ಸಚಿನ್, ಧೋನಿ, ಕೊಹ್ಲಿಗೂ ಸಾಧ್ಯವಾಗಿಲ್ಲ; ಐತಿಹಾಸಿಕ ಸಾಧನೆಯತ್ತ ರಾಹುಲ್ ಚಿತ್ತ

Source link

ನಾಳೆ ಮೈಸೂರಿಗೆ ಪ್ರಧಾನಿ ಮೋದಿ: ಬಿಗಿ ಪೊಲೀಸ್ ಬಂದೋಬಸ್ತ್; 12 ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ – Kannada News | PM Modi to Visit Mysuru Tomorrow: Tight Security, Traffic Curbs on 12 Roads

ಮೈಸೂರು, ಜುಲೈ 31: ಸಾಂಸ್ಕೃತಿಕ ನಗರಿ ಮೈಸೂರಿಗೆ (Mysuru) ನಾಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಮಿಸಲಿದ್ದಾರೆ. ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಆಯೋಜಿಸಲಾಗಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರದ ‘ವಿವೇಕ ಸ್ಮಾರಕ’ವನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರಧಾನಿ ಮೋದಿ ಸಂಚರಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಕೂಡ ಅಳವಡಿಸಲಾಗಿದೆ.

ಪ್ರಧಾನಿ ಮೋದಿ ಮೈಸೂರು ಪ್ರವಾಸದ ವೇಳಾಪಟ್ಟಿ ಹೀಗಿದೆ

  • ಆಗಸ್ಟ್ 1 ರಂದು ಮಧ್ಯಾಹ್ನ 2:55ಕ್ಕೆ ಪ್ರಧಾನಿ ಮೋದಿ ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
  • ನಂತರ ಅಲ್ಲಿಂದ ಮಧ್ಯಾಹ್ನ 3:15ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ನಗರದ ಓವಲ್ ಮೈದಾನಕ್ಕೆ ತಲುಪಲಿದ್ದಾರೆ.
  • ಮಧ್ಯಾಹ್ನ 3:25ಕ್ಕೆ ಓವಲ್ ಮೈದಾನದಿಂದ ರಸ್ತೆ ಮಾರ್ಗವಾಗಿ ವಿವೇಕ ಸ್ಮಾರಕಕ್ಕೆ ತೆರಳಲಿರುವ ಅವರು, ಮಧ್ಯಾಹ್ನ 3:30 ರಿಂದ ಸಂಜೆ 5:15 ರವರೆಗೆ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಪ್ರಮುಖ ವೇದಿಕೆ ಕಾರ್ಯಕ್ರಮ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
  • ಬಳಿಕ ಸಂಜೆ 5:20ಕ್ಕೆ ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ ನೀಡಲಿದ್ದು, ಸಂಜೆ 5:30ಕ್ಕೆ ಓವಲ್ ಮೈದಾನದಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಿ, ಸಂಜೆ 5:55ಕ್ಕೆ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ.

ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ

ಇನ್ನು ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆ ಮೈಸೂರು ನಗರದಾದ್ಯಂತ ಹಾಗೂ ಅವರು ಸಂಚರಿಸುವ ಮಾರ್ಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಸ್ತೆ ಬದಿಗಳಲ್ಲಿ ಶ್ವಾನ ದಳದ ಸಿಬ್ಬಂದಿಯಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಸುಣ್ಣ-ಬಣ್ಣ ಬಳಿಯಲಾಗಿದೆ.

​12 ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ

ಇನ್ನು ನಗರದ 12 ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೆ.ಆರ್.ಬಿ ರಸ್ತೆಯ ಡಿಸಿ ಆಫೀಸ್‌ನಿಂದ ಏಕಲವ್ಯ ಸರ್ಕಲ್‌ವರೆಗೆ, ಬೋಗಾದಿ ರಸ್ತೆ, ಮುಡಾ ಜಂಕ್ಷನ್‌ನಿಂದ ಡಾ. ಪದ್ಮ ವೃತ್ತ, ಪಡುವಾರಹಳ್ಳಿ ಜಂಕ್ಷನ್‌ನಿಂದ ಮೆಟ್ರೋಪೋಲ್ ಸರ್ಕಲ್ ಹಾಗೂ ಜೆ.ಎಲ್‌.ಬಿ ರಸ್ತೆ, ರಮಾವಿಲಾಸ ರಸ್ತೆ, ಕೃಷ್ಣವಿಲಾಸ ರಸ್ತೆ ಮತ್ತು ದಿವಾನ್ಸ್ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಪರ್ಯಾಯ ಮಾರ್ಗಗಳು ಯಾವವು?

ಸಾರ್ವಜನಿಕರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದ್ದು, ಹುಣಸೂರು ರಸ್ತೆ ಹಾಗೂ ವಿಜಯನಗರ ಕಡೆಯಿಂದ ಬರುವ ವಾಹನ ಸವಾರರು ಗೋಕುಲಂ ರಸ್ತೆ, ಪಂಚವಟಿ, ಜಾವಾ ರಸ್ತೆ ಮತ್ತು ಆಯುರ್ವೇದಿಕ್ ವೃತ್ತದ ಮೂಲಕ ನಗರ ಪ್ರವೇಶಿಸಬೇಕಿದೆ. ಅದೇ ರೀತಿ ಅಗ್ರಹಾರ ಹಾಗೂ ಜೆ.ಪಿ. ನಗರ ಭಾಗದಿಂದ ಬಸ್ ನಿಲ್ದಾಣದತ್ತ ತೆರಳುವವರು ಸಿದ್ಧಪ್ಪ ಸ್ಕ್ವೇರ್, ಎಂ.ಜಿ. ರಸ್ತೆ ಅಂಡರ್ ಬ್ರಿಡ್ಜ್ ಹಾಗೂ ಜಿ.ಎನ್. ರಸ್ತೆ ಮಾರ್ಗವಾಗಿ ಪ್ರಯಾಣಿಸುವಂತೆ ಸೂಚಿಸಲಾಗಿದೆ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆ ಉತ್ತರಗಳು

ಪ್ರಶ್ನೆ: ಪ್ರಧಾನಿ ಮೋದಿ ಯಾವಾಗ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ?
ಉತ್ತರ; ಪ್ರಧಾನಿ ಮೋದಿ ಆಗಸ್ಟ್​ 1 ಶನಿವಾರದಂದು ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ.

