Womenʼs Day Wishes: ನಿಮ್ಮ ಜೀವನವನ್ನು ಬೆಳಗಿದ ಸ್ತ್ರೀಶಕ್ತಿಗೆ ಈ ರೀತಿ ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿ

Womenʼs Day Wishes: ನಿಮ್ಮ ಜೀವನವನ್ನು ಬೆಳಗಿದ ಸ್ತ್ರೀಶಕ್ತಿಗೆ ಈ ರೀತಿ ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿ

ಮಹಿಳೆ (Women) ಎಂದರೆ ಶಕ್ತಿ, ಮಹಿಳೆ ಎಂದರೆ ಧೈರ್ಯ, ಮಹಿಳೆ ಎಂದರೆ ಪ್ರೀತಿ, ಮಹಿಳೆ ಎಂದರೆ ಕಾಳಜಿ. ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ, ಮಡದಿಯಾಗಿ, ಮಗಳಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಹೆಣ್ಣು ನಿರ್ವಹಿಸುವ ಪಾತ್ರಗಳು ಹಲವು. ಆಕೆ ಜೀವವನ್ನು ನೀಡುವುದರ ಜೊತೆಗೆ ಜೀವನಕ್ಕೆ ಶಕ್ತಿ ತುಂಬುವವಳು. ಜೀವನದಲ್ಲಿ ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುವವಳು. ಈ ಸ್ತ್ರೀ ಶಕ್ತಿಗೆ ಧನ್ಯವಾದ ತಿಳಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಶುಭ ದಿನ ನಿಮ್ಮ ಜೀವನಕ್ಕೂ ಶಕ್ತಿ ತುಂಬಿದ, ಸ್ಫೂರ್ತಿ ನೀಡಿದ, ನಿಮ್ಮ ಕಷ್ಟಕ್ಕೆ ಹೆಗಲಾಗಿ ನಿಂತ ನಿಮ್ಮ ಬದುಕಿನ ವಿಶೇಷ ಮಹಿಳೆಗೆ ಈ ಮಹಿಳಾ ದಿನದ ಅರ್ಥಪೂರ್ಣ ಸಂದೇಶಗಳನ್ನು ಕಳುಹಿಸುವ ಮೂಲಕ ಅವರನ್ನು ಸಂಭ್ರಮಿಸಿ. ಇಲ್ಲಿದೆ ನೋಡಿ ಮಹಿಳಾ ದಿನದ ಅರ್ಥಪೂರ್ಣ ಸಂದೇಶಗಳು.

ಇಲ್ಲಿವೆ ಮಹಿಳಾ ದಿನಾಚರಣೆಯ ಶುಭ ಸಂದೇಶಗಳು:

