SSLC ಪರೀಕ್ಷೆಯಲ್ಲಿ ಹಿಂದಿಗೆ ಗ್ರೇಡ್ ನೀಡಲು ಹೊರಟಿದ್ದ ಸರ್ಕಾರಕ್ಕೆ ತೀವ್ರ ಮುಖಭಂಗ: ಅಂಕ ನೀಡಲು ಹೈಕೋರ್ಟ್ ಆದೇಶ – Kannada News | Karnataka High Court Orders Marks for SSLC Hindi and 3rd language: Major Setback for Congress Government Grading Policy

SSLC ಪರೀಕ್ಷೆಯಲ್ಲಿ ಗ್ರೆಡಿಂಗ್ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶImage Credit source: tv9

ಬೆಂಗಳೂರು, ಏಪ್ರಿಲ್ 16: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Exam) ತೃತೀಯ ಭಾಷೆಗಳಿಗೆ (ಮುಖ್ಯವಾಗಿ ಹಿಂದಿಯನ್ನು ಗಮನದಲ್ಲಿಟ್ಟುಕೊಂಡು) ಕೇವಲ ಗ್ರೇಡ್ (Grading System) ನೀಡಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. ಹಿಂದಿ (Hindi) ವಿಷಯದಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಕಡ್ಡಾಯವಾಗಿ ದಾಖಲಿಸಬೇಕು ಮತ್ತು ಅವುಗಳನ್ನು ಒಟ್ಟು ಫಲಿತಾಂಶದ ಅಂಕಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮಹತ್ವದ ನಿರ್ದೇಶನ ನೀಡಿದೆ. ಇದು, ಸರ್ಕಾರದ ನಿರ್ಧಾರದಿಂದ ಆತಂಕಕ್ಕೊಳಗಾಗಿದ್ದ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ದೊಡ್ಡ ಸಮಾಧಾನ ತಂದುಕೊಟ್ಟಿದೆ.

ಹಿಂದಿ ವಿಷಯಕ್ಕೆ ಅಂಕಗಳ ಬದಲಿಗೆ ಕೇವಲ ಎ, ಬಿ, ಸಿ ಅಂತಹ ಗ್ರೇಡ್‌ಗಳನ್ನು ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್ ನಾಯ್ಕ್ ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಇಎಸ್ ಇಂದಿರೇಶ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಈ ಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಮಾರಕ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಶಿಕ್ಷಣ ಹಕ್ಕು ಮತ್ತು ಪರೀಕ್ಷಾ ನಿಯಮಾವಳಿಗಳ ಪ್ರಕಾರ ಪ್ರತಿ ವಿಷಯದ ಅಂಕಗಳು ಪಾರದರ್ಶಕವಾಗಿರಬೇಕು. ತೃತೀಯ ಭಾಷೆಯನ್ನು ಕೇವಲ ಗ್ರೇಡ್‌ಗೆ ಸೀಮಿತಗೊಳಿಸುವುದು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಪೀಠ ಎಚ್ಚರಿಸಿದೆ.

ತೃತೀಯ ಭಾಷೆ ಗ್ರೇಡಿಂಗ್ ವಿವಾದದ ಹಿನ್ನೆಲೆ

ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ತೃತೀಯ ಭಾಷೆ (ಹೆಚ್ಚಾಗಿ ಹಿಂದಿ, ಇತರ ಭಾಷೆಗಳು) ವಿಷಯಕ್ಕೆ ಸಂಬಂಧಿಸಿದಂತೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲು ಶಿಕ್ಷಣ ಇಲಾಖೆ ಆಸಕ್ತಿ ತೋರಿತ್ತು. ಇತ್ತೀಚೆಗೆ ಆ ಬಗ್ಗೆ ಅಧಿಕೃತ ಆದೇಶ ಘೋಷಣೆ ಮಾಡಿತ್ತು. ಪ್ರಥಮ ಮತ್ತು ದ್ವಿತೀಯ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ತೃತೀಯ ಭಾಷೆಗೆ ನೀಡದೆ, ಅದನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿತ್ತು. ಇದು ಹಿಂದಿ ಭಾಷಾ ಶಿಕ್ಷಕರ ಸಂಘ ಮತ್ತು ಪೋಷಕರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?

ಈ ವಿವಾದವು ಕೇವಲ ಅಂಕಗಳಿಗೆ ಸೀಮಿತವಾಗದೆ, ಭಾಷಾ ನೀತಿಯ ಸಂಘರ್ಷವಾಗಿಯೂ ಬದಲಾಗಿತ್ತು. ತೃತೀಯ ಭಾಷೆಗೆ ಅಂಕ ನೀಡದಿದ್ದರೆ ವಿದ್ಯಾರ್ಥಿಗಳು ಆ ವಿಷಯದ ಕಡೆಗೆ ಆಸಕ್ತಿ ಕಳೆದುಕೊಳ್ಳುತ್ತಾರೆ ಮತ್ತು ಇದು ಭವಿಷ್ಯದಲ್ಲಿ ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರಿಗೆ ಹಿನ್ನಡೆಯಾಗಬಹುದು ಎಂಬ ವಾದ ಕೇಳಿಬಂದಿತ್ತು. ಈಗ ಹೈಕೋರ್ಟ್ ನೀಡಿದ ಆದೇಶವು ಸರ್ಕಾರದ ಈ ವಿವಾದಾತ್ಮಕ ನಿರ್ಧಾರಕ್ಕೆ ಬ್ರೇಕ್ ಹಾಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs LSG: ಪಂತ್ ‘ಫಂಕಿ’ ಎಂಟ್ರಿ: ವಿಡಿಯೋ ವೈರಲ್

IPL 2026: ಐಪಿಎಲ್ 2026ರ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಹಣಾಹಣಿಯಲ್ಲಿ ಲಕ್ನೋ ತಂಡದ ನಾಯಕ ರಿಷಬ್ ಪಂತ್ ಅವರ ಎಂಟ್ರಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ಸಾಮಾನ್ಯವಾಗಿ ಆಟಗಾರರು ಮೈದಾನದ ಪ್ರವೇಶ ದ್ವಾರದ ಮೂಲಕ ಕ್ರೀಡಾಂಗಣಕ್ಕೆ ಬರುತ್ತಾರೆ.

