ಆಲಿಯಾ ಭಟ್ ‘ಆಲ್ಫಾ’ ಹಾಲಿವುಡ್ ಚಿತ್ರದ ಕಾಪಿ? ಸಿಕ್ಕಿತು ಸಾಕ್ಷಿ – Kannada News

ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಅತ್ಯಂತ ಬಿಗ್ ಬಜೆಟ್‌ನ ಆ್ಯಕ್ಷನ್ ಚಿತ್ರ ‘ಆಲ್ಫಾ’ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಲಿಯಾ ಭಟ್ ಹಾಗೂ ಶರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಆದರೆ, ಈ ಟೀಸರ್ ಮೆಚ್ಚುಗೆ ಗಳಿಸುವುದಕ್ಕಿಂತ ಹೆಚ್ಚಾಗಿ ಟ್ರೋಲ್‌ಗಳಿಗೆ ಮತ್ತು ಕೃತಿ ಚೌಚರ್ಯದ ಆರೋಪ ಹೊತ್ತು ವಿವಾದಕ್ಕೆ ಸಿಲುಕಿದೆ. ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಈ ಚಿತ್ರವು 1990ರ ಪ್ರಸಿದ್ಧ ಫ್ರೆಂಚ್ ಥ್ರಿಲ್ಲರ್ ಸಿನಿಮಾ ‘ಲಾ ಫೆಮ್ಮೆ ನಿಕಿತಾ’ ಚಿತ್ರದ ರಿಮೇಕ್ ಇರಬಹುದು ಎಂದು ಊಹಿಸಲಾಗಿದೆ.

ಟೀಸರ್‌ನ ಆರಂಭದಲ್ಲಿ ಬಾಬಿ ಡಿಯೋಲ್ ಮತ್ತು ಆಲಿಯಾ ಭಟ್ ಐಷಾರಾಮಿ ರೆಸ್ಟೋರೆಂಟ್‌ ಒಂದರಲ್ಲಿ ಊಟ ಮಾಡುತ್ತಿರುವ ದೃಶ್ಯವಿದೆ. ಆಲಿಯಾಗೆ 18ನೇ ವರ್ಷದ ಹುಟ್ಟುಹಬ್ಬದ ಶುಭಕೋರುವ ಬಾಬಿ ಡಿಯೋಲ್, ಒಂದು ಕಾರ್ಡ್ ನೀಡಿ ಅದರಲ್ಲಿರುವ ರೂಮ್ ನಂಬರ್ ತೋರಿಸಿ, ಇಷ್ಟು ವರ್ಷ ಪಡೆದ ತರಬೇತಿಯನ್ನು ಬಳಸಿಕೊಳ್ಳುವ ಸಮಯ ಬಂದಿದೆ ಎಂದು ಮೊದಲ ಮಿಷನ್ ನೀಡುತ್ತಾರೆ. ಈ ದೃಶ್ಯವೇ ಈಗ ವಿವಾದಕ್ಕೆ ಕಾರಣವಾಗಿದೆ.
1990ರ ಲ್ಯೂಕ್ ಬೆಸ್ಸನ್ ನಿರ್ದೇಶನದ ‘ಲಾ ಫೆಮ್ಮೆ ನಿಕಿತಾ’ ಚಿತ್ರದಲ್ಲೂ ಇಂತಹುದೇ ದೃಶ್ಯವಿದೆ. ಅಲ್ಲಿಯೂ ನಾಯಕಿಯನ್ನು ರೆಸ್ಟೋರೆಂಟ್‌ಗೆ ಕರೆದೊಯ್ದು ಹುಟ್ಟುಹಬ್ಬದ ಸೋಗಿನಲ್ಲಿ ಗನ್ ನೀಡಿ ಕೊಲೆ ಮಾಡಲು ಕಳುಹಿಸಲಾಗುತ್ತದೆ. ಈ ಎರಡೂ ದೃಶ್ಯಗಳನ್ನು ಹೋಲಿಸಿರುವ ನೆಟ್ಟಿಗರು, ಶೇಕಡಾ 90 ರಷ್ಟು ದೃಶ್ಯಗಳನ್ನು ಹಾಗೆಯೇ ನಕಲು ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಆಲ್ಫಾ ಚಿತ್ರದ ಆರಂಭದ ದೃಶ್ಯವನ್ನು ಫ್ರೆಂಚ್ ಕ್ಲಾಸಿಕ್ ಸಿನಿಮಾ ‘ಲಾ ಫೆಮ್ಮೆ ನಿಕಿತಾ’ದಿಂದ ಮುಕ್ತವಾಗಿ ಕಾಪಿ ಮಾಡಲಾಗಿದೆ. ಕೇವಲ ದೃಶ್ಯ ಮಾತ್ರವಲ್ಲ, ಚಿತ್ರದ ಕಥೆಯೂ ಅದೇ ರೀತಿ ಇರುವಂತೆ ಕಾಣುತ್ತಿದೆ’ ಎಂದು ಬರೆಯಾಲಗಿದೆ. ಕೇವಲ ಫ್ರೆಂಚ್ ಚಿತ್ರ ಮಾತ್ರವಲ್ಲದೆ, ಹಾಲಿವುಡ್‌ನ ಮತ್ತೊಂದು ಪ್ರಸಿದ್ಧ ಚಿತ್ರದ ಸಂಭಾಷಣೆಯನ್ನೂ ಈ ಸಿನಿಮಾದಲ್ಲಿ ಕದಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಟೀಸರ್‌ನಲ್ಲಿ ಬಾಬಿ ಡಿಯೋಲ್ ಅವರು ಆಲಿಯಾಗೆ ತರಬೇತಿ ನೀಡುವಾಗ ‘ತೋಳ ಮತ್ತು ಕುರಿ’ಯ ಉದಾಹರಣೆ ನೀಡಿ ಮಾತನಾಡುವ ಡೈಲಾಗ್ ಇದೆ. ಇದು ಕ್ಲಿಂಟ್ ಈಸ್ಟ್‌ವುಡ್ ನಿರ್ದೇಶನದ, ಬ್ರಾಡ್ಲಿ ಕೂಪರ್ ನಟನೆಯ 2014ರ ಸೂಪರ್ ಹಿಟ್ ವಾರ್ ಡ್ರಾಮಾ ‘ಅಮೆರಿಕನ್ ಸ್ನೈಪರ್’ ಚಿತ್ರದ ಸಂಭಾಷಣೆಯನ್ನು ಹೋಲುತ್ತದೆ ಎಂದು ಸಿನಿಮಾ ಪ್ರೇಮಿಗಳು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: ‘ಆಲ್ಫಾ’ ಚಿತ್ರದ ಮೂಲಕ ಆ್ಯಕ್ಷನ್​​ಗೆ ಇಳಿದ ನಟಿ ಆಲಿಯಾ ಭಟ್; ಇಲ್ಲಿದೆ ಟೀಸರ್

