Promise Day 2026 Date: ಫೆಬ್ರವರಿ 11 ರಂದು ಪ್ರಾಮಿಸ್ ಡೇ ಆಚರಿಸುವುದೇಕೆ? ಈ ದಿನ ಇತಿಹಾಸ, ಮಹತ್ವ ತಿಳಿಯಿರಿ – Kannada News | Promise Day 2026: Why is Promise Day celebrated? Know the history and significance of this day

ವ್ಯಾಲೆಂಟೈನ್‌ ವೀಕ್‌ನ ಐದನೇ ದಿನ ಅಂದರೆ ಫೆಬ್ರವರಿ 11 ರಂದು ಪ್ರಾಮಿಸ್ ಡೇ (Promise Day)  ಆಚರಿಸಲಾಗುತ್ತದೆ. ಈ ದಿನದಂದು, ಸಂಗಾತಿಗಳು ತಮ್ಮ ಸಂಬಂಧದಲ್ಲಿ ನಂಬಿಕೆಯ ಬಂಧಗಳನ್ನು ಬಲಪಡಿಸಲು ಪರಸ್ಪರ ಅನೇಕ ಭರವಸೆಗಳನ್ನು ನೀಡುತ್ತಾರೆ. ಹೌದು ಟೆಡ್ಡಿ ಡೇಯ ನಂತರ ಬರುವ ಈ ದಿನದಂದು, ಜನರು ಪರಸ್ಪರ ವಾಗ್ದಾನ ಮಾಡುವ ಮೂಲಕ ತಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತಾರೆ. ಸಂಬಂಧವನ್ನು ಬಲಪಡಿಸಲು, ನಂಬಿಕೆಯನ್ನು ಗಟ್ಟಿಗೊಳಿಸಲು ಇರುವಂತಹ ಈ ವಿಶೇಷ ದಿನದ ಆಚರಣೆಯ ಹಿನ್ನೆಲೆಯೇನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

 ಪ್ರಾಮಿಸ್‌ ಡೇ ಆಚರಣೆ ಪ್ರಾರಂಭವಾದ್ದು ಹೇಗೆ?

ಪ್ರೇಮಿಗಳ ವಾರದಲ್ಲಿ ಆಚರಿಸಲಾಗುವಂತಹ ಪ್ರಾಮಿಸ್‌ ಡೇ ತುಂಬಾನೇ ವಿಶೇಷವಾಗಿದ್ದು, ಇದು ಇಬ್ಬರು ಜನರ ನಡುವಿನ ಬಾಂಧವ್ಯ ಮತ್ತು ಪ್ರೀತಿಯನ್ನು ಬಲಪಡಿಸುವ ದಿನವಾಗಿದೆ. ಪ್ರಾಮಿಸ್ ಡೇ ಬಗ್ಗೆ ಯಾವುದೇ ಲಿಖಿತ ಇತಿಹಾಸವಿಲ್ಲದಿದ್ದರೂ, ಪ್ರಾಮಿಸ್ ಡೇ ಅನ್ನು ಏಕೆ ಆಚರಿಸಲಾಗುತ್ತದೆ ಎಂಬುದಕ್ಕೆ ಸ್ಪಷ್ಟ ವಿವರಣೆ ಇಲ್ಲದಿದ್ದರೂ  ಪ್ರಾಮಿಸ್ ಡೇ ಆಚರಿಸುವ ಸಂಪ್ರದಾಯವು ಪ್ರಾಚೀನ ರೋಮ್‌ನಲ್ಲಿ ಪ್ರಾರಂಭವಾಯಿತು ಎಂದು ಹೇಳಾಗುತ್ತದೆ.

ಪ್ರಾಮಿಸ್ ಡೇಗೆ ಸಂಬಂಧಿಸಿದ ಒಂದು ಕಥೆಯ ಪ್ರಕಾರ, 1816 ರಲ್ಲಿ, ರಾಜಕುಮಾರಿ ಷಾರ್ಲೆಟ್ ತನ್ನ ಭಾವಿ ಪತಿಗೆ ಪ್ರಪೋಸ್ ಮಾಡಿದಳು. ನಂತರ ಅವರಿಬ್ಬರು ತಮ್ಮ ಸಂಬಂಧವನ್ನು ಬಲಪಡಿಸಲು ಪರಸ್ಪರ ಭರವಸೆ ನೀಡಿದರು. ಅದರ ನಂತರ, ಈ ಸಂಪ್ರದಾಯವು ಕ್ರಮೇಣ ಮುಂದುವರೆಯಿತು ಮತ್ತು ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಈ ಪ್ರಾಮಿಸ್ ಡೇ ಆಚರಿಸುವ ಸಂಪ್ರದಾಯ ಬಂತು ಎಂದು ಹೇಳಲಾಗುತ್ತದೆ. ಈ ದಿನದಂದು, ಪ್ರೇಮಿಗಳು ತಮ್ಮ ಜೀವನದುದ್ದಕ್ಕೂ ತಮ್ಮ ಪ್ರೀತಿಯ ಸಂಬಂಧವನ್ನು ಬಲವಾಗಿಡಲು ಅನೇಕ ಭರವಸೆಗಳನ್ನು ನೀಡುತ್ತಾರೆ. ಪ್ರತಿಯೊಂದು ಕ್ಷಣವೂ ಜೊತೆಯಾಗಿರುತ್ತೇವೆ ಎಂದು ಪ್ರತಿಜ್ಞೆಯನ್ನೂ ಮಾಡುತ್ತಾರೆ.

ಪ್ರಾಮಿಸ್‌ ಡೇ ಮಹತ್ವವೇನು?

  • ಪ್ರಾಮಿಸ್ ಡೇ ಎಂದರೆ ಪ್ರೀತಿಯನ್ನು ಬದ್ಧತೆಯಾಗಿ ಪರಿವರ್ತಿಸುವ ದಿನ.
  • ಇದು ಸಂಬಂಧದಲ್ಲಿ ನಂಬಿಕೆಯನ್ನು ಹೆಚ್ಚಿಸುತ್ತದೆ
  • ಕಷ್ಟದ ಸಮಯದಲ್ಲಿ ಒಟ್ಟಾಗಿ ನಿಲ್ಲಲು ಶಕ್ತಿ ನೀಡುತ್ತದೆ.
  • ಭರವಸೆಗಳು ವ್ಯಕ್ತಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ.
  • ಭರವಸೆಯು ಒಂದು ದಾರವಾಗಿದ್ದು, ಇದು ಬಂಧವನ್ನು ಬಿಗಿಗೊಳಿಸುತ್ತದೆ.
  • ಒಟ್ಟಾರೆಯಾಗಿ ಇದು ಸಂಬಂಧವನ್ನು ಬಲಪಡಿಸಲು ಮತ್ತು ಸಂಗಾತಿಗಳ ನಡುವಿನ ನಂಬಿಕೆಯನ್ನು ಹೆಚ್ಚಿಸಲು ಇರುವ ವಿಶೇಷ ದಿನವಾಗಿದೆ.

ಇದನ್ನೂ ಓದಿ: ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ಭಾಗವಾಗಿದ್ದು ಹೇಗೆ? ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

ಪ್ರಾಮಿಸ್‌ ಡೇ ದಿನ ನೀವು ಈ ಭರವಸೆಗಳನ್ನು ನೀಡಬಹುದು:

  • ಪ್ರಾಮಿಸ್ ಡೇ ದಿನದಂದು, ನಿಮ್ಮ ಸಂಗಾತಿಯನ್ನು ಯಾವಾಗಲೂ ಸಂತೋಷವಾಗಿಡುತ್ತೇನೆ ಎಂದು ನೀವು ಭರವಸೆ ನೀಡಬಹುದು.
  • ಎಷ್ಟೇ ದೊಡ್ಡ ಜಗಳವಾದರೂ ನಿನ್ನನ್ನು ಬಿಟ್ಟು ಹೋಗುವುದಿಲ್ಲ ಎಂಬ ಪ್ರತಿಜ್ಞೆ ಮಾಡಬಹುದು.
  • ಯಾವುದೇ ಸಂಬಂಧಕ್ಕೂ ಪ್ರೀತಿ ಅತ್ಯಗತ್ಯ. ಪ್ರಾಮಿಸ್ ಡೇಯಂದು ನಿಮ್ಮ ಸಂಗಾತಿಗೆ ಅವರ ಮೇಲಿನ ನಿಮ್ಮ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ನೀವು ಭರವಸೆ ನೀಡಬಹುದು.
  • ಸಂಗಾತಿಯ ಎಲ್ಲಾ ಕನಸುಗಳನ್ನು ಈಡೇರಿಸುವಲ್ಲಿ ನಿಮ್ಮ ಸಂಗಾತಿಯನ್ನು ಬೆಂಬಲಿಸುವುದಾಗಿ ಭರವಸೆ ನೀಡಬಹುದು.
  • ಎಷ್ಟೇ ಬ್ಯುಸಿ ಇದ್ದರೂ ಸಹ ನಿನಗಾಗಿ ಪ್ರತಿನಿತ್ಯ ಸ್ವಲ್ಪ ಸಮಯ ಮೀಸಲಿಡುವೆ, ನಿನ್ನೊಂದಿಗೆ ಸಮಯ ಕಳೆಯುವೇ ಎಂಬ ಪ್ರತಿಜ್ಞೆಯನ್ನೂ ಮಾಡಬಹುದು.
  • ನೀವು ನಿಮ್ಮ ಸಂಗಾತಿಯ ನಂಬಿಕೆಯನ್ನು ಎಂದಿಗೂ ಮುರಿಯುವುದಿಲ್ಲ ಮತ್ತು ಯಾವಾಗಲೂ ನಿಷ್ಠರಾಗಿರುತ್ತೀರಿ ಎಂದು ಪ್ರಾಮಿಸ್‌ ಮಾಡಬಹುದು.
  • ನೀವು ಅವರ ಭಾವನೆಗಳನ್ನು ಗೌರವಿಸುವಿರಿ ಮತ್ತು ಪ್ರತಿಯೊಂದು ಸನ್ನಿವೇಶದಲ್ಲೂ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಮೂಲಕ ಅವರಿಗೆ ಪೂರ್ಣ ಗೌರವವನ್ನು ನೀಡುವಿರಿ ಎಂಬ ಭರವಸೆಯನ್ನೂ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ: ಶೇ. 50ರಷ್ಟು ಸಿಗಲಿದೆ ಮನೆ ಬಾಡಿಗೆ ಭತ್ಯೆ – Kannada News | Big HRA Boost for Bengaluru: 50% Tax Exemption as Metro City Status Confirmed

ಬೆಂಗಳೂರು, ಫೆ.10: ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಹೊಸ ಸಿಹಿ ಸುದ್ದಿ ನೀಡಿದೆ. ಈ ಬಗ್ಗೆ ನವದೆಹಲಿಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಆದಾಯ ತೆರಿಗೆ ನಿಯಮಗಳ ಪ್ರಕಾರ, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳನ್ನು ಮಾತ್ರ ‘ಮೆಟ್ರೋ ನಗರಗಳು’ ಎಂದು ಪರಿಗಣಿಸಿ ಶೇ. 50 ರಷ್ಟು HRA (ಮನೆ ಬಾಡಿಗೆ ಭತ್ಯೆ) ವಿನಾಯಿತಿ ನೀಡಲಾಗುತ್ತಿತ್ತು. ಬೆಂಗಳೂರು ವಿಶ್ವಮಟ್ಟದ ನಗರವಾಗಿದ್ದರೂ ತಾಂತ್ರಿಕವಾಗಿ ಇದನ್ನು ‘ಬಾಕಿ ನಗರಗಳ’ ಪಟ್ಟಿಯಲ್ಲಿ ಇರಿಸಲಾಗಿತ್ತು, ಹೀಗಾಗಿ ಇಲ್ಲಿನವರಿಗೆ ಕೇವಲ ಶೇ. 40 ರಷ್ಟು ಮಾತ್ರ ವಿನಾಯಿತಿ ಸಿಗುತ್ತಿತ್ತು. ಆದರೆ ಇದೀಗ ಬೆಂಗಳೂರನ್ನು ಮೆಟ್ರೋ ನಗರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮೂಲಕ ಶೇ. 50 ರಷ್ಟು HRA (ಮನೆ ಬಾಡಿಗೆ ಭತ್ಯೆ) ವಿನಾಯಿತಿ ನೀಡಲಾಗುವುದು.

ಸಂಸದ ತೇಜಸ್ವಿ ಸೂರ್ಯ ಅವರು ಎರಡು ವರ್ಷಗಳ ಹಿಂದೆಯೇ ಸಂಸತ್ತಿನಲ್ಲಿ ಮತ್ತು ಹಣಕಾಸು ಸಚಿವರ ಬಳಿ ಬೆಂಗಳೂರಿನ ಜೀವನ ವೆಚ್ಚ (Cost of Living) ದೆಹಲಿ-ಮುಂಬೈಗೆ ಸಮಾನವಾಗಿದೆ, ಆದ್ದರಿಂದ ಬೆಂಗಳೂರನ್ನು ಮೆಟ್ರೋ ಪಟ್ಟಿಗೆ ಸೇರಿಸಲೇಬೇಕು ಎಂದು ಒತ್ತಾಯಿಸಿದ್ದರು. ಆ ಬೇಡಿಕೆ ಈಗ ಈಡೇರಿದಂತಾಗಿದೆ. ಈ ಮೂಲಕ ಬೆಂಗಳೂರಿಗೆ ಮೆಟ್ರೋ ನಗರಗಳ ಪಟ್ಟಿಯಲ್ಲಿ ಸೇರುವ ಭಾಗ್ಯ ಸಿಕ್ಕಿದೆ.

ಇದನ್ನೂ ಓದಿ: GBA ಗುರುತಿಸಿದ ಕೇಂದ್ರಗಳಲ್ಲಿ ಮಾತ್ರ ಬೀದಿ ನಾಯಿಗಳಿಗೆ ಆಹಾರ ಹಾಕಬೇಕು: ಉಲ್ಲಂಘಿಸಿದರೆ ದಂಡ

ಇದರಿಂದ ಆಗುವ ನೇರ ಲಾಭವೇನು?

ಹೆಚ್ಚುವರಿ ತೆರಿಗೆ ಉಳಿತಾಯ: ಈಗ ನಿಮ್ಮ ಮೂಲ ವೇತನದ ಶೇ. 50 ರಷ್ಟು ಮೊತ್ತವನ್ನು HRA ವಿನಾಯಿತಿಯಾಗಿ ಪಡೆಯಬಹುದು. ಇದುವರೆಗೆ ಇದು ಶೇ. 40 ರಷ್ಟಿತ್ತು.

ವೇತನದಾರರಿಗೆ ನೆರವು: ಸಾಫ್ಟ್‌ವೇರ್ ಉದ್ಯೋಗಿಗಳು ಸೇರಿದಂತೆ ಖಾಸಗಿ ಮತ್ತು ಸರ್ಕಾರಿ ವಲಯದ ಲಕ್ಷಾಂತರ ಉದ್ಯೋಗಿಗಳ ಕೈಗೆ ಸಿಗುವ ವೇತನ ಹೆಚ್ಚಾಗಲಿದೆ.

ತೆರಿಗೆ ಹೊರೆ ಇಳಿಕೆ: ಒಟ್ಟು ತೆರಿಗೆ ವಿಧಿಸಬಹುದಾದ ಆದಾಯದಲ್ಲಿ (Taxable Income) ಹೆಚ್ಚಿನ ಕಡಿತ ಪಡೆಯಲು ಅವಕಾಶ ಸಿಗುವುದರಿಂದ ತೆರಿಗೆ ಪಾವತಿ ಕಡಿಮೆಯಾಗಲಿದೆ.

ಯಾವ ಆರ್ಥಿಕ ವರ್ಷದಿಂದ ಅನ್ವಯ?

ಸಂಸದ ತೇಜಸ್ವಿ ಸೂರ್ಯ ಅವರು ಪ್ರಸ್ತಾಪಿಸಿರುವ ಈ ಹೊಸ ಡ್ರಾಫ್ಟ್ ನಿಯಮವು, ಕೇಂದ್ರ ಸರ್ಕಾರದ ಮುಂದಿನ ಅಧಿಸೂಚನೆಯ ಪ್ರಕಾರ ಆರ್ಥಿಕ ವರ್ಷ 2026-27 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರವು ಇದನ್ನು ಪೂರ್ವಾನ್ವಯವಾಗಿ ಜಾರಿಗೊಳಿಸಿದರೆ, ಪ್ರಸಕ್ತ ವರ್ಷದ ತೆರಿಗೆ ರಿಟರ್ನ್ಸ್‌ನಲ್ಲೂ ಲಾಭ ಸಿಗುವ ಸಾಧ್ಯತೆ ಇರುತ್ತದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿ ರಾಜಾ ಸಾಬ್: ಚಿತ್ರಮಂದಿರದಲ್ಲಿ ಪ್ರಭಾಸ್ ಸಿನಿಮಾ ಫ್ಲಾಪ್, ಒಟಿಟಿಯಲ್ಲಿ ಸೂಪರ್ ಹಿಟ್ – Kannada News | Prabhas starrer The Raja Saab movie is now trending at No 1 on Jio Hotstar

ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ (Prabhas) ಅವರು ನಟಿಸಿದ ‘ದಿ ರಾಜಾ ಸಾಬ್’ ಸಿನಿಮಾ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರು ನಟಿಸಿದ ಮೊದಲ ಹಾರರ್ ಸಿನಿಮಾ ಎಂಬ ಕಾರಣದಿಂದ ನಿರೀಕ್ಷೆ ಡಬಲ್ ಆಗಿತ್ತು. ಜನವರಿ 9ರಂದು ಚಿತ್ರಮಂದಿರಗಳಲ್ಲಿ ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಬಿಡುಗಡೆ ಆಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆದ ಈ ಸಿನಿಮಾ ಇತ್ತೀಚೆಗೆ ಒಟಿಟಿಗೆ ಬಂತು. ಅಚ್ಚರಿ ಎಂದರೆ, ಒಟಿಟಿಯಲ್ಲಿ (OTT ) ಈ ಸಿನಿಮಾ ಸೂಪರ್ ಹಿಟ್ ಆಗಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ‘ದಿ ರಾಜಾ ಸಾಬ್’ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಆದರೆ ನಂತರದ ದಿನಗಳಲ್ಲಿ ಕಲೆಕ್ಷನ್ ವಿಪರೀತ ಕುಸಿಯಿತು. ಗಲ್ಲಾಪಟ್ಟಿಗೆಯಲ್ಲಿ ಈ ಸಿನಿಮಾ ಮಾಡಿದ ಒಟ್ಟು ಕಲೆಕ್ಷನ್ ಅಂದಾಜು 206 ಕೋಟಿ ರೂಪಾಯಿ. ಚಿತ್ರದ ಒಟ್ಟು ಬಜೆಟ್ 400 ಕೋಟಿ ರೂಪಾಯಿಗೂ ಅಧಿಕ. ಹಾಕಿದ ಬಂಡವಾಳ ಮರಳಿ ಬಂದಿಲ್ಲ. ಅದರಿಂದ ವಿತರಕರಿಗೆ ನಷ್ಟ ಆಯಿತು.

ಚಿತ್ರಮಂದಿರದಲ್ಲಿ ಫ್ಲಾಪ್ ಆಗಿದ್ದರಿಂದ ಕೆಲವೇ ದಿನಗಳಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ಒಟಿಟಿಗೆ ಬಂತು. ಫೆಬ್ರವರಿ 6ರಿಂದ ಈ ಸಿನಿಮಾ ‘ಜಿಯೋ ಹಾಟ್​ಸ್ಟಾರ್’ ಒಟಿಟಿ ಮೂಲಕ ಪ್ರಸಾರ ಆಗುತ್ತಿದೆ. ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ನೆಗೆಟಿವ್ ವಿಮರ್ಶೆ ನೀಡಿದ್ದಾರೆ. ಹಾಗಿದ್ದರೂ ಕೂಡ ಈ ಸಿನಿಮಾ ಟ್ರೆಂಡಿಂಗ್​​ನಲ್ಲಿದೆ.

ಒಟಿಟಿ ವೀಕ್ಷಕರು ಮುಗಿಬಿದ್ದು ‘ದಿ ರಾಜಾ ಸಾಬ್’ ಸಿನಿಮಾವನ್ನು ನೋಡುತ್ತಿದ್ದಾರೆ. ತೆಲುಗಿನಲ್ಲಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ತೆಲುಗು, ತಮಿಳು ಮತ್ತು ಕನ್ನಡ ಒಟಿಟಿ ಟ್ರೆಂಡಿಂಗ್​​ನಲ್ಲಿ ಈ ಸಿನಿಮಾ ನಂಬರ್ 1 ಸ್ಥಾನ ಪಡೆದಿದೆ. ಮಲಯಾಳಂನಲ್ಲಿ 2ನೇ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ: ‘ರಾಜಾಸಾಬ್’ ಸೋಲಿನ ಬಳಿಕ ಬಜೆಟ್ ಉಳಿಸಲು ಹೊಸ ಪ್ಲ್ಯಾನ್ ರೂಪಿಸಿದ ಪ್ರಭಾಸ್

ಮಾರುತಿ ಅವರು ನಿರ್ದೇಶನ ಮಾಡಿದ ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಪ್ರಭಾಸ್ ಅವರು ಹಲವು ಗೆಟಪ್ ಧರಿಸಿದ್ದಾರೆ. ಸಂಜಯ್ ದತ್, ನಿಧಿ ಅಗರ್​ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್, ಬೋಮನ್ ಇರಾನಿ, ಮುರಳಿ ಶರ್ಮಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫೆ. 4ರಂದು ಅಧಿವೇಶನದಲ್ಲಿ ನಡೆದಿದ್ದೇನು? ಕಾಂಗ್ರೆಸ್ ಮಹಿಳಾ ಸಂಸದರ 2 ವಿಡಿಯೋ ರಿಲೀಸ್ ಮಾಡಿದ ಬಿಜೆಪಿ – Kannada News | BJP Minister Kiren Rijiju releases 2 videos of Congress MPs gathering near PM Modis chair in Lok Sabha on Feb 4

ನವದೆಹಲಿ, ಫೆಬ್ರವರಿ 10: ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಭಾಷಣ ಮಾಡಬೇಕಾಗಿದ್ದ ದಿನವಾದ ಫೆ. 4ರಂದು ಲೋಕಸಭೆಯ ಒಳಗೆ ಏನೆಲ್ಲ ನಡೆಯಿತು ಎಂಬುದರ 2 ವಿಡಿಯೋಗಳನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ. ಇಂದು ಬಿಜೆಪಿಯ ಮಹಿಳಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ ದೂರನ್ನು ಕೂಡ ಅವರು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಸಂಸದರು ಸಂಸತ್ತಿನ ಮಿತಿಗಳನ್ನು ಮೀರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದ ಕಿರಣ್ ರಿಜಿಜು, “ಕಾಂಗ್ರೆಸ್ ಪಕ್ಷವು ತಮ್ಮ ಸಂಸದರ ಅತ್ಯಂತ ಅವಮಾನಕರ ನಡವಳಿಕೆಯ ಬಗ್ಗೆ ಹೆಮ್ಮೆಪಡುತ್ತದೆ!! ನಾವು ಆ ದಿನ ಎಲ್ಲಾ ಬಿಜೆಪಿ ಸಂಸದರನ್ನು ತಡೆಯದಿದ್ದರೆ ಆ ದಿನ ತುಂಬಾ ಮುಜುಗರದ ದೃಶ್ಯಕ್ಕೆ ಕಾರಣವಾಗುತ್ತಿತ್ತು. ಸಂಸತ್ತಿನ ಘನತೆ ಮತ್ತು ಪಾವಿತ್ರ್ಯವನ್ನು ರಕ್ಷಿಸಲು ನಾವು ಆ ದಿನ ಸುಮ್ಮನಿದ್ದೆವು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಏನೋ ಪ್ಲಾನ್ ಮಾಡಿದೆಯೆಂದು ನಾನೇ ಪ್ರಧಾನಿ ಮೋದಿಗೆ ಗೈರಾಗಲು ಸೂಚಿಸಿದ್ದೆ; ಸ್ಪೀಕರ್ ಓಂ ಬಿರ್ಲಾ

ಫೆಬ್ರವರಿ 4ರಂದು ಮೋದಿಯವರ ಭಾಷಣಕ್ಕೆ ಕೆಲವೇ ನಿಮಿಷಗಳ ಮೊದಲು ಅಧಿವೇಶನವನ್ನು ಮುಂದೂಡಬೇಕಾಯಿತು. ಕಾಂಗ್ರೆಸ್ ಮಹಿಳಾ ಸಂಸದರ ಗದ್ದಲದಿಂದ ಸ್ಪೀಕರ್ ಓಂ ಬಿರ್ಲಾ ತಾವೇ ಪ್ರಧಾನಿ ಮೋದಿಗೆ ಅಧಿವೇಶನಕ್ಕೆ ಹಾಜರಾಗದಿರಲು ಸೂಚಿಸಿದ್ದಾಗಿ ಹೇಳಿದ್ದರು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಇಂದು 2 ವಿಡಿಯೋಗಳನ್ನು ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ. “ಗೌರವಾನ್ವಿತ ಸಂಸದರ ಇಂತಹ ನಡವಳಿಕೆಗಳನ್ನು ಯಾರಾದರೂ ಸಮರ್ಥಿಸಲು ಸಾಧ್ಯವೇ? ನಾವು ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕು. ಯಾವುದೇ ಬಿಜೆಪಿ ಸಂಸದರು ಅಸಭ್ಯವಾಗಿ ವಿರೋಧ ಪಕ್ಷದ ಸಂಸದರೊಂದಿಗೆ ದೈಹಿಕ ಘರ್ಷಣೆಗೆ ಇಳಿಯಬಾರದು ಎಂಬುದು ನಮ್ಮ ಹೈಕಮಾಂಡ್​ನ ಸ್ಪಷ್ಟ ನಿರ್ದೇಶನವಾಗಿತ್ತು” ಎಂದು ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೋದಿ ಕುರ್ಚಿ ಸುತ್ತುವರೆದಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್​ಗೆ ಪತ್ರ ಬರೆದ ಬಿಜೆಪಿಯ ಮಹಿಳಾ ಸಂಸದರು