ಆದರೆ, ರಿಷಭ್ ಪಂತ್ ಅವರು ಪಂದ್ಯದ ಆರಂಭದಲ್ಲಿ ಅನಿರೀಕ್ಷಿತವಾಗಿ ಮೈದಾನದ ಬದಿಯಲ್ಲಿದ್ದ ಜಾಹೀರಾತು ಬೋರ್ಡ್‌ಗಳನ್ನು ಜಂಪ್​ ಮಾಡಿಕೊಂಡು ಮೈದಾನದೊಳಗೆ ನುಗ್ಗಿದರು. ಪಂತ್ ಅವರ ಈ ‘ಫಂಕಿ’ ಶೈಲಿಯ ಎಂಟ್ರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಇನ್ನಿಂಗ್ಸ್‌ನ 5ನೇ ಓವರ್‌ನಲ್ಲಿ ಹೇಝಲ್‌ವುಡ್ ಎಸೆದ ವೇಗದ ಬೌನ್ಸರ್ ಚೆಂಡನ್ನು ಪುಲ್  ಮಾಡಲು ಪ್ರಯತ್ನಿಸಿದರು. ಆದರೆ, ಚೆಂಡು ಅವರ ಬ್ಯಾಟ್‌ಗೆ ತಗುಲುವ ಬದಲು ನೇರವಾಗಿ ಮೊಣಕೈ ಮೂಳೆಗೆ ಬಲವಾಗಿ ಅಪ್ಪಳಿಸಿತು.

ಕೈ ಬಿದ್ದ ಏಟಿನಿಂದ ಪಂತ್ ತೀವ್ರ ನೋವಿನಿಂದ ನರಳಿದರು. ತಂಡದ ಫಿಸಿಯೋ ಬಂದು ಚಿಕಿತ್ಸೆ ನೀಡಿದರೂ ನೋವು ಕಡಿಮೆಯಾಗದ ಕಾರಣ ಅವರು ಮೈದಾನದಿಂದ ಹೊರನಡೆದಿದ್ದರು. ಇದಾದ ಬಳಿಕ ತಂಡದ ಹಿತದೃಷ್ಟಿಯಿಂದ ಪಂತ್ 16ನೇ ಓವರ್‌ನಲ್ಲಿ ಮತ್ತೆ ಬ್ಯಾಟಿಂಗ್ ಮಾಡಲು ಬಂದರಾದರೂ, ಕೇವಲ 1 ರನ್ ಗಳಿಸಿ ಔಟಾದರು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ ಕೇವಲ 146 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಆರ್​ಸಿಬಿ ತಂಡ 15.1 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Source link

ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ರಾಯರ ದರ್ಶನಕ್ಕೆ ತೆರಳುತ್ತಿದ್ದ ಚಿಕ್ಕಬಳ್ಳಾಪುರದ 8 ಮಂದಿ ಭಕ್ತರು ಸಾವು – Kannada News | Tragic Road Accident Near Mantralaya: 8 Devotees from Chikkaballapur Killed in Bolero Tanker Collision

ರಾಯಚೂರು, ಏಪ್ರಿಲ್ 16: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಗ್ರಾಮದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಎಂಟು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಭಕ್ತರು ರಾಯರ ದರ್ಶನಕ್ಕಾಗಿ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ವಿವರ

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಒಟ್ಟು 21 ಮಂದಿ ಭಕ್ತರು ಬೊಲೆರೊ ವಾಹನದಲ್ಲಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಲ್ಲುದೇವಕುಂಟ ಬಳಿ ಎದುರುಗಡೆಯಿಂದ ಬಂದ ಸಿಮೆಂಟ್ ಮತ್ತು ಜಲ್ಲಿಕಲ್ಲು ತುಂಬಿದ್ದ ಟ್ಯಾಂಕರ್, ಬೊಲೆರೊ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆರು ಮಂದಿ ಭಕ್ತರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಉಳಿದ 13 ಭಕ್ತರನ್ನು ತಕ್ಷಣವೇ ಎಮಿಗನೂರು ಮತ್ತು ಕರ್ನೂಲ್ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದಾಗಿ ಮಂತ್ರಾಲಯಕ್ಕೆ ಹೋಗುವ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

(ಮಾಹಿತಿ ಅಪ್​ಡೇಟ್ ಆಗುತ್ತಿದೆ)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:26 am, Thu, 16 April 26

Source link

ಮಹಿಳಾ ನೌಕರರಿಗೆ ಗುಡ್ ನ್ಯೂಸ್: ತಿಂಗಳಿಗೆ ಒಂದು ದಿನ ‘ಋತುಸ್ರಾವ ರಜೆ’ ಕಡ್ಡಾಯ; ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ – Kannada News | Menstrual Leave in Karnataka: HC Orders Mandatory Implementation for All Women

ಬೆಂಗಳೂರು, ಏ.16: ಮಹಿಳೆಯರ ಆರೋಗ್ಯ ಮತ್ತು ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. 18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ‘ಋತುಸ್ರಾವ ರಜೆ’ (Menstrual Leave) ನೀತಿಯನ್ನು ರಾಜ್ಯ ಸರ್ಕಾರವು “ಕಟ್ಟುನಿಟ್ಟಾಗಿ ಮತ್ತು ನಂಬಿಕಸ್ತವಾಗಿ” ಜಾರಿಗೆ ತರಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಮಹಿಳೆಯರ ಮುಟ್ಟಿನ ರಜೆಗೆ ಅನುಮೋದನೆಯನ್ನು ನೀಡಿತ್ತು. ಆದರೆ ಕೆಲವೊಂದು ಕಂಪನಿಗಳು ಹಾಗೂ ಸಂಸ್ಥೆಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ನೀಡಲು ಹಿಂದೆ-ಮುಂದೆ ನೋಡುತ್ತಿದೆ. ಹಾಗಾಗಿ ಇದನ್ನು ಸರಿಯಾದ ರೀತಿಯಲ್ಲಿ ಹಾಗೂ ಕಡ್ಡಾಯವಾಗಿ ಜಾರಿಗೆ ತರುವಂತೆ ಆದೇಶವನ್ನು ಹೈಕೋರ್ಟ್​​ ನೀಡಿದೆ.

ನೋಂದಾಯಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ 18 ರಿಂದ 52 ವರ್ಷದೊಳಗಿನ ಎಲ್ಲಾ ಮಹಿಳಾ ನೌಕರರಿಗೆ ಈ ರಜೆ ಅನ್ವಯವಾಗುತ್ತದೆ. ಶಾಶ್ವತ, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ಈ ವಿಸ್ತರಣೆ ಮಾಡಬೇಕು ಎಂದು ಹೇಳಿದೆ.ಕೇವಲ ಸಾಫ್ಟ್‌ವೇರ್ ಅಥವಾ ದೊಡ್ಡ ಕಂಪನಿಗಳಲ್ಲದೆ, ಹೋಟೆಲ್ ಕೆಲಸಗಾರರು, ದಿನಗೂಲಿ ನೌಕರರು ಸೇರಿದಂತೆ ಅಸಂಘಟಿತ ವಲಯದ ಮಹಿಳೆಯರಿಗೂ ಈ ಸೌಲಭ್ಯ ತಲುಪುವಂತೆ ಮಾರ್ಗಸೂಚಿಗಳನ್ನು ಹೊರಡಿಸಲು ಸರ್ಕಾರಕ್ಕೆ ಸೂಚಿಸಲಾಗಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, “ಮಹಿಳೆಯರ ಋತುಸ್ರಾವದ ಆರೋಗ್ಯವು ಸಂವಿಧಾನದ 21ನೇ ವಿಧಿಯಡಿ ಬರುವ ‘ಬದುಕುವ ಹಕ್ಕಿನ’ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ರಜೆಯಲ್ಲ, ಮಹಿಳೆಯರ ಘನತೆಯ ಪ್ರಶ್ನೆ” ಎಂದು ಅಭಿಪ್ರಾಯಪಟ್ಟಿದೆ. ಪ್ರಸ್ತುತ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಜೊತೆಗೆ, ಈ ಕುರಿತು ಪ್ರಸ್ತಾವಿತ ‘ಕರ್ನಾಟಕ ಋತುಸ್ರಾವ ರಜೆ ಮತ್ತು ನೈರ್ಮಲ್ಯ ವಿಧೇಯಕ-2025’ ಅನ್ನು ಶೀಘ್ರವಾಗಿ ಕಾನೂನಾಗಿ ರೂಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ.

ಇದನ್ನೂ ಓದಿ: ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ರಾಯರ ದರ್ಶನಕ್ಕೆ ತೆರಳುತ್ತಿದ್ದ ಚಿಕ್ಕಬಳ್ಳಾಪುರದ 8 ಮಂದಿ ಭಕ್ತರು ಸಾವು

ಬೆಳಗಾವಿ ಜಿಲ್ಲೆಯ ಮೂಡಲಗಿಯ ಹೋಟೆಲ್ ನೌಕರರೊಬ್ಬರು ತಮಗೆ ರಜೆ ನೀಡುತ್ತಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಕೆಲವು ಉದ್ಯೋಗದಾತರ ಸಂಘಟನೆಗಳು ಈ ನೀತಿಯನ್ನು ವಿರೋಧಿಸಿದ್ದರೂ, ಮಹಿಳೆಯರ ಜೈವಿಕ ಅಗತ್ಯತೆಗಳನ್ನು ಗೌರವಿಸುವುದು ಸಮಾನತೆಯ ಸಂಕೇತ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮ್ಮನ್ನು ಬೆಂಬಲಿಸದವರನ್ನು ಅಮೆರಿಕದಲ್ಲೂ ನೆನಪಿಸಿಕೊಂಡ ಯಶ್ – Kannada News | Yash’s ‘Toxic’ Movie Global Ambition: Star Shines at CinemaCon 2026

ರಾಕಿಂಗ್ ಸ್ಟಾರ್ ಯಶ್ ಅವರ (Yash) ‘ಟಾಕ್ಸಿಕ್’ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್​​ನಲ್ಲೂ ಶೂಟ್​ ಆಗಿದೆ. ಈ ಸಿನಿಮಾ ಜೂನ್ 4ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಇದರ ಜೊತೆಗೆ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲೂ ಯಶ್ ನಟಿಸಿದ್ದಾರೆ. ಈಗ ಯಶ್ ಅವರು ಅಮೆರಿಕದ ಲಾಸ್ ಎಂಜಲೀಸ್​​ಗೆ ತೆರಳಿದ್ದಾರೆ. ಅಲ್ಲಿ ನಡೆದ ‘ಸಿನಿಮಾಕಾನ್ 2026’ರಲ್ಲಿ ಪಾಲ್ಗೊಂಡು ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಇಂಗ್ಲಿಷ್ ರಿಪೋರ್ಟರ್ ಒಬ್ಬರು ಯಶ್ ಬಳಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ‘ಟಾಕ್ಸಿಕ್’ ಟೀಸರ್ ಹೊಗಳಿದ್ದಾರೆ. ವಿಶ್ಯುವಲ್ಸ್​ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ನಮಗೆ ಇಲ್ಲಿ ಟಾಕ್ಸಿಕ್ ಸಿನಿಮಾದ ರೀತಿಯ ವಿಶ್ಯುವಲ್ಸ್ ಏಕೆ ಕಾಣಲ್ಲ’ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡಿದ್ದಾಗಿ ರಿಪೋರ್ಟರ್ ಹೇಳಿದ್ದಾರೆ. ಜೊತೆಗೆ ಸಿನಿಮಾ ಮಾಡುವಾಗ, ಆ್ಯಕ್ಷನ್ ಮಾಡುವಾಗ ಸಾಕಷ್ಟು ಫನ್ ಮಾಡಿದ್ದೀರಿ ಎನಿಸುತ್ತದೆ ಅಲ್ಲವೇ ಎಂದು ಯಶ್​​ಗೆ ಕೇಳಲಾಗಿದೆ.

