ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ರಾಜಸ್ಥಾನ್ ರಾಯಲ್ಸ್ (RR) ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕದ (ACU) ತನಿಖೆಗೆ ಗುರಿಯಾಗಿದ್ದಾರೆ. ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಈ ವಿವಾದಕ್ಕೆ ಕಾರಣವಾಗಿದೆ.

ವಿವಾದದ ಹಿನ್ನೆಲೆ ಏನು?

ಏಪ್ರಿಲ್ 10 ರಂದು ಗುವಾಹಟಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಡಗೌಟ್‌ನಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಪಕ್ಕದಲ್ಲಿ ಕುಳಿತಿದ್ದ ರೋಮಿ ಭಿಂದರ್ ಅವರು ಮೊಬೈಲ್ ಫೋನ್ ಬಳಸುತ್ತಿರುವುದು ಟೆಲಿವಿಷನ್ ಪರದೆಯ ಮೇಲೆ ಸ್ಪಷ್ಟವಾಗಿ ಗೋಚರಿಸಿತ್ತು.

ಐಪಿಎಲ್ ನಿಯಮಗಳ ಪ್ರಕಾರ, ‘ಪ್ಲೇಯರ್ಸ್ ಅಂಡ್ ಮ್ಯಾಚ್ ಆಫೀಶಿಯಲ್ಸ್ ಏರಿಯಾ’ (PMOA) ಅಡಿಯಲ್ಲಿ ಡಗೌಟ್‌ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಬಿಸಿಸಿಐ ಕ್ರಮವೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ವೀಡಿಯೊ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ ಭ್ರಷ್ಟಾಚಾರ ವಿರೋಧಿ ಘಟಕದ (ACU) ತನಿಖಾ ವರದಿಯ ಆಧಾರದ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಯಾವ ಕ್ರಮ ಕೈಗೊಳ್ಳಬಹುದು?

  • ಪಂದ್ಯದ ನಿಷೇಧ: ಮುಂದಿನ ಕೆಲವು ಪಂದ್ಯಗಳಿಗೆ ಡಗೌಟ್‌ಗೆ ಪ್ರವೇಶ ನಿಷೇಧಿಸಬಹುದು.
  • ಭಾರೀ ದಂಡ: ದೊಡ್ಡ ಮೊತ್ತದ ದಂಡ ವಿಧಿಸುವ ಸಾಧ್ಯತೆಯಿದೆ.
  • ಎಚ್ಚರಿಕೆ: ಮೊದಲ ಬಾರಿಯ ತಪ್ಪೆಂದು ಪರಿಗಣಿಸಿ ಕಠಿಣ ಎಚ್ಚರಿಕೆ ನೀಡಬಹುದು.

ವೈದ್ಯಕೀಯ ಕಾರಣ ಮುಂದಿಟ್ಟ ರೋಮಿ:

ಇನ್ನೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಮೊಬೈಲ್ ಬಳಸಿದ್ದು ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣಕ್ಕೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಅವರು ಶ್ವಾಸಕೋಶದ ಸಮಸ್ಯೆಯಿಂದ (Collapsed lungs) ಚೇತರಿಸಿಕೊಂಡಿದ್ದು, ಅವರಿಗೆ ಮೆಟ್ಟಿಲು ಹತ್ತುವುದು ಅಥವಾ ಹೆಚ್ಚು ಓಡಾಟ ಮಾಡುವುದು ಕಷ್ಟಕರವಾಗಿದೆ.

ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್ ನಡುವೆ ಪದೇ ಪದೇ ಓಡಾಡಲು ಸಾಧ್ಯವಾಗದ ಕಾರಣ ಅವರು ತಮ್ಮ ಬಳಿಯೇ ಫೋನ್ ಇಟ್ಟುಕೊಂಡಿದ್ದರು ಎಂಬ ವಾದ ಕೇಳಿಬರುತ್ತಿದೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ RCB

ಸದ್ಯ ರಾಜಸ್ಥಾನ್ ರಾಯಲ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ, ಈ ಪಂದ್ಯದಲ್ಲಿ ರೋಮಿ ಭಿಂದರ್ ತಂಡದೊಂದಿಗೆ ಇರುತ್ತಾರೆಯೇ ಅಥವಾ ಇಲ್ಲವೇ ಎಂಬುದು ಎಸಿಯು ವರದಿಯ ಮೇಲೆ ಅವಲಂಬಿತವಾಗಿದೆ. ಕ್ರಿಕೆಟ್‌ನ ಪಾವಿತ್ರ್ಯತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಬಿಸಿಸಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಥವಾ ಖಡಕ್ ಎಚ್ಚರಿಕೆ ನೀಡುವ ಸಾಧ್ಯತೆ ಹೆಚ್ಚಿದೆ.

Source link

ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ 53 ಎಕರೆ ಭೂಮಿ ಪರಭಾರೆ: ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್, ಸಿಬಿಐ ತನಿಖೆಗೆ ಆದೇಶ

ಬೆಂಗಳೂರು, ಏಪ್ರಿಲ್ 13: ಅಸ್ತಿತ್ವಕ್ಕೆ ಬರುವ ಎಷ್ಟೋ ವರ್ಷಗಳ ಮೊದಲೇ, ಇಲ್ಲದ ಕಂಪನಿಯೊಂದಕ್ಕೆ ಸುಮಾರು 53 ಎಕರೆ 26 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ (Karnataka High Court) ‘ಸಂವಿಧಾನಕ್ಕೆ ಮಾಡಿದ ವಂಚನೆ’ ಎಂದು ಕರೆದಿದೆ. ಈ ಬಹುಕೋಟಿ ಹಗರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಆದೇಶಿಸಿರುವ ನ್ಯಾಯಾಲಯ, ಸಂಬಂಧಪಟ್ಟ ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಏನಿದು ಹಗರಣ?

ಹೆಬ್ಬಾಳದ ಅಮಾನಿಕೆರೆ ಬಳಿಯ ಅತೀ ಹೆಚ್ಚು ಮೌಲ್ಯದ ಜಮೀನನ್ನು 2004ರಲ್ಲಿ ರೈತರಿಂದ ಎಕರೆಗೆ ಕೇವಲ 15 ಲಕ್ಷ ರೂಪಾಯಿಯಂತೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದನ್ನು ‘ಲೇಕ್‌ವ್ಯೂ ಟೂರಿಸಂ ಕಾರ್ಪೊರೇಷನ್’ ಎಂಬ ಸಂಸ್ಥೆಗೆ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗಿತ್ತು. ವಿಶೇಷವೆಂದರೆ, ಈ ಸಂಸ್ಥೆಯು ಜಮೀನಿಗಾಗಿ 2000ನೇ ಇಸವಿಯಲ್ಲಿ ಅರ್ಜಿ ಸಲ್ಲಿಸಿತ್ತು, ಆದರೆ ಸಂಸ್ಥೆ ಅಧಿಕೃತವಾಗಿ ನೋಂದಣಿಯಾಗಿದ್ದೇ 2011ರಲ್ಲಿ! ಅಂದರೆ, ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಭೂಮಿ ನೀಡಲು ಅಂದಿನ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು.

