ಸಖತ್ ತರ್ಲೆ, ಸಲ್ಮಾನ್ ಖಾನ್ ‘ಕವಿತೆ’ಗಳ ಬುಕ್ ಪ್ರಿಂಟ್ ಹಾಕಿಸಿದ ಜೆನ್ ಜಿಗಳು – Kannada News | ‘Bhai Ke Dohe’, the collection of the Salman Khan’s tweets

ಸಲ್ಮಾನ್ ಖಾನ್ (Salman Khan), ಬಾಲಿವುಡ್​​ನ ಸೂಪರ್ ಸ್ಟಾರ್ ನಟ. ಭಿನ್ನ ವ್ಯಕ್ತಿತ್ವದ, ಸಾಕಷ್ಟು ವಿವಾದಗಳನ್ನೂ ಹೊಂದಿರುವ ಆದರೆ ಅಷ್ಟೆ ದೊಡ್ಡ ಅಭಿಮಾನಿ ಬಳಗವನ್ನೂ ಹೊಂದಿರುವ ನಟ. ಟ್ರೋಲಿಗರಿಗಂತೂ ಬಲು ಪ್ರಿಯ ಸೆಲೆಬ್ರಿಟಿ ಸಲ್ಮಾನ್ ಖಾನ್. ಇತ್ತೀಚೆಗೆ ಜೆನ್ ಜಿಗಳ ಪ್ರತಿಭಟನೆಗೆ ಸಹ ಸಲ್ಮಾನ್ ಖಾನ್ ಬೆಂಬಲ ನೀಡಿದ್ದರು, ಅಲ್ಲದೆ, ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸುವಂತೆ, ಸೋನಂ ವಾಂಕ್ಚುಕ್ ಉಪವಾಸ ನಿಲ್ಲಿಸುವಂತೆ ಟ್ವೀಟ್ ಸಹ ಮಾಡಿದ್ದರು. ಇತರೆ ಸೆಲೆಬ್ರಿಟಿಗಳಂತೆ ‘ಪೊಲಿಟಿಕಲಿ ಕರೆಕ್ಟ್’ ಆದ ಟ್ವೀಟ್​​ಗಳನ್ನು ಸಲ್ಮಾನ್ ಖಾನ್ ಮಾಡುವುದಿಲ್ಲ, ಅವರಿಗೆ ತೋಚಿದ್ದನ್ನು ಬರೆಯುತ್ತಾರೆ. ಇದೀಗ ಈ ಜೆನ್​ ಜಿಗಳು ಸಲ್ಮಾನ್ ಖಾನ್ ಅವರ ಟ್ವೀಟ್​​ಗಳನ್ನೇ ಪ್ರಧಾನವಾಗಿರಿಸಿಕೊಂಡು ಸಖತ್ ತರ್ಲೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅದರಲ್ಲೂ ಆಗಾಗ್ಗೆ ಟ್ವೀಟ್​​ಗಳನ್ನು ಸಹ ಮಾಡುತ್ತಿರುತ್ತಾರೆ. ಅವರ ಟ್ವೀಟ್​​ಗಳು ಇತರೆ ಸೆಲೆಬ್ರಿಟಿಗಳ ಟ್ವೀಟ್​​ಗಳಿಗಿಂತಲೂ ಭಿನ್ನವಾಗಿರುತ್ತವೆ. ತಮಗೆ ತೊಚಿದ್ದನ್ನು ಟ್ವೀಟ್ ಮಾಡುತ್ತಾರೆ. ಇತ್ತೀಚೆಗಷ್ಟೆ ಸೋನಂ ವಾಂಕ್ಚುಕ್ ಅವರಿಗೆ ‘ಇಟ್ಸ್ ಡನ್ ಬ್ರೋ’ ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದರು. ಇದೇ ರೀತಿ ಹಲವಾರು ಬಾರಿ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಿದೆ. ಇದೀಗ ಈ ಜೆನ್ ಜೀ ಗಳು ಸಲ್ಮಾನ್ ಖಾನ್ ಅವರ ಎಲ್ಲ ಟ್ವೀಟ್​​ಗಳನ್ನು ಸಂಗ್ರಹಿಸಿ ಅವನ್ನು ಪುಸ್ತಕ ರೂಪದಲ್ಲಿ ಮುದ್ರಿಸಿದ್ದಾರೆ. ಪುಸ್ತಕಕಕ್ಕೆ ‘ಭಾಯಿ ಕೆ ದೋಹೆ’ ಎಂದು ಹೆಸರಿಟ್ಟಿದ್ದಾರೆ.

ಹಿಂದಿಯಲ್ಲಿ ‘ಕಬೀರ್​ ಕೆ ದೋಹೆ’ ಇನ್ನಿತರೆ ದೋಹೆಗಳು ಬಹಳ ಜನಪ್ರಿಯ ಮತ್ತು ಐತಿಹಾಸಿಕ. ಈಗ ಜೆನ್ ಜಿಗಳು ಸಲ್ಮಾನ್ ಖಾನ್ ಅವರ ಟ್ವೀಟ್​​ಗಳನ್ನೇ ಸಂಗ್ರಹಿಸಿ, ಸಂಪಾದಿಸಿ, ‘ಭಾಯಿ ಕಿ ದೋಹೆ’ ಎಂದು ಪುಸ್ತಕ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕ ಇದೀಗ ‘ದಿ ರಿಯಾಲ್ ಸ್ಟೋರ್ (theriyalstore) ವೆಬ್​ ಸೈಟ್​​ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಪುಸ್ತಕವನ್ನು 999 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:‘70 ಜನ ಒಂದೇ ಟಾಯ್ಲೆಟ್ ಬಳಸಬೇಕಿತ್ತು’: ಜೈಲು ದಿನಗಳ ಕಷ್ಟ ನೆನೆದ ಸಲ್ಮಾನ್ ಖಾನ್

ಪುಸ್ತಕದಲ್ಲಿ ಸಲ್ಮಾನ್ ಖಾನ್ ಅವರ ಪ್ರತಿ ಟ್ವೀಟ್​​ಗೆ ಅವರ ಅಪರೂಪದ ಕೆಲವು ಫೋಟೊಗಳನ್ನು ಸಹ ಮುದ್ರಿಸಲಾಗಿದೆ. ಕ್ರಿಯಾಶೀಲವಾಗಿ, ಬುದ್ಧಿವಂತಿಕೆಯಿಂದ ಫೋಟೊಗಳನ್ನು, ಟ್ವೀಟ್​​ಗಳನ್ನು ಪುಸ್ತಕದಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಮತ್ತೊಂದು ವಿಶೇಷವೆಂದರೆ ಪುಸ್ತಕ ಖರೀದಿ ಮಾಡಲು ವೆಬ್ ಸೈಟ್ ತೆರೆದರೆ ಅಲ್ಲಿ, ಸಲ್ಮಾನ್ ಅವರ ‘ಮೇ ಕರು ತೋ ಸಾಲಾ ಕ್ಯಾರೆಕ್ಟರ್ ಡೀಲಾ ಹೇ’ ಹಾಡು ಕೇಳಿ ಬರುತ್ತದೆ. ಈ ಹಾಡು ಸಹ, ಸಲ್ಮಾನ್ ಖಾನ್ ಅವರ ವೈಯಕ್ತಿಕ ಬದುಕಿನೊಂದಿಗೆ ಸಂಬಂಧ ಹೊಂದಿದೆ. ಬೇರೆಯವರು ಮಾಡಿದರೆ ಸರಿ, ನಾನು ಮಾಡಿದರೆ ತಪ್ಪು ಎಂಬ ಪ್ರಶ್ನೆಯನ್ನು ಸಲ್ಮಾನ್ ಕೇಳುತ್ತಿರುವಂತೆ ಈ ಹಾಡಿದೆ.

