ಬೆಂಗಳೂರು, ಏಪ್ರಿಲ್ 13: ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಪ್ರಕರಣವು ಇದೀಗ ಮಹತ್ವದ ತಿರುವನ್ನು ಪಡೆದುಕೊಂಡಿದೆ. ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದ ಮಹಿಳೆಯು ಇದೀಗ ಯು-ಟರ್ನ್ ಹೊಡೆದಿದ್ದಾರೆ. ವಿಡಿಯೋ ರಿಲೀಸ್ ಮಾಡಿರುವ ಅವರು, ತಾನು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಲ್ಲ, ತನ್ನ ಮತ್ತು ಸ್ವಾಮೀಜಿ ನಡುವೆ ಗುರು-ಭಕ್ತಿಯ ಸಂಬಂಧವಿದೆ ಎಂದು ವಿಡಿಯೊ ಮೂಲಕ ಸ್ಪಷ್ಟಪಡಿಸಿದ್ದಾರೆ. ನನ್ನ ಹೆಸರಿನಲ್ಲಿ ಯಾರೋ ದೂರು ದಾಖಲಿಸಿದ್ದಾರೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅಲ್ಲದೆ ಏಪ್ರಿಲ್ 6ರಂದು ದೂರು ನೀಡಿರುವುದು ಯಾರು ಅಂತಾ ಗೊತ್ತಿಲ್ಲ. ಅದೊಂದು ಸುಳ್ಳು ದೂರು, ಆ ದೂರನ್ನು ಯಾರೂ ನಂಬಬೇಡಿ. ನಾನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಲ್ಕು ದಿನಗಳ ಬಳಿಕ ಬಂದು ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ವಿಜಯಪುರ, ಏಪ್ರಿಲ್ 13: ಹದಿಹರೆಯದ ಪ್ರೇಮ ಪ್ರಕರಣಗಳು ಕೆಲವೊಮ್ಮೆ ಜೀವಕ್ಕೇ ಕಂಟಕವಾಗಿಬಿಡುತ್ತವೆ. ಪ್ರೀತಿಸಿದ ಹುಡುಗ ಅಥವಾ ಹುಡುಗಿ ಸಿಗದ ಕಾರಣಕ್ಕೆ ಮನನೊಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದುಕೊಂಡು ಬಲಿಯಾದವರ ಸಂಖ್ಯೆ ದೊಡ್ಡದ್ದೇ ಇದೆ. ಆದರೆ ವಿಜಯಪುರದಲ್ಲಿ ಇದಕ್ಕೆ ತುಸು ಭಿನ್ನವೆಂಬಂತಹ ಪ್ರಕರಣವೊಂದು ನಡೆದಿದೆ. ತಾನು ಪ್ರೀತಿಸಿದ್ದ ಯುವತಿಗೆ ಮತ್ತೊಬ್ಬನ ಜೊತೆ ವಿವಾಹ ನಿಶ್ಚಯವಾಗಿದ್ದಕ್ಕೆ ರೊಚ್ಚಿಗೆದ್ದ ಯುವಕ ಮಾಡಿದ ಕೆಲಸ, ಮದುವೆಯ ಕನಸು ಕಂಡಿದ್ದ ಯುವತಿಯ ಪ್ರಾಣವನ್ನೇ ತೆಗೆದಿದೆ.
ಹೌದು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ 22 ವರ್ಷದ ಯುವತಿ ಜಯಶ್ರೀ ಬಿರಾದಾರ್ಗೆ ಮದುವೆ ಮಾಡಲು ಮುಂದಾಗಿದ್ದ ಕುಟುಂಬಸ್ಥರು, ಈ ಸಂಬಂಧ ನಿಶ್ಚಿತಾರ್ಥವನ್ನೂ ನಡೆಸಿದ್ದರು. ಆದರೆ ಜಯಶ್ರೀ ಈ ಮೊದಲು ಶ್ರೀಶೈಲ್ ಬಡಾನೂರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಈಕೆಯ ವಿವಾಹದ ವಿಷಯ ತಿಳಿದ ಆತ ವ್ಯತಿರಿಕ್ತವಾಗಿ ವರ್ತಿಸಿದ್ದಾನೆ. ಜಯಶ್ರೀ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕುಟುಂಬಸ್ಥರಿಗೆ ಆಕೆ ತನ್ನ ಜೊತೆಗಿರುವ ಫೋಟೋಗಳನ್ನು ಶ್ರೀಶೈಲ್ ಕಳುಹಿಸಿದ್ದಾನೆ. ಅವನ್ನು ನೋಡಿರುವ ಯುವಕನ ಕಡೆಯವರು ಏಪ್ರಿಲ್ 27ರಂದು ನಿಗದಿಯಾಗಿದ್ದ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಘಟನೆಯಿಂದ ತೀವ್ರವಾಗಿ ನೊಂದ ಜಯಶ್ರೀ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರೇಮ ಪ್ರಕರಣ ಹೊರ ಬಂದ ಕಾರಣ ಅವಮಾನವಾಗಿ ಬಂದಾಳ ಗ್ರಾಮದ ಮದಿನಾ ಮಸೀದಿ ಪಕ್ಕದ ಬಾವಿಗೆ ಜಯಶ್ರೀ ಹಾರಿದ್ದಾಳೆ. ನಿನ್ನೆ ಸಾಯಂಕಾಲ ಘಟನೆ ನಡೆದಿದ್ದು, ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮನೆ ಮಗಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಡಬಾರದ ಕೃತ್ಯ ಮಾಡಿರುವ ಪಾಗಲ್ ಪ್ರೇಮಿ ಶ್ರೀಶೈಲ್ ಬಡಾನೂರ್ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಘಟನೆ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನವದೆಹಲಿ, ಏಪ್ರಿಲ್ 13: ಇಲ್ಲಿಗೆ ಸಮೀಪದ ನೋಯ್ಡಾದಲ್ಲಿ ಆರಂಭವಾದ ಗಾರ್ಮೆಂಟ್ಸ್ ಫ್ಯಾಕ್ಟರಿ ಕಾರ್ಮಿಕರ ಪ್ರತಿಭಟನೆಯು (garment workers protest) ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಹಿಂಸಾರೂಪ ಪಡೆದಿದೆ. ನೋಯ್ಡಾದ ಸೆಕ್ಟರ್ 60 ಮತ್ತು ಫೇಸ್-2ನಲ್ಲಿ ಕಲ್ಲುತೂರಾಟ, ಗಲಾಟೆ ಇತ್ಯಾದಿ ಹಿಂಸಾಚಾರಗಳು ನಡೆದಿರುವುದು ವರದಿಯಾಗಿದೆ. ಸಾಕಷ್ಟು ಕಡೆ ಆಸ್ತಿಪಾಸ್ತಿ ಹಾನಿಯಾಗಿದೆ, ವಾಹನಗಳನ್ನು ಸುಟ್ಟಿರುವ ಘಟನೆಗಳೂ ಬೆಳಕಿಗ ಬಂದಿವೆ. ಕೈಗಾರಿಕಾ ಸ್ಥಳಗಳಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿ, ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ.