ನ್ಯಾಯಾಲಯದ ಗಂಭೀರ ಅವಲೋಕನ

ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ಪೀಠವು ಈ ಪ್ರಕರಣದಲ್ಲಿ ಸರ್ಕಾರದ ಒಳಸಂಚನ್ನು ಬಯಲಿಗೆಳೆದಿದೆ. ನ್ಯಾಯಾಲವು ಉಲ್ಲೇಖಿಸಿರುವ ಅಂಶಗಳು ಹೀಗಿವೆ;

  • ಅರ್ಜಿ ಸಲ್ಲಿಸಿದ 5 ದಿನದಲ್ಲೇ ಅನುಮೋದನೆ: ಸಂಸ್ಥೆ ಅರ್ಜಿ ಸಲ್ಲಿಸಿದ ಐದೇ ದಿನಗಳಲ್ಲಿ ಸಭೆ ನಡೆಸಿ ಭೂಸ್ವಾಧೀನಕ್ಕೆ ಶಿಫಾರಸು ಮಾಡಲಾಗಿತ್ತು.
  • ಕಡಿಮೆ ಬಂಡವಾಳ: ಕೇವಲ 1 ಲಕ್ಷ ರೂಪಾಯಿ ಷೇರ್ ಕ್ಯಾಪಿಟಲ್ ಹೊಂದಿರುವ, ಪ್ರಸ್ತುತ ಮೌಲ್ಯ ಮೈನಸ್ 8.60 ಲಕ್ಷ ರೂಪಾಯಿ ಇರುವ ಸಂಸ್ಥೆಗೆ ಸಾವಿರಾರು ಕೋಟಿ ಮೌಲ್ಯದ ಭೂಮಿ ನೀಡಲಾಗಿದೆ.
  • ಉದ್ದೇಶ ಬದಲಾವಣೆ: ಪ್ರವಾಸೋದ್ಯಮ ಕೇಂದ್ರದ ಹೆಸರಲ್ಲಿ ಭೂಮಿ ಪಡೆದು, ನಂತರ ಅದನ್ನು ಕಮರ್ಷಿಯಲ್ ಟೌನ್‌ಶಿಪ್‌ಗಾಗಿ ಬಳಸಲು 2023ರಲ್ಲಿ ಸರ್ಕಾರ ನಿರ್ಧರಿಸಿತ್ತು.

‘ಈ ಭೂಸ್ವಾಧೀನ ಪ್ರಕ್ರಿಯೆಯೇ ಸಾರ್ವಜನಿಕ ಉದ್ದೇಶದ್ದಾಗಿರಲಿಲ್ಲ. ಸರ್ಕಾರದ ಅಧಿಕಾರಿಗಳೇ ಖಾಸಗಿಯವರೊಂದಿಗೆ ಒಳಸಂಚು ನಡೆಸಿದ್ದಾರೆ. ರಾಜ್ಯದ ತನಿಖಾ ಸಂಸ್ಥೆಗಳಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲದ ಕಾರಣ ಸಿಬಿಐಗೆ ವಹಿಸಲಾಗುತ್ತಿದೆ’ ಎಂದು ಹೈಕೋರ್ಟ್ ಆದೇಶಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ತಂಡದಲ್ಲಿ ‘ಧುರಂಧರ’ರ ದಂಡೇ ಇದೆ: ಎದುರಾಳಿಗಳು ನಡುಗುತ್ತಿದ್ದಾರೆ!

IPL 2026: ಒಬ್ಬ ಕ್ರಿಕೆಟ್ ತಂಡದ ನಾಯಕನಿಗೆ ತನ್ನ ತಂಡ ಸತತವಾಗಿ 200ಕ್ಕೂ ಹೆಚ್ಚು ರನ್ ಗಳಿಸುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ಸಮಾಧಾನ ಮತ್ತೊಂದಿಲ್ಲ. ಪ್ರಸ್ತುತ ನನ್ನ ತಂಡದ ಬ್ಯಾಟಿಂಗ್ ಲೈನಪ್ ನೋಡಿದರೆ, ಕೇವಲ ಆಟಗಾರರಲ್ಲ, ಅಪ್ಪಟ ‘ಧುರಂಧರ’ರ ದಂಡೇ ಅಲ್ಲಿ ನಿಂತಿದೆ ಅನ್ನಿಸುತ್ತದೆ. ಹೀಗಂದಿರುವುದು ಮತ್ಯಾರೂ ಅಲ್ಲ, ರಾಯಲ್ ಚಾಲೆಂಜರ್ಸ್​ ಬೆಂಗಳೂರು  ತಂಡದ ನಾಯಕ ರಜತ್ ಪಾಟಿದಾರ್.

‘ಧುರಂಧರ’ರ ದಂಡು:

ಪ್ರತಿ ಪಂದ್ಯದಲ್ಲೂ 200 ರನ್ ದಾಟುವುದು ಸುಲಭದ ಮಾತಲ್ಲ. ಇದಕ್ಕೆ ಆರಂಭಿಕರಿಂದ ಹಿಡಿದು ಫಿನಿಶರ್‌ಗಳವರೆಗೆ ಎಲ್ಲರ ಕೊಡುಗೆಯೂ ಮುಖ್ಯ. ನಮ್ಮ ತಂಡದ ಬ್ಯಾಟರ್‌ಗಳು ಮೈದಾನಕ್ಕಿಳಿದರೆ ಸಾಕು, ಬೌಲರ್‌ಗಳ ಬೆವರಿಳಿಯುತ್ತಿದೆ. ಸಿಕ್ಸರ್-ಬೌಂಡರಿಗಳ ಸುರಿಮಳೆಯಾಗುತ್ತಿರುವುದು ತಂಡದ ಆತ್ಮವಿಶ್ವಾಸವನ್ನು ಆಕಾಶದ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕ ರಜತ್ ಪಾಟಿದಾರ್ ಹೇಳಿದ್ದಾರೆ.