ಸಲ್ಮಾನ್ ಖಾನ್ ಅವರ ಇತ್ತೀಚೆಗಿನ ‘ಇಟ್ಸ್ ಓವರ್ ಬ್ರೋ’ ಇಂದ ಹಿಡಿದು ಅವರ ಹಲವು ಐಕಾನಿಕ್ ಟ್ವೀಟ್​​ಗಳು ಈ ಪುಸ್ತಕದಲ್ಲಿವೆ. ಪುಸ್ತಕವನ್ನು ಹಲವಾರು ಮಂದಿ ಖರೀದಿ ಮಾಡುತ್ತಿದ್ದಾರೆ. ಹಲವರು ಪುಸ್ತಕದ ಜೊತೆಗೆ ತಮ್ಮ ಚಿತ್ರಗಳನ್ನು ಸಹ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಾರೆ ಯಾರೋ ಜೆನ್-ಜಿ ಅದ್ಭುತವಾದ ಐಡಿಯಾ ಮಾಡಿ ಸಲ್ಮಾನ್ ಟ್ವೀಟ್​​ಗಳನ್ನು ಪುಸ್ತಕ ರೂಪದಲ್ಲಿ ಪಬ್ಲಿಷ್ ಮಾಡಿದ್ದಾನೆ ಜೊತೆಗೆ ಒಳ್ಳೆಯ ಹಣ ಸಹ ಗಳಿಸುತ್ತಿದ್ದಾನೆ. ಆದರೆ ಸಲ್ಮಾನ್ ಖಾನ್ ತಂಡದವರು ಇದರ ಮೇಲೆ ಯಾವುದೇ ಕೇಸು ಈ ವರೆಗೆ ಹಾಕದೇ ಇರುವುದು ಆಶ್ಚರ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:09 pm, Wed, 5 August 26

Source link

ಟೀಮ್ ಇಂಡಿಯಾದ ಬೆಸ್ಟ್ ಕೋಚ್ ಯಾರೆಂದು ತಿಳಿಸಿದ ಶಮಿ – Kannada News | Not Dravid or Gambhir! Shami Picks Shastri as Best Coach

ಭಾರತ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಹೆಡ್ ಕೋಚ್ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ರಾಹುಲ್ ದ್ರಾವಿಡ್ ಅಥವಾ ಪ್ರಸ್ತುತ ಕೋಚ್ ಗೌತಮ್ ಗಂಭೀರ್ ಅವರ ಬದಲಿಗೆ, ರವಿಶಾಸ್ತ್ರಿ ಅವರನ್ನು ತಮ್ಮ ಸಾರ್ವಕಾಲಿಕ ನೆಚ್ಚಿನ ಕೋಚ್ ಎಂದು ಹೆಸರಿಸಿದ್ದಾರೆ.

ಅನಿಲ್ ಕುಂಬ್ಳೆ, ರವಿಶಾಸ್ತ್ರಿ, ರಾಹುಲ್ ದ್ರಾವಿಡ್ ಮತ್ತು ಗೌತಮ್ ಗಂಭೀರ್ ಅವರಲ್ಲಿ ಯಾರು ಅತ್ಯುತ್ತಮ ಕೋಚ್ ಎಂಬ ಆಯ್ಕೆಯನ್ನು ಶಮಿ ಅವರಿಗೆ ನೀಡಲಾಗಿತ್ತು. ಇವರಲ್ಲಿ ಶಮಿ ಅವರ ಆಯ್ಕೆ ರವಿಶಾಸ್ತ್ರಿ ಎಂಬುದು ವಿಶೇಷ.

ರವಿಶಾಸ್ತ್ರಿ ಅವರನ್ನೇ ಆಯ್ಕೆ ಮಾಡಲು ಕಾರಣಗಳೇನು?

ರವಿಶಾಸ್ತ್ರಿ ಅವರ ಕೋಚಿಂಗ್ ಶೈಲಿಯಲ್ಲಿದ್ದ ಪ್ರಮುಖ ಅಂಶವೆಂದರೆ ಆಟಗಾರರಿಗೆ ನೀಡುತ್ತಿದ್ದ ಸ್ವಾತಂತ್ರ್ಯ. ಮೈದಾನದಲ್ಲಿ ಆಟಗಾರರು ಯಾವುದೇ ಒತ್ತಡವಿಲ್ಲದೆ ತಮ್ಮ ನೈಸರ್ಗಿಕ ಆಟವನ್ನು ಪ್ರದರ್ಶಿಸಲು ಶಾಸ್ತ್ರಿ ಮುಕ್ತ ಅವಕಾಶ ನೀಡುತ್ತಿದ್ದರು ಎಂದು ಶಮಿ ಶ್ಲಾಘಿಸಿದ್ದಾರೆ.

ಹಾಗೆಯೇ ರವಿಶಾಸ್ತ್ರಿ ಅವರಲ್ಲಿದ್ದ ಆಕ್ರಮಣಕಾರಿ ಗುಣ ಮತ್ತು ಉತ್ಸಾಹವು ಇಡೀ ತಂಡಕ್ಕೆ ಹರಡುತ್ತಿತ್ತು. ಇದು ತಂಡದಲ್ಲಿ ಯಾವುದೇ ತಂಡದ ವಿರುದ್ಧವೂ ಹೆದರದೆ ಹೋರಾಡುವ ಮನೋಭಾವವನ್ನು ಬೆಳೆಸಿತು. ವಿಶೇಷವಾಗಿ ವಿದೇಶಿ ನೆಲದಲ್ಲಿ ಭಾರತ ಐತಿಹಾಸಿಕ ಜಯ ದಾಖಲಿಸಲು ಈ ಧೈರ್ಯವೇ ಕಾರಣವಾಗಿತ್ತು ಎಂದು ಶಮಿ ನೆನೆದಿದ್ದಾರೆ.

ವೇಗಿಗಳಿಗೆ ಬೆಂಬಲ:

ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಅವರ ಅವಧಿಯಲ್ಲಿ ಭಾರತೀಯ ವೇಗದ ಬೌಲಿಂಗ್ ಪಡೆ ಜಾಗತಿಕ ಮಟ್ಟದಲ್ಲಿ ಅಧಿಪತ್ಯ ಸ್ಥಾಪಿಸಿತ್ತು. ಶಮಿ ಅವರ ವೃತ್ತಿಜೀವನದ ಅತ್ಯುತ್ತಮ ಟೆಸ್ಟ್ ಪ್ರದರ್ಶನಗಳು ಹೊರಬಂದಿದ್ದೂ ಇದೇ ಅವಧಿಯಲ್ಲಾಗಿದೆ. ಇದೇ ಕಾರಣದಿಂದಾಗಿ ಮೊಹಮ್ಮದ್ ಶಮಿ, ರವಿಶಾಸ್ತ್ರಿ ಅವರನ್ನು ಬೆಸ್ಟ್ ಕೋಚ್ ಎಂದಿದ್ದಾರೆ.