‘ಟಾಕ್ಸಿಕ್ ತುಂಬಾನೇ ಮಹತ್ವಾಕಾಂಕ್ಷೆಯ ಸಿನಿಮಾ. ಜನರು ನನಗೆ ಯಶಸ್ಸು ಕೊಟ್ಟಿದ್ದು ಸೆಲೆಬ್ರೇಟ್ ಮಾಡಲಾಗಲಿ ಅಥವಾ ಫನ್ ಮಾಡೋದಕ್ಕಾಗಲಿ ಅಲ್ಲ. ಪ್ರತಿ ಬಾರಿ ದೊಡ್ಡ ಯಶಸ್ಸು ಸಿಕ್ಕಾಗ ಇನ್ನೂ ಉತ್ತಮವಾಗಿ ಮಾಡುವ ಜವಾಬ್ದಾರಿ ನನ್ನ ಮೇಲೆ ಇದೆ ಎಂದು ನನಗೆ ಸದಾ ಅನಿಸುತ್ತದೆ’ ಎಂದಿದ್ದಾರೆ ಯಶ್.

ಅಮೆರಿಕದಲ್ಲೂ ಯಶ್ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ಭಾರತದಲ್ಲಿ ನನ್ನನ್ನು ಜನರು ಸಾಕಷ್ಟು ಬೆಂಬಲಿಸಿದ್ದಾರೆ. ಭಾರತದ ಕಥೆ ಹಾಗೂ ಭಾರತ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಉದ್ದೇಶ’ ಎಂದು ಯಶ್ ಹೇಳಿದ್ದಾರೆ. ಅವರ ಹೇಳಿಕೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ.

ಇದನ್ನೂ ಓದಿ: ನೀವಂದುಕೊಂಡಂತಿಲ್ಲ ‘ಟಾಕ್ಸಿಕ್’, ಕಾಣುವುದೇ ಒಂದು, ಇರುವುದೇ ಒಂದು ಎಂದ ಯಶ್

ಯಶ್ ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಈಗ ಭಾರತ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕನಸು ಕಂಡು, ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಾಖಲೆಯಲ್ಲ… ಕಿಂಗ್ ಕೊಹ್ಲಿ ಆರ್ಭಟಕ್ಕೆ ವಿಶ್ವ ದಾಖಲೆಯೇ ಧೂಳೀಪಟ

Source link

ನಾರಿ ಶಕ್ತಿ ಕಾರ್ಯಕ್ರಮದಲ್ಲೇ ವಿದ್ಯಾರ್ಥಿನಿಗೆ ಅಪಮಾನ, ತೋಳಿಲ್ಲದ ಉಡುಪು ಧರಸಿದ್ದಕ್ಕೆ ಸಚಿವರಿದ್ದ ವೇದಿಕೆಗೆ ಬರದಂತೆ ತಡೆದ ಅಧಿಕಾರಿಗಳು – Kannada News | Nari Shakti Event Hypocrisy: DU Student Barred For Sleeveless Attire, Sparks Dress Code Debate

ನವದೆಹಲಿ, ಏಪ್ರಿಲ್ 16: ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ವೇದಿಕೆಯಲ್ಲೇ ವಿದ್ಯಾರ್ಥಿನಿಯೊಬ್ಬಳ ಉಡುಪಿನ ಕಾರಣಕ್ಕೆ ಆಕೆಗೆ ಅವಮಾನ ಮಾಡಿರುವ ಘಟನೆಯೊಂದು ದೆಹಲಿ ವಿಶ್ವವಿದ್ಯಾಲಯದಲ್ಲಿ (DU) ನಡೆದಿದೆ. ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ (SRCC) ಆಯೋಜಿಸಲಾಗಿದ್ದ ನಾರಿ ಶಕ್ತಿ(Nari Shakti) ಆಧಾರಿತ ಅಣಕು ಸಂಸತ್ತಿನ ಅಧಿವೇಶನದಲ್ಲಿ ಈ ಕಹಿ ಘಟನೆ ನಡೆದಿದೆ.

ನಡೆದಿದ್ದೇನು?
ದೌಲತ್ ರಾಮ್ ಕಾಲೇಜಿನ ವಿದ್ಯಾರ್ಥಿನಿ ಸಾರಾ ಶರ್ಮಾ, ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲು ಆಹ್ವಾನಿಸಲಾಗಿತ್ತು. ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಮುಖ್ಯ ಅತಿಥಿಯಾಗಿದ್ದ ಈ ಕಾರ್ಯಕ್ರಮಕ್ಕೆ ಸಾರಾ ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲೇ (ಸೂಟ್) ಹೋಗಿದ್ದರು. ಆದರೆ, ಅವರ ಉಡುಪಿಗೆ ತೋಳುಗಳಿಲ್ಲದ (Sleeveless) ಕಾರಣಕ್ಕೆ ವೇದಿಕೆ ಹತ್ತಲು ಬಿಟ್ಟಿಲ್ಲ.

ವಿದ್ಯಾರ್ಥಿನಿಯ ಆಕ್ರೋಶ
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಸಾರಾ, ಎಲ್ಲಾ ಜವಾಬ್ದಾರಿಗಳು ಹೆಣ್ಣುಮಕ್ಕಳಿಗೇ ಇರುವ ಸಮ್ಮೇಳನವಿದು. ಆದರೆ ನಾನು ವೇದಿಕೆ ಹತ್ತಲು ಹೋದಾಗ, ಅಧಿಕಾರಿಗಳು ನನ್ನನ್ನು ನೋಡಿ ನೀವು ಸ್ಲೀವ್‌ಲೆಸ್ ಬಟ್ಟೆ ಧರಿಸಿದ್ದೀರಿ, ಸಚಿವರನ್ನು ಸನ್ಮಾನಿಸಲು ನಿಮಗೆ ಅವಕಾಶವಿಲ್ಲ ಎಂದರು. ಎಲ್ಲರ ಮುಂದೆ ಅವರು ಹಾಗೆ ಹೇಳಿದ್ದು ನನಗೆ ಮುಜುಗರ ಮತ್ತು ಅಸಹ್ಯ ಉಂಟುಮಾಡಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ:  ಸಂಸತ್​​ನಲ್ಲಿ ಅಂಗೀಕಾರವಾಗುತ್ತಾ ಮಹಿಳಾ ಮೀಸಲಾತಿ ಮಸೂದೆ? ಏನಿದರ ಮಹತ್ವ, ವಿಪಕ್ಷಗಳ ವಿರೋಧವೇಕೆ?