ನಾಯಕನಾಗಿ ಹೆಮ್ಮೆಯ ಕ್ಷಣ:

ತಂಡದಲ್ಲಿ ಇಷ್ಟೊಂದು ಮ್ಯಾಚ್-ವಿನ್ನರ್‌ಗಳು ಇದ್ದಾಗ ನಾಯಕನ ಕೆಲಸ ಸುಲಭವಾಗುತ್ತದೆ. ಯಾವುದೇ ಹಂತದಲ್ಲಿ ವಿಕೆಟ್ ಬಿದ್ದರೂ, ನಂತರ ಬರುವ ಆಟಗಾರ ಪಂದ್ಯವನ್ನು ಅಷ್ಟೇ ವೇಗವಾಗಿ ಮುಂದೆ ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದಾನೆ.

ಈ ರೀತಿಯ ಬ್ಯಾಟಿಂಗ್ ಬಲ ಇರುವುದರಿಂದ, ಬೌಲರ್‌ಗಳ ಮೇಲೆ ಒತ್ತಡ ಕಡಿಮೆ ಇರುತ್ತದೆ ಮತ್ತು ನಾಯಕನಾಗಿ ನಾನು ಹೆಚ್ಚು ಆಕ್ರಮಣಕಾರಿ ತಂತ್ರಗಳನ್ನು ರೂಪಿಸಲು ಸಾಧ್ಯವಾಗುತ್ತಿದೆ ಎಂದು ರಜತ್ ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.

ಸವಾಲು ಮತ್ತು ಜವಾಬ್ದಾರಿ:

ಆರ್​ಸಿಬಿ ತಂಡದಲ್ಲಿ ಇಷ್ಟೊಂದು ಪ್ರತಿಭಾವಂತ ಆಟಗಾರರಿದ್ದಾಗ ಎಲ್ಲರಿಗೂ ಸರಿಯಾದ ಅವಕಾಶ ನೀಡುವುದು ಕೂಡ ದೊಡ್ಡ ಸವಾಲು. ಬ್ಯಾಟಿಂಗ್ ಕ್ರಮಾಂಕವನ್ನು ಸಮತೋಲನದಲ್ಲಿಟ್ಟುಕೊಂಡು, ಈ ಫಾರ್ಮ್ ಅನ್ನು ಟೂರ್ನಿಯ ಕೊನೆಯವರೆಗೂ ಕಾಯ್ದುಕೊಳ್ಳುವುದು ಈಗಿನ ಮುಖ್ಯ ಗುರಿ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ಗೆ ನ್ಯಾಯ… ಡೆಲ್ಲಿ ಕ್ಯಾಪಿಟಲ್ಸ್​ಗೆ ಅನ್ಯಾಯ..!

ಅದರಂತೆ ನಾವು ಮುಂಬೈ ಇಂಡಿಯನ್ಸ್ ವಿರುದ್ಧಅವರ ತವರಿನಲ್ಲೇ ಗೆದ್ದಿದ್ದೇವೆ. ಮುಂದಿನ ಪಂದ್ಯಗಳಲ್ಲೂ ಗೆಲ್ಲುವ ವಿಶ್ವಾಸವಿದೆ.  ಎದುರಾಳಿ ಯಾರೇ ಇರಲಿ, ನಮ್ಮ ಧುರಂಧರರು ಅಬ್ಬರಿಸಲು ಸಜ್ಜಾಗಿದ್ದಾರೆ. ಈ ರನ್ ಮಳೆ ಹೀಗೆಯೇ ಮುಂದುವರಿಯಲಿ ಎಂಬುದು ನನ್ನ ಆಶಯ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

 

Source link

ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್: ನಾಪತ್ತೆಯಾಗಿದ್ದ ಮಹಿಳೆಯಿಂದ ಸ್ಫೋಟಕ ಹೇಳಿಕೆ

ಬೆಂಗಳೂರು, ಏಪ್ರಿಲ್​​ 13: ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಪ್ರಕರಣವು ಇದೀಗ ಮಹತ್ವದ ತಿರುವನ್ನು ಪಡೆದುಕೊಂಡಿದೆ. ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದ ಮಹಿಳೆಯು ಇದೀಗ ಯು-ಟರ್ನ್ ಹೊಡೆದಿದ್ದಾರೆ. ವಿಡಿಯೋ ರಿಲೀಸ್ ಮಾಡಿರುವ ಅವರು, ತಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ, ತನ್ನ ಮತ್ತು ಸ್ವಾಮೀಜಿ ನಡುವೆ ಗುರು-ಭಕ್ತಿಯ ಸಂಬಂಧವಿದೆ ಎಂದು ವಿಡಿಯೊ ಮೂಲಕ ಸ್ಪಷ್ಟಪಡಿಸಿದ್ದಾರೆ. ನನ್ನ ಹೆಸರಿನಲ್ಲಿ ಯಾರೋ ದೂರು ದಾಖಲಿಸಿದ್ದಾರೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅಲ್ಲದೆ ಏಪ್ರಿಲ್ 6ರಂದು ದೂರು ನೀಡಿರುವುದು ಯಾರು ಅಂತಾ ಗೊತ್ತಿಲ್ಲ. ಅದೊಂದು ಸುಳ್ಳು ದೂರು, ಆ ದೂರನ್ನು ಯಾರೂ ನಂಬಬೇಡಿ. ನಾನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಲ್ಕು ದಿನಗಳ ಬಳಿಕ ಬಂದು ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಿಶ್ಚಿತಾರ್ಥವಾದ ಯುವಕನ ಮನೆಯವರಿಗೆ ಯುವತಿಯೊಂದಿಗಿನ ಫೋಟೋ ಕಳುಹಿಸಿದ ಪ್ರೇಮಿ; ಮುಂದಾಗಿದ್ದು ದುರಂತ

ವಿಜಯಪುರ, ಏಪ್ರಿಲ್​​ 13: ಹದಿಹರೆಯದ ಪ್ರೇಮ ಪ್ರಕರಣಗಳು ಕೆಲವೊಮ್ಮೆ ಜೀವಕ್ಕೇ ಕಂಟಕವಾಗಿಬಿಡುತ್ತವೆ. ಪ್ರೀತಿಸಿದ ಹುಡುಗ ಅಥವಾ ಹುಡುಗಿ ಸಿಗದ ಕಾರಣಕ್ಕೆ ಮನನೊಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದುಕೊಂಡು ಬಲಿಯಾದವರ ಸಂಖ್ಯೆ ದೊಡ್ಡದ್ದೇ ಇದೆ. ಆದರೆ ವಿಜಯಪುರದಲ್ಲಿ ಇದಕ್ಕೆ ತುಸು ಭಿನ್ನವೆಂಬಂತಹ ಪ್ರಕರಣವೊಂದು ನಡೆದಿದೆ. ತಾನು ಪ್ರೀತಿಸಿದ್ದ ಯುವತಿಗೆ ಮತ್ತೊಬ್ಬನ ಜೊತೆ ವಿವಾಹ ನಿಶ್ಚಯವಾಗಿದ್ದಕ್ಕೆ ರೊಚ್ಚಿಗೆದ್ದ ಯುವಕ ಮಾಡಿದ ಕೆಲಸ, ಮದುವೆಯ ಕನಸು ಕಂಡಿದ್ದ ಯುವತಿಯ ಪ್ರಾಣವನ್ನೇ ತೆಗೆದಿದೆ.

