ನಾನು ಬೇಕಾ, ಅಭಿಷೇಕ್ ಬ್ಯಾನರ್ಜಿ ಬೇಕಾ ನಿರ್ಧರಿಸಿ; ಮಮತಾಗೆ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಸವಾಲು – Kannada News

ಕೊಲ್ಕತ್ತಾ, ಜೂನ್ 11: ತೃಣಮೂಲ ಕಾಂಗ್ರೆಸ್ (TMC) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಇಂದು ಮಮತಾ ಬ್ಯಾನರ್ಜಿ (Mamata Banerjee) ಮತ್ತು ಅವರ ಸೋದರಸಂಬಂಧಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ನಕಲಿ ಸಹಿ ಪ್ರಕರಣವೊಂದರಲ್ಲಿ ಟಿಎಂಸಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಅಭಿಷೇಕ್ ಬ್ಯಾನರ್ಜಿ ಅವರು ಕೊನೆಯ ಕ್ಷಣದಲ್ಲಿ ತಮ್ಮನ್ನು ಕಾನೂನು ಸಲಹೆಗಾರ ಸ್ಥಾನದಿಂದ ಮುಕ್ತಗೊಳಿಸಿದ್ದಾರೆ ಎಂದು ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದು, ಈ ಕ್ರಮವು ತಮಗೆ ಉಂಟಾದ ತೀವ್ರ ಅವಮಾನ ಎಂದು ಟೀಕಿಸಿದ್ದಾರೆ.

ಮಮತಾ ಬ್ಯಾನರ್ಜಿಗೆ ನೇರ ಎಚ್ಚರಿಕೆ ನೀಡಿರುವ ಅವರು, “ಪಕ್ಷ ಉಳಿಯಬೇಕಾದರೆ ನೀವು ಈಗ ನಿರ್ಧಾರ ಮಾಡಬೇಕಿದೆ. ಒಂದೋ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರನ್ನು ಉಳಿಸಿಕೊಳ್ಳಿ, ಇಲ್ಲವೇ ನಿಮ್ಮ ಅಹಂಕಾರಿ ಸೋದರಸಂಬಂಧಿ ಅಭಿಷೇಕ್ ಬ್ಯಾನರ್ಜಿಯನ್ನು ಬೆಂಬಲಿಸಿ. ಇಬ್ಬರಲ್ಲಿ ಒಬ್ಬರನ್ನು ನೀವು ಆಯ್ಕೆ ಮಾಡಿಕೊಳ್ಳಲೇಬೇಕು” ಎಂದು ಸವಾಲು ಹಾಕಿದ್ದಾರೆ.

ನಕಲಿ ಸಹಿ ಹಗರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಪ್ರತಿನಿಧಿಸುವ ವಕೀಲರ ಹುದ್ದೆಯಿಂದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಬದಲಾಯಿಸಿದ ನಂತರ ಈ ಅಸಮಾಧಾನ ಸ್ಫೋಟಗೊಂಡಿದೆ. ಈ ಪ್ರಕರಣದಲ್ಲಿ ಹೈಕೋರ್ಟ್ ಅಭಿಷೇಕ್ ಬ್ಯಾನರ್ಜಿ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದು, ಅಂದೇ ಸಂಜೆ 6 ಗಂಟೆಯೊಳಗೆ ಪಶ್ಚಿಮ ಬಂಗಾಳ ಸಿಐಡಿ ಮುಂದೆ ಹಾಜರಾಗುವಂತೆ ನಿರ್ದೇಶಿಸಿದೆ. ಅಭಿಷೇಕ್ ಸದ್ಯ ದೆಹಲಿಯಲ್ಲಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಟಿಎಂಸಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ

“ಅಭಿಷೇಕ್ ಬ್ಯಾನರ್ಜಿಯ ವರ್ತನೆ ಅತ್ಯಂತ ಅಹಂಕಾರದಿಂದ ಕೂಡಿದೆ. ಅವರು ಪಕ್ಷದ ಹಿರಿಯ ನಾಯಕರನ್ನು ಮತ್ತು ದಶಕಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸುತ್ತಿದ್ದಾರೆ. ಅವರ ಈ ಸರ್ವಾಧಿಕಾರಿ ಧೋರಣೆಯಿಂದಾಗಿಯೇ ಇಂದು ಶಾಸಕರು ಮತ್ತು ಸಂಸದರು ಪಕ್ಷ ತೊರೆಯುತ್ತಿದ್ದಾರೆ,” ಎಂದು ಕಲ್ಯಾಣ್ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ತಾವು ಆಕ್ರೋಶ ಹೊರಹಾಕಲು ಕಾರಣವನ್ನು ವಿವರಿಸಿದ ಕಲ್ಯಾಣ್ ಬ್ಯಾನರ್ಜಿ, “ನಾನು ಇಡೀ ರಾತ್ರಿ ಈ ಪ್ರಕರಣದ ಸಿದ್ಧತೆ ನಡೆಸಿ, ತುರ್ತು ವಿಚಾರಣೆಗಾಗಿ ಜಡ್ಜ್ ಮುಂದೆ ಮಂಡಿಸಿದ್ದೆ. ಆದರೆ, ಇಂದು ಬೇರೆಯದೇ ಅರ್ಜಿ ಸಲ್ಲಿಕೆಯಾಗಿದ್ದು, ಮತ್ತೊಬ್ಬ ವಕೀಲರು ಈ ಪ್ರಕರಣವನ್ನು ನಿಭಾಯಿಸಲಿದ್ದಾರೆ ಎಂದು ನನಗೆ ತಿಳಿಸಲಾಯಿತು. ಇತರರನ್ನು ಗೌರವಿಸದೇ ಇರುವ ಅವರ ಹಳೆಯ ಹವ್ಯಾಸ ಇನ್ನೂ ಬದಲಾಗಿಲ್ಲ. ಅಭಿಷೇಕ್ ಬ್ಯಾನರ್ಜಿ ಎಲ್ಲರೂ ತನಗಿಂತ ಕೆಳಗಿನವರು ಎಂದು ಭಾವಿಸುತ್ತಾನೆ. ನಾನು ಈ ವಕೀಲಿ ವೃತ್ತಿಯಲ್ಲಿ 45 ವರ್ಷಗಳಿಂದ ಇದ್ದೇನೆ,” ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಜೊತೆ ವಿಲೀನವಾಗುತ್ತಾ ಟಿಎಂಸಿ? ಮಮತಾ ಬ್ಯಾನರ್ಜಿಗೆ ದೊಡ್ಡ ಹುದ್ದೆಯ ಆಫರ್

ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹೀನಾಯ ಸೋಲು ಕಂಡ ಬೆನ್ನಲ್ಲೇ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ. ಈಗಾಗಲೇ 58 ಕ್ಕೂ ಹೆಚ್ಚು ಟಿಎಂಸಿ ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದು, ತಾವೇ ನಿಜವಾದ ಟಿಎಂಸಿ ನಾಯಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ನಾಯಕರಾದ ಸುಶ್ಮಿತಾ ದೇವ್ ಮತ್ತು ಸುಖೇಂದು ಶೇಖರ್ ರಾಯ್ ಅವರಂತಹ ಪ್ರಮುಖ ರಾಜ್ಯಸಭಾ ಸಂಸದರು ತಮ್ಮ ಸ್ಥಾನಗಳಿಗೆ ಹಾಗೂ ಟಿಎಂಸಿಗೆ ರಾಜೀನಾಮೆ ನೀಡಿದ್ದಾರೆ. ಲೋಕಸಭೆಯಲ್ಲೂ 20ಕ್ಕೂ ಹೆಚ್ಚು ಟಿಎಂಸಿ ಸಂಸದರು ತಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿ, ಮಮತಾ ಬ್ಯಾನರ್ಜಿ ನಾಯಕತ್ವದಿಂದ ದೂರ ಸರಿದಿದ್ದಾರೆ.

