ಕೆಐಎಡಿಬಿಯಲ್ಲಿ ಇನ್ಮುಂದೆ ಬ್ರೋಕರ್ಸ್‌ಗೆ ನೋ ಎಂಟ್ರಿ: 100 ದಿನಗಳಲ್ಲಿ ಇಡೀ ಸಿಸ್ಟಮ್ ಡಿಜಿಟಲ್ ಮಾಡಲು ಸಚಿವ ಎಂ.ಬಿ.ಪಾಟೀಲ್ ಆದೇಶ – Kannada News

ಬೆಂಗಳೂರು, ಜೂ.10: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (KIADB) ಇನ್ನು ಮುಂದೆ ಜಮೀನು ಭೂಸ್ವಾಧೀನ ಮತ್ತು ನಿವೇಶನ ಮಂಜೂರಾತಿಯ ಪ್ರತಿಯೊಂದು ಪ್ರಕ್ರಿಯೆಯೂ ಸಂಪೂರ್ಣವಾಗಿ ಹೈಟೆಕ್ ಆಗಲಿದೆ. ಕೆಐಎಡಿಬಿ ವ್ಯಾಪ್ತಿಯ ಎಲ್ಲಾ ಸೇವೆಗಳನ್ನು ಮುಂದಿನ 100 ದಿನಗಳ ಒಳಗಾಗಿ ಸಂಪೂರ್ಣವಾಗಿ ಡಿಜಿಟಲೀಕರಣ (Digitization) ಗೊಳಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಗಡುವು ನೀಡಿದ್ದಾರೆ. ಖನಿಜ ಭವನದಲ್ಲಿ ಇಂದು (ಜೂ.10) ನಡೆದ ಕೈಗಾರಿಕಾ ಇಲಾಖೆಯ ಎರಡನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಇ-ಗವರ್ನೆನ್ಸ್ (ಇ-ಆಡಳಿತ) ಇಲಾಖೆಯು ಹೊಂದಿರುವ ‘ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ’ಯ ಅಡಿಯಲ್ಲೇ ಈಗ ರಾಜ್ಯದ ಹಳೆಯ ಮತ್ತು ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ನಿವೇಶನಗಳ ಪ್ರತಿಯೊಂದು ವಿವರವನ್ನೂ ಡಿಜಿಟಲೀಕರಣ ಮಾಡಲಾಗುವುದು. ಈ ಹೊಸ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಪ್ರತಿ ನಿವೇಶನಕ್ಕೆ ಸಂಬಂಧಿಸಿದಂತೆ ಒಟ್ಟು 77 ಕಾಲಂಗಳಲ್ಲಿ ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸಿಡಲಾಗುತ್ತದೆ.

ಈ ಮಹತ್ವದ ಸುಧಾರಣೆಯಿಂದಾಗಿ ಕೈಗಾರಿಕಾ ನಿವೇಶನದ ಮಂಜೂರಾತಿ, ಅದರ ಸದ್ಯದ ಸ್ಥಿತಿಗತಿ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆ, ಮಾಡಲಾಗಿರುವ ಒಟ್ಟು ಹೂಡಿಕೆ, ಸೃಷ್ಟಿಯಾಗಿರುವ ಉದ್ಯೋಗಾವಕಾಶಗಳು, ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ ಕೊಟ್ಟಿರುವ ಪರಿಹಾರದ ಮೊತ್ತ, ಕೋರ್ಟ್ ಕೇಸುಗಳ ಇತಿಹಾಸ ಹಾಗೂ ಹೂಡಿಕೆದಾರರಿಗೆ ನೀಡಿರುವ ಕಾಲಾವಕಾಶದಂತಹ ಎಲ್ಲಾ ಪ್ರಮುಖ ವಿವರಗಳು ಇನ್ನು ಮುಂದೆ ಒಂದೇ ಕ್ಲಿಕ್‌ನಲ್ಲಿ ಕ್ಷಣಾರ್ಧದಲ್ಲಿ ಲಭ್ಯವಾಗಲಿವೆ. ಈ ಹಿಂದೆ ಕೆಐಎಡಿಬಿಯಲ್ಲಿ ಸರಿಯಾದ ಡಿಜಿಟಲ್ ದಾಖಲೆಗಳು ಇಲ್ಲದ ಕಾರಣ, ಒಂದೇ ಜಮೀನಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡೆರಡು ಬಾರಿ ಪರಿಹಾರದ ಹಣ ನೀಡಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ ಹಲವು ಪ್ರಕರಣಗಳು ಕಂಡುಬಂದಿದೆ. ಆದರೆ, ಹೊಸ ವ್ಯವಸ್ಥೆಯಿಂದ ಸಂಪೂರ್ಣ ಪಾರದರ್ಶಕತೆ ಬರಲಿದ್ದು, ಇಂತಹ ಅವ್ಯವಹಾರಗಳಿಗೆ ಶಾಶ್ವತ ಬ್ರೇಕ್ ಬೀಳಲಿದೆ. ಜೊತೆಗೆ, ಹೂಡಿಕೆದಾರರು ತಾವು ಇದ್ದ ಜಾಗದಿಂದಲೇ ತಮಗೆ ಬೇಕಾದ ಅಧಿಕೃತ ಮಾಹಿತಿ ಪಡೆಯಬಹುದಾಗಿದ್ದು, ಕೆಐಎಡಿಬಿ ಕಚೇರಿಗಳಲ್ಲಿ ಮಧ್ಯವರ್ತಿಗಳ (ಬ್ರೋಕರ್ಸ್) ಹಾವಳಿ ಸಂಪೂರ್ಣವಾಗಿ ನಿಲ್ಲಲಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: 1,280 ವೈದ್ಯರು, ನರ್ಸ್‌ಗಳ ಭರ್ತಿಗೆ ಯು.ಟಿ. ಖಾದರ್ ಆದೇಶ