ಗಾರ್ಮೆಂಟ್ಸ್ ಕಾರ್ಮಿಕರ ಗಲಾಟೆಗೆ ಕಾರಣವೇನು?
ಗಾರ್ಮೆಂಟ್ಸ್ ಮತ್ತು ಫ್ಯಾಕ್ಟರಿ ಕಾರ್ಮಿಕರು ಪ್ರಮುಖವಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ವೇತನ ಕೇವಲ 11,000ದಿಂದ 13,000 ರೂ ಇದೆ. ಇದನ್ನು 18,000 – 20,000 ರೂಗೆ ಏರಿಸಬೇಕು ಎಂಬುದು ಇವರ ಪ್ರಮುಖ ಒತ್ತಾಯ.
ಪಕ್ಕದ ಹರ್ಯಾಣದಲ್ಲಿ ಅಲ್ಲಿಯ ಸರ್ಕಾರವು ಗಾರ್ಮೆಂಟ್ಸ್ ಉದ್ಯಮದಲ್ಲಿ ಕನಿಷ್ಠ ವೇತನವನ್ನು ಶೇ. 35ರಷ್ಟು ಹೆಚ್ಚಿಸಿತ್ತು. ದಿನಗೂಲಿಯನ್ನು 580-750 ರೂಗೆ ಏರಿಸಿತ್ತು. ಆದರೆ, ನೋಯ್ಡಾದಲ್ಲಿ ದಿನಗೂಲಿ ಕೇವಲ 350-435 ರೂ ಇದೆ. ಹರ್ಯಾಣ ಸರ್ಕಾರ ತೆಗೆದುಕೊಂಡ ನಿರ್ಧಾರ ರೀತಿಯಲ್ಲೇ ತಮ್ಮ ವೇತನವನ್ನೂ ಏರಿಸಬೇಕೆಂದು ಗಾರ್ಮೆಂಟ್ಸ್ ವರ್ಕರ್ಸ್ ಪ್ರತಿಭಟನೆ ಶುರುವಿಟ್ಟಿದ್ದಾರೆ.
ದಿನದ ಕೆಲಸದ ಅವಧಿ ಏರಿಕೆಗೆ ಆಕ್ರೋಶ
ಕೆಲಸದಲ್ಲಿ ದಿನಕ್ಕೆ 10-12 ಗಂಟೆಯ ಶಿಫ್ಟ್ನಲ್ಲಿ ಕೆಲಸ ಮಾಡುವಂತೆ ಕಡ್ಡಾಯಪಡಿಸಲಾಗುತ್ತಿದೆ ಎಂದು ಗಾರ್ಮೆಂಟ್ಸ್ ಕಾರ್ಮಿಕರು ಆರೋಪಿಸುತ್ತಿದ್ದಾರೆ. ದಿನಕ್ಕೆ ಎಂಟು ಗಂಟೆಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುವುದಿದ್ದರೆ ಅದಕ್ಕೆ ಸೂಕ್ತ ಪರಿಹಾರ, ಭತ್ಯೆ ಕೊಡಬೇಕು, ಮತ್ತು ಕಾರ್ಮಿಕರ ಸಮ್ಮತಿ ಇರಬೇಕು ಎಂಬುದು ಇವರ ಬೇಡಿಕೆ.
ಗಾರ್ಮೆಂಟ್ಸ್ ಕಾರ್ಮಿಕರಿಗೆ ಬೋನಸ್, ವೀಕಾಫ್ ಇತ್ಯಾದಿ ಸೌಲಭ್ಯಗಳನ್ನು ಕೊಡಬೇಕು. ಸರಿಯಾದ ಸಮಯಕ್ಕೆ ಸಂಬಳ ನೀಡಬೇಕು. ಸ್ಯಾಲರಿ ಸ್ಲಿಪ್ಗಳನ್ನು ಕೊಡಬೇಕು. ದೂರು ಆಲಿಸುವ ವ್ಯವಸ್ಥೆ ಮಾಡಬೇಕು ಎಂಬುದು ಈ ಪ್ರತಿಭಟನಾಕಾರರ ಇತರ ಕೆಲ ಬೇಡಿಕೆಗಳಾಗಿವೆ.
