ನೂತನ ಸಿಎಂಗೆ ಆರಂಭದಲ್ಲೇ ಸಾಲು ಸಾಲು ಸವಾಲುಗಳು: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಡಿಕೆ ಶಿವಕುಮಾರ್ ಮಹತ್ವದ ಸಭೆ – Kannada News | Tight Rope Walk for New Karnataka CM DK Shivakumar as Monsoon and Fertilizer Crises Impose Major Administrative Challenges

ಬೆಂಗಳೂರು, ಜೂನ್ 13: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಆರಂಭದಲ್ಲೇ ಸವಾಲುಗಳ ಸಾಲು ಎದುರಾಗಿದೆ. ರಾಜ್ಯದಲ್ಲಿ ನೂತನ ಸಂಪುಟ ಇನ್ನು ಪೂರ್ಣ ಪ್ರಮಾಣದಲ್ಲಿ ರಚನೆಯಾಗದ ಕಾರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಳಂಬವಾಗಿರುವುದರಿಂದ ಆಡಳಿತದ ಸಂಪೂರ್ಣ ಜವಾಬ್ದಾರಿ ಸದ್ಯ ಅಧಿಕಾರಿಗಳ ಹೆಗಲೇರಿದೆ. ಈ ಹಿನ್ನೆಲೆಯಲ್ಲಿ ಖುದ್ದು ಕಣಕ್ಕಿಳಿದಿರುವ ಸಿಎಂ ಡಿಕೆ ಶಿವಕುಮಾರ್, ಆಡಳಿತ ಯಂತ್ರಕ್ಕೆ ಚುರುಕು ನೀಡಲು ಮತ್ತು ಮುಂಗಾರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಭರ್ಜರಿ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಿದ್ದಾರೆ.

ಮುಖ್ಯಾಂಶಗಳು

  • ನೂತನ ಸಿಎಂಗೆ ಆರಂಭದಲ್ಲೇ ಸವಾಲುಗಳ ಮಹಾಪೂರ.
  • ಇಂದೇ ಡಿಸಿ, ಎಸ್ಪಿಗಳ ಮಹತ್ವದ ಸಭೆ.
  • ಗಡಿ, ಕರಾವಳಿ ಭಾಗದಲ್ಲಿ ಹೈಅಲರ್ಟ್‌ಗೆ ಸೂಚನೆ.

ಡಿಕೆಶಿ ಸರ್ಕಾರಕ್ಕೆ ಆರಂಭದಲ್ಲೇ ಎದುರಾಗಿರುವ ಪ್ರಮುಖ ಸವಾಲುಗಳು

ರಾಜ್ಯದಲ್ಲಿ ಈಗಾಗಲೇ ಮುಂಗಾರು ಮಳೆ ತೀವ್ರಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಅವಾಂತರಗಳು ಸೃಷ್ಟಿಯಾಗಿವೆ. ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ಸರಣಿ ಭೂಕುಸಿತ ಹಾಗೂ ಗುಡ್ಡ ಕುಸಿತದ ಆತಂಕ ಎದುರಾಗಿದೆ. ಮತ್ತೊಂದೆಡೆ, ಮುಂಗಾರು ಆರಂಭವಾಗಿರುವುದರಿಂದ ರಾಜ್ಯಾದ್ಯಂತ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಹಲವು ಜಿಲ್ಲೆಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ತೀವ್ರ ಕೊರತೆ ಎದುರಾಗಿದ್ದು, ರೈತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕಾದ ಅನಿವಾರ್ಯತೆ ಸಿಎಂ ಮುಂದಿದೆ.

ಅಧಿಕಾರಿಗಳ ಮಟ್ಟದಲ್ಲೇ ಬಾಕಿ ಇರುವ ಕೆಲಸಗಳನ್ನು ಚುರುಕುಗೊಳಿಸಲು ಮುಖ್ಯಮಂತ್ರಿಗಳು ಇಡೀ ದಿನದ ಸುದೀರ್ಘ ಸಭೆ ಹಮ್ಮಿಕೊಂಡಿದ್ದಾರೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು (DC), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (CEO) ಮಹತ್ವದ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಯಲಿದೆ. ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳಿಗೆ ಖುದ್ದು ಮುಖ್ಯಮಂತ್ರಿಗಳೇ ನೇರ ಸೂಚನೆಗಳನ್ನು ನೀಡಲಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ಮಾಡಲು ಕಠಿಣ ಪಾಠ ಮಾಡಲಿದ್ದಾರೆ.

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗಕ್ಕೆ ವಿಶೇಷ ನಿಗಾ

ಇಂದಿನ ಸಭೆಯಲ್ಲಿ ಮಳೆ ಪೀಡಿತ ಜಿಲ್ಲೆಗಳ ಅಧಿಕಾರಿಗಳಿಗೆ ಸಿಎಂ ಹೈಅಲರ್ಟ್ ಘೋಷಿಸುವಂತೆ ಸೂಚಿಸಲಿದ್ದಾರೆ. ಕರಾವಳಿ ಭಾಗದಲ್ಲಿ ಮಳೆಯೊಂದಿಗೆ ಸಾಗರ ತೀರದ ಜನರಿಗೆ ಚಂಡಮಾರುತದ ಆತಂಕವೂ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಲಾಗುತ್ತಿದೆ. ಇನ್ನು ಉತ್ತರ ಕರ್ನಾಟಕದ ನದಿ ಪಾತ್ರದ ಜಿಲ್ಲೆಗಳಲ್ಲಿ ಮಳೆ ಹೆಚ್ಚಾದರೆ ಜಲಾವೃತವಾಗುವ ಭೀತಿ ಇದ್ದು, ನದಿ ಇಕ್ಕೆಲಗಳ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸನ್ನದ್ಧರಾಗಿರುವಂತೆ ಡಿಸಿ ಮತ್ತು ಎಸ್ಪಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಲಿದ್ದಾರೆ.

ವರದಿ: ಈರಣ್ಣ ಬಸವ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:32 am, Sat, 13 June 26

Source link

ವಿಶ್ವ ದಾಖಲೆಯ ಮೊತ್ತ ಪೇರಿಸಿ ಗೆದ್ದ ಇಂಗ್ಲೆಂಡ್ – Kannada News | England Creates New World Record in Women’s T20 World Cup 2026

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ 219 ರನ್ ಚಚ್ಚುವ ಮೂಲಕ ಇಂಗ್ಲೆಂಡ್ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಪೇರಿಸಿದ ಹೊಚ್ಚ ಹೊಸ ವಿಶ್ವ ದಾಖಲೆ ಬರೆದಿದೆ.

ಡ್ಯಾನಿ ವ್ಯಾಟ್ ಸಿಡಿಲಬ್ಬರ:

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ಸ್ಫೋಟಕ ಆರಂಭ ಒದಗಿಸಿದ್ದರು. ಶ್ರೀಲಂಕಾ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ವ್ಯಾಟ, ಮೈದಾನದ ಮೂಲೆ ಮೂಲೆಗೂ ಫೋರ್ ಗಳನ್ನು ಬಾರಿಸಿದರು

ಈ ಮೂಲಕ ಡ್ಯಾನಿ ವ್ಯಾಟ್ ಕೇವಲ 62 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 105 ರನ್ ಚಚ್ಚಿ ಅಬ್ಬರಿಸಿದರು. ಮತ್ತೊಂದೆಡೆ ಆಮಿ ಜೋನ್ಸ್ (53 ರನ್, 38 ಎಸೆತ) ಹಾಗೂ ನಾಯಕಿ ನ್ಯಾಟ್ ಸಿವರ್-ಬ್ರಂಟ್ (ಅಜೇಯ 46 ರನ್, 22 ಎಸೆತ) ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 20 ಓವರುಗಳಲ್ಲಿ 1 ವಿಕೆಟ್ ಕಳೆದುಕೊಂಡು 219 ಕ್ಕೆ ತಂದು ನಿಲ್ಲಿಸಿದರು.