ರಾಜ್ಯಾದ್ಯಂತ ಸದ್ಯ 224 ಕೈಗಾರಿಕಾ ಪ್ರದೇಶಗಳಿದ್ದು, ಇಲ್ಲಿರುವ ಸಾವಿರಾರು ನಿವೇಶನಗಳ ಹಂಚಿಕೆ ಮಾಹಿತಿಯನ್ನು ಕೇವಲ ಒಂದು ತಿಂಗಳೊಳಗೆ ಸ್ಕ್ಯಾನ್ ಮಾಡಿ ಮುಗಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಈ ದತ್ತಾಂಶವನ್ನು ಬಳಸಿಕೊಂಡು ಕೆಐಎಡಿಬಿಗೆ ಒಪ್ಪುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ, ಬಳಿಕ ಅದನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ‘ಇ-ಸ್ವತ್ತು’ ತಂತ್ರಾಂಶದ ಜತೆ ಜೋಡಣೆ ಮಾಡಲಾಗುತ್ತದೆ. ಇದರಿಂದ ಕೈಗಾರಿಕೆಗಳಿಗೆ ಆನ್‌ಲೈನ್ ಮೂಲಕವೇ ಸುಲಭವಾಗಿ ‘ಇ-ಖಾತಾ’ ನೀಡಲು ಅನುಕೂಲವಾಗುತ್ತದೆ. ಈ ಉನ್ನತ ಮಟ್ಟದ ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಹಾಗೂ ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರಿಗೂ ಎಚ್ಚರಿಕೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, (ಜೂನ್ 10): ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗುತ್ತಿದ್ದಂತೆಯೇ ಕೆಲ ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಪ್ರಿಯಾಂಕ್ ಖರ್ಗೆ, ಡ್ರಗ್ಸ್ ಹಾಗೂ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಎಫ್​​ಐಆರ್ ಹಾಗೂ ಚಾರ್ಚ್ ಶೀಟ್ ಸಲ್ಲಿಸಲು ವಿಳಂಬದ ಬಗ್ಗೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಇಲಾಖೆಗೆ ಅಗೌರವ ತರುವಂತ ಕೆಲಸ ಯಾವ ಸಿಬ್ಬಂದಿಯಿಂದ ಆಗಬಾರದು‌. ನಾನು ಹೇಳಿದ ಸಲಹೆ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಹೇಳಿದ್ದಾರೆ.

Source link

PM Modi Speech Live: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ; ಲೈವ್​​ ವಿಡಿಯೋ ಇಲ್ಲಿದೆ ನೋಡಿ

ದೆಹಲಿ, ಜೂ.10: ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿ ಮಾತನಾಡುತ್ತಿದ್ದಾರೆ. ದೆಹಲಿಯಲ್ಲಿ ಭಾರತ್ ಮಂಟಪಂನಲ್ಲಿ ಎನ್​​ಡಿಎ ಸಭೆಯ ನಂತರ ಈ ಭಾಷಣ ಮಾಡುತ್ತಿದ್ದಾರೆ. ಈ ಬಗ್ಗೆ ಲೈವ್ ವಿಡಿಯೋ ಇಲ್ಲಿದೆ ನೋಡಿ. ಮೂರನೇ ಬಾರಿಗೆ ಅಧಿಕಾರ ಹಿಡಿದಿರುವ ಎನ್‌ಡಿಎ ಮೈತ್ರಿಕೂಟದ ಮುಂದಿನ ಆಡಳಿತಾತ್ಮಕ ಕಾರ್ಯತಂತ್ರಗಳು, ಅಭಿವೃದ್ಧಿ ಯೋಜನೆಗಳು ಹಾಗೂ ದೇಶದ ಸರ್ವತೋಮುಖ ಪ್ರಗತಿಯ ದೃಷ್ಟಿಯಿಂದ ಇಂದಿನ ಸಭೆ ಅತ್ಯಂತ ಮಹತ್ವದ್ದಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಒಣಗಿದ ನಿಂಬೆಯನ್ನು ಎಸೆಯುವ ಬದಲು ಈ ರೀತಿಯಾಗಿ ಉಪಯೋಗಿಸಿಕೊಳ್ಳಿ – Kannada News