“ಬಿಜೆಪಿ ಮಹಿಳಾ ಸಂಸದರು ಕಾಂಗ್ರೆಸ್ ಸಂಸದರ ವರ್ತನೆಯ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಸಂಸದರು ಪ್ರಧಾನಿ ಕುಳಿತುಕೊಳ್ಳುವ ಬೆಂಚನ್ನು ದಾಟಿ, ಖಜಾನೆ ಕಡೆಗೆ ಹೋದರು. ಅವರು ಇಡೀ ಪ್ರದೇಶವನ್ನು ಬಹುತೇಕ ಮುತ್ತಿಗೆ ಹಾಕಿದ್ದರು. ಕಾಂಗ್ರೆಸ್ ಸಂಸದರು ಖಜಾನೆ ಕಡೆಗೆ ದಾಟಿದ ನಂತರ ಬಿಜೆಪಿ ಮಹಿಳಾ ಸಂಸದರು ಕೋಪಗೊಂಡರು. ಆ ವೇಳೆ ನಮ್ಮ ಬಿಜೆಪಿ ಹಾಗೂ ಎನ್‌ಡಿಎ ಸಂಸದರನ್ನು ನಾವು ನಿಯಂತ್ರಿಸಬೇಕಾಗಿತ್ತು. ಕಾಂಗ್ರೆಸ್ ಸಂಸದರ ಈ ವರ್ತನೆಯಿಂದ ಬಿಜೆಪಿ ಮಹಿಳಾ ಸಂಸದರು ತುಂಬಾ ಉದ್ರೇಕಗೊಂಡರು. ಆದರೂ ನಾವು ಸದನಕ್ಕೆ ಗೌರವ ಕೊಟ್ಟು ನಮ್ಮ ಸಂಸದರು ದೈಹಿಕ ಘರ್ಷಣೆ ಮಾಡದಂತೆ ತಡೆದಿದ್ದೇವೆ. ನಂತರ ಕಾಂಗ್ರೆಸ್ ಸಂಸದರು ಸ್ಪೀಕರ್ ಕೊಠಡಿಗೆ ಹೋಗಿ ಸ್ಪೀಕರ್‌ಗೆ ಬೆದರಿಕೆ ಹಾಕಿದರು. ಹೀಗಾಗಿ ಬಿಜೆಪಿ ಮಹಿಳಾ ಸಂಸದರು ದೂರು ದಾಖಲಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಷ್ಠಿತ ಹೋಟೆಲ್​​ನಲ್ಲಿ ಮಹಿಳೆಯ ಜೊತೆ ಸ್ಪಾ ಸಿಬ್ಬಂದಿ ಅನುಚಿತ ವರ್ತನೆ ಆರೋಪ: ಕೇಸ್​​ ದಾಖಲು – Kannada News | Canadian Woman Files Police Complaint Over Inappropriate Behavior at Bengaluru Hotel Spa

ಬೆಂಗಳೂರು, ಫೆಬ್ರವರಿ 10: ಕೆನಡಾದ ಮಹಿಳೆಯೊಬ್ಬರ ಜೊತೆ ನಗರದ ಖಾಸಗಿ ಹೋಟೆಲ್​​ನ ಸ್ಪಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದು, ಮಸಾಜ್ ಸಮಯದಲ್ಲಿ ಥೆರಪಿಸ್ಟ್ ಅಸಮಂಜಸವಾಗಿ ವರ್ತಿಸಿದ್ದಾನೆ. ತಾನು ಅರೆನಗ್ನ ಸ್ಥಿತಿಯಲ್ಲಿದ್ದಾಗಲೇ ಕೊಠಡಿಯ ಬಾಗಿಲು ತೆರೆದಿದ್ದರಿಂದ ತೀವ್ರ ಅವಮಾನ ಮತ್ತು ಮಾನಸಿಕ ಪೀಡನೆ ಅನುಭವಿಸಬೇಕಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಘಟನೆ ನಡೆದಿದೆ.

ಘಟನೆ ಬಗ್ಗೆ ದೂರಿದರೂ ನಿರ್ಲಕ್ಷ್ಯ ಆರೋಪ

ಇನ್ನು ನಡೆದ ಘಟನೆಯ ಬಗ್ಗೆ ತಕ್ಷಣವೇ ಮಹಿಳೆ ಹೋಟೆಲ್ ಆಡಳಿತದ ಗಮನಕ್ಕೆ ತಂದಿದ್ದಾರೆ. ಆದರೆ ಅವರ ದೂರನ್ನು ಹೋಟೆಲ್​​ ಗಂಭೀರವಾಗಿ ಪರಿಗಣಿಸಲಾಗಿಲ್ಲ. ಬದಲಾಗಿ 7000 ರೂಪಾಯಿ ಮಸಾಜ್ ಶುಲ್ಕದ ಹಣವನ್ನ ಮರುಪಾವತಿ ಮಾಡಿ, ವಿಷಯವನ್ನು ಮುಂದುವರಿಸದಂತೆ ಸಲಹೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಮೊದಲ ಸಲ ಕಮಲಾಕರ ಜೊತೆ ಹೋಗಿದ್ದಕ್ಕೆ 10 ಸಾವಿರ ರೂ. ನಿರೀಕ್ಷಿಸಿದ್ದ ಸುಚಿತ್ರಾಗೆ ಸಿಕ್ಕಿದ್ದು 35 ಸಾವಿರ ರೂ.

ಹೋಟೆಲ್​​ ಆಡಳಿತದಿಂದ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದ ಮಹಿಳೆ ನಿರಾಸೆಗೊಂಡ ಬಳಿಕ ಘಟನೆ ಬಗ್ಗೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಥೆರಪಿಸ್ಟ್ ಮತ್ತು ಇತರ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರೋದಾಗಿ ಟೈಮ್ಸ್​​ ನೌ ವರದಿ ಮಾಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿವಿದೇಶಿ ಮಹಿಳೆಗೆ ತಪಾಸಣೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೆಲ ದಿನಗಳ ಹಿಂದೆಯಷ್ಟೇ ಕೇಳಿಬಂದಿತ್ತು. ಕೊರಿಯಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿದೇಶಿ ಮಹಿಳೆಗೆ ಏರ್​ಲೈನ್ಸ್ ಸಿಬ್ಬಂದಿ ಅಪಾನ್ ಅಹ್ಮದ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಲಾದ ಕಾರಣ ಆತನನ್ನು ಪೊಲೀಸರು ಬಂಧಿಸಿದ್ದರು. ಆ ಘಟನೆ ಮಾಸುವ ಮುನ್ನವೇ ವಿದೇಶಿ ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ ಬೆಂಗಳೂರಲ್ಲಿ ಕೇಳಿಬಂದಿರೋದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜಗತ್ತು ವಿನಾಶದ ಅಂಚಿನಲ್ಲಿದ್ಯಾ? ಆಂಥ್ರೋಪಿಕ್ನ ಮೃಣಾಂಕ್ ಶರ್ಮಾ ರಾಜೀನಾಮೆ ಪತ್ರದಲ್ಲಿ ಹೇಳಿದ್ದರ ಅರ್ಥವೇನು? – Kannada News | World in Peril, says Anthropic AI safety team chief Mrinank Sharma in his resignation letter

ಸ್ಯಾನ್ ಫ್ರಾನ್ಸಿಸ್ಕೋ, ಫೆಬ್ರುವರಿ 10: ಆಂಥ್ರೋಪಿಕ್​ನ ಸೇಫ್​ಗಾರ್ಡ್ಸ್ ರಿಸರ್ಚ್ ತಂಡದ ಮುಖ್ಯಸ್ಥರಾಗಿದ್ದ ಮೃಣಾಂಕ್ ಶರ್ಮಾ (Mrinank Sharma) ರಾಜೀನಾಮೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಜಗತ್ತು ವಿನಾಶದ ಅಂಚಿನಲ್ಲಿದೆ (The World in peril) ಎಂದು ಹೇಳಿಕೊಂಡು ಟ್ವೀಟ್ ಮಾಡಿದ್ದಾರೆ. ಆದರೆ ರಾಜೀನಾಮೆಗೆ ನಿರ್ದಿಷ್ಟ ಕಾರಣ ನೀಡದೇ ನಿಗೂಢವಾಗಿರುವ ಅವರ ಟ್ವೀಟ್ ಸಾಕಷ್ಟು ಕುತೂಹಲ ಕೆರಳಿಸುವಂತಿದೆ. ತಮ್ಮ ಟ್ವೀಟ್​ನಲ್ಲಿ ಅವರು ತಾವು ರಾಜೀನಾಮೆ ನೀಡಲು ಕಾರಣವೇನೆಂದು ವಿವರಿಸಿ ಬರೆದಿರುವ ಪತ್ರವೊಂದನ್ನು ಲಗತ್ತಿಸಿದ್ದಾರೆ.

