ಅಲ್ಲು ಅರ್ಜುನ್ ‘ರಾಕಾ’ ಲುಕ್ ಸಿದ್ಧಪಡಿಸಲು ಪ್ರತಿ ದಿನ 4 ಗಂಟೆ ಮೇಕಪ್ – Kannada News | Allu Arjun spends 4 hours a day on makeup for his Raaka movie getup

‘ಪುಷ್ಪ 2’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ನಟ ಅಲ್ಲು ಅರ್ಜುನ್ (Allu Arjun) ಅವರ ಮುಂದಿನ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಸೃಷ್ಟಿ ಆಗಿದೆ. ಈಗ ಅವರು ‘ರಾಕಾ’ (Raaka) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅದರಲ್ಲಿ ಅಲ್ಲು ಅರ್ಜುನ್ ಅವರ ಗೆಟಪ್ ಗಮನ ಸೆಳೆದಿದೆ. ಆ ಗೆಟಪ್ ಸಲುವಾಗಿ ಅವರು ಎಷ್ಟು ಶ್ರಮ ಹಾಕಿದ್ದಾರೆ ಎಂಬ ವಿಷಯ ಈಗ ಗೊತ್ತಾಗಿದೆ. ಈ ಚಿತ್ರಕ್ಕೆ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಅಟ್ಲಿ ಮತ್ತು ಅಲ್ಲು ಅರ್ಜುನ್ ಜೊತೆಯಾಗಿ ಸಿನಿಮಾ ಮಾಡುತ್ತಿರುವುದರಿಂದ ಸಹಜವಾಗಿಯೇ ‘ರಾಕಾ’ ಚಿತ್ರದ ಬಗ್ಗೆ ಹೈಪ್ ಹೆಚ್ಚಾಗಿದೆ. ಈ ಸಿನಿಮಾದ ಕಥೆ ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸಲು ಆರಂಭಿಸಿದ್ದಾರೆ. ಅರ್ಧ ಮೃಗ, ಅರ್ಧ ಮನುಷ್ಯನ ರೀತಿ ಕಾಣುವ ಗೆಟಪ್ ಧರಿಸಿ ಅಲ್ಲು ಅರ್ಜುನ್ ಅವರು ಫ್ಯಾನ್ಸ್ ಎದುರು ಝಲಕ್ ನೀಡಿದ್ದಾರೆ.

ಈ ಗೆಟಪ್ ಹಾಕುವುದು ಅಷ್ಟು ಸುಲಭವಲ್ಲ. ಈ ಲುಕ್​ಗಾಗಿ ಅಲ್ಲಿ ಅರ್ಜುನ್ ಅವರು ಪ್ರತಿ ದಿನ 3ರಿಂದ 4 ಗಂಟೆಗಳ ಕಾಲ ಶ್ರಮ ಹಾಕಿದ್ದಾರೆ. ಸಿನಿಮಾ ಮೇಲೆ ಅಲ್ಲು ಅರ್ಜುನ್ ಅವರಿಗೆ ಇರುವ ಪ್ರೀತಿ ಎಷ್ಟು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪ್ರತಿ ಪಾತ್ರಕ್ಕೂ ಅಲ್ಲು ಅರ್ಜುನ್ ಅವರು ಇದೇ ರೀತಿ ಶ್ರಮ ಹಾಕುತ್ತಾರೆ. ಸ್ಟಾರ್ ನಟನಾದ ಮೇಲೂ ಅವರು ಈ ರೀತಿ ಬದ್ಧತೆ ತೋರಿಸುತ್ತಿರುವುದು ಅವರ ಯಶಸ್ಸಿಗೆ ಕಾರಣ ಆಗಿದೆ.

ಫಸ್ಟ್ ಲುಕ್ ಬಿಡುಗಡೆ ಆದ ಬಳಿಕ ‘ರಾಕಾ’ ಕ್ರೇಜ್ ಜೋರಾಗಿದೆ. ಈ ಮೊದಲು ‘ಪುಷ್ಪ’ ಸಿನಿಮಾದ ‘ತಗ್ಗೆದಲೇ’ ಸ್ಟೈಲ್ ವೈರಲ್ ಆಗಿತ್ತು. ಈಗ ‘ರಾಕಾ’ ಕೂಡ ಅದೇ ರೀತಿ ಟ್ರೆಂಡ್ ಆಗುವ ಲಕ್ಷಣ ಕಾಣಿಸಿದೆ. ಹಾರ್ದಿಕ್ ಪಾಂಡ್ಯ ಅವರು ಇತ್ತೀಚೆಗೆ ನಡೆದ ಟಿ20 ಪಂದ್ಯದಲ್ಲಿ ‘ರಾಕಾ’ ರೀತಿ ಪೋಸ್ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: ‘ರಾಕಾ’ ಸಿನಿಮಾ: ದೀಪಿಕಾ ಪಡುಕೋಣೆಗೆ ಹೀರೋಗೆ ಸರಿಸಮಾನವಾಗಿ ಸಂಭಾವನೆ ಸಿಕ್ಕಿತೇ?

ಇಂತಹ ಹಲವು ಕಾರಣಗಳಿಂದಾಗಿ ‘ರಾಕಾ’ ಸಿನಿಮಾ ಸದ್ದು ಮಾಡುತ್ತಿದೆ. ‘ಸನ್ ಪಿಕ್ಚರ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಬೃಹತ್ ಬಜೆಟ್​ನಲ್ಲಿ ಚಿತ್ರ ಸಿದ್ಧವಾಗುತ್ತಿದೆ. ದೀಪಿಕಾ ಪಡುಕೋಣೆ ಅವರು ಈ ಸಿನಿಮಾಗೆ ನಾಯಕಿ ಆಗಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಡಿಯೂರಪ್ಪ ಮಗನನ್ನು ಗೆಲ್ಲಿಸಿ ಅಂದಿದ್ದ ಶಾಮನೂರು ವಿರುದ್ಧ ಯಾಕೆ ಕ್ರಮ ಆಗಿಲ್ಲ: ಸಿಡಿದೆದ್ದ ಮುಸ್ಲಿಂ ನಾಯಕ – Kannada News | Mlc abdul jabbar First Reaction about Suspended And Hits out at Congress High command