ಕಲ್ಯಾಣ್ ಬ್ಯಾನರ್ಜಿ ಅವರ ಈ ಹೇಳಿಕೆಯು ಟಿಎಂಸಿ ಪಕ್ಷದೊಳಗೆ ದೀರ್ಘಕಾಲದಿಂದ ನಡೆಯುತ್ತಿದ್ದ ಹಳೆಯ ತಲೆಮಾರು ವರ್ಸಸ್ ಹೊಸ ತಲೆಮಾರು ನಡುವಿನ ಶೀತಲ ಸಮರವನ್ನು ಬೀದಿಗೆ ತಂದಿದೆ. ಮಮತಾ ಬ್ಯಾನರ್ಜಿ ಅವರೊಂದಿಗೆ ಮೊದಲಿನಿಂದಲೂ ಇದ್ದ ಹಿರಿಯ ನಾಯಕರು ಅಭಿಷೇಕ್ ಬ್ಯಾನರ್ಜಿ ಅವರ ಹಠಾತ್ ಬೆಳವಣಿಗೆ ಮತ್ತು ಪಕ್ಷದ ಮೇಲಿನ ಹಿಡಿತವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ.

ಒಂದೆಡೆ ಭ್ರಷ್ಟಾಚಾರ ಮತ್ತು ನಕಲಿ ಸಹಿ ಪ್ರಕರಣದ ತನಿಖೆಯನ್ನು ಪಕ್ಷ ಎದುರಿಸುತ್ತಿದ್ದರೆ, ಮತ್ತೊಂದೆಡೆ ಹಿರಿಯ ನಾಯಕರೇ ಈ ರೀತಿಯ ಎಚ್ಚರಿಕೆ ನೀಡಿರುವುದು ಮಮತಾ ಬ್ಯಾನರ್ಜಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಹೌದು, ನಾನು ಬಾದ್‌ಶಾ ಪತ್ನಿ’: ಕೊನೆಗೂ ಮದುವೆ ವದಂತಿಗೆ ತೆರೆ ಎಳೆದ ನಟಿ ಇಶಾ ರಿಖಿ – Kannada News

ಪ್ರಖ್ಯಾತ ಬಾಲಿವುಡ್ ರ‍್ಯಾಪ್ ಸಿಂಗರ್ ಬಾದ್‌ಶಾ (Badshah) ಮತ್ತು ಪಂಜಾಬಿ ನಟಿ, ಮಾಡೆಲ್ ಇಶಾ ರಿಖಿ (Isha Rikhi) ಮದುವೆಯಾಗಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಅಧಿಕೃತ ಮುದ್ರೆ ಬಿದ್ದಿದೆ. ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಮದುವೆಯ (Badshah Wedding) ಊಹಾಪೋಹಗಳಿಗೆ ಇಶಾ ರಿಖಿ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಕುತೂಹಲಗಳಿಗೂ ತೆರೆ ಎಳೆದಿದ್ದಾರೆ. ಬಾದ್‌ಶಾ ಈ ವಿಷಯವಾಗಿ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ಇಶಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಡೆಸಿದ ‘ಆಸ್ಕ್ ಮಿ ಎನಿಥಿಂಗ್’ ಸಂವಾದದಲ್ಲಿ ತಾವು ಮದುವೆಯಾಗಿರುವುದನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡದಿರಲು ಕಾರಣವೇನು? ಇನ್‌ಸ್ಟಾಗ್ರಾಮ್ ಸಂವಾದದ ಸಮಯದಲ್ಲಿ ಅಭಿಮಾನಿಯೊಬ್ಬರು, ‘ನೀವಿಬ್ಬರು ಮದುವೆಯಾಗಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಏಕೆ ಫಾಲೋ ಮಾಡುತ್ತಿಲ್ಲ?’ ಎಂದು ನೇರವಾಗಿ ಪ್ರಶ್ನಿಸಿದ್ದರು. ಆ ಪ್ರಶ್ನೆಗೆ ಇಶಾ ರಿಖಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಅಭಿಮಾನಿಯ ಪ್ರಶ್ನೆಗೆ ಅತ್ಯಂತ ಹಾಸ್ಯಭರಿತವಾಗಿ ಉತ್ತರಿಸಿದ ಇಶಾ, ‘ಈ ಪ್ರಶ್ನೆಗಳು ನನಗೆ ಅತಿಯಾಗಿ ಎದುರಾಗುತ್ತಿವೆ. ಹೌದು, ನನಗೆ ಮದುವೆಯಾಗಿದೆ. ಇನ್ನು ನೀವೆಲ್ಲರೂ ಕೇಳುತ್ತಿರುವ ಮುಖ್ಯ ಪ್ರಶ್ನೆಗೆ ಬರುವುದಾದರೆ, ಇದಕ್ಕೆ ನನ್ನ ಪತಿಯೇ ಸರಿಯಾದ ವಿವರಣೆ ನೀಡಬೇಕು. ಪತಿದೇವ್ (ಬಾದ್‌ಶಾ), ಜನರಿಗೆ ಸಾಕಷ್ಟು ಪ್ರಶ್ನೆಗಳಿವೆ, ದಯವಿಟ್ಟು ಆದಷ್ಟು ಬೇಗ ಇದಕ್ಕೆ ಉತ್ತರಿಸಿ’ ಎಂದು ಬರೆದುಕೊಂಡು ಬಾದ್‌ಶಾ ಅವರನ್ನೇ ಟ್ಯಾಗ್ ಮಾಡಿದ್ದಾರೆ.

‘ನಿಮ್ಮ ಪತಿ ಬಾದ್‌ಶಾ ಜೊತೆ ಒಂದೇ ಒಂದು ಫೋಟೋ ಕೂಡ ಏಕೆ ಪೋಸ್ಟ್ ಮಾಡಿಲ್ಲ? ನೀವು ಅವರ ಪತ್ನಿಯಾಗಿದ್ದರೂ ಒಂದೇ ಒಂದು ಚಿತ್ರವೂ ಇಲ್ವಲ್ಲಾ?’ ಎಂದು ಮತ್ತೊಬ್ಬ ಅಭಿಮಾನಿ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇಶಾ, ಅಭಿಮಾನಿಗಳ ಮನಸ್ಸು ತಣಿಸಲು ತಮ್ಮಿಬ್ಬರ ಅಪರೂಪದ ಹಾಗೂ ಪ್ರೇಮಭರಿತ ಫೋಟೋ ಒಂದನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಇಶಾ ಅವರು ಬಾದ್‌ಶಾ ಅವರ ಮಡಲಲ್ಲಿ ಕುಳಿತು ಗಟ್ಟಿಯಾಗಿ ಆಲಂಗಿಸಿಕೊಂಡಿರುವುದನ್ನು ಕಾಣಬಹುದು. ಈ ಪ್ರೇಮಪೂರಿತ ಚಿತ್ರವನ್ನು ನೋಡಿ ದಂಪತಿಯ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಹಾಡಿನ ವಿವಾದ: ಕ್ಷಮೆ ಕೇಳಿ, 50 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ಮುಂದಾದ ಬಾದ್​ಶಾ

ಇವರಿಬ್ಬರ ಮದುವೆಯ ಸುದ್ದಿ ಮೊದಲ ಬಾರಿಗೆ ಮುನ್ನೆಲೆಗೆ ಬಂದಿದ್ದು ಈ ವರ್ಷದ ಮಾರ್ಚ್ 24ರಂದು. ಇಶಾ ಅವರ ತಾಯಿ ಪೂನಂ ರಿಖಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಕೆಲವು ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ಆ ಸಮಾರಂಭವು ಅತ್ಯಂತ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆದ ಖಾಸಗಿ ಕಾರ್ಯಕ್ರಮವಾಗಿತ್ತು. ಮದುವೆಯ ವಿಧಿವಿಧಾನಗಳ ಫೋಟೋಗಳಲ್ಲಿ ಬಾದ್‌ಶಾ ಕಂದು ಬಣ್ಣದ ಕುರ್ತಾ ಮತ್ತು ಚಿನ್ನದ ಬಣ್ಣದ ಪೇಟ ಧರಿಸಿದ್ದರೆ, ಇಶಾ ಕೆಂಪು ಬಣ್ಣದ ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿ ಮಿಂಚಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು – Kannada News