ಮೃಣಾಂಕ್ ಶರ್ಮಾ ಅವರು ಅಂಥ್ರೋಪಿಕ್​ನಲ್ಲಿ ಸೇಫ್​ಗಾರ್ಡ್ಸ್ ರಿಸರ್ಚ್ ತಂಡದ ಮುಖ್ಯಸ್ಥರಾಗಿದ್ದರು. ‘ಜಗತ್ತು ವಿನಾಶದ ಅಂಚಿನಲ್ಲಿದೆ’ ಎಂದಿರುವ ಅವರ ಮಾತಿನ ಇಂಗಿತ ನಿಜಕ್ಕೂ ನಿಗೂಢತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಬೆಂಗಳೂರು ಮೂಲದ ಸರ್ವಮ್​ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?

‘ಜಗತ್ತು ವಿನಾಶದಂಚಿನಲ್ಲಿದೆ. ಎಐ, ಅಥವಾ ಬಯೋವೆಪನ್​ಗಗಳಿಂದಷ್ಟೇ ಅಲ್ಲ, ಪರಸ್ಪರ ಜೋಡಿತವಾದ ವಿವಿಧ ಬಿಕ್ಕಟ್ಟುಗಳಿಂದ ಈ ಜಗತ್ತು ಅಪಾಯದಲ್ಲಿದೆ. ಈ ಜಗತ್ತಿನ ಮೇಲೆ ಪರಿಣಾಮ ಬೀರಬಲ್ಲ ನಮ್ಮ ಸಾಮರ್ಥ್ಯಕ್ಕೆ ತಕ್ಕುದಾದಷ್ಟು ವಿವೇಕ ನಮ್ಮಲ್ಲಿ ಬೆಳೆಯುವ ಅವಶ್ಯಕತೆ ಇದೆ..’ ಎಂದು ಮೃಣಾಂಕ್ ಶರ್ಮಾ ಹೇಳಿದ್ದಾರೆ.

ಅಂದರೆ, ಮನುಷ್ಯನ ಶಕ್ತಿಯು ಆತನ ಜವಾಬ್ದಾರಿಗಳನ್ನು ಮೀರಿ ಬೆಳೆಯುತ್ತಿದೆ. ಕೋತಿ ಕೈಯಲ್ಲಿ ಮಾಣಿಕ್ಯ ಸಿಕ್ಕಂತಾಗಿದೆ ಎಂಬರ್ಥದಲ್ಲಿ ಆಂಥ್ರೋಪಿಕ್​ನ ಈ ಉನ್ನತ ಅಧಿಕಾರಿ ಹೇಳಿರುವುದು ನಿಜಕ್ಕೂ ಎಐನ ಮುಂದಿನ ದಾರಿಯ ಬಗ್ಗೆ ಯಾರಿಗಾದರೂ ಕಳವಳ ಮೂಡಬಹುದು.

ಎಐ ಸುರಕ್ಷತೆ ವಿಚಾರದ ಬಗ್ಗೆ ತಮ್ಮ ಕಂಪನಿ ಹೆಚ್ಚಿನ ಆದ್ಯತೆ ಕೊಡುತ್ತಿಲ್ಲ ಎಂಬುದು ಮೃಣಾಂಕ್ ಬೇಸರ. ‘ಮೌಲ್ಯಗಳ ಆಧಾರದ ಮೇಲೆ ಕ್ರಿಯೆಗಳು ನಡೆಯುವುದು ಈಗ ಬಹಳ ಕಷ್ಟವೆಂಬುದು ಬಾರಿ ಬಾರಿ ತೋರುತ್ತಿದೆ. ಯಾವುದು ಬಹಳ ಮುಖ್ಯವಾಗಿದೆಯೋ ಅದನ್ನು ನಿರ್ಲಕ್ಷಿಸಲು ಈ ಸಂಸ್ಥೆಯಲ್ಲಿ ಮತ್ತು ನನ್ನಲ್ಲಿ ನಿರಂತರ ಒತ್ತಡ ಬರುವುದನ್ನು ಕಂಡಿದ್ದೇನೆ’ ಎಂದು ಆಂಥ್ರೋಪಿಕ್​ನ ಸೇಫ್​ಗಾರ್ಡ್ಸ್ ರಿಸರ್ಚ್ ಟೀಮ್​ನ ಮುಖ್ಯಸ್ಥ ಹೇಳಿದ್ಧಾರೆ.

ಇದನ್ನೂ ಓದಿ: ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು

ಮೃಣಾಂಕ್ ಶರ್ಮಾ ಅವರ ಆಂಥ್ರೋಪಿಕ್ ಅವಧಿ ನಿನ್ನೆಯೇ (ಫೆ. 9) ಮುಗಿದಿದೆ. ಇದೀಗ ಅವರು ಬ್ರಿಟನ್ ದೇಶಕ್ಕೆ ಮರಳಿ ಹೋಗಲಿದ್ದಾರಂತೆ. ಒಂದಷ್ಟು ದಿನ ಕಾಣದ ಕಣ್ಮರೆಯಲ್ಲಿ ಇದ್ದುಬಿಡುವುದಾಗಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಸಲ ಕಮಲಾಕರ ಜೊತೆ ಹೋಗಿದ್ದಕ್ಕೆ 10 ಸಾವಿರ ರೂ. ನಿರೀಕ್ಷಿಸಿದ್ದ ಸುಚಿತ್ರಾಗೆ ಸಿಕ್ಕಿದ್ದು 35 ಸಾವಿರ ರೂ. – Kannada News | Siddapura Vasanth Naik Murder Case: Suchitra gets Rs 35 Thousand From astrologer kamalakara bhat In First Meet

ಕಾರವಾರ, (ಫೆಬ್ರವರಿ 10): ರಾಜ್ಯವನ್ನೇ ಬೆಚ್ಚಿಬೀಳಿಸಿದ ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ (siddapura Vasanth Naik Murder Case) ತನಿಖೆ ಆಳಕ್ಕಿಳಿಯುತ್ತಿದ್ದಂತೆ, ಆರೋಪಿಗಳಾದ ಕಮಲಾಕರ ಭಟ್ (astrologer kamalakara bhat) ಮತ್ತು ಪ್ರೇಯಸಿ ಸುಚಿತ್ರಾಳ (Suchitra) ಅಕ್ರಮ ಸಂಬಂಧದ ಬಗ್ಗೆ ರೋಚಕ ಹಾಗೂ ಅಷ್ಟೇ ಆಘಾತಕಾರಿ ಸಂಗತಿಗಳು ಒಂದೊಂದೇ ಹೊರಬರುತ್ತಿವೆ. ಈ ಜೋಡಿಯ ಸಂಬಂಧ ಕೇವಲ ಪ್ರೀತಿಗೆ ಸೀಮಿತವಾಗಿರದೆ, ಅದರ ಹಿಂದೆ ದೊಡ್ಡದೊಂದು ‘ಬ್ಲ್ಯಾಕ್‌ಮೇಲ್’ (Blackmail) ಮತ್ತು ‘ಹನಿಟ್ರ್ಯಾಪ್’ (Honeytrap) ಜಾಲವಿತ್ತು ಎಂಬ ಸ್ಫೋಟಕ ಮಾಹಿತಿ ಬಟಾಬಯಲಾಗಿದೆ. ಇನ್ನು ಮೊದಲ ಭೇಟಿಯಲ್ಲೇ ಸುಚಿತ್ರಾ, ಕಮಲಾಕರನನ್ನ ತನ್ನ ಖೆಡ್ಡಾಗೆ ಬೀಳಿಸಿಕೊಂಡಿದ್ದು,  ಫಸ್ಟ್​ ಭೇಟಿಯಲ್ಲೇ ನಿರೀಕ್ಷೆಗೂ ಮೀರಿ ಹಣ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು.