ಬೆಂಗಳೂರು/ದಾವಣಗೆರೆ, (ಏಪ್ರಿಲ್ 15): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ, ಟಿಕೆಟ್ ವಿಚಾರಕ್ಕೆ ಆರಂಭವಾಗಿ ಇದೀಗ ನಾಯಕರ ತಲೆದಂಡ ತನಕ ಬಂದು ನಿಂತಿದೆ. ಹೌದು…ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್​​ನಿಂದ ಅಮಾನತು ಮಾಡಲಾಗಿದ್ದು, ಇದೀಗ ಸಚಿವ ಜಮಿರ್ ಅಹ್ಮದ್ ಖಾನ್​​ಗೂ ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಕೆಲ ಮುಸ್ಲಿಂ ನಾಯಕರು ಸಹ ಕಾಂಗ್ರೆಸ್ ಹೈಕಮಾಂಡ್​ ನಡೆಗೆ ಆಕ್ರೋಶಗೊಂಡಿದ್ದು, ಈ ಹಿಂದೆ ಶಾಮನೂರು ಶಿವಶಂಕರಪ್ಪನವರು ಬಹಿರಂಗವಾಗಿಯೇ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಅವರನ್ನ ಗೆಲ್ಲಿಸಿ ಎಂದು ಹೇಳಿದಕ್ಕೆ ಯಾವ ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನು ಅಮಾನತುಗೊಂಡಿರುವ ಅಬ್ದುಲ್ ಜಬ್ಬಾರ್ ಸಹ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಶಾಮನೂರು ಶಿವಶಂಕರಪ್ಪನವರು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಹೈಕಮಾಂಡ್ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ಪಕ್ಷದಲ್ಲಿ ಒಬ್ಬರಿಗೊಂದು ರೀತಿ, ಇನ್ನೊಬ್ಬರಿಗೊಂದು ರೀತಿ ಆಗುತ್ತಿದೆ. ಶಾಮನೂರು ಓಪನ್ ಸ್ಟೇಜ್​ನಲ್ಲಿ ಯಡಿಯೂರಪ್ಪನವರ ಮಗನನ್ನು ಗೆಲ್ಲಿಸಿ ಅಂದಿದ್ರು. ಆಗ ಶಾಮನೂರು ಶಿವಶಂಕರಪ್ಪ ವಿರುದ್ಧ ಯಾಕೆ ಕ್ರಮ ಆಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಟಿಕೆಟ್​ ಪಡೆದವರು ನಮ್ಮೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಲ್ವಾ? ಯಾವ ಆಡಿಯೋ ವೈರಲ್ ಆಗಿದೆ ಎಂಬ ಮಾಹಿತಿ ನೀಡಬೇಕಲ್ವಾ? ತಪ್ಪೇ ಮಾಡಿಲ್ಲ ಅಂದಮೇಲೆ ನಾವು ಯಾರಿಗೆ ಹೆದರಬೇಕು? ದಾವಣೆಗೆರೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ಸೋಲುತ್ತೆ ಅಂತಾ ಅನ್ನಿಸುತ್ತಿಲ್ಲ. ಅದಕ್ಕೂ ಮೊದಲೇ ಹೀಗೆ ಯಾಕೆ ಮಾಡ್ತಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಒದಿ: ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು

Source link

ನಿದ್ರೆ ಸರಿಯಾಗಿ ಮಾಡದವರಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತಾ? ಇಲ್ಲಿದೆ ತಜ್ಞರು ನೀಡಿರುವ ಸ್ಪಷ್ಟನೆ – Kannada News | Don’t Let Sleep Deprivation Blur Your Vision

ಇಂದಿನ ವೇಗದ ಜೀವನಶೈಲಿಯಲ್ಲಿ ನಿದ್ರೆಯ (Sleep) ಕೊರತೆ ಸಾಮಾನ್ಯ ಸಮಸ್ಯೆಯಾಗುತ್ತಿದೆ. ರಾತ್ರಿಯಾದರೂ ಮೊಬೈಲ್ ಬಳಕೆ ಮಾಡುತ್ತಾ ಸಮಯ ಕಳೆಯುವವರು ಒಂದು ಕಡೆಯಾದರೆ, ಮತ್ತೊಂದು ಕಡೆ ಕೆಲಸದ ಒತ್ತಡ ಮತ್ತು ಅಸ್ಥಿರ ದಿನಚರಿಯಿಂದ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಇದರ ಪರಿಣಾಮ ಕೇವಲ ದೇಹದ ಮೇಲಷ್ಟೇ ಅಲ್ಲ, ಕಣ್ಣಿನ ಆರೋಗ್ಯದ (Eye Health) ಮೇಲೂ ಬೀಳುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಇದರಿಂದ ಕಣ್ಣಿನ ದೃಷ್ಟಿ ದುರ್ಬಲವಾಗುತ್ತಾ, ಈ ರೀತಿಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆಯ ಕೊರತೆ ಮತ್ತು ಕಣ್ಣಿನ ಆರೋಗ್ಯ:

ಆರೋಗ್ಯ ತಜ್ಞರು ಹೇಳುವ ಪ್ರಕಾರ, ನಿದ್ರೆಯ ಕೊರತೆಯಿಂದ ಕಣ್ಣಿನ ಮೇಲೆ ನೇರ ಪರಿಣಾಮ ಬೀಳುತ್ತದೆ. ಇದರಿಂದ ಶಾಶ್ವತವಾಗಿ ದೃಷ್ಟಿ ಕುಂದುತ್ತದೆ ಎನ್ನುವುದು ತಪ್ಪು ಕಲ್ಪನೆ. ಸಾಕಷ್ಟು ನಿದ್ರೆ ಸಿಗದಿದ್ದರೆ ಕಣ್ಣುಗಳಿಗೆ ಅಗತ್ಯ ವಿಶ್ರಾಂತಿ ಸಿಗುವುದಿಲ್ಲ, ಇದರಿಂದ ತಾತ್ಕಾಲಿಕವಾಗಿ ಮಂಕು ದೃಷ್ಟಿ, ಫೋಕಸ್ ಸಮಸ್ಯೆ ಮತ್ತು ಕಣ್ಣು ಭಾರವಾಗುವಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಒಬ್ಬ ವ್ಯಕ್ತಿ ನಿದ್ರೆ ಇಲ್ಲದೆ ಎಷ್ಟು ದಿನ ಬದುಕಬಹುದು? ಒಂದು ದಿನ ನಿದ್ರೆ ಬಿಟ್ಟರೆ ಏನೆಲ್ಲಾ ಆಗುತ್ತೆ ನೋಡಿ

ಲಕ್ಷಣಗಳು ಹೇಗಿರುತ್ತವೆ?

ನಿದ್ರೆ ಕೊರತೆಯಿಂದ ಕಣ್ಣಿನಲ್ಲಿ ಉರಿ, ಒಣಗುವಿಕೆ ಮತ್ತು ಕೆಂಪಾಗುವುದು ಕಂಡುಬರುತ್ತದೆ. ಜೊತೆಗೆ ಬೆಳಕಿಗೆ ಹೆಚ್ಚು ಸಂವೇದನೆ, ತಲೆನೋವು ಮತ್ತು ಕಣ್ಣಿನ ನೋವು ಉಂಟಾಗಬಹುದು. ಕೆಲವರಿಗೆ ಕಣ್ಣುಗಳ ಕೆಳಗೆ ಕಪ್ಪಾಗುವುದು ಮತ್ತು ಊತ ಕೂಡ ಕಾಣಿಸಬಹುದು. ಈ ಲಕ್ಷಣಗಳು ಕಣ್ಣುಗಳಿಗೆ ಸರಿಯಾದ ವಿಶ್ರಾಂತಿ ಸಿಗದಿರುವುದನ್ನು ಸೂಚಿಸುತ್ತವೆ. ಹೆಚ್ಚು ಸಮಯ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ನಿರಂತರವಾಗಿ ಕಣ್ಣಿಗೆ ಒತ್ತಡ ನೀಡುವುದರಿಂದ ಒಣಗುವಿಕೆ ಮತ್ತು ದೃಷ್ಟಿ ಮಂಕಾಗುವುದು ಹೆಚ್ಚಾಗುತ್ತದೆ.