  • ಅಮ್ಮನಿಂದ ಹಿಡಿದು ಮಡದಿಯವರೆಗೆ ಸಹೋದರಿಯಿಂದ ಹಿಡಿದು ಪುತ್ರಿಯವರೆಗೆ ಮಹಿಳೆ ಎಂಬ ಬಲವೇ ಪುರುಷನಿಗೆ ಶಕ್ತಿ ತುಂಬುವ ಮಹಾ ಚೈತನ್ಯ. ಮಹಿಳಾ ದಿನಾಚರಣೆಯ ಶುಭಾಶಯಗಳು.
  • ಓ ನನ್ನ ಜೀವನ ಸಂಗಾತಿ… ಮಡದಿಯಾಗಿ, ಸ್ನೇಹಿತೆಯಾಗಿ ನೀವು ತೋರಿದ ನಿಸ್ವಾರ್ಥ ಪ್ರೀತಿ, ಕಾಳಜಿ, ಅಕ್ಕರೆಗೆ ನಾನು ಸದಾ ಚಿರಋಣಿ. ನನ್ನ ಮುದ್ದಿನ ಮಡದಿಗೆ ಹ್ಯಾಪಿ ವುಮೆನ್ಸ್‌ ಡೇ.
  • ನನ್ನ ಬುದುಕಿನಲ್ಲಿ ವಿಶೇಷ ಸ್ಥಾನ ಪಡೆದವರಲ್ಲಿ ನೀವೂ ಒಬ್ಬರು. ನಿಮ್ಮ ಬದುಕು ಸದಾ ಸಂತೋಷ, ನೆಮ್ಮದಿಯಿಂದ ಕೂಡಿರಲಿ ಎಂಬ ಹಾರೈಕೆ ನನ್ನದು. ನಿಮಗೆ ಮಹಿಳಾ ದಿನದ ಶುಭಾಶಯಗಳು.
  • ನನ್ನ ಪ್ರಪಂಚ ತುಂಬಾ ಸುಂದರವಾಗಿದೆ ಎಂದರೆ ಅದಕ್ಕೆ ಕಾರಣ ನೀನು, ನನ್ನ ಬದುಕಿನ ಸ್ಫೂರ್ತಿ ನೀನು. ನನ್ನ ಜೀವನದ ನಾರಿಶಕ್ತಿಗೆ ಮಹಿಳಾ ದಿನದ ಶುಭಾಶಯಗಳು.
  • ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆಯ ಪಾತ್ರ ಹಿರಿದು. ಹಲವು ಜವಾಬ್ದಾರಿಗಳನ್ನು ನಿಭಾಯಿಸಿ, ಕುಟುಂಬವನ್ನು ನಡೆಸುವ ಶ್ರೇಷ್ಠ ಶಕ್ತಿ ಮಹಿಳೆ. ಎಲ್ಲ ಸ್ತ್ರೀಯರಿಗೂ ಮಹಿಳಾ ದಿನದ ಶುಭಾಶಯಗಳು.
  • ಅಮ್ಮಾ… ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ನನ್ನ ಬದುಕಿನ ಶಕ್ತಿ ನೀವು, ನಿರ್ಮಲ ಪ್ರೀತಿ, ಕಾಳಜಿ ತೋರಿದ ನಿಮಗೆ ನಾನು ಚಿರಋಣಿ.
  • ಮಹಿಳೆ ತ್ಯಾಗಮೂರ್ತಿ, ತನ್ನ ಬದುಕನ್ನು ಕುಟುಂಬಕ್ಕಾಗಿ ಮೀಸಲಿಡುವ ಶಕ್ತಿ. ಆಕೆಯ ಶ್ರಮ, ಪ್ರೀತಿ ಅದ್ಭುತ. ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
  • ಪ್ರತಿ ಮಹಿಳೆ ಈ ಸಮಾಜಕ್ಕೆ ಅನನ್ಯ ಕೊಡುಗೆ. ಎಲ್ಲ ಸ್ತ್ರೀಯರಿಗೂ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು.
  • ಪ್ರತಿಯೊಬ್ಬರ ಬದುಕು ಉದಯವಾಗುವುದು ಮಹಿಳೆಯಿಂದ. ಮಹಿಳೆ ಸೃಷ್ಟಿಕರ್ತೆ. ಇಂತಹ ನಾರಿಶಕ್ತಿಗೆ ಮಹಿಳಾ ದಿನದ ಶುಭಾಶಯಗಳು.
  • ನನ್ನ ಬದುಕಿಗೆ ಹೊಸ ಅರ್ಥ ನೀಡಿ, ಸುಂದರಗೊಳಿಸಿದ ಶಿಲ್ಪಿ ನೀನು, ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ ಕಾರಣ ನೀನು. ನನ್ನ ಮುದ್ದು ಅಮ್ಮನಿಗೆ ಮಹಿಳಾ ದಿನದ ಶುಭಾಶಯಗಳು.
  • ಹೆಣ್ಣಿನಲ್ಲದೆ ಜೀವವಿಲ್ಲ, ಹೆಣ್ಣಿಲ್ಲದೆ ಜೀವನವಿಲ್ಲ, ಹೆಣ್ಣಿಂದಲೇ ಬಾಳು ಬಂಗಾರ, ಹೆಣ್ಣಿಲ್ಲದ ಬದುಕು ಘೋರ. ಹೆಣ್ಣನ್ನು ರಕ್ಷಿಸಿ, ಹೆಣ್ಣನ್ನು ಗೌರವಿಸಿ. ಎಲ್ಲಾ ಸ್ತ್ರೀಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.
  • ಮಹಿಳಾ ದಿನಾಚರಣೆಯ ಶುಭಾಶಯಗಳು. ಬದುಕಿಗೆ ದಾರಿ, ಕುಟುಂಬದ ಶಕ್ತಿ, ಸಾಧನೆಗೆ ಸ್ಪೂರ್ತಿ, ಎಲ್ಲರ ಬದುಕಿನಲ್ಲೂ ಪ್ರಮುಖ ಘಟ್ಟದ ಮಹತ್ವ ಸ್ಥಾನ ಪಡೆದವಳು ಸ್ತ್ರಿ, ಅವಳಿಗೊಂದು ನಮನ.
  • ಪ್ರತಿ ಗಂಡಿನ ಯಶಸ್ಸಿನ ಹಿಂದೆ ಇರುವ ನಿಸ್ವಾರ್ಥ, ತ್ಯಾಗಮಯಿ, ಕ್ಷಮಯಾಧರಿತ್ರಿ, ತಾಯಿ ಹೃದಯದ ಹೆಣ್ಣು ಮಕ್ಕಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
  • ಇಂದು ನಿಮ್ಮ ದಿನ ನಿಮ್ಮ ಬದುಕಿನ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ. ಜೀವನದಲ್ಲಿ ಸಂಭ್ರಮ ಮನೆ ಮಾಡಲಿ. ಎಲ್ಲಾ ಸ್ತ್ರೀಯರಿಗೂ ಮಹಿಳಾ ದಿನದ ಶುಭಾಶಯಗಳು.
  • ನೀವು ನನಗೆ ಎಂದಿಗೂ ಸ್ಫೂರ್ತಿ, ಮಾದರಿ. ನನಗಾಗಿ ನೀವು ಮಾಡಿದ ಪ್ರತಿಯೊಂದು ತ್ಯಾಗಕ್ಕೂ ನಾನು ಕೃತಜ್ಞನಾಗಿದ್ದೇನೆ. ನನ್ನ ಜೀವನದ ವಿಶೇಷ ಮಹಿಳೆಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
  • ನಿಸ್ವಾರ್ಥ ಪ್ರೀತಿಗೆ ಮಾದರಿ ನೀವು. ಇದು ನಿಮ್ಮ ದಿನ, ಈ ಶುಭ ಸಂದರ್ಭದಲ್ಲಿ ನಿಮ್ಮ ಕನಸುಗಳೆಲ್ಲಾ ಸಾಕಾರಗೊಳ್ಳಲಿ. ನಿಮ್ಮ ಬದುಕಿನುದ್ದಕ್ಕೂ ಬರೀ ಖುಷಿಯೇ ತುಂಬಿರಲಿ. ಮಹಿಳಾ ದಿನದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ದಿಕ್ ಪಾಂಡ್ಯ ಅಂದ್ರೆ ‘ಕ್ಲಚ್’ ಎಂದ ಹಾರ್ದಿಕ್ ಪಾಂಡ್ಯ

T20 World Cup 2026: “ಕ್ಲಚ್ ಅಂದ್ರೆ ಹಾರ್ದಿಕ್ ಪಾಂಡ್ಯ” (Clutch is Hardik Pandya) ಇದನ್ನು ಹೇಳಿದ್ದು ಮತ್ಯಾರೂ ಅಲ್ಲ ಹಾರ್ದಿಕ್ ಪಾಂಡ್ಯ. 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ ಸ್ವತಃ ತಮ್ಮನ್ನು ಕ್ಲಚ್ ಆಟಗಾರ ಎಂದು ಕರೆದಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 7 ರನ್​ಗಳ ಜಯ ಸಾಧಿಸಿತ್ತು. ಈ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ಕೊಡುಗೆ ಕೂಡ ಇದೆ.

ಈ ಕೊಡುಗೆ ಕುರಿತಾಗಿ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮನ್ನು ತಾವೇ ಕ್ಲಚ್ ಆಟಗಾರ ಎಂದು ಕರೆದಿದ್ದಾರೆ.

ಈ ಮೂಲಕ  ಒತ್ತಡದ ಸಮಯದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ನನಗಿದೆ ಎಂಬ ಆತ್ಮವಿಶ್ವಾಸವನ್ನು ಹಾರ್ದಿಕ್ ಪಾಂಡ್ಯ ವ್ಯಕ್ತಪಡಿಸಿದ್ದಾರೆ.