ಇಂಗ್ಲೆಂಡ್‌ನದ್ದೇ ಹಳೇ ದಾಖಲೆ ಉಡೀಸ್:

ಈ ಭರ್ಜರಿ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡವು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ತನ್ನದೇ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮುರಿದಿದೆ. 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಇಂಗ್ಲೆಂಡ್ ಗಳಿಸಿದ್ದ 213/5 ರನ್ ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು. ಈಗ ಶ್ರೀಲಂಕಾ ವಿರುದ್ಧ 219 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

87 ರನ್​ಗಳ ಗೆಲುವು:

220 ರನ್‌ಗಳ ದೈತ್ಯ ಗುರಿ ಬೆನ್ನಟ್ಟಿದ ಶ್ರೀಲಂಕಾ ಮಹಿಳಾ ತಂಡ ಇಂಗ್ಲೆಂಡ್‌ನ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಲಂಕಾ ಪಡೆ, ಅಂತಿಮವಾಗಿ ಕೇವಲ 132 ರನ್‌ಗಳಿಗೆ ಆಲೌಟ್ ಆಯಿತು.

ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಫ್ರೇಯಾ ಕೆಂಪ್ 22 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡ 87 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ವಿಜಯಯಾತ್ರೆ ಆರಂಭಿಸಿದೆ.

ಇಂಗ್ಲೆಂಡ್ ಪ್ಲೇಯಿಂಗ್ 11:  ಆಮಿ ಜೋನ್ಸ್ (ವಿಕೆಟ್ ಕೀಪರ್) ಡ್ಯಾನಿ ವ್ಯಾಟ್-ಹಾಡ್ಜ್ , ನ್ಯಾಟ್ ಸಿವರ್-ಬ್ರಂಟ್ (ನಾಯಕಿ) ,
ಆಲಿಸ್ ಕ್ಯಾಪ್ಸಿ , ಹೀದರ್ ನೈಟ್ , ಫ್ರೇಯಾ ಕೆಂಪ್ , ಡೇನಿಯಲ್ ಗಿಬ್ಸನ್ , ಷಾರ್ಲೆಟ್ ಡೀನ್ , ಸೋಫಿ ಎಕ್ಲೆಸ್ಟೋನ್ , ಲಿನ್ಸೆ ಸ್ಮಿತ್ , ಲಾರೆನ್ ಬೆಲ್.

ಇದನ್ನೂ ಓದಿ: ವಿರಾಟ್ ಕೊಹ್ಲಿ ದಾಖಲೆ ಉಡೀಸ್: ರುತುರಾಜ್ ಗಾಯಕ್ವಾಡ್ ಹೊಸ ವಿಶ್ವ ದಾಖಲೆ

ಶ್ರೀಲಂಕಾ ಪ್ಲೇಯಿಂಗ್ 11:  ವಿಷ್ಮಿ ಗುಣರತ್ನೆ , ಚಾಮರಿ ಅಥಾಪತ್ತು (ನಾಯಕಿ) , ಇಮೇಶಾ ದುಲಾನಿ , ಹರ್ಷಿತಾ ಸಮರವಿಕ್ರಮ , ಹನ್ಸಿಮಾ ಕರುಣರತ್ನೆ , ಕವಿಶಾ ದಿಲ್ಹಾರಿ , ನೀಲಾಕ್ಷಿಕಾ ಸಿಲ್ವಾ , ಕೌಶಾನಿ ನುತ್ಯಂಗನ (ವಿಕೆಟ್ ಕೀಪರ್) , ಸುಗಂಧಿಕಾ ಕುಮಾರಿ , ಮಲ್ಕಿ ಮದರಾ , ಮಿಥಾಲಿ ಅಯೋಧ್ಯ.

Published On – 7:21 am, Sat, 13 June 26

Source link

ಜೀ ಕನ್ನಡದಲ್ಲಿ ದೈವಿಕ ಸಂಭ್ರಮ: ‘ಶ್ರೀ ರಾಘವೇಂದ್ರ ಮಹಾತ್ಮೆ’ಯಲ್ಲಿ ವೆಂಕಟನಾಥರ ಸನ್ಯಾಸ ದೀಕ್ಷೆಯ ಮಹಾ ಸಂಚಿಕೆ – Kannada News | Sri Raghavendra Mahatme: Venkatanatha’s Sanyasa Deekshe on Zee Kannada

ಜೀ ಕನ್ನಡ ವಾಹಿನಿಯಲ್ಲಿ (Zee Kannada) ವಿವಿಧ ರೀತಿಯ ಧಾರಾವಾಹಿಗಳು ಪ್ರಸಾರ ಕಾಣುತ್ತಿರುವುದು ಗೊತ್ತೇ ಇದೆ. ಪಕ್ಕಾ ಫ್ಯಾಮಿಲಿ ಡ್ರಾಮಾಗಳು ಒಂದು ಕಡೆ ಆದರೆ, ಮಾಟ-ಮಂತ್ರದ ಕಥೆ ಮತ್ತೊಂದು ಕಡೆ. ಇದರ ಜೊತೆಗೆ ದೇವರ ಕುರಿತಾದ ಧಾರಾವಾಹಿಗಳು ಕೂಡ ಪ್ರಸಾರ ಕಾಣುತ್ತಿವೆ. ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿ ಎಲ್ಲರ ಮನ ಗೆದ್ದಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಯರ ಪವಿತ್ರ ಜೀವನ ಚರಿತ್ರೆಯನ್ನು ತೆರೆಮೇಲೆ ತಂದಿರುವ ಈ ಸರಣಿಗೆ ಕಿರುತೆರೆ ವೀಕ್ಷಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಯರ ಕಥೆಯು ಶಂಕುಕರ್ಣನ ಜನ್ಮ ರಹಸ್ಯದಿಂದ ಆರಂಭವಾಗಿ ಪ್ರಹ್ಲಾದ, ಬಾಹ್ಲೀಕ ಹಾಗೂ ವ್ಯಾಸರಾಯರ ಅವತಾರಗಳ ನಂತರ, ನಾಲ್ಕನೇ ಜನ್ಮದಲ್ಲಿ ವೆಂಕಟನಾಥರಾಗಿ ರಾಯರು ಧರೆಗೆ ಬಂದ ರೋಚಕ ಕಥಾಹಂದರ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಇತ್ತೀಚೆಗಷ್ಟೇ ಪ್ರಸಾರವಾದ, ರೈತರ ಬಳಿಯಿದ್ದ ಹುಳು ಹಿಡಿದ ಭತ್ತದ ಮೂಟೆಗಳನ್ನು ಮಂತ್ರಾಕ್ಷತೆಯ ಮಹಿಮೆಯಿಂದ ರಾಯರು ಶುದ್ಧೀಕರಿಸಿದ ಪವಾಡದ ದೃಶ್ಯಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದ್ದವು. ಇದರ ಬೆನ್ನಲ್ಲೇ, ಸಂಸಾರದ ಬಂಧನದಲ್ಲಿದ್ದ ವೆಂಕಟನಾಥರು ಸನ್ಯಾಸತ್ವದ ಹಾದಿ ಹಿಡಿಯುವಾಗ ಪತ್ನಿ ಸರಸ್ವತಿ ಅನುಭವಿಸುವ ತಳಮಳ ಮತ್ತು ಭಾವುಕ ಕ್ಷಣಗಳು ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸಿವೆ.

ಇದನ್ನೂ ಓದಿ: ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್​ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು?

