ತೆಲಂಗಾಣ ಸರ್ಕಾರಿ ಅಧಿಕಾರಿ ನರಹರಿ ಮನೆ ಮೇಲೆ ಎಸಿಬಿ ದಾಳಿ, ಹಾಸಿಗೆಯ ಕೆಳಗಿತ್ತು ಕೋಟಿ ಕೋಟಿ ಹಣ – Kannada News | Telangana ACB Raid: Crores in Cash Found Under Officer Narahari’s Bed

ಹೈದರಾಬಾದ್, ಜೂನ್ 17: ತೆಲಂಗಾಣ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಹಾವಳಿ ಮಿತಿಮೀರಿದ್ದು, ಭ್ರಷ್ಟಾಚಾರ ನಿಗ್ರಹ ದಳ (ACB) ನಡೆಸುತ್ತಿರುವ ಸರಣಿ ದಾಳಿಗಳು ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿರುವ ಕರಾಳ ಮುಖವನ್ನು ಬಯಲಿಗೆಳೆಯುತ್ತಿವೆ. ಇತ್ತೀಚೆಗೆ ಭೂಮಾಪನ ಇಲಾಖೆಯ ಉಪ ನಿರ್ದೇಶಕರಾದ ಸುಂಕರಿ ನರಹರಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ಎಸಿಬಿ ದಾಳಿ ನಡೆದಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆಂಬ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಹೈದರಾಬಾದ್‌ನ ಹಳೇ ನಗರದ ಚತ್ರಿನಕ ಪ್ರದೇಶದಲ್ಲಿರುವ ಸುಂಕರಿ ನರಹರಿ ಅವರ ನಿವಾಸ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು.
ಅವರ ಮನೆಯ ಹಾಸಿಗೆ ಕೆಳಗೆ ಕೋಟಿ ಕೋಟಿ ನಗದು ಪತ್ತೆಯಾಗಿದೆ.

ನರಹರಿ ಅವರ ಮನೆಯಲ್ಲಿ ಬರೋಬ್ಬರಿ 1.10 ಕೋಟಿ ರೂಪಾಯಿ ನಗದು ಹಾಗೂ ಕೆಜಿಗಟ್ಟಲೆ ಚಿನ್ನಾಭರಣಗಳು ಪತ್ತೆಯಾಗಿವೆ. ಹೈದರಾಬಾದ್ ನಗರದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಹಲವು ಮುಕ್ತ ಪ್ಲಾಟ್‌ಗಳು ಹಾಗೂ ರಂಗಾರೆಡ್ಡಿ ಜಿಲ್ಲೆಯಲ್ಲಿ ವಿಶಾಲವಾದ ಕೃಷಿ ಭೂಮಿ ಇರುವುದು ಪತ್ತೆಯಾಗಿದೆ. ಇವುಗಳ ಇಂದಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ರೂಪಾಯಿಗಳಿಗಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಎರಡು ವರ್ಷಗಳಲ್ಲಿ 441 ಪ್ರಕರಣಗಳು
ತೆಲಂಗಾಣದಲ್ಲಿ 2024 ರಿಂದ ಇಂದಿನವರೆಗೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಎಸಿಬಿ ಅಧಿಕಾರಿಗಳು ಬರೋಬ್ಬರಿ 441 ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅನೇಕ ಅಧಿಕಾರಿಗಳು ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇತ್ತೀಚೆಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಇತರರ ಹೆಸರಿಗೆ ವರ್ಗಾಯಿಸಲು ಕೋಟಿಗಟ್ಟಲೆ ಲಂಚ ಪಡೆದಿದ್ದ ಡೆಪ್ಯೂಟಿ ಕಲೆಕ್ಟರ್ ರಾಮು ನಾಯಕ್ ಅವರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಿದೆ.

ಮತ್ತಷ್ಟು ಓದಿ: ACB Raid ಟಿಪಿಒ ಜಯರಾಜ್ ಮನೆಯಲ್ಲಿ ಭಾರೀ ಆಸ್ತಿ ಪತ್ತೆ, ಕೇರಳದಲ್ಲಿರುವ ಪತ್ನಿಯ ಕ್ವಾರ್ಟರ್ಸ್‌ ಮೇಲೂ ದಾಳಿ

ಮತ್ತೊಬ್ಬ ಅಧಿಕಾರಿ ಮೋಹನ್ ನಾಯಕ್ ಅವರ ಬಳಿ 100 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ವಿಡಿಯೋ

ಭ್ರಷ್ಟ ಅಧಿಕಾರಿಗಳ ಲೂಟಿಯಿಂದ ಬೇಸತ್ತ ಜನತೆ ಈಗ ಎಸಿಬಿ ದಾಳಿಗಳನ್ನು ಸಂಭ್ರಮಿಸುತ್ತಿದ್ದಾರೆ. ಇತ್ತೀಚೆಗೆ ವಾರಂಗಲ್ ಜಿಲ್ಲೆಯ ನರಸಿಂಹುಲಪೇಟೆ ಮಂಡಲದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಮಹಿಳಾ ಎಂಪಿಡಿಒ (MPDO) ಮತ್ತು ಎಂಪಿಒ (MPO) ಅವರನ್ನು ಎಸಿಬಿ ಬಂಧಿಸಿದಾಗ, ಅಲ್ಲಿನ ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದ್ದು ಅಧಿಕಾರಿಗಳ ಮೇಲಿರುವ ಸಾರ್ವಜನಿಕರ ಆಕ್ರೋಶಕ್ಕೆ ಸಾಕ್ಷಿಯಾಗಿದೆ. ಆ ಮಹಿಳಾ ಅಧಿಕಾರಿಯು ಲಂಚದ ಹಣ ವಸೂಲಿ ಮಾಡಲೆಂದೇ ವಿಶೇಷವಾಗಿ ತನ್ನ ಮಗನನ್ನು ನೇಮಿಸಿಕೊಂಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತೆಲಂಗಾಣದಲ್ಲಿ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಜನರನ್ನು ತೀವ್ರವಾಗಿ ಲೂಟಿ ಮಾಡುತ್ತಿದ್ದಾರೆ. ಎಸಿಬಿ ಅಧಿಕಾರಿಗಳು ನಿರಂತರವಾಗಿ ಇಂತಹ ಭ್ರಷ್ಟ ತಿಮಿಂಗಿಲಗಳನ್ನು ಬಲೆಗೆ ಬೀಳಿಸಿ ಜೈಲಿಗಟ್ಟುತ್ತಿದ್ದರೂ, ಅಧಿಕಾರಿಗಳ ಲಂಚದ ಹಪಾಹಪಿ ಮಾತ್ರ ಕಮ್ಮಿಯಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಇಂತಹವರ ವಿರುದ್ಧ ಸರ್ಕಾರ ಇನ್ನು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:42 am, Wed, 17 June 26