ಹೌದು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ 22 ವರ್ಷದ ಯುವತಿ ಜಯಶ್ರೀ ಬಿರಾದಾರ್​​ಗೆ ಮದುವೆ ಮಾಡಲು ಮುಂದಾಗಿದ್ದ ಕುಟುಂಬಸ್ಥರು, ಈ ಸಂಬಂಧ ನಿಶ್ಚಿತಾರ್ಥವನ್ನೂ ನಡೆಸಿದ್ದರು. ಆದರೆ ಜಯಶ್ರೀ ಈ ಮೊದಲು ಶ್ರೀಶೈಲ್ ಬಡಾನೂರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಈಕೆಯ ವಿವಾಹದ ವಿಷಯ ತಿಳಿದ ಆತ ವ್ಯತಿರಿಕ್ತವಾಗಿ ವರ್ತಿಸಿದ್ದಾನೆ. ಜಯಶ್ರೀ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕುಟುಂಬಸ್ಥರಿಗೆ ಆಕೆ ತನ್ನ ಜೊತೆಗಿರುವ ಫೋಟೋಗಳನ್ನು ಶ್ರೀಶೈಲ್ ಕಳುಹಿಸಿದ್ದಾನೆ. ಅವನ್ನು ನೋಡಿರುವ ಯುವಕನ ಕಡೆಯವರು ಏಪ್ರಿಲ್​​ 27ರಂದು ನಿಗದಿಯಾಗಿದ್ದ ಮದುವೆಯನ್ನು ಕ್ಯಾನ್ಸಲ್​​ ಮಾಡಿದ್ದಾರೆ. ಘಟನೆಯಿಂದ ತೀವ್ರವಾಗಿ ನೊಂದ ಜಯಶ್ರೀ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಸ್ವಾಮೀಜಿ ಬೆತ್ತಲೆ ವೀಡಿಯೋ ಕಾಲ್ ಕೇಸಿಗೆ ಸ್ಫೋಟಕ ಟ್ವಿಸ್ಟ್​; ಆರೋಪಿಸಿದ ಮಹಿಳೆಯೇ ನಾಪತ್ತೆ

ಪ್ರೇಮ ಪ್ರಕರಣ ಹೊರ ಬಂದ ಕಾರಣ ಅವಮಾನವಾಗಿ ಬಂದಾಳ ಗ್ರಾಮದ ಮದಿನಾ ಮಸೀದಿ ಪಕ್ಕದ ಬಾವಿಗೆ ಜಯಶ್ರೀ ಹಾರಿದ್ದಾಳೆ. ನಿನ್ನೆ ಸಾಯಂಕಾಲ ಘಟನೆ ನಡೆದಿದ್ದು, ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮನೆ ಮಗಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಡಬಾರದ ಕೃತ್ಯ ಮಾಡಿರುವ ಪಾಗಲ್ ಪ್ರೇಮಿ ಶ್ರೀಶೈಲ್ ಬಡಾನೂರ್ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಘಟನೆ ಸಂಬಂಧ ಸಿಂದಗಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೋಯ್ಡಾ ಗಾರ್ಮೆಂಟ್ಸ್ ಫ್ಯಾಕ್ಟರಿ ಕಾರ್ಮಿಕರಿಂದ ಪ್ರತಿಭಟನೆ, ಗಲಾಟೆ; ಪ್ರತಿಭಟನಾಕಾರರ ಬೇಡಿಕೆಗಳೇನು?

ನವದೆಹಲಿ, ಏಪ್ರಿಲ್ 13: ಇಲ್ಲಿಗೆ ಸಮೀಪದ ನೋಯ್ಡಾದಲ್ಲಿ ಆರಂಭವಾದ ಗಾರ್ಮೆಂಟ್ಸ್ ಫ್ಯಾಕ್ಟರಿ ಕಾರ್ಮಿಕರ ಪ್ರತಿಭಟನೆಯು (garment workers protest) ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಹಿಂಸಾರೂಪ ಪಡೆದಿದೆ. ನೋಯ್ಡಾದ ಸೆಕ್ಟರ್ 60 ಮತ್ತು ಫೇಸ್-2ನಲ್ಲಿ ಕಲ್ಲುತೂರಾಟ, ಗಲಾಟೆ ಇತ್ಯಾದಿ ಹಿಂಸಾಚಾರಗಳು ನಡೆದಿರುವುದು ವರದಿಯಾಗಿದೆ. ಸಾಕಷ್ಟು ಕಡೆ ಆಸ್ತಿಪಾಸ್ತಿ ಹಾನಿಯಾಗಿದೆ, ವಾಹನಗಳನ್ನು ಸುಟ್ಟಿರುವ ಘಟನೆಗಳೂ ಬೆಳಕಿಗ ಬಂದಿವೆ. ಕೈಗಾರಿಕಾ ಸ್ಥಳಗಳಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿ, ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ.

ಗಾರ್ಮೆಂಟ್ಸ್ ಕಾರ್ಮಿಕರ ಗಲಾಟೆಗೆ ಕಾರಣವೇನು?

ಗಾರ್ಮೆಂಟ್ಸ್ ಮತ್ತು ಫ್ಯಾಕ್ಟರಿ ಕಾರ್ಮಿಕರು ಪ್ರಮುಖವಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ವೇತನ ಕೇವಲ 11,000ದಿಂದ 13,000 ರೂ ಇದೆ. ಇದನ್ನು 18,000 – 20,000 ರೂಗೆ ಏರಿಸಬೇಕು ಎಂಬುದು ಇವರ ಪ್ರಮುಖ ಒತ್ತಾಯ.