ಪ್ರಶ್ನೆ: ಪ್ರಧಾನಿ ಮೋದಿ ಈಗ ಏಕೆ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ?
ಉತ್ತರ: ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ನಿರ್ಮಿಸಲಾಗಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ (ವಿವೇಕ ಸ್ಮಾರಕ) ಲೋಕಾರ್ಪಣೆ ಮಾಡಲು ಭೇಟಿ ಕೊಡುತ್ತಿದ್ದಾರೆ.

ಇದನ್ನೂ ಓದಿ: ಆಗಸ್ಟ್‌ 1ರಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ: 45 ಕೋಟಿ ರೂ ವೆಚ್ಚದ ವಿವೇಕಾನಂದ ಸ್ಮಾರಕ ಲೋಕಾರ್ಪಣೆ

ಪ್ರಶ್ನೆ: ಪ್ರಧಾನಿ ಮೋದಿ ಯಾವ ಸಮಯಕ್ಕೆ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ?
ಉತ್ತರ: ಪ್ರಧಾನಿ ಮೋದಿ ಮಧ್ಯಾಹ್ನ 2:55ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ.

ಪ್ರಶ್ನೆ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಎಲ್ಲಿದೆ?
ಉತ್ತರ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಮೈಸೂರಿನಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಿರಿಯಡ್ಸ್ ವೇಳೆ ಸ್ಯಾನಿಟರಿ ಪ್ಯಾಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; ಗೈನಕಾಲಜಿಸ್ಟ್ ಸಲಹೆ – Kannada News | Choosing the Right Sanitary Pad: Essential Women’s Health Tips

ಮಾಸಿಕ ಋತುಚಕ್ರ (Periods) ಮಹಿಳೆಯರ ಜೀವನದ ಸಹಜ ಜೈವಿಕ ಪ್ರಕ್ರಿಯೆಯಾಗಿದ್ದು, ಈ ಸಮಯದಲ್ಲಿ ಸರಿಯಾದ ಮೆನ್ಸ್ಟ್ರುವಲ್ ಹೈಜೀನ್ (Menstrual Hygiene) ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸ್ಯಾನಿಟರಿ ಪ್ಯಾಡ್, ಟ್ಯಾಂಪಾನ್ ಅಥವಾ ಮೆನ್ಸ್ಟ್ರುವಲ್ ಕಪ್ ಬಳಸುವುದು ಅಗತ್ಯವಾದರೂ, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದು ಮತ್ತು ಸಮಯಕ್ಕೆ ಬದಲಾಯಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಸ್ತ್ರೀರೋಗ ತಜ್ಞರ ಪ್ರಕಾರ, ಇಂದು ಮಹಿಳೆಯರು ಪ್ಯಾಡ್ ಖರೀದಿಸುವಾಗ ಅದರ ಲೀಕೆಜ್ ಪ್ರೊಟೆಕ್ಷನ್ ಅಥವಾ ಹೆಚ್ಚು ಹೀರಿಕೊಳ್ಳುವ ಸಾಮರ್ಥ್ಯ (Absorbency) ಮಾತ್ರವಲ್ಲದೆ, ಅದರ ತಯಾರಿಕೆಯಲ್ಲಿ ಬಳಸಿರುವ ವಸ್ತುಗಳ ಗುಣಮಟ್ಟಕ್ಕೂ ಗಮನ ನೀಡಬೇಕು. ಇಲ್ಲದಿದ್ದರೆ ಚರ್ಮದ ಅಲರ್ಜಿ, ಸೋಂಕು ಹಾಗೂ ಇತರ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು.

ಪ್ಯಾಡ್ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು

ಹೆಚ್ಚು ಹೀರಿಕೊಳ್ಳುವ ಸಾಮರ್ಥ್ಯ ಮಾತ್ರವಲ್ಲ, ಚರ್ಮದ ಸುರಕ್ಷತೆಯೂ ಮುಖ್ಯ

ಭಾರತೀಯ ವೈದ್ಯಕೀಯ ಸಂಘ (IMA) ಗಾಜಿಯಾಬಾದ್ ಅಧ್ಯಕ್ಷೆ ಹಾಗೂ ಹಿರಿಯ ಸ್ತ್ರೀರೋಗ ತಜ್ಞೆ ಡಾ. ಅಲ್ಪನಾ ಕಂಸಲ್ ಅವರ ಪ್ರಕಾರ, ಮಹಿಳೆಯರು ತಮ್ಮ ಜೀವನದ ಸುಮಾರು ನಾಲ್ಕನೇ ಭಾಗವನ್ನು ಮುಟ್ಟಿನಲ್ಲಿಯೇ ಕಳೆಯುತ್ತಾರೆ. ಆದ್ದರಿಂದ ಚರ್ಮಕ್ಕೆ ಸುರಕ್ಷಿತವಾಗಿರುವ, ಉಸಿರಾಡುವ (Breathable) ಹಾಗೂ ಡರ್ಮಟಾಲಜಿಕಲ್ ಪರೀಕ್ಷೆಗೊಳಗಾದ ಪ್ಯಾಡ್‌ಗಳನ್ನು ಬಳಸುವುದು ಉತ್ತಮ. ಇವು ಚರ್ಮದಲ್ಲಿ ತೇವಾಂಶ ಮತ್ತು ಬಿಸಿಯನ್ನು ಕಡಿಮೆ ಮಾಡುತ್ತವೆ. ಪರಿಣಾಮವಾಗಿ ರ್ಯಾಶ್, ಉರಿ ಮತ್ತು ಅಸೌಕರ್ಯದ ಸಾಧ್ಯತೆ ಕಡಿಮೆಯಾಗುತ್ತದೆ.

ಸುಗಂಧ (Fragrance) ಇರುವ ಪ್ಯಾಡ್‌ಗಳು ಎಲ್ಲರಿಗೂ ಸೂಕ್ತವಲ್ಲ

ಮಾರುಕಟ್ಟೆಯಲ್ಲಿ ಸಿಗುವ ಕೆಲವು ಪ್ಯಾಡ್‌ಗಳಲ್ಲಿ ಕೃತಕ ಸುಗಂಧವನ್ನು ಬಳಸಲಾಗುತ್ತದೆ. ಆದರೆ ಸಂವೇದನಾಶೀಲ ಚರ್ಮ ಹೊಂದಿರುವ ಮಹಿಳೆಯರಲ್ಲಿ ಇದು ತುರಿಕೆ, ಅಲರ್ಜಿ, ಉರಿ ಹಾಗೂ ಕೆಂಪಾಗುವಿಕೆ ಉಂಟುಮಾಡಬಹುದು. ಆದ್ದರಿಂದ ಸಾಧ್ಯವಾದಷ್ಟು Fragrance-Free ಪ್ಯಾಡ್‌ಗಳನ್ನು ಆಯ್ಕೆ ಮಾಡುವುದು ಉತ್ತಮ.