ತಡೆಗಟ್ಟುವ ಕ್ರಮಗಳು

ಪ್ರತಿದಿನ 7 ರಿಂದ 8 ಗಂಟೆ ಸರಿಯಾಗಿ ನಿದ್ರೆ ಪಡೆಯುವುದು ಅತ್ಯಂತ ಮುಖ್ಯ. ಸ್ಕ್ರೀನ್ ಟೈಮ್ ಕಡಿಮೆ ಮಾಡಿ, ಮಧ್ಯಂತರದಲ್ಲಿ ವಿರಾಮ ತೆಗೆದುಕೊಳ್ಳಬೇಕು. ಸಾಕಷ್ಟು ನೀರು ಕುಡಿಯುವುದು ಮತ್ತು ಸಮತೋಲಿತ ಆಹಾರ ಸೇವಿಸುವುದು ಕಣ್ಣಿನ ಆರೋಗ್ಯಕ್ಕೆ ಸಹಕಾರಿ. ನಿದ್ರೆಯ ಕೊರತೆ ಕಣ್ಣಿನ ದೃಷ್ಟಿಯನ್ನು ತಾತ್ಕಾಲಿಕವಾಗಿ ಹಾನಿಗೊಳಿಸಬಹುದು, ಆದರೆ ದೀರ್ಘಕಾಲ ಗಮನಿಸದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಸಮರ್ಪಕ ನಿದ್ರೆ ಮತ್ತು ಕಣ್ಣಿನ ಆರೈಕೆ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CBSE 10th Results 2026 Out: CBSE 10ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್​ ವೀಕ್ಷಿಸಲು ನೇರ ಲಿಂಕ್ ಇಲ್ಲಿದೆ – Kannada News | CBSE 10th Results 2026 Out: Check Class 10 Marks Online AND DigiLocker Now!

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ರ ಸಾಲಿನ (ಸೆಷನ್ 1) 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ಸುಮಾರು 25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ನಿರೀಕ್ಷೆಗೆ ಈಗ ತೆರೆಬಿದ್ದಿದೆ. ಫೆಬ್ರವರಿ 17 ರಿಂದ ಮಾರ್ಚ್ 11 ರವರೆಗೆ ನಡೆದಿದ್ದ ಪರೀಕ್ಷೆಯ ಫಲಿತಾಂಶಗಳು ಈಗ ಲಭ್ಯವಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ.

ಫಲಿತಾಂಶ ವೀಕ್ಷಿಸುವುದು ಹೇಗೆ?

ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ವಿದ್ಯಾರ್ಥಿಗಳು ಮೊದಲು ಮಂಡಳಿಯ ಅಧಿಕೃತ ಪೋರ್ಟಲ್‌ಗಳಾದ results.cbse.nic.in ಅಥವಾ cbse.gov.in ಗೆ ಭೇಟಿ ನೀಡಬೇಕು. ಮುಖಪುಟದಲ್ಲಿ ಕಾಣಿಸುವ ‘Secondary School Examination (Class X) Results 2026’ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಫಲಿತಾಂಶದ ಪುಟಕ್ಕೆ ಪ್ರವೇಶಿಸಬಹುದು. ಇಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿವರಗಳನ್ನು ನಮೂದಿಸಬೇಕು.

ಇದನ್ನೂ ಓದಿ: ಇಂದೇ ಪ್ರಕಟವಾಗಲಿದೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ; ವೀಕ್ಷಿಸಲು ಈ ಲಿಂಕ್​ ಬಳಸಿ

ಫಲಿತಾಂಶದ ಪುಟ ತೆರೆದ ನಂತರ, ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ (Roll Number), ಶಾಲಾ ಸಂಖ್ಯೆ (School Number) ಮತ್ತು ಅಡ್ಮಿಟ್ ಕಾರ್ಡ್ ಐಡಿ (Admit Card ID) ಅನ್ನು ನಿಖರವಾಗಿ ನಮೂದಿಸಬೇಕಾಗುತ್ತದೆ. ಈ ಎಲ್ಲಾ ವಿವರಗಳನ್ನು ನಿಮ್ಮ ಪ್ರವೇಶ ಪತ್ರದಲ್ಲಿ (Admit Card) ಕಾಣಬಹುದು. ವಿವರಗಳನ್ನು ಭರ್ತಿ ಮಾಡಿದ ನಂತರ ‘Submit’ ಬಟನ್ ಒತ್ತಿದರೆ, ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ. ಮುಂದಿನ ದಾಖಲಾತಿ ಪ್ರಕ್ರಿಯೆಗಳಿಗಾಗಿ ಈ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳುವುದು ಉತ್ತಮ.

ಡಿಜಿಟಲ್ ಯುಗಕ್ಕೆ ಅನುಗುಣವಾಗಿ, ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಡಿಜಿಲಾಕರ್ (DigiLocker) ಮೂಲಕವೂ ಅಂಕಪಟ್ಟಿಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ‘APAAR ID’ ಅಥವಾ ಶಾಲೆಯಿಂದ ನೀಡಲಾದ ಆರು ಅಂಕಿಗಳ ಭದ್ರತಾ ಪಿನ್ ಬಳಸಿ ಲಾಗ್ ಇನ್ ಆಗುವ ಮೂಲಕ ತಮ್ಮ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಸುರಕ್ಷಿತವಾಗಿ ಪಡೆಯಬಹುದು. ಇದು ಭೌತಿಕ ಅಂಕಪಟ್ಟಿಗಳಷ್ಟೇ ಅಧಿಕೃತವಾಗಿದ್ದು, ಎಲ್ಲಿ ಬೇಕಾದರೂ ಬಳಸಲು ಅನುಕೂಲಕರವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:51 pm, Wed, 15 April 26

Source link

ಹಾರ್ಮುಜ್ ನಂತರ ಮಲಕ್ಕಾ ಜಲಸಂಧಿ ಮೇಲೆ ಅಮೆರಿಕ ಕಣ್ಣು; ಭಾರತದ ಬಗಲಿನಲ್ಲೇ ದೊಡ್ಡ ಅಪಾಯದ ಬೀಸುಗತ್ತಿ – Kannada News | After the hormuz usa eyeing the malacca strait that see worlds 40pc trade