ಕನ್ನಡದಲ್ಲಿ ಹಾಸ್ಯ ಮಿಶ್ರಿತ ಹಾರರ್ ಸಿನಿಮಾ (Horror Cinema) ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಪ್ರವಾಸಕ್ಕೆ ಹೋಗುವ ಯುವಕರಿಗೆ ಎದುರಾಗುವ ಸಂದರ್ಭಗಳು, ಹಾರರ್ ಅನುಭವಗಳು, ಆಘಾತಗಳ ಕತೆಯನ್ನು ಈ ಸಿನಿಮಾ ಒಳಗೊಂಡಿರುವುದು ಟೀಸರ್​​ನಿಂದ ತಿಳಿದು ಬರುತ್ತಿದೆ. ಸಿನಿಮಾವನ್ನು ಹರೀಶ್ ಸೀನು ಮತ್ತು ಕೋಲಾರ್ ಸೀನು ಒಟ್ಟಿಗೆ ನಿರ್ದೇಶನ ಮಾಡಿದ್ದು, ಉಜ್ವಲ ನಾಗರಾಜ್ ರಾವ್ ಜಗದಲೆ ಎಂಬುವರು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಟೀಸರ್ ಬಿಡುಗಡೆ ಮಾಡಿ ಸಿನಿಮಾದ ಬಗ್ಗೆ ನಿರ್ದೇಶಕರು ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಕೋವಿಡ್​ನಿಂದ ಖುಲಾಯಿಸಿದ ಅದೃಷ್ಟ: ಆಸ್ಟ್ರೇಲಿಯಾ ತಂಡಕ್ಕೆ ಭಾರತೀಯನ ಎಂಟ್ರಿ! – Kannada News

ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರುಗಳ ಈ ತಂಡದಲ್ಲಿ ಭಾರತೀಯ ಮೂಲದ ನಿಖಿಲ್ ಚೌಧರಿ ಸ್ಥಾನ ಪಡೆದಿದ್ದಾರೆ. 30 ವರ್ಷದ ನಿಖಿಲ್ ದೆಹಲಿ ಮೂಲದ ಕ್ರಿಕೆಟಿಗ. ಈ ಹಿಂದೆ ಪಂಜಾಬ್ ತಂಡದ ಪರವಾಗಿ ಟಿ20 ಮತ್ತು ಲಿಸ್ಟ್-ಎ ಕ್ರಿಕೆಟ್‌ ಕೂಡ ಆಡಿದ್ದರು. ಆದರೆ ಕೋವಿಡ್​ ಸಂದರ್ಭದಲ್ಲಿನ ಒಂದು ಟ್ವಿಸ್ಟ್ ನಿಖಿಲ್ ಅವರ ಕೆರಿಯರ್​ ಅನ್ನೇ ಬದಲಿಸಿರುವುದು ವಿಶೇಷ.

ನಿಖಿಲ್ ರೋಚಕ ಪ್ರಯಣ:

ನಿಖಿಲ್ ಚೌಧರಿ ಅವರ ಕ್ರಿಕೆಟ್ ಜೀವನದ ಹಾದಿ ಸಾಮಾನ್ಯವಾದದ್ದಲ್ಲ. ಇದು ಕಠಿಣ ಪರಿಶ್ರಮ ಮತ್ತು ಅದ್ಭುತ ಆಕಸ್ಮಿಕಗಳಿಂದ ಕೂಡಿದೆ. ಏಕೆಂದರೆ ಪಂಜಾಬ್‌ನಲ್ಲಿ ಬೆಳೆದ ನಿಖಿಲ್, ಆರಂಭದಲ್ಲಿ ಭಾರತದ ದೇಶಿ ಕ್ರಿಕೆಟ್‌ನಲ್ಲಿ ಆಡಿದ್ದರು. ಪಂಜಾಬ್ ಪರ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಯುವರಾಜ್ ಸಿಂಗ್, ಹರಭಜನ್ ಸಿಂಗ್, ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಭಾರತದ ಪರವೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಕನಸು ಕಟ್ಟಿಕೊಂಡಿದ್ದರು.

ಇದರ ನಡುವೆ, ಅಂದರೆ 2020ರ ಮಾರ್ಚ್‌ನಲ್ಲಿ ನಿಖಿಲ್ ಪ್ರವಾಸಿ ವೀಸಾದಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ಗೆ ಸಂಬಂಧಿಕರನ್ನು ನೋಡಲು ಹೋಗಿದ್ದರು. ಆದರೆ ಅದೇ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಂತರರಾಷ್ಟ್ರೀಯ ಗಡಿಗಳು ಮುಚ್ಚಲ್ಪಟ್ಟಿದ್ದರಿಂದ ಅವರು ಅಲ್ಲೇ ಸಿಲುಕಿಕೊಳ್ಳಬೇಕಾಯಿತು.

ಆಸ್ಟ್ರೇಲಿಯಾದಲ್ಲಿ ಜೀವನ ಸಾಗಿಸಲು ಮತ್ತು ತಮ್ಮ ಕ್ರಿಕೆಟ್ ಕನಸನ್ನು ಜೀವಂತವಾಗಿಡಲು ನಿಖಿಲ್ ಚೌಧರಿ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿದ್ದಾರೆ. ಆಸ್ಟ್ರೇಲಿಯಾ ಪೋಸ್ಟ್‌ನಲ್ಲಿ ಕೊರಿಯರ್ ಬಾಯ್ ಆಗಿ, ಉಬರ್ ಚಾಲಕನಾಗಿ ಮತ್ತು ಮೆಕ್ಸಿಕನ್ ರೆಸ್ಟೋರೆಂಟ್‌ ಒಂದರಲ್ಲಿ ವೈಟರ್, ಡೆಲಿವರಿ ಬಾಯ್​ ಆಗಿಯೂ ಕಾರ್ಯ ನಿರ್ವಹಿಸಿದರು.

ಹಗಲಿನಲ್ಲಿ ಕೆಲಸ ಮಾಡುತ್ತಲೇ ರಾತ್ರಿ ಮತ್ತು ವಾರಾಂತ್ಯದಲ್ಲಿ ಬ್ರಿಸ್ಬೇನ್ ಕ್ರಿಕೆಟ್‌ ಕ್ಲಬ್ ಪರ ಆಡುತ್ತಿದ್ದರು. ಅವರ ಭರ್ಜರಿ ಬ್ಯಾಟಿಂಗ್ ಮತ್ತು ಲೆಗ್-ಸ್ಪಿನ್ ಬೌಲಿಂಗ್ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜೇಮ್ಸ್ ಹೋಪ್ಸ್ ಅವರ ಗಮನ ಸೆಳೆಯಿತು. ಅವರ ಶಿಫಾರಸಿನ ಮೇರೆಗೆ ಬಿಗ್ ಬ್ಯಾಷ್ ಲೀಗ್ (BBL) ತಂಡವಾದ ಹೊಬಾರ್ಟ್ ಹರಿಕೇನ್ಸ್ ನಿಖಿಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.

ಖುಲಾಯಿಸಿದ ಅದೃಷ್ಟ:

ಒಮ್ಮೆ ಬಿಗ್ ಬ್ಯಾಷ್ ಲೀಗ್ ಪ್ರವೇಶಿಸಿದ ನಂತರ ನಿಖಿಲ್ ಚೌಧರಿ ಹಿಂದೆ ತಿರುಗಿ ನೋಡಲಿಲ್ಲ. ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನ ಸ್ಟಾರ್ ಆದರು.  ಉನ್ಮುಕ್ತ್ ಚಂದ್ ನಂತರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಹೋಬಾರ್ಟ್ ಹರಿಕೇನ್ಸ್ ತಂಡದ ಪರ ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿ, ತಮ್ಮ ವಿಶಿಷ್ಟ ಶೈಲಿಯ “ಥೈ-ಫೈವ್” (ತೊಡೆ ತಟ್ಟುವ) ಸಂಭ್ರಮಾಚರಣೆಯ ಮೂಲಕ ಅಭಿಮಾನಿಗಳ ನೆಚ್ಚಿನ ಆಟಗಾರರಾದರು. ಬಿಬಿಎಲ್​ನ ಅದ್ಭುತ ಪ್ರದರ್ಶನದಿಂದಾಗಿ ಟ್ಯಾಸ್ಮೆನಿಯಾ ತಂಡದೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ ಒಪ್ಪಂದ ಸಿಕ್ಕಿತು.

ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ನಿಖಿಲ್ ಚೌಧರಿ ತಮ್ಮ ಚೊಚ್ಚಲ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲೇ ಕ್ವೀನ್ಸ್‌ಲ್ಯಾಂಡ್ ವಿರುದ್ಧ 5 ವಿಕೆಟ್ ಪಡೆದು ಮಿಂಚಿದರು.

ಅಲ್ಲದೆ ನವೆಂಬರ್ 2025 ರಲ್ಲಿ ನ್ಯೂ ಸೌತ್ ವೇಲ್ಸ್ ವಿರುದ್ಧ ಕೇವಲ 184 ಎಸೆತಗಳಲ್ಲಿ 163 ರನ್ ಚಚ್ಚಿದರು. ಈ ಮೂಲಕ 21ನೇ ಶತಮಾನದಲ್ಲಿ ಆಸ್ಟ್ರೇಲಿಯಾದ ಪ್ರತಿಷ್ಠಿತ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಳೆ ನಿರ್ಮಿಸಿದರು.

ನಿಖಿಲ್ ಅವರ ಈ ಅತ್ಯುತ್ತಮ ಪ್ರದರ್ಶನಗಳು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಯ್ಕೆ ಸಮಿಒತಿಯ ಗಮನ ಸೆಳೆಯಿತು. ಹೀಗಾಗಿ ಯುವ ಆಲ್​ರೌಂಡರ್ ಮೇಲೆ ಆಯ್ಕೆಗಾರರು ಕಣ್ಣಿಟ್ಟಿದ್ದರು. ಅದರಂತೆ ಇದೀಗ ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ನಿಖಿಲ್ ಚೌಧರಿಯನ್ನು ಆಯ್ಕೆ ಮಾಡಲಾಗಿದೆ.

ಒಟ್ಟಿನಲ್ಲಿ ಒಂದು ಕಾಲದಲ್ಲಿ ಕ್ರಿಕೆಟ್ ಕನಸು ಕೈತಪ್ಪಿ, ಜೀವನ ನಿರ್ವಹಣೆಗಾಗಿ ಆಸ್ಟ್ರೇಲಿಯಾದ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದ್ದ ನಿಖಿಲ್ ಚೌಧರಿ, ಇಂದು ಅದೇ ದೇಶದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದು ಅವರ ಕಠಿಣ ಪರಿಶ್ರಮ ಮತ್ತು ಅದಮ್ಯ ಚೇತನಕ್ಕೆ ಸಾಕ್ಷಿ. ಬಾಂಗ್ಲಾದೇಶ್ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ಈ ಪಂಜಾಬ್ ಯುವಕ ಕಾಂಗರೂ ಪಡೆಯ ಪರವಾಗಿ ಅಬ್ಬರಿಸಿ, ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆಯಲಿ ಎಂಬುದೇ ಕ್ರಿಕೆಟ್ ಪ್ರೇಮಿಗಳ ಆಶಯ.

ಇದನ್ನೂ ಓದಿ: 200ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ!

ಆಸ್ಟ್ರೇಲಿಯಾ ಟಿ20 ತಂಡ:

ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್, ಜೋಶ್ ಫಿಲಿಪ್ಪೆ, ಟಿಮ್ ಡೇವಿಡ್, ಮ್ಯಾಟ್ ರೆನ್‌ಶಾ, ನಿಖಿಲ್ ಚೌಧರಿ, ಕ್ಯಾಮರೂನ್ ಗ್ರೀನ್, ಆರನ್ ಹಾರ್ಡಿ, ಕೂಪರ್ ಕಾನೋಲಿ, ಜೋಯಲ್ ಡೇವಿಸ್, ಆಡಮ್ ಜಂಪಾ, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಥ್ಯೂ ಕುಹ್ನೆಮನ್ ಮತ್ತು ರೈಲಿ ಮೆರೆಡಿತ್ ಇದ್ದಾರೆ.

Source link

‘ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ’:ಪರಮಾಪ್ತ ಜಮೀರ್ ವಿರುದ್ಧ ಸಿದ್ದರಾಮಯ್ಯ ಗರಂ – Kannada News

ಬೆಂಗಳೂರು, (ಜೂನ್ 11): ರಾಜಕೀಯದಲ್ಲಿ ಯಾರು ಯಾರಿಗೂ ಶತ್ರುಗಳಲ್ಲ, ಮಿತ್ರರಲ್ಲ ಎಂಬ ಮಾತಿದೆ. ಇದಕ್ಕೆ ಪೂರಕವೆಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಪರಮಾಪ್ತ ಜಮೀರ್ ಅಹ್ಮದ್ ಖಾನ್ ವಿರುದ್ಧೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಲೇ ಜಮಿರ್ ಅಹ್ಮದ್ ಖಾನ್ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ ಎನ್ನಲಾಗುತ್ತಿದೆ. ಹೌದು..ಜಮೀರ್ ಅಹ್ಮದ್ ಖಾನ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಸಿದ್ದರಾಮಯ್ಯವರನ್ನು ಭೇಟಿ ಮಾಡಿ ಒತ್ತಾಯಿಸಿದ್ದು, ಈ ವೇಳೆ ಗಂರ ಆದ ಸಿದ್ದರಾಮಯ್ಯ, ಅವನು (ಜಮೀರ್ ಅಹ್ಮದ್ ಖಾನ್) ನನ್ನ ಆಪ್ತ ಎಂದು ನೀವೆಲ್ಲಾ ಹೇಳುತ್ತೀರಾ. ಆದ್ರೆ, ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ ಎಂದು ಸಿಡಿಮಿಡಿಗೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೊದಲೇ ಆಡಿಯೋವೊಂದು ವೈರಲ್ ಆಗಿರುವುದು ಜಮೀರ್ ಅಹ್ಮದ್ ಮೇಲೆ ಪಕ್ಷ ವಿರೋಧಿ ಆರೋಪ ಕೇಳಿಬಂದಿದ್ದು, ಇದರ ನಡುವೆ ಇದೀಗ ಸಿದ್ದರಾಮಯ್ಯ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾಸ್ಟೆಲ್ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ; ಆಹಾರ ಸೇವಿಸಿದ್ದ 15 ವಿದ್ಯಾರ್ಥಿನಿಯರು ಅಸ್ವಸ್ಥ – Kannada News

ಹಾಸನ ಹಾಸ್ಟೆಲ್​​​ನಲ್ಲಿ ಊಟದಲ್ಲಿ ಹಲ್ಲಿ ಪತ್ತೆ: 15 ವಿದ್ಯಾರ್ಥಿಗಳು ಅಸ್ವಸ್ಥImage Credit source: Tv9 kannada

ಹಾಸನ, ಜೂ.11: ಜಿಲ್ಲೆಯ ತಾಲ್ಲೂಕಿನ ಸಾರಾಪುರದಲ್ಲಿರುವ ಕೃಷಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ದೊಡ್ಡ ಅಚಾತುರ್ಯವೊಂದು ನಡೆದಿದೆ. ವಿದ್ಯಾರ್ಥಿನಿಯರು ರಾತ್ರಿಯ ಊಟ ಮಾಡುವ ವೇಳೆ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆಯಾಗಿದ್ದು, ಅದೇ ವಿಷಪೂರಿತ ಆಹಾರವನ್ನು ಸೇವಿಸಿದ ಸುಮಾರು 15 ವಿದ್ಯಾರ್ಥಿನಿಯರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಊಟ ಮಾಡುವಾಗ ಸಾಂಬಾರ್‌ನಲ್ಲಿ ಹಲ್ಲಿ ಇರುವುದು ತಡವಾಗಿ ಬೆಳಕಿಗೆ ಬಂದಿರುವ ಕಾರಣ ಅಷ್ಟರಲ್ಲಾಗಲೇ ಊಟ ಸವಿದಿದ್ದ 15 ವಿದ್ಯಾರ್ಥಿನಿಯರಲ್ಲಿ ತಕ್ಷಣವೇ ವಾಂತಿ ಹಾಗೂ ತಲೆಸುತ್ತು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಇವರ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡ ಆರು ವಿದ್ಯಾರ್ಥಿನಿಯರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ (HIMS) ಆಸ್ಪತ್ರೆಗೆ ರವಾನಿಸಿ ದಾಖಲಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು (DHO) ಹಿಮ್ಸ್ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ.

