T20 World Cup: ಆ ಅವಮಾನಕರ ಸೋಲಿಗೆ 610 ದಿನಗಳ ನಂತರ ಸೇಡು ತೀರಿಸಿಕೊಂಡ ಕಿವೀಸ್ – Kannada News | T20 World Cup 2026: New Zealand Chases 182 to Beat Afghanistan, Seifert Shines

2026 ರ ಟಿ20 ವಿಶ್ವಕಪ್​ನ (T20 World Cup 2026) ಎರಡನೇ ದಿನದ ಮೊದಲ ಪಂದ್ಯದಂದು ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ (New Zealand vs Afghanistan) ತಂಡಗಳು ಮುಖಾಮುಖಿಯಾಗಿದ್ದವು. ಕಳೆದ ಕೆಲವು ವರ್ಷಗಳಿಂದ ಅಫ್ಘನ್ ತಂಡ ಕೂಡ ಬಲಿಷ್ಠ ತಂಡಗಳನ್ನು ಮಣಿಸುವ ಸಾಮರ್ಥ್ಯವನ್ನು ತೋರಿಸಿರುವುದರಿಂದ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇದರ ಜೊತೆಗೆ ಕಳೆದ ವಿಶ್ವಕಪ್​ನಲ್ಲಿ ಇದೇ ನ್ಯೂಜಿಲೆಂಡ್ ತಂಡವನ್ನು ಭಾರಿ ಅಂತರದಿಂದ ಅಫ್ಘಾನಿಸ್ತಾನ ಮಣಿಸಿತ್ತು. ಅಂತಿಮವಾಗಿ ಈ ಸೇಡಿನ ಸಮರದಲ್ಲಿ ಗೆದ್ದು ಬೀಗುವುದರಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ182 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಇನ್ನು 13 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ, ನ್ಯೂಜಿಲೆಂಡ್ 2024 ರ ವಿಶ್ವಕಪ್‌ನಲ್ಲಿ ತನ್ನ ಸೋಲಿಗೆ ಸೇಡು ಕೂಡ ತೀರಿಸಿಕೊಂಡಿತು.

610 ದಿನಗಳ ಹಳೆಯ ಸೇಡು

ಸರಿಯಾಗಿ 610 ದಿನಗಳ ಹಿಂದೆ ಅಂದರೆ ಜೂನ್ 8, 2024 ರಂದು ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು ಕೇವಲ 75 ರನ್‌ಗಳಿಗೆ ಆಲೌಟ್ ಮಾಡಿ 84 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು. ಪರಿಣಾಮವಾಗಿ, ಚೆನ್ನೈ ಪಿಚ್‌ನಲ್ಲೂ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿತ್ತು. ವಿಶೇಷವಾಗಿ ಭಾರತ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಸ್ಪಿನ್ನರ್‌ಗಳ ವಿರುದ್ಧ ಕಿವೀಸ್ ಬ್ಯಾಟ್ಸ್‌ಮನ್‌ಗಳ ಹೋರಾಟವನ್ನು ಪರಿಗಣಿಸಿದರೆ, ಅಫ್ಘಾನಿಸ್ತಾನವು ಅಸಾಧಾರಣ ಸವಾಲಾಗಿ ಪರಿಣಮಿಸಿತ್ತು.

ಸೀಫರ್ಟ್ ಗೆಲುವಿನ ಇನ್ನಿಂಗ್ಸ್

ಇದಕ್ಕೆ ಪೂರಕವಾಗಿ 182 ರನ್​ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಎರಡನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಆರಂಭಿಕರಾದ ಫಿನ್ ಅಲೆನ್ ಮತ್ತು ರಚಿನ್ ರವೀಂದ್ರ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದರು. ಆದಾಗ್ಯೂ, ಆ ಬಳಿಕ ಜೊತೆಯಾದ ಟಿಮ್ ಸೀಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ 74 ರನ್‌ಗಳ ಜೊತೆಯಾಟ ನಡೆಸಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇದೇ ವೇಳೆ ಸೀಫರ್ಟ್ 65 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕೂಡ ಆಡಿದರು. ಅವರಿಗೆ ಮಾರ್ಕ್ ಚಾಪ್ಮನ್ ಕೂಡ ಸಾಥ್ ನೀಡಿ 28 ರನ್​ಗಳ ಕಾಣಿಕೆ ನೀಡಿದರು. ಇಬ್ಬರೂ ಔಟಾದಾಗ, ನ್ಯೂಜಿಲೆಂಡ್ 26 ಎಸೆತಗಳಲ್ಲಿ ಕೇವಲ 28 ರನ್ ಗಳಿಸಬೇಕಾಗಿತ್ತು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ಮುಂದಿನ 13 ಎಸೆತಗಳಲ್ಲಿ 28 ರನ್ ಗಳಿಸಿ ಕೇವಲ 17.5 ಓವರ್‌ಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.

182 ರನ್ ದಾಖಲಿಸಿದ ಅಫ್ಘಾನಿಸ್ತಾನ

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘನ್ ತಂಡದ ಆರಂಭ ಕಳಪೆಯಾಗಿತ್ತು. ಪವರ್‌ಪ್ಲೇನಲ್ಲಿ ಇಬ್ಬರೂ ಆರಂಭಿಕರು ಕೇವಲ 44 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಒಂದೇ ಓವರ್‌ನಲ್ಲಿ ಲಾಕಿ ಫರ್ಗುಸನ್ ಇಬ್ಬರನ್ನೂ ಔಟ್ ಮಾಡಿದರು. ಆದಾಗ್ಯೂ, ನಂತರ ಗುಲ್ಬದಿನ್ ಮತ್ತು ಸೆಡಿಕುಲ್ಲಾ ಅಟಲ್ ಸುಮಾರು 80 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಗುಲ್ಬದಿನ್ ಕೇವಲ 35 ಎಸೆತಗಳಲ್ಲಿ 63 ರನ್ ಗಳಿಸಿದರೆ, ಮೊಹಮ್ಮದ್ ನಬಿ, ದರ್ವಿಶ್ ರಸೂಲಿ ಮತ್ತು ಅಜ್ಮತುಲ್ಲಾ ಒಮರ್‌ಜೈ ಕೊನೆಯ ಓವರ್‌ಗಳಲ್ಲಿ ಅಲ್ಪ ಹಾಗೂ ಉಪಯುಕ್ತ ಕಾಣಿಕೆ ನೀಡಿ ತಂಡವನ್ನು 182 ರನ್‌ಗಳಿಗೆ ಕೊಂಡೊಯ್ದರು. ಆದರೆ ಕಿವೀಸ್ ಅಬ್ಬರದ ಮುಂದೆ ಅಫ್ಘನ್ ಗೆಲುವಿಗೆ ಇಷ್ಟು ರನ್ ಸಾಕಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:44 pm, Sun, 8 February 26

Source link

ಯಶ್ ತಾಯಿ ಪುಷ್ಪಾ ಸೈಟ್ ವಿವಾದ: ಇಷ್ಟು ದಿನಗಳ ಬಳಿಕ ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ಲಕ್ಷ್ಮಮ್ಮ – Kannada News | Yash mother Pushpa Arun Kumar property dispute in Hassan 93 years old Lakshmamma reacts

ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರ ನಿವೇಶನದ ಗಲಾಟೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಈಗ ಒಂದು ಟ್ವಿಸ್ಟ್ ಸಿಕ್ಕಿದೆ. ಈ ನಿವೇಶನದ ಮೂಲ ಮಾಲಕಿ ಎನ್ನಲಾದ ಲಕ್ಷ್ಮಮ್ಮ ಅವರು ಪ್ರತ್ಯಕ್ಷರಾಗಿದ್ದಾರೆ. ‘ಪುಷ್ಪ ಅರುಣ್ ಕುಮಾರ್ ಅವರ ಜಾಗ ಬೇರೆ ಕಡೆ ಇದೆ. ನಮ್ಮ ಜಾಗದಲ್ಲಿ ಕಾಂಪೌಂಡ್ ಕಟ್ಟಿಸಿದ್ದರು. ಅದನ್ನು ತೆಗೆಸಿದ್ದೇವೆ’ ಎಂದು ಲಕ್ಷ್ಮಮ್ಮ (Lakshmamma) ಅವರು ಹೇಳಿದ್ದಾರೆ. ಸದ್ಯಕ್ಕೆ ಲಕ್ಷ್ಮಮ್ಮ ಅವರು ಮೈಸೂರಿನಲ್ಲಿ ಇದ್ದಾರೆ.