ನವದೆಹಲಿ, ಏಪ್ರಿಲ್ 15: ವಿಶ್ವದ ಶೇ. 20 ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದಕ್ಕೆ ಇಡೀ ಜಗತ್ತು ಶಾಕ್ ಪಡೆದಿದೆ. ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಿಸುತ್ತಿದೆ. ಇದನ್ನು ತಡೆಯಲು ಅಮೆರಿಕ ಕಸರತ್ತು ನಡೆಸಿದೆ. ಇದೇ ವೇಳೆ, ಅಮೆರಿಕವು ಹಾರ್ಮುಜ್​ಗಿಂತಲೂ ಮುಖ್ಯವಾಗಿರುವ ಇನ್ನೊಂದು ಜಲಸಂಧಿಗೆ ತಂಟೆಗೆ ತೆರಳುತ್ತಿದೆ ಎನ್ನುವಂತಹ ಸುದ್ದಿಗಳಿವೆ. ಇದು ಸ್ಟ್ರೇಟ್ ಆಫ್ ಮಲಾಕ್ಕ, ಅಥವಾ ಮಲಾಕ್ಕ ಜಲಸಂಧಿ (Malacca strait). ಜಗತ್ತಿನ ಶೇ. 40ರಷ್ಟು ವ್ಯಾಪಾರ ವಹಿವಾಟುಗಳಾಗುವ ಸರಕುಗಳು ಈ ಜಲಸಂಧಿ ಮೂಲಕ ಸಾಗುತ್ತವೆ. ಹೀಗಾಗಿ, ಅಮೆರಿಕವು ಮಲಕ್ಕಾ ಮೇಲೆ ಕಣ್ಣಿಟ್ಟಿರುವುದು ಇಡೀ ಜಗತ್ತಿನ ಕಣ್ಣು ನೆಡುವಂತೆ ಮಾಡಿದೆ.

ಭಾರತದ ಸಮೀಪದಲ್ಲೇ ಇರುವ ಮಲಕ್ಕಾ ಜಲಸಂಧಿ

ಮಲಕ್ಕಾ ಜಲಸಂಧಿಯು ಭಾರತದ ಆಗ್ನೇಯ ದಿಕ್ಕಿನಲ್ಲಿರುವ ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್, ಸಿಂಗಾಪುರ ಇತ್ಯಾದಿ ದೇಶಗಳ ಕಡೆ ಇದೆ. ಹಿಂದೂ ಮಹಾಸಾಗರದ ಅಂಡಮಾನ್ ಸಮುದ್ರ ಮತ್ತು ಪೆಸಿಫಿಕ್ ಮಹಾಸಾಗರದ ಸೌತ್ ಚೀನಾ ಸಮುದ್ರವನ್ನು ಇದು ಸಂಪರ್ಕಿಸುತ್ತದೆ.

ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು

ವಿಶ್ವದ ಶೇ. 30-40ರಷ್ಟು ಸರಕುಗಳ ಆಮದು ರಫ್ತು ಈ ಜಲಸಂಧಿ ಮೂಲಕ ಆಗುತ್ತದೆ. ಇದು ವಿಶ್ವದಲ್ಲಿ ಅತಿಹೆಚ್ಚು ಹಡಗು ಟ್ರಾಫಿಕ್ ಇರುವ ಮಾರ್ಗಗಳಲ್ಲಿ ಒಂದು. ತೈಲ ಮಾತ್ರವಲ್ಲ, ಬಹಳಷ್ಟು ಸರಕುಗಳನ್ನು ಹೊತ್ತು ಹಡಗುಗಳು ಇಲ್ಲಿ ಸಾಗುತ್ತವೆ. ಚೀನಾ, ಜಪಾನ್, ಕೊರಿಯಾ ಇತ್ಯಾದಿ ದೇಶಗಳ ಆಮದು ರಫ್ತಿಗೆ ಈ ಮಾರ್ಗ ಪ್ರಧಾನವಾದುದು. ಜಗತ್ತಿನ ಸಪ್ಲೈ ಚೈನ್​ಗಳಲ್ಲಿ ಈ ಮೂರು ದೇಶಗಳ ಪಾತ್ರ ಮಹತ್ತರವಾದುದು. ಹೀಗಾಗಿ, ಮಲಕ್ಕಾ ಜಲಸಂಧಿಯಲ್ಲಿ ಅಡೆತಡೆಯುಂಟಾದರೆ, ಹಾರ್ಮುಜ್​ಗಿಂತಲೂ ಭೀಕರವಾದ ಪರಿಣಾಮಗಳನ್ನು ಜಗತ್ತು ಎದುರಿಸಬೇಕಾಗುತ್ತದೆ.

ಇಂಡೋನೇಷ್ಯಾ ಜೊತೆ ಅಮೆರಿಕದ ನಂಟು…

ಹಾರ್ಮುಜ್ ಜಲಸಂಧಿಯಲ್ಲಿ ಒಂದು ಬದಿಯಲ್ಲಿ ಓಮನ್, ಯುಎಇ ಇತ್ಯಾದಿ ಗಲ್ಫ್ ರಾಷ್ಟ್ರಗಳಿವೆ. ಮತ್ತೊಂದು ಬದಲಿಯಲ್ಲಿ ಇರಾನ್ ಇದೆ. ಆ ಜಲಸಂಧಿಯಲ್ಲಿ ಹೆಚ್ಚಿನ ನಿಯಂತ್ರಣ ಇರಾನ್​ಗೆ ಇದೆ. ಅದೇ ರೀತಿ, ಮಲಕ್ಕಾ ಜಲಸಂಧಿಯ ಒಂದು ಬದಿಯಲ್ಲಿ ಸಿಂಗಾಪುರ್, ಮಲೇಷ್ಯಾ ಮತ್ತು ಥಾಯ್ಲೆಂಡ್ ದೇಶಗಳಿವೆ. ಇನ್ನೊಂದು ಬದಿಯಲ್ಲಿ ಇಂಡೋನೇಷ್ಯಾ ಇದೆ. ಇಲ್ಲಿ ಈ ಜಲಸಂಧಿಯ ಹೆಚ್ಚಿನ ನಿಯಂತ್ರಣ ಸಾಧ್ಯತೆ ಹೊಂದಿರುವುದು ಇಂಡೋನೇಷ್ಯಾ.

ಇಂಡೋನೇಷ್ಯಾ ಅಮೆರಿಕದೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಥಾಯ್ಲೆಂಡ್ ದೇಶವು ಚೀನಾ ಪರವಾಗಿದೆ. ಚೀನಾದ ಶೇ. 80ರಷ್ಟು ತೈಲ ಆಮದು ಈ ಮಲಕ್ಕಾ ಜಲಸಂಧಿ ಮೂಲಕ ಆಗುತ್ತದೆ. ಇಂಡೋನೇಷ್ಯಾ ಮೂಲಕ ಈ ಜಲಸಂಧಿಯನ್ನು ನಿಯಂತ್ರಿಸಿದರೆ ಚೀನಾವನ್ನು ಹಣಿಯಲು ಸಾಧ್ಯ ಎಂಬುದು ಅಮೆರಿಕದ ಎಣಿಕೆ ಇರಬಹುದು.