ಹಿಂದಿನ ಕಾಲದಿಂದಲೂ ನಿಂಬೆ ಹಣ್ಣಿನ (lemon) ಬಳಕೆ ಹೆಚ್ಚಾಗಿದೆ. ವಿಟಮಿನ್‌ ಸಿ ಹೇರಳವಾಗಿರುವ ಈ ಹಣ್ಣನಿಂದ ವಿವಿಧ ಬಗೆಯ ಪಾನೀಯ, ಉಪ್ಪಿನಕಾಯಿಯನ್ನು ತಯಾರಿಸಲಾಗುತ್ತದೆ. ಅಲ್ಲದೆ ಅಡುಗೆಯಲ್ಲೂ ಬಳಸಲಾಗುತ್ತದೆ. ಹಾಗಾಗಿ ಎಲ್ಲರೂ ಪ್ರತಿ ಬಾರಿ ಮಾರುಕಟ್ಟೆಗೆ ಹೋದ ಸಂದರ್ಭದಲ್ಲಿ ಜಾಸ್ತಿ ಪ್ರಮಾಣದಲ್ಲಿಯೇ ನಿಂಬೆ ಹಣ್ಣನ್ನು ಖರೀದಿ ಮಾಡುತ್ತಾರೆ. ಖರೀದಿ ಮಾಡಿ ತಂದಂತಹ ಈ ನಿಂಬೆ ಹಣ್ಣುಗಳು ಕೆಲವೇ ಕೆಲವು ದಿನಗಳಲ್ಲಿ ಒಣಗಿಬಿಡುತ್ತವೆ. ಅನೇಕ ಜನರು ಅವುಗಳನ್ನು ನಿಷ್ಪ್ರಯೋಜಕವೆಂದು ಭಾವಿಸಿ ಎಸೆಯುತ್ತಾರೆ. ವಾಸ್ತವವಾಗಿ, ಒಣಗಿದ ನಿಂಬೆಹಣ್ಣುಗಳಿಂದಲೂ ಹಲವು ಉಪಯೋಗಗಳಿವೆ. ಹೌದು  ಅವುಗಳಲ್ಲಿರುವ ನೈಸರ್ಗಿಕ ಆಮ್ಲಗಳು ಮನೆ ಶುಚಿಗೊಳಿಸುವುಕೆಗೆ ತುಂಬಾನೇ ಪರಿಣಾಮಕಾರಿ. ಒಣಗಿದ ನಿಂಬೆ ಹಣ್ಣಿನಿಂದ ಯಾವೆಲ್ಲಾ ಉಪಯೋಗಗಳಿವೆ ಎಂಬುದನ್ನು ನೋಡೋಣ ಬನ್ನಿ.

ಒಣಗಿದ ನಿಂಬೆಯ ಉಪಯೋಗಗಳೇನು?

ಸಿಂಕ್ ಅನ್ನು ಸ್ವಚ್ಛಗೊಳಿಸಬಹುದು: ಒಣಗಿದ ನಿಂಬೆಹಣ್ಣನ್ನು ಎರಡು ತುಂಡುಗಳಾಗಿ ಕತ್ತರಿಸಿ ಅದನ್ನು ಸಿಂಕ್ ಅನ್ನು ಸ್ವಚ್ಛಗೊಳಿಸಲು ಬಳಸಿ. ಇದು ನೈಸರ್ಗಿಕ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ಸಿಂಕ್‌ನಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾ ಮತ್ತು ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸಹಕಾರಿ: ಒಣಗಿದರೂ ನಿಂಬೆಹಣ್ಣಿನ ಸುವಾಸನೆ ಹೋಗುವುದಿಲ್ಲ ಮತ್ತು ಅವು ತಾಜಾವಾಗಿರುತ್ತವೆ. ಆದ್ದರಿಂದ, ಅವುಗಳನ್ನು ಎರಡು ಭಾಗಗಳಾಗಿ ಕತ್ತರಿಸಿ,  ಅದಕ್ಕೆ ಅಡುಗೆ ಸೋಡಾ ಸಿಂಪಡಿಸಿ ಬೆರೆಸಿ ಫ್ರಿಡ್ಜ್, ಶೂ ರ್ಯಾಕ್ ಮತ್ತು ಕಪಾಟುಗಳಲ್ಲಿ ಇರಿಸಿ.

ಪಾತ್ರೆಗಳನ್ನು ಪಾಲಿಶ್ ಮಾಡಲು ಬಳಸಬಹುದು: ನಿಂಬೆಹಣ್ಣುಗಳು ಹಿತ್ತಾಳೆ ಪಾತ್ರೆಗಳನ್ನು ಹೊಳೆಯುವಂತೆ ಮಾಡುವ ಶಕ್ತಿಯನ್ನು ಹೊಂದಿವೆ. ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಈ ಒಣ ನಿಂಬೆಯನ್ನು ಬಳಸಿಕೊಳ್ಳಬಹುದು. ಮ್ಮ ಉಕ್ಕಿನ ಅಥವಾ ತಾಮ್ರದ ಪಾತ್ರೆಗಳ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ಮತ್ತು ಒಣಗಿದ ನಿಂಬೆಹಣ್ಣಿನ ತುಂಡಿನಿಂದ ಚೆನ್ನಾಗಿ ಉಜ್ಜಿ. ಇದು ಮೊಂಡುತನದ ಕಲೆಗಳನ್ನು ತೆಗೆದುಹಾಕಿ ಅವುಗಳನ್ನು ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ: ಹಳೆಯ ಟೂತ್‌ಬ್ರಷ್‌ ಎಸೆಯುವ ಬದಲು ಮನೆಯ ಎಲ್ಲಾ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳಿ

ಕೀಟಗಳನ್ನು ನಿವಾರಿಸಲು ಸಹಕಾರಿ: ಇರುವೆಗಳು, ಕೀಟಗಳು ನಿಂಬೆಯ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಒಣಗಿದ ನಿಂಬೆಹಣ್ಣನ್ನು ಎರಡು ಹೋಳುಗಳಾಗಿ  ಕತ್ತರಿಸಿ ನಿಂಬೆ ಅಡುಗೆಮನೆಯ ಮೂಲೆಗಳಲ್ಲಿ  ಇರಿಸಿ. ಇದು ಆಹಾರದ ಮೇಲೆ ಕೀಟಗಳು ಆವರಿಸಿಕೊಳ್ಳುವುದನ್ನು  ತಡೆಯುತ್ತವೆ.

