ಮುಂಗಾರು ಬಿತ್ತನೆಗೆ ಮುನ್ನ ರೈತರಿಗೆ ಖುಷಿ ಸುದ್ದಿ, ಯೂರಿಯಾ ಬೆಲೆ ಅರ್ಧಕರ್ಧ ಕುಸಿತ – Kannada News

ಯೂರಿಯಾ ಎರಚುತ್ತಿರುವ ರೈತImage Credit source: Getty Images

ನವದೆಹಲಿ, ಜೂನ್ 11: ಭಾರತದ ರೈತರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ದೊಡ್ಡ ನಿರಾಳತೆ ನೀಡುವ ಸುದ್ದಿಯೊಂದರ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರದ (Urea fertilizer) ಆಮದು ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ರಸಗೊಬ್ಬರ ಸಂಸ್ಥೆ (‘NFL’ – ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್) ಇತ್ತೀಚೆಗೆ ಆಯೋಜಿಸಿದ್ದ ಜಾಗತಿಕ ಟೆಂಡರ್‌ನಲ್ಲಿ ಯೂರಿಯಾ ಬೆಲೆ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ. ಎನ್‌ಎಫ್‌ಎಲ್ ನಡೆಸಿದ 1.7 ಮಿಲಿಯನ್ ಟನ್ ಯೂರಿಯಾ ಆಮದು ಟೆಂಡರ್‌ನಲ್ಲಿ, ಪ್ರತಿ ಟನ್‌ಗೆ $444.9 ರಿಂದ $449.3 ರಷ್ಟು ಕಡಿಮೆ ಬೆಲೆಯ ಬಿಡ್‌ಗಳು (Landed Price) ಬಂದಿವೆ. ಇದಕ್ಕೂ ಮುನ್ನ ‘ಇಂಡಿಯನ್ ಪೊಟ್ಯಾಶ್ ಲಿಮಿಟೆಡ್’ (IPL) ನಡೆಸಿದ್ದ ಟೆಂಡರ್‌ನಲ್ಲಿ ಪ್ರತಿ ಟನ್ ಯೂರಿಯಾ ಬೆಲೆ $935 ರಿಂದ $959 ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಈಗ ಯೂರಿಯಾ ಬೆಲೆ ಅರ್ಧಕ್ಕಿಂತಲೂ ಹೆಚ್ಚು ಕುಸಿದಿದೆ.

ಯೂರಿಯಾ ಬೆಲೆ ಇಳಿಕೆಗೆ ಪ್ರಮುಖ ಕಾರಣವೇನು?

ಮಾರ್ಚ್ ತಿಂಗಳಲ್ಲಿ ಚೀನಾ ದೇಶವು ಯೂರಿಯಾ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಆದರೆ ಈಗ ಚೀನಾ ತನ್ನ ರಫ್ತು ನಿರ್ಬಂಧಗಳನ್ನು ಭಾಗಶಃ ಸಡಿಲಗೊಳಿಸಿ, ಹೊಸ ರಫ್ತು ಕೋಟಾಗಳನ್ನು ಬಿಡುಗಡೆ ಮಾಡಿದೆ. ಜಾಗತಿಕ ಮಾರುಕಟ್ಟೆಗೆ ಚೀನಾದ ಯೂರಿಯಾ ಪೂರೈಕೆ ಆರಂಭವಾಗುತ್ತಿದ್ದಂತೆ ಬೆಲೆಗಳು ತಣ್ಣಗಾಗಿವೆ.

ಕಳೆದ ಹಣಕಾಸು ವರ್ಷದಲ್ಲಿ (2025-26) ಭಾರತವು ದಾಖಲೆಯ 11.17 ಮಿಲಿಯನ್ ಟನ್ ಯೂರಿಯಾವನ್ನು ಆಮದು ಮಾಡಿಕೊಂಡಿತ್ತು. ಇದರಲ್ಲಿ ಸಿಂಹಪಾಲು (2.23 ಮಿಲಿಯನ್ ಟನ್) ಚೀನಾದಿಂದಲೇ ಬಂದಿತ್ತು.

ಇದನ್ನೂ ಓದಿ: ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್

ಯೂರಿಯಾ ಬೆಲೆ ಕುಸಿತದಿಂದ ರೈತರಿಗೆ ಮತ್ತು ಸರ್ಕಾರಕ್ಕೆ ಆಗುವ ಲಾಭಗಳೇನು?

ಖಾರಿಫ್ ಹಂಗಾಮಿಗೆ ಸಕಾಲಿಕ ನೆರವು: ಪ್ರಸ್ತುತ ದೇಶದಲ್ಲಿ ಮುಂಗಾರು (ಖಾರಿಫ್) ಬಿತ್ತನೆ ಕಾರ್ಯಗಳು ಆರಂಭವಾಗುತ್ತಿವೆ. ಜುಲೈ ಅಂತ್ಯದ ವೇಳೆಗೆ ಈ ಅಗ್ಗದ ಯೂರಿಯಾ ಭಾರತದ ಬಂದರುಗಳನ್ನು ತಲುಪಲಿದ್ದು, ಆಗಸ್ಟ್‌ನಲ್ಲಿ ರೈತರ ಕೈಸೇರಲಿದೆ.

ಗೊಬ್ಬರ ಸಬ್ಸಿಡಿ ಹೊರೆ ಇಳಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಮತ್ತು ರಸಗೊಬ್ಬರ ಬೆಲೆಗಳು ಏರಿಕೆಯಾಗಿದ್ದರಿಂದ, ಈ ವರ್ಷ ಭಾರತ ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಬರೋಬ್ಬರಿ ₹3.40 ಲಕ್ಷ ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿತ್ತು (ಬಜೆಟ್‌ನಲ್ಲಿ ನಿಗದಿಪಡಿಸಿದ್ದು ₹1.70 ಲಕ್ಷ ಕೋಟಿ ಮಾತ್ರ). ಈಗ ಆಮದು ಬೆಲೆ ಇಳಿಕೆಯಾಗಿರುವುದರಿಂದ ಸರ್ಕಾರದ ಸಬ್ಸಿಡಿ ಹೊರೆ ಕೊಂಚ ತಗ್ಗಲಿದೆ.

ಇದನ್ನೂ ಓದಿ: ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

ಒಟ್ಟಾರೆ, ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದ್ದರಿಂದ ಗೊಬ್ಬರದ ಬೆಲೆ ತೀವ್ರವಾಗಿ ಏರಿತ್ತು. ಆದರೆ ಈಗ ಚೀನಾ ಪೂರೈಕೆಯನ್ನು ಆರಂಭಿಸಿರುವುದರಿಂದ ಜಾಗತಿಕವಾಗಿ ಯೂರಿಯಾ ಬೆಲೆ ಕುಸಿದಿದ್ದು, ಇದು ಮುಂಗಾರು ಹಂಗಾಮಿನಲ್ಲಿ ಭಾರತದ ಕೃಷಿ ಕ್ಷೇತ್ರಕ್ಕೆ ದೊಡ್ಡ ಸಮಾಧಾನ ತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರ್ನಾಟಕದಲ್ಲಿ 5 ದಿನ ವ್ಯಾಪಕ ಮಳೆ, ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ – Kannada News

ಬೆಂಗಳೂರು, (ಜುನ್ 11): ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಅಂದರೆ ಇಂದಿನಿಂದ ಜೂನ್ 15ರವರೆಗೆ ವ್ಯಾಪಕ ಮಳೆಯಾಗುವ (Monsoon Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ (South) ಜಾಗೂ ಉತ್ತರ ಒಳನಾಡ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ  ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಪ್ರಮುಖ ಜಿಲ್ಲೆಗಳ ಹವಾಮಾನ ಮುನ್ಸೂಚನೆ

ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಕರ್ನಾಟಕ: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಡಲ ತೀರದಲ್ಲಿ ಗಂಟೆಗೆ 30-40 ಕಿ.ಮೀ ಗಾಳಿಯ ವೇಗ ಇರಲಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳ ಲ್ಲಿ ಭಾರಿ ಮಳೆ ಹಾಗೂ ನಿರಂತರ ಗಾಳಿ (ಗಂಟೆಗೆ 30-40 ಕಿ.ಮೀ) ಬೀಸುವ ಸಾಧ್ಯತೆಯಿದೆ. ಇನ್ನು ಬಳ್ಳಾರಿ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆ ಹಾಗೂ ನಿರಂತರ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಗಂಟೆಗೆ 30ರಿಂದ40 ಕಿ.ಮೀ. ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ಸ್ಮಾರ್ಟ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಮಳೆಗಾಲದಲ್ಲಿ ಬಟ್ಟೆಗಳನ್ನು ಸುಲಭವಾಗಿ ಒಣಗಿಸಬುದು – Kannada News

ಮಳೆಗಾಲದಲ್ಲಿ (rainy season) ಒಗೆದ ಬಟ್ಟೆಗಳನ್ನು ಒಣಗಿಸುವುದು ತುಂಬಾ ಕಷ್ಟಕರವಾದ ಕೆಲಸ. ಈ ಋತುವಿನಲ್ಲಿ ಸರಿಯಾಗಿ ಸೂರ್ಯನ ಬೆಳಕು ಬೀಳದಿರುವ ಕಾರಣ, ವಾತಾರವರಣದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಒಗೆದ ಬಟ್ಟೆಗಳು ಬೇಗನೆ ಒಣಗುವುದಿಲ್ಲ. ಸರಿಯಾಗಿ ಒಣಗದಿದ್ದರೆ ಬಟ್ಟೆಗಳಿಂದ ಒಂದು ರೀತಿಯ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ. ಹಾಗಾಗಿ ಮಳೆಗಾಲ ಬಂತೆಂದರೆ ಸಾಕು ಹೆಚ್ಚಿನವರಿಗೆ ಬಟ್ಟೆ ಒಣಗಿಸುವುದು, ಬಟ್ಟೆಗಳು ವಾಸನೆ ಬಾರದಂತೆ ನೋಡಿಕೊಳ್ಳುವುದೇ ದೊಡ್ಡ ತಲೆ ಬಿಸಿಯಾಗಿರುತ್ತದೆ. ಹೀಗಿರುವಾಗ ಈ ಕೆಲವೊಂದು ಟ್ರಿಕ್ಸ್‌ಗಳನ್ನು ಪಾಲಿಸುವ ಮೂಲಕ ಒಗೆದ ಬಟ್ಟೆಗಳನ್ನು ಬಲು ಸುಲಭವಾಗಿ ಒಣಗಿಸಬಹುದು.

ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಈ ರೀತಿಯಾಗಿ ಒಣಗಿಸಿ:

ಬಟ್ಟೆಗಳನ್ನು ಚೆನ್ನಾಗಿ ಹಿಂಡಿ:  ಒಗೆದ ಬಟ್ಟೆಗಳಿಂದ ನೀರನ್ನು ಹಿಂಡಿ ತೆಗೆಯುವುದು ತುಂಬಾನೇ ಮುಖ್ಯ. ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆಯುತ್ತಿದ್ದೀರಿ ಎಂದಾದ್ರೆ ಎಕ್ಸ್‌ಟ್ರಾ ಸ್ಪಿನ್ ಅಥವಾ ಡ್ರೈಯರ್ ಮೋಡ್ ಅನ್ನು ಬಳಸಿಕೊಂಡು ಬಟ್ಟೆಗಳನ್ನು ಡ್ರೈ ಮಾಡಿ ನಂತರ ಒಣಗಲು ಹಾಕಿ. ವಾಷಿಂಗ್‌ ಮೆಷಿನ್‌ ಇಲ್ಲ ಎಂದಾದ್ರೆ ಬಟ್ಟೆಗಳನ್ನು ಚೆನ್ನಾಗಿ ಹಿಂಡಿ ಪೈಪ್‌ನಲ್ಲಿ ಪೈಪ್‌ನಲ್ಲಿ ನೇತುಹಾಕಿ. ಬಟ್ಟೆಯಿಂದ ನೀರು ಸಂಪೂರ್ಣವಾಗಿ ಬರಿದಾಗಲು ಬಿಡಿ ಮತ್ತು ನಂತರ ಅವುಗಳನ್ನು ಒಣಗಲು ಹಾಕಿ.

ಬಟ್ಟೆಗಳನ್ನು ದೂರ ದೂರ ಒಣಹಾಕಿ: ಇರಿಸಿ: ಬಟ್ಟೆಗಳನ್ನು ಒಣಗಿಸುವಾಗ, ಅವುಗಳನ್ನು ತುಂಬಾ ಹತ್ತಿರದಲ್ಲಿ ಜೋಡಿಸುವ ಬದಲು, ಅವುಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರುವಂತೆ ಹರಡಿ. ಅವುಗಳನ್ನು ತುಂಬಾ ಹತ್ತಿರದಲ್ಲಿ ಒಣ ಹಾಕಿದರೆ, ಬಟ್ಟೆಗಳು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಫ್ಯಾನ್ ಬಳಸಿ: ಮಳೆಗಾಲದಲ್ಲಿ ಎಲ್ಲರೂ ಸಾಮಾನ್ಯವಾಗಿ ಮನೆಯೊಳಗೆ ಬಟ್ಟೆಗಳನ್ನು ಒಣಗಿಸುತ್ತಾರೆ. ಹೀಗಿರುವಾಗ ಕೋಣೆಯಲ್ಲಿ ಟೇಬಲ್ ಫ್ಯಾನ್ ಅಥವಾ ಸೀಲಿಂಗ್ ಫ್ಯಾನ್ ಅನ್ನು ಆನ್ ಮಾಡಿ. ಫ್ಯಾನ್ ಗಾಳಿಯು ಬಟ್ಟೆಗಳಿಂದ ತೇವಾಂಶವನ್ನು ಸುಲಭವಾಗಿ ಆವಿಯಾಗಿಸಲು ಸಹಾಯ ಮಾಡುತ್ತದೆ.  ಮತ್ತು ಬಟ್ಟೆಗಳು ವೇಗವಾಗಿ ಒಣಗುತ್ತವೆ.

ಇಸ್ತ್ರಿ ಮಾಡಿ:  ನೀವು ಒದ್ದೆಯಾದ ಬಟ್ಟೆಯ ಮೇಲೆ ತೆಳುವಾದ ಟವಲ್ ಅನ್ನು ಇಟ್ಟು ಅದನ್ನು ಇಸ್ತ್ರಿ ಮಾಡಬಹುದು. ಇಸ್ತ್ರಿ ಮಾಡುವಾಗ ಉತ್ಪತ್ತಿಯಾಗುವ ಶಾಖವು ಬಟ್ಟೆಯಲ್ಲಿರುವ ತೇವಾಂಶ ಬೇಗನೆ ಆವಿಯಾಗುತ್ತದೆ. ಜೀನ್ಸ್ ಅಥವಾ ಸ್ವೆಟರ್‌ಗಳಂತಹ ದಪ್ಪ ಬಟ್ಟೆಗಳನ್ನು ಒಣಗಿಸಲು ಈ ವಿಧಾನವು ಉಪಯುಕ್ತವಾಗಿದೆ.