ಇದನ್ನೂ ಓದಿ: ಸೆನ್ಸೆಕ್ಸ್ 1,400 ಅಂಕ ಏರಿಕೆ; ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಲಾಭದ ಹಿಗ್ಗು; ಷೇರುಪೇಟೆ ಖುಷಿಯಲ್ಲಿರುವುದು ಯಾಕೆ?

ಮಲಕ್ಕಾ ಜಲಸಂಧಿ ಸಮೀಪ ಭಾರತದ ಉಪಸ್ಥಿತಿ

ಭಾರತದ ಭಾಗವಾಗಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈ ಜಲಮಾರ್ಗದ ಸಮೀಪಕವೇ ಇವೆ. ಅಂಡಮಾನ್​ನ ಪೋರ್ಟ್ ಬ್ಲೇರ್​ನಿಂದ ಈ ಮಾರ್ಗ ತಲುಪಲು ಕೇವಲ 24 ಗಂಟೆ ಸಾಕು, ಅಷ್ಟು ಹತ್ತಿರದಲ್ಲಿದೆ. ಆದರೆ, ಮಲಕ್ಕಾ ಜಲಸಂಧಿಯನ್ನು ನಿಯಂತ್ರಿಸುವಷ್ಟು ಸಾಮೀಪ್ಯವು ಭಾರತಕ್ಕೆ ಇಲ್ಲದಿದ್ದರೂ ತಕ್ಕಮಟ್ಟಿಗೆ ಪ್ರಭಾವ ಬೀರಲು ಶಕ್ಯವಾಗಬಹುದು.

ಭಾರತದ ಶೇ. 55ರಷ್ಟು ವ್ಯಾಪಾರ ವಹಿವಾಟುಗಳು ಈ ಮಾರ್ಗದಲ್ಲೇ ನಡೆಯುತ್ತದೆ. ಇಲ್ಲಿ ನಡೆಯುವ ಯಾವುದೇ ಬೆಳವಣಿಗೆಯು ಭಾರತದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಈ ಪ್ರದೇಶದಲ್ಲಿ ಭಾರತ ಎಚ್ಚರದಿಂದಿರುವುದು ಅವಶ್ಯ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಭಾರತದ ಮಿಲಿಟರಿ ಉಪಸ್ಥಿತಿ ಇತ್ತೀಚೆಗೆ ಹೆಚ್ಚಿದೆ. ಇಲ್ಲಿ ಸಮರನೌಕೆಗಳನ್ನು ನಿಯೋಜಿಸಲಾಗಿದೆ. ಈ ಮಾರ್ಗದಲ್ಲಿ ಸಾಗಿ ಹೋಗುವ ಹಡಗುಗಳ ಮೇಲೆ ಭಾರತ ಹದ್ದಿನಗಣ್ಣು ಇಡಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲಾ! – Kannada News | Jammu and Kashmir CM Omar Abdullah refuses to Cut Tricolour Ribbon

ಶ್ರೀನಗರ, ಏಪ್ರಿಲ್ 15: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಕಾರ್ಯಕ್ರಮವೊಂದರಲ್ಲಿ, ತ್ರಿವರ್ಣದ ರಿಬ್ಬನ್‌ ಅನ್ನು ಕತ್ತರಿಯಿಂದ ಕಟ್ ಮಾಡಲು ನಿರಾಕರಿಸಿದ್ದಾರೆ. ಭಾರತದ ಧ್ವಜವಿರುವ ರಿಬ್ಬನ್ ಅನ್ನು ನಾನು ಕತ್ತರಿಸುವುದಿಲ್ಲ ಎಂದು ಹೇಳಿರುವ ಅವರು ಕಾರ್ಯಕ್ರಮದ ಆಯೋಜಕರಿಗೆ ಆ ರಿಬ್ಬನ್ ಅನ್ನು ಬಿಚ್ಚಿ ಸುತ್ತಿಡಲು ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಈ ನಿಲುವು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಯಕ್ರಮದ ಉದ್ಘಾಟನೆ ವೇಳೆ ತಾವು ಕತ್ತರಿಸಬೇಕಾಗಿದ್ದ ರಿಬ್ಬನ್‌ನಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಪಟ್ಟೆಗಳನ್ನು ಗಮನಿಸಿದ ಸಿಎಂ ತಕ್ಷಣ ಎಚ್ಚೆತ್ತುಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MBA in Temple Management: ದೇವಾಲಯಗಳ ಆಡಳಿತಕ್ಕೂ ಬಂತು ಎಂಬಿಎ ಪದವಿ! ವೃತ್ತಿಜೀವನದ ಹೊಸ ದಾರಿಯಾಗಿ ‘ಟೆಂಪಲ್ ಮ್ಯಾನೇಜ್ಮೆಂಟ್’ – Kannada News | Ujjain Launches MBA in Temple Management: New Course for Pilgrim Tourism and Administration

ಉಜ್ಜಯಿನಿ: ಭಾರತದಲ್ಲಿ ತೀರ್ಥಯಾತ್ರೆ ಎಂಬುದು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿದಿಲ್ಲ, ಅದು ಪ್ರವಾಸೋದ್ಯಮದ ಬೆನ್ನೆಲುಬಾಗಿ ಬೆಳೆದಿದೆ. ಇಂತಹ ಬೃಹತ್ ಸಂಪನ್ಮೂಲ ಮತ್ತು ಭಕ್ತರ ಸಾಗರವನ್ನು ನಿರ್ವಹಿಸಲು ಈಗ ವೃತ್ತಿಪರರ ಅಗತ್ಯವಿದ್ದು, ಇದಕ್ಕಾಗಿ ‘ದೇವಾಲಯ ನಿರ್ವಹಣೆಯಲ್ಲಿ ಎಂಬಿಎ’ (MBA in Temple Management) ಕೋರ್ಸ್ ಆರಂಭವಾಗುತ್ತಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಸಾಮ್ರಾಟ್ ವಿಕ್ರಮಾದಿತ್ಯ ವಿಶ್ವವಿದ್ಯಾಲಯವು (ವಿಕ್ರಮ್ ವಿಶ್ವವಿದ್ಯಾಲಯ) ಈ ವಿಶೇಷ ಕೋರ್ಸ್ ಅನ್ನು ಪ್ರಾರಂಭಿಸಲು ಮುಂದಾಗಿದೆ.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅನಿಲ್ ಕುಮಾರ್ ಶರ್ಮಾ ಅವರ ಪ್ರಕಾರ, ಈ ಕೋರ್ಸ್‌ಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ದೇವಾಲಯಗಳ ದೈನಂದಿನ ವ್ಯವಸ್ಥೆ, ಜನಸಂದಣಿ ನಿಯಂತ್ರಣ ಮತ್ತು ಆರ್ಥಿಕ ನಿರ್ವಹಣೆಯಲ್ಲಿ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಕೋರ್ಸ್‌ನ ಮುಖ್ಯಾಂಶಗಳು:

ದೇವಾಲಯಗಳ ಆಡಳಿತ ಮಂಡಳಿಗಳಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡಲು ಯುವಜನರಿಗೆ ಹೊಸ ಹಾದಿ ತೆರೆಯಲಿದೆ. ಕೋರ್ಸ್‌ನ ಪಠ್ಯಕ್ರಮವನ್ನು ಈಗಾಗಲೇ ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸುತ್ತಲೇ, ಆಧುನಿಕ ನಿರ್ವಹಣಾ ತಂತ್ರಗಳನ್ನು ಅಳವಡಿಸಿಕೊಳ್ಳಲು ಈ ಕೋರ್ಸ್ ಸಹಕಾರಿಯಾಗಲಿದೆ.