ಸ್ವಂತಿಕೆ ಇಲ್ಲದೆ ಬೇರೆ ದೇಶದ ಸಿನಿಮಾಗಳನ್ನು ಕಾಪಿ ಮಾಡುತ್ತಿರುವ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ವಿರುದ್ಧ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ಬ್ಯಾನರ್ ಮತ್ತು ಸ್ಟಾರ್ ನಟರಿದ್ದರೂ ಕಥೆಗಾಗಿ ಬೇರೆ ಚಿತ್ರಗಳನ್ನು ಅವಲಂಬಿಸಿರುವುದು ಬಾಲಿವುಡ್‌ನ ಸೃಜನಶೀಲತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಟ್ರೋಲ್ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ? – Kannada News

ನವದೆಹಲಿ, ಜೂನ್ 11: ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪೂರ್ಣ ರದ್ದುಗೊಳಿಸಿದೆ. ಆದರೆ, ಸಾಮಾನ್ಯ ಗ್ರಾಹಕರು ಪೆಟ್ರೋಲ್​ನ ಬೆಲೆಯಲ್ಲಿ ತಕ್ಷಣಕ್ಕೆ ಯಾವುದೇ ಇಳಿಕೆಯಾಗುವುದಿಲ್ಲ. ಹಣಕಾಸು ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಈ ಅಬಕಾರಿ ಸುಂಕ ವಿನಾಯಿತಿಯು ಕೇವಲ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ (High Ethanol Blended Petrol) ಮಾತ್ರ ಅನ್ವಯಿಸುತ್ತದೆ.

ಇ22, ಇ25, ಇ27 ಮತ್ತು ಇ30 ಪೆಟ್ರೋಲ್​ಗೆ (ಅಂದರೆ ಶೇ. 22 ರಿಂದ ಶೇ. 30 ರವರೆಗೆ ಎಥೆನಾಲ್ ಹೊಂದಿರುವ ಇಂಧನ ಮಿಶ್ರಣಗಳು) ಮಾತ್ರ ಅಬಕಾರಿ ಸುಂಕವನ್ನು ಶೂನ್ಯ (Nil) ಮಾಡಲಾಗಿದೆ. ಸದ್ಯಕ್ಕೆ ಭಾರತದ ಬಹುತೇಕ ಬಂಕ್‌ಗಳಲ್ಲಿ ಸಿಗುತ್ತಿರುವುದು ಇ20 (ಶೇ. 20 ಎಥೆನಾಲ್) ಪೆಟ್ರೋಲ್ ಆಗಿದೆ. ಇದಕ್ಕೆ ಈ ಹೊಸ ವಿನಾಯಿತಿ ಅನ್ವಯಿಸುವುದಿಲ್ಲ.

ಗ್ರಾಹಕರ ಮೇಲಿನ ಪರಿಣಾಮವೇನು? ಪೆಟ್ರೋಲ್ ದರ ಇಳಿಯುವುದೇ?

ತಜ್ಞರ ಪ್ರಕಾರ, ಸಾಮಾನ್ಯ ವಾಹನ ಸವಾರರ ಮೇಲೆ ತಕ್ಷಣಕ್ಕೆ ಇದರ ನೇರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಶೇ. 22 ಕ್ಕಿಂತ ಹೆಚ್ಚು ಎಥನಾಲ್ ಹೊಂದಿರುವ ಇಂಧನಗಳು ಇನ್ನು ದೇಶಾದ್ಯಂತ ವ್ಯಾಪಕವಾಗಿ ಮಾರುಕಟ್ಟೆಗೆ ಬರಬೇಕಿದೆ.

ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

ಹೆಚ್ಚು ಎಥನಾಲ್ ಮಿಶ್ರಿತ ಇಂಧನವು ಮಾರುಕಟ್ಟೆ ಬಂದರೂ ಬೆಲೆ ಕಡಿಮೆ ಆಗುತ್ತದೆ ಎಂದು ಖಾತ್ರಿ ಇಲ್ಲ. ಯಾಕೆಂದರೆ ಕೈಗಾರಿಕಾ ತ್ಯಾಜ್ಯಗಳಿಂದ ಸಿಗುವ ಎಥನಾಲ್ ಅನ್ನು ಪಡೆಯಲು ಮಾಡುವ ವೆಚ್ಚ ಸಂಸ್ಕರಿತ ಪೆಟ್ರೋಲ್​ಗಿಂತ ಕಡಿಮೆ ಏನಿಲ್ಲ. ಹೀಗಾಗಿ, ಪೆಟ್ರೋಲ್ ಬೆಲೆ ಸದ್ಯಕ್ಕೆ ಇಳಿಕೆ ಕಾಣುವ ಸಾಧ್ಯತೆ ಬಹಳ ಕಡಿಮೆ.

ಸರ್ಕಾರದ ಈ ಕ್ರಮಕ್ಕೆ ಪ್ರಮುಖ ಕಾರಣಗಳು

ಇತ್ತೀಚೆಗಷ್ಟೇ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇ30 ಇಂಧನಕ್ಕೆ ಹೊಸ ಸುರಕ್ಷತಾ ಮತ್ತು ಗುಣಮಟ್ಟದ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಭವಿಷ್ಯದಲ್ಲಿ ದೇಶವು ಶೇ. 30 ಎಥೆನಾಲ್ ಮಿಶ್ರಣದ ಗುರಿ ಹೊಂದಿದ್ದು, ಅದಕ್ಕೆ ಪೂರಕವಾಗಿ ತೈಲ ಕಂಪನಿಗಳಿಗೆ ಈ ತೆರಿಗೆ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ಒಮಾನ್-ಭಾರತ ಗ್ಯಾಸ್ ಪೈಪ್​ಲೈನ್ ಪ್ರಾಜೆಕ್ಟ್​ಗೆ ಮರುಜೀವ; ಸಾಧ್ಯತಾ ವರದಿಗೆ ಸರ್ಕಾರ ಆದೇಶ; ಈ ಯೋಜನೆಯಿಂದ ಭಾರತಕ್ಕಿದೆಯಾ ಲಾಭ?

ಎಥೆನಾಲ್ ಅನ್ನು ಕಬ್ಬು, ಜೋಳ ಹಾಗೂ ಧಾನ್ಯಗಳಿಂದ ತಯಾರಿಸುವುದರಿಂದ, ಇದರ ಬಳಕೆ ಹೆಚ್ಚಾದಂತೆ ದೇಶದ ರೈತರ ಆದಾಯ ಹೆಚ್ಚಾಗಲಿದೆ. ಹಾಗೆಯೇ, ಮತ್ತೊಂದು ಬಹಳ ಮುಖ್ಯವಾದ ಲಾಭ ಎಂದರೆ, ಆಮದು ವೆಚ್ಚ ಕಡಿಮೆ ಆಗುವುದು. ಅಂದರೆ, ಕಚ್ಚಾ ತೈಲದ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ವಿದೇಶಿ ವಿನಿಮಯದ ಮೇಲಿನ ಹೊರೆ ಕಡಿಮೆ ಆಗುತ್ತದೆ. ದೀರ್ಘಾವಧಿಯಲ್ಲಿ ಆರ್ಥಿಕತೆಯ ಮೇಲಿನ ಹೊರೆಯನ್ನೂ ತಗ್ಗಿಸುತ್ತದೆ.

ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲೆ ಅಬಕಾರಿ ಸುಂಕವನ್ನು ರದ್ದುಗೊಳಿಸುವ ಈ ನಿರ್ಧಾರದಿಂದ ನಮ್ಮ ಇಂದಿನ ಅಥವಾ ನಾಳೆಯ ಪೆಟ್ರೋಲ್ ಬಿಲ್ ಕಡಿಮೆ ಆಗುವುದಿಲ್ಲ. ಆದರೆ ಭವಿಷ್ಯದಲ್ಲಿ ಇ30 ಇಂಧನ ಲಭ್ಯವಾದಾಗ ಅದು ಸಾಮಾನ್ಯ ಪೆಟ್ರೋಲ್‌ಗಿಂತ ಸ್ವಲ್ಪ ಅಗ್ಗವಾಗಿ ಸಿಗುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

200ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ! – Kannada News

ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡ ನಾಯಕ ಇಮ್ರಾನ್ ಮಿರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ಪರ ವೈಭವ್ ಸೂರ್ಯವಂಶಿ ಹಾಗೂ ಪ್ರಭ್​ಸಿಮ್ರಾನ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ವೈಭವ್ ಸೂರ್ಯವಂಶಿ ಬ್ಯಾಕ್ ಟು ಬ್ಯಾಕ್ ಫೋರ್​ಗಳನ್ನು ಬಾರಿಸುವ ಮೂಲಕ ಗಮನ ಸೆಳೆದರು. ಯುವ ದಾಂಡಿಗನ ಈ ಅಬ್ಬರದೊಂದಿಗೆ ಟೀಮ್ ಇಂಡಿಯಾ ಮೊದಲ 7 ಓವರ್​ಗಳಲ್ಲಿ 74 ರನ್​ ಕಲೆಹಾಕಿತು.

ಆದರೆ 8ನೇ ಓವರ್​ನ ಮೊದಲ ಎಸೆತವನ್ನು ಅಪ್ಪರ್ ಕಟ್ ಮಾಡಿ ಮೈದಾನದ ಹೊರಗೆ ಅಟ್ಟುಲು ಯತ್ನಿಸಿದ ವೈಭವ್ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ ವೈಭವ್ ಸೂರ್ಯವಂಶಿಯ ಸ್ಫೋಟಕ ಇನಿಂಗ್ಸ್ ಅಂತ್ಯಗೊಂಡಿತು.

200ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ ವೈಭವ್:

ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 200ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬೀಸಿ 44 ರನ್ ಕಲೆಹಾಕಿದರು. ಇದರ ನಡುವೆ 9 ಭರ್ಜರಿ ಫೋರ್​ಗಳನ್ನು ಬಾರಿಸಿದ್ದರು.

ಆದರೆ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 6 ರನ್​ಗಳಿಂದ ಭಾರತ ಎ ಪರ ಚೊಚ್ಚಲ ಅರ್ಧಶತಕ ಬಾರಿಸುವ ಅವಕಾಶವನ್ನು ಕೈ ಚೆಲ್ಲಿಕೊಂಡರು.

ಇನ್ನು ವೈಭವ್ ಸೂರ್ಯವಂಶಿ ಔಟಾದ ಬಳಿಕ ಬಂದ ಪ್ರಿಯಾಂಶ್ ಆರ್ಯ ಕೇವಲ 8 ರನ್​ಗಳಿಸಿ ಔಟಾಗಿದ್ದಾರೆ. ಇದೀಗ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಮುಂದುವರೆಸಿದ್ದು, 12 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 104 ರನ್​ ಕಲೆಹಾಕಿದೆ.

ಭಾರತ ಎ ಪ್ಲೇಯಿಂಗ್ 11:  ವೈಭವ್ ಸೂರ್ಯವಂಶಿ ,ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ಪ್ರಿಯಾಂಶ್ ಆರ್ಯ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ), ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ಅರ್ಷದ್ ಖಾನ್, ವಿಪ್ರಾಜ್ ನಿಗಮ್, ಅನ್ಕುಲ್ ರಾಯ್, ಅನ್ಶುಲ್ ಕಂಬೋಜ್.

ಇದನ್ನೂ ಓದಿ: ಒಲಿಂಪಿಕ್ಸ್​ಗೆ ಕೊಹ್ಲಿಯನ್ನು ಆಯ್ಕೆ ಮಾಡಿ: ಮಾಜಿ ಆಟಗಾರನ ಸಲಹೆ!

ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ಇಮ್ರಾನ್ ಮೀರ್ (ನಾಯಕ), ಹಸನ್ ಐಸಾಖಿಲ್, ಖಾಲಿದ್ ತನಿವಾಲ್ , ಇಜಾಝ್ ಅಹ್ಮದ್ ,
ಬಹೀರ್ ಶಾ , ಇಶಾಕ್ ರಹೀಮಿ (ವಿಕೆಟ್ ಕೀಪರ್) , ಖಲೀಲ್ ಗುರ್ಬಾಝ್ , ಝಹೀರ್ ಖಾನ್ , ಅಬ್ದುಲ್ಲಾ ಅಹ್ಮದ್​ಝಾಹಿ,  ಮೊಹಮ್ಮದ್ ಇಬ್ರಾಹಿಂ , ಫರ್ಮಾನುಲ್ಲಾ ಸಫಿ.

Source link

ನಾಪತ್ತೆಯಾಗಿ 26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ – Kannada News

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More

Source link

ದುಡ್ಡು ಕೊಟ್ರೆ ಸಿಗುತ್ತೆ SSLC, PUC, ಡಿಗ್ರಿ ನಕಲಿ ಅಂಕ ಪಟ್ಟಿ! ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆ – Kannada News

‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ ಹಾಗೂ ಒಳಚಿತ್ರದಲ್ಲಿ ಬಂಧಿತ ಆರೋಪಿ ರಾಜಾರೆಡ್ಡಿImage Credit source: tv9

ಬೆಂಗಳೂರು, ಜೂನ್ 11: ಓದದೇ ಇದ್ದರೂ ಪದವಿ ಕೊಡಿಸುವುದಾಗಿ ನಂಬಿಸಿ ನಕಲಿ ಅಂಕಪಟ್ಟಿಗಳನ್ನು (Fake Marks Card) ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ನಗರದ ಕೋರಮಂಗಲದಲ್ಲಿ ಕಚೇರಿ ತೆರೆದು ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸುತ್ತಿದ್ದ ಪ್ರಮುಖ ಆರೋಪಿ ರಾಜಾರೆಡ್ಡಿ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ದಂಧೆಯ ಪ್ರಮುಖ ಸೂತ್ರಧಾರಿಗಳು ಎನ್ನಲಾದ ಕಾರ್ತಿಕ್ ಹಾಗೂ ಆರ್ಯನ್ ಎಂಬುವವರು ಸದ್ಯ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದು, ಅವರಿಗಾಗಿ ಖಾಕಿ ಪಡೆ ಬಲೆ ಬೀಸಿದೆ.

