17ನೇ ವಯಸ್ಸಿಗೆ ನಕ್ಸಲ್ ಆಗ ಹೊರಟಿದ್ದ ಪವನ್ ಕಲ್ಯಾಣ್; ತಡೆದಿದ್ದು ಅಣ್ಣ ಚಿರಂಜೀವಿ – Kannada News

ಟಾಲಿವುಡ್‌ನ ನಟ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ತಮ್ಮ ಹದಿಹರೆಯದ ದಿನಗಳ ಕುರಿತು ಅತ್ಯಂತ ಶಾಕಿಂಗ್ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಾವು ಒಂದು ಕಾಲದಲ್ಲಿ ನಕ್ಸಲ್ ಆಗಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಅಣ್ಣ ಮೆಗಾಸ್ಟಾರ್ ಚಿರಂಜೀವಿ ತಮ್ಮನ್ನು ತಡೆದು ದಾರಿ ತೋರಿಸಿದ್ದಾಗಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಪವನ್ ಕಲ್ಯಾಣ್ ಅವರಿಗೆ 17-21 ವರ್ಷ ವಯಸ್ಸಾಗಿದ್ದಾಗ ಸಮಾಜದಲ್ಲಾಗುತ್ತಿದ್ದ ಅನ್ಯಾಯಗಳ ವಿರುದ್ಧ ಭಾರಿ ಸಿಟ್ಟು ಇತ್ತಂತೆ.‘ಆ ವಯಸ್ಸಿನಲ್ಲಿ ನನಗೆ ಗನ್ ಹಿಡಿದು ನಕ್ಸಲೈಟ್ ಸೇರುವ ಹುಚ್ಚು ಆಲೋಚನೆ ಬಂದಿತ್ತು. ಗುಟ್ಟಾಗಿ ವಿದ್ಯಾರ್ಥಿ ಸಂಘಟನೆಗಳ ಸಭೆಗಳಿಗೂ ಹೋಗುತ್ತಿದ್ದೆ. ನನ್ನ ತಲೆಯಲ್ಲಿ ಆಕ್ರೋಶದ ಯೋಚನೆಗಳು ಸ್ಫೋಟಗೊಳ್ಳುತ್ತಿದ್ದವು’ ಎಂದು ಪವನ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ತಮ್ಮನ ಈ ಹುಚ್ಚು ಕೋಪವನ್ನು ಕಂಡು ಮೆಗಾಸ್ಟಾರ್ ಚಿರಂಜೀವಿ ತೀವ್ರ ಆತಂಕಗೊಂಡಿದ್ದರು. ಆಗ ಪವನ್ ಕಲ್ಯಾಣ್ ಅವರನ್ನು ಕೂರಿಸಿ ಚಿರಂಜೀವಿ ಒಂದು ಪ್ರಶ್ನೆ ಕೇಳಿದ್ದರು. ‘ನಾನು ಚಿರಂಜೀವಿ ಆಗಿರದಿದ್ದರೆ, ನಿನ್ನ ಸಂಬಳ ಹಾಗೂ ಕಷ್ಟದ ಮೇಲೆ ಇಡೀ ಕುಟುಂಬ ಅವಲಂಬಿತವಾಗಿದ್ದರೆ ನೀನು ಇದೇ ನಿರ್ಧಾರ ತೂಗುತ್ತಿದ್ದೆಯಾ’ ಎಂದು ಪ್ರಶ್ನಿಸಿದ್ದರು. ಅಣ್ಣನ ಈ ಜವಾಬ್ದಾರಿಯುತ ಮಾತಿಗೆ ಪವನ್ ಬಳಿ ಯಾವುದೇ ಉತ್ತರವಿರಲಿಲ್ಲ. ಆ ಬಳಿಕ ಅವರು ಆ ದಾರಿಯಿಂದ ಹಿಂದೆ ಸರಿದರು.

ಇದನ್ನೂ ಓದಿ: ‘ಈ ಬೆದರಿಕೆ ಬೇಡ’: ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರೈ ಎಚ್ಚರಿಕೆ

ಚಿರಂಜೀವಿ ಅವರೇ ನನ್ನ ಏಕೈಕ ಹೀರೋ:

ತಮ್ಮ ಸಿನಿಮಾಗಳ ಪ್ರಚಾರದ ವೇಳೆ ಪವನ್ ಕಲ್ಯಾಣ್ ಸದಾ ಅಣ್ಣನನ್ನು ಕೊಂಡಾಡುತ್ತಾರೆ. ‘ನನಗೆ ಜಗತ್ತಿನಲ್ಲಿ ಒಬ್ಬರೇ ಹೀರೋ, ಅದು ಮೆಗಾಸ್ಟಾರ್ ಚಿರಂಜೀವಿ. ಅವರ ಪಕ್ಕ ನಿಂತಾಗ ನಾನು ಕೂಡ ಒಬ್ಬ ನಟ ಎಂಬುದನ್ನೇ ಮರೆತುಬಿಡುತ್ತೇನೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 90ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪವನ್ ಕಲ್ಯಾಣ್, ಜನಸೇನಾ ಪಾರ್ಟಿ ಕಟ್ಟಿ ಸದ್ಯ ಆಂಧ್ರಪ್ರದೇಶದ ಡಿಸಿಎಂ ಆಗಿ ಜನಸೇವೆ ಮಾಡುತ್ತಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral: ಕಾರ್ಪೊರೇಟ್ ಕೆಲಸದ ಸ್ಥಳಗಳಲ್ಲಿನ ಐದು ವಿಷಕಾರಿ ಅಂಶಗಳನ್ನು ಟೀಕಿಸಿದ ಸ್ಟಾರ್ಟ್ಅಪ್ ಸಂಸ್ಥಾಪಕಿ – Kannada News