ಅಖಿಲ ಭಾರತ ಅರ್ಚಕರ ಒಕ್ಕೂಟದ ಸಲಹೆ:

ಈ ಉಪಕ್ರಮವನ್ನು ಸ್ವಾಗತಿಸಿರುವ ಅಖಿಲ ಭಾರತ ಅರ್ಚಕರ ಒಕ್ಕೂಟದ ಅಧ್ಯಕ್ಷ ಮಹೇಶ್ ಶರ್ಮಾ, ಇದೊಂದು ಉತ್ತಮ ಬೆಳವಣಿಗೆ ಎಂದಿದ್ದಾರೆ. ಆದರೆ, ಈ ಕೋರ್ಸ್ ಕೇವಲ ಹಿಂದೂ ದೇವಾಲಯಗಳಿಗೆ ಸೀಮಿತವಾಗದೆ ಗುರುದ್ವಾರಗಳು, ಚರ್ಚ್‌ಗಳು, ಜೈನ ಮಂದಿರಗಳು ಮತ್ತು ಮಸೀದಿಗಳ ನಿರ್ವಹಣೆಯನ್ನು ಒಳಗೊಂಡಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಮಾನ್ ಖಾನ್ ಹೊಸ ಸಿನಿಮಾಗೆ ಸಂಕಷ್ಟ: ಕಥೆ ಬದಲಾದರೂ ತಪ್ಪದ ‘ಮಾತೃಭೂಮಿ’ ವಿವಾದ – Kannada News | Salman Khan Maatrubhumi movie release stalled regulatory issues Galwan controversy

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅಭಿನಯದ ಬಹುನಿರೀಕ್ಷಿತ ‘ಮಾತೃಭೂಮಿ’ ಸಿನಿಮಾದ ಬಿಡುಗಡೆಗೆ ಈಗ ದೊಡ್ಡ ಅಡೆತಡೆ ಎದುರಾಗಿದೆ. ಚಿತ್ರದ ಕಥೆ ಮತ್ತು ಶೀರ್ಷಿಕೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ ಹೊರತಾಗಿಯೂ, ಈ ವಾರ್ ಡ್ರಾಮಾ ಸದ್ಯಕ್ಕೆ ತೆರೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ‘ಮಾತೃಭೂಮಿ’ (Maatrubhumi) ಚಿತ್ರವು ಪ್ರಮಾಣಪತ್ರಕ್ಕಾಗಿ ಇನ್ನೂ ಸೆನ್ಸಾರ್ ಮಂಡಳಿಗೆ ಸಲ್ಲಿಕೆಯಾಗಿಲ್ಲ. ಚಿತ್ರವನ್ನು ಬಿಡುಗಡೆ ಮಾಡುವ ಮೊದಲು ಅನುಸರಿಸಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ಚಿತ್ರತಂಡ ಈಗ ಚರ್ಚೆ ನಡೆಸುತ್ತಿದೆ.

‘ಈ ಹಂತದಲ್ಲಿ ಅಡೆತಡೆ ಇಲ್ಲದೇ ಚಿತ್ರದ ರಿಲೀಸ್‌ಗಾಗಿ ಮುಂದಿನ ದಾರಿ ಏನು ಎಂಬುದನ್ನು ತಂಡವು ಪರಿಶೀಲಿಸುತ್ತಿದೆ. ರಕ್ಷಣಾ ಸಚಿವಾಲಯ, ಭಾರತೀಯ ಸೇನೆ ಅಥವಾ ಸಿಬಿಎಫ್‌ಸಿ ಇವುಗಳಲ್ಲಿ ಯಾವುದೇ ವಿಭಾಗದ ಅಧಿಕಾರಿಗಳು ಈವರೆಗೆ ಸಿನಿಮಾವನ್ನು ನೋಡಿಲ್ಲ’ ಎಂದು ಮೂಲಗಳು ತಿಳಿಸಿರುವುದಾಗಿ ‘ಮಿಡ್ ಡೇ’ ವರದಿ ಮಾಡಿದೆ.

2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಹಿನ್ನೆಲೆಯಲ್ಲಿ ಚಿತ್ರವನ್ನು ಈ ಮೊದಲು ರೂಪಿಸಲಾಗಿತ್ತು. ಆದರೆ 2025ರ ಡಿಸೆಂಬರ್‌ನಲ್ಲಿ ಟೀಸರ್ ಬಿಡುಗಡೆಯಾದಾಗ ಚೀನಾದ ಕೆಂಗಣ್ಣಿಗೆ ಗುರಿಯಾಗಿತ್ತು. ಚಿತ್ರವು ಸತ್ಯವನ್ನು ತಿರುಚುತ್ತಿದೆ ಎಂಬ ಆರೋಪ ಎದುರಾಯಿತು. ಆದ್ದರಿಂದ ಕೆಲವು ಅಂಶಗಳನ್ನು ಬದಲಿಸುವುದು ಅನಿವಾರ್ಯ ಆಯಿತು.

ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ, ಚಿತ್ರದಿಂದ ಚೀನಾ ಮತ್ತು ಗಲ್ವಾನ್ ಸಂಘರ್ಷದ ನೇರ ಉಲ್ಲೇಖಗಳನ್ನು ತೆಗೆದುಹಾಕುವಂತೆ ಭಾರತೀಯ ಅಧಿಕಾರಿಗಳು ಫೆಬ್ರವರಿಯಲ್ಲಿ ಚಿತ್ರತಂಡಕ್ಕೆ ಮೌಖಿಕ ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಚಿತ್ರದ ಶೀರ್ಷಿಕೆಯನ್ನು ‘ಮಾತೃಭೂಮಿ’ ಎಂದು ಬದಲಿಸಲಾಯಿತು.