ಮೊದಲ ಭೇಟಿಯಲ್ಲೇ 35 ಸಾವಿರ ರೂ. ಕಮಾಯಿ

ಮೊದಲ ಸಲ ಕಮಲಾಕರ ಜೊತೆ ಹೋಗಿದ್ದಕ್ಕೆ 10 ಸಾವಿರ ರೂ. ನಿರೀಕ್ಷಿಸಿದ್ದ ಸುಚಿತ್ರಾಗೆ ಸಿಕ್ಕಿದ್ದು 35 ಸಾವಿರ ರೂ. ಇದರಿಂದ ಫುಲ್ ಖುಷ್ ಆದ ಸುಚಿತ್ರಾ, ಅಂದಿನಿಂದ ಕಮಲಕರ್ ಭಟ್​​ನ ಹಿಂದೆಯೇ ಬಿದ್ದಿದ್ದಳು. ಹೌದು.. ಮೊದಲ ಭೇಟಿಯಲ್ಲೇ ಕಮಲಾಕರನನ್ನ ತನ್ನ ಖೆಡ್ಡಾಗೆ ಬೀಳಿಸಿಕೊಂಡಿದ್ದ ಸುಚಿತ್ರಾ, ಮೊದಲ ಸಲ ಕಮಲಾಕರ ಜೊತೆಗೆ ಹೋದಾಗ 10 ಸಾವಿರ ಸಿಗುವ ನಿರೀಕ್ಷೆಯಲ್ಲಿದ್ದಳು. ಆದ್ರೆ ಸುಚಿತ್ರಾಳ ಸೌಂದರ್ಯಕ್ಕೆ ಮನಸೋತ ಕಮಲಾಕರ, 35 ಸಾವಿರ ರೂಪಾಯಿ ಕೊಟ್ಟಿದ್ದ. ಮೊದಲ ಭೇಟಿಯಲ್ಲಿ ಕಲಮಕರ್ ಭಟ್, 25 ಸಾವಿರ ರೂ. ಸುಚಿತ್ರಾಳ ಸಂಭಾವನೆ ಮತ್ತು ಶಾಪಿಂಗ್ ಅಂತ 10 ಸಾವಿರ ರೂ. ನೀಡಿದ್ದ. ಇದರಿಂದ ಫುಲ್ ಖುಷ್ ಆಗಿದ್ದ ಸುಚಿತ್ರಾ, ಮೊದಲ ಭೇಟಿಯಲ್ಲಿ ಭಟ್ ನ ಬಗ್ಗೆ ತಿಳಿದುಕೊಂಡಿದ್ದು, ಕೇವಲ ಮೂರೇ ತಿಂಗಳಲ್ಲಿ ಕಮಲಕರ್ ಭಟ್ಟನನ್ನು ಸಂಪೂರ್ಣ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಳು. ಸುಚಿತ್ರಾಳ ಗಂಡನ ಹೇಳಿಕೆಯಂತೆ ಆರು ತಿಂಗಳ ಹಿಂದೆ ಭಟ್ ನ ಜೊತೆಗೆ ಉಳಿದಿದ್ದಳು.

ಇದನ್ನೂ ಓದಿ: ಕಮಲಾಕರ ಭಟ್​​​ಗೆ ಮತ್ತೋರ್ವ ಮಹಿಳೆ, ಪಡ್ಡೆ ಹುಡುಗರ ಜತೆ ಸುಚಿತ್ರಾ: ಇಬ್ಬರ ಕಾಮದಾಟ, ಕಳ್ಳಾಟ ಬಯಲಿಗೆ

ಮಹೇಶ್ ನಾಯ್ಕ್ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಸುಚಿತ್ರಾ ಹಾಗೂ ಕಮಲಾಕರ ಭಟ್ ನಡುವಿನ ಸಂಬಂಧ ಆಕಸ್ಮಿಕವಾಗಿ ನಡೆದಿದ್ದಲ್ಲ. ಕಮಲಾಕರ ಭಟ್ ಸಂಪರ್ಕಕ್ಕೆ ಬಂದ ನಂತರ, ಆತನ ಹಿನ್ನೆಲೆ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸುಚಿತ್ರಾ ಸುಮಾರು ಒಂದು ವಾರಗಳ ಕಾಲ ಕೂಲಂಕಷವಾಗಿ ‘ಸ್ಟಡಿ’ ಮಾಡಿದ್ದಳು. ಆರಂಭದಲ್ಲಿ ಕೇವಲ 1 ರಿಂದ 2 ಲಕ್ಷ ರೂಪಾಯಿ ಹಣದ ಆಸೆಗಾಗಿ ಆಕೆ ಕಮಲಾಕರ ಭಟ್ ಜೊತೆ ದೈಹಿಕ ಸಂಬಂಧ ಬೆಳೆಸಲು ಮುಂದಾಗಿದ್ದಳು. ಆದರೆ, ಅಸಲಿ ಆಟ ಶುರುವಾಗಿದ್ದೇ ಅಲ್ಲಿಂದ. ಕಮಲಾಕರ ಭಟ್ ಜೊತೆ ಏಕಾಂತದಲ್ಲಿದ್ದಾಗ, ಆತನಿಗೆ ತಿಳಿಯದಂತೆ ಸುಚಿತ್ರಾ ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಗುಪ್ತವಾಗಿ ವಿಡಿಯೋ ಮಾಡಿಕೊಂಡಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸುಚಿತ್ರಾಳ ಬ್ಲ್ಯಾಕ್‌ಮೇಲ್‌ಗೆ ಹೆದರಿದ್ದ ಭಟ್

ಕಮಲಾಕರ ಭಟ್ ಟಿವಿ ಚಾನೆಲ್‌ಗಳ ಮೂಲಕ ರಾಜ್ಯದ ಜನತೆಗೆ ಜ್ಯೋತಿಷ್ಯ ಹೇಳುತ್ತಾ ಸಾಕಷ್ಟು ಹೆಸರು ಮತ್ತು ಖ್ಯಾತಿ ಗಳಿಸಿದ್ದ ವ್ಯಕ್ತಿ. ಆತ ನಡೆಸುತ್ತಿದ್ದ ಐಷಾರಾಮಿ ಜೀವನವನ್ನು ಕಂಡ ಸುಚಿತ್ರಾ, ತನ್ನ ಬಳಿ ಇದ್ದ ಅಶ್ಲೀಲ ವಿಡಿಯೋವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಳು. ‘ನನ್ನನ್ನು ಮತ್ತು ನನ್ನ ಮಕ್ಕಳನ್ನು ನೀನೇ ಸಾಕಬೇಕು. ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ನಿನ್ನ ಮಾನ ಮರ್ಯಾದೆ ಹರಾಜು ಹಾಕುತ್ತೇನೆ, ವಿಡಿಯೋ ಲೀಕ್ ಮಾಡುತ್ತೇನೆ’ ಎಂದು ಆಕೆ ಕಮಲಾಕರನಿಗೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಇದರಿಂದ ಸಮಾಜದಲ್ಲಿ ತಾನು ಗಳಿಸಿದ್ದ ಹೆಸರಿಗೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಭಯಕ್ಕೆ ಬಿದ್ದ ಕಮಲಾಕರ ಭಟ್, ಸುಚಿತ್ರಾಳ ಬ್ಲ್ಯಾಕ್‌ಮೇಲ್‌ಗೆ ಮಣಿದಿದ್ದ. ಪರಿಣಾಮವಾಗಿ, ಆಕೆಯನ್ನು ಮತ್ತು ಆಕೆಯ ಮಕ್ಕಳನ್ನು ಕರೆದುಕೊಂಡು ಬಂದು ಶಿವಮೊಗ್ಗ ಸೇರಿದಂತೆ ಬೇರೆಡೆ ಪ್ರತ್ಯೇಕ ಮನೆ ಮಾಡಿಟ್ಟುಕೊಂಡು ವಾಸವಾಗಿದ್ದ.

ಅಲ್ಲದೇ ಆಕೆ ಕೇಳಿದ್ದನ್ನು ಇಲ್ಲ ಎಂದಿಲ್ಲ. ಆಕೆ ಕೇಳಿದ್ದಕ್ಕೆ ಎರಡು ಕಾರು, ಬುಲೆಟ್ ಬೈಕ್ ಸಹ ಕೊಡಿಸಿದ್ದ.
ಹೀಗೆ ಹಣ ಮತ್ತು ವಿಡಿಯೋ ಬ್ಲ್ಯಾಕ್‌ಮೇಲ್‌ನಿಂದ ಆರಂಭವಾದ ಸಂಬಂಧ, ಅಂತಿಮವಾಗಿ ಅಮಾಯಕ ವಸಂತ ನಾಯ್ಕ್ ಅವರ ಬರ್ಬರ ಹತ್ಯೆಯಲ್ಲಿ ಅಂತ್ಯ ಕಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

12 ವರ್ಷದ ಹಿಂದೆ ಬಿಡುಗಡೆ ರಜನಿಕಾಂತ್ ಸಿನಿಮಾದ ನಿರ್ಮಾಪಕರಿಗೆ ಈಗ ಸಂಕಷ್ಟ – Kannada News | Madras High Court orders Kochadaiiyaan movie producer to pay 2.52 crore rs to advertainment company