ಮೋರಿಂಗಾ (ನುಗ್ಗೆ) ಅಂಶವಿರುವ ಪ್ಯಾಡ್‌ಗಳ ಬಗ್ಗೆ ವೈದ್ಯರ ಅಭಿಪ್ರಾಯ?

ಇತ್ತೀಚಿನ ವರ್ಷಗಳಲ್ಲಿ ಕೆಲವು ಕಂಪನಿಗಳು ನುಗ್ಗೆ (Moringa) ಸಾರ ಇರುವ ಸ್ಯಾನಿಟರಿ ಪ್ಯಾಡ್‌ಗಳನ್ನು ಪರಿಚಯಿಸಿವೆ. ಮೋರಿಂಗಾದಲ್ಲಿ ಆಂಟಿಆಕ್ಸಿಡೆಂಟ್, ಆಂಟಿಮೈಕ್ರೋಬಿಯಲ್ ಮತ್ತು ಉರಿಯೂತ ನಿವಾರಕ ಗುಣಗಳಿವೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಆದರೆ, ಮೋರಿಂಗಾ ಅಂಶವಿರುವ ಪ್ಯಾಡ್‌ಗಳು ಸಾಮಾನ್ಯ ಪ್ಯಾಡ್‌ಗಳಿಗಿಂತ ಹೆಚ್ಚು ಆರೋಗ್ಯ ಲಾಭ ನೀಡುತ್ತವೆ ಎಂಬುದಕ್ಕೆ ಇನ್ನೂ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯ ಲಭ್ಯವಿಲ್ಲ. ಆದ್ದರಿಂದ ಗುಣಮಟ್ಟದ ಮತ್ತು ಸುರಕ್ಷಿತ ಉತ್ಪನ್ನವನ್ನು ಆಯ್ಕೆ ಮಾಡುವುದು ಮುಖ್ಯ.

ಸಮಯಕ್ಕೆ ಪ್ಯಾಡ್ ಬದಲಾಯಿಸುವುದು ಅತ್ಯಗತ್ಯ

ಯಾವುದೇ ಬ್ರ್ಯಾಂಡ್‌ನ ಪ್ಯಾಡ್ ಬಳಸಿದರೂ, ಅದನ್ನು ಪ್ರತಿ 4 ರಿಂದ 6 ಗಂಟೆಗಳಿಗೊಮ್ಮೆ ಅಥವಾ ರಕ್ತಸ್ರಾವದ ಪ್ರಮಾಣಕ್ಕೆ ಅನುಗುಣವಾಗಿ ಬದಲಾಯಿಸಬೇಕು. ಒಂದೇ ಪ್ಯಾಡ್ ಅನ್ನು ಹೆಚ್ಚು ಸಮಯ ಬಳಸಿದರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚಾಗಿ, ದುರ್ವಾಸನೆ ಹಾಗೂ ಸೋಂಕಿನ ಅಪಾಯ ಉಂಟಾಗಬಹುದು.

ಇದನ್ನೂ ಓದಿ: ಧೂಮಪಾನ ಮಾತ್ರವಲ್ಲ! ಈ ದಿನನಿತ್ಯದ ಅಭ್ಯಾಸಗಳೂ ಶ್ವಾಸಕೋಶದ ಆರೋಗ್ಯ ಹಾಳು ಮಾಡಬಹುದು

ಇಂಟಿಮೇಟ್ ಭಾಗವನ್ನು ಹೇಗೆ ಸ್ವಚ್ಛವಾಗಿಡಬೇಕು?

ಹಿರಿಯ ಸ್ತ್ರೀ ಹಾಗೂ ಪ್ರಸೂತಿ ತಜ್ಞೆ ಡಾ. ರಿಚಾ ಸಿಂಘಲ್ ಅವರ ಪ್ರಕಾರ:

  • ತೀವ್ರ ರಾಸಾಯನಿಕಗಳಿರುವ ಅಥವಾ ಸುಗಂಧಯುಕ್ತ ಸಾಬೂನುಗಳನ್ನು ಬಳಸಬಾರದು.
  • ಹೊರಭಾಗವನ್ನು ಒಳ್ಳೆಯ ನೀರಿನಿಂದ ತೊಳೆಯಬೇಕು.
  • ಅಗತ್ಯವಿದ್ದರೆ pH ಸಮತೋಲನ ಕಾಪಾಡುವ ಉತ್ಪನ್ನಗಳನ್ನು ಮಾತ್ರ ಬಳಸಬೇಕು.
  • ಸ್ವಚ್ಛವಾದ ಒಳಉಡುಪು ಧರಿಸಬೇಕು ಮತ್ತು ಪ್ರತಿದಿನ ಬದಲಾಯಿಸಬೇಕು.
  • ಪಿರಿಯಡ್ಸ್ ಸಮಯದಲ್ಲಿ ಪಾಲಿಸಬೇಕಾದ ಪ್ರಮುಖ ಆರೋಗ್ಯ ಸಲಹೆಗಳು
  • ಪ್ಯಾಡ್ ಬದಲಾಯಿಸುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ.
  • ಬಳಸಿದ ಪ್ಯಾಡ್ ಅನ್ನು ಕಾಗದದಲ್ಲಿ ಸುತ್ತಿ ಮುಚ್ಚಿದ ಕಸದ ಬುಟ್ಟಿಗೆ ಹಾಕಿ.
  • ಬಳಸಿದ ಪ್ಯಾಡ್ ಅನ್ನು ಶೌಚಾಲಯದಲ್ಲಿ ಫ್ಲಷ್ ಮಾಡಬೇಡಿ.
  • ಹೆಚ್ಚು ರಕ್ತಸ್ರಾವ, ತೀವ್ರ ನೋವು ಅಥವಾ ದುರ್ವಾಸನೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.
  • ಸಾಕಷ್ಟು ನೀರು ಕುಡಿಯಿರಿ ಮತ್ತು ಕಬ್ಬಿಣಾಂಶ (Iron) ಇರುವ ಆಹಾರ ಸೇವಿಸಿ.