ಇತರ ಕೋಚ್‌ಗಳ ಬಗ್ಗೆ ಶಮಿ ಅಭಿಪ್ರಾಯ:

ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿಯೂ ತಾವು ಸಾಕಷ್ಟು ಸಮಯ ಕಳೆದಿದ್ದು, ಅವರಿಂದ ಕ್ರಿಕೆಟ್‌ನ ಹಲವು ಸೂಕ್ಷ್ಮ ವಿಷಯಗಳನ್ನು ಕಲಿತಿರುವುದಾಗಿ ಶಮಿ ಗೌರವಪೂರ್ವಕವಾಗಿ ಹೇಳಿದ್ದಾರೆ.

ಆದರೆ  ಪ್ರಸ್ತುತ ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ  ಹೆಚ್ಚಿನ ಪಂದ್ಯಗಳನ್ನು ಆಡದೇ ಇರುವ ಕಾರಣ, ಈ ಹಂತದಲ್ಲಿ ಅವರನ್ನು ಇತರರಿಗೆ ಹೋಲಿಸುವುದು ಕಷ್ಟ ಎಂದು ಶಮಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್ ರೆಡಿ!

ಕಂಬ್ಯಾಕ್ ನಿರೀಕ್ಷೆಯಲ್ಲಿ ಶಮಿ:

ಸದ್ಯ ಆಯ್ಕೆ ಸಮಿತಿಯ ನಿರ್ಧಾರಗಳಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿರುವ 35 ವರ್ಷದ ಮೊಹಮ್ಮದ್ ಶಮಿ, ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂಬರುವ 2027ರ ಏಕದಿನ ವಿಶ್ವಕಪ್‌ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತೆ ಟೀಮ್ ಇಂಡಿಯಾ ಜೆರ್ಸಿ ಧರಿಸಲು ಕಠಿಣ ಶ್ರಮಪಡುತ್ತಿರುವುದಾಗಿ ಶಮಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Source link

ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಮೇಲೆ ನೂತನ ಸಚಿವರ ಕಣ್ಣು: ಸಮಾಜ ಕಲ್ಯಾಣ ಇಲಾಖೆಗಾಗಿ ಭಾರಿ ಪೈಪೋಟಿ – Kannada News | Karnataka Cabinet Expansion: New Ministers Compete for Key Portfolios, Social Welfare Department in High Demand

ಬೆಂಗಳೂರು, ಆಗಸ್ಟ್​ 05: ಸಂಪುಟ ವಿಸ್ತರಣೆಯಾದ ಎರಡು ದಿನಗಳ ನಂತರವೂ ಕರ್ನಾಟಕದಲ್ಲಿ ಖಾತೆ ಹಂಚಿಕೆ ಅಂತಿಮವಾಗಿಲ್ಲ. ಸಚಿವರು ಪ್ರಬಲ ಖಾತೆಗಳಿಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ವಿಶೇಷವಾಗಿ, ಸಮಾಜ ಕಲ್ಯಾಣ ಇಲಾಖೆಯ ಮೇಲೆ ಹಲವು ಪ್ರಮುಖ ನಾಯಕರು ಕಣ್ಣಿಟ್ಟಿದ್ದಾರೆ. ಆಹಾರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ತಮ್ಮ ಹಾಲಿ ಖಾತೆಯನ್ನು ಬದಲಿಸಿ ಸಮಾಜ ಕಲ್ಯಾಣ ಇಲಾಖೆಯನ್ನು ಪಡೆಯಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ. ಇದೇ ಖಾತೆಗೆ ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಮಾಜಿ ಸಚಿವರಾದ ಶಿವರಾಜ್ ತಂಗಡಗಿ ಸಹ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ! – Kannada News | Tamil Nadu Budget 2026: Government Hospital Newborns to Get 1 Gram Gold Ring

ಚೆನ್ನೈ, ಆಗಸ್ಟ್ 5: ತಮಿಳುನಾಡು ಟಿವಿಕೆ ಸರ್ಕಾರದ 2026ರ ಬಜೆಟ್ ಅನ್ನು ಹಣಕಾಸು ಸಚಿವ ಮಾರಿ ವಿಲ್ಸನ್ ಮಂಡಿಸಿದ್ದಾರೆ. ಇದು ಅವರ ಮೊದಲ ಆಯವ್ಯಯ ಮಂಡನೆಯಾಗಿದ್ದು, ಮಹಿಳೆಯರು ಹಾಗೂ ಯುವಜನತೆಗೆ ಗಮನಾರ್ಹ ಕೊಡುಗೆಗಳನ್ನು ಘೋಷಿಸಿದ್ದಾರೆ. ಬಜೆಟ್‌ನಲ್ಲಿ ಘೋಷಿಸಲಾದ ಪ್ರಮುಖ ಯೋಜನೆಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಮಗುವಿಗೆ ಒಂದು ಗ್ರಾಂ ಚಿನ್ನದ ಉಂಗುರವನ್ನು ನೀಡುವ ಯೋಜನೆಯು ಸೇರಿದೆ. ಇದು ನವಜಾತ ಶಿಶುಗಳ ಕುಟುಂಬಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ. ಇದಲ್ಲದೆ, ಮದುವೆಯಾಗುವ ಹೆಣ್ಣುಮಕ್ಕಳಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯಡಿ, ಪ್ರತಿ ಹೆಣ್ಣು ಮಗಳಿಗೆ ಎಂಟು ಗ್ರಾಂ ಚಿನ್ನದ ನಾಣ್ಯ ಮತ್ತು ಒಂದು ಸೀರೆಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವ ದೃಷ್ಟಿಯಿಂದ, ಉಚಿತವಾಗಿ ಐದು ಮೇಕೆಗಳು ಮತ್ತು ಹಾಲು ನೀಡುವ ಒಂದು ಹಸುವನ್ನು ಒದಗಿಸುವ ಯೋಜನೆಯನ್ನು ಸಹ ಬಜೆಟ್‌ನಲ್ಲಿ ಸೇರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulunada Aati: ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿದೆ ಕರಾವಳಿಯ ವೈಭವ; ಆ 09 ರಂದು ಬೃಹತ್ ‘ತುಳುನಾಡ ಆಟಿ’ ಉತ್ಸವ – Kannada News | Grand ‘Tulunada Aati’ Cultural Fest to Be Held in Bengaluru on August 9

ಕರಾವಳಿಯ ವಿಶಿಷ್ಟ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಆಚರಣೆಗಳನ್ನು ರಾಜಧಾನಿ ಬೆಂಗಳೂರಿನ ಜನಮಾನಸಕ್ಕೆ ಪರಿಚಯಿಸುವ ಸದುದ್ದೇಶದಿಂದ ‘ಜೈ ತುಳುನಾಡ್ ಬೆಂಗಳೂರು (ರಿ.)’ ಸಂಸ್ಥೆಯು ಬೃಹತ್ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಂಡಿದೆ. ಬರುವ ಆಗಸ್ಟ್ 09, 2026 ರಂದು ಬೆಂಗಳೂರಿನ ಬಿಳೇಕಹಳ್ಳಿ ವಿಜಯ ಬ್ಯಾಂಕ್ ಕಾಲೋನಿಯಲ್ಲಿರುವ ಮುಲ್ಕಿ ಸುಂದರ್ ರಾಮ ಶೆಟ್ಟಿ ಸಭಾಂಗಣದಲ್ಲಿ ‘ತುಳುನಾಡ ಆಟಿ’ ಸಂಭ್ರಮವು ಅತ್ಯಂತ ವೈಭವದಿಂದ ಜರುಗಲಿದೆ. ತುಳುನಾಡಿನ ಮಣ್ಣಿನ ಸೊಗಡನ್ನು ಬಿಂಬಿಸುವ ಈ ಐತಿಹಾಸಿಕ ವೇದಿಕೆಯಲ್ಲಿ ಸುಮಾರು 10,000ಕ್ಕೂ ಅಧಿಕ ತುಳುನಾಡು ಮತ್ತು ಕರಾವಳಿ ಸಂಸ್ಕೃತಿ ಪ್ರೇಮಿಗಳು ಒಂದೇ ಕಡೆ ಸೇರುವ ನಿರೀಕ್ಷೆಯಿದೆ.

ದಿನಪೂರ್ತಿ ಕರಾವಳಿ ಕಲಾ ವೈಭವ ಮತ್ತು ಜಾನಪದ ಆಟಗಳು:

ಈ ಭವ್ಯ ಸಾಂಸ್ಕೃತಿಕ ಉತ್ಸವದ ಆಕರ್ಷಣೆಯಾಗಿ ತುಳುನಾಡಿನ ಅಪ್ಪಟ ಪರಂಪರೆಯನ್ನು ಸಾರುವ ವಿವಿಧ ಜನಪದ ಕಲಾಪ್ರದರ್ಶನಗಳು ನಡೆಯಲಿವೆ. ಕರಾವಳಿಯ ಜಾನಪದ ಕಲೆಗೆ ಮೆರುಗು ನೀಡುವ ಯಕ್ಷಗಾನ ಮತ್ತು ಸಾಂಪ್ರದಾಯಿಕ ಆಟಿ ಕಲೆಂಜಿ ಪ್ರದರ್ಶನಗಳು ಪ್ರಮುಖ ಕೇಂದ್ರಬಿಂದುವಾಗಿರಲಿವೆ. ಇದರೊಂದಿಗೆ ಉತ್ಸವದಲ್ಲಿ ಕರಾವಳಿಯ ಜಾನಪದ ಸೊಗಡಿನ ಕುಣಿತ ಭಜನೆ ಹಾಗೂ ಸಾಂಪ್ರದಾಯಿಕ ಆಟೋಟಗಳನ್ನು ಆಯೋಜಿಸಲಾಗಿದೆ. ಯುವ ಜನಾಂಗಕ್ಕೆ ತುಳು ಲಿಪಿ, ಭಾಷೆ ಹಾಗೂ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ತಿಳಿಸಿಕೊಡುವ ಮತ್ತು ಅವರಲ್ಲಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಗಳೂ ಈ ಸಂದರ್ಭದಲ್ಲಿ ನಡೆಯಲಿವೆ.

ರಾಜ್ಯ ಮತ್ತು ರಾಷ್ಟ್ರಮಟ್ಟದ ಗಣ್ಯಾತಿಗಣ್ಯರ ಸಾನ್ನಿಧ್ಯ:

ಈ ಬೃಹತ್ ಸಮಾರಂಭಕ್ಕೆ ಸಾಕ್ಷಿಯಾಗಲು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಮುಖ ರಾಜಕೀಯ ವ್ಯಕ್ತಿಗಳು, ಸಚಿವರು, ಶಾಸಕರು ಹಾಗೂ ಧಾರ್ಮಿಕ ಧುರೀಣರು ಆಗಮಿಸಲಿದ್ದಾರೆ. ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು. ಟಿ. ಖಾದರ್, ಮಾಜಿ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ, ಮತ್ತು ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ವೇದಿಕೆಯನ್ನು ಅಲಂಕರಿಸಲಿದ್ದಾರೆ. ಅಲ್ಲದೆ, ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಶ್ರೀ ಬಿ. ಗುಣರಂಜನ್ ಶೆಟ್ಟಿ, ಧಾರ್ಮಿಕ ಮುಖಂಡರಾದ ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿ ಹಾಗೂ ಅಳುಪ ರಾಜವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್ ಅವರ ವಿಶೇಷ ಉಪಸ್ಥಿತಿ ಇರಲಿದೆ.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಗೌರವ:

ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆಗೈದ ಸಾಧಕರನ್ನು ಈ ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಗುತ್ತಿದೆ. ಸಮಾಜ ಸೇವೆಗಾಗಿ ಶ್ರೀ ನವೀನ್ ಭಂಡಾರಿ, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಶ್ರೀಮತಿ ಮುಕ್ತ ಯು. ಶೆಟ್ಟಿ ಹಾಗೂ ತುಳು ಲಿಪಿ ಮತ್ತು ಭಾಷಾ ಸೇವೆಗಾಗಿ ಶ್ರೀ ನಿಧಿಶ್ ಶೆಟ್ಟಿ ಅವರಿಗೆ ವಿಶೇಷ ಸನ್ಮಾನ ನೆರವೇರಲಿದೆ.

ಸಮಸ್ತ ಸಂಸ್ಕೃತಿ ಪ್ರೇಮಿಗಳಿಗೆ ಆಯೋಜಕರ ಮುಕ್ತ ಆಹ್ವಾನ:

ತುಳುನಾಡಿನ ಭವ್ಯ ಕಲೆ, ಅಪ್ಪಟ ಸಂಸ್ಕೃತಿ ಮತ್ತು ಅನಾದಿ ಕಾಲದ ಆಚರಣೆಗಳನ್ನು ಎತ್ತಿಹಿಡಿಯುವ ಈ ವಿಶೇಷ ಉತ್ಸವಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕಾಗಿ ‘ಜೈ ತುಳುನಾಡ್ ಬೆಂಗಳೂರು (ರಿ.)’ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನಯ್ ಮಣಿಯಾನ ಹಾಗೂ ಕಾರ್ಯದರ್ಶಿ ಶ್ರೀ ಅಕ್ಷಯ್ ಆಚಾರ್ಯ ಅವರು ಪ್ರಕಟಣೆಯ ಮೂಲಕ ಸಮಸ್ತ ನಾಗರಿಕರಲ್ಲಿ ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

31 ಸಿಕ್ಸ್​, 445 ರನ್​ಗಳು: ದಿ ಹಂಡ್ರೆಡ್​ ಲೀಗ್​ನಲ್ಲಿ ಭರ್ಜರಿ ದಾಖಲೆ – Kannada News | Sunrisers Leeds Smash Record 241 in The Hundred