ನೋಯ್ಡಾ ನಗರದಲ್ಲಿ ಸಾಕಷ್ಟು ಕೈಗಾರಿಕೆಗಳು, ಉದ್ಯಮಗಳು ನೆಲಸಿವೆ. ಇದು ಉತ್ತರಪ್ರದೇಶ ರಾಜ್ಯದ ವ್ಯಾಪ್ತಿಗೆ ಬರುವಂತಹ ಪ್ರದೇಶ. ಉತ್ತರಪ್ರದೇಶದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುವ ಪ್ರದೇಶವೂ ಹೌದು.
ನಟ, ಸ್ಟ್ಯಾಂಡಪ್ ಕಾಮಿಡಿಯನ್ ದಾನಿಶ್ ಸೇಠ್ ಅವರ ಪರಿಚಯ ಅನೇಕರಿಗೆ ಇದೆ. ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಚಿತ್ರ ಮಾಡಿ ಗಮನ ಸೆಳೆದ ಅವರು, ನಂತರ ‘ಫ್ರೆಂಚ್ ಬಿರಿಯಾನಿ’ ರೀತಿಯ ಚಿತ್ರಗಳನ್ನು ಮಾಡಿದರು. ಇದರ ಜೊತೆ ಅವರು ‘ಮಿಸ್ಟರ್ ನ್ಯಾಗ್ಸ್’ ಆಗಿ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರ್ಸಿಬಿ ಇನ್ಸೈಡರ್ ಆಗಿ ಕಾಂಟೆಂಟ್ಗಳನ್ನು ಕ್ರಿಯೇಟ್ ಮಾಡುತ್ತಾರೆ. ಮಿಸ್ಟರ್ ನ್ಯಾಗ್ಸ್ ಆಗಿ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ವಿವರ ಇಲ್ಲಿದೆ.
ಈ ಪ್ರಕ್ರಿಯೆಯನ ಎಂಜಾಯ್ ಮಾಡ್ತೀನಿ..
ದಾನಿಶ್ ಅವರು ಪ್ರತಿ ಪಂದ್ಯದ ಬಳಿಕ ಒಂದು ವಿಶೇಷ ವಿಡಿಯೋ ಮಾಡುತ್ತಾರೆ. ಇದಕ್ಕೆ ಸಿದ್ಧತೆ ಹೇಗಿರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ನಾನು ಇದನ್ನು ಮಾಡಲು ಆರಂಭಿಸಿ 13 ವರ್ಷಗಳೇ ಆಗಿವೆ. ಸ್ಕ್ರಿಪ್ಟ್ ಬರೆಯೋದು ಸ್ವಲ್ಪ ಚಾಲೆಂಜ್ ಎನಿಸುತ್ತದೆ. ಜೋಕ್ ಸರಿಯಾಗಿ ಜನರಿಗೆ ರೀಚ್ ಆಗಬೇಕು. ಅಂದಾಗ ಮಾತ್ರ ನಮ್ಮ ಪ್ರಯತ್ನ ಯಶಸ್ಸು ಕಾಣುತ್ತದೆ. ನಾನು ವಿಗ್ ಹಾಗೂ ಮೀಸೆ ಹಾಕಿದಾಗ ನ್ಯಾಗ್ಸ್ ಆಗಿ ಬದಲಾಗಿಬಿಡುತ್ತೇನೆ. ನನ್ನದೇ ಟೀಂ ಇದೆ. ಮ್ಯಾಚ್ ನೋಡಿ ಪಾಯಿಂಟ್ಸ್ ಮಾಡ್ಕೋತೀವಿ. ನಾನು ಈ ಪ್ರಕ್ರಿಯೆಯನ್ನು ತುಂಬಾನೇ ಎಂಜಾಯ್ ಮಾಡ್ತೀನಿ’ ಎಂದಿದ್ದಾರೆ ದಾನಿಶ್.
ಮನರಂಜನೆ ಕೊಡೋದೊಂದೇ ಉದ್ದೇಶ..
ಆರ್ಸಿಬಿ ಗೆಲ್ಲಲಿ, ಸೋಲಲಿ ನ್ಯಾಗ್ಸ್ ಕಡೆಯಿಂದ ಬರುವ ಕಂಟೆಂಟ್ ಸಖತ್ ಫನ್ ಆಗಿರುತ್ತದೆ. ಇನ್ನು, ಆರ್ಸಿಬಿ ಗೆದ್ದು ಬೇರೆ ತಂಡ ಸೋತಾಗಲೂ ದಾನಿಶ್ ಅವರು ಯಾರಿಗೂ ಬೇಸರ ಆಗದಂತೆ ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಈ ಪ್ರಕ್ರಿಯೆ ಬಗ್ಗೆ ಅವರು ವಿವರಣೆ ನೀಡಿದ್ದಾರೆ. ‘ನಾನು ಕಾಮಿಡಿಯನ್ ಆಗಿ ಎಲ್ಲವನ್ನೂ ಭಿನ್ನವಾಗಿ ನೋಡುತ್ತೇನೆ. ಹೀಗಾಗಿ, ಹೊಸ ಆ್ಯಂಗಲ್ ಸಿಗಬಹುದು. ಇನ್ನು ಪ್ರತಿ ಕಂಟೆಂಟ್ ಬರೆಯುವಾಗ ಬೇರೆ ತಂಡಕ್ಕೆ ನೋವಾಗದಂತೆ ಅದನ್ನು ಬರೆಯುತ್ತೇವೆ. ಬೇರೆ ತಂಡದವರು ಏನಾದರೂ ಸಾಧನೆ ಮಾಡಿದರೆ ಅದನ್ನು ಹೊಗಳುವ ಕೆಲಸವನ್ನು ನಾವು ಮಾಡುತ್ತೇವೆ. ವೈಯಕ್ತಿಕ ಟೀಕೆಗಳನ್ನು ಎಂದಿಗೂ ಮಾಡಲ್ಲ’ ಎನ್ನುತ್ತಾರೆ ದಾನಿಶ್. ಪ್ರತಿ ವಿಡಿಯೋ ರೆಡಿ ಆದ ಬಳಿಕ ಅದನ್ನು ಅನೇಕರು ವೀಕ್ಷಿಸುತ್ತಾರಂತೆ. ಹೀಗಾಗಿ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವ ಉದ್ದೇಶ ನಮ್ಮದು ಎನ್ನುತ್ತಾರೆ ಅವರು.
