಂದೆ ಬಂದು ಸಾಲ ಕೊಟ್ಟ ಎಲ್ಲರನ್ನೂ ಕೇಳಿಕೊಂಡಿದ್ದೇನೆ. ಸೋತಿದ್ದೇನೆ, ಸತ್ತಿಲ್ಲ ಎಂದು ಹೇಳಿದೆ. ಎಲ್ಲರೂ ಪಾಸಿಟಿವ್ ಆಗಿ ಮಾತನಾಡಿ ಧೈರ್ಯ ಹೇಳಿದ್ದಾರೆ’ ಎಂದು ಅವರು ವಿವರಿಸಿದರು.
‘ ಸಾಲ ಮಾಡಿಕೊಂಡಾಗ ದರ್ಶನ್ ಬಳಿ 1 ಕೋಟಿ ರೂಪಾಯಿ ಸಹಾಯ ಕೇಳಿದೆ. ಅವರು ಕೊಟ್ಟರು. ಮತ್ತೆ ಕೇಳೋಕೆ ಮನಸ್ಸು ಬರಲಿಲ್ಲ. ನಾನು ಎಲ್ಲಿದ್ದೇನೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ತುಗುದೀಪ ಪ್ರೊಡಕ್ಷನ್ಸ್ ಚೆನ್ನಾಗಿ ನೋಡಿಕೊಂಡಿದೆ. ನಾನು ಅವರಿಗೆ ಮೋಸ ಮಾಡಿಲ್ಲ. ದರ್ಶನ್ ಬಳಿ ಕಷ್ಟ ಎಂದು ಹಣ ತೆಗೆದುಕೊಂಡಿದ್ದು ಅಷ್ಟೇ ಹೊರತು, ಮತ್ತೆ ಯಾವಾಗಲೂ ಹಣ ಮಾಡಿಲ್ಲ’ ಎಂದಿದ್ದಾರೆ ಅವರು.
‘ದರ್ಶನ್ ಅವರಿಗೆ ನಾನು ಸಾಲ ಮಾಡಿದ್ದೇನೆ ಅನ್ನೋದು ಗೊತ್ತಿತ್ತು. ಎಷ್ಟು ಸಾಲ ಮಾಡಿದ್ದೇನೆ ಅನ್ನೋದು ಗೊತ್ತಿರಲಿಲ್ಲ. ಅವರನ್ನು ಫೇಸ್ ಮಾಡೋಕೆ ಆಗಲ್ಲ ಅನ್ನೋದು ಗೊತ್ತಾಯ್ತು. ಅವರ ಮೇಲಿನ ಅಪಾರ ಗೌರವ ಊರನ್ನು ಬಿಡುವಂತೆ ಮಾಡಿತು’ ಎಂದಿದ್ದಾರೆ.
ಕೆಲವೊಮ್ಮೆ ಅಪರಾಧಗಳಿಗೆ ಕಾರಣಗಳೇ ಇರುವುದಿಲ್ಲ, ಅಪರಿಚಿತ ಮಹಿಳೆಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಮಕ್ಕಳು ತಮ್ಮ ಓಷಕರ ಕೈಹಿಡಿದು ನಡೆದುಕೊಂಡು ಹೋಗುತ್ತಿದ್ದರು. ಏಕಾಏಕಿ ಮಹಿಳೆ ಒಂದು ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ಏನಾಯಿತು ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮತ್ತೆ ಅದೇ ಮಗುವಿನ ಮೇಲೆ ದಾಳಿಗೆ ಮುಂದಾಗಿದ್ದಾರೆ. ಆಗ ತಾಯಿ ತಡೆದಾಗ ಅಲ್ಲೇ ಪಕ್ಕದಲ್ಲಿ ನಡೆದುಹೋಗುತ್ತಿದ್ದ ಮಗುವಿನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಈ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸೋಲು-ಗೆಲುವುಗಳ ಲೆಕ್ಕಾಚಾರದಲ್ಲೇ ತೊಡಗಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಎಡಗೈ ವೇಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ವೇಗಿ ಖಲೀಲ್ ಅಹ್ಮದ್ ಬಲಗಾಲಿನ ಸ್ನಾಯು ಸೆಳೆತದ (Right Quadricep Injury) ಸಮಸ್ಯೆಗೀಡಾಗಿದ್ದಾರೆ. ಈ ಸಮಸ್ಯೆಯ ಅವರು ಮುಂದಿನ ಪಂದ್ಯಗಳಿಗೆ ಅವರು ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಸಿಎಸ್ಕೆ ಮ್ಯಾನೇಜ್ಮೆಂಟ್ ತಿಳಿಸಿದೆ.