Source link

ಹಾಲಿ ಚಾಂಪಿಯನ್ನರಿಗೆ ಸೋಲುಣಿಸಿದ ಶ್ರೀಲಂಕಾ..! – Kannada News | Women’s T20 World Cup 2026: Sri Lanka Beat New Zealand

ಇಂಗ್ಲೆಂಡ್‌ನ ರೋಸ್ ಬೌಲ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯದಲ್ಲಿ ಶ್ರೀಲಂಕಾ ತಂಡವು ಹಾಲಿ ಚಾಂಪಿಯನ್ ನ್ಯೂಝಿಲೆಂಡ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಕಿವೀಸ್ ಪಡೆ ವಿರುದ್ಧ ಶ್ರೀಲಂಕಾ ಮಹಿಳಾ ತಂಡದ ಮೊದಲ ಗೆಲುವು ಎಂಬುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡಕ್ಕೆ ಆರಂಭದಲ್ಲೇ ರನ್ ಗಳಿಸಲು ಲಂಕಾ ಬೌಲರ್‌ಗಳು ಸುಲಭವಾಗಿ ಅವಕಾಶ ನೀಡಲಿಲ್ಲ. ಆದರೆ ನಾಯಕಿ ಅಮೆಲಿಯಾ ಕೆರ್ (45 ರನ್, 36 ಎಸೆತ) ಹಾಗೂ ಅನುಭವಿ ಆಟಗಾರ್ತಿ ಸೋಫಿ ಡಿವೈನ್ (45 ರನ್, 30 ಎಸೆತ) ಜವಾಬ್ದಾರಿಯುತ ಆಟದ ಮೂಲಕ ತಂಡಕ್ಕೆ ನೆರವಾದರು.

ಶ್ರೀಲಂಕಾದ ಶಿಸ್ತುಬದ್ಧ ಬೌಲಿಂಗ್ ದಾಳಿಯಿಂದಾಗಿ, ನ್ಯೂಝಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್‌ಗಳ ಸಾಧಾರಣ ಮೊತ್ತವನ್ನಷ್ಟೇ ಕಲೆಹಾಕಲು ಶಕ್ತವಾಯಿತು. ಲಂಕಾ ಪರ ಕವಿಶಾ ದಿಲ್ಹಾರಿ 2 ವಿಕೆಟ್ ಕಸಿದು ಮಿಂಚಿದರು.

151 ರನ್​ಗಳ ಗುರಿ:

151 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ನ್ಯೂಝಿಲೆಂಡ್ ಸ್ಪಿನ್ನರ್‌ಗಳ ದಾಳಿಗೆ ಸಿಲುಕಿ ಕೇವಲ 55 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಶ್ರೀಲಂಕಾ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕೇವಲ 1 ರನ್ ಗಳಿಸಿದ್ದಾಗ ಲಭಿಸಿದ ಜೀವದಾನವನ್ನು ಅದ್ಭುತವಾಗಿ ಬಳಸಿಕೊಂಡ ನಿಲಾಕ್ಷಿ ಡಿ ಸಿಲ್ವಾ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ನ್ಯೂಝಿಲೆಂಡ್ ತಂಡದ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ನಿಲಾಕ್ಷಿ ಡಿ ಸಿಲ್ವಾ ಮೈದಾನದ ಮೂಲೆ ಮೂಲೆಗೂ ಬೌಂಡರಿ ಅಟ್ಟಿದರು. ಈ ಮೂಲಕ ಶ್ರೀಲಂಕಾ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇದಾಗ್ಯೂ ಕೊನೆಯ ಹಂತದಲ್ಲಿ ಲಂಕಾ ತಂಡವು ರನ್​ ವೇಗ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಈ ವೇಳೆ ಕ್ರೀಸ್‌ಗಿಳಿದ ವಿಕೆಟ್ ಕೀಪರ್ ಬ್ಯಾಟರ್ ಕೌಶಾನಿ ನುತ್ಯಂಗನಾ ಕೇವಲ 14 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 24 ರನ್ ಸಿಡಿಸಿ ಪಂದ್ಯವನ್ನು ಶ್ರೀಲಂಕಾದತ್ತ ತಿರುಗಿಸಿದರು.

ಮತ್ತೊಂದೆಡೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ನಿಲಾಕ್ಷಿ ಡಿ ಸಿಲ್ವಾ 37 ಎಸೆತಗಳಲ್ಲಿ ಅಜೇಯ 54 ರನ್ ಬಾರಿಸಿದರು. ಅಲ್ಲದೆ  ಕೌಶಾನಿ ಜೊತೆಗೂಡಿ ಕೊನೆಯ ಓವರ್‌ನ 4ನೇ ಎಸೆತದಲ್ಲಿ ವಿಜಯದ ಬೌಂಡರಿ ಬಾರಿಸಿದರು. ಇದರೊಂದಿಗೆ ಶ್ರೀಲಂಕಾ ಇನ್ನು 2 ಎಸೆತಗಳು ಬಾಕಿ ಇರುವಂತೆಯೇ 153 ರನ್ ಗಳಿಸಿ ಐತಿಹಾಸಿಕ ವಿಜಯೋತ್ಸವ ಆಚರಿಸಿತು.

ಬಲಿಷ್ಠ ನ್ಯೂಝಿಲೆಂಡ್ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದ ನಿಲಾಕ್ಷಿ ಡಿ ಸಿಲ್ವಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಶ್ರೀಲಂಕಾ ಟೂರ್ನಿಯಲ್ಲಿ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡರೆ, ಸತತ ಎರಡು ಸೋಲು ಕಂಡಿರುವ ನ್ಯೂಝಿಲೆಂಡ್ ಲೀಗ್ ಹಂತದಿಂದಲೇ ಹೊರಬೀಳುವ ಭೀತಿಯಲ್ಲಿದೆ.