ಇದನ್ನೂ ಓದಿ:  ಒಣಗಿದ ನಿಂಬೆಯನ್ನು ಎಸೆಯುವ ಬದಲು ರೀತಿಯಾಗಿ ಉಪಯೋಗಿಸಿಕೊಳ್ಳಿ

ಹೇರ್‌ ಡ್ರೈಯರ್‌ ಬಳಸಿ: ಹೇರ್ ಡ್ರೈಯರ್ ಕೂದಲನ್ನು ಒಣಗಿಸಲು ಮಾತ್ರವಲ್ಲ, ಬಟ್ಟೆಗಳನ್ನು ಒಣಗಿಸಲು ಸಹ ಬಳಸಬಹುದು. ಅದನ್ನು ಹೀಟ್‌ ಮೋಡ್‌ಗೆ ಹೊಂದಿಸಿ ಮತ್ತು ಬಟ್ಟೆಗಳನ್ನು ಒಣಗಿಸಿ. ಕನಿಷ್ಠ ಐದು ನಿಮಿಷಗಳ ಕಾಲ ಈ ಪ್ರಕ್ರಿಯೆಯನ್ನು ಮುಂದುವರಿಸಿ, ನಂತರ ಆ ಬಟ್ಟೆಗಳನ್ನು ಅರ್ಧ ಘಂಟೆಯವರೆಗೆ ಫ್ಯಾನ್ ಅಡಿಯಲ್ಲಿ ಬಿಡಿ. ಅವು ಎಷ್ಟು ಚೆನ್ನಾಗಿ ಒಣಗುತ್ತವೆ.

ಹೀಟರ್ ಬಳಸಿ: ಸಾಮಾನ್ಯವಾಗಿ ಚಳಿಗಾಲದಲ್ಲಿ ಹೀಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಬಟ್ಟೆಗಳನ್ನು ಒಣಗಿಸಲು ನೀವು ಅವುಗಳನ್ನು ಬಳಸಬಹುದು. ನಿಮ್ಮ ಹೀಟರ್ ಅನ್ನು ಕೋಣೆಯಲ್ಲಿ ಇರಿಸಿ ಮತ್ತು ಬಟ್ಟೆ ಒಣಗಲು ಬಿಡಿ. ಹೀಟರ್‌ನಿಂದ ಬರುವ ಶಾಖವು ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸುತ್ತದೆ ಮತ್ತು ವಾಸನೆಯನ್ನು ನಿವಾರಿಸುತ್ತದೆ.

ವಾಸನೆ ತಡೆಯಲು ವಿನೆಗರ್ ಮತ್ತು ನಿಂಬೆ ಬಳಸಿ: ಮಳೆಗಾಲದಲ್ಲಿ ಬಟ್ಟೆಗಳು ಸಂಪೂರ್ಣವಾಗಿ ಒಣಗದಿದ್ದಾಗ, ಅವುಗಳಿಂದ ಅಹಿತಕರ ವಾಸನೆ ಬರಬಹುದು. ಇದನ್ನು ತಪ್ಪಿಸಲು, ನೀವು ಬಟ್ಟೆಗಳನ್ನು ತೊಳೆಯುವ ನೀರಿಗೆ ಒಂದು ಕಪ್ ವಿನೆಗರ್ ಅಥವಾ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು. ವಿನೆಗರ್ ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ವಾಸನೆಯನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸೀಸನಲ್ ರೋಗಗಳಿಂದ ದೂರವಿರಲು ಈ ರೀತಿ ಮಾಡಿ! – Kannada News

ದೇಶದ ಹಲವೆಡೆ ಹವಾಮಾನದಲ್ಲಿ ಬದಲಾವಣೆಯಾಗುತ್ತಿರುವುದನ್ನು ನೀವು ಕಾಣಬಹುದು. ಕೆಲವು ಕಡೆ ಮಳೆ ಸುರಿಯುತ್ತಿದ್ದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಈ ರೀತಿ ಹವಾಮಾನ ಬದಲಾಗುವ ಸಮಯದಲ್ಲಿ ಜ್ವರ, ಶೀತ, ಗಂಟಲು ಸೋಂಕು, ಫ್ಲೂ ಮುಂತಾದ ಸಮಸ್ಯೆಗಳು ಕಂಡುಬರುವುದು ಸಾಮಾನ್ಯ. ಆದರೆ ಈ ರೀತಿಯಾಗುವುದಕ್ಕೆ ಪ್ರಮುಖ ಕಾರಣ ದೇಹದ ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದು. ವೈದ್ಯರ ಪ್ರಕಾರ, ಏನೇ ಮಾಡಿದರೂ ಒಂದು ರಾತ್ರಿಯಲ್ಲಿ ಇಮ್ಯೂನಿಟಿ (Immunity) ಹೆಚ್ಚಿಸಿಕೊಳ್ಳುವ ಯಾವುದೇ ತ್ವರಿತ ವಿಧಾನಗಳಿಲ್ಲ. ಆದರೆ ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಹಾಗೂ ಒಳ್ಳೆಯ ಅಭ್ಯಾಸಗಳನ್ನು ನಿಯಮಿತವಾಗಿ ಪಾಲಿಸಿದರೆ ದೇಹದ ರೋಗನಿರೋಧಕ ಶಕ್ತಿ ಉತ್ತಮವಾಗಿರಿಸಿಕೊಳ್ಳಬಹುದು. ಇದರಿಂದ ಸೀಸನಲ್ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾದರೆ ನಮ್ಮ ದಿನಚರಿ ಹೇಗಿರಬೇಕು, ಯಾವ ಆಹಾರಗಳಿಂದ ದೂರವಿದ್ದರೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಮತೋಲನ ಆಹಾರ ಸೇವನೆ:

ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಖನಿಜಾಂಶಗಳು ದೊರೆಯಲು ಹಣ್ಣು, ತರಕಾರಿ, ಧಾನ್ಯ, ಡ್ರೈ ಫ್ರೂಟ್ಸ್ ಹಾಗೂ ಪ್ರೋಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ವಿಶೇಷವಾಗಿ ನಿಂಬೆ, ಕಿತ್ತಳೆ, ನೆಲ್ಲಿಕಾಯಿ ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್-ಸಿ ಸಮೃದ್ಧವಾಗಿದ್ದು, ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಲಭ್ಯವಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಸಾಕಷ್ಟು ನೀರು ಮತ್ತು ನಿದ್ರೆ:

ದೇಹ ಸರಿಯಾಗಿ ಕಾರ್ಯನಿರ್ವಹಿಸಲು ದಿನಪೂರ್ತಿ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಜೊತೆಗೆ ಪ್ರತಿದಿನ ಸರಿಯಾಗಿ ನಿದ್ರೆ ಮಾಡದಿದ್ದರೆ ರೋಗನಿರೋಧಕ ಶಕ್ತಿ ಕುಗ್ಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ!

ವ್ಯಾಯಾಮ ಮತ್ತು ಒತ್ತಡ ನಿಯಂತ್ರಣ:

ಪ್ರತಿದಿನ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ. ದೀರ್ಘಕಾಲದ ಒತ್ತಡ ದೇಹದ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಆದ್ದರಿಂದ ಮನಸ್ಸನ್ನು ಶಾಂತವಾಗಿಡುವುದು ಮತ್ತು ಒತ್ತಡ ನಿಯಂತ್ರಿಸುವುದು ಮುಖ್ಯ.

ಭಾರತೀಯ ಮಸಾಲೆಗಳ ಆರೋಗ್ಯ ಲಾಭಗಳು:

ಅರಿಶಿನ, ಶುಂಠಿ, ಬೆಳ್ಳುಳ್ಳಿ, ಮೆಣಸು ಹಾಗೂ ದಾಲ್ಚಿನ್ನಿಯಲ್ಲಿ ನೈಸರ್ಗಿಕ ಆಂಟಿ-ವೈರಲ್ ಮತ್ತು ಆಂಟಿ-ಬ್ಯಾಕ್ಟೀರಿಯಲ್ ಗುಣಗಳಿವೆ. ಪ್ರತಿದಿನ ಅರಿಶಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಲಾಭಕರ. ತುಳಸಿ, ಪುದೀನಾ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯಗಳು ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

ಯಾವ ಆಹಾರಗಳಿಂದ ದೂರ ಇರಬೇಕು?