ಕ್ಲಚ್ ಆಟಗಾರ ಎಂದರೇನು?

ಪಂದ್ಯವು ಸೋಲಿನ ಹಂತದಲ್ಲಿದ್ದಾಗ ಅಥವಾ ಅಂತಿಮ ಓವರ್‌ಗಳಲ್ಲಿ ಗೆಲ್ಲಲು ಕಷ್ಟಸಾಧ್ಯವಾದ ರನ್ ಬೇಕಿದ್ದಾಗ, ಯಾವುದೇ ಆತಂಕವಿಲ್ಲದೆ ಶಾಂತವಾಗಿ ಆಡುವುದನ್ನು ‘ಕ್ಲಚ್ ಪರ್ಫಾರ್ಮೆನ್ಸ್’ ಎನ್ನಲಾಗುತ್ತದೆ.

ದೊಡ್ಡ ಪಂದ್ಯಗಳಲ್ಲಿ, ಅಂದರೆ ವಿಶ್ವಕಪ್ ಫೈನಲ್ ಅಥವಾ ಸೆಮಿಫೈನಲ್ ಅಥವಾ ಪಂದ್ಯದ ಅಂತಿಮ ಕ್ಷಣಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುವ ಆಟಗಾರನನ್ನು ‘ಕ್ಲಚ್ ಪ್ಲೇಯರ್’ ಎಂದು ಕರೆಯುತ್ತಾರೆ.

ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಬೆನ್ ಸ್ಟೋಕ್ಸ್ ಅಂತಹ ಆಟಗಾರರನ್ನು ಅವರ ಪಂದ್ಯ ಗೆಲ್ಲಿಸುವ ಸಾಮರ್ಥ್ಯಕ್ಕಾಗಿ ‘ಕ್ಲಚ್ ಪ್ಲೇಯರ್‌ಗಳು’ ಎಂದು ಗುರುತಿಸಲಾಗುತ್ತಿತ್ತು. ಇದೀಗ ಹಾರ್ದಿಕ್ ಪಾಂಡ್ಯ ಕೂಡ ತಮ್ಮನ್ನು ತಾವೇ ಕ್ಲಚ್ ಆಟಗಾರ ಎಂದು ಬಣ್ಣಿಸಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಕ್ಲಚ್ ಆಟಗಾರನೇ?

ಹಾರ್ದಿಕ್ ಪಾಂಡ್ಯ ಕ್ಲಚ್ ಆಟಗಾರನೇ ಎಂದು ಕೇಳಿದರೆ ಖಂಡಿತವಾಗಿಯೂ ಹೌದು. ಏಕೆಂದರೆ 2024ರ ಟಿ20 ವಿಶ್ವಕಪ್​ ಗೆಲ್ಲುವಲ್ಲಿ ಪಾಂಡ್ಯ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಟೀಮ್ ಇಂಡಿಯಾ ಪರ ಡೆತ್ ಓವರ್​ಗಳಲ್ಲಿ ಬ್ಯಾಟ್ ಬೀಸುವ ಪಾಂಡ್ಯ ಇಡೀ ಪಂದ್ಯದ ಚಿತ್ರಣ ಬದಲಿಸುವ ಇನಿಂಗ್ಸ್ ಆಡುತ್ತಾ ಬಂದಿದ್ದಾರೆ.

ಇದರ ಜೊತೆಗೆ ಒತ್ತಡದ ಸನ್ನಿವೇಶಗಳಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಕೂಡ ಗಮನ ಸೆಳೆಯುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಪರ ನಿರ್ಣಾಯಕ ಓವರ್​ಗಳನ್ನು ಎಸೆಯುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 19ನೇ ಓವರ್ ಎಸೆದು ಕೇವಲ 9 ರನ್​ ಮಾತ್ರ ಬಿಟ್ಟುಕೊಟ್ಟಿರುವುದು.

ಇದನ್ನೂ ಓದಿ: ಸದ್ದಡಗಿಸುವುದೇ ನಮ್ಮ ಗುರಿ: ಮಿಚೆಲ್ ಸ್ಯಾಂಟ್ನರ್

ಇನ್ನು 2024ರ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದ ಫೈನಲ್ ಓವರ್ ಎಸೆದಿರುವುದು ಕೂಡ ಹಾರ್ದಿಕ್ ಪಾಂಡ್ಯ. ಈ ವೇಳೆ ಕೇವಲ 8 ರನ್ ನೀಡಿ ಭಾರತ ತಂಡಕ್ಕೆ 7 ರನ್​ಗಳ ಜಯ ತಂದುಕೊಟ್ಟಿದ್ದರು. ಅಂದರೆ ಒತ್ತಡದ ಸನ್ನಿವೇಶಗಳನ್ನು ಮೆಟ್ಟಿ ನಿಂತು ಹಾರ್ದಿಕ್ ಪಾಂಡ್ಯ ಅಮೋಘ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಪಾಂಡ್ಯರನ್ನು ಕ್ಲಚ್ ಪ್ಲೇಯರ್ ಎಂದೇ ಹೇಳಬಹುದು.

 

Source link

ಹಾಸ್ಟೆಲ್​​ನ ವಾರ್ಡನ್​​ ಸೇರಿ ಹಲವರ ಮೇಲೆ ದಾಳಿ ನಡೆಸಿ ವಿದ್ಯಾರ್ಥಿ ಎಸ್ಕೇಪ್​​: ಗಾಯಗೊಂಡಿದ್ದ ಓರ್ವ ಬಾಲಕ ಸಾವು