ಹೆಡಿಂಗ್ಲೇ ಮೈದಾನದಲ್ಲಿ ನಡೆದ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರನ್ ಹಾಗೂ ಸಿಕ್ಸರ್‌ಗಳ ಹೊಸ ಇತಿಹಾಸವೇ ಸೃಷ್ಟಿಯಾಗಿದೆ. ಲಂಡನ್ ಸ್ಪಿರಿಟ್ ವಿರುದ್ಧದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಅಬ್ಬರಿಸಿದ ಸನ್‌ರೈಸರ್ಸ್ ಲೀಡ್ಸ್ ತಂಡವು 100 ಎಸೆತಗಳಲ್ಲಿ ಬರೋಬ್ಬರಿ 241 ರನ್ ಪೇರಿಸಿದೆ. ಈ ಮೂಲಕ ದಿ ಹಂಡ್ರೆಡ್ ಲೀಗ್​ ಟೂರ್ನಿಯ ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ಟೀಮ್ ಸ್ಕೋರ್ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಡನ್ ಸ್ಪಿರಿಟ್ ತಂಡದ ನಾಯಕ ಲಿಯಾಮ್ ಲಿವಿಂಗ್​ಸ್ಟೋನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಲೀಡ್ಸ್ ಪರ ಆರಂಭಿಕ ದಾಂಡಿಗ ಮಿಚೆಲ್ ಮಾರ್ಷ್ 37 ಎಸೆತಗಳಲ್ಲಿ 76 ರನ್ ಬಾರಿಸಿದ್ದರು. ಇನ್ನು ರಯಾನ್ ರಿಕೆಲ್ಟನ್ 42 ಎಸೆತಗಳಲ್ಲಿ 94 ರನ್​ ಚಚ್ಚಿದರು. ಹಾಗೆಯೇ ಹ್ಯಾರಿ ಬ್ರೂಕ್ 18 ಎಸೆತಗಳಲ್ಲಿ 55 ರನ್ ಸಿಡಿಸಿದರು.

ಈ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಸನ್​ರೈಸರ್ಸ್ ಲೀಡ್ಸ್ ತಂಡವು 100 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 241 ರನ್​ ಕಲೆಹಾಕಿತು.

ದಾಖಲೆಗಳು ಧೂಳೀಪಟ:

  • ಸಾರ್ವಕಾಲಿಕ ಗರಿಷ್ಠ ಮೊತ್ತ: ಸನ್‌ರೈಸರ್ಸ್ ಲೀಡ್ಸ್ ಗಳಿಸಿದ 241 ರನ್ ದಿ ಹಂಡ್ರೆಡ್ ಲೀಗ್​ನಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್. ಈ ಮೂಲಕ ಓವಲ್ ಇನ್ವಿಸಿಬಲ್ಸ್ ತಂಡದ (226 ರನ್) ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ.
  • ದಾಖಲೆಯ ಆರಂಭಿಕ ಜೊತೆಯಾಟ: ಮಿಚೆಲ್ ಮಾರ್ಷ್ ಮತ್ತು ರಯಾನ್ ರಿಕಲ್ಟನ್ ಜೋಡಿ ಮೊದಲ ವಿಕೆಟ್‌ಗೆ ಕೇವಲ 65 ಎಸೆತಗಳಲ್ಲಿ 148 ರನ್‌ ಚಚ್ಚುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
  • ಒಂದೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್: ಸನ್​ರೈಸರ್ಸ್​ ಲೀಡ್ಸ್ ಬ್ಯಾಟರ್‌ಗಳು ಒಟ್ಟು 21 ಸಿಕ್ಸರ್‌ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಲಂಡನ್ ಸ್ಪಿರಿಟ್ ಫೈಟ್:

242 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಲಂಡನ್ ಸ್ಪಿರಿಟ್ ಪರ ಲಿಯಾಮ್ ಲಿವಿಂಗ್​ಸ್ಟೋನ್ ಕೇವಲ 13 ಎಸೆತಗಳಲ್ಲಿ 34 ರನ್ ಚಚ್ಚಿದರು. ಡೆವಾಲ್ಡ್ ಬ್ರೆವಿಸ್ 21 ಎಸೆತಗಳಲ್ಲಿ 38 ರನ್​ಗಳ ಕೊಡುಗೆ ನೀಡಿದರು.

ಇನ್ನು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೇವಿಡ್ ವಿಲ್ಲಿ ಅಕ್ಷರಶಃ ಅಬ್ಬರಿಸಿದರು. ಸನ್​ರೈಸರ್ಸ್ ಲೀಡ್ಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ವಿಲ್ಲಿ ಕೇವಲ 46 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 83 ರನ್ ಬಾರಿಸಿದರು. ಇದಾಗ್ಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 100 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡು 204 ರನ್​ಗಳಿಸುವ ಮೂಲಕ ಲಂಡನ್ ಸ್ಪಿರಿಟ್ ತಂಡವು 37 ರನ್​ಗಳಿಂದ ಸೋಲೊಪ್ಪಿಕೊಂಡಿತು.

  • ಈ ಪಂದ್ಯದಲ್ಲಿ ಸನ್​ರೈಸರ್ಸ್ ಲೀಡ್ಸ್ 11 ಸಿಕ್ಸ್ ಸಿಡಿಸಿದರೆ, ಲಂಡನ್ ಸ್ಪಿರಿಟ್ ತಂಡ 10 ಸಿಕ್ಸರ್​ಗಳನ್ನು ಬಾರಿಸಿದ್ದರು.
  • ಇದು ದಿ ಹಂಡ್ರೆಡ್ ಲೀಗ್ ಪಂದ್ಯವೊಂದರಲ್ಲಿ ಮೂಡಿಬಂದ ಗರಿಷ್ಠ ಸಿಕ್ಸರ್​ಗಳು ಎಂಬುದು ವಿಶೇಷ.
  • ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ 445 ರನ್​ಗಳು. ಇದು ಕೂಡ ದಿ ಹಂಡ್ರೆಡ್ ಲೀಗ್​ನಲ್ಲಿ ಮೂಡಿಬಂದ ಗರಿಷ್ಠ ಒಟ್ಟು ಸ್ಕೋರ್​.

ಸನ್​ರೈಸರ್ಸ್ ಲೀಡ್ಸ್ ಪ್ಲೇಯಿಂಗ್ 11:  ಮಿಚೆಲ್ ಮಾರ್ಷ್ , ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಝಾಕ್ ಕ್ರಾಲಿ (ನಾಯಕ) ,
ಹ್ಯಾರಿ ಬ್ರೂಕ್ , ಡಾನ್ ಲಾರೆನ್ಸ್ , ಮ್ಯಾಥ್ಯೂ ರೆವಿಸ್ , ಬ್ರೈಡನ್ ಕಾರ್ಸ್ , ಮ್ಯಾಥ್ಯೂ ಪಾಟ್ಸ್ , ನಾಥನ್ ಎಲ್ಲಿಸ್ , ರೀಸ್ ಟೋಪ್ಲಿ , ಅಬ್ರಾರ್ ಅಹ್ಮದ್.

ಇದನ್ನೂ ಓದಿ: ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್ ರೆಡಿ!