ಇದನ್ನೂ ಓದಿ: ಸಲ್ಮಾನ್ ಖಾನ್​​ಗೆ ಇಷ್ಟ ಆಯ್ತು ಸಾನ್ವಿ ಸುದೀಪ್ ಕಂಠ; ಮೆಚ್ಚುಗೆ ಸೂಚಿಸಿದ ನಟ

ನಿರ್ದೇಶಕ ಅಪೂರ್ವ ಲಾಖಿಯಾ ಅವರು ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಆದರೆ ಚಿತ್ರವನ್ನು ಮೊದಲಿನಿಂದ ಹೊಸದಾಗಿ ಚಿತ್ರೀಕರಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮುಂಬೈನಲ್ಲಿ ನಡೆದ ಚಿತ್ರೀಕರಣದ ವೇಳೆ ಪೋಷಕ ಪಾತ್ರಗಳ ಕುಟುಂಬ ಮತ್ತು ಪ್ರೇಮ ಕಥೆಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇಷ್ಟೆಲ್ಲ ಬದಲಾವಣೆ ಮಾಡಿದ ನಂತರ ಸಿನಿಮಾದ ಮೂಲ ಅಂಶವೇ ಇಲ್ಲದಂತಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಕಲಿ ನೋಟುಗಳನ್ನು ನೀಡಿ ಆರ್‌ಬಿಐಗೇ ಟೋಪಿ ಹಾಕಲು ಹೋಗಿ ಸಿಕ್ಕಿಬಿದ್ದ ಭೂಪ! – Kannada News | Bengaluru Man Arrested for Exchanging Fake Rs 2000 Notes at RBI

ನಕಲಿ ನೋಟುಗಳನ್ನು ನೀಡಿ ಆರ್‌ಬಿಐಗೇ ಟೋಪಿ ಹಾಕಲು ಹೋಗಿ ಸಿಕ್ಕಿಬಿದ್ದ ಭೂಪ!
Image Credit source: google Gemini

ಬೆಂಗಳೂರು, ಏಪ್ರಿಲ್ 15: ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಚೇರಿಯಲ್ಲಿ ಚಲಾವಣೆ ರದ್ದಾಗಿರುವ 2,000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಬದಲಾಯಿಸಲು ಯತ್ನಿಸಿದ 52 ವರ್ಷದ ವ್ಯಕ್ತಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. 2 ಸಾವಿರ ಮುಖಬೆಲೆಯ 300ಕ್ಕೂ ಹೆಚ್ಚು ನೋಟುಗಳನ್ನು ತಂದಿದ್ದ ವ್ಯಕ್ತಿ, 7 ಲಕ್ಷ ರೂ.ಗೂ ಹೆಚ್ಚು ಮೊತ್ತವನ್ನು ಜಮಾ ಮಾಡುವಂತೆ ಕೇಳಿದ್ದ ಎನ್ನಲಾಗಿದೆ.

ಆರೋಪಿಗೆ ಇಷ್ಟೊಂದು ನಕಲಿ ನೋಟುಗಳು ಸಿಕ್ಕಿದ್ದು ಹೇಗೆ?

ನಾಗಶೆಟ್ಟಿಹಳ್ಳಿಯ ನಿವಾಸಿ ಎಸ್.ವಿ. ರಮೇಶ್ ಬಂಧಿತ ಆರೋಪಿ. ಈತ ಏಪ್ರಿಲ್ 9ರಂದು ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಕಚೇರಿಗೆ ಭೇಟಿ ನೀಡಿ, ತನ್ನ ಬಳಿಯಿದ್ದ 375 ನೋಟುಗಳನ್ನು ನೀಡಿ ಒಟ್ಟು 7.5 ಲಕ್ಷ ರೂಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಿದ್ದ. ಆದರೆ, ಅಧಿಕಾರಿಗಳು ನೋಟುಗಳನ್ನು ತಪಾಸಣೆ ನಡೆಸಿದಾಗ ಅವುಗಳು ನಕಲಿ ಎಂದು ತಿಳಿದುಬಂದಿದೆ. ಆರ್‌ಬಿಐ ಸಹಾಯಕ ಜನರಲ್ ಮ್ಯಾನೇಜರ್ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗೆ ಈ ನಕಲಿ ನೋಟುಗಳನ್ನು ಪೂರೈಸಿದವರು ಯಾರು ಮತ್ತು ಇವುಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

2023ರಲ್ಲಿ ಆರ್‌ಬಿಐ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದರೂ, ಸಾರ್ವಜನಿಕರಿಗೆ ಆರ್‌ಬಿಐ ಕಚೇರಿಗಳಲ್ಲಿ ಇವುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಬ್ಬ ವ್ಯಕ್ತಿ ಏಕಕಾಲಕ್ಕೆ ಗರಿಷ್ಠ 20,000 ರೂ. ಮೌಲ್ಯದ ನೋಟುಗಳನ್ನು ಮಾತ್ರ ಬದಲಾಯಿಸಬಹುದು. ಆದರೆ ರಮೇಶ್ ಅತಿ ದೊಡ್ಡ ಮೊತ್ತದ ನಕಲಿ ನೋಟುಗಳೊಂದಿಗೆ ಸಿಕ್ಕಿಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:16 pm, Wed, 15 April 26

Source link

ಒಗ್ಗಟ್ಟಿನಿಂದ ನಿಲ್ಲುತ್ತೇವೆ; ಕ್ಷೇತ್ರ ಪುನರ್ ವಿಂಗಡಣೆ ವಿರುದ್ಧ ಒಂದಾದ ದಕ್ಷಿಣ ಭಾರತ – Kannada News | We Will stand together speak with one voice South India expresses concern over delimitation

ನವದೆಹಲಿ, ಏಪ್ರಿಲ್ 15: ಕ್ಷೇತ್ರ ಪುನರ್ ವಿಂಗಡಣೆ (delimitation) ನಿಯಮಗಳಿಗೆ ಪ್ರಮುಖ ಬದಲಾವಣೆಗಳೊಂದಿಗೆ ಲೋಕಸಭಾ ಸದಸ್ಯರ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಗ್ಗಟ್ಟಿನ ವಿರೋಧ ವ್ಯಕ್ತವಾಗಿದೆ. ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳ ರಾಜಕೀಯ ನಾಯಕರು ಮತ್ತು ಪಕ್ಷಗಳು ಈ ಸೀಮಾ ನಿರ್ಣಯವನ್ನು ವಿರೋಧಿಸಿವೆ.