ಇದನ್ನೂ ಓದಿ: ನವ ಭಾರತದ ನಾಯಕತ್ವ ಈಗ ಮಹಿಳೆಯರ ಕೈಗೆ: ಸರ್ವಪಕ್ಷಗಳ ಸಹಕಾರದೊಂದಿಗೆ ಇತಿಹಾಸ ಬರೆಯಲು ದೇಶ ಸಿದ್ಧ: ಪ್ರಧಾನಿ ಮೋದಿ ಜೈಕಾರ

ಪಕ್ಕದ ಹರ್ಯಾಣದಲ್ಲಿ ಅಲ್ಲಿಯ ಸರ್ಕಾರವು ಗಾರ್ಮೆಂಟ್ಸ್ ಉದ್ಯಮದಲ್ಲಿ ಕನಿಷ್ಠ ವೇತನವನ್ನು ಶೇ. 35ರಷ್ಟು ಹೆಚ್ಚಿಸಿತ್ತು. ದಿನಗೂಲಿಯನ್ನು 580-750 ರೂಗೆ ಏರಿಸಿತ್ತು. ಆದರೆ, ನೋಯ್ಡಾದಲ್ಲಿ ದಿನಗೂಲಿ ಕೇವಲ 350-435 ರೂ ಇದೆ. ಹರ್ಯಾಣ ಸರ್ಕಾರ ತೆಗೆದುಕೊಂಡ ನಿರ್ಧಾರ ರೀತಿಯಲ್ಲೇ ತಮ್ಮ ವೇತನವನ್ನೂ ಏರಿಸಬೇಕೆಂದು ಗಾರ್ಮೆಂಟ್ಸ್ ವರ್ಕರ್ಸ್ ಪ್ರತಿಭಟನೆ ಶುರುವಿಟ್ಟಿದ್ದಾರೆ.

ದಿನದ ಕೆಲಸದ ಅವಧಿ ಏರಿಕೆಗೆ ಆಕ್ರೋಶ

ಕೆಲಸದಲ್ಲಿ ದಿನಕ್ಕೆ 10-12 ಗಂಟೆಯ ಶಿಫ್ಟ್​ನಲ್ಲಿ ಕೆಲಸ ಮಾಡುವಂತೆ ಕಡ್ಡಾಯಪಡಿಸಲಾಗುತ್ತಿದೆ ಎಂದು ಗಾರ್ಮೆಂಟ್ಸ್ ಕಾರ್ಮಿಕರು ಆರೋಪಿಸುತ್ತಿದ್ದಾರೆ. ದಿನಕ್ಕೆ ಎಂಟು ಗಂಟೆಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುವುದಿದ್ದರೆ ಅದಕ್ಕೆ ಸೂಕ್ತ ಪರಿಹಾರ, ಭತ್ಯೆ ಕೊಡಬೇಕು, ಮತ್ತು ಕಾರ್ಮಿಕರ ಸಮ್ಮತಿ ಇರಬೇಕು ಎಂಬುದು ಇವರ ಬೇಡಿಕೆ.

ಇದನ್ನೂ ಓದಿ: ಬಂಗಾಳಿಗಳನ್ನು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ; ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭರವಸೆ

ಬೋನಸ್, ವೀಕಾಫ್ ಇತ್ಯಾದಿ ಇತರ ಸೌಲಭ್ಯಗಳೂ ಬೇಕು

ಗಾರ್ಮೆಂಟ್ಸ್ ಕಾರ್ಮಿಕರಿಗೆ ಬೋನಸ್, ವೀಕಾಫ್ ಇತ್ಯಾದಿ ಸೌಲಭ್ಯಗಳನ್ನು ಕೊಡಬೇಕು. ಸರಿಯಾದ ಸಮಯಕ್ಕೆ ಸಂಬಳ ನೀಡಬೇಕು. ಸ್ಯಾಲರಿ ಸ್ಲಿಪ್​ಗಳನ್ನು ಕೊಡಬೇಕು. ದೂರು ಆಲಿಸುವ ವ್ಯವಸ್ಥೆ ಮಾಡಬೇಕು ಎಂಬುದು ಈ ಪ್ರತಿಭಟನಾಕಾರರ ಇತರ ಕೆಲ ಬೇಡಿಕೆಗಳಾಗಿವೆ.

ನೋಯ್ಡಾ ನಗರದಲ್ಲಿ ಸಾಕಷ್ಟು ಕೈಗಾರಿಕೆಗಳು, ಉದ್ಯಮಗಳು ನೆಲಸಿವೆ. ಇದು ಉತ್ತರಪ್ರದೇಶ ರಾಜ್ಯದ ವ್ಯಾಪ್ತಿಗೆ ಬರುವಂತಹ ಪ್ರದೇಶ. ಉತ್ತರಪ್ರದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುವ ಪ್ರದೇಶವೂ ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಹ್ಲಿ ರೋಸ್ಟ್ ಮಾಡೋಕೆ ಹೇಗೆ ಸಾಧ್ಯ? ಅಸಲಿ ಕಥೆ ಹೇಳಿದ ದಾನಿಶ್ ಸೇಠ್

ನಟ, ಸ್ಟ್ಯಾಂಡಪ್ ಕಾಮಿಡಿಯನ್ ದಾನಿಶ್ ಸೇಠ್ ಅವರ ಪರಿಚಯ ಅನೇಕರಿಗೆ ಇದೆ. ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಚಿತ್ರ ಮಾಡಿ ಗಮನ ಸೆಳೆದ ಅವರು, ನಂತರ ‘ಫ್ರೆಂಚ್ ಬಿರಿಯಾನಿ’ ರೀತಿಯ ಚಿತ್ರಗಳನ್ನು ಮಾಡಿದರು. ಇದರ ಜೊತೆ ಅವರು ‘ಮಿಸ್ಟರ್ ನ್ಯಾಗ್ಸ್’ ಆಗಿ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರ್​​ಸಿಬಿ ಇನ್​​ಸೈಡರ್ ಆಗಿ ಕಾಂಟೆಂಟ್​​ಗಳನ್ನು ಕ್ರಿಯೇಟ್ ಮಾಡುತ್ತಾರೆ. ಮಿಸ್ಟರ್ ನ್ಯಾಗ್ಸ್ ಆಗಿ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ವಿವರ ಇಲ್ಲಿದೆ.

ಈ ಪ್ರಕ್ರಿಯೆಯನ ಎಂಜಾಯ್ ಮಾಡ್ತೀನಿ..