ಬಳ್ಳಾರಿ, ಮಾರ್ಚ್​​ 08: ಶಿವಮೊಗ್ಗದಲ್ಲಿ ಬಾಲಕರೇ SSLC ವಿದ್ಯಾರ್ಥಿಯನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಬಾಲಕ ಮೃತಪಟ್ಟಿರುವ ಘಟನೆ ಬಳ್ಳಾರಿಯ ಖಾಸಗಿ ಶಾಲೆಗೆ ಸೇರಿದ ಹಾಸ್ಟೆಲ್​ನಲ್ಲಿ ನಡೆದಿದೆ. ಹಾಸ್ಟೆಲ್​​ನ ವಾರ್ಡನ್​​ ಸೇರಿ ಹಲವು ಬಾಲಕರ ಮೇಲೆ 9ನೇ ತರಗತಿ ವಿದ್ಯಾರ್ಥಿ ರಾಡ್​​ನಿಂದ ಹಲ್ಲೆ ನಡೆಸಿದ ಪರಿಣಾಮ ಓರ್ವ ಪ್ರಾಣಬಿಟ್ಟಿದ್ದರೆ, ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಘಟನೆಯಲ್ಲಿ ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರಾಡ್​ನಿಂದ ಹೊಡೆದಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳ್ತಿದೆ. ಆದರೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಅನುಮಾನ ಇದೆ. ಹಲ್ಲೆ ನಡೆಸಿರುವ ವಿದ್ಯಾರ್ಥಿ ಡ್ರಗ್​ ಅಡಿಕ್ಟ್ ಆಗಿರುವ ಶಂಕೆ ಇದ್ದು, ಇಷ್ಟೆಲ್ಲ ಹುಡುಗರ ಮೇಲೆ ಆತ ಒಬ್ಬನೇ ಹಲ್ಲೆ ಮಾಡೋದಕ್ಕೆ ಹೇಗೆ ಸಾಧ್ಯ? ಇದಕ್ಕೆಲ್ಲಾ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಮೃತ ವಿದ್ಯಾರ್ಥಿ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯ ಕೊಲೆ: ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತೇ? ಆಘಾತಕಾರಿ ಮಾಹಿತಿ ಬಯಲು

ಈ ಹಿಂದೆ ಹಾಸ್ಟೆಲ್​​ನಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿರಲಿಲ್ಲ. ಹಲ್ಲೆ ನಡೆದಿರೋದು ಕೇವಲ ಒಬ್ಬರ ಮೇಲಲ್ಲ. ಹಲವರ ಮೇಲೆ ಬಾಲಕ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಆತನಿಗೆ ಏನಾದರೂ ಮಾನಸಿಕ ಸಮಸ್ಯೆಗಳಿತ್ತಾ? ಅಥವಾ ಅವನ್ನು ಮಾದಕ ವಸ್ತುಗಳಿಗೆ ಎಡಿಕ್ಟ್​​ ಆಗಿದ್ದನಾ ಎನ್ನುವ ಬಗ್ಗೆಯೂ ಪ್ರಶ್ನೆಗಳೆದ್ದಿವೆ. ಹಾಸ್ಟೆಲ್​​ ಆಡಳಿತ ಮಂಡಳಿ ನಂಬಿ ಮಕ್ಕಳನ್ನು ಬಿಟ್ಟಿದ್ದೇವೆ. ಆದರೆ ಅವರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಅಸಲಿಗೆ ಬಾಲಕರ ನಡುವೆ ಏನಾಗಿದೆ ಎನ್ನುವುದೇ ಗೊತ್ತಿಲ್ಲ. ರಾತ್ರಿ ನಮಗೆ ದೂರವಾಣಿ ಕರೆ ಬಂದ ಹಿನ್ನೆಲೆ ಇಲ್ಲಿಗೆ ಬಂದು ನೋಡಿದಾಗ ಕೊಲೆ ನಡೆದಿರೋದು ಗೊತ್ತಾಗಿದೆ, ವಿದ್ಯಾರ್ಥಿ ಕೈಗೆ ಮಾರಕಾಸ್ತ್ರ ಸಿಕ್ಕಿದ್ದಾದರೂ ಹೇಗೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Air Quality: ಬೆಂಗಳೂರು, ಮಂಗಳೂರು ಸೇರಿ ಹಲವೆಡೆ ಕಳಪೆ ಏರ್ ಕ್ವಾಲಿಟಿ!

ಬೆಂಗಳೂರು, ಮಾರ್ಚ್​ 08: ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ. ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 172ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಅದೇ ಉಡುಪಿ, ಮಂಗಳೂರು, ಕಲಬುರ್ಗಿ ಸೇರಿದಂತೆ ಹಲವೆಡೆಯ ವಾಯು ಗುಣಮಟ್ಟ 150ಕ್ಕಿಂತ ಹೆಚ್ಚಾಗಿದೆ. ಕಲಬುರ್ಗಿಯ AQI 141 ಇದ್ದು, 200ರ ಗಡಿ ತಲುಪುವ ಆತಂಕ ಎದುರಾಗಿದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –172
  • ಮಂಗಳೂರು-163
  • ಮೈಸೂರು –165
  • ಬೆಳಗಾವಿ – 154
  • ಕಲಬುರ್ಗಿ-141
  • ಶಿವಮೊಗ್ಗ – 166
  • ಬಳ್ಳಾರಿ – 177
  • ಹುಬ್ಬಳ್ಳಿ- 156
  • ಉಡುಪಿ –167
  • ವಿಜಯಪುರ –150

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

Video: ಪ್ರಧಾನಿಯೊಂದಿಗಿನ ಸಭೆಗೆ ಕೇವಲ 5 ನಿಮಿಷ ತಡವಾಗಿ ಬಂದಿದ್ದಕ್ಕೆ ದೇಶದ ಜನತೆಗೆ ಕ್ಷಮೆಯಾಚಿಸಿದ ಜಪಾನ್ ಸಚಿವೆ