ಕಾರ್ಪೊರೇಟ್ (Corporate) ಜಗತ್ತೇ ಹಾಗೆ, ಕೈ ತುಂಬಾ ಸಂಬಳವಿದ್ರೂ ಒತ್ತಡ ಹೆಚ್ಚೇ ಇರುತ್ತದೆ. ಹೀಗಾಗಿ ಈ ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು ಅನುಭವಿಸುವ ಒತ್ತಡ ಹೇಳತೀರದು. ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲಾಗದೇ ಅನಿವಾರ್ಯಕ್ಕೆ ಕೆಲಸ ಮಾಡುವವರು ಇದ್ದಾರೆ. ಇದೀಗ ಬೆಂಗಳೂರು (Bengaluru) ಮೂಲದ ಸ್ಟಾರ್ಟ್ಅಪ್ ಸಂಸ್ಥಾಪಕಿಯೊಬ್ಬರು ಭಾರತೀಯ ಕೆಲಸದ ಸ್ಥಳಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ವಿಷಕಾರಿ ವಿಷಯಗಳನ್ನು ಟೀಕಿಸಿದ್ದಾರೆ. ಲಿಂಕ್ಡ್ ಇನ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥಾಪಕಿ ಅಲೂನಾ (Aloona) ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಭಾರತೀಯ ಕೆಲಸದ ಸ್ಥಳಗಳಲ್ಲಿ ಸಾಮಾನ್ಯೀಕರಿಸಲ್ಪಟ್ಟ ವಿಷಕಾರಿ ವಿಷಯಗಳಿವು, ಆದರೆ ಕೆಲಸದ ಸ್ಥಳಗಳಲ್ಲಿ ಈ ರೀತಿಯಾಗಬಾರದು ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಮಧ್ಯರಾತ್ರಿಯಲ್ಲಿ ಉದ್ಯೋಗಿಗಳಿಗೆ ಕರೆ ಮಾಡಲು ನಿರ್ಧರಿಸುವ ವ್ಯಕ್ತಿಯೂ ವೇಳಾಪಟ್ಟಿಯನ್ನು ಅತ್ಯುತ್ತಮವಾಗಿಸಬೇಕಾಗಿದೆ. ವಾರಾಂತ್ಯದ ಸಭೆಗಳು, ಉದ್ಯೋಗಿಗಳ ಮೇಲೆ ಕಿರುಚುವುದು, ಇತರರ ಮುಂದೆ ನಿಂದಿಸುವುದು, ಸಾರ್ವಜನಿಕವಾಗಿ ಅವಮಾನನಿಸುವುದು ಸರಿಯಲ್ಲ ಎಂದಿದ್ದಾರೆ.

ಉದ್ಯೋಗಿಗಳು ಅನಾರೋಗ್ಯದಿಂದ ಬಳಲುತ್ತಿರುವಾಗ, ಆಸ್ಪತ್ರೆಯಲ್ಲಿರುವಾಗ ಕೆಲಸದ ಸ್ಥಳಗಳಿಂದ ಕರೆಗಳು ಬರುವುದು ಸರಿಯಲ್ಲ. ಶುಕ್ರವಾರ-ಸಂಜೆ ಹಠಾತ್ ತುರ್ತು ಪರಿಸ್ಥಿತಿಗಳು ಸೇರಿದಂತೆ ಐದು ಪ್ರಚಲಿತ ವಿಷಕಾರಿ ಅಭ್ಯಾಸಗಳನ್ನು ಕಟುವಾಗಿ ಟೀಕಿಸಿದ್ದಾರೆ. ಇದರಲ್ಲಿ ಯಾವುದು ಸರಿಯಿಲ್ಲ. ಸಮಸ್ಯೆ ಅವರುಗಳದ್ದೇ, ನೀವಲ್ಲ ಎಂಬುದನ್ನು ನೆನಪಿಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ಕಂಪನಿಯಲ್ಲಿ 11 ವರ್ಷ ಕೆಲಸ ಮಾಡಿದ್ರೂ ಜಾಬ್‌ನಿಂದ ತೆಗೆದು ಹಾಕಿದ ಕಂಪನಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿಷಕಾರಿ ವಿಷಯಗಳು ಸರ್ವೇ ಸಾಮಾನ್ಯವಾಗುತ್ತಿದೆ. ಇದು ಉದ್ಯೋಗಿಗಳನ್ನು ಮಾನಸಿಕವಾಗಿ ಹಿಂಸಿಸುತಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ಅನೇಕ ಭಾರತೀಯ ಸಂಸ್ಥೆಗಳಲ್ಲಿ ಕಾಣಸಿಗುವ ವಿಷಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಉದ್ಯೋಗಿಗಳು ರಾಜೀನಾಮೆ ನೀಡಲು ಈ ಅಂಶಗಳೇ ಕಾರಣ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:59 am, Thu, 11 June 26

Source link

ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು, ಬೆಂಗಳೂರು, ಮೈಸೂರು ಜನರಿಗೆ ಕುಡಿಯುವ ನೀರಿನ ಸಂಕಷ್ಟ – Kannada News

ಮೈಸೂರು, ಜೂನ್ 11: ಈ ಬಾರಿ ಜೂನ್ ಅರ್ಧ ತಿಂಗಳು ಕಳೆಯುತ್ತಾ ಬಂದರೂ ಆಗೊಮ್ಮೆ, ಈಗೊಮ್ಮೆ ಒಂದೊಂದು ಮಳೆ ಬಂದಿದೆ ಅಷ್ಟೇ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾಯ ಇರುವ ಕಾರಣ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಆತಂಕಕಾರಿಯಾಗಿ ಕುಸಿದಿದೆ. ಸದ್ಯ ಜಲಾಶಯದ ನೀರಿನ ಮಟ್ಟ 81 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಠ ಸಾಮರ್ಥ್ಯ 124 ಅಡಿಗಳಾಗಿವೆ.