‘ನನಗೆ 93 ವರ್ಷ. ನಾನು ಮೈಸೂರಿನಲ್ಲಿ ಇರುವುದು. ಹಾಸನಕ್ಕೆ ಬರುವುದು ಸ್ವಲ್ಪ ತಾಪತ್ರಯ ಆಗುತ್ತದೆ. ಅದಕ್ಕಾಗಿ ದೇವರಾಜ್ ಅವರಿಗೆ ಜಿಪಿಎ ಹೋಲ್ಡರ್ ಮಾಡಿದ್ದೇನೆ. ಪುಷ್ಪಾ ಅವರ ಜಾಗಕ್ಕೂ ನಮಗೂ ಸಂಬಂಧವೇ ಇಲ್ಲ. ಅವರದ್ದು ಆ ರಸ್ತೆಯಲ್ಲಿದೆ, ನಮ್ಮದು ಈ ರಸ್ತೆಯಲ್ಲಿದೆ. ಯಶ್ ತಾಯಿ ಅಲ್ಲಿಗೆ ಯಾಕೆ ಹೋಗುತ್ತಾರೆ ಅಂತ ಗೊತ್ತಿಲ್ಲ’ ಎಂದಿದ್ದಾರೆ ಲಕ್ಷ್ಮಮ್ಮ.

ಈ ಬಗ್ಗೆ ಪುಷ್ಪಾ ಅರುಣ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಲಕ್ಷ್ಮಮ್ಮ ಎಂಬುವವರು ಇದ್ದಾರೆ ಎಂಬುದನ್ನು ಕೇಳಿ ತಿಳಿದಿದ್ದೆ. ದಾಖಲೆ ತೆಗೆದಾಗ ಲಕ್ಷ್ಮಮ್ಮ ಅವರಿಂದ ಬೇರೆಯವರಿಗೆ ಹಸ್ತಾಂತರ ಆಗಿ 45 ವರ್ಷಗಳು ಕಳೆದಿವೆ. ಈಗ ಅವರನ್ನು ಟಿವಿಯಲ್ಲಿ ನೋಡಿದೆ. ಖಾತೆ ಮಾಡಿರುವುದು ನಾನು, ಕಂದಾಯ ಕಟ್ಟಿರುವುದು ನಾನು. ಅವರ ಹೆಸರಿನಲ್ಲಿ ಯಾಕೆ ಕಂದಾಯ ಬಂದಿಲ್ಲ? ದೇವರಾಜ್ ಅವರ ಜೊತೆ ಲಕ್ಷ್ಮಮ್ಮ ಅವರು ಭಾಗಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಹೊರಗೆ ಬರುತ್ತದೆ’ ಎಂದು ಪುಷ್ಪಾ ಅರುಣ್ ಕುಮಾರ್ ಅವರು ಹೇಳಿದ್ದಾರೆ.

‘ನಮಗೆ ಏನೂ ಗೊತ್ತಿಲ್ಲ ಅಂತ ತಿಳಿದುಕೊಂಡಿದ್ದಾರೆ. ಹಿಂದೆ ಇರುವ ಎರಡು ಸೈಟ್​​ಗಳಿಗೂ ಇದೇ ರೀತಿ ಮಾಡಿದ್ದಾರೆ. ಸತೀಶ್ ಪಟೇಲ್, ಲಾಯರ್ ಶೇಖರ್, ಡಿಪಿಒ ನಟರಾಜ್, ದೇವರಾಜೇಗೌಡ ಎಲ್ಲರೂ ಸೇರಿ ಹಾಸನದಲ್ಲಿ ಈ ರೀತಿ ದಂಧೆ ಮಾಡಿದ್ದಾರೆ. ಇದನ್ನು ನಾನು ಬಯಲಿಗೆ ಎಳೆಯುತ್ತೇವೆ. ಪ್ರತಿಯೊಬ್ಬರಿಗೂ ತೊಂದರೆ ಆಗಿದೆ ಅಂತ ಜನರು ನನಗೆ ಮಾಹಿತಿ ಕೊಡುತ್ತಿದ್ದಾರೆ’ ಎಂದಿದ್ದಾರೆ ಪುಷ್ಪಾ ಅರುಣ್ ಕುಮಾರ್.

ಇದನ್ನೂ ಓದಿ: ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ

‘ಸರ್ಕಾರ ಅವರಿಗೆ ಮೋಸ ಮಾಡಿದ್ದರೆ ಅವರು ಸರ್ಕಾರವನ್ನು ಕೇಳಬೇಕು. ನಮ್ಮ ಮೇಲೆ ಫೈಟ್ ಮಾಡೋದಲ್ಲ. ನಾನು 2020ಕ್ಕೂ ಮುಂಚೆ ಈ ನಿವೇಶನ ತೆಗೆದುಕೊಂಡಿದ್ದೆ. ಈ ಹಿಂದೆ ತಪ್ಪು ಏನಾದರೂ ಆಗಿತ್ತಾ ಎಂಬುದನ್ನು ವಿಚಾರಿಸಿದ್ದೇನೆ. ಆ ರೀತಿ ಆಗಿಲ್ಲ. ದೇವರಾಜ್, ಸತೀಶ್ ಅವರು ಹೆಣ್ಮಕ್ಕಳ ಬಗ್ಗೆ ಹೀನಾಮಾನ ಮಾತಾಡಿದ್ದಾರೆ. ಅದನ್ನು ನಾನು ಮಹಿಳಾ ಆಯೋಗಕ್ಕೆ ನೀಡುತ್ತೇನೆ’ ಎಂದು ಪುಷ್ಪಾ ಅವರು ಗರಂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾಮರಾಜನಗರ: 9 ಕಾಡಾನೆಗಳ ಹಿಂಡು ದಾಳಿಗೆ ರೈತ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ – Kannada News | Chamarajanagar: Farmer Killed by Wild Elephants in Tamil Nadu Border Village Karalavadi; Region Conflict