ಸಾಂಪ್ರದಾಯಿಕ ಉಡುಪಿನಲ್ಲೇ ಇದ್ದರೂ, ಕೇವಲ ತೋಳಿಲ್ಲದ ಕಾರಣಕ್ಕೆ ಮಹಿಳಾ ಅಧಿಕಾರಿಯೇ ನನ್ನನ್ನು ತಡೆದಿದ್ದು ನಾರಿ ಶಕ್ತಿ ಎಂಬ ಥೀಮ್‌ಗೆ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಸಾರಾ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ.

ನಮ್ಮ ದೇಶದಲ್ಲಿ ಸಾವಿರಾರು ದೊಡ್ಡ ಸಮಸ್ಯೆಗಳಿವೆ, ಆದರೆ ಅಧಿಕಾರಿಗಳು ಇನ್ನೂ ತೋಳಿಲ್ಲದ ಉಡುಪಿನ ಬಗ್ಗೆ ಚಿಂತಿಸುತ್ತಿದ್ದಾರೆ. ಬಟ್ಟೆಯನ್ನು ನೋಡಿ ವ್ಯಕ್ತಿತ್ವ ನಿರ್ಣಯಿಸುವುದು ನಮ್ಮ ವಿನಾಶದ ಮುನ್ಸೂಚನೆ, ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂದಿನ ಕಾಲದಲ್ಲೂ ಭಾರತ ಇಂತಹ ಸಣ್ಣ ವಿಚಾರಗಳಲ್ಲಿ ಸಿಲುಕಿಕೊಂಡಿದೆ ಎಂಬುದು ಬೇಸರದ ಸಂಗತಿ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.

ವಿದ್ಯಾರ್ಥಿನಿಯ ಈ ಆರೋಪವು ಶಿಕ್ಷಣ ಸಂಸ್ಥೆಗಳಲ್ಲಿ ಈಗಲೂ ಅಸ್ತಿತ್ವದಲ್ಲಿರುವ ‘ಡ್ರೆಸ್ ಕೋಡ್’ ಮತ್ತು ಮಹಿಳೆಯರ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಎತ್ತಿದೆ. ಸಬಲೀಕರಣದ ಹೆಸರಿನಲ್ಲಿ ಕಾರ್ಯಕ್ರಮ ಮಾಡಿ, ಉಡುಪಿನ ಕಾರಣಕ್ಕೆ ಅವಕಾಶ ನಿರಾಕರಿಸುವುದು ಎಷ್ಟು ಸರಿ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೀನುಗಾರಿಕೆಗೆ ತಟ್ಟಿದ ತಾಪಮಾನ ಬಿಸಿ: ಮತ್ಸ್ಯಕ್ಷಾಮ, ಮೀನುಗಾರಿಕೆ ಸ್ಥಗಿತಗೊಳಿಸಿ ದಡ ಸೇರಿದ ಸಾವಿರಾರು ಬೋಟ್‌ಗಳು! – Kannada News | Mangaluru Fishing Crisis: Rising Sea Temperatures Lead to Fish Scarcity; Thousands of Boats Anchored Due to Losses

ಮಂಗಳೂರಿನ ಬಂದರಿನಲ್ಲಿ ನಿಂತಿರುವ ಮೀನುಗಾರಿಕೆ ಬೋಟುಗಳುImage Credit source: tv9

ಮಂಗಳೂರು, ಏಪ್ರಿಲ್ 16: ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿಯ (Karnataka Coastal Weather) ಆರ್ಭಟ ಹೆಚ್ಚಾಗಿದ್ದು, ವಾತಾವರಣ ಬೆಂಕಿ ಕೆಂಡದಂತಾಗಿದೆ. ಈ ತಾಪಮಾನದ ಏರಿಕೆ ಈಗ ಸಮುದ್ರಕ್ಕೂ ತಟ್ಟಿದ್ದು, ಮತ್ಸ್ಯಕ್ಷಾಮ ಉಂಟಾಗಿದೆ. ಬಿಸಿಲಿನ ತಾಪ ತಾಳಲಾರದೆ ಮೀನುಗಳು ತಂಪಾದ ಪ್ರದೇಶ ಹುಡುಕಿಕೊಂಡು ಸಮುದ್ರದಾಳದ ಕಲ್ಲುಬಂಡೆಗಳ ನಡುವೆ ಆಶ್ರಯ ಪಡೆಯುತ್ತಿವೆ. ಇದರ ನೇರ ಪರಿಣಾಮ ಮೀನುಗಾರಿಕೆ ಮೇಲೆ ಉಂಟಾಗಿದ್ದು, ಮೀನುಗಾರರು ಕಂಗಾಲಾಗಿದ್ದಾರೆ. ಮೀನುಗಳು ಸಿಗದ ಕಾರಣ ನೂರಾರು ಬೋಟ್​ಗಳು ಮೀನುಗಾರಿಕೆಗೆ ತೆರಳದೆ ಬಂದರಿನಲ್ಲೇ ಉಳಿದಿವೆ. ಇದು ಕೋಟಿ ಕೋಟಿ ವಹಿವಾಟು ನಡೆಸುವ ಮೀನುಗಾರಿಕೆ ಮೇಲೆ ನಕಾರಾತ್ಮಕ (Mangaluru Fishing Crisis) ಪರಿಣಾಮ ಬೀರಿದೆ.

ಮೀನುಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ

ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದವರೆಗೆ ಕರಾವಳಿಯಲ್ಲಿ ಮೀನುಗಾರಿಕೆ ಭರದಿಂದ ಸಾಗುತ್ತಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮೀನುಗಳು ಬಲೆಗೆ ಬೀಳುತ್ತಿಲ್ಲ. ಆಳಸಮುದ್ರ ಮೀನುಗಾರಿಕೆಗೆ ತೆರಳುವ ಒಂದು ಬೋಟ್‌ಗೆ ಸುಮಾರು 10 ರಿಂದ 13 ದಿನಗಳ ಪ್ರಯಾಣಕ್ಕೆ ಕನಿಷ್ಠ 7 ಲಕ್ಷ ರೂಪಾಯಿ ಖರ್ಚು ತಗುಲುತ್ತದೆ. ಆದರೆ, ಸದ್ಯ ಕೇವಲ 2 ಲಕ್ಷ ರೂಪಾಯಿಯಷ್ಟು ಮಾತ್ರ ಮೀನುಗಳು ಲಭ್ಯವಾಗುತ್ತಿವೆ. ಇದರಿಂದ ಪ್ರತಿ ಟ್ರಿಪ್‌ಗೆ ಮೀನುಗಾರರು ಅಂದಾಜು 5 ಲಕ್ಷ ರೂಪಾಯಿಗಳಷ್ಟು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.