ಏಪ್ರಿಲ್ 14 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ನಡೆದ ಪಂದ್ಯದ ವೇಳೆ ಖಲೀಲ್ ಈ ಗಾಯಕ್ಕೆ ತುತ್ತಾಗಿದ್ದರು. ಪಂದ್ಯದ ಮಧ್ಯದಲ್ಲೇ ನೋವಿನಿಂದಾಗಿ ಅವರು ಮೈದಾನ ತೊರೆಯಬೇಕಾಯಿತು. ವೈದ್ಯಕೀಯ ತಪಾಸಣೆಯ ನಂತರ, ಸ್ನಾಯು ಸೆಳೆತದ ಸಮಸ್ಯೆಯು ಗಂಭೀರವಾಗಿರುವುದು ದೃಢಪಟ್ಟಿದೆ.
ಏಪ್ರಿಲ್ 14 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ನಡೆದ ಪಂದ್ಯದ ವೇಳೆ ಖಲೀಲ್ ಈ ಗಾಯಕ್ಕೆ ತುತ್ತಾಗಿದ್ದರು. ಪಂದ್ಯದ ಮಧ್ಯದಲ್ಲೇ ನೋವಿನಿಂದಾಗಿ ಅವರು ಮೈದಾನ ತೊರೆಯಬೇಕಾಯಿತು. ವೈದ್ಯಕೀಯ ತಪಾಸಣೆಯ ನಂತರ, ಸ್ನಾಯು ಸೆಳೆತದ ಸಮಸ್ಯೆಯು ಗಂಭೀರವಾಗಿರುವುದು ದೃಢಪಟ್ಟಿದೆ.
ಪ್ರತಿ ವರ್ಷ ಏಪ್ರಿಲ್ 16ರಂದು ವಿಶ್ವ ಧ್ವನಿ ದಿನವನ್ನು ಆಚರಿಸಲಾಗುತ್ತದೆ. ಮಾತು ಮನದ ಕನ್ನಡಿಯಾದರೆ, ಧ್ವನಿ ಜೀವದ ಪ್ರತಿಬಿಂಬವಾಗಿದೆ. ನಾವು ಮಾತನಾಡುವ ಪ್ರತಿಯೊಂದು ಪದ, ಹಾಡುವ ಪ್ರತಿಯೊಂದು ರಾಗ ಮತ್ತು ನಗುವ ಪ್ರತಿಯೊಂದು ಕ್ಷಣದಲ್ಲೂ ನಮ್ಮ ಧ್ವನಿ ನಮ್ಮ ಅಂತರಂಗದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಮಾನವನಿಗೆ ಪ್ರಕೃತಿ ನೀಡಿರುವ ಅತ್ಯಮೂಲ್ಯ ಕೊಡುಗೆಗಳಲ್ಲಿ ಧ್ವನಿಯೂ ಒಂದು. ಯಾವುದೇ ಯಂತ್ರಕ್ಕೂ ಸಂಪೂರ್ಣವಾಗಿ ನಕಲು ಮಾಡಲು ಸಾಧ್ಯವಿಲ್ಲದ ವಿಶಿಷ್ಟ ಗುರುತು ನಮ್ಮದಾಗಿದ್ದು, ಈ ಅಮೂಲ್ಯವಾದ ವರವನ್ನು ಗೌರವಿಸಲು ಮತ್ತು ಕಾಪಾಡಲು ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ.