ಮುಖ್ಯಾಂಶಗಳು

  • ಸಿಸಿಬಿ ಪೊಲೀಸರಿಂದ ನಕಲಿ ಅಂಕಪಟ್ಟಿ ಜಾಲ ಪತ್ತೆ.
  • ಕೋರಮಂಗಲದಲ್ಲಿ ರಾಜಾರೆಡ್ಡಿ ಎಂಬ ಆರೋಪಿ ಬಂಧನ.
  • ₹30 ರಿಂದ ₹50 ಸಾವಿರಕ್ಕೆ ಮಾರಾಟ.

ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ ಹೆಸರಿನಲ್ಲಿ ವಂಚನೆ

ಬಂಧಿತ ಆರೋಪಿ ರಾಜಾರೆಡ್ಡಿ ಕೋರಮಂಗಲದಲ್ಲಿ ‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ (Digital Distance Education Mission)’ ಹೆಸರಿನಲ್ಲಿ ನಕಲಿ ಕಚೇರಿ ತೆರೆದಿದ್ದ. ವಿವಿಧ ಕಾಲೇಜುಗಳಲ್ಲಿ ಅಡ್ಮಿಷನ್ ಕೊಡಿಸುವುದಾಗಿ ಅಭ್ಯರ್ಥಿಗಳಿಗೆ ಫೋನ್ ಕರೆ ಮಾಡುತ್ತಿದ್ದ ಈತ, ಫ್ಲಾರೆನ್ಸ್, ಕಲಾನಿಕೇತನ್, ಎಂವಿಜೆ (MVJ) ಹಾಗೂ ಟಿಪ್ಪು ಸುಲ್ತಾನ್ ಕಾಲೇಜು ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಕೊಡಿಸುವುದಾಗಿ ಆಮಿಷ ಒಡ್ಡುತ್ತಿದ್ದ. ಕಾಲೇಜಿಗೆ ಹೋಗಿ ಓದದೇ ಇದ್ದರೂ ನೇರವಾಗಿ ಪದವಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತೇವೆ ಎಂದು ನಂಬಿಸಿ, ಹಣ ಪಡೆದು ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿಕೊಡುತ್ತಿದ್ದನು.

ದುಡ್ಡು ಕೊಟ್ರೆ ಮನೆಗೇ ಬರುತ್ತಿತ್ತು ಅಂಕಪಟ್ಟಿಯುಳ್ಳ ಕೊರಿಯರ್

ಆರೋಪಿ ರಾಜಾರೆಡ್ಡಿಯು ತಲೆಮರೆಸಿಕೊಂಡಿರುವ ಆರ್ಯನ್ ಹಾಗೂ ಕಾರ್ತಿಕ್ ಸಹಾಯದಿಂದ ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC) ಹಾಗೂ ವಿವಿಧ ಪದವಿಗಳ (Degree) ನಕಲಿ ಅಂಕಪಟ್ಟಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಸಿದ್ಧಪಡಿಸುತ್ತಿದ್ದ. ಈ ನಕಲಿ ಮಾರ್ಕ್ಸ್ ಕಾರ್ಡ್‌ಗಳನ್ನು ಪ್ರತಿಯೊಂದಕ್ಕೆ 30,000 ದಿಂದ 50,000 ರೂ.ವರೆಗಿನ ದರಕ್ಕೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ. ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಹಣ ಪಡೆದು, ನಕಲಿ ಅಂಕಪಟ್ಟಿಗಳನ್ನು ಅವರ ಮನೆ ವಿಳಾಸಕ್ಕೆ ಕೊರಿಯರ್ (Courier) ಮೂಲಕ ತಲುಪಿಸುವ ಮೂಲಕ ಯಾರಿಗೂ ಅನುಮಾನ ಬಾರದಂತೆ ಜಾಲ ನಡೆಸುತ್ತಿದ್ದ.

50ಕ್ಕೂ ಅಧಿಕ ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆ

ನಗರದಲ್ಲಿ ಇಂತಹದ್ದೊಂದು ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಯುತ್ತಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸಿಸಿಬಿ ಪೊಲೀಸರು ಕೋರಮಂಗಲದ ಕಚೇರಿಯ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಕಚೇರಿಯಲ್ಲಿದ್ದ 50ಕ್ಕೂ ಅಧಿಕ ನಕಲಿ ಅಂಕಪಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಸಿಸಿಬಿ ಪೊಲೀಸರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜಾರೆಡ್ಡಿಯನ್ನು ಜೈಲಿಗಟ್ಟಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರ ತಂಡ ತನಿಖೆ ಮುಂದುವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಬಂಗಾರ ಮತ್ತಷ್ಟು ಅಗ್ಗ; ನಿನ್ನೆ 395 ರೂ, ಇವತ್ತು 195 ರೂ ಕುಸಿತ – Kannada News

ನವದೆಹಲಿ, ಜೂನ್ 11: ನಿನ್ನೆ ಬರೋಬ್ಬರಿ 395 ರೂಗಳಷ್ಟು ಭರ್ಜರಿ ಇಳಿಕೆ ಕಂಡಿದ್ದ ಆಭರಣ ಚಿನ್ನದ ಬೆಲೆ (Gold Rates) ಇವತ್ತು ಗುರುವಾರವೂ 195 ರೂ ಕುಸಿತ ಕಂಡಿದೆ. ಎರಡು ದಿನದಲ್ಲಿ ಬಂಗಾರದ ದರ ಸುಮಾರು 600 ರೂಗಳಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಭರ್ಜರಿ ಕುಸಿತವಾಗಿದೆ. ಆದರೆ, ಸತತ ಎರಡು ಬಾರಿ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಗುರುವಾರ ಶಾಂತವಾಗಿದೆ. ಅದರ ಬೆಲೆ ಗ್ರಾಮ್​ಗೆ 250 ರೂನಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 11ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,564 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,350 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,923 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,564 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,350 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,350 ರೂ
  • ಚೆನ್ನೈ: 13,500 ರೂ
  • ಮುಂಬೈ: 13,350 ರೂ
  • ದೆಹಲಿ: 13,365 ರೂ
  • ಕೋಲ್ಕತಾ: 13,350 ರೂ
  • ಕೇರಳ: 13,350 ರೂ
  • ಅಹ್ಮದಾಬಾದ್: 13,355 ರೂ
  • ಜೈಪುರ್: 13,365 ರೂ
  • ಲಕ್ನೋ: 13,365 ರೂ
  • ಭುವನೇಶ್ವರ್: 13,350 ರೂ

ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 551 ರಿಂಗಿಟ್ (12,954 ರುಪಾಯಿ)
  • ದುಬೈ: 496 ಡಿರಾಮ್ (12,917 ರುಪಾಯಿ)
  • ಅಮೆರಿಕ: 136 ಡಾಲರ್ (13,010 ರುಪಾಯಿ)
  • ಸಿಂಗಾಪುರ: 179.50 ಸಿಂಗಾಪುರ್ ಡಾಲರ್ (13,362 ರುಪಾಯಿ)
  • ಕತಾರ್: 499 ಕತಾರಿ ರಿಯಾಲ್ (13,093 ರೂ)
  • ಸೌದಿ ಅರೇಬಿಯಾ: 514 ಸೌದಿ ರಿಯಾಲ್ (13,098 ರುಪಾಯಿ)
  • ಓಮನ್: 52.85 ಒಮಾನಿ ರಿಯಾಲ್ (13,139 ರುಪಾಯಿ)
  • ಕುವೇತ್: 43.55 ಕುವೇತಿ ದಿನಾರ್ (13,558 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿಯ ಪ್ರಕಾಶ್ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ, ಕೇವಲ ಒಂದು ವಾರದಲ್ಲಿ ಮಮತಾಗೆ ಮೂರನೇ ಆಘಾತ – Kannada News

ಕೋಲ್ಕತ್ತಾ, ಜೂನ್ 11: ಪಶ್ಚಿಮ ಬಂಗಾಳದಲ್ಲಿ ಈಗಷ್ಟೇ ಅಧಿಕಾರದಿಂದ ಕೆಳಗಿಳಿದಿರುವ ತೃಣಮೂಲ ಕಾಂಗ್ರೆಸ್ ಪಕ್ಷ(TMC)ದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಗಳು ಗೋಚರಿಸುತ್ತಿವೆ. ಪಕ್ಷದ ಹಿರಿಯ ನಾಯಕರಾದ ಸುಖೇಂದು ಶೇಖರ್ ರಾಯ್ ಮತ್ತು ಸುಷ್ಮಿತಾ ದೇವ್ ಅವರ ಹಾದಿಯಲ್ಲೇ, ಇದೀಗ ಟಿಎಂಸಿಯ ಮತ್ತೊಬ್ಬ ಪ್ರಮುಖ ನಾಯಕರಾದ ಪ್ರಕಾಶ್ ಚಿಕ್ ಬರೈಕ್ ಅವರು ಗುರುವಾರ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಂಸತ್ತಿನಲ್ಲಿ ಪ್ರಜಾಪ್ರಭುತ್ವದ ಹೊಸ ಸಮತೋಲನ
ಪ್ರಕಾಶ್ ಚಿಕ್ ಬರೈಕ್ ಅವರು ಬೆಳಗ್ಗೆ 11 ಗಂಟೆಗೆ ರಾಜ್ಯಸಭಾ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ತಮ್ಮ ಔಪಚಾರಿಕ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ. ಈ ರಾಜೀನಾಮೆಯೊಂದಿಗೆ ರಾಜ್ಯಸಭೆಯಲ್ಲಿ ಟಿಎಂಸಿ ಬಲವು 10 ಸದಸ್ಯರಿಗೆ ಇಳಿಕೆಯಾಗಲಿದೆ.

ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲ: ತೆರವಾಗಲಿರುವ ಈ ಸ್ಥಾನಗಳು ಮುಂಬರುವ ದಿನಗಳಲ್ಲಿ ಇತರ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ತಮ್ಮ ಬಲವನ್ನು ವೃದ್ಧಿಸಿಕೊಳ್ಳಲು ಮತ್ತು ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಲು ಹೊಸ ಅವಕಾಶವನ್ನು ಸೃಷ್ಟಿಸಿಕೊಡಲಿವೆ.

ರಾಜಕೀಯ ಪಾರದರ್ಶಕತೆ ಮತ್ತು ಹೊಸ ನಾಯಕತ್ವಕ್ಕೆ ವೇದಿಕೆ
ಯಾವುದೇ ಒಂದು ಪ್ರಾದೇಶಿಕ ಪಕ್ಷದಲ್ಲಿ ನಾಯಕರು ಸ್ವತಂತ್ರ ನಿರ್ಧಾರಗಳನ್ನು ಕೈಗೊಂಡು ಹೊರಬರುವುದು ರಾಜಕೀಯ ಮರುಜೋಡಣೆಗೆ ಸಹಕಾರಿಯಾಗುತ್ತದೆ. ಮುಂದಿನ ವಾರದೊಳಗೆ ಇನ್ನೂ ಮೂವರು ಟಿಎಂಸಿ ರಾಜ್ಯಸಭಾ ಸಂಸದರು ರಾಜೀನಾಮೆ ನೀಡುವ ಆಲೋಚನೆಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮತ್ತಷ್ಟು ಓದಿ: ಕಾಂಗ್ರೆಸ್ ಜೊತೆ ವಿಲೀನವಾಗುವ ವದಂತಿ ಸುಳ್ಳು; ಟಿಎಂಸಿ ಸ್ಪಷ್ಟನೆ

ನಾಯಕರು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಮುಕ್ತವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ರಾಜಕೀಯ ಪಾರದರ್ಶಕತೆಯನ್ನು ತೋರಿಸುತ್ತದೆ. ಹಿರಿಯ ನಾಯಕರ ನಿರ್ಗಮನದಿಂದ ತೆರವಾಗುವ ಸ್ಥಾನಗಳಿಗೆ ಹೊಸ ಆಲೋಚನೆಗಳುಳ್ಳ, ಯುವ ಮತ್ತು ಉತ್ಸಾಹಿ ನಾಯಕರು ಸಂಸತ್ತನ್ನು ಪ್ರವೇಶಿಸಲು ಹೊಸ ಹೆಬ್ಬಾಗಿಲು ತೆರೆದಂತಾಗುತ್ತದೆ.

ಭಾರತೀಯ ಸಂವಿಧಾನದ ನಿಯಮಗಳ ಪ್ರಕಾರ, ರಾಜ್ಯಸಭಾ ಸದಸ್ಯರೊಬ್ಬರು ರಾಜೀನಾಮೆ ನೀಡಿದಾಗ ಅಥವಾ ಸ್ಥಾನ ತೆರವಾದಾಗ, ಆಯಾ ರಾಜ್ಯದ ವಿಧಾನಸಭೆಯ ಸದಸ್ಯರ (MLA) ಮತಗಳ ಆಧಾರದ ಮೇಲೆ ಉಪಚುನಾವಣೆ ನಡೆಸಿ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

ಪಶ್ಚಿಮ ಬಂಗಾಳದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳೂ ಸಹ ಪ್ರಬಲವಾಗುತ್ತಿರುವುದರಿಂದ, ತೆರವಾಗುವ ಈ ಸ್ಥಾನಗಳ ಪೈಕಿ ಕೆಲವು ಸ್ಥಾನಗಳು ಮುಂಬರುವ ಉಪಚುನಾವಣೆಗಳ ಮೂಲಕ ಕೇಂದ್ರದ ಆಡಳಿತಾರೂಢ ಮೈತ್ರಿಕೂಟದ ಪಾಲಾಗುವ ಸಾಧ್ಯತೆಗಳು ಹೆಚ್ಚಿವೆ. ಇದು ದೇಶದ ಶಾಸನ ಸಭೆಗಳಲ್ಲಿ ಮತ್ತಷ್ಟು ದೃಢ ಹಾಗೂ ಅಭಿವೃದ್ಧಿಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ರಾಜಕೀಯ ಸ್ಥಿರತೆಯನ್ನು ತಂದುಕೊಡಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜ್ಯಸಭಾ ನಾಮಪತ್ರ ತಿರಸ್ಕೃತ, ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ – Kannada News