ಲಂಡನ್ ಸ್ಪಿರಿಟ್ ಪ್ಲೇಯಿಂಗ್ 11: ಲುವಾನ್-ಡ್ರೆ ಪ್ರಿಟೋರಿಯಸ್ , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್)
ಜೇಮ್ಸ್ ರೆವ್ , ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ) , ಡೆವಾಲ್ಡ್ ಬ್ರೆವಿಸ್ , ಜೇಮ್ಸ್ ಕೋಲ್ಸ್ , ಜೇಮೀ ಓವರ್ಟನ್ , ಡೇವಿಡ್ ವಿಲ್ಲಿ , ಆಂಡ್ರ್ಯೂ ಟೈ , ಆ್ಯಡಂ ಮಿಲ್ನ್, ಆ್ಯಡಂ ಝಂಪಾ.

Source link

ಬೆಂಗಳೂರು ಇಂಡಿಯಾ ನ್ಯಾನೋ 2026; ಎಐ, ನ್ಯಾನೋ, ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಕರ್ನಾಟಕ ಸಂಚಲನ – Kannada News | Bengaluru India Nano 2026, Karnataka continues to surge ahead in various technologies

ಬೆಂಗಳೂರು ಇಂಡಿಯಾ ನ್ಯಾನೋ 2026Image Credit source: bengaluruindianano.in

ಬೆಂಗಳೂರು, ಆಗಸ್ಟ್ 5: ದೇಶದ ಪ್ರಮುಖ ನ್ಯಾನೋ ತಂತ್ರಜ್ಞಾನ ಸಮಾವೇಶವಾದ ‘ಬೆಂಗಳೂರು ಇಂಡಿಯಾ ನ್ಯಾನೋ 2026’ (14ನೇ ಆವೃತ್ತಿ) ನಗರದ ‘ದಿ ಲಲಿತ್’ ಹೋಟೆಲ್‌ನಲ್ಲಿ ನಿನ್ನೆ ಮಂಗಳವಾರ ಉದ್ಘಾಟನೆಗೊಂಡಿತು. “Nanotech’s Next Frontier: AI & Beyond, Conceive, Converge, Commercialize” ಎಂಬ ಶೀರ್ಷಿಕೆಯಡಿಯಲ್ಲಿ ಈ ಮೂರು ದಿನಗಳ ಪ್ರಮುಖ ಸಮಾವೇಶ ನಡೆಯುತ್ತಿದೆ. ಆಗಸ್ಟ್ 3ರಂದೇ ಆರಂಭಗೊಂಡ ಈ ಸಮಾವೇಶ ಇವತ್ತು ಸಮಾಪನಗೊಳ್ಳುತ್ತಿದೆ. ಕರ್ನಾಟಕದ ತಂತ್ರಜ್ಞಾನ ಪ್ರೋತ್ಸಾಹದ ಮುಂದುವರಿದ ಭಾಗವಾಗಿ 2007ರಿಂದ ಎರಡು ವರ್ಷಕ್ಕೊಮ್ಮೆ ಈ ಬೆಂಗಳೂರು ನ್ಯಾನೋ ಸಮಾವೇಶ ನಡೆಯುತ್ತಾ ಬಂದಿದೆ.

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (KSTePS) ಹಾಗೂ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ (JNCASR) ಜಂಟಿಯಾಗಿ ಈ ಬಾರಿಯ ಕಾರ್ಯಕ್ರಮವನ್ನು ಆಯೋಜಿಸಿವೆ. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಶೋಧನೆಗಳನ್ನು ಕೇವಲ ಪ್ರಯೋಗಾಲಯಗಳಿಗೆ ಸೀಮಿತಗೊಳಿಸದೆ, ಅವುಗಳನ್ನು ನಿಜವಾದ ಉತ್ಪನ್ನಗಳಾಗಿ ಪರಿವರ್ತಿಸಿ ವಾಣಿಜ್ಯೀಕರಣಗೊಳಿಸುವುದರ ಅಗತ್ಯವನ್ನು ಪ್ರತಿಪಾದಿಸಿದರು.

ವಿವಿಧ ತಂತ್ರಜ್ಞಾನಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿ: ಡಿಕೆಶಿ

“ಕರ್ನಾಟಕವು ಈಗಾಗಲೇ ತಂತ್ರಜ್ಞಾನ ರಾಜಧಾನಿಯಾಗಿ ಹೊರಹೊಮ್ಮಿದೆ. ಮುಂಬರುವ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಮಾತ್ರವಲ್ಲದೆ ನ್ಯಾನೋ ತಂತ್ರಜ್ಞಾನ, ಸೆಮಿಕಂಡಕ್ಟರ್‌ಗಳು ಹಾಗೂ ಆಳವಾದ ತಂತ್ರಜ್ಞಾನ (Deep-tech) ಆವಿಷ್ಕಾರಗಳಲ್ಲಿಯೂ ರಾಜ್ಯವು ಮುಂಚೂಣಿಯಲ್ಲಿರಲಿದೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ: ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು

ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ಕೃತಕ ಬುದ್ಧಿಮತ್ತೆ (AI), ನ್ಯಾನೋ ತಂತ್ರಜ್ಞಾನ, ಬಯೋ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್‌ಗಳ ಸಮ್ಮಿಲನವು ಮುಂದಿನ ಆವಿಷ್ಕಾರದ ಅಲೆಯಾಗಿದ್ದು, ಕರ್ನಾಟಕವು ಇದಕ್ಕೆ ಸೂಕ್ತ ಇಕೋಸಿಸ್ಟಂ ಹೊಂದಿದೆ” ಎಂದರು.

ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಸನ್ಮಾನ

ಅದೇ ವೇಳೆ, ಭಾರತದ ನ್ಯಾನೋ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಗಾಗಿ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರನ್ನು ಗೌರವಿಸಲಾಯಿತು. ಈ ಬಾರಿಯ ‘ಪ್ರೊ. ಸಿ.ಎನ್.ಆರ್. ರಾವ್ ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್ ಅವಾರ್ಡ್’ ಅನ್ನು ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸಸ್ (CeNS) ನಿರ್ದೇಶಕರಾದ ಪ್ರೊ. ಬಿ.ಎಲ್.ವಿ. ಪ್ರಸಾದ್ ಅವರಿಗೆ ಪ್ರದಾನ ಮಾಡಲಾಯಿತು.

ಸಮಾವೇಶದ ಪ್ರಮುಖ ಆಕರ್ಷಣೆಗಳು

ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶವು ಭಾರತದ ಅತಿದೊಡ್ಡ ನ್ಯಾನೋ ಸಮಾವೇಶವಾಗಿದೆ. 10ಕ್ಕೂ ಹೆಚ್ಚು ದೇಶಗಳಿಂದ 800ಕ್ಕೂ ಅಧಿಕ ಪ್ರತಿನಿಧಿಗಳು ಸೇರಿದಂತೆ ನಾಲ್ಕು ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುತ್ತಿದ್ದಾರೆ. 80ಕ್ಕೂ ಅಧಿಕ ಭಾಷಣಗಳು ಈ ವೇಳೆ ನಡೆಯುತ್ತಿವೆ.