ಈ ಆಚರಣೆಯ ಇತಿಹಾಸವನ್ನು ಗಮನಿಸಿದರೆ, 1999ರಲ್ಲಿ ಬ್ರೆಜಿಲ್ನಲ್ಲಿ ಮೊದಲ ಬಾರಿಗೆ “ವಾಯ್ಸ್ ಡೇ” ಆರಂಭವಾಯಿತು. ಕಿವಿ-ಮೂಗು-ಗಂಟಲು ತಜ್ಞರು ಹಾಗೂ ಭಾಷಣ ತಜ್ಞರು ಧ್ವನಿಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಿದರು. ನಂತರ 2002ರಲ್ಲಿ ಅಮೆರಿಕದ ಅಕಾಡೆಮಿ ಆಫ್ ಒಟೊಲಾರಿಂಗಾಲಜಿ ಇದನ್ನು ಜಾಗತಿಕವಾಗಿ ಅಂಗೀಕರಿಸಿತು. ಇಂದು ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಲ್ಲಿ ಧ್ವನಿಯ ಆರೋಗ್ಯ, ಗಂಟಲಿನ ಸಮಸ್ಯೆಗಳ ತಡೆಗಟ್ಟುವಿಕೆ ಮತ್ತು ಕಲೆ ಹಾಗೂ ವೃತ್ತಿಜೀವನದಲ್ಲಿ ಧ್ವನಿಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಬಳಸಿಕೊಳ್ಳಲಾಗುತ್ತಿದೆ.
ಆಯುರ್ವೇದದ ದೃಷ್ಟಿಕೋನದಲ್ಲಿ ಧ್ವನಿ ಎಂಬುದು ಕೇವಲ ಶಬ್ದವಲ್ಲ; ಅದು ಪ್ರಾಣಶಕ್ತಿ, ವಾಯು, ಮನಸ್ಸು ಮತ್ತು ದೇಹದ ಸಮತೋಲನದ ಫಲವಾಗಿದೆ. ಆಯುರ್ವೇದದ ಪ್ರಕಾರ ‘ಪ್ರಾಣ ವಾಯು’ ಧ್ವನಿಯ ಮೂಲವಾದರೆ, ‘ಉದಾನ ವಾಯು’ ಧ್ವನಿಯನ್ನು ಹೊರಹಾಕುವ ಶಕ್ತಿಯಾಗಿದೆ. ಇವುಗಳ ಸಮತೋಲನವಿದ್ದಾಗ ಮಾತ್ರ ಧ್ವನಿ ಮಧುರ ಮತ್ತು ಸ್ಪಷ್ಟವಾಗಿರುತ್ತದೆ. ಆದರೆ ಅತಿಯಾಗಿ ಕೂಗುವುದು, ತಣ್ಣೀರು ಅಥವಾ ಐಸ್ ಪದಾರ್ಥಗಳ ಸೇವನೆ, ಧೂಳು, ಮಾಲಿನ್ಯ, ಧೂಮಪಾನ ಮತ್ತು ಮಾನಸಿಕ ಒತ್ತಡದಿಂದ ಧ್ವನಿ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಬೆಚ್ಚಗಿನ ನೀರು ಕುಡಿಯುವುದು, ಪ್ರಾಣಾಯಾಮ ಮಾಡುವುದು ಮತ್ತು ಧ್ವನಿಗೆ ಅಗತ್ಯ ವಿಶ್ರಾಂತಿ ನೀಡುವುದು ಅತ್ಯಗತ್ಯ.
ಭಾರತೀಯ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆಯೇ ಧ್ವನಿ ವಿಜ್ಞಾನದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಮಹರ್ಷಿ ಚರಕರು ಧ್ವನಿಯನ್ನು ‘ಶಬ್ದ ತನ್ಮಾತ್ರ’ ಎಂದು ವಿವರಿಸಿ ಕಂಠರೋಗಗಳಿಗೆ ಚಿಕಿತ್ಸೆ ನೀಡಿದರೆ, ಸುಶ್ರುತರು ಧ್ವನಿ ತಂತಿಗಳ ರಚನೆಯನ್ನು ವಿವರಿಸಿದ್ದರು. ಪತಂಜಲಿ ಮಹರ್ಷಿಗಳು ಪ್ರಾಣಾಯಾಮದ ಮೂಲಕ ಧ್ವನಿ ಶಕ್ತಿಯನ್ನು ವೃದ್ಧಿಸುವ ಹಾದಿ ತೋರಿಸಿಕೊಟ್ಟರೆ, ಭರತ ಮುನಿಗಳು ನಾಟ್ಯಶಾಸ್ತ್ರದ ಮೂಲಕ ಧ್ವನಿಯನ್ನು ಕಲೆಯಾಗಿ ರೂಪಿಸಿದರು. ಈ ಮಹನೀಯರ ಕೊಡುಗೆಯಿಂದಾಗಿಯೇ ಇಂದು ನಮಗೆ ಧ್ವನಿಯನ್ನು ಶಕ್ತಿ, ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಸಾಧನೆಯಾಗಿ ಕಾಣಲು ಸಾಧ್ಯವಾಗಿದೆ.