ಸುಮಾರು 400 ವಿದ್ಯಾರ್ಥಿನಿಯರಿರುವ ಈ ದೊಡ್ಡ ಹಾಸ್ಟೆಲ್‌ಗೆ ಕಳೆದ ಎರಡು ತಿಂಗಳಿಂದ ಗ್ಯಾಸ್ ಸಿಲಿಂಡರ್ ಸಿಗದೆ ತೀವ್ರ ಪರದಾಟ ಉಂಟಾಗಿದೆ ಎಂದು ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ. ಹಾಸ್ಟೆಲ್‌ಗೆ ವಾರಕ್ಕೆ ಕನಿಷ್ಠ 4 ರಿಂದ 6 ವಾಣಿಜ್ಯ (Commercial) ಸಿಲಿಂಡರ್‌ಗಳ ಅವಶ್ಯಕತೆಯಿದೆ. ಆದರೆ ಗ್ಯಾಸ್ ಏಜೆನ್ಸಿಯವರು ವಾರಕ್ಕೆ ಕೇವಲ ಒಂದರಿಂದ ಎರಡು ಸಿಲಿಂಡರ್ ಮಾತ್ರ ಪೂರೈಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮಹಾ ವಿಸ್ಮಯ: 26 ವರ್ಷ ಹಿಂದೆ ಓಡಿಹೋಗಿದ್ದ ಹುಡುಗ ಕೊನೆಗೂ ವಾಪಸ್, ಸತೀಶ್ ಈಗ ಮಹಾರಾಷ್ಟ್ರದ ಸಲೀಂ!

ಸಿಲಿಂಡರ್ ಕೊರತೆಯಿಂದಾಗಿ ಅನಿವಾರ್ಯವಾಗಿ ಅಡುಗೆ ಮನೆಯ ಹೊರಗಡೆ ಸೌದೆ ಒಲೆ ಹಾಕಿ ಅಡುಗೆ ಮಾಡಲಾಗುತ್ತಿತ್ತು. ಹೊರಗಡೆ ತೆರೆದ ಜಾಗದಲ್ಲಿ ಅಡುಗೆ ಮಾಡುತ್ತಿದ್ದರಿಂದ ಹಾಗೂ ಅಡುಗೆ ತಯಾರಿಸುವವರು ಶುಚಿತ್ವ ಕಾಪಾಡದ ಕಾರಣ ಸಾಂಬಾರ್‌ಗೆ ಹಲ್ಲಿ ಬಿದ್ದಿದೆ. ಇದೇ ಅಚಾತುರ್ಯಕ್ಕೆ ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ಮುಖ್ಯ ಕಾರಣ ಎಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 400 ಜನ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‌ನ ಈ ದುಸ್ಥಿತಿಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಗ್ಯಾಸ್ ಏಜೆನ್ಸಿಯ ಬೇಜವಾಬ್ದಾರಿತನವೇ ನೇರ ಕಾರಣ ಎಂದು ಪೋಷಕರು ತೀವ್ರವಾಗಿ ಕಿಡಿಕಾರಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:55 pm, Thu, 11 June 26

Source link

ಪ್ರಣೀತ್ ಮೋರೆ ಶೋನಲ್ಲಿ ಮತ್ತೊಂದು ಕರ್ಮಕಾಂಡ; ಮೃತದೇಹದ ಖಾಸಗಿ ಅಂಗಗಳ ಬಗ್ಗೆ ಲೇವಡಿ – Kannada News

ರಿಯಾಲಿಟಿ ಶೋ ‘ಬಿಗ್ ಬಾಸ್ 19’ರ ಸೆಕೆಂಡ್ ರನ್ನರ್ ಅಪ್ ಹಾಗೂ ಸ್ಟ್ಯಾಂಡ್-ಅಪ್ ಕಮಿಡಿಯನ್ ಪ್ರಣೀತ್ ಮೋರೆ ಅವರ ಶೋ ಈಗ ಸಾಲು ಸಾಲು ವಿವಾದಗಳ ಮೂಲಕ ಭಾರಿ ಆಕ್ರೋಶಕ್ಕೆ ಈಡಾಗಿದೆ. ತಮ್ಮ ಶೋನಲ್ಲಿ ಅಸಭ್ಯ ಹಾಗೂ ಕೀಳು ಮಟ್ಟದ ಸಂಭಾಷಣೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪ್ರಣೀತ್ ಮೋರೆಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಇತ್ತೀಚೆಗಷ್ಟೇ ವೈರಲ್ ಆಗಿದ್ದ ‘370 ರೂಪಾಯಿ ಬಿರಿಯಾನಿ’ ವಿವಾದ ತಣ್ಣಗಾಗುವ ಮುನ್ನವೇ, ಅದೇ ಶೋನ ಮತ್ತೊಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕಿಚ್ಚು ಹೊತ್ತಿಸಿದೆ.

ಪ್ರಸ್ತುತ ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ಭಾಗವಹಿಸಿರುವ ಡಾ. ಸೆಜಲ್ ಪವಾರ್ ಎಂಬ ಯುವ ಮಹಿಳಾ ವೈದ್ಯೆ, ಶವಪರೀಕ್ಷೆ ನಡೆಸುವಾಗ ಪುರುಷರ ಶವಗಳ ಖಾಸಗಿ ಅಂಗಗಳನ್ನು ವೈದ್ಯರು ಹೇಗೆ ಲೇವಡಿ ಮಾಡುತ್ತಾರೆ ಮತ್ತು ತಮಾಷೆ ಮಾಡುತ್ತಾರೆ ಎಂಬ ವಿಷಯವನ್ನು ನಗುತ್ತಾ ಹಂಚಿಕೊಂಡಿದ್ದಾರೆ. ಅತ್ಯಂತ ಗೌರವಾನ್ವಿತ ವೃತ್ತಿಯಲ್ಲಿದ್ದುಕೊಂಡು, ಮೃತದೇಹಕ್ಕೆ ಕನಿಷ್ಠ ಗೌರವ ನೀಡದೆ ಈ ರೀತಿ ಸಾರ್ವಜನಿಕವಾಗಿ ಹಾಸ್ಯ ಮಾಡಿರುವುದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಬೆನ್ನಲ್ಲೇ ಡಾ. ಸೆಜಲ್ ಕ್ಷಮೆಯಾಚಿಸಿದ್ದು, ‘ನನ್ನ ಮಾತಿನ ಅರ್ಥ ಬೇರೆಯೇ ಇತ್ತು. ಆದರೆ ಅದು ತಪ್ಪಾಗಿ ಬಿಂಬಿತವಾಗಿದೆ. ಇದಕ್ಕೆ ನಾನು ಜವಾಬ್ದಾರಿ ಹೊರುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್

ಡಾ. ಸೆಜಲ್ ಅವರ ಈ ವರ್ತನೆಗೆ ಸಿನಿಮಾ ಗಣ್ಯರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ವೈದ್ಯಕೀಯ ವಿದ್ಯಾರ್ಥಿಗಳು ಕಲಿಯಲಿ ಮತ್ತು ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಕುಟುಂಬದವರು ತಮ್ಮವರ ಮೃತದೇಹವನ್ನು ದಾನ ಮಾಡುತ್ತಾರೆ. ಅದು ಅತ್ಯಂತ ದೊಡ್ಡ ನಂಬಿಕೆ. ಇಂತಹ ಕೀಳು ಮಟ್ಟದ ವರ್ತನೆಗಳಿಂದಾಗಿ ಜನರು ದೇಹದಾನ ಮಾಡುವುದನ್ನೇ ನಿಲ್ಲಿಸಿದರೆ ವೈದ್ಯಕೀಯ ಶಿಕ್ಷಣಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಇದು ಕಾಮಿಡಿಯೂ ಅಲ್ಲ, ಕಂಟೆಂಟ್ ಕೂಡ ಅಲ್ಲ’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಏನಿದು ಬಿರಿಯಾನಿ ವಿವಾದ?