ದಾನಿಶ್ ಅವರು ಪ್ರತಿ ಪಂದ್ಯದ ಬಳಿಕ ಒಂದು ವಿಶೇಷ ವಿಡಿಯೋ ಮಾಡುತ್ತಾರೆ. ಇದಕ್ಕೆ ಸಿದ್ಧತೆ ಹೇಗಿರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ನಾನು ಇದನ್ನು ಮಾಡಲು ಆರಂಭಿಸಿ 13 ವರ್ಷಗಳೇ ಆಗಿವೆ. ಸ್ಕ್ರಿಪ್ಟ್ ಬರೆಯೋದು ಸ್ವಲ್ಪ ಚಾಲೆಂಜ್ ಎನಿಸುತ್ತದೆ. ಜೋಕ್ ಸರಿಯಾಗಿ ಜನರಿಗೆ ರೀಚ್ ಆಗಬೇಕು. ಅಂದಾಗ ಮಾತ್ರ ನಮ್ಮ ಪ್ರಯತ್ನ ಯಶಸ್ಸು ಕಾಣುತ್ತದೆ. ನಾನು ವಿಗ್ ಹಾಗೂ ಮೀಸೆ ಹಾಕಿದಾಗ ನ್ಯಾಗ್ಸ್ ಆಗಿ ಬದಲಾಗಿಬಿಡುತ್ತೇನೆ. ನನ್ನದೇ ಟೀಂ ಇದೆ. ಮ್ಯಾಚ್ ನೋಡಿ ಪಾಯಿಂಟ್ಸ್ ಮಾಡ್ಕೋತೀವಿ. ನಾನು ಈ ಪ್ರಕ್ರಿಯೆಯನ್ನು ತುಂಬಾನೇ ಎಂಜಾಯ್ ಮಾಡ್ತೀನಿ’ ಎಂದಿದ್ದಾರೆ ದಾನಿಶ್.

ಮನರಂಜನೆ ಕೊಡೋದೊಂದೇ ಉದ್ದೇಶ..

ಆರ್​ಸಿಬಿ ಗೆಲ್ಲಲಿ, ಸೋಲಲಿ ನ್ಯಾಗ್ಸ್ ಕಡೆಯಿಂದ ಬರುವ ಕಂಟೆಂಟ್ ಸಖತ್ ಫನ್ ಆಗಿರುತ್ತದೆ. ಇನ್ನು, ಆರ್​​ಸಿಬಿ ಗೆದ್ದು ಬೇರೆ ತಂಡ ಸೋತಾಗಲೂ ದಾನಿಶ್ ಅವರು ಯಾರಿಗೂ ಬೇಸರ ಆಗದಂತೆ ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಈ ಪ್ರಕ್ರಿಯೆ ಬಗ್ಗೆ ಅವರು ವಿವರಣೆ ನೀಡಿದ್ದಾರೆ. ‘ನಾನು ಕಾಮಿಡಿಯನ್ ಆಗಿ ಎಲ್ಲವನ್ನೂ ಭಿನ್ನವಾಗಿ ನೋಡುತ್ತೇನೆ. ಹೀಗಾಗಿ, ಹೊಸ ಆ್ಯಂಗಲ್ ಸಿಗಬಹುದು. ಇನ್ನು ಪ್ರತಿ ಕಂಟೆಂಟ್ ಬರೆಯುವಾಗ ಬೇರೆ ತಂಡಕ್ಕೆ ನೋವಾಗದಂತೆ ಅದನ್ನು ಬರೆಯುತ್ತೇವೆ. ಬೇರೆ ತಂಡದವರು ಏನಾದರೂ ಸಾಧನೆ ಮಾಡಿದರೆ ಅದನ್ನು ಹೊಗಳುವ ಕೆಲಸವನ್ನು ನಾವು ಮಾಡುತ್ತೇವೆ. ವೈಯಕ್ತಿಕ ಟೀಕೆಗಳನ್ನು ಎಂದಿಗೂ ಮಾಡಲ್ಲ’ ಎನ್ನುತ್ತಾರೆ ದಾನಿಶ್. ಪ್ರತಿ ವಿಡಿಯೋ ರೆಡಿ ಆದ ಬಳಿಕ ಅದನ್ನು ಅನೇಕರು ವೀಕ್ಷಿಸುತ್ತಾರಂತೆ. ಹೀಗಾಗಿ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವ ಉದ್ದೇಶ ನಮ್ಮದು ಎನ್ನುತ್ತಾರೆ ಅವರು.

ನಮ್ಮದೇ ಗ್ರೇಟ್ ಎನ್ನಲ್ಲ

ಪ್ರತಿ ಐಪಿಎಲ್ ಫ್ರಾಂಚೈಸಿಗಳು ಸೋಶಿಯಲ್ ಮೀಡಿಯಾ ಹೊಂದಿದ್ದಾರೆ. ಭಿನ್ನ ಕಂಟೆಂಟ್​​ಗಳನ್ನು ನೀಡುತ್ತಾರೆ. ಇವುಗಳಿಗೆ ಹೋಲಿಕೆ ಮಾಡಿದರೆ ಆರ್​​ಸಿಬಿ ಒಂದು ಹಂತ ಮೇಲಿದೆ ಎನಿಸುತ್ತದೆ. ಆದರೆ, ಇದನ್ನು ದಾನಿಶ್ ಒಪ್ಪೋದಿಲ್ಲ. ‘ನಾವು ಫ್ಯಾನ್​ ಎಂಗೇಜ್​​ಮೆಂಟ್​​ಗೋಸ್ಕರ್ ಮಾಡೋದು. ತಂಡದ ಜೊತೆಗೆ ಹಾಗೂ ಅಭಿಮಾನಿಗಳ ನಡುವೆ ನಾವು ಸೇತುವೆ ಆಗುತ್ತೇವೆ ಅಷ್ಟೇ. ಇದು ದೊಡ್ಡ ಜವಾಬ್ದಾರಿ. ಯಾರಿಗೂ ನೋವು ಮಾಡುವ ಉದ್ದೇಶ ಇಲ್ಲ. ನಾನು ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತೇನೆ. ಆ ಜ್ಞಾನವನ್ನು ವಿಡಿಯೋಗಳನ್ನು ಬೆರೆಸುತ್ತೇನೆ’ ಎನ್ನುತ್ತಾರೆ ದಾನಿಶ್.

ನಾನು ದಾನಿಶ್​ ಆಗಲ್ಲ, ನ್ಯಾಗ್ಸ್ ಆಗಿ ಜೋಕ್ ಮಾಡ್ತೀನಿ..