ವಿಶೇಷವಾಗಿ ಗಾಯಕರು, ಶಿಕ್ಷಕರು ಮತ್ತು ವಾಗ್ಮಿಗಳಿಗೆ ಧ್ವನಿಯೇ ಜೀವನಾಧಾರ. ಇವರಿಗೆ ಧ್ವನಿ ಕುಂದುವುದು ಅಥವಾ ಗಂಟಲು ಭಾರವಾಗುವುದು ಸಾಮಾನ್ಯ ಸಮಸ್ಯೆಗಳಾಗಿವೆ. ಇಂತಹ ಸಂದರ್ಭಗಳಲ್ಲಿ ಆಯುರ್ವೇದದಲ್ಲಿ ‘ಸಪ್ತಪರ್ಣಿ’ ಅಥವಾ ‘ಮದ್ದಾಲೆ’ ಎಂಬ ವನಸ್ಪತಿಯನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಇದು ಗಂಟಲು ಉರಿಯನ್ನು ಕಡಿಮೆ ಮಾಡಿ, ಕಫ ನಿವಾರಿಸುವ ಮೂಲಕ ಧ್ವನಿ ತಂತಿಗಳನ್ನು ಬಲಪಡಿಸುತ್ತದೆ. ಒಟ್ಟಾರೆಯಾಗಿ, ಧ್ವನಿ ಎಂಬುದು ಕೇವಲ ಮಾತಲ್ಲ; ಅದು ನಮ್ಮ ಅಸ್ತಿತ್ವದ ಗುರುತು. ಅದನ್ನು ಪ್ರೀತಿಸುವುದು, ಗೌರವಿಸುವುದು ಮತ್ತು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದಿಕ್ ಕ್ಲಿನಿಕ್, ಶಿರಸಿ (9242122874)
ಮಂಗಳೂರು, ಏಪ್ರಿಲ್ 16: ಧರ್ಮಸ್ಥಳದಲ್ಲಿ ನೂರಾರು ಅಪರಿಚಿತ ಹೆಣ ಹೂಳಲಾಗಿದೆ ಎಂಬ ಆರೋಪ ಪ್ರಕರಣದ ಪ್ರಮುಖ ರೂವಾರಿಗಳಲ್ಲೊಬ್ಬರಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ‘ಬುರುಡೆ ಗ್ಯಾಂಗ್’ ಹೆಸರಿನ ಯಕ್ಷಗಾನ ಪ್ರಸಂಗ ಸಂಬಂಧ ಯಕ್ಷಗಾನ ಕಲಾವಿದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬೆದರಿಕೆ ಹಾಕಿರುವ ಆರೋಪ ತಿಮರೋಡಿ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಪುತ್ತೂರು ಮಹಿಳಾ ಠಾಣೆ ಮತ್ತು ಗ್ರಾಮಾಂತ್ರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಧರ್ಮಸ್ಥಳ ಪ್ರಕರಣವನ್ನೇ ಹೋಲುವು ಕಥೆ ಹೊಂದಿರುವ ‘ಬುರುಡೆ ಗ್ಯಾಂಗ್’ ಹೆಸರಿನ ಯಕ್ಷಗಾನ ಪ್ರಸಂಗ ನಿರ್ಮಾಣ ಮಾಡಲಾಗಿತ್ತು.ಇದರಿಂದ ರೊಚ್ಚಿಗೆದ್ದ ಮಹೇಶ್ ಶೆಟ್ಟಿ ತಿಮರೋಡಿ ಏಪ್ರಿಲ್ 11ರಂದು ಯಕ್ಷಗಾನ ಹಾಸ್ಯ ಕಲಾವಿಧ ಪ್ರಜ್ವಲ್ ಗುರುನಾಯನಕೆರೆಗೆ ಕರೆ ಮಾಡಿದ್ದರು. ಈ ವೇಳೆ ಕಲಾವಿದ ದಿನೇಶ್ ಶೆಟ್ಟಿಗಾರ್ ಮತ್ತು ಚಿತ್ರನಟ ಮಂದಾರ ಸುಂದರ ರೈ ಅವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಲ್ಲದೆ, ಅವರ ತಾಯಂದಿರ ಚಾರಿತ್ರ್ಯದ ಬಗ್ಗೆಯೂ ತೀರಾ ಕೆಟ್ಟದಾಗಿ ಮಾತನಾಡಿದ್ದರು. ಆ ಆಡಿಯೋವನ್ನು ದಿನೇಶ್ ಶೆಟ್ಟಿ ಮತ್ತು ಸುಂದರ ರೈಗೆ ಪ್ರಜ್ವಲ್ ಕಳುಹಿಸಿದ್ದು, ಅದನ್ನು ಕೇಳಿ ಕಲಾವಿದರು ತೀವ್ರ ನೊಂದಿದ್ದಾರೆ. ಈ ಹಿನ್ನೆಲೆ ಸುಂದರ ರೈ ನೀಡಿದ ದೂರಿನಡಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ತಿಮರೋಡಿ ವಿರುದ್ಧ FIR ದಾಖಲಾಗಿದ್ದರೆ, ದಿನೇಶ್ ಶೆಟ್ಟಿಗಾರ್ ತಾಯಿ ಲೀಲಾವತಿ ಶೆಟ್ಟಿಗಾರ್ ದೂರಿನಡಿ ಮಹಿಳಾ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ತೀರಾ ಅಂದರೆ ಅತಿ ಕೆಟ್ಟದಾದ ಪದಗಳನ್ನು ಯಕ್ಷಗಾನ ಕಲಾವಿದರ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಬಳಸಿರೋದು ಆಡಿಯೋದಲ್ಲಿವೆ. ಒಂದು ಮಗುವಿಗೆ ಅನ್ಯಾಯ ಆಗಿರುವ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇವರು ಅದನ್ನು ಹಾಸ್ಯ ಮಾಡುತ್ತಾರೆ. ಆ ಬಗ್ಗೆ ಕಥೆ ಬರೆಯುತ್ತಾರೆ. ಯಕ್ಷಗಾನ ಮಾಡಲಿ, ಹೊಟ್ಟೆಪಾಡಿಗೆ ಅದನ್ನು ಮಾಡುವುದು. ಆದರೆ ಈ ಕತೆ ಯಾಕೆ? ಅವರ ಕುಟುಂಬಸ್ಥರ ಕತೆಯನ್ನು ಮಾಡಬಹುದಿತ್ತು ಅಲ್ವಾ?. ಈ ರೀತಿಯದ್ದನ್ನು ಮಾಡುವ ಮೊದಲು ಜಾಗೃತೆ ಇರಬೇಕಿತ್ತು. ಯಕ್ಷಗಾನಕ್ಕೆ ಒಂದು ಮರ್ಯಾದೆ ಇದೆ ಅಲ್ಲವಾ? ಎಂದು ಮಹೆಶ್ ಶೆಟ್ಟಿ ತಿಮರೋಡಿ ಪ್ರಶ್ನಿಸಿರೋದನ್ನು ಆಡಿಯೋದಲ್ಲಿ ಕೇಳಬಹುದಾಗಿದೆ. ಜೊತೆಗೆ ಈ ವಿಷಯವನ್ನು ಅವರಿಗೆ ಮುಟ್ಟಿಸು ಎಂದೂ ತಿಮರೋಡಿ ಹೇಳಿರುವ ಮಾತುಗಳನ್ನು ಗಮನಿಸಬಹುದಾಗಿದೆ.
ಪ್ರತಿಷ್ಠಿತ ಅಂತರಾಷ್ಟ್ರೀಯ ಮ್ಯಾಗಜೀನ್ ‘ಟೈಮ್ಸ್’ ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವದ ಅತ್ಯಂತ ಪ್ರಭಾವಶಾಲಿ 100 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಟೈಮ್ಸ್ 100 ಪಟ್ಟಿಯಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಸಹ ಕೆಲವು ಭಾರತೀಯರು ಸ್ಥಾನ ಪಡೆದಿದ್ದಾರೆ. ಆದರೆ ಈ ಬಾರಿ ಈ ಪಟ್ಟಿಯಲ್ಲಿ ಕೇವಲ ಒಬ್ಬ ಭಾರತೀಯ ನಟ ಮಾತ್ರವೇ ಸ್ಥಾನ ಪಡೆದಿರುವುದು ವಿಶೇಷ. ಅದುವೇ ರಣ್ಬೀರ್ ಕಪೂರ್.