ನಮ್ಮದೇ ಗ್ರೇಟ್ ಎನ್ನಲ್ಲ
ಪ್ರತಿ ಐಪಿಎಲ್ ಫ್ರಾಂಚೈಸಿಗಳು ಸೋಶಿಯಲ್ ಮೀಡಿಯಾ ಹೊಂದಿದ್ದಾರೆ. ಭಿನ್ನ ಕಂಟೆಂಟ್ಗಳನ್ನು ನೀಡುತ್ತಾರೆ. ಇವುಗಳಿಗೆ ಹೋಲಿಕೆ ಮಾಡಿದರೆ ಆರ್ಸಿಬಿ ಒಂದು ಹಂತ ಮೇಲಿದೆ ಎನಿಸುತ್ತದೆ. ಆದರೆ, ಇದನ್ನು ದಾನಿಶ್ ಒಪ್ಪೋದಿಲ್ಲ. ‘ನಾವು ಫ್ಯಾನ್ ಎಂಗೇಜ್ಮೆಂಟ್ಗೋಸ್ಕರ್ ಮಾಡೋದು. ತಂಡದ ಜೊತೆಗೆ ಹಾಗೂ ಅಭಿಮಾನಿಗಳ ನಡುವೆ ನಾವು ಸೇತುವೆ ಆಗುತ್ತೇವೆ ಅಷ್ಟೇ. ಇದು ದೊಡ್ಡ ಜವಾಬ್ದಾರಿ. ಯಾರಿಗೂ ನೋವು ಮಾಡುವ ಉದ್ದೇಶ ಇಲ್ಲ. ನಾನು ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತೇನೆ. ಆ ಜ್ಞಾನವನ್ನು ವಿಡಿಯೋಗಳನ್ನು ಬೆರೆಸುತ್ತೇನೆ’ ಎನ್ನುತ್ತಾರೆ ದಾನಿಶ್.
ನಾನು ದಾನಿಶ್ ಆಗಲ್ಲ, ನ್ಯಾಗ್ಸ್ ಆಗಿ ಜೋಕ್ ಮಾಡ್ತೀನಿ..
‘ದಾನಿಶ್ ಆಗಿ ನಾನು ಯಾವಾಗಲೂ ಅವರ ಬಳಿ ಈ ರೀತಿ ಜೋಕ್ ಮಾಡಿಲ್ಲ. ನಾನು ಜೋಕ್ ಮಾಡಿದ್ದು ನ್ಯಾಗ್ಸ್ ಆಗಿ. ಬಾಂಡ್ ಬೆಳೆದು 13 ವರ್ಷಗಳು ಕಳೆದಿವೆ. ನಾನು ಜೋಕ್ ಮಾಡಿದ್ರೆ ಅವರಿಗೂ ಇಷ್ಟ ಆಗುತ್ತೆ, ಜನರಿಗೂ ಇಷ್ಟ ಆಗುತ್ತೆ. ಅವರು ಬ್ಯಾಟ್ ಹಿಡಿದು ಮಾತ್ರ ಚಾಂಪಿಯನ್ ಅಲ್ಲ, ಜೀವನದಲ್ಲೂ ಚಾಂಪಿಯನ್. ನಾನು ಕಾಮಿಡಿ ಮಾಡಿದಾಗ ನನ್ನ ಬಳಿ ಯಾಕೆ ಹೀಗೆ ಮಾತಾಡ್ತೀರಿ ಎಂದು ಕೇಳುವ ಅವಕಾಶ ಅವರಿಗೆ ಇತ್ತು. ಅವರು ಎಂದಿಗೂ ಹಾಗೆ ಮಾಡಿಲ್ಲ. ಅವರು ರಿಯಲ್ ಚಾಂಪಿಯನ್. ಅವರಿಂದ ಕಲಿಯೋದು ತುಂಬಾನೇ ಇದೆ’ ಎನ್ನುತ್ತಾರೆ ದಾನಿಶ್.
ಬೆಂಗಳೂರು, ಏಪ್ರಿಲ್ 13: ಹಣಕ್ಕಾಗಿ ಜೂನಿಯರ್ ವಿದ್ಯಾರ್ಥಿಯೋರ್ವನನ್ನು ಸಿನೀಯರ್ಗಳು ಅಪಹರಣ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಪ್ರಕರಣ ಸಂಬಂಧ ಪ್ರಸಿದ್ಧ ಮ್ಯಾನೇಜ್ಮೆಂಟ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾಗಿದ್ದ ವಿದ್ಯಾರ್ಥಿಯನ್ನು ಘಟನೆ ನಡೆದು ಐದು ಗಂಟೆಗಳ ಒಳಗಾಗಿಯೇ ಪೊಲೀಸರು ರಕ್ಷಿಸಿದ್ದು, ಪ್ರಕಣ ಸಂಬಂಧ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿಯನ್ನು ಒಡಿಶಾ ಮೂಲದ 19 ವರ್ಷದ ರಿಷಭ್ ಮೊಹಂತಿ ಎಂದು ಗುರುತಿಸಲಾಗಿದೆ. ಇನ್ನು ಕೇರಳದ ಶೌರ್ಯ, ಜಯನಗರದ ಸಯ್ಯದ್ ಬಿಲಾಲ್, ಬಿಹಾರದ ನಿಕುಂಜ್ ಹಾಗೂ ಮಹಾರಾಷ್ಟ್ರದ ಅದಿತಾ ರಾಕ್ಸಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರ ಪೈಕಿ ಮೂವರು ಮತ್ತು ಸಂತ್ರಸ್ತ ವಿದ್ಯಾರ್ಥಿ ಬಿಟಿಎಂ ಲೇಔಟ್ 1ನೇ ಹಂತದಲ್ಲಿರುವ ಒಂದೇ ಹಾಸ್ಟೆಲ್ನಲ್ಲಿ ವಾಸವಾಗಿದ್ದರು ಎಂಬುದು ತಿಳಿದುಬಂದಿದೆ.