ಬಂದರಿನಲ್ಲೇ ಲಂಗರು ಹಾಕಿದ ಬೋಟ್‌ಗಳು

ನಷ್ಟದ ಮೇಲೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿರುವ ಸುಮಾರು 1500ಕ್ಕೂ ಹೆಚ್ಚು ಆಳಸಮುದ್ರ ಬೋಟ್‌ಗಳ ಪೈಕಿ ನೂರಾರು ಬೋಟ್‌ಗಳು ಮೀನುಗಾರಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಬಂದರಿನಲ್ಲೇ ಲಂಗರು ಹಾಕಿವೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಲಾಭದಾಯಕ ವಹಿವಾಟು ನಿರೀಕ್ಷಿಸಿದ್ದ ಮತ್ಸೋದ್ಯಮಿಗಳಿಗೆ ಈ ಬಾರಿಯ ತಾಪಮಾನ ಏರಿಕೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿದೆ.

ಮೀನುಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ

ಕರ್ನಾಟಕದ ಕರಾವಳಿ ತೀರದಲ್ಲಿ ಮೀನುಗಾರಿಕೆ ಕೇವಲ ಉದ್ಯಮವಷ್ಟೇ ಅಲ್ಲದೆ, ಅದು ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ರಾಜ್ಯದಲ್ಲಿ ವಾರ್ಷಿಕವಾಗಿ ಸುಮಾರು 7.30 ಲಕ್ಷ ಟನ್ (2022-23ರ ಅಂಕಿಅಂಶ) ಕಡಲ ಮೀನು ಉತ್ಪಾದನೆಯಾಗುತ್ತಿದ್ದು, ಮೀನುಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಂದಾಗಿದೆ.

ಇದನ್ನೂ ಓದಿ: ಬಿಸಿಲ ಬೇಗೆಯ ನಡುವೆ ಮಳೆಯ ಮುನ್ಸೂಚನೆ: ರಾಜ್ಯದ 10 ಜಿಲ್ಲೆಗಳಲ್ಲಿ ‘ಹೀಟ್ ವೇವ್’ ಎಚ್ಚರಿಕೆ; ಎಲ್ಲೆಲ್ಲಿ ಮಳೆಯಾಗಲಿದೆ?

ಮೀನುಗಾರಿಕಾ ವಲಯವು ರಾಜ್ಯದ ಜಿಡಿಪಿಗೆ (GSDP) ಗಣನೀಯ ಕೊಡುಗೆ ನೀಡುತ್ತದಲ್ಲದೆ, ಸುಮಾರು 6 ಲಕ್ಷಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಆಸರೆಯಾಗಿದೆ. ಆದರೆ, 2024-25ರ ಅವಧಿಯಲ್ಲಿ ಹವಾಮಾನ ವೈಪರೀತ್ಯ ಮತ್ತು ಉಷ್ಣಾಂಶ ಏರಿಕೆಯಿಂದಾಗಿ ಮೀನುಗಾರಿಕೆಯಲ್ಲಿ ಶೇ 30ಕ್ಕೂ ಹೆಚ್ಚು ಇಳಿಕೆಯಾಗಿದ್ದು, ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:07 am, Thu, 16 April 26

Source link

Karnataka AQI today: ಬೆಂಗಳೂರಿನಲ್ಲಿ ಸುಧಾರಿಸದ ಗಾಳಿಯ ಗುಣಮಟ್ಟ; ಹಲವು ಜಿಲ್ಲೆಗಳಲ್ಲಿ ‘ಕಳಪೆ’ ಮಟ್ಟಕ್ಕೆ ಕುಸಿತ! – Kannada News | High Air Pollution in Karnataka: Check AQI for Bengaluru & Major Cities Today

ಬೆಂಗಳೂರು, ಏ.16: ರಾಜ್ಯದಲ್ಲಿ ತಾರಕಕ್ಕೇರಿರುವ ಬಿಸಿಲಿನ ಜೊತೆಗೆ ವಾಯು ಮಾಲಿನ್ಯವೂ ಸಾರ್ವಜನಿಕರನ್ನು ಕಾಡುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಇಂದು ಸಾಧಾರಣದಿಂದ ಕಳಪೆ ಮಟ್ಟದಲ್ಲಿ ದಾಖಲಾಗಿದೆ. ಯಾವೆಲ್ಲ ಜಿಲ್ಲೆಗಳಲ್ಲಿ ಇಂದು ಗಾಳಿಯ ಮಟ್ಟದಲ್ಲಿ ಬದಲಾವಣೆ ಆಗಲಿದೆ ಎಂಬುದನ್ನು ಇಲ್ಲಿ ನೋಡಿ. ಬೆಂಗಳೂರಿನಲ್ಲಿ ಇಂದು AQI 126 ರಷ್ಟಿದ್ದು, ಇದು ಶ್ವಾಸಕೋಶದ ಸಮಸ್ಯೆ ಇರುವವರು ಮತ್ತು ವೃದ್ಧರಿಗೆ ಕಿರಿಕಿರಿ ಉಂಟುಮಾಡಬಹುದು. ಬಿಟಿಎಂ ಲೇಔಟ್ ಮತ್ತು ಸಿಲ್ಕ್ ಬೋರ್ಡ್ ಭಾಗಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಿದೆ.

ಮಂಗಳೂರು ಮತ್ತು ಉಡುಪಿಯಲ್ಲಿ ಬಿಸಿಲ ಧಗೆಯ ಜೊತೆಗೆ ಗಾಳಿಯ ಗುಣಮಟ್ಟವೂ ಹದಗೆಟ್ಟಿದೆ. ಉಡುಪಿಯಲ್ಲಿ AQI 153 ದಾಟಿದ್ದು, ಉಸಿರಾಟದ ತೊಂದರೆ ಇರುವವರು ಜಾಗರೂಕರಾಗಿರಲು ತಜ್ಞರು ಎಚ್ಚರಿಸಿದ್ದಾರೆ. ವಾಹನಗಳ ಸಂಚಾರ ಹೆಚ್ಚಳ, ಧೂಳು ಮತ್ತು ಬೇಸಿಗೆಯ ಬಿಸಿಲಿನಿಂದಾಗಿ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗಿರುವುದು ಮಾಲಿನ್ಯಕಾರಕ ಕಣಗಳು (PM 2.5) ಗಾಳಿಯಲ್ಲಿ ಹೆಚ್ಚಾಗಲು ಕಾರಣವಾಗಿದೆ.