ರಜನೀಕಾಂತ್ (Rajinikanth) ವೃತ್ತಿ ಜೀವನದಲ್ಲಿ ಬಹಳ ಕಡಿಮೆ ಸಿನಿಮಾಗಳು ಫ್ಲಾಪ್ ಎನಿಸಿಕೊಂಡಿವೆ. ರಜನೀಕಾಂತ್ ಅವರ ಸಿನಿಮಾ ಫ್ಲಾಪ್ ಆದರೂ ಹಾಕಿರುವ ಬಂಡವಾಳಕ್ಕಿಂತಲೂ ತುಸು ಹೆಚ್ಚೇ ವಾಪಸ್ ಬಂದಿರುತ್ತದೆ. ಆದರೆ ರಜನೀಕಾಂತ್ ಅವರ ಕೆಲ ಸಿನಿಮಾಗಳಿವೆ, ಅವು ಇನ್ನಿಲ್ಲದಂತೆ ಬಾಕ್ಸ್ ಆಫೀಸ್​​ನಲ್ಲಿ ಸೋತಿವೆ. ಅವುಗಳಲ್ಲಿ ‘ಕೊಚಡಿಯನ್’ ಸಹ ಒಂದು. ರಜನೀಕಾಂತ್ ಅವರ ಪುತ್ರಿ ಸೌಂದರ್ಯ ರಜನೀಕಾಂತ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿತ್ತು. ಸಿನಿಮಾ ಬಿಡುಗಡೆ ಆಗಿ 12 ವರ್ಷಗಳ ಬಳಿಕ ಇದೀಗ ಈ ಸಿನಿಮಾದ ನಿರ್ಮಾಪಕರಿಗೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ.

‘ಕೊಚಡಿಯನ್’ ಸಿನಿಮಾನಲ್ಲಿ ರಜನೀಕಾಂತ್ ನಾಯಕರಾದರೂ ಇದು ಕಾರ್ಟೂನ್ ಮಾದರಿಯ ಸಿನಿಮಾ. ಹಾಲಿವುಡ್​​ನಲ್ಲಿ ಆಗಷ್ಟೆ ಬಳಕೆಗೆ ಬಂದಿದ್ದ ಲೈವ್ ಆಕ್ಷನ್ ಅಥವಾ ಫರ್ಪಾಮೆನ್ಸ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದ್ದ ಅನಿಮೇಷನ್ ಸಿನಿಮಾ ಇದಾಗಿತ್ತು. ಸಿನಿಮಾನಲ್ಲಿ ರಜನೀಕಾಂತ್ ನಾಯಕ, ದೀಪಿಕಾ ಪಡುಕೋಣೆ ನಾಯಕಿ. ‘ಅವತಾರ್’, ‘ಅಡ್ವೇಂಚರ್ ಆಫ್ ಟಿನ್​​ಟಿನ್’ ಅಂಥಹಾ ಕೆಲವು ಸಿನಿಮಾಗಳು ಅದಾಗಲೇ ಈ ತಂತ್ರಜ್ಞಾನ ಬಳಸಿದ್ದವು. ‘ಕೊಚಡಿಯನ್’ ಸಿನಿಮಾನಲ್ಲಿ ಇದೇ ತಂತ್ರಜ್ಞಾನ ಬಳಸಲಾಗಿತ್ತಾದರೂ ಸಿನಿಮಾದ ಗುಣಮಟ್ಟ ಬಹಳ ಕಳಪೆಯಾಗಿತ್ತು. ಹಾಗಾಗಿ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಫ್ಲಾಪ್ ಆಯ್ತು.

ಸಿನಿಮಾದ ನಿರ್ಮಾಪಕರಾದ ಸುನಿಲ್ ಲುಲ್ಲ, ಸುನಂದ ಮುರಳಿ ಮನೋಹರ್, ಪ್ರಶಿತಾ ಚೌಧರಿ ಅವರುಗಳು ಭಾರಿ ನಷ್ಟ ಅನುಭವಿಸಿದ್ದರು. ಹಲವು ಬಾಕಿಗಳನ್ನು ಉಳಿಸಿಕೊಂಡಿದ್ದರು. ಕೆಲವರು ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇದೇ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದ್ದು, ‘ಕೊಚಡಿಯನ್’ ನಿರ್ಮಾಪಕರು ಇನ್ನು ನಾಲ್ಕು ವಾರಗಳಲ್ಲಿ 2.50 ಕೋಟಿ ರೂಪಾಯಿ ಹಣವನ್ನು ನಿಗದಿತ ಸಂಸ್ಥೆಗೆ ನೀಡಬೇಕು ಎಂದಿದೆ.

ಇದನ್ನೂ ಓದಿ:ಸ್ವಚ್ಛತಾ ಕಾರ್ಮಿಕ ಮಹಿಳೆ ಪದ್ಮಮ್ಮನ ಸನ್ಮಾನಿಸಿದ ರಜನೀಕಾಂತ್: ಕಾರಣ?

ಅಭಿರ್ಚಂದ್ರ ನಹರ್ ಎಂಬುವರು ‘ಕೊಚಡಿಯನ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಮೀಡಿಯಾ ಒನ್ ಗ್ಲೋಬಲ್​ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡು 20 ಕೋಟಿ ರೂಪಾಯಿ ಸಾಲವನ್ನು ನೀಡಿದ್ದರು. ಆದರೆ ಒಪ್ಪಂದಂತೆ ಸಿನಿಮಾದ ನಿರ್ಮಾಪಕರು ನಡೆದುಕೊಂಡಿಲ್ಲವಾದ್ದರಿಂದ ಅಭಿರ್ಚಂದ್ರ ನಹರ್ ದಾವೆ ಹೂಡಿದ್ದರು. 2021ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶ ನೀಡಿ ಅಭಿರ್ಚಂದ್ರ ನಹರ್ ಅವರಿಗೆ 7.20 ಕೋಟಿ ಹಣ ನೀಡುವಂತೆ ಆದೇಶಿಸಿತ್ತು. ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಮದ್ರಾಸ್ ಹೈಕೋರ್ಟ್​​ನಲ್ಲಿ ಪ್ರಶ್ನೆ ಮಾಡಲಾಗಿತ್ತು.

ಇದೀಗ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ್ದು ನಿರ್ಮಾಣ ಸಂಸ್ಥೆಯು ಈಗಾಗಲೇ 8.74 ಕೋಟಿ ಬಾಕಿ ತೀರಿಸಿದ್ದು, ಉಳಿದ 1.26 ಕೋಟಿಯ ದುಪ್ಪಟ್ಟು ಅಂದರೆ 2.52 ಕೋಟಿ ರೂಪಾಯಿಯನ್ನು ನಾಲ್ಕು ವಾರದ ಒಳಗೆ ನೀಡಬೇಕು ಅಥವಾ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

GBA ಗುರುತಿಸಿದ ಕೇಂದ್ರಗಳಲ್ಲಿ ಮಾತ್ರ ಬೀದಿ ನಾಯಿಗಳಿಗೆ ಆಹಾರ ಹಾಕಬೇಕು: ಉಲ್ಲಂಘಿಸಿದರೆ ದಂಡ – Kannada News | GBA Cracks Down on Street Dog Feeding in Bengaluru: New Rules, Designated Centers

ಬೆಂಗಳೂರು, ಫೆ.10: ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡುವುದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಶ್ವಾನಪ್ರಿಯರು ಮತ್ತು ಸಾರ್ವಜನಿಕರ ನಡುವಿನ ಸಂಘರ್ಷವನ್ನು ತಪ್ಪಿಸಲು ಹಾಗೂ ಸ್ವಚ್ಛತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ. GBA ಅಡಿಯಲ್ಲಿ ಬರುವ ಐದೂ ನಗರ ಪಾಲಿಕೆಗಳಲ್ಲಿ ಪಶುಪಾಲನಾ ಇಲಾಖೆಯು ಒಟ್ಟು 450 ಅಧಿಕೃತ ಆಹಾರ ಕೇಂದ್ರಗಳನ್ನು ಗುರುತಿಸಿದೆ.

ಶೀಘ್ರದಲ್ಲೇ ಈ ಗುರುತಿಸಲಾದ ಸ್ಥಳಗಳಲ್ಲಿ ಶ್ವಾನಗಳಿಗೆ ಆಹಾರ ನೀಡುವ ಸ್ಥಳ ಎಂಬ ಫಲಕಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ. ಅಧಿಕೃತ ಸ್ಥಳಗಳನ್ನು ಬಿಟ್ಟು ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವ ಕಡೆಗಳಲ್ಲಿ ಆಹಾರ ನೀಡಿದರೆ ದಂಡ ವಿಧಿಸಲು GBA ನಿರ್ಧರಿಸಿದೆ ಎಂದು ಹೇಳಿದ್ದಾರೆ. ಆಹಾರ ನೀಡುವವರು ಆ ಜಾಗವನ್ನು ಸ್ವಚ್ಛವಾಗಿಡಬೇಕು ಮತ್ತು ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಆಹಾರ ನೀಡಬೇಕು ಎಂಬ ಸೂಚನೆಯೂ ಇದೆ.