ರಿಷಭ್ ಮೊಹಂತಿ ತಮ್ಮಿಂದ ಹಣ ಸಾಲ ಪಡೆದಿದ್ದ. ಆದರೆ ಅದನ್ನು ಹಿಂದಿರುಗಿಸದ ಕಾರಣ ಆತನನ್ನು ಕಾರಲ್ಲಿ ಕರೆದುಕೊಂಡು ಹೋಗಿದ್ದೇವೆ ಎಂದು ಆರೋಪಿಗಳು ವಿಚಾರಣೆವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ರಿಷಭ್ ಈ ಆರೋಪಗಳನ್ನು ಅಲ್ಲಗಳೆದಿದ್ದು, ಯಾವುದೇ ಹಣವನ್ನು ಯಾರಿಂದಲೂ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ರಿಷಭ್ನ ಅಪಹರಿಸಿದ ಬಳಿಕ ಆರೋಪಿಗಳು 50,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ದುಡ್ಡು ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ರಿಷಭ್ ಸ್ನೇಹಿತನಿಗೆ ಕರೆ ಮಾಡಿ ಹಣದ ವ್ಯವಸ್ಥೆ ಮಾಡಲು ಕೇಳಿದ್ದ. ಮತ್ತೊಂದೆಡೆ ಅಪಹರಣ ನಡೆದ ಬಳಿಕ ರಿಷಭ್ ಸ್ನೇಹಿತನೋರ್ವ112ಕ್ಕೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳು ಅಪಹರಣಕ್ಕೆ ಬಳಸಿದ್ದ ಕಾರಿನ ನೋಂದಣಿ ವಿವರಗಳನ್ನು ನೀಡಿದ್ದ ಎನ್ನಲಾಗಿದೆ.
ಮಾಹಿತಿ ಆಧಾರದಲ್ಲಿ ರಿಷಭ್ ಮತ್ತು ಆರೋಪಿಗಳ ಮೊಬೈಲ್ ಸಂಖ್ಯೆ ಪಡೆದಿದ್ದ ಪೊಲೀಸರು, ಟವರ್ ಲೊಕೇಶನ್ ಆಧರಿಸಿ ಎಲ್ಲರನ್ನು ಪತ್ತೆಹಚ್ಚಿದ್ದಾರೆ. ನಂತರ ಜಯನಗರದಲ್ಲಿರುವ ಮನೆಯಿಂದ ರಿಷಭ್ನ ರಕ್ಷಿಸಲಾಗಿದೆ. ಆರೋಪಿಗಳು ಮನೆಯಲ್ಲಿ ಜೂನಿಯರ್ ವಿದ್ಯಾರ್ಥಿಯನ್ನು ಬಂಧಿಸಿಟ್ಟು, ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಹಣಕ್ಕಾಗಿ ಸ್ನೇಹಿತರಿಗೆ ಕರೆ ಮಾಡಲು ಪೀಡಿಸಿದ್ದರು. ಆದರೆ ಆರೋಪಿಗಳು ಅವನಿಗೆ ಯಾವುದೇ ರೀತಿಯ ದೈಹಿಕ ಹಾನಿ ಮಾಡಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪರೀಕ್ಷೆಯ ಫಲಿತಾಂಶ ಬಂದಾಗ ಅಂಕಗಳಿಗಾಗಿ ಮಕ್ಕಳನ್ನು ಹಂಗಿಸುವ, ಪಕ್ಕದ ಮನೆಯವರ ಮಕ್ಕಳೊಂದಿಗೆ ಹೋಲಿಕೆ ಮಾಡುವ ಪೋಷಕರ ನಡುವೆ, ಈ ತಾಯಿ ವಿಭಿನ್ನವಾಗಿ ನಿಲ್ಲುತ್ತಾರೆ. ತನ್ನ ಮಗ ಕೇವಲ 55% ಅಂಕ ಗಳಿಸಿದ್ದರೂ, ಆತ ಪಾಸಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ ಆಕೆ ತೋರಿದ ಸಂಭ್ರಮ ಈಗ ಇಂಟರ್ನೆಟ್ನಲ್ಲಿ ಕೋಟ್ಯಂತರ ಜನರ ಮನ ಗೆದ್ದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ (ಅಥವಾ ವರದಿಯಲ್ಲಿ), ಮಗ ಫಲಿತಾಂಶ ಹಿಡಿದು ಮನೆಗೆ ಬಂದಾಗ ತಾಯಿ ಮೊದಲು ಕೇಳಿದ್ದು “ಪಾಸಾದೆಯಾ?” ಎಂದು ಮಾತ್ರ. ಮಗ “ಹೌದು” ಎಂದು ಹೇಳುತ್ತಿದ್ದಂತೆಯೇ, ಆಕೆ ಆತನ ಅಂಕಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಮಗನನ್ನು ಬಿಗಿದಪ್ಪಿ ಮುದ್ದಾಡಿದ್ದಾರೆ. 55% ಎನ್ನುವುದು ಇಂದಿನ ಕಟ್-ಆಫ್ ಕಾಲದಲ್ಲಿ ಕಡಿಮೆಯಾಗಿ ಕಾಣಬಹುದು, ಆದರೆ ಆ ತಾಯಿಗೆ ತನ್ನ ಮಗನ ಶ್ರಮ ಮತ್ತು ಆತನ ಮುಖದ ಮೇಲಿನ ನಗು ಅಂಕಗಳಿಗಿಂತಲೂ ದೊಡ್ಡದಾಗಿ ಕಂಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಈ ತಾಯಿಯ ದೃಷ್ಟಿಕೋನಕ್ಕೆ ಫಿದಾ ಆಗಿದ್ದಾರೆ. “ಪ್ರತಿ ಮನೆಗೂ ಇಂತಹ ಪೋಷಕರು ಬೇಕು”, “ಅಂಕಗಳು ಜೀವನವನ್ನು ನಿರ್ಧರಿಸುವುದಿಲ್ಲ, ಪ್ರೀತಿ ಮತ್ತು ಬೆಂಬಲ ಮುಖ್ಯ” ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಮಕ್ಕಳ ಮೇಲೆ ಅತಿಯಾದ ಅಂಕಗಳ ಒತ್ತಡ ಹೇರುವ ಇಂದಿನ ಶೈಕ್ಷಣಿಕ ವ್ಯವಸ್ಥೆಗೆ ಈ ಘಟನೆ ಒಂದು ಕನ್ನಡಿ ಹಿಡಿದಂತಿದೆ.