ನಗರವಾರು ವಾಯು ಗುಣಮಟ್ಟ ಸೂಚ್ಯಂಕ

ನಗರ AQI ಮಟ್ಟ ಗಾಳಿಯ ಸ್ಥಿತಿ
ಬೆಂಗಳೂರು 126 ಕಳಪೆ (Poor)
ಮಂಗಳೂರು 160 ಅನಾರೋಗ್ಯಕರ (Unhealthy)
ಮೈಸೂರು 147 ಕಳಪೆ (Poor)
ಕಲಬುರಗಿ 101 ಸಾಧಾರಣ (Moderate)
ಉಡುಪಿ 153 ಅನಾರೋಗ್ಯಕರ (Unhealthy)
ಶಿವಮೊಗ್ಗ 158 ಅನಾರೋಗ್ಯಕರ (Unhealthy)

ಹುಬ್ಬಳ್ಳಿಯಲ್ಲಿ ಇಂದು AQI 118 ರಷ್ಟಿದ್ದು, ಇದು ಕಳಪೆ ಮಟ್ಟಕ್ಕೆ ಸೇರುತ್ತದೆ. ಇಲ್ಲಿನ ತಾಪಮಾನವು 40°C ದಾಟಿರುವುದರಿಂದ ಗಾಳಿಯು ಶುಷ್ಕವಾಗಿದ್ದು, ಧೂಳಿನ ಕಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದು ಮಕ್ಕಳು ಮತ್ತು ಹಿರಿಯರಲ್ಲಿ ಅಲರ್ಜಿಯ ಸಮಸ್ಯೆ ಉಂಟುಮಾಡಬಹುದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಮಾಲಿನ್ಯದ ಪ್ರಮಾಣ ತುಸು ಹೆಚ್ಚಾಗಿದ್ದು, AQI 147 ದಾಖಲಾಗಿದೆ. ಹಾಸನದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ (132). ಈ ಭಾಗಗಳಲ್ಲಿ ಶ್ವಾಸಕೋಶದ ಕಾಯಿಲೆ ಇರುವವರು ಹೊರಗಿನ ಓಡಾಟದಲ್ಲಿ ಜಾಗರೂಕರಾಗಿರುವುದು ಉತ್ತಮ.

ಇದನ್ನೂ ಓದಿ: ಬಿಸಿಲ ಬೇಗೆಯ ನಡುವೆ ಮಳೆಯ ಮುನ್ಸೂಚನೆ: ರಾಜ್ಯದ 10 ಜಿಲ್ಲೆಗಳಲ್ಲಿ ‘ಹೀಟ್ ವೇವ್’ ಎಚ್ಚರಿಕೆ; ಎಲ್ಲೆಲ್ಲಿ ಮಳೆಯಾಗಲಿದೆ?

ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಕೊಡಗು (ಮಡಿಕೇರಿ) ಮತ್ತು ಚಿಕ್ಕಮಗಳೂರಿನಲ್ಲಿ ವಾಯು ಗುಣಮಟ್ಟ ಉತ್ತಮವಾಗಿದೆ. ಕೊಡಗಿನಲ್ಲಿ ಇಂದು 72 AQI ದಾಖಲಾಗಿದ್ದು, ಮಳೆಯ ಮುನ್ಸೂಚನೆಯಿರುವುದರಿಂದ ಗಾಳಿಯಲ್ಲಿನ ಮಾಲಿನ್ಯ ಕಡಿಮೆಯಾಗಿದೆ. ಚಿಕ್ಕಮಗಳೂರಿನಲ್ಲಿ 95 ರಷ್ಟಿದ್ದು, ಇದು ಸಾಧಾರಣ ಮಟ್ಟದಲ್ಲಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ-ಇರಾನ್ ಕದನ ವಿರಾಮಕ್ಕೆ ಬೀಳದ ಮುದ್ರೆ: ಒಪ್ಪಂದ ನಿರಾಕರಿಸಿದ ಅಮೆರಿಕ, ಪಾಕ್​​ನಲ್ಲಿ ಮತ್ತೆ ಸಂಧಾನಕ್ಕೆ ಪ್ಲ್ಯಾನ್ – Kannada News | US Iran Ceasefire Extension Fails; Pakistan Mediates Crucial Talks Amid Oil Sanctions

ವಾಷಿಂಗ್ಟನ್, ಏಪ್ರಿಲ್ 16: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್(Iran) ನಡುವಿನ ರಾಜತಾಂತ್ರಿಕ ಚದುರಂಗದಾಟ ಹೊಸ ತಿರುವು ಪಡೆದುಕೊಂಡಿದೆ. ಇರಾನ್ ಜತೆಗಿನ ಕದನ ವಿರಾಮವನ್ನು ವಿಸ್ತರಿಸಲು ಅಮೆರಿಕ ಕೋರಿದೆ ಎಂಬ ವರದಿಗಳನ್ನು ಶ್ವೇತಭವನ ಬುಧವಾರ ಅಧಿಕೃತವಾಗಿ ನಿರಾಕರಿಸಿದೆ. ಆದರೆ, ಮಾತುಕತೆಗಳು ಜೀವಂತವಾಗಿವೆ ಮತ್ತು ಮುಂದಿನ ಸುತ್ತಿನ ಸಭೆಯು ಮತ್ತೆ ಪಾಕಿಸ್ತಾನದಲ್ಲೇ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಪಷ್ಟಪಡಿಸಿದೆ.

