ನೀರಿನ ಬಾಟಲಿನ ಕ್ಯಾಪ್​ಗಳು ಏಕೆ ಬೇರೆ ಬೇರೆ ಬಣ್ಣದಲ್ಲಿರುವುದು ಏಕೆ? – Kannada News

ಸಾಮಾನ್ಯವಾಗಿ ನಾವು ದಿನನಿತ್ಯ ಬಳಸುವ ವಸ್ತುಗಳ ಬಗ್ಗೆ ಅಷ್ಟಾಗಿ ಯೋಚನೆ ಮಾಡಲ್ಲ. ಹೌದು, ಪ್ರತಿದಿನ ಬಳಸುವ ಸಾಮಾನ್ಯ ವಸ್ತುಗಳಲ್ಲಿ ಈ ನೀರಿನ ಬಾಟಲಿ (water bottle) ಕೂಡ ಒಂದು. ಪ್ರಯಾಣದ ವೇಳೆ ಖರೀದಿ ಮಾಡುವ ಈ ನೀರಿನ ಬಾಟಲಿಯ ಕ್ಯಾಪ್ ಬಣ್ಣವು ಹೆಚ್ಚಾಗಿ ನೀಲಿಯಾಗಿರುತ್ತದೆ. ಆದರೆ ಇನ್ನು ಕೆಲವು ಬಾಟಲಿ ಮುಚ್ಚಳವು ಬಿಳಿ, ಕಪ್ಪು, ಹಸಿರು, ಹಳದಿ ಹೀಗೆ ವಿವಿಧ ಬಣ್ಣದಲ್ಲಿರುವುದನ್ನು ನೀವು ನೋಡಿರುತ್ತೀರಿ. ಬಾಟಲಿ ಮುಚ್ಚಳಗಳು ಬೇರೆ ಬೇರೆ ಬಣ್ಣದಲ್ಲಿರುವುದು ಯಾಕೆ ಎನ್ನುವುದಕ್ಕೆ ಕಾರಣವೂ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಮಹಿಳೆಯೊಬ್ಬಳು ಇದರ ಹಿಂದಿನ ಕಾರಣವನ್ನು ವಿವರಿಸಿದ್ದಾಳೆ.

ಲರ್ನ್‌ ವಿಥ್‌ಪಿಕೆ (Learnwithpk) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಹಿಳೆ ನೀರಿನ ಬಾಟಲಿ ಮುಚ್ಚಳದ ಬಣ್ಣಗಳ ಹಿಂದಿನ ಕಾರಣವನ್ನು ವಿವರಿಸುವುದನ್ನು ಕಾಣಬಹುದು. ನೀಲಿ ಮುಚ್ಚಳಗಳು ನೈಸರ್ಗಿಕ ಖನಿಜಯುಕ್ತ ನೀರು, ಬಿಳಿ ಕ್ಯಾಪ್ ಗಳು ಶುದ್ಧೀಕರಿಸಿದ ನೀರು, ಹಸಿರು ಖನಿಜಯುಕ್ತ ಅಥವಾ ಸುವಾಸನೆಯನ್ನು ಹೊಂದಿರುವ ನೀರು, ಕಪ್ಪು ಮುಚ್ಚಳ ಕ್ಷಾರೀಯ ನೀರು, ಹಳದಿ ಕ್ಯಾಪ್ ಗಳು ಜೀವಸತ್ವಗಳು ಹಾಗೂ ವಿಟಮಿನ್ ನಿಂದ ಸಮೃದ್ಧವಾಗಿರುವ ನೀರು ಹಾಗೂ ಕೆಂಪು ಮುಚ್ಚಳ ಎಲೆಕ್ಟ್ರೋಲೈಟ್ಸ್ ಭರಿತ ನೀರು ಎಂದು ಹೇಳಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಟೆರೇಸ್‌ನಲ್ಲಿ ಟಾಟಾ ಸುಮೋ ಕಾರಿನಂತೆ ಕಾಣುವ ವಾಟರ್‌ ಟ್ಯಾಂಕ್ ನಿರ್ಮಿಸಿದ ಮನೆ ಮಾಲೀಕ

ಈ ವಿಡಿಯೋ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಧನ್ಯವಾದಗಳು ಎಂದರೆ, ಇನ್ನೊಬ್ಬರು ಉಪಯುಕ್ತ ಮಾಹಿತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಮಾಹಿತಿ ತಿಳಿದೇ ಇರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ – Kannada News

ಬೆಂಗಳೂರು (ಜೂ.11): ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ (Karnataka Rajya Sabha) ನಾಲ್ಕು ಸ್ಥಾನಗಳಿಗೆ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾವಣ ಕಣದಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲದಿದ್ದರಿಂದ ನಾಲ್ಕು ಸ್ಥಾನಗಳ ಪೈಕಿ ಮೂವರು ಕಾಂಗ್ರೆಸ್ (Congress) ಮತ್ತು ಓರ್ವ ಬಿಜೆಪಿ (BJP) ಅಭ್ಯರ್ಥಿ ಅವಿರೋಧವಾಗಿ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ ಹಾಗೂ ಬಿಜೆಪಿ ಅಭ್ಯರ್ಥಿ ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿ, ಚುನಾವಣಾಧಿಕಾರಿ ಕೆ.ಎಂ.ವಿಶಾಲಾಕ್ಷಿ ಘೋಷಣೆ ಮಾಡಿದ್ದಾರೆ.

ಆವಿರೋಧವಾಗಿ ರಾಜ್ಯಸಭೆಗೆ ಪ್ರವೇಸಿಸಿದ ಬಿಜೆಪಿಯ ಎಂ.ನಾಗರಾಜ್ ಪ್ರತಿಕ್ರಿಯಿಸಿ, ಕೇಂದ್ರದ ವರಿಷ್ಠರು, ಮೋದಿ, ಅಮಿತ್‌ ಶಾ ಅವರಿಗೆ ಧನ್ಯವಾದ ಸಲ್ಲಿಸ್ತೇನೆ. ಈ ಹಿಂದೆ‌ ಕೋರ್‌ ಕಮಿಟಿ ಸದಸ್ಯರಿಗೆ ಮನವಿ ಮಾಡಿದ್ದೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಕೆಲಸ ಮಾಡ್ತಿದ್ದೇವೆ. ಈ ಅವಕಾಶವನ್ನು ಅಪೇಕ್ಷೆ, ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ‌ ಮಾಡ್ತೇನೆ ಎಂದರು.