ಸದ್ಯ ಕೆಆರ್‌ಎಸ್‌ನಲ್ಲಿ ಸಂಗ್ರಹವಾಗಿರುವ ನೀರು ಕೇವಲ 11 ಟಿಎಂಸಿ. ಇದರಲ್ಲಿ 4 ರಿಂದ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವುದು ಕೇವಲ 7 ಟಿಎಂಸಿ ಮಾತ್ರ. ಈ ಪರಿಸ್ಥಿತಿಯ ನಡುವೆ, ಜೂನ್ ತಿಂಗಳಿನಲ್ಲಿ ತಮಿಳುನಾಡಿಗೆ ನ್ಯಾಯಾಲಯದ ಸೂಚನೆಯಂತೆ 9 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಇದೆ. ಲಭ್ಯವಿರುವ ನೀರಿಗಿಂತ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವ ಒತ್ತಡ ರಾಜ್ಯದ ಮೇಲಿದೆ.

ಈ ನೀರಿನ ಕೊರತೆಯು ಬೆಂಗಳೂರು, ಮೈಸೂರು ಮತ್ತು ಮಂಡ್ಯ ಭಾಗಗಳಿಗೆ ಕುಡಿಯುವ ನೀರಿನ ಸಂಕಷ್ಟ ತಂದೊಡ್ಡಲಿದೆ. ಕಬಿನಿ ಜಲಾಶಯದಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿರುವುದು ಆತಂಕವನ್ನು ಹೆಚ್ಚಿಸಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಇಷ್ಟರಮಟ್ಟಿಗೆ ನೀರು ಕುಸಿತ ಕಂಡಿರಲಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಸವಾಲನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮ: ಎಕ್ಸ್​​ ಪೋಸ್ಟ್​ ಮೂಲಕ ಕಾಂಗ್ರೆಸ್​​ಗೆ ಕುಟುಕಿದ ಜೆಡಿಎಸ್​​ – Kannada News

ಕ್ಸ್​​ ಪೋಸ್ಟ್​ ಮೂಲಕ ಕಾಂಗ್ರೆಸ್​​ಗೆ ಕುಟುಕಿದ ಜೆಡಿಎಸ್​​
Image Credit source: JDS X Account

ಬೆಂಗಳೂರು, ಜೂನ್​​ 12: ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣ ಪಡೆಯಲು ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ಕೆಲ ದಾಖಲೆಗಳು ಇನ್ನು ಅಗತ್ಯ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಪ್ರಸ್ತುತ ರಾಜ್ಯದಲ್ಲಿ 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಇದರಲ್ಲಿ ಸುಮಾರು 1.48 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗೆ ಕಳೆದ ಐದು ತಿಂಗಳುಗಳಿಂದ ಹಣ ಸಂದಾಯವಾಗುತ್ತಿರುವ ಮಾಹಿತಿಯ ಆಧಾರದಲ್ಲಿ ಕೆಲ ನಿಯಮಗಳ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಈ ಸಂಬಂಧ ರಾಜ್ಯ ಸಕರ್ಕರದ ವಿರುದ್ಧ ಜೆಡಿಎಸ್​​ ವಾಗ್ದಾಳಿ ನಡೆಸಿದ್ದು, ವಚನಭ್ರಷ್ಟ ಕಾಂಗ್ರೆಸ್‌ನ ಗ್ಯಾರಂಟಿಗಳ ಅಸಲಿ ಬಣ್ಣ ಬಯಲಾಗಿದೆ ಎಂದು ಆರೋಪಿಸಿದೆ.

ಎಕ್ಸ್​​ ಪೋಸ್ಟ್​​ ಮೂಲಕ ಜೆಡಿಎಸ್​​ ಕಿಡಿ

ಚುನಾವಣೆಗೂ ಮುನ್ನ ಯೋಜನೆಗೆ ಯಾವ ಷರತ್ತೂ ಇರಲಿಲ್ಲ. ಪ್ರತಿ ಮನೆಯೊಡತಿಗೆ 2,000 ಎಂದು ರಾಜ್ಯದ ತಾಯಂದಿರ ಕಿವಿಗೆ ಹೂವಿಟ್ಟ ಕಾಂಗ್ರೆಸ್​​ ಸರ್ಕಾರ ಇದೀಗ 17 ಜಿಲ್ಲೆಗಳಲ್ಲಿ ಬರೋಬ್ಬರಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕಿತ್ತುಹಾಕಿ ತನ್ನ ನೈಜ ಮುಖವನ್ನು ಬಹಿರಂಗಪಡಿಸಿದೆ. ಬಯೋಮೆಟ್ರಿಕ್, ಸರ್ವರ್ ಪ್ರಾಬ್ಲಮ್ ಎಂದು ಒಂದಿಲ್ಲೊಂದು ನೆಪ ಹೇಳಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಈ ‘ಕೈ’ ಸರ್ಕಾರದ ದ್ರೋಹವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ ಎಂದು ಜೆಡಿಎಸ್​​ ಹೇಳಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮ; ಬಯೋಮೆಟ್ರಿಕ್ ದೃಢೀಕರಣದ ಜೊತೆ ಈ ಎಲ್ಲ ದಾಖಲೆ ಕಡ್ಡಾಯ

‘ಇದು ಕೇವಲ ವೋಟ್ ಬ್ಯಾಂಕ್​​ಗಾಗಿ ಮಾಡಿದ ವಂಚನೆ’