ಗಿಡಮೂಲಿಕೆ ಚಹಾ ಮಾಡಿ: ಒಣಗಿದ ನಿಂಬೆಹಣ್ಣಿನಿಂದ ನೀವು ಗಿಡಮೂಲಿಕೆ ಚಹಾ ಸಹ ತಯಾರಿಸಬಹುದು. ಚರ್ಮದ ಹೊಳಪನ್ನು ಸುಧಾರಿಸುವುದರಿಂದ ಹಿಡಿದು ತೂಕ ಇಳಿಸುವವರೆಗೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಮಾಡಲು, ಒಣಗಿದ ನಿಂಬೆಹಣ್ಣನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ, ರಾತ್ರಿಯಿಡೀ ನೆನೆಸಿಟ್ಟರೆ  ಉತ್ತಮ. ನಂತರ, ಬೆಳಿಗ್ಗೆ ನೀರನ್ನು ಚೆನ್ನಾಗಿ ಕುದಿಸಿ. ಜೇನುತುಪ್ಪ ಸೇರಿಸಿ ಕುಡಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ – Kannada News

ಸ್ಟ್ಯಾಂಡಪ್ ಕಾಮಿಡಿ ಶೋ ಒಂದರಲ್ಲಿ ಪ್ರೇಕ್ಷಕನೊಬ್ಬ ಯುವತಿಯ ಬಗ್ಗೆ ಮಾಡಿದ್ದ ಅಸಭ್ಯ ಮತ್ತು ವಿವಾದಾತ್ಮಕ ಕಾಮೆಂಟ್‌ಗೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮತ್ತು ಸೆಲೆಬ್ರಿಟಿಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದ ಪ್ರಸಿದ್ಧ ಕಾಮಿಡಿಯನ್ ಪ್ರಣಿತ್ ಮೋರೆ (Pranit More) ಇದೀಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದಾರೆ. 370 ರೂಪಾಯಿ ಬಿರಿಯಾನಿ (370 Rupees Biryani) ವಿವಾದವೇ ಇಷ್ಟಕ್ಕೆಲ್ಲ ಕಾರಣ ಆಗಿದೆ.

ಕೆಲವು ದಿನಗಳ ಹಿಂದೆ ಪ್ರಣಿತ್ ಮೋರೆ ಅವರ ಕಾಮಿಡಿ ಶೋನ ವಿಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಗುರ್ಗಾಂವ್ ಮೂಲದ 23 ವರ್ಷದ ಹಿಮಾಂಶು ಜಾಂಗ್ರಾ ಎಂಬ ಯುವಕ, ತಾನು ಇತ್ತೀಚೆಗೆ ಒಬ್ಬ ಯುವತಿಯೊಂದಿಗೆ ಡೇಟ್‌ಗೆ ಹೋಗಿದ್ದಾಗಿ ಹೇಳಿದ್ದನು. ‘ಅಲ್ಲಿ ನಾನು 370 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಕೊಡಿಸಿದೆ. ಅಷ್ಟು ಹಣ ಖರ್ಚು ಮಾಡಿದ ಮೇಲೆ ನನಗೆ ಅದಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದುಕೊಂಡೆ. ಬಿರಿಯಾನಿ ತಿಂದ ನಂತರ ಆಕೆ ಮನೆಗೆ ಬಿಡುವಂತೆ ಕೇಳಿಕೊಂಡಳು. ಆದರೆ ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ವಸೂಲಿ ಮಾಡದೆ ಬಿಡುವುದಿಲ್ಲ ಎಂದುಕೊಂಡೆ’ ಎಂದು ವೇದಿಕೆಯಲ್ಲಿದ್ದ ಪ್ರಣಿತ್ ಎದುರು ಹೇಳಿಕೊಂಡಿದ್ದನು.

ಅಷ್ಟಕ್ಕೇ ನಿಲ್ಲಿಸದ ಆತ, ಆ ಯುವತಿಯನ್ನು ತನ್ನ ರೂಮಿಗೆ ಕರೆಯುವ ಬಗ್ಗೆ ಯೋಚಿಸಿದ್ದಾಗಿ ಮತ್ತು ಆಕೆ ನಿರಾಕರಿಸಿದಾಗ ಕತ್ತಲಿರುವ ಪಾರ್ಕ್‌ಗೆ ಕರೆದುಕೊಂಡು ಹೋದ ಬಗ್ಗೆ ಅತ್ಯಂತ ಅಸಭ್ಯವಾಗಿ ವಿವರಿಸಿದ್ದನು. ಯುವತಿ ಎಷ್ಟೇ ಬೇಡವೆಂದರೂ ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾಗಿ ಆತ ಹೆಮ್ಮೆಯಿಂದ ಹೇಳಿಕೊಂಡಿದ್ದನು. ಆತ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಜನಾಕ್ರೋಶ ವ್ಯಕ್ತವಾಗಿದೆ.