ಇನ್ನು ಕರ್ನಾಟಕದಿಂದ ರಾಜ್ಯಸಭೆ ಆಯ್ಕೆಯಾಗಿರುವ ಕಾಂಗ್ರೆಸ್​​​ನ ಪವನ್ ಖೇರಾ ಮಾತನಾಡಿ, ಮುಂದೆ ನಾನು ಇಲ್ಲಿಗೆ ಬರುವಾಗ ಕನ್ನಡ ಕಲಿತುಕೊಂಡು ಬರುತ್ತೇನೆ. ಕರ್ನಾಟಕದಿಂದ ರಾಜ್ಯಸಭೆ ಸದಸ್ಯನಾಗಿ ಆಯ್ಕೆಯಾಗಿದ್ದಕ್ಕೆ ಖುಷಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

BAN vs AUS: ಸೊನ್ನೆಗೆ 3 ವಿಕೆಟ್; ಬಾಂಗ್ಲಾ ವಿರುದ್ಧ ಬೇಡದ ದಾಖಲೆ ಬರೆದ ಆಸ್ಟ್ರೇಲಿಯಾ – Kannada News

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿರುವ ಆಸ್ಟ್ರೇಲಿಯಾ ತಂಡ (Bangladesh vs Australia), ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಹೀನಾಯವಾಗಿ ಸೋತು ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತ್ತು. ಇದೀಗ ಸರಣಿಯ ಎರಡನೇ ಪಂದ್ಯದಲ್ಲೂ ಕಾಂಗರೂಗಳ ಬ್ಯಾಟಿಂಗ್‌ ವಿಭಾಗ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದೆ. ಬಾಂಗ್ಲಾ ನೆಲದಲ್ಲಿ ನೆಲಕಚ್ಚಿ ಆಡುವುದನ್ನು ಮರೆತಿರುವ ಆಸೀಸ್ ಬ್ಯಾಟರ್​ಗಳು ಒಂದಂಕಿ ದಾಟಲು ಪರದಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್ ತಂಡದ ಅಗ್ರ ಮೂವರು ಬ್ಯಾಟರ್​ಗಳು ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಆಸೀಸ್ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ದಾಖಲಿಸಿದ ಬೇಡದ ದಾಖಲೆಯೊಂದನ್ನು ತನ್ನ ಖಾತೆಗೆ ಹಾಕಿಕೊಂಡಿತು.

ಆರಂಭಿಕರಿಬ್ಬರು ಸೊನ್ನೆಗೆ ಔಟ್

ಢಾಕಾದ ಶೇರ್ ಎ ಬಾಂಗ್ಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತದ ಮೇಲೆ ಆಘಾತ ಎದುರಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಮ್ಯಾಟ್ ಶಾರ್ಟ್​ ಹಾಗೂ ಕೂಪರ್ ಕನೋಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಶಾರ್ಟ್​ 4 ಎಸೆತಗಳಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗದೆ ತಸ್ಕಿನ್ ಅಹ್ಮದ್​ಗೆ ಬಲಿಯಾದರೆ, ಇತ್ತ ಕನೋಲಿ, ಮುಸ್ತಫಿಜುರ್ ರೆಹಮಾನ್ ಎಸೆದ ಎರಡನೇ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಆಸ್ಟ್ರೇಲಿಯಾ ಯಾವುದೇ ರನ್ ಕಲೆಹಾಕುವ ಮೊದಲೆ ತನ್ನೇರಡು ವಿಕೆಟ್‌ಗಳನ್ನು ಕಳೆದುಕೊಂಡಿತು.

ಸೊನ್ನೆಗೆ 3 ವಿಕೆಟ್ ಪತನ

ಆ ನಂತರ 4ನೇ ಕ್ರಮಾಂಕದಲ್ಲಿ ಬಂದ ಮ್ಯಾಥ್ಯೂ ರೆನ್​ಶಾ, ನಾಯಕ ಜೋಶ್ ಇಂಗ್ಲಿಸ್ ಜೊತೆಗೂಡಿ ತಂಡದ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತಿದ್ದರು. ಆದರೆ ರೆನ್​ಶಾ ಕೂಡ ತಂಡದ ಖಾತೆಗೆ ಯಾವುದೇ ರನ್ ಸೇರುವ ಮೊದಲೇ 4 ಎಸೆತಗಳನ್ನು ಎದುರಿಸಿ ರೆಹಮಾನ್​​ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಆಸೀಸ್ ತಂಡ ಸೊನ್ನೆಗೆ ತನ್ನ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ಯಾವುದೇ ರನ್ ಗಳಿಸದೆ ಮೂರು ವಿಕೆಟ್ ಕಳೆದುಕೊಂಡು ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತು. ಆಸೀಸ್​ಗೂ ಮೊದಲು 1993 ಮತ್ತು 1997 ರಲ್ಲಿ ಪಾಕಿಸ್ತಾನ ತಂಡ ಈ ಬೇಡದ ದಾಖಲೆಯನ್ನು ನಿರ್ಮಿಸಿದ್ದರೆ, ಬಾಂಗ್ಲಾದೇಶ ಕೂಡ 2003 ರಲ್ಲಿ ಶ್ರೀಲಂಕಾ ವಿರುದ್ಧ ಶೂನ್ಯಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಪಟ್ಟಿಗೆ ಸೇರ್ಪಡೆಗೊಂಡಿತ್ತು. ಇದೀಗ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ವಿರುದ್ಧ ಸೊನ್ನೆಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಬೇಡದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ತಸ್ಕಿನ್, ರೆಹಮಾನ್ ಮಾರಕ ದಾಳಿ

ಆದಾಗ್ಯೂ 7 ಮತ್ತು 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಲಬುಶೇನ್ ಮತ್ತು ಬಾರ್ಟ್ಲೆಟ್ ಅವರ ಅರ್ಧಶತಕ ಹಾಗೂ ನಾಯಕ ಇಂಗ್ಲಿಸ್ ಅವರ 34 ರನ್​ಗಳ ಉಪಯುಕ್ತ ಇನ್ನಿಂಗ್ಸ್​ನಿಂದಾಗಿ 42 ಓವರ್​ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 187 ರನ್ ಕಲೆಹಾಕಿತು. ಆದರೆ ಮಳೆಯ ಮಧ್ಯ ಪ್ರವೇಶದಿಂದ ಆಟವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇತ್ತ ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 3 ವಿಕೆಟ್ ಪಡೆದರೆ, ತನ್ವೀರ್ ಇಸ್ಲಾಂ 2 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:25 pm, Thu, 11 June 26

Source link

Welcome To The Jungle: 2000 ಕೋಟಿ ರೂ. ನಕಲಿ ಸಿನಿಮಾ; ಫ್ಲಾಪ್ ನಟ ಅಕ್ಷಯ್ ಕುಮಾರ್ ಪರಿಸ್ಥಿತಿ ಇದು – Kannada News

ಬಾಲಿವುಡ್ ಅಂಗಳದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ವೆಲ್ಕಮ್’ ಸರಣಿಯ ಮೂರನೇ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’ (Welcome To The Jungle) ಸಿನಿಮಾದ ಅದ್ದೂರಿ ಟ್ರೇಲರ್ ಗುರುವಾರ (ಜೂನ್ 11) ಬಿಡುಗಡೆಯಾಗಿದೆ. 4 ನಿಮಿಷ 10 ಸೆಕೆಂಡ್‌ಗಳ ಈ ಸುದೀರ್ಘ ಟ್ರೇಲರ್ ಪ್ರೇಕ್ಷಕರಿಗೆ ನಗುವಿನ ರಸದೌತಣ ನೀಡುತ್ತಿದ್ದು, ಚಿತ್ರದ ಕ್ರೇಜಿ ಕಥಾಹಂದರವನ್ನು ಬಿಚ್ಚಿಟ್ಟಿದೆ. ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ ಅಹಮದ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 2000 ಕೋಟಿ ರೂಪಾಯಿ ಬಜೆಟ್​ನ ನಕಲಿ ಸಿನಿಮಾದಲ್ಲಿ ನಟಿಸುವ ಫ್ಲಾಪ್ ಹೀರೋ ಪಾತ್ರವನ್ನು ಅಕ್ಷಯ್ ಕುಮಾರ್ (Akshay Kumar) ಅವರು ಈ ಸಿನಿಮಾದಲ್ಲಿ ಮಾಡಿದ್ದಾರೆ.

‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದಲ್ಲಿ ಬಾಲಿವುಡ್‌ನ ಘಟಾನುಘಟಿ ಕಲಾವಿದರ ದಂಡೇ ಇದೆ. ಅಕ್ಷಯ್ ಕುಮಾರ್ ಜೊತೆಗೆ ಸುನಿಲ್ ಶೆಟ್ಟಿ, ಅರ್ಷದ್ ವಾರ್ಸಿ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ರವೀನಾ ಟಂಡನ್, ಲಾರಾ ದತ್ತಾ, ಜಾಕಿ ಶ್ರಾಫ್, ಪರೇಶ್ ರಾವಲ್, ಜಾನಿ ಲಿವರ್, ರಾಜ್‌ಪಾಲ್ ಯಾದವ್, ಕೃಷ್ಣ ಅಭಿಷೇಕ್, ಕಿಕು ಶಾರದಾ ಹಾಗೂ ಗಾಯಕ ದಲೇರ್ ಮೆಹಂದಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್‌ನಲ್ಲಿ ತೋರಿಸಿರುವಂತೆ, ಅಕ್ಷಯ್ ಕುಮಾರ್ ಅವರು ಸತತ ಸೋಲುಗಳಿಂದ ಕಂಗಾಲಾಗಿರುವ ಒಬ್ಬ ಫ್ಲಾಪ್ ನಟನ ಪಾತ್ರದಲ್ಲಿದ್ದಾರೆ. ಹಿಟ್ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ನಟಿಸುವ ಮೂಲಕ ತನ್ನ ವೃತ್ತಿಜೀವನವನ್ನು ಮತ್ತೆ ಮರುಸ್ಥಾಪಿಸಲು ಅವರು ಹರಸಾಹಸ ಪಡುತ್ತಾರೆ. ಇದೇ ವೇಳೆ ಚಿತ್ರದ ಶೂಟಿಂಗ್‌ಗಾಗಿ ಇಡೀ ಚಿತ್ರತಂಡ ಗಡಿ ಭಾಗದಲ್ಲಿರುವ ಒಂದು ಹಳ್ಳಿಗೆ ತೆರಳುತ್ತದೆ.

‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದ ಟ್ರೇಲರ್:

ಆದರೆ ಅಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗುತ್ತದೆ. ಹಳ್ಳಿಯ ಜನರು ಈ ಸಿನಿಮಾ ತಂಡವನ್ನು ನಿಜವಾದ ಭಾರತೀಯ ಸೇನೆಯ ಸೈನಿಕರು ಎಂದು ತಪ್ಪಾಗಿ ಭಾವಿಸುತ್ತಾರೆ. ಅಲ್ಲದೆ, ಕ್ರೂರ ವಿಲನ್ ಜಾಕಿ ಶ್ರಾಫ್ ಗ್ಯಾಂಗ್‌ನಿಂದ ತಮ್ಮನ್ನು ರಕ್ಷಿಸುವಂತೆ ಇವರ ಬಳಿ ಬೇಡಿಕೊಳ್ಳುತ್ತಾರೆ. ಹಳ್ಳಿಯ ನಿವಾಸಿಯಾಗಿರುವ ರವೀನಾ ಟಂಡನ್ ಅವರು, ‘ನಮ್ಮನ್ನು ರಕ್ಷಿಸಲು ಬರಲು ಆರ್ಮಿಗೆ 20 ವರ್ಷ ಬೇಕಿತ್ತಾ?’ ಎಂದು ಅಕ್ಷಯ್ ಕುಮಾರ್ ಕಾಲು ಎಳೆಯುವ ದೃಶ್ಯ ನಗುವಿನ ಅಲೆ ಎಬ್ಬಿಸುತ್ತದೆ. ಈ ಇಡೀ ‘ನಕಲಿ ಸಿನಿಮಾ ಶೂಟಿಂಗ್’ ಪ್ರಕ್ರಿಯೆಯನ್ನು ಬರೋಬ್ಬರಿ 2,000 ಕೋಟಿ ರೂ. ಬಜೆಟ್‌ನಲ್ಲಿ ಮಾಡಲಾಗುತ್ತದೆ ಎಂಬುದು ಮತ್ತೊಂದು ಫನ್.

ಈ ಸಿನಿಮಾಗೆ ‘ವೆಲ್​ಕಮ್’ ಸಿನಿಮಾದ ಹಳೆಯ ಲಿಂಕ್ ಇದೆ. ಈ ಹಿಂದಿನ ‘ವೆಲ್ಕಮ್’ ಸಿನಿಮಾಗಳಲ್ಲಿ ನಾನಾ ಪಾಟೇಕರ್ ಮಾಡಿದ್ದ ಉದಯ್ ಭಾಯ್ ಪಾತ್ರದ ನೆನಪಿಗೆ ಇಲ್ಲಿ ಸುನಿಲ್ ಶೆಟ್ಟಿಯನ್ನು ‘ಉದಯ್ ಕಾ ಭಾಯ್’ ಎಂದು ಹಾಗೂ ಅನಿಲ್ ಕಪೂರ್ ಅವರ ಮಜ್ನು ಭಾಯ್ ಪಾತ್ರದ ರೆಫರೆನ್ಸ್ ಆಗಿ ಅರ್ಷದ್ ವಾರ್ಸಿಯನ್ನು ‘ಮಜ್ನು ಕಾ ಭಾಯ್’ ಎಂದು ಪರಿಚಯಿಸಲಾಗಿದೆ.

ಇದನ್ನೂ ಓದಿ: 1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್

ಒಂದೆಡೆ ಕಾಮಿಡಿ ಪಂಚ್‌ಲೈನ್‌ಗಳು ಮತ್ತು ಕನ್ಫ್ಯೂಷನ್ ಡ್ರಾಮಾಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರೆ, ಟ್ರೇಲರ್‌ನ ಕೊನೆಯಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ತಂಡ ನಿಜವಾಗಿಯೂ ಗ್ರಾಮಸ್ಥರ ಪರವಾಗಿ ಹೋರಾಡಲು ನಿರ್ಧರಿಸುತ್ತದೆ. ತದನಂತರ ಹೈ-ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌ಗಳು ಹಾಗೂ ಭೀಕರ ಗುಂಡಿನ ಚಕಮಕಿಗಳು ಆರಂಭವಾಗುತ್ತವೆ. ಆ ಮೂಲಕ ಸಿನಿಮಾದ ಮೇಲೆ ಕೌತುಕ ಮೂಡಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ – Kannada News

ಟೆಹ್ರಾನ್, ಜೂನ್ 11: ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ದೇಶವು ಜಾಗತಿಕವಾಗಿ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚುವುದಾಗಿ ಘೋಷಿಸಿದೆ. ಇರಾನ್‌ನ ಇಂಟರ್ನ್ಯಾಷನಲ್ ಸೆಂಟ್ರಲ್ ಕಮಾಂಡ್ ಅನ್ನು ಉಲ್ಲೇಖಿಸಿ ಅಲ್ಲಿನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ವರದಿ ಮಾಡಿದೆ.