ಉತ್ತಮ ಮೆನ್ಸ್ಟ್ರುವಲ್ ಹೈಜೀನ್‌ಗಾಗಿ ಸಲಹೆಗಳು

  • ಹತ್ತಿಯ (Cotton) ಒಳಉಡುಪು ಧರಿಸುವುದು ಉತ್ತಮ.
  • ಒದ್ದೆಯಾದ ಅಥವಾ ಬೆವರು ತುಂಬಿದ ಒಳಉಡುಪುಗಳನ್ನು ಹೆಚ್ಚು ಸಮಯ ಧರಿಸಬೇಡಿ.
  • ಪಿರಿಯಡ್ಸ್ ಸಮಯದಲ್ಲಿ ಸಮತೋಲನ ಆಹಾರ, ಹಣ್ಣು, ತರಕಾರಿ ಹಾಗೂ ಐರನ್‌ಯುಕ್ತ ಆಹಾರ ಸೇವಿಸಿ.
  • ತೀವ್ರ ದೌರ್ಬಲ್ಯ, ಅತಿಯಾದ ನೋವು ಅಥವಾ ಅನಿಯಮಿತ ರಕ್ತಸ್ರಾವ ಕಂಡುಬಂದರೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ.
  • ಸ್ವಚ್ಛತೆ ಮತ್ತು ಸಮಯಕ್ಕೆ ಪ್ಯಾಡ್ ಬದಲಾಯಿಸುವ ಅಭ್ಯಾಸವು ಮೂತ್ರನಾಳದ ಸೋಂಕು (UTI) ಮತ್ತು ಚರ್ಮದ
  • ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ, ತೀವ್ರ ನೋವು ಅಥವಾ ಅಸಾಮಾನ್ಯ ರಕ್ತಸ್ರಾವ ಕಂಡುಬಂದರೆ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ – Kannada News | Vijayalakshmi Holds Discussions with Darshan Thoogudeepa in Parappana Agrahara Jail for More Than 1 Hour

ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಅವರಿಗೆ ಜಾಮೀನು ಸಿಗದ ಕಾರಣ ಹಲವು ತಿಂಗಳಿಂದ ಜೈಲುವಾಸ ಅನುಭವಿಸುತ್ತಿದ್​ದಾರೆ. ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ ಅವರು ಆಗಾಗ ಜೈಲಿಗೆ ಬರುತ್ತಿದ್ದಾರೆ. ಇಂದು (ಜುಲೈ 31) ಕೂಡ ಅವರು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ಈ ಬಾರಿ ಅವರು ಒಂದು ಗಂಟೆಗೂ ಹೆಚ್ಚು ಕಾಲ ದರ್ಶನ್ (Darshan) ಜೊತೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಸಂಜೆ 4 ಗಂಟೆಗೆ ಜೈಲಿನ ಒಳಗೆ ಹೋಗಿದ್ದ ವಿಜಯಲಕ್ಷ್ಮಿ ಅವರು 5.30ಕ್ಕೆ ವಾಪಸ್ ಬಂದರು. ಇತ್ತೀಚೆಗಷ್ಟೇ ನಟ ಧನ್ವೀರ್ ಅವರು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದಿದ್ದರು. ದರ್ಶನ್ ಕುಟುಂಬ ಮತ್ತು ಧನ್ವೀರ್ ನಡುವೆ ವೈಮನಸ್ಸು ಮೂಡಿತ್ತು ಎಂಬ ಸುದ್ದಿ ಕೂಡ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಧನ್ವೀರ್ ಅವರು ಜೈಲಿಗೆ ಬಂದಿದ್ದು ಎಲ್ಲರ ಅಚ್ಚರಿಗೆ ಕಾರಣ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

70 ಸಾವಿರಕ ಹುದ್ದೆಗಳ ನೇಮಕಾತಿ: ಸ್ಪರ್ಧಾತ್ಮಕ ಪರೀಕ್ಷೆ- ನೇಮಕಾತಿ ವ್ಯವಸ್ಥೆಯ ಸುಧಾರಣೆಗೆ ಸಮಿತಿ ರಚನೆ – Kannada News | DK Shivakumar instructions to Officer for preparations for the recruitment of over 70,000 government posts across Karnataka

ಬೆಂಗಳೂರು, (ಜುಲೈ 31): ಕರ್ನಾಟಕದಲ್ಲಿ (Karnataka) ಇದೇ ಮೊದಲ ಬಾರಿಗೆ 70 ಸಾವಿರಕ್ಕೂ ಅಧಿಕ ಹುದ್ದೆಗಳ (Job recruitment)  ನೇಮಕಾತಿಗೆ ಸಿದ್ಧತೆಗಳು ನಡೆದಿವೆ. ಈ ಸಂಬಂಧ ಡಿಕೆ ಶಿವಕುಮಾರ್ (DK SHivakumar) ಅವರು ರಾಜ್ಯದಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿಗಾಗಿ ಕೈಗೊಳ್ಳಲಾಗುವ ಪರೀಕ್ಷೆಗಳ ಸನ್ನದ್ಧತೆಯ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ, ಕಟ್ಟುನಿಟ್ಟಿನಿಂದ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.  ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ನೇಮಕಾತಿ ವ್ಯವಸ್ಥೆಯ ಸುಧಾರಣೆಗೆ ಸಮಿತಿ ರಚನೆ ಮಾಡಲಾಗಿದೆ.

ಸುಧಾರಣೆಗೆ ಸಮಿತಿ ರಚನೆ

ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ನೇಮಕಾತಿ ವ್ಯವಸ್ಥೆಯ ಸುಧಾರಣೆಗೆ ಸಮಿತಿ ರಚನೆ ಮಾಡಲಾಗಿದೆ. ಎಸ್.ವಿ ರಂಗನಾಥ್ ಅಧ್ಯಕ್ಷರಾಗಿದ್ದು, ಟಿ.ಎಂ ವಿಜಯಭಾಸ್ಕರ್, ವಂದಿತಾ ಶರ್ಮಾ ಹಾಗೂ ಎಲ್.ಕೆ. ಅಥೀಕ್ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಗೆ ನೇಮಕಾತಿ ಹಾಗೂ ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿ ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸಲು ಅಗತ್ಯ ಸುಧಾರಣೆಗಳನ್ನು ಅಧ್ಯಯನ ಮಾಡಿ ಶಿಫಾರಸುಗಳನ್ನು ಸಲ್ಲಿಸುವ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: 319 KAS ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಅರ್ಜಿ ಸಲ್ಲಿಕೆ ಯಾವಾಗಿನಿಂದ? ಇಲ್ಲಿದೆ ವಿವರ

ಅಧಿಕಾರಿಗಗಳಿಗೆ ಡಿಕೆಶಿ ಪಾಠ

ನೇಮಕಾತಿಯಲ್ಲಿ ದೇಶಕ್ಕೆ ನಾವು ಮಾದರಿಯಾಗಬೇಕು.70 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡುವ ದೊಡ್ಡ ಕಾರ್ಯವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಹೀಗಾಗಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ದೇಶಕ್ಕೆ ಮಾದರಿಯಾಗಿ ತೋರಿಸಬೇಕಾಗಿದೆ. ದೇಶಕ್ಕೆ ವಿದ್ಯಾರ್ಥಿಗಳ ಸಂದೇಶ ಈಗಾಗಲೇ ಸ್ಪಷ್ಟವಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ತಾಂತ್ರಿಕತೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಇತಿಹಾಸವಿದೆ. ತಾಂತ್ರಿಕತೆಯಲ್ಲಿ ನಾವು ತುಂಬಾ ಮುಂದೆ ಇದ್ದೇವೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ನೇಮಕಾತಿಯನ್ನು ಅತ್ಯಂತ ವೃತ್ತಿಪರವಾಗಿ ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಧಿಕಾರಿಗಳಿಗೆ ಪಾಠ ಮಾಡಿದರು.