ಜಪಾನ್, ಮಾರ್ಚ್​ 08: ಜಪಾನ್ ಸಚಿವೆಯೊಬ್ಬರು ಪ್ರಧಾನಿಯೊಂದಿಗಿನ ಮಾತುಕತೆಗೆ ಐದು ನಿಮಿಷ ತಡವಾಗಿ ಬಂದಿದ್ದಕ್ಕೆ  ದೇಶದ ಜನತೆ ಬಳಿ ಕ್ಷಮೆಯಾಚಿಸಿರುವ ವಿಡಿಯೋ ವೈರಲ್ ಆಗಿದೆ. ಅವರ ವಿಧೇಯತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವರು ಕೇವಲ 5 ನಿಮಿಷ ತಡವಾಗಿ ಬಂದಿದ್ದಷ್ಟೇ ಅಲ್ಲದೆ ಅವರ ತಪ್ಪನ್ನು ಅರ್ಥ ಮಾಡಿಕೊಂಡು, ಎಲ್ಲರ ಬಳಿ ಕ್ಷಮೆ ಕೇಳಿದ್ದು ಅಚ್ಚರಿ ಮೂಡಿಸಿದೆ. ಸಂಚಾರ ದಟ್ಟಣೆ ಹೆಚ್ಚಾಗಿದ್ದ ಕಾರಣ ಬರುವುದು ತಡವಾಗಿತ್ತು, ಸಭೆಗೆ ಓಡುತ್ತಲೇ ಬಂದರು. ಬಳಿಕ ಮಾಧ್ಯಮ ಹಾಗೂ ಸಭೆಯಲ್ಲಿದ್ದವರೆಲ್ಲರ ಬಳಿ ಕ್ಷಮೆಯಾಚಿಸಿದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸದ್ದಡಗಿಸುವುದೇ ನಮ್ಮ ಗುರಿ: ಮಿಚೆಲ್ ಸ್ಯಾಂಟ್ನರ್

T20 World Cup 2026: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ‘ಸದ್ದಡಗಿಸುವುದು’ ಸಖತ್ ಸದ್ದು ಮಾಡುತ್ತಿದೆ. ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಪ್ರೇಕ್ಷಕರ ಸದ್ದಗಿಸುವುದೇ ನಮ್ಮ ಗುರಿ ಎಂದಿದ್ದಾರೆ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್.

ಟಿ20 ವಿಶ್ವಕಪ್​ ಫೈನಲ್ ಪಂದ್ಯದ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಹೇಳಿದಂತೆಯೇ, ಲಕ್ಷಾಂತರ ಭಾರತೀಯ ಅಭಿಮಾನಿಗಳ ಮುಂದೆ ಆಡುವಾಗ “ಸ್ಟೇಡಿಯಂನಲ್ಲಿರುವ ಅಭಿಮಾನಿಗಳನ್ನು ಮೌನಗೊಳಿಸುವುದೇ ನಮ್ಮ ಗುರಿ” ಎಂದಿದ್ದಾರೆ.

ಈ ಮೂಲಕ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳ ಸದ್ದಡಗಿಸಿ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ಸಹ ಮಿಚೆಲ್ ಸ್ಯಾಂಟ್ನರ್ ವ್ಯಕ್ತಪಡಿಸಿದ್ದಾರೆ.

ಇನ್ನು ಸ್ವದೇಶದಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಏಕೈಕ ಅವಕಾಶ ಭಾರತಕ್ಕಿದ್ದು, ಆ ಒತ್ತಡವನ್ನೇ ನಾವು ಲಾಭವಾಗಿ ಬಳಸಿಕೊಳ್ಳುತ್ತೇವೆ. ತವರಿನಲ್ಲಿ ಪಂದ್ಯವಾಡುತ್ತಿರುವ ಕಾರಣ ಟೀಮ್ ಇಂಡಿಯಾ ಒತ್ತಡದಲ್ಲಿದೆ. ಇದರ ಸಂಪೂರ್ಣ ಲಾಭ ಪಡೆದು ನಾವು ಮ್ಯಾಚ್ ಗೆಲ್ಲುತ್ತೇವೆ ಎಂದು ನ್ಯೂಝಿಲೆಂಡ್ ನಾಯಕ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ತಿರುಗೇಟು:

ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿರುವ ಸದ್ದಡಗಿಸುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಸಬ್ ಹೀ ಸೇಮ್ ಲೈನ್ ಚಿಪ್ಕಾ ರಹೇ ಹೈ. ಕುಚ್ ತೋ ನಯಾ ಬೋಲೋ” (ಎಲ್ಲರೂ ಈಗ ಅದೇ ಮಾತನ್ನು ಹೇಳುತ್ತಿದ್ದಾರೆ. ಏನಾದರೂ ಹೊಸದನ್ನು ಹೇಳಿ) ಎಂದು ತಿರುಗೇಟು ನೀಡಿದ್ದಾರೆ.

ಒಟ್ಟಿನಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಸದ್ದಡಗಿಸುವ ಸವಾಲು ಹಾಕಿರುವ ನ್ಯೂಝಿಲೆಂಡ್ ತಂಡದ ನಾಯಕನನ್ನು ಟೀಮ್ ಇಂಡಿಯಾ ಸೈಲೆಂಟ್ ಮಾಡಲಿದೆಯಾ ಕಾದು ನೋಡಬೇಕಿದೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಇದನ್ನೂ ಓದಿ: ಮೂಢನಂಬಿಕೆಯೋ, ಕಾಕತಾಳೀಯವೊ… ಹೋಟೆಲ್ ಬದಲಿಸಿದ ಟೀಮ್ ಇಂಡಿಯಾ

ನ್ಯೂಝಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜೇಕಬ್ ಡಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ಆಡಮ್ ಮಿಲ್ನ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಟಿಮ್ ಸೈಫರ್ಟ್​, ಇಶ್ ಸೋಧಿ.

 