ಇದನ್ನೂ ಓದಿ: ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ: ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಕುಟುಂಬದ ಪ್ರಾಣ

ಪಾಲಿಕೆವಾರು ಗುರುತಿಸಲಾದ ಆಹಾರ ಕೇಂದ್ರಗಳು:

ಪಾಲಿಕೆ ವ್ಯಾಪ್ತಿ ಆಹಾರ ಕೇಂದ್ರಗಳ ಸಂಖ್ಯೆ
ಬೆಂಗಳೂರು ಪೂರ್ವ (East) 150
ಬೆಂಗಳೂರು ಕೇಂದ್ರ (Central) 90
ಬೆಂಗಳೂರು ಪಶ್ಚಿಮ (West) 85
ಬೆಂಗಳೂರು ಉತ್ತರ (North) 70
ಬೆಂಗಳೂರು ದಕ್ಷಿಣ (South) 68

ಈ ನಿರ್ಧಾರಕ್ಕೆ ಶ್ವಾನಪ್ರಿಯರು ಮತ್ತು ಪ್ರಾಣಿ ಹಕ್ಕು ಹೋರಾಟಗಾರರಿಂದ ಅಸಮಾಧಾನ ವ್ಯಕ್ತವಾಗಿದೆ. ನಾಯಿಗಳು ‘ಟೆರಿಟೋರಿಯಲ್’ ಪ್ರವೃತ್ತಿ ಹೊಂದಿದ್ದು, ಒಂದು ಏರಿಯಾದ ನಾಯಿಗಳು ಮತ್ತೊಂದು ಏರಿಯಾಕ್ಕೆ ಹೋಗಿ ಆಹಾರ ಸೇವಿಸುವುದಿಲ್ಲ. ಹೀಗಾಗಿ, ಎಲ್ಲೋ ಒಂದು ಕಡೆ ಪಾಯಿಂಟ್ ಗುರುತಿಸುವುದು ನಾಯಿಗಳ ನಡುವೆ ಕಾದಾಟಕ್ಕೆ ಮತ್ತು ಹಸಿವಿನಿಂದ ಅವುಗಳ ಆಕ್ರೋಶಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ 

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AI University: ಅಮರಾವತಿಯಲ್ಲಿ ದೇಶದ ಮೊದಲ AI ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾದ ಸರ್ಕಾರ – Kannada News | India’s First AI University in Amaravati by Andhra Pradesh and NVIDIA: A Global Leap

ಕೃತಕ ಬುದ್ಧಿಮತ್ತೆ (Artificial Intelligence – AI) ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟಕ್ಕೆ ತರುವ ಉದ್ದೇಶದಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಮರಾವತಿಯಲ್ಲಿ ದೇಶದ ಮೊದಲ AI ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗಿದೆ. ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆಯು ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆ, ಮೂಲಸೌಕರ್ಯ ಮತ್ತು ತರಬೇತಿ ಕೇಂದ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕೃತ ಆದೇಶ (GO) ಹೊರಡಿಸಿದ್ದು, ಈ ವಿಶ್ವವಿದ್ಯಾಲಯವನ್ನು ಜಾಗತಿಕ ತಂತ್ರಜ್ಞಾನ ದೈತ್ಯ NVIDIA ಸಹಯೋಗದೊಂದಿಗೆ “AI ಲಿವಿಂಗ್ ಲ್ಯಾಬ್ಸ್” ಎಂಬ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿದೆ. ವರದಿಗಳ ಪ್ರಕಾರ, ಇದರ ಕಾರ್ಯಾಚರಣೆಗಳು ಇದೇ ತಿಂಗಳ 19ರಿಂದ ಪ್ರಾರಂಭವಾಗಲಿವೆ.

ರಾಜ್ಯ ಸರ್ಕಾರವು ಈ ಯೋಜನೆಯನ್ನು 2013ರ ಕಂಪನಿ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಲಾಭರಹಿತ ಸಂಸ್ಥೆಯಾಗಿ ಸ್ಥಾಪಿಸಲು ಅನುಮೋದನೆ ನೀಡಿದೆ. ಇದರ ಮೂಲಕ ಶಿಕ್ಷಣ, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸ್ಟಾರ್ಟ್‌ಅಪ್ ಸಂಸ್ಥೆಗಳಿಗೆ ವಿಶ್ವಮಟ್ಟದ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ. ಐಟಿ ಇಲಾಖೆ ಮತ್ತು NVIDIA ಕಾರ್ಪೊರೇಷನ್ ನಡುವೆ ಸಹಿ ಹಾಕಿರುವ ಒಪ್ಪಂದದ ಮೂಲಕ ಅತ್ಯಾಧುನಿಕ AI ತಂತ್ರಜ್ಞಾನ, ಹಾರ್ಡ್‌ವೇರ್ ಮತ್ತು ತರಬೇತಿ ವ್ಯವಸ್ಥೆಗಳು ನೇರವಾಗಿ ಲಭ್ಯವಾಗಲಿವೆ.

ಈ ವಿಶ್ವವಿದ್ಯಾಲಯದ ಪ್ರಧಾನ ಕಚೇರಿ ಅಮರಾವತಿಯಲ್ಲಿ ಇರಲಿದ್ದು, ಅಲ್ಲಿಂದ ರಾಜ್ಯಾದ್ಯಂತ ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸಲಾಗಿದೆ. ಇದು ಕೇವಲ ಶೈಕ್ಷಣಿಕ ಸಂಸ್ಥೆಯಾಗಿರದೆ, ಸಂಶೋಧನೆ ಮತ್ತು ನವೋದ್ಯಮಗಳಿಗೆ ಕೇಂದ್ರಬಿಂದುವಾಗಿ ಕೆಲಸ ಮಾಡಲಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ, ಲೈವ್ ಪ್ರಾಜೆಕ್ಟ್‌ಗಳು, ಇಂಡಸ್ಟ್ರಿ ಇಂಟರ್ನ್‌ಶಿಪ್‌ಗಳು ಮತ್ತು ಜಾಗತಿಕ ತಜ್ಞರ ಮಾರ್ಗದರ್ಶನದೊಂದಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕ ತರಬೇತಿ ನೀಡಲಾಗುತ್ತದೆ.

ಇದನ್ನೂ ಓದಿ: ಹುಶಾರ್​…. ಮಕ್ಕಳಿಗೆ ಕಂಡ ಕಂಡ ಹಾಗೆ ಚಾಟ್​ ಜಿಪಿಟಿ ಬಳಸಲು ಬಿಡಬೇಡಿ; ಪ್ರಾಣಕ್ಕೆ ಕುತ್ತು ತರಬಹುದು!

ಈ ಯೋಜನೆ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಕೃಷಿ, ಆರೋಗ್ಯ ರಕ್ಷಣೆ, ಉತ್ಪಾದನಾ ಕ್ಷೇತ್ರ, ಫಿನ್‌ಟೆಕ್, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸರ್ಕಾರಿ ಆಡಳಿತದಲ್ಲಿ AI ಬಳಕೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಗುರಿಯಾಗಿದೆ. ರೈತರಿಗೆ ಮುಂಗಡ ಬೆಳೆ ಅಂದಾಜು, ಆಸ್ಪತ್ರೆಗಳಲ್ಲಿ ತ್ವರಿತ ರೋಗನಿರ್ಣಯ, ಕೈಗಾರಿಕೆಯಲ್ಲಿ ಸ್ಮಾರ್ಟ್ ಉತ್ಪಾದನೆ ಮತ್ತು ಸರ್ಕಾರಿ ಸೇವೆಗಳ ಸುಧಾರಣೆಗೆ AI ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡಲಿದೆ.

ಈ ವಿಶ್ವವಿದ್ಯಾಲಯ ಸಮಯಕ್ಕೆ ಸರಿಯಾಗಿ ಕಾರ್ಯಾರಂಭ ಮಾಡಿದರೆ, ಅಮರಾವತಿ ದೇಶದ ಮೊದಲ AI ವಿಶ್ವವಿದ್ಯಾಲಯದ ಹೆಗ್ಗಳಿಕೆಯನ್ನು ಪಡೆದು ಇತಿಹಾಸ ಸೃಷ್ಟಿಸಲಿದೆ. ಇದರಿಂದ ಆಂಧ್ರಪ್ರದೇಶ ರಾಜ್ಯವು ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲಿದ್ದು, ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಹಾಗೂ ಜಾಗತಿಕ ಮಟ್ಟದ ಕಲಿಕೆ ಅವಕಾಶಗಳು ದೊರೆಯಲಿವೆ. ಭಾರತದ ಡಿಜಿಟಲ್ ಭವಿಷ್ಯ ನಿರ್ಮಾಣದಲ್ಲಿ ಈ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 3:00 pm, Tue, 10 February 26

Source link

Exit mobile version