ಚಾಮರಾಜನಗರ, ಫೆಬ್ರವರಿ 08: ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತನ ಮೇಲೆ 9 ಕಾಡಾನೆಗಳ (Wild Elephant) ಹಿಂಡು ದಾಳಿ ಮಾಡಿದ ಪರಿಣಾಮ ರೈತ ಬಲಿಯಾಗಿರುವಂತಹ (death) ಘಟನೆ ಚಾಮರಾಜನಗರ ಗಡಿ ಗ್ರಾಮವಾದ ತಮಿಳುನಾಡಿನ ಕರಳವಾಡಿಯಲ್ಲಿ‌ ನಡೆದಿದೆ. ಗಜಪಡೆಯ ಅಟ್ಟಹಾಸಕ್ಕೆ ಕರಳವಾಡಿ ಗ್ರಾಮದ ಮಹೇಶ್ ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳಕ್ಕೆ ಸತ್ಯಮಂಗಲ ಟೈಗರ್ ರಿಸರ್ವ್ ಫಾರೆಸ್ಟ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ರೈತ ಮಹೇಶ್​​, ಜಮೀನಿನಲ್ಲಿ ಕಾವಲು ಕಾಯುತ್ತಿದ್ದರು. ಈ ವೇಳೆ 9 ಕಾಡಾನೆಗಳ ಹಿಂಡು ದಾಳಿ ಮಾಡಿವೆ. ಈ ವೇಳೆ ಅಕ್ಕ, ಪಕ್ಕದ ಜಮೀನಿನವರು ಎಷ್ಟೇ ಕೂಗಾಡಿದರೂ ಕಾಡಾನೆ ಹಿಂಡು ಬಿಟ್ಟಿಲ್ಲ. ಗಜಪಡೆಯ ಅಟ್ಟಹಾಸಕ್ಕೆ ಮಹೇಶ್​ ಬಲಿಯಾಗಿದ್ದಾರೆ. ಕಳೆದ ಮೂರ್‍ನಾಲ್ಕು ತಿಂಗಳಿಂದಲೂ ಕಾಡಾನೆಗಳ ಹಿಂಡು ಓಡಾಟ ಮಾಡುತ್ತಿವೆ. ಸದ್ಯ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ ಮಾಡಿದ್ದಾರೆ.

ಕೂಲಿ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದಾಗ ಕಾಡಾನೆ ದಾಳಿ: ವ್ಯಕ್ತಿ ಸಾವು

ಇನ್ನು ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ ಸಮೀಪ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ ನಡೆದಿತ್ತು. ತಮಿಳುನಾಡಿನ ಮಾಕಪಾಳ್ಯ ಗ್ರಾಮದ ನಿವಾಸಿ ಶಿವಮೂರ್ತಿ ಮೃತ ದುರ್ದೈವಿ.

ಕೂಲಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಶಿವಮೂರ್ತಿ, ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಅರಣ್ಯ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಹೂಗ್ಯಂ ವಲಯದ ಜಲ್ಲಿಪಾಳ್ಯ ಭಾಗದಲ್ಲಿ ಕಾಡಾನೆಗಳ ಹಿಂಡು ಅಡ್ಡ ಬಂದಿದ್ದು, ಏಕಾಏಕಿ ಆನೆಗಳು ದಾಳಿ ನಡೆಸಿದ್ದವು.

ಇದನ್ನೂ ಓದಿ: ಹಾಸನ: ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ, ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು

ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಶಿವಮೂರ್ತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಘಟನೆ ನಡೆದ ಬಳಿಕ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ಭಾಗದಲ್ಲಿ ಕಾಡಾನೆಗಳ ಓಡಾಟ ಹೆಚ್ಚಿರುವುದರಿಂದ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಮಾರ್ಗಗಳಲ್ಲಿ ಸಂಚರಿಸುವಾಗ ಎಚ್ಚರ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಟಾಕ್ಸಿಕ್’ ಚೆಲುವೆ ಬಗ್ಗೆ ಇದೇನಿದು ಸುದ್ದಿ? ನಟಿಯ ಹೇಳಿದ್ದೇನು? – Kannada News | Toxic movie actress Tara Sutaria lashes out on trolls who were trolling her for dancing with AP Dhillon

ಯಶ್ (Yash) ನಟನೆಯ ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾನಲ್ಲಿ ಯಶ್ ಜೊತೆಗೆ ಐದು ಮಂದಿ ಸ್ಟಾರ್ ನಟಿಯರು ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ. ಸಿನಿಮಾದ ಬಿಡುಗಡೆಗೆ ಇನ್ನೊಂದು ತಿಂಗಳಷ್ಟೆ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ‘ಟಾಕ್ಸಿಕ್’ ನಟಿಯೊಬ್ಬರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವಾರು ಸುದ್ದಿಗಳು ಹರಿದಾಡುತ್ತಿದ್ದು, ಸುದ್ದಿಗಳ ಬಗ್ಗೆ ನಟಿ ತಮ್ಮದೇ ರೀತಿಯ ಸ್ಪಷ್ಟನೆ ಸಹ ನೀಡಿದ್ದಾರೆ.

ಬಾಲಿವುಡ್ ಸುಂದರಿ ತಾರಾ ಸುತಾರಿಯಾ ಇತ್ತೀಚಿನ ವೈಯಕ್ತಿಕ ಬದುಕಿನ ಏರಿಳಿತಗಳಿಂದಲೇ ಸುದ್ದಿಯಲ್ಲಿದ್ದಾರೆ. ಸಹ ನಟ ವೀರ್ ಪಹಾರಿಯಾ ಜೊತೆಗಿನ ಪ್ರೇಮ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡತ್ತಲೇ ಇತ್ತು. ಆದರೆ ಇತ್ತೀಚಿನ ಈ ಇಬ್ಬರ ಬ್ರೇಕಪ್ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಡೇಟಿಂಗ್ ಆಗಲಿ ಹಾಗೂ ಈಗ ಬ್ರೇಕ್ ಅಪ್ ಬಗ್ಗೆ ಆಗಲಿ ನಟಿ ತಾರಾ ಸುತಾರಿಯಾ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

ಮ್ಯಾಗಜೀನ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ವೃತ್ತಿಜೀವನ ಮತ್ತು ಸಾರ್ವಜನಿಕ ಜೀವನದ ಬಗ್ಗೆ ಮಾತನಾಡಿದ ತಾರಾ ಸುತಾರಿಯಾ, ‘ವರ್ಷಗಳು ಉರುಳಿದಂತೆ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ನಾನು ಕಲಿತಿದ್ದೇನೆ. ಯಶಸ್ಸು ಎಂಬುದು ನಮ್ಮ ಒಳಗಿನಿಂದ ಬರಬೇಕೇ ಹೊರತು ಹೊರಗಿನಿಂದಲ್ಲ ಎಂದು ನಾನು ನಂಬುತ್ತೇನೆ. ಕೆಲಸಕ್ಕಿಂತಲೂ ನನ್ನ ಮೌಲ್ಯಗಳು ನನಗೆ ಮುಖ್ಯ. ಸಿನಿಮಾವನ್ನು ಕಳೆದುಕೊಂಡರೂ ಪರವಾಗಿಲ್ಲ, ಆದರೆ ನನ್ನ ವ್ಯಕ್ತಿತ್ವವನ್ನು ನಾನು ಎಂದಿಗೂ ಕಳೆದುಕೊಳ್ಳಲಾರೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಪ್ರಚಾರದಲ್ಲಿ ವಿಳಂಬ ಏಕೆ? ಯಶ್ ಮಾಡುತ್ತಿರುವ ಯೋಜನೆಯೇನು?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ, ‘ತಮ್ಮ ಬಗ್ಗೆ ಹರಿದಾಡುವ ಅದೆಷ್ಟೋ ಗಾಸಿಪ್‌ಗಳಿಗೆ ಸ್ಪಷ್ಟನೆ ನೀಡುವ ಅವಶ್ಯಕತೆ ತಮಗೆ ಅನಿಸಿಲ್ಲ. ಸತ್ಯ ಏನೆಂಬುದು ನನಗೆ ಮತ್ತು ನನ್ನ ಆಪ್ತರಿಗೆ ತಿಳಿದಿದ್ದರೆ ಅಷ್ಟೇ ಸಾಕು ಎಂದಿದ್ದಾರೆ ತಾರಾ.