Source link

ಏನಾದ್ರು ಹೊಸ ಡೈಲಾಗ್ ಹೇಳ್ರಪ್ಪಾ… ಸೂರ್ಯಕುಮಾರ್ ಯಾದವ್ ತಿರುಗೇಟು

T20 World Cup 2026: ಟಿ20 ವಿಶ್ವಕಪ್​ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು (ಮಾ.8) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಮುಖಾಮುಖಿಗೂ ಮುನ್ನ ನಡೆದ ‘ಕ್ಯಾಪ್ಟನ್ಸ್ ಪ್ರೆಸ್​ಮೀಟ್’​​ ನಾಯಕರುಗಳ ವಾಕ್ಸಮರಕ್ಕೆ ಸಾಕ್ಷಿಯಾಗಿದೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ‘ಅಹಮದಾಬಾದ್​​ನ ಸ್ಟೇಡಿಯಂನಲ್ಲಿ ಪ್ರೇಕ್ಷಕರನ್ನು ಮೌನಗೊಳಿಸುವ’ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದೇ ಪ್ರಶ್ನೆಯನ್ನು ಆ ಬಳಿಕ ಸೂರ್ಯಕುಮಾರ್ ಯಾದವ್ ಮುಂದಿಡಲಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ “ಸ್ಥಳೀಯ ಪ್ರೇಕ್ಷಕರನ್ನು ಮೌನಗೊಳಿಸುವುದಾಗಿ” ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿದ್ದ ಹೇಳಿಕೆಗೆ ನೀವು ಏನಂತೀರಿ ಎಂದು ಕೇಳಲಾಗಿದೆ.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್,  “ಸಬ್ ಹೀ ಸೇಮ್ ಲೈನ್ ಚಿಪ್ಕಾ ರಹೇ ಹೈ. ಕುಚ್ ತೋ ನಯಾ ಬೋಲೋ” (ಎಲ್ಲರೂ ಈಗ ಅದೇ ಮಾತನ್ನು ಹೇಳುತ್ತಿದ್ದಾರೆ. ಏನಾದರೂ ಹೊಸದನ್ನು ಹೇಳಿ) ಎಂದು ತಿರುಗೇಟು ನೀಡಿದ್ದಾರೆ.

ಅಂದರೆ ‘ಪ್ರೇಕ್ಷಕರನ್ನು ಮೌನಗೊಳಿಸುವ’ ಡೈಲಾಗ್ ಶುರುವಾಗಿದ್ದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರಿಂದ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಭಾರತೀಯ ಪ್ರೇಕ್ಷಕರನ್ನು ಮೌನಗೊಳಿಸಿ ಪ್ರಶಸ್ತಿ ಗೆಲ್ಲುತ್ತೇವೆ ಎಂದಿದ್ದರು.

ಇದನ್ನೇ ಇತ್ತೀಚೆಗೆ ಇಂಗ್ಲೆಂಡ್​ನ ಸ್ಯಾಮ್ ಕರನ್ ಪುನರುಚ್ಚರಿಸಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ಸ್ಯಾಮ್ ಕರನ್ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡುತ್ತೇವೆ ಎಂದಿದ್ದರು.

ಇದೀಗ ಟಿ20 ವಿಶ್ವಕಪ್​ ಫೈನಲ್​ಗೂ ಮುನ್ನ ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಕೂಡ ‘ಸೈಲೆಂಟ್’ ಡೈಲಾಗ್ ಹೊಡೆದಿದ್ದಾರೆ. ಕಿವೀಸ್​ ಕ್ಯಾಪ್ಟನ್​ನ ಹೇಳಿಕೆಗೆ ಹೊಸ ಡೈಲಾಗ್​ ಏನನ್ನಾದರೂ ಹೇಳಿ ಎಂದೇಳುವ ಮೂಲಕ ಟೀಮ್ ಇಂಢಿಯಾ ನಾಯಕ ಸೂರ್ಯಕುಮಾರ್ ಯಾದವ್ ತಿರುಗೇಟು ನೀಡಿದ್ದಾರೆ.

ಅಷ್ಟೇ ಅಲ್ಲದೆ ಇದೆಲ್ಲವೂ ಮೈಂಡ್ ಗೇಮ್. ದೊಡ್ಡ ಪಂದ್ಯಗಳಿಗೆ ಮುನ್ನ ಅತಿಯಾಗಿ ಬಳಸಲಾಗುವ ಮತ್ತು ಊಹಿಸಬಹುದಾದ ಮಾತು ಅಷ್ಟೇ.  ಇಂತಹ ಡೈಲಾಗ್​ಗಳು ವರ್ಕ್ ಆಗಲ್ಲ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ಸೈಲೆಂಟ್ ಮಾಡಲು ಬಂದು, ಸೈಲೆಂಟ್ ಆಗಿ ‘ಸೋಲಿಸಿದ’ ಸ್ಯಾಮ್ ಕರನ್..!

ಈ ಮೂಲಕ ಈ ಬಾರಿ ಅಹಮದಾಬಾದ್​ ಮೈದಾನದಲ್ಲಿ ಭಾರತ ತಂಡ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಸೂರ್ಯಕುಮಾರ್ ಯಾದವ್ ವ್ಯಕ್ತಪಡಿಸಿದ್ದಾರೆ.

 

Source link

ಸುದೀಪ್ ನಟ ಆದ್ರೆ ತಲೆ ಮೇಲೆ ಕೊಂಬು ಇರುತ್ತಾ? ಡಾಗ್ ಸತೀಶ್ ಗರಂ

ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ (Dog Satish) ಅವರು ಶೌಚಾಲಯದಲ್ಲಿ ಇರುವಂತಹ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಾಗ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ‘ದಾದಾ ಯಾರ್ ಗೊತ್ತಾ..’ ಹಾಡನ್ನು ಬಳಸಲಾಗಿದೆ. ಅದಕ್ಕೆ ರಜತ್, ವಿನಯ್ ಗೌಡ ಮುಂತಾದವರು ತಕರಾರು ತೆಗೆದಿದರು. ಆ ವಿಚಾರ ಈಗ ವಿವಾದಕ್ಕೆ ತಿರುಗಿದೆ. ಹಲವು ವರ್ಷಗಳ ಕಾಲ ಕಷ್ಟಪಟ್ಟು ಸುದೀಪ್ (Kichcha Sudeep) ಅವರು ಮೇಲಕ್ಕೆ ಬಂದಿದ್ದಾರೆ. ಅಂಥವರ ಹಾಡನ್ನು ಈ ರೀತಿ ಬಳಕೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಡಾಗ್ ಸತೀಶ್ ಅವರು ಉತ್ತರ ನೀಡಿದ್ದಾರೆ.