ಬಾಲಿವುಡ್ನ ಸ್ಟಾರ್ ನಟ, ಇದೀಗ ‘ರಾಮಾಯಣ’ ಸಿನಿಮಾ ಮೂಲಕ ಹಾಲಿವುಡ್ಗೂ ಹಾರುತ್ತಿರುವ ರಣ್ಬೀರ್ ಕಪೂರ್ ಅವರು ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇವರೊಟ್ಟಿಗೆ ಪ್ರಖ್ಯಾತ ಭಾರತೀಯ ಶೆಫ್ ವಿಕಾಸ್ ಖನ್ನಾ ಅವರು ಸಹ 100 ಪ್ರಭಾವಶಾಲಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ವಿಕಾಸ್ ಖನ್ನಾ ಅವರು ಅಂತರಾಷ್ಟ್ರೀಯ ಜನಪ್ರಿಯತೆ ಇರುವ ಬಾಣಸಿಗ ಆಗಿದ್ದು, ಹಲವು ದೇಶಗಳಲ್ಲಿ ತಮ್ಮ ರೆಸ್ಟೊರೆಂಟ್ಗಳನ್ನು ಹೊಂದಿದ್ದಾರೆ. ಹಲವು ವಿಶ್ವ ನಾಯಕರುಗಳಿಗೆ ವಿಶೇಷ ಖಾದ್ಯಗಳನ್ನು ಸಹ ಅವರು ಮಾಡಿದ್ದಾರೆ.
Ranbir Kapoor
ಟೈಮ್ಸ್ 100 ಪಟ್ಟಿಯಲ್ಲಿ ಈ ಬಾರಿ ಮೂವರು ಭಾರತೀಯರು ಮಾತ್ರವೇ ಸ್ಥಾನ ಪಡೆದಿದ್ದು, ರಣ್ಬೀರ್ ಕಪೂರ್, ವಿಕಾಸ್ ಖನ್ನಾ ಬಳಿಕ ಗೂಗಲ್ನ ಸಿಇಓ ಸುಂದರ್ ಪಿಚಾಯ್ ಅವರು ಸಹ ಈ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಸುಂದರ್ ಪಿಚಾಯ್ ಅಮೆರಿಕ ನಿವಾಸಿ ಆಗಿದ್ದರೂ ಸಹ ಅವರ ಮೂಲ ಭಾರತವೇ ಆಗಿದೆ. ವಿಶ್ವದ ಅತ್ಯಂತ ದೊಡ್ಡ ಮತ್ತು ಜನಪ್ರಿಯ ಸಂಸ್ಥೆಗಳಲ್ಲಿ ಒಂದಾಗಿರುವ ಗೂಗಲ್ನ ಸಿಇಓ ಆಗಿದ್ದಾರೆ ಸುಂದರ್ ಪಿಚಾಯ್.
ಟೈಮ್ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಒಬ್ಬ ಕಲಾವಿದನಿಗೆ ಜಾಗತಿಕ ಮಟ್ಟದಲ್ಲಿ ಸಿಗುವ ಅತ್ಯುನ್ನತ ಮನ್ನಣೆಗಳಲ್ಲಿ ಒಂದಾಗಿದೆ. ಈ ಹಿಂದೆ ಬಾಲಿವುಡ್ನ ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಅಂತಹ ನಟರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ರಣ್ಬೀರ್ ಕಪೂರ್ ಅವರು ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ರಣ್ಬೀರ್ ಕಪೂರ್ ಹೆಸರು ಸೇರಿಕೊಳ್ಳುತ್ತಿರುವುದು ಇದು ಮೊದಲೇ ಬಾರಿ ಆಗಿದೆ.
ರಣ್ಬೀರ್ ಕಪೂರ್ ನಟಿಸಿರುವ ಭಾರಿ ಬಜೆಟ್ ಸಿನಿಮಾ ‘ರಾಮಾಯಣ’ ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಬ್ರಹ್ಮಾಸ್ತ್ರ 2’ ಮತ್ತು ‘ಅನಿಮಲ್ ಪಾರ್ಕ್’ ಸಿನಿಮಾಗಳಲ್ಲಿ ರಣ್ಬೀರ್ ಕಪೂರ್ ನಟಿಸಲಿದ್ದಾರೆ.