‘ದಾನಿಶ್ ಆಗಿ ನಾನು ಯಾವಾಗಲೂ ಅವರ ಬಳಿ ಈ ರೀತಿ ಜೋಕ್ ಮಾಡಿಲ್ಲ. ನಾನು ಜೋಕ್ ಮಾಡಿದ್ದು ನ್ಯಾಗ್ಸ್ ಆಗಿ. ಬಾಂಡ್ ಬೆಳೆದು 13 ವರ್ಷಗಳು ಕಳೆದಿವೆ. ನಾನು ಜೋಕ್ ಮಾಡಿದ್ರೆ ಅವರಿಗೂ ಇಷ್ಟ ಆಗುತ್ತೆ, ಜನರಿಗೂ ಇಷ್ಟ ಆಗುತ್ತೆ. ಅವರು ಬ್ಯಾಟ್ ಹಿಡಿದು ಮಾತ್ರ ಚಾಂಪಿಯನ್ ಅಲ್ಲ, ಜೀವನದಲ್ಲೂ ಚಾಂಪಿಯನ್. ನಾನು ಕಾಮಿಡಿ ಮಾಡಿದಾಗ ನನ್ನ ಬಳಿ ಯಾಕೆ ಹೀಗೆ ಮಾತಾಡ್ತೀರಿ ಎಂದು ಕೇಳುವ ಅವಕಾಶ ಅವರಿಗೆ ಇತ್ತು. ಅವರು ಎಂದಿಗೂ ಹಾಗೆ ಮಾಡಿಲ್ಲ. ಅವರು ರಿಯಲ್ ಚಾಂಪಿಯನ್. ಅವರಿಂದ ಕಲಿಯೋದು ತುಂಬಾನೇ ಇದೆ’ ಎನ್ನುತ್ತಾರೆ ದಾನಿಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಹಣಕ್ಕಾಗಿ ಸೀನಿಯರ್​​ ವಿದ್ಯಾರ್ಥಿಗಳಿಂದ ಜೂನಿಯರ್​​ನ​​ ಕಿಡ್ನ್ಯಾಪ್​​: 50 ಸಾವಿರಕ್ಕೆ ಡಿಮ್ಯಾಂಡ್​​; ನಾಲ್ವರು ಅರೆಸ್ಟ್​

ಬೆಂಗಳೂರು, ಏಪ್ರಿಲ್​​ 13: ಹಣಕ್ಕಾಗಿ ಜೂನಿಯರ್​​ ವಿದ್ಯಾರ್ಥಿಯೋರ್ವನನ್ನು ಸಿನೀಯರ್​​ಗಳು ಅಪಹರಣ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಪ್ರಕರಣ ಸಂಬಂಧ ಪ್ರಸಿದ್ಧ ಮ್ಯಾನೇಜ್ಮೆಂಟ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ವಿದ್ಯಾರ್ಥಿಯನ್ನು ಘಟನೆ ನಡೆದು ಐದು ಗಂಟೆಗಳ ಒಳಗಾಗಿಯೇ ಪೊಲೀಸರು ರಕ್ಷಿಸಿದ್ದು, ಪ್ರಕಣ ಸಂಬಂಧ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿಯನ್ನು ಒಡಿಶಾ ಮೂಲದ 19 ವರ್ಷದ ರಿಷಭ್ ಮೊಹಂತಿ ಎಂದು ಗುರುತಿಸಲಾಗಿದೆ. ಇನ್ನು ಕೇರಳದ ಶೌರ್ಯ, ಜಯನಗರದ ಸಯ್ಯದ್ ಬಿಲಾಲ್, ಬಿಹಾರದ ನಿಕುಂಜ್ ಹಾಗೂ ಮಹಾರಾಷ್ಟ್ರದ ಅದಿತಾ ರಾಕ್ಸಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರ ಪೈಕಿ ಮೂವರು ಮತ್ತು ಸಂತ್ರಸ್ತ ವಿದ್ಯಾರ್ಥಿ ಬಿಟಿಎಂ ಲೇಔಟ್ 1ನೇ ಹಂತದಲ್ಲಿರುವ ಒಂದೇ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು ಎಂಬುದು ತಿಳಿದುಬಂದಿದೆ.

ರಿಷಭ್ ಮೊಹಂತಿ ತಮ್ಮಿಂದ ಹಣ ಸಾಲ ಪಡೆದಿದ್ದ. ಆದರೆ ಅದನ್ನು ಹಿಂದಿರುಗಿಸದ ಕಾರಣ ಆತನನ್ನು ಕಾರಲ್ಲಿ ಕರೆದುಕೊಂಡು ಹೋಗಿದ್ದೇವೆ ಎಂದು ಆರೋಪಿಗಳು ವಿಚಾರಣೆವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ರಿಷಭ್ ಈ ಆರೋಪಗಳನ್ನು ಅಲ್ಲಗಳೆದಿದ್ದು, ಯಾವುದೇ ಹಣವನ್ನು ಯಾರಿಂದಲೂ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ರಿಷಭ್‌ನ ಅಪಹರಿಸಿದ ಬಳಿಕ ಆರೋಪಿಗಳು 50,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ದುಡ್ಡು ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ರಿಷಭ್​​ ಸ್ನೇಹಿತನಿಗೆ ಕರೆ ಮಾಡಿ ಹಣದ ವ್ಯವಸ್ಥೆ ಮಾಡಲು ಕೇಳಿದ್ದ. ಮತ್ತೊಂದೆಡೆ ಅಪಹರಣ ನಡೆದ ಬಳಿಕ ರಿಷಭ್​​ ಸ್ನೇಹಿತನೋರ್ವ112ಕ್ಕೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳು ಅಪಹರಣಕ್ಕೆ ಬಳಸಿದ್ದ ಕಾರಿನ ನೋಂದಣಿ ವಿವರಗಳನ್ನು ನೀಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ! ತವರಿನಿಂದ ಪತ್ನಿ ಕರೆದೊಯ್ಯುವಾಗ ಅಡ್ಡ ಬಂದಿದ್ದಕ್ಕೆ ಭೀಕರವಾಗಿ ಕೊಂದ ವ್ಯಕ್ತಿ

