ದಾವಣಗೆರೆ, ಏಪ್ರಿಲ್ 13: ಹರಿಹರ ಪಂಚಮಸಾಲಿ ಪೀಠದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಲೆಕ್ಕ ಕೊಡಿ ಅಭಿಯಾನ ತೀವ್ರ ಸ್ವರೂಪ ಪಡೆದಿದೆ. ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿದೆ. ಹೀಗಾಗಿ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೀಠದ ಆಡಳಿತ ಮತ್ತು ನಡೆಯ ಬಗ್ಗೆ ಲೆಕ್ಕಪತ್ರ ನೀಡುವಂತೆ ಭಕ್ತರು ಆಗ್ರಹಿಸಿದ್ದಾರೆ.
ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ, ಅರುಣಕಮಾರ್, ಹೂವಿನ ಹಡಗಲಿಯ ಹಾಲಪ್ಪ ಸೇರಿ ಪ್ರಮುಖರಿಂದ ಪ್ರತಿಭಟನೆ ನಡೆದಿದ್ದು, ಪೀಠದ ಆಡಳಿತದಲ್ಲಿ ಪಾರದರ್ಶಕತೆಯ ಕೊರತೆಯನ್ನು ಎತ್ತಿ ಹಿಡಿದಿದೆ. ಈ ವೇಳೆ ತಹಶೀಲ್ದಾರ್ ಸಂತೋಷ್ ಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭಕ್ತರನ್ನು ಮಠದ ಗೇಟ್ ಬಳಿಯೇ ತಡೆದಿದ್ದಾರೆ. ಅಲ್ಲದೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
IPL 2026: ಐಪಿಎಲ್ 2026ರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಓವರ್ ಮಧ್ಯದಲ್ಲಿ ಗ್ಲೌಸ್ ಬದಲಾಯಿಸಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ಅಂಪೈರ್ಗಳ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.
ಏನಿದು ಘಟನೆ?
ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದಾಗ, ಓವರ್ ಮುಗಿಯುವ ಮೊದಲೇ ಹೊಸ ಗ್ಲೌಸ್ ಬೇಕೆಂದು ಕೇಳಿದರು. ಆರಂಭದಲ್ಲಿ ಅಂಪೈರ್ಗಳು ಇದಕ್ಕೆ ಅನುಮತಿ ನೀಡದಿದ್ದರೂ, ನಂತರ ಪಾಂಡ್ಯ ಎರಡನೇ ಬಾರಿ ಮನವಿ ಮಾಡಿದಾಗ ಗ್ಲೌಸ್ ಬದಲಿಸಲು ಅವಕಾಶ ನೀಡಲಾಯಿತು.
ವಿವಾದಕ್ಕೆ ಕಾರಣವೇನು?
ಈ ಘಟನೆಗೆ ಒಂದು ದಿನ ಮೊದಲಷ್ಟೇ (ಏಪ್ರಿಲ್ 11, 2026) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಿಸ್ಟನ್ ಸ್ಟಬ್ಸ್ ಅವರಿಗೂ ಇದೇ ರೀತಿ ಗ್ಲೌಸ್ ಬದಲಿಸುವ ಅಗತ್ಯವಿತ್ತು. ಆದರೆ ಅಂಪೈರ್ಗಳು “ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸಲು ಅವಕಾಶವಿಲ್ಲ, ಓವರ್ ಮುಗಿಯುವವರೆಗೆ ಕಾಯಿರಿ” ಎಂದು ಕಟ್ಟುನಿಟ್ಟಾಗಿ ನಿರಾಕರಿಸಿದ್ದರು. ಹಾರ್ದಿಕ್ ಪಾಂಡ್ಯ ವಿಷಯದಲ್ಲಿ ಅಂಪೈರ್ಗಳು ಮೃದು ಧೋರಣೆ ತಳೆದದ್ದು ತಾರತಮ್ಯದ ಆರೋಪಕ್ಕೆ ನಾಂದಿ ಹಾಡಿದೆ.
ಐಪಿಎಲ್ ನಿಯಮಗಳು ಏನು ಹೇಳುತ್ತವೆ?
ಐಸಿಸಿ ಮತ್ತು ಐಪಿಎಲ್ನ ‘ಪ್ಲೇಯಿಂಗ್ ಕಂಡೀಷನ್ಸ್’ ಪ್ರಕಾರ…
ಸಮಯ ಉಳಿತಾಯ: ಪಂದ್ಯದ ವೇಗವನ್ನು ಕಾಯ್ದುಕೊಳ್ಳಲು ಬ್ಯಾಟರ್ಗಳು ಓವರ್ಗಳ ಮಧ್ಯದಲ್ಲಿ ಅಥವಾ ಸ್ಟ್ರಾಟೆಜಿಕ್ ಟೈಮ್ ಔಟ್ ಸಮಯದಲ್ಲಿ ಮಾತ್ರ ವಸ್ತುಗಳನ್ನು (ಬ್ಯಾಟ್, ಗ್ಲೌಸ್, ಹೆಲ್ಮೆಟ್ ಇತ್ಯಾದಿ) ಬದಲಾಯಿಸಬೇಕು.
ಅಂಪೈರ್ ವಿವೇಚನೆ: ಒಂದು ವೇಳೆ ಬ್ಯಾಟರ್ನ ಗ್ಲೌಸ್ ಅಥವಾ ಬ್ಯಾಟ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಅಥವಾ ಸುರಕ್ಷತೆಯ ದೃಷ್ಟಿಯಿಂದ ತುರ್ತು ಎನಿಸಿದರೆ ಮಾತ್ರ ಓವರ್ ಮಧ್ಯದಲ್ಲಿ ಬದಲಾಯಿಸಲು ಅಂಪೈರ್ ಅನುಮತಿ ನೀಡಬಹುದು.
ಅನಗತ್ಯ ವಿಳಂಬ: ಒಂದು ವೇಳೆ ಪಂದ್ಯದ ಮೇಲೆ ಪ್ರಭಾವ ಬೀರಲು ಅಥವಾ ವಿಶ್ರಾಂತಿಗಿಟ್ಟಿಸಿಕೊಳ್ಳಲು ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸುವುದು ಸಮಯ ವ್ಯರ್ಥ ಎಂದು ಪರಿಗಣಿಸಲಾಗುತ್ತದೆ.