ತಂಜಾವೂರಿನ ರಾಜ ರಘುನಾಥ ಭೂಪಾಲನ ಸಮ್ಮುಖದಲ್ಲಿ, ಪರಮಪೂಜ್ಯ ಗುರು ಸುಧೀಂದ್ರ ತೀರ್ಥರು ವೆಂಕಟನಾಥರಿಗೆ ಸನ್ಯಾಸ ದೀಕ್ಷೆ ಕರುಣಿಸಿ, ‘ಶ್ರೀ ರಾಘವೇಂದ್ರ ತೀರ್ಥರು’ ಎಂದು ನಾಮಕರಣ ಮಾಡುವ ಆ ದಿವ್ಯ ಪೀಠಾರೋಹಣದ ಕ್ಷಣಗಳು ಈ ವಾರಾಂತ್ಯದಲ್ಲಿ ಪ್ರಸಾರವಾಗಲಿವೆ. ಭಕ್ತಿ ಮತ್ತು ವೈರಾಗ್ಯದ ಮೂರ್ತಿರೂಪದಂತಿರುವ ರಾಯರ ಈ ಪಾತ್ರದಲ್ಲಿ ನಟ ಪರೀಕ್ಷಿತ್ ಅದ್ಭುತವಾಗಿ ನಟಿಸಿದ್ದಾರೆ.

‘ಶ್ರೀ ರಾಘವೇಂದ್ರ ಮಹಾತ್ಮೆ’ ಈಗಾಗಲೇ ಕಿರುತೆರೆ ವೀಕ್ಷಕರನ್ನು ಸಾಕಷ್ಟು ಗಮನ ಸೆಳೆದಿದೆ. ಈಗ ಈ ಸಂಚಿಕೆಯನ್ನು ನೋಡಲು ಕಿರುತೆರೆ ವೀಕ್ಷಕರು ಕಾದಿದ್ದಾರೆ.  ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಡ್ಯ: 10 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ರೆವೆನ್ಯೂ ಇನ್​ಸ್ಪೆಕ್ಟರ್ – Kannada News | Mandya Lokayukta Raid: Halaguru Revenue Inspector Trapped Red Handed While Accepting Bribe From Farmer Over Land Records

ಮಂಡ್ಯ, ಜೂನ್ 13: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್‌ (ಆರ್‌ಐ) ಮಧುಸೂದನ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ಬಂಧಿಸಿದ್ದಾರೆ. ರೈತ ನಂಜುಂಡಸ್ವಾಮಿ ಅವರಿಂದ 10,000 ರೂ. ಮುಂಗಡ ಲಂಚ ಪಡೆಯುತ್ತಿದ್ದಾಗ, ಅಧಿಕಾರಿಗಳು ದಾಳಿ ಮಾಡಿ ರೆಡ್‌ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಪೋಡಿ (ಭೂ ದಾಖಲೆ ವಿಭಾಗ) ಕೆಲಸ ಮಾಡಿಕೊಡುವುದಕ್ಕಾಗಿ ಆರ್‌ಐ ಮಧುಸೂದನ್‌ ರೈತ ನಂಜುಂಡಸ್ವಾಮಿ ಅವರ ಬಳಿ ಒಟ್ಟು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರ ಮುಂಗಡ ಹಣವಾಗಿ 10,000 ರೂ. ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಲಗೂರಿನಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಲಂಚದ ಹಣವನ್ನು ಕೈಯಲ್ಲಿ ಸ್ವೀಕರಿಸಿ, ಅದನ್ನು ಜೇಬಿಗೆ ಹಾಕಿಕೊಳ್ಳುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಆರ್‌ಐ ಮಧುಸೂದನ್‌ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಳವಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್​ಗೆ ದೊಡ್ಡ ಮೊತ್ತದ ಸಂಭಾವನೆ ಕೊಡಲು ನಿರ್ಮಾಪಕರ ಹಿಂದೇಟು? ಶುರುವಾಗಿದೆ ಭಯ – Kannada News | AK64: Ajith Kumar’s Rs 150 Cr Salary Standoff Delays New Film Projects

ತಮಿಳು ನಟ ಅಜಿತ್ ಕುಮಾರ್ ಅವರ (Ajit Kumar) ಮುಂದಿನ ಸಿನಿಮಾ ‘AK64’ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳ ಕಥೆ ಅಥವಾ ನಿರ್ದೇಶಕರ ಬಗ್ಗೆ ಚರ್ಚೆಯಾಗುವುದು ಸಹಜ. ಆದರೆ, ಈ ಬಾರಿ ಅಜಿತ್ ಕುಮಾರ್ ಅವರ ಸಂಭಾವನೆ ವಿಚಾರವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಅಜಿತ್ ಅವರ ಹೊಸ ಪ್ರಾಜೆಕ್ಟ್ ಘೋಷಣೆಯಾಗದೇ ತಡವಾಗುತ್ತಿದೆ. ಇದಕ್ಕೆ ಅವರ ಭಾರಿ ಮೊತ್ತದ ಸ್ಯಾಲರಿ ಮಾತುಕತೆಗಳೇ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಅಜಿತ್ ಅವರಿಗೆ ಸಾಲು ಸಾಲು ಸೋಲುಗಳು ಎದುರಾಗಿವೆ. ಅವರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಾವಾಗಿಯೇ ತಮ್ಮ ಸಂಭಾವನೆಯನ್ನು ಸುಮಾರು 150 ಕೋಟಿ ರೂಪಾಯಿಗೆ ಇಳಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದು ಅವರ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೆ ಪಡೆದಿದ್ದಕ್ಕಿಂತ ಕಡಿಮೆ ಮೊತ್ತವಾಗಿದೆ. ಆದಾಗ್ಯೂ, ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಅಜಿತ್ ಕೇಳುತ್ತಿರುವ ಈ ಭಾರಿ ಮೊತ್ತವನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸಂಭಾವನೆಯನ್ನು ಇನ್ನೂ ಕಡಿಮೆ ಮಾಡುವಂತೆ ನಿರ್ಮಾಣ ಸಂಸ್ಥೆಗಳು ಅಜಿತ್​​ಗೆ ಬೇಡಿಕೆ ಇಡುತ್ತಿವೆ.

ನಿರ್ಮಾಣ ಸಂಸ್ಥೆಗಳ ಆಫರ್ ಎಷ್ಟು?:

ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ತಮಿಳಿನ ಮುಂಚೂಣಿ ನಿರ್ಮಾಣ ಸಂಸ್ಥೆಯೊಂದು ಅಜಿತ್ ಅವರೊಂದಿಗೆ ಮಾತುಕತೆ ನಡೆಸಿತ್ತು. ಆದರೆ ಸಂಭಾವನೆ ವಿಚಾರದಲ್ಲಿ ಸಹಮತ ಮೂಡದ ಕಾರಣ ಮಾತುಕತೆ ಅರ್ಧಕ್ಕೆ ನಿಂತಿದೆ. ಆ ಪ್ರಮುಖ ಬ್ಯಾನರ್ ಅಜಿತ್ ಅವರಿಗೆ ಗರಿಷ್ಠ 90 ಕೋಟಿ ರೂಪಾಯಿ ನೀಡಲು ಮಾತ್ರ ಸಿದ್ಧವಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಮತ್ತೊಂದು ನಿರ್ಮಾಣ ಸಂಸ್ಥೆಯು ಅಜಿತ್ ಅವರಿಗೆ ಸುಮಾರು 110 ಕೋಟಿ ರೂಪಾಯಿ ಆಫರ್ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಅಜಿತ್ ಸಂಭಾವನೆ 170 ರಿಂದ 200 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಕ್ರಿಕೆಟ್ ಫೀಲ್ಡ್​​ನಲ್ಲಿ ನಟ ಅಜಿತ್ ಕುಮಾರ್ ವಿಡಿಯೋ ನೋಡಿ

ಯಾರ ಜೊತೆ ಸಿನಿಮಾ?:

ಪ್ರಸ್ತುತ ಅಜಿತ್ ಕುಮಾರ್ ಅವರ ಮುಂದೆ ಎರಡು ಪ್ರಮುಖ ಪ್ರಾಜೆಕ್ಟ್‌ಗಳು ಇವೆ. ಒಂದು ‘ಗುಡ್ ಬ್ಯಾಡ್ ಅಗ್ಲಿ’ ಖ್ಯಾತಿಯ ಅಧಿಕ್ ರವಿಚಂದ್ರನ್ ಅವರೊಂದಿಗಿನ ಸಿನಿಮಾ ಹಾಗೂ ಮತ್ತೊಂದು ಅವರ ಆಪ್ತ ನಿರ್ದೇಶಕ ಸಿರುತೈ ಶಿವ ಅವರೊಂದಿಗಿನ ಚಿತ್ರ. ಇವೆರಡೂ ದೊಡ್ಡ ಬಜೆಟ್‌ನ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾಗಳಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಸಂಭಾವನೆ ಗೊಂದಲ ಮುಗಿಯದ ಕಾರಣ ಯಾವುದೇ ಪ್ರಾಜೆಕ್ಟ್ ಇನ್ನೂ ಅಧಿಕೃತವಾಗಿ ಆರಂಭ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಂಗಾರು ಮಳೆಗೆ ಶುದ್ಧವಾದ ರಾಜ್ಯದ ಗಾಳಿ; ಗರಿಷ್ಠ ನಗರಗಳಲ್ಲಿ ‘ಉತ್ತಮ’ ಶ್ರೇಣಿ ದಾಖಲು – Kannada News | Bengaluru AQI ‘Good’: Monsoon Cleanses Air Across Karnataka, Safe for Outdoors

ಬೆಂಗಳೂರು, ಜೂ.13: ರಾಜ್ಯಾದ್ಯಂತ ಮುಂಗಾರು ಮಳೆ ಇರುವುದರಿಂದ ಕರ್ನಾಟಕದ ಬಹುತೇಕ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹಾಗೂ ಜಾಗತಿಕ ವಾಯು ಗುಣಮಟ್ಟ ಟ್ರ್ಯಾಕರ್ ಪ್ರಕಟಿಸಿರುವ ಇಂದಿನ ವಾಯುಗುಣಮಟ್ಟದ ಪ್ರಕಾರ, ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಹವಾಮಾನವು ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಇಂದು ವಾಯು ಗುಣಮಟ್ಟವು ಅತ್ಯುತ್ತಮ ಮಟ್ಟದಲ್ಲಿದೆ. ಕೇವಲ ಸಿಲ್ಕ್ ಬೋರ್ಡ್ ಮತ್ತು ಕಡಬೀಸನಹಳ್ಳಿಯಂತಹ ಕೆಲವು ಕಡೆಗಳಲ್ಲಿ ವಾಹನ ಸಂಚಾರದಿಂದಾಗಿ ವಾಯು ಗುಣಮಟ್ಟವು ಸಾಧಾರಣ ಮಟ್ಟದಲ್ಲಿದ್ದರೆ, ಹೆಬ್ಬಾಳ, ಜಯನಗರ, ಬಸವನಗುಡಿ ಸೇರಿದಂತೆ ಶೇ. 80ಕ್ಕೂ ಹೆಚ್ಚು ಭಾಗಗಳಲ್ಲಿ ಗಾಳಿಯು ಸಂಪೂರ್ಣ ಶುದ್ಧವಾಗಿದೆ. ಇಡೀ ರಾಜ್ಯದಲ್ಲೇ ಅತ್ಯಂತ ಸ್ವಚ್ಛವಾದ ಗಾಳಿ ಇರುವ ಜಿಲ್ಲೆಗಳಾಗಿ ಚಿಕ್ಕಮಗಳೂರು ಮತ್ತು ಗದಗ ಹೊರಹೊಮ್ಮಿವೆ. ಇಲ್ಲಿ PM2.5 ಪ್ರಮಾಣದಲ್ಲಿದೆ.

ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಕರಾವಳಿ ಮಂಗಳೂರಿನಲ್ಲಿ ವಾಯು ಗುಣಮಟ್ಟವು ತೃಪ್ತಿದಾಯಕವಾಗಿದ್ದು, ಸಾರ್ವಜನಿಕ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ವರದಿಯಾಗಿದೆ. ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವಾಯು ಗುಣಮಟ್ಟವು 51 ರಿಂದ 100ರ ಒಳಗಿನ ‘ಸಾಧಾರಣ’ ಶ್ರೇಣಿಯಲ್ಲಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 0 ರಿಂದ 50ರ ಒಳಗಿನ ‘ಉತ್ತಮ’ (Good) ಶ್ರೇಣಿಯಲ್ಲಿ ಇರುವುದರಿಂದ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ಯಾವುದೇ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳು ಹಾಗೂ ದೈಹಿಕ ಕಸರತ್ತುಗಳಲ್ಲಿ ತೊಡಗಿಕೊಳ್ಳಬಹುದು.

ಇದನ್ನೂ ಓದಿ: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಂದು ಬೆಲೆ ಏರಿಕೆ ಬಿಸಿ: ಗ್ಯಾಸ್ ಬೆನ್ನಲ್ಲೇ ಗಗನಕ್ಕೇರಿದ ಅಕ್ಕಿ ದರ, ಕೆಜಿಗೆ 10 ರಿಂದ 20 ರೂ. ಹೆಚ್ಚಳ – Kannada News | Rice Prices Skyrocket in Karnataka: Rates Increased by Rs 10 to Rs 20 Per KG; Check Out New Price List of Top Varieties

ಬೆಂಗಳೂರು, ಜೂನ್ 13: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆಯ ತರಕಾರಿ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಭಾರಿ ಆಘಾತ ಎದುರಾಗಿದೆ. ನಿತ್ಯದ ಊಟಕ್ಕೆ ಅತಿ ಅತ್ಯಗತ್ಯವಾಗಿರುವ ಅಕ್ಕಿಯ ಬೆಲೆಯಲ್ಲಿ (Rice Price) ದಿಢೀರ್ ಭಾರಿ ಏರಿಕೆ ಕಂಡುಬಂದಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ತಳಿಯ ಅಕ್ಕಿಗಳ ದರವು ಪ್ರತಿ ಕೆಜಿಗೆ 10 ರೂಪಾಯಿಯಿಂದ 20 ರೂಪಾಯಿಯವರೆಗೆ ದುಬಾರಿಯಾಗಿದ್ದು, ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳ ಬಜೆಟ್ ಸಂಪೂರ್ಣ ಏರುಪೇರಾಗುವಂತೆ ಮಾಡಿದೆ.

ಮುಖ್ಯಾಂಶಗಳು

  • ಅಕ್ಕಿ ಬೆಲೆಯಲ್ಲಿ ಭಾರಿ ದರ ಏರಿಕೆ.
  • ಗ್ರಾಹಕರ ಜೇಬಿಗೆ ಮತ್ತಷ್ಟು ಆರ್ಥಿಕ ಹೊರೆ.
  • ಹೊಸ ಬೆಳೆ ಬರುವವರೆಗೆ ದರ ಇಳಿಕೆ ಅಸಾಧ್ಯ.

ಅಕ್ಕಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?