ನವದೆಹಲಿ, ಜೂನ್ 11: ರಾಜ್ಯಸಭಾ ನಾಮಪತ್ರ(Rajya Sabha Nomination) ತಿರಸ್ಕೃತಗೊಂಡಿರುವ ವಿಚಾರವಾಗಿ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ತೆಲಂಗಾಣ ಉಸ್ತುವಾರಿ ಮೀನಾಕ್ಷಿ ನಟರಾಜನ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ತಮಗೆ ನ್ಯಾಯ ಸಿಗಲಿದೆ ಎಂಬ ದೃಢ ವಿಶ್ವಾಸದೊಂದಿಗೆ ಅವರು ಸಲ್ಲಿಸಿರುವ ಅರ್ಜಿಯು ಇಂದು ಬೆಳಗ್ಗೆ ತುರ್ತು ವಿಚಾರಣೆಗಾಗಿ ಪಟ್ಟಿಯಾಗುವ ಸಾಧ್ಯತೆಯಿದ್ದು, ಅವರ ಉಮೇದುವಾರಿಕೆ ಮರುಸ್ಥಾಪನೆಯಾಗುವ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದೆ.

ಕಾಂಗ್ರೆಸ್ ಸ್ಪಷ್ಟನೆ
ತೆಲಂಗಾಣದಲ್ಲಿ ದಾಖಲಾಗಿರುವ ಖಾಸಗಿ ದೂರಿನ ವಿವರಗಳನ್ನು ನಾಮಪತ್ರದಲ್ಲಿ ಮರೆಮಾಚಿದ್ದಾರೆ ಎಂಬ ಕಾರಣಕ್ಕೆ ಚುನಾವಣಾ ಅಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು. ಆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್  ಈ ಕುರಿತು ಕಾನೂನಾತ್ಮಕವಾಗಿ ಅತ್ಯಂತ ಸ್ಪಷ್ಟ ಹಾಗೂ ತಾರ್ಕಿಕ ವಿವರಣೆ ನೀಡಿದೆ.

ನ್ಯಾಯಾಲಯವು ಈ ಖಾಸಗಿ ದೂರಿನ ಮೇರೆಗೆ ಯಾವುದೇ ಕಾಗ್ನಿಜನ್ಸ್ (ಸ್ವೀಕೃತಿ) ತೆಗೆದುಕೊಂಡಿಲ್ಲ. ಕೇವಲ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 223ರ ಅಡಿಯಲ್ಲಿ ವಿಚಾರಣೆಯನ್ನು ಏಕೆ ಕೈಗೆತ್ತಿಕೊಳ್ಳಬಾರದು? ಎಂದು ವಿವರಣೆ ಕೇಳಿ ಪ್ರಾಥಮಿಕ ನೋಟಿಸ್ ಮಾತ್ರ ನೀಡಲಾಗಿದೆ.

ಮತ್ತಷ್ಟು ಓದಿ: ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದಾಗಿದ್ದೇಕೆ? ಇಲ್ಲಿದೆ ಮಾಹಿತಿ

ಕಾನೂನಿನ ನಿಯಮಗಳ ಪ್ರಕಾರ, ನ್ಯಾಯಾಲಯವು ದೂರಿಗೆ ಕಾಗ್ನಿಜನ್ಸ್ ತೆಗೆದುಕೊಳ್ಳದ ಹೊರತು ವ್ಯಕ್ತಿಯ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವುದಿಲ್ಲ. ಕೇವಲ ಯಾರೋ ಒಬ್ಬರು ಆರೋಪ ಮಾಡಿದ ತಕ್ಷಣ ಅದು ಕ್ರಿಮಿನಲ್ ಪ್ರಕರಣವಾಗುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ನಟರಾಜನ್ ನಡೆ ಸರಿಯಾಗಿದೆ
ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 33ಎ ಪ್ರಕಾರ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಶಿಕ್ಷೆಗೆ ಅರ್ಹವಾದ ಪ್ರಕರಣಗಳಲ್ಲಿ ಅಧಿಕೃತವಾಗಿ ನ್ಯಾಯಾಲಯದಿಂದ ‘ಆರೋಪ ಹೊರಿಸಲ್ಪಟ್ಟಿದ್ದರೆ’ ಮಾತ್ರ ಅದನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿರುತ್ತದೆ.

ಮೀನಾಕ್ಷಿ ನಟರಾಜನ್ ಅವರ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗದ ಅಥವಾ ಕಾಗ್ನಿಜನ್ಸ್ ಹಂತಕ್ಕೆ ಹೋಗದ ಕಾರಣ, ಅವರು ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿದ್ದಾರೆ ಎಂಬುದು ಸಾಬೀತಾಗುತ್ತಿದೆ. ಇದು ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ಕಾನೂನುಬದ್ಧವಾಗಿ ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆಯಿದೆ.

ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 223ರ ಅಡಿಯಲ್ಲಿ ಒಂದು ಮಹತ್ವದ ಸುಧಾರಣೆ ತರಲಾಗಿದೆ. ಇದರ ಪ್ರಕಾರ, ಯಾವುದೇ ಖಾಸಗಿ ವ್ಯಕ್ತಿ ಸಲ್ಲಿಸುವ ದೂರಿನ ಮೇಲೆ ನ್ಯಾಯಾಲಯವು ಆರೋಪಿಯ ವಾದವನ್ನು ಆಲಿಸದೆ ನೇರವಾಗಿ ವಿಚಾರಣೆ ನಡೆಸುವಂತಿಲ್ಲ. ಇದು ಸುಳ್ಳು ಅಥವಾ ರಾಜಕೀಯ ಪ್ರೇರಿತ ದೂರುಗಳಿಂದ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ರಕ್ಷಿಸಲು ಇರುವ ಸುರಕ್ಷಾ ಕವಚವಾಗಿದೆ.