ಮುಂಬೈಗೆ ನ್ಯಾಯ: ಡೆಲ್ಲಿಗೆ ಅನ್ಯಾಯ?
ಹಾರ್ದಿಕ್ ಪಾಂಡ್ಯ ಅವರ ಗ್ಲೌಸ್ ಬದಲಾವಣೆಗೆ ಅಂಪೈರ್ಗಳು ಅನುಮತಿ ನೀಡಿದ್ದು ಅವರ ವಿವೇಚನೆಗೆ ಬಿಟ್ಟಿದ್ದಾದರೂ, ಸ್ಟಬ್ಸ್ ವಿಷಯದಲ್ಲಿ ತೋರಿದ ಕಟ್ಟುನಿಟ್ಟಿನ ಕ್ರಮ ಇಲ್ಲಿ ಕಂಡುಬಂದಿಲ್ಲ ಎಂಬುದು ಅಭಿಮಾನಿಗಳ ವಾದ.
ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ವಿಪರೀತ ಸೆಕೆಯಿಂದಾಗಿ ಬೆವರುತ್ತಿದ್ದ ಕಾರಣ ತಮ್ಮ ‘ಗ್ಲೌಸ್’ ಬದಲಿಸಲು ಸ್ಟಬ್ಸ್, ಅಂಪೈರ್ ಬಳಿ ಅನುಮತಿ ಕೇಳಿದ್ದರು. ಆದರೆ, ಆಟ ವಿಳಂಬವಾಗುತ್ತದೆ ಎಂಬ ಕಾರಣ ನೀಡಿ ಅಂಪೈರ್ ಗ್ಲೌಸ್ ಬದಲಾವಣೆಗೆ ನಿರಾಕರಿಸಿದ್ದಾರೆ.
ದುರಾದೃಷ್ಟವಶಾತ್ ಮುಂದಿನ ಎಸೆತದಲ್ಲೇ ಟ್ರಿಸ್ಟನ್ ಸ್ಬಬ್ಸ್ ಔಟಾದರು. ಇತ್ತ ಅಂಪೈರ್ ನಿರ್ಧಾರದಿಂದ ಕುಪಿತಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಆಟಗಾರ ನಿತೀಶ್ ರಾಣಾ ಮತ್ತು ಬ್ಯಾಟಿಂಗ್ ಕೋಚ್ ವೇಣುಗೋಪಾಲ್ ರಾವ್ ಬೌಂಡರಿ ಲೈನ್ ಬಳಿ ಇದ್ದ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಈ ವಾಗ್ವಾದ ಪರಿಣಾಮ ನಿತೀಶ್ ರಾಣಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಯಿತು.
CSK और DC के बीच मैच में लफड़ा हो गया था!Stubbs ड्रेसिंग रूम पहुंचते ही हेल्मेट फेंका!
दिल्ली के लिए Stubbs अंतिम उम्मीद थें और लास्ट में ओवर के बीच में ग्लव्स(Gloves) चेंज करना चाह रहें थें
लेकिन अंपायर ने अनुमति नहीं दी…फिर क्या नीतीश राणा और अंपायर के बीच बाउंड्री पर… pic.twitter.com/9rmiRitFSz
ಒಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರುವ ಗ್ಲೌಸ್ ಬದಲಾವಣೆ ನಿಯಮವು ಮುಂಬೈ ಇಂಡಿಯನ್ಸ್ ಪಾಲಿಗೆ ಅನ್ವಯಿಸುವುದಿಲ್ಲವೇ ಎಂಬುದೇ ಈಗ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆ.
ಜೈಪುರ, ಏಪ್ರಿಲ್ 13: ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅವರು ಬೈಕ್ನಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಾಯಿ ಇದ್ದಕ್ಕಿದ್ದಂತೆ ದಾಳಿ ನಡೆದಿದೆ. ಅವರ ಕಾಲನ್ನು ಹಿಡಿದು ಕೆಳಗೆ ಎಳೆದಿದೆ. ಏನೇ ಪ್ರಯತ್ನ ಪಟ್ಟರೂ ನಾಯಿ ಬಿಡಲು ಸಿದ್ಧವಿರಲಿಲ್ಲ. ಕೊನೆಗೆ ಸ್ಥಳೀಯರು ಸ್ಥಳಕ್ಕೆ ಬಂದು ಕೋಲಿನಿಂದ ಹೊಡೆದು ಹೇಗೋ ಆ ನಾಯಿಯಿಂದ ವ್ಯಕ್ತಿಯನ್ನು ಕಾಪಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
ಬೆಂಗಳೂರು, ಏಪ್ರಿಲ್ 13: ನಗರದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಹಲ್ಲೆ ಪ್ರಕರಣವು ಇದೀಗ ಕೊಲೆ (Murder) ಪ್ರಕರಣವಾಗಿ ಮಾರ್ಪಟ್ಟಿದೆ. ಮಣಿಕಿರಣ್ ಎಂಬಾತ ತನ್ನ ಹೆಂಡತಿಯನ್ನು ಬಲವಂತವಾಗಿ ತವರು ಮನೆಯಿಂದ ಕರೆದುಕೊಂಡು ಹೋಗಲು ಮುಂದಾದಾಗ ಮಧ್ಯ ಬಂದ ಮಾಗೇಶ್ವರಿ ಎಂಬಾಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆಕೆ, ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಹೆಂಡತಿ ಬರಲ್ಲ ಅಂದರೂ ಬಲವಂತವಾಗಿ ಕರೆದೊಯ್ಯಲು ಮುಂದಾದ ಪತಿ
ಮಣಿಕಿರಣ್ ಹಾಗೂ ಆತನ ಹೆಂಡತಿ ಚಾರುಲತಾಳ ನಡುವೆ ಜಗಳವಾದ ಕಾರಣ ಆಕೆ ಆಡುಗೋಡಿಯಲ್ಲಿರುವ ತವರು ಮನೆಗೆ ಬಂದಿದ್ದಳು. ಅಲ್ಲಿ ತನ್ನ ಅಜ್ಜಿ ಮತ್ತು ಚಿಕ್ಕಮ್ಮ ಮಾಗೇಶ್ವರಿ ಜೊತೆಗೆ ವಾಸವಾಗಿದ್ದಳು. ಆಕೆಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಮಣಿಕಿರಣ್ ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದ. ಆದರೆ ಆಕೆ ಒಪ್ಪಿರಲಿಲ್ಲ. ಹಾಗಾಗಿ ಮಣಿ ತನ್ನ ತಂದೆ ಮಣಿವಣ್ಣನ್ ಹಾಗೂ ಸಹಚರರಾದ ಮಣಿರಾಜ್ ಅಲಿಯಾಸ್ ಸ್ಟೀಫನ್ ಮತ್ತು ಅಭಿಷೇಕ್ ಎಲ್ಲರನ್ನೂ ಕರೆದುಕೊಂಡು ಮತ್ತೊಮ್ಮೆ ಚಾರುಲತಾ ತವರಿಗೆ ಬಂದಿದ್ದ. ಈ ವೇಳೆ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದ. ಆಗ ಮಧ್ಯ ಪ್ರವೇಶಿಸಿದ ಮಾಗೇಶ್ವರಿ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ, ನಂತರ ಕಾಲಿಗೆ ಚೂರಿಯಿಂದ ಹಲವು ಬಾರಿ ಇರಿದಿದ್ದ ಎಂದು ಹೇಳಲಾಗಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು
ಈ ವೇಳೆ ಮಾಗೇಶ್ವರಿ ತೀವ್ರವಾಗಿ ಗಾಯಗೊಂಡಿದ್ದು, ಮೊದಲಿಗೆ ಆಕೆಯನ್ನು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಮೊದಲಿಗೆ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರೂ ಆರ್ಥಿಕ ಸಂಕಷ್ಟದಿಂದ ಕುಟುಂಬಸ್ಥರು ಅವರನ್ನು ವಿಕ್ಟೂರಿಯಾ ಆಸ್ಪತ್ರೆಗೆ ಹಾಗೂ ಬಳಿಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 45 ವರ್ಷದ ಮಾಗೇಶ್ವರಿ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ.