ಮಾರುಕಟ್ಟೆಯ ವರ್ತಕರ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಪೂರೈಕೆಯ ಪ್ರಮಾಣದಲ್ಲಿ ಭಾರಿ ಕೊರತೆ ಉಂಟಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರವು ಅಕ್ಕಿ ರಫ್ತಿಗೆ (Export) ಮುಕ್ತ ಅವಕಾಶ ನೀಡಿರುವುದರಿಂದ, ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ತಳಿಯ ಅಕ್ಕಿಯ ಲಭ್ಯತೆ ಗಣನೀಯವಾಗಿ ಕ್ಷೀಣಿಸಿದೆ. ಇದು ನೇರವಾಗಿ ಮುಕ್ತ ಮಾರುಕಟ್ಟೆಯ ದರಗಳ ಮೇಲೆ ಪ್ರಭಾವ ಬೀರಿದೆ. ಸದ್ಯ ಅಕ್ಕಿ ದರ ಹೆಚ್ಚಾಗಿರುವುದರಿಂದ ಗ್ರಾಹಕರು ಖರೀದಿಯ ಪ್ರಮಾಣವನ್ನು ಕಡಿಮೆಗೊಳಿಸಿದ್ದು, ವ್ಯಾಪಾರಿಗಳ ಮಾರಾಟದಲ್ಲೂ ಭಾರಿ ಕುಸಿತ ಕಂಡುಬಂದಿದೆ ಎಂದು ವರ್ತಕರಾದ ಅರುಣ್ ಪರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ನವೆಂಬರ್ ವರೆಗೂ ಬೆಲೆ ಇಳಿಕೆ ಅಸಾಧ್ಯ

ರೈತರು ಬೆಳೆದಿರುವ ಹೊಸ ಭತ್ತದ ಬೆಳೆ ಕಟಾವಾಗಿ, ಹೊಸ ಅಕ್ಕಿ ಮಾರುಕಟ್ಟೆಗೆ ಬರಲು ಇನ್ನು ಕನಿಷ್ಠ ನವೆಂಬರ್ ತಿಂಗಳವರೆಗೆ ಕಾಯಬೇಕಾಗಿದೆ. ಅಲ್ಲಿಯವರೆಗೂ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆ ಕೊರತೆ ಹೀಗೆಯೇ ಮುಂದುವರಿಯಲಿದ್ದು, ಸದ್ಯಕ್ಕಂತೂ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಕೆಲವು ಪ್ರೀಮಿಯಂ ತಳಿಯ ಅಕ್ಕಿ ದರಗಳು ಕೆಜಿಗೆ 100 ರೂಪಾಯಿಯ ಗಡಿ ದಾಟಿದರೂ ಆಶ್ಚರ್ಯವಿಲ್ಲ ಎಂದು ಅಕ್ಕಿ ವ್ಯಾಪಾರಿ ಸುರೇಶ್ ತಿಳಿಸಿದ್ದಾರೆ.

ವಿವಿಧ ತಳಿಯ ಅಕ್ಕಿಗಳ ಹಳೆಯ ಮತ್ತು ಹೊಸ ದರಗಳ ಪಟ್ಟಿ (ಪ್ರತಿ ಕೆ.ಜಿಗೆ)

ಒಟ್ಟಾರೆಯಾಗಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು ಸಾರ್ವಜನಿಕರ ಜೀವನ ನಿರ್ವಹಣೆಯನ್ನು ಅತ್ಯಂತ ದುಸ್ತರವಾಗಿಸಿದೆ. ತರಕಾರಿ, ಇಂಧನ, ಗ್ಯಾಸ್ ಸಿಲಿಂಡರ್ ದರ ಏರಿಕೆಯ ಬೆನ್ನಲ್ಲೇ ಈಗ ಅನ್ನದ ಬಟ್ಟಲಿಗೂ ಬೆಲೆ ಏರಿಕೆಯ ಬಿಸಿ ತಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 1 ಕೋಟಿ ರೂ. ಕಲೆಕ್ಷನ್; ಬಾಕ್ಸ್ ಆಫೀಸ್​​ನಲ್ಲಿ ಡಿಸಾಸ್ಟರ್ ಆದ ಕಂಗನಾ ಸಿನಿಮಾ – Kannada News | Kangana Ranaut’s Bharat Bhagyavidhata Box Office Disaster, Day 1 Collection Shocks Fans

ಬಾಲಿವುಡ್‌ನ ವಿವಾದಿತ ಹಾಗೂ ಪ್ರತಿಭಾವಂತ ನಟಿ ಕಂಗನಾ ರಣಾವತ್ (Kangana Ranaut) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಭಾರತ ಭಾಗ್ಯವಿಧಾತ’ ಸಿನಿಮಾ ಜೂನ್ 12ರಂದು ದೇಶಾದ್ಯಂತ ಬಿಡುಗಡೆಯಾಗಿದೆ. ಆದರೆ, ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಆರಂಭ ಸಿಕ್ಕಿಲ್ಲ. ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನವೇ ಸಿನಿಮಾ ಕಲೆಕ್ಷನ್ ಮಾಡಲು ತೀವ್ರವಾಗಿ ಪರದಾಡಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದ್ದು, ಸಿನಿಮಾ ಮೊದಲ ದಿನವೇ ಡಿಸಾಸ್ಟರ್ ಹಾದಿ ಹಿಡಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೊದಲ ದಿನದ ಕಲೆಕ್ಷನ್ ವಿವರ:

ಚಿತ್ರದ ಗಳಿಕೆಯ ಬಗ್ಗೆ ಸ್ಯಾಸ್ನಿಲ್ಕ್ ಅಂಕಿ-ಅಂಶ ನೀಡಿದೆ.‘ಭಾರತ ಭಾಗ್ಯವಿಧಾತ’ ಸಿನಿಮಾ ದೇಶಾದ್ಯಂತ ಒಟ್ಟು 2,181 ಶೋಗಳನ್ನು ಕಂಡಿದ್ದರೂ, ಮೊದಲ ದಿನ ಕೇವಲ 1 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಲಷ್ಟೇ ಶಕ್ತವಾಗಿದೆ. ಇದರೊಂದಿಗೆ ಚಿತ್ರದ ಒಟ್ಟು ಭಾರತದ ಗ್ರಾಸ್ ಗಳಿಕೆ 1.19 ಕೋಟಿ ರೂಪಾಯಿ ಗಳಿಸಿದೆ. ದೊಡ್ಡ ಬಂಡವಾಳ ಹಾಗೂ ಭಾರಿ ಪ್ರಚಾರದೊಂದಿಗೆ ತೆರೆಕಂಡ ಚಿತ್ರಕ್ಕೆ ಈ ಮಟ್ಟದ ಆರಂಭಿಕ ಗಳಿಕೆ ತೀವ್ರ ನಿರಾಸೆ ಮೂಡಿಸಿದೆ.

ತೂಗುಯ್ಯಾಲೆಯಲ್ಲಿ ಸಿನಿಮಾದ ಮುಂದಿನ ಭವಿಷ್ಯ:

ಮೊದಲ ದಿನವೇ ಅತ್ಯಂತ ಕನಿಷ್ಠ ಮಟ್ಟದ ಕಲೆಕ್ಷನ್ ಮಾಡಿರುವುದರಿಂದ ಸಿನಿಮಾದ ಮುಂದಿನ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ವೀಕೆಂಡ್‌ನಲ್ಲಿ ಚಿತ್ರದ ಗಳಿಕೆಯಲ್ಲಿ ಭಾರಿ ಚೇತರಿಕೆ ಕಂಡುಬರದಿದ್ದರೆ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಂಪೂರ್ಣವಾಗಿ ಧೂಳೀಪಟವಾಗುವುದು ಖಚಿತ ಎನ್ನಲಾಗಿದೆ. ಸದ್ಯ ಚಿತ್ರದ ಮೇಲಿರುವ ನೆಗೆಟಿವ್ ರಿವ್ಯೂಗಳು ಹಾಗೂ ಪ್ರೇಕ್ಷಕರ ನೀರಸ ಪ್ರತಿಕ್ರಿಯೆ ನೋಡಿದರೆ, ಮುಂಬರುವ ದಿನಗಳಲ್ಲಿ ಚಿತ್ರಮಂದಿರಗಳಿಂದ ಈ ಸಿನಿಮಾ ಬೇಗನೇ ಎತ್ತಂಗಡಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಇದನ್ನೂ ಓದಿ: ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್

ಚಿತ್ರದ ಕಥಾವಸ್ತು ಏನಿದೆ?:

ಈ ಚಿತ್ರವು ಕಂಗನಾ ರಣಾವತ್ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಆಗಿದ್ದು, ದೇಶಭಕ್ತಿ ಹಾಗೂ ಗಂಭೀರ ರಾಜಕೀಯ ವಿದ್ಯಮಾನಗಳ ಸುತ್ತ ಕಥೆ ಸಾಗುತ್ತದೆ.2008ರ ಮುಂಬೈ ದಾಳಿ ಆಧರಿಸಿ ಸಿನಿಮಾ ಮಾಡಲಾಗಿದೆ. ಮುಂಬೈನ ಆಸ್ಪತ್ರೆಯೊಂದರಲ್ಲಿದ್ದ ಸುಮಾರು 400 ರೋಗಿಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಸಾಮಾನ್ಯ ನರ್ಸ್‌ಗಳು ಹಾಗೂ ಆರೋಗ್ಯ ಕಾರ್ಯಕರ್ತರ ಧೈರ್ಯ ಮತ್ತು ಸಾಹಸದ ಕಥೆ ಇದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Weather Report: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ – Kannada News | Karnataka Weather Update: Monsoon Intensifies, Coastal and Malenadu on High Alert

ಬೆಂಗಳೂರು, ಜೂ,13: ಕರ್ನಾಟಕದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಇಂದು (ಶನಿವಾರ, ಜೂನ್ 13) ರಾಜ್ಯಾದ್ಯಂತ ಮಿಶ್ರ ಹವಾಮಾನ ವಾತಾವರಣ ಕಂಡುಬರಲಿದೆ. ಸದ್ಯ ರಾಜ್ಯದಲ್ಲಿ ಪ್ರಸ್ತುತ 24°C ತಾಪಮಾನ ದಾಖಲಾಗಿದ್ದು, ಭಾಗಶಃ ಬಿಸಿಲಿನ ವಾತಾವರಣವಿದೆ. ಆದರೆ ಮಧ್ಯಾಹ್ನದ ನಂತರ ಹವಾಮಾನದಲ್ಲಿ ತೀವ್ರ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ದೈನಂದಿನ ಮುನ್ಸೂಚನೆ ತಿಳಿಸಿದೆ.

ಇಂದಿನ ಮುನ್ಸೂಚನೆಯ ಪ್ರಕಾರ, ಹಗಲಿನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಶೇಕಡಾ 50 ರಷ್ಟು ಸಾಧ್ಯತೆಯಿದೆ. ಹಗಲಿನಲ್ಲಿ ಗರಿಷ್ಠ ತಾಪಮಾನವು 32°C ವರೆಗೆ ತಲುಪಲಿದ್ದು, ಉಷ್ಣಾಂಶ ಮತ್ತು ಸೆಖೆಯ ವಾತಾವರಣದ ನಡುವೆಯೇ ದಿಢೀರ್ ಮಳೆ ಸುರಿಯುವ ಮುನ್ಸೂಚನೆ ಇದೆ.

ಇನ್ನು ರಾತ್ರಿಯ ವೇಳೆಗೆ ಮಳೆಯ ತೀವ್ರತೆ ಕೊಂಚ ಕಡಿಮೆಯಾಗಲಿದ್ದರೂ, ಆಕಾಶವು ಸಂಪೂರ್ಣವಾಗಿ ಮೋಡ ಕವಿದ ವಾತಾವರಣದಿಂದ ಕೂಡಿರಲಿದೆ. ರಾತ್ರಿಯ ಅವಧಿಯಲ್ಲಿ ಕನಿಷ್ಠ ತಾಪಮಾನವು 24°C ಗೆ ಕುಸಿಯಲಿದ್ದು, ತಂಪಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಹಗಲಿನ ವೇಳೆ ಹೊರಗಡೆ ಹೋಗುವಾಗ ಛತ್ರಿ ಹಾಗೂ ರೇನ್‌ಕೋಟ್‌ಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದು ಒಳಿತು.

ಇನ್ನು ಕರಾವಳಿಯ ಈ ಅವಳಿ ಜಿಲ್ಲೆಗಳಲ್ಲಿ ಇಂದು ಮುಂಗಾರು ಮಳೆ ಅತ್ಯಂತ ಪ್ರಬಲವಾಗಿರಲಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ತೀರದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ದಿನದ ತಾಪಮಾನವು ಗರಿಷ್ಠ 28°C ಮತ್ತು ಕನಿಷ್ಠ 24°C ಆಸುಪಾಸಿನಲ್ಲಿರಲಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇಂದು ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ. ಕಾರವಾರ, ಅಂಕೋಲಾ, ಕುಮಟಾ ಸೇರಿದಂತೆ ಕರಾವಳಿ ಭಾಗ ಹಾಗೂ ಶಿರಸಿ, ಸಿದ್ದಾಪುರ ಸೇರಿದಂತೆ ಘಟ್ಟದ ಮೇಲಿನ ಪ್ರದೇಶಗಳಲ್ಲಿ ದಿನಪೂರ್ತಿ ಮೋಡ ಕವಿದ ವಾತಾವರಣವಿದ್ದು, ಬಿಟ್ಟು ಬಿಟ್ಟು ಮಳೆ ಸುರಿಯಲಿದೆ. ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆಯು ನಿಗಾ ವಹಿಸಿದೆ.

ಇದನ್ನೂ ಓದಿ: ಮುಂದಿನ 7 ದಿನ ರಾಜ್ಯಾದ್ಯಂತ ವರುಣನ ಆರ್ಭಟ: ಕರಾವಳಿಯಲ್ಲಿ ಜೂನ್ 15ರವರೆಗೆ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಮಲೆನಾಡು ಭಾಗದಲ್ಲಿ ಮುಂಗಾರು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಹಾಸನ ಜಿಲ್ಲೆಯೂ ಸೇರಿದಂತೆ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಘಟ್ಟ ಪ್ರದೇಶಗಳಲ್ಲಿ ಇಂದು ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಹಾಗೂ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿ ಹಾಗೂ ಹಳ್ಳಕೊಳ್ಳಗಳಲ್ಲಿ ನೀರಿನ ಒಳಹರಿವು ಹೆಚ್ಚಾಗತೊಡಗಿದೆ. ಈ ಭಾಗದಲ್ಲಿ ತಾಪಮಾನವು ಗರಿಷ್ಠ 26°C ನಿಂದ 30°C ವರೆಗೆ ಇರಲಿದ್ದು, ರಾತ್ರಿ ವೇಳೆ ತಂಪಾದ ಹವಾಮಾನ ಇರಲಿದೆ. ಮಲೆನಾಡು ಮತ್ತು ಕರಾವಳಿ ಭಾಗದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ವಾಹನ ಸವಾರರು ಬಿರುಗಾಳಿ-ಮಳೆಯ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಲು ಕರಾವಳಿ ಮತ್ತು ಮಲೆನಾಡು ಜಿಲ್ಲಾಡಳಿತಗಳು ಹೈ-ಅಲರ್ಟ್ ಘೋಷಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿತ್ಯ ಭವಿಷ್ಯ: ಇಂದು ಈ ರಾಶಿಯವರು ಅನ್ಯರ ಕಾರ್ಯದಲ್ಲಿ ತೊಡಗಿ, ಸ್ವಕಾರ್ಯ ನಷ್ಟ – Kannada News | June 13 Daily Horoscope: Uncover Your Zodiac Predictions and Astrological Insights Today

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಶನಿವಾರದಂದು ಅಧಿಕಾರಕ್ಕೆ ಪ್ರಯತ್ನ, ವಸ್ತು ದಾನ, ವಾಹನ ದುರಸ್ತಿ, ಲೆಕ್ಕಪತ್ರ ಸಿದ್ಧತೆ, ಅಸ್ಪಷ್ಟ ಚಿಂತನೆ, ಧಾರ್ಮಿಕ ನಂಬಿಕೆ ಇವೆಲ್ಲ ಈ ದಿನದ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಶೋಭನ, ಕರಣ : ವಣಿಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:11 – 10:48, ಯಮಗಂಡ ಕಾಲ 14:01 – 15:38, ಗುಳಿಕ ಕಾಲ 05:57 – 07:34