ಇದನ್ನೂ ಓದಿ: ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ

ಸಂಕ್ಷಿಪ್ತ ಸ್ಕೋರ್:

  • ನ್ಯೂಝಿಲೆಂಡ್ ಮಹಿಳಾ ತಂಡ: 20 ಓವರ್‌ಗಳಲ್ಲಿ 150/6 (ಸೋಫಿ ಡಿವೈನ್ 45, ಅಮೆಲಿಯಾ ಕೆರ್ 45; ಕವಿಶಾ ದಿಲ್ಹಾರಿ 2/35)
  • ಶ್ರೀಲಂಕಾ ಮಹಿಳಾ ತಂಡ: 19.4 ಓವರ್‌ಗಳಲ್ಲಿ 153/5 (ನಿಲಾಕ್ಷಿ ಡಿ ಸಿಲ್ವಾ 54*, ಕೌಶಾನಿ ನುತ್ಯಂಗನಾ 24*; ನೆನ್ಸಿ ಪಟೇಲ್ 2/23)
  •  ಫಲಿತಾಂಶ: ಶ್ರೀಲಂಕಾ ತಂಡಕ್ಕೆ 5 ವಿಕೆಟ್‌ಗಳ ಜಯ

Source link

Daily Devotional: ಮನೆಗೆ ಹಾವು ಬಂದರೆ ಕೊಲ್ಲಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು? – Kannada News | What to Do When a Snake Enters Your Home: A Guide to Safe and Auspicious Handling

ಮನೆಗೆ ಹಾವು ಬಂದರೆ ಕೊಲ್ಲಬಾರದು ಯಾಕೆ?Image Credit source: Pinterest

ಮನೆಗೆ ಹಾವು ಬಂದರೆ ಅದನ್ನು ಕೊಲ್ಲಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಶಾಸ್ತ್ರ ಮತ್ತು ನಂಬಿಕೆಗಳ ಪ್ರಕಾರ, ಹಾವನ್ನು ಸಾಯಿಸುವುದು ಅಶುಭಕರ. ಹಾವು ದೈವಾಂಶ ಸಂಭೂತವಾಗಿದ್ದು, ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನವನ್ನು ಪಡೆದುಕೊಂಡಿದೆ.

ಗುರೂಜಿಯವರು ಹೇಳುವಂತೆ, ಹಾವು ಕೇವಲ ಒಂದು ಜೀವಿಯಲ್ಲ, ಅದು ಶಿವನ ಕುತ್ತಿಗೆಯಲ್ಲಿ, ವಿಷ್ಣುವಿನ ಶಯನವಾಗಿ, ಗಣಪತಿಯ ಹೊಟ್ಟೆಯ ಸುತ್ತ ಕಾಣಿಸಿಕೊಳ್ಳುತ್ತದೆ. ಇಡೀ ಭೂಮಿಯೇ ಹಾವಿನ ಮೇಲೆ ನಿಂತಿದೆ ಎಂದು ಪುರಾಣಗಳು ಹೇಳುತ್ತವೆ. ನಿಧಿಗಳನ್ನು ಕಾಯುವ ಕೆಲಸವನ್ನು ಕೂಡ ಹಾವುಗಳು ಮಾಡುತ್ತವೆ ಎಂದು ನಂಬಲಾಗುತ್ತದೆ. ನಾವು ನಾಗರಾಜ ಎಂದು ಪೂಜಿಸಿ, ನವನಾಗಗಳನ್ನು ಆರಾಧಿಸುತ್ತೇವೆ. ಮನುಷ್ಯನ ನಾಲಿಗೆ, ಬೆನ್ನುಮೂಳೆ ಮತ್ತು ಹಣೆಯಲ್ಲಿ ನಾಗನ ಅಂಶವಿರುತ್ತದೆ ಎಂಬ ನಂಬಿಕೆಯೂ ಇದೆ.

ಅರಣ್ಯ ನಾಶದಿಂದಾಗಿ ಹಾವುಗಳ ಸಂತತಿ ಕಡಿಮೆಯಾಗುತ್ತಿದ್ದು, ಆಹಾರ ಮತ್ತು ಆಶ್ರಯಕ್ಕಾಗಿ ಅವು ಮನುಷ್ಯ ವಾಸದ ಪ್ರದೇಶಗಳಿಗೆ ಬರಬಹುದು. ಇಂತಹ ಸಂದರ್ಭದಲ್ಲಿ ಭಯಪಡುವುದು ಸಹಜವಾದರೂ, ತಕ್ಷಣವೇ ಅದನ್ನು ಕೊಲ್ಲುವ ನಿರ್ಧಾರಕ್ಕೆ ಬರಬಾರದು. ಮನೆಯ ಅಂಗಳಕ್ಕೋ, ಕಾಂಪೌಂಡ್‌ಗೋ ಅಥವಾ ಪ್ರಿಮೈಸಸ್‌ನ ಒಳಗೋ ಹಾವು ಕಾಣಿಸಿಕೊಂಡಾಗ, ಸಾಧ್ಯವಾದಷ್ಟು ಬೇಗ ತಡಮಾಡದೆ ಹಾವಾಡಿಗರು ಅಥವಾ ಅರಣ್ಯ ಇಲಾಖೆಯವರಿಗೆ ತಿಳಿಸಿ, ಅವರ ಮೂಲಕ ಹಾವನ್ನು ಸುರಕ್ಷಿತವಾಗಿ ಹಿಡಿಸಿ, ಅರಣ್ಯ ಪ್ರದೇಶಕ್ಕೆ ಬಿಡುವುದು ಶುಭಕರ. ಇದು ನಮಗೂ ಹಾವಿಗೂ ಕ್ಷೇಮ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಹಾವನ್ನು ಕೊಲ್ಲುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಶಾಸ್ತ್ರಗಳು ಎಚ್ಚರಿಕೆ ನೀಡಿವೆ. ಒಂದು ಮನೆಯಲ್ಲಿ ಹಾವನ್ನು ಸಾಯಿಸಿದರೆ, ಆ ಕುಟುಂಬದ ಮುಂದಿನ ಪೀಳಿಗೆಗೆ ವಂಶಾಭಿವೃದ್ಧಿ ಕಷ್ಟವಾಗಬಹುದು. ಮಕ್ಕಳಲ್ಲಿ ನೇತ್ರಬಾಧೆ ಕಾಡಬಹುದು, ಮಾನಸಿಕ ನೆಮ್ಮದಿ ಹಾಳಾಗಬಹುದು, ಸಣ್ಣಪುಟ್ಟ ಕಲಹಗಳು, ರೋಗರುಜಿನಗಳು ಹೆಚ್ಚಾಗಬಹುದು, ದೈವಾಂಶ ಕಡಿಮೆಯಾಗಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ‘ಹಾವಿನ ದ್ವೇಷ 12 ವರ್ಷ’ ಎಂಬ ಮಾತು ನಿಜ. ಹಾವನ್ನು ಸಾಯಿಸಿದ ಮನೆಯಲ್ಲಿ ವಂಶ ಪಾರಂಪರವಾಗಿ ಸರ್ಪ ಶಾಪ ಬರಬಹುದು ಎಂಬ ನಂಬಿಕೆಯೂ ಇದೆ.