ಆಕೆಯ ಮೇಲೆ ಹಲ್ಲೆ ಮಾಡಿದ್ದ ಮಣಿಕಿರಣ್ ಹಾಗೂ ಸಹಚರರ ಮೇಲೆ ಮೊದಲಿಗೆ ಹಲ್ಲೆ ಮಾಡಿದ ಆರೋಪದಡಿ ಕೇಸ್ ದಾಖಲಾಗಿತ್ತು. ಅದೇ ಈಗ ಕೊಲೆ ಕೇಸ್ ಆಗಿ ಮಾರ್ಪಾಡಾಗಿದ್ದು, ಮಣಿಕಿರಣ್ ಸೇರಿದಂತೆ ನಾಲ್ವರನ್ನು ಪೊಲೀದರು ಬಂಧಿಸಿದ್ದಾರೆ. ಆರೋಪಿಗಳು ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಹಾಸನ, ಏಪ್ರಿಲ್ 13: ಎಂಟು ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ್ದ ಗೃಹಿಣಿಯೊಬ್ಬರು, ಈಗ ತನ್ನ ಏಳು ವರ್ಷದ ಮಗ ಹಾಗೂ ಪತಿಯನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ವಿವಾಹವಾಗಿರುವ ವಿಚಿತ್ರ ಘಟನೆ ಹಾಸನದಲ್ಲಿ (Hassan) ನಡೆದಿದೆ. ಒಂದು ಬಾರಿ ಓಡಿಹೋಗಲು ಯತ್ನಿಸಿದ್ದಾಗ ಪೋಷಕರ ದೂರಿನ ಮೇರೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಮನವೊಲಿಸಿ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು ಎಂಬುದು ತಿಳಿದುಬಂದಿದೆ. ಆದರೆ, ನಂತರ ಅಲ್ಲಿಂದಲೂ ಹೇಗೋ ತಪ್ಪಿಸಿಕೊಂಡ ಆಕೆ, ಪ್ರಿಯಕರನ ಜತೆ ಓಡಿಹೋಗಿ ಕಾರಿನಲ್ಲೇ ಮದುವೆಯಾಗಿದ್ದಾರೆ!
ಘಟನೆಯ ವಿವರ
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾಗೆ 2017ರಲ್ಲಿ ಹಾಸನ ತಾಲೂಕಿನ ಮುಕಂದೂರು ಗ್ರಾಮದ ಪ್ರಕಾಶ್ ಅವರೊಂದಿಗೆ ವಿವಾಹವಾಗಿತ್ತು. ಪ್ರಕಾಶ್ ಅವರು ಹರ್ಷಿತಾ ಅವರ ಅತ್ತೆಯ ಮಗನಾಗಿದ್ದು, ದಂಪತಿಗೆ ಏಳು ವರ್ಷದ ಗಂಡು ಮಗನಿದ್ದಾನೆ. ಮಾರ್ಚ್ 30ರಂದು ‘ಆಸ್ಪತ್ರೆಗೆ ಹೋಗಿ ಬರುತ್ತೇನೆ’ ಎಂದು ಮನೆಯಿಂದ ಹೋದ ಹರ್ಷಿತಾ ವಾಪಸ್ ಬಂದಿರಲಿಲ್ಲ.
ಪೊಲೀಸ್ ಠಾಣೆಯಲ್ಲಿಯೇ ಹಠ!
ಮಗಳು ಕಾಣೆಯಾಗಿರುವ ಬಗ್ಗೆ ಹರ್ಷಿತಾ ಪೋಷಕರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹರ್ಷಿತಾಳನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು. ಈ ವೇಳೆ ಪತಿ ಪ್ರಕಾಶ್ ಜೊತೆ ಹೋಗಲು ನಿರಾಕರಿಸಿದ ಹರ್ಷಿತಾ, ತನ್ನ ಪ್ರಿಯಕರ ಸಚಿನ್ ಜೊತೆಗೇ ಹೋಗುವುದಾಗಿ ಹಠ ಹಿಡಿದಿದ್ದರು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.