2025ರ ಆರಂಭದಿಂದಲೂ ತಾರಾ ಮತ್ತು ವೀರ್ ಪಹಾರಿಯಾ ಅವರ ಡೇಟಿಂಗ್ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ಗಾಯಕ ಎಪಿ ಧಿಲ್ಲೋನ್ ಅವರ ಸಂಗೀತ ಕಾರ್ಯಕ್ರಮವೊಂದರಲ್ಲಿ ತಾರಾ ವೇದಿಕೆಯ ಮೇಲೆ ನೃತ್ಯ ಮಾಡಿದ್ದರು. ಈ ವಿಡಿಯೋವನ್ನು ಇಟ್ಟುಕೊಂಡು ಹಲವರು ನಟಿಯನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದರು.

ಟ್ರೋಲ್​​ಗಳು ಹೆಚ್ಚಾದಂತೆ ಇನ್‌ಸ್ಟಾಗ್ರಾಮ್ ಮೂಲಕ ತಾರಾ ಖಡಕ್ ಪ್ರತಿಕ್ರಿಯೆ ನೀಡಿ, ‘ಸುಳ್ಳು ಕಥೆಗಳು, ಎಡಿಟ್ ಮಾಡಿದ ವಿಡಿಯೋಗಳು ಮತ್ತು ಪೇಯ್ಡ್ ಪಿಆರ್ ತಂತ್ರಗಳು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ. ಅಂತಿಮವಾಗಿ ಸತ್ಯ ಮತ್ತು ಪ್ರೀತಿಯೇ ಗೆಲ್ಲುವುದು’ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಎಪಿ ಧಿಲ್ಲೋನ್ ಪ್ರತಿಕ್ರಿಯೆ ನೀಡಿ “ಕ್ವೀನ್” (ರಾಣಿ) ಎಂದು ಕಾಮೆಂಟ್ ಮಾಡಿದ್ದರೆ, ವೀರ್ ಪಹಾರಿಯಾ ಕೂಡ ಹಾರ್ಟ್ ಎಮೋಜಿ ಹಾಕಿ ಬೆಂಬಲ ಸೂಚಿಸಿದ್ದರು.

ತಾರಾ ಸುತಾರಿಯಾ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದ ಮೇಲೆ ಅವರಿಗೆ ಭಾರಿ ನಿರೀಕ್ಷೆ ಇದೆಯೆಂದು ಹೇಳಿಕೊಂಡಿದ್ದಾರೆ. ತಾರಾ ಈ ಹಿಂದೆ ‘ಸ್ಟುಡೆಂಟ್ ಆಫ್ ದಿ ಇಯರ್ 2’, ‘ಹೀರೊಪಂತಿ’, ‘ಏಕ್ ವಿಲನ್ ರಿಟರ್ಸ್ನ್’, ‘ತಡಪ್’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Jeffrey Epstein: ಸತ್ತ ನಂತರವೂ ಮರುಜೀವ ಪಡೆಯುವ ಹಂಬಲ; ಜೆಫ್ರೀ ಎಪ್​ಸ್ಟೀನ್ ಎನ್ನುವ ಅಪರಾಧಿಯ ಚಿತ್ರ ವಿಚಿತ್ರ ಕಥೆಗಳು… – Kannada News | Jeffrey Epstein baby ranch, impregnant women in the farm and other strange stories

ಕೋವಿಡ್ ವಕ್ಕರಿಸುವುದಕ್ಕೂ ಮುನ್ನವೇ ಸಾವನ್ನಪ್ಪಿದ ಜೆಫ್ರೀ ಎಪ್​ಸ್ಟೀನ್ (Jeffrey Epstein) ಎನ್ನುವ ವ್ಯಕ್ತಿಯ ಹೆಸರು ಈಗ ಜಾಗತಿಕವಾಗಿ ಸದ್ದು ಮಾಡುವುದು ಹೆಚ್ಚಾಗಿದೆ. ಎಪ್​ಸ್ಟೀನ್ ಫೈಲ್ಸ್​ಗಳು ಹೊರಗೆ ಬರುತ್ತಲೇ ಇವೆ. ಜಗತ್ತಿನ ವಿವಿಧ ನಾಯಕರು, ಸೆಲಬ್ರಿಟಿಗಳ ಹೆಸರು ಎಪ್​ಸ್ಟೀನ್ ಫೈಲ್​ಗಳಲ್ಲಿ ಕಾಣುತ್ತಿವೆ ಎನ್ನುವಂತಹ ಸುದ್ದಿಗಳು ಕೇಳಿಬರುವುದೂ ಹೆಚ್ಚಾಗಿದೆ. ಜಾಗತಿಕ ನಾಯಕರು, ಸಿನಿಮಾ ತಾರೆಯರು, ವಿಜ್ಞಾನಿಗಳು, ಉದ್ಯಮಿಗಳು ಹೀಗೆ ಬಹಳಷ್ಟು ದೊಡ್ಡ ದೊಡ್ಡವರ ಹೆಸರು ಈ ಎಪ್​ಸ್ಟೀನ್ ಫೈಲ್​ಗಳಲ್ಲಿ ಕಾಣಿಸಿವೆ.

ಜೆಫ್ರೀ ಎಪ್​ಸ್ಟೀನ್ ಲೈಂಗಿಕ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ 2006ರಲ್ಲಿ ಬಂಧಿತನಾಗಿದ್ದ. ತನ್ನ ಫಾರ್ಮ್​ಗಳಲ್ಲಿ ಅಪ್ರಾಪ್ತೆಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದನೆಂಬ ಆರೋಪಗಳು ಸಾಲು ಸಾಲಾಗಿ ಕೇಳಿಬರತೊಡಗಿದವು. ಈತನ ಮೇಲೆ ಸುದೀರ್ಘ ತನಿಖೆ ಮತ್ತು ವಿಚಾರಣೆಗಳು ನಡೆದಿವೆ. ಆದರೆ, 2019ರಲ್ಲಿ ನ್ಯೂಯಾರ್ಕ್​ನ ಜೈಲೊಂದರಲ್ಲಿ ಈತ ಸಾವನಪ್ಪಿದ್ದಾನೆ. ಬಹಳ ನಿಗೂಢವಾಗಿರುವ ಸಾವು ಅದು.

ಇದನ್ನೂ ಓದಿ: ಫ್ಲೋರಿಡಾ ಗಾಲ್ಫ್​ ಕೋರ್ಸ್​​ನಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಯಾರು ಈ ಜೆಫ್ರೀ ಎಪ್​ಸ್ಟೀನ್?

ಶ್ರೀಮಂತ ಹಾಗೂ ಉದ್ಯಮಿಯಾಗಿದ್ದ ಜೆಫ್ರೀ ಎಪ್​ಸ್ಟೀನ್, ತನ್ನನ್ನು ತಾನು ವಿಜೃಂಬಿಸಿಕೊಳ್ಳುತ್ತಿದ್ದಂತಹ ವ್ಯಕ್ತಿ. ತಾನು ಬಹಳ ದೊಡ್ಡ ಶ್ರೀಮಂತ ಎಂದು ಬಿಂಬಿಸಿಕೊಂಡು ದೊಡ್ಡದೊಡ್ಡವರನ್ನು ಆಕರ್ಷಿಸುತ್ತಿದ್ದ. ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯದ ಸ್ಟಾನ್ಲೀಯಲ್ಲಿ ನೂರಾರು ಎಕರೆ ವಿಸ್ತೀರ್ಣದ ಈತನ ಫಾರ್ಮ್​ನಲ್ಲಿ ಆಗಾಗ್ಗೆ ಸಮಾವೇಶಗಳನ್ನು ನಡೆಸುತ್ತಾ, ಜಗತ್ತಿನ ದೊಡ್ಡ ರಾಜಕಾರಣಿಗಳು, ಉದ್ಯಮಿಗಳು, ಸೆಲಬ್ರಿಟಿಗಳು, ವಿಜ್ಞಾನಿಗಳನ್ನು ಕರೆಸುತ್ತಿದ್ದು. ಈ ಮೂಲಕ ಈತ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದ.