ಇಂದು ಬಿಡುಗಡೆಯಾದ ಖಾತಮ್ ಅಲ್-ಅನ್ಬಿಯಾ ಸೆಂಟ್ರಲ್ ಹೆಡ್‌ಕ್ವಾರ್ಟರ್ಸ್‌ನ ಅಧಿಕೃತ ಹೇಳಿಕೆಯನ್ನು ಪ್ರೆಸ್ ಟಿವಿ ಪ್ರಸಾರ ಮಾಡಿದೆ. ಈ ಆದೇಶದ ಪ್ರಕಾರ, ತೈಲ ಟ್ಯಾಂಕರ್‌ಗಳು ಮತ್ತು ವಾಣಿಜ್ಯ ಹಡಗುಗಳು ಸೇರಿದಂತೆ ಎಲ್ಲಾ ರೀತಿಯ ನೌಕೆಗಳ ಸಂಚಾರಕ್ಕೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಪ್ರಕಟಿಸಲಾಗಿದೆ. ಅಷ್ಟೇ ಅಲ್ಲದೆ, ಯಾವುದೇ ಹಡಗುಗಳು ಈ ಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸಿದರೆ ಅವುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಇರಾನ್ ಎಚ್ಚರಿಸಿದೆ.

ದಕ್ಷಿಣ ಇರಾನ್ ಪ್ರಾಂತ್ಯದ ಮೇಲೆ ಅಮೆರಿಕ ನಡೆಸಿದ ದಾಳಿಗಳು ಸೇರಿದಂತೆ, ಯುಎಸ್ ನಿರಂತರವಾಗಿ ಕೈಗೊಳ್ಳುತ್ತಿರುವ ವೈರತ್ವದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಇರಾನ್‌ನ ಪ್ರಕಟಣೆ ತಿಳಿಸಿದೆ. ಇರಾನ್‌ನ ಈ ಘೋಷಣೆಯನ್ನು ಅಮೆರಿಕದ ಮಿಲಿಟರಿ ತಕ್ಷಣವೇ ತಳ್ಳಿಹಾಕಿದೆ. ಯುಎಸ್ ಸೆಂಟ್ರಲ್ ಕಮಾಂಡ್ ಪ್ರತಿಕ್ರಿಯಿಸಿದ್ದು, “ವಾಣಿಜ್ಯ ಹಡಗುಗಳು ಇಂದೂ ಸಹ ಎಂದಿನಂತೆ ಹಾರ್ಮುಜ್ ಜಲಸಂಧಿಯ ಒಳಗೆ ಮತ್ತು ಹೊರಗೆ ಮುಕ್ತವಾಗಿ ಸಂಚರಿಸುತ್ತಿವೆ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಹಾರ್ಮುಜ್​ನಲ್ಲಿ ಭಾರಿ ಮಿಲಿಟರಿ ಸಂಘರ್ಷ, ಅಮೆರಿಕ ಇರಾನ್ ನಡುವೆ ದಾಳಿ, ಪ್ರತಿದಾಳಿ

ಈ ಬಗ್ಗೆ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಯುಎಸ್ ಸೆಂಟ್ರಲ್ ಕಮಾಂಡ್, “ಅಮೆರಿಕದ ಯಾವುದೇ ಯುದ್ಧನೌಕೆಗಳ ಮೇಲೆ ದಾಳಿಯಾಗಿಲ್ಲ,” ಎಂದು ತಿಳಿಸಿದೆ. ಜಲಸಂಧಿಯಲ್ಲಿ ವಾಷಿಂಗ್ಟನ್‌ನ ಯುದ್ಧನೌಕೆಯೊಂದರ ಮೇಲೆ ಟೆಹ್ರಾನ್ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಗಳನ್ನು ಅಮೆರಿಕ ಸಂಪೂರ್ಣ ಸುಳ್ಳು ಸುದ್ದಿ ಎಂದು ತಿರಸ್ಕರಿಸಿದೆ.

ಅಮೆರಿಕದ ಹೊಸ ದಾಳಿಗಳ ನಡುವೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದೆ. ಇದರ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಗಳು ತಕ್ಷಣವೇ ಶೇ. 2ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆಯ ಅತ್ಯಂತ ಪ್ರಮುಖ ಜಲಮಾರ್ಗವಾಗಿರುವುದರಿಂದ, ಈ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ಇಂಧನ ಬೆಲೆಗಳು ಮತ್ತಷ್ಟು ಗಗನಕ್ಕೇರಲಿವೆ ಎಂಬ ಭೀತಿ ವ್ಯಕ್ತವಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೇಲೆ ಅಮೆರಿಕದ ಹೆಲಿಕಾಪ್ಟರ್‌ ಪತನ; ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆಂದ ಟ್ರಂಪ್

ಈ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಎದುರಾಗಲಿರುವ ಸವಾಲುಗಳು ಅತ್ಯಂತ ಗಂಭೀರವಾಗಿವೆ. ಭಾರತವು ತನಗೆ ಅಗತ್ಯವಿರುವ ಕಚ್ಚಾ ತೈಲದ ಸುಮಾರು ಶೇ. 88ರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸರಿಸುಮಾರು ಅರ್ಧದಷ್ಟು ತೈಲ ಆಮದುಗಳು ಹಾರ್ಮುಜ್ ಜಲಸಂಧಿಯ ಮೂಲಕವೇ ಭಾರತವನ್ನು ತಲುಪುತ್ತವೆ. ಇದರೊಂದಿಗೆ, ಭಾರತವು ಬಳಸುವ ಒಟ್ಟು ಎಲ್‌ಪಿಜಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದೂ ಸಹ ಇದೇ ಜಲಸಂಧಿಯ ಮಾರ್ಗವಾಗಿ ಬರುತ್ತದೆ. ಈ ಮಾರ್ಗದಲ್ಲಿ ವ್ಯತ್ಯಯ ಉಂಟಾದರೆ ಭಾರತದ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದ್ದು, ಅಗತ್ಯ ವಸ್ತುಗಳ ಬೆಲೆಗಳು ತೀವ್ರವಾಗಿ ಹೆಚ್ಚಾಗಲಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಭಕ್ತರೇ ಗಮನಿಸಿ, ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ: ನಾಳೆ ಈ ಸಮಯದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಇರುವುದಿಲ್ಲ – Kannada News

ಕೊಲ್ಲೂರು, ಜೂ.11: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ನಾಳೆ (ಜೂನ್ 12, ಶುಕ್ರವಾರ) ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ. ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ದೇವಸ್ಥಾನದ ಸುತ್ತಮುತ್ತ ಹಾಗೂ ಮುಖ್ಯಮಂತ್ರಿಗಳು ಸಂಚರಿಸುವ ಮಾರ್ಗದುದ್ದಕ್ಕೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಅತ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಸಾರ್ವಜನಿಕರು ಹಾಗೂ ದೂರದೂರುಗಳಿಂದ ಬರುವ ಭಕ್ತಾದಿಗಳಿಗೆ ದರ್ಶನದ ವೇಳೆ ಅನಾನುಕೂಲವಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆಯು ಮಹತ್ವದ ಮಾರ್ಗಸೂಚಿ ಪ್ರಕಟಣೆಯನ್ನು ಹೊರಡಿಸಿದೆ.

ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೇವಲ ದೇವಿಯ ದರ್ಶನ ಮತ್ತು ವಿಶೇಷ ಪೂಜೆಗಾಗಿ ಮಾತ್ರ ಕೊಲ್ಲೂರಿಗೆ ಆಗಮಿಸುತ್ತಿದ್ದು, ಪೂಜೆಯ ಬಳಿಕ ತಮಿಳುನಾಡಿಗೆ ಹಿಂದಿರುಗಲಿದ್ದಾರೆ. ಈ ಪ್ರವಾಸದ ವೇಳೆ ಅವರ ಯಾವುದೇ ಸಾರ್ವಜನಿಕ ಭೇಟಿ ಅಥವಾ ರಾಜಕೀಯ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಇಲ್ಲಿದೆ ನೋಡಿ ಎಕ್ಸ್​​​​​ ಪೋಸ್ಟ್​:

ಭಕ್ತಾದಿಗಳಿಗೆ ಪೊಲೀಸ್ ಇಲಾಖೆಯ ಪ್ರಮುಖ ಸೂಚನೆಗಳು:

ದರ್ಶನದ ಸಮಯ ಬದಲಾವಣೆ ಸೂಕ್ತ: ವಿವಿಐಪಿ (VVIP) ಭೇಟಿ ಮತ್ತು ವಿಶೇಷ ಭದ್ರತಾ ಹಿತದೃಷ್ಟಿಯಿಂದ ಜೂನ್ 12ರ ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಭಕ್ತಾದಿಗಳು ದೇವಸ್ಥಾನಕ್ಕೆ ಬರುವುದನ್ನು ಮತ್ತು ದರ್ಶನ ಪಡೆಯುವುದನ್ನು ತಪ್ಪಿಸುವುದು ಸೂಕ್ತ ಎಂದು ಹೇಳಲಾಗಿದೆ.

ಪ್ರವೇಶ ನಿಷೇಧವಿಲ್ಲ, ಆದರೆ ವಿಳಂಬ ಸಾಧ್ಯತೆ: ಭಕ್ತಾದಿಗಳಿಗೆ ಯಾವುದೇ ಸಮಯದಲ್ಲಿ ದೇವಸ್ಥಾನ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ. ಆದರೆ, ಸಿಎಂ ಭೇಟಿಯ ಭದ್ರತಾ ತಪಾಸಣೆಗಳ ಕಾರಣದಿಂದಾಗಿ ಸಾಮಾನ್ಯ ದರ್ಶನದ ವೇಳೆ ಭಕ್ತರಿಗೆ ತೀವ್ರ ಅನಾನುಕೂಲ ಹಾಗೂ ವಿಳಂಬವಾಗಬಹುದು.

ಗುಂಪು ಸೇರುವುದಕ್ಕೆ ನಿರ್ಬಂಧ: ಮುಖ್ಯಮಂತ್ರಿಗಳ ವಾಹನ ಸಂಚಾರದ ಕಾನ್ವಾಯ್ ಸಾಗುವ ಹಾದಿ, ದೇವಸ್ಥಾನದ ಮುಖ್ಯ ಪ್ರವೇಶ ದ್ವಾರಗಳು ಹಾಗೂ ಮೂಕಾಂಬಿಕಾ ದೇವಸ್ಥಾನದ ಒಳಗಿನ ಆವರಣದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಗುಂಪು ಸೇರುವುದು ಅಥವಾ ಜನಸಂದಣಿ ಉಂಟುಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಜೂನ್​​ 12ರಂದು ಕೊಲ್ಲೂರಿಗೆ ತಮಿಳುನಾಡು ಸಿಎಂ ಭೇಟಿ: ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಲಿರುವ ವಿಜಯ್​​

ಹೈ-ಪ್ರೊಫೈಲ್ ಬಂದೋಬಸ್ತ್ ಇರುವುದರಿಂದ ಕೊಲ್ಲೂರಿಗೆ ಬರುವ ಸಾರ್ವಜನಿಕರು ಹಾಗೂ ಭಕ್ತಾದಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಮತ್ತು ಅನಾನುಕೂಲಗಳನ್ನು ತಪ್ಪಿಸಲು ತಮ್ಮ ದರ್ಶನದ ಸಮಯವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿಎಂ ಪವನ್ ಕಲ್ಯಾಣ್​​ರ ಭೇಟಿಯಾದ ನಟ ಅಲ್ಲು ಅರ್ಜುನ್: ಕಾರಣ? – Kannada News

ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಮತ್ತು ಅಲ್ಲು ಅರ್ಜುನ್ ನಡುವೆ ಎಲ್ಲವೂ ಸರಿ ಇರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ಅಲ್ಲು ಅರ್ಜುನ್ ಅವರು, ಎದುರಾಳಿ ಪಕ್ಷದ ಒಬ್ಬ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಆದರೆ ಪವನ್ ಕಲ್ಯಾಣ್ ಅವರ ಪರವಾಗಿ ಪ್ರಚಾರ ಮಾಡಿರಲಿಲ್ಲ, ಬದಲಿಗೆ ಪವನ್ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಪವನ್ ಅವರ ಸಹೋದರ ನಾಗಬಾಬು ಅಂತೂ ಅಲ್ಲು ಅರ್ಜುನ್ ಅವರ ಬಗ್ಗೆ ಸಿಟ್ಟಿನಿಂದ ಪೋಸ್ಟ್ ಸಹ ಹಂಚಿಕೊಂಡಿದ್ದರು. ಬಳಿಕ ಅಲ್ಲು ಅರ್ಜುನ್ ಸಹ ಪರೋಕ್ಷವಾಗಿ ಪವನ್ ವಿರುದ್ಧ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು. ಪವನ್ ಕಲ್ಯಾಣ್ ಸಹ ಕರ್ನಾಟಕಕ್ಕೆ ಬಂದಾಗ, ಅಲ್ಲು ಅರ್ಜುನ್ ಅವರ ‘ಪುಷ್ಪ’ ಸಿನಿಮಾ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಆದ ಬಳಿಕ ಇದೀಗ ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಅವರನ್ನು ಭೇಟಿ ಆಗಿದ್ದಾರೆ.

ಬುಧವಾರ (ಜೂನ್ 10) ರಾತ್ರಿ ಪವನ್ ಕಲ್ಯಾಣ್ ಅವರ ಮನೆಗೆ ತೆರಳಿದ ಅಲ್ಲು ಅರ್ಜುನ್, ಪವನ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆ ನಡೆದಿದೆ. ಕೆಲವು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಅವರು, ಇದೀಗ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಬಹಳ ಮುಖ್ಯವಾದ ಕಾರ್ಯಕ್ರಮಗಳಿದ್ದರೆ ಮಾತ್ರ ಪವನ್ ಹೊರಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಸಿನಿಮಾ ಮತ್ತು ರಾಜಕೀಯ ಗಣ್ಯರು ಪವರ್ ಸ್ಟಾರ್ ಮನೆಗೆ ತೆರಳಿ ಅವರನ್ನು ಆರೋಗ್ಯ ವಿಚಾರಿಸುತ್ತಿದ್ದಾರೆ. ಖುದ್ದು ಪ್ರಧಾನಿ ಮೋದಿ ಸಹ ಪವನ್ ಮನೆಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದ್ದರು. ಇದೀಗ ಅల్లు ಅರ್ಜುನ್ ಅವರು ಪವನ್ ಕಲ್ಯಾಣ್ ಮನೆಗೆ ತೆರಳಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ:‘ಈ ಬೆದರಿಕೆ ಬೇಡ’: ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರೈ ಎಚ್ಚರಿಕೆ