ಆಸ್ಪತ್ರೆಗೆ ಹೋಗುವ ನೆಪದಲ್ಲಿ ಮತ್ತೆ ಪರಾರಿ
ಸಾಂತ್ವನ ಕೇಂದ್ರದಲ್ಲಿದ್ದ ಹರ್ಷಿತಾ, ತನಗೆ ಆರೋಗ್ಯ ಸರಿಯಿಲ್ಲ ಎಂದು ನಾಟಕವಾಡಿ ಆಸ್ಪತ್ರೆಗೆ ಹೋಗುವ ನೆಪದಲ್ಲಿ ಹೊರಬಂದಿದ್ದಾರೆ. ಬಳಿಕ ಅಲ್ಲಿಂದಲೇ ತನ್ನ ಪ್ರಿಯಕರ ಸಚಿನ್ ಜೊತೆ ಕಾರಿನಲ್ಲಿ ತೆರಳಿ ವಿವಾಹವಾಗಿದ್ದಾರೆ. ಮಗ ಹಾಗೂ ಪತಿಯನ್ನು ತೊರೆದು ಪ್ರಿಯಕರನ ಜೊತೆ ಹೋದ ಹರ್ಷಿತಾಳ ಕೃತ್ಯಕ್ಕೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ, ಏಪ್ರಿಲ್ 13: ನಮ್ಮ ದೇಶದ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತಕ್ಕೆ ಹತ್ತಿರದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ‘‘ಇದು 21 ನೇ ಶತಮಾನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ನಾನು ಬಹಳ ಖುಷಿಯಿಂದ ಹೇಳುತ್ತಿದ್ದೇನೆ, ಇದು ಮಹಿಳಾ ಶಕ್ತಿಗೆ ಸಮರ್ಪಿತವಾಗಿದೆ. ನಮ್ಮ ದೇಶದ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತಕ್ಕೆ ಹತ್ತಿರದಲ್ಲಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯನ್ನು ಚರ್ಚಿಸಿ ಸುಮಾರು ನಲವತ್ತು ವರ್ಷಗಳು ಕಳೆದಿವೆ. ಇದರಲ್ಲಿ ಎಲ್ಲಾ ಪಕ್ಷಗಳು ಮತ್ತು ತಲೆಮಾರುಗಳಿಂದ ಪ್ರಯತ್ನಗಳನ್ನು ಮಾಡಿವೆ. ಪ್ರತಿಯೊಂದು ಪಕ್ಷವು ಈ ಕಲ್ಪನೆಯನ್ನು ತನ್ನದೇ ಆದ ರೀತಿಯಲ್ಲಿ ಮುಂದಿಟ್ಟಿದೆ. 2023 ರಲ್ಲಿ ಈ ಕಾಯ್ದೆಯನ್ನು ಪರಿಚಯಿಸಿದಾಗ, ಎಲ್ಲಾ ಪಕ್ಷಗಳು ಇದನ್ನು ಸರ್ವಾನುಮತದಿಂದ ಅಂಗೀಕರಿಸಿದವು. 2029 ರ ವೇಳೆಗೆ ಇದನ್ನು ಜಾರಿಗೆ ತರಬೇಕೆಂದು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ ಎಂದರು.
ಶಾಲೆಯಲ್ಲಿ ಶೌಚಾಲಯಗಳ ಸಮಸ್ಯೆಯನ್ನು ನಿವಾರಿಸಲು, ಸ್ವಚ್ಛ ಭಾರತ ಅಭಿಯಾನ, ಉಚಿತ ಸ್ಯಾನಿಟರಿ ಪ್ಯಾಡ್ಗಳು, ವಾರ್ಷಿಕ 1 ಲಕ್ಷ ರೂಪಾಯಿಗಳ ಕ್ರೀಡಾ ಬೆಂಬಲವಿದೆ. ಭವಿಷ್ಯದಲ್ಲಿ ನೀವು ಸೈನ್ಯಕ್ಕೆ ಸೇರಲು ಬಯಸಿದರೆ, ಸರ್ಕಾರ ಸೈನಿಕ ಶಾಲೆಗಳ ಬಾಗಿಲು ತೆರೆದಿದೆ. ನಂತರದ ಜೀವನದಲ್ಲಿ ಅಡುಗೆಮನೆಯ ಹೊಗೆಯಿಂದ ರಕ್ಷಿಸಲು ವಿನ್ಯಾಸಗೊಳಿಸಲಾದ ಉಜ್ವಲ ಯೋಜನೆಯು ಪ್ರತಿ ಮನೆಗೆ ನಲ್ಲಿ ನೀರನ್ನು ಒದಗಿಸುತ್ತದೆ ಮತ್ತು 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ಆಯುಷ್ಮಾನ್ ಯೋಜನೆಯು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಇವೆಲ್ಲದರಿಂದಲೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದೆ.
ಮನೆಯಲ್ಲಿ ತಾಯಿಗೆ ವಿಶೇಷ ಸ್ಥಾನಮಾನ
30 ಮಿಲಿಯನ್ಗಿಂತಲೂ ಹೆಚ್ಚು ಮಹಿಳೆಯರು ಮನೆಮಾಲೀಕರಾಗಿದ್ದಾರೆ. ಸಾಮಾನ್ಯವಾಗಿ, ತಂದೆ ಮತ್ತು ಮಗ ವ್ಯವಹಾರದ ಬಗ್ಗೆ ಚರ್ಚಿಸುತ್ತಾರೆ, ಮತ್ತು ತಾಯಿ ಬಂದರೆ, ನೀವು ಹೋಗಿ ನಿಮಗೇನು ತಿಳಿಯುವುದಿಲ್ಲ ಎಂದು ಹೇಳುತ್ತಿದ್ದರು. ಈಗ ಅವರು ಆರ್ಥಿಕವಾಗಿ ಸಬಲರಾಗಿರುವುದರಿಂದ, ಮಗ ಕೂಡ ತಾಯಿಯ ಅಭಿಪ್ರಾಯವನ್ನು ಕೇಳುತ್ತಾರೆ. ನಾನು ಗೃಹಸ್ಥನಲ್ಲ ಆದರೆ ನನಗೆ ಎಲ್ಲವೂ ತಿಳಿದಿದೆ ಎಂದು ನಗೆ ಚಟಾಕಿ ಹಾರಿಸಿದರು.
ಹಿಂದಿನ ದೃಷ್ಟಿಕೋನಗಳನ್ನು ಸಾಕಾರಗೊಳಿಸುವ, ಭವಿಷ್ಯದ ನಿರ್ಣಯಗಳನ್ನು ಈಡೇರಿಸುವ ಹೊಸ ಕ್ರಮ ಇದು, ಸಮಾನತೆಯ ಭಾರತಕ್ಕಾಗಿ ಒಂದು ಸಂಕಲ್ಪ, ಅಲ್ಲಿ ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಾಗಿರದೆ, ನಮ್ಮ ಕೆಲಸದ ಸಂಸ್ಕೃತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳ ನೈಸರ್ಗಿಕ ಭಾಗವಾಗಿದೆ ಎಂದು ಅವರು ಹೇಳಿದರು.
ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆಯನ್ನು ಈ ಕಾರ್ಯಕ್ರಮವು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ‘‘ನಾನು ಇಲ್ಲಿಗೆ ಯಾರನ್ನೂ ಬೋಧಿಸಲು ಅಥವಾ ಜಾಗೃತಗೊಳಿಸಲು ಬಂದಿಲ್ಲ. ನಿಮ್ಮ ಆಶೀರ್ವಾದ ಪಡೆಯಲು ನಾನು ಇಲ್ಲಿದ್ದೇನೆ. ನೀವೆಲ್ಲರೂ ದೇಶದ ಮೂಲೆ ಮೂಲೆಯಿಂದ ಬಂದಿದ್ದೀರಿ. ನಿಮ್ಮ ಉಪಸ್ಥಿತಿ ಮತ್ತು ಈ ಕೆಲಸಕ್ಕಾಗಿ ನೀವು ತೆಗೆದುಕೊಂಡ ಸಮಯಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ’’ ಎಂದರು.
ಇಂದಿಗೂ ಸಹ, ನಮ್ಮ ದೇಶದಲ್ಲಿ ಮಹಿಳೆಯರು ರಾಷ್ಟ್ರಪತಿಯಿಂದ ಹಣಕಾಸು ಸಚಿವರವರೆಗೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ದೇಶದ ಘನತೆ ಮತ್ತು ಹೆಮ್ಮೆ ಎರಡನ್ನೂ ಹೆಚ್ಚಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಮಹಿಳೆಯರ ಭಾಗವಹಿಸುವಿಕೆ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಹೇಳಿದರು. ಭಾರತದ ನಾರಿ ಶಕ್ತಿ ಅಪಾರ ಕೊಡುಗೆಗಳನ್ನು ನೀಡಿದೆ ಮತ್ತು ಈ ತಿಂಗಳ 16 ರಿಂದ ಸಂಸತ್ತಿನ ಬಜೆಟ್ ಅಧಿವೇಶನದ ವಿಶೇಷ ಅಧಿವೇಶನ ನಡೆಯಲಿದೆ ಎಂದು ಅವರು ಹೇಳಿದರು.
#WATCH | Delhi: At the ‘Nari Shakti Vandan Sammelan’, Prime Minister Narendra Modi says, “This decision is dedicated to women’s power. It is dedicated to the veneration of women’s power. Our country’s Parliament is close to creating a new history. A new history that will realise… pic.twitter.com/0iSjIXj6VT
ವಿಧಾನಸಭೆ ಮತ್ತು ಲೋಕಸಭೆಯನ್ನು ತಲುಪುವುದು ಅವರ ಕನಸುಗಳಿಗೆ ರೆಕ್ಕೆಗಳನ್ನು ನೀಡುತ್ತದೆ. ಸ್ವಾತಂತ್ರ್ಯ ಹೋರಾಟದಿಂದ ಸಂವಿಧಾನ ಸಭೆಯ ನಿರ್ಧಾರಗಳವರೆಗೆ, ಭಾರತೀಯ ಮಹಿಳೆಯರು ಸ್ವತಂತ್ರ ಭಾರತದ ಅಡಿಪಾಯವನ್ನು ಹಾಕಲು ಅಪಾರ ಕೊಡುಗೆಗಳನ್ನು ನೀಡಿದ್ದಾರೆ.
ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ
ನಮ್ಮ ದೇಶದಲ್ಲಿ ರಾಷ್ಟ್ರಪತಿಯಿಂದ ಪ್ರಧಾನಿಯವರೆಗೆ ಮಹಿಳೆಯರು ಎಲ್ಲೆಲ್ಲಿ ಹುದ್ದೆಗಳನ್ನು ಅಲಂಕರಿಸಿದ್ದಾರೋ ಅಲ್ಲೆಲ್ಲಾ ಅವರು ತಮ್ಮದೇ ಆದ ವಿಶಿಷ್ಟ ಪರಂಪರೆಯನ್ನು ಸೃಷ್ಟಿಸಿದ್ದಾರೆ. ಇಂದು, ಭಾರತದ ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ 1.4 ಮಿಲಿಯನ್ಗಿಂತಲೂ ಹೆಚ್ಚು ಮಹಿಳೆಯರು ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಿಸುಮಾರು 21 ರಾಜ್ಯಗಳಲ್ಲಿ, ಪಂಚಾಯತ್ಗಳಲ್ಲಿ ಅವರ ಭಾಗವಹಿಸುವಿಕೆ ಸುಮಾರು 50 ಪ್ರತಿಶತವನ್ನು ತಲುಪಿದೆ ಎಂದರು.
ಈ ಸಮ್ಮೇಳನವು ಸರ್ಕಾರ, ಶಿಕ್ಷಣ, ವಿಜ್ಞಾನ, ಕ್ರೀಡೆ, ಉದ್ಯಮಶೀಲತೆ, ಮಾಧ್ಯಮ, ಸಾಮಾಜಿಕ ಸೇವೆ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಲಿದೆ. ಸೆಪ್ಟೆಂಬರ್ 2023 ರಲ್ಲಿ ಸಂಸತ್ತು ‘ನಾರಿ ಶಕ್ತಿ ವಂದನ ಕಾಯ್ದೆ’ಯನ್ನು ಅಂಗೀಕರಿಸಿದ್ದು ಗಮನಾರ್ಹ. ಇದರ ಅಡಿಯಲ್ಲಿ ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು ಅವಕಾಶವಿದೆ.