ಮೇಷ ರಾಶಿ :

ಧಾರ್ಮಿಕಶ್ರದ್ಧೆಯಿಂದ ನಿಮಗೆ ಅನುಕೂಲವಿದ್ದರೂ ಅದನ್ನು ಮಾಡಲು ನಿಮಗೆ ಶ್ರದ್ಧೆ, ಭಕ್ತಿಯ ಕೊರತೆ ಹೆಚ್ಚಿರಲಿದೆ‌. ಅತಿಯಾದ ಕಾಯುವಿಕೆಯಿಂದ ನಿಮ್ಮ ಗೌರವವೇ ಕಡಿಮೆಯಾಗುವುದು. ಮನೆಯಲ್ಲಿ ಸಾಕಷ್ಟು ಚಟುವಟಿಕೆಗಳಿದ್ದು, ದಿನವನ್ನು ಅತಿ ಉತ್ಸಾಹದಿಂದ ಮತ್ತು ಮುದದಿಂದ ಕೂಡಿರುತ್ತದೆ. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ವಿಳಂಬವಾಗಿ ಬರುತ್ತದೆ ಎಂದುಕೊಂಡ ಹಣವು ಬೇಗ ನಿಮಗೆ ಬೇಗ ಸಿಗಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ.

ವೃಷಭ ರಾಶಿ :

ಹೊಸತನವನ್ನು ಹುಡುಕಲು ಆರಂಭಿಸುವಿರಿ. ವೈಯಕ್ತಿಕ ವಿಚಾರಕ್ಕೆ ಅನ್ಯರು ಪ್ರವೇಶ ಮಾಡುವುದು ಸರಿಕಾಣದು. ಇಂದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು. ನಿಮಗೆ ಬೇಡದ್ದನ್ನು ಕೊಟ್ಟು ದಾನಶೂರತೆಯನ್ನು ಮೆರೆಯುವಿರಿ. ತನ್ನದು ಇಷ್ಟೇ ಸಾಮರ್ಥ್ಯ ಎಂಬ ತೀರ್ಮಾನಕ್ಕೆ ಬರುವಿರಿ. ಪತ್ನಿಯ ಮನಃಸ್ಥಿತಿಯನ್ನು ಅರಿತು ಇಂದು ಅವರೊಡನೆ ವ್ಯವಹರಿಸುವುದು ಒಳ್ಳೆಯದು. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿರುವುದು.

ಮಿಥುನ ರಾಶಿ :

ನಂಬಿಕೆಯ ದ್ರೋಹದಿಂದ ನಿಮಗೆ ಬೇಸರವಾಗಲಿದೆ. ಸಹೋದರ ಜೊತೆ ನಿಮಗೆ ಯೋಗ್ಯ ಸಲಹೆಯು ಸಿಗಬಹುದು. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಹೊಸ ಮನೆಗಿಂತ ಹಳೆಯ ಮನೆಯೇ ಸುಖವೆನಿಸಿ, ಅಲ್ಲಿಗೇ ಬರುವಿರಿ. ನಿಮ್ಮ ಕಾಳಜಿ ಹಿಂಸೆಯಾಗಬಹುದು. ಕೆಲಸದಲ್ಲಿ ನಿರತವಾಗಿದ್ದರೆ ನೀವು ಹೆಚ್ಚು ಶಾಂತ ವಾತಾವರಣವನ್ನು ಬಯಸುವಿರಿ. ವಾಹನಭೀತಿಯಿಂದ ಮನೆಯಲ್ಲಿ ಇರುವಿರಿ. ಅಮೂಲ್ಯವಸ್ತುವಿನ ಕಳ್ಳತನವಾಗಬಹುದು.

ಕರ್ಕಾಟಕ ರಾಶಿ :

ನಿಮ್ಮ ವೇತನವನ್ನು ಪ್ರಯತ್ನಪೂರ್ವಕವಾಗಿ ಯಾರಾದರೂ ಕೇಳಬಹುದು. ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವಿರಿ. ಹೊಸ ಕೆಲಸಗಳನ್ನು ತಂದುಕೊಳ್ಳುವ ಬಗ್ಗೆ ಯೋಜನೆ ಹಾಕುವಿರಿ. ನಿಮಗೆ ಇಂದು ಪ್ರೇಮವಿವಾಹದಿಂದ ಆಗುವ ತೊಂದರೆಗಳ ಅರಿವಾಗಬಹುದು. ವ್ಯವಹಾರದಿಂದ ಅರ್ಧಕ್ಕೆ ಕೈಬಿಡುವ ಸಾಧ್ಯತೆ ಇದೆ. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ಉತ್ಸಾಹಕ್ಕೆ ಮನೆಯಲ್ಲಿ ಹಿನ್ನಡೆಯಾಗಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಹರಟೆ ಹೊಡೆಯುವುದು ನಿಮ್ಮ ಮನಸ್ಸಿಗೆ ಖುಷಿಯನ್ನು ಕೊಡಬಹುದು.

ಸಿಂಹ ರಾಶಿ :

ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಸಂಗಾತಿಯ ಬಗ್ಗೆ ಪ್ರೀತಿಯನ್ನು ಅನುಭವಿಸುವಿರಿ. ಇಂದು ನೀವು ಉದ್ಯೋಗವನ್ನು ಕಳೆದುಕೊಂಡು ಒದ್ದಾಡುವಿರಿ. ಖಾಸಗಿ ಉದ್ಯೋಗದವರಿಗೆ ಬಡ್ತಿ ಬರಬಹುದು. ಮಲಗಿದಾಗ ಮೇಲಿಂದ ಬೀಳಬಹುದು. ಕುಟುಂಬದ ಕಾರ್ಯಕ್ರಮದಲ್ಲಿ ನಿಮ್ಮನ್ನು ಕಡೆಗಣಿಸಿದ ಅನುಭವವಾಗಲಿದೆ. ಒತ್ತಡವಿರುವ ಸಂದರ್ಭದಲ್ಲಿ ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಲೆಂದು ಏನನ್ನಾದರೂ ಹೇಳಬಹುದು.

ಕನ್ಯಾ ರಾಶಿ :

ನೀವೇ ಇಂದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಕೌಶಲ್ಯಗಳು ಕೆಲಸದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಅಮೂಲ್ಯ ವಸ್ತುಗಳನ್ನು ಎಲ್ಲಿಯೂ ಪ್ರಕಟಿಸಲಾರಿರಿ. ಸ್ತ್ರೀಯರು ಕಲಹದ ಸಂದರ್ಭದಲ್ಲಿ ವಿಷಯಗಳನ್ನು ಬದಲಾಯಿಸಲು ಹಾಗೂ ಎಲ್ಲವನ್ನೂ ಮರೆಯಲು ಸುತ್ತಾಡಲು ಬಯಸಬಹುದು. ಕರ್ತವ್ಯವನ್ನು ಬಿಡಸೇ ನಿರ್ವಹಿಸಿ. ಅಪರಿಚಿತ ವ್ಯಕ್ತಿಯ ಜೊತೆ ಜಗಳವಾಡಿ ದ್ವೇಷ ಬರುವಂತೆ ಮಾಡಿಕೊಳ್ಳುವಿರಿ.