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಎಂದರೆ, ಗೃಹಲಕ್ಷ್ಮಿ ಕಡಿತದ ಬಗ್ಗೆ ಸಾಕ್ಷಾತ್ ಮುಖ್ಯಮಂತ್ರಿಗಳನ್ನೇ ಕೇಳಿದರೆ, ನನಗೆ ಗೊತ್ತಿಲ್ಲ ಎಂಬ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಹಾಗಾದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಯಾರು? ಸಿಎಂ ಅವರಿಗೆ ಗೊತ್ತಿಲ್ಲದೆ ಇಲಾಖೆಗಳಲ್ಲಿ ಇಷ್ಟೆಲ್ಲಾ ನಡೆಯುತ್ತಿದೆಯೇ ಅಥವಾ ಗೊತ್ತಿದ್ದೂ ನಾಟಕವಾಡುತ್ತಿದ್ದಾರೆಯೇ?
5,000 ಕೋಟಿ ರೂ. ಗೃಹಲಕ್ಷ್ಮಿ ಹಣವನ್ನು ತಿಂದು ತೇಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಮತಕ್ಕಾಗಿ ಮಹಿಳೆಯರನ್ನು ಯಾಮಾರಿಸಿ ಅಧಿಕಾರ ಸಿಕ್ಕ ಮೇಲೆ ಅವರನ್ನು ಅನರ್ಹರು ಎಂದು ಬೀದಿಗೆ ತಳ್ಳುವುದು ಯಾವ ರೀತಿಯ ಮಹಿಳಾ ಸಬಲೀಕರಣ? ಇದು ಕೇವಲ ವೋಟ್ ಬ್ಯಾಂಕ್​​ಗಾಗಿ ಮಾಡಿದ ವಂಚನೆಯಾಗಿದ್ದು, ಕಾಂಗ್ರೆಸ್ ಸರ್ಕಾರ ತಾಯಂದಿರ ಕ್ಷಮೆ ಕೇಳಬೇಕು. ಕೊಟ್ಟ ಮಾತಿಗೆ ತಪ್ಪಿದವರನ್ನು ಈ ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಜೆಡಿಎಸ್​​ ವಾಗ್ದಾಳಿ ನಡೆಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧರ್ಮಸ್ಥಳದಲ್ಲಿ ಮಹಾ ವಿಸ್ಮಯ: 26 ವರ್ಷ ಹಿಂದೆ ಓಡಿಹೋಗಿದ್ದ ಹುಡುಗ ಕೊನೆಗೂ ವಾಪಸ್, ಸತೀಶ್ ಈಗ ಮಹಾರಾಷ್ಟ್ರದ ಸಲೀಂ! – Kannada News

ತಾಯಿ ಜತೆ ಸತೀಶ್ ಅಲಿಯಾಸ್ ಸಲೀಂImage Credit source: tv9

ಮಂಗಳೂರು, ಜೂನ್ 11: ದಕ್ಷಿಣ ಕನ್ನಡ (Dakashina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ, ಇದೀಗ ಮನೆಗೆ ಮರಳಿದ್ದಾನೆ. ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಈಗ ಸಲೀಂ ಆಗಿ ಮರಳಿ ಮನೆಗೆ ಬಂದು ತಾಯಿಯನ್ನು ಸೇರಿದ ಅಪರೂಪದ ವ್ಯಕ್ತಿ. 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಆಕರ್ಷಿತನಾಗಿ ಓಡಿಹೋಗಿದ್ದ ಈತ, ಇಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ನೆಲೆಸಿದ್ದ.

ಮುಖ್ಯಾಂಶಗಳು

  • 26 ವರ್ಷಗಳ ಬಳಿಕ ತಾಯಿ-ಮಗನ ಸಮ್ಮಿಲನ.
  • ಸರ್ಕಸ್ ತಂಡದ ಜೊತೆ ಓಡಿಹೋಗಿದ್ದ ಬಾಲಕ ಸತೀಶ್.
  • ಮಹಾರಾಷ್ಟ್ರದಲ್ಲಿ ‘ಸಲೀಂ’ ಆದ ಕರಾವಳಿ ಯುವಕ.

ಊರನ್ನೇ ಮರೆತು ಮಹಾರಾಷ್ಟ್ರದಲ್ಲಿ ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿದ್ದ ಸತೀಶ್!

ಮನೆ ಬಿಟ್ಟು ಹೋದ ಬಳಿಕ ಸರ್ಕಸ್ ತಂಡದ ಜೊತೆ ದೇಶದ ವಿವಿಧೆಡೆ ಸುತ್ತಾಡಿದ ಸತೀಶ್, ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದ. ನಿರಂತರ ದುಡಿಮೆಯ ನಡುವೆ ಆತ ತನ್ನ ಸ್ವಂತ ಊರು, ಭಾಷೆ ಹಾಗೂ ಹೆತ್ತವರನ್ನೇ ಸಂಪೂರ್ಣವಾಗಿ ಮರೆತುಹೋಗಿದ್ದ. ಅಲ್ಲಿಯೇ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದ. ಅಲ್ಲದೆ, ತಾಲೀಮಾ ಎಂಬಾಕೆಯನ್ನು ವಿವಾಹವಾಗಿರುವ ಈತನಿಗೆ ಈಗ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷಗಳ ಕಾಲ ಹೊರ ರಾಜ್ಯದಲ್ಲೇ ಕಳೆದಿದ್ದರಿಂದ ಸತೀಶ್‌ಗೆ ತನ್ನ ಮಾತೃಭಾಷೆಯಾದ ತುಳು ಹಾಗೂ ಕನ್ನಡ ಸಂಪೂರ್ಣವಾಗಿ ಮರೆತುಹೋಗಿದ್ದು, ಈಗ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಮಾತನಾಡುತ್ತಿದ್ದಾನೆ.

ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಬಂದಾಗ ಮರುಕಳಿಸಿದ ನೆನಪು

ಜೂನ್ 9 ರಂದು ಸತೀಶ್ (ಸಲೀಂ) ತನ್ನ ಮಹಾರಾಷ್ಟ್ರದ ಸ್ನೇಹಿತರ ತಂಡದೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ. ಈ ವೇಳೆ ಈ ಹಿಂದೆ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬಂದಾಗ ಆತನಿಗೆ ಹಳೆಯ ನೆನಪುಗಳು ಹಠಾತ್ತಾಗಿ ಮರುಕಳಿಸಿವೆ. ‘ಇದೇ ನನ್ನ ಸ್ವಂತ ಊರು’ ಎಂಬ ಸತ್ಯ ಮನವರಿಕೆಯಾಗಿದೆ. ತಮ್ಮಂದಿರ ಹೆಸರುಗಳು ನೆನಪಿದ್ದ ಕಾರಣ, ಸ್ಥಳೀಯ ಅಂಗಡಿಯವರ ಬಳಿ ವಿಚಾರಿಸಿ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕಿಕೊಂಡು ಹೋಗಿದ್ದಾನೆ. ಮನೆಯ ಬಾಗಿಲಿಗೆ ಬಂದು ನಿಂತ ಹಿರಿಯ ಮಗನನ್ನು ಕಂಡ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ. ಮನೆಯವರೆಲ್ಲರೂ ಸೇರಿ ಮಗನನ್ನು ಅತ್ಯಂತ ಸಂತಸದಿಂದ ಬರಮಾಡಿಕೊಂಡಿದ್ದಾರೆ.