ಕಳೆದ ಕೆಲ ತಿಂಗಳುಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ‘ಮೆಗಾ’ ಮತ್ತು ‘ಅಲ್ಲು’ ಅಭಿಮಾನಿಗಳ ನಡುವೆ ವಾಕ್ಸಮರ ನಡೆಯುತ್ತಿದೆ. ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಶೀತಲ ಸಮರ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದರೆ, ಇವೆಲ್ಲವೂ ಕೇವಲ ವದಂತಿಗಳಷ್ಟೇ ಎಂದು, ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಎರಡೂ ಕುಟುಂಬಗಳಿಗೆ ಆಪ್ತರಾದವರು ಹೇಳುತ್ತಿದ್ದಾರೆ. ಅಲ್ಲದೆ, ಮೆಗಾ ಮತ್ತು ಅಲ್ಲು ಕುಟುಂಬದ ನಟರು ಕೂಡ ತುಂಬಾ ಆಪ್ತವಾಗಿಯೇ ಇದ್ದಾರೆ. ಒಬ್ಬರ ಸಿನಿಮಾಗಳ ಬಗ್ಗೆ ಮತ್ತೊಬ್ಬರು ಟ್ವೀಟ್‌ಗಳು ಮತ್ತು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಈಗ ಅల్లు ಅರ್ಜುನ್ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ವಿಚಾರಿಸಿದ್ದಾರೆ. ಆ ಮೂಲಕ ವದಂತಿಗಳಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

ಅల్లు ಅರ್ಜುನ್ ತಮ್ಮ ಸಿನಿಮಾಗಳ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾವನ್ನು ಅತ್ಯಂತ ಪ್ರತಿಷ್ಠಿತವಾಗಿ ನಿರ್ಮಿಸುತ್ತಿದೆ. ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ರಾಕಾ’ ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ ಬನ್ನಿ. ಅದರ ಬಳಿಕ ಮಲಯಾಳಂ ನಟ ಬಾಸಿಲ್ ಜೋಸೆಫ್ ನಿರ್ದೇಶನದ ಸೂಪರ್ ಹೀರೋ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಾವು ಹೀಗೂ ಬರಬಹುದು: ಉಡುಪಿಯಲ್ಲಿ ತೆಂಗಿನಕಾಯಿ ಬಿದ್ದು ಹಸುಗೂಸು ಸಾವು – Kannada News

ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಸಾವುImage Credit source: Tv9 kannada

ಬ್ರಹ್ಮಾವರ, ಜೂ.11: ತಾಯಿಯ ಮಡಿಲಿಗಿಂತ ಸುರಕ್ಷಿತವಾದ ಜಾಗ ಈ ಪ್ರಪಂಚದಲ್ಲಿ ಮತ್ತೊಂದಿಲ್ಲ. ಆದರೆ, ಆ ವಿಧಿಯ ಕ್ರೂರ ಆಟಕ್ಕೆ ಆ ತಾಯಿಯ ಮಡಿಲು ಮಗುವನ್ನು ರಕ್ಷಿಸಲಾಗಲಿಲ್ಲ. ಹೆತ್ತ ಒಡಲ ಎದೆಗಪ್ಪಿ ಕುಳಿತಿದ್ದ ಒಂದೂವರೆ ವರ್ಷದ ಮುದ್ದಾದ ಕಂದಮ್ಮನ ಮೇಲೆ ಆಕಸ್ಮಿಕವಾಗಿ ತೆಂಗಿನಕಾಯಿ ಬಿದ್ದು ಪ್ರಾಣ ಕಳೆದುಕೊಂಡ ಅತ್ಯಂತ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಹೆರಂಜೆ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಇಡೀ ಗ್ರಾಮದಲ್ಲಿ ಶೋಕ ಸಾಗರದಲ್ಲಿ ಮುಳುಗಿಸಿದೆ.

ಚಾಂತಾರು ಹೆರಂಜೆ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಎರಡನೇ ಪುತ್ರ ದಕ್ಷ (ಒಂದೂವರೆ ವರ್ಷ) ಮೃತಪಟ್ಟ ದುರ್ದೈವಿ. ತನ್ನ ಮುಗ್ಧ ನಗು ಹಾಗೂ ತೊದಲು ನುಡಿಗಳಿಂದ ಇಡೀ ಮನೆಯವರಿಗೆ ಪ್ರೀತಿಯನ್ನು ನೀಡುತ್ತಿದ್ದ ಮುದ್ದಿನ ಕಂದನ ಬದುಕು ಇಷ್ಟೊಂದು ಬೇಗ ಕಮರಿ ಹೋಗುತ್ತದೆ ಎಂದು ಹೆತ್ತವರು ಕನಸಿನಲ್ಲೂ ಯೋಚಿಸಿರಲಿಲ್ಲ.

ಮನೆಯ ಸಮೀಪ ತಾಯಿ ಸುಚಿತ್ರಾ ಅವರು ಮಗುವನ್ನು ಎತ್ತಿಕೊಂಡು ಮಡಿಲಲ್ಲಿ ಇಟ್ಟುಕೊಂಡಿದ್ದ ವೇಳೆ, ಸಮೀಪದ ತೆಂಗಿನ ಮರದಿಂದ ಏಕಾಏಕಿ ತೆಂಗಿನಕಾಯಿಯೊಂದು ಉದುರಿ ನೇರವಾಗಿ ಮಗುವಿನ ತಲೆಯ ಮೇಲೆ ಬಿದ್ದಿದೆ. ದೊಡ್ಡ ಪೆಟ್ಟಿನಿಂದಾಗಿ ಮಗು ದಕ್ಷ ತೀವ್ರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾನೆ. ಘಟನೆಯಿಂದ ತಾಯಿ ಹಾಗೂ ಕುಟುಂಬಸ್ಥರು ಕಂಗೆಟ್ಟು ಆಕ್ರಂದನ ಮುಗಿಲು ಮುಟ್ಟಿದೆ. ತಕ್ಷಣವೇ ಸ್ಥಳೀಯರ ಸಹಾಯದಿಂದ ರಕ್ತದ ಮಡುವಿನಲ್ಲಿದ್ದ ಮಗುವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇನ್ನು ವೈದ್ಯರು ಮಗುವಿನ ಪ್ರಾಣ ಉಳಿಸಲು ಹರಸಾಹಸ ಪಟ್ಟಿದ್ದು, ತುರ್ತು ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ, ತಲೆಗೆ ಬಲವಾದ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ. ಮಗು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಪೋಷಕರ ರೋದನ ನೋಡಲಾಗದಂತಿತ್ತು. ಮಗುವಿನ ಕಿಲಕಿಲ ನಗುವಿನಿಂದ ತುಂಬಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.

ಇದನ್ನೂ ಓದಿ: ಹಾಸ್ಟೆಲ್ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ; ಆಹಾರ ಸೇವಿಸಿದ್ದ 15 ವಿದ್ಯಾರ್ಥಿನಿಯರು ಅಸ್ವಸ್ಥ

ಈ ದುರಂತದ ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಗ್ರಾಮಸ್ಥರು ಮಗುವಿನ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದ್ದಾರೆ. ಚಾಂತಾರು ಸುತ್ತಮುತ್ತಲಿನ ಜನರು ಕಂಬನಿ ಮಿಡಿದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋರ್ಟ್ ಮಹತ್ವದ ಆದೇಶ: RTE ಅಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಿರಾಸೆ

ಬೆಂಗಳೂರು, (ಜೂನ್ 11): SC,ST ವಿದ್ಯಾರ್ಥಿಗಳಿಗೆ (Students)  RTE ಅಡಿ 8ನೇ ತರಗತಿವರೆಗೆ ಇದ್ದ ಉಚಿತ ಶಿಕ್ಷಣವನ್ನು (Free Education)  10ನೇ ತರಗತಿಯವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗೆ ಕೋರ್ಟ್​ ಮಧ್ಯಂತರ ತಡೆ ನೀಡಿದೆ. 2026ರ ಮೇ 21ರಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(KAMS) ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಪೀಠ, ಸರ್ಕಾರದ ಸುತ್ತೋಲೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • SC And ST ವಿದ್ಯಾರ್ಥಿಗಳಿಗೆ RTE ಅಡಿ 9, 10 ನೇ ತರಗತಿಗೆ ಪ್ರವೇಶ ವಿಚಾರ
  • ರಾಜ್ಯ ಸರ್ಕಾರದ ಸುತ್ತೋಲೆಗೆ ಹೈಕೋರ್ಟ್ ಮಧ್ಯಂತರ ತಡೆ
  • ಮೇ 21, 2026 ರಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು
  • ಸರ್ಕಾರದ ಕ್ರಮ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ

SC,ST ವಿದ್ಯಾರ್ಥಿಗಳ 8ನೇ ತರಗತಿವರೆಗಿನ RTE ಪ್ರವೇಶವನ್ನು 9, 10ನೇ ತರಗತಿಗೆ ವಿಸ್ತರಿಸಲಾಗಿದ್ದು, ಈ ಸಂಬಂಧ ಮೇ 21, 2026ರಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (KAMS) ಹೈಕೋರ್ಟ್​​​​ಗೆ ಮೊರೆ ಹೋಗಿದ್ದು, ಆರ್‌ಟಿಇ ಅಡಿ 6ರಿಂದ 14 ವರ್ಷದೊಳಗಿನವರಿಗೆ ಉಚಿತ ಶಿಕ್ಷಣಕ್ಕೆ ಅವಕಾಶವಿದೆ. SC, ST ವರ್ಗಕ್ಕೆ ಮಾತ್ರ 9, 10ನೇ ತರಗತಿಗೆ ವಿಸ್ತರಣೆಗೆ ಅವಕಾಶವಿಲ್ಲ. ಆರ್‌ಟಿಇ ಕಾನೂನಿನ ಉಲ್ಲಂಘನೆ, ಸಮಾನತೆಯ ಹಕ್ಕಿನ ಉಲ್ಲಂಘನೆ. ಹೀಗಾಗಿ ಸರ್ಕಾರದ ಸುತ್ತೋಲೆಗೆ ತಡೆ ನೀಡಲು ಆದೇಶಿಸಬೇಕೆಂದು ಮನವಿ ಮಾಡಿತ್ತು.ಇದನ್ನ ವಿಚಾರಣೆ ನಡೆಸಿದ ಕೋರ್ಟ್, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಮನವಿಯನ್ನು ಪುರಸ್ಕರಿಸಿದ್ದು, ಸುತ್ತೋಲೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಇದನ್ನೂ ಓದಿ: 6 ಸಾವಿರ ಕೊಟ್ರೆ ಒಂದು ವಿಷಯ ಪಾಸ್​​: ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮತ್ತೊಂದು ಕಳ್ಳಾಟ ಬಯಲು

ಆರ್‌ಟಿಐ ಅಡಿ ಖಾಸಗಿ ಶಾಲೆಗೆ ಸೇರಿರುವ ಮಕ್ಕಳಿಗೆ 8ನೇ ಕ್ಲಾಸ್‌ ವರೆಗೆ ಉಚಿತ ಶಿಕ್ಷಣಕ್ಕೆ ಅವಕಾಶ ಇತ್ತು.
ಆರ್‌ಟಿಇ ಕಾಯ್ದೆ ಜಾರಿಯಾದ ವರ್ಷದಿಂದ ಈವರೆಗೆ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸೀಟುಗಳಿಗೆ ಪ್ರವೇಶ ಪಡೆದಿರುವ ಮಕ್ಕಳಿಗೆ 8ನೇ ತರಗತಿ ವರೆಗಿನ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಸಂಬಂಧಿಸಿದ ಶಾಲೆಗಳಿಗೆ ಮರು ಪಾವತಿಸುತ್ತಾ ಬಂದಿದೆ. ಆದ್ರೆ, ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ 8ನೇ ತರಗತಿ ಮುಗಿದ ನಂತರವೂ ಅದೇ ಖಾಸಗಿ ಶಾಲೆಗಳಲ್ಲಿ 9 ಮತ್ತು 10ನೇ ತರಗತಿಯವರೆಗೆ ಉಚಿತ ಶಿಕ್ಷಣ ವಿಸ್ತರಿಸಿ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ? – Kannada News

ಹೆಚ್ಚಿನ ಜನರಿಗೆ ಗೊತ್ತಿಲ್ಲದ ಸಂಗತಿ ಇದು. ಇಪಿಎಫ್ (EPF) ಅಥವಾ ನೌಕರರ ಭವಿಷ್ಯ ನಿಧಿ ಖಾತೆ ಹೊಂದಿರುವವರಿಗೆ ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ₹7 ಲಕ್ಷದವರೆಗೆ ಉಚಿತ ಜೀವ ವಿಮೆ (Life Insurance) ಸೌಲಭ್ಯ ಸಿಗುತ್ತದೆ. ಇದನ್ನು ‘ಇಡಿಎಲ್‌ಐ’ (Employees’ Deposit Linked Insurance Scheme – EDLI) ಯೋಜನೆ ಎಂದು ಕರೆಯಲಾಗುತ್ತದೆ. ಇಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬ ಉದ್ಯೋಗಿಗೂ ಈ ವಿಮಾ ರಕ್ಷಣೆ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. ಈ ವಿಮಾ ಸೌಲಭ್ಯದ ಬಗ್ಗೆ ಇಪಿಎಫ್ ಖಾತೆದಾರರಲ್ಲೇ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಕೆಲಸ ಮಾಡುವ ಸಂಸ್ಥೆಗಳೂ ಕೂಡ ಉದ್ಯೋಗಿಗಳಿಗೆ ಈ ವಿಮೆಯ ಬಗ್ಗೆ ಮಾಹಿತಿ ನೀಡುವ ಗೋಜಿಗೆ ಹೋಗುವುದಿಲ್ಲ.

ಇಪಿಎಫ್ ಖಾತೆದಾರರಿಗೆ ಸಿಗುವ ಈ ವಿಮೆಗಾಗಿ ಉದ್ಯೋಗಿ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ ಅಥವಾ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕಾಗಿಲ್ಲ. ಕಂಪನಿಯು (Employer) ನಿಮ್ಮ ಇಪಿಎಫ್ ಖಾತೆಗೆ ಕೊಡುಗೆ ನೀಡುವಾಗ, ಅದರ ಜೊತೆಗೆ ಉದ್ಯೋಗಿಯ ಮೂಲ ವೇತನದ ಶೇ. 0.5 ರಷ್ಟು (ಗರಿಷ್ಠ ₹75) ಹಣವನ್ನು ಈ ಇಡಿಎಲ್‌ಐ ಯೋಜನೆಗೆ ಜಮಾ ಮಾಡುತ್ತದೆ.

ಅರ್ಹತೆ ಮತ್ತು ಹಣದ ಲೆಕ್ಕಾಚಾರ ಹೇಗೆ?

ಇಪಿಎಫ್ ಸದಸ್ಯರಿಗೆ ಏಳು ಲಕ್ಷ ರೂವರೆಗೆ ಜೀವ ವಿಮಾ ಕವರೇಜ್ ಇರುತ್ತದೆ. ಆದರೆ, ಕನಿಷ್ಠ 12 ತಿಂಗಳು ಅವರ ಇಪಿಎಫ್ ಅಕೌಂಟ್ ಸಕ್ರಿಯವಾಗಿರಬೇಕು. ಖಾತೆದಾರರು ಮೃತಪಟ್ಟಾಗ ಅವರ ಇಪಿಎಫ್ ಅಕೌಂಟ್ ಚಾಲ್ತಿಯಲ್ಲಿರಬೇಕು. ಯಾವುದೇ ಇಪಿಎಫ್ ಸದಸ್ಯರು ಉದ್ಯೋಗದಲ್ಲಿರುವಾಗ (In service) ಮರಣ ಹೊಂದಿದರೆ ಮಾತ್ರ ವಿಮಾ ರಕ್ಷಣೆ ಸಿಗುವುದು. ಅವರ ನಾಮಿನಿ (Nominee) ಅಥವಾ ಕಾನೂನುಬದ್ಧ ವಾರಸುದಾರರು ಈ ವಿಮಾ ಹಣವನ್ನು ಕ್ಲೈಮ್ ಮಾಡಬಹುದು.