ಜರ್ಮನಿ, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳ ಸಹಯೋಗದೊಂದಿಗೆ ‘ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್’ (GIA) ಅಡಿಯಲ್ಲಿ ವಿಶೇಷ ಸಂಶೋಧನಾ ಗೋಷ್ಠಿಗಳು ಹಾಗೂ ಅಂತಾರಾಷ್ಟ್ರೀಯ ಪ್ರದರ್ಶನವೂ ಕಾರ್ಯಕ್ರಮದ ಭಾಗವಾಗಿ ನಡೆಯಲಿದೆ. ಅಪ್ಲೈಡ್ ಮೆಟೀರಿಯಲ್ಸ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಇಂಡಿಯನ್ ಆಯಿಲ್, ಡೆಟ್ರಾಯ್ಟ್ ಎಂಜಿನಿಯರ್ಡ್ ಪ್ರಾಡಕ್ಟ್ಸ್, ಅಪ್ಲೈಡ್ ಸೈನ್ಸ್ ರಾಮಯ್ಯ ವಿವಿ, ಎಸಿಟಿ ಎಂಟರ್​ಪ್ರೈಸ್ ಮತ್ತಿತರ ಸಂಘ ಸಂಸ್ಥೆಗಳು ಕಾರ್ಯಕ್ರಮದ ಪಾರ್ಟ್ನರ್ಸ್ ಆಗಿವೆ.

ಇದನ್ನೂ ಓದಿ: ಕಂಪನಿ ಎಂಡಿ ಮತ್ತು ನಿರ್ದೇಶಕರಾಗಲು 21 ಅಲ್ಲ, 18 ವರ್ಷ ವಯಸ್ಸಾಗಿದ್ದರೂ ಸಾಕು; ಸರ್ಕಾರದ ಮುಂದಿದೆ ಪ್ರಸ್ತಾಪ

ಅಡ್ವಾನ್ಸ್ಡ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ತಂತ್ರಜ್ಞಾನದ ಬಗ್ಗೆ ತರಗತಿಗಳು ನಡೆದಿವೆ. ವಿಜ್ಞಾನ ಮತ್ತು ಎಂಜಿನಿಯರಿಂಗ್​ನಲ್ಲಿ ಎಐ ಮತ್ತು ಎಂಎಲ್​ನ ಸಮರ್ಪಕ ಬಳಕೆ ಹೇಗೆ, ನ್ಯಾನೋ ತಂತ್ರಜ್ಞಾನದಲ್ಲಿ ಹೊಸ ಸುಧಾರಣೆ ಏನು ಇವುಗಳ ಬಗ್ಗೆಯೂ ಟುಟೋರಿಯನ್ಸ್ ಇವೆ.

ಸೆಮಿಕಂಡಕ್ಟರ್, ಕೃಷಿ, ಆರೋಗ್ಯ, ಇಂಧನ, ಪರಿಸರ ಕ್ಷೇತ್ರಗಳಲ್ಲಿ ನ್ಯಾನೋ ಟೆಕ್ನಾಲಜಿ ಬಳಕೆ ಬಗ್ಗೆ ತರಬೇತಿಗಳು ಇವೆ. ಡೀಪ್ ಟೆಕ್ ಬಗ್ಗೆಯೂ ವಿಚಾರ ಸಂಕಿರಣ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ನಟ ರವಿಚಂದ್ರನ್ – Kannada News | Actor Ravichandran Visits Karnataka CM DK. Shivakumars Residence in Bengaluru  

ಕನ್ನಡ ಚಿತ್ರರಂಗದ ಜನಪ್ರಿಯ ನಟ ರವಿಚಂದ್ರನ್ ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಅವರು ಭೇಟಿ ನಡೆದಿದ್ದು ಏಕೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ರವಿಚಂದ್ರನ್ ರಾಜಕೀಯದಲ್ಲಿ ಆ್ಯಕ್ಟಿವ್ ಆಗಿಲ್ಲ. ಹೀಗಾಗಿ, ಈ ಭೇಟಿ ಸಿನಿಮಾಗೆ ಸಂಬಂಧಿಸಿದ ವಿಷಯಕ್ಕೆ ನಡೆದಿರಬಹುದು ಎನ್ನಲಾಗುತ್ತಿದೆ. ರವಿಚಂದ್ರನ್ ಅವರು ಮರಳಿದ ಬಳಿಕ ಅಸಲಿ ವಿಷಯ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.
 

Source link

ಸಮಾಧಿಗಳ ನಡುವೆ ಕುಳಿತು ಇಲ್ಲಿನ ಸ್ಪೆಷಲ್‌ ಮಸಾಲ ಟೀ ರುಚಿ ಸವಿಯುವ ಗ್ರಾಹಕರು; ಇದು ಲಕ್ಕಿ ರೆಸ್ಟೋರೆಂಟ್ ವಿಶೇಷತೆ – Kannada News | Ahmedabad: Lucky Restaurant in Ahmedabad’s Lal Darwaza, situated amidst 26 graves

ಲಕ್ಕಿ ರೆಸ್ಟೋರೆಂಟ್ Image Credit source: Ahmedabad Insider

ಯಾರಾದ್ರೂ ನಿಮ್ಗೆ ಸಮಾಧಿಗಳ ನಡುವೆ ಕುಳಿತು ಚಹಾ ಕುಡಿಯುವ ಚಾಲೆಂಜ್ ಕೊಟ್ರೆ ನಿಮ್ಮರಿಯಾಕ್ಷನ್‌  ಹೇಗಿರುತ್ತದೆ ಒಮ್ಮೆ ಊಹಿಸಿ. ಹಾಗೇನಾದ್ರೂ ಚಹಾ ಬಿಡಿ ಗಂಟಲಲ್ಲಿ ಒಂದು ಗುಟುಕು ನೀರು ಕೂಡ ಗಂಟಲಲ್ಲಿ ಇಳಿಯಲ್ಲ. ಆದರೆ ನೀವೇನಾದ್ರೂ ಗುಜರಾತಿನ ಅಹಮದಾಬಾದ್‌ನ ಲಾಲ್ ದರ್ವಾಜಾದಲ್ಲಿರುವ (Ahmedabad’s Lal Darwaza) ಲಕ್ಕಿ ರೆಸ್ಟೋರೆಂಟ್ ಗೆ (lucky restaurant) ಹೋದ್ರೆ ಸಮಾಧಿಗಳ ನಡುವೆ ಕುಳಿತು ಉಪಹಾರ ಸೇವಿಸಬೇಕು. ಈ ರೆಸ್ಟೋರೆಂಟ್ ಗೆ 16 ನೇ ಶತಮಾನದ ಸೂಫಿ ಸಂತರಿಗೆ ಸೇರಿದ 26 ಸಮಾಧಿಗಳಿವೆ. ಆದರೆ ಈ ರೆಸ್ಟೋರೆಂಟ್‌ಗೆ ಬರುವ ಗ್ರಾಹಕರ ಸಂಖ್ಯೆ ಮಾತ್ರ ಇವತ್ತಿಗೂ ಕಡಿಮೆಯಾಗಿಲ್ಲ.

ಈ ರೆಸ್ಟೋರೆಂಟ್ ನಿರ್ಮಾಣವಾದದ್ದು ಯಾವಾಗ?