ಕುಟುಂಬದವರ ಜತೆ ಸತೀಶ್ ಅಲಿಯಾಸ್ ಸಲೀಂ

ಭಾಷೆಯ ಮಿತಿ ಮೀರಿದ ತಾಯಿಯ ಪ್ರೀತಿ, ಫಲಿಸಿದ ಹರಕೆ

ಸತೀಶ್‌ಗೆ ಕೇವಲ ಹಿಂದಿ ಮಾತ್ರ ಬರುತ್ತಿದ್ದು, ಇತ್ತ ತಾಯಿಗೆ ಹಿಂದಿ ಗೊತ್ತಿಲ್ಲದ ಕಾರಣ ಇಬ್ಬರ ನಡುವೆ ಭಾಷೆಯ ಸಮಸ್ಯೆ ಎದುರಾಗಿತ್ತು. ಆದರೂ ಭಾಷೆಯ ಹಂಗಿಲ್ಲದೆ ತಾಯಿ ಮತ್ತು ಸಹೋದರರನ್ನು ಸತೀಶ್ ಗುರುತಿಸಿ ಅಪ್ಪಿಕೊಂಡಿದ್ದಾನೆ. ಮಗ ಸಿಗಲಿ ಎಂದು ಧರ್ಮಸ್ಥಳ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಪಣೋಲಿಬೈಲ್ ದೈವಸ್ಥಾನಕ್ಕೆ ತಾಯಿ ವರ್ಷಗಳಿಂದ ಹೊತ್ತಿದ್ದ ಹರಕೆ ಕೊನೆಗೂ ಫಲಿಸಿದೆ.

‘ನಾನು ಸಾಯುವ ಮುನ್ನ ನನ್ನ ಹಿರಿಯ ಮಗನನ್ನು ಒಮ್ಮೆಯಾದರೂ ನೋಡಬೇಕು, ಅವನನ್ನು ಹೇಗಾದರೂ ಕರೆತನ್ನಿ’ ಎಂದು ಇತ್ತೀಚೆಗಷ್ಟೇ ತಾಯಿ ತನ್ನ ಉಳಿದ ಮಕ್ಕಳ ಬಳಿ ಕಣ್ಣೀರಿಟ್ಟಿದ್ದರು. ಹೆತ್ತ ಕರುಳಿನ ಹಂಬಲಕ್ಕೆ ಓಗೊಟ್ಟಂತೆ ಮಗ ಮರಳಿ ಬಂದಿದ್ದು, ಕುಟುಂಬದೊಂದಿಗೆ ಕೆಲವು ದಿನಗಳ ಕಾಲ ಸಂತಸದಿಂದ ಕಾಲ ಕಳೆದ ಸತೀಶ್, ಸದ್ಯ ಮಹಾರಾಷ್ಟ್ರಕ್ಕೆ ಮರಳಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಲಿಂಪಿಕ್ಸ್​ಗೆ ಕೊಹ್ಲಿಯನ್ನು ಆಯ್ಕೆ ಮಾಡಿ: ಮಾಜಿ ಆಟಗಾರನ ಸಲಹೆ! – Kannada News

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ವಿರಾಟ್ ಕೊಹ್ಲಿಯನ್ನು ಕೂಡ ಆಯ್ಕೆ ಮಾಡಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಎಸ್. ಶ್ರೀಶಾಂತ್ ಆಗ್ರಹಿಸಿದ್ದಾರೆ. ‘ಸ್ಪೋರ್ಟ್ಸ್ ವಿತ್ ರವಿಶ್’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀಶಾಂತ್, ಒಲಿಂಪಿಕ್ಸ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ವೈಭವ್ ಸೂರ್ಯವಂಶಿಯನ್ನು ಜೊತೆಯಾಗಿ ಕಣಕ್ಕಿಳಿಸಬೇಕು. ಇದರಿಂದ ಜಾಗತಿಕ ಕ್ರೀಡಾಕೂಟದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್ ಜಗತ್ತಿನ ‘ಡ್ರೀಮ್ ಜೋಡಿ’

128 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮರಳಿ ಸೇರ್ಪಡೆಯಾಗಲು ವಿರಾಟ್ ಕೊಹ್ಲಿ ಅವರ ಜಾಗತಿಕ ಜನಪ್ರಿಯತೆಯೇ ಮುಖ್ಯ ಕಾರಣ ಎಂದು ಶ್ರೀಶಾಂತ್ ಪ್ರತಿಪಾದಿಸಿದ್ದಾರೆ.

“ಒಲಿಂಪಿಕ್ಸ್‌ ವೇದಿಕೆಯಲ್ಲಿ ವಿರಾಟ್ ಕೊಹ್ಲಿ ಅವರ ರನ್ ಹಸಿವು ಮತ್ತು ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಧೂಳೆಬ್ಬಿಸಿದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಒಟ್ಟಿಗೆ ಸೇರಿದರೆ ಅದು ಜಗತ್ತಿಗೆ ಅಪ್ಪಟ ಮನರಂಜನೆ ನೀಡಲಿದೆ”.

“ಭಾರತ ಚಿನ್ನದ ಪದಕ ಗೆಲ್ಲಬೇಕಾದರೆ ಆಯ್ಕೆಗಾರರು ವಯಸ್ಸಿನ ಮಿತಿಯನ್ನು ಬದಿಗಿಟ್ಟು ವಿರಾಟ್ ಕೊಹ್ಲಿ ಹಾಗೂ ವೈಭವ್ ಸೂರ್ಯವಂಶಿ ಇಬ್ಬರನ್ನೂ ಆಯ್ಕೆ ಮಾಡಬೇಕು” ಎಂದು ಶ್ರೀಶಾಂತ್ ಆಗ್ರಹಿಸಿದ್ದಾರೆ.