ಇದಕ್ಕೂ ಮುನ್ನ ಇದೇ ಶೋನಲ್ಲಿ ಹಿಮಾಂಶು ಜಾಂಗ್ರಾ ಎಂಬ 23 ವರ್ಷದ ಯುವಕ, ತಾನು ಯುವತಿಯೊಬ್ಬಳನ್ನು ಡೇಟ್‌ಗೆ ಕರೆದೊಯ್ದು 370 ರೂಪಾಯಿ ಬಿರಿಯಾನಿ ಕೊಡಿಸಿದ್ದಾಗಿ ಹೇಳಿದ್ದನು. ‘ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ವಸೂಲಿ ಮಾಡಬೇಕಲ್ಲ’ ಎಂದು ಹೇಳಿ, ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ಅತ್ಯಂತ ಅಸಭ್ಯವಾಗಿ ಮತ್ತು ಸಾರ್ವಜನಿಕವಾಗಿ ವಿವರಿಸಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಯುವಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾದದ ಬೆನ್ನಲ್ಲೇ ಹಿಮಾಂಶು ತನ್ನ ಕೆಲಸವನ್ನು ಕಳೆದುಕೊಂಡಿದ್ದನು. ಈಗ ಅದೇ ರೀತಿ ಈ ಮಹಿಳಾ ವೈದ್ಯೆಯ ಮೇಲೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ – Kannada News

ಆಂಥ್ರೊಪಿಕ್ ಕ್ಲಾಡ್Image Credit source: Getty Images

ನವದೆಹಲಿ, ಜೂನ್ 11: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ಪ್ರಖ್ಯಾತ AI ಕಂಪನಿಯಾದ ‘ಆಂಥ್ರೊಪಿಕ್’ (Anthropic) ಜೊತೆ ಜಾಗತಿಕ ಪಾಲುದಾರಿಕೆಯನ್ನು ಘೋಷಿಸಿದೆ. ಈ ಯೋಜನೆಯ ಭಾಗವಾಗಿ, TCS ತನ್ನ 50,000 ಉದ್ಯೋಗಿಗಳಿಗೆ ಆಂಥ್ರೊಪಿಕ್‌ನ ‘ಕ್ಲಾಡ್’ (Claude) AI ಮಾಡಲ್ ಅನ್ನು ಬಳಸುವ ಕುರಿತು ತರಬೇತಿ ನೀಡಲಿದೆ. ಇಂಜಿನಿಯರಿಂಗ್, ಹಣಕಾಸು, ಕಾನೂನು, ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ಉದ್ಯೋಗಿಗಳು ಈ ತಂತ್ರಜ್ಞಾನವನ್ನು ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಲಿದ್ದಾರೆ.

ಈ ಒಪ್ಪಂದದ ಅಡಿಯಲ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು ಒಂದು ಪ್ರತ್ಯೇಕ ವ್ಯಾಪಾರ ಘಟಕವನ್ನು (Business Unit) ಸ್ಥಾಪಿಸಲಿದ್ದು, ಇದು ಆಂಥ್ರೊಪಿಕ್‌ನ ‘ಕ್ಲಾಡ್’ ಮಾದರಿಗಳನ್ನು ಬಳಸಿಕೊಂಡು ಗ್ರಾಹಕರಿಗೆ AI ಪರಿಹಾರಗಳನ್ನು ಒದಗಿಸುವ ಕೆಲಸ ಮಾಡಲಿದೆ.

ಕ್ಲಾಡ್ ಯಾವ ಕ್ಷೇತ್ರಗಳಿಗೆ ಲಾಭ?

ಹಣಕಾಸು ಸೇವೆಗಳು (Financial Services), ಆರೋಗ್ಯ ರಕ್ಷಣೆ, ಲೈಫ್ ಸೈನ್ಸಸ್, ಟೆಲಿಕಾಂ, ವಾಯುಯಾನ ಮತ್ತು ಸಾರ್ವಜನಿಕ ಸೇವೆಗಳಂತಹ ಕ್ಷೇತ್ರಗಳಿಗೆ ಈ AI ತಂತ್ರಜ್ಞಾನವನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ವಿಶ್ವಾಸಾರ್ಹತೆ ಮತ್ತು ನಿಯಂತ್ರಕ ನಿಯಮಗಳನ್ನು (Regulatory Compliance) ಕಟ್ಟುನಿಟ್ಟಾಗಿ ಪಾಲಿಸಬೇಕಾದ ಕ್ಷೇತ್ರಗಳಿಗೆ ಇದು ಹೆಚ್ಚು ಸಹಕಾರಿಯಾಗಲಿದೆ.

ಇದನ್ನೂ ಓದಿ: ಭಾರತ ವಿಭಾಗದ ಬಾಗಿಲು ಮುಚ್ಚಿದ ಅಮೆರಿಕದ ಓಪನ್​ಡೋರ್; ಕಂಪನಿಯ ಎಲ್ಲಾ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

ಆಂಥ್ರೋಪಿಕ್ ಸಿಇಒ ಹೇಳಿಕೆ

ಭಾರತವು ತಮ್ಮ ಕಂಪನಿಯ ಪಾಲಿಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಈ ಪಾಲುದಾರಿಕೆಯು ಭಾರತದಲ್ಲಿನ ತಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಆಂಥ್ರೊಪಿಕ್‌ನ ಸಿಇಒ ಡಾರಿಯೋ ಅಮೋಡೆ ಅವರು ತಿಳಿಸಿದ್ದಾರೆ.

TCS ಕಂಪನಿಯು ಕೇವಲ AI ಪ್ರಯೋಗಗಳಿಗೆ ಸೀಮಿತವಾಗದೆ, ಉತ್ಪಾದನಾ ಮಟ್ಟದಲ್ಲಿ (Production-scale) AI ಅಪ್ಲಿಕೇಶನ್‌ಗಳನ್ನು ನಿಯೋಜಿಸಲು ಮತ್ತು ಅದಕ್ಕೆ ಅಗತ್ಯವಾದ ಭದ್ರತೆ ಹಾಗೂ ನಿಖರತೆಯನ್ನು ಖಾತ್ರಿಪಡಿಸಲು ಈ ತಂತ್ರಜ್ಞಾನವನ್ನು ಬಳಸಲಿದೆ.