ಯುವಕ ಇಷ್ಟೆಲ್ಲಾ ವಿಕೃತವಾಗಿ ಮಾತನಾಡುತ್ತಿದ್ದರೂ, ಶೋ ನಡೆಸಿಕೊಡುತ್ತಿದ್ದ ಪ್ರಣಿತ್ ಮೋರೆ ಅದನ್ನು ತಡೆಯುವ ಬದಲು ಜೋರಾಗಿ ನಕ್ಕು ಹಗುರವಾಗಿ ಪರಿಗಣಿಸಿದ್ದರು. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮಹಿಳೆಯರು ಸೇರಿದಂತೆ ಲಕ್ಷಾಂತರ ಜನರು ಆಕ್ರೋಶ ಹೊರಹಾಕಿದ್ದಾರೆ. ಎಲ್ವಿಶ್ ಯಾದವ್ ಸೇರಿದಂತೆ ಹಲವು ಪ್ರಮುಖ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಪ್ರಣಿತ್ ಮೋರೆ ಅವರ ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಒಬ್ಬ ಯುವತಿಯ ಸುರಕ್ಷತೆಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡುತ್ತಿದ್ದರೂ ಅದನ್ನು ತಡೆಯದ ಪ್ರಣಿತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಮತ್ತು ಆಕ್ರೋಶಕ್ಕೆ ಒಳಗಾದ ಹಿಮಾಂಶು ಜಾಂಗ್ರಾ ಈಗಾಗಲೇ ಕ್ಷಮೆಯಾಚಿಸಿ ತನ್ನ ಅಕೌಂಟ್‌ಗಳನ್ನು ಡಿಲೀಟ್ ಮಾಡಿದ್ದಾನೆ. ಇದೀಗ ಸುಮಾರು 3.8 ಮಿಲಿಯನ್ (38 ಲಕ್ಷ) ಫಾಲೋವರ್ಸ್ ಹೊಂದಿದ್ದ ಮುಖ್ಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರಣಿತ್ ಮೋರೆ ಕೂಡ ಡಿಆಕ್ಟಿವೇಟ್ ಮಾಡಿದ್ದಾರೆ. ಆದರೆ, ಕಾಮಿಡಿ ಕಂಟೆಂಟ್ ಹಂಚಿಕೊಳ್ಳುವ ಅವರ ಮತ್ತೊಂದು ಖಾತೆ @maharashtrianbhau ಇನ್ನೂ ಸಕ್ರಿಯವಾಗಿದೆ.

ವಿವಾದ ತಾರಕಕ್ಕೇರುತ್ತಿದ್ದಂತೆ ಪ್ರಣಿತ್ ಮೋರೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದರು. ‘ಶೋನಲ್ಲಿ ಪ್ರೇಕ್ಷಕರು ಮಾಡಿದ ಕಾಮೆಂಟ್‌ಗಳು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ. ಆ ಸಮಯದಲ್ಲಿ ಆತನ ಮಾತನ್ನು ತಡೆಯುವ ಬದಲು ನಾನು ನಕ್ಕು ಸುಮ್ಮನಾಗಿದ್ದು ನನ್ನ ತಪ್ಪು ನಿರ್ಧಾರವಾಗಿತ್ತು. ಇದೊಂದು ದೊಡ್ಡ ಪಾಠವಾಗಿದ್ದು, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

175ನೇ ಸಿನಿಮಾದ ಮುಹೂರ್ತ, ಆ ಮೂವರ ನೆನೆದ ನಟಿ ಶ್ರುತಿ

ಕನ್ನಡ ಚಿತ್ರರಂಗದ (Sandalwood) ವರ್ಸಟೈಲ್ ನಟಿ ಶ್ರುತಿ ಅವರು ದಶಕಗಳಿಂದಲೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹಲವು ರೀತಿಯ ಪಾತ್ರಗಳಲ್ಲಿ ನಟಿಸಿರುವ ಶ್ರುತಿ ಅವರು ಚಿತ್ರರಂಗದ ವರ್ಸಟೈಲ್ ನಟಿ. ಇದೀಗ ಅವರ ನಟನೆಯ 175ನೇ ಸಿನಿಮಾದ ಮುಹೂರ್ತ ನಡೆದಿದೆ. ನಟಿಯೊಬ್ಬರು 175 ಸಿನಿಮಾಗಳಲ್ಲಿ ನಟಿಸುವುದು ಅಪರೂಪದ ವಿದ್ಯಮಾನ. ಅಂಥಹಾ ಸಾಧನೆಯನ್ನು ನಟಿ ಶ್ರುತಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರುತಿ, ತಮ್ಮ ಈ ಬೆಳವಣಿಗೆಗೆ ಪ್ರಮುಖ ಕಾರಣರಾದ ಮೂವರು ಮಹನೀಯರನ್ನು ನೆನಪು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಡುವ ಬಯಕೆ ಇದೆ, ಆದರೆ..?; ಟೀಂ ಇಂಡಿಯಾದಲ್ಲಿ ಆಡುವ ಬಗ್ಗೆ ಮನದಾಳ ತೆರೆದಿಟ್ಟ ಭುವನೇಶ್ವರ್

Source link

ತ್ರಿಕೋನ ಸರಣಿಯ 2ನೇ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ; ಎದುರಾಳಿ ಯಾರು? ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News

ಏಕದಿನ ತ್ರಿಕೋನ ಸರಣಿಗಾಗಿ (Tri-Series) ಶ್ರೀಲಂಕಾ ಪ್ರವಾಸ ಮಾಡಿರುವ ಭಾರತ ಎ ತಂಡ ಆಡಿದ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ ತಂಡವನ್ನು ಮಣಿಸಿ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಜೂನ್ 9 ರಂದು ಡಂಬುಲ್ಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ 8 ರನ್​ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಎ ತಂಡ ರುತುರಾಜ್ ಗಾಯಕ್ವಾಡ್ ಅವರ ಶತಕ ಹಾಗೂ ತಿಲಕ್ ವರ್ಮಾ ಅವರ ಅರ್ಧಶತಕದ ನೆರವಿನಿಂದ 277 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೊನೆಯಲ್ಲಿ ಎಡವಿ, ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿತು. ಇದೀಗ ಭಾರತ ಎ ತಂಡ ತನ್ನ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ತಿಲಕ್ ವರ್ಮಾ ಪಡೆಗೆ ಅಫ್ಘಾನಿಸ್ತಾನ ಎ (India A vs Afghanistan A) ತಂಡ ಎದುರಾಗುತ್ತಿದೆ.