1950ರಲ್ಲಿ ಕೆ.ಎಚ್. ಮೊಹಮ್ಮದ್ ಭಾಯ್ ಎಂಬುವವರು ಸಣ್ಣ ಚಹಾ ಅಂಗಡಿಯಾಗಿ ಆರಂಭಿಸಿದ್ದರು. ಈ ಸಣ್ಣ ಚಹಾ ಅಂಗಡಿ ವಿಸ್ತರಣೆ ಮಾಡುವಾಗ ಅಲ್ಲಿ ಸೂಫಿ ಸಂತರಿಗೆ ಸೇರಿದ 26 ಸಮಾಧಿಗಳು ಇರುವುದು ತಿಳಿಯಿತು. ಆದರೆ, ಈ ಸ್ಮಶಾನವನ್ನು ತೆರವುಗೊಳಿಸದೇ, ಸಮಾಧಿಗಳ ನಡುವೆಯೇ ರೆಸ್ಟೋರೆಂಟ್ ನಿರ್ಮಾಣ ಮಾಡಲಾಯಿತು. ಈ ಸಮಾಧಿಯ ಸುತ್ತಲೂ ಕಬ್ಬಿಣದ ಸರಪಳಿಗಳು ಅಥವಾ ಗ್ರಿಲ್‌ಗಳನ್ನು ಅಳವಡಿಸಲಾಗಿದೆ.
ಈ ಹಿಂದೆ ಪ್ರಸಿದ್ಧ ವರ್ಣಚಿತ್ರಕಾರ ಮಕ್ಬುಲ್ ಫಿದಾ ಹುಸೇನ್ ಈ ಹೋಟೆಲ್‌ನ ಇಲ್ಲಿನ ಗ್ರಾಹಕರಾಗಿದ್ದರು. ಇಲ್ಲೇ ಕುಳಿತು ಚಿತ್ರ ಬಿಡಿಸುತ್ತಿದ್ದ ಅವರು ಈ ರೆಸ್ಟೋರೆಂಟ್ ಗೆ ತನ್ನ ಕೈಯಾರೆ ಬಿಡಿಸಿದ ವರ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರಂತೆ.

ಇದನ್ನೂ ಓದಿ: ಬೈಕ್ ಬದಲು ಕುದುರೆ ಏರಿ ಆಹಾರ ತಲುಪಿಸಲು ಹೊರಟ ಡೆಲಿವರಿ ಬಾಯ್

ಈ ರೆಸ್ಟೋರೆಂಟ್ ಯಾವುದಕ್ಕೆ ಫೇಮಸ್?

ಇಲ್ಲಿನ ಹೋಟೆಲ್ ಸಿಬ್ಬಂದಿ ಪ್ರತಿದಿನ ಬೆಳಗ್ಗೆ ಪ್ರತಿ ಸಮಾಧಿಗೂ ಹೂವುಗಳನ್ನು ಇಟ್ಟು ಗೌರವ ಸಲ್ಲಿಸುತ್ತಾರೆ. ನೀವೇನಾದ್ರೂ ಈ ರೆಸ್ಟೋರೆಂಟ್ ಗೆ ಹೋದ್ರೆ ಸಮಾಧಿಗಳ ನಡುವೆ ಕುಳಿತು ಸ್ಪೆಷಲ್ ಮಸಾಲಾ ಟೀ ಹಾಗೂ ಮಸ್ಕಾ ಬನ್ ತಿನ್ನುವುದು ಸವಿಯಬಹುದು. ಇದರ ಜತೆಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಖಾದ್ಯಗಳು ಇಲ್ಲಿ ಸಿಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:14 pm, Wed, 5 August 26

Source link

UGC Scholarship: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯುಜಿಸಿ ಗುಡ್​​ನ್ಯೂಸ್​; ವರ್ಷಕ್ಕೆ 1.5 ಲಕ್ಷ ರೂ. ವಿದ್ಯಾರ್ಥಿವೇತನ! – Kannada News | UGC Scholarship for PG Students: Get 1.5 Lakh per Year; Apply for NSPG Scheme

ಉನ್ನತ ಶಿಕ್ಷಣ ಹಾಗೂ ಸ್ನಾತಕೋತ್ತರ (PG) ಅಧ್ಯಯನವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಸಿಹಿ ಸುದ್ದಿ ನೀಡಿದೆ. ರಾಷ್ಟ್ರೀಯ ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿವೇತನ (NSPG) ಯೋಜನೆಯಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಯುಜಿಸಿ ಸಿದ್ಧತೆಗಳನ್ನು ಆರಂಭಿಸಿದೆ. ಈ ಯೋಜನೆಯಡಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಅವಧಿಗೆ ವಾರ್ಷಿಕ 1.5 ಲಕ್ಷ ರೂ. ವಿದ್ಯಾರ್ಥಿವೇತನ ಲಭ್ಯವಾಗಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಶೀಘ್ರದಲ್ಲೇ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) ನಲ್ಲಿ ಪ್ರಾರಂಭವಾಗಲಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ಪ್ರಮುಖ ನಿಯಮಗಳು:

ಈ ಯೋಜನೆಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ಪೂರ್ಣಾವಧಿಯ (Full-time) ಸ್ನಾತಕೋತ್ತರ ಕೋರ್ಸ್‌ನ ಮೊದಲ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅರ್ಜಿದಾರರ ವಯಸ್ಸು 30 ವರ್ಷಕ್ಕಿಂತ ಕಡಿಮೆ ಇರಬೇಕಾದುದು ಕಡ್ಡಾಯ. ಅರ್ಜಿ ಪ್ರಕ್ರಿಯೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ತಪ್ಪುಗಳಿಲ್ಲದೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಈಗಿನಿಂದಲೇ ಸಿದ್ಧಪಡಿಸಿಕೊಳ್ಳುವಂತೆ ಯುಜಿಸಿ ಸೂಚಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನಿರ್ದೇಶನ:

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಾಗವಾಗಿ ನಡೆಯಲು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಯುಜಿಸಿ ಪ್ರಮುಖ ನಿರ್ದೇಶನ ನೀಡಿದೆ. ಸಂಸ್ಥೆಗಳ ನೋಡಲ್ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಿದ 15 ದಿನಗಳ ಒಳಗೆ ಅವುಗಳನ್ನು ಪರಿಶೀಲಿಸಿ ಅನುಮೋದಿಸಬೇಕು ಅಥವಾ ಸೂಕ್ತ ಕಾರಣ ನೀಡಿ ತಿರಸ್ಕರಿಸಬೇಕು. ಇದರಿಂದಾಗಿ ಅರ್ಜಿ ಸಲ್ಲಿಕೆ ಪೋರ್ಟಲ್ ಮುಚ್ಚುವ ಮುನ್ನ ವಿದ್ಯಾರ್ಥಿಗಳಿಗೆ ತಮ್ಮ ಅರ್ಜಿಗಳಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಸಮಯ ಸಿಗಲಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವ ಮುನ್ನ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

ಅಪೂರ್ಣ ಅಥವಾ ತಪ್ಪಾದ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದರಿಂದ ವಿದ್ಯಾರ್ಥಿಗಳು ಎಚ್ಚರವಹಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರಗಳು, ಬ್ಯಾಂಕ್ ಖಾತೆ ವಿವರಗಳು ಹಾಗೂ ಆದಾಯ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‌ಲೈನ್ ಅರ್ಜಿಗಾಗಿ ಅಧಿಕೃತ ಪೋರ್ಟಲ್ scholarships.gov.in ಅನ್ನು ನಿಯಮಿತವಾಗಿ ಪರಿಶೀಲಿಸಲು ಸಲಹೆ ನೀಡಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version