ತುಲಾ ರಾಶಿ :

ಇಂದು ಧಾರ್ಮಿಕ ಕಾರ್ಯಗಳಿಗೆ ಸಮಯವನ್ನೂ ಬೇಕಾದ ವ್ಯವಸ್ಥೆಯನ್ನೂ ಮಾಡಿಕೊಳ್ಳುರಿ. ಪರೋಪಕಾರದಲ್ಲಿ ಆಸಕ್ತಿ ಹೆಚ್ಚಿದ್ದು ಇನ್ನೊಬ್ಬರನ್ನೂ ಇದಕ್ಕೆ ಪ್ರೇರಿಸುವಿರಿ. ಆಸ್ತಿಯ ಹಂಚಿಕೆಯ ವ್ಯವಹಾರವನ್ನು ಮುಕ್ತಾಯಗೊಳಿಸಲು ಇದು ಉತ್ತಮ ದಿನ. ಎಲ್ಲದಕ್ಕೂ ಸುಲಭ ದಾರಿ ಸಿಗದು. ಕೆಲವು ಒತ್ತಡಗಳು ನಿಮ್ಮನ್ನು ಆಧ್ಯಾತ್ಮಿಕ ಸ್ಥಳದ ಕಡೆಗೆ ಹೋಗುವಂತೆ ಮಾಡಬಹುದು. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿದ್ದು ಅನುಭವಿಗಳಿಂದ ಸ್ಪಷ್ಟತೆಯನ್ನು ತಂದುಕೊಳ್ಳುವಿರಿ.

ವೃಶ್ಚಿಕ ರಾಶಿ :

ನಿಮಗೆ ಲಾಭವಾಗುವ ಕೆಲವು ಕಾರ್ಯಗಳು ನಿಮಗೆ ಸಿಗಬಹುದು. ಸಂಗಾತಿಯನ್ನು ಹೊರಗೆ ಕರೆದುಕೊಂಡುಹೋಗುವ ಸನ್ನಿವೇಶ ಬರಬಹುದು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ನಿಮ್ಮ ಭಕ್ತಿಯ ಪ್ರಾರ್ಥನೆಗೆ ಫಲ ಸಿಗಲಿದೆ. ವಸ್ತುಗಳನ್ನು ಸದುಪಯೋಗ ಮಾಡಲು ಕಲಿಯಬೇಕಾಗುವುದು. ಕೆಲಸದ ಕಾರ್ಯಕ್ಷಮತೆಯು ಉನ್ನತ ಅಧಿಕಾರಿಗಳನ್ನು ಗೆಲ್ಲುತ್ತಿದೆ. ಮನಸ್ಸನ್ನು ಸುಮ್ಮನೆ ಬಿಡದೇ ಅನ್ಯ ಕಾರ್ಯದಲ್ಲಿ ತೊಡಗಿಸಿ. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು.

ಧನು ರಾಶಿ :

ಇಂದು ಹೆಚ್ಚು ಸಮಯವು ಸಿಗುವ ಕಾರಣ ಇನ್ನೊಬ್ಬರ ಕುರಿತು ಹರಟೆ ಮಾಡುವಿರಿ. ನಿಮಗೆ ಇಂದು ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಗಟ್ಟಿತನ ಕೊಡಲಿದೆ. ಕೆಲಸದಲ್ಲಿ ಪ್ರಶಂಸೆ ನಿಮ್ಮನ್ನು ಇನ್ನೂ ಉತ್ತಮವಾಗಿ ಮಾಡಲು ಪ್ರೇರೇಪಿಸುತ್ತದೆ. ಪ್ರಗತಿಯ ಪರಿಶೀಲನೆಗೆ ತೆರಳುವಿರಿ. ನೀವು ಕುಟುಂಬದ ಸಮಸ್ಯೆಯನ್ನು ಸರಿಪಡಿಸಲು ಸಹಾಯ ಮಾಡಬಹುದು. ಮಕ್ಕಳಿಂದ‌ ಸಂತೋಷವಾರ್ತೆ ಬರಲಿದೆ. ಮೇಲಧಿಕಾರಿಗಳ ಪ್ರಶಂಸೆಯಿಂದ ಕೆಲಸದಲ್ಲಿ ಆಸಕ್ತಿ ಬರಲಿದೆ. ಮನಸ್ಸನ್ನು ಏಕಾಗ್ರಗೊಳಿಸುವತ್ತ ಗಮನಹರಿಸಿ.

ಮಕರ ರಾಶಿ :

ನಿಮಗೆ ಎಲ್ಲ ಕಡೆಗಳಿಂದ ತೊಂದರೆಯಾದಂತೆ ಅನ್ನಿಸೀತು. ಸಾಲದ ವಸೂಲಿಯನ್ನು ಬಹಳ ತಾಳ್ಮೆಯಿಂದ ಸಿಟ್ಟನ್ನೆಲ್ಲ ನಿಯಂತ್ರಣದಲ್ಲಿ ಇರಿಸಿಕೊಂಡು ಮಾಡಬೇಕಾಗುತ್ತದೆ. ನಿಮ್ಮ ಎಲ್ಲ ತಿಳಿವಳಿಕೆಯನ್ನೂ ಇನ್ನೊಬ್ಬರ ಮೇಲೆ ಹೇರುವುದು ಬೇಡ. ಹೆಚ್ಚಿನ ವೇತನದ ಯೋಜನೆ ನಿಮ್ಮ ತೆಕ್ಕೆಗೆ ಸಿಗಲಿದೆ, ಸ್ಥಿರವಾಗಿರಿ. ನೀವು ಇಂದು ಮನೆಯಲ್ಲಿನ ವಿಷಯಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಸಂಗಾತಿಯ ಜೊತೆ ಹರಟೆ ಹೊಡೆಯುವಷ್ಟು ಅವಕಾಶ ಸಿಗುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ.

ಇದನ್ನೂ ಓದಿ: ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ…

ಕುಂಭ ರಾಶಿ :

ನಿಮಗೆ ಉದ್ಯೋಗದಲ್ಲಿ ಬಡ್ತಿಯಿಂದ ಸಂತೋಷವು ಇಮ್ಮಡಿಸುವುದು. ಕೆಲವು ಸಂದರ್ಭದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ನಿಮ್ಮ ವ್ಯವಹಾರ ಪಾಲುದಾರರನ್ನು ನಿಮ್ಮ ಕಲ್ಪನೆಗೆ ಸೇರಿಸಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮನೆ ಬದಲಾವಣೆಗೆ ನಿಮ್ಮ ಸಲಹೆಯನ್ನು ಸ್ವೀಕರಿಸಲಾಗುತ್ತದೆ. ಇಂದು ಸಮಯಯನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದರೂ ಸುಮ್ಮನಿರುವಿರಿ. ಎಲ್ಲರನ್ನೂ ಸಮಾಧಾನ ಮಾಡಲಾಗದು. ನಿಮ್ಮ ಕರ್ತವ್ಯವನ್ನು ಮಾಡಿ ಮುಗಿಸಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು.

ಮೀನ ರಾಶಿ :

ಇಂದು ನಿಮಗೆ ಬರುವ ಕೋಪವನ್ನು ಕಡಿಮೆ ಮಾಡಿಕೊಳ್ಳಿ. ಮನಸ್ಸು ಶಾಂತವಾದ ಬಳಿಕ ನಿಮ್ಮ ಕಾರ್ಯಗಳನ್ನು ಆರಂಭಿಸುವುದೇ ಉತ್ತಮ.‌ ಯಾಮಾರಿದರೆ ಇರುವ ಸಂಪತ್ತು ನಷ್ಟ. ನಿರೀಕ್ಷಿತ ಹಣವು ಅಂತಿಮವಾಗಿ ನಿಮ್ಮನ್ನು ತಲುಪಬಹುದು. ವ್ಯವಹಾರದಲ್ಲಿ ನಿಮಗಾಗಿ ಒಂದು ಸುವರ್ಣ ಅವಕಾಶ ಕಾಯುತ್ತಿರಬಹುದು. ಕುಟುಂಬದ ಸದಸ್ಯರು ಆನಂದದ ಆಶ್ಚರ್ಯವನ್ನು ಕಾಯ್ದಿರಿಸುವೆರು. ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಿರಿ. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ.

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version