#WATCH | Delhi: At the ‘Nari Shakti Vandan Sammelan’, Prime Minister Narendra Modi says, “Numerous studies have shown that when women’s participation in the decision-making process increases, it also leads to greater sensitivity in the system… I believe that the biggest factor… pic.twitter.com/TRYOWjsj6J
ಇತ್ತೀಚಿನ ವರ್ಷಗಳಲ್ಲಿ ಭಾರತದ ಮಹಿಳೆಯರು ಬಾಹ್ಯಾಕಾಶ ಸಂಶೋಧನೆಯಿಂದ ಹಿಡಿದು ರಕ್ಷಣಾ ಪಡೆಗಳವರೆಗೆ ತಮ್ಮ ಛಾಪು ಮೂಡಿಸಿದ್ದಾರೆ. ಇಂದಿನ ಸಮ್ಮೇಳನದಲ್ಲಿ ಈ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಮಹಿಳಾ ನಾಯಕತ್ವವು ಸಾಮಾಜಿಕ ನ್ಯಾಯದ ಭಾಗ ಮಾತ್ರವಲ್ಲದೆ, ದೇಶದ ಆರ್ಥಿಕ ಪ್ರಗತಿಗೆ ಅನಿವಾರ್ಯ ಎಂಬುದನ್ನು ಸರ್ಕಾರ ಪ್ರತಿಪಾದಿಸಲಿದೆ.ಮಹಿಳಾ ನಾಯಕತ್ವವು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸೂಕ್ಷ್ಮತೆಯನ್ನು ತರುತ್ತದೆ. ಅಭಿವೃದ್ಧಿಯ ಫಲಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕಾದರೆ ಮಹಿಳೆಯರ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂಬುದು ಸರ್ಕಾರದ ಆಶಯ.
ಸಂಸತ್ತು ವಿಶೇಷ ಅಧಿವೇಶನ
ಏಪ್ರಿಲ್ 16 ರಂದು ಪ್ರಾರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನದ ಕಾರ್ಯತಂತ್ರಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಇಂದಿನ ಸಮ್ಮೇಳನವು ದೇಶದ ಮಹಿಳೆಯರಿಗೆ ಸರ್ಕಾರ ಅವರ ಪರವಾಗಿದೆ ಎಂಬ ಬಲವಾದ ಸಂದೇಶವನ್ನು ರವಾನಿಸಲಿದೆ.
ವಿಜ್ಞಾನ ಭವನದಲ್ಲಿ ನಡೆದ ಈ ಕಾರ್ಯಕ್ರಮವು ಕೇವಲ ಭಾಷಣಕ್ಕೆ ಸೀಮಿತವಾಗದೆ, ಭಾರತದ ಭವಿಷ್ಯದ ಆಡಳಿತದಲ್ಲಿ ಮಹಿಳೆಯರ ಶಕ್ತಿಯನ್ನು ಸ್ಥಾಪಿಸುವ ಹೊಸ ದಿಕ್ಕಿನತ್ತ ಬೆಳಕು ಚೆಲ್ಲಿದೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಕೇವಲ ಪಾಲುದಾರರಲ್ಲ, ಬದಲಾಗಿ ಅವರು ನಿರ್ಧಾರ ಕೈಗೊಳ್ಳುವ ನಾಯಕಿಯರಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಾರಿ ಶಕ್ತಿ ವಂದನ ಸಮ್ಮೇಳನದಲ್ಲಿ ಮಾತನಾಡಿದ್ದಾರೆ.
2023ರ ಸೆಪ್ಟೆಂಬರ್ನಲ್ಲಿ ಅಂಗೀಕರಿಸಲಾದ ‘ನಾರಿ ಶಕ್ತಿ ವಂದನ ಕಾಯ್ದೆ’ ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಕ್ರಾಂತಿಕಾರಿ ಬದಲಾವಣೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು (ಮೂರನೇ ಒಂದು ಭಾಗ) ಮೀಸಲಾತಿ ನೀಡುವ ಈ ಕಾಯ್ದೆಯು ಈಗ ಅನುಷ್ಠಾನದ ಹಂತಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಏಪ್ರಿಲ್ 16 ರಿಂದ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಇಂದಿನ ಸಮ್ಮೇಳನವು ಭದ್ರ ಬುನಾದಿ ಹಾಕಲಿದೆ.
ವಿಜ್ಞಾನ, ಕ್ರೀಡೆ, ಉದ್ಯಮಶೀಲತೆ, ಕಲೆ ಮತ್ತು ಮಿಲಿಟರಿ ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರನ್ನು ಒಂದೇ ವೇದಿಕೆಗೆ ತರುವುದು.2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯಲ್ಲಿ ಮಹಿಳಾ ಸಬಲೀಕರಣವನ್ನು ಕೇಂದ್ರ ಸ್ತಂಭವಾಗಿ ಸ್ಥಾಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಬೆಂಗಳೂರು, ಏ.13: ಸಿಲಿಕಾನ್ ಸಿಟಿಯ ಜನರಿಗೆ ಒಂದು ಗುಡ್ ನ್ಯೂಸ್ ಕಾದಿದೆ. ಇನ್ಮುಂದೆ ಬಿಎಂಟಿಸಿಯ ಈ ಬಸ್ಸಿನಲ್ಲಿ ಕೇವಲ 6 ರೂ, ಗೆ ಹೋಗಬಹುದು. ನಗರದ ಹರಲೂರು, ಕಸವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಮೆಟ್ರೋ ನಿಲ್ದಾಣ ತಲುಪಲು ಇದ್ದ ಅತಿದೊಡ್ಡ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ಬಿಎಂಟಿಸಿಯು ‘ಹಳದಿ ಮಾರ್ಗ’ದ (Yellow Line) ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು MF-22E ಮತ್ತು MF-22EA ಎಂಬ ಹೊಸ ಫೀಡರ್ ಬಸ್ ಸೇವೆಗಳನ್ನು ಆರಂಭಿಸಿದೆ.
ಈ ಫೀಡರ್ ಬಸ್ಗಳು ಹೊಸ ರೋಡ್ ಮೆಟ್ರೋ ನಿಲ್ದಾಣದಿಂದ ಸಂಚಾರ ಆರಂಭಿಸಿ ಪುನಃ ಅದೇ ನಿಲ್ದಾಣಕ್ಕೆ ಬಂದು ತಲುಪಲಿವೆ. ಈ ಮಾರ್ಗವು ಚೂಡಸಂದ್ರ ಸರ್ಕಲ್, ಸಿಲ್ವರ್ ಕೌಂಟಿ ರಸ್ತೆ, ಹರಲೂರು ಗ್ರಾಮ, ಸರ್ಜಾಪುರ ರಸ್ತೆ, ಇಬ್ಲೂರು ಜಂಕ್ಷನ್ ಮತ್ತು ಎಚ್ಎಸ್ಆರ್ ಲೇಔಟ್ನ 27ನೇ ಮೇನ್ ರಸ್ತೆಯನ್ನು ಒಳಗೊಂಡಿದೆ. ವಾಪಸ್ ಬರುವಾಗ ಸೋಮಸುಂದರಪಾಳ್ಯ, ಕೂಡ್ಲು ಮತ್ತು ಕೂಡ್ಲು ಮೆಟ್ರೋ ನಿಲ್ದಾಣದ ಮೂಲಕ ಹಾದು ಹೋಗಲಿವೆ.