ಯಾವುದೇ ಹಾವು ತಾನಾಗಿಯೇ ಯಾರನ್ನೂ ಕಚ್ಚಲು ಅಥವಾ ಸಾಯಿಸಲು ಬರುವುದಿಲ್ಲ. ಅದು ಕೇವಲ ತನ್ನ ಜೀವ ರಕ್ಷಣೆಗಾಗಿ ಮಾತ್ರ ಕಚ್ಚುತ್ತದೆ. ಅದು ಅಪ್ಪಿತಪ್ಪಿ ನಮ್ಮ ಮನೆಗೆ ಪ್ರವೇಶಿಸಿದಾಗ, ಅದನ್ನು ಸಾಯಿಸುವುದಕ್ಕಿಂತ, ಆದಷ್ಟು ಬೇಗ ಸುರಕ್ಷಿತವಾಗಿ ಹೊರಹಾಕುವುದು ಜಾಣತನ. ನಂಬಿಕೆ ಮತ್ತು ಶಾಸ್ತ್ರಗಳ ಪ್ರಕಾರ, ಹಾವನ್ನು ಮನೆಯಲ್ಲಿ ಅಥವಾ ಸುತ್ತಮುತ್ತ ಸಾಯಿಸುವುದು ಅಶುಭಕರ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿರ್ದೇಶಕ ಪವನ್ ಒಡೆಯರ್ ಗೆ ಮಾತೃ ವಿಯೋಗ; ಅನಾರೋಗ್ಯದಿಂದ ತಾಯಿ ಗೀತಾ ನಿಧನ – Kannada News | Director Pavan Wadeyar’s Mother Geetha Wadeyar Passes Away; Sandalwood Mourns

ಕನ್ನಡ ಚಿತ್ರರಂಗದ ಯಶಸ್ವಿ ಮತ್ತು ಜನಪ್ರಿಯ ನಿರ್ದೇಶಕ ಪವನ್ ಒಡೆಯರ್ ಕುಟುಂಬಕ್ಕೆ ಭರಿಸಲಾಗದ ದುಃಖ ಎದುರಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ಗೀತಾ ಒಡೆಯರ್ (73) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಗೀತಾ ಆರೋಗ್ಯ ತುಂಬಾನೇ ಹದಗೆಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತಾಯಿಯನ್ನು ಪವನ್ ಒಡೆಯರ್ ಬೆಂಗಳೂರಿನಲ್ಲೇ ಇರಿಸಿಕೊಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಮೃತ ಗೀತಾ ಒಡೆಯರ್ ಅವರು ಕಳೆದ ಕೆಲವು ಸಮಯದಿಂದ ಮಲ್ಟಿಪಲ್ ಮೈಲೋಮ (ಒಂದು ರೀತಿಯ ರಕ್ತದ ಕ್ಯಾನ್ಸರ್) ಮತ್ತು ಜಿಬಿ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸದ್ಯ ಮೃತರ ಪಾರ್ಥಿವ ಶರೀರವನ್ನು ಅವರ ಸ್ವಂತ ಊರಾದ ಕುಣಿಗಲ್‌ಗೆ ಕೊಂಡೊಯ್ಯಲಾಗಿದೆ. ಇಂದು (ಜೂನ್ 17) ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕುಣಿಗಲ್‌ನಲ್ಲಿಯೇ ಅಂತ್ಯಕ್ರಿಯೆ ನೆರವೇರಲಿದೆ. ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಪವನ್ ಒಡೆಯರ್ ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಪವನ್ ಒಡೆಯರ್ ಸಿನಿ ಜರ್ನಿ:

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಯುವ ನಿರ್ದೇಶಕರಲ್ಲಿ ಪವನ್ ಒಡೆಯರ್ ಪ್ರಮುಖರು. 2012ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕೋಮಲ್ ನಟನೆಯ ಸೂಪರ್ ಹಿಟ್ ‘ಗೋವಿಂದಾಯ ನಮಃ’ ಚಿತ್ರದ ಮೂಲಕ ಪವನ್ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ‘ಪ್ಯಾರ್​ಗೇ ಆಗ್ಬಿಟ್ಟೈತೆ’ ಹಾಡು ಟ್ರೆಂಡ್ ಆಗಿತ್ತು. ಇದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಗೂಗ್ಲಿ’ ನಿರ್ದೇಶನ ಮಾಡಿ ಸ್ಟಾರ್ ನಿರ್ದೇಶಕರಾಗಿ ಹೊರಹೊಮ್ಮಿದರು.

ನಂತರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ‘ರಣವಿಕ್ರಮ’ ಮತ್ತು ‘ನಟಸಾರ್ವಭೌಮ’ದಂತಹ ಸಾಹಸ ಪ್ರಧಾನ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಇವರದ್ದಾಗಿದೆ. ಸದ್ಯ ಕೇವಲ ನಿರ್ದೇಶನ ಮಾತ್ರವಲ್ಲದೆ ಒಡೆಯರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೆವಿಎನ್ ಪ್ರೊಡಕ್ಷನ್ಸ್ ಜತೆ ಶಿವರಾಜ್​​ಕುಮಾರ್ ಹೊಸ ಸಿನಿಮಾ; ಪವನ್ ಒಡೆಯರ್ ನಿರ್ದೇಶನ

ಜಯಮ್ಮ ನಿಧನ

ಜೂನ್ 16ರಂದು ಸ್ಯಾಂಡಲ್‌ವುಡ್‌ನ ಸ್ಟಾರ್ ಸಹೋದರರಾದ ಶ್ರೀಮುರಳಿ ಮತ್ತು ವಿಜಯ್ ರಾಘವೇಂದ್ರ ಅವರ ತಾಯಿ, ಹಿರಿಯ ನಿರ್ಮಾಪಕ ಚಿನ್ನೇಗೌಡರ ಧರ್ಮಪತ್ನಿ ಜಯಮ್ಮ ಅವರು ನಿಧನರಾಗಿದ್ದರು. ಜಯಮ್ಮ ಅವರ ಅಗಲಿಕೆಯ ಆಘಾತದಿಂದ ಚಿತ್ರರಂಗ ಇನ್ನು ಹೊರಬರುವ ಮುನ್ನವೇ, ಈಗ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ ಇಹಲೋಕ ತ್ಯಜಿಸಿರುವುದು ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಶೋಕದ ಛಾಯೆ ಆವರಿಸುವಂತೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ – Kannada News | Karnataka Weather Forecast: Light Rain and Gusty Winds Expected in Bengaluru

ಬೆಂಗಳೂರು, ಜೂನ್ 17: ಭಾರತೀಯ ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ (Weather) ಸಾಧ್ಯತೆಯಿದೆ. ಇದರೊಂದಿಗೆ ಕೆಲವು ಭಾಗಗಳಲ್ಲಿ ಬಲವಾದ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ಮುಖ್ಯಾಂಶಗಳು

  • ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
  • ಉತ್ತರ ಒಳನಾಡಿನಲ್ಲಿ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ.
  • ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಇದೆ.