ಚುನಾವಣಾ ಆಯೋಗವನ್ನೂ ಸಂಪರ್ಕಿಸಿರುವ ಕಾಂಗ್ರೆಸ್ ಪಕ್ಷ, ಈಗ ದೇಶದ ಅತ್ಯುನ್ನತ ನ್ಯಾಯಾಲಯದ ಮುಂದೆ ಸರಿಯಾದ ಕಾನೂನು ವ್ಯಾಖ್ಯಾನವನ್ನು ಮಂಡಿಸುತ್ತಿದೆ. ಈ ಹಿಂದೆ ಇಂತಹ ತಾಂತ್ರಿಕ ಕಾರಣಗಳಿಗಾಗಿ ನಾಮಪತ್ರ ತಿರಸ್ಕೃತಗೊಂಡಾಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿದ ಹಲವು ಉದಾಹರಣೆಗಳಿವೆ. ಹೀಗಾಗಿ, ಮೀನಾಕ್ಷಿ ನಟರಾಜನ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ತಡೆ ಸಿಕ್ಕರೆ, ಅವರು ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣಾ ಕಣಕ್ಕೆ ಯಶಸ್ವಿಯಾಗಿ ಮರಳಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

11 ದಿನಕ್ಕೆ 47 ಸಿನಿಮಾ ಸಹಿ ಹಾಕಿದ ನಟ; ನಂತರ ಆಸ್ಪತ್ರೆ ಬಿಲ್ ಕಟ್ಟಲೂ ದುಡ್ಡಿರಲಿಲ್ಲ – Kannada News

1990ರಲ್ಲಿ ಬಿಡುಗಡೆಯಾದ ‘ಆಶಿಕಿ’ ಚಿತ್ರದ ಮೂಲಕ ನಟ ರಾಹುಲ್ ರಾಯ್ ಒಂದೇ ರಾತ್ರಿಯಲ್ಲಿ ಬಾಲಿವುಡ್‌ನ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದರು. ಈ ಚಿತ್ರವು ಭಾರತೀಯ ಚಿತ್ರರಂಗದ ಅತಿ ದೊಡ್ಡ ಮ್ಯೂಸಿಕಲ್ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗುವ ಮೂಲಕ, ಅವರನ್ನು ದೇಶದ ಯುವಕರ ದಿಕ್ಸೂಚಿಯನ್ನಾಗಿ ಮಾಡಿತು. ರಾಹುಲ್ ರಾಯ್ ಅವರ ಕ್ರೇಜ್ ಎಷ್ಟಿತ್ತೆಂದರೆ, ಅಭಿಮಾನಿಗಳು ತಮ್ಮ ಮಲಗುವ ಕೋಣೆಗಳಲ್ಲಿ ಅವರ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದರು. ಈ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಅವರು ಕೇವಲ 11 ದಿನಗಳಲ್ಲಿ ಬರೋಬ್ಬರಿ 47 ಸಿನಿಮಾಗಳಿಗೆ ಸಹಿ ಹಾಕುವ ಮೂಲಕ ಹೊಸ ದಾಖಲೆ ಬರೆದಿದ್ದರು.

ಆದರೆ, ಈ ಕನಸಿನ ಆರಂಭವು ಹೆಚ್ಚು ದಿನ ಉಳಿಯಲಿಲ್ಲ. ದುರದೃಷ್ಟವಶಾತ್, ಅವರು ಸಹಿ ಮಾಡಿದ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾಲು ಸಾಲಾಗಿ ಸೋಲನ್ನು ಕಂಡವು. ‘ಆಶಿಕಿ’ ಸೃಷ್ಟಿಸಿದ ಮ್ಯಾಜಿಕ್ ಅನ್ನು ಮರುಸೃಷ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇದೇ ಕಾರಣದಿಂದಾಗಿ, ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಅವರು ಆಫರ್ ಮಾಡಿದ್ದ ‘ಡರ್’ (Darr) ಚಿತ್ರದ ನೆಗೆಟಿವ್ ಪಾತ್ರವನ್ನು ಕೈಯಲ್ಲಿದ್ದ ಸಾಲು ಸಾಲು ಸಿನಿಮಾಗಳ ಒತ್ತಡದಿಂದಾಗಿ ರಾಹುಲ್ ತಿರಸ್ಕರಿಸಬೇಕಾಯಿತು. ನಂತರ ಆ ಪಾತ್ರವನ್ನು ಮಾಡಿದ ಶಾರುಖ್ ಖಾನ್ ಸ್ಟಾರ್ ಆದರು.

ಸಿನಿಮಾಗಳಲ್ಲಿ ಹಿನ್ನಡೆ ಅನುಭವಿಸಿದ ನಂತರ, 2006ರಲ್ಲಿ ರಾಹುಲ್ ರಾಯ್ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಹಿಂದಿಯ ಮೊದಲ ಸೀಸನ್‌ನಲ್ಲಿ ಸ್ಪರ್ಧಿಸಿ ವಿಜೇತರಾದರು. ಇದು ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು ಮತ್ತು ಹೊಸ ಪೀಳಿಗೆಯ ಪ್ರೇಕ್ಷಕರಿಗೆ ಅವರನ್ನು ಪರಿಚಯಿಸಿತು. ಸಾರ್ವಜನಿಕರು ಇಂದಿಗೂ ತಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಈ ಗೆಲುವಿನ ಮೂಲಕ ಅವರು ಸಾಬೀತುಪಡಿಸಿದರು.

ಆದರೆ ವಿಧಿಯ ಆಟ ಬೇರೆಯೇ ಇತ್ತು. ನವೆಂಬರ್ 2020ರಲ್ಲಿ ಕಾರ್ಗಿಲ್‌ನಲ್ಲಿ ‘ಎಲ್‌ಎಸಿ: ಲೈವ್ ದಿ ಬ್ಯಾಟಲ್’ ಚಿತ್ರದ ಚಿತ್ರೀಕರಣದಲ್ಲಿದ್ದಾಗ ರಾಹುಲ್ ರಾಯ್ ಅವರಿಗೆ ಹಠಾತ್ತಾಗಿ ಪಾರ್ಶ್ವವಾಯು ಉಂಟಾಯಿತು. ಈ ಗಂಭೀರ ಆರೋಗ್ಯ ಸಮಸ್ಯೆಯು ಇಡೀ ದೇಶದ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು. ಸುದೀರ್ಘ ಚಿಕಿತ್ಸೆ ಮತ್ತು ಪುನರ್ವಸತಿಯ ನಂತರ ಅವರು ಗುಣಮುಖರಾದರಾದರೂ, ಈ ಅವಧಿಯಲ್ಲಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಯಿತು.