ದಾವಣಗೆರೆ, ಏಪ್ರಿಲ್ 13: ಹರಿಹರ ಪಂಚಮಸಾಲಿ ಪೀಠದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಲೆಕ್ಕ ಕೊಡಿ ಅಭಿಯಾನ ತೀವ್ರ ಸ್ವರೂಪ ಪಡೆದಿದೆ. ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿದೆ. ಹೀಗಾಗಿ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೀಠದ ಆಡಳಿತ ಮತ್ತು ನಡೆಯ ಬಗ್ಗೆ ಲೆಕ್ಕಪತ್ರ ನೀಡುವಂತೆ ಭಕ್ತರು ಆಗ್ರಹಿಸಿದ್ದಾರೆ.
ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ, ಅರುಣಕಮಾರ್, ಹೂವಿನ ಹಡಗಲಿಯ ಹಾಲಪ್ಪ ಸೇರಿ ಪ್ರಮುಖರಿಂದ ಪ್ರತಿಭಟನೆ ನಡೆದಿದ್ದು, ಪೀಠದ ಆಡಳಿತದಲ್ಲಿ ಪಾರದರ್ಶಕತೆಯ ಕೊರತೆಯನ್ನು ಎತ್ತಿ ಹಿಡಿದಿದೆ. ಈ ವೇಳೆ ತಹಶೀಲ್ದಾರ್ ಸಂತೋಷ್ ಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭಕ್ತರನ್ನು ಮಠದ ಗೇಟ್ ಬಳಿಯೇ ತಡೆದಿದ್ದಾರೆ. ಅಲ್ಲದೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
IPL 2026: ಐಪಿಎಲ್ 2026ರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಓವರ್ ಮಧ್ಯದಲ್ಲಿ ಗ್ಲೌಸ್ ಬದಲಾಯಿಸಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ಅಂಪೈರ್ಗಳ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.
ಏನಿದು ಘಟನೆ?
ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದಾಗ, ಓವರ್ ಮುಗಿಯುವ ಮೊದಲೇ ಹೊಸ ಗ್ಲೌಸ್ ಬೇಕೆಂದು ಕೇಳಿದರು. ಆರಂಭದಲ್ಲಿ ಅಂಪೈರ್ಗಳು ಇದಕ್ಕೆ ಅನುಮತಿ ನೀಡದಿದ್ದರೂ, ನಂತರ ಪಾಂಡ್ಯ ಎರಡನೇ ಬಾರಿ ಮನವಿ ಮಾಡಿದಾಗ ಗ್ಲೌಸ್ ಬದಲಿಸಲು ಅವಕಾಶ ನೀಡಲಾಯಿತು.
ವಿವಾದಕ್ಕೆ ಕಾರಣವೇನು?
ಈ ಘಟನೆಗೆ ಒಂದು ದಿನ ಮೊದಲಷ್ಟೇ (ಏಪ್ರಿಲ್ 11, 2026) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಿಸ್ಟನ್ ಸ್ಟಬ್ಸ್ ಅವರಿಗೂ ಇದೇ ರೀತಿ ಗ್ಲೌಸ್ ಬದಲಿಸುವ ಅಗತ್ಯವಿತ್ತು. ಆದರೆ ಅಂಪೈರ್ಗಳು “ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸಲು ಅವಕಾಶವಿಲ್ಲ, ಓವರ್ ಮುಗಿಯುವವರೆಗೆ ಕಾಯಿರಿ” ಎಂದು ಕಟ್ಟುನಿಟ್ಟಾಗಿ ನಿರಾಕರಿಸಿದ್ದರು. ಹಾರ್ದಿಕ್ ಪಾಂಡ್ಯ ವಿಷಯದಲ್ಲಿ ಅಂಪೈರ್ಗಳು ಮೃದು ಧೋರಣೆ ತಳೆದದ್ದು ತಾರತಮ್ಯದ ಆರೋಪಕ್ಕೆ ನಾಂದಿ ಹಾಡಿದೆ.