ಈ ಬಸ್ಸುಗಳ ಟಿಕೆಟ್ ದರವು ಕನಿಷ್ಠ 6 ರೂಪಾಯಿಯಿಂದ ಗರಿಷ್ಠ 25 ರೂಪಾಯಿವರೆಗೆ ಇರಲಿದೆ. ಸುಮಾರು 6,000 ದಿಂದ 10,000 ಅಪಾರ್ಟ್ಮೆಂಟ್ಗಳಿರುವ ಈ ದಟ್ಟಣೆಯ ಪ್ರದೇಶದಲ್ಲಿ ಕಿರಿದಾದ ರಸ್ತೆಗಳ ಕಾರಣದಿಂದಾಗಿ ಈ ಹಿಂದೆ ಸಾರ್ವಜನಿಕ ಸಾರಿಗೆಯ ಕೊರತೆ ಇತ್ತು. ಈಗ ಫೀಡರ್ ಬಸ್ ಆರಂಭವಾಗಿರುವುದರಿಂದ ನಿವಾಸಿಗಳು ಸ್ವಂತ ವಾಹನಗಳನ್ನು ಅವಲಂಬಿಸುವುದು ತಪ್ಪಲಿದೆ.
ಸದ್ಯಕ್ಕೆ ಪೀಕ್ ಅವರ್ಗಳಲ್ಲಿ 35 ರಿಂದ 40 ನಿಮಿಷಗಳ ಅಂತರದಲ್ಲಿ ಮೂರು ಬಸ್ಸುಗಳು ಸಂಚರಿಸುತ್ತಿವೆ. ಆದರೆ, ‘ನಮ್ಮ ಬಿಎಂಟಿಸಿ’ ಆ್ಯಪ್ನಲ್ಲಿ ಬಸ್ ಟ್ರ್ಯಾಕಿಂಗ್ ಸರಿಯಾಗಿ ಆಗುತ್ತಿಲ್ಲ ಮತ್ತು ಬಸ್ಸುಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ, ಏಪ್ರಿಲ್ 13: ತಂತ್ರಜ್ಞಾನ ಅಭಿವೃದ್ಧಿ ಹಿನ್ನೆಲೆ ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರದಲ್ಲಿಯೂ ಭಾರಿ ಸುಧಾರಣೆಗಳು ಕಂಡುಬರುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ 111 ವರ್ಷಗಳ ಇತಿಹಾಸ ಹೊಂದಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನರೇಟಿವ್ ಎಐ ಶಿಕ್ಷಕ ರೋಬೋಟ್ ಪರಿಚಯಿಸಲಾಗಿದೆ. ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ರೋಬೋಟ್ ಶಿಕ್ಷಕರಂತಹ ವಿನೂತನ ಪ್ರಯೋಗ ಇದೇ ಮೊದಲಾಗಿದೆ.
ಐರಿಸ್ (IRIS) ಎಂಬ ಈ ರೋಬೋಟನ್ನು ನೀತಿ ಆಯೋಗದ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿ ಮೇಕರ್ಸ್ಲ್ಯಾಬ್ ಎಜುಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಎರಡು ವರ್ಷಗಳ ಹಿಂದೆ ಇದೇ ಮಾದರಿಯ ರೋಬೋಟ್ನ ಕೇರಳದ ತಿರುವನಂತಪುರದ ಕೆಟಿಸಿಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿಗಿತ್ತು. ಇನ್ನು ವಂಡ್ಸೆ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಸೀರೆ ಧರಿಸಿರುವ ಮಾನವರೂಪದ ಈ ರೋಬಟ್ನ ಸಂವಾದಾತ್ಮಕ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಪರಿಚಯಿಸಿದ್ದೇವೆ. ಇದು ಶಿಕ್ಷಕರಿಗೆ ಪರ್ಯಾಯವಲ್ಲ, ಶಿಕ್ಷಕರಿಗೆ ಸಹಾಯಕವಾಗುವ ಸಾಧನ. 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಂವಾದಾತ್ಮಕ ಕಲಿಕೆಗೆ ಇದು ಸಹಕಾರ ನೀಡುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಸಂಪೂರ್ಣವಾಗಿ ಬಳಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಕೆಲವು ಖಾಸಗಿ ಶಾಲೆಗಳು ಈ ರೀತಿಯ ಸೌಲಭ್ಯವನ್ನು ಪ್ರಾರಂಭಿಸಿದ್ದರೂ, ರಾಜ್ಯದ ಸರ್ಕಾರಿ ಶಾಲೆಯಲ್ಲಿ ಇದು ಮೊದಲ ಪ್ರಯೋಗವಾಗಿದೆ. ಈ ಸರ್ಕಾರಿ ಶಾಲೆಯಲ್ಲಿ ಪ್ರೊಜೆಕ್ಟರ್ಗಳು, ಸ್ಮಾರ್ಟ್ ಇಂಟರಾಕ್ಟಿವ್ ಬೋರ್ಡ್ಗಳು ಮತ್ತು ಕಂಪ್ಯೂಟರ್ ಲ್ಯಾಬ್ ಕೂಡ ಇವೆ. ಖಾಸಗಿ ಶಾಲೆಗಳ ಮಟ್ಟಕ್ಕೆ ತಕ್ಕಂತೆ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ನೀಡುವುದು ನಮ್ಮ ಮುಖ್ಯ ಗುರಿ. ಈ ರೋಬೋಟ್ಗಾಗಿ ಸುಮಾರು 3.5 ಲಕ್ಷ ರೂ. ವೆಚ್ಚ ಮಾಡಲಾಗಿದೆ. ರೋಬೋಟ್ ಸರಿಯಾಗಿ ಕಾರ್ಯನಿರ್ವಹಿಸಲು ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ವಿದ್ಯುತ್ ಪೂರೈಕೆ ಅಗತ್ಯವಿದೆ. ಈ ಶಾಲೆ ಮುಚ್ಚುವ ಪರಿಸ್ಥಿತಿ ಎದುರಿಸುತ್ತಿದ್ದಾಗ, ಪ್ರವೇಶಗಳ ಕೊರತೆ ಹಿನ್ನೆಲೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಸುಮಾರು 3 ಕೋಟಿ ರೂ. ಹೂಡಿಕೆ ಮಾಡಿ, ಹೊಸ ತರಗತಿ ಕೊಠಡಿಗಳು, ಸೌರ ವಿದ್ಯುತ್ ವ್ಯವಸ್ಥೆ, ಶಾಲಾ ಬಸ್ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆ. ಇಂಗ್ಲಿಷ್ ಮಾಧ್ಯಮವನ್ನು ಪರಿಚಯಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಕಂಡಿದೆ ಎಂದು ಅವರು ತಿಳಿಸಿದ್ದಾರೆ.