ತೆಲಂಗಾಣದ ವಿರೋಧ

ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಕೇಂದ್ರ ಸರ್ಕಾರದ ಪ್ರಕ್ರಿಯೆಯ ವಿರುದ್ಧ ರಾಜಕೀಯ ಪ್ರತಿಭಟನೆಗೆ ಕರೆ ನೀಡಿದ್ದಾರೆ. ರೇವಂತ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಈ ಕ್ರಮವು ನಮ್ಮ ಪ್ರಜಾಪ್ರಭುತ್ವ ಮತ್ತು ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. “ನಿಜವಾದ ವಿವಾದಾತ್ಮಕ ವಿಷಯವೆಂದರೆ ಸೀಟುಗಳನ್ನು ಅನುಪಾತದ ಆಧಾರದ ಮೇಲೆ 850ಕ್ಕೆ ಹೆಚ್ಚಿಸುವುದು. ಇದು ರಾಜಕೀಯ ಶಕ್ತಿಯನ್ನು ಬದಲಾಯಿಸಬಹುದು ಮತ್ತು ದಕ್ಷಿಣ ರಾಜ್ಯಗಳಲ್ಲಿ ಅಸಮತೋಲನವನ್ನು ಉಂಟುಮಾಡಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: 25 ವರ್ಷ ಸಂಸದೀಯ ಕ್ಷೇತ್ರ ಪುನಾರಚನೆ ಮಾಡಬೇಡಿ; ಸ್ಟಾಲಿನ್ ನೇತೃತ್ವದ ಸಮಿತಿಯಿಂದ ನಿರ್ಣಯ ಅಂಗೀಕಾರ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 50% ಸ್ಥಾನಗಳನ್ನು ಹೆಚ್ಚಿಸುವ ನೆಪದಲ್ಲಿ ಸಂಸತ್ತಿನಲ್ಲಿ ದಕ್ಷಿಣದ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದಾರೆ. ಕೇಂದ್ರದ ಪ್ರಸ್ತಾವಿತ ಕ್ರಮವು ದಕ್ಷಿಣ ರಾಜ್ಯಗಳಲ್ಲಿನ ಮಹಿಳೆಯರು ಮತ್ತು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ತೀವ್ರ ಅನ್ಯಾಯವನ್ನುಂಟುಮಾಡಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಪ್ರಸ್ತಾವಿತ ಕ್ರಮದ ವಿರುದ್ಧ ಬೆಂಬಲ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪತ್ರ ಬರೆದಿದ್ದಾರೆ.

ಹಾಗೇ, ಸಿಎಂ ಸಿದ್ದರಾಮಯ್ಯನವರಿಗೆ ಕೂಡ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಪತ್ರ ಬರೆದಿದ್ದು, ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಅನುಪಾತ ಆಧಾರಿತ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡೋಣ, ಮಹಿಳಾ ಮೀಸಲಾತಿ ಮಸೂದೆ ಮತ್ತು ಗಡಿಗಳನ್ನು ಮಾತ್ರ ಮರುರೂಪಿಸುವ ಮಿತಿಗೆ ಬೆಂಬಲ ನೀಡೋಣ. ಆದರೆ, ಲೋಕಸಭಾ ಸ್ಥಾನಗಳನ್ನು ಹೆಚ್ಚಳ ಮಾಡುವುದಕ್ಕೆ ವಿರೋಧಿಸೋಣ. ಜನಸಂಖ್ಯೆ ಆಧಾರಿತ ಅನುಪಾತ ಮಾದರಿಯಲ್ಲಿ ಲೋಕಸಭಾ ಸ್ಥಾನಗಳನ್ನು 543 ರಿಂದ ಸುಮಾರು 850 ಕ್ಕೆ ಹೆಚ್ಚಿಸುವುದರಿಂದ ದಕ್ಷಿಣ ರಾಜ್ಯಗಳು ಮತ್ತು ಉತ್ತರ ಪ್ರದೇಶದ ನಡುವಿನ ಸ್ಥಾನ ಅಂತರವು ಬೃಹತ್ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ಸಿಎಂ ರೇವಂತ್ ರೆಡ್ಡಿ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ನಿಲುವೇನು?

“ಸೀಮಾ ನಿರ್ಣಯ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಪ್ರಾತಿನಿಧ್ಯವನ್ನು ಮರುರೂಪಿಸುವ ಸಾಧನವಾಗಬಾರದು” ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಆದ್ಯತೆಯ ಜನಸಂಖ್ಯಾ ನಿಯಂತ್ರಣವನ್ನು ಹೊಂದಿರುವ ರಾಜ್ಯಗಳು ಕೇಂದ್ರ ಸರ್ಕಾರದ ಈ ಪ್ರಸ್ತಾಪದ ಅಡಿಯಲ್ಲಿ ಅನ್ಯಾಯವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದರಿಂದ ಸಂಸತ್ತಿನಲ್ಲಿ ದಕ್ಷಿಣ ರಾಜ್ಯಗಳ ಧ್ವನಿ ದುರ್ಬಲವಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆಯಿಂದ ಒಂದು ಸ್ಥಾನವೂ ನಷ್ಟವಾಗುವುದಿಲ್ಲ; ತಮಿಳುನಾಡಿನಲ್ಲಿ ಅಮಿತ್ ಶಾ ಭರವಸೆ

ತಮಿಳುನಾಡು ಸರ್ಕಾರ ಏನು ಹೇಳುತ್ತದೆ?

ಕ್ಷೇತ್ರ ವಿಂಗಡಣೆಗೆ ಸಂಬಂಧಿಸಿದಂತೆ ತಮಿಳುನಾಡು ಎದುರಿಸಬಹುದಾದ ಪರಿಣಾಮಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಡಿಎಂಕೆ ಸಂಸದರ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯ ನಂತರ ಅವರು, “ನಮ್ಮ ತಲೆಯ ಮೇಲೆ ನೇತಾಡುತ್ತಿದ್ದ ಕತ್ತಿ ಈಗ ನಮ್ಮ ಕುತ್ತಿಗೆಯ ಮೇಲೆ ಬಿದ್ದಿದೆ. ನಮ್ಮ ಡಿಎಂಕೆ ಸಂಸದರೊಂದಿಗೆ ಸಮಾಲೋಚಿಸಿ, ನಾವು ರಾಜ್ಯಗಳಾದ್ಯಂತದ ಸಂಸತ್ ಸದಸ್ಯರನ್ನು ಸಂಪರ್ಕಿಸುತ್ತಿದ್ದೇವೆ. ಈ ನಿರ್ಧಾರದಿಂದ ಆಗುವ ಗಂಭೀರ ಅಪಾಯವನ್ನು ಎದುರಿಸಲು ಸಂಘಟಿತ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ. ಇದು ಪಕ್ಷಗಳು ಅಥವಾ ವ್ಯಕ್ತಿಗಳ ಬಗ್ಗೆ ಅಲ್ಲ. ಇದು ನಮ್ಮ ಜನರ ಹಕ್ಕುಗಳನ್ನು ರಕ್ಷಿಸುವ ಬಗೆಗಿನ ಹೋರಾಟವಾಗಿದೆ. ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಭಾರತದಾದ್ಯಂತ ಎಲ್ಲಾ ಪಕ್ಷಗಳು ಮತ್ತು ಸಂಸದರು ಒಂದಾಗಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದು ಸ್ಟಾಲಿನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:35 pm, Wed, 15 April 26

Source link

Exit mobile version