ಇದನ್ನೂ ಓದಿ: ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ

₹7 ಲಕ್ಷ ವಿಮಾ ಕವರೇಜ್ ಲೆಕ್ಕಾಚಾರ

ಕಳೆದ 12 ತಿಂಗಳ ಸರಾಸರಿ ವೇತನ ಮತ್ತು ಪಿಎಫ್ ಬ್ಯಾಲೆನ್ಸ್ ಆಧಾರದ ಮೇಲೆ ಇದನ್ನು ಲೆಕ್ಕ ಹಾಕಲಾಗುತ್ತದೆ. ಉದ್ಯೋಗಿಯ ಮೂಲ ವೇತನ (Basic Salary) ಕಳೆದ 12 ತಿಂಗಳುಗಳಿಂದ ₹15,000 ಕ್ಕಿಂತ ಹೆಚ್ಚಾಗಿದ್ದು, ಅವರ ಒಟ್ಟು ಇಪಿಎಫ್ ಬ್ಯಾಲೆನ್ಸ್ ಸರಾಸರಿ ₹3.5 ಲಕ್ಷಕ್ಕಿಂತ ಹೆಚ್ಚಿದ್ದರೆ ಗರಿಷ್ಠ ₹7 ಲಕ್ಷ ಪೂರ್ಣ ಮೊತ್ತ ಸಿಗುತ್ತದೆ.

ಇದಕ್ಕೆ ಎರಡು ಅಂಶಗಳಿವೆ. ಕಳೆದ 12 ತಿಂಗಳ ಸರಾಸರಿ ಮಾಸಿಕ ವೇತನದ (ಗರಿಷ್ಠ ₹15,000) 35 ಪಟ್ಟು ಹಣ ಸಿಗುತ್ತದೆ. ಅಂದರೆ, ₹5.25 ಲಕ್ಷದವರೆಗೆ ಸಿಗಬಹುದು. ಎರಡನೇ ಅಂಶವು ಬೋನಸ್. ಇದು ಕಳೆದ 12 ತಿಂಗಳ ಸರಾಸರಿ ಪಿಎಫ್ ಬ್ಯಾಲನ್ಸ್​ನ ಶೇ. 50ರಷ್ಟು ಎಂದಿದೆ. ಇದನ್ನು ₹1.75 ಲಕ್ಷಕ್ಕೆ ಮಿತಿಗೊಳಿಸಲಾಗಿರುತ್ತದೆ. ಅಂದರೆ, 12 ತಿಂಗಳಲ್ಲಿ ಸರಾಸರಿ ಪಿಎಫ್ ಬ್ಯಾಲನ್ಸ್ 3.5 ಲಕ್ಷ ರೂ ಇದ್ದಾಗ ಪೂರ್ಣ 7 ಲಕ್ಷ ರೂ ವಿಮಾ ಕವರೇಜ್ ಸಿಗುತ್ತದೆ.

ಕನಿಷ್ಠ ವಿಮಾ ಮೊತ್ತ: ₹2.5 ಲಕ್ಷ

ಕಳೆದ ವರ್ಷ (2025) ಮಾಡಿದ ತಿದ್ದುಪಡಿಯ ಬಳಿಕ ಕನಿಷ್ಠ ಇಡಿಎಲ್​ಐ ಬೆನಿಫಿಟ್ ₹2.5 ಲಕ್ಷ ಇದೆ. ಒಂದು ವೇಳೆ, ಉದ್ಯೋಗಿಯ ಪಿಎಫ್ ಬ್ಯಾಲೆನ್ಸ್ ₹50,000 ಕ್ಕಿಂತ ಕಡಿಮೆ ಇದ್ದರೂ ಕನಿಷ್ಠ ₹50,000 ಸಿಗುವ ಭರವಸೆ ಇರುತ್ತದೆ.

ಕ್ಲೈಮ್ (Claim) ಮಾಡುವುದು ಹೇಗೆ?

ದುರದೃಷ್ಟವಶಾತ್ ಇಪಿಎಫ್ ಸದಸ್ಯರು ಮರಣ ಹೊಂದಿದರೆ, ಅವರ ಕುಟುಂಬದವರು ಈ ಕೆಳಗಿನ ಹಂತಗಳ ಮೂಲಕ ಹಣವನ್ನು ಪಡೆಯಬಹುದು:

  • ಫಾರ್ಮ್ 5 ಐಎಫ್ (Form 5 IF), ನಾಮಿನಿಯಾದವರು ಇಪಿಎಫ್ಒಗೆ ಈ ನಿಗದಿತ ಫಾರ್ಮ್ ಅನ್ನು ಸಲ್ಲಿಸಬೇಕು.
  • ಉದ್ಯೋಗಿಯ ಮರಣ ಪ್ರಮಾಣಪತ್ರ (Death Certificate), ನಾಮಿನಿಯ ಕೆವೈಸಿ (ಆಧಾರ್, ಪಾನ್ ಕಾರ್ಡ್), ಬ್ಯಾಂಕ್ ಪಾಸ್‌ಬುಕ್ ಪ್ರತಿ ಮತ್ತು ವಾರಸುದಾರರ ಪ್ರಮಾಣಪತ್ರಗಳನ್ನು ಲಗತ್ತಿಸಬೇಕು.
  • ಈ ಅರ್ಜಿಯನ್ನು ಉದ್ಯೋಗಿ ಕೆಲಸ ಮಾಡುತ್ತಿದ್ದ ಕಂಪನಿಯ ಮೂಲಕ ಅಥವಾ ನೇರವಾಗಿ ಇಪಿಎಫ್ಒ ಕಚೇರಿಗೆ ಸಲ್ಲಿಸಬಹುದು.

ಇದನ್ನೂ ಓದಿ: ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್​ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

ವಿಮೆ ಸರಿಯಾಗಿ ದಕ್ಕಬೇಕಾದರೆ ಇಪಿಎಫ್ ಸದಸ್ಯರು ಈ ಕೆಲಸ ಮಾಡಬೇಕು

  • ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ಇಪಿಎಫ್ ಖಾತೆಗೆ ‘ಇ-ನಾಮಿನೇಷನ್’ (e-Nomination) ಮಾಡಿರದಿದ್ದರೆ, ತತ್​ಕ್ಷಣವೇ ಆ ಕೆಲಸ ಮಾಡಿ.
  • ತಮ್ಮ ಯುಎಎನ್ ಹಾಗೂ ಇಪಿಎಫ್ ಖಾತೆಗಳ ವಿವರವನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳಬೇಕು.
  • ನಾಮಿನಿ ವಿವರಗಳು ಅಪ್‌ಡೇಟ್ ಆಗಿದ್ದರೆ ಮಾತ್ರ ಸಂಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಯಾವುದೇ ಅಡೆತಡೆಯಿಲ್ಲದೆ ವಿಮಾ ಹಣ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version