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಜೂನ್ 11 ರಂದು ನಡೆಯಲಿದೆ.

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ರಂಗಿರಿ ಡಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣ, ದಂಬುಲ್ಲಾದಲ್ಲಿ ನಡೆಯಲಿದೆ.

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡದ ನಡುವಿನ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.

ಉಭಯ ತಂಡಗಳು

ಭಾರತ ಎ ತಂಡ: ಪ್ರಭ್ಸಿಮ್ರಾನ್ ಸಿಂಗ್(ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ(ನಾಯಕ), ಆಯುಷ್ ಬಡೋನಿ, ಸೂರ್ಯಾಂಶ್ ಶೆಡ್ಗೆ, ಅನುಕೂಲ್ ರಾಯ್, ಅನ್ಶುಲ್ ಕಾಂಬೋಜ್, ಅರ್ಷದ್ ಖಾನ್, ವಿಪ್ರಜ್ ನಿಗಮ್, ಯಶ್ ಠಾಕೂರ್, ಯುದ್ಧವೀರ್ ಸಿಂಗ್ ಚರಕ್, ಕುಮಾರ್ ಕುಶಾಗ್ರಾ, ನಿಶಾಂತ್ ಸಿಂಧು.

ಅಫ್ಘಾನಿಸ್ತಾನ ಎ ತಂಡ: ಇಮ್ರಾನ್ ಮಿರ್(ನಾಯಕ), ನೂರ್ ಉಲ್ ರೆಹಮಾನ್(ವಿಕೆಟ್ ಕೀಪರ್), ಹಸನ್ ಐಸಾಖಿಲ್, ಬಹಿರ್ ಶಾ, ಇಜಾಜ್ ಅಹ್ಮದ್ ಅಹ್ಮದ್ಝೈ, ಫರ್ಮಾನುಲ್ಲಾ ಸಫಿ, ಶಮ್ಸ್ ಉರ್ ರೆಹಮಾನ್, ಖಲೀಲ್ ಗುರ್ಬಾಜ್, ಜಹೀರ್ ಖಾನ್, ಫರಿದೂನ್ ದಾವುದ್ಝೈ, ಮೊಹಮ್ಮದ್ ಇಬ್ರಾಹಿಂ, ಅಬ್ದುಲ್ಲಾ ಅಹ್ಮದ್ಝೈ, ಖಾಲಿದ್ ತನಿವಾಲ್, ಇಶಾಕ್ ರಹಿಮಿ, ಫೈಸಲ್ ಖಾನ್ ಅಹ್ಮದ್ಝೈ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:19 pm, Wed, 10 June 26

Source link

ಮದುವೆ ಹೆಸರಲ್ಲಿ ಯುವತಿಗೆ ವಂಚನೆ ಕೇಸ್​​: ಆರೋಪಿ ಕೃಷ್ಣ ಜೆ. ರಾವ್​​ಗೆ ಹೈಕೋರ್ಟ್​​ ತೀವ್ರ ತರಾಟೆ – Kannada News

ಕೃಷ್ಣ ಜೆ. ರಾವ್​​ಗೆ ಹೈಕೋರ್ಟ್​​ ತೀವ್ರ ತರಾಟೆImage Credit source: Tv9 Kannada and Getty Images

ಬೆಂಗಳೂರು, ಜೂನ್​​ 10: ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮಾಜಿ ನಾಯಕನ ಪುತ್ರ, ಆರೋಪಿ ಕೃಷ್ಣ ಜೆ. ರಾವ್​​ನನ್ನು ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸಂತ್ರಸ್ತೆ ಹಾಗೂ ಆಕೆಯ 10 ತಿಂಗಳ ಮಗುವಿನ ನಿರ್ವಹಣೆಗೆ ಹಣ ಠೇವಣಿ ಇಡಬೇಕೆಂಬ ನ್ಯಾಯಾಲಯದ ಹಿಂದಿನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೋಪಿ ಕೃಷ್ಣ ಜೆ. ರಾವ್ ಹಾಗೂ ಅವರ ಪೋಷಕರು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಗರಂ ಆದ ನ್ಯಾಯಾಧೀಶರು, ಮಗು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದೆ ಎಂಬ ಕಾರಣಕ್ಕೆ ಅದನ್ನು ಕೈಬಿಡುತ್ತಿದ್ದೀರಾ? ಅದನ್ನು ನಾವು ಒಪ್ಪುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಏಪ್ರಿಲ್ 26ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಉಲ್ಲೇಖಿಸಿದ ನ್ಯಾಯಾಲಯ, ಸಂತ್ರಸ್ತೆ ಮತ್ತು ಆಕೆಯ ಮಗುವಿನ ನಿರ್ವಹಣೆಗೆ 75,000 ರೂ. ಹಣವನ್ನು ಒಂದು ವಾರದೊಳಗೆ ಠೇವಣಿ ಇಡಲು ಸೂಚಿಸಲಾಗಿತ್ತು ಎಂಬುದನ್ನೂ ನೆನಪಿಸಿದೆ.

ಇದನ್ನೂ ಓದಿ: ಬಿಜೆಪಿ ಮಾಜಿ ಮುಖಂಡನ ಪುತ್ರನಿಂದ ಯುವತಿಗೆ ದೋಖಾ ಕೇಸ್​; ಹೈಕೋರ್ಟ್​​ನಿಂದ ಮಹತ್ವದ ಆದೇಶ

‘ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲವೇ?’