ಶ್ರೀಶಾಂತ್ ಅವರ ಈ ಆಲೋಚನೆ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದರೂ, ಇದರ ಹಿಂದೆ ದೊಡ್ಡ ಪ್ರಾಯೋಗಿಕ ಸವಾಲುಗಳಿವೆ ಎಂಬುದೇ ಸತ್ಯ.

ಏಕೆಂದರೆ 2028ರ ಒಲಿಂಪಿಕ್ಸ್ ಕ್ರಿಕೆಟ್ ಪಂದ್ಯಗಳು ಟಿ20 ಮಾದರಿಯಲ್ಲಿ ನಡೆಯಲಿವೆ. ಆದರೆ ವಿರಾಟ್ ಕೊಹ್ಲಿ ಅವರು 2024ರ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ . ಅವರು ಒಲಿಂಪಿಕ್ಸ್‌ಗಾಗಿ ತಮ್ಮ ನಿರ್ಧಾರವನ್ನು ಬದಲಿಸುತ್ತಾರಾ ಎಂಬುದು ದೊಡ್ಡ ಪ್ರಶ್ನೆ.

ಅಂದರೆ ಒಲಿಂಪಿಕ್ಸ್​ ವೇಳೆಗೆ ವಿರಾಟ್ ಕೊಹ್ಲಿಯ ವಯಸ್ಸು 39 ಆಗಿರಲಿದೆ. ಈ ವೇಳೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉಳಿಯಲಿದ್ದಾರಾ? ಒಂದು ವೇಳೆ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಇದ್ದರೆ ಒಲಿಂಪಿಕ್ಸ್​ಗಾಗಿ ಅವರು ಟಿ20 ನಿವೃತ್ತಿಯನ್ನು ಹಿಂಪಡೆಯಲಿದ್ದಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದ್ದರೆ 2027ರ ಏಕದಿನ ವಿಶ್ವಕಪ್​ ಮುಗಿಯಬೇಕು. ಏಕೆಂದರೆ ಈಗಾಗಲೇ ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಕೊಹ್ಲಿ ಏಕದಿನ ವಿಶ್ವಕಪ್​ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದರೂ ಅಚ್ಚರಿಪಡಬೇಕಿಲ್ಲ.

Source link

ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್, 21 ಮಂದಿ ರಕ್ಷಣೆ, 3 ಭಾರತೀಯರು ಇನ್ನೂ ನಾಪತ್ತೆ – Kannada News

ಒಮಾನ್, ಜೂನ್ 11: ಒಮಾನ್​ನಲ್ಲಿ ಭಾರತದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ.  24 ಮಂದಿ ಭಾರತೀಯರ ಪೈಕಿ, 21 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಒಮಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಒಮಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ರಾಸಾಯನಿಕ ಮತ್ತು ತೈಲ ಉತ್ಪನ್ನಗಳ ಟ್ಯಾಂಕರ್ ಸೆಟ್ಟೆಬೆಲ್ಲೊ ಒಮಾನಿ ಕರಾವಳಿಯಲ್ಲಿ ಡಿಕ್ಕಿ ಹೊಡೆದಿದ್ದು, ಇದು ಅಮೆರಿಕದ ಕ್ಷಿಪಣಿ ದಾಳಿ ಎಂದು ಹೇಳಲಾಗುತ್ತಿದೆ. ಪ್ರದೇಶದಾದ್ಯಂತ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ವ್ಯಾಪಾರಿ ಹಡಗುಗಳ ಮೇಲಿನ ದಾಳಿಗಳು ಹೆಚ್ಚು ಅಪಾಯಕಾರಿಯಾಗುತ್ತಿವೆ ಎಂದು ಭಾರತ ಎಚ್ಚರಿಸಿದೆ. ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ತುರ್ತು ರಾಜತಾಂತ್ರಿಕ ಪ್ರಯತ್ನಗಳಿಗೆ ಕರೆ ನೀಡಿದೆ. ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್ ಜಾರಿ ಮಾಡಿದೆ.

Video Source: Forward Seamen’s Union of India

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:06 am, Thu, 11 June 26

Source link

ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮ: ಬಯೋಮೆಟ್ರಿಕ್ ದೃಢೀಕರಣದ ಜೊತೆ ಈ ಎಲ್ಲ ದಾಖಲೆ ಕಡ್ಡಾಯ

ಬೆಂಗಳೂರು, ಜೂನ್​​ 11: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ಹೊಸ ನಿಯಮಾವಳಿಗಳು ಜಾರಿಯಾಗುತ್ತಿವೆ. ಯೋಜನೆಯ ಫಲಾನುಭವಿಗಳ ಪರಿಷ್ಕರಣೆಗೆ ಸರ್ಕಾರ ಮುಂದಾಗಿದ್ದು, ಒಂದು ತಿಂಗಳೊಳಗೆ ಬಯೋಮೆಟ್ರಿಕ್ ದೃಢೀಕರಣ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ. ಈ ನಿಯಮ ಪಾಲಿಸದಿದ್ದರೆ ಫಲಾನುಭವಿಗಳ ಖಾತೆಗೆ 2,000 ರೂಪಾಯಿ ಹಣ ಜಮಾವಣೆ ನಿಲ್ಲಲಿದೆ. ಬಯೋಮೆಟ್ರಿಕ್ ದೃಢೀಕರಣವನ್ನು ಬೆಂಗಳೂರು ಒನ್, ಗ್ರಾಮ ಒನ್, ಸೇವಾ ಕೇಂದ್ರ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾಡಿಸಬಹುದು. ಇದಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಮತ್ತು ಯೋಜನೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ – Kannada News