ಎಲ್ಲೆಲ್ಲಿ ಮಳೆ?

ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ನಿರೀಕ್ಷೆಯಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಕಲ್ಬುರ್ಗಿ, ಬೀದರ್, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಆದರೆ, ಬಿರುಗಾಳಿಯ ತೀವ್ರತೆ ಇಲ್ಲಿ ಹೆಚ್ಚಿರಲಿದ್ದು, ವಿಜಯಪುರ, ಕಲ್ಬುರ್ಗಿ, ಬೆಳಗಾವಿ, ಧಾರವಾಡ, ಗದಗ್, ರಾಯಚೂರು, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಈ ಭಾಗದ ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಸಾಧಾರಣ ಮಳೆ

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಇದಲ್ಲದೆ ಚಿಕ್ಕಬಳ್ಳಾಪುರ, ಶಿವಮೊಗ್ಗ, ಬಳ್ಳಾರಿ, ಮೈಸೂರು, ದಾವಣಗೆರೆ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

ಬಿರುಗಾಳಿ ಮತ್ತು ಮಳೆಯ ಮುನ್ಸೂಚನೆ ಇರುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚರಿಸುವಾಗ ಜಾಗರೂಕರಾಗಿರಬೇಕು. ವಿಶೇಷವಾಗಿ ಹಳೆಯ ಕಟ್ಟಡಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯದಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಿರುಗಾಳಿ, ಉದ್ಧವ್ ಬಣದ ಸಂಸದರ ಫೋನ್ ಆಫ್, ದೆಹಲಿಯತ್ತ ಎಲ್ಲರ ಚಿತ್ತ – Kannada News | Maharashtra Politics Turmoil: Uddhav Shiv Sena MPs Switch Off Phones Amid Defection Rumors

ಮುಂಬೈ, ಜೂನ್ 17: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಪ್ರಕ್ಷುಬ್ಧತೆ ಉಂಟಾಗಿದೆ. ಉದ್ಧವ್ ಠಾಕ್ರೆ(Uddhav Thackeray) ನೇತೃತ್ವದ ಶಿವಸೇನೆ ಪಕ್ಷದ ಕೆಲವು ಲೋಕಸಭಾ ಸಂಸದರ ಫೋನ್​ಗಳು ಇದ್ದಕ್ಕಿದ್ದಂತೆ ದ್ವಿಚ್ ಆಫ್ ಆಗಿದ್ದು, ಹಿರಿಯ ನಾಯಕರಿಗೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಆಂತರಿಕ ಭಿನ್ನಾಭಿಪ್ರಾಯದ ಬೆನ್ನಲ್ಲೇ ಎಲ್ಲರ ಚಿತ್ತ ಈಗ ಮುಂಬೈನಿಂದ ದೆಹಲಿಯತ್ತ ನೆಟ್ಟಿದೆ.

ಶಿಂಧೆ ಬಣದ ಜೊತೆ ವಿಲೀನಕ್ಕೆ ಸಿದ್ಧತೆ?
ಮೂಲಗಳ ಪ್ರಕಾರ, ಉದ್ಧವ್ ಬಣದ ಆರು ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ಸಂಜಯ್ ಜಾಧವ್ ಅವರು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜತೆ ಸಂ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಮತ್ತೊಬ್ಬ ಸಂಸದ ರಾಜಭಾವು ವಾಜೆ ಕೂಡ ಇವರನ್ನು ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ಇದೆ. ಈ ಭಿನ್ನಮತೀಯ ಸಂಸದರು ದೆಹಲಿಯಲ್ಲಿ ಶ್ರೀಕಾಂತ್ ಶಿಂಧೆ ನಿವಾಸದಲ್ಲಿ ಸಭೆ ನಡೆಸಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಬಣ ರಚಿಸುವ ಪ್ರಕ್ರಿಯೆ ಮುಗಿಸಿ, ನಂತರ ಶಿಂಧೆ ಶಿವಸೇನೆಯಲ್ಲಿ ವಿಲೀನಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ತಲಾ 15 ಕೋಟಿ ರೂ. ಆಮಿಷ: ಸಂಜಯ್ ರಾವತ್ ಗಂಭೀರ ಆರೋಪ
ಈ ಬೆಳವಣಿಗೆಗಳ ಬೆನ್ನಲ್ಲೇ ದೆಹಲಿಗೆ ಧಾವಿಸಿರುವ ಉದ್ಧವ್ ಬಣದ ಹಿರಿಯ ನಾಯಕ ಸಂಜಯ್ ರಾವತ್, ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಹಾರಾಷ್ಟ್ರದ ಸಂಸದರನ್ನು ಖರೀದಿಸಲು ತಲಾ 15 ಕೋಟಿ ರೂ. ಹಣ ನೀಡಲಾಗುತ್ತಿದೆ. ಈ ಮಾಹಿತಿ ಆಘಾತಕಾರಿ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಪಕ್ಷ ಒಡೆಯುವ ವದಂತಿಗಳನ್ನು ತಳ್ಳಿಹಾಕಿರುವ ಅವರು, ಯಾವುದೇ ಸವಾಲನ್ನು ಎದುರಿಸಲು ತಮ್ಮ 60 ವರ್ಷಗಳ ಇತಿಹಾಸವಿರುವ ಸಂಘಟನೆ ಸಿದ್ಧವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಉದ್ಧವ್ ಠಾಕ್ರೆಯವರ ಶಿವಸೇನೆಯಲ್ಲಿ ಬಿರುಕು; ಪ್ರತ್ಯೇಕ ಗುಂಪು ರಚಿಸುತ್ತಾರಾ ಯುಟಿಬಿ ಸಂಸದರು?