ಐಪಿಎಲ್ ನಿಯಮಗಳು ಏನು ಹೇಳುತ್ತವೆ?
ಐಸಿಸಿ ಮತ್ತು ಐಪಿಎಲ್ನ ‘ಪ್ಲೇಯಿಂಗ್ ಕಂಡೀಷನ್ಸ್’ ಪ್ರಕಾರ…
ಸಮಯ ಉಳಿತಾಯ: ಪಂದ್ಯದ ವೇಗವನ್ನು ಕಾಯ್ದುಕೊಳ್ಳಲು ಬ್ಯಾಟರ್ಗಳು ಓವರ್ಗಳ ಮಧ್ಯದಲ್ಲಿ ಅಥವಾ ಸ್ಟ್ರಾಟೆಜಿಕ್ ಟೈಮ್ ಔಟ್ ಸಮಯದಲ್ಲಿ ಮಾತ್ರ ವಸ್ತುಗಳನ್ನು (ಬ್ಯಾಟ್, ಗ್ಲೌಸ್, ಹೆಲ್ಮೆಟ್ ಇತ್ಯಾದಿ) ಬದಲಾಯಿಸಬೇಕು.
ಅಂಪೈರ್ ವಿವೇಚನೆ: ಒಂದು ವೇಳೆ ಬ್ಯಾಟರ್ನ ಗ್ಲೌಸ್ ಅಥವಾ ಬ್ಯಾಟ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಅಥವಾ ಸುರಕ್ಷತೆಯ ದೃಷ್ಟಿಯಿಂದ ತುರ್ತು ಎನಿಸಿದರೆ ಮಾತ್ರ ಓವರ್ ಮಧ್ಯದಲ್ಲಿ ಬದಲಾಯಿಸಲು ಅಂಪೈರ್ ಅನುಮತಿ ನೀಡಬಹುದು.
ಅನಗತ್ಯ ವಿಳಂಬ: ಒಂದು ವೇಳೆ ಪಂದ್ಯದ ಮೇಲೆ ಪ್ರಭಾವ ಬೀರಲು ಅಥವಾ ವಿಶ್ರಾಂತಿಗಿಟ್ಟಿಸಿಕೊಳ್ಳಲು ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸುವುದು ಸಮಯ ವ್ಯರ್ಥ ಎಂದು ಪರಿಗಣಿಸಲಾಗುತ್ತದೆ.
ಮುಂಬೈಗೆ ನ್ಯಾಯ: ಡೆಲ್ಲಿಗೆ ಅನ್ಯಾಯ?
ಹಾರ್ದಿಕ್ ಪಾಂಡ್ಯ ಅವರ ಗ್ಲೌಸ್ ಬದಲಾವಣೆಗೆ ಅಂಪೈರ್ಗಳು ಅನುಮತಿ ನೀಡಿದ್ದು ಅವರ ವಿವೇಚನೆಗೆ ಬಿಟ್ಟಿದ್ದಾದರೂ, ಸ್ಟಬ್ಸ್ ವಿಷಯದಲ್ಲಿ ತೋರಿದ ಕಟ್ಟುನಿಟ್ಟಿನ ಕ್ರಮ ಇಲ್ಲಿ ಕಂಡುಬಂದಿಲ್ಲ ಎಂಬುದು ಅಭಿಮಾನಿಗಳ ವಾದ.
ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ವಿಪರೀತ ಸೆಕೆಯಿಂದಾಗಿ ಬೆವರುತ್ತಿದ್ದ ಕಾರಣ ತಮ್ಮ ‘ಗ್ಲೌಸ್’ ಬದಲಿಸಲು ಸ್ಟಬ್ಸ್, ಅಂಪೈರ್ ಬಳಿ ಅನುಮತಿ ಕೇಳಿದ್ದರು. ಆದರೆ, ಆಟ ವಿಳಂಬವಾಗುತ್ತದೆ ಎಂಬ ಕಾರಣ ನೀಡಿ ಅಂಪೈರ್ ಗ್ಲೌಸ್ ಬದಲಾವಣೆಗೆ ನಿರಾಕರಿಸಿದ್ದಾರೆ.
ದುರಾದೃಷ್ಟವಶಾತ್ ಮುಂದಿನ ಎಸೆತದಲ್ಲೇ ಟ್ರಿಸ್ಟನ್ ಸ್ಬಬ್ಸ್ ಔಟಾದರು. ಇತ್ತ ಅಂಪೈರ್ ನಿರ್ಧಾರದಿಂದ ಕುಪಿತಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಆಟಗಾರ ನಿತೀಶ್ ರಾಣಾ ಮತ್ತು ಬ್ಯಾಟಿಂಗ್ ಕೋಚ್ ವೇಣುಗೋಪಾಲ್ ರಾವ್ ಬೌಂಡರಿ ಲೈನ್ ಬಳಿ ಇದ್ದ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಈ ವಾಗ್ವಾದ ಪರಿಣಾಮ ನಿತೀಶ್ ರಾಣಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಯಿತು.
CSK और DC के बीच मैच में लफड़ा हो गया था!Stubbs ड्रेसिंग रूम पहुंचते ही हेल्मेट फेंका!
दिल्ली के लिए Stubbs अंतिम उम्मीद थें और लास्ट में ओवर के बीच में ग्लव्स(Gloves) चेंज करना चाह रहें थें
लेकिन अंपायर ने अनुमति नहीं दी…फिर क्या नीतीश राणा और अंपायर के बीच बाउंड्री पर… pic.twitter.com/9rmiRitFSz
ಒಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರುವ ಗ್ಲೌಸ್ ಬದಲಾವಣೆ ನಿಯಮವು ಮುಂಬೈ ಇಂಡಿಯನ್ಸ್ ಪಾಲಿಗೆ ಅನ್ವಯಿಸುವುದಿಲ್ಲವೇ ಎಂಬುದೇ ಈಗ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆ.