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-27ರ ಫೈನಲ್ ರೇಸ್ ಅತ್ಯಂತ ರೋಚಕ ಘಟ್ಟಕ್ಕೆ ತಲುಪಿದೆ. ಸತತ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಟೀಮ್ ಇಂಡಿಯಾ, ಈ ಬಾರಿ ಲಾರ್ಡ್ಸ್ ಮೈದಾನಕ್ಕೆ ಲಗ್ಗೆ ಇಡಬೇಕಾದರೆ ಅಸಾಧ್ಯವೆನಿಸುವ ಹಾದಿಯನ್ನು ಕ್ರಮಿಸಬೇಕಿದೆ. ಸದ್ಯದ ಅಂಕಪಟ್ಟಿಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಶುಭ್​ಮನ್ ಗಿಲ್​ ಪಡೆಗೆ ಮುಂದಿನ ಪ್ರತಿಯೊಂದು ಪಂದ್ಯವೂ ‘ಮಾಡೋ ಇಲ್ಲವೇ ಮಡಿ’ ಎಂಬಂತಾಗಿದೆ. ಹಾಗಾದರೆ ಭಾರತ ತಂಡ ಫೈನಲ್ ತಲುಪಲು ಇರುವ ಲೆಕ್ಕಾಚಾರಗಳೇನು? ಮುಂದಿರುವ ಕಠಿಣ ಸವಾಲುಗಳೇನು? ಎಂಬುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ಪ್ರಸ್ತುತ ಸ್ಥಿತಿ ಮತ್ತು ಮುಂದಿನ ಸವಾಲುಗಳು:

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಸರಣಿಯಲ್ಲಿ ಒಟ್ಟು 18 ಪಂದ್ಯಗಳನ್ನು ಆಡಬೇಕಾಗಿದ್ದು, ಅದರಲ್ಲಿ ಈಗಾಗಲೇ 9 ಪಂದ್ಯಗಳನ್ನು ಮುಗಿಸಿದೆ. ಉಳಿದಿರುವ 9 ಪಂದ್ಯಗಳು ಭಾರತದ ಭವಿಷ್ಯವನ್ನು ನಿರ್ಧರಿಸಲಿವೆ.

  • ಶ್ರೀಲಂಕಾ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
  • ನ್ಯೂಝಿಲೆಂಡ್ ಪ್ರವಾಸ (ವಿದೇಶಿ ಸರಣಿ): 2 ಟೆಸ್ಟ್ ಪಂದ್ಯಗಳು.
  • ಆಸ್ಟ್ರೇಲಿಯಾ ವಿರುದ್ಧ (ತವರಿನ ಸರಣಿ): 5 ಟೆಸ್ಟ್ ಪಂದ್ಯಗಳು.

ಟೀಮ್ ಇಂಡಿಯಾ ಲೆಕ್ಕಾಚಾರ:

WTC ನಿಯಮಾವಳಿಗಳ ಪ್ರಕಾರ ಫೈನಲ್ ತಲುಪಲು ತಂಡಗಳು ಕನಿಷ್ಠ ಶೇಕಡಾ 60 ರಿಂದ 65 ರಷ್ಟು ಶೇಕಡಾವಾರು ಅಂಕಗಳನ್ನು (PCT) ಹೊಂದಿರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಮುಖ್ಯವಾಗಿ ಎರಡು ಆಯ್ಕೆಗಳಿವೆ:

  • ಆಯ್ಕೆ 1: ಉಳಿದಿರುವ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ 68.52 ಶೇಕಡಾವಾರು ಅಂಕಗಳನ್ನು ಪಡೆಯುವುದು.
  • ಆಯ್ಕೆ 2: 6 ಗೆಲುವು ಮತ್ತು 2 ಡ್ರಾ  ಸಾಧಿಸಿ 62.96 ಶೇಕಡಾವಾರು ಅಂಕಗಳನ್ನು ಪಡೆಯುವುದು.

ಟೀಮ್ ಇಂಡಿಯಾ ಮುಮದಿನ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದರೆ ಫೈನಲ್​ಗೇರುವುದು ಖಚಿತ. ಒಂದು ವೇಳೆ 7 ಅಥವಾ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ. ಇದಕ್ಕಾಗಿ ಟೀಮ್ ಇಂಡಿಯಾ ಏನು ಮಾಡಬೇಕೆಂಬುದರ ವಿಶ್ಲೇಷಣೆ ಈ ಕೆಳಗಿನಂತಿದೆ..

 ಕ್ಲೀನ್ ಸ್ವೀಪ್ ಪ್ಲ್ಯಾನ್:

ಆಗಸ್ಟ್ 2026 ರಲ್ಲಿ ನಡೆಯಲಿರುವ ಶ್ರೀಲಂಕಾ ಪ್ರವಾಸ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ಪ್ರವಾಸದಲ್ಲಿ ಭಾರತ ಎಲ್ಲಾ 4 ಪಂದ್ಯಗಳನ್ನು ಗೆಲ್ಲಲೇಬೇಕು. ನ್ಯೂಝಿಲೆಂಡ್ ಮಣ್ಣಿನಲ್ಲಿ ಭಾರತದ ಹಿಂದಿನ ದಾಖಲೆ ಕಳಪೆಯಾಗಿದ್ದರೂ, ಈ ಬಾರಿ ಅಲ್ಲಿ ಗೆಲುವು ಅನಿವಾರ್ಯವಾಗಿದೆ. ಇಲ್ಲಿ ಶ್ರೀಲಂಕಾ ಹಾಗೂ ನ್ಯೂಝಿಲೆಂಡ್ ವಿರುದ್ಧ ತಲಾ 2 ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರಬಹುದು.

ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ:

ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡರೆ, ಭಾರತದ ಪಾಲಿಗೆ ಆಸ್ಟ್ರೇಲಿಯಾ ಸರಣಿ ನಿರ್ಣಾಯಕವಾಗಲಿದೆ. ಆದರೆ ಈ ಸರಣಿಯು ಭಾರತದಲ್ಲಿ ನಡೆಯಲಿರುವುದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್.

ಈ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 4 ಮ್ಯಾಚ್ ಗೆದ್ದರೆ ಫೈನಲ್​ ಆಡುವುದು ಖಚಿತವಾಗಲಿದೆ. ಒಂದು ವೇಳೆ 3 ಪಂದ್ಯಗಳಲ್ಲಿ ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದರೂ ಫೈನಲ್​ಗೇರಲು ಅವಕಾಶ ಸೃಷ್ಟಿಯಾಗಲಿದೆ.