‘ಸುದೀಪ್ ಸರ್ ಬಹಳ ಕಷ್ಟಪಟ್ಟು ಹೆಸರು ಮಾಡಿದ್ದಾರೆ ಅಂತ ನೀವು ಹೇಳುತ್ತಿದ್ದೀರಿ. ಆದರೆ ಅವರು ಎಲ್ಲಿಯವರೆಗೆ ಹೆಸರು ಮಾಡಿದ್ದಾರೆ? ಗೂಗಲ್​ನಲ್ಲಿ ನಂಬರ್ 1 ಹೀರೋ ಅಂತ ಹುಡುಕಿದರೆ ಬರುವಂತಹ ಹಂತಕ್ಕೆ ಆಗಿದ್ದಾರಾ? ನಟ ಆದ ಮಾತ್ರಕ್ಕೆ ತಲೆ ಮೇಲೆ ಕೊಂಬು ಇರುತ್ತಾ? ನಾಯಿ ಪೀಲ್ಡ್​​ನಲ್ಲಿ ಪ್ರಪಂಚಕ್ಕೆ ನಂಬರ್ 1 ನಾನು ಅಂತ ಬರುತ್ತೇನೆ. ಅವರು ಕರ್ನಾಟಕಕ್ಕೆ ಇರಬಹುದು ಅಥವಾ ಅರ್ಧ ಭಾರತಕ್ಕೆ ಇರಬಹುದು. ಇಂಡಿಯಾಗೆ ನಂಬರ್ ಒನ್ ಹೀರೋ ಅಂತ ಗೂಗಲ್​ನಲ್ಲಿ ಹಾಕಿದರೆ ಸುದೀಪ್ ಸರ್ ಬರುತ್ತಾರಾ’ ಎಂದು ಡಾಗ್ ಸತೀಶ್ ಪ್ರಶ್ನೆ ಮಾಡಿದ್ದಾರೆ.

‘ಸುದೀಪ್ ಅವರು ಕಷ್ಟಪಟ್ಟು ಅವರ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ನಂಬರ್ 1 ಆಗಿದ್ದಾರೆ. ನಾನು ನನ್ನ ಕ್ಷೇತ್ರದಲ್ಲಿ ನಂಬರ್ 1 ಆಗಿದ್ದೇನೆ. ನಾನು ಕೂಡ ಕಷ್ಟಪಟ್ಟಿದ್ದೇನೆ. ನನ್ನ ತಲೆ ಮೇಲೆ ಎರಡು ಕೊಂಬು ಇದೆ ಅಂತ ನಾನು ಯಾವತ್ತೂ ಮಾತನಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ದಾದಾ ಯಾರ್ ಗೊತ್ತಾ ಹಾಡನ್ನು ನಾನು ಬಳಸಿದ್ದು ತಪ್ಪಲ್ಲ’ ಎಂದು ಡಾಗ್ ಸತೀಶ್ ಹೇಳಿದ್ದಾರೆ.

‘ರಜತ್, ವಿನಯ್ ಮತ್ತು ಧನರಾಜ್ ಪ್ರಚೋದನೆ ಮಾಡಿದ್ದರಿಂದಲೇ ಇಷ್ಟೆಲ್ಲ ಆಗಿದ್ದು. ಎಲ್ಲ ಕಡೆ ಶೇರ್ ಮಾಡಿ, ಕೆಟ್ಟದಾಗಿ ಕಮೆಂಟ್ ಹಾಕಿದ್ದು ಅವರೇ ತಾನೇ? ಅವರು ಸುಮ್ಮನೇ ಇದ್ದಿದ್ದರೆ ಮಾಮೂಲಿಯಾಗಿ ಇಷ್ಟೊಂದು ಸುದ್ದಿ ಆಗುತ್ತಿತ್ತಾ? ನಾನು ಮಾಡಿದ್ದರಲ್ಲಿ ತಪ್ಪೇ ಇಲ್ಲ’ ಎಂದು ಡಾಗ್ ಸತೀಶ್ ಅವರು ವಾದ ಮಾಡಿದ್ದಾರೆ.

ಇದನ್ನೂ ಓದಿ: ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್

‘ಅವರು ನನ್ನ ಮೇಲೆ ದೂರು ಕೊಡಲು ಚೆನ್ನಮ್ಮನ ಕೆರೆಗೆ ಹೋಗಿದ್ದಾರೆ. ನನ್ನ ವಿಡಿಯೋದಲ್ಲಿ ತಪ್ಪು ಇಲ್ಲದ ಕಾರಣ ಚೆನ್ನಮ್ಮನ ಕೆರೆ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಬನಶಂಕರಿ ಠಾಣೆಯಲ್ಲೂ ಅವರಿಗೆ ಬೈಯ್ದು ಕಳಿಸಿದ್ದಾರೆ. ಅವರು ದೂರು ಕೊಡದೇ ಸುಳ್ಳು ಹೇಳುತ್ತಿದ್ದಾರೆ. ಅದು ಅಪರಾಧ. ನನ್ನ ವಿಡಿಯೋಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ, ಬೆದರಿಕೆ ಹಾಕಿದ್ದಾರೆ. ಅದು ಸಮಾಜಕ್ಕೆ ಏನು ಸಂದೇಶ ಕೊಡುತ್ತದೆ?’ ಎಂದು ಡಾಗ್ ಸತೀಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೂಢನಂಬಿಕೆಯೋ, ಕಾಕತಾಳೀಯವೊ… ಹೋಟೆಲ್ ಬದಲಿಸಿದ ಟೀಮ್ ಇಂಡಿಯಾ

T20 World Cup 2026: ಟಿ20 ವಿಶ್ವಕಪ್ ಫೈನಲ್‌ಗೆ ಮುನ್ನ ಭಾರತ ತಂಡ ಅಹಮದಾಬಾದ್‌ನಲ್ಲಿರುವ ಹೋಟೆಲ್ ಅನ್ನು ಬದಲಾಯಿಸಿದೆ. ಇದರ ಬೆನ್ನಲ್ಲೇ ಇದು ಕಾಕತಾಳೀಯವೊ ಅಥವಾ ಮೂಢನಂಬಿಕೆಯೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಈ ಹಿಂದಿನ ಪಂದ್ಯಗಳ ವೇಳೆ ಭಾರತ ತಂಡ ಐಟಿಸಿ ನರ್ಮದಾ (ITC Narmada) ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಈ ವೇಳೆ ಸೌತ್ ಆಫ್ರಿಕಾ ವಿರುದ್ಧ ಸೋಲನುಭವಿಸಿದ್ದರು.