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಆರೋಪಿ ವಿದ್ಯಾರ್ಥಿಯಾಗಿರುವುದರಿಂದ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಪಾಲಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು 75,000 ಕೊಡಲು ಸಾಧ್ಯವಾಗುತ್ತಿಲ್ಲವೇ? ನಿಮ್ಮ ತಂದೆ ಇದ್ದಾರಲ್ಲ. ಹಣ ಪಾವತಿಸದಿದ್ದರೆ ಅರ್ಜಿಗಳನ್ನು ವಜಾಗೊಳಿಸುತ್ತೇನೆ. ಮಧ್ಯಂತರ ಆದೇಶವನ್ನು ರದ್ದುಗೊಳಿಸುತ್ತೇನೆ. ಕಾರಣಗಳನ್ನೂ ದಾಖಲಿಸುತ್ತೇನೆ. ನಿಮ್ಮ ಕೃತ್ಯಗಳಿಂದ ಒಂದು ಮಗು ಜನಿಸಿದೆ. ಅದರ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲವೇ? ಎಂದು ಪ್ರಶ್ನಿಸಿದೆ.

ಸಂತ್ರಸ್ತೆಯ ಪರ ವಕೀಲರು, ಆಕೆಯ ಬ್ಯಾಂಕ್ ಖಾತೆ ವಿವರಗಳನ್ನು ಅರ್ಜಿದಾರರ ವಕೀಲರಿಗೆ ಈಗಾಗಲೇ ನೀಡಲಾಗಿತ್ತು. ಆದರೂ ನ್ಯಾಯಾಲಯ ಸೂಚಿಸಿದ್ದ ಮೊತ್ತವನ್ನು ವರ್ಗಾಯಿಸಲಾಗಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ. ಅಲ್ಲದೆ ಮೊದಲ ಕಂತಿನ ಹಣವನ್ನು ಮೇ 5ರಂದು ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದ್ದರೂ, ಆ ವಿಷಯವನ್ನು ಸಂತ್ರಸ್ತೆಗೆ ತಿಳಿಸಲಾಗಿಲ್ಲ ಎಂದು ಕೂಡ ಅವರು ಹೇಳಿದ್ದಾರೆ. ಈ ವೇಳೆ ನ್ಯಾಯಮೂರ್ತಿ ನಾಗಪ್ರಸನ್ನ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ಪರಸ್ಪರ ಸಮ್ಮತಿಯ ಸಂಬಂಧವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಆ ಸಂಬಂಧದಿಂದ ಒಂದು ನಿರಪರಾಧಿ ಮಗು ಜನಿಸಿದೆ. ಈಗ ಆ ಮಗುವನ್ನು ಬದುಕಲು ಯಾವುದೇ ಆಧಾರವಿಲ್ಲದ ಸ್ಥಿತಿಯಲ್ಲಿ ಬಿಟ್ಟಿದ್ದೀರಿ. ನೀವು ಜವಾಬ್ದಾರಿಯಿಂದ ಹೇಗೆ ಕೈತೊಳೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಎರಡೂ ಅರ್ಜಿಗಳು ಖಂಡಿತವಾಗಿಯೂ ವಜಾಗೊಳ್ಳುತ್ತವೆ. ಯಾವುದೇ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡುವುದಿಲ್ಲ. ಇದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 69ರ ಅಡಿಯಲ್ಲಿ ಮದುವೆಯ ಸುಳ್ಳು ಭರವಸೆಗೆ ಸಂಬಂಧಿಸಿದ ಸ್ಪಷ್ಟ ಪ್ರಕರಣವಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಅದನ್ನು ಆದೇಶದಲ್ಲಿ ದಾಖಲಿಸಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಆದಾಗ್ಯೂ, ಪ್ರಕರಣದ ಮೂಲ ವಿಷಯಗಳ ಕುರಿತು ವಾದ ಮಂಡಿಸಲು ಅರ್ಜಿದಾರರಿಗೆ ಅವಕಾಶ ನೀಡಿ ಪ್ರಕರಣದ ವಿಚಾರಣೆಯನ್ನು ಪೀಠ ಮುಂದೂಡಿದೆ ಎಂದು ಬಾರ್​​ ಆ್ಯಂಡ್​​ ಬೆಂಚ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಬಲರಾಮನ ದಿನಗಳು’ ಚಿತ್ರದ ‘ಕ್ವಾಟರು’ ಹಾಡು ಮೆಚ್ಚಿದ ನಟಿ ತಾರಾ ಅನುರಾಧಾ – Kannada News

ಖ್ಯಾತ ನಟ ವಿನೋದ್ ಪ್ರಭಾಕರ್ ಅಭಿನಯಿಸಿದ ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಒಂದಷ್ಟು ಕಾರಣಗಳಿಂದ ಕೌತುಕ ಮೂಡಿಸಿದೆ. ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾದ ಮೂರನೇ ಹಾಡನ್ನು ರಿಲೀಸ್ ಮಾಡಲಾಗಿದೆ. ‘ಆ ದಿನಗಳು ಖ್ಯಾತಿಯ’ ಕೆಎಂ ಚೈತನ್ಯ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ರೇಟ್ರೋ ಶೈಲಿಯ ‘ಕ್ವಾಟರ್ರು’ ಹಾಡನ್ನು ಹಿರಿಯ ನಟಿ ತಾರಾ ಅನುರಾಧಾ (Thara Anuradha) ಅವರು ಬಿಡುಗಡೆ ಮಾಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹಾಡಿನ ಬಗ್ಗೆ ಮತ್ತು ಚಿತ್ರತಂಡದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

‘ಕ್ವಾಟರ್ರು’ ಹಾಡಿಗೆ ಸಂತೋಷ್ ನಾರಾಯಣನ್ ಅವರ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ನಟಿ ವಂದಿತಾ ಗೌಡ ಹೆಜ್ಜೆ ಹಾಕಿದ್ದಾರೆ. ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ಅವರಿಗೆ ಸಖತ್ ಭರವಸೆ ಇದೆ.