ಪರೀಕ್ಷಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ

ಮುಂದಿನ ಆರು ತಿಂಗಳಲ್ಲಿ 36,773 ಹುದ್ದೆಗಳನ್ನು ತುಂಬಲು ಕೆಪಿಎಸ್ಸಿ ಮತ್ತು ಕೆಇಎ ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಿದ್ದು, ಸುಮಾರು 35 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆಯಿದೆ.
ಪರೀಕ್ಷೆ ಪ್ರಕ್ರಿಯೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸಮಗ್ರವಾದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದ್ದು, ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿಪಾಲಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಧಿಕಾರಿಗಳಿಗೆ ಡಿಕೆಶಿ ನೀಡಿದ ಸೂಚನೆಗಳೇನು?

  • ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕು
  • ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಇರಬಾರದು
  • ದೇಶಕ್ಕೆ ಮಾದರಿಯಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು
  • ಪರೀಕ್ಷೆ ಅಕ್ರಮ ನಡೆದರೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೇ ಜವಾಬ್ದಾರಿ
  • ಎಲ್ಲಾ ಕೋಚಿಂಗ್ ಸೆಂಟರ್ಗಳ ಮೇಲೆ ಕಣ್ಗಾವಲು ಇಡಬೇಕು.
  • ಪರೀಕ್ಷೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಒದಗಿಸಬೇಕು.
  • ಪರೀಕ್ಷಾ ಪ್ರಕ್ರಿಯೆಯನ್ನು ಇನ್ನಷ್ಟು ಸುಧಾರಿಸಲು ಯುಪಿಎಸ್ಸಿಯಲ್ಲಿ ಅನುಸರಿಸುವ ಉತ್ತಮ ಅಂಶಗಳನ್ನು ಇಲ್ಲಿಯೂ ಅಳವಡಿಸಿಕೊಳ್ಳಬೇಕು.
  • ಜಿಲ್ಲಾ ಮಟ್ಟದಲ್ಲಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳ ಜವಾಬ್ದಾರಿ.
  • ಜಿಲ್ಲಾಧಿಕಾರಿ, ಎಸ್ಪಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು.
  • ಪ್ರತಿಯೊಬ್ಬರಿಗೆ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದ್ದು, ಪ್ರತಿಯೊಬ್ಬರೂ ಅವರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

319 KAS ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಅರ್ಜಿ ಸಲ್ಲಿಕೆ ಯಾವಾಗಿನಿಂದ? ಇಲ್ಲಿದೆ ವಿವರ – Kannada News | Karnataka Government Notifies Recruitment for 319 KAS Posts: Check Application Dates

ಕರ್ನಾಟಕ ಲೋಕಸೇವಾ ಆಯೋಗImage Credit source: kpsc.kar.nic.in

ಬೆಂಗಳೂರು, ಜುಲೈ 31: ಕರ್ನಾಟಕ ಲೋಕಸೇವಾ ಆಯೋಗವು (KPSC) 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ (ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’) ಒಟ್ಟು 319 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಗುಡ್​​ ನ್ಯೂಸ್ ನೀಡಿದೆ.

319 ಹುದ್ದೆಗಳು

ಗ್ರೂಪ್ ‘ಎ’ ವಿಭಾಗದ 117 ಹುದ್ದೆಗಳು ಹಾಗೂ ಗ್ರೂಪ್ ‘ಬಿ’ ವಿಭಾಗದ 202 ಹುದ್ದೆಗಳಿವೆ. ಗ್ರೂಪ್ ‘ಎ’ ನಲ್ಲಿ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ಇಸಿಒ ಸೇರಿದಂತೆ ಪ್ರಮುಖ ಹುದ್ದೆಗಳಿದ್ದರೆ, ಗ್ರೂಪ್ ‘ಬಿ’ ನಲ್ಲಿ ತಹಶೀಲ್ದಾರ್, ವಾಣಿಜ್ಯ ತೆರಿಗೆ ಅಧಿಕಾರಿ, ಮುಖ್ಯಾಧಿಕಾರಿ ಮುಂತಾದ ಹುದ್ದೆಗಳಿವೆ. ಒಟ್ಟು ಹುದ್ದೆಗಳಲ್ಲಿ 297 ಮೂಲ ವೃಂದ ಹಾಗೂ 22 ಹೈದರಾಬಾದ್ ಕರ್ನಾಟಕಕ್ಕೆ ಸೇರಿವೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ?

ಅರ್ಹ ಅಭ್ಯರ್ಥಿಗಳು ಆಗಸ್ಟ್ 1 ರಿಂದ ಆಗಸ್ಟ್ 31ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪೂರ್ವಭಾವಿ ಪರೀಕ್ಷೆಯನ್ನು ನವೆಂಬರ್ 15 ರಂದು ನಡೆಸಲು ತಾತ್ಕಾಲಿಕವಾಗಿ ದಿನಾಂಕ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ್ಚರಿಕೆ

ಇನ್ನು ಮುಖ್ಯ ಪರೀಕ್ಷೆಗಳು 2027 ಫೆಬ್ರವರಿ 12 ರಿಂದ 18ರ ವರೆಗೆ ನಡೆಯಲಿದ್ದು, ಏಪ್ರಿಲ್ ​​27 ರಂದು ಮೇನ್ಸ್ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಮೇ 10ರಿಂದ 31ರವರೆಗೆ ಸಂದರ್ಶನ ನಡೆಯಲಿದ್ದು, ಜೂನ್ 5ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.