ಸಭೆಗೆ ಗೈರಾಗಿದ್ದೇ ಅನುಮಾನಕ್ಕೆ ಕಾರಣ
ಕಳೆದ ಭಾನುವಾರ ಉದ್ಧವ್ ಠಾಕ್ರೆ ಅವರು ಮುಂಬೈನಲ್ಲಿ ಕರೆದಿದ್ದ ಪ್ರಮುಖ ಸಭೆಗೆ ಒಟ್ಟು 9 ಲೋಕಸಭಾ ಸಂಸದರ ಪೈಕಿ ಕೇವಲ ನಾಲ್ವರು ಮಾತ್ರ ಖುದ್ದಾಗಿ ಹಾಜರಾಗಿದ್ದರು. ಉಳಿದ ಐವರು ಸಂಸದರು ವೈಯಕ್ತಿಕ ಕಾರಣ ನೀಡಿ ಕೇವಲ ಫೋನ್ ಅಥವಾ ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಅದರಲ್ಲಿಯೂ ಸಂಸದ ಸಂಜಯ್ ದೇಶಮುಖ್ ಅವರು ಉದ್ಧವ್ ಸಭೆಯನ್ನು ತಪ್ಪಿಸಿಕೊಂಡು, ದೆಹಲಿಯಲ್ಲಿ ಕೇಂದ್ರ ಸಚಿವ ಪ್ರತಾಪರಾವ್ ಜಾಧವ್ ಅವರನ್ನು ಭೇಟಿ ಮಾಡಿದ್ದು ಈ ಎಲ್ಲಾ ಅನುಮಾನಗಳಿಗೆ ಪ್ರಮುಖ ಕಾರಣವಾಗಿದೆ.

ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಈ ಬಗ್ಗೆ ಪ್ರತಿಕ್ರಿಯಿಸಿ, ಯಾವ ಜನಪ್ರತಿನಿಧಿಗಳಿಗೆ ಉದ್ಧವ್ ನಾಯಕತ್ವದ ಮೇಲೆ ನಂಬಿಕೆ ಇಲ್ಲವೋ ಮತ್ತು ಯಾರು ಬಾಳಾ ಸಾಹೇಬ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಅವರ ಆದರ್ಶಗಳನ್ನು ನಂಬುತ್ತಾರೋ, ಅಂತಹವರಿಗೆ ನಮ್ಮ ಶಿವಸೇನೆಯ ಬಾಗಿಲುಗಳು ಯಾವಾಗಲೂ ಮುಕ್ತವಾಗಿರುತ್ತವೆ ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಶ್ಮಿಕಾ-ವಿಜಯ್ ಚಿತ್ರಕ್ಕೆ ವಿಲನ್ ಆದ ಹಾಲಿವುಡ್​ನ ‘ದಿ ಮಮ್ಮಿ’ ಚಿತ್ರದ ಖಳ – Kannada News | The Mummy Star Arnold Vosloo is Villain for Vijay Rashmika Starrer Ranbaali

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಬ್ಯಾಕ್-ಟು-ಬ್ಯಾಕ್ ಸರ್ಪ್ರೈಸ್ ಸಿಗುತ್ತಿದೆ. ‘ಡಿಯರ್ ಕಾಮ್ರೇಡ್’ ಚಿತ್ರ ರಿಲೀಸ್ ಆದ ಏಳು ವರ್ಷಗಳ ನಂತರ, ಈ ಜೋಡಿ ರಾಹುಲ್ ಸಾಂಕೃತ್ಯನ್
ನಿರ್ದೇಶನದ ‘ರಣಬಾಲಿ’ ಚಿತ್ರದ (Ranabaali) ಮೂಲಕ ಮತ್ತೆ ಒಂದಾಗುತ್ತಿದೆ. ಮದುವೆಯ ನಂತರದ ಮೊದಲ ಸಿನಿಮಾ ಇದಾಗಿರುವುದರಿಂದ ಕುತೂಹಲ ಹೆಚ್ಚಿದೆ. ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಚಿತ್ರದ ಪವರ್‌ಫುಲ್ ವಿಲನ್ ಪಾತ್ರವನ್ನು ಪರಿಚಯಿಸಿದ್ದು, ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ. ಹೌದು, ಹಾಲಿವುಡ್‌ನ ಖ್ಯಾತ ವಿಲನ್ ಈಗ ರಣಬಾಲಿಗೆ ಎಂಟ್ರಿ ಕೊಟ್ಟಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ‘ರಣಬಾಲಿ’ ಚಿತ್ರದ ಮುಖ್ಯ ಖಳನಾಯಕ ಸರ್ ಥಿಯೋಡರ್ ಹೆಕ್ಟರ್ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಇದರಲ್ಲಿ ‘ದಿ ಮಮ್ಮಿ’ ಚಿತ್ರದ ಖ್ಯಾತಿಯ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ನಟಿಸಿದ್ದಾರೆ. ಬ್ರಿಟಿಷ್ ಅಧಿಕಾರಿಯ ರಾಯಲ್ ಲುಕ್‌ನಲ್ಲಿ, ಕೈಯಲ್ಲಿ ಚಿನ್ನದ ಕತ್ತಿ ಹಿಡಿದು ಕಾಣಿಸಿಕೊಂಡಿದ್ದಾರೆ. ಇವರ ಹಿನ್ನೆಲೆಯಲ್ಲಿ ಕೋಟೆಯೊಂದು ಧಗಧಗನೆ ಉರಿಯುತ್ತಿರುವುದನ್ನು ಕಾಣಬಹುದು. ಈ ಫಸ್ಟ್ ಲುಕ್ ಹಂಚಿಕೊಂಡಿರುವ ಚಿತ್ರತಂಡ, ‘ದಿ ಡೆಮನ್ ಆಫ್ ಡ್ರಾಟ್, ಸರ್ ಥಿಯೋಡರ್ ಹೆಕ್ಟರ್. ದಿ ಮಮ್ಮಿ ಚಿತ್ರದಲ್ಲಿ ಇಮ್ಹೋಟೆಪ್ ಪಾತ್ರದ ಮೂಲಕ ಜಗತ್ತನ್ನೇ ನಡುಗಿಸಿದ್ದ ಅರ್ನಾಲ್ಡ್ ವೋಸ್ಲೂ ಈಗ ರಣಬಾಲಿ ಚಿತ್ರದಲ್ಲಿ ಕ್ರೂರ ಸರ್ ಥಿಯೋಡರ್ ಹೆಕ್ಟರ್ ಆಗಿ ಅಬ್ಬರಿಸಲಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಸುಸ್ವಾಗತ’ ಎಂದು ಟ್ವೀಟ್ ಮಾಡಿದೆ.