ಎಐ ಶಿಕ್ಷಕ ರೋಬೋಟ್ ಪರಿಚಯವಾದ ನಂತರ ವಿದ್ಯಾರ್ಥಿಗಳ ದಾಖಲಾತಿ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದ್ದು, ಈಗಾಗಲೇ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಚಾರಣೆಗಳು ಹೆಚ್ಚಿವೆ. ಪ್ರಸ್ತುತ 1ರಿಂದ 7ನೇ ತರಗತಿವರೆಗೆ 334 ವಿದ್ಯಾರ್ಥಿಗಳು ಹಾಗೂ 15 ಶಿಕ್ಷಕರು ಈ ಶಾಲೆಯಲ್ಲಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬೆಂಗಳೂರು, ಏಪ್ರಿಲ್ 13: ಚಿನ್ನ, ಬೆಳ್ಳಿ ಬೆಲೆಗಳ ಏರಿಳಿತ ಮುಂದುವರಿದಿದೆ. ಇಂದು ಸೋಮವಾರ ಚಿನ್ನದ ಬೆಲೆ (Gold Rates) ಗ್ರಾಮ್ಗೆ 35 ರೂ ಕಡಿಮೆಗೊಂಡಿದೆ. ಹೆಚ್ಚಿನ ದೇಶಗಳಲ್ಲಿ ಇದರ ಬೆಲೆ ಸ್ವಲ್ಪವಾಗಿ ಇಳಿಮುಖವಾಗಿದೆ. ಬೆಳ್ಳಿ ಬೆಲೆಯೂ ಇವತ್ತು ಕಡಿಮೆಗೊಂಡಿದೆ. ಗ್ರಾಮ್ಗೆ 5 ರೂನಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,39,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,52,460 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,39,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 13ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,246 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,975 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,434 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,246 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,975 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ತೆಲುಗಿನ ಸ್ಪೋರ್ಟ್ಸ್ ಡ್ರಾಮಾ ‘ಪೆದ್ದಿ’ ಸಿನಿಮಾದ ಶೂಟ್ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಹೀರೋ ಆದರೆ, ಕನ್ನಡದ ಶಿವರಾಜ್ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಈಗ ಕನ್ನಡದ ಹೀರೋ ಒಬ್ಬರ ಎಂಟ್ರಿ ಆಗಿದೆ. ಅವರು ಬೇರೆ ಯಾರೂ ಅಲ್ಲ, ಸಾಯಿ ಕುಮಾರ್. ತಮ್ಮ ಕಂಚಿನ ಕಂಠದ ಮೂಲಕ ಗಮಮ ಸೆಳೆದ ಅವರು, ಈಗ ‘ಪೆದ್ದಿ’ ಸಿನಿಮಾದ ಭಾಗ ಆಗಿದ್ದಾರೆ.
ಸಾಯಿ ಕುಮಾರ್ ಅವರು ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ನಟಿಸಿದ್ದಾರೆ. ಅವರು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅದರಲ್ಲೂ ತಮ್ಮ ಕಂಠದ ಮೂಲಕ ಅವರು ಹೆಚ್ಚು ಚಿರಪರಿಚಿತರು. ಈಗ ಅವರು ‘ಪೆದ್ದಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ರಾಮ್ ಚರಣ್ ಅವರು ‘ಯೆವಡು’ ಸಿನಿಮಾದಲ್ಲಿ ಸಾಯಿ ಕುಮಾರ್ ನಟಿಸಿದ್ದರು. ಈಗ ದಶಕಗಳ ಬಳಿಕ ಈ ಕಲಾವಿದರು ಒಂದಾಗುತ್ತಿದ್ದಾರೆ.
‘ಪೆದ್ದಿ’ ಸಿನಿಮಾ ಹಳ್ಳಿ ಹಿನ್ನೆಲೆಯಲ್ಲಿ ಸಾಗುತ್ತದೆ. ಇದರಲ್ಲಿ ಕ್ರೀಡೆ ಕೂಡ ಹೈಲೈಟ್ ಆಗುವ ಸಾಧ್ಯತೆ ಇದೆ. ಸದ್ಯ ಸಿನಿಮಾ ಕೊನೆಯ ಹಂತದಲ್ಲಿ ಇದೆ. ಸಾಯಿ ಕುಮಾರ್ ಅವರು ಈಗಾಗಲೇ ಶೂಟ್ನಲ್ಲಿ ಭಾಗಿ ಆಗಿದ್ದಾರೋ ಅಥವಾ ಶೂಟ್ ಪೂರ್ಣಗೊಂಡಿದೆಯೋ ಎನ್ನುವ ವಿಷಯ ರಿವೀಲ್ ಆಗಿಲ್ಲ.
ಈ ಮೊದಲು ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಸಿನಿಮಾ ಕೆಲಸಗಳು ಪೂರ್ಣಗೊಂಡಿಲ್ಲ. ಹೀಗಾಗಿ, ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಈ ಚಿತ್ರದಲ್ಲಿ ರಾಮ್ ಚರಣ್, ಶಿವರಾಜ್ಕುಮಾರ್ ಜೊತೆ ದಿವ್ಯೇಂದು ಶರ್ಮ, ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ವೃದ್ಧಿ ಸಿನಿಮಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ತೆಲುಗು ಜೊತೆಗೆ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ.
ಈ ಸಿನಿಮಾಗೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಟೀಸರ್ ಮ್ಯೂಸಿಕ್ ಗಮನ ಸೆಳೆದಿದೆ.