ಇದನ್ನೂ ಓದಿ: ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ: 3,991 ಹುದ್ದೆಗಳಿಗೆ 4.54 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು; ಇಂಜಿನಿಯರಿಂಗ್‌, ಪಿಎಚ್‌ಡಿ ಪದವೀಧರರಿಂದಲೂ ಅರ್ಜಿ

ಅರ್ಜಿ ಶುಲ್ಕವಾಗಿ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 600 ರೂ. ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 300 ರೂ, ಮಾಜಿ ಸೈನಿಕರಿಗೆ 50 ರೂ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೂ ಕಾಯದೆ ಮುಂಚಿತವಾಗಿಯೇ ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:16 pm, Fri, 31 July 26

Source link

CWG 2026: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ 30 ಪದಕಗಳು ಖಚಿತ – Kannada News | India Shines at 2026 Commonwealth Games: 17 Medals and 30 Guaranteed with Boxing, Judo Success

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್ (commonwealth games 2026) ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 17 ಪದಕಗಳನ್ನು ಗೆದ್ದಿದೆ. ಇದರಲ್ಲಿ 3 ಚಿನ್ನ, 10 ಬೆಳ್ಳಿ ಮತ್ತು 4 ಕಂಚಿನ ಪದಕಗಳು ಸೇರಿವೆ. ಈ ಮೂಲಕ ಭಾರತ ಪದಕಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಆದಾಗ್ಯೂ ಭಾರತಕ್ಕೆ ಇನ್ನು 13 ಪದಕಗಳು ಧಕ್ಕುವುದು ಖಚಿತವಾಗಿದೆ. ಅಂದರೆ 9ನೇ ದಿನದ ಪ್ರದರ್ಶನಗಳ ಆಧಾರದ ಮೇಲೆ ಭಾರತಕ್ಕೆ 30 ಪದಕಗಳು ಲಭಿಸುವುದು ಖಚಿತವಾಗಿದೆ. ಬಾಕ್ಸಿಂಗ್‌ನಲ್ಲಿ ಭಾರತ ಈಗಾಗಲೇ 10 ಪದಕಗಳನ್ನು ಖಚಿತ ಪಡಿಸಿಕೊಂಡಿದ್ದು, ಇದೀಗ ಜೂಡೋದಲ್ಲಿಯೂ ಅಸಾಧಾರಣ ಪ್ರದರ್ಶನ ನೀಡಿದ ಅಸ್ಮಿತಾ ಡೇ, ಹರ್ಷ್ ಸಿಂಗ್ ಮತ್ತು ಯಾಮಿನಿ ಮೌರ್ಯ ತಮ್ಮ ಸೆಮಿಫೈನಲ್ ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಮುನ್ನಡೆದಿದ್ದು, ಈ ಮೂವರು ಫೈನಲ್‌ನಲ್ಲಿ ಸೋತರೂ ಕನಿಷ್ಠ ಬೆಳ್ಳಿ ಪದಕ ಸಿಗುವುದು ಖಚಿತವಾಗಿದೆ.

ಬಾಕ್ಸಿಂಗ್‌ನಲ್ಲಿ 10 ಪದಕಗಳು

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ 9ನೇ ದಿನದಂದು, ಭಾರತೀಯ ಬಾಕ್ಸರ್‌ಗಳಾದ ಪ್ರೀತಿ ಪವಾರ್ ಮತ್ತು ಅಂಕುಶ್ ಪಂಗಲ್ ತಮ್ಮ ಸೆಮಿಫೈನಲ್ ಪಂದ್ಯಗಳನ್ನು ಗೆದ್ದು ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ 10 ಪದಕಗಳು ಸಿಗುವುದು ಖಚಿತ. ಇದೀಗ ಭಾರತದ ಮಹಿಳಾ ಜೂಡೋ ಆಟಗಾರ್ತಿ ಅಸ್ಮಿತಾ ಡೇ 48 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಸಮ್ಮರ್ ಶಾ ಅವರನ್ನು ಸೋಲಿಸಿ ಫೈನಲ್‌ಗೇರಿದ್ದಾರೆ. ಅಸ್ಮಿತಾ ಇದೀಗ ಫೈನಲ್​ನಲ್ಲಿ ಗೆದ್ದರೆ ಚಿನ್ನದ ಪದಕ ಸಿಗಲಿದ್ದು, ಸೋತರೆ ಬೆಳ್ಳಿಗೆ ಕೊರಳೊಡ್ಡಲಿದ್ದಾರೆ.

CWG 2026: ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ಸೀಮಾ ಕಲಿರಾಮನ್

ಜೂಡೋದಲ್ಲಿ 3 ಪದಕಗಳು

ಹಾಗೆಯೇ 57 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಯಾಮಿನಿ ಮೌರ್ಯ ದಕ್ಷಿಣ ಆಫ್ರಿಕಾದ ಡೊನ್ನಾ ಬ್ರೈಟೆನ್‌ಬಾಚ್ ಅವರನ್ನು ಸೋಲಿಸಿ ಫೈನಲ್​ಗೆ ಅರ್ಹತೆ ಪಡೆದರು. ಅವರು ಕೂಡ ಫೈನಲ್​ನಲ್ಲಿ ಗೆದ್ದರೆ ಚಿನ್ನ ಸಿಗಲಿದ್ದು, ಸೋತರೆ, ಕನಿಷ್ಠ ಬೆಳ್ಳಿ ಪದಕ ಸಿಗುವುದು ಖಚಿತ. ಇನ್ನು ಹರ್ಷ್ ಸಿಂಗ್ ಪುರುಷರ 60 ಕೆಜಿ ವಿಭಾಗದಲ್ಲಿ ಆಸ್ಟ್ರೇಲಿಯಾದ ಪೆಡ್ರೊ ಕಾರ್ಲೋಸ್ ಅಂತುನ್ ಅವರನ್ನು ಸೋಲಿಸಿ ಫೈನಲ್‌ಗೇರಿದ್ದಾರೆ. ಈ ಮೂಲಕ ಅವರ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದು, ಫೈನಲ್‌ನಲ್ಲಿ ಗೆದ್ದರೆ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳಲಿದ್ದಾರೆ.

ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಖಚಿತವಾಗಿರುವ ಪದಕಗಳು

  • ಲವ್ಲಿನಾ ಬೊರ್ಗೊಹೈನ್ (75 ಕೆಜಿ)- ಸೆಮಿಫೈನಲ್‌
  • ಪ್ರೀತಿ ಪವಾರ್ (54 ಕೆಜಿ) – ಫೈನಲ್
  • ಪ್ರಿಯಾ ಘಂಘಾಸ್ (60 ಕೆಜಿ)- ಸೆಮಿಫೈನಲ್‌
  • ಸಾಕ್ಷಿ ಚೌಧರಿ (51 ಕೆಜಿ)- ಸೆಮಿಫೈನಲ್‌
  • ಜಾದುಮಣಿ ಸಿಂಗ್ (55 ಕೆಜಿ)- ಸೆಮಿಫೈನಲ್‌
  • ಅರುಂಧತಿ ಚೌಧರಿ (70 ಕೆಜಿ)- ಸೆಮಿಫೈನಲ್‌
  • ಸಚಿನ್ ಸಿವಾಚ್ (60 ಕೆಜಿ)- ಸೆಮಿಫೈನಲ್‌
  • ಅಂಕುಶ್ ಪಂಗಲ್ (80 ಕೆಜಿ) – ಫೈನಲ್
  • ನರೇಂದ್ರ ಬರ್ವಾಲ್ (90 ಕೆಜಿ)- ಸೆಮಿಫೈನಲ್‌
  • ಜಾಸ್ಮಿನ್ ಲಂಬೋರಿಯಾ (57 ಕೆಜಿ)- ಸೆಮಿಫೈನಲ್‌

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:18 pm, Fri, 31 July 26

Source link

ಪ್ರಧಾನಿ ಮೋದಿ ಪೋಸ್ಟ್​ಗೆ ನಿರ್ಬಂಧ; ಅಲ್ಗಾರಿದಮ್‌ ತಾರತಮ್ಯದ ಬಗ್ಗೆ ಮೆಟಾ ತಂಡಕ್ಕೆ ಸರ್ಕಾರದಿಂದ ಸಮನ್ಸ್ – Kannada News | Meta summons Indian Government to question Meta team over algorithmic bias after PM Modi Facebook Post row

ನವದೆಹಲಿ, ಜುಲೈ 31: ಸಾಮಾಜಿಕ ಜಾಲತಾಣ ಸಂಸ್ಥೆಯಾದ ಮೆಟಾ (Meta) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಫೇಸ್‌ಬುಕ್ ಪೋಸ್ಟ್ ಅನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಮನ್ಸ್ ನೀಡಿದ್ದು, ಮೆಟಾದ ಜಾಗತಿಕ ತಂಡವನ್ನು ಅಲ್ಗಾರಿದಮ್ ಪಕ್ಷಪಾತ ಹಾಗೂ ಸಾರ್ವಜನಿಕ ಸುವ್ಯವಸ್ಥೆಯಲ್ಲಿ ಅವರ ಪಾತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಪೋಸ್ಟ್ ಅನ್ನು ಫೇಸ್‌ಬುಕ್ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೆಟಾಗೆ ಸಂಸದೀಯ ಸಮಿತಿಯೂ ಸಮನ್ಸ್ ನೀಡಿದ್ದು, ಹೈದರಾಬಾದ್‌ನಲ್ಲಿ ಮೆಟಾ ಇಂಡಿಯಾ ಮುಖ್ಯಸ್ಥರ ವಿರುದ್ಧ ಸೈಬರ್ ದೂರು ಕೂಡ ದಾಖಲಾಗಿದೆ. ಮೆಟಾದ ಜಾಗತಿಕ ತಂಡವು ಮುಂದಿನ ವಾರದ ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

ಮೆಟಾ ಅಲ್ಗಾರಿದಮ್ ಹೇಗೆ ಕಾರ್ಯನಿರ್ವಹಿಸುತ್ತದೆ, ಅಲ್ಗಾರಿದಮ್‌ನಲ್ಲಿ ಪಕ್ಷಪಾತ ಇದೆಯೇ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಕಂಪನಿಯ ಪಾತ್ರವೇನು ಎಂಬುದರ ಕುರಿತು ಮೆಟಾದ ಜಾಗತಿಕ ತಂಡದಿಂದ ಖಚಿತವಾದ ಸ್ಪಷ್ಟೀಕರಣವನ್ನು ಸರ್ಕಾರ ಕೋರಲಿದೆ. ಜೊತೆಗೆ ಈ ತಂಡವು ಸಂಸದೀಯ ಸಮಿತಿಯ ಮುಂದೆಯೂ ಹಾಜರಾಗಲಿದೆ.

ಪ್ರಧಾನಿ ಮೋದಿ ಪೋಸ್ಟ್ ನಿರ್ಬಂಧದ ಹಿನ್ನೆಲೆ:

ಭಾರತದ ಯುವಜನತೆಯನ್ನು ಉದ್ದೇಶಿಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಸ್ವಲ್ಪ ಸಮಯದವರೆಗೆ ನಿರ್ಬಂಧಿಸಲಾಗಿತ್ತು. ಈ ಘಟನೆಯ ನಂತರ ಕೇಂದ್ರ ಸರ್ಕಾರವು ಮೆಟಾದ ಹಿರಿಯ ಅಧಿಕಾರಿಗೆ ಸಮನ್ಸ್ ನೀಡಿದ್ದರಿಂದ ಈ ಬೆಳವಣಿಗೆಯೂ ತೀವ್ರ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ವಿವಾದ: ಕೇಂದ್ರಕ್ಕೆ ಕ್ಷಮೆಯಾಚಿಸಿ ಸುರಕ್ಷತಾ ಕ್ರಮಗಳ ವಿವರಣೆ ಕೊಟ್ಟ ಮೆಟಾ

ಅಮೆರಿಕ ಮೂಲದ ಈ ಸೋಶಿಯಲ್ ಮೀಡಿಯಾ ಸಂಸ್ಥೆ ಈ ಘಟನೆಯು ತಾಂತ್ರಿಕ ದೋಷದಿಂದ (Technical glitch) ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿತ್ತು. ಆದರೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾದ ಈ ಸ್ಪಷ್ಟನೆಯನ್ನು ಅಪೂರ್ಣ ಮತ್ತು ಅಸಮರ್ಪಕ ಎಂದು ತಳ್ಳಿಹಾಕಿತ್ತು.

ಈ ವಿವಾದದ ಬೆನ್ನಲ್ಲೇ ಮೆಟಾ ಸಂಸ್ಥೆಯು ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಪ್ರಧಾನಮಂತ್ರಿಯವರು ಹಾಗೂ ದೇಶದ ಕೆಲವು ಪ್ರಮುಖ ವ್ಯಕ್ತಿಗಳ ಖಾತೆಗಳಿಂದ ಪೋಸ್ಟ್ ಆಗುವ ವಿಷಯಗಳ ಮೇಲೆ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಆಂಧ್ರಪ್ರದೇಶಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ; 5,000 ಕೋಟಿ ವೆಚ್ಚದ ಭೋಗಾಪುರಂ ವಿಮಾನ ನಿಲ್ದಾಣ ಉದ್ಘಾಟನೆ

ಪ್ರಧಾನಿ ಮೋದಿ ಹಾಗೂ ಇತರ ಪ್ರಮುಖ ಖಾತೆಗಳ ಪೋಸ್ಟ್‌ಗಳ ಸುರಕ್ಷತೆಗಾಗಿ ಜಾರಿಗೆ ತರಲಾದ ಬಿಗಿಯಾದ ಹಾಗೂ ಹೆಚ್ಚುವರಿ ಸುರಕ್ಷತಾ ಕ್ರಮಗಳ ವಿವರಗಳನ್ನು ಮೆಟಾ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದೆ.