ಚಿತ್ರದ ಫಸ್ಟ್ ಲುಕ್ ಅನ್ನು ರೀ-ಪೋಸ್ಟ್ ಮಾಡಿದ ನಿರ್ದೇಶಕ ರಾಹುಲ್ ಸಾಂಕೃತ್ಯನ್, ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಚಿಕ್ಕವನಿದ್ದಾಗ ‘ದಿ ಮಮ್ಮಿ’ ಆಲ್-ಟೈಮ್ ಫೇವರಿಟ್ ಸಿನಿಮಾ ಆಗಿತ್ತು ಎಂದು ನೆನೆದಿರುವ ಅವರು, ಅದರಲ್ಲಿ ಎಲ್ಲ ಪಾತ್ರಗಳೂ ಇಷ್ಟವಾಗಿದ್ದರೂ, ಆ ವಿಲನ್ ಪಾತ್ರವನ್ನು ನೋಡಿಯೇ ಜಗತ್ತಿನಲ್ಲಿ ರಾಕ್ಷಸರು ನಿಜವಾಗಿಯೂ ಇರುತ್ತಾರೆ ಎಂದು ತಾವು ನಂಬಿದ್ದಾಗಿ ಹೇಳಿದ್ದಾರೆ. ಅಲ್ಲದೆ, ತಮ್ಮ ಬಾಲ್ಯದ ಫೇವರಿಟ್ ವಿಲನ್ ಎದುರು ತಾವೇ ನಿಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ, ಇದು ವಿಧಿ ಬರಹ ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

63 ವರ್ಷದ ಅರ್ನಾಲ್ಡ್ ವೋಸ್ಲೂ ಮೂಲತಃ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದವರು. ಇವರ ಪೋಷಕರೂ ರಂಗಭೂಮಿ ಕಲಾವಿದರಾಗಿದ್ದರಿಂದ ಇವರಿಗೂ ನಟನೆ ರಕ್ತಗತವಾಗಿ ಬಂದಿತ್ತು. 1980ರ ದಶಕದ ಕೊನೆಯಲ್ಲಿ ಅಮೆರಿಕಾಗೆ ವಲಸೆ ಹೋದ ಅರ್ನಾಲ್ಡ್, 1987ರಲ್ಲಿ ‘ಗೋರ್’ ಸಿನಿಮಾ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಇವರಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬ್ರೇಕ್ ನೀಡಿದ್ದು 1999ರಲ್ಲಿ ಬಂದ ಸ್ಟೀಫನ್ ಸೋಮರ್ಸ್ ನಿರ್ದೇಶನದ ಬ್ಲಾಕ್‌ಬಸ್ಟರ್ ಮೂವಿ ‘ದಿ ಮಮ್ಮಿ’. ಇದರಲ್ಲಿ ಇವರು ನಟಿಸಿದ ‘ಇಮ್ಹೋಟೆಪ್’ ಎಂಬ ಪುರಾತನ ಈಜಿಪ್ಟ್ ಅರ್ಚಕನ ಪಾತ್ರ ಇತಿಹಾಸ ಸೃಷ್ಟಿಸಿತು. ಈ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 422.50 ಮಿಲಿಯನ್ ಡಾಲರ್ ಗಳಿಸಿತ್ತು. ನಂತರ 2001ರಲ್ಲಿ ಬಂದ ಇದರ ಸೀಕ್ವೆಲ್ ‘ದಿ ಮಮ್ಮಿ ರಿಟರ್ನ್ಸ್’ 436 ಮಿಲಿಯನ್ ಡಾಲರ್ ಬಾಚಿಕೊಂಡಿತ್ತು. ಆ ಬಳಿಕ ಅವರು ಹಲವು ಸಿನಿಮಾ ಹಾಗೂ ಟಿವಿ ಸೀರಿಸ್​​ಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ? – Kannada News | Garuda Purana: Dreams of Deceased Loved Ones Explained

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಕನಸಿನಲ್ಲಿ ಮರಣಿಸಿದ ವ್ಯಕ್ತಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಗರುಡ ಪುರಾಣದ ಪ್ರಕಾರ, ಇಂತಹ ಕನಸುಗಳಿಗೆ ನಿರ್ದಿಷ್ಟ ಅರ್ಥಗಳಿವೆ. ನಮ್ಮ ಪೂರ್ವಜರು ಅಥವಾ ಸಂಬಂಧಿಕರು ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ, ಅವರ ಕಾರ್ಯಗಳನ್ನು ನೆರವೇರಿಸುವಂತೆ ಸೂಚಿಸುತ್ತಾರೆ. ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆ ಸಂದರ್ಭಗಳಲ್ಲಿ ಕಾರ್ಯಗಳನ್ನು ನೆರವೇರಿಸುವುದು ಸೂಕ್ತ.

ಕನಸಿನಲ್ಲಿ ಮರಣಿಸಿದ ವ್ಯಕ್ತಿಗಳು ಕೋಪದಿಂದ, ಕಿರುಚಾಡುತ್ತಾ ಅಥವಾ ಕೂಗಾಡುತ್ತಾ ಕಾಣಿಸಿಕೊಂಡರೆ ಅದು ಅಶುಭದ ಸಂಕೇತ. ಅಂತಹ ಸಮಯದಲ್ಲಿ, ಇಷ್ಟದೇವರ ಅಥವಾ ಕುಲದೇವರ ದರ್ಶನ ಪಡೆದು ಪೂಜೆ ಸಲ್ಲಿಸುವುದು ಉತ್ತಮ. ಉದಾಹರಣೆಗೆ, ಕುಲದೇವರು ವೆಂಕಟೇಶ್ವರನಾಗಿದ್ದರೆ, ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿಸಬಹುದು.