ಇದಕ್ಕೂ ಮುನ್ನ 2023ರ ಏಕದಿನ ವಿಶ್ವಕಪ್​ ಫೈನಲ್ ಪಂದ್ಯದ ವೇಳೆಯೂ ಇದೇ ಹೋಟೆಲ್​ನಲ್ಲಿ ತಂಗಿದ್ದರು. ಆ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೃದಯವಿದ್ರಾವಕ ಸೋಲನ್ನು ಅನುಭವಿಸಿತ್ತು. ಹೀಗಾಗಿಯೇ ಟೀಮ್ ಇಂಡಿಯಾ ಇದೀಗ ಫೈನಲ್​ ಪಂದ್ಯಕ್ಕೂ ಮುನ್ನ ಹೋಟೆಲ್ ಬದಲಾಯಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಅದರಂತೆ ಇದೀಗ ಟೀಮ್ ಇಂಡಿಯಾ ಆಟಗಾರರು ತಾಜ್ ಸ್ಕೈಲೈನ್ (Taj Skyline) ಹೋಟೆಲ್‌ನಲ್ಲಿ ತಂಗಿದ್ದಾರೆ. ಅತ್ತ ನ್ಯೂಝಿಲೆಂಡ್ ತಂಡವು ಐಟಿಸಿ ನರ್ಮದಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.

ಈ ಹೋಟೆಲ್ ಬದಲಾವಣೆಗೆ ಐಸಿಸಿ ಶಿಷ್ಟಾಚಾರದ ಕಾರಣ ಎಂಬ ಮಾತು ಕೂಡ ಕೇಳಿ ಬಂದಿದೆ. ಏಕೆಂದರೆ ಫೈನಲ್ ತಲುಪಿದ ಮೊದಲ ತಂಡಕ್ಕೆ (ನ್ಯೂಝಿಲೆಂಡ್) ಐಟಿಸಿ ನರ್ಮದಾ ಹೋಟೆಲ್ ಹಂಚಿಕೆಯಾಗಿತ್ತು. ಹೀಗಾಗಿ ಭಾರತ ತಂಡ ಬೇರೆ ಹೋಟೆಲ್‌ಗೆ ಹೋಗಬೇಕಾಯಿತು ಎಂದು ಹೇಳಲಾಗಿದೆ.

ಇದಾಗ್ಯೂ ಟೀಮ್ ಇಂಡಿಯಾ ಸಿಬ್ಬಂದಿ ವರ್ಗದಲ್ಲಿರುವ ವ್ಯಕ್ತಿಯೋರ್ವರು ಅಪಶಕುನಗಳ ಬಗ್ಗೆ ಹೆಚ್ಚಿನ ನಂಬಿಕೆಯುಳ್ಳವರು. ಅವರ ಸಲಹೆ ಮೇರೆಗೆ ಈ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಕೂಡ ಅವರು ಇಂತಹ ಸಲಹೆಗಳನ್ನು ನೀಡಿದ್ದರು.

ಇದಕ್ಕೆ ತಾಜಾ ಉದಾಹರಣೆ, ಟೀಮ್ ಇಂಡಿಯಾ ಚಂದ್ರಗ್ರಹಣದ ವೇಳೆ ಅಭ್ಯಾಸ ನಡೆಸದೇ ಇರುವುದು. ಭಾರತೀಯ ಆಟಗಾರರು ಚಂದ್ರಗ್ರಹಣದ ದಿನದಂದು ತಡವಾಗಿ ಅಭ್ಯಾಸಕ್ಕೆ ಹಾಜರಾಗಿದ್ದರು.

ಅಭ್ಯಾಸದ ಮೂಲ ವೇಳಾಪಟ್ಟಿಯಂತೆ ಸಂಜೆ 6:00 ಗಂಟೆಗೆ ಆರಂಭವಾಗಬೇಕಿದ್ದ ತರಬೇತಿಯು, ಗ್ರಹಣದ ಹಿನ್ನೆಲೆಯಲ್ಲಿ ಸಂಜೆ 7:20ಕ್ಕೆ ಆರಂಭಿಸಲಾಯಿತು. ಹಿಂದೂ ಸಂಪ್ರದಾಯದಲ್ಲಿ, ಗ್ರಹಣದ ಸಮಯದಲ್ಲಿ ಯಾವುದರೂ ಪ್ರಮುಖ ಕಾರ್ಯದಲ್ಲಿ ನಿರತರಾಗುವುದು ಒಳಿತಲ್ಲ ಎಂದು ನಂಬಲಾಗುತ್ತದೆ. ಈ ಸಲಹೆಯನ್ನು ಕೂಡ ಇದೇ ಸಿಬ್ಬಂದಿ ನೀಡಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಏನಾದ್ರು ಹೊಸ ಡೈಲಾಗ್ ಹೇಳ್ರಪ್ಪಾ… ಸೂರ್ಯಕುಮಾರ್ ಯಾದವ್ ತಿರುಗೇಟು

ಇದೀಗ ಅದೇ ಸಿಬ್ಬಂದಿ ಹೋಟೆಲ್ ಬದಲಾವಣೆಯೊಂದಿಗೆ ಬ್ಯಾಡ್ ಲಕ್ ಹೋಗಲಾಡಿಸಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಸಲಹೆಯಂತೆ ಟೀಮ್ ಇಂಡಿಯಾ ಹೋಟೆಲ್ ಬದಲಿಸಿದ್ದು, ಈ ಮೂಲಕ ಲಕ್ ಅನ್ನು ಕೂಡ ಬದಲಾಯಿಸುವ ವಿಶ್ವಾಸದಲ್ಲಿದೆ.

 

Source link

ಲಾರಿಗೆ ಕಾರು ಡಿಕ್ಕಿ: ಭೀಕರ ಅಪಘಾತಕ್ಕೆ ಮೂವರು ಯುವಕರು ಬಲಿ

ಬೆಂಗಳೂರು, ಮಾರ್ಚ್​ 08: ನಗರದ ಹೊರವಲಯದ ಅಗರ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತಪಟ್ಟ ಯುವಕರನ್ನು ಸೈಫ್ ಪಾಷಾ, ಯೂಸುಫ್ ಖಾನ್ ಮತ್ತು ಅಜರ್ ಪಾಷಾ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಹಾರೋಹಳ್ಳಿ ಕಡೆಗೆ ಚಲಿಸುತ್ತಿದ್ದ ಲಾರಿಯ ಹಿಂಭಾಗಕ್ಕೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version