 ಟೀಮ್ ಇಂಡಿಯಾ ಸೋತರೆ?

ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಬೇಕಿದ್ದರೆ ಸೋಲಿನಿಂದ ದೂರವೇ ಉಳಿಯಬೇಕು. ಒಂದು ವೇಳೆ ಮುಂದಿನ ಸರಣಿಗಳಲ್ಲಿ ಭಾರತ ತಂಡವು ಒಂದೆರಡು ಪಂದ್ಯಗಳಲ್ಲಿ ಸೋತರೆ WTC ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ತಮ್ಮ ಮುಂದಿನ ಪಂದ್ಯಗಳಲ್ಲಿ ಸೋಲುವುದನ್ನು ಎದುರು ನೋಡಬೇಕು. ಆಗ ಮಾತ್ರ ಭಾರತಕ್ಕೆ ಫೈನಲ್​ ರೇಸ್‌ನಲ್ಲಿ ಮುಂದುವರಿಯಲು ಅವಕಾಶ ಸಿಗಲಿದೆ.

ಇದನ್ನೂ ಓದಿ: IPL ‘ತಿಂಗಳ’ ಬದಲಾವಣೆಗೆ ಭರ್ಜರಿ ಪ್ಲ್ಯಾನ್

ಹೀಗಾಗಿಯೇ ಟೀಮ್ ಇಂಡಿಯಾ ಪಾಲಿಗೆ ಮುಂಬರುವ 9 ಟೆಸ್ಟ್ ಪಂದ್ಯಗಳು ನಿರ್ಣಾಯಕ. ಈ ನಿರ್ಣಾಯಕ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೇರಲಿದೆಯಾ ಕಾದು ನೋಡಬೇಕಿದೆ.

Published On – 9:53 am, Thu, 11 June 26

Source link

ಚಡಚಣ ಬ್ಯಾಂಕ್ ದರೋಡೆಯಾಗಿ 9 ತಿಂಗಳಾದರೂ ಸಿಗದ ಚಿನ್ನ: ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ – Kannada News

ವಿಜಯಪುರ, ಜೂನ್ 11: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಶಾಖೆಯಲ್ಲಿ 2025 ರ ಸೆಪ್ಟೆಂಬರ್ 16 ರಂದು ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದುವರೆಗೆ ತಮಗೆ ಸೇರಿದ ಚಿನ್ನಾಭರಣಗಳು ವಾಪಸ್ ಸಿಗದೆ ಆಕ್ರೋಶಗೊಂಡಿರುವ ಗ್ರಾಹಕರು ಬುಧವಾರ ರಾತ್ರಿಯಿಡೀ ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕಂಟ್ರಿ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ, ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರ ಕೈಕಾಲು ಕಟ್ಟಿ ಅಂದು ಬರೋಬ್ಬರಿ 1.50 ಕೋಟಿ ರೂಪಾಯಿ ನಗದು ಮತ್ತು 20 ಕೆಜಿ ಚಿನ್ನವನ್ನು ದರೋಡೆ ಮಾಡಲಾಗಿತ್ತು. ಈ ಘಟನೆ ನಡೆದು 9 ತಿಂಗಳು ಕಳೆದರೂ ಲಾಕರ್‌ನಲ್ಲಿಟ್ಟಿದ್ದ ಹಾಗೂ ಸಾಲಕ್ಕಾಗಿ ಅಡವಿಟ್ಟಿದ್ದ ತಮ್ಮ ಚಿನ್ನದ ಒಡವೆಗಳು ವಾಪಸ್ ಸಿಗದ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್‌ಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳು ಈ ಹಿಂದೆ ಗ್ರಾಹಕರೊಂದಿಗೆ ಸಭೆ ನಡೆಸಿ, ಜೂನ್ 6 ರೊಳಗೆ ಚಿನ್ನ ಅಥವಾ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಗ್ರಾಹಕರು ಅಡವಿಟ್ಟಿದ್ದ ಚಿನ್ನದ ನಿವ್ವಳ ತೂಕಕ್ಕೆ ಇಂದಿನ ಮಾರುಕಟ್ಟೆ ದರದೊಂದಿಗೆ ಶೇಕಡಾ 20 ರಷ್ಟು ಹೆಚ್ಚುವರಿ ಹಣ ನೀಡುವುದಾಗಿ ಬ್ಯಾಂಕ್ ಹೇಳಿತ್ತು. ಆದರೆ ಗ್ರಾಹಕರು ಇಂದಿನ ಮಾರುಕಟ್ಟೆ ದರದಲ್ಲಿ ಅಸಲು ತೂಕದ ಚಿನ್ನವನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇಷ್ಟಾದರೂ ಜೂನ್ 10 ಕಳೆದರೂ ಬ್ಯಾಂಕ್‌ನಿಂದ ಯಾವುದೇ ಪರಿಹಾರ ಸಿಗದ ಕಾರಣ ಆಕ್ರೋಶ ಭುಗಿಲೆದ್ದಿದೆ. ತಡರಾತ್ರಿಯವರೆಗೂ ನಡೆದ ಈ ಹೈಡ್ರಾಮಾ ಸ್ಥಳಕ್ಕೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕವಷ್ಟೇ ಪ್ರತಿಭಟನಾಕಾರರು ತಡರಾತ್ರಿ ಮನೆಗೆ ತೆರಳಿದ್ದಾರೆ.

ಪ್ರಸ್ತುತ ಈ ಪ್ರಕರಣದ ತನಿಖೆ ಮುಂದುವರಿದಿದ್ದು, ದರೋಡೆಕೋರರಿಗೆ ಕಂಟ್ರಿ ಪಿಸ್ತೂಲ್ ಪೂರೈಕೆ ಮಾಡಿದ್ದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅವರಿಂದ 6.5 ಕೆಜಿ ಚಿನ್ನ ಹಾಗೂ 41 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನು ತಲೆಮರೆಸಿಕೊಂಡಿರುವ ಪ್ರಮುಖ ದರೋಡೆಕೋರರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version