ಜಂಕ್ ಫುಡ್, ಹೆಚ್ಚು ಎಣ್ಣೆಯ ಆಹಾರ, ಸಾಫ್ಟ್ ಡ್ರಿಂಕ್ಸ್ ಮತ್ತು ಅತಿಯಾದ ಸಕ್ಕರೆ ಇರುವ ಪದಾರ್ಥಗಳನ್ನು ಕಡಿಮೆ ಮಾಡುವುದು ಉತ್ತಮ. ಧೂಮಪಾನ ಮತ್ತು ಮದ್ಯಪಾನವೂ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ಆರೋಗ್ಯಕರ ಆಹಾರ, ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಒಳ್ಳೆಯ ಜೀವನಶೈಲಿಯೇ ದೇಹವನ್ನು ಒಳಗಿನಿಂದ ಬಲಪಡಿಸಿ ಸೀಸನಲ್ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ – Kannada News

ನವದೆಹಲಿ, ಜೂನ್ 11: ಒಮಾನ್ ಕರಾವಳಿಯ ಬಳಿ ವಾಣಿಜ್ಯ ಹಡಗೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ ಮೂವರು ಭಾರತೀಯ ನಾಗರಿಕರು ಸಾವನ್ನಪ್ಪಿರುವುದನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಈ ದಾಳಿಯನ್ನು “ಅತ್ಯಂತ ಆತಂಕಕಾರಿ” ಎಂದು ಹೇಳಿರುವ ಭಾರತ, ಇಂತಹ ದಾಳಿಗಳು ತಕ್ಷಣವೇ ಕೊನೆಗೊಳ್ಳಬೇಕು ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಗ್ರಹಿಸಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಕಡಲ ಸಂಘರ್ಷಗಳ ನಡುವೆ, ಒಮಾನ್ ದೇಶದ ಕರಾವಳಿ ತೀರದ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ನೌಕೆಯೊಂದರ ಮೇಲೆ ಇತ್ತೀಚೆಗೆ ಭೀಕರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಹಡಗಿನಲ್ಲಿದ್ದ ಸಿಬ್ಬಂದಿಗಳ ಪೈಕಿ ಮೂವರು ಭಾರತೀಯರು ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯವು (MEA) ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅಧಿಕೃತ ಪ್ರಕಟಣೆ ಹೊರಡಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ವಾಣಿಜ್ಯ ಮತ್ತು ಸರಕು ಸಾಗಣೆ ಹಡಗುಗಳ ಮೇಲೆ ನಡೆಯುತ್ತಿರುವ ಇಂತಹ ಸರಣಿ ದಾಳಿಗಳು ತೀವ್ರ ಕಳವಳಕಾರಿ ಎಂದು ಭಾರತ ಹೇಳಿದೆ. ಜಾಗತಿಕ ಸಾಗರ ಸುರಕ್ಷತೆ ಮತ್ತು ಮುಕ್ತ ಸಮುದ್ರಯಾನದ ಹಿತದೃಷ್ಟಿಯಿಂದ ವಾಣಿಜ್ಯ ನೌಕೆಗಳ ಮೇಲಿನ ದಾಳಿಗಳು ತಕ್ಷಣವೇ ನಿಲ್ಲಬೇಕು ಎಂದು ಭಾರತ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.

ಇದನ್ನೂ ಓದಿ: ಒಮಾನ್​ನ ಶಿನಾಸ್ ಬಂದರು ಬಳಿ 20 ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಅಮೆರಿಕದ ಮತ್ತೊಂದು ದಾಳಿ

ಒಮಾನ್ ಕರಾವಳಿಯ ಬಳಿ ಹಡಗಿನ ಮೇಲೆ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ. ಇದರಲ್ಲಿ ದುರದೃಷ್ಟವಶಾತ್ ನಾವು ಮೂವರು ಭಾರತೀಯ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಈ ಬಗ್ಗೆ ತೀವ್ರ ಪ್ರತಿಭಟನೆ ದಾಖಲಿಸಲು ನಾವು ಅಮೆರಿಕದ ಪ್ರಭಾರ ರಾಯಭಾರಿಯನ್ನು ಕರೆಸಿ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಈ ವಲಯದಲ್ಲಿ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳಕಾರಿಯಾಗಿದ್ದು, ಇದು ಪ್ರಾದೇಶಿಕ ಸಂಘರ್ಷದ ನೇರ ಪರಿಣಾಮವಾಗಿದೆ. ಈ ದಾಳಿಗಳು ತಕ್ಷಣವೇ ನಿಲ್ಲಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.

ಹಾರ್ಮುಜ್ ಜಲಸಂಧಿಯ ಬಳಿ ಪಲಾವ್ ದೇಶದ ಧ್ವಜ ಹೊಂದಿದ್ದ ‘ಎಂಟಿ ಸೆಟ್ಟೆಬೆಲ್ಲೊ’ ಹಡಗಿನ ಮೇಲೆ ದಾಳಿ ನಡೆದ ಬಳಿಕ ಭಾರತವು ಈ ವಿಷಯವನ್ನು ನೇರವಾಗಿ ವಾಷಿಂಗ್ಟನ್ ಆಡಳಿತದೊಂದಿಗೆ ಪ್ರಸ್ತಾಪಿಸಿದೆ ಎಂದು ಹೇಳಿದರು. ಪಲಾವ್ ಧ್ವಜದ ‘ಎಂಟಿ ಸೆಟ್ಟೆಬೆಲ್ಲೊ’ ಹಡಗಿನ ಮೇಲೆ ಈ ನಿರ್ದಿಷ್ಟ ದಾಳಿ ನಡೆದ ಹಿನ್ನೆಲೆಯಲ್ಲಿ ನಾವು ಅಮೆರಿಕದ ಕಡೆಗೆ ತೀವ್ರ ಪ್ರತಿಭಟನೆಯನ್ನು ದಾಖಲಿಸಿದ್ದೇವೆ. ನಾವು ಅಮೆರಿಕದ ಸಿಡಿಎ ಅವರನ್ನು ಕರೆಸಿ, ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ನಮ್ಮ ಆಳವಾದ ಕಳವಳವನ್ನು ತಿಳಿಸಿದ್ದೇವೆ ಎಂದು ಜೈಸ್ವಾಲ್ ಹೇಳಿದರು.

ಇದನ್ನೂ ಓದಿ: ಒಮಾನ್ ಕರಾವಳಿಯಲ್ಲಿ ಭಾರತೀಯರಿದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ, ನಾಪತ್ತೆಯಾಗಿದ್ದ ಮೂವರ ಸಾವು ದೃಢ

ಒಮಾನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಸ್ಥಳೀಯ ಆಡಳಿತ ಮತ್ತು ಹಡಗು ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮೃತಪಟ್ಟ ಮೂವರು ಭಾರತೀಯರ ಪಾರ್ಥಿವ ಶರೀರಗಳನ್ನು ಆದಷ್ಟು ಬೇಗ ಭಾರತಕ್ಕೆ ತರಲು ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ಕಾನೂನು ಹಾಗೂ ಆರ್ಥಿಕ ನೆರವನ್ನು ಒದಗಿಸಲು ರಾಯಭಾರ ಕಚೇರಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.

ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮಿತ್ರಕೂಟದ ನಡುವಿನ ಸಂಘರ್ಷದ ಬೆನ್ನಲ್ಲೇ ಈ ದಾಳಿ ನಡೆದಿರುವುದು ಜಾಗತಿಕವಾಗಿ ಭಾರಿ ಆತಂಕ ಮೂಡಿಸಿದೆ. ಹಾರ್ಮುಜ್ ಜಲಸಂಧಿ ಮೇಲಿನ ದಾಳಿಯು ಭಾರತ ಸೇರಿದಂತೆ ಹಲವು ದೇಶಗಳ ಆರ್ಥಿಕತೆ ಮತ್ತು ನಾವಿಕರ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಭಾರತೀಯ ನೌಕಾಪಡೆಯು ಈಗಾಗಲೇ ಈ ವಲಯದಲ್ಲಿ ತನ್ನ ಯುದ್ಧನೌಕೆಗಳ ಗಸ್ತನ್ನು ಹೆಚ್ಚಿಸಿದ್ದು, ಭಾರತೀಯ ಹಡಗುಗಳ ರಕ್ಷಣೆಗೆ ಸಂಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್‌ ಚುನಾವಣೆ : ಕಾಂಗ್ರೆಸ್‌‍ ಅಭ್ಯರ್ಥಿ ಮಳವಳ್ಳಿ ಶಿವಣ್ಣ ನಾಮಪತ್ರ ತಿರಸ್ಕರಿಸುವಂತೆ ದೂರು – Kannada News

ಬೆಂಗಳೂರು, (ಜೂನ್.11): ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ (Karnataka legislative council Election) ಕಾಂಗ್ರೆಸ್‌‍ (Congress) ಅಭ್ಯರ್ಥಿ ಮಳವಳ್ಳಿ ಶಿವಣ್ಣ (Malavalli Shivanna) ಅವರು ಕ್ರಿಮಿನಲ್‌ ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ ಎಂದು ಜೆಡಿಎಸ್‌‍ ದೂರು ನೀಡಿದೆ. ತಮ ಮೇಲೆ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳನ್ನು ಅಫಿಡವಿಟ್‌ನಲ್ಲಿ ಮಳವಳ್ಳಿ ಶಿವಣ್ಣ ಮುಚ್ಚಿಹಾಕಿದ್ದಾರೆ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಬಿಜೆಪಿ, ಜೆಡಿಎಸ್‌‍ ಬೆಂಬಲಿತ ಅಭ್ಯರ್ಥಿ ಗೋವಿಂದರಾಜು ಚುನಾವಣಾಧಿಕಾರಿ ಹಾಗೂ ವಿಧಾನಸಭಾ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ದೂರು ನೀಡಿದ್ದಾರೆ.

ಮುಖ್ಯಾಂಶಗಳು

  • ಪರಿಷತ್ ಚುನಾವಣೆ ‘ಕೈ’ ಅಭ್ಯರ್ಥಿ ಮಳವಳ್ಳಿ ಶಿವಣ್ಣ ವಿರುದ್ಧ ಮಾಹಿತಿ ಮುಚ್ಚಿಟ್ಟ ಆರೋಪ
  • ಚುನಾವಣಾಧಿಕಾರಿಗೆ ದೂರು ನೀಡಿದ JDS ಅಭ್ಯರ್ಥಿ ಗೋವಿಂದರಾಜು
  • ಮಳವಳ್ಳಿ ಶಿವಣ್ಣ ನಾಮಪತ್ರ ತಿರಸ್ಕೃತ ಮಾಡುವಂತೆ ಚುನಾವಣಾಧಿಕಾರಿಗೆ ದೂರು
  • ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ ಮಳವಳ್ಳಿ ಶಿವಣ್ಣ
  • ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಸ್ಪಷ್ಟನೆ

ಆರೋಪದಲ್ಲೇನಿದೆ?

ಮಳವಳ್ಳಿ ಶಿವಣ್ಣ ವಿರುದ್ಧ ಒಟ್ಟು ನಾಲ್ಕು ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿವೆ. ಇದು ಅಫಿಡವಿಟ್‌ನಲ್ಲಿ ಹಾಕಬೇಕೆಂಬ ನಿಯಮವಿಲ್ಲ ಎಂದು ಮುಚ್ಚಿಹಾಕಿದ್ದಾರೆ. ಅಫಿಡವಿಟ್‌ನಲ್ಲಿ ಯಾವುದೇ ಅಭ್ಯರ್ಥಿಗಳು ತಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಆದ್ರೆ, ಇಲ್ಲಿ ಅಭ್ಯರ್ಥಿಯು ಮುಚ್ಚಿ ಹಾಕಿರುವುದರಿಂದ ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿರುವುದ್ದು, ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ದೂರು ಸ್ವೀಕರಿಸಿರುವ ಚುನಾವಣಾಧಿಕಾರಿ ಈ ಬಗ್ಗೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ನೋಡಿ: ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

ಆರೋಪಕ್ಕೆ ಮಳವಳ್ಳಿ ಶಿವಣ್ಣ ಸ್ಪಷ್ಟನೆ

ಇನ್ನು ಈ ಆರೋಪ ಕೇಳಿಬರುತ್ತಿದ್ದಂತೆಯೇ ಕಾಂಗ್ರೆಸ್ ಅಭ್ಯರ್ಥಿ ಮಳವಳ್ಳಿ ಶಿವಣ್ಣ ಪ್ರತಿಕ್ರಿಯಿಸಿದ್ದು, ಸೋಲಿನ ಭೀತಿಯಿಂದ ಗೋವಿಂದರಾಜು ಹುನ್ನಾರ ಮಾಡುತ್ತಿದ್ದಾರೆ. ನನ್ನ ವಿರುದ್ಧ ಯಾವುದೇ ಕೇಸ್​ಗಳು ಇಲ್ಲ. ನಾಲ್ಕು ಕೇಸ್​ಗಳ ಬಗ್ಗೆ ನಾನು ದೂರು ಕೊಟ್ಟಿರುವುದು. ಎಂಎಲ್​ಸಿ ಹೆಚ್.ವಿಶ್ವನಾಥ್ ವಿರುದ್ಧ ನಾನು ದೂರು ನೀಡಿದ್ದೆ. ವೋಟ್ ಚೋರಿ ಹೋಗಿ ಈಗ ಸೀಟ್ ಚೋರಿ ಮಾಡಲು ಹೋಗುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಎಂಎಲ್​ಸಿ ಹೆಚ್​.ವಿಶ್ವನಾಥ್​ ನನ್ನ ವಿರುದ್ಧ ಹುನ್ನಾರ ಮಾಡಿದ್ದು, ಗೋವಿಂದರಾಜುಗೆ ಎಂಎಲ್​ಸಿ ಹೆಚ್​.ವಿಶ್ವನಾಥ್​ ಹೇಳಿ ಕಳುಹಿಸಿದ್ದಾರೆ. ನನ್ನ ವಿರುದ್ಧ ಒಂದು ಎಫ್​ಐಆರ್ ಸಹ ದಾಖಲಾಗಿಲ್ಲ. ಹುನ್ನಾರಕ್ಕೆ ಸೊಪ್ಪು ಹಾಕಲ್ಲ, ಪರಿಷತ್​ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಸ್ಪಷ್ಟಪಡಿಸಿರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧನುಷ್ ಮುಂದಿನ ಚಿತ್ರದಲ್ಲಿ ಸಾಯಿ ಪಲ್ಲವಿ ಪೊಲೀಸ್ ಅಧಿಕಾರಿ? ವೈರಲ್ ಆಗ್ತಿದೆ ‘ಡಿ55’ ಅಪ್‌ಡೇಟ್

ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi) ಅವರು ಸದಾ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಇದೀಗ ಕಾಲಿವುಡ್ ಸ್ಟಾರ್ ಧನುಷ್ (Dhanush) ಹಾಗೂ ಮಾಲಿವುಡ್ ಸ್ಟಾರ್ ಹೀರೋ ಮಮ್ಮುಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ ‘D55’ ಸಿನಿಮಾದಲ್ಲಿ ಸಾಯಿ ಪಲ್ಲವಿ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹರಿದಾಡುತ್ತಿರುವ ಲೇಟೆಸ್ಟ್ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಖಾಕಿ ಖದರ್ ತೋರಿಸಲಿದ್ದಾರೆ. ಅಂದರೆ, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಗಾಸಿಪ್ ಜೋರಾಗಿ ಕೇಳಿಬರುತ್ತಿದೆ.

ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘D55’ ಒಂದು ಹೈ-ವೋಲ್ಟೇಜ್ ಸ್ಪೈ ಆ್ಯಕ್ಷನ್ ಡ್ರಾಮಾ ಆಗಿರಲಿದೆ. ಈ ಹಿಂದೆ ‘ಮಾರಿ 2’ ಚಿತ್ರದ ‘ರೌಡಿ ಬೇಬಿ’ ಹಾಡಿನ ಮೂಲಕ ಧನುಷ್ ಮತ್ತು ಸಾಯಿ ಪಲ್ಲವಿ ಜೋಡಿ ಧೂಳೆಬ್ಬಿಸಿತ್ತು. ಈಗ ಮತ್ತೊಮ್ಮೆ ಈ ಜೋಡಿ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆದರೆ, ಸಾಯಿ ಪಲ್ಲವಿ ಅವರ ಪೊಲೀಸ್ ಪಾತ್ರದ ಬಗ್ಗೆ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಸದ್ಯ ಈ ಚಿತ್ರದ ಶೂಟಿಂಗ್ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಜುಲೈ 2026ರ ವೇಳೆಗೆ ಚಿತ್ರೀಕರಣ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಈ ನಡುವೆ ಚಿತ್ರದ ಟೈಟಲ್ ಬಗ್ಗೆಯೂ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಈ ಹಿಂದೆ ಧನುಷ್ ಅವರ ಹುಟ್ಟುಹಬ್ಬದ ದಿನದಂದು (ಜುಲೈ 28) ಶೀರ್ಷಿಕೆ ಅನಾವರಣ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗಿನ ಮಾಹಿತಿ ಪ್ರಕಾರ, ಚಿತ್ರತಂಡ ಈ ವಾರವೇ ಶೀರ್ಷಿಕೆಯನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ಚಿತ್ರದಲ್ಲಿ ಧನುಷ್ ಪಾತ್ರದ ಹೆಸರಾದ ‘ಚೆಳಿಯನ್’ ಎಂಬುದನ್ನೇ ಸಿನಿಮಾದ ಶೀರ್ಷಿಕೆಯನ್ನಾಗಿ ಇಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ಚಿತ್ರದಲ್ಲಿ ಮಮ್ಮುಟ್ಟಿ ಹಾಗೂ ಧನುಷ್ ಪ್ರಮುಖ ಪಾತ್ರಗಳಲ್ಲಿದ್ದರೆ, ಸಾಯಿ ಪಲ್ಲವಿ ಜೊತೆಗೆ ಮತ್ತೊಬ್ಬ ಜನಪ್ರಿಯ ನಟಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಈಗಾಗಲೇ ಈ ಚಿತ್ರಕ್ಕಾಗಿ ಎರಡು ಹಾಡುಗಳ ಸಂಯೋಜನೆಯನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಾಯಿ ಪಲ್ಲವಿ ಕೈತಪ್ಪಿದ ಮಧುಬಾಲಾ ಬಯೋಪಿಕ್ ಅವಕಾಶ: ಕಾರಣ ಏನು?

ಈ ಚಿತ್ರದ ಕೆಲಸ ಮುಗಿದ ನಂತರ ಧನುಷ್ ಅವರು ನಿರ್ದೇಶಕ ತಮಿಳರಸನ್ ಪಚ್ಚಮುತ್ತು ಜೊತೆ ಮಧುರೈ ಹಿನ್ನೆಲೆಯ ಆ್ಯಕ್ಷನ್ ಸಿನಿಮಾವೊಂದನ್ನು ಮಾಡಲಿದ್ದಾರೆ. ಇತ್ತ ಸಾಯಿ ಪಲ್ಲವಿ ಅವರು ರಣಬೀರ್ ಕಪೂರ್ ಮತ್ತು ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಸಿನಿಮಾ ಎರಡು ಭಾಗದಲ್ಲಿ ತಯಾರಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೊರಗುಂಟೆಪಾಳ್ಯದಲ್ಲಿ ಗ್ಯಾಸ್ ಲಾರಿ ಬ್ರೇಕ್ ಫೇಲ್ ಆಗಿ ಕೆಟಿಎಂ ಬೈಕ್‌ಗೆ ಡಿಕ್ಕಿ; ಲಾರಿ ಚಕ್ರದಡಿ ಸಿಲುಕಿ ದಂಪತಿ ಸಾವು – Kannada News

ಬೆಂಗಳೂರು, ಜೂ.11: ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಇಂದು (ಜೂ.11) ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಿಲಿಂಡರ್‌ಗಳಿಂದ ತುಂಬಿದ್ದ ಗ್ಯಾಸ್ ಲಾರಿಯೊಂದರ ಬ್ರೇಕ್ ಫೇಲ್ ಆದ ಪರಿಣಾಮ, ನಿಯಂತ್ರಣ ತಪ್ಪಿ ಕೆಟಿಎಂ ಡ್ಯೂಕ್ (KTM Duke) ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಬೈಕ್‌ನಲ್ಲಿದ್ದ ಪತಿ-ಪತ್ನಿ ಇಬ್ಬರೂ ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ನಾಗರಬಾವಿ ನಿವಾಸಿಗಳಾದ ಶಬ್ರಾಜ್ (28) ಮತ್ತು ಆತನ ಪತ್ನಿ ಶಬ್ರೀನ್ (24) ಎಂದು ಗುರುತಿಸಲಾಗಿದೆ. ದಂಪತಿಗಳಿಬ್ಬರು ತಮ್ಮ ಕೆಟಿಎಂ ಬೈಕ್‌ನಲ್ಲಿ ನಾಗರಬಾವಿಯಿಂದ ಹೊರಟು ಗೊರಗುಂಟೆಪಾಳ್ಯ ಸಿಗ್ನಲ್ ದಾಟಿಕೊಂಡು ಯಶವಂತಪುರ ಕಡೆಗೆ ಬರುತ್ತಿದ್ದಾಗ ಈ ಘೋರ ದುರಂತ ಸಂಭವಿಸಿದೆ.

ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗ್ಯಾಸ್ ಸಿಲಿಂಡರ್ ಲಾರಿಯ ಬ್ರೇಕ್ ಫೇಲ್ ಆಗಿರುವುದು ಪತ್ತೆಯಾಗಿದೆ. ಸಿಗ್ನಲ್ ಬಳಿ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಮುನ್ನುಗ್ಗಿದೆ. ಈ ವೇಳೆ ಯಶವಂತಪುರ ರಸ್ತೆಯ ಟಿಎಂಟಿ ಜಂಕ್ಷನ್ ಬಳಿ ದಂಪತಿ ಪ್ರಯಾಣಿಸುತ್ತಿದ್ದ ಬೈಕ್‌ಗೆ ಲಾರಿ ಹಿಂಬದಿಯಿಂದ ಜೋರಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಲಾರಿಯ ಹಿಂಭಾಗದ ಭಾರೀ ಗಾತ್ರದ ಟೈರ್ ದಂಪತಿಗಳ ಮೇಲೆ ಹರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ತೀವ್ರತೆಗೆ ಅವರ ಕೆಟಿಎಂ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: ಸಾವು ಹೀಗೂ ಬರಬಹುದು: ಉಡುಪಿಯಲ್ಲಿ ತೆಂಗಿನಕಾಯಿ ಬಿದ್ದು ಹಸುಗೂಸು ಸಾವು

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಯಶವಂತಪುರ ಸಂಚಾರಿ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಪೀಕ್ ಅವರ್‌ನಲ್ಲಿಯೇ ಗೊರಗುಂಟೆಪಾಳ್ಯದ ಪ್ರಮುಖ ಸಿಗ್ನಲ್‌ನಲ್ಲಿ ಈ ಭೀಕರ ಅಪಘಾತ ನಡೆದ ಕಾರಣ ತುಮಕೂರು ರಸ್ತೆ ಮತ್ತು ಯಶವಂತಪುರ ಮಾರ್ಗದಲ್ಲಿ ಬರೋಬ್ಬರಿ ಕಿಲೋಮೀಟರ್‌ಗಟ್ಟಲೆ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗಿತ್ತು. ಪೊಲೀಸರು ಕ್ರೇನ್ ಬಳಸಿ ಅಪಘಾತಕ್ಕೀಡಾದ ವಾಹನಗಳನ್ನು ಪಕ್ಕಕ್ಕೆ ಸರಿಸಿ, ಸದ್ಯ ಸಂಚಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಕುರಿತು ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್ – Kannada News

ನವದೆಹಲಿ, ಜೂನ್ 11: ಅನಿವಾಸಿ ಭಾರತೀಯರಿಂದ (NRI) ಅವರ ದೇಶಗಳ ಕರೆನ್ಸಿಯನ್ನು ಆಕರ್ಷಿಸುವ ಸಲುವಾಗಿ ಆರ್​ಬಿಐ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಿದ ಬೆನ್ನಲ್ಲೇ ಭಾರತದ ಹಲವು ಬ್ಯಾಂಕುಗಳು ಎನ್​ಆರ್​ಐ ಠೇವಣಿಗಳ (FCNR-B) ದರಗಳನ್ನು ಗಣನೀಯವಾಗಿ ಹೆಚ್ಚಿಸತೊಡಗಿವೆ. ಸರ್ಕಾರಿ ಸ್ವಾಮ್ಯದ ಎಸ್​ಬಿಐನಿಂದ ಹಿಡಿದು ಖಾಸಗಿಯ ಯೆಸ್ ಬ್ಯಾಂಕ್​ವರೆಗೆ ಹಲವು ಬ್ಯಾಂಕುಗಳು ವಿದೇಶೀ ಕರೆನ್ಸಿಗಳ ಠೇವಣಿ ದರಗಳನ್ನು ಏರಿಸಿವೆ. ಕೆಲ ಠೇವಣಿಗಳಿಗೆ ಶೇ. 7.1ರವರೆಗೂ ಬಡ್ಡಿ ಆಫರ್ ಮಾಡಲಾಗಿದೆ.

ಯೆಸ್ ಬ್ಯಾಂಕ್ (Yes Bank) ತನ್ನ ವಿದೇಶಿ ಕರೆನ್ಸಿ ಅನಿವಾಸಿ (FCNR-B) ಠೇವಣಿಗಳ ಮೇಲಿನ ಬಡ್ಡಿದರವನ್ನು ಗಣನೀಯವಾಗಿ ಹೆಚ್ಚಿಸಿದೆ. ಗರಿಷ್ಠ ಶೇ. 6.6 ರವರೆಗೆ ಬಡ್ಡಿದರವನ್ನು ಆಫರ್ ಮಾಡುತ್ತಿದೆ. ಅದರ ಹೊಸ ದರಗಳು ಈ ಕೆಳಗಿನಂತಿವೆ:

  • 1-2 ವರ್ಷದ ಅವಧಿ: ಶೇ. 6.10 ಬಡ್ಡಿದರ.
  • 2-3 ವರ್ಷದ ಅವಧಿ: ಶೇ. 6.35 ಬಡ್ಡಿದರ.
  • 3-5 ವರ್ಷದ ಅವಧಿ: ಶೇ. 6.60 ಬಡ್ಡಿದರ.

ಇದನ್ನೂ ಓದಿ: ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷದ ಡೆಪಾಸಿಟ್​ಗಳಿಗೆ ಬಡ್ಡಿದರವನ್ನು ಶೇ. 7.1ಕ್ಕೆ ಏರಿಸಿದೆ. ಐದು ವರ್ಷದ ಡೆಪಾಸಿಟ್​ಗೆ ಬಡ್ಡಿದರ ಶೇ. 7 ನಿಗದಿ ಮಾಡಿದೆ.

ಇನ್ನು, ಎಚ್​​ಡಿಎಫ್​ಸಿ ಬ್ಯಾಂಕ್ ತನ್ನ ಎನ್​ಆರ್​ಐ ಗ್ರಾಹಕರ ಡೆಪಾಸಿಟ್​ಗಳಿಗೆ ಶೇ. 6 ಬಡ್ಡಿ ಆಫರ್ ಮಾಡುತ್ತಿದೆ. ಇತರ ಹಲವು ಬ್ಯಾಂಕುಗಳು ಕೂಡ ತಮ್ಮ ಠೇವಣಿ ದರಗಳನ್ನು ಹೆಚ್ಚಿಸಿವೆ.

ಆರ್​ಬಿಐನ ಈ ನಿರ್ಧಾರಕ್ಕೆ ಕಾರಣವೇನು?

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ಅನಿವಾಸಿ ಭಾರತೀಯ ಹೂಡಿಕೆದಾರರನ್ನು ಆಕರ್ಷಿಸಲು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಎಫ್‌ಸಿಎನ್‌ಆರ್ (FCNR) ಠೇವಣಿಗಳ ಮೇಲಿನ ಹೆಡ್ಜಿಂಗ್ ವೆಚ್ಚವನ್ನು (ವಿದೇಶಿ ಕರೆನ್ಸಿ ವಿನಿಮಯ ದರ ಏರಿಳಿತದ ಅಪಾಯದ ವೆಚ್ಚ) ಆರ್​ಬಿಐ ಭರಿಸುವ ನಿರ್ಧಾರವೂ ಸೇರಿದೆ. ಇದರಿಂದಾಗಿ ಬ್ಯಾಂಕುಗಳಿಗೆ ಆಗುವ ವೆಚ್ಚ ಕಡಿಮೆಯಾಗಿದ್ದು, ಆ ಲಾಭವನ್ನು ಬ್ಯಾಂಕುಗಳು ಹೆಚ್ಚಿನ ಬಡ್ಡಿಯ ರೂಪದಲ್ಲಿ ಎನ್‌ಆರ್‌ಐ ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಇದನ್ನೂ ಓದಿ: ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ

FCNR(B) ಠೇವಣಿಗಳ ಪ್ರಮುಖ ಅನುಕೂಲಗಳು

  • ಈ ಖಾತೆಗಳಲ್ಲಿ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸದೆ ಯುಎಸ್ ಡಾಲರ್ (USD), ಬ್ರಿಟಿಷ್ ಪೌಂಡ್ (GBP) ಅಥವಾ ಯೂರೋ (EUR) ನಂತಹ ವಿದೇಶಿ ಕರೆನ್ಸಿಗಳಲ್ಲೇ ಇಡಬಹುದು. ಹೀಗಾಗಿ ರೂಪಾಯಿ ಮೌಲ್ಯ ಕುಸಿತದ ಭೀತಿ ಇರುವುದಿಲ್ಲ.
  • ಈ ಠೇವಣಿಗಳ ಮೇಲೆ ಗಳಿಸುವ ಬಡ್ಡಿಯು ಭಾರತದಲ್ಲಿ ಸಂಪೂರ್ಣವಾಗಿ ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ (Tax-Free).
  • ಗಳಿಸಿದ ಅಸಲು ಮತ್ತು ಬಡ್ಡಿಯನ್ನು ಯಾವುದೇ ಮಿತಿ ಇಲ್ಲದೆ, ಸುಲಭವಾಗಿ ತಮ್ಮ ದೇಶಕ್ಕೆ ವರ್ಗಾಯಿಸಿಕೊಳ್ಳಬಹುದು (Repatriable).