ಮರಣಿಸಿದವರು ಕನಸಿನಲ್ಲಿ ಸೈಲೆಂಟ್ ಆಗಿ ಅಥವಾ ಶಾಂತವಾಗಿ ಕಾಣಿಸಿಕೊಂಡರೆ, ಅದು ನಮಗೆ ಜವಾಬ್ದಾರಿಗಳನ್ನು ನೆನಪಿಸುವ ಅಥವಾ ಎಚ್ಚರಿಕೆ ನೀಡುವ ಸೂಚನೆಯಾಗಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

ರಸ್ತೆ ಗುಂಡಿಗಳ ಪತ್ತೆಗೆ ಎಐ ಮೊರೆಹೋದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ – Kannada News | NHAI Adopts AI and Drones for Smart Pothole Detection and Highway Maintenance

ಬೆಂಗಳೂರು, ಜೂನ್​​ 17: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಕೃತಕ ಬುದ್ಧಿಮತ್ತೆ (AI), ಡ್ರೋನ್‌ಗಳು ಹಾಗೂ ಸುಧಾರಿತ ಡೇಟಾ ವಿಶ್ಲೇಷಣಾ ತಂತ್ರಜ್ಞಾನಗಳನ್ನು ಬಳಸುವ ಪೂರ್ವಾನುಮಾನ ಆಧಾರಿತ ಆಸ್ತಿ ನಿರ್ವಹಣಾ ವ್ಯವಸ್ಥೆ (Predictive Asset Management Framework) ಅಳವಡಿಸಿಕೊಳ್ಳುತ್ತಿದೆ. ಗುಂಡಿಗಳು ಮತ್ತು ಇತರ ರಸ್ತೆ ದೋಷಗಳು ಗಂಭೀರ ಸಮಸ್ಯೆಗಳಾಗುವ ಮುನ್ನವೇ ಅವುಗಳನ್ನು ಪತ್ತೆಹಚ್ಚಿ ದುರಸ್ತಿಗೊಳಿಸುವುದು ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.

ರಾಷ್ಟ್ರೀಯ ಹೆದ್ದಾರಿಗಳ ಸ್ಥಿತಿಯನ್ನು ಪರಿಶೀಲಿಸಲು ನೆಟ್‌ವರ್ಕ್ ಸರ್ವೇ ವೆಹಿಕಲ್ಸ್ (NSVs) ಅನ್ನು ಬಳಸಲಾಗುತ್ತಿದೆ. ಇವು ರಸ್ತೆಯ ಮೇಲ್ಮೈಯ ಅಸಮತೋಲನ, ಬಿರುಕುಗಳು, ಗುಂಡಿಗಳು ಹಾಗೂ ರಚನಾತ್ಮಕ ಹಾನಿಯನ್ನು ಮೌಲ್ಯಮಾಪನ ಮಾಡಲಿವೆ. ಇದರ ಜೊತೆಗೆ ಡ್ರೋನ್ ಅನಾಲಿಟಿಕ್ಸ್ ಮಾನಿಟರಿಂಗ್ ಸಿಸ್ಟಮ್ (DAMS) ಮೂಲಕ ಹೆದ್ದಾರಿ ಆಸ್ತಿಗಳ ಡಿಜಿಟಲ್ ದಾಖಲೆ ಸಿದ್ಧಪಡಿಸುವುದು, ಸೇತುವೆಗಳು ಹಾಗೂ ಇತರ ರಚನೆಗಳ ಮೇಲ್ವಿಚಾರಣೆ ಮತ್ತು ಅತಿಕ್ರಮಣ ಪತ್ತೆಹಚ್ಚುವ ಕಾರ್ಯ ನಡೆಯಲಿದೆ. ಫಾಲಿಂಗ್ ವೇಟ್ ಡಿಫ್ಲೆಕ್ಟೋಮೀಟರ್ (FWD) ಪರೀಕ್ಷೆಗಳ ಮೂಲಕ ರಸ್ತೆಯ ಸಾಮರ್ಥ್ಯ ಅಳೆಯಲಾಗುತ್ತಿದ್ದು, ದುರ್ಬಲಗೊಳ್ಳುತ್ತಿರುವ ರಸ್ತೆ ಭಾಗಗಳನ್ನು ಗುರುತಿಸಲಾಗುತ್ತದೆ.

ಇದನ್ನೂ ಓದಿ: ಭವಾನಿಪುರದ ಸೋಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ

AI ಮೂಲಕ ರಸ್ತೆ ಗುಂಡಿಗಳ ಪತ್ತೆ

ಹೆದ್ದಾರಿಗಳಲ್ಲಿ AI ಆಧಾರಿತ ಡ್ಯಾಶ್‌ಕ್ಯಾಮ್ ಅನಾಲಿಟಿಕ್ಸ್ ಸರ್ವೀಸ್ (DAS) ಅನ್ನು ಕೂಡ ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆ ಸ್ವಯಂಚಾಲಿತವಾಗಿ, ರಸ್ತೆ ಗುಂಡಿಗಳು, ಹಾನಿಗೊಳಗಾದ ಕ್ರ್ಯಾಶ್ ಬ್ಯಾರಿಯರ್‌ಗಳು, ದೋಷಪೂರಿತ ಬೀದಿ ದೀಪಗಳು ಸೇರಿ ಮುಂತಾದ ಸಮಸ್ಯೆಗಳನ್ನು ಪತ್ತೆಹಚ್ಚಲಿದೆ. ಈ ಹೊಸ ವ್ಯವಸ್ಥೆಯಿಂದ ಹೆದ್ದಾರಿಗಳ ಆಯುಷ್ಯ ಹೆಚ್ಚಲಿರುವುದರ ಜೊತೆಗೆ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ. ಪ್ರಯಾಣಿಕರಿಗೆ ಉತ್ತಮ ಸಂಚಾರ ಅನುಭವ ಕೂಡ ದೊರಕಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಯೋಗ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 17, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ.ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ತದಿಗೆ, ಪುನರ್ವಸು ನಕ್ಷತ್ರ, ಧ್ರುವ ಯೋಗ, ತೈತಲ ಕರಣವಿರುವ ಶುಭ ದಿನವಾಗಿದೆ.

ಈ ದಿನದ ರಾಹುಕಾಲ ಮಧ್ಯಾಹ್ನ 12:19 ರಿಂದ 1:55 ರವರೆಗೆ ಇದ್ದು, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಬೆಳಗ್ಗೆ 10:43 ರಿಂದ 12:19 ರವರೆಗೆ ಇರುತ್ತದೆ. ಇಂದು ಕದಳಿ ಗೌರಿ ವ್ರತ ಮತ್ತು ರಾಣಾ ಪ್ರತಾಪ್ ಸಿಂಹರ ಜನ್ಮದಿನೋತ್ಸವವನ್ನೂ ಆಚರಿಸಲಾಗುತ್ತದೆ. ಪಾರ್ವತಿ ದೇವಿಯನ್ನು ಆರಾಧಿಸುವುದರಿಂದ ಸಾಕಷ್ಟು ಶುಭ ಫಲಗಳು ದೊರೆಯುತ್ತವೆ. ರವಿ ಮತ್ತು ಚಂದ್ರ ಇಬ್ಬರೂ ಮಿಥುನ ರಾಶಿಯ ಪುನರ್ವಸು ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

Exit mobile version