ಹಲವು ತಿಕ್ಕಲುತನಗಳಿದ್ದ ಜೆಫ್ರೀ ಎಪ್​ಸ್ಟೀನ್

ಜೆಫ್ರೀ ಎಪ್​ಸ್ಟೀನ್​ಗೆ ತನ್ನ ಸಂತಾನಗಳ ಸಮೂಹವನ್ನೇ ಬೆಳೆಸುವ ಉಮೇದು ಇತ್ತು. ಅದಕ್ಕಾಗಿ 33,000 ಚದರಡಿಯ ಒಂದು ಬ್ರೀಡಿಂಗ್ ಹೌಸ್ ಕಟ್ಟಿದ್ದ. ಝಾರೋ ರಾಂಚ್ (Zorro Ranch) ಎಂದು ಇದನ್ನು ಕರೆಯಲಾಗುತ್ತಿತ್ತು. ಈತನದ್ದೇ ಸ್ಪರ್ಮ್ ಬ್ಯಾಂಕ್ ಇತ್ತು. ಈತನ ವೀರ್ಯ ಬಳಸಿ ಗರ್ಭಧಾರಣೆ ಆಗಲು ಮಹಿಳೆಯರನ್ನು ಕರೆಸುತ್ತಿದ್ದನೆನ್ನಲಾಗಿದೆ. ಈತನ ವೀರ್ಯದಿಂದ ಗರ್ಭಧಾರಣೆಯಾದ ಮಹಿಳೆಯರು ಈ ರಾಂಚ್​ನಲ್ಲಿ ಒಂದು ಸಮಯದಲ್ಲಿ 20 ಇರಬೇಕು ಎಂಬುದು ಈತನ ಅಪ್ಪಣೆ. ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾದಲ್ಲಿ ವಿಲನ್ ಕಮಲ್ ಹಾಸನ್ ಪಾತ್ರವನ್ನು ಎಪ್​ಸ್ಟೀನ್​ಗೆ ಹೋಲಿಸಲಿದರೆ ತೀರಾ ಅತಿಶಯೋಕ್ತಿ ಎನಿಸದೇ ಇರಬಹುದು. ಉಚ್ಚ ಮಟ್ಟದ ಮನುಷ್ಯರ ಸಂತತಿ ಬೆಳೆಸುವ ಗುರಿಯಲ್ಲಿ ತನ್ನ ಸಂತಾನ ಹೆಚ್ಚಿಸುವುದು ಈತನ ಕಲ್ಪನೆಯಾಗಿತ್ತು.

ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್

ತಾನು ಸತ್ತ ನಂತರ ದೇಹವನ್ನು ಫ್ರೀಜ್ ಮಾಡಬೇಕು. ಮುಂದೆ ದೇಹವನ್ನು ಜೀವಂತಗೊಳಿಸುವ ತಂತ್ರಜ್ಞಾನ ಬಂದರೆ ತಾನು ಮರಳಿ ಜೀವ ಪಡೆಯಲು ಸಾಧ್ಯ ಎಂಬುದು ಈತನ ಅನಿಸಿಕೆಯಾಗಿತ್ತು.

ಬಡ ದೇಶಗಳಲ್ಲಿ ಹಸಿವು ಕಡಿಮೆ ಮಾಡುವ ಮತ್ತು ಆರೋಗ್ಯ ವೃದ್ಧಿಸುವ ಯೋಜನೆಗಳನ್ನು ಈತ ವಿರೋಧಿಸುತ್ತಿದ್ದ. ಕಾರಣ? ಹಸಿವು ನಿವಾರಿಸಿದರೆ ಆ ದೇಶಗಳಲ್ಲಿ ಜನಸಂಖ್ಯೆ ಹೆಚ್ಚುತ್ತದೆ. ಅಸಮರ್ಥ ಮನುಷ್ಯರ ಸಂತತಿ ಹೆಚ್ಚುತ್ತದೆ ಎನ್ನುವ ತಿಕ್ಕಲುತನದ ವಿಚಾರಗಳು ಈತನದ್ದಾಗಿತ್ತು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chocolate Day 2026: ನಿಮ್ಮ ಸಂಗಾತಿಗಾಗಿ ಪ್ರೀತಿಯಿಂದ ಮನೆಯಲ್ಲೇ ತಯಾರಿಸಿ ಸ್ಪೆಷಲ್ ಚಾಕೊಲೇಟ್;‌ ಇಲ್ಲಿದೆ ರೆಸಿಪಿ – Kannada News | Chocolate Day 2026: Make special chocolates at home for your partner

ಫೆಬ್ರವರಿಯನ್ನು ಪ್ರೀತಿ ಮತ್ತು ಪ್ರಣಯದ ತಿಂಗಳು ಎಂದೇ ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಫೆಬ್ರವರಿ 7 ರಂದು ರೋಸ್‌ ಡೇಯೊಂದಿಗೆ ಪ್ರೇಮಿಗಳ ವಾರ ಪ್ರಾರಂಭವಾಗುತ್ತದೆ. ಫೆಬ್ರವರಿ 9 ರಂದು ಚಾಕೊಲೇಟ್ ದಿನವನ್ನು (Chocolate Day) ಆಚರಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಸಂಗಾತಿಗೆ ತರಹೇವಾರಿ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವು ರೀತಿಯ ಚಾಕೊಲೇಟ್‌ಗಳನ್ನೇ ಗಿಫ್ಟ್‌ ಆಗಿ ನೀಡುತ್ತಾರೆ. ಈ ಬಾರಿಯ ಚಾಕೊಲೇಟ್‌ ಡೇ ಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದರೆ, ನೀವು ನಿಮ್ಮ ಪ್ರೇಮಿಗಾಗಿ ಪ್ರೀತಿಯಿಂದ ಮನೆಯಲ್ಲಿಯೇ ಚಾಕೊಲೇಟ್‌ ತಯಾರಿಸಬಹುದು.  ಖಂಡಿತವಾಗಿಯೂ ಇದು ಯಾವುದೇ ದುಬಾರಿ ಚಾಕೊಲೇಟ್‌ಗಳಿಗಿಂತಲೂ ತುಂಬಾನೇ ಸ್ಪೆಷಲ್‌ ಆಗಿರುತ್ತದೆ.

ಚಾಕೊಲೇಟ್‌ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

ಕೋಕೋ ಪೌಡರ್ ಅರ್ಧ ಕಪ್, ಹಾಲಿನ ಪುಡಿ, 2 ಚಮಚ ಬೆಣ್ಣೆ, ಅರ್ಧ ಕಪ್ ಪುಡಿ ಸಕ್ಕರೆ, ಅರ್ಧ ಟೀ ಚಮಚ ವೆನಿಲ್ಲಾ ಎಸೆನ್ಸ್‌ ಮತ್ತು ನೀರು.

ಮನೆಯಲ್ಲಿ ಚಾಕೊಲೇಟ್ ತಯಾರಿಸುವುದು ಹೇಗೆ?