ಜೈಪುರ, ಏಪ್ರಿಲ್ 13: ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅವರು ಬೈಕ್ನಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಾಯಿ ಇದ್ದಕ್ಕಿದ್ದಂತೆ ದಾಳಿ ನಡೆದಿದೆ. ಅವರ ಕಾಲನ್ನು ಹಿಡಿದು ಕೆಳಗೆ ಎಳೆದಿದೆ. ಏನೇ ಪ್ರಯತ್ನ ಪಟ್ಟರೂ ನಾಯಿ ಬಿಡಲು ಸಿದ್ಧವಿರಲಿಲ್ಲ. ಕೊನೆಗೆ ಸ್ಥಳೀಯರು ಸ್ಥಳಕ್ಕೆ ಬಂದು ಕೋಲಿನಿಂದ ಹೊಡೆದು ಹೇಗೋ ಆ ನಾಯಿಯಿಂದ ವ್ಯಕ್ತಿಯನ್ನು ಕಾಪಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
ಬೆಂಗಳೂರು, ಏಪ್ರಿಲ್ 13: ನಗರದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಹಲ್ಲೆ ಪ್ರಕರಣವು ಇದೀಗ ಕೊಲೆ (Murder) ಪ್ರಕರಣವಾಗಿ ಮಾರ್ಪಟ್ಟಿದೆ. ಮಣಿಕಿರಣ್ ಎಂಬಾತ ತನ್ನ ಹೆಂಡತಿಯನ್ನು ಬಲವಂತವಾಗಿ ತವರು ಮನೆಯಿಂದ ಕರೆದುಕೊಂಡು ಹೋಗಲು ಮುಂದಾದಾಗ ಮಧ್ಯ ಬಂದ ಮಾಗೇಶ್ವರಿ ಎಂಬಾಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆಕೆ, ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಹೆಂಡತಿ ಬರಲ್ಲ ಅಂದರೂ ಬಲವಂತವಾಗಿ ಕರೆದೊಯ್ಯಲು ಮುಂದಾದ ಪತಿ
ಮಣಿಕಿರಣ್ ಹಾಗೂ ಆತನ ಹೆಂಡತಿ ಚಾರುಲತಾಳ ನಡುವೆ ಜಗಳವಾದ ಕಾರಣ ಆಕೆ ಆಡುಗೋಡಿಯಲ್ಲಿರುವ ತವರು ಮನೆಗೆ ಬಂದಿದ್ದಳು. ಅಲ್ಲಿ ತನ್ನ ಅಜ್ಜಿ ಮತ್ತು ಚಿಕ್ಕಮ್ಮ ಮಾಗೇಶ್ವರಿ ಜೊತೆಗೆ ವಾಸವಾಗಿದ್ದಳು. ಆಕೆಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಮಣಿಕಿರಣ್ ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದ. ಆದರೆ ಆಕೆ ಒಪ್ಪಿರಲಿಲ್ಲ. ಹಾಗಾಗಿ ಮಣಿ ತನ್ನ ತಂದೆ ಮಣಿವಣ್ಣನ್ ಹಾಗೂ ಸಹಚರರಾದ ಮಣಿರಾಜ್ ಅಲಿಯಾಸ್ ಸ್ಟೀಫನ್ ಮತ್ತು ಅಭಿಷೇಕ್ ಎಲ್ಲರನ್ನೂ ಕರೆದುಕೊಂಡು ಮತ್ತೊಮ್ಮೆ ಚಾರುಲತಾ ತವರಿಗೆ ಬಂದಿದ್ದ. ಈ ವೇಳೆ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದ. ಆಗ ಮಧ್ಯ ಪ್ರವೇಶಿಸಿದ ಮಾಗೇಶ್ವರಿ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ, ನಂತರ ಕಾಲಿಗೆ ಚೂರಿಯಿಂದ ಹಲವು ಬಾರಿ ಇರಿದಿದ್ದ ಎಂದು ಹೇಳಲಾಗಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು
ಈ ವೇಳೆ ಮಾಗೇಶ್ವರಿ ತೀವ್ರವಾಗಿ ಗಾಯಗೊಂಡಿದ್ದು, ಮೊದಲಿಗೆ ಆಕೆಯನ್ನು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಮೊದಲಿಗೆ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರೂ ಆರ್ಥಿಕ ಸಂಕಷ್ಟದಿಂದ ಕುಟುಂಬಸ್ಥರು ಅವರನ್ನು ವಿಕ್ಟೂರಿಯಾ ಆಸ್ಪತ್ರೆಗೆ ಹಾಗೂ ಬಳಿಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 45 ವರ್ಷದ ಮಾಗೇಶ್ವರಿ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ.
ಆಕೆಯ ಮೇಲೆ ಹಲ್ಲೆ ಮಾಡಿದ್ದ ಮಣಿಕಿರಣ್ ಹಾಗೂ ಸಹಚರರ ಮೇಲೆ ಮೊದಲಿಗೆ ಹಲ್ಲೆ ಮಾಡಿದ ಆರೋಪದಡಿ ಕೇಸ್ ದಾಖಲಾಗಿತ್ತು. ಅದೇ ಈಗ ಕೊಲೆ ಕೇಸ್ ಆಗಿ ಮಾರ್ಪಾಡಾಗಿದ್ದು, ಮಣಿಕಿರಣ್ ಸೇರಿದಂತೆ ನಾಲ್ವರನ್ನು ಪೊಲೀದರು ಬಂಧಿಸಿದ್ದಾರೆ. ಆರೋಪಿಗಳು ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.