ಆರ್​ಬಿಐನ ಈ ಕ್ರಮದಿಂದ ದೇಶದ ಫಾರೆಕ್ಸ್ ಮಾರುಕಟ್ಟೆಗೂ ಅನುಕೂಲವಾಗುತ್ತದೆ. ಬಹಳ ಮುಖ್ಯವಾದ ವಿದೇಶಿ ಕರೆನ್ಸಿ ಸಂಪತ್ತು ಸಂಗ್ರಹ ಹೆಚ್ಚುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲೆಂಡ್​ನಲ್ಲಿ ಮಂಕಾದ ಮಂಧಾನ; ತಂಡಕ್ಕೆ ಎದುರಾಯ್ತು ಹೊಸ ತಲೆನೋವು – Kannada News

2026 ರ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಜೂನ್ 12 ರಿಂದ ಇಂಗ್ಲೆಂಡ್​ನಲ್ಲಿ ಆರಂಭವಾಗುತ್ತಿದೆ. ಈ ಪಂದ್ಯಾವಳಿಗಾಗಿ ಟೀಂ ಇಂಡಿಯಾ ಕೂಡ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಅದರ ಭಾಗವಾಗಿ ಭಾರತ ವನಿತಾ ಪಡೆ, ಆತಿಥೇಯ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿತು. ಆದರೆ ಆ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿತು. ಇದಾದ ನಂತರ ಎರಡು ಅಭ್ಯಾಸ ಪಂದ್ಯಗಳನ್ನು ಆಡಿತು. ಅದರಲ್ಲಿ ಒಂದು ಪಂದ್ಯದಲ್ಲಿ ಗೆದ್ದು ಒಂದು ಪಂದ್ಯದಲ್ಲಿ ಸೋತಿತು. ಆ ಒಂದು ಸೋಲು ಇಂಗ್ಲೆಂಡ್ ತಂಡದ ವಿರುದ್ಧವೇ ಬಂದಿತು. ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ವನಿತಾ ಪಡೆ ಸೋಲುಗಳಿಗೆ ಕೊರಳೊಡ್ಡಿರುವುದು ಆಡಳಿತ ಮಂಡಳಿಯ ಚಿಂತೆ ಹೆಚ್ಚಿಸಿದೆ. ಅದರಲ್ಲೂ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಅವರ ಕಳಪೆ ಫಾರ್ಮ್​ ಮ್ಯಾನೇಜ್​ಮೆಂಟ್​ನ ನಿದ್ದೆಗೆಡಿಸಿದೆ.

2026 ರ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಅದಕ್ಕೂ ಮೊದಲು, ಮಂಧಾನ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿರುವುದು ಹೊಸ ತಲೆನೋವು ತಂದಿದೆ. ಇಂಗ್ಲೆಂಡ್ ಪ್ರವಾಸದಿಂದ ಅಭ್ಯಾಸ ಪಂದ್ಯಗಳವರೆಗೆ, ಸ್ಮೃತಿ ಮಂಧಾನ ಪ್ರತಿ ರನ್‌ಗೂ ಕಷ್ಟಪಡುತ್ತಿರುವುದು ಕಂಡುಬಂದಿದೆ, ಇದು ಟೀಂ ಇಂಡಿಯಾಕ್ಕೆ ಎಚ್ಚರಿಕೆಯ ಸಂಕೇತವಾಗಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಮಂಕಾದ ಮಂಧಾನ

ವಾಸ್ತವವಾಗಿ ಟಿ20 ವಿಶ್ವಕಪ್‌ಗೆ ಸಿದ್ಧರಾಗಲು ಮತ್ತು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಹರ್ಮನ್‌ಪ್ರೀತ್ ಪಡೆ ಸಾಕಷ್ಟು ಮುಂಚಿತವಾಗಿಯೇ ಇಂಗ್ಲೆಂಡ್‌ಗೆ ತಲುಪಿತ್ತು. ಆದಾಗ್ಯೂ, ಈ ಪ್ರವಾಸ ಮಂಧಾನಾಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದ್ದ ಮಂಧಾನ, ಎರಡನೇ ಪಂದ್ಯದಲ್ಲಿ 32 ರನ್ ಗಳಿಸುವ ಮೂಲಕ ಹಳೆಯ ಫಾರ್ಮ್​ಗೆ ಮರಳುವ ಭರವಸೆಯನ್ನು ಮೂಡಿಸಿದ್ದರು. ಆದರೆ ಮೂರನೇ ಮತ್ತು ಅಂತಿಮ ಟಿ20ಯಲ್ಲಿ ಕೇವಲ 8 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಇದರ ನಂತರ, ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ 39 ರನ್ ಬಾರಿಸಿದ್ದ ಸ್ಮೃತಿ, ಇಂಗ್ಲೆಂಡ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಕೇವಲ 1 ರನ್ ಗಳಿಸುವ ಮೂಲಕ ಮತ್ತೆ ನಿರಾಶೆ ಮೂಡಿಸಿದರು.

‘ಆ ಒಂದು ಪಂದ್ಯಕ್ಕೆ ಏಕೆ ಅಷ್ಟೊಂದು ಮನ್ನಣೆ’?; ವಿಶ್ವಕಪ್​ಗೂ ಮುನ್ನ ಸ್ಮೃತಿ ಮನವಿ

ತಂಡಕ್ಕೆ ತಲೆನೋವಾದ ಮಂಧಾನ ಕಳಪೆ ಫಾರ್ಮ್​

ಮಂಧಾನ ಅವರನ್ನು ಭಾರತೀಯ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದೇ ಪರಿಗಣಿಸಲಾಗಿದೆ. ಪವರ್‌ಪ್ಲೇನಲ್ಲಿ ತಂಡಕ್ಕೆ ಆಕ್ರಮಣಕಾರಿ ಮತ್ತು ಬಲವಾದ ಆರಂಭ ನೀಡುವ ಜವಾಬ್ದಾರಿ ಅವರ ಮೇಲಿದೆ. ಮಂಧಾನ ಒಂದೇ ಒಂದು ಅರ್ಧಶತಕ ಗಳಿಸದಿರುವುದು ಕ್ರೀಸ್‌ನಲ್ಲಿ ಸಮಯ ಕಳೆದರೂ ದೊಡ್ಡ ಇನ್ನಿಂಗ್ಸ್‌ಗಳನ್ನು ಪರಿವರ್ತಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಮಂಧಾನ ಅವರ ಫಾರ್ಮ್ ಇದೇ ರೀತಿ ಮುಂದುವರಿದರೆ, ಟೀಂ ಇಂಡಿಯಾದ ಸಮಸ್ಯೆಗಳು ಹೆಚ್ಚಾಗಬಹುದು. ಹೀಗಾಗಿ ಮಂಧಾನ ಬೇಗನೇ ತಮ್ಮ ಹಳೆಯ ಲಯಕ್ಕೆ ಬರಲಿ, ತಂಡಕ್ಕೆ ಮತ್ತೊಂದು ವಿಶ್ವಕಪ್ ಗೆಲ್ಲಿಸಿಕೊಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version