  • ಮೊದಲು, ಸಕ್ಕರೆ ಪಾಕವನ್ನು ತಯಾರಿಸಿ. ಇದನ್ನು ಮಾಡಲು, ಒಂದು ಪ್ಯಾನ್‌ನಲ್ಲಿ 1/4 ಕಪ್ ನೀರು ಮತ್ತು ಸಕ್ಕರೆ ಪುಡಿಯನ್ನು ಸೇರಿಸಿ ಮತ್ತು ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ಸಕ್ಕರೆ ಕರಗಿದ ನಂತರ, ಅದನ್ನು 3-4 ನಿಮಿಷಗಳ ಕಾಲ ಕುದಿಸಲು ಬಿಡಿ.
  • ಈಗ ತಯಾರಾದ ಈ ಸಿರಪ್‌ಗೆ 2 ಚಮಚ ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಣ್ಣೆ ಸಂಪೂರ್ಣವಾಗಿ ಕರಗುವವರೆಗೆ ನಿರಂತರವಾಗಿ ಬೆರೆಸಿಕೊಳ್ಳಿ.
  • ಮಿಶ್ರಣವು ಸ್ವಲ್ಪ ತಣ್ಣಗಾದ ನಂತರ, ಕೋಕೋ ಪುಡಿ ಮತ್ತು ಹಾಲಿನ ಪುಡಿಯನ್ನು ಅದಕ್ಕೆ ಶೋಧಿಸಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉಂಡೆಗಳಾಗದಂತೆ ನಿರಂತರವಾಗಿ ಮಿಕ್ಸ್‌ ಮಾಡಿಕೊಳ್ಳಿ.
  • ಈಗ ಅರ್ಧ ಟೀ ಚಮಚ ವೆನಿಲ್ಲಾ ಎಸೆನ್ಸ್ ಅನ್ನು ತಯಾರಾದ ಚಾಕೊಲೇಟ್‌ ಮಿಶ್ರಣಕ್ಕೆ ಸೇರಿಸಿ. ಇದು ಚಾಕೊಲೇಟ್‌ಗೆ ಆಹ್ಲಾದಕರ ಪರಿಮಳ ಮತ್ತು ಸುವಾಸನೆಯನ್ನು ನೀಡುತ್ತದೆ.
  • ಈಗ ತಯಾರಾದ ಚಾಕೊಲೇಟ್ ಬ್ಯಾಟರ್ ಅನ್ನು ಸಿಲಿಕಾ ಮೋಲ್ಡ್ (ಅಚ್ಚು) ಅಥವಾ ಯಾವುದೇ ಟ್ರೇಗೆ ಸುರಿದು, ಅದನ್ನು 2-3 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿ. ನೀವು ಈ ಚಾಕೊಲೇಟ್‌ ಮಿಶ್ರಣಕ್ಕೆ ಡ್ರೈಫೂಟ್ಸ್‌, ಚಾಕೋ ಚಿಪ್ಸ್‌ಗಳನ್ನು ಕೂಡಾ ಸೇರಿಸಬಹುದು.
  • ಚಾಕೊಲೇಟ್ ಗಟ್ಟಿಯಾದ ನಂತರ, ಅದನ್ನು ಅಚ್ಚಿನಿಂದ ತೆಗೆದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಚಾಕೊಲೇಟ್ ಸಿದ್ಧ. ಅದನ್ನು ಚೆನ್ನಾಗಿ ಪ್ಯಾಕ್ ಮಾಡಿ ಮತ್ತು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಿ. ‌

ಇದನ್ನೂ ಓದಿ: ವ್ಯಾಲೆಂಟೈನ್ವೀಕ್ನಲ್ಲಿ ಚಾಕೊಲೇಟ್ ಡೇ ಆಚರಿಸುವುದೇಕೆ? ಇದರ ಹಿಂದೆಯೂ ಇದೆ ಕಾರಣ

ಮನೆಯಲ್ಲಿ ತಯಾರಿಸಿದ ಚಾಕೊಲೇಟ್‌ಪ್ರಯೋಜನಗಳೇನು?

ಮನೆಯಲ್ಲೇ ತಯಾರಿಸಿದ ಚಾಕೊಲೇಟ್‌ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಚಾಕೊಲೇಟ್‌ಗಿಂತ ಶುದ್ಧ ಮತ್ತು ಹೆಚ್ಚು ಆರೋಗ್ಯಕರವಾಗಿದೆ. ಇದರಲ್ಲಿ ಯಾವುದೇ ಸಂರಕ್ಷಕಗಳಿರುವುದಿಲ್ಲ. ಮುಖ್ಯವಾಗಿ ದುಬಾರಿ ಚಾಕೊಲೇಟ್‌ಗಿಂತ ನಿಮ್ಮ ಕೈಯಾರೆ ತಯಾರಿಸಿದ ಚಾಕೊಲೇಟ್‌ ತುಂಬಾನೇ ಸ್ಪೆಷಲ್‌ ಆಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:42 pm, Sun, 8 February 26

Source link

ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರಿಂದ ಗಲಾಟೆ!

ಹಾಸನ, ಫೆಬ್ರುವರಿ 08: ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಪ್ರೀತಿಸಿ ವಿವಾಹವಾದ ಪತ್ನಿಗೆ ಪತಿ ಕುಟುಂಬಸ್ಥರು ಕಿರುಕುಳ ನೀಡಿದ ಘಟನೆ ನಡೆದಿದೆ. ಮೂರು ವರ್ಷಗಳ ಹಿಂದೆ ಅರ್ಪಿತಾ ಹಾಗೂ ಶಶಿಕುಮಾರ್ ಲವ್ ಮ್ಯಾರೇಜ್ ಮಾಡಿಕೊಂಡಿದ್ದರು. ಡ್ರೈವಿಂಗ್ ಕೆಲಸ ಮಾಡುತ್ತಿದ್ದ ಶಶಿಕುಮಾರ್, ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಯಿಂದ ದೂರವಾಗಿದ್ದಾನೆ. ಅರ್ಪಿತಾ ಉಳಿದುಕೊಳ್ಳಲು ಪತಿ ಮನೆಯ ಮೇಲಿನ ರೂಂನ್ನು ಶಶಿಕುಮಾರ್ ಪೋಷಕರು ನೀಡಿದ್ದರು. ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿ ಮಗುವನ್ನು ಸಾಕುತ್ತಿದ್ದ ಅರ್ಪಿತಾ, ವಿಚ್ಛೇದನ ಹಾಗೂ ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಇದರಿಂದ ಕೋಪಗೊಂಡ ಪತಿ ಕುಟುಂಬಸ್ಥರು ರೂಂ ಖಾಲಿ ಮಾಡುವಂತೆ ಕಿರುಕುಳ ನೀಡಿ, ರೂಂಗೆ ನುಗ್ಗಿ ಶೀಟ್‌ಗಳನ್ನು ಒಡೆದು, ಪಾತ್ರೆಗಳನ್ನು ಹೊರಗೆ ಎಸೆದು ಅರ್ಪಿತಾ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅರ್ಪಿತಾ ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಖ್ಯಾತಿಯ ಶರತ್ ಪ್ರಕಾಶ್ ಈಗ ‘ಸ್ಟಾರ್’ – Kannada News | Pyate Mandi Kadig Bandru fame Sharath Prakash new movie titled Star

ಕಿರುತೆರೆಯಲ್ಲಿ ಫೇಮಸ್ ಆಗಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋನ 2ನೇ ಸೀಸನ್​​ನಲ್ಲಿ ಶರತ್ ಪ್ರಕಾಶ್ (Sharath Prakash) ಅವರು ಸ್ಪರ್ಧಿಸಿದ್ದರು. ಈಗ ದೊಡ್ಡ ಗ್ಯಾಪ್ ಬಳಿಕ ಅವರು ಹೊಸ ಸಿನಿಮಾ (Kannada Cinema) ಮಾಡಿದ್ದಾರೆ. ಈ ಸಿನಿಮಾಗೆ ‘ಸ್ಟಾರ್’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಇತ್ತೀಚೆಗೆ ‘ಸ್ಟಾರ್’ (Star) ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ನಡೆಯಿತು. ರೇಣುಕಾಂಬಾ ಪ್ರಿವ್ಯೂ ಥಿಯೇಟರ್​​ನಲ್ಲಿ ಸೆಕ್ಯುರಿಟಿ ಗಾರ್ಡ್ ರಮೇಶ್ ಅವರಿಂದ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿಸಲಾಯಿತು.

‘ಲಯನ್ ಕ್ರಿಯೇಶನ್ಸ್’ ಬ್ಯಾನರ್ ಮೂಲಕ ಶರತ್ ಪ್ರಕಾಶ್ ಅವರೇ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ನಾಯಕನಾಗಿ ನಟಿಸಿ, ನಿರ್ಮಾಣ ಮಾಡುವ ಡಬಲ್ ಜವಾಬ್ದಾರಿಯನ್ನು ಅವರು ನಿಭಾಯಿಸಿದ್ದಾರೆ. ಈ ಸಿನಿಮಾಗೆ ವಿಜಯ ಸೂರ್ಯ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಸ್ಟಾರ್’ ಸಿನಿಮಾದ ಶೀರ್ಷಿಕೆಗೆ ‘ಭೂಮಿಗೆ ಹತ್ರ’ ಎಂಬ ಟ್ಯಾಗ್ ಲೈನ್ ಕೂಡ ಇದೆ.

Star Movie Team

ಈ ಸಿನಿಮಾದ ಪಾತ್ರವರ್ಗದಲ್ಲಿ ಶರತ್ ಪ್ರಕಾಶ್, ರಜತರಕ್ಷ ಮತ್ತು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿಕಾಸ್ ವಸಿಷ್ಠ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಎಪಿಎಸ್‌ಕೆ ಅವರ ಛಾಯಾಗ್ರಹಣ, ವಿನು ಮನಸು ಅವರ ಹಿನ್ನೆಲೆ ಸಂಗೀತ, ಶಶಿಧರ್ ಪಿ. ಅವರ ಸಂಕಲನ ಈ ಚಿತ್ರಕ್ಕಿದೆ. ಟ್ರೇಲರ್ ಬಿಡುಗಡೆ ವೇಳೆ ಶರತ್ ಪ್ರಕಾಶ್ ಮಾತನಾಡಿದರು.

‘ಅಣ್ಣಾವ್ರ ಕಾಲದಿಂದಲೂ ಅಪ್ಪ ಪ್ರಕಾಶ್ ಅವರು ಸಿನಿಮಾಗಳಲ್ಲಿ ಫೈಟರ್ ಆಗಿ ಕಾಣಿಸಿಕೊಂಡಿದ್ದರು. ನನಗೆ ಪ್ಯಾಟ್ ಮಂದಿ ಕಾಡಿಗ್ ಬಂದ್ರು ಶೋ ಬಳಿಕ ಹಲವು ಅವಕಾಶಗಳು ಬಂದವು. ಇಲ್ಲಿಯವರೆಗೂ 25 ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದರೂ ಬ್ರೇಕ್ ಸಿಕ್ಕಿಲ್ಲ. ನಿರ್ದೇಶಕರು ಹೇಳಿದ ಒನ್ ಲೈನ್ ಇಷ್ಟವಾಯಿತು. ರೌಡಿಸಂ, ತಂದೆ ಮಗಳ ಬಾಂಧವ್ಯ, ತಾಯಿ ಸೆಂಟಿಮೆಂಟ್, ಪ್ರೀತಿ ಮುಂತಾದ ಅಂಶಗಳು ನಮ್ಮ ಸಿನಿಮಾದಲ್ಲಿವೆ’ ಎಂದು ಶರತ್ ಹೇಳಿದ್ದಾರೆ.

ಇದನ್ನೂ ಓದಿ: ಟಾಪ್​​ಲೆಸ್ ಆಗಿ ಕಾಣಿಸಿಕೊಂಡ ‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ; ಫೋಟೋ ವೈರಲ್

ನಿರ್ದೇಶಕ ವಿಜಯ ಸೂರ್ಯ ಮಾತನಾಡಿ, ‘ಈ ಸಿನಿಮಾದ ಪ್ರತಿ ಸನ್ನಿವೇಶಗಳನ್ನು ನೋಡುವಾಗ ನಮ್ಮ ಏರಿಯಾದಲ್ಲಿ ನಡೆದಂತಹ ಘಟನೆಗಳು ಕಣ್ಣ ಮುಂದೆ ಬರುತ್ತದೆ. ನಾಯಕನಿಗೆ ಸ್ಟಾರ್ ಎಂದು ಹೆಸರು ಬರಲು ಕಾರಣವೇನು ಎಂಬುದು ಸಿನಿಮಾ ನೋಡಿದಾಗ ತಿಳಿಯುತ್ತದೆ. ಬೆಂಗಳೂರಿನ ಸ್ಲಮ್​ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಂದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಮತ್ತೋರ್ವ ಆಟಗಾರ ಎಂಟ್ರಿ – Kannada News | T20 World Cup 2026: Washington Sundar to link up with Indian squad in Delhi

ಭಾರತ ತಂಡವು ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಯುಎಸ್​ಎ ತಂಡವನ್ನು 29 ರನ್​ಗಳಿಂದ ಮಣಿಸಿ ಟೀಮ್ ಇಂಡಿಯಾ ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಅಂದರೆ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಪ್ರಮುಖ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಸಂಪೂರ್ಣ ಫಿಟ್​ ಆಗಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಪೆಕ್ಕೆಲುಬಿನ ನೋವಿನ ಸಮಸ್ಯೆಗೀಡಾಗಿದ್ದರು. ಹೀಗಾಗಿ ಅವರು ಕಿವೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್​ನ ಮೊದಲ ಪಂದ್ಯದ ವೇಳೆಯೂ ಭಾರತ ತಂಡದೊಡನೆ ಕಾಣಿಸಿಕೊಂಡಿರಲಿಲ್ಲ.

ಇದೀಗ ಸಂಪೂರ್ಣ ಫಿಟ್​ನೆಸ್ ಸಾಧಿಸಿರುವ ವಾಷಿಂಗ್ಟನ್ ಸುಂದರ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಫೆಬ್ರವರಿ 12 ಕ್ಕೂ ಮುನ್ನ ಅವರು ದೆಹಲಿಯಲ್ಲಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಅಂದರೆ ಭಾರತ ಮತ್ತು ನಮೀಬಿಯ ನಡುವಣ ಪಂದ್ಯವು ಫೆಬ್ರವರಿ 12 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವುದು ಖಚಿತವಾಗಿದೆ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಇದನ್ನೂ ಓದಿ: ಇಬ್ಬರಿಗೆ ಅನಾರೋಗ್ಯ… ಟೀಮ್ ಇಂಡಿಯಾಗೆ ಚಿಂತೆ ಶುರು

ಟಿ20 ವಿಶ್ವಕಪ್ 2026 ಭಾರತದ ವೇಳಾಪಟ್ಟಿ:

  1. ಫೆಬ್ರವರಿ 7: ಭಾರತ vs ಯುಎಸ್​​ಎ-  (ಮುಂಬೈ)- ಭಾರತ ತಂಡಕ್ಕೆ 29 ರನ್​ಗಳ ಭರ್ಜರಿ ಜಯ
  2. ಫೆಬ್ರವರಿ 12: ಭಾರತ vs  ನಮೀಬಿಯಾ- (ದೆಹಲಿ)
  3. ಫೆಬ್ರವರಿ 15: ಭಾರತ vs ಪಾಕಿಸ್ತಾನ್-  (ಕೊಲಂಬೊ)
  4. ಫೆಬ್ರವರಿ 18: ಭಾರತ vs ನೆದರ್​ಲೆಂಡ್ಸ್-​​ (ಅಹಮದಾಬಾದ್)

ಈ ನಾಲ್ಕು ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿದೆ. ಅಂದರೆ 4 ಗ್ರೂಪ್​ಗಳ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಅದರಂತೆ ಮೊದಲ ಸುತ್ತಿನ ಬಳಿಕ ಸೂಪರ್-8 ಹಂತದ ಮುಖಾಮುಖಿ ಶುರುವಾಗಲಿದೆ. ಸೂಪರ್-8 ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಸೆಮಿಫೈನಲ್​​ಗೆ ಅರ್ಹತೆ ಪಡೆಯಲಿದೆ.

Source link

ನಾನು ಎಷ್ಟು ಒತ್ತಡ ಅನುಭವಿಸಿದ್ದೆ ಎಂಬುದು ನಂಗೆ ಮಾತ್ರ ಗೊತ್ತು! – Kannada News | T20 world cup 2026: suryakumar yadav post match interview after usa match

ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಜಯಭೇರಿಯ ಕಾರಣಕರ್ತ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಮ್ಯಾಚ್​ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪವರ್​ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 46 ರನ್​ಗಳು ಮಾತ್ರ.

ಇದಾದ ಬಳಿಕ 77 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ಟೀಮ್ ಇಂಡಿಯಾವನ್ನು ಏಕಾಂಗಿಯಾಗಿ ಮುನ್ನಡೆಸಿದ್ದು ಸೂರ್ಯಕುಮಾರ್ ಯಾದವ್. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯ 49 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 84 ರನ್ ಬಾರಿಸಿದರು.

ಈ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 29 ರನ್​ಗಳ ಜಯ ಸಾಧಿಸಿತು.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಾನು ಅನುಭವಿಸಿದ ಒತ್ತಡವನ್ನು ವಿವರಿಸಿದ್ದಾರೆ. ಬೃಹತ್ ಮೊತ್ತದ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿ ನಾವು ಕೇವಲ 77 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದವು. ಈ ವೇಳೆ ನಾನು ಎಷ್ಟು ಒತ್ತಡವನ್ನು ಅನುಭವಿಸುತ್ತಿದ್ದೆ ಎಂದು ನನಗೆ ಮಾತ್ರ ಗೊತ್ತಿದೆ.

ಆದರೆ ಇಂತಹ ಒತ್ತಡಗಳ ಸಂದರ್ಭಗಳಲ್ಲೂ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲೆ ಎನ್ನುವ ನಂಬಿಕೆ ನನಗಿತ್ತು. ಏಕೆಂದರೆ ನಾನು ಇಲ್ಲೇ ಆಡಿದವನು. ಮುಂಬೈ ಕ್ರಿಕೆಟ್ ಮೈದಾನ, ಆಝಾದ್ ಮೈದಾನ, ಕ್ರಾಸ್ ಮೈದಾನದಲ್ಲಿ ನಾನು ಕ್ರಿಕೆಟ್ ಕೆರಿಯರ್ ರೂಪಿಸಿದ್ದೇನೆ. ಹೀಗಾಗಿ ಕೊನೆಯವರೆಗೂ ಬ್ಯಾಟಿಂಗ್ ಮಾಡಿದರೆ, ಪಂದ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡಬಹುದು ಎಂಬುದು ನನಗೆ ತಿಳಿದಿತ್ತು. ಹೀಗಾಗಿ ಕ್ರೀಸ್ ಕಚ್ಚಿ ಆಡಲು ನಿರ್ಧರಿಸಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದೇ ವೇಳೆ ಪಿಚ್​ ಬಗ್ಗೆ ಮಾತನಾಡಿದ ಸೂರ್ಯ, ಯಾವಾಗಲೂ ವಾಂಖೆಡೆಯಲ್ಲಿ ಇರುವುದಕ್ಕಿಂತ ಸ್ವಲ್ಪ ಭಿನ್ನವಾದ ಪಿಚ್ ಇದಾಗಿತ್ತು. ಬೆಳಿಗ್ಗೆ ಹೊರಗೆ ಹೆಚ್ಚು ಬಿಸಿಲು ಇರಲಿಲ್ಲ. ಕ್ಯುರೇಟರ್ ಮತ್ತು ಮೈದಾನದ ಸಿಬ್ಬಂದಿ ಅತ್ಯುತ್ತಮ ಪಿಚ್ ಅನ್ನು ಸಿದ್ಧಪಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ.

ಆದರೆ ಕೆಲವು ವಿಷಯಗಳು ಅವರ ನಿಯಂತ್ರಣದಲ್ಲಿಲ್ಲ. ಇದರಿಂದ ಪಿಚ್​ನ ಮೇಲ್ಮೈನಲ್ಲಿ ಬದಲಾವಣೆಯಾಗಿರಬಹುದು. ಇದಾಗ್ಯೂ ನಮ್ಮ ತಪ್ಪುಗಳನ್ನು ಒಪ್ಪಲು ಸಾಧ್ಯವಿಲ್ಲ. ನಾವು ಇನ್ನೂ ಸ್ವಲ್ಪ ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು ಎಂಬುದು ನನ್ನ ಅನಿಸಿಕೆ.

ಇದನ್ನೂ ಓದಿ: ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್

ಇದೀಗ ಪಂದ್ಯ ಗೆದ್ದಿದ್ದೇವೆ. ಗೆದ್ದ ಬಳಿಕ ನಾವು ಬಹಳಷ್ಟು ವಿಷಯಗಳನ್ನು ಕಲಿಯಬಹುದು. ಅದರಂತೆ ಯುಎಸ್​ಎ ವಿರುದ್ಧ ನಾವು ಸ್ವಲ್ಪ ಉತ್ತಮವಾಗಿ ಅಥವಾ ಸ್ವಲ್ಪ ಚುರುಕಾಗಿ ಬ್ಯಾಟಿಂಗ್ ಮಾಡಬೇಕಿತ್ತು ಎಂಬ ಪಾಠ ಕಲಿತಿದ್ದೇವೆ. ಒಬ್ಬ ಬ್ಯಾಟ್ಸ್‌ಮನ್ ಅಥವಾ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೊನೆಯವರೆಗೂ ಆಡಲು ಪ್ರಯತ್ನಿಸುವುದಕ್ಕಿಂತ ಆ ಸಣ್ಣ, ಸಣ್ಣ ಪಾಲುದಾರಿಕೆಗಳು ನಮ್ಮನ್ನು 160 ಕ್ಕೆ ಕೊಂಡೊಯ್ಯಬಹುದಿತ್ತು. ಇದುವೇ ಈ ಪಂದ್ಯದಿಂದ ಕಲಿತ ಪಾಠ. ಮುಂದಿನ ಪಂದ್ಯಕ್ಕೆ ಇನ್ನೂ ಕೆಲ ದಿನಗಳ ಸಮಯವಿದೆ. ಹೀಗಾಗಿ ನಮೀಬಿಯ ವಿರುದ್ಧದ ಪಂದ್ಯಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿ ಹಿಂತಿರುಗುತ್ತೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

Source link

Exit mobile version