ಇದನ್ನೂ ಓದಿ: ನಿಮಗೆ ಸಹಾಯ ಬೇಕಿದ್ದರೆ ಕೇಳಿ; ಬಾಲಿವುಡ್​​ ನಟನಿಗೆ ನೇರ ಆಫರ್ ಕೊಟ್ಟಿದ್ದ ದಾವೂದ್

ಈ ಕಷ್ಟದ ಸಮಯದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ರಾಹುಲ್ ರಾಯ್ ಅವರ ನೆರವಿಗೆ ಧಾವಿಸಿ, ಅವರ ಆಸ್ಪತ್ರೆಯ ಬಾಕಿ ಬಿಲ್‌ಗಳನ್ನು ಪಾವತಿಸಿದರು. ಸಲ್ಮಾನ್ ಖಾನ್ ಅವರನ್ನು ಡೈಮಂಡ್ ಎಂದು ಕರೆದ ರಾಹುಲ್, ಅವರ ಮಾನವೀಯತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಾಹುಲ್ ರಾಯ್, ತಮಗೆ ಮತ್ತಷ್ಟು ನಟನೆಯ ಅವಕಾಶಗಳು ಸಿಗಲಿ ಎಂದು ಕಾಯುತ್ತಿದ್ದು, ಚಿತ್ರರಂಗಕ್ಕೆ ಭರ್ಜರಿ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರ್ಪ್ರೈಸ್ ಕೊಡಲು ಬಂದವರಿಗೆ ಸರ್ಪ್ರೈಸ್ ಕೊಟ್ಟ ರಾಜಮೌಳಿ

ಎಸ್ಎಸ್ ರಾಜಮೌಳಿ (Rajamouli), ಭಾರತದ ನಂಬರ್ 1 ನಿರ್ದೇಶಕ. ‘ಆರ್​​ಆರ್​​ಆರ್’ ಮೂಲಕ ವಿಶ್ವಮಟ್ಟದಲ್ಲಿ ಗುರುತು ಪಡೆದುಕೊಂಡಿರುವುದು ಮಾತ್ರವೇ ಅಲ್ಲದೆ, ಹಾಲಿವುಡ್ ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು ಸಹ ತಮ್ಮೊಟ್ಟಿಗೆ ಕೆಲಸ ಮಾಡುವಂತೆ ರಾಜಮೌಳಿ ಅವರನ್ನು ಕೇಳುತ್ತಿವೆ. ಭಾರತದ ಟಾಪ್ ನಿರ್ದೇಶಕ ಆಗಿದ್ದರೂ ಸಹ ರಾಜಮೌಳಿ ಅವರು ಯಾವುದೇ ಅಹಂ ಇಲ್ಲದೆ, ಬಲು ಸರಳ ಮತ್ತು ವಿನಯವಂತಿಕೆಯಿಂದ ಇರುತ್ತಾರೆ. ಸಹಾಯ ಕೇಳಿ ಬರುವ ಕಿರಿಯ ಸಿನಿಮಾ ಕರ್ಮಿಗಳಿಗೆ ಸಹಾಯ ಮಾಡುತ್ತಾರೆ. ಇದೀಗ ರಾಜಮೌಳಿ ಅವರಿಗೆ ಸರ್ಪ್ರೈಸ್ ನೀಡಲು ಬಂದ ಕಿರಿಯ ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಖುದ್ದು ರಾಜಮೌಳಿ ಸರ್ಪ್ರೈಸ್ ನೀಡಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್, ‘ಸಿಂಗ್ ಗೀತಂ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾ ನಾಳೆ ಅಂದರೆ ಜೂನ್ 12 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಮೊದಲ ಟಿಕೆಟ್ ಅನ್ನು ರಾಜಮೌಳಿ ಅವರಿಗೆ ಮಾರಾಟ ಮಾಡುವ ಮೂಲಕ ಶುಭಾರಂಭ ಮಾಡಲೆಂದು ನಾಗ್ ಅಶ್ವಿನ್ ಅವರು, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರೊಟ್ಟಿಗೆ ಸೇರಿ ರಾಜಮೌಳಿ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ.

ಆದರೆ ನಾಗ್ ಅಶ್ವಿನ್, ರಾಜಮೌಳಿ ಅವರಿಗೆ ವಿಡಿಯೋ ಕಾಲ್ ಮಾಡುವ ಮುಂಚೆಯೇ ರಾಜಮೌಳಿ, ‘ಸಿಂಗ್ ಗೀತಂ’ ಸಿನಿಮಾದ ಟಿಕೆಟ್ ಖರೀದಿಸಿದ್ದು, ವಿಡಿಯೋ ಕಾಲ್​​ನಲ್ಲಿ ತಾವು ಬುಕ್ ಮಾಡಿಕೊಂಡಿರುವ ಟಿಕೆಟ್ ಅನ್ನು ತೋರಿಸಿದ್ದಾರೆ. ಇದರಿಂದ ನಾಗ್ ಅಶ್ವಿನ್ ಮತ್ತು ದೇವಿ ಶ್ರೀಪ್ರಸಾದ್ ಇಬ್ಬರೂ ಶಾಕ್ ಆಗಿದ್ದಾರೆ. ಇಬ್ಬರಿಗೂ ರಾಜಮೌಳಿ ಆಲ್​​ ದಿ ಬೆಸ್ಟ್ ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:94ನೇ ವಯಸ್ಸಿಗೆ ನಿರ್ದೇಶನ; ‘ಸಿಂಗ್ ಗೀತಂ’ ಸಿನಿಮಾ ಈ ವಾರ ರಿಲೀಸ್

ಬಹಳ ಬ್ಯುಸಿ ನಿರ್ದೇಶಕ ರಾಜಮೌಳಿ ಅವರು ಬಿಡುವು ಮಾಡಿಕೊಂಡು ‘ಸಿಂಗ್-ಗೀತಂ’ ಸಿನಿಮಾ ನೋಡಲು ಹೋಗುತ್ತಿರುವುದಕ್ಕೆ ಮುಖ್ಯ ಕಾರಣ, ಆ ಸಿನಿಮಾದ ನಿರ್ದೇಶಕ. ಭಾರತದ ಅತ್ಯುತ್ತಮ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ಸಿಂಗೀತಂ ಶ್ರೀನಿವಾಸ್ ಅವರು ತಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಾಜಮೌಳಿ ಅವರಿಗೆ ಸಿಂಗೀತಂ ಅವರ ನಿರ್ದೇಶನ ಬಲು ಅಚ್ಚು-ಮೆಚ್ಚು ಹಾಗಾಗಿ ರಾಜಮೌಳಿ ಅವರು ಸಿನಿಮಾ ನೋಡಲು ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ.

ಸಿಂಗೀತಂ ಶ್ರೀನಿವಾಸ್ ಅವರು ಅತ್ಯುತ್ತಮ ನಿರ್ದೇಶಕ. ಕನ್ನಡದಲ್ಲಿ ಕ್ಲಾಸ್ ಸಿನಿಮಾಗಳಾದ, ‘ಚಲಿಸುವ ಮೋಡಗಳು’, ‘ಹಾಲು ಜೇನು’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಆನಂದ್’, ‘ಟುವ್ವಿ ಟುವ್ವಿ ಟುವ್ವಿ’, ‘ಎರಡು ನಕ್ಷತ್ರಗಳು’, ‘ಶ್ರಾವಣ ಬಂತು’, ‘ಜ್ವಾಲಾಮುಖಿ’ ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕಮಲ್ ನಟನೆಯ ಕಲ್ಟ್ ಸಿನಿಮಾ ‘ಪುಷ್ಪಕ ವಿಮಾನ’, ‘ರಾಜ ಪಾರ್ವೈ’, ‘ಮುಂಬೈ ಎಕ್ಸ್​​ಪ್ರೆಸ್’, ತೆಲುಗಿನ ‘ಆದಿತ್ಯ 369’ ಇನ್ನೂ ಹಲವು ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ತಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಸಿನಿಮಾ ನಿರ್ದೇಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version