TCS iON ಪಾತ್ರ

ಟಿಸಿಎಸ್​ನ ‘TCS iON’ ವಿಭಾಗವು ಕ್ಲಾಡ್ ಮಾಡಲ್​ಗಳನ್ನು ಕಲಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಇದು ಭಾರತದಲ್ಲಿ ‘AI-ಸಜ್ಜಿತ’ (AI-ready) ಕಾರ್ಯಪಡೆಯನ್ನು ನಿರ್ಮಿಸಲು ನೆರವಾಗಲಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

ಟಿಸಿಎಸ್​ನ ಸಿಇಒ ಮತ್ತು ಎಂಡಿಯಾದ ಕೃತಿವಾಸನ್ ಅವರು ಈ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಟಿಸಿಎಸ್​ನ ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ಔದ್ಯಮಿಕ ಪರಿಗಣಿತಿ ಜೊತೆಗೆ ಕ್ಲಾಡ್​ನ ಶಕ್ತಿಯು ಸೇರಿದರೆ ಗ್ರಾಹಕರಿಗೆ ಎಐ ಅಳವಡಿಕೆ ಕಾರ್ಯವನ್ನು ಸುಲಭಗೊಳಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಈ ಬೆಳವಣಿಗೆಯ ನಡುವೆಯೂ, ಮಾರುಕಟ್ಟೆಯಲ್ಲಿ TCS ಷೇರುಗಳು ಸದ್ಯಕ್ಕೆ 52 ವಾರಗಳ ಕನಿಷ್ಠ ಮಟ್ಟದ ಸಮೀಪವೇ ವಹಿವಾಟು ನಡೆಸುತ್ತಿವೆ ಎಂದು ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲಿವಿಂಗ್​ಸ್ಟೋನ್ ನಾಯಕ, ಆ್ಯಂಡಿ ಫ್ಲವರ್, ದಿನೇಶ್ ಕಾರ್ತಿಕ್ ಕೋಚ್! – Kannada News

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಕ್ರಿಕೆಟ್ ಟೂರ್ನಿಯ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಲಂಡನ್ ಸ್ಪಿರಿಟ್ ತಂಡವು ತನ್ನ ನಾಯಕನನ್ನು ಹೆಸರಿಸಿದೆ. ಅದರಂತೆ ಈ ಬಾರಿ ಲಂಡನ್ ಸ್ಪಿರಿಟ್ ತಂಡವನ್ನು ಲಿಯಾಮ್ ಲಿವಿಂಗ್​ಸ್ಟೋನ್ ಮುನ್ನಡೆಸಲಿದ್ದಾರೆ. ಕಳೆದ ಬಾರಿ (2025ರ ಸೀಸನ್‌ನಲ್ಲಿ) ನ್ಯೂಝಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಲಂಡನ್ ಸ್ಪಿರಿಟ್ ತಂಡವನ್ನು ಮುನ್ನಡೆಸಿದ್ದರು.

ಇದೀಗ ಹೊಸ ತಂಡದೊಂದಿಗೆ ಹೊಸ ಪ್ರಯೋಗ ಮಾಡಲು ಲಂಡನ್ ಸ್ಪಿರಿಟ್ ಫ್ರಾಂಚೈಸಿ ಮುಂದಾಗಿದೆ. ಅದರಂತೆ ಆಲ್​ರೌಂಡರ್ ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್​ಗೆ ನಾಯಕತ್ವ ನೀಡಲಾಗಿದೆ.

ಆ್ಯಂಡಿ ಫ್ಲವರ್, ದಿನೇಶ್ ಕಾರ್ತಿಕ್ ಕೋಚ್:

ಲಂಡನ್ ಸ್ಪಿರಿಟ್ ತಂಡದ ಡೈರೆಕ್ಟರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಮೊ ಬೊಬಾಟ್. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕರು. ಹೀಗಾಗಿಯೇ ಇದೀಗ ಲಂಡನ್ ಸ್ಪಿರಿಟ್ ತಂಡಕ್ಕೂ ಆರ್​ಸಿಬಿ ತಂಡದ ಯಶಸ್ವಿ ಜೋಡಿಯ ಎಂಟ್ರಿಯಾಗಿದೆ. ಅಂದರೆ ಆರ್​ಸಿಬಿ ತಂಡದ ಮುಖ್ಯ ಕೋಚ್ ಹಾಗೂ ಮೆಂಟರ್ ಲಂಡನ್ ಸ್ಪಿರಿಟ್ ತಂಡದ ಪರ ಕಾರ್ಯ ನಿರ್ವಹಿಸಲಿದ್ದಾರೆ.

  • ಆ್ಯಂಡಿ ಫ್ಲವರ್ (ಮುಖ್ಯ ಕೋಚ್): ಆರ್​ಸಿಬಿ ತಂಡದ ಕೋಚ್ ಆಗಿ ಬ್ಯಾಕ್ ಟು ಬ್ಯಾಕ್ ಎರಡು ಟ್ರೋಫಿ ಗೆದ್ದಿರುವ ಆ್ಯಂಡಿ ಫ್ಲವರ್ ಈ ಬಾರಿ ಲಂಡನ್ ಸ್ಪಿರಿಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ಹಿಸಲಿದ್ದಾರೆ.
  • ದಿನೇಶ್ ಕಾರ್ತಿಕ್ (ಮೆಂಟರ್/ಕೋಚ್): ಲಂಡನ್ ಸ್ಪಿರಿಟ್ ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿರುವುದು ಆರ್​ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್.
  • ಆರ್​ಸಿಬಿ ಮಾಜಿ ಆಟಗಾರ: ಲಿಯಾಮ್ ಲಿವಿಂಗ್​ಸ್ಟೋನ್ ಆರ್​ಸಿಬಿ ತಂಡದ ಮಾಜಿ ಆಟಗಾರ ಎಂಬುದು ಉಲ್ಲೇಖಾರ್ಹ. ಆರ್​ಸಿಬಿ ತಂಡ ಚೊಚ್ಚಲ ಟ್ರೋಫಿ ಗೆದ್ದಾಗ ಲಿವಿಂಗ್​ಸ್ಟೋನ್ ಕೂಡ ತಂಡದ ಭಾಗವಾಗಿದ್ದರು. ಇದೀಗ ಲಿವಿಂಗ್​ಸ್ಟೋನ್​ಗೆ ನಾಯಕತ್ವ ನೀಡಿ ಆ್ಯಂಡಿ ಫ್ಲವರ್​, ದಿನೇಶ್ ಕಾರ್ತಿಕ್ ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನು ಬೌಲಿಂಗ್ ಕೋಚ್ ಆಗಿ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಅವರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಲಂಡನ್ ಸ್ಪಿರಿಟ್ ಬಲಿಷ್ಠ ಕೋಚಿಂಗ್ ಬಳಗವನ್ನು ರೂಪಿಸಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಭಾರತೀಯ..!

ಲಂಡನ್ ಸ್ಪಿರಿಟ್ ತಂಡ: ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ/ಇಂಗ್ಲೆಂಡ್), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಡೆವಾಲ್ಡ್ ಬ್ರೆವಿಸ್ (ಸೌತ್ ಆಫ್ರಿಕಾ), ಆ್ಯಡಂ ಹೋಸ್ (ಇಂಗ್ಲೆಂಡ್), ಲುಹಾನ್-ಡ್ರೆ ಪ್ರಿಟೋರಿಯಸ್ (ಸೌತ್ ಆಫ್ರಿಕಾ), ಜೇಮ್ಸ್ ರೀವ್ (ಇಂಗ್ಲೆಂಡ್), ಜೇಮ್ಸ್ ಕೋಲ್ಸ್ (ಇಂಗ್ಲೆಂಡ್), ಜೇಮಿ ಓವರ್ಟನ್ (ಇಂಗ್ಲೆಂಡ್), ಡೇವಿಡ್ ವಿಲ್ಲಿ (ಇಂಗ್ಲೆಂಡ್), ಆ್ಯಡಂ ಝಂಪಾ (ಆಸ್ಟ್ರೇಲಿಯಾ), ಟೈಮಲ್ ಮಿಲ್ಸ್ (ಇಂಗ್ಲೆಂಡ್), ಆಡಮ್ ಮಿಲ್ನ್ (ನ್ಯೂಝಿಲೆಂಡ್), ಮ್ಯಾಥ್ಯೂ ಫಿಶರ್ (ಇಂಗ್ಲೆಂಡ್) ಮತ್ತು ಮೇಸನ್ ಕ್ರೇನ್ (ಇಂಗ್ಲೆಂಡ್).