ಒಪ್ಪಂದ ವಿಸ್ತರಣೆ ಸುದ್ದಿ ಸುಳ್ಳು
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಔಪಚಾರಿಕವಾಗಿ ಕದನ ವಿರಾಮ ವಿಸ್ತರಣೆಯನ್ನು ಕೋರಿದ್ದೇವೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿವೆ. ಆದರೆ, ಸಂವಹನ ಪ್ರಕ್ರಿಯೆಯು ನಿಂತಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ನಿಲುವನ್ನು ಇರಾನ್‌ಗೆ ಸ್ಪಷ್ಟಪಡಿಸಿದ್ದಾರೆ. ಟ್ರಂಪ್ ಅವರ ಬೇಡಿಕೆಗಳನ್ನು ಈಡೇರಿಸುವುದು ಇರಾನ್‌ನ ಹಿತದೃಷ್ಟಿಯಿಂದಲೂ ಒಳ್ಳೆಯದು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

ಮಧ್ಯವರ್ತಿಯಾದ ಪಾಕಿಸ್ತಾನಕ್ಕೆ ಟ್ರಂಪ್ ಬೆಂಬಲ
ಮುಂದಿನ ಸುತ್ತಿನ ಮಾತುಕತೆಗೆ ಸ್ಥಳ ನಿಗದಿಯ ಬಗ್ಗೆ ಮಾಹಿತಿ ನೀಡಿದ ಲೀವಿಟ್, ಪಾಕಿಸ್ತಾನಿಗಳ ಮೂಲಕ ಸಂವಹನ ನಡೆಸುವುದು ಮುಖ್ಯ ಎಂದು ಟ್ರಂಪ್ ಭಾವಿಸುತ್ತಾರೆ. ಈ ಮಾತುಕತೆಯಲ್ಲಿ ಪಾಕಿಸ್ತಾನವೇ ಏಕೈಕ ಮಧ್ಯವರ್ತಿಯಾಗಿ ಉಳಿಯಲಿದೆ. ಪ್ರಪಂಚದ ಅನೇಕ ದೇಶಗಳು ಸಹಾಯ ಮಾಡಲು ಮುಂದೆ ಬಂದಿದ್ದರೂ, ಅಮೆರಿಕವು ಪಾಕಿಸ್ತಾನದ ಸಂಧಾನದ ಹಾದಿಯನ್ನೇ ನಂಬಿದೆ ಎಂದರು. ಏಪ್ರಿಲ್ 11-12 ರಂದು ಇಸ್ಲಾಮಾಬಾದ್‌ನಲ್ಲಿ ನಡೆದಿದ್ದ 21 ಗಂಟೆಗಳ ಮೊದಲ ಸುತ್ತಿನ ಮಾತುಕತೆಯಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾಗವಹಿಸಿದ್ದರು ಎಂಬುದು ಗಮನಾರ್ಹ.

ಮತ್ತಷ್ಟು ಓದಿ: ಇರಾನ್ ಜತೆ ಅಮೆರಿಕ ಮಾತುಕತೆ: ಮತ್ತೆ ಪಾಕಿಸ್ತಾನವೇ ಅಂಗಳ, 48 ಗಂಟೆಗಳಲ್ಲಿ ನಿರ್ಣಾಯಕ ಬೆಳವಣಿಗೆ

ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ರಷ್ಯಾ ಮತ್ತು ಇರಾನ್ ತೈಲದ ಮೇಲಿನ ನಿರ್ಬಂಧಗಳ ಬಗ್ಗೆ ಕಠಿಣ ನಿಲುವು ಪ್ರಕಟಿಸಿದ್ದಾರೆ. ರಷ್ಯಾ ಅಥವಾ ಇರಾನ್ ತೈಲ ಖರೀದಿಗೆ ನೀಡಲಾಗಿದ್ದ ನಿರ್ಬಂಧಗಳ ವಿನಾಯಿತಿಯನ್ನು (Waiver) ಅಮೆರಿಕ ಇನ್ನು ಮುಂದೆ ವಿಸ್ತರಿಸುವುದಿಲ್ಲ.

ಕಳೆದ ತಿಂಗಳು ಭಾರತಕ್ಕೆ ರಷ್ಯಾದ ತೈಲ ಖರೀದಿಸಲು ನೀಡಿದ್ದ 30 ದಿನಗಳ ವಿಶೇಷ ವಿನಾಯಿತಿಯು ಈಗಾಗಲೇ ಮುಕ್ತಾಯಗೊಂಡಿದೆ. ಮಾರ್ಚ್ 11 ರ ಮೊದಲು ರವಾನೆಯಾದ ತೈಲಕ್ಕೆ ಮಾತ್ರ ಈ ರಿಯಾಯಿತಿ ಅನ್ವಯಿಸುತ್ತಿತ್ತು.

ಮೊದಲ ಸುತ್ತಿನ ಮಾತುಕತೆಯು ಇರಾನ್‌ನ ಪರಮಾಣು ಕಾರ್ಯಕ್ರಮದ ವಿಚಾರವಾಗಿ ಹಳಿ ತಪ್ಪಿತ್ತು. ತನ್ನ ಪರಮಾಣು ಯೋಜನೆ ಕೇವಲ ನಾಗರಿಕ ಉದ್ದೇಶಕ್ಕೆ ಎಂದು ಇರಾನ್ ವಾದಿಸುತ್ತಿದ್ದರೆ, ಅಮೆರಿಕ ಅದನ್ನು ಒಪ್ಪಲು ಸಿದ್ಧವಿಲ್ಲ. ಈ ಭಿನ್ನಾಭಿಪ್ರಾಯಗಳ ನಡುವೆಯೇ ಎರಡನೇ ಸುತ್ತಿನ ಮಾತುಕತೆಗೆ ಸಿದ್ಧತೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ. ಒಟ್ಟಾರೆಯಾಗಿ, ಪಾಕಿಸ್ತಾನದ ಸೆರೆನಾ ಹೋಟೆಲ್ ಮತ್ತೆ ಜಾಗತಿಕ ರಾಜತಾಂತ್ರಿಕತೆಯ ಕೇಂದ್ರಬಿಂದುವಾಗಲಿದ್ದು, ಟ್ರಂಪ್ ಆಡಳಿತವು ಇರಾನ್ ಅನ್ನು ತನ್ನ ಷರತ್ತುಗಳಿಗೆ ಒಪ್ಪಿಸುತ್ತದೆಯೇ ಎಂಬುದು ಈಗಿರುವ ದೊಡ್ಡ ಪ್ರಶ್ನೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version