ಮಾಹಿತಿ ಆಧಾರದಲ್ಲಿ ರಿಷಭ್​​ ಮತ್ತು ಆರೋಪಿಗಳ ಮೊಬೈಲ್​​ ಸಂಖ್ಯೆ ಪಡೆದಿದ್ದ ಪೊಲೀಸರು, ಟವರ್ ಲೊಕೇಶನ್ ಆಧರಿಸಿ ಎಲ್ಲರನ್ನು ಪತ್ತೆಹಚ್ಚಿದ್ದಾರೆ. ನಂತರ ಜಯನಗರದಲ್ಲಿರುವ ಮನೆಯಿಂದ ರಿಷಭ್​​ನ ರಕ್ಷಿಸಲಾಗಿದೆ. ಆರೋಪಿಗಳು ಮನೆಯಲ್ಲಿ ಜೂನಿಯರ್​​ ವಿದ್ಯಾರ್ಥಿಯನ್ನು ಬಂಧಿಸಿಟ್ಟು, ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಹಣಕ್ಕಾಗಿ ಸ್ನೇಹಿತರಿಗೆ ಕರೆ ಮಾಡಲು ಪೀಡಿಸಿದ್ದರು. ಆದರೆ ಆರೋಪಿಗಳು ಅವನಿಗೆ ಯಾವುದೇ ರೀತಿಯ ದೈಹಿಕ ಹಾನಿ ಮಾಡಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ: 55% ಬಂದರೂ ಮಗನನ್ನು ಅಪ್ಪಿ ಮುದ್ದಾಡಿದ ತಾಯಿ!

ಪರೀಕ್ಷೆಯ ಫಲಿತಾಂಶ ಬಂದಾಗ ಅಂಕಗಳಿಗಾಗಿ ಮಕ್ಕಳನ್ನು ಹಂಗಿಸುವ, ಪಕ್ಕದ ಮನೆಯವರ ಮಕ್ಕಳೊಂದಿಗೆ ಹೋಲಿಕೆ ಮಾಡುವ ಪೋಷಕರ ನಡುವೆ, ಈ ತಾಯಿ ವಿಭಿನ್ನವಾಗಿ ನಿಲ್ಲುತ್ತಾರೆ. ತನ್ನ ಮಗ ಕೇವಲ 55% ಅಂಕ ಗಳಿಸಿದ್ದರೂ, ಆತ ಪಾಸಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ ಆಕೆ ತೋರಿದ ಸಂಭ್ರಮ ಈಗ ಇಂಟರ್ನೆಟ್‌ನಲ್ಲಿ ಕೋಟ್ಯಂತರ ಜನರ ಮನ ಗೆದ್ದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ (ಅಥವಾ ವರದಿಯಲ್ಲಿ), ಮಗ ಫಲಿತಾಂಶ ಹಿಡಿದು ಮನೆಗೆ ಬಂದಾಗ ತಾಯಿ ಮೊದಲು ಕೇಳಿದ್ದು “ಪಾಸಾದೆಯಾ?” ಎಂದು ಮಾತ್ರ. ಮಗ “ಹೌದು” ಎಂದು ಹೇಳುತ್ತಿದ್ದಂತೆಯೇ, ಆಕೆ ಆತನ ಅಂಕಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಮಗನನ್ನು ಬಿಗಿದಪ್ಪಿ ಮುದ್ದಾಡಿದ್ದಾರೆ. 55% ಎನ್ನುವುದು ಇಂದಿನ ಕಟ್-ಆಫ್ ಕಾಲದಲ್ಲಿ ಕಡಿಮೆಯಾಗಿ ಕಾಣಬಹುದು, ಆದರೆ ಆ ತಾಯಿಗೆ ತನ್ನ ಮಗನ ಶ್ರಮ ಮತ್ತು ಆತನ ಮುಖದ ಮೇಲಿನ ನಗು ಅಂಕಗಳಿಗಿಂತಲೂ ದೊಡ್ಡದಾಗಿ ಕಂಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಈ ತಾಯಿಯ ದೃಷ್ಟಿಕೋನಕ್ಕೆ ಫಿದಾ ಆಗಿದ್ದಾರೆ. “ಪ್ರತಿ ಮನೆಗೂ ಇಂತಹ ಪೋಷಕರು ಬೇಕು”, “ಅಂಕಗಳು ಜೀವನವನ್ನು ನಿರ್ಧರಿಸುವುದಿಲ್ಲ, ಪ್ರೀತಿ ಮತ್ತು ಬೆಂಬಲ ಮುಖ್ಯ” ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಅತಿಯಾದ ಅಂಕಗಳ ಒತ್ತಡ ಹೇರುವ ಇಂದಿನ ಶೈಕ್ಷಣಿಕ ವ್ಯವಸ್ಥೆಗೆ ಈ ಘಟನೆ ಒಂದು ಕನ್ನಡಿ ಹಿಡಿದಂತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ! ತೀವ್ರ ಸ್ವರೂಪ ಪಡೆದುಕೊಂಡ ಲೆಕ್ಕ ಕೊಡಿ ಅಭಿಯಾನ

ದಾವಣಗೆರೆ, ಏಪ್ರಿಲ್ 13: ಹರಿಹರ ಪಂಚಮಸಾಲಿ ಪೀಠದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಲೆಕ್ಕ ಕೊಡಿ ಅಭಿಯಾನ ತೀವ್ರ ಸ್ವರೂಪ ಪಡೆದಿದೆ. ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿದೆ. ಹೀಗಾಗಿ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೀಠದ ಆಡಳಿತ ಮತ್ತು ನಡೆಯ ಬಗ್ಗೆ ಲೆಕ್ಕಪತ್ರ ನೀಡುವಂತೆ ಭಕ್ತರು ಆಗ್ರಹಿಸಿದ್ದಾರೆ.

ಮಾಜಿ ಶಾಸಕರಾದ ಹೆಚ್​.ಎಸ್.ಶಿವಶಂಕರ, ಅರುಣಕಮಾರ್, ಹೂವಿನ ಹಡಗಲಿಯ ಹಾಲಪ್ಪ ಸೇರಿ ಪ್ರಮುಖರಿಂದ ಪ್ರತಿಭಟನೆ ನಡೆದಿದ್ದು, ಪೀಠದ ಆಡಳಿತದಲ್ಲಿ ಪಾರದರ್ಶಕತೆಯ ಕೊರತೆಯನ್ನು ಎತ್ತಿ ಹಿಡಿದಿದೆ. ಈ ವೇಳೆ ತಹಶೀಲ್ದಾರ್ ಸಂತೋಷ್ ಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭಕ್ತರನ್ನು ಮಠದ ಗೇಟ್ ಬಳಿಯೇ ತಡೆದಿದ್ದಾರೆ. ಅಲ್ಲದೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version