Source link

ನಾಯಿ ಹಾಗೂ ಎರಡು ವರ್ಷದ ಮಗು ನಾಲ್ಕು ದಿನಗಳಿಂದ ನಾಪತ್ತೆ, ಮೂರು ದಿನಗಳ ಬಳಿಕ ವಾಪಸಾದ ನಾಯಿ – Kannada News

ಕಾಕಿನಾಡ, ಜೂನ್ 11: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಟುನಿ ಮಂಡಲದ ಸಿಎಚ್ ಅಗ್ರಹಾರದ ತಾಳೆ ಎಣ್ಣೆ ತೋಟದಲ್ಲಿ ಕಾವಲುಗಾರರಾಗಿರುವ ಸುಂಕರ ಭವಾನಿ ಮತ್ತು ಗಣೇಶ್ ದಂಪತಿಯ ಎರಡು ವರ್ಷದ ಮುದ್ದಾದ ಮಗಳು ಜಾಹ್ನವಿ ಕಾಣೆಯಾಗಿ ನಾಲ್ಕು ದಿನಗಳಾಗಿವೆ. ಮಗಳ ಮುಖ ನೋಡಲು ತಾಯಿ ಕಂಗಾಲಾಗಿದ್ದರೆ, ಮತ್ತೊಂದೆಡೆ ಇಡೀ ಆಡಳಿತ ಯಂತ್ರವೇ ಆಕೆಯನ್ನು ಪತ್ತೆಹಚ್ಚಲು ಬೆಟ್ಟ-ಗುಡ್ಡಗಳನ್ನು ಜಾಲಾಡುತ್ತಿದೆ. ಸದ್ಯಕ್ಕೆ ಗಾಢ ಕತ್ತಲೆಯಂತಿರುವ ಈ ಕಥೆಯಲ್ಲಿ ಈಗ ಸಾಕು ನಾಯಿ(Dog)ಯ ಅಚ್ಚರಿಯ ನಡೆ ಮತ್ತು ಅಧಿಕಾರಿಗಳ ತೀವ್ರ ಶೋಧ ಕಾರ್ಯವು ಮಗು ಜೀವಂತವಾಗಿ ಮರಳಿ ಬರಲಿದ್ದಾಳೆ ಎಂಬ ದೊಡ್ಡ ಭರವಸೆಯ ಕಿರಣವನ್ನು ಮೂಡಿಸಿದೆ.

ಅಚ್ಚರಿ ತಂದ ಸಾಕು ನಾಯಿಯ ಆಗಮನ ಮತ್ತು ಮಹತ್ವದ ಸುಳಿವು
ಜಾಹ್ನವಿ ನಾಪತ್ತೆಯಾದ ದಿನದಿಂದ ಆಕೆಯ ಬೆನ್ನಿಗೇ ಹೋಗಿದ್ದ ಸಾಕು ನಾಯಿ ಕೂಡ ನಾಪತ್ತೆಯಾಗಿತ್ತು. ಆದರೆ, ಮೂರು ದಿನಗಳ ನಂತರ ಹಠಾತ್ ಆಗಿ ಮನೆಗೆ ಮರಳಿದ ನಾಯಿ, ಮಗು ಎಲ್ಲಿದ್ದಾಳೆ ಎಂಬುದಕ್ಕೆ ಪ್ರಕೃತಿಯೇ ನೀಡಿದಂತೆ ಒಂದು ರೋಚಕ ಸುಳಿವನ್ನು ಬಿಟ್ಟುಕೊಟ್ಟಿದೆ.

ಮನೆಯ ಬಳಿ ಬಂದ ನಾಯಿ, ಮಗುವಿನ ತಾಯಿ ಭವಾನಿಯ ಬಳಿ ಬಂದು ಆಕೆಯ ಸೀರೆಯ ಸೆರಗು ಎಳೆದು ಮತ್ತೆ ಗುಡ್ಡಗಾಡು ಪ್ರದೇಶದತ್ತ ಓಡಿದೆ. ನಾಯಿಯ ಈ ವಿಚಿತ್ರ ವರ್ತನೆಯು “ಮಗು ಗುಡ್ಡದ ಮೇಲಿದ್ದಾಳೆ, ನನ್ನ ಜೊತೆ ಬನ್ನಿ ಎಂದು ಕರೆಯುತ್ತಿರುವ ಸಂಕೇತದಂತಿದೆ. ನಾಯಿ ತಡವಾಗಿ ಬಂದಿರುವುದು ಮತ್ತು ಮಗುವಿನ ಬಟ್ಟೆಯನ್ನು ಎಳೆಯುತ್ತಿರುವುದು ನೋಡಿದರೆ, ಮಗು ಸುರಕ್ಷಿತವಾಗಿದ್ದಾಳೆ ಮತ್ತು ನಾಯಿಯೇ ಇಷ್ಟು ದಿನ ಆಕೆಗೆ ಕಾವಲಾಗಿತ್ತು ಎಂಬ ಆಶಾವಾದ ಪೋಷಕರಲ್ಲಿ ಚಿಗುರೊಡೆದಿದೆ.

ಮತ್ತಷ್ಟು ಓದಿ: Video: 30 ಸೆಕೆಂಡುಗಳಲ್ಲಿ ಹಲವರಿಗೆ ಕಚ್ಚಿದ ಬೀದಿ ನಾಯಿ

ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ: 200ಕ್ಕೂ ಹೆಚ್ಚು ಸಿಬ್ಬಂದಿ ಕಣಕ್ಕೆ
ಪುಟ್ಟ ಕಂದಮ್ಮನನ್ನು ಹೇಗಾದರೂ ಮಾಡಿ ತಾಯಿಯ ಮಡಿಲು ಸೇರಿಸಲೇಬೇಕು ಎಂದು ಪೆಡ್ಢಾಪುರಂ ವಿಭಾಗದ 200 ಕ್ಕೂ ಹೆಚ್ಚು ಪೊಲೀಸರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಅರಣ್ಯದ ಹಾದಿಗಳು ಮತ್ತು ದಟ್ಟವಾದ ತಾಳೆ ತೋಟಗಳಲ್ಲಿ ಆಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಕಣ್ಗಾವಲು ಇಡಲಾಗಿದೆ. ಇತ್ತೀಚೆಗೆ ಗುಡ್ಡಗಾಡು ಪ್ರದೇಶದಲ್ಲಿ ಮಗುವಿನ ಅಳುವ ಶಬ್ದ ಕೇಳಿಸಿದೆ ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದ್ದು, ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ
ಮಗುವಿನ ಪತ್ತೆಗೆ ಸಾರ್ವಜನಿಕರ ಸಹಕಾರವನ್ನೂ ಕೋರಿರುವ ಪೊಲೀಸರು, ಜಾಹ್ನವಿ ಬಗ್ಗೆ ನಿಖರ ಮಾಹಿತಿ ನೀಡುವವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಮಾಹಿತಿ ನೀಡಿದವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ನಿರ್ಧಾರದಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರೂ ಸಹ ಈಗ ಜಾಗೃತರಾಗಿದ್ದು, ಹುಡುಕಾಟಕ್ಕೆ ದೊಡ್ಡ ಬಲ ಬಂದಿದೆ.

ನಾಯಿಯ ಚಲನವಲನಗಳ ಮೇಲೆ ತಜ್ಞರ ನಿಗಾ
ತುನಿ ಪುರಸಭೆ ಆಯುಕ್ತ ವೆಂಕಟ್ ರಾವ್ ನೇತೃತ್ವದಲ್ಲಿ ಸಾಕು ನಾಯಿಯನ್ನು ಸದ್ಯ ಸುರಕ್ಷಿತವಾಗಿ ಸೆರೆಹಿಡಿಯಲಾಗಿದ್ದು, ಶ್ವಾನದಳದ ತಜ್ಞರು ಅದರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಯಿ ತೋರಿಸುವ ದಾರಿಯಲ್ಲೇ ಸಾಗಲು ಪೊಲೀಸರು ಬ್ಲೂಪ್ರಿಂಟ್ ಸಿದ್ಧಪಡಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:19 pm, Thu, 11 June 26

Source link

Exit mobile version