‘ಬಲರಾಮನ ದಿನಗಳು’ ಸಿನಿಮಾದ ‘ಕ್ವಾಟರ್ರು’ ಹಾಡು:

ಹಾಡು ಬಿಡುಗಡೆ ಬಳಿಕ ಮಾತನಾಡಿದ ತಾರಾ ಅವರು, ‘ಈ ಪೆಪ್ಪಿ ಸಾಂಗ್ ತುಂಬಾ ಚೆನ್ನಾಗಿದೆ. ಶ್ರೇಯಸ್ ತುಂಬಾ ಪ್ಯಾಷನ್ ಇರುವ ನಿರ್ಮಾಪಕ. ಆತನಿಗೆ ವಿನೋದ್ ಕಂಡರೆ ಬಹಳ ಪ್ರೀತಿ. ಅಲ್ಲದೇ, ಪದ್ಮಮ್ಮ ಕೂಡ ಒಳ್ಳೆಯ ನಿರ್ಮಾಪಕಿ. ಅವರು ಇಡೀ ತಂಡಕ್ಕೆ ತಾಯಿ ಎನ್ನಬಹುದು. ಮೂರು ಜನ ಸೇರಿ ಇಡೀ ಸಿನಿಮಾವನ್ನು ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ವೇಣು ಅವರ ಕ್ಯಾಮೆರಾ ಕೆಲಸ ಚೆನ್ನಾಗಿದೆ. ಸಿನಿಮಾ ತುಂಬಾ ಕ್ಲಾಸಿಕ್‌ ಆಗಿ ಮೂಡಿಬಂದಿದೆ. ಸಂತೋಷ್ ನಾರಾಯಣ್‌ ಅವರಂತಹ ದುಬಾರಿ ಸಂಗೀತ ನಿರ್ದೇಶಕರಿಂದ ಕೆಲಸ ಮಾಡಿಸಿದ್ದೀರಿ. ಟಿ. ಸೀರೀಸ್‌ನವರು ಅಷ್ಟು ಸುಲಭವಾಗಿ ಆಡಿಯೋ ರೈಟ್ಸ್ ತೆಗೆದುಕೊಳ್ಳುವವರಲ್ಲ. ಬಲರಾಮನ ದಿನಗಳು ಸಿನಿಮಾ ದೊಡ್ಡ ಚರಿತ್ರೆ ಸೃಷ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು.

Balaramana Dinagalu Movie Team

ಈ ವೇಳೆ ನಿರ್ಮಾಪಕ ಶ್ರೇಯಸ್ ಕೂಡ ಮಾತನಾಡಿದರು. ‘ ಇವತ್ತು ನಮ್ಮ ಸಿನಿಮಾದ 3ನೇ ಹಾಡನ್ನು ರಿಲೀಸ್ ಮಾಡಿದ್ದೇವೆ. ಸದ್ಯದಲ್ಲೇ ಮತ್ತೊಂದು ಸಾಂಗ್ ಮತ್ತು ಟ್ರೇಲರ್ ರಿಲೀಸ್ ಮಾಡುವ ಪ್ಲ್ಯಾನ್ ಇದೆ’ ಎಂದು ಹೇಳಿದರು. ‘ಚಿತ್ರದ ಬಗ್ಗೆ ನನಗೆ ಯಾವುದೇ ರೀತಿಯ ಭಯವಿಲ್ಲ. ಏಕೆಂದರೆ ನಿರ್ದೇಶಕರ ಮೇಲೆ ತುಂಬಾ ವಿಶ್ವಾಸವಿದೆ’ ಎಂದು ನಿರ್ಮಾಪಕಿ ಪದ್ಮಾವತಿ ಜಯರಾಮ್ ಹೇಳಿದರು.

ಇದನ್ನೂ ಓದಿ: ‘ಬಲರಾಮನ ದಿನಗಳು ನನ್ನ ಜೀವನದ ಅತಿ ದೊಡ್ಡ ಸಿನಿಮಾ’: ವಿನೋದ್ ಪ್ರಭಾಕರ್

ಈ ಸಿನಿಮಾದಲ್ಲಿ ಒಟ್ಟು 7 ಹಾಡುಗಳು ಇವೆ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ತಿಳಿಸಿದರು. ‘ವಿನೋದ್ ಪ್ರಭಾಕರ್ ತುಂಬಾ ಟ್ಯಾಲೆಂಟ್ ಇರುವ ಕಲಾವಿದ. ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಬೇಕು. ಆಗಲೇ ಫೀಲ್ ಆಗುವುದು. ‘ಆ ದಿನಗಳು’ ಬಿಡುಗಡೆಯಾದ 19 ವರ್ಷಗಳ ನಂತರ ಈ ಸಿನಿಮಾ ಮಾಡಲು ಸಾಕಷ್ಟು ಪುಸ್ತಕಗಳನ್ನು ಓದಿ, ಭೂಗತ ಜಗತ್ತಿನ ಬಗ್ಗೆ ತಿಳಿದುಕೊಂಡು ಕಥೆ ಬರೆದೆ’ ಎಂದು ನಿರ್ದೇಶಕರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version