ಹೈದರಾಬಾದ್‌ನಲ್ಲಿ ಕೇಸ್ ದಾಖಲು:

ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಎಐ ತಂತ್ರಜ್ಞಾನದಿಂದ ರೂಪಿಸಲಾದ ಹಾಗೂ ತಿರುಚಲಾದ ವಿಡಿಯೋ ಹಾಗೂ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಕ್ಕಾಗಿ ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನ ಕೆಲವು ಖಾತೆಗಳ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರವು ಈ ಕೆಳಗಿನ ಪ್ರಮುಖ ಅಂಶಗಳ ಕುರಿತು ಮೆಟಾದಿಂದ ಉತ್ತರಗಳನ್ನು ಕೋರುವ ಸಾಧ್ಯತೆಯಿದೆ.

  • ರಾಜಕೀಯ ಪೋಸ್ಟ್‌ಗಳನ್ನು ಹೇಗೆ ಪರಿಶೀಲಿಸಲಾಗುತ್ತದೆ?
  • ಸ್ವಯಂಚಾಲಿತ ವ್ಯವಸ್ಥೆಗಳು (Automated systems) ಯಾವುದೇ ರೀತಿಯ ತಾರತಮ್ಯ ತೋರಿಸುತ್ತವೆಯೇ?
  • ತಪ್ಪಾಗಿ ವಿಧಿಸಲಾದ ನಿರ್ಬಂಧಗಳನ್ನು ಹೇಗೆ ಹಿಂಪಡೆಯಲಾಗುತ್ತದೆ?
  • ಸಾರ್ವಜನಿಕ ಪ್ರತಿಭಟನೆಗಳು ಮತ್ತು ಗಲಭೆಗಳ ಸಮಯದಲ್ಲಿ ಪ್ಲಾಟ್‌ಫಾರ್ಮ್‌ಗಳು ಹೇಗೆ ವ್ಯವಹರಿಸುತ್ತವೆ?
  • ನಿಯಮಗಳನ್ನು ಉಲ್ಲಂಘಿಸಿದಾಗ ಹೊಣೆಗಾರಿಕೆಯನ್ನು ಹೇಗೆ ನಿಗದಿಪಡಿಸಲಾಗುತ್ತದೆ?

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

12 ಲಕ್ಷ ಸಾಲಬಾಧೆಯಿಂದ ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ – Kannada News | HD Kumaraswamy Visits Mandya Family After Farmer Couple Dies Over Rs 12 Lakh Debt

ಮಂಡ್ಯ, ಜುಲೈ 31: ತಾಲೂಕಿನ ಬಿ.ಹಟ್ನ ಗ್ರಾಮದಲ್ಲಿ ಸಾಲಬಾಧೆಯಿಂದ ಬೇಸತ್ತ ರೈತ ದಂಪತಿ ಮೀಸೆ ಪುಟ್ಟಸ್ವಾಮಿ (58) ಮತ್ತು ನಾಗಮ್ಮ (55) ಪ್ರಾಣ ಕಳೆದುಕೊಂಡಿರುವ ಘಟನೆ ನಡೆದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೃತ ದಂಪತಿಯ ನಿವಾಸಕ್ಕೆ ಭೇಟಿ ನೀಡಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ರೈತ ದಂಪತಿ 11 ರಿಂದ 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 90,000 ರೂ. ಸಾಲವಿದ್ದು, ಇತರೆ ಬ್ಯಾಂಕ್‌ಗಳಲ್ಲಿ, ಮುಖ್ಯವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲೂ ಸಾಲವಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಕೃಷಿ ಉದ್ದೇಶಗಳಿಗಾಗಿ ಈ ಸಾಲವನ್ನು ಪಡೆಯಲಾಗಿತ್ತು ಎನ್ನಲಾಗಿದೆ. ಸಾಲದ ನೋಟಿಸ್‌ಗಳಿಂದ ಮನನೊಂದು ದಂಪತಿ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ್ಚರಿಕೆ – Kannada News | Police Recruitment Exam: KEA Warns of Legal Action Over False Social Media Posts

ಬೆಂಗಳೂರು, ಜುಲೈ 31: ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿರುವ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಅಭ್ಯರ್ಥಿಗಳು ಸಣ್ಣಪುಟ್ಟ ಎಡವಟ್ಟುಗಳನ್ನು ಮಾಡಿಕೊಳ್ಳದಂತೆ’ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ. ಟಿವಿ9 ಜೊತೆಗೆ ಮಾತನಾಡಿದ ಅವರು, ‘ಈ ಬಾರಿ ಪರೀಕ್ಷೆ ಮುಗಿದ ತಕ್ಷಣವೇ ಕಲಬುರಗಿ, ರಾಯಚೂರು, ಧಾರವಾಡ, ದಾವಣಗೆರೆ ಹಾಗೂ ಮೈಸೂರು ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಓಎಂಆರ್ ಶೀಟ್‌ಗಳನ್ನು ಸ್ಕ್ಯಾನ್ ಮಾಡಿ, ಮಧ್ಯರಾತ್ರಿಯೊಳಗಾಗಿ ವೆಬ್‌ಸೈಟ್‌ನಲ್ಲಿ ಲೈವ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್‌ನಲ್ಲಿ ತಂದೆಯ ಹಾಗೂ ತಮ್ಮ ಆಧಾರ್ ಸಂಖ್ಯೆಗಳನ್ನು ತಪ್ಪಾಗಿ ನಮೂದಿಸಿ, ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೆಇಎ ಮೇಲೆ ಸುಳ್ಳು ಆರೋಪ ಮಾಡಬಾರದು, ಅಂತಹವರ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು’ ಎಂದರು. ‘ಅಭ್ಯರ್ಥಿಗಳು ಪರೀಕ್ಷೆಗೆ ಮುನ್ನ ಹಾಲ್ ಟಿಕೆಟ್‌ನಲ್ಲಿರುವ ವಿಳಾಸವನ್ನು ಸರಿಯಾಗಿ ಪರಿಶೀಲಿಸಿ, ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ’ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version